All posts by nagaraj11081993

IND vs NED: ಕೊನೆಯ ಲೀಗ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs Netherlands: T20 World Cup 2026 Last League Match, Team Changes Announced

2026 ರ ಟಿ20 ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಟೀಂ ಇಂಡಿಯಾ ಇದೀಗ ತನ್ನ ಕೊನೆಯ ಲೀಗ್ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡುತ್ತಿದೆ. ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಭಾರತ ಅದ್ಭುತ ಗೆಲುವುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಎರಡನೇ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಿದ ಭಾರತ ತಂಡವು ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿ ಸೂಪರ್ -8 ಹಂತಕ್ಕೆ ಟಿಕೆಟ್ ಖಚಿತ ಪಡಿಸಿಕೊಂಡಿತ್ತು. ಇದೀಗ ಸೂಪರ್ -8 ಸುತ್ತಿಗೂ ಮುನ್ನ ನೆದರ್ಲ್ಯಾಂಡ್ಸ್ ವಿರುದ್ಧ ಗುಂಪು ಹಂತದ ಕೊನೆಯ ಪಂದ್ಯವನ್ನು ಆಡುತ್ತಿರುವ ಸೂರ್ಯಕುಮಾರ್ ಪಡೆ, ಮುಂದಿನ ಸುತ್ತಿಗೆ ತಯಾರಿಯಾಗಿ ಈ ಪಂದ್ಯವನ್ನು ನೋಡುತ್ತಿದೆ.

ಟಾಸ್ ಗೆದ್ದ ಭಾರತ

ಈ ವಿಶ್ವಕಪ್​ನಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್, ನೆದರ್ಲ್ಯಾಂಡ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಬಳಿಕ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಮಾಹಿತಿ ನೀಡಿದ ನಾಯಕ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿರುವುದಾಗಿ ಘೋಷಿಸಿದರು. ಅದರಂತೆ ಕುಲ್ದೀಪ್ ಯಾದವ್ ಬದಲಿಗೆ ಅರ್ಶ್ದೀಪ್ ಸಿಂಗ್ ತಂಡಕ್ಕೆ ಮರಳಿದ್ದು, ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ.

ಉಭಯ ತಂಡಗಳು

ಭಾರತ ತಂಡ: ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ನೆದರ್ಲ್ಯಾಂಡ್ಸ್: ಮೈಕೆಲ್ ಲೆವಿಟ್, ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಜ್ಯಾಕ್ ಲಿಯಾನ್-ಕ್ಯಾಚೆಟ್, ನೋಹ್ ಕ್ರೂಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ಕೈಲ್ ಕ್ಲೈನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐನಿಂದ ಭಯ ಬೇಡ; ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಉದ್ಯೋಗಗಳು ಸೃಷ್ಟಿಯಾಗುತ್ತವೆ, ನೋಡ್ತಿರಿ: ವಿಶಾಲ್ ಸಿಕ್ಕಾ – Kannada News | Vishal Sikka says AI can create jobs we can’t imagine just now

ನವದೆಹಲಿ, ಫೆಬ್ರುವರಿ 18: ಕೃತಕ ಬುದ್ಧಿಮತ್ತೆ ಬೆಳೆದಂತೆ ಮನುಷ್ಯರಿಗೆ ಮಾಡೋಕೆ ಕೆಲಸಗಳೇ ಇಲ್ಲದಂತಾಗುತ್ತದೆ ಎಂದು ಅದೆಷ್ಟೋ ಜನರು ಹೆದರಿಸುತ್ತಿದ್ದಾರೆ. ಯಾವ ಸೆಕ್ಟರ್ ಅನ್ನೂ ಎಐ ಬಿಡೋದಿಲ್ಲ. ಎಲ್ಲರೂ ಕೂಡ ಬಾಧಿತರಾಗುವವರೇ ಎನ್ನುತ್ತಿದ್ದಾರೆ. ಆದರೆ, ಭಾರತೀಯ ಉದ್ಯಮಿ ಡಾ. ವಿಶಾಲ್ ಸಿಕ್ಕಾ (Vishal Sikka) ಅವರು ಎಐನಿಂದ ತೀರಾ ಭಯಪಡುವ ಅವಶ್ಯಕತೆ ಇಲ್ಲ ಎಂದು ಸಮಾಧಾನ ಹೇಳಿದ್ದಾರೆ.

ವಿಯಾನ್​ಎಐ ಸಿಸ್ಟಮ್ಸ್​ನ (Vianai Systems) ಸ್ಥಾಪಕ ಸಿಇಒ ಆದ ವಿಶಾಲ್ ಸಿಕ್ಕಾ ಅವರು ಎಐನಿಂದ ಹೊಸ ಸಾಧ್ಯತೆಗಳು ಮತ್ತು ಉದ್ಯೋಗಗಳು ತೆರೆದುಕೊಳ್ಳುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ

‘ನಿನ್ನೆ ನಾವು ಮಾಡುತ್ತಿದ್ದ ಕೆಲಸವನ್ನು ಎಐ ಮಾಡಬಲ್ಲುದು ಎಂದು ನಾವೆಲ್ಲಾ ಹೆದರಿದ್ದೇವೆ. ಆದರೆ, ಎಐನಿಂದ ಸಾಧ್ಯವಾಗುವ ಹೊಸ ಅಪ್ಲಿಕೇಶನ್​ಗಳನ್ನು ಕಾಣಲು ನಮಗೆ ಆಗುತ್ತಿಲ್ಲ’ ಎಂದು ವಿಶಾಲ್ ಸಿಕ್ಕಾ ಅಭಿಪ್ರಾಯಪಟ್ಟಿದ್ಧಾರೆ. ಅಂದರೆ, ಎಐ ತಂತ್ರಜ್ಞಾನದಿಂದ ಹೊಸ ಉದ್ಯೋಗ ಸಾಧ್ಯತೆಗಳನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಅನಿಸಿಕೆ. ಹಾಗೆಯೇ, ಐತಿಹಾಸಿಕವಾಗಿ ಹೊಸ ತಂತ್ರಜ್ಞಾನಗಳು ಬಂದಾಗೆಲ್ಲಾ ಅವುಗಳ ನಿಜವಾದ ಉಪಯೋಗ ಶುರುವಾಗುವ ಮುನ್ನ ಅಪಾಯಕಾರಿ ಎನಿಸುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ.

