All posts by nagaraj11081993

ತಮಿಳುನಾಡಿನಲ್ಲಿ ಇನ್ನು ಮುಂದೆ ದಳಪತಿ ವಿಜಯ್ ಅಬ್ಬರ ಶುರು! – Kannada News | Thalapathy Vijay Takes Oath as Tamil Nadu CM: TVK Ends Decades of Dravidian Duopoly

ತಮಿಳುನಾಡಿನಲ್ಲಿ ಇನ್ನು ಮುಂದೆ ವಿಜಯ್ ಅಬ್ಬರ ಶುರು!

ಚೆನ್ನೈ, ಮೇ 10: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದ್ವಿಪಕ್ಷೀಯ ಪ್ರಭುತ್ವವನ್ನು ಅಂತ್ಯಗೊಳಿಸಿ, ನಟ ದಳಪತಿ ವಿಜಯ್ (Thalapathy Vijay) ಇಂದು ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇದು ಕೇವಲ ಅಧಿಕಾರ ಬದಲಾವಣೆಯಲ್ಲ, ಒಂದು ಹೊಸ ರಾಜಕೀಯ ಯುಗದ ಆರಂಭವಾಗಿದೆ.

ಮುಖ್ಯಾಂಶಗಳು

  • ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ನಟ ದಳಪತಿ ವಿಜಯ್ ಇಂದು ಪ್ರಮಾಣವಚನ ಸ್ವೀಕಾರ.
  • 234 ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿ ಡಿಎಂಕೆ-ಎಐಎಡಿಎಂಕೆ ದಶಕಗಳ ಆಡಳಿತಕ್ಕೆ ಅಂತ್ಯ.
  • ಯಾವುದೇ ಉಪಮುಖ್ಯಮಂತ್ರಿ ಇಲ್ಲದೆ ವಿಜಯ್ ಸಂಪುಟದ ಒಂಬತ್ತು ಸಚಿವರಿಂದ ಅಧಿಕಾರ ಸ್ವೀಕಾರ.

ಭವ್ಯ ಪ್ರಮಾಣವಚನ ಸಮಾರಂಭ

ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಟಿ ತ್ರಿಶಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾರಂತಹ ದಿಗ್ಗಜರು ಆಳಿದ ನೆಲದಲ್ಲಿ ಈಗ ವಿಜಯ್ ಅವರ ಆಡಳಿತ ಶುರುವಾಗಿದೆ.

ಸಂಘರ್ಷದಿಂದ ಸಿಎಂ ಪಟ್ಟದವರೆಗೆ

ವಿಜಯ್ ಅವರ ರಾಜಕೀಯ ಪಯಣವು ಅವರ ಸಿನಿಮಾಗಳಂತೆಯೇ ರೋಚಕವಾಗಿದೆ. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಕಟ್ಟಿ, ಹಳೆ ಮದ್ರಾಸ್‌ನ ರಾಜಕೀಯ ಸಂಪ್ರದಾಯಗಳನ್ನು ಭೇದಿಸುವುದು ಅಷ್ಟು ಸುಲಭವಾಗಿರಲಿಲ್ಲ. 2026ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರವೂ ಅಧಿಕಾರ ಹಿಡಿಯಲು ಅವರು ಹತ್ತಾರು ಕಾನೂನು ಮತ್ತು ರಾಜಕೀಯ ಅಡೆತಡೆಗಳನ್ನು ಎದುರಿಸಬೇಕಾಯಿತು. ಜನಸಾಮಾನ್ಯರ ಧ್ವನಿಯಾಗಿ ಹೋರಾಡಿದ ವಿಜಯ್, ಅಂತಿಮವಾಗಿ ಭವ್ಯ ಗೆಲುವಿನ ಮೂಲಕ ‘ಸಿಎಂ ವಿಜಯ್’ ಆಗಿ ಹೊರಹೊಮ್ಮಿದ್ದಾರೆ.

ಸುಮಾರು ಏಳು ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ಬಲಿಷ್ಠ ದ್ರಾವಿಡ ಪಕ್ಷಗಳ ಎದುರು ಚುನಾವಣಾ ಕಣಕ್ಕೆ ಇಳಿದ ವಿಜಯ್, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಗೆಲುವು ಸುಲಭವಾಗಿ ಸಿಕ್ಕಿದ್ದಲ್ಲ. ಚುನಾವಣೆಯಲ್ಲಿ ಒಟ್ಟು 234 ಕ್ಷೇತ್ರಗಳ ಪೈಕಿ ಬಹುಮತಕ್ಕೆ ಬೇಕಾದ 118ರ ಗಡಿ ದಾಟಲು ವಿಜಯ್ ಪ್ರತಿ ಹಂತದಲ್ಲೂ ಹೋರಾಡಬೇಕಾಯಿತು. ಕೊನೆಗೂ ಮ್ಯಾಜಿಕ್ ಸಂಖ್ಯೆ ಪಡೆದ ಅವರು, ಇಂದು ಅಕ್ಷರಶಃ ‘ದಳಪತಿ’ ಎನಿಸಿಸಿಕೊಂಡಿದ್ದಾರೆ.

ಇದನ್ನೂ ಓದಿ Thalapathy Vijay Oath Taking Live: ತಮಿಳುನಾಡಿನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ ನೇರಪ್ರಸಾರ

ನೂತನ ಸಚಿವ ಸಂಪುಟ

ವಿಜಯ್ ಅವರೊಂದಿಗೆ ಒಂಬತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವರ ಪಟ್ಟಿ ಇಲ್ಲಿದೆ:

  1. ಎಸ್. ಕೀರ್ತನಾ
  2. ಕೆ.ಎ. ಸೆಂಗೊಟ್ಟೈಯನ್
  3. ಆಧವ್ ಅರ್ಜುನ್
  4. ಬಸ್ಸಿ ಆನಂದ್
  5. ಡಾ. ಅರುಣ್ ರಾಜ್‌
  6. ವೆಂಕಟರಮಣನ್‌
  7. ನಿರ್ಮಲ್‌ ಕುಮಾರ್‌
  8. ರಾಜ್‌ ಮೋಹನ್‌
  9. ಡಾ. ಟಿ.ಕೆ. ಪ್ರಭು

