Category Archives: Blog

Your blog category

1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಕಾಮಿಡಿ ಎಂಟರ್‌ಟೈನರ್ ಸಿನಿಮಾ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಬಗ್ಗೆ ಒಂದಿಷ್ಟು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಈ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಕೇವಲ 1.8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಹೊಸ ಸುದ್ದಿ ಈಗ ಸಿನಿವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಬಹುಕೋಟಿ ರೂಪಾಯಿ ಬೇಡಿಕೆ ಇಡುವ ಅಕ್ಷಯ್ ಕುಮಾರ್ (Akshay Kumar) ಅವರು ಈ ಚಿತ್ರಕ್ಕೆ ಇಷ್ಟು ಕಡಿಮೆ ಮೊತ್ತ ಪಡೆದಿರುವುದರ ಹಿಂದೆ ದೊಡ್ಡದೊಂದು ಪ್ಲ್ಯಾನ್ ಅಡಗಿದೆ.

ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಅವರು ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಬದಲು ಪ್ರಾಫಿಟ್ ಶೇರಿಂಗ್, ಅಂದರೆ ಚಿತ್ರದ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಕಥೆ ಹಾಗೂ ಮಾರುಕಟ್ಟೆಯ ಮೇಲಿರುವ ನಂಬಿಕೆಯಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಒಪ್ಪಂದದ ಪ್ರಕಾರ, ಸಿನಿಮಾ ಬಿಡುಗಡೆಯಾದ ನಂತರ ಗಳಿಸುವ ಒಟ್ಟು ಆದಾಯದಲ್ಲಿ ಬರೋಬ್ಬರಿ ಶೇ.72ರಷ್ಟು ದೊಡ್ಡ ಪಾಲು ಅಕ್ಷಯ್ ಕುಮಾರ್ ಅವರ ಜೇಬು ಸೇರಲಿದೆ. ಉಳಿದ ಶೇ.28ರಷ್ಟು ಪಾಲು ಮಾತ್ರ ನಿರ್ಮಾಪಕರ ಬಳಿ ಉಳಿಯಲಿದೆ. ಹೀಗಾಗಿ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದರೆ ಅಕ್ಷಯ್ ಕುಮಾರ್ ಅವರಿಗೆ ನೂರಾರು ಕೋಟಿ ರೂಪಾಯಿ ಲಾಭ ಸಿಗಲಿದೆ.

‘ಫ್ರೀ ಪ್ರೆಸ್ ಜರ್ನಲ್’ ವರದಿಯ ಪ್ರಕಾರ, ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಥಿಯೇಟರ್‌ಗೆ ಬರುವ ಮುನ್ನವೇ ತನ್ನ ಬಂಡವಾಳದ ಬಹುದೊಡ್ಡ ಭಾಗವನ್ನು ಸುರಕ್ಷಿತವಾಗಿ ರಿಕವರಿ ಮಾಡಿಕೊಂಡಿದೆ. ಚಿತ್ರದ ಒಟಿಟಿ, ಸ್ಯಾಟಲೈಟ್ ಮತ್ತು ಆಡಿಯೋ ಹಕ್ಕುಗಳ ಮಾರಾಟದಿಂದಲೇ ನಿರ್ಮಾಪಕರು ಈಗಾಗಲೇ ಸುಮಾರು 120 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 7.1 ಕೋಟಿ ರೂಪಾಯಿಗೆ 2 ಫ್ಲಾಟ್‌ ಮಾರಾಟ ಮಾಡಿದ ನಟ ಅಕ್ಷಯ್ ಕುಮಾರ್

ಬಾಲಿವುಡ್‌ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರಂತಹ ಸೂಪರ್‌ಸ್ಟಾರ್‌ಗಳು ಹೆಚ್ಚಾಗಿ ಇಂತಹ ಪ್ರಾಫಿಟ್ ಶೇರಿಂಗ್ ಮಾದರಿಯನ್ನೇ ಅನುಸರಿಸುತ್ತಾರೆ. ಇತ್ತೀಚೆಗೆ ‘ಧುರಂಧರ್’ ಚಿತ್ರಕ್ಕಾಗಿ ನಟ ರಣವೀರ್ ಸಿಂಗ್ ಕೂಡ ಇದೇ ಹಾದಿ ಹಿಡಿದಿದ್ದರು. ಈಗ ಅಕ್ಷಯ್ ಕುಮಾರ್ ಕೂಡ ಅದೇ ಮಾದರಿಯನ್ನು ಅಳವಡಿಸಿಕೊಂಡಿದ್ದು, ಈ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್? – Kannada News

2026ರ ಜೂನ್ 07ರಿಂದ ಜೂನ್ 13ರವರೆಗೆ ಎರಡನೇ ವಾರವಾಗಿದ್ದು ಗ್ರಹಗಳ ಉಚ್ಚಸ್ಥಾನ ಸ್ವಕ್ಷೇತ್ರ ಸಂಚಾರದ ಫಲವಾಗಿ ಶುಭ ಫಲಗಳು ನಿಮಗೆ ಲಭ್ಯವಾಗಲಿ.

ಮೇಷ ರಾಶಿ:

ಸ್ವಕ್ಷೇತ್ರದಲ್ಲಿರುವ ಲಗ್ನಾಧಿಪತಿ ಮಂಗಳ ನಿಮಗೆ ಅದ್ಭುತ ಶಕ್ತಿ ನೀಡಲಿದ್ದಾನೆ. ರಿಯಲ್ ಎಸ್ಟೇಟ್ ಹಾಗೂ ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತಕ್ಷಣದ ಧನಲಾಭ ಕಾಯ್ದಿರಿಸಿದೆ. ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳಿಗೆ ಮನ್ನಣೆ ಸಿಗಲಿದ್ದು, ಶತ್ರುಗಳು ಪರಾಜಯಗೊಳ್ಳಲಿದ್ದಾರೆ. ಮಾತು ಕಠಿಣವಾಗದಂತೆ ನೋಡಿಕೊಳ್ಳಿ.

​ವೃಷಭ ರಾಶಿ:

ನಿಮ್ಮ ರಾಶಿಯಲ್ಲೇ ಸೂರ್ಯ ಮತ್ತು ಚಂದ್ರರ ಜುಗಲ್ಬಂದಿ ಇರುವುದರಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಲಿದೆ. ಆಡಳಿತಾತ್ಮಕ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಕಣ್ಣಿನ ಸಣ್ಣಪುಟ್ಟ ಸಮಸ್ಯೆ ಅಥವಾ ಉಷ್ಣ ಬಾಧೆ ಇರಬಹುದು. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಹರಿದುಬರಲಿದೆ.

​ಮಿಥುನ ರಾಶಿ:

ಬುಧನು ನಿಮ್ಮದೇ ರಾಶಿಯಲ್ಲಿ ಬಲಿಷ್ಠನಾಗಿರುವುದರಿಂದ ಕೌಶಲ್ಯ ಹಾಗೂ ಬುದ್ಧಿವಂತಿಕೆಗೆ ಭಾರಿ ಮನ್ನಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಒಪ್ಪಂದಗಳು ಕೈಗೂಡಲಿವೆ. ಕಲಾತ್ಮಕ ಮತ್ತು ಬರವಣಿಗೆ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಕಾಶಗಳು ಲಭಿಸಲಿವೆ. ದೂರದ ಪ್ರಯಾಣ ಯಶಸ್ವಿಯಾಗಲಿದೆ.