‘ಟಿವಿ ಬಂದಾಗ ಜನರು ಪರದೆ ಮೇಲೆ ಕಾಗದ ತುಂಡಿನಲ್ಲಿ ಬರೆದಿದ್ದನ್ನು ಓದುತ್ತಿದ್ದರು. ಹೊಸ ತಂತ್ರಜ್ಞಾನ ಬಂದಾಗ ಮೊದಮೊದಲು ಹಳೆಯ ಮಾದರಿಯಂತೆ ಕೆಲಸವನ್ನು ಮಾಡಲು ಯತ್ನಿಸುತ್ತೇವೆ. ಹೊಸ ಮಾಧ್ಯಮವನ್ನು ಹೊಸದಾಗಿ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ’ ಎಂದು ವಿಯಾನ್​ಎಐ ಸಿಸ್ಟಮ್ಸ್​ನ ಸಿಇಒ ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಅವರ ಪ್ರಕಾರ ಎಐ ಸದ್ಯ ಈ ಹಂತದಲ್ಲಿದೆ. ನಾಳೆಯ ಉದ್ಯಮಗಳ ಸಾಧ್ಯತೆಯನ್ನು ಕಾಣುವ ಬದಲು ನಿನ್ನೆಯ ಕೆಲಸವನ್ನು ಅನುಕರಿಸಲಾಗುತ್ತಿದೆ.

ಭಾರತವು ಲಾರ್ಜ್ ಲ್ಯಾಂಗ್ವೇಜ್ ಮಾಡಲ್​ಗಳನ್ನು ನಿರ್ಮಿಸುವುದಕ್ಕೆ ಮಾತ್ರವೇ ಗಮನ ಕೊಡಬಾರದು. ನೂರು ಕೋಟಿ ಜನರು ಎಐ ಅನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುವಂತೆ ಮಾಡುವುದು ಮುಖ್ಯ. ಜನರಿಗೆ ಎಐನ ಸಾಮರ್ಥ್ಯ ಮತ್ತು ಮಿತಿಗಳು ಗೊತ್ತಾದರೆ ಹೊಸ ಅಪ್ಲಿಕೇಶನ್​ಗಳನ್ನು ನಿರ್ಮಿಸಬಹುದು ಎಂದು ವಿಶಾಲ್ ಸಿಕ್ಕಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

200ಕ್ಕೂ ಹೆಚ್ಚು ಪ್ರಾಣಿಗಳಿಗೆ ಕ್ವಾರಂಟೈನ್: ಬಿಂಕದಟ್ಟಿ ಮೃಗಾಲಯದಲ್ಲಿ ಆಗಿದ್ದೇನು? – Kannada News | Gadag: Some Animals at Binkadakatti Zoo Quarantined After Nilgai Death from Hemorrhagic Septicemia

ಬಿಂಕದಕಟ್ಟಿ ಮೃಗಾಲಯImage Credit source: karnatakaexplore.com

ಗದಗ, ಫೆಬ್ರವರಿ 18: ಬಿಂಕದಕಟ್ಟಿ ಮೃಗಾಲಯ (binkadakatti zoo) ಉತ್ತರ ಕರ್ನಾಟಕದ ಪ್ರಮುಖ ಮೃಗಾಲಯ. ಈ ಮೃಗಾಲಯದಲ್ಲಿ ಪ್ರಾಣಿಗಳಿಗೆ ರೋಗದ ಭೀತಿ ಎದುರಾಗಿದೆ‌‌. ಮಾರಣಾಂತಿಕ ಗಳಲೆ ರೋಗದಿಂದ ನೀಲಗಾಯ್ ಸಾವನ್ನಪ್ಪಿದ ಬಳಿಕ ಮತ್ತಷ್ಟು ಆತಂಕ ಮನೆ ಮಾಡಿದೆ. ಹೀಗಾಗಿ ಸಸ್ಯಹಾರಿ ಪ್ರಾಣಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಪ್ರಾಣಿಗಳ ಮೇಲೆ ನಿಗಾವಹಿಸಲಾಗಿದೆ. ಮೃಗಾಲಯ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಸಿಗರಿಗೆ ಭಾರೀ ನಿರಾಸೆ ಉಂಟಾಗಿದೆ.

ಕ್ವಾರಂಟೈನ್ ಅಂದರೆ ಥಟ್ ಅಂತ ನೆನಪಾಗುವುದು ಕೊರೊನಾ ಎಮರ್ಜೆನ್ಸಿ. ಕೊರೊನಾ ಹೆಮ್ಮಾರಿಗೆ ಅಂದು ಜನರನ್ನು‌ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಆದರೆ ಇದೀಗ ಪ್ರಾಣಿಗಳನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ ಗದಗಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಗಂಭೀರ ರೋಗದ ಆತಂಕ ಎದುರಾಗಿದೆ.

ಇದನ್ನೂ ಓದಿ: ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’

ಫೆಬ್ರವರಿ 3ರಂದು ಮೃಗಾಲಯದಲ್ಲಿದ್ದ ನೀಲಗಾಯ್ ಪ್ರಾಣಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅದು ಹೆಮರಾಜಿಕ್ ಸೆಪ್ಟಿಸೆಮಿಯಾ (ಗಳಲೆ) ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ರೋಗವು ನೀಲಗಾಯ್ ಸೇರಿದಂತೆ ಸಸ್ಯಹಾರಿ ಪ್ರಾಣಿಗಳಲ್ಲಿ ವೇಗವಾಗಿ ಹರಡುವ ಹಾಗೂ ಪ್ರಾಣ ತೆಗೆಯುವ ಸ್ವರೂಪ ಹೊಂದಿರುವುದರಿಂದ ಮೃಗಾಲಯದ ಆಡಳಿತ ಮತ್ತು ಅರಣ್ಯ ಇಲಾಖೆ ತೀವ್ರ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರೋಗದ ಭೀತಿ ಹಿನ್ನೆಲೆ ಮೃಗಾಲಯದಲ್ಲಿರುವ 200ಕ್ಕೂ ಹೆಚ್ಚು ಸಸ್ಯಹಾರಿ ಪ್ರಾಣಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಇನ್ನು ನೀಲಗಾಯ್, ಕೃಷ್ಣಮೃಗ, ಜಿಂಕೆ ಹಾಗೂ ಕಡವೆ ಇರುವ ಸುತ್ತಲೂ ಹಸಿರು ಪರದೆ ಅಳವಡಿಸಿ ಕ್ವಾರಂಟೈನ್ ವಲಯ ನಿರ್ಮಿಸಲಾಗಿದ್ದು, ಈ ವಿಭಾಗಗಳ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೃಗಾಲಯದಲ್ಲಿರುವ 37 ನೀಲಗಾಯ್‌ಗಳ ಮೇಲೆ ವಿಶೇಷ ನಿಗಾವಹಿಸಲಾಗಿದ್ದು, ನಾಲ್ವರು ಪ್ರಾಣಿ ಪಾಲಕರು ಸಸ್ಯಹಾರಿ ಪ್ರಾಣಿಗಳ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.

