ಐಪಿಎಲ್ನಲ್ಲಿ ಇದುವರೆಗೆ 18 ಆವೃತ್ತಿಗಳು ನಡೆದಿವೆ. ಈ 18 ಆವೃತ್ತಿಗಳಲ್ಲಿ ಪ್ರತಿ ತಂಡವೂ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೈನಲ್ನಲ್ಲಿ ಆಡಿದೆ. ಆದರೆ ಇದುವರೆಗೆ ಫೈನಲ್ ಪಂದ್ಯವನ್ನು ಆಡದೆ ಇರುವ ತಂಡವೊಂದಿದೆ. ಆ ತಂಡ ಯಾವುದೆಂದರೆ ಲಕ್ನೋ ಸೂಪರ್ ಜೈಂಟ್ಸ್. ಲೀಗ್ನ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಈ ತಂಡ ಪ್ಲೇ ಆಫ್ ಸುತ್ತಿನಲ್ಲಿ ಎಡವಿ ಫೈನಲ್ ರೇಸ್ನಿಂದ ಹೊರಬಿದ್ದಿದೆ.
2022 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೊದಲ ಸೀಸನ್ನಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ತಂಡದಲ್ಲಿ ಅಂತಹ ಸ್ಟಾರ್ ಆಟಗಾರರು ಕೂಡ ಇದ್ದಾರೆ. ಇದಕ್ಕೆ ಪೂರಕವಾಗಿ ಲೀಗ್ ಹಂತದಲ್ಲಿ ಈ ತಂಡದ ಪ್ರದರ್ಶನವೂ ಅದ್ಭುತವಾಗಿರುತ್ತದೆ. ಆದರೆ ಲೀಗ್ ಹಂತ ಮುಗಿದ ಬಳಿಕ ಈ ತಂಡದ ಪ್ರದರ್ಶನವೂ ಅಷ್ಟೇ ಸಪ್ಪೆಯಾಗಿರುತ್ತದೆ.
2022 ಮತ್ತು 2023 ರ ಆವೃತ್ತಿಯಲ್ಲಿ ಲಕ್ನೋ ತಂಡ ಅರ್ಹತಾ ಹಂತ ತಲುಪಿತು. ಆದರೆ ಎಲಿಮಿನೇಟರ್ ಸುತ್ತಿನಲ್ಲಿ ಎರಡು ಬಾರಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಒಮ್ಮೆ ಆರ್ಸಿಬಿ ವಿರುದ್ಧ ಸೋಲನುಭವಿಸಿದ್ದ ಲಕ್ನೋ, ಮತ್ತೊಮ್ಮೆ ಮುಂಬೈ ತಂಡದ ವಿರುದ್ಧ ಸೋತು ಹೊರಬಿದ್ದಿತು
ಇನ್ನು 2024 ಮತ್ತು 2025 ರ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ತಂಡಕ್ಕೆ ಅರ್ಹತಾ ಹಂತವನ್ನು ತಲುಪಲು ಸಹ ಸಾಧ್ಯವಾಗಲಿಲ್ಲ. 2024 ರ ಆವೃತ್ತಿಯಲ್ಲಿ ಕಡಿಮೆ ನೆಟ್ ರನ್ರೇಟ್ನಿಂದಾಗಿ ಲೀಗ್ ಹಂತದಲ್ಲೇ ಪ್ರಯಾಣ ಮುಗಿಸಿದ್ದ ಲಕ್ನೋ, ಅವರು ಹೊರಬಿದ್ದರು. ಮುಂದಿನ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡ ಟೂರ್ನಿಯಿಂದ ಹೊರಬಿದ್ದಿತ್ತು.
ಇದೀಗ 2026 ರ ಆವೃತ್ತಿಯ ಆರಂಭಕ್ಕೆ ಈಗ ತಯಾರಿ ನಡೆಸುತ್ತಿರುವ ಲಕ್ನೋ ತಂಡವು ತನ್ನ ಮೊದಲ ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿದೆ. ಹೊಸ ನಾಯಕತ್ವದಲ್ಲಿ ತಂಡವು ಸಮತೋಲನದಿಂದ ಕೂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠ ಆಟಗಾರರಿದ್ದಾರೆ ಮತ್ತು ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಇದು ತಂಡಕ್ಕೆ ಹೊಸ ಭರವಸೆಯನ್ನು ನೀಡುತ್ತಿದೆ.
ದಾವಣಗೆರೆ, (ಮಾರ್ಚ್ 22): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಸಮರ ಈಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಶಾಮನೂರು ಮೊಮ್ಮಗ ಸಮರ್ಥ್ಗೆ (Samarth Shamanur) ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಕಡೆಗಣಿಸಿದ್ದಕ್ಕೆ ಮುಸ್ಲಿಂ ಮುಖಂಡರು (Muslim Leaders) ಕೆಂಡಾಮಂಡಲವಾಗಿದ್ದಾರೆ. ಈ ಬಾರಿ ಕಾಂಗ್ರೆಸ್ಗೆ (Congress) ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿರುವ ಮುಖಂಡರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲಿಸದಿರಲು ತೀರ್ಮಾನಿಸಿದ್ದಾರೆ. ಅಲ್ಲದೇ ಬಾಗಲಕೋಟೆ ಬೈ ಎಲೆಕ್ಷನ್ ನಲ್ಲೂ ಸಹ ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಕರೆ ನೀಡಿದ್ದಾರೆ.