​ಕರ್ಕಾಟಕ ರಾಶಿ:

ಗುರು ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿ ಉಚ್ಛ ಸ್ಥಿತಿಗೆ ಹತ್ತಿರ ಇರುವುದರಿಂದ ರಾಜಯೋಗದ ಅನುಭವವಾಗಲಿದೆ. ಧನಾಗಮನಕ್ಕೆ ಇದ್ದ ಅಡೆತಡೆಗಳು ಸಂಪೂರ್ಣ ನಿವಾರಣೆಯಾಗಲಿವೆ. ಮನೆಯಲ್ಲಿ ಮದುವೆ ಅಥವಾ ಶುಭ ಕಾರ್ಯಗಳ ಚರ್ಚೆ ಮುನ್ನೆಲೆಗೆ ಬರಲಿದೆ. ಆಭರಣ ಮತ್ತು ವಾಹನ ಖರೀದಿ ಯೋಗವಿದೆ.

ಸಿಂಹ ರಾಶಿ:

ವ್ಯಯ ಮತ್ತು ಲಾಭ ಸ್ಥಾನಗಳ ಏರುಪೇರಿನಿಂದಾಗಿ ಈ ವಾರ ಖರ್ಚುಗಳು ಹೆಚ್ಚಾಗಲಿವೆ. ಆದಾಗ್ಯೂ, ಪಿತ್ರಾರ್ಜಿತ ಆಸ್ತಿಯಿಂದ ಬರಬೇಕಿದ್ದ ಪಾಲು ನಿಮ್ಮ ಕೈ ಸೇರಬಹುದು. ತಾಯಿಯ ಆರೋಗ್ಯದ ಕಡೆ ಗಮನಹರಿಸಿ. ಆಧ್ಯಾತ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಮನಸ್ಸು ವಾಲುವುದರಿಂದ ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ:

ಹತ್ತನೇ ಮನೆಯ ಬುಧನ ದೃಷ್ಟಿಯಿಂದಾಗಿ ವೃತ್ತಿಜೀವನದಲ್ಲಿ ದೊಡ್ಡ ಜಿಗಿತ ಕಂಡುಬರಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ವಾರ ಶುಭ ವಾರ್ತೆ ಕೇಳುವಿರಿ. ಹಿರಿಯ ಅಧಿಕಾರಿಗಳು ಹಾಗೂ ಮಿತ್ರರಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಅತ್ಯಂತ ಆಶಾದಾಯಕವಾಗಿರುತ್ತದೆ.

​ತುಲಾ ರಾಶಿ:

ಭಾಗ್ಯಸ್ಥಾನ ಮತ್ತು ಕರ್ಮಸ್ಥಾನಗಳ ಗ್ರಹಬಲದಿಂದಾಗಿ ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆದರೆ, ಶನಿಯ ದೃಷ್ಟಿಯಿಂದಾಗಿ ಕೆಲಸಗಳು ಕೊನೆಯ ಕ್ಷಣದಲ್ಲಿ ವಿಳಂಬವಾಗಬಹುದು. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ಪರಸ್ಪರ ಹೊಂದಾಣಿಕೆ ಕಾಯ್ದುಕೊಳ್ಳುವುದು ಅನಿವಾರ್ಯ.

ವೃಶ್ಚಿಕ ರಾಶಿ:

ಅಷ್ಟಮದಲ್ಲಿರುವ ಗ್ರಹಗಳ ಪ್ರಭಾವದಿಂದಾಗಿ ಅನಿರೀಕ್ಷಿತ ಧನಲಾಭ ಅಥವಾ ವಿಮೆಯ ಹಣ ಕೈಸೇರಲಿದೆ. ಆದರೆ ರಸ್ತೆ ಸಂಚಾರದಲ್ಲಿ ಅತಿ ಹೆಚ್ಚಿನ ಜಾಗ್ರತೆ ಅಗತ್ಯ. ರಹಸ್ಯ ಶತ್ರುಗಳ ಕಾಟವಿದ್ದರೂ ನಿಮ್ಮ ಆಂತರಿಕ ಶಕ್ತಿಯಿಂದ ಅವರನ್ನು ಮೆಟ್ಟಿ ನಿಲ್ಲುವಿರಿ. ದೇವತಾ ಆರಾಧನೆಯಿಂದ ಮಾನಸಿಕ ಶಾಂತಿ ಸಿಗಲಿದೆ.

ಧನು ರಾಶಿ:

ನಿಮ್ಮದೇ ಲಗ್ನದಲ್ಲಿ ಗುರು-ಶುಕ್ರರ ಶುಭ ದೃಷ್ಟಿ ಇರುವುದರಿಂದ ವ್ಯಕ್ತಿತ್ವದಲ್ಲಿ ಹೊಸ ತೇಜಸ್ಸು ಕಾಣಿಸಿಕೊಳ್ಳಲಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡವರಿಗೆ ಉತ್ತಮ ಜನಬೆಂಬಲ ಸಿಗಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಲಿ. ಆರೋಗ್ಯದಲ್ಲಿನ ಏರುಪೇರುಗಳು ಸುಧಾರಿಸಲಿವೆ.

ಮಕರ ರಾಶಿ:

ಆರನೇ ಮನೆಯ ಗ್ರಹಬಲದಿಂದಾಗಿ ಕೋರ್ಟ್ ಕಚೇರಿ ಕಲಾಪಗಳು ಹಾಗೂ ಹಳೆಯ ಸಾಲದ ಬಾಧ್ಯತೆಗಳಿಂದ ಮುಕ್ತಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಈ ವಾರ ಅತ್ಯಂತ ಅನುಕೂಲಕರವಾಗಿದೆ. ಕೃಷಿ ಅಥವಾ ತಾಂತ್ರಿಕ ವಲಯದಲ್ಲಿರುವವರಿಗೆ ಆದಾಯದ ಮೂಲಗಳು ಹೆಚ್ಚಾಗಲಿವೆ.

​ಕುಂಭ ರಾಶಿ:

ಪಂಚಮ ಸ್ಥಾನದ ಗ್ರಹಚಾರದಿಂದಾಗಿ ಮಕ್ಕಳ ಕಡೆಯಿಂದ ಸಂತಸದ ಸುದ್ದಿ ಬರಲಿದೆ. ಷೇರು ಮಾರುಕಟ್ಟೆ ಅಥವಾ ಹಠಾತ್ ಲಾಭ ತರುವ ವ್ಯವಹಾರಗಳಲ್ಲಿ ಯೋಚಿಸಿ ಹೂಡಿಕೆ ಮಾಡಿ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಹಳೆಯ ಬಾಕಿ ವಸೂಲಿಯಾಗುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಿರಿ.

ಇದನ್ನೂ ಓದಿ: ಗ್ರಹ ದೋಷ ಎಂದರೇನು? ಭಯಪಡುವ ಅಗತ್ಯವಿಲ್ಲ, ಇಲ್ಲಿವೆ ಸರಳ ಪರಿಹಾರಗಳು!

