ಚಿಕ್ಕಮಗಳೂರು, ಏಪ್ರಿಲ್ 02: ಅನಾರೋಗ್ಯದ ಹಿನ್ನೆಲೆ ಡ್ರಿಪ್ಸ್ ಹಾಕಿಸಿಕೊಂಡೇ ವಿದ್ಯಾರ್ಥಿಯೋರ್ವ SSLC ಪರೀಕ್ಷೆ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ ನಡೆದಿದೆ. ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿ ಗಗನ್ ಎಂಬಾತ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅಂಬುಲೈನ್ಸ್ ಮೂಲಕ ಬಣಕಲ್ ಅಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಅಗತ್ಯ ಚಿಕಿತ್ಸೆ ಪಡೆದ ಬಳಿಕ ವೈದ್ಯರ ಸಲಹೆ ಪಡೆದು ಡ್ರಿಪ್ಸ್ ಹಾಕಿಸಿಕೊಂಡೇ ಗಗನ್ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬಳಿಕ ವಿದ್ಯಾರ್ಥಿಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನವದೆಹಲಿ, ಏಪ್ರಿಲ್ 2: ಸತತ ಹಿನ್ನಡೆಯಲ್ಲಿದ್ದ ರುಪಾಯಿ ಕರೆನ್ಸಿ ಗುರುವಾರ ಡಾಲರ್ ಎದುರು 105 ಪೈಸೆಗಳಷ್ಟು ಚೇತರಿಕೆ ಪಡೆದು 94ರ ಮಟ್ಟಕ್ಕಿಂತ ಕೆಳಗೆ ಬಂದಿದೆ. ಹಿಂದಿನ ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು 94.70ರ ಮಟ್ಟದಲ್ಲಿದ್ದ ರುಪಾಯಿ ಮೌಲ್ಯ ಇವತ್ತು ಗುರುವಾರ 93.65ಕ್ಕೆ ಏರಿದೆ. ಡಾಲರ್ ಎದುರು ರುಪಾಯಿ (Dollar vs Rupee) ಚೇತರಿಕೆಗೆ ಪ್ರಮುಖವಾಗಿ ಕಾರಣವಾಗಿದ್ದು ಆರ್ಬಿಐ ತೆಗೆದುಕೊಂಡ ಒಂದು ಕ್ರಮ.
ಸ್ಪೆಕ್ಯುಲೇಟಿವ್ ಟ್ರೇಡಿಂಗ್ನಿಂದ ರುಪಾಯಿಗೆ ಬಹಳ ಹಿನ್ನಡೆಯಾಗಿತ್ತು. ತೈಲ ಬೆಲೆ ಹೆಚ್ಚಿದ್ದರಿಂದ ಭಾರತದ ಕರೆಂಟ್ ಅಕೌಂಟ್ ಕೊರತೆ ಹಿಗ್ಗಿತು. ಇದು ರುಪಾಯಿ ಮೇಲೆ ಇನ್ನಷ್ಟು ಒತ್ತಡ ಹಾಕಿದೆ. ರುಪಾಯಿಗೆ ಹಿನ್ನಡೆ ತರುತ್ತಿದ್ದ ಸ್ಪೆಕ್ಯೂಲೇಟಿವ್ ಬೆಟ್ಗಳಿಗೆ ಆರ್ಬಿಐ ಕಡಿವಾಣ ಹಾಕಿತು. ಬ್ಯಾಂಕುಗಳು ರುಪಾಯಿ ಎನ್ಡಿಎಫ್ಗಳನ್ನು (ನಾನ್ ಡೆಲಿವರಬಲ್ ಫಾರ್ವರ್ಡ್ಸ್) ನೀಡದಂತೆ ನಿಯಮಗಳನ್ನು ಹಾಕಲಾಯಿತು. ಕ್ಯಾನ್ಸಲ್ ಆದ ಫಾರ್ವರ್ಡ್ ಕಾಂಟ್ರಾಕ್ಟ್ಗಳನ್ನು ರೀಬುಕಿಂಗ್ ಮಾಡದಂತೆ ಕಂಪನಿಗಳನ್ನು ತಡೆಯಾಯಿತು. ಇದರಿಂದ ಕರೆನ್ಸಿ ಸ್ಪೆಕುಲೇಶನ್ ಅತಿಯಾಗಿ ಆಗುವುದು ತಪ್ಪಿದಂತಾಯಿತು.
ಇರಾನ್ ಯುದ್ಧವು ತಾರ್ಕಿಕ ಅಂತ್ಯ ಮುಟ್ಟುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ. ತೈಲ ಬೆಲೆ 100 ಡಾಲರ್ಗಿಂತ ಹೆಚ್ಚಿನ ಮಟ್ಟದಲ್ಲೇ ಇದೆ. ಗುರುವಾರ ಬ್ರೆಂಟ್ ಫ್ಯೂಚರ್ಸ್ನಲ್ಲಿ ತೈಲ ಬೆಲೆ ಶೇ. 5ರಷ್ಟು ಹೆಚ್ಚಾಗಿ ಬ್ಯಾರಲ್ಗೆ 106 ಡಾಲರ್ ಮುಟ್ಟಿದೆ. ಇದೇ ಮಟ್ಟದಲ್ಲಿ ತೈಲ ಬೆಲೆ ಮತ್ತಷ್ಟು ಕಾಲ ಮುಂದುವರಿಯುತ್ತಿದ್ದಲ್ಲಿ ಭಾರತದ ಆರ್ಥಿಕತೆಗೆ ಮತ್ತಷ್ಟು ಹಿನ್ನಡೆ ತರುತ್ತಾ ಹೋಗಬಹುದು.