ಮೃಗಾಲಯ ಆರ್​ಎಫ್​ಓ ಸ್ನೇಹಾ ಕೊಪ್ಪಳ ಹೇಳಿದ್ದಿಷ್ಟು

ಇದೇ ರೋಗದಿಂದ ಇತ್ತೀಚೆಗೆ ಬೆಳಗಾವಿ ಮೃಗಾಲಯದಲ್ಲಿಯೂ ಕೃಷ್ಣಮೃಗಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಗದಗ ಮೃಗಾಲಯದಲ್ಲೂ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸೋಂಕು ಹರಡದಂತೆ 21 ದಿನಗಳ ಕಾಲ ಸಸ್ಯಹಾರಿ ಪ್ರಾಣಿಗಳ ಮೇಲೆ ತೀವ್ರ ನಿಗಾವಹಿಸಲು ತೀರ್ಮಾನಿಸಲಾಗಿದೆ. ಸಸ್ಯಹಾರಿ ಪ್ರಾಣಿಗಳನ್ನು ಹೊರತುಪಡಿಸಿ ಮೃಗಾಲಯದ ಉಳಿದ ಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಮೃಗಾಲಯ ಆರ್​ಎಫ್​ಓ ಸ್ನೇಹಾ ಕೊಪ್ಪಳ ಹೇಳಿದ್ದಾರೆ.

ಇದನ್ನೂ ಓದಿ: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮುಂದುವರಿದ ಸಾವಿನ ಸರಣಿ: ಮೃತ ಕೃಷ್ಣಮೃಗಗಳ ಸಂಖ್ಯೆ 29ಕ್ಕೆ ಏರಿಕೆ

ಒಟ್ಟಿನಲ್ಲಿ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಅಗತ್ಯ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಡೇಂಜರ್ ಕಾಯಿಲೆಯಾದ ಗಳಲೆ ರೋಗ ಸಾಕಷ್ಟು ಆತಂಕ್ಕೆ ಕಾರಣವಾಗಿದೆ. ಹೀಗಾಗಿ ಸಸ್ಯಹಾರಿ ವೀಕ್ಷಣೆ ಮಾಡಲು ಬರುವ ಪ್ರವಾಸಿಗರು ಹಾಗೂ ಪ್ರಾಣಿ ಪ್ರಿಯರಿಗೆ ನಿರಾಸೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ: ಆಗಿದ್ದೇನು? – Kannada News | Rana Daggubati said he returned movie advances due to his health issue

ಬಾಹುಬಲಿ’ (Bahubali) ಸಿನಿಮಾದ ವಿಲನ್ ಬಲ್ಲಾಳದೇವ ಯಾರಿಗೆ ನೆನಪಿಲ್ಲ. ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ, ಆ ಪಾತ್ರಕ್ಕಾಗಿ ಭಾರಿ ರಿಸ್ಕ್ ತೆಗೆದುಕೊಂಡಿದ್ದರು. ಪ್ರಭಾಸ್​​ಗಿಂತಲೂ ಹುರಿಗಟ್ಟಿದ ದೇಹವನ್ನು ‘ಬಾಹುಬಲಿ’ ಸಿನಿಮಾಕ್ಕಾಗಿ ತಯಾರು ಮಾಡಿಕೊಂಡಿದ್ದರು ರಾಣಾ ದಗ್ಗುಬಾಟಿ. ‘ಬಾಹುಬಲಿ’ ಬಳಿಕ ಹಲವು ಮಾಸ್ ಸಿನಿಮಾ ಆಫರ್​​ಗಳು ರಾಣಾ ದಗ್ಗುಬಾಟಿಗೆ ಬಂದಿದ್ದವು. ಆದರೆ ರಾಣಾ ಯಾವ ಸಿನಿಮಾನಲ್ಲಿಯೂ ನಟಿಸಲಿಲ್ಲ, ಬದಲಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿಬಿಟ್ಟರು. ಅದೇಕೆ ಎಂಬುದನ್ನು ಇದೀಗ ಅವರು ಬಾಯ್ಬಿಟ್ಟಿದ್ದಾರೆ.

ರಾಣಾ ದಗ್​ಗುಬಾಟಿ ಅವರಿಗೆ ‘ಬಾಹುಬಲಿ’ ಸಿನಿಮಾದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಅವರು ನಟಿ ರೆಹಾ ಚಕ್ರವರ್ತಿ ಅವರ ಪಾಡ್​​ಕಾಸ್ಟ್​​ನಲ್ಲಿ ಮಾತನಾಡಿದ್ದಾರೆ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯಗಳಿಂದ ಅವರು ಬಳಲಿದರು. ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದ ರಾಣಾ ದಗ್ಗುಬಾಟಿ, ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಸಣ್ಣಗಾಗಿ ಬಿಟ್ಟಿದ್ದರು. ಅವರೇ ಹೇಳಿರುವಂತೆ ಹೋಗುವಾಗ ಹೇಗಿದ್ದರೊ ಅದರ ಅರ್ಧದಷ್ಟಾಗಿಬಿಟ್ಟಿದ್ದರಂತೆ.

‘ಬಾಹುಬಲಿ’ ಬಳಿಕ ಕೆಲವಾರು ಸಿನಿಮಾಗಳನ್ನು ರಾಣಾ ದಗ್ಗುಬಾಟಿ ಒಪ್ಪಿಕೊಂಡಿದ್ದರಂತೆ. ಬಾಕ್ಸರ್ ಒಬ್ಬನ ಬಗೆಗಿನ ಸಿನಿಮಾ ಇನ್ನೂ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಂತೆ. ಆದರೆ ನಾನು ಆ ಹಾಟ್ ಬಾಡಿ ಹೊಂದಿರುವ ನಟ ಅಲ್ಲ ಎಂದು ಎಲ್ಲ ಅಡ್ವಾನ್ಸ್ ಅನ್ನು ಮರಳಿಸಿಬಿಟ್ಟರಂತೆ. ಒಮ್ಮೆ ಅವರು ಅಮೆರಿಕದಲ್ಲಿದ್ದಾಗ ಅವರ ಗೆಳೆಯ ನಟ ವರುಣ್ ತೇಜ್ ಬಂದಿದ್ದರಂತೆ. ಅವರನ್ನು ನೋಡಿ ರಾಣಾ ದಗ್ಗುಬಾಟಿಗೆ ಅವರ ಹಳೆಯ ದಿನಗಳು ನೆನಪಾದವಂತೆ.