ಡಿಸಿಎಂ ಗೊಂದಲಕ್ಕೆ ತೆರೆ

ಟಿವಿಕೆ (TVK) ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ (DCM) ಹುದ್ದೆಯ ಕುರಿತು ತೀವ್ರ ಚರ್ಚೆಗಳು ನಡೆದಿದ್ದವು. ಮೈತ್ರಿ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ಡಿಸಿಎಂ ಹುದ್ದೆಗಾಗಿ ಬೇಡಿಕೆಯಿಟ್ಟಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇವಲ ಮುಖ್ಯಮಂತ್ರಿ ಮತ್ತು ಒಂಬತ್ತು ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸುವ ಮೂಲಕ ಈ ಎಲ್ಲಾ ವದಂತಿಗಳಿಗೆ ವಿಜಯ್ ಪೂರ್ಣವಿರಾಮ ಹಾಕಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಯಾವುದೇ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದ್ದು, ದಳಪತಿ ವಿಜಯ್ ಅವರು ಒಬ್ಬರೇ ಸಾರಥಿಯಾಗಿ ತಮಿಳುನಾಡನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರು ಮೇ 13ರೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ತಮಿಳುನಾಡು ಇನ್ನು ಮುಂದೆ ‘ದಳಪತಿ’ಯ ಆಡಳಿತದಲ್ಲಿ ಹೊಸ ದಿಕ್ಕಿನತ್ತ ಸಾಗಲಿದ್ದು, ಜನರ ನಿರೀಕ್ಷೆಗಳು ಗಗನಕ್ಕೇರಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಬಂದು ಮೊದಲ ಸಾಲಿನಲ್ಲೇ ಕುಳಿತ ತ್ರಿಶಾ – Kannada News | Trisha Krishnan attends Thalapathy Vijay oath Ceremony in Jawaharlal Nehru Stadium Chennai

ಖ್ಯಾತ ನಟ ವಿಜಯ್ (Thalapathy Vijay) ಅವರು ಟಿವಿಕೆ ಪಕ್ಷದ ಮೂಲಕ ರಾಜಕೀಯದಲ್ಲಿ ಮೊದಲ ಜಯ ಸಾಧಿಸಿದ್ದಾರೆ. ಇಂದು (ಮೇ 10) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಆಪ್ತರು, ರಾಜಕೀಯ ಕ್ಷೇತ್ರದ ಗಣ್ಯರು, ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ವಿಜಯ್ ಜೊತೆ ಆಪ್ತವಾಗಿರುವ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಬಂದಿದ್ದಾರೆ. ವಿಜಯ್ ಅವರ ಪೋಷಕರ ಪಕ್ಕವೇ ತ್ರಿಶಾ ಕೂಡ ಮೊದಲ ಸಾಲಿನಲ್ಲಿ ಕುಳಿತು ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸಿದ್ದಾರೆ. ತ್ರಿಶಾ ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅದರ ವಿಚಾರಣೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Shani Jayanti 2026: ಮೇ 16 ಶನಿ ಜಯಂತಿ; ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ – Kannada News | Shani Jayanti 2026: Puja Vidhi, Dos and Don’ts for Shani Dev Blessings and Sade Sati Relief

ಹಿಂದೂ ಧರ್ಮದಲ್ಲಿ ಶನಿ ದೇವನನ್ನು ‘ನ್ಯಾಯದ ದೇವರು’ ಮತ್ತು ‘ಕರ್ಮಫಲ ದಾತ’ ಎಂದು ಕರೆಯಲಾಗುತ್ತದೆ. ಮನುಷ್ಯನು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ತಕ್ಕಂತೆ ಪ್ರತಿಫಲ ನೀಡುವುದು ಶನಿ ದೇವನ ಕಾರ್ಯ. ಈ ವರ್ಷ ಶನಿ ಜಯಂತಿಯನ್ನು ಮೇ 16ರ ಶನಿವಾರದಂದು ಆಚರಿಸಲಾಗುತ್ತಿದೆ. ಈ ದಿನವು ಜ್ಯೇಷ್ಠ ಅಮಾವಾಸ್ಯೆ ಮತ್ತು ವಟ ಸಾವಿತ್ರಿ ವ್ರತದೊಂದಿಗೆ ಕೂಡಿ ಬಂದಿರುವುದು ವಿಶೇಷ.

ಶನಿ ಜಯಂತಿಯ ವಿಶೇಷತೆ ಮತ್ತು ಹಿನ್ನೆಲೆ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯದೇವ ಮತ್ತು ಛಾಯಾದೇವಿಯ ಪುತ್ರನಾದ ಶನಿಯು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಜನಿಸಿದನು. ಈ ದಿನದಂದು ಭಕ್ತರು ಶನಿ ದೇವಾಲಯಗಳಿಗೆ ಭೇಟಿ ನೀಡಿ ತೈಲಾಭಿಷೇಕ ಮಾಡುವುದು, ಕಪ್ಪು ಎಳ್ಳನ್ನು ಅರ್ಪಿಸುವುದು ಮತ್ತು ಶನಿ ಮಂತ್ರಗಳನ್ನು ಪಠಿಸುವುದು ವಾಡಿಕೆ. ಶನಿ ಜಯಂತಿಯಂದು ಶ್ರದ್ಧಾಭಕ್ತಿಯಿಂದ ಪೂಜೆ ಮಾಡುವುದರಿಂದ ಶನಿಯ ಸಾಡೇ ಸತಿ, ಧೈಯ್ಯಾ ಮತ್ತು ಜಾತಕದಲ್ಲಿರುವ ಶನಿ ದೋಷದ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂಬ ನಂಬಿಕೆಯಿದೆ.