ಭಾರತಕ್ಕೆ ಬೈ ಹೇಳುತ್ತಿರುವ ವಿದೇಶೀ ಹೂಡಿಕೆದಾರರು
ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಭಾರತೀಯ ಈಕ್ವಿಟಿ ಸೆಗ್ಮೆಂಟ್ನಿಂದ ಸತತವಾಗಿ ನಿರ್ಗಮಿಸುತ್ತಿದ್ದಾರೆ. ಬುಧವಾರವೂ ಎಫ್ಪಿಐಗಳೀಂದ 8,331 ಕೋಟಿ ರೂ ಮೊತ್ತದ ಷೇರುಗಳ ಮಾರಾಟವಾಗಿದೆ. ಮಾರ್ಚ್ ತಿಂಗಳಲ್ಲಿ ಎಫ್ಪಿಐಗಳು 1.18 ಲಕ್ಷ ಕೋಟಿ ರೂ ಹೂಡಿಕೆಗಳನ್ನು ಹಿಂಪಡೆದಿದ್ದಾರೆ.
2024-25ರಲ್ಲಿ ಎಫ್ಪಿಐಗಳಿಂದ ನಿವ್ವಳ ಹೊರಹರಿವು ಆಗಿರುವುದು ಬರೋಬ್ಬರಿ 1.80 ಲಕ್ಷ ಕೋಟಿ ರೂ ನಷ್ಟು. ಕಳೆದ 34 ವರ್ಷದಲ್ಲೇ ಇದು ದಾಖಲೆ ಪ್ರಮಾಣದ ಎಫ್ಪಿಐ ಹೊರಹರಿವು. ಈ ಬೆಳವಣಿಗೆಯು ರುಪಾಯಿ ಮೇಲೆ ಅತೀವ ಒತ್ತಡ ತಂದಿದೆ. ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಒಂದು ಹಂತದಲ್ಲಿ 95ರ ಗಡಿ ದಾಟಿ ಹೋಗಿತ್ತು.
ಕೊಯಮತ್ತೂರು, ಏಪ್ರಿಲ್ 2: ಯೂಟ್ಯೂಬರ್ (YouTuber) ಮೊನಾಲಿಸಾಳನ್ನು ಭೇಟಿಯಾಗುವ ಉದ್ದೇಶದಿಂದ ಕೊಯಮತ್ತೂರಿನಿಂದ ಚೆನ್ನೈಗೆ ಪ್ರಯಾಣಿಸಲು ಯತ್ನಿಸಿದ ನಾಲ್ವರು ಶಾಲಾ ವಿದ್ಯಾರ್ಥಿನಿಯರನ್ನು ಕೊಯಮತ್ತೂರು ರೈಲ್ವೆ ನಿಲ್ದಾಣದ ಪೊಲೀಸರು ರಕ್ಷಿಸಿದ್ದಾರೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ 7ನೇ ತರಗತಿಯ ಆಪ್ತ ಸ್ನೇಹಿತರಾದ ನಾಲ್ವರು ವಿದ್ಯಾರ್ಥಿನಿಯರು ಮನೆಯಿಂದ ಓಡಿಹೋಗಿ ರೈಲು ಹತ್ತುವ ಮೊದಲೇ ಅವರನ್ನು ತಡೆಹಿಡಿಯಲಾಯಿತು.
ಈ ಹುಡುಗಿಯರು ತಮ್ಮ ಪೋಷಕರ ಒಪ್ಪಿಗೆ ಪಡೆದು ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದರು. ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಖಾತೆಗಳನ್ನು ರಚಿಸಿದರು, ಅದರಲ್ಲಿ ಹಲವಾರು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಂಡರು. ಸದಾ ಆನ್ಲೈನ್ನಲ್ಲಿ ಚಾಟ್ ಮಾಡುತ್ತಿದ್ದರು. ಚೆನ್ನೈ ಮೂಲದ 22 ವರ್ಷದ ಜನಪ್ರಿಯ ಯೂಟ್ಯೂಬರ್ ಮೊನಾಲಿಸಾಳ ಬಗ್ಗೆ ಆ 4 ಹುಡುಗಿಯರಲ್ಲಿ ಒಬ್ಬಳಿಗೆ ತುಂಬ ಇಷ್ಟವಿತ್ತು. ಆಕೆ ಯಾವಾಗಲೂ ಮೊನಾಲಿಸಾಳ ವಿಡಿಯೋ, ರೀಲ್ಸ್ಗಳನ್ನು ನೋಡುತ್ತಿದ್ದಳು. ಯಾವಾಗಲಾದರೂ ಒಮ್ಮೆ ಆಕೆಯನ್ನು ಭೇಟಿಯಾಗಬೇಕೆಂದು ಬಯಸಿದ್ದಳು.
ಆಕೆ ಇನ್ಸ್ಟಾಗ್ರಾಮ್ನಲ್ಲಿ ಮೊನಾಲಿಸಾಳನ್ನು ಫಾಲೋ ಮಾಡುತ್ತಿದ್ದಳು. ಆಗಾಗ ಆಕೆಯೊಂದಿಗೆ ಚಾಟ್ ಕೂಡ ಮಾಡಿತ್ತಿದ್ದಳು. ತಾನು ಆಕೆಯನ್ನು ಭೇಟಿಯಾಗಬೇಕೆಂದುಕೊಂಡಿದ್ದೇನೆ ಎಂಬ ವಿಷಯವನ್ನು ಆಕೆ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಾಗ ಉಳಿದ ಮೂವರು ಹುಡುಗಿಯರು ಸಹ ಮೊನಾಲಿಸಾಳನ್ನು ಫಾಲೋ ಮಾಡಲು ಪ್ರಾರಂಭಿಸಿದರು. ಅವರೂ ಆಕೆಯ ಜೊತೆ ಸಂಪರ್ಕದಲ್ಲಿದ್ದರು.