ವಿಜಯನಗರ, ಮಾರ್ಚ್ 22: ತಂದೆ ಕಣ್ಣೆದುರೇ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಪುತ್ರರು ಸಾವನ್ನಪ್ಪಿರುವಂತಹ (death)ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಬಳಿ ನಡೆದಿದೆ. ಎಂ.ಜಿ.ಮನು(19) ಮತ್ತು ಎಂ.ಜಿ.ಪ್ರಜ್ವಲ್(18) ಮೃತರು. ನದಿಯಲ್ಲಿ ಮುಳುಗುತ್ತಿದ್ದ ಕಿರಿಮಗ ಚಿರಂಜೀವಿಯನ್ನ ತಂದೆ ಮಂಜಪ್ಪ ರಕ್ಷಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಬಳಿಯ ತುಂಗಭದ್ರ ನದಿಗೆ ಮೂವರು ಸಹೋದರರು ಕೆರೆಗೆ ಈಜಾಡಲು ಹೋಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ತಂದೆ ಕಣ್ಣೆದುರೇ ಇಬ್ಬರು ಮಕ್ಕಳು ಜಲ ಸಮಾಧಿಯಾಗಿದ್ದಾರೆ. ಇನ್ನೊಬ್ಬ ಮಗನನ್ನು ರಕ್ಷಿಸಲಾಗಿದೆ. ಮೃತ ಎಂ.ಜಿ.ಮನು ಬಿಇ ವಿದ್ಯಾರ್ಥಿಯಾಗಿದ್ದು, ಎಂ.ಜಿ.ಪ್ರಜ್ವಲ್ ಪಿಯು ಓದುತ್ತಿದ್ದ. ಸದ್ಯ ತುಂಗಭದ್ರಾ ನದಿಯಿಂದ ಸ್ಥಳೀಯರು ಇಬ್ಬರ ಶವ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಮೀನಿನ ಬಲೆಗೆ ಸಿಲುಕಿ ಮೀನುಗಾರ ಸಾವು
ಮೀನು ಹಿಡಿಯಲು ಹೋಗಿದ್ದ ಮೀನುಗಾರ ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಹೊರಭಾಗದ ಭೀಮಾ ನದಿಯಲ್ಲಿ ನಡೆದಿದೆ. ಜೋಳದಡಗಿ ಗ್ರಾಮದ ನಿವಾಸಿ, ಮೀನುಗಾರ ನಾಗರಾಜ್ (28) ಮೃತ ದುರ್ದೈವಿ.
ನಾಗರಾಜ್ ಎಂದಿನಂತೆ ನಸುಕಿನ ಜಾವ ಭೀಮಾನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ನದಿಯಲ್ಲಿ ಬೆಂಡ್ ಮೇಲೆ ಕುಳಿತು ಮೀನಿನ ಬಲೆ ಹಾಕಿ ಮೀನು ಹಿಡಿಯಲು ಮುಂದಾಗಿದ್ದ. ಈ ವೇಳೆ ಮೀನುಗಾರನ ಹತ್ತಿರ ಬಂದ ಬೃಹತ್ ಮೊಸಳೆ, ಮೀನುಗಾರ ಕುಳಿತ ಬೆಂಡ್ ಕೆಡವಿದೆ. ಈ ವೇಳೆ ಈಜಾಡಿ ಪಾರಾಗಿ ಬರಲು ಸಾಧ್ಯವಾಗದೇ ಮೀನಿನ ಬಲೆ ಕಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮೀನುಗಾರರು ದೂರದಿಂದ ಕೂಗಿದ ಹಿನ್ನಲೆ ಮೊಸಳೆ ಪರಾರಿ ಆಗಿದೆ. ಸ್ಥಳೀಯ ಮೀನುಗಾರರು ಮೃತದೇಹವನ್ನು ಹೊರತೆಗೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, (ಮಾರ್ಚ್ 22): ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣ ಸಂಬಂಧ 50 ಕೆಜಿ ಚಿನ್ನ ಸಾಗಣೆಗೆ ಉಗಾಂಡ (Uganda) ಮೂಲದ ಏಜೆಂಟ್ ಜೊತೆ ರನ್ಯಾ ರಾವ್ ಸಂಪರ್ಕದಲ್ಲಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸುಮಾರು 102.55 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಬುಧವಾರ ಬೆಂಗಳೂರಿನ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರಲ್ಲಿ ಉಗಾಂಡಾ ಮೂಲದ ಏಜೆಂಟರೊಂದಿಗೆ ನಟಿ ನಡೆಸಿದ್ದ ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಬಯಲಿಗೆ ಬಂದಿದೆ.
ತನಿಖಾ ವರದಿಗಳ ಪ್ರಕಾರ, ರನ್ಯಾ ರಾವ್ ಕೇವಲ ದುಬೈನಿಂದ ಮಾತ್ರವಲ್ಲದೆ, ಆಫ್ರಿಕನ್ ರಾಷ್ಟ್ರಗಳಿಂದಲೂ ಚಿನ್ನ ಪಡೆಯಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಉಗಾಂಡಾ ಮೂಲದ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆರಂಭದಲ್ಲಿ 5 ಕೆಜಿ ಚಿನ್ನವನ್ನು ಪ್ರಾಯೋಗಿಕವಾಗಿ ಸಾಗಿಸಲು ಯತ್ನಿಸಿದ್ದ ಈ ತಂಡ, ನಂತರ ಬರೋಬ್ಬರಿ 50 ಕೆಜಿ ಚಿನ್ನದ ಸಾಗಣೆಗೆ ಉಗಾಂಡಾ ಏಜೆಂಟ್ ಜೊತೆ ಡೀಲಿಂಗ್ ಕುದುರಿಸಿತ್ತು. ಇದಕ್ಕಾಗಿ ದುಬೈನಲ್ಲಿ ‘ವೀರಾ ಡೈಮಂಡ್ಸ್ ಟ್ರೇಡಿಂಗ್’ ಎಂಬ ಹೆಸರಿನ ಕಂಪನಿಯನ್ನು ಕೂಡ ತೆರೆಯಲಾಗಿತ್ತು.
