All posts by nagaraj11081993

ಆಸ್ಪತ್ರೆ ಎದುರು ಗಲಾಟೆ; ಮರುದಿನವೇ ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡ ಪಾಪರಾಜಿಗಳು – Kannada News | Salman Khan accepts paparazzi apology for hospital incident at Raja Shivaji event in Mumbai

ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳ ಮೇಲೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ತೀವ್ರ ಆಕ್ರೋಶ ಹೊರಹಾಕಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಘಟನೆ ನಡೆದ ಕೇವಲ ಒಂದೇ ದಿನದಲ್ಲಿ ಸಲ್ಲು ಭಾಯ್ ಹಳೆಯ ಮುನಿಸನ್ನು ಮರೆತು ಫೋಟೋಗ್ರಾಫರ್‌ಗಳ ಕ್ಷಮೆಯನ್ನು ಸ್ವೀಕರಿಸುವ ಮೂಲಕ ದೊಡ್ಡ ಗುಣ ಪ್ರದರ್ಶಿಸಿದ್ದಾರೆ. ಬುಧವಾರ (ಮೇ 20) ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಮತ್ತು ಪಾಪರಾಜಿಗಳ (Paparazzi) ನಡುವೆ ಸೌಹಾರ್ದಯುತ ಮಾತುಕತೆ ನಡೆದಿದೆ.

ಬುಧವಾರ ರಾತ್ರಿ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ಮತ್ತು ನಿರ್ದೇಶಕ ರಿತೇಶ್ ದೇಶ್‌ಮುಖ್ ಅವರೊಂದಿಗೆ ಸಲ್ಮಾನ್ ಅವರು ಕ್ಯಾಮೆರಾಗಳಿಗೆ ಪೋಸ್ ನೀಡಲು ಹೊರಬಂದಾಗ, ಅಲ್ಲಿ ನೆರೆದಿದ್ದ ಫೋಟೋಗ್ರಾಫರ್‌ಗಳೆಲ್ಲರೂ ಒಟ್ಟಾಗಿ ಸೂಪರ್‌ಸ್ಟಾರ್ ಬಳಿ ಕ್ಷಮೆ ಕೇಳಲು ಮುಂದಾಗಿದ್ದಾರೆ.

ಸಲ್ಮಾನ್ ಬರುತ್ತಿದ್ದಂತೆ ಸುತ್ತುವರಿದ ಪಾಪರಾಜಿಗಳು, ‘ನಮ್ಮನ್ನು ಕ್ಷಮಿಸಿ ಭಾಯ್’ ಎನ್ನುತ್ತಾ ಗದ್ದಲ ಸೃಷ್ಟಿಸಿದರು. ಇದನ್ನು ಗಮನಿಸಿದ ಸಲ್ಮಾನ್, ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಬರಲು ಬಿಡುವಂತೆ ತಮ್ಮ ಸೆಕ್ಯೂರಿಟಿ ತಂಡಕ್ಕೆ ಸೂಚಿಸಿದರು. ಬಳಿಕ ಏನಾಗುತ್ತಿದೆ ಎಂದು ವಿಚಾರಿಸಿದಾಗ, ಅವರೆಲ್ಲರೂ ಕ್ಷಮೆ ಕೇಳುತ್ತಿರುವುದು ಸಲ್ಮಾನ್‌ಗೆ ಮನವರಿಕೆಯಾಗಿದೆ. ತಕ್ಷಣವೇ ಸಲ್ಮಾನ್ ಸನ್ನೆ ಮಾಡುತ್ತಾ, ‘ಎಲ್ಲವೂ ಸರಿ ಹೋಗಿದೆ’ ಎಂದು ಸಿಗ್ನಲ್ ನೀಡಿದ್ದಾರೆ.

ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಫೋಟೋಗ್ರಾಫರ್ ಒಬ್ಬರು ‘ಇವತ್ತು ಯಾರೂ ಕಿರುಚಬೇಡಿ, ಲವ್ ಯೂ ಭಾಯ್’ ಎನ್ನುವುದು ಕೇಳಿಸುತ್ತದೆ. ಅದಕ್ಕೆ ಸಲ್ಮಾನ್ ನಗುತ್ತಾ, ‘ಹಾ, ಈ ಜಾಗ ಕಿರುಚಾಡಲು ಸರಿಯಾಗಿದೆ’ ಎಂದು ಉತ್ತರಿಸಿದ್ದಾರೆ. ನಂತರ ಪಾಪರಾಜಿಗಳು ಮಂಗಳವಾರ ರಾತ್ರಿಯ ತಮ್ಮ ನಡವಳಿಕೆಗೆ ಮತ್ತೊಮ್ಮೆ ಕ್ಷಮೆಯಾಚಿಸಿದಾಗ, ಸಲ್ಮಾನ್ ತಮಾಷೆಯಾಗಿ, ‘ಸ್ವಲ್ಪ ಜೋರಾಗಿ ಹೇಳಿ, ನಿಮ್ಮ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂದು ಕಾಲೆಳೆದಿದ್ದಾರೆ. ಸಲ್ಮಾನ್ ಅವರ ಈ ಹಾಸ್ಯ ಪ್ರಜ್ಞೆ ಕಂಡು ಪಕ್ಕದಲ್ಲೇ ಇದ್ದ ರಿತೇಶ್ ದೇಶ್‌ಮುಖ್ ಕೂಡ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: ತಮ್ಮ ನೋವನ್ನು ಆನಂದಿಸಿದವರಿಗೆ ಎಚ್ಚರಿಸಿದ ಸಲ್ಮಾನ್ ಖಾನ್