ಇದನ್ನೂ ಓದಿ:ರಿಷಬ್ ಶೆಟ್ಟಿ ಜೊತೆ ನಟಿಸಲಿರುವ ‘ಬಾಹುಬಲಿ’ಯ ‘ಸಹೋದರ’

ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ, ವಿಶ್ರಾಂತಿಗಳನ್ನು ಮುಗಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬ ಬಲ್ಲಾಳದೇವ ಎಂದ ಕರೆದಾಗ ರಾಣಾಗೆ ಬಹಳ ಮುಜುಗರವಾಯ್ತಂತೆ. ಏಕೆಂದರೆ ಅವರು ಸಂಪೂರ್ಣವಾಗಿ ಇಳಿದು ಹೋಗಿದ್ದರು. ಪಾಡ್​​ಕಾಸ್ಟ್​​ನಲ್ಲಿ ರಾಣಾ ಹೇಳಿಕೊಂಡಿರುವಂತೆ ಈಗ ಅವರ ಮುಖ್ಯ ಗೋಲ್ ಇರುವುದು ಬದುಕುವುದಕ್ಕೆ ಮಾತ್ರವೇ ಅಂತೆ. ಯಾವ ಬಾಡಿ ಬಿಲ್ಡಿಂಗ್ ಇನ್ನಿತರೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ರಾಣಾ ಹೇಳಿದ್ದಾರೆ.

ರಾಣಾ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾದರೂ ಮಾಸ್ ರೀತಿಯ ಪಾತ್ರಗಳು, ಬಾಡಿ ಬಿಲ್ಡಿಂಗ್ ಅವಶ್ಯಕತೆ ಇರುವ ಪಾತ್ರಗಳಲ್ಲಿ ನಟಿಸುತ್ತಿಲ್ಲ. ಸಿನಿಮಾ ನಟನೆಗಿಂತಲೂ ಸಿನಿಮಾ ನಿರ್ಮಾಣದಲ್ಲಿ ದಗ್ಗುಬಾಟಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪಾರ್ಟ್ಮೆಂಟ್​ನಲ್ಲಿ ಪತ್ನಿನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಜಂಟಿ ಪೊಲೀಸ್ ಆಯುಕ್ತ – Kannada News | Ramesh banoth Talks about Nageshwar Kills His Wife In Bengaluru

ಬೆಂಗಳೂರು, (ಫೆಬ್ರವರಿ 18): ನಿವೃತ್ತ ಇಸ್ರೋ (ISRO) ಉದ್ಯೋಗಿಯೊಬ್ಬರು ಪತ್ನಿಯನ್ನೇ(Wife) ಕೊಲೆ ಮಾಡಿದ ಘಟನೆ ಬೆಂಗಳೂರು (Bengaluru) ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ (75), ನಾನು ಸತ್ತರೆ ನಿನ್ನ ನೋಡಿಕೊಳ್ಳುವವರು ಯಾರು ಎಂದು ಪತ್ನಿ ಸಂಧ್ಯಾಳನ್ನು ಟವಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದರು. ತಾನು ಆತ್ಮಹತ್ಯೆ ಮಾಡಿದರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪೂರ್ವ ವಲಯ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿದ್ದು, ಸಂಧ್ಯಾಶ್ರೀ ಅವರ ಮನೆಯ ಅಡುಗೆ ಮನೆಯಲ್ಲಿ ಇದ್ದಾಗ ಕೃತ್ಯ ನಡೆಸಲಾಗಿದೆ. ಇಂದು (ಫೆಬ್ರವರಿ 18) ಬೆಳಗ್ಗೆ ಹತ್ತು ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.ನಾಗೇಶ್ವರ ರಾವ್ ಅವರು ಟವಲ್ ಬಳಸಿ ಹಿಂದಿನಿಂದ ಹೋಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುವ ಒರ್ವರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಪಾರ್ಟ್ಮೆಂಟ್ ನಲ್ಲಿ ಇರುವ ವೈದ್ಯರೂ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಅನ್ವಯ ಕೇಸ್ ದಾಖಲು ಮಾಡಿ ನಾಗಲೇಶ್ವರ ರಾವ್ ಅವರನ್ನ ಬಂಧನ ಮಾಡಲಾಗಿದೆ. ಆರೋಪಿ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಪಿತ ಸಹ ಮಾನಸಿಕ ಅಸ್ವಸ್ಥತೆ ಇರುವಂತೆ ಕಂಡು ಬರುತ್ತಿದೆ. ಸದ್ಯ ತನಿಖೆ ಮುಂದುವರೆಸಲಾಗಿದ್ದು, ಕೃತ್ಯಕ್ಕೆ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

Source link

ಅಮಿತಾಬ್ ಬಚ್ಚನ್ ಹೂಡಿಕೆ ಮಾಡುವ ವಿಧಾನ ತಿಳಿಸಿದ ಅಭಿಷೇಕ್ ಬಚ್ಚನ್ – Kannada News | Abhishek Bachchan shares his father Amitabh Bachchan’s investment lessons

ಅಮಿತಾಬ್ ಬಚ್ಚನ್ (Amitabh Bachchan) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಭಾರತೀಯ ಚಿತ್ರರಂಗದ ಲಿವಿಂಗ್ ಲಿಜೆಂಡ್ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರು ಅತ್ಯದ್ಭುತ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು. ಅಮಿತಾಬ್ ಬಚ್ಚನ್ ಅವರು ಹಲವು ವರ್ಷಗಳಿಂದಲೂ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳ ಮೇಲೆ ಹೂಡಿಕೆ ಮಾಡಿಕೊಂಡು ಬಂದಿರುವುದು ಮಾತ್ರವೇ ಅಲ್ಲದೆ, ತಮ್ಮ ಮಕ್ಕಳಿಗೂ ಹೂಡಿಕೆಯ ಕೆಲವು ನಿಯಮಗಳನ್ನು ಹೇಳಿಕೊಟ್ಟಿದ್ದಾರೆ. ಇದೀಗ ಅಮಿತಾಬ್ ಬಚ್ಚನ್ ಅವರ ಪುತ್ರ, ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರು ತಂದೆಯ ಹೂಡಿಕೆ ನಿಯಮಗಳ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ನ ಬಚ್ಚನ್ ಕುಟುಂಬ ಕೇವಲ ಚಿತ್ರರಂಗದ ಯಶಸ್ಸಿನ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಬದಲಿಗೆ ಆಸ್ತಿ ಮತ್ತು ಸಂಪತ್ತನ್ನು ಹೇಗೆ ಬುದ್ಧಿವಂತಿಕೆಯಿಂದ ವೃದ್ಧಿಸಬೇಕು ಎಂಬ ಕಲೆಯನ್ನೂ ಕರಗತ ಮಾಡಿಕೊಂಡಿದೆ. ಇತ್ತೀಚೆಗೆ ಸ್ವಿಗ್ಗಿ ಮತ್ತು ನಾಗಿನ್ ಸಾಸ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುದ್ದಿಯಾಗಿದ್ದ ನಟ ಅಭಿಷೇಕ್ ಬಚ್ಚನ್, ಇದೀಗ ತಮ್ಮ ತಂದೆ ಅಮಿತಾಭ್ ಬಚ್ಚನ್ ಅವರ ಹೂಡಿಕೆಯ ನಿಯಮಗಳನ್ನು ಬಹಿರಂಗಪಡಿಸಿದ್ದಾರೆ.

