ರಾಜ್ಯ ನಾಯಕರಿಗೆ ಮಹತ್ವದ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್Image Credit source: Tv9 Kannada and PTI
ನವದೆಹಲಿ/ಬೆಂಗಳೂರು, ಜೂನ್ 23: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್ ಮಹತ್ವದ ಸೂಚನೆ ನೀಡಿದೆ. ಕ್ರಾಸ್ ವೋಟಿಂಗ್ ಸಂಬಂಧ ಜೂನ್ 25ರ ಒಳಗೆ ತುರ್ತಾಗಿ ಸಂಪೂರ್ಣ ವರದಿ ನೀಡಲು ಸಿ.ಟಿ.ರವಿ ಸಮಿತಿಗೆ ಸೂಚಿಸಿದೆ. ಈ ಸಂಬಂಧ ಅಶೋಕ್ ಮತ್ತು ವಿಜಯೇಂದ್ರ ಅವರಿಗೆ ಸ್ಪಷ್ಟ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವಾನಿಸಿದ್ದಾರೆ.
ನಿತಿನ್ ನಬಿನ್ ಸೂಚನೆ ಏನು?
ವರದಿಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ಹೆಸರು ಸಮೇತ ಮಾಹಿತಿ ನೀಡುವ ಜೊತೆಗೆ ಕ್ರಾಸ್ ವೋಟಿಂಗ್ ಮಾಡಿದ ಕಾರಣವನ್ನೂ ವಿವರವಾಗಿ ನೀಡುವಂತೆ ನಿತಿನ್ ನಬಿನ್ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್; ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿಗರಿಗೆ ಹೆಚ್.ಡಿ. ಕುಮಾರಸ್ವಾಮಿ ಕಿವಿಮಾತು
ಇಂದೇ ಪ್ರಾಥಮಿಕ ಮಾಹಿತಿ ರವಾನೆ?
ಮತ್ತೊಂದೆಡೆ ಸಾಂದರ್ಭಿಕ ಸಾಕ್ಷಿ ಮತ್ತು ಹೇಳಿಕೆ ಪರಾಮರ್ಶಿಸಿ ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸಲಿದ್ದು, ದೆಹಲಿಯಿಂದ ಸೂಚನೆ ಬಂದರೆ ಇಂದೇ ಪ್ರಾಥಮಿಕ ಮಾಹಿತಿ ರವಾನೆ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿವೈ ವಿಜಯೇಂದ್ರ ದೆಹಲಿಯಿಂದ ಹಿಂತಿರುಗಿದ ಬಳಿಕ ವರದಿ ಸಲ್ಲಿಕೆ ನಡೆಯಲಿದೆ. ಆದರೆ ಅಡ್ಡ ಮತದಾನ ಮಾಡಿದವರ ಹೆಸರು ಉಲ್ಲೇಖಿಸುವುದು ಕಷ್ಟಸಾಧ್ಯದ ವಿಚಾರವಾಗಿದ್ದು, ಬಹುತೇಕ ಎಲ್ಲಾ ಶಾಸಕರನ್ನು ದೂರವಾಣಿ ಮೂಲಕ ಅದಾಗಲೇ ಸಮಿತಿ ಸಂಪರ್ಕಿಸಿದೆ. ಜೂನ್ 25ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಜೂನ್ 19ರಂದೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದರು.
ಆಣೆ ಪ್ರಮಾಣ ನಿರ್ಧಾರ ವಾಪಸ್
ಸ್ವಪಕ್ಷೀಯ ಕೆಲ ನಾಯಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದಲೂ ಬಿಜೆಪಿ ಹಿಂದೆ ಸರಿದಿದೆ. ಎಂಎಲ್ಸಿ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಧರ್ಮಸ್ಥಳವನ್ನು ರಾಜಕೀಯ ಕ್ಷೇತ್ರ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