ಅಕ್ರಮ ಹಾದಿಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಲು ಹೊರಟಿದ್ದ ರನ್ಯಾ ರಾವ್ ಮತ್ತು ಆಕೆಯ ಸ್ನೇಹಿತ ರಾಜು ಎಂಬುವವರಿಗೆ ಉಗಾಂಡಾದ ಮಧ್ಯವರ್ತಿಯೇ ಕೈಕೊಟ್ಟಿದ್ದಾನೆ. ಚಿನ್ನ ಖರೀದಿಗಾಗಿ ಅಡ್ವಾನ್ಸ್ ಆಗಿ 33 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಜನವರಿ 2024ರಲ್ಲಿ ರಾಜು ಎಂಬಾತ ಚಿನ್ನ ತರಲು ಉಗಾಂಡಾದ ಕಂಪಾಲಕ್ಕೆ ತೆರಳಿದ್ದಾಗ, ಏಜೆಂಟ್ ಹೆಚ್ಚುವರಿಯಾಗಿ 1.7 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ರನ್ಯಾ ರಾವ್ ದುಬೈ ಮೂಲದ ವ್ಯಕ್ತಿಯ ಮೂಲಕ ಈ ಹಣ ನೀಡುವುದಾಗಿ ಒಪ್ಪಿಕೊಂಡಿದ್ದರೂ, ಕೊನೆಗೆ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದು ಅಲ್ಲಿನ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಟಿ ರನ್ಯಾ ರಾವ್, 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಡಿಆರ್ಐ (DRI) ಅಧಿಕಾರಿಗಳು ತಪಾಸಣೆ ಮಾಡಿದ್ದು, ಆಗ ಚಿನ್ನ ಇರುವುದು ಖಚಿತವಾಗದ ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪೂರ್ಣವಾಗಿ ತಪಾಸಣೆ ಮಾಡಿದಾಗ ನಟಿಯ ಬಳಿ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ಇದಾದ ನಂತರ ತನಿಖೆಗಿಳಿದ ಸರ್ಕಾರಿ ತನಿಖಾ ಸಂಸ್ಥೆಗಳು ಒಂದೊಂದೇ ಹಗರಣವನ್ನು ಬಯಲಿಗೆಳೆಯುತ್ತಾ ಹೋದವು. ತನಿಖಾ ವರದಿಯಲ್ಲಿ ಮಾರ್ಚ್ 2024ರಿಂದ ಮಾರ್ಚ್ 2025ರ ಅವಧಿಯಲ್ಲಿ ಈ ಜಾಲವು ಸುಮಾರು 127.287 ಕೆಜಿ ವಿದೇಶಿ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿದೆ. ಇದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಬಂದ ಹಣವನ್ನು ಹವಾಲಾ ಮಾರ್ಗವಾಗಿ ವರ್ಗಾಯಿಸಲಾಗಿದೆ ಎಂಬ ಅಂಶವೂ ಕಂಡುಬಂದಿದೆ.
ಈ ಪ್ರಕರಣದ ಗಂಭೀರತೆ ಪರಿಗಣಿಸಿರುವ ಇಡಿ, ರನ್ಯಾ ರಾವ್ ಹೆಸರಿನಲ್ಲಿದ್ದ 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಜೊತೆಗೆ ದಾಳಿ ವೇಳೆ 2.67 ಕೋಟಿ ರೂಪಾಯಿ ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ನಟಿ ರನ್ಯಾ ರಾವ್, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ (South Africa vs New Zealand) ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಫ್ರಿಕಾ ತಂಡ ಗೆಲುವು ಸಾಧಿಸಿದೆ. ವೆಲ್ಲಿಂಗ್ಟನ್ನಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡವನ್ನು 19 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಉಭಯ ತಂಡಗಳ ನಡುವಿನ ಈ ಸರಣಿಯನ್ನು 2-2 ರಿಂದ ಸಮಬಲಗೊಂಡಿದೆ. ಹೀಗಾಗಿ ಐದನೇ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸರಣಿ ಕೈವಶವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 164 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 145 ರನ್ಗಳಿಗೆ ಆಲೌಟ್ ಆಗುವ ಮೂಲಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.
164 ರನ್ ಗಳಿಸಿದ ಆಫ್ರಿಕಾ
ಸ್ಕೈ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 164 ರನ್ ಗಳಿಸಿತು. ಮೊದಲ ಓವರ್ನಲ್ಲಿಯೇ ಆರಂಭಿಕ ಆಟಗಾರ ವಿಯಾನ್ ಮುಲ್ಡರ್ ಅವರನ್ನು ಕಳೆದುಕೊಂಡರೂ, ಕಾನರ್ ಎಸ್ಟರ್ಹೈಜೆನ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಪಾದಾರ್ಪಣೆ ಸರಣಿಯ 4ನೇ ಪಂದ್ಯದಲ್ಲಿ ಮಿಂಚಿದ ಕಾನರ್ 36 ಎಸೆತಗಳಲ್ಲಿ 57 ರನ್ಗಳ ಇನ್ನಿಂಗ್ಸ್ ಆಡಿದರು. ಇದರಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳು ಸೇರಿದ್ದವು. ಇದು ಕಾನರ್ ಅವರ ವೃತ್ತಿಜೀವನದ ಮೊದಲ ಅರ್ಧಶತಕವಾಗಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇವರನ್ನು ಹೊರತುಪಡಿಸಿ ರೂಬಿನ್ ಹರ್ಮನ್ ಕೂಡ 28 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಸಣ್ಣ ಆದರೆ ಪ್ರಮುಖ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 2 ವಿಕೆಟ್ ಪಡೆದರು.