ಜಾಗತಿಕ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಅಭಿಷೇಕ್, ‘ನನ್ನ ತಂದೆ ಯಾವಾಗಲೂ ಭೌತಿಕ ಆಸ್ತಿ ಖರೀದಿ​ ಮೇಲೆ ನಂಬಿಕೆ ಇಟ್ಟವರು. ಅದರಲ್ಲೂ ರಿಯಲ್ ಎಸ್ಟೇಟ್ ಮತ್ತು ಚಿನ್ನದ ಮೇಲೆ ಅವರಿಗೆ ಹೆಚ್ಚಿನ ಒಲವು. ನಾನು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದೆ, ನಂತರ ನನ್ನ ಪತ್ನಿ ಬೆಳ್ಳಿಯತ್ತಲೂ ಗಮನ ಹರಿಸುವಂತೆ ಸೂಚಿಸಿದಳು, ಅವರಿಗೆ ಬೆಳ್ಳಿಯ ಮೇಲೆ ಒಲವು ಹೆಚ್ಚು’ ಎಂದು ತಮ್ಮ ಕುಟುಂಬದ ಹಣಕಾಸು ಶಿಸ್ತಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ಮುಂಬೈ ಒಂದರಲ್ಲೇ ಸುಮಾರು 600 ಕೋಟಿಗೂ ಹೆಚ್ಚು ಮೌಲ್ಯದ ಕಮರ್ಶಿಯಲ್ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತದೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಎದುರು ಬಾಲಕನ ಉದ್ಧಟತನ: ವಿಡಿಯೋ ವೈರಲ್

ಕೇವಲ ಹೂಡಿಕೆ ಮಾತ್ರವಲ್ಲದೆ, ಕೆಲವು ಬ್ರ್ಯಾಂಡ್ ರಾಯಭಾರಿಯಾಗುವ ವಿಷಯದಲ್ಲೂ ಅಭಿಷೇಕ್ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮ ಹೊಂದಿದ್ದಾರಂತೆ. ‘ನಾನು ಒಬ್ಬ ನಟನಾಗಿ ಯಾವುದಾದರೂ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಬಹುದು. ಆದರೆ, ವೈಯಕ್ತಿಕವಾಗಿ ನಾನು ಬಳಸದ ವಸ್ತುವನ್ನು ಪ್ರಚಾರ ಮಾಡುವುದು ನನಗೆ ಮೋಸ ಮಾಡಿದಂತೆ ಅನಿಸುತ್ತದೆ. ಯಾವುದಾದರೂ ಕಂಪನಿ ನನ್ನನ್ನು ರಾಯಭಾರಿಯನ್ನಾಗಿ ಮಾಡಲು ಮುಂದೆ ಬಂದರೆ, ಮೊದಲು ನಾನು ಆ ವಸ್ತುವನ್ನು ಬಳಸುತ್ತೇನೆಯೇ? ಎಂದು ಯೋಚಿಸುತ್ತೇನೆ’ ಎಂದಿದ್ದಾರೆ.

ತಮ್ಮ 20 ವರ್ಷಗಳ ಅನುಭವವನ್ನು ಹಂಚಿಕೊಂಡ ಅವರು, “ನಾನು ಇಂದಿಗೂ ಒಮೆಗಾ ವಾಚ್ ಧರಿಸುತ್ತೇನೆ, ಫೋರ್ಡ್ ಕಾರು ಬಳಸುತ್ತಿದ್ದೆ, ಐಡಿಯಾ ಸಿಮ್ ಹಾಗೂ ಮೊಟೊರೊಲಾ ಫೋನ್ ಬಳಸುತ್ತಿದ್ದೆ. ಇವೆಲ್ಲವೂ ನಾನು ವೈಯಕ್ತಿಕವಾಗಿ ಇಷ್ಟಪಟ್ಟು ಬಳಸುವ ಬ್ರ್ಯಾಂಡ್‌ಗಳು’ ಎಂದು ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಅಭಿಷೇಕ್ ಬಚ್ಚನ್ ಕೇವಲ ರಿಯಲ್ ಎಸ್ಟೇಟ್‌ನಲ್ಲಿ ಮಾತ್ರವಲ್ಲದೆ, ಕ್ರೀಡಾ ಲೋಕದಲ್ಲೂ ದೊಡ್ಡ ಹೂಡಿಕೆ ಮಾಡಿದ್ದಾರೆ. ಅವರು ಪ್ರೊ ಕಬಡ್ಡಿಯ ‘ಜೈಪುರ ಪಿಂಕ್ ಪ್ಯಾಂಥರ್ಸ್’ ತಂಡದ ಮಾಲೀಕರಾಗಿದ್ದಾರೆ ಮತ್ತು ‘ಚೆನ್ನೈಯಿನ್ ಎಫ್‌ಸಿ’ ಫುಟ್‌ಬಾಲ್ ತಂಡದ ಸಹ-ಮಾಲೀಕರಾಗಿದ್ದಾರೆ. ಇವುಗಳ ಜೊತೆಗೆ ‘ವಾಹ್ದಮ್ ಟೀ’ ನಂತಹ ಸ್ಟಾರ್ಟಪ್​​ಗಳಲ್ಲಿಯೂ ಹೂಡಿಕೆ ಮಾಡುವ ಮೂಲಕ ತಮ್ಮ ಉದ್ಯಮ ವಿಸ್ತರಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಸಹ ಸುಮಾರು 250 ಕೋಟಿಯ ರಿಯಲ್ ಎಸ್ಟೇಟ್ ಅನ್ನು ಮುಂಬೈನಲ್ಲಿ ಹೊಂದಿದ್ದಾರೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ – Kannada News | Google CEO Sundar Pichai announces India America Connect initiative at AI Impact Summit

ನವದೆಹಲಿ, ಫೆಬ್ರುವರಿ 18: ಗೂಗಲ್ ಸಿಇಒ, ಹಾಗೂ ಭಾರತ ಮೂಲದ ಸುಂದರ್ ಪಿಚೈ (Sundar Pichai) ಅವರು ಭಾರತ-ಅಮೆರಿಕ ಕನೆಕ್ಟ್ (India America Connect initiative) ಎನ್ನುವ ಮಹತ್ವದ ಉಪಕ್ರಮ ಘೋಷಿಸಿದ್ದಾರೆ. ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಂದರ್ ಪಿಚೈ, ಭಾರತ ಹಾಗು ಅಮೆರಿಕ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಮುದ್ರದೊಳಗೆ ಕೇಬಲ್ ಮಾರ್ಗಗಳನ್ನು (Subsea cable routes) ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