ಸಲ್ಮಾನ್ ಕೋಪಕ್ಕೆ ಕಾರಣವೇನು?
ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಆಪ್ತರನ್ನು ನೋಡಲು ಸಲ್ಮಾನ್ ಖಾನ್ ಹೋಗಿದ್ದರು. ಈ ವೇಳೆ ಪಾಪರಾಜಿಗಳು ಅವರನ್ನು ಬೆನ್ನಟ್ಟಿ, ಆಸ್ಪತ್ರೆಯ ಆವರಣದಲ್ಲೇ ಸಲ್ಮಾನ್ ಅವರ ಮುಂಬರುವ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗುತ್ತಾ ಗಲಾಟೆ ಮಾಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಸಲ್ಮಾನ್, ‘ನಿಮಗೆ ಹುಚ್ಚು ಹಿಡಿದಿದೆಯೇ?’ ಎಂದು ತಲೆಗೆ ಕೈ ಮುಟ್ಟಿ ಕೋಪದಿಂದ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ, ‘ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಗೆ ದಾಖಲಾಗಿದ್ದಾಗ ಬೇರೆಯವರು ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಖಾರವಾಗಿ ಕ್ಲಾಸ್ ತಗೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರವಾಸಿಗರಿಗೆ ನಿರಾಸೆ: ತೆರೆದ ಜೀಪ್ ಸಫಾರಿಗೆ ಬ್ರೇಕ್; ಪನ್ಸೋಲಿ ಆನೆ ಬಿಡಾರಕ್ಕೆ ಪ್ರವೇಶ ನಿರ್ಬಂಧ – Kannada News | Tourists Disappointed as Open Jeep Safari Suspended; Entry Limited to Pansoli Elephant Camp

ಪನ್ಸೋಲಿ ಆನೆ ಬಿಡಾರಕ್ಕೆ ನಿರ್ಬಂಧ, ತೆರೆದ ಜೀಪ್ ಸಫಾರಿಗೆ ಬ್ರೇಕ್ Image Credit source: tv9 kannada

ಕಾರವಾರ, ಮೇ 21: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp Tragedy) ಮೊನ್ನೆ ಅಂದರೆ ಮೇ 18ರಂದು ನಡೆದಿದ್ದ ಘೋರ ದುರಂತದಲ್ಲಿ ಮಹಿಳೆ ಬಲಿ ಬೆನ್ನಲ್ಲೇ ಇತ್ತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರದಲ್ಲಿ (Phansoli Elephant Camp) ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ಆನೆ ವೀಕ್ಷಣೆಗೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ದುಬಾರೆ ದುರಂತದ ನಂತರ ಪನ್ಸೋಲಿ ಆನೆ ಬಿಡಾರದಲ್ಲಿ ಅಲರ್ಟ್​​
  • ಪನ್ಸೋಲಿ ಆನೆ ಬಿಡಾರಕ್ಕೆ ಪ್ರವೇಶ ನಿರ್ಬಂಧಿಸಿದ ಅರಣ್ಯ ಇಲಾಖೆ
  • ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಬೇಸರ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿ ಒಟ್ಟು ಐದು ಆನೆಗಳಿವೆ. ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಆನೆ ವೀಕ್ಷಣೆಗೆ ಅವಕಾಶವಿತ್ತು. ಆನೆ ಚಿಕಿತ್ಸಾ ಕೇಂದ್ರ ಮತ್ತು ತರಬೇತಿ ಕೇಂದ್ರವಾಗಿ ಅರಣ್ಯ ಇಲಾಖೆ ಮಾರ್ಪಡಿಸಿದೆ. ದುಬಾರೆ ಆನೆ ಬಿಡಾರದಲ್ಲಿ ದುರ್ಘಟನೆ ಬೆನ್ನಲ್ಲೇ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಘಟನೆ ಹಿನ್ನೆಲೆ

ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ನೂರಾರು ಪ್ರವಾಸಿಗರ ಎದುರಲ್ಲೇ ಮೇ 18ರಂದು ಘೋರ ದುರಂತ ನಡೆದು ಹೋಗಿತ್ತು. ಮದವೇರಿ ಬಂದಿದ್ದ ಕಂಜನ್ ಆನೆ ನೇರವಾಗಿ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿತ್ತು. ತಕ್ಷಣ ಮಾರ್ತಾಂಡ ಪ್ರವಾಸಿಗರ ಮೇಲೆಯೇ ಉರುಳಿ ಬಿದ್ದಿತ್ತು. ಆನೆ ಅಡಿ ಸಿಲುಕಿ ಚೆನ್ನೈ ಮೂಲದ ತುಳಸಿ ಅಲ್ಲೇ ಪ್ರಾಣ ಬಿಟ್ಟರೆ, ಪತಿ ಜೋಯೆಲ್‌ ಹಾಗೂ ಪುತ್ರಿ ಬಚಾವ್ ಆಗಿದ್ದರು.

ಇದನ್ನೂ ಓದಿ: ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?

ಈ ಘೋರ ಕಾಳಗದಲ್ಲಿ ಮಾರ್ತಾಂಡ ಆನೆಗೂ ಗಂಭೀರ ಗಾಯಗಳಾಗಿದ್ದರು. ದಾಳಿ ಬಳಿಕ ನೀರಿನಿಂದ ಮೇಲೆ ಬಂದಿದ್ದ ಮಾರ್ತಾಂಡ 100 ಮೀಟರ್‌ವರೆಗೂ ನಡೆದುಕೊಂಡು ಹೋಗಿ, ನದಿ ತೀರದಲ್ಲೇ ನಿಂತಿತ್ತು. ಬಳಿಕ ಕುಸಿದು ಬಿದ್ದು ಉಸಿರು ನಿಲ್ಲಿಸಿತ್ತು. ಕಂಜನ್ ತನ್ನ ಚೂಪಾದ ಉದ್ದನೆಯ ಕೋರೆಯಿಂದ ಮಾರ್ತಾಂಡನ ಬೆನ್ನು, ಹೊಟ್ಟೆ, ಕಿವಿಯ ಕೆಳಭಾಗ ಎದೆ ಹೀಗೆ ಬಹಳಷ್ಟು ಕಡೆಗಳಲ್ಲಿ ತಿವಿದಿತ್ತು. ಇದರಿಂದ ದೇಹದ ಆಳಕ್ಕೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸಿದ ಮಾರ್ತಾಂಡ ಉಸಿರು ನಿಲ್ಲಿಸಿದ್ದಾನೆ.

