ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವ ಕೊಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಂಡಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಸಮಾರಂಭ ನಡೆಯುತ್ತಿದ್ದು, ಅಲ್ಲಿಗೆ ಮೋದಿ ಆಗಮಿಸುತ್ತಿದ್ದಂತೆ “ಮೋದಿ, ಮೋದಿ” ಘೋಷಣೆಗಳು ಪ್ರತಿಧ್ವನಿಸಿದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲ್ಕತ್ತಾ, ಮೇ 9: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೇರ ಪ್ರಸಾರ ಇಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು (ಮೇ. 09): ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026) ರೋಚಕ ಘಟ್ಟಕ್ಕೆ ತಲುಪುತ್ತಿದೆ. ಪ್ರತಿಯೊಂದು ತಂಡವು ಪ್ರಸ್ತುತ ಪ್ಲೇಆಫ್ನಲ್ಲಿ ಸ್ಥಾನ ಪಡೆಯುವತ್ತ ಗಮನಹರಿಸಿದೆ. ಇದರ ಜೊತೆಗೆ ಪ್ಲೇಆಫ್ಗಳನ್ನು ಮೀರಿ, ಹೆಚ್ಚಿನ ರನ್ಗಳು (ಆರೆಂಜ್ ಕ್ಯಾಪ್) ಮತ್ತು ಹೆಚ್ಚಿನ ವಿಕೆಟ್ಗಳಿಗಾಗಿ (ಪರ್ಪಲ್ ಕ್ಯಾಪ್) ಓಟವು ಅಷ್ಟೇ ರೋಚಕತೆ ಸೃಷ್ಟಿಸಿದೆ. ಈ ಓಟದಲ್ಲಿ, ಅನುಭವಿ ಆಟಗಾರರು ಮತ್ತು ಯುವ ಮುಖಗಳು ಇಬ್ಬರೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆದಾಗ್ಯೂ, ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನಂತರ ಅಂದುಕೊಂಡಿದ್ದ ಕೆಲ ಲೆಕ್ಕಾಚಾರ ತಲೆಕೆಳಗಾಗಿದೆ.
ನಂಬರ್ 1 ಆಗುವ ಅವಕಾಶವನ್ನು ಕಳೆದುಕೊಂಡ ರಾಹುಲ್
ಆರೆಂಜ್ ಕ್ಯಾಪ್ ಬಗ್ಗೆ ಹೇಳುವುದಾದರೆ, ಸನ್ರೈಸರ್ಸ್ ಹೈದರಾಬಾದ್ ಪ್ರಸ್ತುತ ಶ್ರೇಯಾಂಕದಲ್ಲಿ ಪ್ರಾಬಲ್ಯ ಹೊಂದಿದೆ. ಅಗ್ರ ಐದು ಬ್ಯಾಟ್ಸ್ಮನ್ಗಳಲ್ಲಿ ಮೂವರು ಈ ತಂಡಕ್ಕೆ ಸೇರಿದವರು. ಡೆಲ್ಲಿ ಕ್ಯಾಪಿಟಲ್ಸ್ನ ಸ್ಟಾರ್ ಓಪನರ್ ಕೆಎಲ್ ರಾಹುಲ್ ನಂಬರ್ ಒನ್ ಆಗುವ ಪ್ರಮುಖ ಅವಕಾಶವನ್ನು ಕಳೆದುಕೊಂಡರು. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 23 ರನ್ ಗಳಿಸುವ ಮೂಲಕ ಅಗ್ರ ಸ್ಥಾನವನ್ನು ತಲುಪುವ ಅವಕಾಶವನ್ನು ಕಳೆದುಕೊಂಡರು. ರಾಹುಲ್ 468 ರನ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ನ ಹೆನ್ರಿಚ್ ಕ್ಲಾಸೆನ್ 494 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಹೈದರಾಬಾದ್ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (475 ರನ್ಗಳು) ಇದ್ದಾರೆ. ಎಸ್ಆರ್ಎಚ್ನ ಇಶಾನ್ ಕಿಶನ್ 409 ರನ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಜಸ್ಥಾನದ ಯುವ ಸೆನ್ಸೇಶನ್ ವೈಭವ್ ಸೂರ್ಯವಂಶಿ (404) ಐದನೇ ಸ್ಥಾನದಲ್ಲಿದ್ದಾರೆ.
