ಮಡಿಕೇರಿ, ಮಾರ್ಚ್ 31:ಕೊಡಗು ಜಿಲ್ಲೆಯಲ್ಲಿ ದೈವ ಮತ್ತು ದೈವ ನರ್ತಕರನ್ನು ಅವಹೇಳನ ಮಾಡಿದ ಘಟನೆ ಸಂಬಂಧ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬೆನ್ನಲ್ಲೇ ಆರೋಪಿ ಫೈಜಲ್ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ವಿವಾಹವೊಂದರ ನಂತರ ಖಾಸಗಿಯಾಗಿ ಮಾತನಾಡಿದ ಮಾತುಗಳು ವೈರಲ್ ಆಗಿಬಿಟ್ಟವು. ಇದರಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ತಾವು ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 31: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಇದರ ಮೊದಲ ಭಾಗವಾಗಿ ಇಂದು ಬೆಳಗ್ಗೆ ಸಂಪಂಗಿ ರಾಮನಗರದಲ್ಲಿರುವ ಸಂಪಂಗಿಕೆರೆಯ ಶಕ್ತಿಪೀಠದಲ್ಲಿ ಹಸಿ ಕರಗ ಶಕ್ತ್ಯೋತ್ಸವ ಅದ್ಧೂರಿಯಾಗಿ ಜರುಗಿದೆ. ಎ. ಜ್ಞಾನೇಂದ್ರ ಸ್ವಾಮಿಯವರು 16ನೇ ಬಾರಿಗೆ ಯಶಸ್ವಿಯಾಗಿ ಹಸಿ ಕರಗವನ್ನು ಹೊತ್ತಿದ್ದು, ರಾಜಬೀದಿಗಳಲ್ಲಿ ಸಂಚರಿಸಿ ಜಿಬಿಎ ಮುಖ್ಯ ಕಚೇರಿ ತಲುಪಿದರು. ಅಲ್ಲಿ ಪೂಜೆ ಸಲ್ಲಿಸಿ, ಕೆ.ಆರ್. ಮಾರುಕಟ್ಟೆ ರಸ್ತೆಯ ಮೂಲಕ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿದ್ದಾರೆ. ನಾಳೆ ಮಧ್ಯರಾತ್ರಿ ಚೈತ್ರ ಪೌರ್ಣಮಿಯಂದು ಹೂವಿನ ಕರಗದ ರೂಪದಲ್ಲಿ ಹೊರಬಂದು ಕೆಂಪೇಗೌಡರು ನಿರ್ಮಿಸಿರುವ 25 ಪೇಟೆಗಳಲ್ಲಿ ಲಕ್ಷಾಂತರ ಜನರಿಗೆ ದರ್ಶನ ನೀಡುತ್ತಾರೆ. ನಂತರ ನಾಡಿದ್ದು ಬೆಳಗ್ಗೆ 6 ಗಂಟೆಯ ಒಳಗಾಗಿ ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪುತ್ತಾರೆ. ಈ ಮೂಲಕ ಮೂರು ದಿನಗಳ ಕರಗ ಮಹೋತ್ಸವ ಸಂಪನ್ನಗೊಳ್ಳಲಿದೆ.
ಕೆಲವರಿಗೆ ಆಪ್ಟಿಕಲ್ ಇಲ್ಯೂಷನ್ (Optical Illusion) ಸೇರಿದಂತೆ ಒಗಟುಗಳನ್ನು ಬಿಡಿಸುವುದೆಂದರೆ ಖುಷಿಯೋ ಖುಷಿ. ಸಮಯ ಸಿಕ್ಕಾಗಲೆಲ್ಲಾ ಇಂತಹ ಒಗಟುಗಳನ್ನು ಬಿಡಿಸುವತ್ತ ಆಸಕ್ತಿ ಹೆಚ್ಚಿನವರು ತೋರಿಸುತ್ತಾರೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರವು ಟ್ರಿಕ್ಕಿಯಾಗಿದೆ. ಹುಲಿಗಳ ನಡುವೆ ಇರುವ ಜೀಬ್ರಾವನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ನೀವು ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.
ಈ ಚಿತ್ರದಲ್ಲಿ ಏನು ಕಾಣಿಸುತ್ತದೆ?