​ಮೀನ ರಾಶಿ:

ನಿಮ್ಮದೇ ರಾಶಿಯಲ್ಲಿ ಶನಿ ದೇವನ ಸಂಚಾರವಿರುವುದರಿಂದ ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಕ್ಕರೂ ನಿರಾಸೆಯಾಗುವುದಿಲ್ಲ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವ್ಯಯವಾಗಲಿದೆ. ಉದ್ಯೋಗಸ್ಥರು ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಸಿವಾದಾಗ ಸಿಕ್ಕಾಪಟ್ಟೆ ಕೋಪ ಬರೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News

ಆಹಾರವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕೇಬೇಕು. ನೀರಿನಂತೆ ಆಹಾರವು ನಮ್ಮ ದೇಹಕ್ಕೆ ಮೂಲಭೂತ ಅವಶ್ಯಕತೆಯಾಗಿದೆ. ಇದು ನಮ್ಮ ಸಕ್ರಿಯರಾಗಿಲು, ಚೈತನ್ಯಶೀಲರಾಗಿರಲು ಸಹಾಯ ಮಾಡುತ್ತದೆ. ಅದೇ ಹೊಟ್ಟೆಗೆ ಸರಿಯಾಗಿ ಊಟ ಬೀಳದಿದ್ದರೆ ಅಥವಾ ಸಿಕ್ಕಾಪಟ್ಟೆ ಹಸಿದಾಗ (hungry) ಹೆಚ್ಚಿನವರಿಗೆ ಕಿರಿಕಿರಿ ಉಂಟಾಗುತ್ತದೆ, ಸಣ್ಣಪುಟ್ಟ ವಿಚಾರಗಳಿಗೂ ಕೋಪ ಬರುತ್ತದೆ. ಇದೇ ರೀತಿ ನಿಮಗೂ ಹಸಿವಾದಾಗ ಜಾಸ್ತಿ ಕೋಪ ಬರುತ್ತಾ? ಹಸಿದಾಗ ಕೋಪ ಬರೋದೇಕೆ, ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.

ಹಸಿವಾದಾಗ ಕೋಪ ಬರೋದೇಕೆ?

ನಾವು ಊಟ ಮಾಡದಿದ್ದಾಗ, ನಮ್ಮ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ, ಇದು ನಮ್ಮನ್ನು ಕಿರಿಕಿರಿಗೊಳಿಸುತ್ತದೆ.  ರಕ್ತದಲ್ಲಿನ ಸಕ್ಕರೆ ಕಡಿಮೆಯಾದಾಗ,  ದೇಹವು ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಗೊಳಿಸಲು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮತ್ತು ಅಡ್ರಿನಾಲಿನ್ (ಅಪಾಯದ ಸಂದರ್ಭಗಳಲ್ಲಿ ಸಕ್ರಿಯಗೊಳ್ಳುವ ಹಾರ್ಮೋನ್)  ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಎರಡೂ  ವ್ಯಕ್ತಿಯ ಹೋರಾಟ ಅಥವಾ ಒತ್ತಡ, ಕೋಪದ ಸ್ಥಿತಿಯನ್ನು ಪ್ರಚೋದಿಸುವ  ಹಾರ್ಮೋನುಗಳಾಗಿವೆ. ಈ ಹಾರ್ಮೋನ್‌ ಬಿಡುಗಡೆ ಕಾರಣದಿಂದಲೇ ಹೆಚ್ಚಿನವರು ಹಸಿವಾದಾಗ ಕೋಪಗೊಳ್ಳುವುದು. ಅಲ್ಲದೆ ದೇಹದಲ್ಲಿ ಗ್ಲೂಕೋಸ್‌ ಮಟ್ಟ ಕಡಿಮೆಯಾದ ತಕ್ಷಣ, ಮೆದುಳು ಒತ್ತಡಕ್ಕೊಳಗಾಗುತ್ತದೆ ಮತ್ತು ಮನಸ್ಥಿತಿ ಕಿರಿಕಿರಿಗೊಳ್ಳುತ್ತದೆ. ಇದೇ ಕಾರಣದಿಂದಲೇ ನಾವು ಹಸಿದಾಗ ಸುಲಭವಾಗಿ ಕೋಪಗೊಳ್ಳುವುದು.

ಹಸಿವಾದಾಗ ದೇಹದಲ್ಲಿ ಯಾವ ಬದಲಾವಣೆಗಳು ಸಂಭವಿಸುತ್ತವೆ?

ಹಸಿವಿನ ನಂತರ, ಕಿರಿಕಿರಿ ಹೆಚ್ಚಾಗುತ್ತದೆ, ಗಮನಹರಿಸಲು ಕಷ್ಟವಾಗುತ್ತದೆ. ತಲೆನೋವು ಅಥವಾ ಆಯಾಸ, ಹೆಚ್ಚಿದ ಹೃದಯ ಬಡಿತ, ನಿದ್ರೆ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಸಂಕೇತಗಳು ನಿಮ್ಮ ದೇಹಕ್ಕೆ ಈಗ ಆಹಾರದ ಅಗತ್ಯವಿದೆ ಎಂದು ಸೂಚಿಸುತ್ತವೆ. ಆದರೆ ನೀವು ಅದನ್ನು ನಿರ್ಲಕ್ಷಿಸಿದರೆ, ನಿಮ್ಮ ಅಭ್ಯಾಸ ಕ್ರಮೇಣ ನಿಮ್ಮ ಮನಸ್ಥಿತಿ ಹದಗೆಡಲು ಕಾರಣವಾಗುತ್ತದೆ.

ಇದನ್ನೂ ಓದಿ: ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು

ಹಸಿವಾಗಲು ಪ್ರಾರಂಭಿಸಿದಾಗ ಅದು ನಮ್ಮ ಭಾವನೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಸಿವಾದಾಗ ಗ್ಲೂಕೋಸ್‌ ಮಟ್ಟ ಕಡಿಮೆಯಾಗುತ್ತದೆ. ಗ್ಲೂಕೋಸ್ ಕೊರತೆಯು ನಮ್ಮ ಭಾವನೆಗಳು ಮತ್ತು ನಡವಳಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮೆದುಳಿನ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಸಿದಾಗ ನಮ್ಮ ಭಾವನೆ ಹದಗೆಡುತ್ತವೆ. ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದು ಸಣ್ಣ ವಿಷಯಗಳ ಮೇಲೂ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗುತ್ತದೆ.

ಹಾಗಾಗಿ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಸಣ್ಣ ಭಾಗಗಳಲ್ಲಿ ಊಟ ಮಾಡಬೇಕು, ಹಸಿವಾದ ತಕ್ಷಣ ಆರೋಗ್ಯಕ ಆಹಾರವನ್ನು ಸೇವಿಸಿ. ಆರೋಗ್ಯಕರ ಆಹಾರವು ನಿಮಿಷಗಳಲ್ಲಿ ನಿಮ್ಮನ್ನು ಮನಸ್ಥಿತಿಯನ್ನು  ಉತ್ತಮಗೊಳಿಸುತ್ತದೆ. ಅಲ್ಲದೆ ಹಸಿವನ್ನು ನಿಯಂತ್ರಿಸಲು ನೀವು ಹಣ್ಣುಗಳು ಅಥವಾ ಒಣಗಿದ ಹಣ್ಣುಗಳಂತಹ ಆರೋಗ್ಯಕರ ತಿನಿಸುಗಳನ್ನು ಸೇವಿಸಿ. ಪ್ರತಿ ಗಂಟೆಗೊಮ್ಮೆ ನೀರನ್ನು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್‌ ಆಗಿಡಲು ಕೂಡ ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಜಂಕ್‌ ಫುಡ್‌ ತಿನ್ನಲು ಹೋಗಬೇಡಿ, ಇವು ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ – Kannada News