145 ರನ್ಗಳಿಗೆ ಕಿವೀಸ್ ಆಲೌಟ್
ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ.ಆರಂಭಿಕ ಆಟಗಾರ ಕೀಟನ್ ಕ್ಲಾರ್ಕ್ ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ ಟಿಮ್ ರಾಬಿನ್ಸನ್ ಮತ್ತು ಡೇನ್ ಕ್ಲೀವರ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಆದಾಗ್ಯೂ, 9 ನೇ ಓವರ್ ವೇಳೆಗೆ ಇಬ್ಬರೂ ಪೆವಿಲಿಯನ್ ಸೇರಿಕೊಂಡರು. ಅದಾದ ನಂತರ, ಕಿವೀಸ್ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ಶುರುವಾಯಿತು. ಆಫ್ರಿಕಾ ಸ್ಪಿನ್ ದಾಳಿಗೆ ನಲುಗಿದ ಕಿವೀಸ್ ತಂಡವು ಅಂತಿಮವಾಗಿ 18.5 ಓವರ್ಗಳಲ್ಲಿ 145 ರನ್ಗಳಿಗೆ ಆಲೌಟ್ ಆಯಿತು. ಅಫ್ರಿಕಾ ಪರ ಇಬ್ಬರೂ ಬೌಲರ್ಗಳು ತಲಾ ಎರಡು ವಿಕೆಟ್ಗಳನ್ನು ಪಡೆದರೆ, ವೇಗದ ಬೌಲರ್ ಜೆರಾಲ್ಡ್ ಕೋಟ್ಜಿಯಾ ಮೂರು ವಿಕೆಟ್ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ನ (Bollywood) ಐಕಾನಿಕ್ ಹಾಸ್ಯ ಸಿನಿಮಾಗಳಲ್ಲಿ ‘ಹೇರಾ ಫೇರಿ’ಗೆ ದೊಡ್ಡ ಹೆಸರು. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ನಟಿಸಿದ್ದ ಈ ಸಿನಿಮಾ ಇಂದಗೂ ಕಲ್ಟ್. ‘ಹೇರಾ-ಫೇರಿ’ಯ ಸೀಕ್ವೆಲ್ ‘ಫಿರ್ ಹೇರಾ ಫೇರಿ’ ಸಿನಿಮಾ ಸಹ ಬಿಡುಗಡೆ ಆಗಿ ಅದೂ ಸಹ ದೊಡ್ಡ ಹಿಟ್ ಆಯ್ತು. ಇತ್ತೀಚೆಗಷ್ಟೆ ಸಿನಿಮಾದ ಇನ್ನೊಂದು ಮೂರನೇ ಭಾಗ ಮಾಡುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು, ಆಗ ಪರೇಶ್ ರಾವಲ್ ತಾವು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದು ಭಾರಿ ಸುದ್ದಿ ಆಗಿತ್ತು. ಅಕ್ಷಯ್ ಕುಮಾರ್ ಸಂಧಾನದ ಬಳಿಕ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆದರೆ ಇದೀಗ ಸಿನಿಮಾಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಸಿನಿಮಾದ ಹಕ್ಕುಗಳ ಕುರಿತಾಗಿ ಇಬ್ಬರು ನಿರ್ಮಾಪಕರ ನಡುವೆ ಜಗಳ ಶುರುವಾಗಿದೆ.
ಸಾಮಾನ್ಯವಾಗಿ ‘ಹೇರಾ ಫೇರಿ’ ಅಂದ ಕೂಡಲೇ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ನೆನಪಾಗುತ್ತಾರೆ. ಆದರೆ ವಿಜಯ್ ಕುಮಾರ್ ಗಿಲಾನಿ ಅವರು ಸಿನಿಮಾದ ಹಕ್ಕುಗಳು ತಮ್ಮ ಬಳಿ ಇವೆಯೆಂದು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ, ಈ ಚಿತ್ರಗಳ ಹಕ್ಕುಗಳನ್ನು ಅವರು ಕಾನೂನುಬದ್ಧವಾಗಿ ಹೊಂದಿದ್ದಾರೆ. ‘ಹೇರಾ ಫೇರಿ ಫ್ರಾಂಚೈಸಿಯ ಹಕ್ಕುಗಳು ನನ್ನ ಬಳಿಯೇ ಇವೆ. ಫಿರೋಜ್ ನಾಡಿಯಾಡ್ವಾಲಾ ಅವರಿಗೆ ಈ ಚಿತ್ರದ ಮೇಲೆ ಯಾವುದೇ ಹಕ್ಕಿಲ್ಲ. ಈ ವಿಷಯದಲ್ಲಿ ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆ ಮತ್ತು ಶೀಘ್ರದಲ್ಲೇ ಸತ್ಯ ಹೊರಬರಲಿದೆ’ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಅವರು ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ವರದಿಗಳಿವೆ. ಈ ಹಿಂದೆ ಸಾಲ ತೀರಿಸದ ಕಾರಣ ಅವರ ಕೆಲವು ಚಿತ್ರಗಳ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ. ಅದೇ ಸಮಯದಲ್ಲಿ ‘ಹೇರಾ-ಫೇರಿ’ಯ ಹಕ್ಕುಗಳನ್ನು ವಿಜಯ್ ಕುಮಾರ್ ಅವರಿಗೆ ವರ್ಗಾವಣೆ ಆಗಿವೆಯಂತೆ.
ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಕಾಂಬಿನೇಷನ್ನಲ್ಲಿ ‘ಹೇರಾ ಫೇರಿ 3’ ಚಿತ್ರೀಕರಣ ಆರಂಭವಾಗಬೇಕಿತ್ತು. ಪ್ರೋಮೋ ಕೂಡ ಶೂಟ್ ಮಾಡಲಾಗಿತ್ತು. ಆದರೆ ಈಗಿನ ಈ ಕಾನೂನು ವಿವಾದದಿಂದಾಗಿ ಚಿತ್ರದ ಶೂಟಿಂಗ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೆಲವು ವರದಿಗಳ ಪ್ರಕಾರ, ಹಕ್ಕುಗಳ ವಿವಾದ ಇತ್ಯರ್ಥವಾಗುವವರೆಗೆ ಈ ಹೆಸರಿನಲ್ಲಿ ಯಾವುದೇ ಹೊಸ ಚಿತ್ರ ಅಥವಾ ಕಂಟೆಂಟ್ ಬಿಡುಗಡೆ ಮಾಡದಂತೆ ತಡೆಯಾಜ್ಞೆ ಬರುವ ಸಾಧ್ಯತೆಯೂ ಇದೆ.