ಶನಿ ಜಯಂತಿಯಂದು ಮಾಡಬಾರದ ತಪ್ಪುಗಳು:

ತಿಳಿಯದೆಯೂ ಈ ದಿನದಂದು ತಪ್ಪು ಕೆಲಸಗಳನ್ನು ಮಾಡುವುದರಿಂದ ಶನಿಯ ಅಶುಭ ದೃಷ್ಟಿಗೆ ಗುರಿಯಾಗಬೇಕಾಗಬಹುದು. ಆದ್ದರಿಂದ ಈ ಕೆಳಗಿನ ಕೆಲಸಗಳಿಂದ ದೂರವಿರಿ:

  • ದುರ್ಬಲರ ಅವಮಾನ: ಶನಿದೇವನು ಶ್ರಮಜೀವಿಗಳ ಮತ್ತು ಬಡವರ ಪ್ರತಿನಿಧಿ. ಅಸಹಾಯಕರನ್ನು ಅಥವಾ ಬಡವರನ್ನು ಕೆಟ್ಟದಾಗಿ ನಡೆಸಿಕೊಳ್ಳುವವರ ಮೇಲೆ ಶನಿ ತೀವ್ರ ಕೋಪಗೊಳ್ಳುತ್ತಾನೆ.
  • ಪವಿತ್ರ ವಸ್ತುಗಳ ಅಗೌರವ: ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮತ್ತು ಕಬ್ಬಿಣ ಶನಿಗೆ ಪ್ರಿಯವಾದ ವಸ್ತುಗಳು. ಇವುಗಳನ್ನು ಕಾಲಿನಿಂದ ಒದೆಯುವುದು ಅಥವಾ ಎಸೆಯುವುದು ಮಾಡಬಾರದು.
  • ತಾಮಸ ಆಹಾರ ಸೇವನೆ: ಈ ಪವಿತ್ರ ದಿನದಂದು ಮಾಂಸ ಮತ್ತು ಮದ್ಯ ಸೇವನೆಯಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ದಿನ ಸಂಪೂರ್ಣವಾಗಿ ಸಾತ್ತ್ವಿಕ ಆಹಾರವನ್ನು ಸೇವಿಸುವುದು ಉತ್ತಮ.
  • ಸುಳ್ಳು ಮತ್ತು ವಂಚನೆ: ಸತ್ಯದ ದೇವರಾದ ಶನಿಯ ದಿನದಂದು ಯಾರಿಗಾದರೂ ದ್ರೋಹ ಮಾಡುವುದು ಅಥವಾ ಸುಳ್ಳು ಹೇಳುವುದು ಶನಿಯ ಕ್ರೂರ ದೃಷ್ಟಿಗೆ ಆಹ್ವಾನ ನೀಡಿದಂತೆ.
  • ಜೀವ ಸಂಕುಲಕ್ಕೆ ಹಾನಿ: ಗಿಡಮರಗಳನ್ನು ಕಡಿಯುವುದು ಅಥವಾ ಪ್ರಾಣಿಗಳಿಗೆ ಹಿಂಸೆ ನೀಡುವುದು ಈ ದಿನ ನಿಷೇಧ. ಮುಖ್ಯವಾಗಿ ಕಾಗೆಗಳು ಮತ್ತು ಕಪ್ಪು ನಾಯಿಗಳಿಗೆ ಆಹಾರ ನೀಡುವುದು ಶ್ರೇಯಸ್ಕರ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಮನೆಯಲ್ಲಿ ಶಾಂತಿ ಮತ್ತು ಶಿಸ್ತು:

ಶನಿ ದೇವರು ಶಿಸ್ತಿನ ದೇವತೆ. ಶನಿ ಜಯಂತಿಯ ದಿನ ಮನೆಯಲ್ಲಿ ಜಗಳವಾಡುವುದು, ಕಿರುಚಾಡುವುದು ಅಥವಾ ಪರಸ್ಪರ ನಿಂದಿಸಿಕೊಳ್ಳುವುದು ಮನೆಯಲ್ಲಿ ಅಶಾಂತಿಯನ್ನು ತರುತ್ತದೆ. ಶಾಂತ ಮತ್ತು ಭಕ್ತಿಪೂರ್ವಕ ವಾತಾವರಣವು ಶನಿಯ ಅನುಗ್ರಹಕ್ಕೆ ಹಾದಿ ಮಾಡಿಕೊಡುತ್ತದೆ.

ದೋಷ ಪರಿಹಾರಕ್ಕಾಗಿ ಮಾಡಬೇಕಾದ ಕ್ರಮಗಳು:

ಈ ದಿನದ ಪುಣ್ಯ ಫಲವನ್ನು ಪಡೆಯಲು ಈ ಕೆಳಗಿನ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ:

  • ದೀಪಾರಾಧನೆ: ಸೂರ್ಯಾಸ್ತದ ನಂತರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.
  • ಮಂತ್ರ ಪಠಣೆ: “ಓಂ ಶಂ ಶನೈಶ್ಚರಾಯ ನಮಃ” ಎಂಬ ಮಂತ್ರವನ್ನು 108 ಬಾರಿ ಪಠಿಸಿ.
  • ದಾನ ಧರ್ಮ: ಕಪ್ಪು ಎಳ್ಳು, ಉದ್ದಿನ ಬೇಳೆ, ಛತ್ರಿ ಅಥವಾ ಎಣ್ಣೆಯನ್ನು ಅಗತ್ಯವಿರುವವರಿಗೆ ದಾನ ಮಾಡಿ.
  • ಹನುಮ ಆರಾಧನೆ: ಶನಿ ದೋಷದ ತೀವ್ರತೆ ಕಡಿಮೆ ಮಾಡಲು ಹನುಮಾನ್ ಚಾಲೀಸಾವನ್ನು ಪಠಿಸುವುದು ಅತ್ಯಂತ ಪರಿಣಾಮಕಾರಿ.
  • ದಾಸೋಹ: ಹಸಿದವರಿಗೆ ಮತ್ತು ಪ್ರಾಣಿಗಳಿಗೆ ಆಹಾರವನ್ನು ನೀಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಖಜಾನೆ ಲೂಟಿಯಾಗುತ್ತಿದೆ, ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಪ್ರಧಾನಿ ಮೋದಿ ವ್ಯಂಗ್ಯ! – Kannada News | Treasury is being looted in Karnataka, don’t know how long the CM will stay: Prime Minister Modi sarcastically!

ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಜನರತ್ತ ಕೈಬೀಸಿದ ಪ್ರಧಾನಿ ಮೋದಿImage Credit source: tv9

ಬೆಂಗಳೂರು, ಮೇ 10: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ (BJP) ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಉದ್ದೇಶಿಸಿ ಭರ್ಜರಿ ಭಾಷಣ ಮಾಡಿದರು. ಬಂಗಾಳದ ಗೆಲುವಿನ ಸಂಭ್ರಮದ ಜೊತೆಗೆ ಕರ್ನಾಟಕದೊಂದಿಗಿನ ತಮ್ಮ ಅವಿನಾಭಾವ ಸಂಬಂಧ ಮತ್ತು ದೇಶದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ, ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಮುಖ್ಯಾಂಶಗಳು

  • ಗಂಗೋತ್ರಿಯಿಂದ ಅರಬ್ಬೀ ಸಮುದ್ರದವರೆಗೆ ಈಗ ಕಮಲ ಅರಳಿದೆ ಎಂದ ಪ್ರಧಾನಿ.
  • ‘ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದ ಮೋದಿ.
  • ದೇಶದ ಪ್ರಗತಿಗೆ ‘ವಿಜ್ಞಾನ ಮತ್ತು ಆಧ್ಯಾತ್ಮ’ ಎರಡು ಕಣ್ಣುಗಳಿದ್ದಂತೆ ಎಂದು ಮೋದಿ ಪ್ರತಿಪಾದನೆ.

ಕಾಂಗ್ರೆಸ್​​ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲ ಒಂದೊಂದು ಸಮಸ್ಯೆ ಇದ್ದೇ ಇರುತ್ತದೆ. ಹಿಮಾಚಲ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ವೇತನ ದೊರೆಯುತ್ತಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆಗಳಾಗುತ್ತಿವೆ. ಕೇರಳದಲ್ಲಿ ಬಹುಮತದೊಂದಿಗೆ ಚುನಾವಣೆ ಗೆದ್ದರೂ ಇನ್ನೂ ಸಿಎಂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಕರ್ನಾಟಕದಲ್ಲೂ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಆಂತರಿಕ ಕಚ್ಚಾಟವನ್ನು ಮೋದಿ ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಖಜಾನೆ ಲೂಟಿಯಾಗುತ್ತಿದೆ: ಮೋದಿ

ಇಲ್ಲಿನ ಖಜಾನೆ ಲೂಟಿಯಾಗುತ್ತಿದೆ. ಜನರು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸರ್ಕಾರದ ನಾಯಕರು ಮಾತ್ರ ಆಂತರಿಕ ಜಗಳ ಮತ್ತು ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದಾರೆ. ರಾಜಸ್ಥಾನದಲ್ಲಿ ಏನಾಯಿತು ಎಂಬುದು ನಿಮಗೆ ಗೊತ್ತಿದೆ, ಕರ್ನಾಟಕದಲ್ಲೂ ಅದೇ ಹಾದಿ ಮುಂದುವರಿಯುತ್ತಿದೆ ಎಂದು ಮೋದಿ ಹೇಳಿದರು.

ಬೆಂಗಳೂರಿನ ಹೆಚ್​ಎಎಲ್​​ನಲ್ಲಿ ಮೋದಿ ಭಾಷಣ

ಭಾಷಣದುದ್ದಕ್ಕೂ ಪಶ್ಚಿಮ ಬಂಗಾಳದ ಫಲಿತಾಂಶದ ಬಗ್ಗೆ ಮಾತನಾಡಿದ ಮೋದಿ, ‘ಬಂಗಾಳದ ಜನರು ಇತಿಹಾಸ ನಿರ್ಮಿಸಿದ್ದಾರೆ. ದಶಕಗಳ ಅರಾಜಕತೆಯನ್ನು ಕೊನೆಗಾಣಿಸಿ ವಿಕಾಸದ ಹಾದಿ ಹಿಡಿದಿದ್ದಾರೆ. ಈ ಗೆಲುವು ಕೇವಲ ಬಿಜೆಪಿಯದ್ದಲ್ಲ, ಇದು ಪ್ರಜಾಪ್ರಭುತ್ವದ ಗೆಲುವು’ ಎಂದರು. ಅಸ್ಸಾಂನಲ್ಲಿ ಸತತ ಎರಡನೇ ಬಾರಿಗೆ ಜನಾದೇಶ ನೀಡಿರುವುದು ನವ ಭಾರತದ ನಿರ್ಮಾಣಕ್ಕೆ ಸಿಕ್ಕ ಶಕ್ತಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಗೆಲುವಿಗೆ ಕಾರಣರಾದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ಅರ್ಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಕೊನೆಗೆ 3 ಸ್ಥಾನ ದೊರೆಯಿತು. ಮತ್ತೆ ಚುನಾವಣೆಯಲ್ಲಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದೇ ರಾಜ್ಯದಲ್ಲಿ ಈಗ 200ಕ್ಕೂ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚಿಸಿದ್ದೇವೆ. ಕೇರಳದಲ್ಲಿಯೂ ಈಗ 3 ಸ್ಥಾನ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಬಂಗಾಳದ ರೀತಿ ಕೇರಳದಲ್ಲಿಯೂ ಕಮಲ ಅರಳಲಿದೆ ಎಂದು ಮೋದಿ ಹೇಳಿದರು.

ಭಾರತದ ಭವಿಷ್ಯದ ಎಂಜಿನ್ ಬೆಂಗಳೂರು: ಮೋದಿ

ಬೆಂಗಳೂರನ್ನು ಭಾರತದ ಭವಿಷ್ಯದ ಎಂಜಿನ್ ಎಂದು ಕರೆದ ಪ್ರಧಾನಿ, ‘ಇಂದು ಇಡೀ ಜಗತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಬೆಂಗಳೂರಿನ ಯುವಶಕ್ತಿಯೇ ಕಾರಣ. ಕರ್ನಾಟಕದ ಐಟಿ ನೈಪುಣ್ಯ ಮತ್ತು ಸಂಶೋಧನೆಗಳು ದೇಶವನ್ನು ಸ್ವಾವಲಂಬಿಯಾಗಿಸುತ್ತಿವೆ’ ಎಂದರು. ಅಲ್ಲದೆ, ಕೊರೊನಾ ನಂತರದ ಆರ್ಥಿಕ ಚೇತರಿಕೆಯಲ್ಲಿ ಕರ್ನಾಟಕದ ರೈತರು ಮತ್ತು ಉದ್ಯಮಿಗಳ ಕೊಡುಗೆಯನ್ನು ಸ್ಮರಿಸಿದರು.