ಕ್ರಮೇಣ, ನಾಲ್ವರು ಹುಡುಗಿಯರು ಮೊನಾಲಿಸಾಳನ್ನು ವೈಯಕ್ತಿಕವಾಗಿ ಭೇಟಿಯಾಗಬೇಕೆಂಬ ಬಲವಾದ ಆಸೆಯನ್ನು ಬೆಳೆಸಿಕೊಂಡರು. ಇದೇ ಕಾರಣಕ್ಕೆ ಚೆನ್ನೈಗೆ ಪ್ರಯಾಣಿಸಲು ನಿರ್ಧರಿಸಿದರು. ಪ್ಲಾನ್ ಮಾಡಿ ಮನೆಯಿಂದ ಓಡಿಹೋದರು. ಅವರ ನಾಪತ್ತೆಯನ್ನು ಕಂಡು ಆಘಾತಕ್ಕೊಳಗಾದ ಅವರ ಪೋಷಕರು ಕೊಯಮತ್ತೂರು ನಗರ ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಯಿತು.
ಆ ಹುಡುಗಿಯರು ಕೊಯಮತ್ತೂರು ರೈಲು ನಿಲ್ದಾಣದ ಕಡೆಗೆ ಹೋಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿತು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ನಾಲ್ವರು ಹುಡುಗಿಯರನ್ನು ರಕ್ಷಿಸಿ, ಪೊಲೀಸ್ ಠಾಣೆಗೆ ಕರೆತಂದರು. ಬಳಿಕ ಆ ಪೊಲೀಸರು ಹುಡುಗಿಯರಿಗೆ ಬುದ್ಧಿ ಹೇಳಿ ಅವರ ಪೋಷಕರಿಗೆ ಒಪ್ಪಿಸಿದರು. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಯೂಟ್ಯೂಬರ್ ಮೊನಾಲಿಸಾಗೆ ಮೆಸೇಜ್ ಮಾಡಿದ್ದ ಈ ವಿದ್ಯಾರ್ಥಿನಿಯರು ಆಕೆಯನ್ನು ನೋಡಲು ಬಯುಸುತ್ತಿರುವುದಾಗಿ ಹೇಳಿದ್ದರು. ಅದಕ್ಕೆ ಆಕೆ “ಬನ್ನಿ” ಎಂದು ಉತ್ತರಿಸಿದ್ದಳು. ಈ ವಿಷಯಕ್ಕೆ ಸಂಬಂಧಿಸಿದಂತೆ ಮೊನಾಲಿಸಾಳನ್ನು ಪೊಲೀಸರು ಪ್ರಶ್ನಿಸಲಿದ್ದಾರೆ. ಈ ಉದ್ದೇಶಕ್ಕಾಗಿ ಆಕೆಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ. ತನಿಖೆಯಲ್ಲಿ ಆಕೆ ನಿಜವಾಗಿಯೂ ಈ ಹುಡುಗಿಯರನ್ನು ತನ್ನನ್ನು ಭೇಟಿ ಮಾಡಲು ಆಹ್ವಾನಿಸಿದ್ದು ಸಾಬೀತಾದರೆ ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು (ಏ. 02): ಪ್ರಸಿದ್ಧ ವಿವೋ (Vivo) ಕಂಪನಿ ಭಾರತೀಯ ಮಾರುಕಟ್ಟೆಗೆ ಆಕರ್ಷಕ ಫೀಚರ್ಸ್ನ ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದೆ. ಇದರ ಹೆಸರು ವಿವೋ V70 FE. ಮಿಡ್ರೇಂಜ್ ಬೆಲೆಯಲ್ಲಿ ಈ ಫೋನ್ ಅನಾವರಣಗೊಂಡಿದ್ದು, ಇದರಲ್ಲಿ ಹೆಚ್ಚಿನ ರೆಸಲ್ಯೂಶನ್ 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7360-ಟರ್ಬೊ ಚಿಪ್ಸೆಟ್ ಅನ್ನು ಬಳಸುತ್ತದೆ, AI ಇಮೇಜಿಂಗ್ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬ ಕುರಿತ ಸಂಪೂರ್ಣ ಮಾಹಿತಿ ತಿಳಿಯೋಣ.
ಭಾರತದಲ್ಲಿ ವಿವೋ V70 FE ಬೆಲೆ, ಲಭ್ಯತೆ
ಭಾರತದಲ್ಲಿ ವಿವೋ V70 FE ಬೆಲೆ 8GB + 128GB ಆಯ್ಕೆಗೆ ರೂ. 37,999 ರಿಂದ ಪ್ರಾರಂಭವಾಗುತ್ತದೆ. ಅದೇ 8GB + 256GB ಮತ್ತು 12GB + 256GB ಆವೃತ್ತಿಗಳ ಬೆಲೆ ಕ್ರಮವಾಗಿ ರೂ. 40,999 ಮತ್ತು ರೂ. 44,999. ಈ ಹ್ಯಾಂಡ್ಸೆಟ್ ಮಾನ್ಸೂನ್ ಬ್ಲೂ ಮತ್ತು ನಾರ್ದರ್ನ್ ಲೈಟ್ಸ್ ಪರ್ಪಲ್ ಫಿನಿಶ್ಗಳಲ್ಲಿ ಲಭ್ಯವಿದೆ. ಈ ಫೋನ್ ವಿವೋ ವೆಬ್ಸೈಟ್, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲಿ ಏಪ್ರಿಲ್ 9 ರಿಂದ ಮಾರಾಟಕ್ಕೆ ಬರಲಿದೆ.
ವಿವೋ V70 FE ಫೀಚರ್ಸ್
ವಿವೋ V70 FE ಫೋನ್ 6.83-ಇಂಚಿನ 1.5K OLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ, 1,900 nits ವರೆಗಿನ ಗರಿಷ್ಠ ಬ್ರ್ಐಟ್ನೆಸ್ ಮತ್ತು HDR10+ ಪ್ರಮಾಣೀಕರಣವನ್ನು ಹೊಂದಿದೆ. 4nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7360-ಟರ್ಬೊ ಚಿಪ್ಸೆಟ್ನಿಂದ ಚಾಲಿತವಾಗಿದೆ, 12GB ವರೆಗಿನ LPDDR5 RAM ಮತ್ತು 512GB ವರೆಗಿನ UFS 3.1 ಆನ್ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಇದು ಆಂಡ್ರಾಯ್ಡ್ 16-ಆಧಾರಿತ OriginOS 6 ನೊಂದಿಗೆ ಬರುತ್ತದೆ. ಮತ್ತೊಂದು ವಿಶೇಷ ಎಂದರೆ ಇದರ ಮುಂಭಾಗದ ಕ್ಯಾಮೆರಾ ಸುತ್ತಲೂ Origin Island ವೈಶಿಷ್ಟ್ಯವನ್ನು ಒಳಗೊಂಡಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, 200-ಮೆಗಾಪಿಕ್ಸೆಲ್ ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಇದು 1/1.56-ಇಂಚಿನ ಮುಖ್ಯ ಸೆನ್ಸರ್, f/1.88 ಅಪರ್ಚರ್ನಿಂದ ಕೂಡಿದೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), f/2.2 ಅಪರ್ಚರ್ ಹೊಂದಿರುವ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್, 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಔರಾ ಲೈಟ್ ಬೆಂಬಲವನ್ನು ಹೊಂದಿದೆ. ಮುಂಭಾಗದಲ್ಲಿ, ಇದು f/2.2 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್ಸೆಟ್ AI-ಬೆಂಬಲಿತ 30x ಸೂಪರ್ ಜೂಮ್ ಜೊತೆಗೆ AI ಮ್ಯಾಜಿಕ್ ವೆದರ್, AI ಮ್ಯಾಜಿಕ್ ಲ್ಯಾಂಡ್ಸ್ಕೇಪ್ ಮತ್ತು AI ಫೋರ್-ಸೀಸನ್ ಪೋರ್ಟ್ರೇಟ್ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ವಿವೋ, V70 FE ಮಾದರಿಯಲ್ಲಿ ಗೇಮಿಂಗ್ ಹೈಪರ್ಸೆನ್ಸ್ ಆಡಿಯೊದೊಂದಿಗೆ ಡ್ಯುಯಲ್ ಸ್ಪೀಕರ್ಗಳನ್ನು ಒಳಗೊಂಡಿದೆ. ಇದು ಡಾರ್ಕ್ನೆಸ್ ಗ್ಲೋ ತಂತ್ರಜ್ಞಾನವನ್ನು ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಮತ್ತು IP69 ರೇಟಿಂಗ್ಗಳನ್ನು ಹೊಂದಿದೆ ಮತ್ತು ನೀರೊಳಗಿನ ಛಾಯಾಗ್ರಹಣವನ್ನು ಸಹ ಬೆಂಬಲಿಸುತ್ತದೆ. ಇವೆಲ್ಲದರ ಜೊತೆಗೆ 7,000mAh ಬ್ಯಾಟರಿಯನ್ನು ಹೊಂದಿದ್ದು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್ಗೆ ಬೆಂಬಲವನ್ನು ಹೊಂದಿದೆ. ಕಂಪನಿಯು 60 ನಿಮಿಷಗಳಲ್ಲಿ 1 ರಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಹೇಳಿಕೊಂಡಿದೆ.
ಚಿತ್ರದುರ್ಗ, ಏಪ್ರಿಲ್ 02: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಆರೋಪ ಸಂಬಂಧ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ BAMS ವಿದ್ಯಾರ್ಥಿನಿ ನಿಖಿತಾ(23) ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗಿವೆ. ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿನಿಯರ ಹೆಸರನ್ನು ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವರ ವಿರುದ್ಧ ಕೇಸ್ ಕೂಡ ಆಗಿದೆ. ಈ ನಡುವೆ ಸಾವಿಗೂ ಮುನ್ನ ನಿಖಿತಾ ಬರೆದ ಡೆತ್ನೋಟ್ ಲಭ್ಯವಾಗಿದ್ದು, ಆಕೆ ಮಾನಸಿಕವಾಗಿ ತೀವ್ರ ನೊಂದಿದ್ದಳು ಎಂಬುದು ಇದರಿಂದ ಬಹಿರಂಗಗೊಂಡಿದೆ.
ನಿಖಿತಾ ಡೆತ್ನೋಟ್ನಲ್ಲಿ ಏನಿದೆ?