ಈಗಾಗಲೇ ಕಥೆ ಮತ್ತು ಕಾಸ್ಟಿಂಗ್ ವಿಚಾರವಾಗಿ ಸಾಕಷ್ಟು ಏರಿಳಿತ ಕಂಡಿದ್ದ ‘ಹೇರಾ ಫೇರಿ 3’, ಈಗ ಮಾಲೀಕತ್ವದ ಜಗಳಕ್ಕೆ ಸಿಲುಕಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಚಿತ್ರದ ಹಕ್ಕುಗಳು ವಿಜಯ್ ಕುಮಾರ್ ಅವರ ಬಳಿ ಇದ್ದರೆ, ಫಿರೋಜ್ ನಾಡಿಯಾವಾಲಾ ಅವರು ಈ ಪ್ರಾಜೆಕ್ಟ್ ಅನ್ನು ಹೇಗೆ ಮುಂದುವರಿಸುತ್ತಾರೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ, ತೆರೆಯ ಮೇಲೆ ನಗು ಉಕ್ಕಿಸುತ್ತಿದ್ದ ‘ಹೇರಾ ಫೇರಿ’ ತಂಡ, ಈಗ ತೆರೆಯ ಹಿಂದೆ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಈ ಕಾನೂನು ಸಮರದಲ್ಲಿ ಯಾರಿಗೆ ಜಯ ಸಿಗಲಿದೆ ಮತ್ತು ‘ಹೇರಾ ಫೇರಿ 3’ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು, (ಮಾರ್ಚ್ 22): ಯುಗಾದಿ (Ugadi) ಹಾಗೂ ರಂಜಾನ್ (Ramadan) ಹಬ್ಬಕ್ಕೆ ಸಾಲುಸಾಲು ರಜೆ ಇದ್ದ ಹಿನ್ನೆಲೆ ಊರಿಗೆ ಹೋಗಿದ್ದ ಜನ ಇದೀಗ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಈ ಪರಿಣಾಮ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಫುಲ್ ಟ್ರಾಫಿಕ್ (Traffic) ಜಾಮ್ ಆಗಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರು ಹಾಗೂ ಟ್ರಿಪ್ ಹೋಗಿದ್ದವುರ ಇದೀಗ ಬೆಂಗಳೂರಿಗ ವಾಪಸ್ ಆಗುತ್ತಿದ್ದು, ಬೆಂಗಳೂರು ಎಂಟ್ರಿ ಕೊಡುವ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಹೆದ್ದಾರಿಯಲ್ಲಿ ವಾಹನಗಳು ನಿಂತಲ್ಲೇ ನಿಂತಿದ್ದು, ಆಗಾಗ ಅಲ್ಪ ಸ್ವಲ್ಪ ಮೂವ್ ಆಗುತ್ತಿವೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ನವದೆಹಲಿ, ಮಾರ್ಚ್ 22: ಟಿವಿ9 ನೆಟ್ವರ್ಕ್ನ ಪ್ರತಿಷ್ಠಿತ ಕಾರ್ಯಕ್ರಮ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit)ನಾಲ್ಕನೇ ಆವೃತ್ತಿ ಮಾರ್ಚ್ 23 ಮತ್ತು 24ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಆ ಮೂಲಕ ಸತತ ಮೂರನೇ ಬಾರಿ ಮುಖ್ಯ ಅತಿಥಿಯಾಗಿ ಎಲ್ಲರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶೃಂಗಸಭೆಯಲ್ಲಿ ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ದೇಶದ ಜ್ವಲಂತ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಲಿವೆ.
ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯೂ ಭಾರತ ಮತ್ತು ಜಗತ್ತು ಎಂಬ ಥೀಮ್ ಹೊಂದಿದೆ. ಈ ಸಮಿಟ್, ಉದ್ಯಮಿಗಳು, ಚಿಂತಕರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಇಂದಿನ ಭಾರತದ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯಲಿವೆ.
ಯಾರೆಲ್ಲಾ ಭಾಗಿ?
ಶೃಂಗಸಭೆಯಲ್ಲಿ ‘ಮೌಲ್ಯಗಳು vs ಮೌಲ್ಯಮಾಪನ: ವ್ಯವಹಾರ ನಿರ್ವಹಣೆ’ ಎಂಬ ಸೆಷನ್ ಆಯೋಜಿಸಲಾಗಿದೆ. ಈ ಸಂವಾದದಲ್ಲಿ TiE ದೆಹಲಿ NCR ನ ಕಾರ್ಯನಿರ್ವಾಹಕ ನಿರ್ದೇಶಕಿ ಉಪಾಸನಾ ಶರ್ಮಾ, ಸಹ-ಸಂಸ್ಥಾಪಕಿ ಅರ್ಪಣಾ ಶಾಹಿ, ಗ್ಯಾಬಿಟ್, ಸ್ಕೈ ಏರ್ ಮೊಬಿಲಿಟಿಯ ಸ್ಥಾಪಕ ಮತ್ತು ಸಿಇಒ ಅಂಕಿತ್ ಕುಮಾರ್ ಮತ್ತು ಫಂಡಮೆಂಟಮ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ನ ಸಹ-ಸಂಸ್ಥಾಪಕ ಆಶಿಶ್ ಕುಮಾರ್ ಭಾಗವಹಿಸಲಿದ್ದಾರೆ.
TERIನ ಮಹಾನಿರ್ದೇಶಕಿ ಡಾ. ವಿಭಾ ಧವನ್, AM ಗ್ರೀನ್ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಎಸ್.ಎಸ್.ವಿ. ರಾಮಕುಮಾರ್, DCM ಶ್ರೀರಾಮ್ ಲಿಮಿಟೆಡ್ನ ನಿರ್ದೇಶಕ ಕೆ.ಕೆ. ಶರ್ಮಾ ಮತ್ತು ಟೆಕ್ ಮಹೀಂದ್ರಾದ ಮುಖ್ಯ ಅಧಿಕಾರಿ ಸಂದೀಪ್ ಚಂದನಾ ಅವರು ‘Energy Conundrum – India’s Way Out’ ಎಂಬ ವಿಷಯದ ಮೇಲೆ ಚರ್ಚೆ ನಡೆಸಲಿದ್ದಾರೆ.