ಆಧ್ಯಾತ್ಮಿಕ ಶಕ್ತಿಯೇ ಭಾರತದ ಬಲ: ಮೋದಿ

ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ‘ಭಾರತವು ಬಲಿಷ್ಠವಾಗಬೇಕಾದರೆ ಅದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ. ನಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬಲವೂ ಬೇಕು. ಶ್ರೀ ಶ್ರೀ ರವಿಶಂಕರ್ ಗುರೂಜಿಯವರಂತಹ ಮಹನೀಯರು ಈ ಕೆಲಸವನ್ನು ಜಾಗತಿಕ ಮಟ್ಟದಲ್ಲಿ ಮಾಡುತ್ತಿದ್ದಾರೆ. ಅವರ 70ನೇ ಜನ್ಮೋತ್ಸವದ ಸಂದರ್ಭದಲ್ಲಿ ಹೊಸ ಧ್ಯಾನ ಮಂದಿರ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ’ ಎಂದು ಹೇಳಿದರು.

ಮಹಿಳಾ ವಿರೋಧಿ ಕಾಂಗ್ರೆಸ್: ಮೋದಿ ಕಿಡಿ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, ಕಾಂಗ್ರೆಸ್‌ನವರು ಮಹಿಳಾ ಮೀಸಲಾತಿಯನ್ನು ತಡೆದರು. ಇದು ಜಾರಿಯಾಗಿದ್ದರೆ ಸಾಮಾನ್ಯ ವರ್ಗದ ಮಹಿಳೆಯರು ಕೂಡ ಇಂದು ವಿಧಾನಸಭೆ ಮತ್ತು ಸಂಸತ್ತಿಗೆ ಆಯ್ಕೆಯಾಗಿರುತ್ತಿದ್ದರು. ಕರ್ನಾಟಕದ ಮಹಿಳೆಯರು ಈ ದ್ರೋಹವನ್ನು ಎಂದಿಗೂ ಕ್ಷಮಿಸಬಾರದು ಎಂದು ಕರೆ ನೀಡಿದರು.

ರಾಜ್ಯ ಬಿಜೆಪಿ ನಾಯಕರು 13 ಕೆಜಿಯ ಮೋದಿಯವರ ಬೆಳ್ಳಿಯ ಪ್ರತಿಮೆ ನೀಡಿ ಸನ್ಮಾನ ಮಾಡಿದರು

ಭಾಷಣಕ್ಕೂ ಮುನ್ನ, ರಾಜ್ಯ ಬಿಜೆಪಿ ನಾಯಕರು 13 ಕೆಜಿಯ ಮೋದಿಯವರ ಬೆಳ್ಳಿಯ ಪ್ರತಿಮೆ ನೀಡಿ ಸನ್ಮಾನ ಮಾಡಿದರು. ಬಂಗಾಳ, ಅಸ್ಸಾಂ, ಪುದುಚೇರಿ ಚುನಾವಣೆಯಲ್ಲಿ ಪಕ್ಷ ಗೆಲುವು ಹಿನ್ನೆಲೆ ಈ ಗೌರವಾರ್ಪಣೆ ಮಾಡಲಾಯಿತು. ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ಪರಿಷತ್​ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ, ಶಾಸಕ ಅಶ್ವತ್ಥ್ ನಾರಾಯಣ್, ಎಸ್​.ಆರ್.ವಿಶ್ವನಾಥ್​, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರಿನ ಹೆಚ್​ಎಎಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ, ನೇರ ಪ್ರಸಾರ

ಅನೇಕ ಮಕ್ಕಳು ಬಿಡಿಸಿ ತಂದಿದ್ದ ತಮ್ಮ ಚಿತ್ರಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಕೊನೆಯಲ್ಲಿ ‘ಭಾರತ್ ಮಾತಾ ಕೀ ಜೈ’ ಘೋಷಣೆಯೊಂದಿಗೆ ಮಾತು ಮುಗಿಸಿದ ಪ್ರಧಾನಿ, ಸಾವಿರಾರು ಕಾರ್ಯಕರ್ತರತ್ತ ಕೈಬೀಸಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಕಾರ್ಯಕ್ರಮದತ್ತ ಪ್ರಯಾಣ ಬೆಳೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಸ್​ವೈ ಕೈ ಹಿಡಿದು ಮಾತನಾಡಿಸಿದ ನರೇಂದ್ರ ಮೋದಿ! – Kannada News | Prime Minister Narendra Modi Receives Grand Welcome in Bengaluru; Greets BSY with a warm Handshake

ಬೆಂಗಳೂರು, ಮೇ 10: ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಅಪಾರ ಉತ್ಸಾಹ ಮತ್ತು ಘೋಷಣೆಗಳೊಂದಿಗೆ ಭವ್ಯ ಸ್ವಾಗತ ಪಡೆದಿದ್ದಾರೆ. ಈ ವೇಳೆ ಮೋದಿ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನವರ ಕೈ ಹಿಡಿದು ಮಾತನಾಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಔಟ್ ಆಗಲು ಕಾರಣವಾಯ್ತು ಆ ಒಂದು ‘ಸಿಗ್ನಲ್’ – Kannada News | Ashish Nehra’s ‘Masterstroke’ Silences Vaibhav Sooryavanshi

IPL 2026: ಕ್ರಿಕೆಟ್ ಎಂಬುದು ಕೇವಲ ದೈಹಿಕ ಬಲದ ಆಟವಲ್ಲ, ಅದು ಬುದ್ಧಿವಂತಿಕೆಯ ಚದುರಂಗದಾಟ ಎಂಬುದನ್ನು ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಓವರ್‌ನಲ್ಲಿ ರನ್ ಮಳೆ ಹರಿಸುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ಡಗೌಟ್‌ನಿಂದ ನೆಹ್ರಾ ನೀಡಿದ ಒಂದು ಸಣ್ಣ ‘ಮಾಸ್ಟರ್‌ಸ್ಟ್ರೋಕ್’ ಸಿಗ್ನಲ್, ಇಡೀ ಪಂದ್ಯದ ಚಿತ್ರಣ ಬದಲಿಸಿತು.

