All posts by nagaraj11081993

ಚಿಂತಿತರಾಗಬೇಡಿ, ಬೇಕಾದಷ್ಟು ಎಲ್​ಪಿಜಿ ಸಂಗ್ರಹವಿದೆ; ಸರ್ಕಾರದಿಂದ ಗ್ರಾಹಕರಿಗೆ ಮನವಿ

ಚಿಂತಿತರಾಗಬೇಡಿ, ಬೇಕಾದಷ್ಟು ಎಲ್​ಪಿಜಿ ಸಂಗ್ರಹವಿದೆ; ಸರ್ಕಾರದಿಂದ ಗ್ರಾಹಕರಿಗೆ ಮನವಿ

ನವದೆಹಲಿ, ಮಾರ್ಚ್ 13: ಭಾರತದ ಅನೇಕ ನಗರಗಳಲ್ಲಿ ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಅಭಾವ ಎದುರಾಗುತ್ತಿದ್ದಂತೆ ದಿನಬಳಕೆಯ ಎಲ್​ಪಿಜಿ ಸಿಲಿಂಡರ್​ಗಳನ್ನು ಬುಕ್ ಮಾಡುವ ಗ್ರಾಹಕರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಗಕರಿಗೆ ಸ್ಪಷ್ಟನೆ ನೀಡಿದ್ದು, ಬೇಕಾದಷ್ಟು ಸಿಲಿಂಡರ್ ಸ್ಟಾಕ್ ಇರುವುದರಿಂದ ಯಾರೂ ಗೊಂದಲಕ್ಕೊಳಗಾಗಬೇಡಿ, ಚಿಂತಿತರಾಗಬೇಡಿ, ಆತುರದಿಂದ ಸಿಲಿಂಡರ್ ಬುಕ್ ಮಾಡಬೇಡಿ ಎಂದು ಸೂಚಿಸಿದೆ.

Source link

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಬೆಂಗಳೂರು, ಮಾರ್ಚ್​​ 13: ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿದೆ. ಜನ್ಮ ನೀಡಿದ ತಾಯಿ ಅಂದ್ರೆ ನಡೆದಾಡುವ ದೇವರು ಎಂದು ನಾವು ಪೂಜಿಸುತ್ತೇವೆ. ಆದರೆ ಇಲ್ಲೊಬ್ಬ ಮಗ ಆಸ್ತಿಗಾಗಿ ಅಂತಹ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪಾಪಿ ಮಗನ ಕ್ರೌರ್ಯಕ್ಕೆ ವೃದ್ಧೆ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀ ಎಂಬವರು ಗಂಭೀರ ಗಾಯಗೊಂಡಿದ್ದಾರೆ.

ಜಯನಗರದ ನಿವಾಸಿ ಲಕ್ಷ್ಮೀ ಹಾಗೂ ಸಣ್ಣಸಿದ್ದಪ್ಪ ದಂಪತಿಗೆ 3 ಜನ ಗಂಡು ಮಕ್ಕಳು. ಈ ಪೈಕಿ ಲಕ್ಷ್ಮೀ ಅವರ ಪತಿ ಸಣ್ಣಸಿದ್ದಪ್ಪ ಮತ್ತು ಎರಡನೇ ಮಗ ಸುರೇಶ್​​ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕುಟುಂಬ ಜಯನಗರದಲ್ಲಿ ಮನೆ, ಬನ್ನೇರುಘಟ್ಟ ಬಳಿ ಫ್ಯಾಕ್ಟರಿ ಮತ್ತು ಶಿರಾ ಬಳಿ 7 ಎಕರೆ ಜಮೀನು ಹೊಂದಿದ್ದು, ಆಸ್ತಿಗಾಗಿ ಮೊದಲನೇ ಮಗ ರಮೇಶ್ ಹಾಗೂ ಮೂರನೇ ಮಗ ಪ್ರಕಾಶ್ ನಡುವೆ ಕಲಹ ನಡೆದಿತ್ತು. ಆಸ್ತಿ ಭಾಗ ಆಗಬೇಕೆಂದು ಮೂರನೇ ಮಗ ಪ್ರಕಾಶ್ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. 2016ರಿಂದಲೂ ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ; ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

