ಚೆನ್ನೈ, ಆಗಸ್ಟ್ 19: ತಮಿಳುನಾಡು(Tamil Nadu) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಕ್ಷೇತ್ರ ಹಾಗೂ ರೈತರ ಹಿತದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳು ಮತ್ತು ಬಂಪರ್ ಸೌಲಭ್ಯಗಳನ್ನು ಪ್ರಕಟಿಸಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸಂಚರಿಸಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲು ಅನುಕೂಲವಾಗುವಂತೆ ಎಲ್ಲಾ ಶಾಸಕರಿಗೆ ಸರ್ಕಾರಿ ವಾಹನಗಳು, ಮಾಸಿಕ ಭತ್ಯೆ, ಆರೋಗ್ಯ ವಿಮೆಯಲ್ಲಿ ಭಾರಿ ಏರಿಕೆ ಹಾಗೂ ಹಾಲಿನ ಖರೀದಿ ದರ ಹೆಚ್ಚಳ ಸೇರಿದಂತೆ ಹಲವು ಜನಪರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಶಾಸಕರಿಗೆ ಸರ್ಕಾರಿ ಕಾರು ಮತ್ತು 1 ಲಕ್ಷ ರೂ. ಮಾಸಿಕ ಭತ್ಯೆ
ಶಾಸಕರು ತಮ್ಮ ಮತಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಶಾಸಕರಿಗೂ ಸರ್ಕಾರಿ ವಾಹನವನ್ನು ಒದಗಿಸಲಾಗುವುದು. ವಾಹನ ನಿರ್ವಹಣೆ ಹಾಗೂ ಚಾಲಕರ ವೇತನಕ್ಕಾಗಿ ಪ್ರತಿ ತಿಂಗಳು 75 ಸಾವಿರ ರೂ. ಭತ್ಯೆ ನೀಡಲಾಗುತ್ತದೆ.
ಕಚೇರಿ ಸಹಾಯಕರಿಗೆ ನೆರವು: ಶಾಸಕರ ಕಚೇರಿಯ ದಿನನಿತ್ಯದ ಆಡಳಿತಾತ್ಮಕ ಕೆಲಸಗಳಿಗಾಗಿ ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮಾಸಿಕ 25 ಸಾವಿರ ರೂ. ಹೆಚ್ಚುವರಿ ನೆರವು ನೀಡಲಾಗುವುದು.
ಮುಖ್ಯಮಂತ್ರಿ ಆರೋಗ್ಯ ವಿಮೆ 25 ಲಕ್ಷಕ್ಕೆ ಹೆಚ್ಚಳ
ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆಯಡಿ ನೀಡಲಾಗುತ್ತಿದ್ದ ವಾರ್ಷಿಕ ವಿಮಾ ಮೊತ್ತದ ಮಿತಿಯನ್ನು 5 ಲಕ್ಷದಿಂದ ಬರೋಬ್ಬರಿ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಟ್ರಾನ್ಸ್ಜೆಂಡರ್ಗಳಿಗೆ ವಿಶೇಷ ಚಿಕಿತ್ಸೆ: ಚೆನ್ನೈ, ತಿರುನಲ್ವೇಲಿ, ತೂತುಕುಡಿ, ಚೆಂಗಲ್ಪಟ್ಟು, ತಿರುವರೂರು, ಕರೂರು ಮತ್ತು ಕನ್ಯಾಕುಮಾರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ತೃತೀಯಲಿಂಗಿಗಳಿಗೆ ಹೆಚ್ಚುವರಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಈ ಯೋಜನೆಯಡಿ ಉಚಿತವಾಗಿ ನೀಡಲಾಗುವುದು.
ಮತ್ತಷ್ಟು ಓದಿ: ಚಾಮರಾಜನಗರ ಶೂಟೌಟ್ ಪ್ರಕರಣ: ತಮಿಳುನಾಡು ಸಿಎಂ ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ವೈದ್ಯಕೀಯ ಕ್ಷೇತ್ರಕ್ಕೆ 351 ಕೋಟಿ ರೂ., 6098 ಹೊಸ ಸೀಟುಗಳು
ರಾಜ್ಯದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು 351 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಇದರಿಂದ ವಿವಿಧ ವೈದ್ಯಕೀಯ ಕೋರ್ಸ್ಗಳಲ್ಲಿ 6098 ಹೊಸ ಸೀಟುಗಳು ಲಭ್ಯವಾಗಲಿವೆ. 660 ಬಿ.ಎಸ್ಸಿ. ನರ್ಸಿಂಗ್ ಸೀಟುಗಳು ಹಾಗೂ ಕಾಲೇಜುಗಳಲ್ಲಿ 1925 ಹೆಚ್ಚುವರಿ ಸೀಟುಗಳು. 12 ಪ್ಯಾರಾಮೆಡಿಕಲ್ ಕೋರ್ಸ್ಗಳಲ್ಲಿ 2,778 ಸೀಟುಗಳು. ವೈದ್ಯಕೀಯ (MBBS/PG) ಕೋರ್ಸ್ಗಳಲ್ಲಿ 735 ಸೀಟುಗಳು. ರಾಜ್ಯದಲ್ಲಿ 7 ಹೊಸ ಸರ್ಕಾರಿ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪೆರಂಬಲೂರಿನಲ್ಲಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಪೆರಂಬಲೂರಿನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ 400 ಹಾಸಿಗೆಗಳ ಸುಸಜ್ಜಿತ ಮಲ್ಟಿ-ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗುವುದು. ಸರ್ಕಾರವು ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ಗೆ 38 ರೂ. ರಿಂದ 41ರೂ.ಗೆ ಹೆಚ್ಚಿಸಿದೆ. ಈ ನಿರ್ಧಾರದಿಂದ ರಾಜ್ಯದ 3,16 ಲಕ್ಷಕ್ಕೂ ಅಧಿಕ ಹೈನುಗಾರರಿಗೆ ನೇರ ಆರ್ಥಿಕ ಅನುಕೂಲವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 360 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ.
ಶಾಸಕರಿಗೆ ವಾಹನ ಮತ್ತು ಸಿಬ್ಬಂದಿ ಭತ್ಯೆ ನೀಡುವುದರಿಂದ ಸ್ಥಳೀಯ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಆಡಳಿತ ಯಂತ್ರ ಚುರುಕಾಗಲಿದೆ. ಹಾಲಿನ ಬೆಲೆ ಏರಿಕೆಯು ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬಲಪಡಿಸಿದರೆ, ಆರೋಗ್ಯ ವಿಮಾ ಮಿತಿ ಹೆಚ್ಚಳವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚಕ್ಕೆ ದೊಡ್ಡ ಭದ್ರತೆ ಒದಗಿಸಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