ಈ ಇಲ್ಯೂಷನ್ ಚಿತ್ರವು ಟ್ರಿಕ್ಕಿ ಒಗಟಿನ ಚಿತ್ರವಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಮೊದಲು ನೋಡಿದಾಗ ಕಾಡಿನ ನೋಟವಿದೆ. ಇಲ್ಲಿ ಹುಲಿಗಳ ನಡುವೆ ಜೀಬ್ರಾವಿದೆ. ಆದರೆ ನಿಮ್ಮ ಕಣ್ಣಿಗೆ ಎಲ್ಲವೂ ಹುಲಿಗಳಂತೆ ಕಾಣುತ್ತದೆ. ಆದರೆ, ಆ ಹುಲಿಗಳ ಮಧ್ಯದಲ್ಲಿ ಜೀಬ್ರಾ ಕೂಡ ಇದೆ. ಈ ಚಿತ್ರದಲ್ಲಿರುವ ಸವಾಲು ಆ ಜೀಬ್ರಾವನ್ನು ಕಂಡುಹಿಡಿಯುವುದು. ನೀವು 9 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಪ್ರಯತ್ನಿಸಿ.
ತೀಕ್ಷ್ಣ ಕಣ್ಣುಗಳನ್ನು ಹೊಂದಿರುವವರು ಮಾತ್ರ ಗುಪ್ತ ವಸ್ತು ಸೇರಿದಂತೆ ಪ್ರಾಣಿ ಹುಡುಕಲು ಸಾಧ್ಯ. ನೀವು ಎಷ್ಟೇ ಪ್ರಯತ್ನಿಸಿದರೂ ಈ ಚಿತ್ರದಲ್ಲಿರುವ ಜೀಬ್ರಾವನ್ನು ಪತ್ತೆ ಹಚ್ಚಲು ಸಾಧ್ಯ. ಈ ಪ್ರಾಣಿ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಎಂದಾದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಚಿತ್ರದಲ್ಲಿ ಜೀಬ್ರಾ ಎಲ್ಲಿದೆ ಎಂದು ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಧುರಂಧರ್ 2’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಡಿಸೆಂಬರ್ನಲ್ಲಿ ತಮ್ಮ ಮೊದಲ ಚಿತ್ರದೊಂದಿಗೆ ಆದಿತ್ಯ ಧರ್ 1,300 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದರು. ಕೆಲವೇ ತಿಂಗಳುಗಳ ನಂತರ, 1,000 ಕೋಟಿ ಕ್ಲಬ್ಗೆ ಪ್ರವೇಶಿಸುವ ಮೂಲಕ ಅವರು ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ‘ಧುರಂಧರ್ 2’ ಚಿತ್ರವು ಕೇವಲ 12 ದಿನಗಳಲ್ಲಿ ಇಡೀ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದೆ. ಎರಡನೇ ಶನಿವಾರ ಮತ್ತು ಭಾನುವಾರದಂದು ನಡೆದ ಕಲೆಕ್ಷನ್ಗೆ ಹೋಲಿಸಿದರೆ ಎರಡನೇ ಸೋಮವಾರ ಚಿತ್ರದ ಗಳಿಕೆ ಗಮನಾರ್ಹವಾಗಿ ಕುಸಿದಿದೆ.
‘ಧುರಂಧರ್ 2’ ಚಿತ್ರವು ತನ್ನ 12ನೇ ದಿನದಂದು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ತುಂಬಾ ಕಡಿಮೆ ಗಳಿಕೆ ಮಾಡಿದೆ. ‘ಧುರಂಧರ್ 2’ ಚಿತ್ರ ಸೋಮವಾರ 25 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಈ ಚಿತ್ರ 2 ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವುದು ಅನುಮಾನ ಎನ್ನಲಾಗುತ್ತಿದೆ. 12 ನೇ ದಿನದ ಆಕ್ಯುಪೆನ್ಸಿ ಶೇಕಡಾ 23.4 ರಷ್ಟಿತ್ತು. ಚಿತ್ರದ ಭಾನುವಾರದ ಗಳಿಕೆಗೆ ಹೋಲಿಕೆ ಮಾಡಿದರೆ (68 ಕೋಟಿ ರೂಪಾಯಿ) ಸೋಮವಾರದ ಕಲೆಕ್ಷನ್ ಭಾರೀ ಹಿನ್ನಡೆ ಆಗಿದೆ.
‘ಧುರಂಧರ್ 2’ ಚಿತ್ರದ ಒಟ್ಟು ಗಳಿಕೆ 875.17 ಕೋಟಿ ಆದರೆ, ಗ್ರಾಸ್ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ದಾಟಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ 1392 ಕೋಟಿ ಗಳಿಸಿದೆ. ವಿದೇಶದಿಂದ ಸಿನಿಮಾಗೆ 300ಕ್ಕೂ ಅಧಿಕ ಕೋಟಿ ರೂಪಾಯಿ ಹರಿದು ಬಂದಿದೆ. ಏತನ್ಮಧ್ಯೆ, 12ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳ ಪಟ್ಟಿಯಲ್ಲಿ ‘ಧುರಂಧರ್ 2’ ಮೂರನೇ ಸ್ಥಾನದಲ್ಲಿದೆ.
‘ಧುರಂಧರ್ 2’ ವಿಶ್ವ ಮಟ್ಟದ ಗಳಿಕ 1400 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಈ ಚಿತ್ರದ ಗಳಿಕೆ ನಿಧಾನಗತಿ ಅನುಸರಿಸಿದ್ದರಿಂದ 2 ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವುದು ಚಿತ್ರಕ್ಕೆ ಕಷ್ಟ ಆಗಬಹುದು ಎಂದು ಹೇಳಲಾಗುತ್ತಾ ಇದೆ. ದಂಗಲ್ ಸಿನಿಮಾದ ಗಳಿಕೆ 2 ಸಾವಿರ ಕೋಟಿ ರೂಪಾಯಿ ಇದೆ. ಈ ದಾಖಲೆಯನ್ನು ಸಿನಿಮಾ ಮುರಿಯುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಬೆಂಗಳೂರು, ಮಾರ್ಚ್ 31: ಕರ್ನಾಟಕ ರಾಜ್ಯಾದ್ಯಂತ 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ 2026ನೇ ಸಾಲಿನ ಪ್ರಥಮ ಪಿಯುಸಿ (1st PUC) ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಇಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ಪರೀಕ್ಷೆಗೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ಇದೇ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ಫಲಿತಾಂಶ ಪ್ರಕಟಣೆಯಲ್ಲಿ ಕೊಂಚ ಬದಲಾವಣೆ
ಈ ಬಾರಿ ಫಲಿತಾಂಶ ಪ್ರಕಟಿಸುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ವೇಳೆ ಫಲಿತಾಂಶ ಲಭ್ಯವಾಗಿಲ್ಲ. ಹಂತ ಹಂತವಾಗಿ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಕ್ರಮವನ್ನು ಮಂಡಳಿ ಅನುಸರಿಸಿದೆ. ಇದರ ಪರಿಣಾಮವಾಗಿ, ಕೆಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೊದಲು ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ. ವಿಶೇಷವಾಗಿ ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳ ಕಾಲೇಜುಗಳಿಗೆ ಮೊದಲ ಹಂತದಲ್ಲೇ ಫಲಿತಾಂಶ ತಲುಪುವ ಸಾಧ್ಯತೆ ಇದ್ದು, ಇತರ ಪ್ರದೇಶಗಳ ವಿದ್ಯಾರ್ಥಿಗಳು ಸ್ವಲ್ಪ ಸಮಯ ಕಾಯಬೇಕಾಗಬಹುದು.
ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2026: ಆನ್ಲೈನ್ನಲ್ಲಿ ವೀಕ್ಷಿಸುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ;
ಹಂತ 1: ಮೊದಲಿಗೆ ಕರ್ನಾಟಕ ಪರೀಕ್ಷಾ ಫಲಿತಾಂಶದ ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ಕಾಣಿಸುವ ‘1st PUC Annual Exam Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಹೊಸ ಪುಟ ತೆರೆಯುತ್ತದೆ, ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು (Registration Number) ನಮೂದಿಸಿ.
ಹಂತ 4: ನಿಮ್ಮ ವಿಷಯದ ಸ್ಟ್ರೀಮ್ (Science/Arts/Commerce) ಅನ್ನು ಆಯ್ಕೆ ಮಾಡಿ.
ಹಂತ 5: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.
kseab.karnataka.gov.in
ಈ ಎರಡು ವೆಬ್ಸೈಟ್ಗಳಲ್ಲಿ ಪಿಯುಸಿ ಫಲಿತಾಂಶ ಲಭ್ಯವಿರಲಿದೆ.
ವೆಬ್ಸೈಟ್ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಫಲಿತಾಂಶ ಪ್ರಕಟಣೆಯಲ್ಲಿ ಕೊಂಚ ಬದಲಾವಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಮಂಡಳಿ ಸೂಚಿಸಿದ್ದು, ದಿನದ ಅವಧಿಯಲ್ಲಿ ಎಲ್ಲರಿಗೂ ಫಲಿತಾಂಶ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಬೀಜಿಂಗ್, ಮಾರ್ಚ್ 31: ಡ್ಯಾನ್ಸ್ ಮಾಡುತ್ತಾ ಬಂದು ರೋಬೋಟ್ ಬಾಲಕನ ಕೆನ್ನೆಗೆ ಹೊಡೆದಿರುವ ಘಟನೆ ಚೀನಾದಲ್ಲಿ ನಡೆದಿದೆ. ಮಾರ್ಚ್ 21ರಂದು ಚೀನಾದ ಶಾಂಕ್ಸಿಯಲ್ಲಿ ನಡೆದ ತಂತ್ರಜ್ಞಾನ ಪ್ರದರ್ಶನದಲ್ಲಿ ಈ ಘಟನೆ ನಡೆದಿದೆ.ರೋಬೋಟ್ ಯುನಿಟ್ರೀ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ G1 ಹ್ಯೂಮನಾಯ್ಡ್ ಮಾದರಿ ಎಂದು ಹೇಳಲಾಗುತ್ತಿದೆ. ಸುಮಾರು 35 ಕಿಲೋಗ್ರಾಂಗಳಷ್ಟು ತೂಕ ಮತ್ತು ಸುಮಾರು 13,500 ಡಾಲರ್ ಬೆಲೆಯ ಈ ಯಂತ್ರವನ್ನು ಪ್ರಾಥಮಿಕವಾಗಿ ಸಂಶೋಧನೆ, ಶೈಕ್ಷಣಿಕ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ; ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ವಾಯುದೇವನ ಮಗನಾದ್ದರಿಂದ ಅವನನ್ನು “ಮಾರುತಿ”, “ಆಂಜನೇಯ” ಮತ್ತು “ಪವನಸುತ” ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆ ತಿಥಿಯು ಏಪ್ರಿಲ್ 1 ರ ಬೆಳಗ್ಗೆ7.06 ರಿಂದ ಶುರುವಾಗಿ ಏಪ್ರಿಲ್ 2 ರ ಬೆಳಗ್ಗೆ 7. 41ಕ್ಕೆ ಕೊನೆಗೊಳ್ಳುವುದು. ಆದ್ದರಿಂದ ಈ ಪವಿತ್ರ ಹಬ್ಬವನ್ನು ಏಪ್ರಿಲ್ 2 ರಂದು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದೆ.
ಹನುಮಂತನ ಜನ್ಮದ ಹಿಂದೆ ಒಂದು ರೋಚಕ ಕಥೆಯಿದೆ. ಅಂಜನಾದೇವಿ ಮತ್ತು ಕೇಸರಿ ದಂಪತಿಗಳು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾರೆ. ಅಂಜನಾದೇವಿಯ ಭಕ್ತಿಗೆ ಮೆಚ್ಚಿದ ಪರಶಿವನು ತನ್ನ ಅಂಶವನ್ನೇ ಮಗನಾಗಿ ನೀಡಲು ಅನುಗ್ರಹಿಸುತ್ತಾನೆ. ವಾಯುದೇವನು ಶಿವನ ದಿವ್ಯ ಶಕ್ತಿಯನ್ನು ಹೊತ್ತು ತಂದು ಅಂಜನಾದೇವಿಗೆ ತಲುಪಿಸಿದ ಕಾರಣ, ಹನುಮಂತನು ವಾಯುಪುತ್ರನಾಗಿ ಜನಿಸುತ್ತಾನೆ. ಈ ದಿನವನ್ನು ನಾವು ಹನುಮ ಜಯಂತಿಯನ್ನಾಗಿ ಆಚರಿಸಿ, ಆ ಮಹಾಶಕ್ತಿಯನ್ನು ಸ್ಮರಿಸುತ್ತೇವೆ.
ಹನುಮಂತನ ಜೀವನವು ನಮಗೆ “ಭಕ್ತಿ”ಯ ನಿಜವಾದ ಅರ್ಥವನ್ನು ಕಲಿಸುತ್ತದೆ. ಶ್ರೀರಾಮನ ಪರಮ ಭಕ್ತನಾಗಿ, ಅವನು ತನ್ನ ಸಂಪೂರ್ಣ ಅಸ್ತಿತ್ವವನ್ನೇ ದೈವಸೇವೆಗೆ ಸಮರ್ಪಿಸಿದವನು. ಹನುಮಂತನನ್ನು ಪೂಜಿಸುವುದರಿಂದ ಭಕ್ತರಲ್ಲಿ ಪ್ರಾಮಾಣಿಕತೆ ಮೂಡುತ್ತದೆ ಮತ್ತು ಕಷ್ಟದ ಸಮಯದಲ್ಲಿ ಮನಸ್ಸು ಹಾಗೂ ದೇಹದ ಸಮರ್ಪಣೆಯಿಂದ ಪ್ರಾರ್ಥಿಸಿದರೆ ಎಂತಹ ಸಂಕಷ್ಟಗಳಿಂದಲೂ ರಕ್ಷಣೆ ಸಿಗುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ. ಅವನು ಪ್ರತಿ ಭಕ್ತನಿಗೂ ಒಂದು ಆದರ್ಶ ಮಾರ್ಗದರ್ಶಕನಾಗಿದ್ದಾನೆ.
ದೈಹಿಕ ಮತ್ತು ಮಾನಸಿಕ “ಶಕ್ತಿ”ಯ ವಿಚಾರಕ್ಕೆ ಬಂದರೆ ಹನುಮಂತನೇ ಸರ್ವೋಚ್ಚ. ಧೈರ್ಯ, ಸಾಹಸ ಮತ್ತು ಬದ್ಧತೆಯ ಸಾಕಾರ ರೂಪ ಆತ. ಹನುಮಂತನ ಆರಾಧನೆಯು ಭಕ್ತರಲ್ಲಿ ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯನ್ನು ತುಂಬುತ್ತದೆ. ಅಹಂಕಾರ ಮತ್ತು ದುರಾಸೆಯಿಂದ ಮುಕ್ತವಾದ “ಕರ್ಮ” ಹನುಮಂತನ ಮತ್ತೊಂದು ವಿಶೇಷತೆ. ತನ್ನಲ್ಲಿ ಅಪಾರ ಶಕ್ತಿಯಿದ್ದರೂ ಅದನ್ನು ಸ್ವಂತಕ್ಕಲ್ಲದೆ, ಕೇವಲ ಪರಮಾತ್ಮನ ಮತ್ತು ಧರ್ಮದ ಸೇವೆಗಾಗಿ ಬಳಸಿದ ಮಹಾನುಭಾವ ಈತ.
ಈ ಪವಿತ್ರ ದಿನದಂದು ಭಕ್ತರು ಸೂರ್ಯೋದಯಕ್ಕೂ ಮುನ್ನವೇ ಎದ್ದು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಹನುಮಾನ್ ಚಾಲೀಸಾದ ಪಠಣವು ವಾತಾವರಣದಲ್ಲಿ ಆಧ್ಯಾತ್ಮಿಕ ಕಂಪನವನ್ನು ಸೃಷ್ಟಿಸುತ್ತದೆ. ಅನೇಕರು ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಾಂತಿ ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಮೂರ್ತಿಯನ್ನು ಹೂವು, ಹಣ್ಣು ಮತ್ತು ಪಂಚಾಮೃತಗಳಿಂದ ಪೂಜಿಸಿ, ಧ್ಯಾನ ಮತ್ತು ಜಪದ ಮೂಲಕ ಹನುಮಂತನ ಮಹಿಮೆಯನ್ನು ಕೊಂಡಾಡಲಾಗುತ್ತದೆ.
ಹನುಮ ಜಯಂತಿಯ ಆಚರಣೆಯು ಕೇವಲ ಧಾರ್ಮಿಕ ವಿಧಿಯಲ್ಲ, ಅದು ಭಕ್ತರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಇದು ಮನಸ್ಸಿನ ಭಯ ಮತ್ತು ಆತಂಕಗಳನ್ನು ದೂರಮಾಡಿ, ದೈಹಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನದ ಕಠಿಣ ಪರಿಸ್ಥಿತಿಗಳಲ್ಲಿ ತಾಳ್ಮೆ ಮತ್ತು ಧೈರ್ಯದಿಂದ ವರ್ತಿಸುವ ಕಲೆಯನ್ನು ಇದು ಕಲಿಸುತ್ತದೆ. ಅಂತಿಮವಾಗಿ, ಶ್ರೀರಾಮನ ಮೇಲಿನ ಭಕ್ತಿಯ ಮೂಲಕ ಧರ್ಮಮಾರ್ಗದಲ್ಲಿ ನಡೆಯಲು ಹನುಮಂತನು ನಮಗೆ ದಾರಿದೀಪವಾಗುತ್ತಾನೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 31: ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪಚುನಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿದ್ದು, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಬಂದರೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರವಾಗಿ ಮತ್ತು ಬಾಗಲಕೋಟೆಯಲ್ಲಿ ವೀರಣ್ಣ ಚಾರಂತಿಮಠ್ ಪರವಾಗಿ ಪ್ರಚಾರಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಅವರು ಮಾತನಾಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಹಿತವನ್ನು ಸಂಪೂರ್ಣವಾಗಿ ಮರೆತು ‘ತುಘಲಕ್ ದರ್ಬಾರ್’ ನಡೆಸುತ್ತಿದೆ ಎಂದು ಟೀಕಿಸಿದರು. ಮತ್ತೊಮ್ಮೆ ಕಾಂಗ್ರೆಸ್ ಗೆದ್ದರೆ ಅದು ಭ್ರಷ್ಟಾಚಾರಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ ಅವರು, ಎರಡೂ ಕ್ಷೇತ್ರದ ಮತದಾರರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು 2024ರ ಅಕ್ಟೋಬರ್ನಲ್ಲಿ ಹೆಣ್ಣು ಮಗುವನ್ನು ಬರಮಾಡಿಕೊಂಡರು. ಮಗುವಿಗೆ ತ್ರಿದೇವಿ ಎಂದು ಹೆಸರು ಇಟ್ಟಿದ್ದರು. ಈಗ ಇವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಪ್ಯಾರಿಸ್ ಐಫಿಲ್ ಟವರ್ ಎದುರು ನಿಂತು ಹರ್ಷಿಕಾ ಹಾಗೂ ಭುವನ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಮೊದಲ ಮಗಳು ಕೂಡ ಇದ್ದಾಳೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಹರ್ಷಿಕಾ-ಭುವನ್ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
‘ಈ ಸೆಪ್ಟೆಂಬರ್ನಲ್ಲಿ ನಮ್ಮ ತಾರಾಗಣಕ್ಕೆ ಹೊಸ ಪುಟ್ಟ ತಾರೆ ಸೇರ್ಪಡೆಯಾಗಲಿದೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಮನಸ್ಸು ತುಂಬಿವೆ ಮತ್ತು ಸ್ಕ್ರಿಪ್ಟ್ ಪರಿಪೂರ್ಣವಾಗಿ ಕಾಣುತ್ತದೆ. ಧನ್ಯವಾದಗಳು’ ಎಂದು ಭುವನ್ ಬರೆದುಕೊಂಡಿದ್ದಾರೆ.
ಭುವನ್ ಹಾಗೂ ಹರ್ಷಿಕಾಗೆ ದೇವರ ಮೇಲೆ ಅಪಾರ ಭಕ್ತಿ. ಅವರು ಆಗಾಗ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅವರು ಈಗ ಮತ್ತಷ್ಟು ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಹರ್ಷಿಕಾ ಹಾಗೂ ಭುವನ್ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಹರ್ಷಿಕಾ ‘ಚಿ. ಸೌಜನ್ಯ’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಇದೆ. ಈ ಸಿನಿಮಾ ಯಾವ ಹಂತದಲ್ಲಿದೆ ಎಂಬ ಕುತೂಹಲ ಮೂಡಿದೆ.
ಸನಾತನ ಹಿಂದೂ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಇಂದಿನ ಯುಗದಲ್ಲೂ ಸೌಂದರ್ಯವು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಸೌಂದರ್ಯದ ಒಂದು ಭಾಗವೇ ಉಗುರುಗಳಿಗೆ ಬಣ್ಣ ಹಚ್ಚುವುದು, ಇದನ್ನು ನಾವು ನೈಲ್ ಪಾಲಿಶ್ ಎಂದು ಕರೆಯುತ್ತೇವೆ. ಈ ಅಭ್ಯಾಸವು ಮುಖ್ಯವಾಗಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತವಿದ್ದರೂ, ಕೆಲವೊಮ್ಮೆ ಪುರುಷರೂ ಇದನ್ನು ಬಳಸುವುದನ್ನು ಕಾಣಬಹುದು. ಆದರೆ, ಇದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ, ನಮ್ಮ ಜ್ಯೋತಿಷ್ಯ ಶಾಸ್ತ್ರ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಉಗುರು ಬಣ್ಣಗಳು ನಮ್ಮ ಜೀವನದ ಮೇಲೆ, ವಿಶೇಷವಾಗಿ ಮಾನಸಿಕ ಸ್ಥಿತಿ ಮತ್ತು ಶುಭ ಫಲಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಉಗುರುಗಳಿಗೆ ಬಣ್ಣ ಹಚ್ಚುವುದರಿಂದ ಮಾನಸಿಕವಾಗಿ ಪರಿವರ್ತನೆ ಸಾಧ್ಯವೇ? ಯಾವ ಬಣ್ಣ ಶುಭ, ಯಾವುದು ಅಶುಭ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ. ವಿವಿಧ ಬಣ್ಣಗಳು ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಶಾಸ್ತ್ರೋಕ್ತವಾಗಿ ವಿವರಿಸಲಾಗಿದೆ.
ಬಣ್ಣಗಳ ಪ್ರಭಾವ ಮತ್ತು ಅವುಗಳ ಅರ್ಥ:
ಕೆಂಪು ಬಣ್ಣ:
ಕೆಂಪು ಬಣ್ಣವು ಮಂಗಳನ ಪ್ರತೀಕವಾಗಿದೆ. ಇದು ಕೋಪ, ಆವೇಶ, ಮತ್ತು ತಾಪವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದು ತಕ್ಷಣದ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಮತ್ತು ಕೆಲವೊಮ್ಮೆ ಅಹಂಕಾರ ಮತ್ತು ಹೋಲಿಕೆ ಭಾವನೆಗಳಿಗೆ ಕಾರಣವಾಗಬಹುದು. ಹಾಗಾಗಿ, ಸಂಪೂರ್ಣ ಗಾಢ ಕೆಂಪು ಬಣ್ಣಕ್ಕಿಂತ ತಿಳಿ ಕೆಂಪು ಅಥವಾ ಗುಲಾಬಿ ಬಣ್ಣದ ಛಾಯೆಗಳನ್ನು ಬಳಸುವುದರಿಂದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಹಳದಿ ಬಣ್ಣ:
ಇದು ಗುರುವಿನ ಪ್ರತೀಕವಾಗಿದ್ದು, ಅತ್ಯಂತ ಶುಭಕರವಾಗಿದೆ. ಹಳದಿ ಬಣ್ಣವು ಮನಸ್ಸಿಗೆ ಶಾಂತಿ, ಸಹನೆ ಮತ್ತು ಜ್ಞಾನದ ಆಸಕ್ತಿಯನ್ನು ತರುತ್ತದೆ. ವಿಷಯಗಳನ್ನು ತಿಳಿದುಕೊಳ್ಳುವ ಮನೋಭಾವವನ್ನು ಹೆಚ್ಚಿಸುತ್ತದೆ. ವಿವಾಹಿತರು ಮತ್ತು ವಿವಾಹವಾಗದವರಿಗೂ ಇದು ಶುಭ ಫಲಗಳನ್ನು ನೀಡುತ್ತದೆ. ಸಕಾರಾತ್ಮಕ ಸ್ಪಂದನೆಗೆ ಹಳದಿ ಬಣ್ಣ ಸಹಕಾರಿ.
ಗುಲಾಬಿ ಮತ್ತು ಬಿಳಿ ಬಣ್ಣ:
ಶುಕ್ರನ ಪ್ರತೀಕವಾದ ಗುಲಾಬಿ ಬಣ್ಣವು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ನಿಮ್ಮ ಮಾತು ಮತ್ತು ಕೃತಿಗಳಲ್ಲಿ ಸೌಮ್ಯತೆಯನ್ನು ತರುತ್ತದೆ, ಇದರಿಂದ ಇತರರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಬಿಳಿ ಬಣ್ಣವು ಸ್ಪಷ್ಟತೆ ಮತ್ತು ಮಾನಸಿಕ ನೆಮ್ಮದಿಯನ್ನು ಸೂಚಿಸುತ್ತದೆ. ಇದು ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ ಮತ್ತು ಅತ್ಯಂತ ಸೂಕ್ಷ್ಮವಾದ ಬಣ್ಣವಾಗಿದೆ.
ಹಸಿರು ಬಣ್ಣ:
ಹಸಿರು ಬಣ್ಣವು ವ್ಯಾಪಾರ, ವಿಷಯ ಮಂಡನೆ, ಶಿಕ್ಷಣ ಕ್ಷೇತ್ರ, ಮತ್ತು ನಿರೂಪಕರಿಗೆ ಶುಭ ಫಲಗಳನ್ನು ನೀಡುತ್ತದೆ. ಇದು ಸ್ಪಷ್ಟ ಸಂವಹನ ಮತ್ತು ವ್ಯವಹಾರ ಮನೋಭಾವಕ್ಕೆ ಸಹಕಾರಿ. ಆದರೆ, ಬಟ್ಟೆಗೆ ಅನುಗುಣವಾಗಿ ನೈಲ್ ಪಾಲಿಷ್ ಹಚ್ಚುವುದು ಯಾವಾಗಲೂ ಶುಭಕರವಲ್ಲ.
ನೀಲಿ ಬಣ್ಣ:
ನೀಲಿ ಬಣ್ಣವನ್ನು ಹಚ್ಚಿದಾಗ ಕೋಪ, ಆವೇಶಗಳು ಹೆಚ್ಚಾಗುತ್ತವೆ. ನಿರ್ಧಾರಗಳು ಸರಿಯಾಗಿರುವುದಿಲ್ಲ, ಮತ್ತು ತಪ್ಪುಗಳನ್ನು ಬೇಗನೆ ಕಂಡುಹಿಡಿಯುವ ಗುಣ ಬರುತ್ತದೆ. ನೇರವಾಗಿ ಮಾತನಾಡುವ ಮತ್ತು ಮುಲಾಜು ಇಡದ ಸ್ವಭಾವ ಹೆಚ್ಚುತ್ತದೆ. ಇದು ಅಷ್ಟು ಶ್ರೇಯಸ್ಕರವಲ್ಲ.
ಕಪ್ಪು ಬಣ್ಣ:
ಕಪ್ಪು ಬಣ್ಣವನ್ನು ಸಾಮಾನ್ಯವಾಗಿ ಕಡಿಮೆ ಜನರು ಬಳಸುತ್ತಾರೆ. ಇದನ್ನು ಹಚ್ಚಿದಾಗ ಆರೋಗ್ಯದಲ್ಲಿ ಏರುಪೇರು, ವಿಕೃತ ಭಾವನೆಗಳು ಮತ್ತು ಕೆಟ್ಟ ಆಲೋಚನೆಗಳು ಬರುವ ಸಾಧ್ಯತೆ ಇರುತ್ತದೆ. ನಿರ್ಧಾರಗಳು ಸರಿಯಾಗಿ ಇರುವುದಿಲ್ಲ. ಇದಲ್ಲದೇ ಕಾಫಿ ಬಣ್ಣದ ನೈಲ್ ಪಾಲಿಶ್ ಕಲಹಗಳು, ಅಪವಾದಗಳು ಮತ್ತು ಅನುಮಾನಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯದ ಪ್ರಕಾರ, ಮಂಗಳವಾರ ಮತ್ತು ಶನಿವಾರಗಳಂದು ನೈಲ್ ಪಾಲಿಶ್ ಹಚ್ಚುವುದನ್ನು ತಪ್ಪಿಸಬೇಕು. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ನೈಲ್ ಪಾಲಿಶ್ ಹಚ್ಚಲು ಶ್ರೇಯಸ್ಕರವಾದ ದಿನಗಳಾಗಿವೆ. ಭಾನುವಾರ ಮಧ್ಯಮ ಫಲವನ್ನು ನೀಡುತ್ತದೆ.
ಹೀಗೆ, ಸೌಂದರ್ಯಕ್ಕಾಗಿ ಬಳಸುವ ನೈಲ್ ಪಾಲಿಶ್ ಬಣ್ಣಗಳು ನಮ್ಮ ಮನಸ್ಸು ಮತ್ತು ಜೀವನದ ಮೇಲೆ ಅಗಾಧ ಪ್ರಭಾವ ಬೀರುವುದರಿಂದ, ಶಾಸ್ತ್ರೋಕ್ತವಾಗಿ ಸೂಕ್ತ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಯೋಗಕ್ಷೇಮಕ್ಕೆ ಸಹಕಾರಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