ಈ ನಡುವೆ ನಿನ್ನೆ ಜಯನಗರದ 9ನೇ ಬ್ಲಾಕ್​​ನ ಮನೆ ಬಳಿ ಬಂದ ಪ್ರಕಾಶ್ ಏಕಾಏಕಿ ಮನೆ ರಿನೋವೇಷನ್ ಮಾಡಲು ಮುಂದಾಗಿದ್ದಾನೆ. ಆಗ ತಾಯಿ ಕೋರ್ಟ್​​ನಲ್ಲಿ ಕೇಸ್ ಇರುವಾಗ ಇದೆಲ್ಲ ಯಾಕೆ ಮಾಡ್ತೀಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಮಗ ಪ್ರಕಾಶ್ ತಾಯಿ ಮನೆಯ ವಸ್ತುಗಳನ್ನೆಲ್ಲ ಒಡೆದು ಹಾಳುಮಾಡಿದ್ದಾನೆ. ಜೊತೆಗೆ ವಾಕಿಂಗ್ ಸ್ಟಿಕ್​​ನಿಂದ ತಲೆಗೆ ಹೊಡೆದಿದ್ದಾನೆ‌‌. ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಲಕ್ಷ್ಮೀ ಅವರನ್ನು ಮೊದಲ ಮಗ ರಮೇಶ್​​ ಆಸ್ಪತ್ರೆಗೆ ದಾಖಲಿಸಿದ್ದು, ಜಯನಗರ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. ಸದ್ಯ FIR ದಾಖಲಿಸಿರೋ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು

ಕಾರವಾರ, ಮಾರ್ಚ್​ 13: ಯುಎಇಯಿಂದ ಡಾಂಬರು ಹೊತ್ತು ಕಾರವಾರ ಬಂದರಿಗೆ ಚೆಂಗ್ ಎಕ್ಸ್ ಎಂಬ ಹಡಗು ಆಗಮಿಸಿದೆ. ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಹರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧಗಳ ಕಾರಣದಿಂದ ಪೆಟ್ರೋಲಿಯಂ ಮತ್ತು ಕಚ್ಚಾ ಡಾಂಬರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ನಿರ್ಬಂಧದ ನಡುವೆಯೂ, ಮಾರ್ಚ್ 3ರಂದು ಯುಎಇಯಿಂದ ಹೊರಟಿದ್ದ ಈ ಹಡಗು ಮತ್ತೊಂದು ಮಾರ್ಗದ ಮೂಲಕ ಸುರಕ್ಷಿತವಾಗಿ ಬಂದರನ್ನು ತಲುಪಿದೆ. ಸರಿಸುಮಾರು 5,500 ಟನ್ ಸಾಮರ್ಥ್ಯದ ಈ ಹಡಗು 3,100 ಟನ್ ಡಾಂಬರನ್ನು ಹೊತ್ತು ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಮತ್ತು ತಮಿಳು ನಟ ದಳಪತಿ ವಿಜಯ್ (Thalapthy Vijay) ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಇಬ್ಬರೂ ಜೊತೆಯಾಗಿ ಆಗಮಿಸಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತ್ರಿಶಾ ಅವರಿಗೆ ವರದಿಗಾರರು ವಿಜಯ್ ಕುರಿತಾದ ಪ್ರಶ್ನೆಗಳಿಂದ ಮುತ್ತಿಗೆ ಹಾಕಿದ್ದಾರೆ. ಆದರೆ ತ್ರಿಶಾ (Trisha Krishnan) ಅವರು ಯಾವುದೇ ಉತ್ತರ ನೀಡದೇ ಮೌನ ತಾಳಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತ್ರಿಶಾ, ಬಿಳಿ ಟಿ-ಶರ್ಟ್, ಕಪ್ಪು ಪ್ಯಾಂಟ್ ಮತ್ತು ಡೆನಿಮ್ ಜಾಕೆಟ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಅವರು ಒಳಗೆ ನಡೆಯುತ್ತಿದ್ದಂತೆ, ಅಲ್ಲಿದ್ದ ವರದಿಗಾರರು ವಿಜಯ್ ಜೊತೆಗಿನ ಸಂಬಂಧ ಮತ್ತು ಇತ್ತೀಚಿನ ವಿವಾದಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು. ಆದರೆ, ತ್ರಿಶಾ ಯಾವುದೇ ಪ್ರಶ್ನೆಗೂ ಪ್ರತಿಕ್ರಿಯಿಸದೆ, ಅತ್ಯಂತ ಶಾಂತವಾಗಿ ಮತ್ತು ಗಂಭೀರವಾಗಿ ನಡೆದು ಹೋದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮಗನ ಮದುವೆಯ ರಿಸೆಪ್ಷನ್‌ನಲ್ಲಿ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಇಬ್ಬರೂ ಕ್ರೀಮ್ ಮತ್ತು ಗೋಲ್ಡ್ ಬಣ್ಣದ ಮ್ಯಾಚಿಂಗ್ ಉಡುಪುಗಳನ್ನು ಧರಿಸಿದ್ದರು. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತ್ತು. ಆ ಮದುವೆಯಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣ ಆಯಿತು.