ಶೃಂಗಸಭೆಯಲ್ಲಿ ‘ದಿ ಗ್ರೀನ್ ಪಿವೋಟ್’ ಎಂಬ ವಿಷಯದ ಮೇಲೆ ಸೆಷನ್ ನಡೆಯಲಿದೆ. ಬಯೋ ಸೊಲ್ಯೂಷನ್ಸ್ನ ಅಧ್ಯಕ್ಷ ಪ್ರವೀಣ್ ಪರಪತಿ, ಡಾ. ವಿಭಾ ಧವನ್ ಮತ್ತು ಐಪಿಇ ಗ್ಲೋಬಲ್ನ ಜಾಗತಿಕ ವಲಯ ಮುಖ್ಯಸ್ಥ (ಸಿಸಿಎಸ್) ಅಬಿನಾಶ್ ಮೊಹಂತಿ ಅವರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ.
‘ದಿ ಸಸ್ಟೈನಬಿಲಿಟಿ ಇಂಪರೇಟಿವ್’ ಎಂಬ ವಿಷಯದ ಕುರಿತು ಜಾಕ್ಸನ್ ಗ್ರೀನ್ನ ಉಪಾಧ್ಯಕ್ಷ ಮತ್ತು ಜಾಗತಿಕ ಸಿಇಒ ಬಿಕೇಶ್ ಓಗ್ರಾ, ಇಪಿಟಿಎ ಮಹಾನಿರ್ದೇಶಕ ಮತ್ತು ಮಾಜಿ ಐಎಎಸ್ ಅಧಿಕಾರಿ ಜಿ.ಪಿ. ಉಪಾಧ್ಯಾಯ; ಐಐಟಿ ಕಾನ್ಪುರದ ಪ್ರಾಧ್ಯಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಜೆಎಸ್ಎ ಅಡ್ವೊಕೇಟ್ ಹಾಗೂ ಸಾಲಿಸಿಟರ್ಸ್ನ ಪಾಲುದಾರ ಅಮಿತ್ ಕಪೂರ್ ಮತ್ತು ಐಇಇಎಂಎ ಅಧ್ಯಕ್ಷ ವಿಕ್ರಮ್ ಗಂಡೋತ್ರಾ ಮಾತನಾಡಲಿದ್ದಾರೆ.
ಇನ್ನು ಶೃಂಗಸಭೆಯಲ್ಲಿ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ, ಯುವ ಭಾರತೀಯ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ಅರ್ಶ್ದೀಪ್ ಸಿಂಗ್ ಕೂಡ ಭಾಗವಹಿಸಲಿದ್ದಾರೆ.
ಇವತ್ತು ಹೂಡಿಕೆಗಳಿಗೆ (Investments) ಹಲವಾರು ರೀತಿಯ ಮಾರ್ಗಗಳಿವೆ. ಷೇರು, ಬ್ಯಾಂಕ್ ಡೆಪಾಸಿಟ್, ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್, ಆರ್ಇಐಟಿ, ಮ್ಯೂಚುವಲ್ ಫಂಡ್, ಇಟಿಎಫ್ ಇತ್ಯಾದಿ ಆಯ್ಕೆಗಳಿವೆ. ದೊಡ್ಡ ದೊಡ್ಡ ಬ್ಯಾಂಕ್ ಸಂಸ್ಥೆಗಳೇ ದಿಢೀರನೇ ದಿವಾಳಿ ಎದ್ದಿದ್ದೇವೆಂದು ಘೋಷಿಸಿಕೊಳ್ಳಬಹುದು. ಅನೇಕ ಕೋಆಪರೇಟಿವ್ ಬ್ಯಾಂಕುಗಳ ನಿದರ್ಶನ ಕಣ್ಮುಂದೆ ಇದೆ. ಒಂದು ವೇಳೆ, ಹೀಗೆ ಬ್ಯಾಂಕ್ನಂತೆ ಷೇರು ವಿನಿಮಯ ಕೇಂದ್ರವೇ ಕುಸಿದು ಹೋದರೆ ಹೂಡಿಕೆದಾರರ ಷೇರುಗಳು ಏನಾಗುತ್ತವೆ? ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಏನಾಗುತ್ತದೆ? ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…
ಬ್ಯಾಂಕುಗಳಲ್ಲಿ ಠೇವಣಿ ಎಷ್ಟು ಭದ್ರ?
ಯಾವುದೇ ಬ್ಯಾಂಕಲ್ಲಿ 5 ಲಕ್ಷ ರೂವರೆಗಿನ ಹಣಕ್ಕೆ ವಿಮೆ ಕವರೇಜ್ ಇರುತ್ತೆ. ಸೇವಿಂಗ್ಸ್ ಅಕೌಂಟ್, ಕರೆಂಟ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಎಲ್ಲಾ ರೀತಿಯ ಅಕೌಂಟ್ಗಳಿಗೆ ಇದು ಅನ್ವಯ ಆಗುತ್ತದೆ. ಒಂದು ಬ್ಯಾಂಕ್ನಲ್ಲಿ ನೀವು ಬಹು ಅಕೌಂಟ್ಗಳನ್ನು ಹೊಂದಿದ್ದು, ಅವೆಲ್ಲವುಗಳಿಂದ 5 ಲಕ್ಷ ರೂಗೆ ಮಾತ್ರ ಖಾತ್ರಿ ಇರುತ್ತದೆ. ಬ್ಯಾಂಕ್ ದಿವಾಳಿ ಎದ್ದರೆ ಡಿಐಸಿಜಿಸಿ ಸಂಸ್ಥೆಯು ಗ್ರಾಹಕರಿಗೆ ಐದು ಲಕ್ಷ ರೂ ಅನ್ನು ನೀಡುತ್ತವೆ. ನೀವು ಹೆಚ್ಚು ಡೆಪಾಸಿಟ್ ಮಾಡಿದ್ದರೆ ಅದಕ್ಕೆ ಖಾತ್ರಿ ಇರುವುದಿಲ್ಲ. ಅಥವಾ ಆ ಹೆಚ್ಚುವರಿ ಹಣ ಬರುವುದೇ ಇಲ್ಲ ಎಂದಲ್ಲ. ಆ ಬ್ಯಾಂಕ್ನ ಆಸ್ತಿಪಾಸ್ತಿಗಳನ್ನು ಮಾರುವುದೋ ಇತ್ಯಾದಿ ಕಾರ್ಯಗಳಿಂದ ಆರ್ಬಿಐಯೇನಾದರೂ ಹಣ ವಸೂಲಿ ಮಾಡಿದರೆ, ಅದನ್ನು ಗ್ರಾಹಕರಿಗೆ ಎಷ್ಟು ಸಾಧ್ಯವೋ ಅಷ್ಟು ಮರಳಿಸಲು ಯತ್ನಿಸಬಹುದು.