ನವದೆಹಲಿ, ಜೂನ್ 8: ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಸರಕು ಹಡಗಿನ ಮೇಲೆ ಶಂಕಿತ ಡ್ರೋನ್ ಅಥವಾ ಕ್ಷಿಪಣಿ ದಾಳಿ ನಡೆದಿದೆ. 24 ಭಾರತೀಯ ನಾವಿಕರು ಈ ಹಡಗಿನಲ್ಲಿದ್ದರು. ಈ ದಾಳಿಯು ಹಡಗಿನ ಎಂಜಿನ್ ಕೋಣೆಯಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಯಿತು. ಇದರಿಂದ ಹಡಿಗಿನಲ್ಲಿ ಬೆಂಕಿ ಹೊತ್ತಿಕೊಂಡಿತು, ಇದು ಸಿಬ್ಬಂದಿಗಳಲ್ಲಿ ಭೀತಿಯನ್ನುಂಟುಮಾಡಿತು. ಇರಾನ್ (Iran) ಮತ್ತು ಇಸ್ರೇಲ್ ನಡುವಿನ ಯುದ್ಧವು ಪುನರಾರಂಭಗೊಂಡಿರುವ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕದ ಮಧ್ಯೆ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಪಲಾವ್ ಧ್ವಜ ಹೊತ್ತ ಸರಕು ಹಡಗು ಓಮನ್ ಕರಾವಳಿಯಿಂದ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿದ್ದಾಗ ಅಪಘಾತಕ್ಕೀಡಾಯಿತು. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಹಡಗಿನ ಎಂಜಿನ್ ಕೋಣೆಯಲ್ಲಿ ದೊಡ್ಡ ರಂಧ್ರ ಉಂಟಾಗಿ, ಅದು ನೀರಿನಿಂದ ಬೇಗನೆ ತುಂಬಿ ಸಮತೋಲನ ಕಳೆದುಕೊಂಡಿತು. ಸ್ಫೋಟದ ನಂತರ, ಎಂಜಿನ್ ಕೋಣೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ಪರಿಸ್ಥಿತಿ ಹದಗೆಡುತ್ತಿದ್ದಂತೆ, ಸಿಬ್ಬಂದಿ ತುರ್ತು ಕರೆಗಳನ್ನು ಮಾಡಿದರು. ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ದಾಳಿಯನ್ನು ದೃಢಪಡಿಸಿತು. ಹಡಗಿನಲ್ಲಿ ಭಾರತೀಯ ನಾವಿಕರು ಇದ್ದಾರೆ ಎಂದು ಒಕ್ಕೂಟ ತಿಳಿಸಿದೆ. ಮೂಲಗಳ ಪ್ರಕಾರ, ದಾಳಿಯಲ್ಲಿ ಹಡಗಿನ ಲೈಫ್ ಬೋಟ್ ಕೂಡ ಹಾನಿಗೊಳಗಾಗಿದ್ದು, ನಾವಿಕರನ್ನು ರಕ್ಷಿಸುವುದು ಕಷ್ಟಕರವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಸ್ತುತ ನಡೆಯುತ್ತಿವೆ. ಸದ್ಯದ ಮಟ್ಟಿಗೆ ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತ ಸರ್ಕಾರ ಮತ್ತು ಭಾರತೀಯ ನೌಕಾಪಡೆ ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಆ ಪ್ರದೇಶದಲ್ಲಿ ಕಡಲ್ಗಳ್ಳರ ನಿಗ್ರಹ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ ಗಸ್ತಿನಲ್ಲಿದ್ದ ಭಾರತೀಯ ನೌಕಾಪಡೆಯ ಅತ್ಯಾಧುನಿಕ ಯುದ್ಧನೌಕೆ ಮತ್ತು ಕಡಲ ಗಸ್ತು ವಿಮಾನವನ್ನು (P-8I) ತಕ್ಷಣವೇ ಆಪತ್ತಿನಲ್ಲಿರುವ ಹಡಗಿನ ರಕ್ಷಣೆಗೆ ಧಾವಿಸುವಂತೆ ಸೂಚಿಸಲಾಗಿದೆ. ಓಮನ್ ದೇಶದ ನೌಕಾಪಡೆ ಮತ್ತು ಪ್ರಾದೇಶಿಕ ಕಡಲ ರಕ್ಷಣಾ ಸಮನ್ವಯ ಕೇಂದ್ರಗಳ (MRCC) ಜೊತೆಗೆ ಭಾರತೀಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ

ನಾವಿಕರ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ. ಆದರೆ ಭಾರತೀಯ ನೌಕಾಪಡೆಯು ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರದ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚಾಗಿದ್ದು, ಜಾಗತಿಕ ವ್ಯಾಪಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ರೌಡಿಗಳ ವಿರುದ್ಧ ಸಮರ ಸಾರಿದ ಪೊಲೀಸ್ರು, ವಿಚಾರಣೆಗೆ ಬರದೇ ಆಟವಾಡ್ತಿದ್ದ ರೌಡಿ ಅರೆಸ್ಟ್​ – Kannada News

ಬೆಂಗಳೂರು, (ಜೂನ್ 08): ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಖಡಕ್ ಸೂಚನೆ ಬೆನ್ನಲ್ಲೇ ಪೊಲೀಸರು (Police), ರೌಡಿಗಳನ್ನು (Rowdy)  ಮಟ್ಟಹಾಕಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂತೆ ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಯನ್ನು ಬೆಂಗಳೂರು ಸಿಸಿಬಿ ಹೆಡೆಮುರಿಕಟ್ಟಿದೆ. ಹೌದು….ಕೋರ್ಟ್​​ ವಾರಂಟ್ ಆದೇಶ ಉಲ್ಲಂಘಿಸಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೆ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ವಿನೋಬನಗರದ ರೌಡಿಶೀಟರ್ ಶಾಹಿದ್ ಪಾಷಾನನ್ನು ಬಂಧಿಸಿದ್ದಾರೆ.  ಶಾಹಿದ್ ಪಾಷಾ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ಆಟವಾಡುತ್ತಿದ್ದ. ಇದೀಗ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ ಬೆನ್ನಲ್ಲೇ ರೌಡಿಶೀಟರ್ ಶಾಹಿದ್ ಪಾಷಾ​​ನಿಗೆ ಬಿಸಿ ಮುಟ್ಟಿಸಿದ್ದಾರೆ.

ಸಿಎಂ ಸೂಚನೆ ಬೆನ್ನಲ್ಲೇ ರೌಡಿ ನಿಗ್ರಹ ದಳ ರಚನೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮಾರನೇ ದಿನವೇ ಉನ್ನತ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದ್ದು, ಆ ಸಭೆಯಲ್ಲಿ ಪ್ರಮುಖವಾಗಿ ರೌಡಿಗಳ ಆಟಾಟೋಪಗಳಿಗೆ ಬ್ರೇಕ್ ಹಾಕಬೇಕೆಂದು ಎಂದಿದ್ದರು. ಇದಕ್ಕೆ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಆ್ಯಂಟಿ ರೌಡಿ ಸ್ಕ್ವಾಡ್ ರಚನೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ನಿನ್ನೆ(ಜೂನ್ 07) ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಅವರು ಪ್ರತಿ ಪೊಲೀಸ್‌ ವಲಯ ಹಾಗೂ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ರಚಿಸುವಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗೂ ರೌಡಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಾಗಿ ಪ್ರತಿ ಪೊಲೀಸ್‌ ವಲಯ ಮತ್ತು ಪೊಲೀಸ್‌ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ಆರಂಭಿಸುತ್ತಿರುವುದಾಗಿ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ರೌಡಿ ನಿಗ್ರಹ ದಳವು ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ, ಹೊಸ ರೌಡಿ ಪಟ್ಟಿ ತೆರೆಯಬೇಕು. ರೌಡಿ ಶೀಟರ್‌ಗಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಹೊಸ ರೌಡಿಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ಪಿಎಆರ್‌, ಗೂಂಡಾ ಕಾಯಿದೆ, ಕೆಸಿಒಸಿಎ ಕಾಯಿದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಗಸ್ತು ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮತ್ತು ದಿಢೀರ್‌ ತಪಾಸಣೆ ನಡೆಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸಲೀಂ ಸೂಚಿಸಿದ್ದಾರೆ.

