All posts by nagaraj11081993

ನೀರಿನ ಬಿಲ್ ಕೇಳೋ ಅಧಿಕಾರಿಗಳು ಈಗ ಎಲ್ಲಿದ್ದಾರೆ?; ಮಂಗಳೂರಿನಲ್ಲಿ ಕಲುಷಿತ ನೀರು ಕುಡಿದು 100ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ – Kannada News | Lab Confirms Unsafe Drinking Water in Mangaluru: Public Outraged by MCC Inaction

ಮಂಗಳೂರು, ಜೂ.18: ಮಂಗಳೂರು ಮಹಾನಗರ ಪಾಲಿಕೆಯ (MCC) ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಕರಾವಳಿಯ ನಾಗರಿಕರು ಭಾರಿ ಬೆಲೆ ತೆರುವಂತಾಗಿದೆ. ಪಾಲಿಕೆಯಿಂದ ಸರಬರಾಜಾಗುತ್ತಿರುವ ಕಲುಷಿತ ಕುಡಿಯುವ ನೀರನ್ನು ಸೇವಿಸಿ ನಗರದ ನೂರಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರದ ಬಿಜೈ ನ್ಯೂರೋಡ್ ಹಾಗೂ ಬಟ್ಟಗುಡ್ಡೆ ಭಾಗದಲ್ಲಿ ಕಳೆದ ಮೂರು-ನಾಲ್ಕು ವಾರಗಳಿಂದ ಮನೆಯ ಟ್ಯಾಪ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರನ್ನು ಬಳಸಿದ ಹಿರಿಯ ನಾಗರಿಕರು ಮತ್ತು ಪುಟಾಣಿ ಮಕ್ಕಳು ತೀವ್ರವಾದ ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. ಪ್ರಾರಂಭದಲ್ಲಿ ಇದು ಸಾಮಾನ್ಯ ಇನ್ಫೆಕ್ಷನ್ ಎಂದುಕೊಂಡಿದ್ದ ಜನರಿಗೆ, ಇಡೀ ಬಡಾವಣೆಯ ನೂರಕ್ಕೂ ಹೆಚ್ಚು ಮನೆಗಳಲ್ಲಿ ಇದೇ ಪರಿಸ್ಥಿತಿ ಇರುವುದು ಕಂಡುಬಂದಾಗ ಆತಂಕ ಮೂಡಿದೆ. ಇನ್ನು ಇದಕ್ಕಾಗಿ ಅನೇಕರು ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಂಡರೂ ಆರೋಗ್ಯ ನಿಯಂತ್ರಣಕ್ಕೆ ಬಾರದೆ ಸುಸ್ತಾಗಿದ್ದಾರೆ.

ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ನಾಗರಿಕರು, ಆರೋಗ್ಯ ಇಲಾಖೆಯ ಮೂಲಕ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ಬಂದಿರುವ ಸಂಗತಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪಾಲಿಕೆ ಸರಬರಾಜು ಮಾಡುತ್ತಿರುವ ಈ ನೀರು ‘ಕುಡಿಯಲು ಯಾವುದೇ ಕಾರಣಕ್ಕೂ ಯೋಗ್ಯವಲ್ಲ’ ಎಂದು ಲ್ಯಾಬ್ ವರದಿಯಲ್ಲಿ ಅಧಿಕೃತವಾಗಿ ದೃಢಪಟ್ಟಿದೆ. ವರದಿ ಹೊರಬೀಳುತ್ತಿದ್ದಂತೆ ಕಂಗಾಲಾಗಿರುವ ಬಿಜೈ ನಿವಾಸಿಗಳು ಸದ್ಯ ದುಬಾರಿ ಹಣ ಕೊಟ್ಟು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (ಕ್ಯಾನ್ ನೀರು) ಖರೀದಿಸಿ ಬಳಸುತ್ತಿದ್ದಾರೆ.

ನಗರದ ಹಲವೆಡೆ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ (ಡ್ರೈನೇಜ್) ಪೈಪ್‌ಲೈನ್‌ಗಳನ್ನು ಒಟ್ಟೊಟ್ಟಿಗೇ ಅಳವಡಿಸಲಾಗಿದೆ. ಇತ್ತೀಚೆಗೆ ನಡೆದ ಯಾವುದೋ ದುರಸ್ತಿ ಕಾಮಗಾರಿಗಳ ವೇಳೆ ಜೆಸಿಬಿ ತಗುಲಿ ಅಥವಾ ಪೈಪ್‌ಗಳು ಒಡೆದು ಹೋಗಿ, ಡ್ರೈನೇಜ್ ನೀರು ನೇರವಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ತೂರಿ ಮಿಶ್ರಣವಾಗಿರುವ ಬಲವಾದ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪಾಲಿಕೆಯ ತಾಂತ್ರಿಕ ಇಂಜಿನಿಯರ್‌ಗಳು ತಕ್ಷಣವೇ ಪರಿಶೀಲನೆ ನಡೆಸಿ ಲೀಕೇಜ್ ಪತ್ತೆ ಹಚ್ಚಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ ಕಾಮಗಾರಿ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಎಂಜಿನಿಯರ್‌

ಲಕ್ಷ ಸಂಬಳ ತಗೊಂಡು ಎಸಿ ರೂಮ್‌ನಲ್ಲಿ ಕೂರ್ತಾರೆ: ಟಿವಿ 9 ಮುಂದೆ ಜನರ ಅಳಲು

ಇಷ್ಟೆಲ್ಲಾ ಭೀಕರ ಪರಿಸ್ಥಿತಿ ನಿರ್ಮಾಣವಾಗಿ, ನೂರಾರು ಜನ ಆಸ್ಪತ್ರೆ ಸೇರುತ್ತಿದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಮಹಾನಗರ ಪಾಲಿಕೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ಟಿವಿ 9 ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ತೆರಿಗೆ ಕಟ್ಟಿಲ್ಲ, ನೀರಿನ ಬಿಲ್ ಕಟ್ಟಿಲ್ಲ ಎಂದರೆ ಸಾಕು ಪಾಲಿಕೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆದರೆ, ಇಷ್ಟೊಂದು ಜನ ವಾಂತಿ-ಬೇದಿಯಿಂದ ನರಳುತ್ತಿದ್ದರೂ ಯಾರೂ ಮುಖ ತೋರಿಸುತ್ತಿಲ್ಲ. ಇವರು ಲಕ್ಷಗಟ್ಟಲೆ ಸಂಬಳ ಪಡೆದು ಕೇವಲ ಎಸಿ ರೂಮ್‌ಗಳಲ್ಲಿ ಕೂರಲು ಇರೋದಾ? ಹೆಲ್ತ್ ಇನ್ಸ್‌ಪೆಕ್ಟರ್ ತಕ್ಷಣ ಬಂದು ಪ್ರತಿ ಮನೆಯ ಸ್ಯಾಂಪಲ್ ಪರಿಶೀಲಿಸಬೇಕು. ಪಾಲಿಕೆ ಅಧಿಕಾರಿಗಳು ಕೇವಲ ದುಡ್ಡು ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಸಾರ್ವಜನಿಕರು ಮಾಧ್ಯಮಗಳ ಮುಂದೆ ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ – Kannada News | Historic US Iran Agreement: Impact on Global Oil Prices and Indias Fuel Costs

ವಾಷಿಂಗ್ಟನ್, ಜೂನ್ 18: ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಅಂತ್ಯ ಹಾಡಿ, ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ನಂತರ ಹಾರ್ಮುಕ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವು ಬಿರುಸಿನಿಂದ ಸಾಗುತ್ತಿದೆ. ಗ್ಯಾಸ್ ಮತ್ತು ಕಚ್ಚಾತೈಲ ಟ್ಯಾಂಕರ್‌ಗಳು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳತ್ತ ಪ್ರಯಾಣ ಬೆಳೆಸುತ್ತಿವೆ. ಅಮೆರಿಕವು ಇರಾನ್ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕಿದ ತಕ್ಷಣ, ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ.

ಹಾರ್ಮುಜ್ ಮೂಲಕ ಭಾರತಕ್ಕೆ 28 ಹಡಗುಗಳು ಬರುತ್ತಿದ್ದು, ಇದು ದೇಶದಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು ಸಿಎನ್‌ಜಿ ಬೆಲೆಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವು ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ಗೆ ಕುಸಿದಿದೆ. ಇದು ಕಳೆದ ಮೂರು ತಿಂಗಳಲ್ಲಿ ದಾಖಲಾದ ಕನಿಷ್ಠ ಮಟ್ಟವಾಗಿದೆ. ಅಮೆರಿಕದಲ್ಲಿ ಪ್ರತಿ ಗ್ಯಾಲನ್ ಅನಿಲದ ಬೆಲೆಯಲ್ಲಿ 4 ಡಾಲರ್‌ಗಳಷ್ಟು ಇಳಿಕೆಯಾಗಿದೆ. ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಆಗಿದ್ದಾಗ ಇಡೀ ವಿಶ್ವವೇ ಒಂದು ನಿರ್ಣಾಯಕ ಪರಿಸ್ಥಿತಿಯನ್ನು ಎದುರಿಸಿತ್ತು. ಈಗ ದಿಗ್ಬಂಧನಗಳು ತೆರವಾದ ನಂತರ ಹಡಗುಗಳ ಸಂಚಾರ ಮುಕ್ತವಾಗಿದ್ದು, ಭಾರತಕ್ಕೆ ತೈಲ ಪೂರೈಕೆ ಸುಗಮವಾಗಲಿದೆ.

ಈ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2015ರಲ್ಲಿ ಒಬಾಮಾ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಇದು ಅತ್ಯಂತ ಉತ್ತಮವಾದ ಒಪ್ಪಂದ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜಸ್ಕಿಯನ್ ಅವರು ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಧಿಕೃತ ಸಹಿ ಕಾರ್ಯಕ್ರಮವು ನಾಳೆ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿ ನಡೆಯಲಿದೆ. ಕಳೆದ 109 ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಈಗ ಕೊನೆಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲೂ ಯಾವುದೇ ರೀತಿಯ ಸಂಘರ್ಷವಿಲ್ಲ. ಇರಾನ್‌ನ 11 ಹಡಗುಗಳು ಈಗಾಗಲೇ ವಿವಿಧ ದೇಶಗಳಿಗೆ ಸಂಚರಿಸಿದ್ದು, ಇರಾನ್‌ಗೆ ಬರುವ ಹಡಗುಗಳು ನಿರಾತಂಕವಾಗಿ ಬಂದರುಗಳನ್ನು ತಲುಪಬಹುದಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Thursday Yellow Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸುವುದರ ಹಿಂದಿರುವ ರಹಸ್ಯವೇನು ಗೊತ್ತಾ? – Kannada News | Thursday Yellow Color Astrology: Jupiter Benefits and Remedies for Weak Guru Graha

ಗುರುವಾರ ಹಳದಿ ಬಣ್ಣದ ಬಟ್ಟೆImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನವೂ ಒಂದೊಂದು ನಿರ್ದಿಷ್ಟ ಗ್ರಹದಿಂದ ಆಳಲ್ಪಡುತ್ತದೆ. ಅದರಂತೆ ಗುರುವಾರವನ್ನು ‘ಗುರು’ (ಬೃಹಸ್ಪತಿ) ಗ್ರಹವು ಆಳುತ್ತದೆ. ಈ ಗ್ರಹದ ಅತ್ಯಂತ ನೆಚ್ಚಿನ ಬಣ್ಣ ಹಳದಿಯಾಗಿರುವುದರಿಂದ, ಈ ದಿನ ಹಳದಿ ಬಟ್ಟೆಗಳನ್ನು ಧರಿಸುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಗುರು ಗ್ರಹವನ್ನು ಜ್ಞಾನ, ಶಿಕ್ಷಣ, ಸಂಪತ್ತು, ಸಂತಾನ ಭಾಗ್ಯ, ಮದುವೆ ಮತ್ತು ಆಧ್ಯಾತ್ಮಿಕತೆಯ ಕಾರಕ ಎಂದು ನಂಬಲಾಗಿದೆ. ಗುರುವಿನ ಆಶೀರ್ವಾದವಿದ್ದರೆ ಜೀವನದಲ್ಲಿ ಅಭಿವೃದ್ಧಿ, ಗೌರವ ಮತ್ತು ಸಮೃದ್ಧಿ ಲಭಿಸುತ್ತದೆ.

ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಮಾಡಬೇಕಾದ ಪರಿಹಾರಗಳು:

ಜ್ಯೋತಿಷ್ಯ ತಜ್ಞರ ಪ್ರಕಾರ, ಯಾರ ಜಾತಕದಲ್ಲಿ ಗುರು ಗ್ರಹವು ದುರ್ಬಲವಾಗಿದೆಯೋ, ಅವರು ಗುರುವಾರದಂದು ಹಳದಿ ಬಣ್ಣದ ವಸ್ತುಗಳನ್ನು ಬಳಸುವುದು ಅಥವಾ ದಾನ ಮಾಡುವುದು ಅತ್ಯಂತ ಶ್ರೇಷ್ಠ. ಈ ದಿನದಂದು ವಿಶೇಷವಾಗಿ ಹಣೆಯ ಮೇಲೆ ಹಳದಿ ಶ್ರೀಗಂಧ ಅಥವಾ ಹಳದಿ ತಿಲಕವನ್ನು ಧರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಹಳದಿ ಬೇಳೆ (ಕಡಲೆಬೇಳೆ), ಅರಿಶಿನ, ಕೇಸರಿ, ಬೆಲ್ಲ ಮತ್ತು ತುಪ್ಪದಂತಹ ವಸ್ತುಗಳನ್ನು ದಾನ ಮಾಡುವುದರಿಂದ ಗ್ರಹದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ದಾನ ಧರ್ಮಗಳಿಂದ ಸಿಗುವ ಶುಭ ಫಲಗಳು:

ಗುರುವಾರದಂದು ಹಳದಿ ಬಣ್ಣದ ಬಟ್ಟೆಗಳು, ಹಳದಿ ಧಾನ್ಯಗಳು, ಹಳದಿ ಹಣ್ಣುಗಳು, ಹಿತ್ತಾಳೆ ಪಾತ್ರೆಗಳು ಅಥವಾ ಚಿನ್ನವನ್ನು ದಾನ ಮಾಡುವುದರಿಂದ ಅತ್ಯಂತ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಈ ಸರಳ ಆಚರಣೆಗಳು ಜಾತಕದಲ್ಲಿ ಗುರು ಗ್ರಹವನ್ನು ಬಲಪಡಿಸುತ್ತವೆ. ಇದರ ಪರಿಣಾಮವಾಗಿ ಶಿಕ್ಷಣ, ಉದ್ಯೋಗ, ವ್ಯಾಪಾರ-ವ್ಯವಹಾರ ಮತ್ತು ವಿವಾಹದಂತಹ ಪ್ರಮುಖ ಕ್ಷೇತ್ರಗಳಲ್ಲಿ ಎದುರಾಗುವ ಅಡೆತಡೆಗಳು ದೂರವಾಗಿ, ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.

ಶ್ರೀ ಮಹಾವಿಷ್ಣುವಿನ ಆರಾಧನೆ ಮತ್ತು ಧಾರ್ಮಿಕ ಮಹತ್ವ:

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಗುರುವಾರವನ್ನು ಸೃಷ್ಟಿಪಾಲಕನಾದ ಶ್ರೀ ಮಹಾವಿಷ್ಣುವಿಗೆ ಮೀಸಲಾದ ದಿನವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಹಳದಿ ಬಣ್ಣವೆಂದರೆ ಮಹಾವಿಷ್ಣುವಿಗೆ ಅತ್ಯಂತ ಪ್ರೀತಿ. ಆದ್ದರಿಂದಲೇ ಈ ದಿನ ಆತನ ಪೂಜೆಯಲ್ಲಿ ಹಳದಿ ಹೂವುಗಳು, ಹಳದಿ ಅಕ್ಷತೆ, ಹಳದಿ ಶ್ರೀಗಂಧ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಗುರುವಾರ ಬಾಳೆ ಮರವನ್ನು ಪೂಜಿಸುವ ವಾಡಿಕೆಯೂ ಇದೆ, ಇದು ಕುಟುಂಬದಲ್ಲಿ ಸುಖ-ಸಂಪತ್ತನ್ನು ವೃದ್ಧಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮದುವೆ ವಿಳಂಬ ಮತ್ತು ವೈವಾಹಿಕ ಸಮಸ್ಯೆಗಳಿಗೆ ಸರಳ ಉಪಾಯ:

ವೈವಾಹಿಕ ಜೀವನದಲ್ಲಿ ತೊಂದರೆ ಎದುರಿಸುತ್ತಿರುವವರು ಅಥವಾ ವಿವಾಹ ಯೋಗ ತಡವಾಗುತ್ತಿರುವವರು ಗುರುವಾರದಂದು ವಿಶೇಷ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಈ ದಿನ ಸಂಪೂರ್ಣ ಭಕ್ತಿಯಿಂದ ಶ್ರೀ ಮಹಾವಿಷ್ಣು ಹಾಗೂ ಗುರುರಾಯರನ್ನು ಪೂಜಿಸಿ, ಕಡ್ಡಾಯವಾಗಿ ಹಳದಿ ಬಟ್ಟೆಗಳನ್ನು ಧರಿಸಬೇಕು. ಪೂಜೆಯ ನಂತರ ಹಳದಿ ಬಣ್ಣದ ಸಾತ್ವಿಕ ಆಹಾರವನ್ನೇ ಸೇವಿಸುವುದರಿಂದ ವಿವಾಹದಲ್ಲಿ ಉಂಟಾಗುವ ಅಡೆತಡೆಗಳು ನಿವಾರಣೆಯಾಗಿ, ಕಲ್ಯಾಣ ಯೋಗ ಕೂಡಿಬರುತ್ತದೆ ಎಂದು ನಂಬಲಾಗಿದೆ.

ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಹಳದಿ ಬಣ್ಣ:

ಒಟ್ಟಾರೆಯಾಗಿ ಹೇಳುವುದಾದರೆ, ಗುರುವಾರ ಹಳದಿ ಬಣ್ಣಕ್ಕೆ ಪ್ರಾಮುಖ್ಯತೆ ನೀಡುವುದರ ಹಿಂದೆ ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರಣಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಹಳದಿ ಬಣ್ಣವು ನಮ್ಮ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯನ್ನು (Positive Energy) ಮತ್ತು ಉತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಜ್ಞಾನ, ಸಂಪತ್ತು, ವೈವಾಹಿಕ ಸಂತೋಷ ಮತ್ತು ಯಶಸ್ಸನ್ನು ಬಯಸುವ ಪ್ರತಿಯೊಬ್ಬರಿಗೂ ಗುರುವಾರದ ಹಳದಿ ಬಣ್ಣದ ಆಚರಣೆಯು ಉತ್ತಮ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್​ರನ್ನು ಕಣಕ್ಕಿಳಿಸಬಾರದಿತ್ತು… ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನ ಆಕ್ರೋಶ – Kannada News | Should’ve Dropped Vaibhav Sooryavanshi: Former India Cricketer Lashes Out

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ‘ಎ’ ಸರಣಿಯು ಈಗ ಕೇವಲ ಕ್ರಿಕೆಟ್ ಕಾರಣಗಳಿಗಾಗಿ ಮಾತ್ರವಲ್ಲದೆ ಮೈದಾನದ ವಿವಾದಗಳಿಂದಲೂ ಭಾರಿ ಸದ್ದು ಮಾಡುತ್ತಿದೆ. ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಪಂದ್ಯದ ನಂತರ ನಡೆದ ಹೈ-ಡ್ರಾಮಾ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ಎ ತಂಡದ 15 ವರ್ಷದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಆನ್-ಫೀಲ್ಡ್ ವರ್ತನೆಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ವಿವಾದಕ್ಕೆ ಕಾರಣವಾದ ಆ ಒಂದು ಘಟನೆ!

ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಪಂದ್ಯವು ಅತ್ಯಂತ ರೋಚಕವಾಗಿ ‘ಸೂಪರ್ ಓವರ್’ ಹಂತಕ್ಕೆ ತಲುಪಿತ್ತು. ಸೂಪರ್ ಓವರ್‌ನ ಕೊನೆಯ ಎಸೆತದಲ್ಲಿ ಶ್ರೀಲಂಕಾ ಎ ತಂಡ ಜಯಭೇರಿ ಬಾರಿಸಿತು. ಪಂದ್ಯ ಮುಗಿದ ತಕ್ಷಣ, ತೀವ್ರ ಆಕ್ರೋಶಗೊಂಡಂತೆ ಕಂಡ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ನೇರವಾಗಿ ಶ್ರೀಲಂಕಾದ ಆಟಗಾರ ವಿಶೇನ್ ಹಲಂಬಾಗೆ ಕಡೆಗೆ ಧಾವಿಸಿ ಅವರನ್ನು ದೈಹಿಕವಾಗಿ ತಳ್ಳಿದರು. ಈ ದೃಶ್ಯಗಳು ನೇರ ಪ್ರಸಾರದಲ್ಲಿ ಸೆರೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.

ಪ್ರಚೋದನೆಗೆ ಕಾರಣವೇನು?

ವರದಿಗಳ ಪ್ರಕಾರ, ಪಂದ್ಯದ ಉದ್ದಕ್ಕೂ ವಿಶೇನ್ ಹಲಂಬಾಗೆ ವೈಭವ್​ ಸೂರ್ಯವಂಶಿಯನ್ನು ನಿರಂತರವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಸೂಪರ್ ಓವರ್ ಗೆಲುವಿನ ಸಂಭ್ರಮದಲ್ಲಿದ್ದ ಹಲಂಬಾ, ವೈಭವ್ ಅವರನ್ನು ಕೆಣಕುವ ಉದ್ದೇಶದಿಂದ, “ಮನೆಗೆ ಹೋಗು, ಇದು ಐಪಿಎಲ್ ಅಲ್ಲ!” ಎಂದು ಲೇವಡಿ ಮಾಡಿದ್ದರು. ಈ ಪ್ರಚೋದನೆಯಿಂದ ನಿಯಂತ್ರಣ ಕಳೆದುಕೊಂಡ ವೈಭವ್ ಸೂರ್ಯವಂಶಿ ಮೈದಾನದಲ್ಲೇ ದೈಹಿಕ ಸಂಘರ್ಷಕ್ಕೆ ಇಳಿದಿದ್ದರು.

ಸಂಜಯ್ ಮಂಜ್ರೇಕರ್ ಆಕ್ರೋಶ:

ವೈಭವ್ ಸೂರ್ಯವಂಶಿಯ ಈ ವರ್ತನೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಖಂಡಿಸಿದ್ದಾರೆ.  “ನಾನೇನಾದರೂ ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿರುತ್ತಿದ್ದರೆ, ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಖಂಡಿತವಾಗಿಯೂ ಹೊರಗಿಡುತ್ತಿದ್ದೆ. ಮೈದಾನದಲ್ಲಿ ಎಂತಹದ್ದೇ ಪ್ರಚೋದನೆ ಸಿಕ್ಕರೂ ಸಹ, ದೈಹಿಕವಾಗಿ ಜಗಳವಾಡುವುದು ಸರಿಯಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು.” ಎಂದು ಮಂಜ್ರೇಕರ್ ಹೇಳಿದ್ದಾರೆ.

15 ವರ್ಷದ ವೈಭವ್ ಸೂರ್ಯವಂಶಿ ಶ್ರೀಘ್ರದಲ್ಲೇ ಭಾರತದ ಹಿರಿಯರ ತಂಡದ ಕಣಕ್ಕಿಳಿಯಲಿದ್ದಾರೆ. ಇಂತಹ ಯುವ ಆಟಗಾರನಿಗೆ ಮೈದಾನದ ಶಿಸ್ತು ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ಅವರನ್ನು ಹೊರಗಿಟ್ಟು ಒಂದು ಪಂದ್ಯದ ನಿಷೇಧದಂತಹ ಕಠಿಣ ಸಂದೇಶವನ್ನು ಮ್ಯಾನೇಜ್‌ಮೆಂಟ್ ನೀಡಬೇಕಿತ್ತು ಎಂಬುದು ಮಂಜ್ರೇಕರ್ ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೈನಲ್​ಗೇರಿದ್ದು ಹೇಗೆ?