ಉಪನ್ಯಾಸಕ ರಾಜು ಪತ್ನಿ ನಿಶಾ ಹಾಗೂ ನನ್ನ ಸಹಪಾಠಿಗಳಿಂದ ಅವಮಾನ ಆಗಿದ್ದು, ನನಗೂ ರಾಜು ಸರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ನನಗೆ ಪೋಷಕರ ಸಮಾನ. ಹೀಗಿದ್ದರೂ ನನ್ನ ಕೆಟ್ಟ ಸ್ನೇಹಿತರಿಂದ ನನ್ನ ಚಾರಿತ್ರ್ಯಕ್ಕೆ ಧಕ್ಕೆ ಆಗಿದೆ. ಸಹಪಾಠಿಗಳಾದ ಅನುಷಾ, ರಕ್ಷಾ, ಚಿನ್ಮಯಿ, ಗ್ರೀಷ್ಮಾ, ಸಾಗರ್ ಅವಮಾನ ಮಾಡಿದ್ದು, ನನ್ನ ಜೀವನದಲ್ಲಿಯೇ ಇಂತಹ ಸಹಪಾಠಿಗಳನ್ನ ನಾನು ನೋಡಿಲ್ಲ. ಡಾ.ರಾಜು ಸರ್ ಬಳಿ ಪರೀಕ್ಷೆ ಹಾಗೂ ಇನ್ನಿತರ ವಿಷಯದ ಮಾರ್ಗದರ್ಶನ ಪಡೆಯುತ್ತಿದ್ದೆ. ನಾನು ಯಾವತ್ತೂ ತಪ್ಪು ಮಾಡಿಲ್ಲ. ಆದರೆ ನನ್ನ ಸಹಪಾಠಿಗಳೇ ನನ್ನ ವಿರುದ್ದ ತಪ್ಪಾಗಿ ಬಿಂಬಿಸಿದ್ದಾರೆ. ನಾನು ದೇವರಲ್ಲಿ ಪ್ರಮಾಣ ಮಾಡಿ ಹೇಳ್ತೀನಿ, ಸರ್ ನನಗೆ ಅಣ್ಣನ ಸಮಾನರು ಎಂದು ನಿಖಿತಾ ಉಲ್ಲೇಖಿಸಿದ್ದಾಳೆ.
ಡಾ.ರಾಜು ಸರ್ ತಮ್ಮ ಪತ್ನಿಯ ಜೊತೆ ಜಗಳ ಆಡುತ್ತಿದ್ದರು ಎಂದು ಕೇಳಿದ್ದೆ. ಆದರೆ ಡಾ.ರಾಜು ಪತ್ನಿ ನಿಶಾ ನನ್ನ ಮೇಲೆಯೇ ಈಗ ಅನುಮಾನ ಪಡ್ತಿದ್ದಾರೆ. ನನಗೆ ಬೇರೆ ಯಾರ ಜೊತೆಯೂ ಸಂಬಂಧ ಇದೆ ಎಂದಿದ್ರೆ ಇಷ್ಟು ನೋವಾಗ್ತಿರಲಿಲ್ಲ. ಮದುವೆಯದಾವರ ಜೊತೆ ಸಂಬಂಧ ಕಲ್ಪಿಸ್ತಿರೋದು ತೀವ್ರ ನೋವು ಉಂಟುಮಾಡಿದೆ. ಈ ಅವಮಾನವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಡಾ.ರಾಜು ಅವರ ಪತ್ನಿ ನಿಶಾ ಹಾಗೂ ನನ್ನ ಸಹಪಾಠಿಗಳು. ನನ್ನನ್ನು ನಾನು ಸಾಬೀತು ಪಡಿಸಿಕೊಳ್ಳಲು ಈ ನಿರ್ಧಾರ ಕೈಗೊಳುತ್ತಿದ್ದೇನೆ ಎಂದು ನಿಖಿತಾ ತಿಳಿಸಿದ್ದಾಳೆ. ಅಲ್ಲದೆ ಹೆತ್ತವರ ಕ್ಷಮೆ ಕೇಳಿರುವ ಈಕೆ, ನಿನ್ನ ಜೀವನ ಚೆನ್ನಾಗಿ ನೋಡಿಕೊಳ್ಳಬೇಕು. ಯಾರನ್ನೂ ನಂಬಬೇಡ ಎಂದು ತಂಗಿ ನಿಧಿಗೂ ಕಿವಿಮಾತು ಹೇಳಿದ್ದಾಳೆ. ರಾಜು ಸರ್ ನಿಜಕ್ಕೂ ಒಳ್ಳೆಯವರು, ಅವರ ಮೇಲೆ ಯಾರೂ ಆರೋಪ ಮಾಡಬೇಡಿ. ನನ್ನ ಸಹಪಾಠಿಗಳಂತಹವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ನಿಖಿತಾ ಡೆತ್ನೋಟ್ನಲ್ಲಿ ಬರೆದಿದ್ದಾಳೆ.
ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ (Ramayana) ಸಿನಿಮಾದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಆದರೆ, ಟೀಸರ್ (Ramayana Teaser) ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ರಣಬೀರ್ ಕಪೂರ್ (Ranbir Kapoor) ಅವರ ಶ್ರೀರಾಮನ ಅವತಾರ ನೆಟ್ಟಿಗರ ವಿಮರ್ಶೆಗೆ ಗುರಿಯಾಗಿದೆ. ಅಲ್ಲದೇ, ಈ ಟೀಸರ್ನ ವಿಎಫ್ಎಕ್ಸ್ ದೃಶ್ಯಗಳು ಸಮಾಧಾನಕರವಾಗಿಲ್ಲ ಎಂದು ಜನರು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಯಾದ ಈ ಟೀಸರ್ನಲ್ಲಿ ರಣಬೀರ್ ಕಪೂರ್ ರಾಜವಂಶಸ್ಥನಾಗಿ, ವೀರ ಯೋಧನಾಗಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಕುತೂಹಲ ಮೂಡಿಸಿದೆ. ಟೀಸರ್ನಲ್ಲಿ ಯಶ್ ಅವರ ಮುಖವನ್ನು ಪೂರ್ಣವಾಗಿ ತೋರಿಸದಿದ್ದರೂ, ಅವರ ಝಲಕ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.
ಆದರೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು? ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಹೆಚ್ಚಿನ ಸಂಖ್ಯೆಯ ಜನರು ಈ ಚಿತ್ರವನ್ನು ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ‘ಇದು ಆದಿಪುರುಷ್ 2.0 ರೀತಿ ಕಾಣುತ್ತಿದೆ, ಕೇವಲ ವಿಎಫ್ಎಕ್ಸ್ ಸ್ವಲ್ಪ ಸುಧಾರಿಸಿದೆ ಅಷ್ಟೇ’ ಎಂದು ಕಾಮೆಂಟ್ ಮಾಡಿದ್ದಾರೆ.
