All posts by nagaraj11081993

RailTel Recruitment 2026: ಕೇಂದ್ರ ಸರ್ಕಾರಿ ಸ್ವಾಮ್ಯದ ರೈಲ್‌ಟೆಲ್‌ನಲ್ಲಿ ನೇಮಕಾತಿ; ಹಿಂದಿ ಅನುವಾದಕ ಹುದ್ದೆಗೆ ಅರ್ಜಿ ಆಹ್ವಾನ

RailTel Recruitment 2026: ಕೇಂದ್ರ ಸರ್ಕಾರಿ ಸ್ವಾಮ್ಯದ ರೈಲ್‌ಟೆಲ್‌ನಲ್ಲಿ ನೇಮಕಾತಿ; ಹಿಂದಿ ಅನುವಾದಕ ಹುದ್ದೆಗೆ ಅರ್ಜಿ ಆಹ್ವಾನ

ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (RailTel) 2026ನೇ ಸಾಲಿನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಜೂನಿಯರ್ ಹಿಂದಿ ಅನುವಾದಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳು ಹೈದರಾಬಾದ್ (ತೆಲಂಗಾಣ) ಅಥವಾ ಮುಂಬೈ (ಮಹಾರಾಷ್ಟ್ರ) ನಗರಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯು ರೈಲ್‌ಟೆಲ್ ಸಂಸ್ಥೆಯ ಅಧಿಕೃತ ಮಾನದಂಡಗಳ ಪ್ರಕಾರ ಇರಬೇಕಾಗುತ್ತದೆ. ವಯೋಮಿತಿಯ ವಿಷಯಕ್ಕೆ ಬಂದರೆ, ಏಪ್ರಿಲ್ 11, 2026ರ ಅನ್ವಯ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು. ಸರ್ಕಾರದ ನಿಯಮಾನುಸಾರ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ವೇತನ ಶ್ರೇಣಿಯು ಸಂಸ್ಥೆಯ ಅಧಿಕೃತ ನಿಯಮಗಳ ಅನ್ವಯ ನಿಗದಿಯಾಗಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲು ರೈಲ್‌ಟೆಲ್ ಅಧಿಕೃತ ವೆಬ್‌ಸೈಟ್‌ನಿಂದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಶೈಕ್ಷಣಿಕ ದಾಖಲೆಗಳು, ವಯಸ್ಸಿನ ಪುರಾವೆ, ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರದಂತಹ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಲಗತ್ತಿಸಬೇಕು.

ಇದನ್ನೂ ಓದಿ: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ: 3,806 ಟೆರಿಟೋರಿಯಲ್ ಆರ್ಮಿ ಹುದ್ದೆಗೆ ನೇಮಕಾತಿ

ವಿಳಾಸ ಮತ್ತು ಪ್ರಮುಖ ದಿನಾಂಕ:

ಪೂರ್ಣಗೊಂಡ ಅರ್ಜಿ ನಮೂನೆಯನ್ನು ‘ಕಾರ್ಪೊರೇಟ್ ಕಚೇರಿ/ಆರ್‌ಸಿಐಎಲ್, ಪೂರ್ವ ಕಿದ್ವಾಯಿ ನಗರ, ನವದೆಹಲಿ’ ಎಂಬ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು. ಅರ್ಜಿಗಳು ತಲುಪಲು ಏಪ್ರಿಲ್ 11 ಕೊನೆಯ ದಿನಾಂಕವಾಗಿದೆ. ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ತಮ್ಮ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ; ಹಲವು ಉದ್ಯಮಗಳಿಗೆ ಅನುಕೂಲ

ನವದೆಹಲಿ, ಏಪ್ರಿಲ್ 2: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ ತಪ್ಪದ ಹಿನ್ನೆಲೆಯಲ್ಲಿ ತೈಲ, ಅನಿಲ ಹಾಗೂ ಪೆಟ್ರೋಕೆಮಿಕಲ್ ಪೂರೈಕೆ ವ್ಯವಸ್ಥೆಕ್ಕೆ ಧಕ್ಕೆಯಾಗಿದೆ. ಪೆಟ್ರೋಕೆಮಿಕಲ್ (petrochemicals) ಆಮದು ವೆಚ್ಚ ಬಹಳ ಹೆಚ್ಚಾಗುತ್ತಿದ್ದು, ಇದರ ಮೇಲೆ ಅವಲಂಬಿತವಾಗಿರುವ ಉದ್ಯಮಗಳಿಗೆ ರಿಲೀಫ್ ನೀಡುವ ಸಲುವಾಗಿ ಸರ್ಕಾರ ಆಮದು ಸುಂಕ ವಿನಾಯಿತಿ ಕ್ರಮ ತೆಗೆದುಕೊಳ್ಳುತ್ತಿದೆ. ಇಂದು ಗುರುವಾರ (ಏ. 2) ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಕೆಲ ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಪೂರ್ಣ ಆಮದು ಸುಂಕ (Customs Duty) ವಿನಾಯಿತಿ ಕೊಡಲಿದೆ.

2026ರ ಜೂನ್ 30ರವರೆಗೂ ಆಯ್ದೆ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಆಮದು ಸುಂಕ ಇರುವುದಿಲ್ಲ. ಈ ಕ್ರಮದಿಂದ ದೇಶೀಯ ಉತ್ಪಾದಕರಿಗೆ ಉತ್ಪಾದನಾ ವೆಚ್ಚ ಏರಿಕೆಯಾಗುವುದು ತಪ್ಪುವ ನಿರೀಕ್ಷೆ ಇದೆ.