ಕ್ರಿಕೆಟ್ ನಿಯಮಗಳು ಮತ್ತು ಕ್ರೀಡಾ ನೀತಿಯ ಪ್ರಕಾರ ಸಂಜಯ್ ಮಂಜ್ರೇಕರ್ ಅವರ ನಿಲುವು ತತ್ವಬದ್ಧವಾಗಿದೆ. ಆದರೆ ಆಟಗಾರನ ವಯಸ್ಸು ಮತ್ತು ಎದುರಾಳಿಯ ತೀವ್ರ ಪ್ರಚೋದನೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಅವರನ್ನು ನೇರವಾಗಿ ತಂಡದಿಂದ ಕೈಬಿಡುವ ಮಂಜ್ರೇಕರ್ ಅವರ ಸಲಹೆ ಸ್ವಲ್ಪ ಕಠಿಣ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಇದಾಗ್ಯೂ ಮುಂಬರುವ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ತಮ್ಮ ಕೋಪ-ತಾಪಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತಮ್ಮ ಕೆರಿಯರ್​ಗೆ ಉತ್ತಮ.

Source link

ಹಸೆಮಣೆ ಏರಲು ಸಜ್ಜಾದ ನಟಿ ರೂಪಿಕಾ; ಹಿರಿಯರ ಸಮ್ಮುಖದಲ್ಲಿ ನಡೆಯಿತು ನಿಶ್ಚಿತಾರ್ಥ – Kannada News | Kannada Actress Roopika Weds Ankith: Engagement Details and Wedding Plans Revealed

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಮತ್ತು ಭರತನಾಟ್ಯ ನೃತ್ಯಗಾರ್ತಿ ರೂಪಿಕಾ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಂಕಿತ್ ಅವರೊಂದಿಗೆ ನಟಿ ರೂಪಿಕಾ ಹಸೆಮಣೆ ಏರುತ್ತಿದ್ದು, ಇತ್ತೀಚೆಗಷ್ಟೇ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಮದುವೆ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಈ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಯಾರು ಈ ಅಂಕಿತ್?

ರೂಪಿಕಾ ಕೈಹಿಡಿಯಲಿರುವ ಅಂಕಿತ್ ಅವರು ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 5 ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಸದ್ಯ ಕೆನಡಾದ ‘ಇನ್ವೆಸ್ಕೋ’ (Invesco) ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮ್ಯೂಸಿಕಲ್ ಕಂಪೋಸರ್ ಕೂಡ ಆಗಿರುವ ಅಂಕಿತ್ ಅವರಿಗೆ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದೆ.

ಆಗಸ್ಟ್‌ನಲ್ಲಿ ಮದುವೆ

ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲೇ ಇವರ ವಿವಾಹ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ರೂಪಿಕಾ ಅವರ ಆಪ್ತರು, ಚಿತ್ರರಂಗದ ಸ್ನೇಹಿತರು ಹಾಗೂ ರಾಜಕೀಯ ರಂಗದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ ರುತ್ ಪ್ರಭು

ಬಾಲನಟಿಯಿಂದ ಹಿಡಿದು ‘ಲಕ್ಷ್ಮಿ ನಿವಾಸ’ದವರೆಗೆ ರೂಪಿಕಾ ಜರ್ನಿ:

ರೂಪಿಕಾ ಅವರ ನಟನಾ ಪಯಣ ಆರಂಭವಾಗಿದ್ದು ಕಿರುತೆರೆಯಲ್ಲಿ ಬಾಲನಟಿಯಾಗಿ. ಅವರು ‘ಬೆಳ್ಳಿಚುಕ್ಕಿ’, ‘ಬದುಕು’, ‘ಅವಳ ಮನೆ’ ಹಾಗೂ ‘ತ್ರಿವೇಣಿ ಸಂಗಮ’ದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಪ್ರೇಕ್ಷಕರ ಮನ ಗೆದ್ದರು. 2009ರಲ್ಲಿ ತೆರೆಕಂಡ ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಸಿನಿಮಾ ಮೂಲಕ ರೂಪಿಕಾ ಚಂದನವನಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ನಂತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅಷ್ಟೇ ಅಲ್ಲದೆ, ‘ಚಿಲ್ ಬ್ರೋ’ ಎಂಬ ತೆಲುಗು ಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಸಿಂಚನಾ ಹೆಸರಿನ ಪಾತ್ರದ ಮೂಲಕ ರೂಪಿಕಾ ಪ್ರೇಕ್ಷಕರ ಮನೆಮಾತಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕುಸಿದ ವಾಯು ಮಾಲಿನ್ಯ, ಅತ್ಯಂತ ಶುದ್ಧ ಗಾಳಿ! – Kannada News | Karnataka AQI Update: Bengaluru and Other Cities Record Clean Air Quality

ಬೆಂಗಳೂರು, ಜೂನ್ 18: ಇಂದಿನ ಕರ್ನಾಟಕದ ಹವಾಮಾನ ಮತ್ತು ಗಾಳಿಯ ಗುಣಮಟ್ಟ ಸೂಚ್ಯಂಕ (AQI) ವಿವರಗಳು ಇಲ್ಲಿವೆ. ಇತ್ತೀಚಿನ ಮಳೆ ಮತ್ತು ಗಾಳಿಯ ಪ್ರಭಾವದಿಂದಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವಂತಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಇಂದು ಅತ್ಯಂತ ಉತ್ತಮ ಮಟ್ಟದಲ್ಲಿದೆ.
  • ವಿಜಯಪುರ ಮತ್ತು ಚನ್ನರಾಯಪಟ್ಟಣದಲ್ಲಿ ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ದಾಖಲಾಗಿದೆ.
  • ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ಶುದ್ಧವಾದ ಆರೋಗ್ಯಕರ ಗಾಳಿ ಇದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಜೂನ್ 18 ರಂದು ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಉತ್ತಮ ಮಟ್ಟದಲ್ಲಿದೆ. ನಗರದ ಸರಾಸರಿ ಎಕ್ಯೂಐ 35 ರಿಂದ 50 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದನ್ನು ಉತ್ತಮ (Good) ವಲಯ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ನಗರದಾದ್ಯಂತ ಬೀಸಿದ ಬಲವಾದ ಬಿರುಗಾಳಿ ಮತ್ತು ಅಲ್ಲಲ್ಲಿ ಸುರಿದ ಸಾಧಾರಣ ಮಳೆಯು ವಾತಾವರಣದಲ್ಲಿದ್ದ ಧೂಳಿನ ಕಣಗಳನ್ನು (PM2.5 ಮತ್ತು PM10) ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ.