2023ರಲ್ಲಿ ಬಿಡುಗಡೆಯಾಗಿದ್ದ ‘ಆದಿಪುರುಷ್’ ಚಿತ್ರವು ರಾಮಾಯಣವನ್ನು ತಪ್ಪಾಗಿ ಚಿತ್ರಿಸಿದೆ ಮತ್ತು ಸಂಭಾಷಣೆಗಳು ಕಳಪೆಯಾಗಿವೆ ಎಂಬ ಕಾರಣಕ್ಕೆ ಭಾರಿ ವಿರೋಧ ಎದುರಿಸಿತ್ತು. ಹನುಮಂತ ಮತ್ತು ರಾವಣನ ಪಾತ್ರಧಾರಿಗಳ ಲುಕ್ ಬಗ್ಗೆಯೂ ಜನರು ಆಕ್ರೋಶ ಹೊರಹಾಕಿದ್ದರು. ಈಗ ನಿತೇಶ್ ತಿವಾರಿ ಅವರ ‘ರಾಮಾಯಣ’ ಕೂಡ ಅದೇ ಹಾದಿ ಹಿಡಿಯುತ್ತಿದೆಯೇ ಎಂಬ ಆತಂಕ ಸಿನಿಪ್ರೇಮಿಗಳಲ್ಲಿ ಮೂಡಿದೆ.
ಸಮಂತಾ (Samantha) ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡವರು, ನಯನತಾರಾ, ಅನುಷ್ಕಾ ಶೆಟ್ಟಿ ರೀತಿ ಸಮಂತಾ ಸಹ ತೆಲುಗು, ತಮಿಳಿನ ಸ್ಟಾರ್ ನಟಿಯಾಗಿ ಮೆರೆದವರು. ನಯನತಾರಾ, ಅನುಷ್ಕಾ ಶೆಟ್ಟಿ ಏರಿದ ಎತ್ತರಕ್ಕೆ ಅವರೂ ಏರಲಿದ್ದಾರೆ ಎಂದೇ ಸಿನಿಮಾ ಪ್ರೀಯರು ನಿರೀಕ್ಷಿಸಿದ್ದರು. ಸಮಂತಾಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇತ್ತು. ಆದರೆ ಇತ್ತೀಚೆಗೆ ಯಾಕೋ ಸಮಂತಾಗೆ ಅವಕಾಶಗಳೇ ಸಿಗುತ್ತಿಲ್ಲ. ಅವರ ಪತಿಯ ಹೊರತಾಗಿ ಇನ್ಯಾರೂ ಸಹ ಸಮಂತಾ ಜೊತೆಗೆ ಕೆಲಸ ಮಾಡಲು ತಯಾರೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಲು ಕಾರಣವೇನು?
2019ರ ವರೆಗೆ ಸಮಂತಾ ಬಹಳ ಎಂದರೆ ಬಹಳ ಬ್ಯುಸಿ ನಟಿ ಆಗಿದ್ದರು. ತಮಿಳು, ತೆಲುಗಿನ ಸ್ಟಾರ್ ನಟರುಗಳಿಗೆ ಸಹ ಸಮಂತಾ ನಾಯಕಿಯಾಗಿ ಬೇಕಾಗಿತ್ತು. ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಏಕಾಂಗಿಯಾಗಿ ಸಿನಿಮಾಗಳನ್ನು ಗೆಲ್ಲಿಸಿದ್ದರು. ಆದರೆ ಕೋವಿಡ್ ಬಳಿಕ ಎಲ್ಲವೂ ಉಲ್ಟಾ ಆಯ್ತು. ಕೋವಿಡ್ ಬಳಿಕ ಸಮಂತಾ ಹಾಗೂ ನಾಗ ಚೈತನ್ಯ ಜೊತೆಗೆ ವಿಚ್ಛೇದನವಾಯ್ತು. ಆರಂಭದಲ್ಲಿ ನೆಟ್ಟಿಗರು ಸಮಂತಾಗೆ ವಿರುದ್ಧವಾಗಿದ್ದರಾದರೂ, ಬಳಿಕ ಸಮಂತಾ ಪರ ಅಭಿಪ್ರಾಯ ಸೃಷ್ಟಿಯಾಯ್ತು.
ಆದರೆ ಸಮಂತಾಗೆ ಅನಾರೋಗ್ಯ ಕಾಡಲು ಶುರುವಾದ ಬಳಿಕ ಸಮಂತಾಗೆ ನಿಧಾನಕ್ಕೆ ಅವಕಾಶಗಳು ಕಡಿಮೆ ಆಗುತ್ತಾ ಬಂದವು. ಅನಾರೋಗ್ಯದಿಂದಾಗಿ ಸಮಂತಾ ಒಪ್ಪಿಕೊಂಡಿದ್ದ ಸಿನಿಮಾ ಮತ್ತು ವೆಬ್ ಸರಣಿಗಳನ್ನು ಮುಗಿಸಲು ಬಹಳ ಸಮಯ ತೆಗೆದುಕೊಂಡರು. ಅನಾರೋಗ್ಯದಿಂದ ರಿಕವರಿ ಹೊಂದಿದ ಬಳಿಕ ಸಹ ಸಮಂತಾಗೆ ಅವಕಾಶಗಳು ಸಿಗುವುದು ಕಡಿಮೆ ಆದವು. ಇದಕ್ಕೆ ಸಮಂತಾರ ಅತಿಯಾದ ‘ಸ್ವಕಾಳಜಿ’ ಇನ್ನಿತರೆಗಳೇ ಕಾರಣ ಎನ್ನಲಾಗುತ್ತಿದೆ.