ಇದನ್ನೂ ಓದಿ: ಟ್ರಂಪ್ ಹಾಕಿದ ಟ್ಯಾರಿಫ್​ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?

ಪೆಟ್ರೋಕೆಮಿಕಲ್ ಉತ್ಪನ್ನಗಳು ಅನೇಕ ಮ್ಯಾನುಫ್ಯಾಕ್ಚರಿಂಗ್ ಉದ್ಯಮಗಳಿಗೆ ಕಚ್ಛಾ ಸಾಮಗ್ರಿಗಳಾಗಿ ಬಳಕೆಯಾಗುತ್ತವೆ. ಭಾರತದಲ್ಲಿ ಸಾಕಷ್ಟು ರಿಫೈನರಿಗಳು ಇವೆಯಾದರೂ, ಅದಕ್ಕೆ ಬೇಕಾದ ಹೆಚ್ಚಿನ ಪೆಟ್ರೋಕೆಮಿಕಲ್ ಸ್ಟಾಕ್​ಗಳು ಗಲ್ಫ್ ರಾಷ್ಟ್ರಗಳಿಂದ ಪೂರೈಕೆಯಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾದ ಶೇ. 45ರಷ್ಟು ಸರಕುಗಳು ಆಮದಾಗುತ್ತವೆ. ಇವುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಬೆಲೆಗಳೂ ಏರಿವೆ. ಈ ಬೆಲೆ ಏರಿಕೆ ಬಿಸಿ ಕಡಿಮೆ ಮಾಡಲು ಸರ್ಕಾರವು ಕಸ್ಟಮ್ಸ್ ಡ್ಯೂಟಿಯನ್ನು ಹಿಂಪಡೆದುಕೊಂಡಿದೆ.

ಪೆಟ್ರೋಕೆಮಿಕಲ್ ಉತ್ಪನ್ನಗಳಾದ ಮೆಥನಾಲ್, ಅಸಿಟಿಕ್ ಆ್ಯಸಿಟ್, ಮಾನೊಎಥಿಲಿನ್ ಕ್ಲೈಕೋಲ್ (ಎಂಇಜಿ), ಪ್ಯೂರಿಫೈಡ್ ಟೆರೆಫ್ತಾಲಿಕ್ ಆ್ಯಸಿಡ್ (ಪಿಟಿಎ), ಪಾಲಿಥೀನ್, ಪಾಲಿಪ್ರೊಪಿಲೀನ್ ಮತ್ತು ಪಿವಿಸಿಗಳಿಗೆ ಆಮದು ಸುಂಕದಿಂದ ವಿನಾಯಿತಿ ಕೊಡಲಾಗಿದೆ.

ಇದನ್ನೂ ಓದಿ: ಜೆಟ್ ಇಂಧನ: ವಿದೇಶೀ ಏರ್ಲೈನ್ಸ್​ಗೆ ಡಬಲ್ ಬೆಲೆ ಏರಿಕೆ; ದೇಶೀಯ ಫ್ಲೈಟ್​ಗಳಿಗೆ ಶೇ. 8.5 ಏರಿಕೆ

ಸರ್ಕಾರದ ಈ ಕ್ರಮದಿಂದ ಹಲವು ಉದ್ಯಮಗಳಿಗೆ ಅನುಕೂಲವಾಗಲಿದೆ. ಪ್ಲಾಸ್ಟಿಕ್ಸ್, ಪ್ಯಾಕೇಜಿಂಗ್, ಟೆಕ್ಸ್​ಟೈಲ್ಸ್, ಫಾರ್ಮಾ, ಕೆಮಿಕಲ್ಸ್, ಆಟೊಮೋಟಿವ್ ಕಾಂಪೊನೆಂಟ್ ಹಾಗೂ ಇನ್ನೂ ಹಲವು ಮ್ಯಾನುಫ್ಯಾಕ್ಚರಿಂಗ್ ಉದ್ದಿಮೆಗಳಿಗೆ ಲಾಭವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಂಗಡಿಯಲ್ಲಿ ಸಿಗುವ 5 ರೂ. ಬೋಟಿಗೆ ಬೆಂಗಳೂರು ಪಬ್​​ನಲ್ಲಿ 150 ರೂ. ಪಾವತಿಸಿದ ಯುವಕ: ಇದು ದೋಚುವ ಒಂದು ಕಲೆ