‘ಭಾರತ-ಅಮೆರಿಕ ಕನೆಕ್ಟ್ ಉಪಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಉಪಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಹಾಗೂ ದಕ್ಷಿಣ ಗೋಳಾರ್ಧದ ವಿವಿಧ ಸ್ಥಳಗಳ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಾಗರದೊಳಗೆ ಹೊಸ ಕೇಬಲ್ ಮಾರ್ಗಗಳನ್ನು ಅಳವಡಿಸಲಾಗುತ್ತದೆ. ಈ ಉಪಕ್ರಮದಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಬೇಕಾದರೆ ಕೌಶಲ್ಯಾಭಿವೃದ್ಧಿಯಲ್ಲೂ ಹೂಡಿಕೆ ಮಾಡುವ ಅಗತ್ಯ ಇದೆ. ಹೀಗಾಗಿ, ಕೌಶಲ್ಯ ಯೋಜನೆಗಳನ್ನೂ ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಹೊಸ ಗೂಗಲ್ ಎಐ ಪ್ರೊಫೆಷನಲ್ ಸರ್ಟಿಫಿಕೇಟ್ ಪ್ರೋಗ್ರಾಮ್ ಕೂಡ ಇದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಎಐ ಅನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಅಸಾಧಾರಣ ಎಐ ತಿರುವಿನಲ್ಲಿ ಭಾರತ: ಸುಂದರ್ ಪಿಚೈ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಲ್ಲಿ ಅಸಾಧಾರಣ ತಿರುವಿನಲ್ಲಿ (extraordinary trajectory) ಭಾರತ ಸಾಗುತ್ತಿದೆ. ಈ ದೇಶದ ಎಐ ಪರಿವರ್ತನೆಯಲ್ಲಿ ಜೊತೆಯಾಗಲು ಗೂಗಲ್ ಬದ್ಧವಾಗಿದೆ. ಭಾರತದ ವೈವಿಧ್ಯತೆ, ಭಾಷಾ ಪರಿಸರ, ಉತ್ತಮ ಡಿಜಿಟಲ್ ಪಬ್ಲಕ್ ಇನ್​ಫ್ರಾಸ್ಟ್ರಕ್ಚರ್​ಗಳು ನಾವೀನ್ಯತೆಗೆ ಭದ್ರ ಬುನಾದಿ ಹಾಕುತ್ತವೆ ಎಂದು ಗೂಗಲ್ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಸುಂದರ್ ಪಿಚೈ ಮಾತನಾಡಿರುವ ವಿಡಿಯೋ

ಭಾರತ ಅಮೆರಿಕ ಕನೆಕ್ಟ್ ಉಪಕ್ರಮ ಹೇಗೆ?

ಗೂಗಲ್ ಸಂಸ್ಥೆ ಭಾರತದಲ್ಲಿ ಎಐ ಮೂಲಸೌಕರ್ಯಕ್ಕಾಗಿ ಐದು ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಗೆ ಯೋಜಿಸಿದೆ. ಇದರ ಭಾಗವಾಗಿ ಇಂಡಿಯಾ-ಅಮೆರಿಕ ಕನೆಕ್ಟ್ ಉಪಕ್ರಮ ಆರಂಭಿಸಲಾಗಿದೆ. ಸಮುದ್ರದೊಳಗಿನಿಂದ ಕೇಬಲ್​ಗಳನ್ನು ಅಳವಡಿಸುವುದು, ಫೈಬರ್ ಆಪ್ಟಿಕ್ ಮಾರ್ಗಗಳನ್ನು ನಿರ್ಮಿಸುವುದು, ಮತ್ತು ಇಂಟರ್ನ್ಯಾಷನಲ್ ಲ್ಯಾಂಡಿಂಗ್ ಸ್ಟೇಷನ್​ಗಳನ್ನು ನಿರ್ಮಿಸುವುದು ಗೂಗಲ್​ನ ಯೋಜನೆಗಳಲ್ಲಿ ಸೇರಿವೆ.

ಇದನ್ನೂ ಓದಿ: ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ

ಅಮೆರಿಕದ ಪಶ್ಚಿಮ ಕರಾವಳಿ ಭಾಗದಿಂದ ಸಮುದ್ರದೊಳಗೆ ಕೇಬಲ್​ಗಳನ್ನು ಭಾರತ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಇತ್ಯಾದಿ ಕಡೆಗೆ ಹಾಯಿಸಲಾಗುತ್ತದೆ. ಭಾರತದಿಂದ ಸಿಂಗಾಪುರ, ಸೌತ್ ಆಫ್ರಿಕಾ ಆಸ್ಟ್ರೇಲಿಯಾಗೆ ಕೆನ್ಕಟ್ ಆಗುವ ವಿವಿಧ ಸಬ್​ಸೀ ಕೇಬಲ್ ಮಾರ್ಗಗಳನ್ನೂ ಮಾಡಲಾಗುತ್ತದೆ. ವಿಶಾಖಪಟ್ಟಣಂನಲ್ಲಿ ಹೊಸ ಇಂಟರ್ನ್ಯಾಷನಲ್ ಸಬ್​ಸೀ ಗೇಟ್​ವೀ ಸ್ಥಾಪಿಸಲಾಗುತ್ತದೆ. ಹಾಗೆಯೇ, ನಾಲ್ಕು ಫೈಬರ್ ಆಪ್ಟಿಕ್ ರೂಟ್​ಗಳನ್ನೂ ನಿರ್ಮಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ: ಗುಡ್​​ನ್ಯೂಸ್​​ ಕೊಟ್ಟ ಅರಣ್ಯ ಸಚಿವರು – Kannada News | Nagarahole, Bandipur Safari Resumes from Tomorrow: Good News for Tourists

ಬೆಂಗಳೂರು, ಫೆಬ್ರವರಿ 18: ನಾಗರಹೊಳೆ, ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯಿಂದ ನಾಳೆಯಿಂದಲೇ ಸಫಾರಿ ಪುನಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದ್ದು, ಜನವರಿ 2ರಂದು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ಮಾಡಿದ್ದೆವು. ಹಿರಿಯ ಅಧಿಕಾರಿಗಳ ನೇತೃತ್ವದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಸಫಾರಿ ಅವಧಿ ಇಳಿಕೆ

ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ನಿರ್ಧರಿಸಲಾಗಿದ್ದು, ಸಫಾರಿ ಅವಧಿಯಲ್ಲಿಯೂ ಕೆಲ ಬದಲಾವಣೆ ಮಾಡಲಾಗಿದೆ. ಬಂಡೀಪುರದಲ್ಲಿ 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿದ್ದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ. ಅಲ್ಲದೆ ರೆಸಾರ್ಟ್​​ ಮತ್ತು ಹೋಂ ಸ್ಟೇಗಳಲ್ಲಿ ಕ್ಯಾಂಪ್​​ ಫೈರ್​​ ನಿರ್ಬಂಧಿಸಿಯೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಫಾರಿ ಬಂದ್​ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಪ್ರವಾಸಿಗರ ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ?

ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರ ಪರಿಣಾಮವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗಿದೆ. ರಣಥಂಬೋರ್ ಹಾಗೂ ಕಾರ್ಬೆಟ್ ಸೇರಿದಂತೆ ಇತರ ರಾಜ್ಯಗಳ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ (KETRA) ದೂರಿತ್ತು. ಅಲ್ಲದೆ ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್ಗಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿಗೆ ಬ್ರೇಕ್ ಬಿದ್ದಿರುವುದು ಇವರ ಜೀವನದ ಮೇಲೆ ಪರಿಣಾಮ ಬಿದ್ದಿದೆ ಎಂಬ ಬಗ್ಗೆ ವರದಿಯಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:06 pm, Wed, 18 February 26

Source link

ಪುನೀತ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕೈ ಮುಗಿದು ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್ – Kannada News | Kanakapura Srinivas apologies Puneeth Rajkumar Dhruva Sarja and Jogi Prem

ಕೆಲವೇ ದಿನಗಳ ಹಿಂದೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಜೋಗಿ ಪ್ರೇಮ್, ಎ.ಪಿ. ಅರ್ಜುನ್, ಪುನೀತ್ ರಾಜ್​ಕುಮಾರ್, ಧ್ರುವ ಸರ್ಜಾ (Dhruva Sarja) ಮುಂತಾದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈಗ ಮಾಧ್ಯಮದ ಎದುರು ಅವರು ಕ್ಷಮೆ ಕೇಳಿದ್ದಾರೆ. ‘ನಾನು ಕಾಟನ್​ಪೇಟೆ ಗೇಟ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾವುಕವಾಗಿ ಕೆಲವು ವಿಚಾರಗಳನ್ನು ಮಾತನಾಡಿದ್ದೆ. ಕಾರಣ ಇಷ್ಟೇ, ಆ ಸಿನಿಮಾ ರಿಲೀಸ್ ಆಗಬೇಕಿತ್ತು. ಸ್ವಲ್ಪ ಹಣದ ಅವಶ್ಯಕತೆ ಇತ್ತು. ತುಂಬಾ ದುಃಖದಿಂದ ಮಾತನಾಡಿದೆ. ರಾಜ್​​ಕುಮಾರ್ ಎಂದರೆ ನನಗೆ ಬಹಳ ಅಭಿಮಾನ. ಪುನೀತ್ ಸರ್ ನಿಜವಾಗಿಯೂ ದೇವರು. ನನ್ನ ಜೊತೆ ಸಿನಿಮಾ ಮಾಡುವುದಕಿಂತ ಮೊದಲಿನಿಂದಲೂ ಅವರ ಜೊತೆ ಒಡನಾಟ ಇದೆ. ಅವರು ಕನಕಪುರಕ್ಕೆ ಬರುತ್ತಿದ್ದರು’ ಎಂದು ಕನಕಪುರ ಶ್ರೀನಿವಾಸ್ (Kanakapura Srinivas) ಹೇಳಿದ್ದಾರೆ.

‘ಮುಯೂರ ಎಂಬ ಸಿನಿಮಾ ಅನೌನ್ಸ್ ಮಾಡಿದ್ದೆ. ಆ ಸಿನಿಮಾ ಆಗಲಿಲ್ಲ. ನನ್ನ ದುಡ್ಡಿಗೋಸ್ಕರ ದೇವರು ಅವರನ್ನು ತೆಗೆದುಕೊಂಡ ಅಂತ ನಾನು ಹೇಳಿದ್ದೆ. ಆ ಮಾತನ್ನು ನಾನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು 7 ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಬೇಕು. ಪುನೀತ್ ಅವರು ದೇವರಾಗಿಯೇ ಮೇಲೆ ಇರುತ್ತಾರೆ. ಶಿವರಾಜ್​​ಕುಮಾರ್, ಗೀತಮ್ಮ ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ. ಅವರ ಸಹಕಾರ ನಾನು ಎಂದಿಗೂ ಮರೆಯುವಂತಿಲ್ಲ’ ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.

‘ನಾನು ವಿದ್ಯಾವಂತ ಅಲ್ಲ. ಮನಸ್ಸಿನಲ್ಲಿ ಏನು ಇದೆಯೋ ಅದನ್ನೆಲ್ಲ ಹೇಳಿಬಿಟ್ಟಿದ್ದೇನೆ. ಶಿವಣ್ಣ ನಾನು ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಸಿನಿಮಾ ನಾವಿನ್ನೂ ಮಾಡಬೇಕು. ನಾನು ಏನಾದರೂ ತಪ್ಪಾಗಿ ಮಾತನಾಡಿದ್ದರೆ ದಯವಿಟ್ಟು ಕ್ಷಮಿಸಬೇಕು. ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ ಕನಕಪುರ ಶ್ರೀನಿವಾಸ್.

‘ದರ್ಶನ್ ನಮ್ಮ ಮಾಸ್ ಹೀರೋ. ಅವರು ನನಗೆ ದುಡ್ಡು ಕೊಡಬೇಕು ಅಂತ ಹೇಳಿದ್ದೇನೆ. ಅದು ತಪ್ಪು. ಅವರ ಹೊರಗೆ ಬಂದಮೇಲೆ ಜೊತೆಗೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಅದನ್ನು ಈಡೇರಿಸಿಕೊಡಿ’ ಎಂದು ಕನಕಪುರ ಶ್ರೀನಿವಾಸ್ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್

‘ಧ್ರುವ ಸರ್ಜಾ ಅವರ ಜೊತೆ ನಾನು 3 ಸಿನಿಮಾ ಮಾಡಿದ್ದೇನೆ. ನಾನೊಬ್ಬ ಹಳ್ಳಿ ಹುಡುಗ. ನಿಮ್ಮಂಥ ಕಲಾವಿದರು ಬೇಕು. ನಮಗೆ ದಯವಿಟ್ಟು ಕಾಲ್​ಶೀಟ್ ಕೊಡಿ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇವೆ. ಸಿನಿಮಾ ಮಾಡಿಕೊಡಿ. ಪ್ರೇಮ್, ಎ.ಪಿ. ಅರ್ಜುನ್ ಅವರು ಸಿನಿಮಾ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನನಗೆ ದುಡ್ಡು ಬೇಡ, ಸಿನಿಮಾ ಮಾಡಿಕೊಡಿ. ದಯವಿಟ್ಟು ನೀವೆಲ್ಲ ಸಹಕರಿಸಬೇಕು’ ಎಂದು ಕನಕಪುರ ಶ್ರೀನಿವಾಸ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ ಉಪಚುನಾವಣೆ ಮುನ್ನ ಅಕ್ರಮ ಮತದಾರರ ಸದ್ದು: ದಾಖಲೆ‌ ಸಮೇತ ಬಯಲು ಮಾಡಿದ ಮಾಜಿ ಶಾಸಕ – Kannada News | Bagalkote By Election: 7272 Double Voters Alleged by Ex MLA veeranna charantimath

ಡಿಸಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರುImage Credit source: tv9 kannada

ಬಾಗಲಕೋಟೆ, ಫೆಬ್ರವರಿ 18: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ ವೈ ಮೇಟಿ ನಿಧನ ಹಿನ್ನೆಲೆ ಉಪಚುನಾವಣೆಗೆ (by election) ಭರ್ಜರಿ ತಯಾರಿ ನಡೆದಿದೆ. ಈ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತೀವೆ. ಈ ಮಧ್ಯೆ ಕ್ಷೇತ್ರದಲ್ಲಿ ಅಕ್ರಮ ವೋಟರ್​​​ಗಳ (voters) ಸದ್ದು ಜೋರಾಗಿದೆ. ಈ ಬಗ್ಗೆ ಬಿಜೆಪಿ‌ ಮಾಜಿ ಶಾಸಕ ವೀರಣ್ಣ ಚರಂತಿಮಠ ದಾಖಲೆ‌ ಸಮೇತ ಆರೋಪ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ‌ಮುಖಂಡರು ಬಿಜೆಪಿ‌ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಅದೊಂದು ಆರೋಪ ‌ಮಾಡಿದ್ದರು. ಚರಂತಿಮಠ ‌ತಾವು ಕಾರ್ಯಾಧ್ಯಕ್ಷ ಆಗಿರುವ ಬಿವಿವಿ ಸಂಘದ ವಿದ್ಯಾರ್ಥಿಗಳನ್ನು ಮತದಾರರನ್ನಾಗಿ ಮಾಡುತ್ತಿದ್ದಾರೆ. ಅಲ್ಲೂ ಕೂಡ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ಡಿಸಿಗೆ ಮನವಿ ಸಲ್ಲಿಸಿದ್ದರು.

ಡಬಲ್ ವೋಟರ್ಸ್ ಕಡಿವಾಣಕ್ಕೆ ಚರಂತಿಮಠ ಆಗ್ರಹ

ಇದೀಗ ವೀರಣ್ಣ ಚರಂತಿಮಠ ಬಾಗಲಕೋಟೆ ಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 7272 ಡಬಲ್ ವೋಟರ್ಸ್​ಗಳಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಎರಡೆರಡು ಬೂತ್​​ನಲ್ಲಿ ಒಬ್ಬ ವ್ಯಕ್ತಿಯ ಹೆಸರುಗಳಿವೆ. ಎರಡೆರೆಡು ಬೂತ್ ಪ್ರಕಾರ ಎರಡೆರಡು ವೋಟರ್​​​ ಐಡಿ ನಂಬರ್ ಇವೆ ಎಂದು ದಾಖಲೆ ಒದಗಿಸಿದ್ದಾರೆ‌. ಬಿಜೆಪಿ ಮುಖಂಡರು ಡಿಸಿ ಅವರಿಗೆ ದಾಖಲೆ ನೀಡಿ ಇವುಗಳನ್ನು ಸರಿಪಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಬಲ್ ವೋಟರ್ಸ್​ ಈ ಹಿಂದೆ ಮತದಾನ ಕೂಡ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಡಿಸಿ ಸಂಗಪ್ಪ ಹೇಳಿದ್ದಿಷ್ಟು

ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಈ ಘಟನೆ ನಡೆದಿದೆ. ಇದನ್ನು ಬಿಜೆಪಿ ಬೂತ್ ಅಧ್ಯಕ್ಷರು, ಬೂತ್ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಇನ್ನು ಮನವಿ ಸ್ವೀಕರಿಸಿ ಮಾತನಾಡಿದ ಡಿಸಿ ಸಂಗಪ್ಪ, ಚುನಾವಣಾ ಸಿಬ್ಬಂದಿ ಮೂಲಕ ಈ ಬಗ್ಗೆ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ್ದಾರೆ‌. ಇನ್ನು ಈ ಬಗ್ಗೆ ದಾಖಲೆ ನೀಡಿದ ಜಿಲ್ಲಾಡಳಿತ ಬಾಗಲಕೋಟೆ ಕ್ಷೇತ್ರದಲ್ಲಿ 538 ಜನ ನಿಧನ ಹೊಂದಿದವರ ಹೆಸರು ಡಿಲಿಟ್ ಮಾಡಲಾಗಿದೆ. 382 ಜನ ಬೇರೆ ಕಡೆ ಸ್ಥಳಾಂತರವಾಗಿದ್ದಾರೆ. 341 ಜನರ ಹೆಸರು ಮಾತ್ರ ಡಬಲ್ ಇದ್ದವು. ಅವುಗಳನ್ನು ಸರಿ ಮಾಡಲಾಗಿದೆ. 7272 ಡಬಲ್ ವೋಟರ್ಸ್ ಇಲ್ಲ. ಅದು ಕನ್ನಡ ಮತ್ತು ಇಂಗ್ಲಿಷ್​ನಲ್ಲಿರುವ ಮತದಾರರ ಪಟ್ಟಿ ಮೂಲಕ ಗೊಂದಲವಾಗಿದೆ. ಬಿಜೆಪಿಯವರ ಮನವಿ ಸ್ವೀಕರಿಸಿದ್ದು, ಎಲ್ಲಾ ರೀತಿಯಿಂದ ಪರಿಷ್ಕರಣೆ ನಡೆದಿದೆ. ಲೋಪದೋಷ ಇರೋದನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೋಟ್​​ ಚೋರಿ ಎಂದ ‘ಕೈ’ಗೆ ಬಿಜೆಪಿ ಗುದ್ದು: ಕಾಂಗ್ರೆಸ್​ ವಿರುದ್ಧವೇ ಮತದಾರರ ಪಟ್ಟಿ ಅಕ್ರಮ ಆರೋಪ!

ಒಟ್ಟಿನಲ್ಲಿ ಉಪಚುನಾವಣೆ ಕಾವು ಆರಂಭಕ್ಕೂ ಮುನ್ನ ಅಕ್ರಮ ಮತದಾರರ ಸದ್ದು ಜೋರಾಗಿದ್ದು, ಜಿಲ್ಲಾಡಳಿತ ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಸರಿಪಡಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link