ಷೇರು ವಿನಿಮಯ ಕೇಂದ್ರವೇ ಕುಸಿದರೆ ಏನಾಗುತ್ತೆ?
ಷೇರುಗಳಲ್ಲಿ ಹೂಡಿಕೆ ಬಹಳ ರಿಸ್ಕಿ ಎನ್ನುತ್ತಾರೆ. ಇದು ಹೌದು. ಮಾರುಕಟ್ಟೆ ಬಿದ್ದು ಷೇರುಬೆಲೆ ಕುಸಿಯಬಹುದು. ಬೆಲೆ ಕುಸಿದಾಗ, ಕಡಿಮೆ ಬೆಲೆಗೆ ನೀವು ಷೇರು ಮಾರಿದರೆ ಅದು ನೈಜ ನಷ್ಟ. ಮಾರದೇ ಇದ್ದು, ಷೇರುಬೆಲೆ ಏರುವವರೆಗೂ ಕಾಯುವ ಅವಕಾಶ ಇರುತ್ತದೆ.
ಒಂದು ವೇಳೆ, ಷೇರು ವಿನಿಯಮ ಕೇಂದ್ರವೇ ಕುಸಿದರೆ ಅಥವಾ ದಿವಾಳಿ ಎದ್ದರೆ ಏನಾಗುತ್ತದೆ? ಷೇರು ಮೌಲ್ಯ ಕಡಿಮೆ ಆಗಬಹುದು. ಆದರೆ, ನಿಮ್ಮ ಪಾಲಿನ ಷೇರುಗಳಿಗೆ ಏನೂ ಆಗುವುದಿಲ್ಲ. ಅಂದರೆ, ನಿಮ್ಮ ಷೇರು ಮಾಲಕತ್ವ ಮುಂದುವರಿಯುತ್ತದೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರುಗಳ ವಹಿವಾಟ ಮಾತ್ರವೇ ನಡೆಯುವುದು. ಎನ್ಎಸ್ಡಿಲ್ ಮತ್ತು ಸಿಡಿಎಸ್ಎಲ್ ಎನ್ನುವ ಸ್ವತಂತ್ರ ಡಿಪಾಸಿಟರಿ ಕಂಪನಿಗಳು ಎಲ್ಲರ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇಟ್ಟುಕೊಂಡಿರುತ್ತವೆ.
ಗ್ರೋ ಇತ್ಯಾದಿ ಬ್ರೋಕರೇಜ್ ಕಂಪನಿಗಳು ದಿವಾಳಿ ಎದ್ದರೂ ನಿಮ್ಮ ಷೇರುಗಳು ಎನ್ಎಸ್ಡಿಎಲ್ ಅಥವಾ ಸಿಡಿಎಸ್ಎಲ್ ಬಳಿ ಸುರಕ್ಷಿತವಾಗಿರುತ್ತವೆ. ಸೆಬಿಯಿಂದ ಇನ್ವೆಸ್ಟರ್ ಪ್ರೊಟೆಕ್ಷನ್ ಫಂಡ್ ಸ್ಥಾಪನೆಯಾಗಿದ್ದು, ಇದು ಷೇರುದಾರರಿಗೆ ಪರಿಹಾರ ಕೊಡಲೆಂದು ಇದೆ.
ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ?
ಮ್ಯೂಚುವಲ್ ಫಂಡ್ಗಳಲ್ಲಿ ಮಾಡುವ ಹೂಡಿಕೆಗಳ ಸುರಕ್ಷತೆಗೆ ಸೆಬಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮ್ಯೂಚುವಲ್ ಫಂಡ್ಗಳು ಮೂರು ಸ್ತರದ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ. ಟ್ರಸ್ಟ್, ಟ್ರಸ್ಟೀ ಮತ್ತು ಕಸ್ಟೋಡಿಯನ್ ಅನ್ನು ಒಳಗೊಂಡ ವ್ಯವಸ್ಥೆ ಇದು.
ಎಲ್ಲಾ ಮ್ಯುಚುವಲ್ ಫಂಡ್ಗಳು ಪಬ್ಲಿಕ್ ಟ್ರಸ್ಟ್ ಆಗಿ ಸ್ಥಾಪನೆಯಾಗಿರುತ್ತವೆ. ಈ ಫಂಡ್ಗಳಲ್ಲಿ ಹಾಕುವ ಹಣವು ಟ್ರಸ್ಟ್ಗೆ ಹೋಗುತ್ತದೆ. ಫಂಡ್ನ ಎಎಂಸಿ ಬ್ಯುಸಿನೆಸ್ಗಳಿಂದ ಈ ಟ್ರಸ್ಟ್ ಪ್ರತ್ಯೇಕವಾಗಿರುತ್ತವೆ. ಟ್ರಸ್ಟೀಗಳು ಹೂಡಿಕೆದಾರರಿಗೆ ಪಾಲಕರಂತೆ ಕಾರ್ಯನಿರ್ವಹಿಸುತ್ತವೆ.
ಮ್ಯೂಚುವಲ್ ಫಂಡ್ನಿಂದ ಖರೀದಿಸಲಾದ ಷೇರು, ಬಾಂಡ್ ಇತ್ಯಾದಿಯನ್ನು ಎಎಂಸಿಗಳು ಇಟ್ಟುಕೊಳ್ಳುವುದಿಲ್ಲ. ಬದಲಾಗಿ, ಸೆಬಿ ನೊಂದಾಯಿತವಾಗಿರುವ ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಇತ್ಯಾದಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಗಳು ಇಟ್ಟುಕೊಂಡಿರುತ್ತವೆ.