ಮುಕ್ತ ಜೀಪ್ ಸಫಾರಿಗೆ ಬ್ರೇಕ್: ಇನ್ಮುಂದೆ ಬಸ್ ಸಫಾರಿಗೆ ಮಾತ್ರ ಅವಕಾಶ

ವನ್ಯಜೀವಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ತೆರೆದ ಜೀಪ್ ಸಫಾರಿಗೆ ಸಂಪೂರ್ಣ ನಿಷೇಧ ಹೇರಿದೆ. ಇನ್ಮುಂದೆ ಪ್ರವಾಸಿಗರಿಗೆ ಕೇವಲ ಬಸ್ ಸಫಾರಿಗೆ ಮಾತ್ರ ಅವಕಾಶ ನೀಡಲಾಗುವುದು. ಇತ್ತೀಚೆಗೆ ನಡೆದ ಎರಡು ಚಿರತೆ ದಾಳಿ ಪ್ರಕರಣಗಳು ಮತ್ತು ಕಳೆದ ನವೆಂಬರ್ ತಿಂಗಳಿನಲ್ಲಿ ಬಂಡೀಪುರ-ನಾಗರಹೊಳೆ ಭಾಗದಲ್ಲಿ ನಡೆದ ಮೂರು ಭೀಕರ ಹುಲಿ ದಾಳಿಗಳ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಇದ್ನೂ ಓದಿ: ಪ್ರವಾಸಿಗರಿಗೆ ಗುಡ್​ನ್ಯೂಸ್​​: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳ ನಿಷೇಧ ತೆರವು

ನಾಗಮಲೆ ಬಳಿ 10 ವರ್ಷದ ಬಾಲಕನನ್ನು ಚಿರತೆ ಬಲಿ ಪಡೆದ ಘಟನೆ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಅರಣ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಾರ, ಸದ್ಯ ಚಾಲ್ತಿಯಲ್ಲಿರುವ ಓಪನ್ ಜೀಪ್‌ಗಳಲ್ಲಿ ಪ್ರವಾಸ ಕೈಗೊಳ್ಳುವುದಿದ್ದರೆ ಕಡ್ಡಾಯವಾಗಿ ಒಡೆಯದ ಗ್ಲಾಸ್ ಅಥವಾ ಕಬ್ಬಿಣದ ಮೆಶ್ ಅಳವಡಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಇವರಿಲ್ಲದೆ ಕಥೆಯೇ ಇಲ್ಲ’; ಸುದೀಪ್ ಧ್ವನಿಯಲ್ಲಿ ಬಂತು ‘ಮ್ಯಾಂಗೋ ಪಚ್ಚ’ ಟೀಸರ್ – Kannada News | Mango Pachcha Teaser: Kichcha Sudeep’s Voice Introduces Sanchith Sanjeev’s Film

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 5ರಂದು ತೆರೆಗೆ ಬರುತ್ತಿದೆ. ಈಗ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​​​ನಲ್ಲಿ ‘ಮ್ಯಾಂಗೋ ಪಚ್ಚ’ದ ಪಾತ್ರಗಳನ್ನು ಪರಿಚಯಿಸಲಾಗಿದೆ. ಕಿಚ್ಚ ಸುದೀಪ್ ಧ್ವನಿಯಲ್ಲಿ ಟೀಸರ್ ಬಂದಿದೆ ಎಂಬುದು ವಿಶೇಷ. ಸಿನಿಮಾದ ಟ್ರೇಲರ್​ಗಾಗಿ ಅಭಿಮಾನಿಗಳು ಕಾದಿದ್ದಾರೆ.

‘ಮ್ಯಾಂಗೋ ಪಚ್ಚ’ ಚಿತ್ರದ ಕಥೆ ಸಾಗೋದು ಮೈಸೂರಿನಲ್ಲಿ. ಹಾಗಂತ ಪ್ರೆಸೆಂಟ್​​​ನಲ್ಲಿ ನಡೆಯೋ ಕಥೆಯಲ್ಲ. 2002ರ ಕಾಲಘಟ್ಟದ ಕಥೆ ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಇದೆ. ಈ ಸಿನಿಮಾದ ಟೀಸರ್​​​ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದೆ. ಮೈಸೂರು ಕೂಡ ಸಿನಿಮಾದ ಒಂದು ಪಾತ್ರದ ರೀತಿ ವರ್ತಿಸುವ ಸೂಚನೆಯನ್ನು ಟೀಸರ್​​ನಲ್ಲಿ ನೀಡಲಾಗಿದೆ. ಸಿನಿಮಾದಲ್ಲಿ ಬರುವ ಪಾತ್ರ ಹಾಗೂ ಮೈಸೂರು ಇಲ್ಲದೆ ಚಿತ್ರದ ಕಥೆಯೇ ಇಲ್ಲ ಎನ್ನುತ್ತಾರೆ ಕಿಚ್ಚ.

ಯುವ ಹೀರೋಗಳು ಬಂದು, ಚಿತ್ರರಂಗದಲ್ಲಿ ಮಿಂಚಿ ಸ್ಟಾರ್ ಹೀರೋಗಳಾಗಿ ಬೆಳೆದ ಅದೆಷ್ಟೋ ಉದಾಹರಣೆ ಇದೆ. ಸುದೀಪ್​ ಅವರಿಂದ ಆರಂಭಿಸಿ ಯಶ್​​ವರೆಗೆ ಎಲ್ಲರೂ ಯಂಗ್ ಹೀರೋ ಆಗಿ ಗುರುತಿಸಿಕೊಂಡು, ನಂತರ ತಮ್ಮನ್ನು ತಾವು ಸಾಬೀತು ಮಾಡಿ ಈಗ ಸ್ಟಾರ್ ಹೀರೋಗಳಾಗಿ ಬೆಳೆದಿದ್ದಾರೆ. ಸಂಚಿತ್ ಕೂಡ ಇದೇ ಸಾಲಿಗೆ ಸೇರುತ್ತಾರಾ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ದೃಶ್ಯಂ 3’ ಹೇಗಿದೆ? ನೆಟ್ಟಿಗರು ಕೊಟ್ಟ ಪಾರದರ್ಶಕ ವಿಮರ್ಶೆ ಇಲ್ಲಿದೆ