ನಗರದ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಮತ್ತು ಜಯನಗರದಂತಹ ಪ್ರಮುಖ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ಸಾಧಾರಣ (Moderate) ಮಟ್ಟದಲ್ಲಿದ್ದರೆ, ಹೆಬ್ಬಾಳ ಮತ್ತು ಯಲಹಂಕ ಭಾಗಗಳಲ್ಲಿ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ. ಇದರಿಂದಾಗಿ ಯಾವುದೇ ಆರೋಗ್ಯದ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕರು ಮತ್ತು ಮಕ್ಕಳು ತಮ್ಮ ದಿನನಿತ್ಯದ ಹೊರಾಂಗಣ ಚಟುವಟಿಕೆಗಳನ್ನು ಮುಂದುವರಿಸಬಹುದಾಗಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಪರಿಸ್ಥಿತಿ

ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ವಾಯು ಮಾಲಿನ್ಯದ ಮಟ್ಟ ಆಶಾದಾಯಕವಾಗಿದೆ. ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವರದಿಯಾಗಿರುವ ಹವಾಮಾನ ಬದಲಾವಣೆಯಿಂದಾಗಿ ವಾಯು ಗುಣಮಟ್ಟ ಸುಧಾರಿಸಿದೆ.

ಕರಾವಳಿಯ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಾಯು ಗುಣಮಟ್ಟ ಅತ್ಯುತ್ತಮವಾಗಿದ್ದು, ಸೂಚ್ಯಂಕವು 30 ರಿಂದ 40 ರ ಒಳಗಿದೆ. ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯವಿರುವ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕದ ವಿಜಯಪುರ (AQI 16) ಹಾಗೂ ಚನ್ನರಾಯಪಟ್ಟಣ (AQI 17) ಮುಂಚೂಣಿಯಲ್ಲಿವೆ. ಉತ್ತರ ಒಳನಾಡಿನ ಈ ಕೈಗಾರಿಕಾ ಮತ್ತು ವಾಣಿಜ್ಯ ನಗರಗಳಲ್ಲಿ ಬಿರುಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಮಾಲಿನ್ಯಕಾರಕ ಕಣಗಳು ಚದುರಿಹೋಗಿದ್ದು, ಸೂಚ್ಯಂಕ 45 ರ ಆಸುಪಾಸಿನಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು – Kannada News | Tragedy in Bagalur: Unscientific Wall Collapse Kills 5 Year Old, Injures Another

ಬಾಗಲೂರು ಗೋಡೆ ಕುಸಿತImage Credit source: Tv9 kannada

ಬೆಂಗಳೂರು, ಜೂ.18: ರಾಜಧಾನಿಯ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದ ಪರಿಣಾಮ 5 ವರ್ಷದ ಪುಟಾಣಿ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಮೃತಪಟ್ಟ ದುರ್ದೈವಿ ಮಗುವನ್ನು ಯಾದಗಿರಿ ಮೂಲದ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿರುವ ದಾವಲ್ ಸಾಬ್ ಅವರು ಬೆಂಗಳೂರಿನಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿದ್ದರು. ಅವರ ಪತ್ನಿ ಹಾಗೂ ಮಗು ಅಫೀನ್ ಕೇವಲ ಐದು ದಿನಗಳ ಹಿಂದಷ್ಟೇ ಬಾಗಲೂರು ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿಯಲ್ಲಿರುವ ತಮ್ಮ ತಂಗಿಯ ಮನೆಗೆ ಬಂದಿದ್ದರು.

ಬುಧವಾರ (ಜೂನ್ 17, 2026) ಸಂಜೆ ಸುಮಾರು 6:30ರ ವೇಳೆಗೆ, ಅಫೀನ್ ಪಕ್ಕದ ಮನೆಯ ಮಕ್ಕಳಾದ ಸಮನ್ವಿ ಹಾಗೂ ಮತ್ತೊಂದು ಮಗುವಿನೊಂದಿಗೆ ಬಿ.ಸಿ. ನರಸಪ್ಪ ಎಂಬುವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದನು. ಮಕ್ಕಳು ಆಟದ ಭರದಲ್ಲಿ ಕಬ್ಬಿಣದ ಗೇಟ್ ಹಿಡಿದು ಜೀಕಾಡುತ್ತಿದ್ದಾಗ, ಗೇಟ್‌ನ ಭಾರ ತಾಳಲಾರದೆ ಕಾಂಪೌಂಡ್ ಗೋಡೆಯು ಗೇಟ್ ಸಮೇತ ಒಮ್ಮೆಲೇ ಮಕ್ಕಳ ಮೇಲೆ ಕುಸಿದು ಬಿದ್ದಿದೆ.

ಇದನ್ನೂ ಓದಿ: ಪರಿಷತ್ ಕದನದ ಅಂತಿಮ ಪರೀಕ್ಷೆ: ಅಡ್ಡಮತದಾನದ ಭೀತಿ, ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಶಾಸಕರು

ಈ ಘಟನೆಯನ್ನು ನೋಡಿ ಸ್ಥಳೀಯರು ತಕ್ಷಣವೇ ಓಡಿ ಬಂದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳಿಬ್ಬರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ, ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದ ಅಫೀನ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಮತ್ತೊಂದು ಮಗು ಸಮನ್ವಿಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಬಾಗಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಂಪೌಂಡ್ ಗೋಡೆಯ ಅವೈಜ್ಞಾನಿಕ ನಿರ್ಮಾಣದ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೈನಲ್​ಗೇರಿದ್ದು ಹೇಗೆ? – Kannada News | How India A Qualified for the Final Before the Last League Match

ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳ ನಡುವಣ ತ್ರಿಕೋನ ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್​ಗೇರಿದೆ. ದಂಬುಲ್ಲಾದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಎ ತಂಡದ ವಿರುದ್ಧ ಭಾರತ ಎ ತಂಡ ಅಮೋಘ ಗೆಲುವು ದಾಖಲಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ನಾಯಕ ತಿಲಕ್ ವರ್ಮಾ (59), ಪ್ರಿಯಾಂಶ್ ಆರ್ಯ (58) ಮತ್ತು ಕುಮಾರ್ ಕುಶಾಗ್ರ (58) ಅರ್ಧಶತಕಗಳನ್ನು ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 319 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ಎ ತಂಡವು 36.5 ಓವರ್​ಗಳಲ್ಲಿ ಕೇವಲ 218 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡವು 101 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ +0.797 ಕ್ಕೇರಿದೆ.