ಬೆಂಗಳೂರು, ಏ.2: ಬೆಂಗಳೂರಿನಲ್ಲಿ ಅಣಬೆಯಂತೆ ಅಲ್ಲಲ್ಲಿ ಪಬ್​​​ಗಳು ಇದೆ. ಅದರಲ್ಲೂ ಕೆಲವೊಂದು ಪಬ್​​​​ ತುಂಬಾ ದುಬಾರಿಯಾಗಿರುತ್ತದೆ. ಇದೀಗ ಈ ದುಬಾರಿ ಪಬ್​​ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಳ್ಳಲಾಗಿದೆ. ಜನಪ್ರಿಯ ಪಬ್‌ಗೆ ಭೇಟಿ ನೀಡಿದಾಗ, ಮೆನುವಿನಲ್ಲಿ ಹೆಚ್ಚು ವಿವರವಾದ ಖಾದ್ಯದ ಬದಲಿಗೆ ಫ್ರೈಯಮ್‌ಗಳನ್ನು ನೀಡಲಾಗಿದೆ ಎಂದು ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ. ಇದೀಗ ಇಂದಿರಾನಗರದ ಪಬ್​​ ಆಗಿರುವ ಅನುಭವದ ಬಗ್ಗೆ ಅರುಣ್‌ರಾಜ್ ಪತ್ತಾರ್ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ಮೆನು ಮತ್ತು ಸ್ವೀಕರಿಸಿದ ಖಾದ್ಯದ ಚಿತ್ರವನ್ನು ಹಂಚಿಕೊಂಡ ಪತ್ತಾರ್, “ಇದನ್ನು ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್ ಎಂದು ಕರೆಯಲಾಗುತ್ತಿತ್ತು. ನಾನು ಇದನ್ನು ಆರ್ಡರ್ ಮಾಡಿದಾಗ ಅವರು ನನಗೆ ತಂದಿದ್ದು ಇದನ್ನೇ. ಪ್ರಪಂಚದಲ್ಲಿ ಹಾಗೂ ನಮ್ಮ ರಕ್ತ ಸಂಬಂಧದಲ್ಲಿ ಇದಕ್ಕೆ 150 ಪಾವತಿಸಿ ಮೊದಲಿಗ ಎಂದು ಇದರಲ್ಲಿ ಬರೆದುಕೊಂಡಿದ್ದಾರೆ. ಎಕ್ಸ್​​ನಲ್ಲಿ ಎರಡು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ. ಒಂದು ಪಬ್​​ ಮೆನು ಬಗ್ಗೆ ಇನ್ನೊಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​:

ಇವರ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ, ಈ ಬಗ್ಗೆ ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದುಬಾರಿ ತಿನಿಸುಗಳಲ್ಲಿ ಬೆಲೆ ನಿಗದಿ ಬಗ್ಗೆ ಟೀಕೆಯನ್ನು ಮಾಡಿದ್ದಾರೆ. ಅಬ್ಬಾ ನಾನು ಒಬ್ಬನೇ ಇಂತಹ ವಂಚನೆಗೆ ಒಳಾಗಾಗಿಲ್ಲ ಎಂದು ಒಬ್ಬರು ಸಂತೋಷದಿಂದ ಹೇಳಿದ್ದಾರೆ. ಇದನ್ನು ಉತ್ತಮ ಮಾರ್ಕೆಟಿಂಗ್‌ನೊಂದಿಗೆ ಸರಳವಾದ ವಸ್ತುಗಳನ್ನು ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಎಂದು ಹೇಳುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಕೊನೆಗೂ ನನ್ನಂತೆಯೇ ವಂಚನೆಗೊಳಗಾದ ವ್ಯಕ್ತಿಯನ್ನು ನೋಡಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಕೆಲವು ನೆಟ್ಟಿಗರು ಬೆಂಗಳೂರಿನ ಊಟ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ಬೆಂಗಳೂರು ಯಾವುದೇ ಬೆಲೆಗೆ ಏನು ಬೇಕಾದರೂ ಮಾರಾಟ ಮಾಡಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಸಾಮಾನ್ಯ ಭಾಷೆಯಲ್ಲು ಬೋಟಿ ಎಂದು ಕರೆಯುತ್ತಾರೆ. ಇದು ನಮ್ಮ ಮನೆದಲ್ಲಿರುವ ಅಂಗಡಿಯಲ್ಲಿ 5 ರೂ.ಗೆ ಸಿಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕರ್ನಾಟಕ ಗಡಿಯ ಪಾಲಾರ್ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಪ್ರತ್ಯಕ್ಷವಾದ ಕಾಡಾನೆ!

ಚಾಮರಾಜನಗರ, ಏಪ್ರಿಲ್​​ 02: ಜಿಲ್ಲೆಯ ಪಾಲಾರ್ ಚೆಕ್ ಪೋಸ್ಟ್ ಬಳಿ ಇತ್ತೀಚೆಗೆ ರಾತ್ರಿ ವೇಳೆ ಕಾಡಾನೆ ಓಡಾಟ ಕಂಡುಬಂದಿದೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಪಾಲಾರ್ ಚೆಕ್ ಪೋಸ್ಟ್ ಪ್ರದೇಶದಲ್ಲಿ ಆನೆಯೊಂದು ಸಂಚರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಗಡಿ ಪ್ರದೇಶಗಳಲ್ಲಿ ಇಂತಹ ವನ್ಯಜೀವಿಗಳ ಸಂಚಾರವು ಸಾಮಾನ್ಯವಾಗಿದ್ದರೂ, ಚೆಕ್ ಪೋಸ್ಟ್ ಬಳಿ ಆನೆಯ ಓಡಾಟವು ಜನರಲ್ಲಿ ಅಚ್ಚರಿ ಮೂಡಿಸಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಹೈಕೋರ್ಟ್​ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ

ಒಡಿಶಾ, ಏಪ್ರಿಲ್ 02: ಒಡಿಶಾದ ಹೈಕೋರ್ಟ್​ ಎದುರು ನಿಲ್ಲಿಸಿದ್ದ ವಾಹನಗಳಿಗೆ ಮಹಿಳೆಯೊಬ್ಬಳು ಬೆಂಕಿ ಹಚ್ಚಿರುವ ವಿಡಿಯೋ ವೈರಲ್ ಆಗಿದೆ. ಒಡಿಶಾದ ಕಟಕ್‌ನಲ್ಲಿರುವ ಒರಿಸ್ಸಾ ಹೈಕೋರ್ಟ್ ಬಳಿ ಈ ಘಟನೆ ನಡೆದಿದೆ. ಪ್ರಧಾನಿ ಮೋದಿಯವರ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಮಿನಾತಿ ಸಾಹು ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಬಳಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಮೊದಲು ಎರಡು ಬೈಕ್​ಗಳಿಗೆ ತಗುಲಿದ್ದು ಬೆಂಕಿ ನಂತರ ಕಾರಿಗೂ ಆವರಿಸಿತ್ತು.ಆಕೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರಾವಳಿ ಜನತೆಗೆ ಸಿಹಿ ಸುದ್ದಿ: ಏಪ್ರಿಲ್ 8 ರಿಂದ ಕುವೈತ್-ಮಂಗಳೂರು ನಡುವೆ ವಿಮಾನಯಾನ ಆರಂಭ, ಇಲ್ಲಿದೆ ವೇಳಾಪಟ್ಟಿ

ಮಂಗಳೂರು, ಏಪ್ರಿಲ್ 2: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್‌ವೇಸ್ (Jazeera Airways) ಭರ್ಜರಿ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು (Mangalore) ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನಯಾನ ಸೇವೆ ಆರಂಭವಾಗಲಿದೆ.

ಭಾರತದ ನಾಲ್ಕು ನಗರಗಳಿಗೂ ಹೊಸ ವಿಮಾನಯಾನ ಸಂಪರ್ಕ

ಜಜೀರಾ ಏರ್‌ವೇಸ್ ಭಾರತದ ನಾಲ್ಕು ಪ್ರಮುಖ ನಗರಗಳಾದ ಮಂಗಳೂರು, ಕೋಝಿಕ್ಕೋಡ್ (ಕ್ಯಾಲಿಕಟ್), ತಿರುಚಿರಾಪಳ್ಳಿ ಮತ್ತು ಕಣ್ಣೂರಿಗೆ ದಮ್ಮಮ್ ವಿಮಾನ ನಿಲ್ದಾಣದ ಮೂಲಕ ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಮಂಗಳೂರಿಗೆ ಏಪ್ರಿಲ್ 9ರಿಂದ ಪ್ರತಿ ಸೋಮವಾರ ಮತ್ತು ಗುರುವಾರ ವಿಮಾನಗಳು ಸಂಚರಿಸಲಿವೆ.

ಮಂಗಳೂರು ಕುವೈತ್ ವಿಮಾನ ಸಂಚಾರ ವೇಳಾಪಟ್ಟಿ

ವಿಮಾನ ಜೆ9 3417 ಕುವೈತ್‌ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 8:40ಕ್ಕೆ ಹೊರಟು, ದಮ್ಮಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರು ತಲುಪಲಿದೆ. ಹಿಂದಿರುಗುವ ವಿಮಾನ ಜೆ9 3418 ಮಂಗಳೂರಿನಿಂದ ಸಂಜೆ 4:55ಕ್ಕೆ ಹೊರಟು, ಸ್ಥಳೀಯ ಕಾಲಮಾನ ರಾತ್ರಿ 7:40ಕ್ಕೆ ಕುವೈತ್ ತಲುಪಲಿದೆ. ಇಡೀ ಪ್ರಯಾಣದ ಅವಧಿ ಸುಮಾರು 6 ಗಂಟೆಗಳು ಇಲಿದೆ.

12 ನಗರಗಳಿಗೆ ವಿಮಾನಯಾನ ವಿಸ್ತರಣೆ

ಕೋವಿಡ್ ಸಮಯದಲ್ಲಿ ಮಂಗಳೂರಿಗೆ ವಿಶೇಷ ವಿಮಾನಗಳ ಸೇವೆ ಒದಗಿಸಿದ್ದ ಜಜೀರಾ ಏರ್‌ವೇಸ್, ಈಗ ಮಧ್ಯಪ್ರಾಚ್ಯದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಸೇವೆ ಪುನರಾರಂಭಿಸಲು ನಿರ್ಧರಿಸಿದೆ. ಈ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್‌ವೇಸ್‌ನ ಜಾಲವು ಒಟ್ಟು 12 ನಗರಗಳಿಗೆ ವಿಸ್ತರಿಸಿದಂತಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಂಗೆ ಈಗಾಗಲೇ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುತ್ತಿದೆ.

ಇದನ್ನೂ ಓದಿ: ಬಂಟ್ವಾಳ: ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ, ಮೈಜುಂ ಎನ್ನಿಸೋ ವಿಡಿಯೋ ವೈರಲ್

ದಕ್ಷಿಣ ಭಾರತದ ಪ್ರಯಾಣಿಕರಿಗೆ ತಮ್ಮ ತವರು ನಗರಗಳಿಗೆ ಹತ್ತಿರವಾಗಲು ಈ ವಿಮಾನಯಾನ ಸೇವೆ ವಿಸ್ತರಣೆ ಸಹಕಾರಿಯಾಗಲಿದೆ ಎಂದು ಜಜೀರಾ ಏರ್‌ವೇಸ್ ಸಿಇಒ ಭರತನ್ ಪಶುಪತಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ಚೈನ್​ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಭಾನುಕ ರಾಜಪಕ್ಸೆ ಅವರು ನಟಿ ಹರ್ಷಿ ರಸಂಗ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ರಾಜಪಕ್ಸೆ ನಟಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಒಂದು ಚಿನ್ನದ ಸರ ಎಂಬುದು ವಿಶೇಷ.