ಎಎಂಸಿಗಳು ದಿವಾಳಿ ಎದ್ದರೆ ಆಗ ಸೆಬಿ ಮಧ್ಯಪ್ರವೇಶಿಸಿ ಫಂಡ್ ಸಂಸ್ಥೆಯ ಸ್ಕೀಮ್ಗಳನ್ನು ಬೇರೆಯ ಎಎಂಸಿಗೆ ವರ್ಗಾಯಿಸುತ್ತದೆ. ಇದರೊಂದಿಗೆ ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳು ಸುರಕ್ಷಿತವಾಗಿ ಮುಂದುವರಿಯುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ (IPL 2026) ಸೀಸನ್ ಆರಂಭಕ್ಕೂ ಮುನ್ನವೇ ಅಪರೂಪದ ದಾಖಲೆಯೊಂದನ್ನು ಸೃಷ್ಟಿಸಿದೆ. ಅದೆನೆಂದರೆ ಇದೇ ಮೊದಲ ಬಾರಿಗೆ ಎಲ್ಲಾ 10 ತಂಡಗಳನ್ನು ಭಾರತೀಯ ಆಟಗಾರರು ನಾಯಕರಾಗಿ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಕಳೆದ 18 ಆವೃತ್ತಿಗಳಲ್ಲಿ ಒಬ್ಬರಲ್ಲ ಒಬ್ಬರು ವಿದೇಶಿ ಆಟಗಾರರು ಐಪಿಎಲ್ನಲ್ಲಿ ತಂಡದ ನಾಯಕರಾಗಿದ್ದರು. ಆದರೆ ಈ ಆವೃತ್ತಿಯಲ್ಲಿ ಯಾವ ವಿದೇಶಿ ಆಟಗಾರನಿಗೂ ತಂಡದ ನಾಯಕತ್ವ ಸಿಕ್ಕಿಲ್ಲ. ಕಳೆದ 18 ಆವೃತ್ತಿಗಳಲ್ಲಿ ಶೇನ್ ವಾರ್ನ್ ಅವರಿಂದ ಹಿಡಿದು ಆಡಮ್ ಗಿಲ್ಕ್ರಿಸ್ಟ್, ಡೇವಿಡ್ ವಾರ್ನರ್, ಫಾಫ್ ಡು ಪ್ಲೆಸಿಸ್ ಮತ್ತು ಪ್ಯಾಟ್ ಕಮ್ಮಿನ್ಸ್ವರೆಗೆ, ಅನೇಕ ವಿದೇಶಿಯರು ತಂಡಗಳನ್ನು ಮುನ್ನಡೆಸಿದ್ದಾರೆ. ಆದರೆ ಈ ಬಾರಿ ಎಲ್ಲಾ 10 ತಂಡಗಳ ನಾಯಕರು ಭಾರತೀಯರೇ ಆಗಿದ್ದಾರೆ.
10 ತಂಡಗಳ ನಾಯಕರು ಭಾರತೀಯರು
ಈ ಬಾರಿ, ನಾವು ನಾಯಕರ ಪಟ್ಟಿಯನ್ನು ನೋಡಿದರೆ, ಫ್ರಾಂಚೈಸಿಗಳು ಅನುಭವಕ್ಕಿಂತ ಯುವ ಆಟಗಾರರು ಮತ್ತು ನಾಯಕತ್ವದ ಗುಣ ಇರುವವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಸ್ಪಷ್ಟವಾಗುತ್ತದೆ. ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರುತುರಾಜ್ ಗಾಯಕ್ವಾಡ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ರಿಯಾನ್ ಪರಾಗ್, ಗುಜರಾತ್ ಟೈಟಾನ್ಸ್ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ.
ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಅಕ್ಷರ್ ಪಟೇಲ್ ಮುನ್ನಡೆಸುತ್ತಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ. ಹಾಗೆಯೇ ರಜತ್ ಪಾಟಿದಾರ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರೆ, ಈ ಹಿಂದೆ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್ ಈಗ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಉಳಿದಂತೆ ಕೆಕೆಆರ್ ತಂಡದ ನಾಯಕತ್ವ ಅಜಿಂಕ್ಯ ರಹಾನೆ ಕೈಯಲ್ಲಿದೆ.
ಈ ಬದಲಾವಣೆಯ ಹಿಂದೆ ಭಾರತದ ದೇಶೀಯ ಕ್ರಿಕೆಟ್ ಅನುಭವ ಪ್ರಮುಖ ಪಾತ್ರ ವಹಿಸಿದೆ. ಇಶಾನ್ ಕಿಶನ್ ಜಾರ್ಖಂಡ್ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುನ್ನಡೆಸಿದ ದಾಖಲೆಯನ್ನು ಹೊಂದಿದ್ದಾರೆ, ಆದ್ದರಿಂದ ಸನ್ರೈಸರ್ಸ್ ಆಡಳಿತ ಮಂಡಳಿ ಅವರ ಮೇಲೆ ನಂಬಿಕೆ ಇಟ್ಟಿದೆ. ಅದೇ ರೀತಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತಮ್ಮ ಹಿರಿಯ ಆಟಗಾರ ಅಜಿಂಕ್ಯ ರಹಾನೆಗೆ ಜವಾಬ್ದಾರಿಯನ್ನು ನೀಡಿದೆ. ವಿದೇಶಿ ಆಟಗಾರರು ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸೀಮಿತರಾಗಿರುವುದರಿಂದ, ಮೈದಾನದಲ್ಲಿ ತಂತ್ರಗಳನ್ನು ರೂಪಿಸುವುದು ಮತ್ತು ಒತ್ತಡವನ್ನು ನಿವಾರಿಸಲು ಭಾರತೀಯ ಆಟಗಾರರ ನಾಯಕತ್ವ ಕೌಶಲ್ಯಗಳು ನೆರವಿಗೆ ಬರುತ್ತವೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