ಖಡಕ್ ನಿರ್ದೇಶನ ನೀಡಿದ್ದ ಸಿಎಂ

ರೌಡಿಶೀಟರ್‌ಗಳ ಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿ ಅವರ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕು. ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇರಬಾರದು ಎಂದು ಡಿಕೆ ಶಿವಕುಮಾರ್ ಅವರು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸಹ ರೌಡಿಗಳ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಭೀತಿ!: ಇದು ಯುವಕರಲ್ಲಿ ಹೆಚ್ಚಿದ ‘ಸಲಿಂಗ’ ಸಂಪರ್ಕದ ಎಫೆಕ್ಟ್ – Kannada News

ಬೆಂಗಳೂರು, ಜೂ.8 : ಕರ್ನಾಟಕದಲ್ಲಿ ಪುರುಷರ ನಡುವಿನ ಲೈಂಗಿಕ ಸಂಪರ್ಕದ (Male-to-Male Sexual Contact) ಕಾರಣದಿಂದಾಗಿ ಎಚ್‌ಐವಿ/ಏಡ್ಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿ (KSAPS) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಎಚ್‌ಐವಿ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಜಿಗಿತ ಕಂಡಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರಕರಣ:

2023-2024ರ ಅವಧಿಯಲ್ಲಿ: 44,581 ಪ್ರಕರಣಗಳು

2024-2025ರ ಅವಧಿಯಲ್ಲಿ: 62,664 ಪ್ರಕರಣಗಳು

2025-2026ರ ಪ್ರಸ್ತುತ ಅವಧಿಯಲ್ಲಿ: 66,606 ಪ್ರಕರಣಗಳು

ಈ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇವಲ ಮೂರೇ ವರ್ಷಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, 18 ರಿಂದ 25 ಮತ್ತು 26 ರಿಂದ 35 ವರ್ಷದೊಳಗಿನ ಯುವಕರಲ್ಲಿ ಈ ಸೋಂಕು ಅತಿ ಹೆಚ್ಚು ಪತ್ತೆಯಾಗುತ್ತಿದೆ. 18-25 ವರ್ಷದ ವಯೋಮಾನದವರಲ್ಲಿ 2023-24ರಲ್ಲಿ 3,732 ಇದ್ದ ಪ್ರಕರಣಗಳು, 2024-25ರ ವೇಳೆಗೆ 6,962 ಕ್ಕೆ ಏರಿಕೆಯಾಗಿದ್ದವು. ಪ್ರಸ್ತುತ ಸಾಲಿನಲ್ಲಿ ಇದು 6,283 ಕ್ಕೆ ತಲುಪಿದೆ. ಇನ್ನುಳಿದಂತೆ 26-35 ವರ್ಷದ ವಯೋಮಾನದವರಲ್ಲಿ ಪ್ರಕರಣಗಳ ಸಂಖ್ಯೆ 9,351 ರಿಂದ ಬರೋಬ್ಬರಿ 14,555 ಕ್ಕೆ ಏರಿಕೆಯಾಗಿದೆ. ಲೈಂಗಿಕವಾಗಿ ಹರಡುವ ರೋಗಗಳ ಪೈಕಿ (STDs) ಎಚ್‌ಐವಿ ಸೋಂಕು ರಾಜ್ಯದಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದ್ದು, ಈ ವರ್ಷವೇ 417 ಹೊಸ ಪ್ರಕರಣಗಳು ದಾಖಲಾಗಿವೆ.

“ಸಲಿಂಗ ಕಾಮದ ವೇಳೆ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ನಾವು ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಮುಖ್ಯವಾಗಿ ಕಾಲೇಜು ಹಾಸ್ಟೆಲ್‌ಗಳಲ್ಲಿ ಉಂಟಾಗಿರುವ ಸೋಂಕಿನ ಹರಡುವಿಕೆಯಿಂದಾಗಿ ಪ್ರಕರಣಗಳು ಹೆಚ್ಚಾಗಿವೆ. ಕೆಲವು ಪುರುಷರು ಮಹಿಳಾ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಮತ್ತು ನಂತರ ತಮ್ಮದೇ ಗುಂಪಿನ ಇತರ ಪುರುಷರೊಂದಿಗೆ ಸಂಪರ್ಕ ಹೊಂದುವುದರಿಂದ ಸೋಂಕು ವೇಗವಾಗಿ ಹರಡುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞರಾದ ಡಾ. ಸ್ವಾತಿ ರಾಜಗೋಪಾಲ್ ಅವರು ಹೇಳಿರುವ ಪ್ರಕಾರ “ಇತ್ತೀಚಿನ ದಿನಗಳಲ್ಲಿ ಲೈಂಗಿಕ ಡೇಟಿಂಗ್ ಆ್ಯಪ್‌ಗಳ ಬಳಕೆ ಹೆಚ್ಚಾಗಿದ್ದು, ಸುಲಭವಾಗಿ ಸಂಗಾತಿಗಳು ಸಿಗುತ್ತಿರುವುದರಿಂದ ಸುರಕ್ಷತೆ ಇಲ್ಲದ ದೈಹಿಕ ಸಂಪರ್ಕ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಿಫಿಲಿಸ್ ಮತ್ತು ಗೊನೊರಿಯಾದಂತಹ ಇತರ ಲೈಂಗಿಕ ರೋಗಗಳೂ ಹೆಚ್ಚುತ್ತಿದ್ದು, ಇವು ಎಚ್‌ಐವಿ ಹರಡುವಿಕೆಯನ್ನು ಮತ್ತಷ್ಟು ತೀವ್ರಗೊಳಿಸುತ್ತವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

ಕಾಲೇಜು ಹಾಸ್ಟೆಲ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳನ್ನು ಗುರಿಯಾಗಿಸಿಕೊಂಡು ಸರ್ಕಾರವು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಅಪಾಯವನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಮಾರ್ಗದರ್ಶನ ಪಡೆಯಲು ಸರ್ಕಾರದ ‘ಬ್ರೇಕ್‌ಫ್ರೀ’ ಮೊಬೈಲ್ ಆಪ್ ಅನ್ನು ಬಳಸಲು ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಉಚಿತ ಮಾಹಿತಿ ಹಾಗೂ ಬೆಂಬಲಕ್ಕಾಗಿ 1097 ಸಹಾಯವಾಣಿ ಸದಾ ಕಾರ್ಯನಿರ್ವಹಿಸುತ್ತಿದ್ದು, ಕಾರ್ಪೊರೇಟ್ ವಲಯಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ನಿರಂತರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್ – Kannada News

ಬೆಂಗಳೂರು, ಜೂನ್ 08: ಈಗಿನ ಕಾಲದಲ್ಲಿ ಸಂಪಾದನೆ ಎಷ್ಟಿದ್ರು ಕಡಿಮೆಯೇ. ಹೌದು, ಬೆಂಗಳೂರು (Bengaluru) ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆಂದು ಬಂದವರಲ್ಲಿ ಅನೇಕರು ಕೈಯಲ್ಲಿ ಒಂದು ಉದ್ಯೋಗವಿದ್ರೂ ಪಾರ್ಟ್ ಟೈಮ್ ಆಗಿ ಇನ್ನೊಂದು ಕೆಲಸ ಮಾಡ್ತಾರೆ. ಇದೀಗ ಎಂಎನ್‌ಸಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಪಡೆಯುವ ವ್ಯಕ್ತಿಯದ್ದು ಅದೇ ಕಥೆ. ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ವಾರಾಂತ್ಯದಲ್ಲಿ ರ‍್ಯಾಪಿಡೋ ಬೈಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಈ ಪೋಸ್ಟ್ ಸದ್ಯ  ವೈರಲ್ ಆಗಿದ್ದು, ಆರ್ಥಿಕ ಅಭದ್ರತೆಯ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.

