Category Archives: Blog

Your blog category

‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ – Kannada News | Bigg Boss Kannada winner Gilli reply to people who shouted Kavya’s name

ದಿನಸಿ ಮಾರ್ಟ್ ಮುಂದೆ ರೌಡಿಸಂ: ಡೆಲಿವರಿ ಬಾಯ್ಸ್​ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು!

Source link

T20 World Cup: ಬಂದ ಪುಟ್ಟ ಹೋದ ಪುಟ್ಟ; ಭಾರತದ ಬ್ಯಾಟಿಂಗ್ ಬಂಡವಾಳ ಬಯಲು – Kannada News | T20 World Cup 2026: India Batting Falters vs USA; Suryakumar Shines with 84

2026 ರ ಟಿ20 ವಿಶ್ವಕಪ್​​ನ (T20 World Cup 2026) ಮೊದಲ ದಿನವೇ ಪಂದ್ಯವನ್ನಾಡಿದ ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು (India vs USA) ಎದುರಿಸಿತು. ಈ ಪಂದ್ಯಕ್ಕೂ ಮುನ್ನ ಅನುಭವಿಗಳು ಹಾಗೂ ಪರಿಣಿತರ ಹೇಳಿಕೆಯ ಪ್ರಕಾರ, ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾ, ಯುಎಸ್​ಎ ಬೌಲಿಂಗ್ ವಿಭಾಗವನ್ನು ಪುಡಿಪುಡಿ ಮಾಡಲಿದೆ ಎನ್ನಲಾಗುತ್ತಿತ್ತು. ಆದರೆ ಪಂದ್ಯ ಆರಂಭವಾದ ಮೊದಲ 6 ಓವರ್​ಗಳಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ನ್ಯೂನತೆ ಜಗಜ್ಜಾಹೀರಾಯಿತು.

ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಆವೃತ್ತಿಯನ್ನು ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲಿ ಅಂದರೆ 2024 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾದ ಅಹಂ ಮುರಿಯಿತು. ಅನಾನುಭವಿ ಯುಎಸ್​ಎ ತಂಡದ ಎದುರು ಭಾರತದ ಬ್ಯಾಟರ್​ಗಳ ಗರ್ವಭಂಗವಾಯಿತು. ಅಮೆರಿಕ ತಂಡದ ಕಾರ್ಯತಂತ್ರದ ಮುಂದೆ ಮಂಡಿಯೂರಿದ ಟೀಂ ಇಂಡಿಯಾ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ಫಲವಾಗಿ ತಂಡದ ಪ್ರಮುಖ 4 ವಿಕೆಟ್​ಗಳು ಪವರ್ ಪ್ಲೇ ಒಳಗೆ ಪತನಗೊಂಡವು.

ಅಭಿಷೇಕ್ ಗೋಲ್ಡನ್ ಡಕ್

ಭಾರತದ ಪರ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕಿಶನ್ ತಂಡದ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮುಂದಿನ ಓವರ್​ನಲ್ಲಿ ಸ್ಟ್ರೈಕ್​ಗೆ ಬಂದ ಅಭಿಷೇಕ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದ ಅಭಿಷೇಕ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಪವರ್ ಪ್ಲೇನಲ್ಲೇ 4 ವಿಕೆಟ್

ಆ ನಂತರ ಕಿಶನ್ ಹಾಗೂ ತಿಲಕ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದರು. ಇದೇ ಹಂತದಲ್ಲಿ ಕಿಶನ್​ಗೆ ಜೀವದಾನವೂ ಸಿಕ್ಕಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳದ ಕಿಶನ್ 6ನೇ ಓವರ್​ನ 2ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಅದೇ ಓವರ್​ನಲ್ಲಿ ತಿಲಕ್ ವರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು. ಆ ನಂತರ ಬಂದ ಶಿವಂ ದುಬೆ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದರು. ಹೀಗಾಗಿ ಟೀಂ ಇಂಡಿಯಾದ ಪ್ರಮುಖ 3 ವಿಕೆಟ್​ಗಳು ಒಂದೇ ಓವರ್​ನಲ್ಲಿ ಅಂದರೆ 6ನೇ ಓವರ್​ನಲ್ಲೇ ಪತನಗೊಂಡವು. ಆರಂಭಿಕ ವಿಕೆಟ್ ಪತನದ ಒತ್ತಡಕ್ಕೊಳಗಾದ ರಿಂಕು ಸಿಂಗ್ ಕೂಡ ರನ್ ಗಳಿಸಲು ತಿಣುಕಾಡಿ 6 ರನ್​ಗಳಿಗೆ ಸುಸ್ತಾದರು. ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡುವುದನ್ನು ಬಿಟ್ಟು ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾಗಿ 5 ರನ್​ಗಳಿಗೆ ಸುಸ್ತಾದರು. ಅಕ್ಷರ್ ಇನ್ನಿಂಗ್ಸ್ ಕೂಡ 14 ರನ್​ಗಳಿಗೆ ಅಂತ್ಯವಾಯಿತು.

ಸೂರ್ಯ ಏಕಾಂಗಿ ಹೋರಾಟ

ಒಂದೆಡೆ ತಂಡದ ವಿಕೆಟ್​ಗಳು ತರಗೆಲೆಗಳಂತೆ ಉದುರುತ್ತಿದ್ದರೆ, ಇನ್ನೊಂದು ತುದಿಯಲ್ಲಿ ನಾಯಕನ ಜವಾಬ್ದಾರಿ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಸೂರ್ಯ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಸೂರ್ಯ ಅವರ ಈ ಅರ್ಧಶತಕದಿಂದಾಗಿ ಭಾರತ 161 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:11 pm, Sat, 7 February 26

Source link

ಭಾರತೀಯರ ಇಂಧನ ಭದ್ರತೆಗೆ ಮೊದಲ ಆದ್ಯತೆ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ – Kannada News | Energy security is supreme priority MEA says amid Donald Trumps Russian oil import curb claims

ನವದೆಹಲಿ, ಫೆಬ್ರವರಿ 7: ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತದ ಜನರಿಗೆ ಇಂಧನ ಭದ್ರತೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿ ಉಳಿದಿದೆ. ಭಾರತದ ಇಂಧನ ಮೂಲದ ವಿಷಯದಲ್ಲಿ 1.4 ಬಿಲಿಯನ್ ಭಾರತೀಯರ ಇಂಧನ ಭದ್ರತೆ ಸರ್ಕಾರದ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಹೇಳಿದೆ” ಎಂದು ಪುನರುಚ್ಛರಿಸಿದ್ದಾರೆ.

ಭಾರತ ರಷ್ಯಾದಿಂದ ತೈಲ ಆಮದನ್ನು ಸ್ಥಗಿತಗೊಳಿಸಲಿದೆ ಎಂಬ ಅಮೆರಿಕದ ಹೇಳಿಕೆಯ ಮಧ್ಯೆ ಈ ಹೇಳಿಕೆಯು ಭಾರತದ ದೀರ್ಘಕಾಲದ ನಿಲುವನ್ನು ಪ್ರತಿಬಿಂಬಿಸುತ್ತದೆ. ರಷ್ಯಾದ ಇಂಧನ ರಫ್ತಿನಿಂದ ಬರುವ ಆದಾಯವನ್ನು ಉಕ್ರೇನ್‌ನಲ್ಲಿನ ಯುದ್ಧಕ್ಕೆ ಹಣಕಾಸು ಒದಗಿಸಲು ಬಳಸಲಾಗುತ್ತಿದೆ ಎಂದು ಅಮೆರಿಕ ವಾದಿಸಿದೆ. ಆದರೆ, ರಷ್ಯಾ ಈ ಆರೋಪವನ್ನು ನಿರಾಕರಿಸಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಬಸ್ ಮೇಲೆ ರಷ್ಯಾ ಡ್ರೋನ್ ದಾಳಿ, 15 ಮಂದಿ ಸಾವು, 7 ಜನರಿಗೆ ಗಾಯ

ರಷ್ಯಾದ ತೈಲದ ನೇರ ಅಥವಾ ಪರೋಕ್ಷ ಆಮದುಗಳನ್ನು ನಿಲ್ಲಿಸಲು ಭಾರತ ಬದ್ಧವಾಗಿದೆ. ಭಾರತ ಅಮೆರಿಕ ಹಾಗೂ ವೆನೆಜುವೆಲಾದಿಂದ ಇಂಧನ ಖರೀದಿಯನ್ನು ಹೆಚ್ಚಿಸುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ. ರಷ್ಯಾದ ಇಂಧನ ಖರೀದಿ ಮಾಡುತ್ತಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ವಿಧಿಸಲಾದ ಹೆಚ್ಚುವರಿ ಸುಂಕಗಳನ್ನು ಅಮೆರಿಕ ಹಿಂತೆಗೆದುಕೊಂಡಿತ್ತು.

ರಷ್ಯಾದ ಪ್ರತಿಕ್ರಿಯೆ ಏನು?:

ರಷ್ಯಾದ ತೈಲ ಖರೀದಿಯನ್ನು ಸ್ಥಗಿತಗೊಳಿಸುವ ಬಗ್ಗೆ ಭಾರತ ಯಾವುದೇ ಹೇಳಿಕೆ ನೀಡಿರಲಿಲ್ಲ. ಈ ವೇಳೆ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಷ್ಯಾ ಭಾರತವು ಯಾವುದೇ ಮೂಲದಿಂದ ಇಂಧನವನ್ನು ಖರೀದಿಸಲು ಮುಕ್ತವಾಗಿದೆ ಎಂದು ಹೇಳಿತ್ತು. ಭಾರತವು ಯಾವಾಗಲೂ ಬಹು ಪೂರೈಕೆದಾರರಿಂದ ಇಂಧನವನ್ನು ಪಡೆಯುತ್ತಿದೆ. ರಷ್ಯಾ ಭಾರತಕ್ಕೆ ಮೊದಲಿನಿಂದಲೂ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಏಕೈಕ ಪೂರೈಕೆದಾರನಲ್ಲ ರಷ್ಯಾ ಹೇಳಿಕೆ ನೀಡಿತ್ತು.

ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ರಷ್ಯಾದ ಇಂಧನವನ್ನು ಖರೀದಿಸಿದ್ದಕ್ಕಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದ ಮೇಲೆ ವಿಧಿಸಲಾದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ತೆಗೆದುಹಾಕುವ ಆದೇಶಕ್ಕೆ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಇಂದಿನಿಂದ ಈ ಕ್ರಮ ಜಾರಿಗೆ ಬರಲಿದೆ. ಈ ಆದೇಶದಲ್ಲಿ ಕೂಡ ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುತ್ತದೆ ಮತ್ತು ಅಮೆರಿಕದಿಂದ ಇಂಧನ ಖರೀದಿಯನ್ನು ಹೆಚ್ಚಿಸುತ್ತದೆ ಎಂಬ ತನ್ನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೋಟದ ಮನೆ ಟಾರ್ಗೆಟ್: ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸಿದ ಕಾನ್ಸ್‌ಟೇಬಲ್‌; ಆರು ಜನರ ಬಂಧನ – Kannada News | Haveri: Six people, including a constable arrested for theft

ಹಾವೇರಿ, ಫೆಬ್ರವರಿ 07: ಮದುವೆಯಾಗಿದ್ದ ಊರಿನಲ್ಲಿ ಕಳ್ಳತನ (Theft) ಮಾಡಿಸಿದ್ದ ಕಾನ್ಸ್‌ಟೇಬಲ್​ ಸೇರಿದಂತೆ ಆರು ಜನ ಕಳ್ಳರನ್ನು ಜಿಲ್ಲೆಯ ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರೇಕೇರೂರು ತಾಲೂಕಿನ ಹಳೆ ನಿಡು ನೇಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ರಾಘವೇಂದ್ರ, ವಿಜಯ, ಮಲ್ಲೇಶ, ಕಾಂತೇಶ್, ನಾಗೇಶ್ ಮತ್ತು ಹಿರೇಕೆರೂರು ಪೊಲೀಸ್ ಠಾಣೆಯ ಕಾರು ಚಾಲಕ ಪ್ರದೀಪ್ ನಾಯಕ್ ಬಂಧಿತರು.

ನಡೆದಿದ್ದೇನು? 

ಜನವರಿ 19ರಂದು ರಾತ್ರಿ ಹಿರೇಕೆರೂರು ತಾಲೂಕಿನ ಹಳೇ ನಿಡುನೇಗಿಲು ಗ್ರಾಮದ ಮಲ್ಲನಗೌಡ ಈಶ್ವರಗೌಡ ಪಾಟೀಲ್ ಅವರ ತೋಟದ ಮನೆಯಲ್ಲಿ ಕಳ್ಳತನ ನಡೆದಿತ್ತು. ಮಲ್ಲನಗೌಡ ಇತ್ತೀಚೆಗೆ ಹೊಸ ಮನೆ ನಿರ್ಮಾಣಕ್ಕೆಂದು ದುಡ್ಡು ತಂದಿಟ್ಟಿದ್ದರು. ಕಾನ್ಸ್‌ಟೇಬಲ್‌ ಪ್ರದೀಪ್ ನಾಯಕ್​​ ಹಾಕಿ ಕೊಟ್ಟಿದ್ದ ಸ್ಕೆಚ್​​ನಂತೆ  ರಾತ್ರಿ ಸುಮಾರು 11.30ರ ವೇಳೆಗೆ ತೋಟದ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು, ಸುಮಾರು 90 ಗ್ರಾಂ ಚಿನ್ನಾಭರಣ, ಅರ್ಧ ಕೆ.ಜಿ ಬೆಳ್ಳಿ ಮತ್ತು ಸುಮಾರು 5 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ

ಹಳೇ ನಿಡುನೇಗಿಲು ಗ್ರಾಮದ ಅಳಿಯ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್, ನೈಟ್‌ ಬೀಟ್‌ಗೆ ತೆರಳುವ ನೆಪದಲ್ಲಿ ಸ್ಥಳದ ಮಾಹಿತಿ ಸಂಗ್ರಹಿಸಿ, ಕಳ್ಳರನ್ನು ಕರೆಸಿ ಕೃತ್ಯ ನಡೆಸಿಸಿರುವುದು ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿರುವ ಹಿರೇಕೆರೂರು ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ತಿರುಪತಿಗೆ ತೆರಳಿದ್ದ ವೇಳೆ ಕೈಚಳಕ ತೋರಿಸಿದ ಕಳ್ಳರು

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮನೆ ಬೀಗ ಒಡೆದು 30 ಗ್ರಾಂ ಚಿನ್ನ , 450 ಗ್ರಾಂ ಬೆಳ್ಳಿ ಸೇರಿದಂತೆ 46 ಸಾವಿರ ರೂ ಹಣವನ್ನು ಕಳ್ಳರು ಕಳತನ ಮಾಡಿರುವಂತಹ ಘಟನೆ ನಡೆದಿದೆ. ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು?

ಡಿಆರ್​ಎಂ ಬಡಾವಣೆಯಲ್ಲಿ ಹರೀಶ್​ ಮನೆಯಲ್ಲಿ ಕಳ್ಳತನ ನಡೆದಿದೆ. ಕುಟುಂಬದವರೆಲ್ಲಾ ತಿರುಪತಿಗೆ ಹೋಗಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೊತೆಗಿದ್ದವರೇ ಮೋಸ ಮಾಡಿದರು, ಆ ನಟನ ಮಾತು ಕೇಳಲಿಲ್ಲ: ಅರ್ಜುನ್ ಸರ್ಜಾ – Kannada News | Arjun Sarja emotional about financial loss and Sobhan Babu advice

ಈಗ ಎಲ್ಲರೂ ಆಕ್ಷನ್ ಕಿಂಗ್​​ಗಳೇ ಆದರೆ ಕೆಲ ದಶಕದ ಮುಂಚೆ ನಿಜವಾದ ‘ಆಕ್ಷನ್ ಕಿಂಗ್’ ಎಂದರೆ ಅರ್ಜುನ್ ಸರ್ಜಾ (Arjun Sarja) ಮಾತ್ರವೇ. ಚಿತ್ರರಂಗಕ್ಕೆ ಆಕ್ಷನ್​​ನಲ್ಲಿ ಭಿನ್ನತೆ ತಂದವರೇ ಅರ್ಜುನ್ ಸರ್ಜಾ. ತಮ್ಮ ಅದ್ಭುತ ಮೈಕಟ್ಟು, ಕರಾಟೆ ಪಟ್ಟುಗಳು ಜೊತೆಗೆ ಅದ್ಭುತ ನಟನೆಯ ಮೂಲಕ ಅರ್ಜುನ್ ಸರ್ಜಾ ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದಿದ್ದರು. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ತಮ್ಮ 46 ವರ್ಷಗಳ ವೃತ್ತಿ ಪಯಣದಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅರ್ಜುನ್ ಸರ್ಜಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ, ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಮ್ಮ 46 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕರು ತಮಗೆ ಹಲವು ರೀತಿಯಾಗಿ ವಂಚಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಸುತ್ತಮುತ್ತಲಿದ್ದವರೇ ನನ್ನನ್ನು ಮೋಸಗೊಳಿಸಿದರು. ಆ ಸಮಯದಲ್ಲಿ ನನಗೆ ಯಾವುದರ ಬಗ್ಗೆಯೂ ಅರಿವಿಲ್ಲದ ವಯಸ್ಸಾಗಿತ್ತು. ಬಹಳಷ್ಟು ಜನರು ನನ್ನನ್ನು ತಪ್ಪು ದಾರಿಗೆ ಎಳೆದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್: ವಿಡಿಯೋ

‘ಒಂದು ಸಮಯದಲ್ಲಿ ಬಹಳ ಸಂಪಾದನೆ ಮಾಡುತ್ತಿದ್ದೆ, ಸಂಪಾದನೆಯ ಸಮಯದಲ್ಲಿ ಸರಿಯಾದ ಕಡೆ ಹೂಡಿಕೆ ಮಾಡುವ ಬಗ್ಗೆ ಹಿರಿಯ ನಟ ಶೋಭನ್ ಬಾಬು ಅವರು ಹಲವಾರು ಬಾರಿ ಕಿವಿಮಾತು ಹೇಳಿದ್ದರು’ ಎಂಬುದನ್ನು ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ. ‘ಹಣವನ್ನು ವ್ಯರ್ಥ ಮಾಡಬೇಡ, ಜಾಗರೂಕತೆಯಿಂದ ಹೂಡಿಕೆ ಮಾಡು ಎಂದು ಶೋಭನ್ ಬಾಬು ಅವರು ಆಗಾಗ್ಗೆ ಎಚ್ಚರಿಸುತ್ತಿದ್ದರು. ಆದರೆ ಅಂದು ಅವರ ಮಾತುಗಳು ನನಗೆ ಅರ್ಥವಾಗಿರಲಿಲ್ಲ. ಅವರ ಮಾತನ್ನು ಕೇಳಿದ್ದಿದ್ದರೆ ಇಂದು ನನ್ನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು ಮತ್ತು ನನ್ನ ಮಕ್ಕಳಿಗಾಗಿ ದೊಡ್ಡ ಆಸ್ತಿಯನ್ನು ಉಳಿಸಬಹುದಿತ್ತು’ ಎಂದು ಅವರು ಪಶ್ಚಾತ್ತಾಪ ಪಟ್ಟಿದ್ದಾರೆ.

ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಇವರು, ಪ್ರಸ್ತುತ ‘ಸೀತಾ ಪಯಣ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಪುತ್ರಿ ಐಶ್ವರ್ಯ ಸರ್ಜಾ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಿರ್ಮಾಣವನ್ನು ಸಹ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು? – Kannada News | Diabetes, High BP & Hearing Loss: The Link

ಮಧುಮೇಹ (Diabetes) ಅಥವಾ ಅಧಿಕ ರಕ್ತದೊತ್ತಡ (High BP) ಇದ್ದರೆ, ಹೃದಯ, ಮೂತ್ರಪಿಂಡ ಮತ್ತು ಕಣ್ಣಿಗೆ ಸಂಬಂಧ ಪಟ್ಟ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದು ಹಿಯರಿಂಗ್ ಲಾಸ್ ಗೆ ಕಾರಣವಾಗುತ್ತದೆಯೇ ಅಥವಾ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವರಿಗಿರುವ ಗೊಂದಲ. ಅದರಲ್ಲಿಯೂ ಈ ರೀತಿಯ ಸಮಸ್ಯೆ ವಯಸ್ಸಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ನಿಜವೇ ಎಂಬ ಅನುಮಾನ ಮೂಡುತ್ತದೆ. ಅದಕ್ಕಾಗಿಯೇ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ರವಿ ಮೆಹರ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಈ ಕಾಯಿಲೆಗಳು ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆಯೇ?

ಈ ಎರಡು ಕಾಯಿಲೆಗಳು ಅಂದರೆ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಕೆಲವು ಸಂದರ್ಭಗಳಲ್ಲಿ ಶ್ರವಣ ಸಾಮರ್ಥ್ಯಕ್ಕೆ ಹಾನಿ ಮಾಡುತ್ತದೆ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಶಬ್ದಗಳನ್ನು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದೀರ್ಘಕಾಲದ ವರೆಗೆ ಸಕ್ಕರೆ ಮಟ್ಟ ಹೆಚ್ಚಿರುವ ಮಧುಮೇಹ ರೋಗಿಗಳ ದೇಹದಲ್ಲಿ ನರಗಳಿಗೆ ಹಾನಿಯಾಗುತ್ತದೆ. ಜೊತೆಗೆ ಕಿವಿಯೊಳಗಿನ ಶ್ರವಣೇಂದ್ರಿಯ ನರಗಳ ಮೇಲೂ ಪರಿಣಾಮ ಬೀರಬಹುದು. ಹೆಚ್ಚಿನ ಸಕ್ಕರೆ ಮಟ್ಟವು ಕೂಡ ಕಿವಿಯಲ್ಲಿರುವ ನರಗಳಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಆದರೆ ಈ ಸಮಸ್ಯೆ ಪ್ರತಿಯೊಬ್ಬ ಮಧುಮೇಹ ರೋಗಿಯಲ್ಲೂ ಕಂಡುಬರುವುದಿಲ್ಲ. ಇದು ಮುಖ್ಯವಾಗಿ ವಯಸ್ಸಾದವರಲ್ಲಿ ಮತ್ತು ದೀರ್ಘಕಾಲದವರೆಗೆ ಹೆಚ್ಚಿನ ಸಕ್ಕರೆ ಮಟ್ಟ ಹೊಂದಿರುವವರಲ್ಲಿ ಕಂಡುಬರುತ್ತದೆ.

ಅಧಿಕ ರಕ್ತದೊತ್ತಡವು ಕಿವಿಗಳಿಗೆ ಹಾನಿಯನ್ನುಂಟುಮಾಡುತ್ತದೆಯೇ?

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದಲ್ಲಿ ಅಪಾಯ ಕಡಿಮೆ ಇರುತ್ತದೆ, ಆದರೆ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅಥವಾ ಇದ್ದಕ್ಕಿದ್ದಂತೆ ಏರಿದರೆ, ಅದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಇದನ್ನು ಹಠಾತ್ ಶ್ರವಣ ನಷ್ಟ ಎಂದು ಕರೆಯಲಾಗುತ್ತದೆ, ಆದರೂ ಅಂತಹ ಪ್ರಕರಣಗಳು ಕಂಡುಬರುವುದು ಬಹಳ ಅಪರೂಪ. ಆದರೆ ಒಬ್ಬ ವ್ಯಕ್ತಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎರಡು ಕೂಡ ಇದ್ದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ಸಂಭಾಷಣೆಯ ಸಮಯದಲ್ಲಿ ತೊಂದರೆ
  • ಫೋನ್‌ನಲ್ಲಿ ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ
  • ಟಿನ್ನಿಟಸ್ (ಕಿವಿಗಳಲ್ಲಿ ರಿಂಗಣಿಸುವುದು)
  • ಸ್ಪಷ್ಟವಾಗಿ ಕೇಳಲು ಫೋನ್ ವಾಲ್ಯೂಮ್ ಹೆಚ್ಚಿಸುವ ಅಗತ್ಯವಿದ್ದರೆ

ಈ ಎಲ್ಲಾ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ, ಇಎನ್‌ಟಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ನಿಮ್ಮ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ ಎಂದು ಕಂಡುಹಿಡಿಯಲು ವೈದ್ಯರು ನಿಮ್ಮ ಕಿವಿಗಳನ್ನು ಪರೀಕ್ಷಿಸಬಹುದು. ಈ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಗಮನ ನೀಡಿದರೆ, ಹಾನಿಯನ್ನು ತಡೆಯಬಹುದು. ಆರಂಭಿಕ ಹಂತಗಳಲ್ಲಿ, ಔಷಧಿ ಮತ್ತು ಚಿಕಿತ್ಸೆಯಿಂದ ಸುಧಾರಣೆ ಕಂಡುಬರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ – Kannada News | Child Protection Lapses: Karwar Children’s Home Fails Girl, Exposing Systemic Failures

ಕಾರವಾರ, ಫೆ.7: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೊಂದು ನಡೆದಿದೆ. ಘೋರ ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ನೊಂದಿದ್ದ ಬಾಲಕಿಗೆ ರಕ್ಷಣೆ ಸಿಗಬೇಕಾದ ಜಾಗದಲ್ಲಿಯೇ ಇಂತಹ ನಿರ್ಧಾರ ಮಾಡಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಾಲಕಿ ಮೂಲತಃ ಹಳಿಯಾಳ ತಾಲೂಕಿನವಳು. ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ಈಕೆಯನ್ನು ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು.

ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ ಒತ್ತಡದ ಕಾರಣ ಕಳೆದ ಎರಡು ವಾರಗಳಿಂದ ಶಾಲೆಗೆ ಹೋಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಯಾರೂ ಇಲ್ಲದ ಸಮಯ ನೋಡಿ ಮೇಲಿನ ಕೋಣೆಗೆ ತೆರಳಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಗಮನಿಸಿದ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿ ಮಾನಸಿಕವಾಗಿ ಕುಗ್ಗಿದ್ದಾಳೆ ಎಂದು ತಿಳಿದಿದ್ದರೂ ಮತ್ತು ಆಕೆಯನ್ನು ಈ ಹಿಂದೆಯೇ ನಿಮಾನ್ಸ್ (NIMHANS) ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ, ಆಕೆಗೆ ನಿರಂತರವಾಗಿ ನೀಡಬೇಕಾದ ‘ಕೌನ್ಸೆಲಿಂಗ್’ ಹಾಗೂ ಆಕೆ ನೀಡಬೇಕಿದ್ದ ರಕ್ಷಣೆಯಲ್ಲಿ ಲೋಪವಾಗಿರುವುದು ಕಂಡುಬರುತ್ತಿದೆ. ಬಾಲಮಂದಿರದಲ್ಲಿ 20 ಬಾಲಕಿಯರಿಗೆ 10 ಮಂದಿ ಸಿಬ್ಬಂದಿ ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ಇದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಬಾಲಕಿ ಒಬ್ಬಂಟಿಯಾಗಿ ಬಿಟ್ಟಿರುವುದೇ ತಪ್ಪು. ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾಗಿ ಬರುವ ಮಕ್ಕಳಿಗೆ ಕೇವಲ ಆಶ್ರಯ ನೀಡಿದರೆ ಸಾಲದು, ಅವರಿಗೆ ಮಾನಸಿಕ ಧೈರ್ಯ ತುಂಬುವ ತಜ್ಞರ ಅವಶ್ಯಕತೆ ಇಂತಹ ಕೇಂದ್ರಗಳಲ್ಲಿ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: 6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ

ಇದೀಗ ಬಾಲಕಿಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಈ ಘಟನೆಯ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಲಮಂದಿರದ ಭದ್ರತೆ ಮತ್ತು ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳ ಪ್ರಕಾರ, ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯವಾಗಿ, 10 ಮಂದಿ ಸಿಬ್ಬಂದಿ ಇರುವಾಗ ಈ ಲೋಪ ಹೇಗೆ ಸಂಭವಿಸಿತು ಎಂಬ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ. ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು CWC ವಿಚಾರಣೆ ನಡೆಸುತ್ತಿದೆ. ಬಾಲಕಿ ಈ ಹಿಂದೆಯೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದರೂ ಆಕೆಯ ಮೇಲೆ ವಿಶೇಷ ನಿಗಾ ವಹಿಸದಿದ್ದಕ್ಕೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಮೊದಲ ದಿನವೇ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ – Kannada News | T20 World Cup 2026: Romario Shepherd’s Historic Hat Trick Powers West Indies Win

2026 ರ ಟಿ20 ವಿಶ್ವಕಪ್​ ಮೊದಲ ದಿನವೇ ಕೆಲವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನೆದರ್ಲ್ಯಾಂಡ್ಸ್ ಸೋಲಿನ ಭಯ ಹುಟ್ಟಿಸಿತು. ಆದರೆ ಕೊನೆಯಲ್ಲಿ ಪಾಕಿಸ್ತಾನಕ್ಕೆ ಗೆಲುವು ಸಿಕ್ಕಿತು. ಆ ನಂತರ ನಡೆದ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಅಮೋಘ ಪ್ರದರ್ಶನ ನೀಡಿತು. ಇದೇ ಪಂದ್ಯದಲ್ಲಿ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್​ ಹ್ಯಾಟ್ರಿಕ್ ವಿಕೆಟ್ ಪಡೆಯುವುದರ ಜೊತೆಗೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದರು. ಇದರ ಫಲವಾಗಿ ವಿಂಡೀಸ್ ತಂಡ 35 ರನ್​ಗಳ ಸುಲಭ ಜಯ ದಾಖಲಿಸಿತು.

ಇನ್ನು ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಶೆಫರ್ಡ್​, 2026 ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್‌ನ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದರು. ಇದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶೆಫರ್ಡ್ ಅವರ ಎರಡನೇ ಹ್ಯಾಟ್ರಿಕ್ ಆಗಿದ್ದು, ಇದಕ್ಕೂ ಮೊದಲು, ರೊಮಾರಿಯೊ ಶೆಫರ್ಡ್ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಶೆಫರ್ಡ್​ ಹ್ಯಾಟ್ರಿಕ್ ಜೊತೆಗೆ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ ಸ್ಕಾಟ್ಲೆಂಡ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 17 ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ಮ್ಯಾಥ್ಯೂ ಕ್ರಾಸ್, ಮೈಕೆಲ್ ಲೀಸ್ಕ್ ಮತ್ತು ಆಲಿವರ್ ಡೇವಿಡ್ಸನ್ ಅವರನ್ನು ಔಟ್ ಮಾಡುವ ಮೂಲಕ ರೊಮಾರಿಯೊ ಶೆಫರ್ಡ್ 2026 ರ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ತಂಡದ ಪರ ಶಿಮ್ರಾನ್ ಹೆಟ್ಮೆಯರ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 64 ರನ್ ಗಳಿಸಿದರೆ, ಪೊವೆಲ್ ಮತ್ತು ರುದರ್ಫೋರ್ಡ್ ಕೂಡ ಕ್ರಮವಾಗಿ 24 ಮತ್ತು 26 ರನ್ ಗಳಿಸಿದರು. 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ಒಂದು ಹಂತದಲ್ಲಿ 3 ವಿಕೆಟ್‌ಗಳಿಗೆ 115 ರನ್‌ಗಳಿಸಿತ್ತು. ಅದಾದ ನಂತರ, ಸ್ಕಾಟ್ಲೆಂಡ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳಲು ಪ್ರಾರಂಭಿಸಿತು. ಹೀಗಾಗಿ ತಂಡ 19ನೇ ಓವರ್​ನಲ್ಲಿ 147 ರನ್​ಗಳಿಗೆ ಆಲೌಟ್ ಆಯಿತು.

Source link

ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ; ವಿಡಿಯೋ ವೈರಲ್ – Kannada News | PM Modi Welcomed with Indian Traditional dance in Malaysia Watch Aamzing Video

ಕೌಲಾಲಂಪುರ, ಫೆಬ್ರವರಿ 7: ಪ್ರಧಾನಿ ಮೋದಿ ಇಂದು ತಮ್ಮ 2 ದಿನಗಳ ಭೇಟಿಗಾಗಿ ಮಲೇಷ್ಯಾಕ್ಕೆ ಆಗಮಿಸಿದರು. ಈ ವೇಳೆ 800ಕ್ಕೂ ಹೆಚ್ಚು ನೃತ್ಯಗಾರರಿಂದ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರಧಾನಿ ಮೋದಿಯವರಿಗೆ (PM Modi in Malaysia) ವಿನೂತನವಾಗಿ ಸ್ವಾಗತ ಕೋರಲಾಯಿತು. ವಿದೇಶಿ ನೆಲದಲ್ಲಿ ನೂರಾರು ಜನರು ಪ್ರದರ್ಶಿಸಿದ ಭರತನಾಟ್ಯ ಕಂಡು ಪ್ರಧಾನಿ ಮೋದಿ ಅಚ್ಚರಿಗೊಂಡರು. ಈ ವೇಳೆ ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಘೋಷಣೆಗಳು ಮಾರ್ದನಿಸಿದವು.

ಪ್ರಧಾನಿ ಮೋದಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಸಮುದಾಯ ಕಾರ್ಯಕ್ರಮದ ಭಾಗವಾದ ಈ ಪ್ರದರ್ಶನವನ್ನು ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣೀಕರಿಸಿದೆ. ಭಾರತೀಯ ಸಮುದಾಯ ಮಲೇಷ್ಯಾದ ಸಾಂಸ್ಕೃತಿಕ ಸಮಿತಿಯ ಬ್ಯಾನರ್ ಅಡಿಯಲ್ಲಿ ಸುಮಾರು 800 ನರ್ತಕರು ಒಂದೇ ಬಾರಿಗೆ ನಿರಂತರ 5 ನಿಮಿಷಗಳ ಕಾಲ ನೃತ್ಯ ಪ್ರದರ್ಶಿಸಿದರು. ಇದು ವಿವಿಧ ರೀತಿಯ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

BCCI Contracts: ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ 21 ಆಟಗಾರ್ತಿಯರು; ಕನ್ನಡತಿಗೆ ಶಾಕ್ – Kannada News | *BCCI Women’s Central Contracts 2026: Grades, Salaries and New Players Revealed

ಬಿಸಿಸಿಐ ಶೀಘ್ರದಲ್ಲೇ ಭಾರತದ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲು ತಯಾರಿ ನಡೆಸಿದೆ. ಅದರಂತೆ ಈ ಬಾರಿ ಎಷ್ಟು ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡಬೇಕು ಎಂಬುದನ್ನು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಪುರುಷರ ಕೇಂದ್ರ ಒಪ್ಪಂದದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾ್ ಕೊಹ್ಲಿ ಎ+ ಗ್ರೇಡ್​ನಿಂದ ಬಿ ಗ್ರೇಡ್​ಗೆ ಕುಸಿದಿದ್ದಾರೆ ಎಂದು ವರದಿಯಾಗಿದೆ. ಇತ್ತ ಮಹಿಳಾ ತಂಡದ ಕೇಂದ್ರ ಒಪ್ಪಂದದ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, ಕಳೆದ ಬಾರಿಯ ಕೇಂದ್ರ ಒಪ್ಪಂದದಲ್ಲಿ ಕೇವಲ 16 ಆಟಗಾರ್ತಿಯರಿದ್ದರೆ, ಈ ಬಾರಿಯ ಕೇಂದ್ರ ಒಪ್ಪಂದದಲ್ಲಿ ಒಟ್ಟು 21 ಮಹಿಳಾ ಆಟಗಾರ್ತಿಯರಿಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಜೆಮಿಮಾ ರೊಡ್ರಿಗಸ್​ಗೆ ಬಡ್ತಿ

ಕಳೆದ ಬಾರಿಯಂತೆ, ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಮತ್ತೊಮ್ಮೆ ಎ ಗ್ರೇಡ್‌ಗೆ ಸೇರಿಸಲಾಗಿದೆ. ಜೆಮಿಮಾ ರೋಡ್ರಿಗಸ್ ಕೂಡ ಎ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ, ಅವರು ಈ ಹಿಂದೆ ಬಿ ಗ್ರೇಡ್‌ನಲ್ಲಿದ್ದರು. ಈ ಆಟಗಾರ್ತಿಯರು ವಾರ್ಷಿಕವಾಗಿ 50 ಲಕ್ಷ ರೂಪಾಯಿಗಳನ್ನು ವೇತನವಾಗಿ ಪಡೆಯುತ್ತಾರೆ. ಏತನ್ಮಧ್ಯೆ, ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ಸ್ನೇಹ ರಾಣಾ ಬಿ ಗ್ರೇಡ್​ನಲ್ಲಿ ಸ್ಥಾನ ಪಡೆದಿದ್ದು, 3 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.

ಈ ಆಟಗಾರ್ತಿಯರಿಗೆ ಸಿ ಗ್ರೇಡ್‌

ಗ್ರೇಡ್ ಸಿ ಯಲ್ಲಿ ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಸೇರಿದ್ದಾರೆ. ಈ ಆಟಗಾರ್ತಿಯರಿಗೆ ವಾರ್ಷಿಕವಾಗಿ10 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಶ್ರೀ ಚರಣಿ, ಕಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಅವರು ಮೊದಲ ಬಾರಿಗೆ ಕೇಂದ್ರ ಒಪ್ಪಂದದ ಭಾಗವಾಗಲಿದ್ದಾರೆ. ಆದರೆ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಮತ್ತು ಟಿಟಾಸ್ ಸಾಧು ಕೇಂದ್ರ ಒಪ್ಪಂದಿಂದ ಹೊರಬಿದ್ದಿದ್ದಾರೆ. ಕೇಂದ್ರ ಒಪ್ಪಂದ ಪಡೆದಿರುವ ಆಟಗಾರ್ತಿಯರು ಒಪ್ಪಂದದಲ್ಲಿ ನಿಗದಿಯಾಗಿರುವ ವೇತನದ ಜೊತೆಗೆ ಪಂದ್ಯದ ಶುಲ್ಕವನ್ನು ಸಹ ವೇತನವಾಗಿ ಪಡೆಯುತ್ತಾರೆ. ಆ ಪ್ರಕಾರ ಟೆಸ್ಟ್ ಪಂದ್ಯವನ್ನಾಡುವ ಆಟಗಾರ್ತಿಗೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂ. ವೇತನ ಪಡೆಯುತ್ತಾರೆ.

ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ

ಗ್ರೇಡ್ ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ.

ಗ್ರೇಡ್ ಬಿ: ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ.

ಗ್ರೇಡ್ ಸಿ: ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link