‘ಸುಪ್ರುಯಾನ್ವಿ ಪಿಕ್ಚರ್ಸ್ ಸ್ಟುಡಿಯೋ’ ಹಾಗೂ ಕೆಆರ್​​ಜಿ ಒಟ್ಟಾಗಿ ‘ಮ್ಯಾಂಗೋ ಪಚ್ಚ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಸಂಚಿತ್ ಸಂಜೀವ್ ಜೊತೆ ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್​, ಮಯೂರ್ ಪಟೇಲ್, ಹರಿಣಿ ಶ್ರೀಕಾಂತ್, ಹಂಸ ನಾರಾಯಣಸ್ವಾಮಿ, ಉಗ್ರಂ ಮಂಜು ಸಿನಿಮಾದಲ್ಲಿ ನಟಿಸಿದ್ದಾರೆ. ವಿವೇಕ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪೋಷಕರ ವಿರುದ್ಧ ಮೊದಲ ಬಾರಿಗೆ ಕ್ರಮ, ಸಿಬಿಐ ವಶಕ್ಕೆ ಪಡೆದಿರುವ ಡಾ. ಮನೋಜ್ ಶಿರೂರೆ ಯಾರು? – Kannada News | Latur Doctor Becomes First Parent Arrested in NEET UG 2026 Leak Probe

ಪುಣೆ, ಮೇ 21: ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಯಾವುದೇ ಹಂತಕ್ಕಾದರೂ ಹೋಗಲು ಸಿದ್ಧರಾಗುತ್ತಾರೆ. ಆದರೆ, ಇಲ್ಲೊಬ್ಬರು ಹೆಸರಾಂತ ವೈದ್ಯರು ತಮ್ಮ ಮಗನಿಗಾಗಿ ನೀಟ್(NEET) ಪರೀಕ್ಷೆಯ ಅಕ್ರಮದ ದಾರಿ ಹಿಡಿದು, ಕೊನೆಗೆ ಕಂಬಿ ಎಣಿಸುವಂತಾಗಿದೆ. ಸಿಬಿಐ ಕೈಗೆ ಸಿಕ್ಕಿಬಿದ್ದಿರುವ ಆ ವೈದ್ಯ ಪೋಷಕನೇ ಡಾ.ಮನೋಜ್ ಶಿರೂರೆ.

ಯಾರಿದು ಡಾ. ಮನೋಜ್ ಶಿರೂರೆ?
ಡಾ. ಮನೋಜ್ ಶಿರೂರೆ ಅವರು ಮಹಾರಾಷ್ಟ್ರದ ಲಾತೂರ್ ಮೂಲದ ಪ್ರಖ್ಯಾತ ಮಕ್ಕಳ ತಜ್ಞರು (Pediatrician). ಲಾತೂರಿನ ಓಲ್ಡ್ ಔಸಾ ರಸ್ತೆ ವಿಭಾಗದಲ್ಲಿ ಇವರಿಗೆ ಸೇರಿದ ‘ಸಿದ್ಧಿವಿನಾಯಕ ಮಕ್ಕಳ ಆಸ್ಪತ್ರೆ’ ಇದ್ದು, ಇದು ಅತ್ಯಂತ ಜನಪ್ರಿಯ ಆಸ್ಪತ್ರೆಯಾಗಿದೆ. ಸಮಾಜದಲ್ಲಿ ಉತ್ತಮ ಗೌರವ ಹೊಂದಿದ್ದ ವೈದ್ಯರೇ ಈಗ ಪೇಪರ್ ಲೀಕ್ ಹಗರಣದಲ್ಲಿ ಸಿಕ್ಕಿಬಿದ್ದಿರುವುದು ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.

ನಾಲ್ಕೂವರೆ ಗಂಟೆಗಳ ತೀವ್ರ ವಿಚಾರಣೆ ಮತ್ತು ಅರೆಸ್ಟ್
ನೀಟ್ ಹಗರಣದ ಬೆನ್ನುಬಿದ್ದಿರುವ ಸಿಬಿಐ ಅಧಿಕಾರಿಗಳು ಕಳೆದ ಎಂಟು ದಿನಗಳಿಂದ ಲಾತೂರ್‌ನಲ್ಲೇ ಬೀಡುಬಿಟ್ಟಿದ್ದಾರೆ. ಈ ಹಗರಣದ ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್‌ನನ್ನು ಮೊದಲು ತೀವ್ರ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದ ಸಿಬಿಐಗೆ, ಆತನಿಂದ ಮಹತ್ವದ ಸುಳಿವು ಸಿಕ್ಕಿತ್ತು. ಮೋಟೆಗಾಂವ್ಕರ್ ನೀಡಿದ ಸಂಪರ್ಕಗಳ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ಸಂಜೆ ನೇರವಾಗಿ ಡಾ. ಮನೋಜ್ ಶಿರೂರೆ ಅವರ ಆಸ್ಪತ್ರೆಯ ಮೇಲೆ ದಾಳಿ ಮಾಡಿದರು.

ಆಸ್ಪತ್ರೆಯಲ್ಲೇ ವೈದ್ಯರನ್ನು ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ತೀವ್ರವಾಗಿ ತನಿಖೆ ನಡೆಸಲಾಯಿತು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕೊನೆಗೆ ವೈದ್ಯರು ತಾವು ಮಾಡಿದ ಅಪರಾಧವನ್ನು ಒಪ್ಪಿಕೊಂಡರು. ತಕ್ಷಣವೇ ಸಿಬಿಐ ಅಧಿಕಾರಿಗಳು ಅವರ ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ ಬಂಧಿಸಿ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ

ಆರೋಪವೇನು?
ಡಾ. ಮನೋಜ್ ಶಿರೂರೆ ಅವರು ತಮ್ಮ ಮಗನಿಗೆ ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿ ಸಹಾಯ ಮಾಡಲು ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್‌ನೊಂದಿಗೆ ಕೈಜೋಡಿಸಿದ್ದರು. ಮಗನಿಗಾಗಿ ಪ್ರಶ್ನೆಪತ್ರಿಕೆ ಮತ್ತು ಅಗತ್ಯ ದಾಖಲೆಗಳನ್ನು ಮೋಟೆಗಾಂವ್ಕರ್‌ನಿಂದ ಪಡೆದ ಗಂಭೀರ ಆರೋಪ ಇವರ ಮೇಲಿದೆ.

