IPL 2026: ಐಪಿಎಲ್ 2026ರ ಕಾದಾಟ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ! ಹತ್ತು ತಂಡಗಳ ನಡುವಿನ ಈ ಬಲಿಷ್ಠ ಪೈಪೋಟಿಯಲ್ಲಿ ಪ್ಲೇ-ಆಫ್ಗೆ ಲಗ್ಗೆ ಇಡುವ ನಾಲ್ಕು ಅದೃಷ್ಟವಂತ ತಂಡಗಳು ಯಾವುವು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ. ಕೆಲ ತಂಡಗಳು ಗೆಲುವಿನ ನಾಗಾಲೋಟದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇನ್ನು ಕೆಲವು ತಂಡಗಳು ಪ್ರತಿ ಪಂದ್ಯವನ್ನೂ ‘ಮಾಡು ಇಲ್ಲವೇ ಮಡಿ’ ಎಂಬಂತೆ ಆಡಬೇಕಾದ ಅನಿವಾರ್ಯತೆಯಲ್ಲಿವೆ. ಅದರಂತೆ ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ… (PC: BCCI)
ಬೆಂಗಳೂರು, ಮೇ.6 : ಸಿಲಿಕಾನ್ ಸಿಟಿಯ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬಾಡಿಗೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ 23 ವರ್ಷದ ಯುವ ಸಾಫ್ಟ್ವೇರ್ ಇಂಜಿನಿಯರ್ ಅವರ ವಿಡಿಯೋವನ್ನು ಅಪರಿಚಿತ ವ್ಯಕ್ತಿಯೊಬ್ಬ ಚಿತ್ರೀಕರಿಸಿರುವ ಬಗ್ಗೆ ದೂರು ದಾಖಲಾಗಿದೆ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಯುವತಿಯು ಕಳೆದ ಒಂಬತ್ತು ತಿಂಗಳ ಹಿಂದೆ ಗರುಡಾಚಾರ್ ಪಾಳ್ಯಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಬುಧವಾರ ಬೆಳಿಗ್ಗೆ ಸುಮಾರು 9.30ರ ಸುಮಾರಿಗೆ ಅವರು ಸ್ನಾನ ಮಾಡುತ್ತಿದ್ದಾಗ, ಪಕ್ಕದ ಕಟ್ಟಡದಿಂದ ಯಾರೋ ಒಬ್ಬರು ಮೊಬೈಲ್ ಫೋನ್ ಮೂಲಕ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಈ ಘಟನೆಯಿಂದ ಯುವತಿಯು ತೀವ್ರ ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ತೀವ್ರ ತನಿಖೆ ಆರಂಭಿಸಿದ್ದಾರೆ.
ತಿರುವನಂತಪುರಂ, ಮೇ 06: ದೇವರ ನಾಡು ಕೇರಳಂನಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸಿದೆ. ಕಳೆದ ಹತ್ತು ವರ್ಷಗಳಿಂದ ಸತತವಾಗಿ ಆಡಳಿತ ನಡೆಸುತ್ತಿದ್ದ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ (LDF) ಸರ್ಕಾರವನ್ನು ಕಿತ್ತೊಗೆಯುವಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಯಶಸ್ವಿಯಾಗಿದೆ. ಈ ಭರ್ಜರಿ ಜಯದೊಂದಿಗೆ ಕಾಂಗ್ರೆಸ್ ಒಂದು ದಶಕದ ನಂತರ ಮರಳಿ ಗದ್ದುಗೆ ಏರುತ್ತಿದೆ. ಕಳೆದ ಎರಡು ಅವಧಿಗಳಲ್ಲಿ ಆಡಳಿತ ನಡೆಸಿದ್ದ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿದೆ. ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಮತ್ತು ಇತ್ತೀಚಿನ ವಿವಾದಗಳು ಎಲ್ಡಿಎಫ್ ಪತನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ನ ಭರವಸೆಗಳಿಗೆ ಜನಮನ್ನಣೆ ಸಿಕ್ಕಿದೆ.
2016ರಿಂದ ಸತತ ಸೋಲುಗಳನ್ನು ಕಂಡಿದ್ದ ಕಾಂಗ್ರೆಸ್ ಪಾಲಿಗೆ ಈ ಜಯ ಸಂಜೀವಿನಿಯಂತಿದೆ. ರಾಜ್ಯಾದ್ಯಂತ ನಡೆದ ತೀವ್ರ ಪ್ರಚಾರ ಮತ್ತು ಒಗ್ಗಟ್ಟಿನ ಹೋರಾಟವು ಯುಡಿಎಫ್ಗೆ ಭದ್ರವಾದ ನೆಲೆಯನ್ನು ಒದಗಿಸಿದೆ. ದಕ್ಷಿಣದ ಈ ಪ್ರಮುಖ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಗೆ ದೊಡ್ಡ ಶಕ್ತಿಯನ್ನು ನೀಡಿದೆ.
ಫಲಿತಾಂಶ ಹೊರಬರುತ್ತಿದ್ದಂತೆಯೇ ಕೇರಳದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ-ಬಿಳಿ-ಹಸಿರು ಬಾವುಟಗಳನ್ನು ಹಿಡಿದು ಬೀದಿಗಿಳಿದು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಒಂದು ಪಕ್ಷದ ಗೆಲುವಲ್ಲ, ಬದಲಾವಣೆಯನ್ನು ಬಯಸಿದ್ದ ಕೇರಳಂನ ಜನರ ಗೆಲುವು” ಎಂದು ಸ್ಥಳೀಯ ನಾಯಕರು ಬಣ್ಣಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿ. ಡಿ. ಸತೀಶನ್, ಕೆ. ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ನಡುವೆ ತೀವ್ರ ಪೈಪೋಟಿ ನಡೆದಿದೆ. ಕೇರಳಂ ಸಿಎಂ ರೇಸ್ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ವಿ. ಡಿ. ಸತೀಶನ್ ಅವರದ್ದು.
ಕಳೆದ ಐದು ವರ್ಷಗಳಿಂದ ಕೇರಳಂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಪಿಣರಾಯಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಿದ ಅನುಭವ ಅವರಿಗಿದೆ. ಈ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರಿಗೆ ಸದ್ಯ ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ವಿಶ್ವಾಸವಿದೆ ಎನ್ನಲಾಗಿದೆ. ಇಂದು ತಿರುವನಂತಪುರಂನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ನಡೆಯುವ ಸಾಧ್ಯತೆ ಇದೆ. ಸಿಎಲ್ಪಿ ನಾಯಕನ ಆಯ್ಕೆಗೂ ಮುನ್ನ ಎಐಸಿಸಿ ವೀಕ್ಷಕರು ವಿ. ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ. ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್Image Credit source: tv9
ತುಮಕೂರು, ಮೈಸೂರು, ಮೇ 6: ತಮಿಳುನಾಡು (Tamil Nadu Election) ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ದೊಡ್ಡ ಸಂಚಲನ ಮೂಡಿಸಿದೆ. ಈ ಪಕ್ಷದಿಂದ ಸ್ಪರ್ಧಿಸಿ ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ (Sunil Anand) ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು ಎಂಬುದು ವಿಶೇಷ. ದಶಕಗಳ ಹಿಂದೆ ಉದ್ಯಮಕ್ಕಾಗಿ ತಮಿಳುನಾಡಿಗೆ ವಲಸೆ ಹೋಗಿದ್ದ ಕುಟುಂಬದ ಕುಡಿ ಇಂದು ಅಲ್ಲಿನ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.
ಮುಖ್ಯಾಂಶಗಳು
ತಮಿಳುನಾಡಿನ ಮೆಟ್ಟುಪಾಳ್ಯಂ ಕ್ಷೇತ್ರದಿಂದ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಸುನೀಲ್ ಆನಂದ್ ಗೆಲುವು.
ಶಾಸಕ ಸುನೀಲ್ ಆನಂದ್ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವಡಕೆಘಟ್ಟ ಗ್ರಾಮದವರು.
ಸುಮಾರು 96 ವರ್ಷಗಳ ಹಿಂದೆ ಬರಗಾಲದ ಸಂದರ್ಭದಲ್ಲಿ ಉದ್ಯಮ ಅರಸಿ ತಮಿಳುನಾಡಿಗೆ ವಲಸೆ ಹೋಗಿದ್ದ ಇವರ ಕುಟುಂಬ.
ಬರಗಾಲ ತಂದ ಬದಲಾವಣೆ
ಸುಮಾರು 96 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದ ಸಂದರ್ಭದಲ್ಲಿ ಸುನೀಲ್ ಆನಂದ್ ಅವರ ಮುತ್ತಾತ ಬೋರೇಗೌಡರು ಉದ್ಯಮ ಆರಂಭಿಸುವ ಸಲುವಾಗಿ ಊರು ತೊರೆದು ತಮಿಳುನಾಡು ಸೇರಿದ್ದರು. ನಂತರ ಅವರ ಮಗ ಲಿಂಗೇಗೌಡ ಹಾಗೂ ಮೊಮ್ಮಗ ನಾಗರಾಜು ಅವರು ಅಲ್ಲಿಯೇ ನೆಲೆಸಿದರು. ನಾಗರಾಜು ಅವರ ಪುತ್ರನೇ ಈ ಸುನೀಲ್ ಆನಂದ್. ತಮಿಳುನಾಡಿನಲ್ಲೇ ಶಿಕ್ಷಣ ಮುಗಿಸಿರುವ ಸುನೀಲ್ ಆನಂದ್ ಅವರು ಅಲ್ಲಿ ಜಮೀನ್ದಾರರಾಗಿ, ಅಡಿಕೆ ತೋಟ, ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಪ್ರತಿವರ್ಷ ಅವರು ತಮ್ಮ ಮೂಲ ಗ್ರಾಮವಾದ ವಡಕೆಘಟ್ಟಕ್ಕೆ ಭೇಟಿ ನೀಡುವುದನ್ನು ಮರೆತಿಲ್ಲ.
ಸುನೀಲ್ ಆನಂದ್ ರಾಜಕೀಯ ಪಯಣ
ಸುಮಾರು 30 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಸುನೀಲ್ ಆನಂದ್ ಅವರು ಮೊದಲು ಎಐಎಡಿಎಂಕೆ (AIADMK) ಪಕ್ಷದಲ್ಲಿದ್ದರು. ಆದರೆ ವಿಜಯ್ ಅವರ ಜನಪರ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಒಂದು ವರ್ಷದ ಹಿಂದೆ ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷ ಸೇರುವ ಮೊದಲು ಅವರು ಕುಟುಂಬ ಸಮೇತ ತಮ್ಮ ಗ್ರಾಮ ವಡಕೆಘಟ್ಟಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಈ ಗೆಲುವಿನ ಬಗ್ಗೆ ‘ಟಿವಿ9’ ಜೊತೆ ಮಾತನಾಡಿರುವ ಸುನೀಲ್ ಅವರ ಸೋದರ ಸಂಬಂಧಿ ಸುಬ್ರಮಣಿ ಶ್ರೀಕಂಠೇಗೌಡ ಅವರು, ‘ನಮ್ಮ ಕುಟುಂಬದವರು ಶಾಸಕರಾಗಿರುವುದು ಬಹಳ ಸಂತೋಷ ತಂದಿದೆ, ಅವರು ಮುಂದೊಂದು ದಿನ ಸಚಿವರಾಗಲಿ’ ಎಂದು ಹಾರೈಸಿದ್ದಾರೆ.
ಸುಬ್ರಮಣಿ ಶ್ರೀಕಂಠೇಗೌಡ ಮಾತಿನ ವಿಡಿಯೋ
ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ
ಸುನೀಲ್ ಆನಂದ್ ಅವರ ಕುಟುಂಬಕ್ಕೆ ಮೊದಲಿನಿಂದಲೂ ರಾಜಕೀಯ ನಂಟಿದೆ. ಹೆಚ್ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುನೀಲ್ ಅವರ ಸಂಬಂಧಿ ಎಚ್.ಬಿ. ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಇವರು ವಡಕೆಘಟ್ಟ ಗ್ರಾಮದಿಂದ ಶಾಸಕರಾದ ಎರಡನೇ ವ್ಯಕ್ತಿಯಾಗಿದ್ದಾರೆ. ಸುನೀಲ್ ಅವರ ಮತ್ತೊಬ್ಬ ಸೋದರ ಸಂಬಂಧಿ ಸುಬ್ರಮಣಿ ಶ್ರೀಕಂಠೇಗೌಡ ಅವರು ಪ್ರಸ್ತುತ ತುರುವೇಕೆರೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟ ರಿತೇಶ್ ದೇಶಮುಖ್ ಅಭಿನಯದ ‘ರಾಜಾ ಶಿವಾಜಿ’ ಚಿತ್ರ ಮೇ 1 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾಗಿ ಐದು ದಿನಗಳು ಕಳೆದಿವೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಶೀಘ್ರದಲ್ಲೇ 50 ಕೋಟಿ ಗಡಿ ದಾಟಲಿದೆ ಎಂದು ಊಹಿಸಲಾಗಿದೆ. 100 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ರಿತೇಶ್ ಅವರು ಶಿವಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸಿದ್ದಾರೆ. ರಿತೇಶ್ ಜೊತೆಗೆ, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಬೋಮನ್ ಇರಾನಿ, ವಿದ್ಯಾ ಬಾಲನ್, ಜೆನೆಲಿಯಾ ಮುಂತಾದ ಸೆಲೆಬ್ರಿಟಿಗಳು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರ. ಆದರೆ ಈ ದೊಡ್ಡ ಸೆಲೆಬ್ರಿಟಿಗಳು ಚಿತ್ರದಲ್ಲಿ ಕೆಲಸ ಮಾಡಲು ಒಂದು ರೂಪಾಯಿಯನ್ನೂ ತೆಗೆದುಕೊಂಡಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ ರಿತೇಶ್ ದೇಶಮುಖ್ ಇದನ್ನು ಹೇಳಿದ್ದಾರೆ. ಐದು ಸೆಲೆಬ್ರಿಟಿಗಳು ಈ ಚಿತ್ರದಲ್ಲಿ ಉಚಿತವಾಗಿ ಕೆಲಸ ಮಾಡಿದ್ದಾರೆ. ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ವಿದ್ಯಾ ಬಾಲನ್, ಬೋಮನ್ ಇರಾನಿ, ಜೆನೆಲಿಯಾ ದೇಶಮುಖ್ ಈ ಚಿತ್ರಕ್ಕಾಗಿ ಒಂದೇ ಒಂದು ರೂಪಾಯಿ ಪಡೆದಿಲ್ಲ. ಅವರು ಈ ಚಿತ್ರದಲ್ಲಿ ಉಚಿತವಾಗಿ ಕೆಲಸ ಮಾಡಿದ್ದಾರೆ. ಆದರೆ ರಿತೇಶ್ ಈ ಚಿತ್ರವನ್ನು ಸ್ವತಃ ನಿರ್ಮಿಸಿದ್ದಾರೆ, ಆದ್ದರಿಂದ ಅವರು ಒಂದೇ ಒಂದು ರೂಪಾಯಿಯನ್ನೂ ಪಡೆದಿಲ್ಲ.
ರಿತೇಶ್ ಸ್ವತಃ ಹೇಳಿದಂತೆ, ಅಭಿಷೇಕ್ ನಟಿಸಿದ್ದಾರೆ. ಅಭಿಷೇಕ್ ಇಡೀ ಚಿತ್ರದಲ್ಲಿ ಕಾಣಿಸುವುದಿಲ್ಲ. ಸಲ್ಮಾನ್ ಖಾನ್ 5 ನಿಮಿಷಗಳಿಗಿಂತ ಕಡಿಮೆ ಅವಧಿಯ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ಭಾಯಿಜಾನ್ ಒಂದು ರೂಪಾಯಿಯನ್ನೂ ಪಡೆಯಲಿಲ್ಲ.
ಜೆನೆಲಿಯಾ ಮತ್ತು ರಿತೇಶ್ ಒಂದೇ ಕುಟುಂಬದವರಾಗಿದ್ದು, ಈ ಚಿತ್ರದಲ್ಲಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಅವರು ಯಾವುದೇ ಹಣವನ್ನು ತೆಗೆದುಕೊಂಡಿಲ್ಲ. ವಿದ್ಯಾ ಬಾಲನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ ಮತ್ತು ಅವರ ಪಾತ್ರ ಮುಖ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅಫ್ಜಲ್ ಖಾನ್ ಅವರ ಭೇಟಿಯಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಏತನ್ಮಧ್ಯೆ, ಬೊಮನ್ ಇರಾನಿ ಚಿತ್ರದಲ್ಲಿ ಕೇವಲ ಎರಡು ಬಾರಿ ಕಾಣಿಸಿಕೊಳ್ಳುತ್ತಾರೆ.
‘ರಾಜ ಶಿವಾಜಿ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಈ ಚಿತ್ರ ನಾಲ್ಕು ದಿನಗಳಲ್ಲಿ 39 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ‘ರಾಜ ಶಿವಾಜಿ’ 11.35 ಕೋಟಿ ಗಳಿಸಿದೆ. ಶನಿವಾರ ಅಂದರೆ ಎರಡನೇ ದಿನ 10.55 ಕೋಟಿ ಗಳಿಸಿದೆ. ಮೂರನೇ ದಿನ 12 ಕೋಟಿ ಗಳಿಸಿದೆ. ಸ್ಯಾಕ್ನಿಲ್ಕ್ನ ಅರ್ಲಿ ಟ್ರೆಂಡ್ ವರದಿಯ ಪ್ರಕಾರ, ‘ರಾಜ ಶಿವಾಜಿ’ ನಾಲ್ಕನೇ ಸೋಮವಾರ 5 ಕೋಟಿ ಗಳಿಸಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಗಳಿಸುತ್ತದೆ ಎಂಬುದನ್ನು ನೋಡುವುದು ಮುಖ್ಯವಾಗುತ್ತದೆ.
ಇಸ್ತಾನ್ಬುಲ್, ಮೇ 06: ಟರ್ಕಿಯ ಕೆಫೆಯೊಂದರಲ್ಲಿ ಅಲ್ಮೆಡಾಗ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಟುಂಕೆ ಮೆರಿಕ್ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಮೆರಿಕ್ ಅವರು ಕೆಫೆಯಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಅವರ ತಲೆಯನ್ನೇ ಗುರಿಯಾಗಿಸಿಕೊಂಡು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯಿಂದ ಮೆರಿಕ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಘಟನೆಯು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಹತ್ಯೆಯ ಹಿಂದಿನ ಉದ್ದೇಶವೇನೆಂದು ತಿಳಿಯಲು ತನಿಖೆ ತೀವ್ರಗೊಂಡಿದೆ.
ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ (King) ಚಿತ್ರದ ಚಿತ್ರೀಕರಣದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸಮುದ್ರ ತೀರದಲ್ಲಿ ಶಾರುಖ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಅವರು ರೊಮ್ಯಾಂಟಿಕ್ ಹಾಡಿನ ದೃಶ್ಯವೊಂದರಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸೋರಿಕೆಯಾದ ವಿಡಿಯೋದಲ್ಲಿ, ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಸುಂದರವಾದ ಉಡುಪಿನಲ್ಲಿ ಮಿಂಚುತ್ತಿದ್ದರೆ, ಶಾರುಖ್ ಖಾನ್ ಕೂಡ ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿದ್ದಾರೆ. ಸೂರ್ಯಾಸ್ತದ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಓಡಿ ಬಂದು ಅಪ್ಪಿಕೊಳ್ಳುವ ಮತ್ತು ಶಾರುಖ್ ಖಾನ್ ಅವರು ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲಿ ಪೋಸ್ ನೀಡುವ ದೃಶ್ಯ ಈ ವಿಡಿಯೋದಲ್ಲಿ ಇದೆ.
‘ಕಿಂಗ್’ ಚಿತ್ರದ ದೃಶ್ಯಗಳು ಸಾಲು ಸಾಲಾಗಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಸಿದ್ದಾರ್ಥ್ ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ‘ಎಲ್ಲಾ ಅಭಿಮಾನಿಗಳಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಕಿಂಗ್ ಚಿತ್ರದ ಸೆಟ್ನಿಂದ ಸೋರಿಕೆಯಾದ ಯಾವುದೇ ವಿಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳಬೇಡಿ. ನಿಮಗೆ ಅತ್ಯುತ್ತಮ ಸಿನಿಮಾ ಅನುಭವ ನೀಡಲು ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ. ಚಿತ್ರತಂಡ ಅಧಿಕೃತವಾಗಿ ದೃಶ್ಯಗಳನ್ನು ಬಿಡುಗಡೆ ಮಾಡುವವರೆಗೆ ಕಾಯಿರಿ’ ಎಂದು ಮನವಿ ಮಾಡಿದ್ದಾರೆ.
ಈ ಚಿತ್ರದ ಮೂಲಕ ಶಾರುಖ್ ಪುತ್ರಿ ಸುಹಾನಾ ಖಾನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅರ್ಷದ್ ವಾರ್ಸಿ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಕಿಂಗ್’ ಸಿನಿಮಾ 2026ರ ಡಿಸೆಂಬರ್ 24ರಂದು ಕ್ರಿಸ್ಮಸ್ ಪ್ರಯುಕ್ತ ತೆರೆಕಾಣಲಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರದ್ದು ಸೂಪರ್ ಹಿಟ್ ಜೋಡಿ. ಈಗಾಗಲೇ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ಪ್ರೆಸ್’ ಮತ್ತು ‘ಪಠಾಣ್’ ಸಿನಿಮಾಗಳ ಮೂಲಕ ಯಶಸ್ಸು ಕಂಡ ಅವರು ಈಗ ‘ಕಿಂಗ್’ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ಬಹಿತೇಕ ತಂಡಗಳು 10 ಪಂದ್ಯಗಳನ್ನು ಆಡಿದೆ. ಈ ತಂಡಗಳಿಗೆ ಇನ್ನುಳಿದಿರುವುದು ಕೇವಲ 4 ಮ್ಯಾಚ್ಗಳು ಮಾತ್ರ. ಈ ತಂಡಗಳು ಕೊನೆಯ ನಾಲ್ಕು ಪಂದ್ಯಗಳ ಮೂಲಕ ಪ್ಲೇಆಫ್ಗೇರುವ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿವೆ. ಇದರ ನಡುವೆ ಸಿಎಸ್ಕೆ ವಿರುದ್ಧ ಸೋತು ಅಕ್ಷರ್ ಪಟೇಲ್ ನೀಡಿದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಕ್ಷರ್ ಪಟೇಲ್ ಹೇಳಿದ್ದೇನು?
ಸಿಎಸ್ಕೆ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಅಕ್ಷರ್ ಪಟೇಲ್, “ನಮಗೆ ಇನ್ನು 5 ಪಂದ್ಯಗಳು ಬಾಕಿ ಇವೆ, ನಾವು ಪ್ಲೇಆಫ್ ತಲುಪಲು ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲೇಬೇಕಿದೆ. ಅದರಂತೆ ಅಂತಿಮ 5 ಮ್ಯಾಚ್ಗಳ ಮೂಲಕ ಪ್ಲೇಆಫ್ಗೇರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ವಾಸ್ತವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈಗಾಗಲೇ 10 ಪಂದ್ಯಗಳನ್ನು ಆಡಿದ್ದು, ಲೀಗ್ ಹಂತದಲ್ಲಿ ಇನ್ನು ಕೇವಲ 4 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದರೆ ಈ ವಿಷಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ಗೆ ತಿಳಿದಿಲ್ಲ.
ಅಕ್ಷರ್ ಪಟೇಲ್ ಈಗಲೂ 5 ಪಂದ್ಯಗಳ ಲೆಕ್ಕಾಚಾರದಲ್ಲೇ ಉಳಿದಿದ್ದಾರೆ. ಡಿಸಿ ತಂಡದ ನಾಯಕನ ಈ ‘ಲೆಕ್ಕಾಚಾರದ ಎಡವಟ್ಟು’ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಒಟ್ಟು 14 ಪಂದ್ಯಗಳಲ್ಲಿ 10 ಪಂದ್ಯಗಳು ಮುಗಿದಿರುವುದರಿಂದ, ಅಕ್ಷರ್ ಪಟೇಲ್ ತಂಡದ ಸ್ಥಿತಿಯ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಒಟ್ಟಿನಲ್ಲಿ ಗೆದ್ದ ಹಾಗೂ ಸೋತ ಪಂದ್ಯಗಳ ಲೆಕ್ಕವೇ ಗೊತ್ತಿಲ್ಲದ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ಲೇಆಫ್ಗೆ ಹೇಗೆ ಮುನ್ನಡೆಸಲಿದ್ದಾರೆ ಎಂದು ಡಿಸಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
ಪ್ಲೇಆಫ್ ಹಾದಿ ಹೇಗಿದೆ?
ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು ಮತ್ತು 6 ಸೋಲುಗಳೊಂದಿಗೆ 8 ಅಂಕಗಳನ್ನು ಹೊಂದಿದೆ. ತಂಡಕ್ಕೆ ಇನ್ನೂ 4 ಪಂದ್ಯಗಳಿದ್ದು, ಈ ಮ್ಯಾಚ್ಗಳ ಮೂಲಕ ಪ್ಲೇಆಫ್ಗೇರಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಹಾದಿ ಈ ಕೆಳಗಿನಂತಿದೆ…
ಉಳಿದಿರುವ 4 ಪಂದ್ಯಗಳಲ್ಲಿ ಗೆಲುವು: ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಎಲ್ಲಾ 4 ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳನ್ನು ಪಡೆಯುತ್ತದೆ. ಇದು ಪ್ಲೇಆಫ್ ತಲುಪಲು ಭದ್ರವಾದ ತಳಹದಿಯಾಗಬಹುದು.
ನೆಟ್ ರನ್ ರೇಟ್ ಸಮಸ್ಯೆ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದ್ಯದ ನೆಟ್ ರನ್ ರೇಟ್ (-0.949) ಮೈನಸ್ನಲ್ಲಿ ಇ ದೆ. ಹೀಗಾಗಿ ಡಿಸಿ ಪಡೆಗೆ ಮುಂದಿನ ಪಂದ್ಯಗಳಲ್ಲಿ ಕೇವಲ ಗೆಲುವು ಮಾತ್ರವಲ್ಲದೆ, ಭಾರಿ ಅಂತರದ ಗೆಲುವುಗಳು ಅನಿವಾರ್ಯವಾಗಿವೆ.
ಇತರ ತಂಡಗಳ ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 4 ಪಂದ್ಯಗಳಲ್ಲಿ ಒಂದು ಮ್ಯಾಚ್ ಸೋತರೆ, 14 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಬಹುದು, ಹೀಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಬೇಕಿದ್ದರೆ ಇತರ ತಂಡಗಳ ಸೋಲು-ಗೆಲುವನ್ನು ಅವಲಂಭಿಸಬೇಕಾಗುತ್ತದೆ.
ಜಲಂಧರ್, ಮೇ 06: ಜಲಂಧರ್ನ ಬಿಎಸ್ಎಫ್ ಪ್ರಧಾನ ಕಚೇರಿ ಸಮೀಪದ ಬಿಎಸ್ಎಫ್ ಚೌಕ್ ಪ್ರದೇಶದಲ್ಲಿ ಸ್ಕೂಟರ್ ಒಂದರಲ್ಲಿ ಸಂಭವಿಸಿದ ಸ್ಫೋಟವು ಇಡೀ ನಗರವನ್ನು ಭೀತಿಗೀಡುಮಾಡಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಯಿತು.
ಇಂಡಿಯಾ ಟುಡೇಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಸ್ಫೋಟದ ತೀವ್ರತೆಗೆ ಗಾಬರಿಗೊಂಡ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಓಡುತ್ತಿರುವುದು ದಾಖಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಕೂಟರ್ ಹೊತ್ತಿ ಉರಿಯುವ ಕೆಲವೇ ಕ್ಷಣಗಳ ಮೊದಲು ಗುಡುಗಿನಂತಹ ಭೀಕರ ಶಬ್ದ ಕೇಳಿಸಿತು.
ಘಟನೆ ಸಂಭವಿಸಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್, ಈ ಸ್ಫೋಟದಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬಿಎಸ್ಎಫ್ ಪ್ರಧಾನ ಕಚೇರಿಯ ಅತಿ ಸಮೀಪದಲ್ಲೇ ಈ ಘಟನೆ ನಡೆದಿರುವುದರಿಂದ ಪೊಲೀಸರು ಇಡೀ ಪ್ರದೇಶವನ್ನು ಬಿಗಿ ಭದ್ರತೆಯೊಳಗೆ ತಂದಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಸ್ಫೋಟದ ಹಿಂದಿನ ಅಸಲಿ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರೆದಿದೆ.
ಬೆಂಗಳೂರು, ಮೇ.6: ವಿವಾಹವು ಮನುಷ್ಯನ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಅನಾದಿ ಕಾಲದಿಂದಲೂ ಗಂಡನ ವಯಸ್ಸು ಹೆಚ್ಚಿದ್ದು, ಹೆಣ್ಣಿನ ವಯಸ್ಸು ಕಡಿಮೆಯಿರುವುದು ಸಾಮಾನ್ಯವಾಗಿದೆ. ಆದರೆ, ಕಾಲ ಬದಲಾದಂತೆ, ಪುರುಷರು ತಮ್ಮಿಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆ ಉದ್ಭವಿಸಿದೆ. ಶಾಸ್ತ್ರೀಯವಾಗಿ ಪರಿಶೀಲಿಸಿದಾಗ, ಯಾವುದೇ ಧರ್ಮಗ್ರಂಥಗಳಲ್ಲಿ ಗಂಡಿಗಿಂತ ಹೆಣ್ಣು ವಯಸ್ಸಿನಲ್ಲಿ ಹೆಚ್ಚಿದ್ದರೆ ಮದುವೆಯಾಗಬಾರದು ಎಂದು ಹೇಳಿಲ್ಲ. ಬದಲಾಗಿ, ಕಾಲಾಂತರದಲ್ಲಿ ಸಮಾಜದ ಚಿಂತನೆಗಳು ಬದಲಾಗಿವೆ. ಪುರಾಣಗಳನ್ನು ಗಮನಿಸಿದರೆ, ವಸಿಷ್ಠ ಋಷಿ-ಅರುಂಧತಿ, ಚಂದ್ರ-ತಾರೆ, ಅರ್ಜುನ-ಉಲೂಪಿ ಮತ್ತು ಶ್ರೀಕೃಷ್ಣ-ಸತ್ಯಭಾಮಾ ಅವರ ವಿವಾಹಗಳಲ್ಲಿ ಹೆಣ್ಣಿನ ವಯಸ್ಸು ಹೆಚ್ಚಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಇಂದಿಗೂ ಸಚಿನ್ ತೆಂಡೂಲ್ಕರ್, ಅಭಿಷೇಕ್ ಬಚ್ಚನ್, ನಟಿ ಜಯಂತಿ ಮತ್ತು ಸೈಫ್ ಅಲಿ ಖಾನ್ ಅವರಂತಹ ಅನೇಕ ವ್ಯಕ್ತಿಗಳು ತಮ್ಮಿಗಿಂತ ವಯಸ್ಸಾದ ಸಂಗಾತಿಗಳನ್ನು ಮದುವೆಯಾಗಿದ್ದಾರೆ. ಹಿರಿಯ ವಯಸ್ಸಿನ ಹೆಣ್ಣು ತನ್ನ ಅನುಭವ, ಪ್ರಬುದ್ಧ ಆಲೋಚನೆಗಳಿಂದ ಕುಟುಂಬಕ್ಕೆ ಮತ್ತು ಗಂಡನಿಗೆ ಪೂರಕವಾಗಿ ನಿಲ್ಲುತ್ತಾಳೆ. ಇದು ಕುಟುಂಬದಲ್ಲಿ ಶ್ರೇಯಸ್ಸು, ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ವಿವಾಹವು ದೈವ ಸಂಕಲ್ಪವಾಗಿದ್ದು, ವಯಸ್ಸಿನ ಅಂತರವು ಕುಟುಂಬದ ಸುಖಮಯ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.