ಮತ್ತೊಂದೆಡೆ, ಪರ್ಪಲ್ ಕ್ಯಾಪ್ ರೇಸ್ ಕೂಡ ಆಸಕ್ತಿದಾಯಕವಾಗಿದೆ. ಆದಾಗ್ಯೂ, ದೆಹಲಿ-ಕೋಲ್ಕತ್ತಾ ಪಂದ್ಯದಲ್ಲಿ, ಅಗ್ರ ಸ್ಥಾನವನ್ನು ಪಡೆಯಲು ಸಾಧ್ಯವಾಗುವ ಒಬ್ಬ ಬೌಲರ್ ಕೂಡ ಇರಲಿಲ್ಲ. ಕೋಲ್ಕತ್ತಾದ ವೇಗಿ ಕಾರ್ತಿಕ್ ತ್ಯಾಗಿ ಎರಡು ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡರು. ಅವರು 13 ವಿಕೆಟ್ಗಳೊಂದಿಗೆ ಟಾಪ್ 10 ರಲ್ಲಿ ಪ್ರವೇಶಿಸಿದ್ದಾರೆ ಮತ್ತು ಈಗ 7 ನೇ ಸ್ಥಾನದಲ್ಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 17 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಅನ್ಶುಲ್ ಕಾಂಬೋಜ್ ಕೂಡ 17 ವಿಕೆಟ್ಗಳೊಂದಿಗೆ ಇದ್ದಾರೆ. ವ್ಯತ್ಯಾಸವೆಂದರೆ ಭುವನೇಶ್ವರ್ ಉತ್ತಮ ರನ್ರೇಟ್ ಹೊಂದಿದ್ದಾರೆ, ಅದಕ್ಕಾಗಿ ಅವರು ನಂ. 1 ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ನ ಪ್ರಿನ್ಸ್ ಯಾದವ್ ಮತ್ತು ಗುಜರಾತ್ ಟೈಟಾನ್ಸ್ನ ಕಗಿಸೊ ರಬಾಡ ತಲಾ 16 ವಿಕೆಟ್ಗಳೊಂದಿಗೆ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ನಡುವಿನ ಸ್ನೇಹದ ಬಗ್ಗೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇಬ್ಬರೂ ಮದುವೆ ಆಗಲಿ ಎಂಬುದು ಕೆಲ ಅಭಿಮಾನಿಗಳ ಕೋರಿಕೆ. ಇದೀಗ ಈ ಚರ್ಚೆಗೆ ಬಾಲಿವುಡ್ನ ವಿವಾದಾತ್ಮಕ ನಟಿ ರಾಖಿ ಸಾವಂತ್ ಎಂಟ್ರಿಕೊಟ್ಟಿದ್ದಾರೆ ಎಂಬುದು ವಿಶೇಷ. ವಿಜಯ್ ಮತ್ತು ತ್ರಿಷಾ ಮದುವೆಯಾಗಬೇಕು ಎಂದು ಹೇಳುವ ಮೂಲಕ ರಾಖಿ ಸಂಚಲನ ಮೂಡಿಸಿದ್ದಾರೆ.
1. ವಿಜಯ್-ತ್ರಿಷಾ ಮದುವೆಯಾಗಲಿ ಎಂದ ರಾಖಿ ಸಾವಂತ್
2. ವಿಜಯ್ ಮತ್ತು ಸಂಗೀತ ಅವರ ಡಿವೋರ್ಸ್ ವದಂತಿಗಳ ನಡುವೆ ರಾಖಿ ಹೇಳಿಕೆ
3. ವಿಜಯ್ ಅವರ ಪಕ್ಷಕ್ಕೆ ಸೇರ್ತೀನಿ ಎಂದ ವಿವಾದಾತ್ಮಕ ನಟಿ
ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ರಾಖಿ, ‘ವಿಜಯ್ ಮತ್ತು ತ್ರಿಷಾ ಮದುವೆಯಾಗಬೇಕು ಎಂದು ನನಗೆ ಅನ್ನಿಸುತ್ತಿದೆ. ಅವರಿಬ್ಬರ ಮದುವೆ ನಡೆದರೆ ನಾನು ಖಂಡಿತವಾಗಿಯೂ ಮೆಹಂದಿ ಕಾರ್ಯಕ್ರಮಕ್ಕೆ ಹೋಗುತ್ತೇನೆ’ ಎಂದಿದ್ದಾರೆ. ಅಲ್ಲದೆ, ವಿಜಯ್ ರಾಜಕೀಯ ಯಶಸ್ಸನ್ನು ಶ್ಲಾಘಿಸಿದ ಅವರು, ‘ವಿಜಯ್ ಅವರ ಪಕ್ಷವನ್ನು ಸೇರಲು ನಾನು ಇಷ್ಟಪಡುತ್ತೇನೆ’ ಎಂದು ತಮ್ಮ ಆಸೆಯನ್ನು ಹೊರಹಾಕಿದ್ದಾರೆ.