ಮೊಬೈಲ್ ವಶ, ಬ್ಯಾಂಕ್ ಖಾತೆಗಳ ಮೇಲೆ ಕಣ್ಣು
ಬಂಧನದ ವೇಳೆ ಸಿಬಿಐ ಅಧಿಕಾರಿಗಳು ಡಾ. ಶಿರೂರೆ ಅವರ ಮೊಬೈಲ್ ಫೋನ್ ಮತ್ತು ಆಸ್ಪತ್ರೆಯಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ ಮೂಲಕ ಅವರು ಮೋಟೆಗಾಂವ್ಕರ್ ಜೊತೆ ಎಷ್ಟು ದಿನಗಳಿಂದ ಸಂಪರ್ಕದಲ್ಲಿದ್ದರು? ನೀಟ್ ಪೇಪರ್ ಅನ್ನು ತಮ್ಮ ಮಗನಿಗೆ ಮಾತ್ರ ಬಳಸಿದ್ದರೇ ಅಥವಾ ಬೇರೆ ಯಾರಿಗಾದರೂ ಮಾರಾಟ ಮಾಡಿ ವೈರಲ್ ಮಾಡಿದ್ದರೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಅಲ್ಲದೆ, ಪೇಪರ್ ಪಡೆಯಲು ಇವರಿಬ್ಬರ ಮಧ್ಯೆ ಎಷ್ಟು ಕೋಟಿ ರೂಪಾಯಿಗಳ ಡೀಲ್ ನಡೆದಿತ್ತು ಎಂಬುದನ್ನು ಪತ್ತೆಹಚ್ಚಲು ಸಿಬಿಐ ಅಧಿಕಾರಿಗಳು ವೈದ್ಯರ ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ. ಹಗರಣದಲ್ಲಿ ಪೋಷಕರ ವಿರುದ್ಧ ಸಿಬಿಐ ಕೈಗೊಂಡ ಮೊದಲ ಕ್ರಮ ಇದಾಗಿದ್ದು, ಅಡ್ಡದಾರಿ ಹಿಡಿಯುವ ಇತರೆ ಪೋಷಕರಿಗೂ ಇದೊಂದು ಬಲವಾದ ಎಚ್ಚರಿಕೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ, ವಿಡಿಯೋ ನೋಡಿ

ಬೆಂಗಳೂರು, (ಮೇ 21): ಸೋಷಿಯಲ್​ ಮೀಡಿಯಾದಲ್ಲಿ ಈಗ ಒಂದೇ ಸದ್ದು ಅದೇ ಕಾಕ್ರೋಚ್​​ ಜನತಾ ಪಾರ್ಟಿ(cockroach janata party). ರಾತ್ರೋರಾತ್ರಿ ಜನ್ಮತಾಳಿದ ಕಾಕ್ರೋಚ್ ಪಾರ್ಟಿ, ಭಾರಿ ಸಂಚಲನ ಮೂಡಿಸಿದೆ. ಮಜಾ ಅಂದ್ರೆ, ಬರೀ ಸಾಮಾನ್ಯ ಯುವಕರಷ್ಟೇ ಅಲ್ಲ, ಈಗ ಗ್ಲಾಮರ್ ದುನಿಯಾದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ಮಂದಿ ಕೂಡ ಈ ಜಿರಳೆ ಪಕ್ಷಕ್ಕೆ ಜೈ ಎನ್ನುತ್ತಾ ಸಾಲಾಗಿ ಬಂದು ಸೇರಿಕೊಳ್ಳುತ್ತಿದ್ದಾರೆ. ಇನ್ನು ಇತ್ತ ಬೆಂಗಳೂರಿನ ಫ್ರೀಡಂಪಾರ್ಕ್​​ ನಲ್ಲಿ ನಡೆದ ಯುವ ಕಾಂಗ್ರೆಸ್​ ಪ್ರತಿಭಟನೆ ವೇಳೆ ಕೈ ನಾಯಕರು ಕಾಕ್ರೋಚ್ ಟಿಶರ್ಟ್ ಬಿಡುಗಡೆ ಮಾಡಿದರು.

ಇದನ್ನೂ ಓದಿ: Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

Source link

BOB Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 5,000 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಅರ್ಹರು – Kannada News | BOB Apprentice Recruitment: 5000 Banking Jobs for Graduates Apply by June 8

ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶImage Credit source: gemini ai

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಪದವೀಧರರಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ (Apprentice) ಹುದ್ದೆಗಳ ಭರ್ತಿಗಾಗಿ ಅರ್ಹ ಭಾರತೀಯ ನಾಗರಿಕರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಕೆಳಗಿನಂತಿದೆ.

ಒಟ್ಟು ಹುದ್ದೆಗಳು ಮತ್ತು ಶೈಕ್ಷಣಿಕ ಅರ್ಹತೆ:

ಬ್ಯಾಂಕ್ ಆಫ್ ಬರೋಡಾ ಈ ಅಧಿಸೂಚನೆಯ ಮೂಲಕ ದೇಶಾದ್ಯಂತ ಒಟ್ಟು 5,000 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Degree) ಮುಗಿಸಿರಬೇಕು.