ಏನಿದು ಪ್ರಕರಣ?

ಭಾನುಕ ರಾಜಪಕ್ಸೆ ಹಾಗೂ ನಟಿ ಹರ್ಷಿ ರಸಂಗ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು. ಆ ಸಮಯದಲ್ಲಿ ರಾಜಪಕ್ಸೆ ಅವರು ಚಿನ್ನದ ಸರ ಮತ್ತು ಪೆಂಡೆಂಟ್ ಅನ್ನು ಹರ್ಷಿಗೆ ನೀಡಿದ್ದರು ಎನ್ನಲಾಗಿದೆ.

ಆದರೆ ಇವರಿಬ್ಬರ ಬ್ರೇಕ್-ಅಪ್ ಆದ ನಂತರ, ರಾಜಪಕ್ಸೆ ಅವರು ತಮ್ಮ ಆಭರಣವನ್ನು ಮರಳಿ ಕೇಳಿದ್ದಾರೆ. ಈ ವೇಳೆ ನಟಿ ಚೈನ್ ಹಿಂತಿರುಗಿಸಿರಲಿಲ್ಲ. ಆ ಬಳಿಕ ಆಭರಣವನ್ನು ಹರ್ಷಿ ರಸಂಗ ಅಡವಿಟ್ಟಿರುವುದು ಗೊತ್ತಾಗಿದೆ.

ಭಾನುಕ ರಾಜಪಕ್ಸೆ ಅವರ ಪ್ರಕಾರ, ನಟಿ ಹರ್ಷಿ ರಸಂಗ ಅವರು ತಮ್ಮ ಅನುಮತಿಯಿಲ್ಲದೆ ಈ ಆಭರಣವನ್ನು ಅಡವಿಟ್ಟಿದ್ದಾರೆ. ಆದರೆ ನಟಿ ಹರ್ಷಿ, ಆ ಸರವನ್ನು ರಾಜಪಕ್ಸೆ ತಮಗೆ ಉಡುಗೊರೆಯಾಗಿ ನೀಡಿದ್ದರು ಎಂದು ವಾದಿಸುತ್ತಿದ್ದಾರೆ.

ನಟಿಯ ಬಂಧನ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ನಂತರ, ಹರ್ಷಿ ರಸಂಗ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಮಾರ್ಚ್ 29, 2026 ರಂದು ಕಡುವೇಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಬಂಧನದ ಬಳಿಕ ನ್ಯಾಯಾಲಯದಲ್ಲಿ “ಆಭರಣವನ್ನು ಮರಳಿ ಬಿಡಿಸಿಕೊಳ್ಳಬಹುದು” ಎಂದು ವಾದಿಸಿದ್ದ ಹರ್ಷಿ, ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ವ್ಯತಿರಿಕ್ತವಾದ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಅಲ್ಲದೆ ಭಾನುಕಾ ರಾಜಪಕ್ಸೆಯನ್ನು ಗುರಿಯಾಗಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಆಕ್ರೋಶಗೊಂಡ ರಾಜಪಕ್ಸೆ ಏಪ್ರಿಲ್ 1, 2026 ರಂದು ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸಾಹಿಬ್​ಝಾದ ಫರ್ಹಾನ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುವಾದ ಅಥವಾ ಅಡವಿಡಲಾದ ಆಭರಣವನ್ನು ಪತ್ತೆಹಚ್ಚಲು ತಲಂಗಮ ಪೊಲೀಸರಿಗೆ ಸೂಚನೆ ನೀಡಲಾಗಿದೆ.  ಅಲ್ಲದೆ ಹರ್ಷಿ ರಸಂಗ ವಿರುದ್ಧದ ‘ನಂಬಿಕೆ ದ್ರೋಹ’ದ ಪ್ರಕರಣದ ಮುಂದಿನ ವಿಚಾರಣೆಯು ಏಪ್ರಿಲ್ 22, 2026 ರಂದು ನಡೆಯಲಿದೆ.

ಐಪಿಎಲ್​ನಲ್ಲಿಲ್ಲ ಭಾನುಕ:

ಶ್ರೀಲಂಕಾದ ಸ್ಫೋಟಕ ದಾಂಡಿಗ ಭಾನುಕ ರಾಜಪಕ್ಸೆ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಂಡ ಆಟಗಾರ. ಪಂಜಾಬ್ ಕಿಂಗ್ಸ್ ಪರ 13 ಪಂದ್ಯಗಳನ್ನಾಡಿದ್ದ ಎಡಗೈ ದಾಂಡಿಗ ಈ ಬಾರಿಯ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಲಂಕಾ ದಾಂಡಿಗನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

 

Source link

ತೆಲುಗು ನಟರಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯ ಮಾಡಿ: ವಿವಾದ ಎಬ್ಬಿಸಿದ ಶಾಸಕನ ಹೇಳಿಕೆ