ಶಬಾಜ್ (Shabaz) ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ನಗರದ ಬನ್ನೇರುಘಟ್ಟಕ್ಕೆ ಪ್ರಯಾಣಿಸಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದೆ. ಪ್ರಯಾಣದ ವೇಳೆ ರ‍್ಯಾಪಿಡೋ ಬೈಕ್ ಚಾಲಕನನ್ನು ಮಾತನಾಡಿಸಿದೆ. ಮೊದಲು ನಾನು ಕನ್ನಡದಲ್ಲಿ ಮಾತನಾಡಿ, ನಂತರ ನನಗೆ ಕನ್ನಡ ಸರಿಯಾಗಿ ಬಾರದಿರುವುದನ್ನು ಅವರು ಗಮನಿಸಿದ್ರು. ತಕ್ಷಣವೇ ನನ್ನ ಜತೆಗೆ ಇಂಗ್ಲಿಷ್‌ ನಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಹೀಗೆ ಮಾತನಾಡುತ್ತಿದ್ದ ವೇಳೆ ನಾನು ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿದೆ. ಆದರೆ ರ‍್ಯಾಪಿಡೋ  ಚಾಲಕ ಎಂಎನ್‌ಸಿ ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ವೈರಲ್ ಪೋಸ್ಟ್ ಇಲ್ಲಿದೆ

ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳವಿದೆ ಕೇಳಿ ನನಗೆ ಆಶ್ಚರ್ಯ ಆಯ್ತು. ಈ ಕೆಲಸ ಯಾಕಾಗಿ ಎಂದು ಕೇಳಿದ್ದಕ್ಕೆ ತಮಗೆ ಮದುವೆಯಾಗಿದ್ದು, ಒಂದು ಸಣ್ಣ ಮಗುವಿದೆ. ಹೆಚ್ಚುವರಿ ಆದಾಯವನ್ನು ಬಯಸುವುದರಿಂದ ಬೈಕ್‌ ಓಡಿಸುತ್ತೇನೆ ಎಂದರು. ಈ ಮಾತು ನಿಜವಾಗಿಯೂ ನನ್ನನ್ನು ಯೋಚಿಸುವಂತೆ ಮಾಡಿತು. ಉತ್ತಮ ತಾಂತ್ರಿಕ ಕೆಲಸ ಮತ್ತು ಆರು ಅಂಕಿಗಳ ಸಂಬಳ ಹೊಂದಿರುವ ಯಾರಾದರೂ ಇನ್ನೂ ವಾರಾಂತ್ಯದ ಟೈಮ್ ಸೈಡ್ ಹಸ್ಸಲ್ ಅಗತ್ಯವನ್ನು ಅನುಭವಿಸಿದರೆ, ಬೆಂಗಳೂರು ಮತ್ತು ಇತರ ಟೈಯರ್-1 ನಗರಗಳಲ್ಲಿ ಜೀವನ ಎಷ್ಟು ದುಬಾರಿಯಾಗಿದೆ? ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 9 ಟು 5 ಲೈಫ್ ಬೇಡಪ್ಪಾ: ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್!

ಈ ಪೋಸ್ಟ್ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದುಡಿಮೆಯಿದ್ರೂ ಜವಾಬ್ದಾರಿಗಳು ಎಲ್ಲವನ್ನು ಮಾಡಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಮನೆಯಲ್ಲಿ ನೀವೇ ಏಕೈಕ ಜೀವನಾಧಾರವಾಗಿದ್ದಾಗ ಒತ್ತಡದಿಂದ ಕೂಡಿರುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಜೊತೆಗೆ, ಇಎಂಐ, ಮಕ್ಕಳ ಶಿಕ್ಷಣ ಮತ್ತು ಪೋಷಕರನ್ನು ಬೆಂಬಲಿಸುವ ಆರು ಅಂಕಿಗಳ ಸಂಬಳದಲ್ಲೂ ಉಳಿತಾಯ ಮಾಡಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಗಲ ಮೇಲಿರುವ ಜವಾಬ್ದಾರಿಗಳು ಎಲ್ಲವನ್ನೂ ಮಾಡಿಸುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು – Kannada News

ದಾವಣಗೆರೆ ಕುಡಿಯುವ ನೀರಿನ ಸಮಸ್ಯೆ

ದಾವಣಗೆರೆ ಜೂ.8: ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಕುಡಿಯುವ ನೀರಿಗಾಗಿ ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದ ಸಾರ್ವಜನಿಕರು, ಗ್ರಾಮಕ್ಕೆ ಭೇಟಿ ನೀಡಿದ್ದ ಜಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ಕೂಡಿ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಬಿಲ್ ಕಲೆಕ್ಟರ್ ಮೇಲೆ ಭೀಕರ ಹಲ್ಲೆ ನಡೆಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡಿದ್ದ ಗ್ರಾಮಸ್ಥರು, ಇಂದು ಗ್ರಾಮಕ್ಕೆ ಆಗಮಿಸಿದ್ದ ತಾಲೂಕು ಪಂಚಾಯತ್ ಇಒ ಕೆಂಚಪ್ಪ ಹಾಗೂ ಪಿಡಿಒ ಕೊಟ್ರೇಶ್ ಅವರನ್ನು ಹಿಡಿದು ರಸ್ತೆಯ ಕಟ್ಟೆಯ ಮೇಲೆ ಕೂರಿಸಿಕೊಂಡು ತರಾಟೆಗೆ ತೆಗೆದುಕೊಂಡರು. ತದನಂತರ ಅಧಿಕಾರಿಗಳನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸರ್ಕಾರ ಮುಂಗಡವಾಗಿ ಇಟ್ಟಿದ್ದ ಅನುದಾನದ ಹಣವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಹಣ ಲೂಟಿಯಾಗಿದ್ದರಿಂದಲೇ ನಮಗೆ ಒಂದು ತಿಂಗಳಿನಿಂದ ಹನಿ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಬಿಲ್ ಕಲೆಕ್ಟರ್ ವಿರುದ್ಧ ತಿರುಗಿಬಿದ್ದ ಸಾರ್ವಜನಿಕರು, “ಕುಡಿಯುವ ನೀರು ಕೊಡದೆ ನೀವೇನು ಕೆಲಸ ಮಾಡ್ತೀರಾ?” ಎಂದು ಪ್ರಶ್ನಿಸಿ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಸದ್ಯ ಜಗಳೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ – Kannada News

ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಆಡೆಸ್ಸಿ’ ಚಿತ್ರದ ಮುಂಗಡ ಬುಕಿಂಗ್ (The Odyssey Advance Booking) ಭಾರತದಲ್ಲಿ ಆರಂಭವಾಗಿದೆ. ಜೂನ್ 8ರಂದು ಬೆಳಗ್ಗೆ 10 ಗಂಟೆಗೆ ಬುಕಿಂಗ್ ಶುರು ಆಗುತ್ತಿದ್ದಂತೆಯೇ ಟಿಕೆಟ್‌ಗಳಿಗಾಗಿ ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ‘ದಿ ಆಡೆಸ್ಸಿ’ (The Odyssey) ಸಿನಿಮಾ ಮುಂದಿನ ತಿಂಗಳು (ಜುಲೈ 17) ಬಿಡುಗಡೆಯಾಗಲಿದ್ದರೂ, ಈಗಲೇ ಟಿಕೆಟ್‌ಗೆ ಈ ಮಟ್ಟದ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಇದರ ನಡುವೆ, ಉತ್ತರ ಭಾರತದಲ್ಲಿ ಟಿಕೆಟ್ ದರ ಬರೋಬ್ಬರಿ 3000 ರೂಪಾಯಿ ತಲುಪಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಸಂಪೂರ್ಣವಾಗಿ ಚಿತ್ರೀಕರಿಸಲಾಗಿರುವ ‘ದಿ ಆಡೆಸ್ಸಿ’ ಚಿತ್ರದ ಪ್ರದರ್ಶನಕ್ಕಾಗಿ ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಪಿಕ್ಚರ್ಸ್ ಸದ್ಯಕ್ಕೆ ಕೇವಲ ಎರಡು ಶೋಗಳನ್ನು ಮಾತ್ರ ಘೋಷಿಸಿದೆ. ಅದೂ ಕೇವಲ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಮಾತ್ರ! ಒಂದು ಮುಂಜಾನೆಯ ಶೋ ಹಾಗೂ ಮತ್ತೊಂದು ಸಂಜೆ ಅಥವಾ ರಾತ್ರಿಯ ಶೋ ಆಗಿರಲಿದೆ.

ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಹಿಂದಿನ ಚಿತ್ರ ‘ಆಪನ್‌ಹೈಮರ್’ ಬಿಡುಗಡೆಯಾದಾಗಲೂ ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇತ್ತು. ಆದರೆ ಆಗ ಟಿಕೆಟ್ ದರಗಳು ಈ ಪ್ರಮಾಣದಲ್ಲಿ ದುಬಾರಿಯಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೇವಲ ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ ಮಾತ್ರ ಇಂತಹ ಕ್ರೇಜಿ ಡಿಮ್ಯಾಂಡ್ ಕಂಡುಬಂದಿತ್ತು.

ಮಹಾರಾಷ್ಟ್ರದ ಪುಣೆ ನಗರವು ‘ದಿ ಆಡೆಸ್ಸಿ’ ಸಿನಿಮಾದ ಅತ್ಯಂತ ದುಬಾರಿ ಸ್ಕ್ರೀನಿಂಗ್‌ಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಆರಂಭಿಕ ಟಿಕೆಟ್ ದರವೇ 1400 ರೂಪಾಯಿಗಳಾಗಿದ್ದು, ಗರಿಷ್ಠ ಬೆಲೆ 3000 ರೂಪಾಯಿಗಳನ್ನು ಮುಟ್ಟಿರುವುದು ಸಿನಿಪ್ರೇಕ್ಷಕರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಕೂಡ ಈ ಸಿನಿಮಾದ ಟಿಕೆಟ್ ಬೆಲೆ 800 ರೂಪಾಯಿಗಳಿಂದ ಆರಂಭವಾಗಿ 2 ಸಾವಿರ ರೂಪಾಯಿಗಳ ತನಕ ಇದೆ.

ಮುಂಬೈನಲ್ಲಿ ಟಿಕೆಟ್ ದರಗಳು ಸ್ವಲ್ಪ ಮಟ್ಟಿಗೆ ಕೈಗೆಟುಕುವಂತಿದ್ದು, ಬಹುತೇಕ ಕಡೆ 1000 ರೂಪಾಯಿಗಿಂತ ಕಡಿಮೆ ಇವೆ. ಮುಂಬೈನ ‘ಪಿವಿಆರ್ ಲೋವರ್ ಪರೇಲ್’ನಲ್ಲಿ ಮಾತ್ರ ದರಗಳು ಸ್ವಲ್ಪ ಹೆಚ್ಚಾಗಿದ್ದು, ಅಲ್ಲಿ ಆರಂಭಿಕ ಬೆಲೆ 700 ರೂ. ಇದ್ದು, ಗರಿಷ್ಠ 1400 ರೂ.ವರೆಗಿದೆ. ಒಟ್ಟಾರೆಯಾಗಿ ಮುಂಬೈ ನಗರದಲ್ಲಿ ಗರಿಷ್ಠ ಟಿಕೆಟ್ ದರ 2000 ರೂಪಾಯಿಗಳ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಭಾರತೀಯ ಪ್ರೇಕ್ಷಕರು ಯಾವಾಗಲೂ ಹಾಲಿವುಡ್ ಸಿನಿಮಾಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುತ್ತಾರೆ. ಆದರೆ, ನಮ್ಮದೇ ದೇಶದ ಸಿನಿಮಾಗಳಿಗೆ ಹೋಲಿಸಿದರೆ ವಿದೇಶಿ ಚಿತ್ರಗಳಿಗೆ ಈ ಮಟ್ಟದ ದರ ನಿಗದಿಪಡಿಸುತ್ತಿರುವುದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ದುಬಾರಿ ಬೆಲೆಯಿಂದಾಗಿ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು ಅಂದುಕೊಳ್ಳುವ ಅದೆಷ್ಟೋ ಪ್ರೇಕ್ಷಕರಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು? – Kannada News

ಐಷಾರಾಮಿ ಕಾರುಗಳು (Luxury cars) ಅಥವಾ ದೊಡ್ಡ ಬಂಗಲೆಗಳು ಒಬ್ಬರ ‘ಆರ್ಥಿಕ ಯಶಸ್ಸಿನ’ (Financial Success) ನಿಜವಾದ ಅಳತೆಗೋಲಾಗಲು ಸಾಧ್ಯವೇ ಇಲ್ಲ. ಆರ್ಥಿಕ ಸ್ವಾತಂತ್ರ್ಯದ ಬುಡ ಇಲ್ಲದ ಐಷಾರಾಮ್ಯತೆಯು ಅಡಿಪಾಯ ಇಲ್ಲದ ಕಟ್ಟಡಗಳಂತೆ ಯಾವಾಗ ಬೇಕಾದರೂ ಕುಸಿಯಬಹುದು. ಇತ್ತೀಚಿನ ದಿನಗಳಲ್ಲಿ ಇವೆಲ್ಲವೂ ಕೇವಲ ಸಾಲದ (EMI) ಮೇಲೆ ನಿಂತಿರುವ ‘ದೃಶ್ಯ ವೈಭವ’ ಅಷ್ಟೇ ಆಗಿರಬಹುದು. ಹಾಗಾದರೆ, ಒಬ್ಬ ವ್ಯಕ್ತಿ ನಿಜವಾಗಿಯೂ ಆರ್ಥಿಕವಾಗಿ ಯಶಸ್ವಿಯಾಗಿದ್ದಾನೆ ಅನ್ನಲು ಇರುವ ನೈಜ ಸಂಕೇತಗಳು ಯಾವುವು? ಆರ್ಥಿಕ ತಜ್ಞರ ಪ್ರಕಾರ, ಬ್ಯಾಂಕ್ ಬ್ಯಾಲೆನ್ಸ್ ದೊಡ್ಡದಾಗಿರುವುದಕ್ಕಿಂತ ನಮ್ಮ ಆರ್ಥಿಕ ಅಭ್ಯಾಸಗಳು ಎಷ್ಟು ಗಟ್ಟಿಯಾಗಿವೆ ಎಂಬುದು ಮುಖ್ಯ. ನಿಜವಾದ ಆರ್ಥಿಕ ಯಶಸ್ಸನ್ನು ಈ ಕೆಳಗಿನ ಅಂಶಗಳ ಮೂಲಕ ಅಳೆಯಬಹುದು:

ಸಾಲ ಮುಕ್ತ ಜೀವನ

ಯಾರಿಗೆ ಯಾವುದೇ ರೀತಿಯ ಕೆಟ್ಟ ಸಾಲಗಳು (Bad debt) (ಉದಾಹರಣೆಗೆ: ಕ್ರೆಡಿಟ್ ಕಾರ್ಡ್ ಬಾಕಿ, ದುಬಾರಿ ಬಡ್ಡಿಯ ವೈಯಕ್ತಿಕ ಸಾಲ ಅಥವಾ ಐಷಾರಾಮಿ ವಸ್ತುಗಳ ಮೇಲಿನ EMI) ಇರುವುದಿಲ್ಲವೋ, ಅವರೇ ನಿಜವಾದ ಆರ್ಥಿಕ ಯಶಸ್ಸಿನ ಮೊದಲ ಮೆಟ್ಟಿಲನ್ನು ತಲುಪಿದವರು. ಗಳಿಸುವ ಹಣದಲ್ಲಿ ದೊಡ್ಡ ಭಾಗ ಸಾಲದ ಕಂತು ಕಟ್ಟಲು ಹೋಗದೆ, ನಿಮ್ಮ ಕೈಯಲ್ಲೇ ಉಳಿಯುತ್ತಿದ್ದರೆ ನೀವು ಆರ್ಥಿಕವಾಗಿ ಯಶಸ್ವಿ ಎಂದರ್ಥ.