ಅನಾರೋಗ್ಯದಿಂದ ಮರಳಿದ ಬಳಿಕ ಸಮಂತಾ ಕೆಲಸದ ವಿಷಯದಲ್ಲಿ ಕಟ್ಟುನಿಯಮಗಳನ್ನು ಹೇರಲು ಆರಂಭಿಸಿದರಂತೆ. ಅಲ್ಲದೆ ಸೆಟ್ನಲ್ಲಿ ಜಿಮ್, ಡಯಟೀಷಿಯನ್, ಪ್ರತ್ಯೇಕ ಫ್ಯಾಷನ್ ಡಿಸೈನರ್ ಇನ್ನಿತರೆಗಳಿಗೆ ಬೇಡಿಕೆ ಹಾಗೂ ಚೀತ್ರೀಕರಣ ಸ್ಥಳ ಮತ್ತು ಸಮಯದ ಬಗ್ಗೆ ನಿಯಮಗಳನ್ನು ಹಾಕಲು ಶುರು ಮಾಡಿದರಂತೆ. ಇದೇ ಕಾರಣಕ್ಕೆ ಹಲವು ನಿರ್ದೇಶಕರು ಸಮಂತಾ ಜೊತೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಪುಕಾರು ತೆಲುಗು ಚಿತ್ರರಂಗದಲ್ಲಿ ಇದೆ.
2024 ರಲ್ಲಿ ಸಮಂತಾರ ಯಾವ ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಕಳೆದ ವರ್ಷ ಅಂದರೆ 2025ರಲ್ಲಿ ಸಮಂತಾ ‘ಶುಭಂ’ ಹೆಸರಿನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು ಅಲ್ಲದೆ, ಈ ಸಿನಿಮಾಕ್ಕೆ ಸಮಂತಾ ಅವರೇ ಬಂಡವಾಳ ಹೂಡಿದ್ದರು. ಪ್ರಸ್ತುತ ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಅವರ ಹಾಲಿ ಪತಿ ರಾಜ್ ನಿಧಿಮೋರು ನಿರ್ಮಾಪಕ. ಇದಾದ ಬಳಿಕ ಒಂದು ಹಿಂದಿ ವೆಬ್ ಸರಣಿಯಲ್ಲಿ ಸಮಂತಾ ನಟಿಸಲಿದ್ದು, ಅದಕ್ಕೂ ಸಹ ರಾಜ್ ನಿಧಿಮೋರು ಅವರೇ ನಿರ್ಮಾಪಕ. ಪತಿಯ ಸಿನಿಮಾ ಮತ್ತು ವೆಬ್ ಸರಣಿಯ ಹೊರತಾಗಿ ಸಮಂತಾ ಕೈಯಲ್ಲಿ ಯಾವುದೇ ಸಿನಿಮಾ ಇದೀಗ ಇಲ್ಲ.
ಕೊಡಗು, ಏಪ್ರಿಲ್ 02: ಗಲ್ಫ್ ರಾಷ್ಟ್ರದಲ್ಲಾಗುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ (Gas Shortage) ವ್ಯತ್ಯಯವಾಗಿದೆ. ಪ್ರತಿಯೊಂದು ಕ್ಷೇತ್ರವೂ ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಸೌದೆ, ಇದ್ದಿಲುಗೆ ಭಾರೀ ಬೇಡಿಕೆ ಬಂದಿದೆ. ಗ್ಯಾಸ್ ಕೊರತೆಯಿಂದಾಗಿ ಇದೀಗ ಸೌದೆ ಮತ್ತು ಇದ್ದಿಲು ಬಳಸಲಾಗುತ್ತಿದೆ. ಹಾಗಾಗಿ ಇದೀಗ ಸೀಸನ್ ಅಲ್ಲದಿದ್ದರೂ ಸೌದೆಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿದೆ.
ಗ್ಯಾಸ್ ಸಿಲಿಂಡರ್ಗಳಿಲ್ಲದೇ ಪರದಾಟ
ಇರಾನ್-ಇಸ್ರೆಲ್ ಯುದ್ಧದಿಂದಾಗಿ ಜಾಗತಿಕವಾಗಿ ಆಗಿರುವ ಅಡ್ಡಪರಿಣಾಮಗಳು ಒಂದೆರಡಲ್ಲ. ವಿಶೇಷವಾಗಿ ಅಡುಗೆ ಅನಿಲದ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಕಮರ್ಷಿಯಲ್ ಸಿಲಿಂಡರ್ಗಳಿಲ್ಲದೆ ಎಲ್ಲರೂ ಪರದಾಡುವಂತಾಗಿದೆ.
ಇದುವರೆಗೂ ಹೋಟೆಲ್ಗಳಲ್ಲಿ ಅಡುಗೆ ತಯಾರಿಸಲು ಹೊಗೆ ಮುಕ್ತ ಗ್ಯಾಸನ್ನ ಬಳಸಲಾಗಿತ್ತಿತ್ತು. ಆದರೆ ಇದೀಗ ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದಾಗಿ ಗ್ಯಾಸ್ ಬಳಸಿ ಅಡುಗೆ ಮಾಡಲಾಗುತ್ತಿಲ್ಲ. ಹಾಗಾಗಿ ಸದ್ಯ ಇದ್ದಿಲುಗಳಿಗೆ ಬೇಡಿಕೆ ಬಂದಿದೆ. ಸಾಂಪ್ರದಾಯಿಕ ಶೈಲಿಯಲ್ಲೇ ಗ್ರಿಲ್ ಚಿಕನ್, ತಂದೂರಿ ಚಿಕನ್ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಮಡಿಕೇರಿಯಲ್ಲಿ ಇದ್ದಿಲುಗಳಿಗೆ ಬೇಡಿಕೆ ಬಂದಿದೆ.