ಚಿತ್ರರಂಗದವರು (Movie Industry) ಎಂದೊಡನೆ ಪಾರ್ಟಿ ಮಾಡುವವರು, ಐಶಾರಾಮಿ, ಸ್ವೇಚ್ಛೆಯ ಜೀವನ ನಡೆಸುವವರ ಎಂಬ ಕಲ್ಪನೆ ಹಲವರಿಗಿದೆ. ಅದರಲ್ಲೂ ಡ್ರಗ್ಸ್ ಜೊತೆಗೆ ಚಿತ್ರರಂಗವನ್ನು ಸದಾ ಲಿಂಕ್ ಮಾಡಲಾಗುತ್ತದೆ. ಇದು ಒಂದು ಹಂತಕ್ಕೆ ನಿಜವಾದರೂ ಎಲ್ಲರೂ ಹೀಗೆಯೇ ಇರುತ್ತಾರೆ ಎಂದೇನೂ ಇಲ್ಲ. ಇದೀಗ ತೆಲಂಗಾಣದ ಶಾಸಕನೋರ್ವ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದ ಎಬ್ಬಿಸಿದೆ. ಶಾಸಕನ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತೆಲಂಗಾಣದ ಕಾಂಗ್ರೆಸ್ ಶಾಸಕ ಅನಿರುದ್ಧ್ ರೆಡ್ಡಿ ಇತ್ತೀಚೆಗೆ ಮಾತನಾಡಿ, ‘ತೆಲುಗು ಚಿತ್ರರಂಗದ ಎಲ್ಲ ಪ್ರಮುಖ ಸ್ಟಾರ್ ನಟರುಗಳು ಅವರ ಸಿನಿಮಾ ಬಿಡುಗಡೆ ಮಾಡುವ ಮುಂಚೆ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕು’ ಎಂದಿದ್ದರು. ಆ ಮೂಲಕ ಸ್ಟಾರ್ ನಟರನ್ನು ಡ್ರಗ್ಸ್ ವ್ಯಸನಿಗಳು ಎಂಬರ್ಥದ ಮಾತುಗಳನ್ನು ಆಡಿದ್ದರು. ಅನಿರುದ್ಧ್ ರೆಡ್ಡಿ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶವನ್ನು ನಟರ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದನ್ನು ಅನಿರುದ್ಧ್ ರೆಡ್ಡಿಗೆ ನೆನಪಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾ ಅಧ್ಯಕ್ಷ ಮಂಚು ವಿಷ್ಣು, ‘ನಟರಿಗೆ ಇಂತಹ ನಿಯಮಗಳನ್ನು ಜಾರಿಗೆ ತರುವುದಾದರೆ, ರಾಜಕಾರಣಿಗಳಿಗೂ ಕೂಡ ಚುನಾವಣೆಗೂ ಮುನ್ನ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಬೇಕು’ ಎಂದಿದ್ದಾರೆ. ಇದೇ ವಿಷಯವಾಗಿ ನಟ ರಾಹುಲ್ ರಾಮಕೃಷ್ಣ ಕೂಡ ಪ್ರತಿಕ್ರಿಯಿಸಿದ್ದು, ‘ನಾನು ಡ್ರಗ್ ಟೆಸ್ಟ್‌ಗೆ ಸಿದ್ಧನಿದ್ದೇನೆ, ಆದರೆ ರಾಜಕಾರಣಿಗಳು ನಿಯಮಿತವಾಗಿ ಲೈ ಡಿಟೆಕ್ಟರ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಗಾಗಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್​​ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ

ಇತ್ತೀಚೆಗಷ್ಟೆ ರೋಹಿತ್ ರೆಡ್ಡಿಯ ಫಾರ್ಮ್​​ ಹೌಸ್​​ ಮೇಲೆ ನಡೆದ ದಾಳಿಯಲ್ಲಿ ಕೆಲ ರಾಜಕಾರಣಿಗಳು ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು. ಅದರಲ್ಲಿ ಶಾಸಕರು ಮತ್ತು ಸಂಸದರು ಸಹ ಇದ್ದರು. ಆದರೆ ಈಗ ಶಾಸಕರೊಬ್ಬರು ಸಿನಿಮಾ ರಂಗದವರು ಡ್ರಗ್ಸ್ ವ್ಯಸನಿಗಳು ಎಂದಿರುವುದು ಸಿನಿಮಾ ರಂಗದವರಿಗೆ ಸಿಟ್ಟು ತರಿಸಿದೆ. ಅವರ ಅಭಿಮಾನಿಗಳಿಗೂ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಸುಪ್ರೀಂ ಸೂಚನೆ

ಕೋಲ್ಕತ್ತಾ, ಏಪ್ರಿಲ್ 02: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗಾಗಿ ನಿಯೋಜಿಸಲಾಗಿರುವ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಒಡ್ಡಿದ ಬೆದರಿಕೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಅವರ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗಿರುವ ನ್ಯಾಯಾಂಗ ಅಧಿಕಾರಿಗಳನ್ನು ಪ್ರಶ್ನಿಸಿ ಏಪ್ರಿಲ್1ರ ಸಂಜೆ ಮಾಲ್ಡಾ ಜಿಲ್ಲೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ತೊಡಗಿರುವ ಮೂವರು ಮಹಿಳಾ ಅಧಿಕಾರಿಗಳು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಕಚೇರಿಯೊಳಗೆ ಬಂಧಿಸಲಾಯಿತು, ಏಕೆಂದರೆ ಪ್ರತಿಭಟನಾಕಾರರು ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ನ್ಯಾಯಾಲಯ ಆದೇಶಿಸಿತು. ಮಧ್ಯರಾತ್ರಿಯ ನಂತರವೇ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಹೊರಡುವಾಗ ಕಲ್ಲುಗಳು ಮತ್ತು ಕೋಲುಗಳಿಂದ ಹಲ್ಲೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ , ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪಿನ್ ಪಂಚೋಲಿ ಅವರಿದ್ದ ಪೀಠವು , ಪಶ್ಚಿಮ ಬಂಗಾಳ ಸರ್ಕಾರ ಮತ್ತು ಅದರ ಅಧಿಕಾರಿಗಳ ಕರ್ತವ್ಯ ಲೋಪವಾಗಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಎಲ್ಲರೂ ರಾಜಕೀಯ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ ಎಂದು ನ್ಯಾಯಾಲಯವು ಟೀಕಿಸಿದೆ.