ಹೌದು, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, 230 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊಹಮ್ಮದ್ ಸಿರಾಜ್ ಎಸೆದ ಮೂರನೇ ಓವರ್‌ನಲ್ಲಿ ವೈಭವ್ ಒಂದು ಸಿಕ್ಸರ್ ಮತ್ತು ಮೂರು ಸತತ ಬೌಂಡರಿಗಳನ್ನು ಬಾರಿಸಿ ಸಿರಾಜ್‌ರನ್ನು ಒತ್ತಡಕ್ಕೆ ಸಿಲುಕಿಸಿದ್ದರು.

ಅಲ್ಲದೆ ಕೇವಲ 16 ಎಸೆತಗಳಲ್ಲಿ 36 ರನ್ ಗಳಿಸಿದ್ದ ವೈಭವ್ ಆಟ ನೋಡಿ ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಕೂಡ ಅಸಹಾಯಕರಾಗಿ ನಿಂತಿದ್ದರು. ಇತ್ತ ಸಿರಾಜ್ ಅವರ ಮುಖದಲ್ಲಿನ ಅಸಹಾಯಕತೆಯನ್ನು ಗಮನಿಸಿದ ಆಶಿಶ್ ನೆಹ್ರಾ ಒಂದು ಸಿಗ್ನಲ್ ನೀಡಿದ್ದಾರೆ.

ನೆಹ್ರಾ ಅವರ ಆ ಒಂದು ಸಿಗ್ನಲ್:

ವೈಭವ್ ಆರ್ಭಟ ಮುಂದುವರೆಯುತ್ತಿದ್ದಂತೆ ಡಗೌಟ್‌ನಲ್ಲಿದ್ದ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಮೈದಾನದಲ್ಲಿದ್ದ ಸಿರಾಜ್‌ಗೆ ಕೈ ಸನ್ನೆ ಮಾಡಿ ವಿಶೇಷ ಸೂಚನೆಯೊಂದನ್ನು ನೀಡಿದರು. ಅದರಂತೆ ಮೊಹಮ್ಮದ್ ಸಿರಾಜ್ ವೈಭವ್‌ಗೆ ಶಾರ್ಟ್ ಬಾಲ್ ಬೌನ್ಸರ್​ ಎಸೆದಿದ್ದಾರೆ.

146.6 ಕಿ.ಮೀ ವೇಗದಲ್ಲಿ ಬಂದ ಮಾರಕ ಬೌನ್ಸರ್ ಅನ್ನು ವೈಭವ್  ಪುಲ್ ಮಾಡಲು ಪ್ರಯತ್ನಿಸಿ ವಿಫಲರಾದರು. ಚೆಂಡು ಬ್ಯಾಟ್‌ನ ಎಡ್ಜ್​ಗೆ ತಾಗಿ ಅರ್ಶದ್ ಖಾನ್ ಕೈಸೇರಿತು. ಅಲ್ಲಿಗೆ ವೈಭವ್ ಸೂರ್ಯವಂಶಿಯ ಇನಿಂಗ್ಸ್ ಕೂಡ ಕೊನೆಗೊಂಡಿತು.

ಇದೀಗ ವೈಭವ್ ಸೂರ್ಯವಂಶಿಗಾಗಿ ಆಶಿಶ್ ನೆಹ್ರಾ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯದ ಫಲಿತಾಂಶ:

ಈ ಪಮದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 229 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 16.3 ಓವರ್​ಗಳಲ್ಲಿ 152 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 77 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಶುಭ್​ಮನ್ ಗಿಲ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Source link

Hindu Tradition: ವಾರಕ್ಕೊಮ್ಮೆಯಾದರೂ ದೇವರಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ; ಪ್ರಯೋಜನ ಸಾಕಷ್ಟಿವೆ – Kannada News | Hindu Tradition: The Spiritual Significance and Benefits of Coconut Oil Lamps in Hindu Traditions

ಕೊಬ್ಬರಿ ಎಣ್ಣೆಯಿಂದ ದೀಪImage Credit source: Pinterest

ಹಿಂದೂ ಸಂಸ್ಕೃತಿಯಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಹಲವು ಶುಭ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಮಹಾಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ, ತೆಂಗಿನಕಾಯಿ ಮತ್ತು ಸಕ್ಕರೆಯ ನೈವೇದ್ಯ ಮಾಡಿ, ಸಕ್ಕರೆಗೆ ತುಪ್ಪ ಬೆರೆಸಿ ಪ್ರಸಾದ ಮಾಡಿದರೆ ಮನೆಯಲ್ಲಿ ಶುಭ ಕಾರ್ಯಗಳು ಬೇಗ ನಡೆಯುತ್ತವೆ. ಕುಲದೇವತೆಯ ಫೋಟೋ ಮುಂದೆ ಮೂರು ದಿನಗಳ ಕಾಲ ಅಖಂಡವಾಗಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಮನೆಯ ಕಲಹಗಳು, ಕೋಪತಾಪಗಳು ನಿವಾರಣೆಯಾಗಿ ಸಮೃದ್ಧಿ ನೆಲೆಸುತ್ತದೆ. ಹೋಮಗಳಲ್ಲಿ ಹಸಿರು ರೇಷ್ಮೆ ವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಅರ್ಪಿಸಿದರೆ ಧನ ಯೋಗ ಪ್ರಾಪ್ತವಾಗುತ್ತದೆ.