ಫೈನಲ್​ಗೆ ಲಗ್ಗೆ:

ಭಾರತ ತಂಡವು 101 ರನ್​ಗಳ ಭರ್ಜರಿ ಜಯ ಸಾಧಿಸಿದ ಪರಿಣಾಮ +0.797 ನೆಟ್ ರನ್ ರೇಟ್ ಪಡೆದುಕೊಂಡಿದೆ. ಈ ನೆಟ್​ ರನ್ ರೇಟ್​ನೊಂದಿಗೆ 4 ಅಂಕಗಳನ್ನು ಪಡೆದಿರುವ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು  ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ನಡುವೆ ಒಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಆ ಪಂದ್ಯದ ಫಲಿತಾಂಶ ಏನೇ ಆದರೂ ಭಾರತದ ಫೈನಲ್ ಸ್ಥಾನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ.

ಏಕೆಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮೊದಲ ಅಥವಾ ಎರಡನೇ ಸ್ಥಾನ ಪಡೆಯಲಿದೆ. ಅತ್ತ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಟೀಮ್ ಇಂಡಿಯಾ ದ್ವಿತೀಯ ಸ್ಥಾನಕ್ಕೆ ಕುಸಿಯಬಹುದೇ ಹೊರತು, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ತುಂಬಾ ಕಡಿಮೆ.

  • ಶ್ರೀಲಂಕಾ ಎ ಗೆದ್ದರೆ: ಶ್ರೀಲಂಕಾ ತಂಡವು ಅಫ್ಘಾನಿಸ್ತಾನ್ ಎ ವಿರುದ್ಧ  ಗೆದ್ದರೆ, ಒಟ್ಟು 6 ಅಂಕಗಳೊಂದಿಗೆ ಫೈನಲ್​ಗೆ ಎಂಟ್ರಿ ಕೊಡಲಿದ್ದಾರೆ. ಅತ್ತ ಅಫ್ಘಾನಿಸ್ತಾನ್ ಕೇವಲ 2 ಅಂಕಗಳೊಂದಿಗೆ ಸರಣಿಯಿಂದ ಹೊರಬೀಳಲಿದೆ.
  • ಅಫ್ಘಾನಿಸ್ತಾನ್ ಎ ಗೆದ್ದರೆ: ಒಂದು ವೇಳೆ ಅಫ್ಘಾನಿಸ್ತಾನ್ ತಂಡವು ಶ್ರೀಲಂಕಾವನ್ನು ಸೋಲಿಸಿದರೆ, ಆಗ ಅಫ್ಘಾನಿಸ್ತಾನ್ ಕೂಡ ಭಾರತದಂತೆ 4 ಅಂಕಗಳನ್ನು ಪಡೆಯಲಿದೆ. ಈ ವೇಳೆ ಫೈನಲ್ ತಲುಪುವ ತಂಡವನ್ನು ನಿರ್ಧರಿಸಲು ನೆಟ್ ರನ್ ರೇಟ್ ನೋಡಬೇಕಾಗುತ್ತದೆ.

ನೆಟ್ ರನ್ ರೇಟ್ ಲೆಕ್ಕಾಚಾರ:

ಭಾರತ ಎ ತಂಡವು ಅಫ್ಘಾನಿಸ್ತಾನ್ ಎ ವಿರುದ್ಧ 101 ರನ್‌ಗಳ ಬೃಹತ್ ಆಂತರದಿಂದ ಗೆದ್ದಿರುವುದರಿಂದ, ಟೀಮ್ ಇಂಡಿಯಾ ರನ್ ರೇಟ್ (+0.797) ಅತ್ಯಂತ ಬಲಿಷ್ಠವಾಗಿದೆ. ಅಫ್ಘಾನಿಸ್ತಾನ್ ಎ ತಂಡವು ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರೂ, ಕಳಪೆ ರನ್ ರೇಟ್ (-1.983) ಹೊಂದಿರುವ ಕಾರಣ ಅವರು  ಭಾರತದ ನೆಟ್ ರನ್ ರೇಟ್ ಮಟ್ಟಕ್ಕೆ ತರುವುದು ಕಷ್ಟಸಾಧ್ಯ. ಹೀಗಾಗಿ ಶ್ರೀಲಂಕಾ ತಂಡವನ್ನು ರನ್ ರೇಟ್ ಆಧಾರದಲ್ಲಿ ಹಿಂದಿಕ್ಕಬಹುದೇ ಹೊರತು, ಭಾರತದ ನೆಟ್​ ರನ್ ರೇಟ್ ಮೀರಿಸಲು ಪವಾಡವೇ ನಡೆಯಬೇಕು.

ಭಾರತವನ್ನು ಹೇಗೆ ಹಿಂದಿಕ್ಕಬಹುದು?

ಒಂದು ವೇಳೆ ಅಫ್ಘಾನಿಸ್ತಾನ್ ಎ ತಂಡವು ಭಾರತವನ್ನು ರನ್ ರೇಟ್‌ನಲ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಬೇಕಾದರೆ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈ ರೀತಿಯಾಗಿ ಅಸಾಧ್ಯವಾದ ಗೆಲುವು ಸಾಧಿಸಬೇಕಾಗುತ್ತದೆ.