ಮತ್ತಷ್ಟು ಓದಿ: SIR in Karnataka: ಕರ್ನಾಟಕ ಸೇರಿ 23 ರಾಜ್ಯಗಳಲ್ಲಿ ಏಪ್ರಿಲ್​ನಿಂದ ಎಸ್​ಐಆರ್​ ಆರಂಭ ಸಾಧ್ಯತೆ

ಇದು ಅತ್ಯಂತ ಧ್ರುವೀಕೃತ ರಾಜ್ಯ ಎಂದು ಸಿಜೆಐ ಕಾಂತ್ ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರಿಗೆ ತಿಳಿಸಿದರು .ಈ ಘಟನೆಯು ನ್ಯಾಯಾಂಗ ಅಧಿಕಾರಿಗಳನ್ನು ದೂಷಿಸಲು ಮಾತ್ರವಲ್ಲದೆ ಈ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸಲು ಮಾಡಿದ ಲಜ್ಜೆಗೆಟ್ಟ ಪ್ರಯತ್ನವಾಗಿದೆ.

ನ್ಯಾಯಾಂಗ ಅಧಿಕಾರಿಗಳ ಮನಸ್ಸಿನ ಮೇಲೆ ಮಾನಸಿಕ ದಾಳಿಯನ್ನು ಉಂಟುಮಾಡಲು ನಾವು ಯಾರೂ ಮಧ್ಯಪ್ರವೇಶಿಸಿ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಇದು ಪಶ್ಚಿಮ ಬಂಗಾಳ ಸರ್ಕಾರದ ಕರ್ತವ್ಯ ನಿರ್ಲಕ್ಷ್ಯವೂ ಆಗಿದೆ ಮತ್ತು ಮಾಹಿತಿ ನೀಡಿದ ನಂತರವೂ ಅಧಿಕಾರಿಗಳು ಅಧಿಕಾರಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಾಗದಿರಲು ಅಧಿಕಾರಿಗಳು ಕಾರಣಗಳನ್ನು ಒದಗಿಸಬೇಕಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪ್ರಕಾರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಲಿಲ್ಲ ಮತ್ತು ನ್ಯಾಯಮೂರ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಕಾರ್ಯದರ್ಶಿಗೆ ಕರೆ ಮಾಡಬೇಕಾಯಿತು ಎಂದು ಅದು ಹೇಳಿದೆ.

ಕೊನೆಗೆ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನಿವಾಸವನ್ನು ತಲುಪಿದ್ದರು. ತಮ್ಮ ಕುಟುಂಬಕ್ಕೆ ಬೆದರಿಕೆಯ ಬಗ್ಗೆ ಯಾವುದೇ ಅನುಮಾನವಿರುವ ನ್ಯಾಯಾಂಗ ಅಧಿಕಾರಿಯ ನಿವಾಸದ ಮೇಲೆ ಚುನಾವಣಾ ಆಯೋಗವು ಪಡೆಗಳನ್ನು ನಿಯೋಜಿಸಬೇಕು.ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗಿರುವ ಕಾರ್ಯದ ಸುರಕ್ಷಿತ ಕಾರ್ಯನಿರ್ವಹಣೆಗಾಗಿ ಇಸಿಐ ಮತ್ತು ರಾಜ್ಯ ಸರ್ಕಾರವು ಎಲ್ಲಾ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮದುವೆ, ಆನ್​​ಲೈನ್​​ ಟ್ರೇಡಿಂಗ್​​ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್​​ನಿಂದ ದೂರು ದಾಖಲು

ಬೆಂಗಳೂರು, ಏಪ್ರಿಲ್​​ 02: ಆನ್​​ ಲೈನ್​​ ಹೂಡಿಕೆ ಹೆಸರಲ್ಲಿ ನಡೆಯುವ ವಂಚನೆ ಪ್ರಕರಣಗಳು ಇನ್ನೊಂದು ಹಂತ ತಲುಪಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವಳು ಸ್ವಾಫ್ಟ್‌ವೇರ್ ಎಂಜಿನಿಯರ್​​ ಓರ್ವನಿಗೆ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ನ್ಯೂ ತಿಪ್ಪಸಂದ್ರದಲ್ಲಿ ನಡೆದಿದೆ. ಪ್ರೀತಿಯ ಹೆಸರಲ್ಲಿ ಮಹಿಳೆ ಹೆಣೆದ ಮೋಸದ ಬಲೆಗೆ ಸಿಲುಕಿ ಹಣ ಕಳೆದುಕೊಂಡ ಎಂಜಿನಿಯರ್​​ ಈಗ ನ್ಯಾಯಕ್ಕೆ ಆಗ್ರಹಿಸಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾನೆ.