ಸೌದೆಗೆ ಬೇಡಿಕೆ: ಕೆಜಿಗೆ 8 ರೂ ಮಾರಾಟ
ಇದೇ ವೇಳೆ ಸೌದೆಗೂ ಕೂಡ ಜಿಲ್ಲೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಇದುವರೆಗೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮಾತ್ರ ಸೌದೆಗಳನ್ನ ಬಳಕೆ ಮಾಡುತ್ತಿದ್ದರು. ಆದರೆ ಇದೀಗ ಹೋಟೆಲ್, ರೆಸಾರ್ಟ್ಗಳಲ್ಲೂ ಸೌದೆ ಒಲೆಗಳನ್ನ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಸೌದೆ ಡಿಪೋಗಳು ಹಾಗೂ ಹಳೆ ಮನೆಯ ಸಾಮಾಗ್ರಿ ಮಾರಾಟ ಕೇಂದ್ರಗಳಲ್ಲೂ ಸೌದೆಗಳಿಗೆ ಬೇಡಿಕೆ ಇದೆ. ಕೆಜಿಗೆ 8 ರೂ ನಂತೆ ಮಾರಾಟ ಮಾಡಲಾಗುತ್ತಿದೆ.
ಜಿಲ್ಲೆಯ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್ಗಳ ಬಾಣಸಿಗರೆಲ್ಲರೂ ಹಳೆಯ ಸೌದೆ ಒಲೆಗಳಿಗೆ ಪರಿವರ್ತನೆಯಾಗಿದ್ದಾರೆ. ಅಷ್ಟೇ ಅಲ್ಲದೆ ಈಗ ಕೊಡಗಿನ ಕಾಫಿ ತೋಟಗಳಲ್ಲಿ ಬೇಕಾದಷ್ಟು ಸೌದೆಗಳು ಸಿಗ್ತಾ ಇರೋದು ಬೇಡಿಕೆ ತಕ್ಕಷ್ಟು ಪೂರೈಕೆ ದೊರೆಯುವಂತೆ ಮಾಡಿದೆ. ಹಾಗಾಗಿ ಸದ್ಯಕ್ಕೆ ಕೊಡಗಿನಲ್ಲಿ ಅಡುಗೆಗಂತೂ ಯಾವುದೇ ಅಡ್ಡಿ ಆತಂಕವಿಲ್ಲ.
ವಿಜಯಪುರ, (ಏಪ್ರಿಲ್ 02): ಕಾಂಗ್ರೆಸ್ನ ಎಚ್ವೈ ಮೇಟಿ ನಿಧನದಿಂದ ತರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಎರಡು ರಾಷ್ಟ್ರೀಯ ಪಕ್ಷದಿಂದ ಭರ್ಜರಿ ಪ್ರಚಾರ ನಡೆದಿದೆ. ಬೇಸಿಗೆಯ ಬಿರು ಬಿಸಿಲು ಲೆಕ್ಕಿಸಿದೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮತಬೇಟೆ ನಡೆಸಿದ್ದಾರೆ. ಇದೀಗ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬಾಗಲಕೋಟೆ ಬೈ ಎಲೆಕ್ಷನ್ ಅಖಾಡಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕಿಳಿದಿದ್ದಾರೆ. ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರ ಇದ್ದಾಗ ಹಿಂದೂಗಳ ರಕ್ಷಣೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಚಿತ್ರದುರ್ಗ/ ಚಿಕ್ಕಮಗಳೂರು, ಏಪ್ರಿಲ್ 02: ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್ ಮುಖಂಡನ ಶವ ಪತ್ತೆಯಾಗಿದೆ. ಮೃತರನ್ನು ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ‘ಕೈ’ ಮುಖಂಡ ಶಿವಲಿಂಗಪ್ಪ (50) ಎಂದು ಗುರುತಿಸಲಾಗಿದ್ದು, ಮೂರು ದಿನಗಳ ಹಿಂದೆ ಇವರು ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಸಂಬಂಧಿಕರಿಂದ ಆಗ್ರಹ ವ್ಯಕ್ತವಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರರು ಬಲಿ
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಧಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನಗವಾಡಿ ಸಮೀಪದ ಸಾಸ್ವಿಹಳ್ಳಿ- ಆನವೇರಿ ರಸ್ತೆಯಲ್ಲಿ ನಡೆದಿದೆ. ನವೀನ್ ಎನ್. ಎಂ. (33) ಮತ್ತು ಶಶಿಕುಮಾರ್ (32) ಮೃತರಾಗಿದ್ದು, ಡಿಕ್ಕಿ ರಭಸಕ್ಕೆ ನವೀನ್ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾರೆ. ಶಶಿಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ಇವರಿಬ್ಬರು ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಗಳು ಎಂಬುದು ಗೊತ್ತಾಗಿದೆ. ಸ್ವಗ್ರಾಮದಿಂದ ಕಾರ್ಯ ನಿಮಿತ್ತ ಆನವೇರಿಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತ ಮಾಡಿದ ಚಾಲಕ ವಾಹನ ಸಹಿತ ಪರಾರಿಯಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 9ನೇ ಮೈಲಿಕಲ್ ಗ್ರಾಮದಲ್ಲಿ ಕಾಲಿಗೆ ಹಾವು ಕಡಿದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಛತ್ತೀಸ್ಗಢ ಮೂಲದ ಕಾರ್ಮಿಕ ಮಹಿಳೆ ಜಾಲ್ ಬಾಯಿ ಸಿಧಾರ್(42) ಮರತರಾಗಿದ್ದು, ಇವರು ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಮಲಗಿದ್ದ ವೇಳೆ ಕಾರ್ಮಿಕ ಮಹಿಳೆ ಜಾಲ್ ಬಾಯಿಗೆ ಹಾವು ಕಡಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.