ಈ ಬೆಳವಣಿಗೆಗಳ ನಡುವೆ, ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು ಸಂಚಲನ ಮೂಡಿಸಿದೆ. ಅರ್ಜಿಯಲ್ಲಿ ಅವರು ವಿಜಯ್ ಅವರ ಪರಸ್ತ್ರೀ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ವಿಜಯ್ ಅವರು ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ನೇರವಾಗಿ ತ್ರಿಶಾ ಕೃಷ್ಣನ್ ಅವರತ್ತ ಬೆರಳು ಮಾಡುವಂತೆ ಮಾಡಿದೆ.

ಇದನ್ನೂ ಓದಿ: ಡೇಟಿಂಗ್ ವದಂತಿ; ಎಲ್ಲರಿಗೂ ಗೊಂದಲ ಮೂಡಿಸಿದ ತ್ರಿಶಾ ಕೃಷ್ಣನ್

ವಿಚ್ಛೇದನದ ಬಗ್ಗೆ ವಿಜಯ್ ನೇರವಾಗಿ ಮಾತನಾಡಿಲ್ಲವಾದರೂ, ಇತ್ತೀಚೆಗೆ ನಡೆದ ಟಿವಿಕೆ ರ‍್ಯಾಲಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ‘ಇತ್ತೀಚಿನ ದಿನಗಳಲ್ಲಿ ಕೆಲವು ವಿಷಯಗಳು ಓಡಾಡುತ್ತಿವೆ. ಇಂತಹ ಆರೋಪಗಳ ಬಗ್ಗೆ ನೀವು ಹೋರಾಡುತ್ತಿರುವುದನ್ನು ಮತ್ತು ನೋವು ಅನುಭವಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಿಮ್ಮ ಮನಸ್ಸಿಗೆ ನೋವಾದಾಗ ನನಗೂ ನೋವಾಗುತ್ತದೆ. ಆ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಅದಕ್ಕೆ ಅಷ್ಟು ಬೆಲೆ ನೀಡುವ ಅಗತ್ಯವಿಲ್ಲ. ನಾನು ಎಲ್ಲವನ್ನೂ ನಿಭಾಯಿಸುತ್ತೇನೆ’ ಎಂದು ಅಭಿಮಾನಿಗಳಿಗೆ ದಳಪತಿ ವಿಜಯ್ ಧೈರ್ಯ ತುಂಬಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ

ದಿ ಹಂಡ್ರೆಡ್ ಲೀಗ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸನ್‌ರೈಸರ್ಸ್ ಲೀಡ್ಸ್ ಐಪಿಎಲ್ ಫ್ರಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್‌ನ ಅಂಗಸಂಸ್ಥೆಯಾಗಿದೆ. ಹೀಗಾಗಿ ವಿದೇಶಿ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದ್ದಕ್ಕಾಗಿ ಫ್ರಾಂಚೈಸಿಯ ಮಾಲೀಕರಾದ ಕಾವ್ಯ ಮಾರನ್ ವಿರುದ್ಧ ಭಾರತೀಯರು ಕೋಪಗೊಂಡಿದ್ದು, ಸನ್‌ರೈಸರ್ಸ್ ಗ್ರೂಪ್ ಮೇಲೆ ಟೀಕೆಗಳ ಮಳೆಗರೆದಿದ್ದಾರೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಪ್ರತಿಕ್ರಿಯಿಸಿದ್ದು, ವಿದೇಶಿ ಲೀಗ್‌ನಲ್ಲಿ ಯಾವ ತಂಡವು ಯಾವ ಆಟಗಾರನನ್ನು ಖರೀದಿಸುತ್ತದೆ ಎಂಬುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ಮಾರ್ಚ್ 12 ರಂದು ಇಂಗ್ಲೆಂಡ್‌ನಲ್ಲಿ ನಡೆದ ಹರಾಜಿನಲ್ಲಿ ಕಾವ್ಯಾ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ತಂಡವು ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.3 ಕೋಟಿ ರೂ. ಗೆ ಖರೀದಿಸಿತು. ಸನ್‌ರೈಸರ್ಸ್ ಲೀಡ್ಸ್ ಹೊರತಾಗಿ ಇತರ ಮೂರು ಭಾರತೀಯ ಒಡೆತನದ ಫ್ರಾಂಚೈಸಿಗಳು ಯಾವುದೇ ಪಾಕಿಸ್ತಾನಿ ಆಟಗಾರನನ್ನು ಖರೀದಿ ಮಾಡಲಿಲ್ಲ. ಹೀಗಾಗಿ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯ ನಡೆಯ ಬಗ್ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇದೆಲ್ಲದರ ನಡುವೆ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ‘ಇದು ಬಿಸಿಸಿಐ ವ್ಯಾಪ್ತಿಯಿಂದ ಹೊರಗಿದೆ. ಬಿಸಿಸಿಐ ನಡೆಸುವ ಐಪಿಎಲ್‌ನಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ. ಆದರೆ ವಿದೇಶಿ ಲೀಗ್​ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಯಾವ ಲೀಗ್‌ನಲ್ಲಿ ಯಾರು ಏನು ಮಾಡುತ್ತಿದ್ದಾರೆ, ಯಾವ ಆಟಗಾರನನ್ನು ಖರೀದಿಸಿದ್ದಾರೆ ಎಂಬುದು ನಮಗೆ ಬೇಕಿಲ್ಲ. ಇದರಲ್ಲಿ ನಾವು ಹೇಗೆ ಹಸ್ತಕ್ಷೇಪ ಮಾಡಬಹುದು?. ಇದು ನಮಗೆ ಅಪ್ರಸ್ತುತವಾಗುತ್ತದೆ’ ಎಂದಿದ್ದಾರೆ.

ನಾಲ್ಕು ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ದಿ ಹಂಡ್ರೆಡ್ ಲೀಗ್​ನಲ್ಲಿ ತಂಡಗಳ ಒಡೆತನ ಹೊಂದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ನಾರ್ದರ್ನ್ ಸೂಪರ್‌ಚಾರ್ಜರ್ಸ್ (ಈಗ ಸನ್‌ರೈಸರ್ಸ್ ಲೀಡ್ಸ್), ಲಕ್ನೋ ಸೂಪರ್‌ಜೈಂಟ್ಸ್ ಮ್ಯಾಂಚೆಸ್ಟರ್ ಒರಿಜಿನಲ್ಸ್ (ಈಗ ಮ್ಯಾಂಚೆಸ್ಟರ್ ಸೂಪರ್‌ಜೈಂಟ್ಸ್), ಮುಂಬೈ ಇಂಡಿಯನ್ಸ್ ಓವಲ್ ಇನ್ವಿನ್ಸಿಬಲ್ಸ್ (ಈಗ ಎಂಐ ಲಂಡನ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಜಿಎಂಆರ್ ಸದರ್ನ್ ಬ್ರೇವ್ ತಂಡವನ್ನು ಖರೀದಿಸಿದ್ದಾರೆ. ಇವುಗಳಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮಾತ್ರ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ ವಿಶೇಷ ಸಾಧನೆ: ಸಾವಿರ ಯಶಸ್ವಿ ಮೂತ್ರಪಿಂಡ ಕಸಿ

ಬೆಂಗಳೂರು, ಮಾರ್ಚ್​ 13: ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ (Gleneagles BGS Hospital) ವಿಶ್ವ ಕಿಡ್ನಿ ದಿನದ ಅಂಗವಾಗಿ 1000 ಮೂತ್ರಪಿಂಡದ ಕಸಿ ಯಶಸ್ವಿ ಚಿಕಿತ್ಸೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಆ ಮೂಲಕ ಅತ್ಯಾಧುನಿಕ ಮೂತ್ರಪಿಂಡದ ಕಸಿ ಚಿಕಿತ್ಸೆಯನ್ನು ಒದಗಿಸುವ ಹಾಗೂ ಅಂಗಾಂಗ ದಾನದ ಮೂಲಕ ಅನೇಕ ಜೀವಗಳನ್ನು ಉಳಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