ವಯೋಮಿತಿ ಮತ್ತು ಸಡಿಲಿಕೆ

ಮೇ 1, 2026ರ ವೇಳೆಗೆ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 28 ವರ್ಷಗಳನ್ನು ಮೀರಬಾರದು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದ್ದು, ಅದರ ವಿವರ ಇಲ್ಲಿದೆ:

  • SC / ST ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ
  • OBC ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ
  • PwBD ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರ:

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಸಾಮಾನ್ಯ (General), EWS ಮತ್ತು OBC ಪುರುಷ ಅಭ್ಯರ್ಥಿಗಳಿಗೆ: ರೂ. 800
  • ಸಾಮಾನ್ಯ, EWS ಮತ್ತು OBC ಮಹಿಳಾ / ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ರೂ. 600
  • SC, ST ಮತ್ತು PwBD ಅಭ್ಯರ್ಥಿಗಳಿಗೆ: ರೂ. 200

ಆಯ್ಕೆ ವಿಧಾನ ಮತ್ತು ಪರೀಕ್ಷಾ ಶೈಲಿ:

ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಆನ್‌ಲೈನ್ ಲಿಖಿತ ಪರೀಕ್ಷೆ (Objective Type): ಈ ಪರೀಕ್ಷೆಯನ್ನು ‘ರಿಮೋಟ್ ಪ್ರೊಕ್ಟರ್ಡ್’ (Remote Proctored) ಮಾದರಿಯಲ್ಲಿ ನಡೆಸಲಾಗುತ್ತದೆ. ಅಂದರೆ, ಅಭ್ಯರ್ಥಿಗಳು ತಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸಿ ಮನೆಯಿಂದಲೇ ಪರೀಕ್ಷೆ ಬರೆಯಬಹುದು.
  • ದಾಖಲೆ ಪರಿಶೀಲನೆ (Document Verification)
  • ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (Local Language Proficiency Test)

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ತರಬೇತಿ ಅವಧಿ ಮತ್ತು ಮಾಸಿಕ ಸ್ಟೈಫಂಡ್:

ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆಯಲಿದ್ದಾರೆ. ಈ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 15,000 ಸ್ಟೈಫಂಡ್ (Stipend) ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಭತ್ಯೆಗಳು (Allowances) ಅನ್ವಯಿಸುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

  • ಪ್ರಮುಖ ದಿನಾಂಕ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್ 8, 2026 ಕೊನೆಯ ದಿನವಾಗಿದೆ.
  • ಹಂತ 1: ಅರ್ಹ ಅಭ್ಯರ್ಥಿಗಳು ಮೊದಲು ಸರ್ಕಾರದ ಅಧಿಕೃತ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಾದ NAPS ಅಥವಾ NATS ಮೂಲಕ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
  • ಹಂತ 2: ನೋಂದಣಿಯ ನಂತರ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಜೂನ್ 8, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಯಲ್ಲಿ ಬರಲಿದೆ ಹೊಸ ರೂಪದ ‘ಧುರಂಧರ್’; ಪ್ರೇಕ್ಷಕರಿಗೆ ಶುರುವಾಯ್ತು ಗೊಂದಲ – Kannada News | Ranveer Singh Dhurandhar Raw unseen version release Date Netflix Jio Hotstar confusion

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ನಟನೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಸದ್ಯ ಒಟಿಟಿ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ಇತ್ತೀಚೆಗಷ್ಟೇ ವಿದೇಶಗಳಲ್ಲಿ ಒಟಿಟಿ ಮೂಲಕ ರಿಲೀಸ್ ಆಗಿ ಭಾರಿ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಈಗ ಚಿತ್ರತಂಡ ಹಾಗೂ ನೆಟ್‌ಫ್ಲಿಕ್ಸ್ (Netflix) ಪ್ರೇಕ್ಷಕರಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದೆ. ‘ಧುರಂಧರ್’ (Dhurandhar) ಚಿತ್ರದ ಮೊದಲ ಭಾಗವು, ಯಾವುದೇ ಕಟ್‌ ಇಲ್ಲದೇ, ಇದುವರೆಗೆ ಯಾರೂ ನೋಡಿರದ ದೃಶ್ಯಗಳೊಂದಿಗೆ ಮತ್ತೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲು ಸಜ್ಜಾಗಿದೆ.

ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಪ್ರಕಟಣೆ ಹಂಚಿಕೊಂಡಿದೆ. ಥಿಯೇಟರ್‌ನಲ್ಲಿ ರಿಲೀಸ್ ಆದಾಗ ಕತ್ತರಿ ಬಿದ್ದಿದ್ದ ಹಲವು ಪ್ರಮುಖ ಮತ್ತು ರಗಡ್ ದೃಶ್ಯಗಳನ್ನು ಒಳಗೊಂಡ ವಿಸ್ತೃತ ಆವೃತ್ತಿ ಇದಾಗಿರಲಿದೆ ಎಂದು ತಿಳಿಸಿದೆ. ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, ‘ಈ ಆವೃತ್ತಿಯನ್ನು ಮೇ 22ರಿಂದ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವೀಕ್ಷಿಸಿ’ ಎಂದು ಬರೆದುಕೊಂಡಿದೆ.

ಒಂದೆಡೆ ಅಭಿಮಾನಿಗಳು ಈ ‘ಅನ್‌ಕಟ್’ ಆವೃತ್ತಿ ನೋಡಲು ಕಾಯುತ್ತಿದ್ದರೆ, ಮತ್ತೊಂದೆಡೆ ಪ್ರೇಕ್ಷಕರಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ‘ಧುರಂಧರ್’ ಎರಡನೇ ಭಾಗದ ಒಟಿಟಿ ರಿಲೀಸ್ ಅಪ್ಡೇಟ್. ‘ಧುರಂಧರ್: ದಿ ರಿವೇಂಜ್’ ಈಗಾಗಲೇ ಮೇ 14ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಆದರೆ, ಭಾರತದಲ್ಲಿ ಇದರ ಪ್ರೀಮಿಯರ್ ಜೂನ್ 4ರಂದು ‘ಜಿಯೋ ಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲಿದೆ.