ವಿಜಯ್ ಮತ್ತು ತ್ರಿಷಾ ಬಗ್ಗೆ ಇಷ್ಟೊಂದು ಚರ್ಚೆ ನಡೆಯಲು ಕಾರಣ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ. ‘ಗಿಲ್ಲಿ’ ಚಿತ್ರದಿಂದ ಆರಂಭವಾದ ಇವರ ಜೋಡಿ ‘ಲಿಯೋ’ ಚಿತ್ರದವರೆಗೂ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದೆ. ಇನ್ನೊಂದೆಡೆ, ವಿಜಯ್ ಮತ್ತು ಅವರ ಪತ್ನಿ ಸಂಗೀತ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳು ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದವು. ಅದು ನಿಜವಾಗಿದೆ. ಸಂಗೀತಾ ಅವರು ಕೋರ್ಟ್ನಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ವಿಜಯ್ ಅವರ ‘ಟಿವಿಕೆ’ ಪಕ್ಷ ದೊಡ್ಡ ಮಟ್ಟದ ಗೆಲುವು ಸಾಧಿಸಿದ ಬೆನ್ನಲ್ಲೇ, ತ್ರಿಷಾ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ವಿಜಯ್ ಗೆದ್ದಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ತ್ಯಜಿಸಬೇಕಿದ್ದು, ಆ ಉಪಚುನಾವಣೆಯಲ್ಲಿ ತ್ರಿಷಾ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ದಾವಣಗೆರೆ, ಮೇ 09: ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿಯ ರಾಂಪುರ ಗ್ರಾಮದ ಬಳಿ ತುಂಗಭದ್ರ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ನದಿಯ ದಡದಲ್ಲಿ ಮೊಸಳೆ ಸುತ್ತಾಡುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ನಿತ್ಯ ಸ್ನಾನ ಹಾಗೂ ಬಟ್ಟೆ ಒಗೆಯಲು ನದಿಗೆ ಬರುವ ಗ್ರಾಮಸ್ಥರು ಮತ್ತು ಜಾನುವಾರುಗಳಿಗೆ ಈಗ ಪ್ರಾಣಭಯ ಶುರುವಾಗಿದೆ. ಇದೇ ಪ್ರದೇಶದಲ್ಲಿ ಮರಳು ಗಣಿಗಾರಿಕೆಯೂ ನಡೆಯುತ್ತಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೊಸಳೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ 2024ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಎಲ್ಲರ ಕಣ್ಣು ಪಾರ್ಟ್-2 ಮೇಲಿದೆ. ಆದರೆ, ಎರಡನೇ ಭಾಗದ ಚಿತ್ರೀಕರಣಕ್ಕೆ ಆರಂಭದಲ್ಲೇ ಹಲವು ಅಡೆತಡೆಗಳು ಎದುರಾಗಿದ್ದವು. ಕೊನೆಗೂ ಚಿತ್ರತಂಡ ಅದೆಲ್ಲವನ್ನೂ ದಾಟಿ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ.
1. ‘ಕಲ್ಕಿ 2’ ತರಲು ನಡೆದಿದೆ ಪ್ಲ್ಯಾನ್
2. 2027ರ ಡಿಸೆಂಬರ್ನಲ್ಲಿ ರಿಲೀಸ್
3. ಪ್ರಭಾಸ್, ಬಚ್ಚನ್, ಕಮಲ್ ಹಾಸನ್, ಸಾಯಿ ಪಲ್ಲವಿ ಶೂಟ್ನಲ್ಲಿ ಭಾಗಿ
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಅವರು ಎರಡನೇ ಭಾಗದಲ್ಲೂ ಮುಂದುವರಿಯಬೇಕಿತ್ತು. ಆದರೆ, ತಾವು ನಟಿಸೋಲ್ಲ ಎಂದು ನೇರವಾಗಿಯೇ ಹೇಳಿದರು. ಇನ್ನು ಅಮಿತಾಭ್ ಬಚ್ಚನ್ ಅವರಿಗೆ ವಯಸ್ಸಾಗಿದ್ದು, ಸಿನಿಮಾ ಶೂಟಿಂಗ್ ಮಾಡೋದು ಅವರಿಗೆ ತುಂಬಾನೇ ರಿಸ್ಕ್ ಆಗಿರಲಿದೆ. ಈ ಎಲ್ಲಾ ಸಮಸ್ಯೆಗಳಿಗೆ ಚಿತ್ರತಂಡ ಪರಿಹಾರ ಕಂಡುಕೊಂಡಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಮುಂದಿನ ವರ್ಷದ ಏಪ್ರಿಲ್ ಒಳಗೆ ಪ್ರಮುಖ ತಾರೆಯರಾದ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹಾಗೂ ಸಾಯಿ ಪಲ್ಲವಿ (ದೀಪಿಕಾ ಬದಲಿಗೆ) ಅವರ ಭಾಗದ ಚಿತ್ರೀಕರಣ ಪೂರ್ಣಗೊಳ್ಳಲಿದೆಯಂತೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಮೊದಲ ಭಾಗಕ್ಕಿಂತಲೂ ಹೆಚ್ಚು ಅದ್ದೂರಿಯಾಗಿ ಮೂಡಿಬರಲಿದೆ.
‘ಕಲ್ಕಿ-2’ ತಂಡವು 2027ರ ಡಿಸೆಂಬರ್ನಲ್ಲಿ ಸಿನಿಮಾವನ್ನು ತೆರೆಗೆ ತರುವ ಗುರಿ ಹೊಂದಿದೆ. ಚಿತ್ರದಲ್ಲಿ ಹೆಚ್ಚಿನ ಗ್ರಾಫಿಕ್ಸ್ ಕೆಲಸಗಳು ಇರುವುದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಸಮಯ ನೀಡಲು ಚಿತ್ರತಂಡ ನಿರ್ಧರಿಸಿದೆ. ಸುಪ್ರೀಂ ಯಾಸ್ಕಿನ್ (ಕಮಲ್ ಹಾಸನ್) ಮತ್ತು ಭೈರವ (ಪ್ರಭಾಸ್) ನಡುವಿನ ಅಸಲಿ ಯುದ್ಧ ಈ ಭಾಗದಲ್ಲಿ ಶುರುವಾಗಲಿದೆ. ಅಶ್ವತ್ಥಾಮ (ಅಮಿತಾಭ್ ಬಚ್ಚನ್) ಮತ್ತು ಯಾಸ್ಕಿನ್ ಎದುರುಬದರು ಆಗುವ ದೃಶ್ಯಗಳು ಸಿನಿಮಾದ ಹೈಲೈಟ್ ಆಗಲಿವೆ.
ದೀಪಿಕಾ ಬದಲಿಗೆ ಈಗಾಗಲೇ ಸಾಯಿ ಪಲ್ಲವಿ ಅವರ ಆಯ್ಕೆ ನಡೆದಿದೆ. ಪ್ರಭಾಸ್ ಅವರ ಶೂಟಿಂಗ್ ವೇಳೆ ಆ್ಯಕ್ಷನ್ ದೃಶ್ಯಗಳಿದ್ದರೆ ಅದನ್ನು ಡೂಪ್ ಮೂಲಕ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಅಮಿತಾಭ್ ಬಚ್ಚನ್ ಅವರಿಗೆ ಹೆಚ್ಚು ತೊಂದರೆ ನೀಡದಿರಲು ತಂಡ ನಿರ್ಧರಿಸಿದೆ.
“ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ಪುರಾತನ ನುಡಿಯಂತೆ, ಮರಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿದೆ. ಹಿಂದಿನ ಕಾಲದಿಂದಲೂ ಮರಗಳು ಮನುಷ್ಯನಿಗೆ ನೆರಳು, ಆಹಾರ, ಹಣ್ಣು, ಆರೋಗ್ಯ ಮತ್ತು ಆಶ್ರಯವನ್ನು ಒದಗಿಸುತ್ತಾ ಬಂದಿವೆ. ಇಂತಹ ಪೂಜನೀಯ ವೃಕ್ಷಗಳಲ್ಲಿ ತೆಂಗಿನ ಮರಕ್ಕೆ ವಿಶೇಷ ಸ್ಥಾನವಿದೆ, ಇದನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ತೆಂಗಿನ ಮರವು ದೈವಾಂಶ, ದೈವ ಲಹರಿಗಳು ಮತ್ತು ಸಕಾರಾತ್ಮಕ ಶಕ್ತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಎಂದು ನಂಬಲಾಗುತ್ತದೆ. ಆದ್ದರಿಂದ ತೆಂಗಿನ ಮರದ ಮಹತ್ವ ಮತ್ತು ಕಡಿಯುವಾಗ ಅನುಸರಿಸಬೇಕಾದ ಶಾಸ್ತ್ರೋಕ್ತ ವಿಧಿವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ತೆಂಗಿನ ಮರವನ್ನು ಕಡಿಯುವ ಅನಿವಾರ್ಯತೆ ಬಂದಾಗ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಮೊದಲನೆಯದಾಗಿ, ಮರ ಕಡಿಯಲು ಒಂದು ಸೂಕ್ತ ಮುಹೂರ್ತವನ್ನು ನಿಶ್ಚಯಿಸಿಕೊಳ್ಳಬೇಕು. ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ತೆಂಗಿನ ಮರವನ್ನು ಕಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿರ್ದಿಷ್ಟ ದಿನಗಳನ್ನು ಹೊರತುಪಡಿಸಿ, ಶುಭ ದಿನವನ್ನು ಆಯ್ಕೆ ಮಾಡಿಕೊಳ್ಳಬೇಕು.
ಮರ ಕಡಿಯುವ ಮೊದಲು ವೃಕ್ಷ ಪ್ರಾರ್ಥನೆಯನ್ನು ಮಾಡಬೇಕು. ಮರಕ್ಕೆ ಸರಳ ಪೂಜೆ ಸಲ್ಲಿಸಿ, ಗಂಧ, ಅಕ್ಷತೆ, ಹೂವುಗಳನ್ನು ಅರ್ಪಿಸಿ, ಧೂಪ ದೀಪಗಳನ್ನು ಬೆಳಗಿಸಬೇಕು. ಈ ಸಮಯದಲ್ಲಿ ಮರಕ್ಕೆ ಕ್ಷಮಾಪಣೆಯನ್ನು ಕೇಳಬೇಕು. “ನನಗೆ ಬೇರೆ ದಾರಿ ಇಲ್ಲ, ದಯವಿಟ್ಟು ನನ್ನನ್ನು ಕ್ಷಮಿಸು. ನಿನ್ನ ಸ್ಥಾನದಲ್ಲಿ ನಾನು ಇನ್ನೊಂದು ಮರವನ್ನು ನೆಡುತ್ತೇನೆ” ಎಂದು ಪ್ರಮಾಣ ವಚನ ಅಥವಾ ವಾಗ್ದಾನವನ್ನು ಮಾಡಬೇಕು. ಈ ಮರದಲ್ಲಿರುವ ಅಗೋಚರ ಶಕ್ತಿಗಳು ಮತ್ತು ಧನಾತ್ಮಕ ಶಕ್ತಿಗಳು ತಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸಬೇಕು.
ಶಾಸ್ತ್ರಗಳ ಪ್ರಕಾರ, ಒಂದು ತೆಂಗಿನ ಮರವನ್ನು ಕಡಿಯಬೇಕಾದರೆ, ಅದಕ್ಕೆ ಸಮನಾದ ಮತ್ತೊಂದು ಚಿಕ್ಕ ಮರವನ್ನು ತಂದು, ಅದನ್ನು ಕಡಿಯುವ ಮರದ ಪಕ್ಕದಲ್ಲಿ ಇಟ್ಟು ಪೂಜಿಸಿ, ನಂತರ ಹಳೆಯ ಮರವನ್ನು ಕಡಿಯಬೇಕು. ಅಲ್ಲದೆ, ಒಬ್ಬ ವಿಪ್ರ ಅಥವಾ ಬ್ರಾಹ್ಮಣರನ್ನು ಕರೆಸಿ, ಅವರಿಗೆ ವಸ್ತ್ರದಾನ ಮಾಡಿ, ಊಟ ನೀಡಿ, ಅವರ ಕೈಯಿಂದ ಪೂಜೆ ಮಾಡಿಸಿ, ಅವರ ಸಮ್ಮುಖದಲ್ಲಿ ಮರ ಕಡಿಸಿ, ಹೊಸ ಮರವನ್ನು ನೆಡಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 09: ಜನರು ಕಷ್ಟ ಅಂತ ತಮ್ಮ ಬೆಲೆಬಾಳುವ ಚಿನ್ನಾಭರಣವನ್ನು (Gold Jewellery)ಅಡವಿಟ್ಟರೆ, ಇಲ್ಲೊಬ್ಬ ಜ್ಯುವೆಲರಿ ಶಾಪ್ ಮಾಲೀಕ ಜನರಿಗೇ ಪಂಗನಾಮ ಹಾಕಿದ್ದಾನೆ. ಬೆಂಗಳೂರಿನಲ್ಲಿ ಕಡಿಮೆ ಬಡ್ಡಿಯ ಆಸೆ ತೋರಿಸಿ ಗ್ರಾಹಕರಿಂದ ಚಿನ್ನ ಪಡೆದ ಆಸಾಮಿ ಈಗ ಅಂಗಡಿ ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾನೆ.
ಮುಖ್ಯಾಂಶಗಳು
ಕಡಿಮೆ ಬಡ್ಡಿ ಆಸೆ ತೋರಿಸಿ ಗ್ರಾಹಕರಿಗೆ ಮೋಸ
ತನ್ನ ಶಾಪ್ನಲ್ಲೇ ಚಿನ್ನ ಅಡವಿರಿಸಿ ಮೋಸ
ಶಾಪ್ ಬಂದ್ ಮಾಡಿ ವ್ಯಕ್ತಿ ಪರಾರಿ
ವಂಚನೆಯ ಜಾಲ ಹೇಗಿತ್ತು ಗೊತ್ತಾ?
ರಾಘವೇಂದ್ರ ಜ್ಯುವಲರಿ ಶಾಪ್ ಮಾಲೀಕ ತೇಜಸ್ ಗೌಡ ಅಲಿಯಾಸ್ ಮೂರ್ತಿ ಈ ಹಗರಣದ ಮುಖ್ಯ ಆರೋಪಿ. ಈತ ಒಂದು ತಂಡವನ್ನು ರಚಿಸಿಕೊಂಡು, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಯಾರು ಚಿನ್ನ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿದ್ದ. ನಂತರ ಅಂತಹ ಗ್ರಾಹಕರನ್ನು ಸಂಪರ್ಕಿಸಿ, ಕಡಿಮೆ ಬಡ್ಡಿಗೆ ಹೆಚ್ಚು ಸಾಲ ನೀಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದ. ಗ್ರಾಹಕರು ನಂಬಿದ ತಕ್ಷಣ, ಅವರು ಅಡವಿಟ್ಟಿದ್ದ ಜಾಗಕ್ಕೆ ಹೋಗಿ ಹಣ ಪಾವತಿಸಿ ಚಿನ್ನ ಬಿಡಿಸುತ್ತಿದ್ದ. ಬಳಿಕ ಆ ಚಿನ್ನವನ್ನು ತನ್ನದೇ ರಾಘವೇಂದ್ರ ಜ್ಯುವಲರಿ ಶಾಪ್ನಲ್ಲಿ ಇರಿಸಿಕೊಳ್ಳುತ್ತಿದ್ದ.
ಆರೋಪಿ ಎಸ್ಕೇಪ್!
ಕಳೆದ ಒಂದು ವರ್ಷದಿಂದ ಈ ವ್ಯವಹಾರ ನಡೆಸುತ್ತಿದ್ದ ತೇಜಸ್, 50 ಪೈಸೆ ಬಡ್ಡಿಯ ಆಸೆ ತೋರಿಸಿ ನೂರಾರು ಜನರನ್ನು ವಂಚಿಸಿದ್ದಾನೆ. ಆದರೆ, ಕಳೆದ ಮೂರು ತಿಂಗಳಿಂದ ಜ್ಯುವಲರಿ ಶಾಪ್ ಕ್ಲೋಸ್ ಮಾಡಿದ್ದಾನೆ. ಅಡವಿಟ್ಟ ಚಿನ್ನ ಬಿಡಿಸಲು ಹೋದ ಗ್ರಾಹಕರಿಗೆ ಅಂಗಡಿ ಮುಚ್ಚಿರುವುದು ಕಂಡುಬಂದಿದೆ. ಈ ನಡುವೆ ಜ್ಯುವಲರಿ ಶಾಪ್ ಮುಚ್ಚಿದ ಮೇಲೆ ಹೊಸದಾಗಿ ಫೈನಾನ್ಸ್ ಕಂಪನಿಯೊಂದನ್ನು ಆರಂಭಿಸಿದ್ದ ತೇಜಸ್, ಕಳೆದ ಒಂದು ವಾರದಿಂದ ಅದಕ್ಕೂ ಬೀಗ ಜಡಿದು ನಾಪತ್ತೆಯಾಗಿದ್ದಾನೆ.
ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಎಂಬಾಕೆಗೆ ಈತ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮೊತ್ತದ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿವಿಧ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಸೌಮ್ಯಲತಾ ಅವರು ಇಟ್ಟಿದ್ದ ಚಿನ್ನವನ್ನು ಬಿಡಿಸಿದ್ದ ತೇಜಸ್, ನಂತರ ಅದನ್ನು ತನ್ನಲ್ಲಿಯೇ ಇಟ್ಟುಕೊಂಡು ವಂಚಿಸಿದ್ದಾನೆ. ಇದರಿಂದ ಕಂಗಾಲಾದ ಸೌಮ್ಯಲತಾ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸೌಮ್ಯಲತಾ ಅವರ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ತೇಜಸ್ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ಆಟಗಾರರ ಸುರಕ್ಷತೆ ಮತ್ತು ಪಂದ್ಯದ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಹೆಜ್ಜೆ ಇರಿಸಿದೆ. ಇತ್ತೀಚಿನ ದಿನಗಳಲ್ಲಿ ಕಂಡುಬಂದ ಕೆಲವು ಅಶಿಸ್ತಿನ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಎಲ್ಲಾ 10 ಫ್ರಾಂಚೈಸಿಗಳಿಗೆ 7 ಪುಟಗಳ ವಿಸ್ತೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿವೆ:
ಹನಿ ಟ್ರ್ಯಾಪ್ ಬಗ್ಗೆ ಎಚ್ಚರಿಕೆ: ಆಟಗಾರರು ಮತ್ತು ಸಿಬ್ಬಂದಿಗಳು ‘ಹನಿ ಟ್ರ್ಯಾಪ್’ ಜಾಲಕ್ಕೆ ಬೀಳದಂತೆ ಬಿಸಿಸಿಐ ಎಚ್ಚರಿಸಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಹೊರಗಡೆ ವ್ಯವಹರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.
ಹೋಟೆಲ್ ಕೊಠಡಿಗಳಿಗೆ ನಿರ್ಬಂಧ: ತಂಡದ ವ್ಯವಸ್ಥಾಪಕರ ಪೂರ್ವಾನುಮತಿ ಇಲ್ಲದೆ ಯಾವುದೇ ಹೊರಗಿನ ವ್ಯಕ್ತಿಗಳು ಆಟಗಾರರ ಅಥವಾ ಕೋಚಿಂಗ್ ಸಿಬ್ಬಂದಿಯ ಹೋಟೆಲ್ ಕೊಠಡಿಗಳಿಗೆ ಪ್ರವೇಶಿಸುವಂತಿಲ್ಲ. ಭೇಟಿಗಾಗಿ ಹೋಟೆಲ್ನ ಸಾರ್ವಜನಿಕ ಸ್ಥಳಗಳನ್ನು ಮಾತ್ರ ಬಳಸಲು ಸೂಚಿಸಲಾಗಿದೆ.
ಸಂಚಾರಕ್ಕೆ ಅನುಮತಿ ಕಡ್ಡಾಯ: ಆಟಗಾರರು ಅಥವಾ ಸಿಬ್ಬಂದಿ ಹೋಟೆಲ್ ಆವರಣದಿಂದ ಹೊರಗೆ ಹೋಗಬೇಕಾದಲ್ಲಿ, ನಿಯೋಜಿತ ಭದ್ರತಾ ಸಂಪರ್ಕ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುವುದು ಕಡ್ಡಾಯ.
ಮಾನ್ಯತಾ ಕಾರ್ಡ್ಗಳ ಬಳಕೆ: ಸ್ಟೇಡಿಯಂ, ಹೋಟೆಲ್ ಮತ್ತು ಅಭ್ಯಾಸದ ಅವಧಿಯಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವಾಗಲೂ ತಮ್ಮ ಮಾನ್ಯತಾ ಕಾರ್ಡ್ಗಳನ್ನು (Accreditation Cards) ಧರಿಸಿರಬೇಕು. ಇದು ಭದ್ರತಾ ತಪಾಸಣೆಯನ್ನು ಸುಗಮಗೊಳಿಸಲು ಸಹಕಾರಿ.
ಮಾಲೀಕರಿಗೆ ಡಗೌಟ್ ನಿರ್ಬಂಧ: ಪಂದ್ಯ ನಡೆಯುತ್ತಿರುವ ಸಮಯದಲ್ಲಿ ತಂಡದ ಮಾಲೀಕರು ಡಗೌಟ್ನಲ್ಲಿರುವ ಆಟಗಾರರು ಅಥವಾ ಮ್ಯಾನೇಜರ್ಗಳೊಂದಿಗೆ ಸಂವಹನ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಂದ್ಯದ ಮೇಲೆ ಯಾವುದೇ ಬಾಹ್ಯ ಪ್ರಭಾವ ಬೀರದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಐಪಿಎಲ್ನಂತಹ ದೊಡ್ಡ ಮಟ್ಟದ ಟೂರ್ನಿಯಲ್ಲಿ ಭ್ರಷ್ಟಾಚಾರ ಮತ್ತು ಫಿಕ್ಸಿಂಗ್ನಂತಹ ಚಟುವಟಿಕೆಗಳು ನಡೆಯದಂತೆ ತಡೆಯುವುದು ಬಿಸಿಸಿಐನ ಮುಖ್ಯ ಉದ್ದೇಶವಾಗಿದೆ.
ಪ್ರಸಕ್ತ ಸೀಸನ್ನಲ್ಲಿ ಆಟಗಾರರು, ಸಿಬ್ಬಂದಿ ಮತ್ತು ತಂಡದ ಅಧಿಕಾರಿಗಳಿಂದ ಹಲವಾರು “ಅಕ್ರಮಗಳು” ಮತ್ತು ಭದ್ರತಾ ನಿಯಮಗಳ ಉಲ್ಲಂಘನೆ ನಡೆದಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ.
ಇದೀಗ ಟೂರ್ನಿಯ ಘನತೆಗೆ, ಆಟಗಾರರ ಖಾಸಗಿತನಕ್ಕೆ ಮತ್ತು ಭದ್ರತೆಗೆ ಯಾವುದೇ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವ ತಂಡ ಅಥವಾ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೊಸ ಇತಿಹಾಸ ಬರೆದಿದ್ದು ಮತ್ಯಾರೂ ಅಲ್ಲ, ಸ್ಫೋಟಕ ದಾಂಡಿಗ ಫಿನ್ ಅಲೆನ್ (Finn Allen). ಅದು ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ. ಈ ಶತಕದೊಂದಿಗೆ ಅಲೆನ್ ಕೆಕೆಆರ್ ಪರ ಯಾರಿಂದಲೂ ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. (PC: IPL)