ಅರಳಿ ಮರದ ಬಳಿ ಕೊಬ್ಬರಿ ಎಣ್ಣೆ ದೀಪ:

ಅರಳಿ ಮರದ ಬಳಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ದಾಂಪತ್ಯ ಕಲಹಗಳು ದೂರವಾಗಿ ಅನ್ಯೋನ್ಯತೆ ಹೆಚ್ಚುತ್ತದೆ. ಮನೆಯ ಈಶಾನ್ಯ ಮೂಲೆಯಲ್ಲಿ 48 ಗಂಟೆಗಳ ಕಾಲ ಸತತವಾಗಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಸಾಲಬಾಧೆ ನಿವಾರಣೆಯಾಗುತ್ತದೆ. ಶನಿವಾರದಂದು ವೆಂಕಟೇಶ್ವರ ಸ್ವಾಮಿಯ ಮುಂದೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ, ಅವಲಕ್ಕಿ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಿದರೆ ಭೂ ಕಲಹಗಳು, ಕಾನೂನು ವಿಷಯಗಳಲ್ಲಿ ಶುಭವಾಗುತ್ತದೆ ಮತ್ತು ಅಪವಾದಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಶಿವನ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪ :

ಪ್ರತಿ ಸೋಮವಾರ ಸಂಜೆ ಸಂಧ್ಯಾಕಾಲದಲ್ಲಿ ಶಿವಾಲಯದಲ್ಲಿ ಅಥವಾ ಮನೆಯಲ್ಲಿರುವ ಶಿವನ ವಿಗ್ರಹದ ಮುಂದೆ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಆಸೆ-ಆಕಾಂಕ್ಷೆಗಳು ಈಡೇರುತ್ತವೆ. ಪ್ರತಿ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಕೊಬ್ಬರಿ ಎಣ್ಣೆ ದೀಪದಿಂದ ಆರತಿ ಮಾಡಿದರೆ ಸಂತಾನ ಫಲ ಲಭಿಸುತ್ತದೆ. ಅಮಾವಾಸ್ಯೆಯಂದು ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಪಿತೃಗಳಿಗೆ ಸಂತೃಪ್ತಿ ದೊರೆತು ಎಲ್ಲ ವಿಧದಿಂದಲೂ ಶುಭವಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೊಬ್ಬರಿ ಎಣ್ಣೆ ದೀಪವನ್ನು ವಾರಕ್ಕೊಮ್ಮೆಯಾದರೂ, ವಿಶೇಷವಾಗಿ ಮಂಗಳವಾರದಂದು ಹಚ್ಚುವುದು ಒಳಿತೆಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಪಂದ್ಯದಲ್ಲೇ ಶತಮಾನದ ವಿಶ್ವ ದಾಖಲೆ ಬರೆದ ಯುವ ವೇಗಿ! – Kannada News | 18 Year Old Norton Smashes 100 Year Cricket Record

ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇವಲ 18 ವರ್ಷದ ಯುವ ವೇಗಿ ಟಾಮ್ ನಾರ್ಟನ್ ತಮ್ಮ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ 100 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವೇಲ್ಸ್​ನ ಸೋಫಿಯಾ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಸಮರ್‌ಸೆಟ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗ್ಲಾಮೋರ್ಗನ್ ಪರ ಕಣಕ್ಕಿಳಿದ ನಾರ್ಟನ್, ತಮ್ಮ ಮಾರಕ ದಾಳಿಯಿಂದ ಎದುರಾಳಿ ಪಡೆಯನ್ನು ಕಟ್ಟಿಹಾಕಿದ್ದಾರೆ.

ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಅಬರ್ಗವೆನ್ನಿ ಮೂಲದ ಟಾಮ್ ನಾರ್ಟನ್ ಐದನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಮೂವರು ಬ್ಯಾಟರ್‌ಗಳನ್ನು ಔಟ್ ಮಾಡಿದರು.

  1.  ಜೇಮ್ಸ್ ರೇವ್: ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
  2. . ಟಾಮ್ ಲ್ಯಾಮ್ಮನ್ಬಿ: ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
  3.  ಆರ್ಚಿ ವಾನ್: ಎಲ್‌ಬಿಡಬ್ಲ್ಯೂ  ಆಗಿ ಹೊರ ನಡೆದರು.

ಈ ಮೂರು ವಿಕೆಟ್​ಗಳೊಂದಿಗೆ ಟಾಮ್ ನಾರ್ಟನ್ ಶತಮಾನದ ಬಳಿಕ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಶತಮಾನದ ದಾಖಲೆ ಉಡೀಸ್:

  • ಅತಿ ಕಿರಿಯ ಆಟಗಾರ: ಪ್ರಥಮ ದರ್ಜೆ ಪಂದ್ಯದ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ 18 ವರ್ಷದ ಟಾಮ್ ನಾರ್ಟನ್ ಪಾತ್ರರಾಗಿದ್ದಾರೆ.
  •  100 ವರ್ಷಗಳ ಕಾಯುವಿಕೆ ಅಂತ್ಯ: ಇಂಗ್ಲಿಷ್ ಕ್ರಿಕೆಟ್ ಇತಿಹಾಸದಲ್ಲಿ 1925ರ ನಂತರ ಪದಾರ್ಪಣೆಯ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಇವರಾಗಿದ್ದಾರೆ.
  • ಕೌಂಟಿ ಇತಿಹಾಸ: ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 1906ರ ಬಳಿಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿ ಇವರದ್ದಾಗಿದೆ.

ಪಂದ್ಯದ ಮುಖ್ಯಾಂಶ (2ನೇ ದಿನದಾಟದ ಅಂತ್ಯಕ್ಕೆ):

  • ಸಮರ್‌ಸೆಟ್ ಮೊದಲ ಇನಿಂಗ್ಸ್: 354/10 (ಟಾಮ್ ಅಬೆಲ್ 86, ಜೋಷ್ ಥಾಮಸ್ 71; ರಿಯಾನ್ ಹ್ಯಾಡ್ಲಿ 3/72)
  • ಗ್ಲಾಮೋರ್ಗನ್ ಮೊದಲ ಇನಿಂಗ್ಸ್: 229/10 (ಆಸ ಟ್ರೈಬ್ 131*, ಕಿರಣ್ ಕಾರ್ಲ್‌ಸನ್ 41; ಕ್ರೇಗ್ ಓವರ್‌ಟನ್ 3/43)
  • ಸಮರ್‌ಸೆಟ್ ಎರಡನೇ ಇನಿಂಗ್ಸ್: 32/6 (ಟಾಮ್ ಅಬೆಲ್ 14*; ಟಾಮ್ ನಾರ್ಟನ್ 4/22)
  • ಒಟ್ಟಾರೆ ಮುನ್ನಡೆ: ಸಮರ್‌ಸೆಟ್ ತಂಡವು ಪ್ರಸ್ತುತ 157 ರನ್‌ಗಳ ಮುನ್ನಡೆಯಲ್ಲಿದೆ.