ವಿಶ್ವ ಕಿಡ್ನಿ ದಿನದ ಸಂದರ್ಭದಲ್ಲಿ, ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆಯು “ರೆನಲ್ ವಾರಿಯರ್ ಲೀಗ್” ಎಂಬ ವಿಶೇಷ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರ ಮೂತ್ರಪಿಂಡ ದಾನಿಗಳು ಮತ್ತು ಕಸಿ ಮಾಡಿಸಿಕೊಂಡಿರುವವರನ್ನು ಒಟ್ಟುಗೂಡಿಸುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಇನ್ನು ಈ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಬಹುಮಾನ ನೀಡಿ ಸನ್ಮಾನಿಸಲಾಗಿದೆ. ಜೊತೆಗೆ ಅವರ ಪ್ರೇರಣಾದಾಯಕ ಜೀವನ ಹಾಗೂ ಅಂಗಾಂಗ ದಾನದ ಮಹತ್ವವನ್ನು ಆಚರಿಸುವ ಕ್ಷಣವಾಗಿದೆ.

ಇದನ್ನೂ ಓದಿ: ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಈ ಬಗ್ಗೆ ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ವಿಶ್ವ ಮೂತ್ರಪಿಂಡ ದಿನಾಚರಣೆ ಮತ್ತು ಮೂತ್ರಪಿಂಡ ದಾನಿಗಳು ಹಾಗೂ ಕಸಿ ಮಾಡಿಸಿಕೊಂಡವರ ಸನ್ಮಾನ ಜೊತೆಗೆ “ರೆನಲ್ ವಾರಿಯರ್ ಲೀಗ್” ಎಂಬ ವಿಶೇಷ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು 1000 ಮೂತ್ರಪಿಂಡದ ಕಸಿ ಯಶಸ್ವಿ ಕಾರ್ಯಕ್ರಮವನ್ನು ಮಾರ್ಚ್​​ 12ರ ಮಧ್ಯಾಹ್ನ 12ಗಂಟೆ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆ ಕೆಂಗೇರಿಯಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ

ಈ ಕಾರ್ಯಕ್ರಮ ಅಂಗಾಂಗ ದಾನದ ಮಹತ್ವ ಮತ್ತು ಮೂತ್ರಪಿಂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಮತ್ತಷ್ಟು ಬಲಗೊಳಿಸಿದೆ. ಜೊತೆಗೆ ಇನ್ನೂ ಹೆಚ್ಚಿನ ಜೀವಗಳನ್ನು ಉಳಿಸಲು ಪ್ರೇರಣಾದಾಯಕವಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Paramilitary Jobs 2026: ದೇಶದ ಭದ್ರತಾ ಪಡೆಗಳಲ್ಲಿ 93,000 ಹುದ್ದೆಗಳಿಗೆ ಬಂಪರ್ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ

ಭಾರತದ ಆಂತರಿಕ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸುವ ವಿವಿಧ ಅರೆಸೈನಿಕ ಪಡೆಗಳಲ್ಲಿ ಪ್ರಸ್ತುತ ಬೃಹತ್ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಇವು ಯುವಜನತೆಗೆ ದೊಡ್ಡ ಉದ್ಯೋಗಾವಕಾಶದ ಬಾಗಿಲನ್ನು ತೆರೆದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಸಿಐಎಸ್‌ಎಫ್, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಐಟಿಬಿಪಿ ಸೇರಿದಂತೆ ವಿವಿಧ ಪಡೆಗಳಲ್ಲಿ ಒಟ್ಟು 93,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಬಾಕಿ ಇದೆ. ಇದರಲ್ಲಿ ವಿಶೇಷವಾಗಿ ಸಿಐಎಸ್‌ಎಫ್ (28,342) ಮತ್ತು ಸಿಆರ್‌ಪಿಎಫ್ (27,400) ಪಡೆಗಳಲ್ಲಿ ಗರಿಷ್ಠ ಸಂಖ್ಯೆಯ ಅವಕಾಶಗಳಿದ್ದು, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನಲ್ಲೂ ಸಾವಿರಾರು ಹುದ್ದೆಗಳು ಭರ್ತಿಯಾಗಬೇಕಿದೆ.

ದೇಶದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ವಿಪತ್ತು ನಿರ್ವಹಣೆಯ ಮೇಲೆ ಈ ಖಾಲಿ ಹುದ್ದೆಗಳು ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ಲಭ್ಯವಿರುವ ಸಂಪನ್ಮೂಲಗಳನ್ನು ಸರ್ಕಾರವು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರವು ಈಗಾಗಲೇ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಸಿಬ್ಬಂದಿ ಆಯ್ಕೆ ಆಯೋಗ (SSC) ಮತ್ತು ಯುಪಿಎಸ್‌ಸಿ (UPSC) ಮೂಲಕ ವಾರ್ಷಿಕವಾಗಿ ನಡೆಸಲಾಗುವ ಕಾನ್‌ಸ್ಟೆಬಲ್ (GD) ಮತ್ತು ಇತರ ಅಧಿಕಾರಿ ಮಟ್ಟದ ಪರೀಕ್ಷೆಗಳನ್ನು ಚುರುಕುಗೊಳಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ತರಲು ದೈಹಿಕ ಪರೀಕ್ಷೆಗಳ ವೇಳೆ ಆರ್‌ಎಫ್‌ಐಡಿ (RFID) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಹಾಗೂ ವೈದ್ಯಕೀಯ ತಪಾಸಣೆಗೆ ಬೇಕಾಗುವ ಸಮಯವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ದೇಶಸೇವೆ ಮಾಡುವ ಹಂಬಲವಿರುವ ಮತ್ತು ದೈಹಿಕವಾಗಿ ಸದೃಢರಾಗಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಮುಂಬರುವ ನೇಮಕಾತಿ ಅಧಿಸೂಚನೆಗಳ ಮೇಲೆ ಕಣ್ಣಿಟ್ಟು ಪೂರ್ವ ಸಿದ್ಧತೆ ನಡೆಸುವುದು ಅತ್ಯಗತ್ಯವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಹಮದಾಬಾದ್​ ಸರ್ಕಾರಿ ಶಾಲೆಗಳಲ್ಲಿ 360 ಮಕ್ಕಳಿಗೆ ಹೃದಯ ಸಮಸ್ಯೆ; ಶಾಕಿಂಗ್ ವಿಷಯ ಬಹಿರಂಗ

ಅಹಮದಾಬಾದ್, ಮಾರ್ಚ್ 13: ಇಂದು ನಡೆದ ಗುಜರಾತ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅಹಮದಾಬಾದ್ ಜಿಲ್ಲೆಯ ಸರ್ಕಾರಿ ಶಾಲೆಗಳ ಬಗ್ಗೆ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಅಹಮದಾಬಾದ್ ಜಿಲ್ಲೆಯಲ್ಲಿ ವೈದ್ಯಕೀಯ ತಪಾಸಣೆಯ ಸಮಯದಲ್ಲಿ 360 ಮಕ್ಕಳು ಗಂಭೀರ ಹೃದಯ ಕಾಯಿಲೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಗುಜರಾತ್ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಶಾಲಾ ಆರೋಗ್ಯ ತಪಾಸಣೆ (Child health) ಕಾರ್ಯಕ್ರಮದ ವಿವರಗಳನ್ನು ಸದನದಲ್ಲಿ ಮಂಡಿಸಿದಾಗ ಈ ಆಘಾತಕಾರಿ ಸಂಗತಿ ಬಯಲಾಗಿದೆ.

