ಬೆಳಗಾವಿ, ಜೂನ್ 24: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ಗೆ ಇಂದು ಇ.ಡಿ ಅಧಿಕಾರಿಗಳು (ED Raid) ಶಾಕ್ ಕೊಟ್ಟಿದ್ದಾರೆ. ಗೋವಾ, ಕರ್ನಾಟಕ, ರಾಜಸ್ಥಾನದ ಇ.ಡಿ ಅಧಿಕಾರಿಗಳ ತಂಡ ಮಂಜುನಾಥ್ಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿದಂತೆ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಅವರ ಮನೆಯಲ್ಲಿ ಮಹತ್ವದ ದಾಖಲೆಗಳು, ಬೇನಾಮಿ ಬಾರ್ ಲೈಸೆನ್ಸ್, ಕೆಲ ಗುತ್ತಿಗೆ ದಾಖಲೆ, ಬಾಂಡ್ಗಳು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಆ ಮೂಲಕ ಬೇನಾಮಿ ಆಸ್ತಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದೀಗ ಮಂಜುನಾಥ್ಗೆ ಬಂಧನದ ಭೀತಿ ಶುರುವಾಗಿದೆ.
ಮಂಜುನಾಥ್ಗೆ ಬಂಧನದ ಭೀತಿ
ಇ.ಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡುವ ಮೂಲಕ ವೈ. ಮಂಜುನಾಥ್ಗೆ ಶಾಕ್ ನೀಡಿದ್ದಾರೆ. ಸದ್ಯ ಇನ್ನು 10 ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ. ಸತತ 10 ಗಂಟೆಗಳಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಗೌಪ್ಯ ಸ್ಥಳದಲ್ಲಿ ಮಂಜುನಾಥ್ ವಿಚಾರಣೆ ನಡೆಸಿ ಇಡಿ ಅಧಿಕಾರಿಗಳು ವಾಪಸ್ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಸತೀಶ್ ಜಾರಕಿಹೊಳಿ ಬಾಮೈದ ಮಂಜುನಾಥ್ಗೆ ಬಂಧನದ ಭೀತಿ ಶುರುವಾಗಿದ್ದು, ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ಇದೆ.
ಮೆಗಾ ಕಾರ್ಯಾಚರಣೆ ವೇಳೆ ಏನೆಲ್ಲಾ ಸಿಕ್ತು
ಬೆಳಗಾವಿಯ ಮಂಜುನಾಥ್ ಮನೆಯಲ್ಲಿ ಬೇನಾಮಿ ಆಸ್ತಿ ಪತ್ರ, ಬೇನಾಮಿ ಬಾರ್ ಲೈಸೆನ್ಸ್ ಪತ್ತೆಯಾಗಿದೆ. ಜೊತೆಗೆ ಚಿನ್ನಾಭರಣ ಮತ್ತು ಬೆಳ್ಳಿ ಸೇರಿದಂತೆ ಗುತ್ತಿಗೆ ದಾಖಲೆ, ಬಾಂಡ್ಗಳು ಸಿಕ್ಕಿವೆ. ಇತ್ತ ಬೆಂಗಳೂರಿನ ಮಂಜುನಾಥ್ ಮನೆಯಲ್ಲಿ ಬೇನಾಮಿ ಬಾರ್ ಲೈಸೆನ್ಸ್ ಜೊತೆಗೆ ಹಣ ಮತ್ತು ದಾಖಲೆ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಮೈಸೂರಿನ ಮನೆಯಲ್ಲಿ ಬೈನಾಮಿ ಬಾರ್ ಲೈಸೆನ್ಸ್ ಸಿಕ್ಕಿದ್ದು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ಬಾರ್ ಓಪನ್ ಮಾಡಿದ್ದಾರೆ ಎನ್ನಲಾಗಿದೆ. ನೂರಕ್ಕೂ ಹೆಚ್ಚು ಬೇನಾಮಿ ಬಾರ್ ಇರಬಹುದು ಅಂತಾ ಲಿಕ್ಕರ್ ಮರ್ಚೆಂಟ್ಸ್ ಅಧ್ಯಕ್ಷ ಎಸ್.ಚಂದ್ರಶೇಖರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ
ಮಂಜುನಾಥ್ ರಿಯಲ್ ಎಸ್ಟೇಟ್, ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಹಾಗೂ ಅನೇಕ ವ್ಯವಹಾರದಲ್ಲಿ ಹಣ ತೊಡಗಿಸಿದ್ದರು ಎನ್ನಲಾಗಿದೆ. ಇನ್ನು ಮೈಸೂರಿನಲ್ಲಿರುವ ಮಂಜುನಾಥ್ ಆಪ್ತೆ ಯಮುನಾ ಮನೆ ಮೇಲೆಯೂ ದಾಳಿ ಮುಂದುವರೆದಿದೆ. ಯಮುನಾ ಮನೆಯಲ್ಲಿಯೂ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಬಕಾರಿ ಇಲಾಖೆಯ ತುಮಕೂರು ಡಿಸಿ ಸತೀಶ್ ಕಾಗಲೆ ಸೇರಿದ ಬೆಳಗಾವಿಯ ಐನಾಪುರ, ಸದಾಶಿವ ನಗರದ ಎಂಎಸ್ಐಎಲ್ ಮಾರ್ಟ್ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ.
ನಾಳೆ ಕೂಡ ದಾಳಿ ಮುಂದುವರೆಯುವ ಸಾಧ್ಯತೆ
ಇತ್ತ ಚಿಕ್ಕೋಡಿ ಡಿವೈಎಸ್ಪಿ ವಿಶ್ವನಾಥ ಗಾಣಿಗೇರ್ ಸೇರಿದ ಬಸವ ಕಾಲೋನಿಯ ಮನೆ ಹಾಗೂ ಶ್ರೀನಗರದ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಳಗಾವಿಯ ಖ್ಯಾತ ರಿಯಲ್ ಎಸ್ಟೆಟ್ ಉದ್ಯಮಿ ನೂರಾನಿ ಸೇರಿದ ಜಾಧವ ನಗರದ ಅಪಾರ್ಟ್ ಮೆಂಟ್ ಮೇಲೂ ದಾಳಿ ಮಾಡಿ ಇಡಿ ಅಧಿಕಾರಿಗಳು ತಲಾಷ್ ನಡೆಸುತ್ತಿದ್ದಾರೆ. ದಾಳಿ ನಾಳೆಯೂ ಮುಂದುವರೆಯುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