ಇದನ್ನೂ ಓದಿ: IPL 2026: RCB vs MI ಪಂದ್ಯಕ್ಕೆ 5 ಆಟಗಾರರು ಅಲಭ್ಯ

ದ್ವಿತೀಯ ದಿನದಾಟದ ಅಂತ್ಯಕ್ಕೆ ಸಮರ್​ಸೆಟ್ ತಂಡವು 157 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಆದರೆ ಟಾಮ್ ನಾರ್ಟನ್ ಅವರ ಮಾರಕ ದಾಳಿಗೆ ತತ್ತರಿಸಿರುವ ಸಮರ್​ಸೆಟ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 32 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಗ್ಲಾಮೋರ್ಗನ್ ತಂಡವು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

Source link

ವಿಜಯ್ ಪ್ರಮಾಣವಚನ: ನಗುನಗುತ್ತಾ ಆಗಮಿಸಿದ ನಟಿ ತ್ರಿಶಾ ವಿಡಿಯೋ ವೈರಲ್ – Kannada News | Actor Vijay to take oath as Tamil Nadu CM Trisha Krishnan attends Swearing in Ceremony at Chennai

ನಟ ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಮೇ 10) ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರಿಂದ ಅವರ ಆಪ್ತರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ನಟಿ ತ್ರಿಶಾ ಕೃಷ್ಣನ್ (Trisha Krishnan) ಆಗಮಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರೊಂದಿಗೆ ನಟಿ ತ್ರಿಶಾ ಆತ್ಮೀಯ ಸಂಬಂಧ ಹೊಂದಿದ್ದಾರೆ. ಪ್ರಮಾಣವಚನ ಸ್ವೀಕಾರ (Vijay Oath Ceremony) ಸಮಾರಂಭಕ್ಕೂ ಮುನ್ನವೇ ಅವರು ಕ್ರೀಡಾಂಗಣಕ್ಕೆ ಆಗಮಿಸಿದ್ದು, ಈ ಕ್ಷಣದ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಕಳೆದ ಆರು ದಶಕಗಳಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಮೂರನೇ ಪಕ್ಷದ ಸರ್ಕಾರವೊಂದು ಅಧಿಕಾರಕ್ಕೆ ಬರುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಬೆಂಬಲಿಗರು ಜಮಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾದಪ್ಪನ ಬೆಟ್ಟದಲ್ಲಿ ನರಭಕ್ಷಕನ ಅಟ್ಟಹಾಸ: ನಾಗಮಲೆ ಹಾದಿಯಲ್ಲಿ ಬಾಲಕನನ್ನೇ ಕೊಂದು ತಿಂದ ಚಿರತೆ! – Kannada News | Man eating Leopard Kills Boy in MM Hills: Terror at Nagamale, Chamarajanagar

ಚಾಮರಾಜನಗರ, ಮೇ 10: ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ನರಭಕ್ಷಕ ಚಿರತೆಯ (Cheetah) ಅಟ್ಟಹಾಸ ಹೆಚ್ಚಾಗಿದೆ. ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ಚಿರತೆ ದಾಳಿಗೆ ಎರಡು ಜೀವಗಳು ಬಲಿಯಾಗಿದ್ದವು. ಈಗ ಮತ್ತೊಮ್ಮೆ ಅಂತದ್ದೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರು ಮೂಲದ ಎಂಟು ವರ್ಷದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಈ ಘಟನೆಯು ದೇವರ ದರ್ಶನಕ್ಕೆ ತೆರಳುವವರಲ್ಲಿ ಭಯ ಹುಟ್ಟಿಸಿದೆ.

ಬಾಲಕನನ್ನು ಕೊಂಡೊಯ್ದ ಚಿರತೆ!

ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ದಟ್ಟ ಅರಣ್ಯದ ಹಾದಿಯಲ್ಲಿ ಸಾಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಕುಟುಂಬಸ್ಥರು ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಬಾಲಕನ ಮೃತದೇಹ ಪತ್ತೆಯಾಗಿದ್ದು, ಚಿರತೆಯು ಬಾಲಕನ ರಕ್ತ ಹೀರಿ ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಭಕ್ಷಕ ಚಿರತೆಯ ಅಟ್ಟಹಾಸ

ಚಾಮರಾಜನಗರ ಜಿಲ್ಲೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಭಾಗಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೊಸದೇನಲ್ಲ. ಇದೇ ಜನವರಿ 21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿಯ ಪ್ರವೀಣ್ ಎಂಬ ಭಕ್ತ ತಾಳುಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದರು. ಇದಾದ ಬೆನ್ನಲ್ಲೇ ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್ (8) ಎಂಬ ಬಾಲಕನ ಮೇಲೆಯೂ ಇದೇ ಮಾರ್ಗದಲ್ಲಿ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ. ಈ ಹಿಂದೆ ಟಿ. ನರಸೀಪುರ ಮತ್ತು ಹನೂರು ಭಾಗಗಳಲ್ಲಿ ಸರಣಿ ಸಾವುಗಳು ಸಂಭವಿಸಿದ್ದು, ಅರಣ್ಯ ಇಲಾಖೆ ‘ಲೆಪರ್ಡ್ ಟಾಸ್ಕ್ ಫೋರ್ಸ್’ ಮೂಲಕ ಕಾರ್ಯಾಚರಣೆ ನಡೆಸಿ ನರಭಕ್ಷಕ ಚಿರತೆಗಳನ್ನು ಸೆರೆಹಿಡಿದಿತ್ತು. ಇದೆಲ್ಲದರ ಬೆನ್ನಲ್ಲೇ ಮತ್ತೊಮ್ಮೆ ಇದೇ ಮಾರ್ಗದಲ್ಲಿ ಚಿರತೆ ಬಾಲಕನನ್ನು ಭಕ್ಷಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯರ ಆಕ್ರೋಶ

ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ಸೂಕ್ತ ರಕ್ಷಣೆ ನೀಡಿಲ್ಲ ಎಂದು ಸ್ಥಳೀಯರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಮಾರ್ಗದಲ್ಲಿ ಪಾದಯಾತ್ರೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link