ಗುಜರಾತ್ ರಾಜ್ಯ ಆರೋಗ್ಯ ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಹಮದಾಬಾದ್ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಈ ಸಮಯದಲ್ಲಿ ನೂರಾರು ಮಕ್ಕಳು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಆರಂಭಿಕ ಹಂತದಲ್ಲಿ ಗುಪ್ತ ರೋಗಗಳನ್ನು ಗುರುತಿಸುವ ಮತ್ತು ಸಕಾಲಿಕ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಅಹಮದಾಬಾದ್ ಜಿಲ್ಲೆಯ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಶಾಲಾ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ತೀವ್ರವಾಗಿ ಜಾರಿಗೊಳಿಸಲಾಗುತ್ತಿದೆ. ಕಳೆದ 2 ವರ್ಷಗಳಲ್ಲಿ, ಬಾವ್ಲಾ, ದಸ್ಕ್ರಾಯ್, ಡೆಟ್ರೋಜ್, ಧಂಧುಕಾ, ಧೋಲೇರಾ, ಧೋಲ್ಕಾ, ಮಂಡಲ್, ಸನಂದ್ ಮತ್ತು ವಿರಾಮ್‌ಗಮ್ ಸೇರಿದಂತೆ 9 ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 5,17,164 ಮಕ್ಕಳನ್ನು ಪರೀಕ್ಷಿಸಲಾಯಿತು.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಈ ತಪಾಸಣೆಗಳ ಸಮಯದಲ್ಲಿ, 360 ಮಕ್ಕಳಿಗೆ ಹೃದಯ ಸಮಸ್ಯೆ ಇರುವುದು ಪತ್ತೆಯಾಯಿತು. ಈ ಪೈಕಿ 191 ಮಕ್ಕಳಿಗೆ ಕಳೆದ ವರ್ಷದಲ್ಲಿ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಅಥವಾ ವಿಶೇಷ ಚಿಕಿತ್ಸೆ ನೀಡಲಾಗಿದೆ. ದಸ್ಕ್ರಾಯ್ ತಾಲೂಕು ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ. 78 ಮಕ್ಕಳು ತೀವ್ರ ಹೃದಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ.

ಆರೋಗ್ಯ ತಪಾಸಣೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್, ಮೂತ್ರಪಿಂಡ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಇತರ ಗಂಭೀರ ಕಾಯಿಲೆಗಳನ್ನು ಸಹ ಪತ್ತೆಯಾಗಿವೆ. 2025-26ರ ಡೇಟಾ ಪ್ರಕಾರ, ಸುಮಾರು 5,285 ಮಕ್ಕಳು ರಕ್ತಹೀನತೆ, ಕಣ್ಣಿನ ಸಮಸ್ಯೆಗಳು, ಚರ್ಮರೋಗಗಳು, ದಂತ ಸಮಸ್ಯೆಗಳು, ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳಂತಹ ಆರೋಗ್ಯ ತೊಂದರೆಗಳು ಪತ್ತೆಯಾಗಿವೆ. ಹದಿಹರೆಯದ ಹುಡುಗಿಯರಲ್ಲಿ ರಕ್ತಹೀನತೆ ಭಾರೀ ಹೆಚ್ಚಾಗಿದೆ.

ಇದನ್ನೂ ಓದಿ: ಮೆಟ್ಟಿಲು ಹತ್ತಿದ್ರೆ ಹೃದಯ ಬಡಿತ ವೇಗವಾಗುತ್ತಾ? ಈ ರೀತಿ ಆಗುವುದಕ್ಕೆ ಕಾರಣವೇನು ತಿಳಿದುಕೊಳ್ಳಿ

ಕಳೆದ ವರ್ಷವೊಂದರಲ್ಲೇ, 30,295 ಮಕ್ಕಳನ್ನು ವಿಶೇಷ ಚಿಕಿತ್ಸೆಗಾಗಿ ಪ್ರಮುಖ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಂತಹ ಎಲ್ಲಾ ಮಕ್ಕಳಿಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಉಚಿತ ಶಸ್ತ್ರಚಿಕಿತ್ಸೆಗಳು, ಔಷಧಿಗಳು ಮತ್ತು ವೈದ್ಯಕೀಯ ಆರೈಕೆ ಸಿಗುತ್ತದೆ. ಸರ್ಕಾರದಿಂದ ವಿಶೇಷವಾಗಿ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆಗಳನ್ನು ಆರ್ಥಿಕವಾಗಿ ದುರ್ಬಲ ಮತ್ತು ಮಧ್ಯಮ ಆದಾಯದ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ತಂಬಾಕು ಬೆಳೆಗಾರರ ನೆರವಿಗೆ ನಿಂತ ಕೇಂದ್ರ ಸರ್ಕಾರ: ಸೋಮವಾರದಿಂದಲೇ ಖರೀದಿ ಆರಂಭದ ಭರವಸೆ

ದೆಹಲಿ, ಮಾರ್ಚ್​​ 13: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜತೆ ಮಾತುಕತೆ ನಡೆಸಿದ್ದು, ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಗಿದೆ.  ಆ ಬೆನ್ನಲ್ಲೇ  ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ.

