ಬಸ್ ಹತ್ತಿ ನಿದ್ರೆಗೆ ಜಾರಿದ ಚಿನ್ನದ ವ್ಯಾಪಾರಿ, ಕಣ್ಣುಬಿಡುವಷ್ಟರಲ್ಲಿ 4 ಕೋಟಿ ರೂ. ಮೌಲ್ಯದ ಚಿನ್ನ ಮಾಯ – Kannada News | Gold Merchant Robbed of Rs 4 Crore on Bus: Hyderabad Police Probe Daring Theft

ಹೈದಾರಾಬಾದ್, ಜೂನ್ 21: ಅನಂತಪುರದಿಂದ ಹೈದರಾಬಾದ್​ಗೆ ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯ ಬಳಿ ಇದ್ದ 4 ಕೋಟ ರೂ. ಮೌಲ್ಯದ ಚಿನ್ನಾಭರಣ(Jewellery) ಕಳವಾಗಿದೆ. ಅವರು ಬಸ್ ಹತ್ತಿದ ಸ್ವಲ್ಪ ಸಮಯದ ಬಳಿಕ ನಿದ್ರೆಗೆ ಜಾರಿದ್ದರು. ಅದೇ ಸಮಯವನ್ನು ಬಳಸಿಕೊಂಡ ಖದೀಮರು ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ 2.75 ಕೆಜಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ.

ಹೈದರಾಬಾದ್ ಮೂಲದ ಚಿನ್ನದ ವ್ಯಾಪಾರಿ ಮೋತಿಲಾಲ್ ಎಂಬುವವರು ಆಂಧ್ರಪ್ರದೇಶದ ಅನಂತಪುರ ಮತ್ತು ಧರ್ಮಾವರಂ ಪಟ್ಟಣಗಳಲ್ಲಿ ತಮ್ಮ ವ್ಯಾಪಾರ ಮುಗಿಸಿಕೊಂಡು, ಉಳಿದ ಚಿನ್ನದೊಂದಿಗೆ ತಮ್ಮ ಸಹಾಯಕನ ಜೊತೆ ಹೈದರಾಬಾದ್‌ಗೆ ಮರಳುತ್ತಿದ್ದಾಗ ಈ ಕಳ್ಳತನ ನಡೆದಿದೆ.

ಮೋತಿಲಾಲ್ ಅವರು 2.75 ಕೆಜಿ ಚಿನ್ನವಿದ್ದ ಬ್ಯಾಗ್‌ನೊಂದಿಗೆ ತಮ್ಮ ಸಹಾಯಕನ ಜೊತೆ ಅನಂತಪುರದಿಂದ ರಾತ್ರಿ 10 ಗಂಟೆಗೆ ‘ಮೀನಾ ಟ್ರಾವೆಲ್ಸ್’ ಬಸ್ ಹತ್ತಿ ಸೀಟಿನಲ್ಲಿ ನಿದ್ರೆಗೆ ಜಾರಿದ್ದಾರೆ. ನಂದ್ಯಾಲ್ ಜಿಲ್ಲೆಯ ಡಾನ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ಭಾರತ್ ಢಾಬಾ’ ಬಳಿ ಬಸ್ ಊಟಕ್ಕಾಗಿ ನಿಂತಿದೆ. ಈ ವೇಳೆ ಇಬ್ಬರು ಅಪರಿಚಿತರು ಬಸ್‌ನಿಂದ ಇಳಿದಿದ್ದಾರೆ.

ಮತ್ತಷ್ಟು ಓದಿ: ಹಾವೇರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳತನ: ತಿಜೋರಿ ಸಮೇತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

ಬಸ್ ತೆಲಂಗಾಣದ ಜಡ್ಚರ್ಲಾ ಬಳಿ ತಲುಪಿದಾಗ ಮೋತಿಲಾಲ್ ಅವರಿಗೆ ಎಚ್ಚರವಾಗಿದೆ. ತಕ್ಷಣ ಪರಿಶೀಲಿಸಿದಾಗ ಅವರ ಸೀಟಿನ ಬಳಿ ಇದ್ದ ಚಿನ್ನದ ಬ್ಯಾಗ್ ನಾಪತ್ತೆಯಾಗಿರುವುದು ಕಂಡುಬಂದಿದೆ.

ಗಾಬರಿಗೊಂಡ ಮೋತಿಲಾಲ್ ತಕ್ಷಣವೇ ಡಾನ್ ಪಟ್ಟಣದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಢಾಬಾ ಹೋಟೆಲ್‌ನ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಕಳ್ಳರ ಗ್ಯಾಂಗ್, ಅನಂತಪುರದಿಂದಲೇ ಈ ಬಸ್ ಅನ್ನು ಹಿಂಬಾಲಿಸಿಕೊಂಡು ಬಂದಿತ್ತು. ಢಾಬಾ ಬಳಿ ಬಸ್ ನಿಲ್ಲುತ್ತಿದ್ದಂತೆ ಬಸ್‌ನೊಳಗೆ ನುಗ್ಗಿ ಚಿನ್ನದ ಬ್ಯಾಗ್ ಲಪಟಾಯಿಸಿ ಪರಾರಿಯಾಗಿದೆ.

ಸದ್ಯ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರ ವಿವರಗಳನ್ನು ಕಲೆಹಾಕುತ್ತಿದ್ದು, ಕಳ್ಳರ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಇತ್ತ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಕಳೆದುಕೊಂಡ ವ್ಯಾಪಾರಿ ಕಣ್ಣೀರು ಹಾಕುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *