ಹಾವೇರಿ, ಫೆಬ್ರವರಿ 27: ಜಿಲ್ಲೆಯಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟ ಪರಿಣಾಮ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದ ಶಿರಸಿಯ ಮಾರಿಕಾಂಬಾ ಜಾತ್ರೆಗೆ ತೆರಳುವ ಭಕ್ತರು ಪ್ರತಿನಿತ್ಯ ಪರದಾಟ ನಡೆಸಬೇಕಾದ ಸ್ಥಿತಿ ಉದ್ಭವವಾಗಿದೆ. ಕಳೆದ ಮೂರು ವರ್ಷಗಳಿಂದ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯ ಗಡಿ ದಾಟುತ್ತಿದ್ದಂತೆ 20 ಕಿಲೋ ಮೀಟರ್ ರಸ್ತೆಯಲ್ಲಿ ಜೀವದ ಹಂಗು ತೊರೆದು ವಾಹನ ಸವಾರರು ಸಂಚರಿಸಬೇಕಿದೆ. ಅಕಾಲಿಕವಾಗಿ ಸುರಿದ ಅ್ಪ ಮಳೆಗೇ ರಸ್ತೆ ಕೆಸರು ಗದ್ದೆಯಂತಾಗಿದ್ದು, ಬೈಕ್ ಸವಾರರು ಬಿದ್ದು ಒದ್ದಾಡಿರು ಪ್ರಸಂಗಗಳೂ ನಡೆದಿವೆ. ಈ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಾಗದೆ, ಕೆಸರಲ್ಲಿ ಸಿಲುಕಿ ವಾಯನಗಳು ನಿಯಂತ್ರಣ ಕಳೆದುಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲಲ್ಲಿ ವೈರಲ್ ಆಗುತ್ತಿವೆ.
ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್; ಯೋಗೇಶ್ಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ಜಾಮೀನು Image Credit source: Supreme Court Website
ಧಾರವಾಡ, ಫೆಬ್ರವರಿ 27: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಸುಪ್ರೀಂಕೋರ್ಟ್ ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದು, ಸಧ್ಯ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ. ಕುಲಕರ್ಣಿ ಪರ ವಾದ ಮಂಡಿಸಿದ್ದ ವಕೀಲ ಶರಣಗೌಡ ಪಾಟೀಲ್ ಅವರ ತಂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದೆ. ಶಾಸಕ ವಿನಯ್ ಕುಲಕರ್ಣಿ ಜಾಮೀನು ಪಡೆಯುವ ಮೂಲಕ ನ್ಯಾಯ ಪ್ರಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಸಾಗಿದ್ದಾರೆ.
ತುಮಕೂರು, ಫೆಬ್ರವರಿ 27: ಸಿದ್ಧರಾಮೇಶ್ವರ ದೇವಾಲಯದ ಗೋಪುರ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕೆರೆಯ ಸಿದ್ದರಾಮೇಶ್ವರ ಮಹಾಸಂಸ್ಥಾನದ ಮಠಾಧಿಪತಿಗಳ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೃತ್ಯುಂಜಯ ಸ್ವಾಮೀಜಿಗಳ ಮೇಲೆ ದಾಳಿ ಸಂಬಂಧ ಸ್ಥಳೀಯ ಹಾಗೂ ಮಠದಲ್ಲಿ ಸ್ವಾಮೀಜಿಗಳ ಜೊತೆ ಓಡಾಡಿಕೊಂಡಿದ್ದ ಸಿದ್ಧರಾಮಯ್ಯ ಎಂಬಾತನನ್ನು ಬಂಧಿಸಲಾಗಿದೆ. ಫೆಬ್ರವರಿ 11ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಿಗ್ಗೆ ಸುಮಾರು 5.30ರ ಹೊತ್ತಿಗೆ ಮೃತ್ಯುಂಜಯ ಸ್ವಾಮೀಜಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಿದ್ಧರಾಮಯ್ಯ, ನೀನು ಸಿದ್ಧರಾಮೇಶ್ವರ ದೇವಾಲಯದ ಗೋಪುರ ಮಾಡಲು ಬೀಡುತ್ತಿಲ್ಲ. ಗೋಪುರ ಮಾಡಲು ಅಡ್ಡಿ ಪಡುಸುತ್ತಿರುವ ನಿನ್ನ ಕೊಲೆ ಮಾಡಲು ಬಂದಿದ್ದೇನೆ ಎಂದು ಹೇಳಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಠದ ಬಾಲಕ ಸ್ವಾಮೀಜಿ ರಕ್ಷಣೆಗೆ ಬಂದಿದ್ದು, ಆರೋಪಿ ಆತನನ್ನೂ ಬಲವಾಗಿ ತಳ್ಳಿದ್ದಾನೆ. ಬಳಿಕ ಪ್ಲಾಸ್ಟಿಕ್ ಕುರ್ಚಿಯಿಂದ ಸ್ವಾಮೀಜಿ ಮೇಲೆ ದಾಳಿ ನಡೆಸಿದ್ದು, ಅವರನ್ನು ಎಳೆದುಕೊಂಡು ಹೋಗಿ ಗೇಟ್ ಹತ್ತಿರ ತಳ್ಳಿ ನಿನ್ನನ್ನು ಎಲ್ಲರೂ ನೋಡುವ ಹಾಗೆ ಸಾಯಿಸುತ್ತೇನೆ ಎಂದು ಹೇಳಿ ಕುತ್ತಿಗೆಗೆ ಕೈ ಹಾಕಿ ಹಿಸುಕಿದ್ದಾನೆ. ಈ ವೇಳೆ ಮಠದ ಬಾಲಕ ಕಿರುಚಾಡಿದ್ದು ಕೂಡಲೇ ಬಂದ ಮಠದ ಸಿಬ್ಬಂದಿ ಸ್ವಾಮೀಜಿಯವರನ್ನು ಆರೋಪಿ ಕೈಯಿಂದ ಬಿಡಿಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸ್ವಾಮೀಜಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಗ್ರಾಮಸ್ಥರ ಸಹಾಯದಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ಸ್ವಾಮೀಜಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಠದ ಸ್ವಾಮೀಜಿಯ ಮೇಲೆಯೇ ಹಲ್ಲೆ ನಡೆದಿರೋದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಚಿತ್ತೂರು, ಫೆ.27: ಆರೋಗ್ಯ ವೃದ್ಧಿಸಿಕೊಳ್ಳಲು ಜಿಮ್ ಸೇರಿದ್ದ ಯುವ ಅಧಿಕಾರಿಯೊಬ್ಬರು, ಸೇರಿದ ಕೇವಲ ಒಂದು ವಾರದಲ್ಲೇ ವ್ಯಾಯಾಮದ ವೇಳೆ ಸಾವನ್ನಪ್ಪಿರುವ ದಾರುಣ ಘಟನೆ ಪಲಮನೇರು ಎಂಬಲ್ಲಿ ನಡೆದಿದೆ. ಮೃತರನ್ನು ಚಿತ್ತೂರು ಜಿಲ್ಲೆಯ ಪಲಮನೇರು ಪಟ್ಟಣದ ಡಿಸಿಸಿ ಬ್ಯಾಂಕ್ (DCC Bank) ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ (Assistant Manager) ಕೆಲಸ ಮಾಡುತ್ತಿದ್ದ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಪ್ರತಿ ದಿನದಂತೆ ಇಂದು ಬೆಳಿಗ್ಗೆ ವಿಶ್ವನಾಥ್ ಜಿಮ್ಗೆ ಹೋಗಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ತಮ್ಮ ಸ್ನೇಹಿತನಿಗೆ ಫೋನ್ ಮಾಡಿ ಜಿಮ್ ಬಳಿ ಬರುವಂತೆ ತಿಳಿಸಿದ್ದಾರೆ. ಸ್ನೇಹಿತ ಬಂದ ನಂತರ ಅಲ್ಲಿಯೇ ಎಳನೀರು ಕುಡಿದು ತುಸು ಚೇತರಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಎಳನೀರು ಕುಡಿದ ಕೆಲವೇ ಕ್ಷಣಗಳಲ್ಲಿ ವಿಶ್ವನಾಥ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ತರುವ ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಜಿಮ್ ಸೇರಿ ಕೇವಲ ಏಳು ದಿನಗಳಲ್ಲಿ ಈ ಘಟನೆ ನಡೆದಿರುವುದು ಜಿಮ್ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಜಿಮ್ ಸೇರುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರಲ್ಲಿ ಸಂಭವಿಸಲಿರುವ ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣವು ತುಲಾ ರಾಶಿಯವರ ಮೇಲೆ ಮಹತ್ವದ ಪ್ರಭಾವ ಬೀರಲಿದೆ. ತುಲಾ ರಾಶಿಯವರು, ವಿಶೇಷವಾಗಿ ಚಿತ್ತಾ, ಸ್ವಾತಿ ಮತ್ತು ವಿಶಾಖ ನಕ್ಷತ್ರದವರು, ಈ ಗ್ರಹಣದ ಪ್ರಭಾವಕ್ಕೆ ಒಳಪಡುತ್ತಾರೆ. ಗ್ರಹಣವು ಲಾಭ ಸ್ಥಾನವಾದ 11ನೇ ಮನೆಯಲ್ಲಿ ಸಂಭವಿಸುತ್ತಿರುವುದರಿಂದ, ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ನಿರೀಕ್ಷಿತ ಮತ್ತು ಅನಿರೀಕ್ಷಿತ ಹಣದ ಹರಿವು, ಆರ್ಥಿಕ ಲಾಭಗಳು ದೊರೆಯುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಶತ್ರುಗಳು ಮಿತ್ರರಾಗುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ ಮತ್ತು ಮಾನಸಿಕ ಸ್ಪಷ್ಟತೆ ಇರುತ್ತದೆ. ಮಕ್ಕಳಿಂದ ಶುಭ ಫಲ, ರಾಜಕೀಯ ಸ್ಥಾನಮಾನ, ಆದಾಯದಲ್ಲಿ ಹೆಚ್ಚಳ ಮತ್ತು ಋಣಮುಕ್ತಿ ಸಾಧ್ಯ. ವ್ಯಾಪಾರಸ್ಥರಿಗೆ ಉತ್ತಮ ಸಮಯವಿದು. ಕೆಲವರಿಗೆ ಸ್ಥಾನ ಪಲ್ಲಟವಾಗುವ ಸಾಧ್ಯತೆ ಇದೆ ಮತ್ತು ದಾಯಾದಿ ಕಲಹಗಳು ಇತ್ಯರ್ಥವಾಗುತ್ತವೆ. ಕಾನೂನು ವಿಷಯಗಳಲ್ಲಿ ಜಯ ಲಭಿಸುತ್ತದೆ ಮತ್ತು ಒತ್ತಡಗಳು ಕಡಿಮೆಯಾಗುತ್ತವೆ. ಆದಾಗ್ಯೂ, ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಚಿಂತೆ ಕಾಡಬಹುದು. ಪ್ರೀತಿಪಾತ್ರರ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ ಎದುರಾಗಬಹುದು. ಲೆಕ್ಕಾಚಾರಗಳು ಮತ್ತು ದೂರದ ಆಸ್ತಿ ವಿಷಯಗಳಲ್ಲಿ ಎಚ್ಚರ ಅಗತ್ಯ. ಈ ಸಮಯದಲ್ಲಿ ತಾಳ್ಮೆ ಮತ್ತು ಸಹನೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 27: ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ (Anantkumar Hegde) ಸಕ್ರಿಯ ರಾಜಕಾರಣ ಅಖಾಡಕ್ಕೆ ರೀ ಎಂಟ್ರಿ ನೀಡಲಿದ್ದಾರೆ ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರಗೊಂಡಿತ್ತು. ಅದಕ್ಕೆ ಪೂರಕವೆಂಬಂತೆ ಇದೀಗ ಕೆಲವು ಚಟುವಟಿಕೆಗಳು ನಡೆಯುತ್ತಿರುವುದು ಕುತೂಹಲ ಹೆಚ್ಚಿಸಿದೆ. ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯ ಹಾಗೂ ಬಿಜೆಪಿಯ (BJP) ಸಂಘಟನಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಹೆಗಡೆ, ಇದೀಗ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಸೂಚನೆಗಳು ಸ್ಪಷ್ಟವಾಗಿವೆ.
ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ಹಿಂದೂ ಫೈರ್ ಬ್ರ್ಯಾಂಡ್ ರಿ ಎಂಟ್ರಿ!
ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ತಮ್ಮ ಹಳೆಯ ರಣಕಣವೆಂದೇ ಗುರುತಿಸಿಕೊಂಡಿರುವ ಭಟ್ಕಳದಿಂದಲೇ ಅವರು ಸಂಘಟನಾ ಚಟುವಟಿಕೆಗೆ ಮರಳುತ್ತಿರುವುದು ಗಮನಾರ್ಹವಾಗಿದೆ.
ಹಿಂದೂ ಸಂಗಮ ಆಯೋಜಕರು ಮತ್ತು ಸಂಘ ಪರಿವಾರದ ನಾಯಕರು ಹೆಗಡೆಯವರನ್ನು ಮತ್ತೆ ಅಖಾಡಕ್ಕೆ ಕರೆತರುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸಂಘ ಪರಿವಾರದ ಹಿರಿಯ ನಾಯಕರ ಮನವೊಲಿಕೆಯ ನಂತರವೇ ಹೆಗಡೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಟ್ಕಳದಲ್ಲಿ ಭರ್ಜರಿ ಸಿದ್ಧತೆ
ಅನಂತ್ ಕುಮಾರ್ ಹೆಗಡೆ ಆಗಮನದ ಹಿನ್ನಲೆಯಲ್ಲಿ ಭಟ್ಕಳದಲ್ಲಿ ಭರ್ಜರಿ ಸ್ವಾಗತದ ಸಿದ್ಧತೆಗಳು ಜೋರಾಗಿವೆ. ನಗರ ಪ್ರವೇಶಕ್ಕೂ ಮುನ್ನ ಭವ್ಯ ರೋಡ್ ಶೋ ನಡೆಸಲು ಯೋಜನೆ ರೂಪಿಸಲಾಗಿದೆ. ಭಟ್ಕಳ ಹೊರ ಭಾಗದಿಂದ ಕಾರ್ಯಕ್ರಮದ ವೇದಿಕೆಯವರೆಗೆ ನೂರಕ್ಕೂ ಹೆಚ್ಚು ಕಾರುಗಳ ರ್ಯಾಲಿ ಮೂಲಕ ಹೆಗಡೆಯವರಿಗೆ ಸ್ವಾಗತ ಕೋರುವ ಯೋಜನೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ
ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸಾಧ್ಯತೆ ಇದೆ ಎಂಬ ಬಗ್ಗೆ ಕೆಲವು ದಿನಗಳಿಂದೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಯಾಗಿತ್ತು. ಊಹಾಪೋಹಗಳೂ ಹರಿದಾಡಿದ್ದವು. ಆದರೆ, ಅಧಿಕೃತ ಮಾಹಿತಿ ಈವರೆಗೆ ಬಂದಿರಲಿಲ್ಲ. ಆದರೆ ಇದೀಗ, ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಹೆಗಡೆ ಭಾಗವಹಿಸಲು ಸಿದ್ಧರಾಗಿರುವುದು ಅವರ ರಿ ಎಂಟ್ರಿ ವದಂತಿಗಳಿಗೆ ಪುಷ್ಟಿ ನೀಡಿದೆ.
ವರ್ಷಗಳ ವಿರಾಮದ ಬಳಿಕ ಹೆಗಡೆ ರಾಜಕೀಯ ಮತ್ತು ಸಂಘಟನಾ ವೇದಿಕೆಗೆ ಮರಳುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅವರ ಎರಡನೇ ಇನಿಂಗ್ಸ್ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ನಿನ್ನೆಯಷ್ಟೆ ಮದುವೆಯಾಗಿದ್ದು ಅವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹರಿದಾಡುತ್ತಿವೆ. ಇಬ್ಬರ ಮದುವೆ ಉಡುಗೆ ಆಭರಣ ನೋಡಿದ ನೆಟ್ಟಿಗರು ಇವರ ಲುಕ್ ಅನ್ನು ದೇವತೆಗಳಿಗೆ ಹೋಲಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳು. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಸಹ ಸಾಕಷ್ಟು ಆಭರಣಗಳನ್ನು ಧರಿಸಿದ್ದರು, ವಿಶೇಷವೆಂದರೆ ಇಬ್ಬರೂ ಸಹ ಪುರಾತನ ಶೈಲಿಯ ಆಭರಗಳನ್ನಷ್ಟೆ ಧರಿಸಿದ್ದರು. ಅದರಲ್ಲೂ ವಿಜಯ್ ದೇವರಕೊಂಡ ಅಂತೂ ಯಾವುದೋ ದಕ್ಷಿಣದ ರಾಜನ ರೀತಿಯ ಪೋಷಾಕು ಧರಿಸಿದ್ದರು, ರಶ್ಮಿಕಾಗಿಂತಲೂ ತುಸು ಹೆಚ್ಚೇ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ದೇವರಕೊಂಡ ಅವರ ಆಭರಣಗಳದ್ದೇ ಚರ್ಚೆ. ಆಧುನಿಕ ರೀತಿಯದ್ದಲ್ಲದೆ ಬಹಳ ಭಿನ್ನ ಜೊತೆಗೆ ಪುರಾತನ ಲುಕ್ನ ವಿವಿಧ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು. ಕೊರಳಿಗೆ ದೊಡ್ಡ ಕಂಠಿಹಾರವನ್ನು ವಿಜಯ್ ಧರಿಸಿದ್ದರು. ಆ ಚಿನ್ನದ ಹಾರ ಪುಲಕೇಶಿ ಕಾಲದ ರಾಜರ ಸರಗಳನ್ನು ನೆನಪಿಸುತ್ತಿದ್ದು, ಅದರ ಜೊತೆಗೆ ತುಸು ಕಿರಿದಾದ ಮತ್ತೊಂದು ಚಿನ್ನದ ಹಾರ ಧರಿಸಿದ್ದರು, ಅದನ್ನು ಗುಡಿ ಹಾರ ಅಥವಾ ದೇವಾಲಯದ ಹಾರ ಎನ್ನುತ್ತಾರಂತೆ.
ಇನ್ನು ವಿಜಯ್ ದೇವರಕೊಂಡ ಎರಡೂ ಮಣಿಕಟ್ಟಿಗೆ ಧರಿಸಿದ್ದ ಆಭರಣವಂತೂ ಅದ್ಭುತವಾಗಿತ್ತು. ಹಳೆಯ, ಧಾರಾವಾಹಿ, ಸಿನಿಮಾಗಳಲ್ಲಿ ದೇವರುಗಳು ಧರಿಸುತ್ತಿದ್ದ ಆಭರಣದಂಥಹದ್ದನ್ನೇ ವಿಜಯ್ ದೇವರಕೊಂಡ ಧರಿಸಿದ್ದರು. ಮಣಿಕಟ್ಟಿಗೆ ಧರಿಸಿದ್ದ ಆಭರಣ ದೊಡ್ಡದಾಗಿಯೂ, ಕಸೂರಿ ಕೆಲಸದಿಂದಲೂ ತುಂಬಿದ್ದು ಸಖತ್ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಆಭರಣವನ್ನು ‘ಥ್ಯಾನೋಸ್ ಜ್ಯುವೆಲರಿ’ ಎಂದು ಸಹ ಕರೆದಿದ್ದಾರೆ.
ಇನ್ನು ತೋಳಿಗೆ ತೋಳು ಬಂಧಿ ಅಥವಾ ವಂಕಿಯನ್ನು ಸಹ ಬಲಗೈ ತೋಳಿಗೆ ಧರಿಸಿದ್ದರು. ಎರಡೂ ಕಿವಿಗಳಿಗೆ ಸುಂದರವಾದ ದುಂಡನೆಯ ಓಲೆಗಳನ್ನು ವಿಜಯ್ ಧರಿಸಿದ್ದರು. ಹಣೆಗೆ ಚಿನ್ನದ ಬಾಸಿಂಗ ಧರಿಸಿದ್ದರು. ಬೆರಳುಗಳಿಗೆ ಒಂದು ನಿಶ್ಚಿತಾರ್ಥದ ಉಂಗುರ ಮತ್ತೊಂದು ಮದುವೆಯ ಉಂಗುರ ಧರಿಸಿದ್ದರು. ಎರಡೂ ಕಾಲಿಗೆ ಚಿನ್ನದ ಕಡಗ, ಸೊಂಟಕ್ಕೆ ಒಡ್ಯಾಣವನ್ನು ಸಹ ವಿಜಯ್ ದೇವರಕೊಂಡ ಧರಿಸಿದ್ದರು. ಈ ಎಲ್ಲ ಆಭರಣಗಳು ಪುರಾತನ ಡಿಸೈನ್ಗಳನ್ನು ಒಳಗೊಂಡಿದ್ದು ವಿಶೇಷ. ಎಲ್ಲ ಆಭರಣಗಳು ವಿಜಯ್ಗೆ ಒಂದು ರೀತಿ ರಾಜನ ಲುಕ್ ಅನ್ನು ನೀಡಿತ್ತು.
ಇದೀಗ ಸಾಮಾಜಿಕ ಜಾಲತಾಣದ ತುಂಬೆಲ್ಲ ವಿಜಯ್ ಅವರ ಚಿನ್ನದ ಆಭರಣದ್ದೇ ಚರ್ಚೆ ನಡೆಯುತ್ತಿದೆ. ವಿಜಯ್ ಕನಿಷ್ಟ ಒಂದು ಕೆಜಿ ಚಿನ್ನವನ್ನಾದರೂ ತಮ್ಮ ಮೈಮೇಲೆ ಧರಿಸಿಕೊಂಡಿದ್ದರು. ವಿಜಯ್ ಧರಿಸಿದ್ದ ಆಭರಣಗಳನ್ನು ನೋಡಿ, ಪುರುಷರಿಗೆ ಇಷ್ಟು ಆಭರಣ ಇದೆಯೆಂಬುದೇ ನಮಗೆ ತಿಳಿದಿರಲಿಲ್ಲ ಎಂದು ಹಲವು ಕಮೆಂಟ್ಗಳನ್ನು ಮಾಡಿದ್ದಾರೆ. ಇಷ್ಟು ಚಿನ್ನ ಇದ್ದರೆ ಸಾಕು ಜೀವನ ಸುಖವಾಗಿ ನಡೆಯಲು ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟಾರೆ ವಿಜಯ್ ಧರಿಸಿದ್ದ ಚಿನ್ನವಂತೂ ಹಲವರ ಕಣ್ಣು ಕುಕ್ಕಿದೆ.
ನವದೆಹಲಿ, ಫೆಬ್ರವರಿ 27: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಹಲವರನ್ನು ಖುಲಾಸೆಗೊಳಿಸಿದೆ. ವರದಿಗಳ ಪ್ರಕಾರ, ನ್ಯಾಯಾಲಯವು ಸಿಬಿಐ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತು. ಇದು ಚಾರ್ಜ್ಶೀಟ್ನಲ್ಲಿ ಹಲವಾರು ನ್ಯೂನತೆಗಳನ್ನು ಸಹ ತೋರಿಸಿದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನಾಯಕರನ್ನು ದೋಷಾರೋಪಣೆಗೆ ಒಳಪಡಿಸಿದ್ದಕ್ಕಾಗಿ ನ್ಯಾಯಾಲಯವು ಸಿಬಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ದೆಹಲಿ ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸಾವಿರಾರು ಕೋಟಿ ಮೌಲ್ಯದ ಮದ್ಯ ಹಗರಣವನ್ನು ಕೇಂದ್ರ ತನಿಖಾ ಸಂಸ್ಥೆಗಳು, ಜಾರಿ ನಿರ್ದೇಶನಾಲಯ (ED) ಮತ್ತು CBI ಎರಡೂ ತನಿಖೆ ನಡೆಸಿವೆ.ಸಿಬಿಐ ಸಲ್ಲಿಸಿದ ಎಫ್ಐಆರ್ ಆಧರಿಸಿ, ಇಡಿ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿತು.
ನಂತರದ ತನಿಖೆಯ ಸಮಯದಲ್ಲಿ, ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಯಿತು ಮತ್ತು ಹಲವಾರು ತಿಂಗಳು ಜೈಲಿನಲ್ಲಿ ಕಳೆದರು. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಈಗ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ಆರೋಪಗಳಿಂದ ಖುಲಾಸೆಗೊಳಿಸಿದೆ.
ಆದೇಶ ಹೊರಡಿಸಿದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್, ಸಿಬಿಐ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣದಲ್ಲಿ ಇಬ್ಬರು ನಾಯಕರನ್ನು ಸಿಲುಕಿಸಿದೆ ಎಂದು ಹೇಳಿದರು. ಪ್ರಕರಣದಲ್ಲಿ ಎಲ್ಲಾ 23 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತು ಮತ್ತು ಬೇರೆಯವರ ವಿರುದ್ಧ ಆರೋಪಗಳನ್ನು ಹೊರಿಸಲು ನಿರಾಕರಿಸಿತು. ತನಿಖೆಯಲ್ಲಿನ ನ್ಯೂನತೆಗಳಿಗಾಗಿ ನ್ಯಾಯಾಲಯವು ಸಿಬಿಐಗೆ ಛೀಮಾರಿ ಹಾಕಿತು.
ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೇ ಈ ಸ್ನೇಹ (friendship). ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳ ನಡುವಿನ ಶುದ್ಧ ಸ್ನೇಹಕ್ಕೆ ಈ ವಿಡಿಯೋನೇ ಸಾಕ್ಷಿ. ತನ್ನ ಬೆಸ್ಟ್ ಫ್ರೆಂಡ್ ಶ್ವಾನವನ್ನು (dog) ಕಂಡೊಡನೆ ಗೊರಿಲ್ಲಾ ಕುಣಿದಾಡಿದ್ದು, ಓಡಿ ಹೋಗಿ ತಬ್ಬಿಕೊಂಡು ಮುದ್ದಾಡಿರುವ ವಿಡಿಯೋ ವೈರಲ್ ಆಗಿದೆ.
Bobby Lloyd ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಗೊರಿಲ್ಲಾ ಹಾಗೂ ಶ್ವಾನವು ಮುಖಾಮುಖಿಯಾಗಿರುವ ಆಗಿರುವುದನ್ನು ಕಾಣಬಹುದು. ಗೊರಿಲ್ಲಾವು ಶ್ವಾನವನ್ನು ಕಂಡೊಡನೆ ಕುಣಿದಾಡಿದೆ. ಅಷ್ಟೇ ಅಲ್ಲದೇ, ಶ್ವಾನವನ್ನು ಬಾಚಿ ತಬ್ಬಿಕೊಂಡು ಮುದ್ದಾಡಿದ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸ್ನೇಹಿತರಿಬ್ಬರ ಪುನರ್ಮಿಲನ ಎಂದರೆ, ಮತ್ತೊಬ್ಬರು, ಮೂಕ ಪ್ರಾಣಿಗಳ ಶುದ್ಧ ಪ್ರೀತಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ, ಫೆಬ್ರವರಿ 27: ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.
ಅದು ಹುಟ್ಟುವಾಗ 600 ಗ್ರಾಂ ಇದ್ದ ಕಾರಣ ಅದರ ತಾಯಿ ಅದನ್ನು ಸಾಕಲಾಗದೆ ಬಿಟ್ಟು ಹೋಗಿತ್ತು. ಅದಾದ ಬಳಿಕ ಅದು ಒಬ್ಬಂಟಿಯಾಗಿತ್ತು. ಅದು ಪಟ್ಟ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಇದೇ ಬೆಸ್ಟ್ ಎಂದುಕೊಂಡಿದ್ದಾರೆ.
ಪೊಲೀಸರು ಇತ್ತೀಚಿನ ಇನ್ಸ್ಟಾಗ್ರಾಂ ಅಭಿಯಾನದಲ್ಲಿ ಕೆಟ್ಟದ್ದನ್ನು, ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ ಎನ್ನುವ ಮೂರು ಮಂಗಗಳ ದೃಶ್ಯಗಳನ್ನು ಹಂಚಿಕೊಂಡಿದ್ದರು. ಈಗ 112 ಸಹಾಯವಾಣಿಗೆ ಪಂಚ್ ಕೋತಿಯನ್ನು ಬಳಸಿಕೊಂಡಿದ್ದಾರೆ.
ಅದಕ್ಕೆ ಕೆಟ್ಟದನ್ನು ಮಾಡಬೇಡಿ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ. ಈ ಪೋಸ್ಟ್ ನಾಗರಿಕರಿಗೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಕರೆ ನೀಡುತ್ತದೆ.
ಪಂಚ್ ಇತರೆ ಮಂಗಗಳು ಬೆದರಿಸುವಾಗ ತೊಂದರೆಯನ್ನು ಎದುರಿಸಿತ್ತು. ಆದರೆ ಆರೈಕೆದಾರರು ಇದನ್ನು ಅದರ ನೈಸರ್ಗಿಕ ಸಾಮಾಜಿಕ ಕಲಿಕೆಯ ಭಾಗವೆಂದು ಬಣ್ಣಿಸಿದ್ದಾರೆ. ಪಂಚ್ ಕ್ರಮೇಣ ಹೊಂದಿಕೊಳ್ಳುತ್ತಿದೆ ಮತ್ತು ಸ್ವತಂತ್ರವಾಗುತ್ತಿದೆ ಎಂದು ಹೇಳಿದ್ದಾರೆ.
ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.
ದೆಹಲಿ ಪೊಲೀಸರು ಸಾರ್ವಜನಿಕ ಜಾಗೃತಿ ಮೂಡಿಸಲು ಪಂಚ್ನ ಚಿತ್ರವನ್ನು ಬಳಸಿಕೊಂಡಿದ್ದರು. ಪೋಸ್ಟ್ನಲ್ಲಿ ಸಮವಸ್ತ್ರ ಧರಿಸಿದ ಅಧಿಕಾರಿಯೊಬ್ಬರು ಯುವ ಕೋತಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಬಹುದು.
112 ಸಹಾಯವಾಣಿ ಭಾರತದ ಏಕೈಕ ತುರ್ತು ಪ್ರತಿಕ್ರಿಯೆ ಸಂಖ್ಯೆಯಾಗಿದ್ದು, ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸಲು ರಚಿಸಲಾಗಿದೆ.