ತುರ್ತು ನಿಧಿಯ ಸುರಕ್ಷತೆ

ಜೀವನದಲ್ಲಿ ಅನಿರೀಕ್ಷಿತವಾಗಿ ಉದ್ಯೋಗ ನಷ್ಟ, ಅನಾರೋಗ್ಯ ಅಥವಾ ಯಾವುದೇ ಬಿಕ್ಕಟ್ಟು ಎದುರಾದರೂ ಕನಿಷ್ಠ 6 ರಿಂದ 12 ತಿಂಗಳುಗಳ ಕಾಲ ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಜೀವನ ನಡೆಸಲು ಬೇಕಾಗುವಷ್ಟು ಹಣವನ್ನು ಎತ್ತಿಟ್ಟಿರುವ ವ್ಯಕ್ತಿ ನಿಜವಾದ ಆರ್ಥಿಕ ನೆಮ್ಮದಿ ಹೊಂದಿರುತ್ತಾನೆ. ಈ ಸುರಕ್ಷತಾ ಭಾವವೇ ಯಶಸ್ಸಿನ ಸಂಕೇತ.

ಇದನ್ನೂ ಓದಿ: ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ

ಸ್ಥಿರ ಆದಾಯದ ಮೂಲಗಳು (Passive Income)

ನೀವು ಪ್ರತಿದಿನ ಕೆಲಸ ಮಾಡದಿದ್ದರೂ ನಿಮ್ಮ ಹಣ ನಿಮಗಾಗಿ ಕೆಲಸ ಮಾಡಬೇಕು. ರಿಯಲ್ ಎಸ್ಟೇಟ್‌ನಿಂದ ಬರುವ ಬಾಡಿಗೆ, ಷೇರು ಮಾರುಕಟ್ಟೆಯ ಡಿವಿಡೆಂಡ್, ಮ್ಯೂಚುವಲ್ ಫಂಡ್ ಅಥವಾ ಸ್ಥಿರ ಠೇವಣಿಗಳಿಂದ (FD) ಬರುವ ಬಡ್ಡಿ ನಿಮ್ಮ ತಿಂಗಳ ಕನಿಷ್ಠ ಖರ್ಚುಗಳನ್ನು ನಿಭಾಯಿಸುವಷ್ಟಿದ್ದರೆ, ನೀವು ಆರ್ಥಿಕ ಸ್ವಾತಂತ್ರ್ಯವನ್ನು (Financial Freedom) ಪಡೆದಿದ್ದೀರಿ ಎಂದರ್ಥ.

ಆಯ್ಕೆಗಳ ಸ್ವಾತಂತ್ರ್ಯ

ನಿಜವಾದ ಶ್ರೀಮಂತಿಕೆ ಎಂದರೆ ದುಬಾರಿ ಕಾರು ಖರೀದಿಸುವುದಲ್ಲ, ಬದಲಿಗೆ “ನಿಮಗೆ ಇಷ್ಟ ಬಂದಾಗ, ಇಷ್ಟ ಬಂದ ಕೆಲಸವನ್ನು, ಇಷ್ಟ ಬಂದವರ ಜೊತೆ ಮಾಡುವ ಸ್ವಾತಂತ್ರ್ಯ” ಹೊಂದಿರುವುದು. ಕೇವಲ ಹಣಕ್ಕಾಗಿ ಮಾತ್ರವೇ ಇಷ್ಟವಿಲ್ಲದ ಕೆಲಸದಲ್ಲಿ ಸಿಲುಕಿಕೊಳ್ಳದೆ, ನಿಮ್ಮ ಪ್ಯಾಶನ್ ಅಥವಾ ಆಸಕ್ತಿಯನ್ನು ಹಿಂಬಾಲಿಸುವ ಧೈರ್ಯ ನಿಮಗೆ ಹಣ ನೀಡಿದರೆ ಅದೇ ನಿಜವಾದ ಆರ್ಥಿಕ ಯಶಸ್ಸು.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ; ಸೋಲಾರ್ ಇಂಗಾಟ್ಸ್, ಸಿಲಿಕಾನ್ ವೇಫರ್ಸ್ ತಯಾರಿಸಲಿರುವ ಎಮ್ಮೀ ಗ್ರೂಪ್

ಭವಿಷ್ಯದ ಸುರಕ್ಷತೆ ಮತ್ತು ವಿಮೆ

ನಿಮ್ಮ ನಿವೃತ್ತಿ ಜೀವನಕ್ಕೆ (Retirement) ಬೇಕಾದ ನಿಧಿ ಸಿದ್ಧವಿರುವುದು, ಕುಟುಂಬಕ್ಕೆ ಸೂಕ್ತವಾದ ಜೀವವಿಮೆ (Term Insurance) ಮತ್ತು ಆರೋಗ್ಯ ವಿಮೆ (Health Insurance) ಇರುವುದು ಆರ್ಥಿಕ ಯಶಸ್ಸಿನ ಪ್ರಮುಖ ಲಕ್ಷಣ. ನಾಳೆ ಏನಾದರೂ ಅನಾಹುತ ಸಂಭವಿಸಿದರೂ ಕುಟುಂಬವು ಆರ್ಥಿಕವಾಗಿ ಬೀದಿಗೆ ಬೀಳುವುದಿಲ್ಲ ಎಂಬ ಭರವಸೆ ಇರುವುದೇ ನಿಜವಾದ ಯಶಸ್ಸು.

ಸಮಾಜಕ್ಕೆ ತೋರಿಸಿಕೊಳ್ಳಲು ಮಾಡುವ ಖರ್ಚು ನಿಮ್ಮನ್ನು ಒಳಗಿನಿಂದ ಟೊಳ್ಳು ಮಾಡುತ್ತದೆ. ಕಾರು, ಬಂಗಲೆಗಳು ಕೇವಲ ‘ಶ್ರೀಮಂತವಾಗಿ ಕಾಣುವ’ (Looking Rich) ಸಾಧನಗಳಷ್ಟೇ. ಆದರೆ ಸಾಲವಿಲ್ಲದ ನೆಮ್ಮದಿ, ಹೂಡಿಕೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ನಿಮ್ಮನ್ನು ‘ನಿಜವಾಗಿಯೂ ಶ್ರೀಮಂತವಾಗಿ’ (Being Rich) ಇಡುತ್ತವೆ. ನಿಮ್ಮ ಹಣದ ಮೇಲಿನ ನಿಯಂತ್ರಣ ನಿಮ್ಮ ಕೈಯಲ್ಲಿದ್ದರೆ, ನೀವು ಯಶಸ್ವಿಗಳೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link