2025ರ ನವೆಂಬರ್‌ನಲ್ಲಿ Flutrr ಡೇಟಿಂಗ್ ಆಪ್‌ ಮೂಲಕ 29 ವರ್ಷದ ಸ್ವಾಫ್ಟ್‌ವೇರ್ ಎಂಜಿನಿಯರ್​​ಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಕೆ ತನ್ನನ್ನು ಮುಂಬೈ ಮೂಲದ ಅಂಜಲಿ ಕುಶ್ಲಾನಿ ಎಂದು ಪರಿಚಯಿಸಿಕೊಂಡು, ನಂತರ ವಾಟ್ಸಾಪ್ ಮೂಲಕ ನಿಯಮಿತವಾಗಿ ಈತನ ಸಂಪರ್ಕದಲ್ಲಿದ್ದಳು. ಇದಾದ ಕೆಲ ಸಮಯದ ಬಳಿಕ ಪ್ರೀತಿಯ ಹೆಸರಲ್ಲಿ ಸಂತ್ರಸ್ತನ ನಂಬಿಸಿದ್ದ ಮಹಿಳೆ, ಆತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಹೀಗಾಗಿ ಸಾಫ್ಟ್‌ವೇರ್ ಎಂಜಿನಿಯರ್​​ ಆಕೆಯ ಜೊತೆಗೆ ಭವಿಷ್ಯದ ಕನಸು ಕೂಡ ಕಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ ಕೆಲ ವಾರಗಳ ಬಳಿಕ ಆಕೆ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಪರಿಚಯಿಸಿ, ತನ್ನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಲು ಈತನನ್ನು ಪ್ರೇರೇಪಿಸಿದ್ದಳು. ಆರಂಭದಲ್ಲಿ ಸಂದೇಹಗೊಂಡಿದ್ದ ಸಂತ್ರಸ್ತ ಎಂಜಿನಿಯರ್​ 40,000 ಹೂಡಿಕೆ ಮಾಡಿದ್ದು, ಇದಕ್ಕೆ ಚಿಕ್ಕ ಮಟ್ಟಿನ ಲಾಭವೂ ಆತನಿಗೆ ಸಿಕ್ಕಿತ್ತು. ಹೀಗಾಗಿ ಆಕೆಯ ಮೇಲೆ ಎಂಜಿನಿಯರ್​​ ಹೆಚ್ಚು ವಿಶ್ವಾಸ ಹೊಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮಗನ ರೋಗ ಗುಣಪಡಿಸಲು ಮಾಟಗಾತಿಯ ಮಾತು ನಂಬಿ ಮಗಳನ್ನೇ ಬಲಿಕೊಟ್ಟ ತಾಯಿ

ಇದರ ನಂತರ ದೊಡ್ಡ ಮೊತ್ತಗಳನ್ನು ಹೂಡಿಕೆ ಮಾಡಲು ಪ್ರೇರೇಪಿತನಾದ ಈತ, ಸ್ನೇಹಿತರಿಂದ ಮತ್ತು ಇತರ ಮಾದರಿಯ ಸಾಲಗಳನ್ನು ತೆಗೆದುಕೊಂಡು ಹಣ ಹೂಡಿಕೆ ಮಾಡಿದ್ದ. ಡಿಸೆಂಬರ್ ವೇಳೆಗೆ ಒಟ್ಟು 5.6 ಲಕ್ಷ ರೂ. ಹೂಡಿಕೆ ಮಾಡಿದಿದ್ದು, ನಂತರ ಈ ಮೊತ್ತ ಇನ್ನಷ್ಟು ಹೆಚ್ಚಾಗಿತ್ತು. ಮದುವೆ ಭರವಸೆ ಮತ್ತು ಭಾವನಾತ್ಮಕ ಒತ್ತಡದ ಮೂಲಕ ಹೆಚ್ಚಿನ ಹಣ ಹೂಡಿಕೆಗೆ ಮಹಿಳೆ ಒತ್ತಾಯಿಸಿದ ಕಾರಣ ಸಂತ್ರಸ್ತ ಹಂತ ಹಂತವಾಗಿ ಒಟ್ಟು 18.7 ಲಕ್ಷ ರೂ. ಹೂಡಿಕೆ ಮಾಡಿದ್ದ. ಈ ಪೈಕಿ 10 ಲಕ್ಷ ರೂ. ಸಾಲ ಮಾಡಿ ನೀಡಿರುವ ಹಣ ಎಂಬುದೂ ಈಗ ಬಹಿರಂಗವಾಗಿದೆ.

ಹೂಡಿಕೆ ಹೆಸರಲ್ಲಿ ನೀಡಿದ್ದ ಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಾಗ ಎಂಜಿನಿಯರ್​​  ಅನುಮಾನಗೊಂಡು ಈ ಬಗ್ಗೆ ವಿಚಾರಿಸಿದ ಬಳಿಕ ಆರೋಪಿ ಮಹಿಳೆ ಈತನ ಜೊತೆಗಿನ ಸಂಪರ್ಕ ಕಡಿತಗೊಳಿಸಿದ್ದಳು. ಹೀಗಾಗಿ ತಾನು ಮೋಸ ಹೋಗಿರುವ ಬಗ್ಗೆ ಅರಿತ ಸ್ವಾಫ್ಟ್‌ವೇರ್ ಎಂಜಿನಿಯರ್​​, ಈ ಕುರಿತು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಲಂ 318 ಅಡಿಯಲ್ಲಿ ಆರೋಪಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link