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿರೋದಾಗಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕುರ್ಚಿ ಕಿತ್ತಾಟದ ನಡುವೆ ಮುಂದಿನ ರಾಜಕೀಯ ಜೀವನದ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ಮಾತು!

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮೈಸೂರು-ಕೊಡಗು ಸಂಸದರಾದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ , ಜೆಡಿಎಸ್ ಹಿರಿಯ ಮುಖಂಡ ಕೃಷ್ಣನಾಯಕ, ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್, ಸೋಮವಾರದಿಂದ ತಂಬಾಕು ಖರೀದಿಗೆ ಸಚಿವ ಪಿಯೂಷ್ ಗೋಯಲ್ ಸೂಚನೆ ನೀಡಿರೋದಾಗಿ ತಿಳಿಸಿದ್ದಾರೆ. ಅಲ್ಲದೆ, 190 ದೇಶಗಳ ರಾಯಭಾರಿಗಳಿಗೆ ಪತ್ರ ಬರೆದು ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಕೋರಿಕೆ ಸಲ್ಲಿಸಲಾಗುವುದು. ಈವರೆಗೆ ರಪ್ತು ಮಾಡದಿರುವ ದೇಶಗಳಿಗೂ ತಂಬಾಕು ರಪ್ತು ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವರು ಭರವಸೆ ನೀಡಿರೋದಾಗಿ ಸಾ.ರಾ.ಮಹೇಶ್​​ ಹೇಳಿದ್ದಾರೆ.

ಶಾಸಕ ಎ. ಮಂಜು ಮಾತನಾಡಿ, ಕರ್ನಾಟಕದಲ್ಲಿ 100 ದಶಲಕ್ಷ ಟನ್ ತಂಬಾಕು ಬೆಳೆಯಲು ತಂಬಾಕು ಮಂಡಳಿ ಅವಕಾಶ ನೀಡಿದೆ. ಈ ವರ್ಷ 80 ದಶಲಕ್ಷ ಟನ್ ತಂಬಾಕು ಬೆಳೆಯಲಾಗಿದೆ. ನಾವು ಬೆಳೆದ ಸೊಪ್ಪನ್ನು ಸರ್ಕಾರ ನಿರ್ಧಾರ ಮಾಡಿದ ಬೆಲೆಯಲ್ಲಿ ಖರೀದಿ ಮಾಡಬೇಕಿದೆ. ಈ ಹಿಂದೆ ಖರೀದಿ ಭರವಸೆ ನೀಡಿದ ಕಂಪನಿಗಳು ಖರೀದಿ ಮಾಡಿಲ್ಲ. ಹೀಗಾಗಿ ಈಗ ಬೆಳೆದ ಸೊಪ್ಪನ್ನು ಕೂಡಲೇ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿರೋದಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ‘ಆಕಾಶ್’ ಸಿನಿಮಾ (Akash movie) ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. ಹಲವು ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ಫ್ಯಾನ್ಸ್ ಸಂಭ್ರಮ ಜೋರಾಗಿತ್ತು. ಸಿನಿಮಾದ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಲಾಯಿತು. ಪುನೀತ್ ರಾಜ್​ಕುಮಾರ್ ಅವರಿಗೆ ಜೈಕಾರ ಕೂಗಲಾಯಿತು. ಮಾರ್ಚ್ 17ರಂದು ಅಪ್ಪು ಜನ್ಮದಿನ. ಆ ಪ್ರಯುಕ್ತ ಅಭಿಮಾನಿಗಳ ಖುಷಿಗಾಗಿ ‘ಆಕಾಶ್’ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ. ಪುನೀತ್ (Puneeth Rajkumar) ಕುಟುಂಬದ ಸದಸ್ಯರು ಮತ್ತು ನಟಿ ರಮ್ಯಾ ಕೂಡ ಚಿತ್ರಮಂದಿರಕ್ಕೆ ಬಂದು ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿಯಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link