ಈ ಗೊಂದಲದಿಂದಾಗಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ಒಂದು ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಬಂದರೆ, ಮತ್ತೊಂದು ಭಾಗ ಜಿಯೋಸ್ಟಾರ್‌ನಲ್ಲಿ ಬರುತ್ತಿದೆ, ನಮಗಂತೂ ಫುಲ್ ಗೊಂದಲ’ ಎಂದು ಜನರು ಕಮೆಂಟ್ ಮಾಡಿದ್ದಾರೆ. ‘ಇದನ್ನು ಮೊದಲೇ ರಿಲೀಸ್ ಮಾಡಬಾರದಿತ್ತೇ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ‘ನಮಗೆ ಭಾಗ 2 ಕೂಡ ನೆಟ್‌ಫ್ಲಿಕ್ಸ್‌ನಲ್ಲೇ ಬೇಕಿತ್ತು’ ಎಂದು ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಚಿತ್ರದಲ್ಲಿ ದೇಶದ ಭದ್ರತೆಯ ರಹಸ್ಯ ಮಾಹಿತಿ ಸೋರಿಕೆ ಆರೋಪ; ಹೈಕೋರ್ಟ್ ಮಹತ್ವದ ಆದೇಶ

ಯಾರಿಗೆ ಯಾವ ಒಟಿಟಿಯಲ್ಲಿ ಸಿನಿಮಾ ಸಿಗಲಿದೆ ಎಂಬ ಗೊಂದಲ ಏನೇ ಇದ್ದರೂ, ಮೇ 22ರಿಂದ ರಣವೀರ್ ಸಿಂಗ್ ಅವರ ರಗಡ್ ಆ್ಯಕ್ಷನ್ ದೃಶ್ಯಗಳನ್ನು ಯಾವುದೇ ಕಟ್ ಇಲ್ಲದೇ ನೋಡಲು ನೆಟ್‌ಫ್ಲಿಕ್ಸ್ ಪ್ರೇಕ್ಷಕರಂತೂ ಕಾತರರಾಗಿದ್ದಾರೆ. ಒಟಿಟಿ ಪ್ರೇಕ್ಷಕರು ಈ ವರ್ಷನ್ ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್​​ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು? – Kannada News | Raja Shivaji Box Office: Riteish Deshmukh’s Dream Film Hits 100 Cr, Breaks Records

ನಟ ಮತ್ತು ನಿರ್ದೇಶಕ ರಿತೇಶ್ ದೇಶಮುಖ್ ಅವರ ಹತ್ತು ವರ್ಷಗಳ ಕನಸಿನ ಚಿತ್ರ ‘ರಾಜ ಶಿವಾಜಿ’ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ವೀರಗಾಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರ್ಜರಿ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದರೂ, ಮರಾಠಿ ಆವೃತ್ತಿಯು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮರಾಠಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಜೆಟ್ ಮತ್ತು ಒಟ್ಟು ಗಳಿಕೆ:

ಚಿತ್ರದ ಒಟ್ಟು ಬಜೆಟ್: ಸುಮಾರು 75 ಕೋಟಿ ರೂ.

ಭಾರತದಲ್ಲಿನ ಒಟ್ಟು ಗಳಿಕೆ (Gross): 102.90 ಕೋಟಿ ರೂ.

ನಿವ್ವಳ ಲಾಭ (Net Profit): 87 ಕೋಟಿ ರೂ.

ವಿದೇಶಿ ಮಾರುಕಟ್ಟೆಯಲ್ಲಿನ ಗಳಿಕೆ: 4.10 ಕೋಟಿ ರೂ.

ಚಿತ್ರಮಂದಿರಗಳ ಗಳಿಕೆಯ ಸಂಪೂರ್ಣ ಹಣ ನಿರ್ಮಾಪಕರಿಗೆ ಸೇರುವುದಿಲ್ಲ. ಇದರಲ್ಲಿ ಸುಮಾರು ಅರ್ಧದಷ್ಟು ಮಾತ್ರ ಅವರ ಕೈ ಸೇರುತ್ತದೆ. ಆದಾಗ್ಯೂ, ಒಟಿಟಿ (OTT) ಮತ್ತು ಟಿವಿ ಸ್ಯಾಟಲೈಟ್ ಹಕ್ಕುಗಳ ಮಾರಾಟವನ್ನು ಸೇರಿಸಿದರೆ, ಚಿತ್ರವು ಈಗಾಗಲೇ ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.

ದಿನಾವಾರು ಗಳಿಕೆಯ ವಿವರ (ಮೊದಲ ಎರಡು ವಾರಗಳು)
ಚಿತ್ರವು ಬಿಡುಗಡೆಯಾದ ಮೊದಲ ದಿನದಿಂದಲೇ ‘ಮೌತ್ ಪಬ್ಲಿಸಿಟಿ’ (ಪ್ರೇಕ್ಷಕರ ಮೆಚ್ಚುಗೆಯ ಮಾತು) ನೆರವಿನಿಂದ ಗಲ್ಲಾಪೆಟ್ಟಿಗೆಯಲ್ಲಿ ಭದ್ರವಾಗಿ ಕಚ್ಚಿ ಕುಳಿತಿದೆ.

ಮೊದಲ ವಾರದ ಗಳಿಕೆ (ಒಟ್ಟು: 52.65 ಕೋಟಿ ರೂ.)

1ನೇ ದಿನ: 11.35 ಕೋಟಿ ರೂ.

2ನೇ ದಿನ: 10.55 ಕೋಟಿ ರೂ.

3ನೇ ದಿನ: 12.00 ಕೋಟಿ ರೂ.

4ನೇ ದಿನ: 5.60 ಕೋಟಿ ರೂ.

5ನೇ ದಿನ: 4.90 ಕೋಟಿ ರೂ.

6ನೇ ದಿನ: 4.25 ಕೋಟಿ ರೂ.

7ನೇ ದಿನ: 4.00 ಕೋಟಿ ರೂ.

ಎರಡನೇ ವಾರದ ಪ್ರಮುಖ ದಿನಗಳ ಗಳಿಕೆ:

9ನೇ ದಿನ: 5.60 ಕೋಟಿ ರೂ.

1೦ನೇ ದಿನ: 6.80 ಕೋಟಿ ರೂ.

11ನೇ ದಿನ: 2.40 ಕೋಟಿ ರೂ.

12ನೇ ದಿನ: 2.50 ಕೋಟಿ ರೂ.