  • ಮೊದಲು ಬ್ಯಾಟಿಂಗ್ ಮಾಡಿದರೆ: ಅಫ್ಘಾನಿಸ್ತಾನ್ ಎ ಮೊದಲು ಬ್ಯಾಟಿಂಗ್ ಮಾಡಿ 300 ರನ್ ಗಳಿಸಿದರೆ, ಶ್ರೀಲಂಕಾ ತಂಡವನ್ನು ಕೇವಲ 15-20 ರನ್‌ಗಳ ಒಳಗೆ ಆಲೌಟ್ ಮಾಡಬೇಕಾಗುತ್ತದೆ. ಅಂದರೆ ಸುಮಾರು 280+ ರನ್‌ಗಳ ಬೃಹತ್ ಜಯ ಗಳಿಸಬೇಕು.
  • ಚೇಸಿಂಗ್ ಮಾಡಿದರೆ: ಶ್ರೀಲಂಕಾ ನೀಡುವ ಯಾವುದೇ ಗುರಿಯನ್ನು (ಉದಾಹರಣೆಗೆ 200 ರನ್) ಅಫ್ಘಾನಿಸ್ತಾನ್ ತಂಡವು ಕೇವಲ 2 ರಿಂದ 3 ಓವರ್‌ಗಳ ಒಳಗೆ ಬೆನ್ನಟ್ಟಿ ಪಂದ್ಯವನ್ನು ಮುಗಿಸಬೇಕಾಗುತ್ತದೆ.

ಅಂದರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್​ ಅನ್ನು ಹಿಂದಿಕ್ಕಲು ಅಫ್ಘಾನಿಸ್ತಾನ್ ಎ ತಂಡವು ಕನಿಷ್ಠ 200 ರನ್​ಗಳ ಗುರಿಯನ್ನು 3 ಓವರ್​ಗಳೊಗೆ ಚೇಸ್ ಮಾಡಬೇಕು. ಇನ್ನು ಅಫ್ಘಾನ್ ಪಡೆ 300 ರನ್​ಗಳ ಗುರಿ ನೀಡಿದರೆ ಶ್ರೀಲಂಕಾ ತಂಡವನ್ನು 20-30 ರನ್​ಗಳಿಗೆ ಆಲೌಟ್ ಮಾಡಬೇಕು.

ಈ ಎರಡೂ ಫಲಿತಾಂಶಗಳು ಮೂಡಿಬರಬೇಕಿದ್ದರೆ ಪವಾಡವೇ ಸಂಭವಿಸಬೇಕು. ಒಂದು ವೇಳೆ ಪವಾಡ ನಡೆದು ಅಂತಹದೊಂದು ಫಲಿತಾಂಶ ಮೂಡಿಬಂದರೂ ಭಾರತ ತಂಡವು ಅಗ್ರಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿಯಬಹುದೇ ಹೊರತು ಮೂರನೇ ಸ್ಥಾನಕ್ಕಿಳಿಯಲ್ಲ.

ಇದನ್ನೂ ಓದಿ: ಕಾಂಗೋ ಮುಂದೆ ಕಂಗೆಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!

ಹೀಗಾಗಿಯೇ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ನಡುವಣ ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಫೈನಲಿಸ್ಟ್ ಎಂದು ಪರಿಗಣಿಸಲಾಗಿದೆ. ಅದರಂತೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚತವಾಗಿದೆ.

Source link

Breaking News Today Live: ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು ಮತದಾನ: ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ರಾಜ್ಯ ವಿಧಾನಪರಿಷತ್​ನ 7 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತ ನಿಗದಿಯಾಗಿದೆ. ಶಾಸಕರು ಬೆಳಗ್ಗೆ 8.30ಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಕಚೇರಿಗೆ ಆಗಮಿಸಿ ಮತದಾನಕ್ಕೆ ತೆರಳಲಿದ್ದು, ಎನ್.ರವಿಕುಮಾರ್ ಚುನಾವಣಾ ಏಜೆಂಟ್ ಆಗಿದ್ದಾರೆ. ಜಾಗತಿಕವಾಗಿ, 110 ದಿನಗಳ ಸಂಘರ್ಷಕ್ಕೆ ಅಂತ್ಯ ಹಾಡಿ ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಅನುಷ್ಠಾನ ಪರೀಕ್ಷಿಸುವ ಸಮಯ ಎಂದು ಇರಾನ್ ಹೇಳಿದೆ. ಇತ್ತ ‘ದೃಶ್ಯಂ 3’ ತೆಲುಗು ಆವೃತ್ತಿಯ ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಿರ್ದೇಶಕಿ ಶ್ರೀಪ್ರಿಯಾ ಸಂಸ್ಥೆಯ ರಿಮೇಕ್ ಹಕ್ಕುಗಳ ವಿವಾದದ ಹಿನ್ನೆಲೆಯಲ್ಲಿ ಜೂನ್ 18ರ ಸ್ಟ್ರೀಮಿಂಗ್‌ಗೆ ಕೋರ್ಟ್ ಬ್ರೇಕ್ ಹಾಕಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

 

Source link

‘ಬಾಸ್’ ಸಿನಿಮಾ ರಿಲೀಸ್​​ಗೆ ವಿರೋಧ; ಬೇಸರ ಹೊರಹಾಕಿದ ನಿರ್ದೇಶಕ – Kannada News | Boss Movie Update Director Lava in Shock after Vijayalakshmi File case against Movie

‘ಬಾಸ್’ ಸಿನಿಮಾ ರಿಲೀಸ್​​ಗೆ ವಿರೋಧ ವ್ಯಕ್ತವಾಗಿದೆ. ಸಿನಿಮಾ ರಿಲೀಸ್ ಆಗಬಾರದು ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಿನಿಮಾದ ಕಥೆ ರೇಣುಕಾಸ್ವಾಮಿ ಕೊಲೆ ಕೇಸ್ ಆಧರಿಸಿದೆ ಎಂಬ ಅನುಮಾನ ಇದೆ. ಈ ಕಾರಣಕ್ಕೆ ರಿಲೀಸ್​​ಗೆ ವಿರೋಧ ಇದೆ. ಈ ವಿಷಯವಾಗಿ ಸಿನಿಮಾದ ನಿರ್ದೇಶಕ ಲವ ಬೇಸರ ಹೊರಹಾಕಿದ್ದಾರೆ. ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ‘ಬಾಸ್’ ಸಿನಿಮಾಗೆ ತಡೆ ಕೋರಿ ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ ಅರ್ಜಿ ವಜಾಗೊಂಡಿತ್ತು. ಅದರಿಂದ ಚಿತ್ರತಂಡಕ್ಕೆ ಬಲ ಸಿಕ್ಕಂತೆ ಆಗಿತ್ತು.ಈಗ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ತಂಡ ಚಿಂತೆಗೆ ಒಳಗಾಗಿದೆ. ಈ ಬಗ್ಗೆ ಅವು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ 

Source link