ರಣ್ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ, ನಟಿಯರು ನಟಿಸಿ ಭಾರಿ ದೊಡ್ಡ ಮೊತ್ತದಲ್ಲಿ ನಿರ್ಮಾಣ ಮಾಡಿರುವ ‘ರಾಮಾಯಣ’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ ಸಿನಿಮಾದ ನಿರ್ಮಾಪಕರಿಗೆ ಹೊಸ ತಲೆ ನೋವು ಶುರುವಾಗಿದೆ. ‘ರಾಮಾಯಣ’ ಸಿನಿಮಾದ ಬಿಡುಗಡೆಗೆ ವಿತರಕರು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ. ವಿತರಕರಿಗೆ ಹೊಸ ಭಯವೊಂದು ಶುರುವಾಗಿದೆ.
‘ರಾಮಾಯಣ’ ಚಿತ್ರದ ಮೊದಲ ಭಾಗವು ಈ ವರ್ಷದ ದೀಪಾವಳಿಗೆ, ಅಂದರೆ ನವೆಂಬರ್ 6 ರಂದು ಬಿಡುಗಡೆಯಾಗಲಿದೆ. ಈಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ ‘ರಾಮಾಯಣ’ ಸಿನಿಮಾದ ನಿರ್ಮಾಪಕರು ಕೆಲವು ಪ್ರಮುಖ ನಿರ್ಮಾಣ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳನ್ನು ಆಹ್ವಾನಿಸಿ, ಚಿತ್ರದ ಕೆಲವು ತುಣುಕುಗಳನ್ನು ಪ್ರದರ್ಶಿಸಿದ್ದು. ಸಿನಿಮಾದ ಬಿಡುಗಡೆ ಹಕ್ಕುಗಳಿಗಾಗಿ ಖರೀದಿಗೆ ಮನವಿ ಮಾಡಿದ್ದರಂತೆ. 500 ಕೋಟಿ ರೂಪಾಯಿಯ ಹರಾಜಿಗೆ ನಿರ್ಮಾಪಕರು ಯೋಜನೆ ಹಾಕಿದ್ದರು. ಆದರೆ ನಿರ್ಮಾಣ ಸಂಸ್ಥೆಯೊಂದು ಕೇವಲ 250 ಕೋಟಿ ರೂಪಾಯಿ ಆಫರ್ ನೀಡಿದೆ ಎನ್ನಲಾಗುತ್ತಿದೆ.
‘ರಾಮಾಯಣ’ ಚಿತ್ರವನ್ನು ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬಜೆಟ್ನಲ್ಲಿ (ಎರಡು ಭಾಗಗಳಿಗೆ) ನಿರ್ಮಿಸಲಾಗುತ್ತಿದೆ ಎಂದು ಸ್ವತಃ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಧಿಕೃತವಾಗಿ ಘೋಷಿಸಿದ್ದಾರೆ. ಇಂತಹ ಬೃಹತ್ ಚಿತ್ರದ ಹಕ್ಕುಗಳನ್ನು ಕೇವಲ 250 ಕೋಟಿ ರೂಪಾಯಿಗೆ ಆಫರ್ ನೀಡಿರುವುದು ಆಶ್ಚರ್ಯಕರವಾಗಿದೆ. ಸಿನಿಮಾಕ್ಕೆ ದೊಡ್ಡ ಹೈಪ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ಹಿನ್ನೆಡೆ ಎದುರಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ‘ರಾಮಾಯಣ’ ಕುರಿತು ಸಿನಿಮಾ ಬಂದಾಗೆಲ್ಲ ಜನ ಹೆಚ್ಚು ಕಟುವಾಗಿ ಸಿನಿಮಾವನ್ನು ವಿಮರ್ಶಿಸುತ್ತಾರೆ. ಸಿನಿಮಾದ ಬಗ್ಗೆ ತಕರಾರು ತೆಗೆಯುವವರ ಸಂಖ್ಯೆ ಹೆಚ್ವಚಾಗುತ್ತದೆ. ಸ್ವಲ್ಪವೇ ಎಚ್ಚರ ತಪ್ಪಿದರೂ ಸಹ ಸಿನಿಮಾ ಇಡೀ ದೇಶದಾದ್ಯಂತ ಅಧಿಕೃತ ಅಥವಾ ಅನಧಿಕೃತವಾಗಿ ನಿಷೇಧಕ್ಕೆ ಒಳಪಡುವ ಅಪಾಯವೂ ಇದೆ. ಇದೇ ಕಾರಣಕ್ಕೆ ವಿತರಕರು ಅದರಲ್ಲೂ ದೊಡ್ಡ ದೊಡ್ಡ ಸಂಸ್ಥೆಗಳೇ ಸಿನಿಮಾದಿಂದ ದೂರ ಉಳಿಯುತ್ತಿವೆ.
ಇದನ್ನೂ ಓದಿ:ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್ಬೀರ್ ಕಪೂರ್: ಸಿನಿಮಾ ಯಾವುದು?
ಈ ಹಿಂದೆ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಸಹ ರಾಮಾಯಣ ಕತೆ ಆಧರಿತವಾಗಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾಕ್ಕೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಸಿನಿಮಾದ ವಿರುದ್ಧ ಹಲವಾರು ಕಡೆ ಪ್ರಕರಣಗಳು ದಾಖಲಾದವು. ಖುದ್ದು ನ್ಯಾಯಾಲಯವೇ ಸಿನಿಮಾವನ್ನು ಟೀಕೆ ಮಾಡಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಫ್ಲಾಫ್ ಆಯ್ತು. ಅದೇ ಭಯ ಈಗ ನಿರ್ಮಾಪಕರಿಗೂ ಕಾಡುತ್ತಿದ್ದು, ‘ರಾಮಾಯಣ’ ಸಿನಿಮಾದ ವಿತರಣೆ ಹಕ್ಕು ಖರೀದಿಗೆ ಭಯ ಪಡುತ್ತಿದ್ದಾರೆ.
‘ರಾಮಾಯಣ’ ಸಿನಿಮಾವನ್ನು ಎರಡು ಭಾಗದಲ್ಲಿ ನಿರ್ಮಾಣ ಆಗಿದ್ದು, ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಯಶ್ ಅವರು ಸಿನಿಮಾಣಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ, ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕಾಜಲ್ ಅಗರ್ವಾಲ್, ಸನ್ನಿ ಡಿಯೋಲ್ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಿತೇಶ್ ತಿವಾರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