13ನೇ ದಿನ: 1.90 ಕೋಟಿ ರೂ.

14ನೇ ದಿನ: 1.90 ಕೋಟಿ ರೂ.

ಪ್ರಸ್ತುತ ಚಿತ್ರವು ಯಶಸ್ವಿಯಾಗಿ ಮೂರು ವಾರಗಳನ್ನು ಪೂರೈಸಿದ್ದು, ರಿತೇಶ್ ದೇಶಮುಖ್ ಅವರ ವೃತ್ತಿಜೀವನದ ಅತ್ಯಂತ ಯಶಸ್ವಿ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾವಾಗಿ ಹೊರಹೊಮ್ಮಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮುಗ್ಧ ಮನಸ್ಸಿನ ಶುದ್ಧ ಭಕ್ತಿ: ದೇವರ ಮುಂದೆ ಕುಳಿತು ಪೂಜೆ ಮಾಡುತ್ತಿರುವ ಪುಟಾಣಿ – Kannada News |  A little boy worshipping before God, video goes viral

ಪುಟಾಣಿ (little kids) ಮಕ್ಕಳು ಏನು ಮಾಡಿದ್ರು ನೋಡೋಕೆ ಚಂದ. ಈ ಪುಟಾಣಿ ತೊದಲು ನುಡಿ, ನಡೆ ನುಡಿ ನೋಡುವುದೇ ಖುಷಿ. ಸ್ನಾನ ಮಾಡಿ ಬಂದು ದೇವರಿಗೆ ಕೈ ಮುಗಿಯುವ ಅಭ್ಯಾಸವನ್ನು ಮಕ್ಕಳಿಗೆ ಹೆತ್ತವರು ಹೇಳಿ ಕೊಡುತ್ತಾರೆ. ದೇವರ ಮುಂದೆ ನಿಂತು ನಮಸ್ಕಾರ ಮಾಡುವ ಪುಟ್ಟ ಮಕ್ಕಳನ್ನು ಕಂಡಾಗ ಖುಷಿಯೆನಿಸುತ್ತದೆ. ಮಕ್ಕಳ ಮುಗ್ಧ ಭಕ್ತಿ ಹಾಗೂ ಶುದ್ಧ ಪ್ರಾರ್ಥನೆ ಮನಸ್ಸಿಗೆ ಖುಷಿ ನೀಡುತ್ತದೆ. ಇದೀಗ ಈ ಪುಟಾಣಿ ಪೂಜೆ ಮಾಡೋದ್ರಲ್ಲಿ ಬ್ಯುಸಿಯಾಗಿದೆ. ಊದು ಬತ್ತಿ ಹಿಡಿದು ಶುದ್ಧ ಮನಸ್ಸಿನಿಂದ ದೇವರ ಮುಂದೆ ಬೇಡಿಕೊಂಡಿದೆ. ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ಪುಟ್ಟ ಮಗುವಿನ ವಿಡಿಯೋ ವೈರಲ್ ಆಗಿದೆ. ಈ ಪುಟಾಣಿಯ ಶುದ್ಧ ಹಾಗೂ ನಿಷ್ಕಲ್ಮಶ ಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪೂಜಾ ಚಂಡೆಲ್ (Pooja Chandel) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್ ನಲ್ಲಿ ಪುಟಾಣಿಯೊಂದು ಪೂಜೆ ಮಾಡುತ್ತಿದೆ. ಊದು ಬತ್ತಿ ಹಿಡಿದುಕೊಂಡು ಜೈ ಗಣೇಶ ಜೈ ಗಣೇಶ ಎಂದು ಪ್ರಾರ್ಥಿಸುತ್ತಾ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಪುಟ್ಟ ಮಗುವಿನ ಪಕ್ಕದಲ್ಲಿದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಗಣಪತಿ ಬಪ್ಪ ಮೊರಿಯಾ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, ಜೈ ಗಣೇಶಜಿ ಮಹಾರಾಜ್ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka 2nd PUC-2 Result 2026: ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ – Kannada News | Karnataka 2nd PUC Exam 2 Result 2026 (Declared): How to Check Scorecard Online

ಬೆಂಗಳೂರು, (ಮೇ 21): 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶವನ್ನು (Karnataka 2nd PUC Exam 2 Result 2026)  ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಗುರುವಾರ (ಮೇ 21) ಪ್ರಕಟಿಸಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಒಟ್ಟು 80,535 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮುಖ್ಯಾಂಶಗಳು

  • ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ
  • ಕಲಾ, ವಾಣಿಜ್ಯ, ವಿಜ್ಞಾನದಲ್ಲಿ 80,535 ವಿದ್ಯಾರ್ಥಿಗಳು ಹಾಜರು
  • ಈ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣ

ಫಲಿತಾಂಶದ ವಿವರ

ಪಿಯುಸಿ ಎರಡನೇ ಪರೀಕ್ಷೆ-2 ಪರೀಕ್ಷೆಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ಒಟ್ಟು 80,535 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 36,764 ವಿದ್ಯಾರ್ಥಿಗಳು ತೇಗರ್ಡೆಯಾಗಿದ್ದಾರೆ. ಇನ್ನು ಪರೀಕ್ಷೆ ಬರೆದಿದ್ದ 43,311 ಬಾಲಕರಲ್ಲಿ 19367 ವಿದ್ಯಾರ್ಥಿಗಳು ಪಾಸಾಗಿದ್ದರೆ, 37,224 ಬಾಲಕಿಯರ ಪೈಕಿ 17,397 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ಪರಿಶೀಲಿಸುವುದು ಹೇಗೆ?

ಮಂಡಳಿಯ ಅಧಿಕೃತ ವೆಬ್ ಸೈಟ್ kseab.karnataka.gov.in ಮತ್ತು karresults.nic.in ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕುವ ಮೂಲಕ ವೀಕ್ಷಿಸಬಹುದು. 2026ರ ದ್ವಿತೀಯ ಪಿಯುಸಿ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

Published On – 2:19 pm, Thu, 21 May 26

Source link