ಎಸ್.ಎನ್.ಸುಬ್ಬಾರೆಡ್ಡಿ, ಸಿ.ಮುನಿರಾಜುImage Credit source: tv9 kannada
ಬೆಂಗಳೂರು, ಫೆಬ್ರವರಿ 16: ಬಾಗೇಪಲ್ಲಿ ಶಾಸಕ ಸ್ಥಾನದಿಂದ ಎಸ್.ಎನ್. ಸುಬ್ಬಾರೆಡ್ಡಿ (Subba Reddy) ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ನನಗೆ ಖುಷಿಯಿದೆ, ನ್ಯಾಯ ಸಿಕ್ಕಿದೆ. ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸಾವಿರಾರು ಕೋಟಿ ರೂ ಹಗರಣವಿದೆ. ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ತೀರ್ಪು ಬಂದಿದೆ. ಈ ತೀರ್ಪಿನಿಂದ ನ್ಯಾಯಾಲಯದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದು ದೂರುದಾರ, ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಹೇಳಿದ್ದಾರೆ.
ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ಸಿ. ಮುನಿರಾಜು ವಾಗ್ದಾಳಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು, ತಪ್ಪು ಮಾಹಿತಿ ಕೊಟ್ಟು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ವಂಚನೆ ಮಾಡಿದ್ದನ್ನು ಅರ್ಜಿ ಸಲ್ಲಿಸಿದ್ದೆವು. ಜನರಿಗೆ ಮೋಸ ಮತ್ತು ಸರ್ಕಾರಕ್ಕೆ ವಂಚನೆ ಮಾಡಿರುವುದರಿಂದ ಅವರು ಇಂದು ವಜಾ ಆಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ MLAಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
2023ರ ಅಫಿಡವಿಟ್ನಲ್ಲಿ ಹಿಂದಿನ ಅಫಿಡವಿಟ್ ಅನ್ನೇ ಹಾಗೆ ತಂದು ಹಾಕಿದ್ದರು. 9 ಜಿಎಸ್ಟಿ ಇದ್ದರೂ ಒಂದೇ ಜಿಎಸ್ಟಿ ತೋರಿಸಿದ್ದಾರೆ. ಆ ಮೂಲಕ ಜಿಎಸ್ಟಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ವಾಸದ ಮನೆ, ಕಮರ್ಷಿಯಲ್ ಕಟ್ಟಡ, ಬಾರ್ಗಳ ತೆರಿಗೆಯನ್ನು ನಾಲ್ಕೈದು ವರ್ಷಗಳಿಂದ ಬಿಬಿಎಂಪಿಗೆ ಕಟ್ಟಿರಲಿಲ್ಲ. ಹಿಂದೊಮ್ಮೆ 100 ಕೋಟಿ ರೂ ಜಿಎಸ್ಟಿ ಇದ್ದರೂ ಅದನ್ನು 25 ಕೋಟಿಗೆ ಆದೇಶ ಮಾಡಿಸಿಕೊಂಡು ಬೋಗಸ್ ಮಾಡಿಸಿಕೊಂಡಿದ್ದರಂತೆ. ಅವರ ಆಸ್ತಿಗಳನ್ನು ಮುಚ್ಚಿಟ್ಟಿದ್ದರು ಎಂದಿದ್ದಾರೆ.
ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಟ್ಟಿದ್ದಾರೆ
ಪುತ್ರಿಯ ಹೆಸರಿನಲ್ಲಿರುವ ಜಮೀನು ವಿವರ ತೋರಿಸಿರಲಿಲ್ಲ. ಪತ್ನಿಯ ಹೆಸರಿನಲ್ಲಿ ಜಮೀನು ಮತ್ತು ಕಂಪನಿ ಇದ್ದರೂ ತೋರಿಸಿರಲಿಲ್ಲ. ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ 23 ಲಕ್ಷ ರೂ. ದುಡ್ಡು ಕೊಟ್ಟಿದ್ದು ತೋರಿಸಿರಲಿಲ್ಲ. ವೈ.ಎ. ನಾರಾಯಣಸ್ವಾಮಿ ಅವರಿಗೂ 28 ಲಕ್ಷ ರೂ ದುಡ್ಡು ಕೊಟ್ಟಿದ್ದು ತೋರಿಸಿಕೊಂಡಿಲ್ಲ. ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಟ್ಟಿದ್ದಾರೆ. ಸಣ್ಣಪುಟ್ಟ ತಪ್ಪಾಗಿದೆ ಎಂದು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ ಎಂದರು.
ಬೇನಾಮಿ ಆಸ್ತಿಗಳನ್ನು ತೆಗೆದುಕೊಂಡು ಎಂ.ಬಿ. ಪಾಟೀಲ್ ಹತ್ತಿರ ಕುಳಿತುಕೊಂಡು ಕಡಿಮೆ ಹಣಕ್ಕೆ ಫಿಕ್ಸ್ ಮಾಡಿಕೊಂಡಿದ್ದಾರೆ. ಸಾವಿರಾರು ರೂ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ನನ್ನನ್ನು ವಿಜೇತ ಎಂದು ಘೋಷಣೆ ಮಾಡಲು ನಾವು ಕೇಳಿದ್ದೆವು. ಕಾನೂನಿನಲ್ಲಿ ಅವಕಾಶ ಇದ್ದರೂ ನ್ಯಾಯಾಧೀಶರು ಅದನ್ನು ಮಾನ್ಯ ಮಾಡಿಲ್ಲ. ನಮ್ಮ ವಕೀಲರು ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು. ಉಪಚುನಾವಣೆ ಎದುರಾದರೆ ನಾನು ರೆಡಿ ಇದ್ದೇನೆ, ಆದರೆ ಅದು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿ. ಮುನಿರಾಜು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ಕಿಡಿ
ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ವಿಚಾರವಾಗಿ ಎಕ್ಸ್ ಖಾತೆ ಮೂಲಕ ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟ್ ಚೋರಿ ಕಹಾ ಹೈ? ಕಾಂಗ್ರೆಸ್ ಪಾರ್ಟಿ ಮೇ ಹೈ! ರಾಹುಲ್ ಗಾಂಧಿ ಅವರು ಈಗ ಬಾಗೇಪಲ್ಲಿಗೆ ಬಂದು ವೋಟ್ ಚೋರಿ, ಎಲೆಕ್ಷನ್ ಚೋರಿ ವಿರುದ್ಧ ಪ್ರತಿಭಟನೆ ಮಾಡ್ತಾರಾ? ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮಕ್ಕೆ ಯಾರಾದರೂ ಪಿತಾಮಹ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಪೂರ್ವಜರು ಎಂದು ವಾಗ್ದಾಳಿ ಮಾಡಿದ್ದಾರೆ.
ಹಿರಿಯ ವಕೀಲ ನಳೀನಿ ಮಾಯಗೌಡ ಹೇಳಿದ್ದಿಷ್ಟು
ಇನ್ನು ಟಿವಿ9ಗೆ ಹಿರಿಯ ವಕೀಲ ನಳೀನಿ ಮಾಯಗೌಡ ಹೇಳಿಕೆ ನೀಡಿದ್ದು, ಸುಬ್ಬಾರೆಡ್ಡಿ ಅವರು ಪ್ರಾಪರ್ಟಿ ಡಿಸ್ಕ್ಲೋಸ್ ಮಾಡಿರಲಿಲ್ಲ. ಜಿಎಸ್ಟಿ ಫೈಲ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸುಬ್ಬಾರೆಡ್ಡಿ ಅವರನ್ನ ಹೈಕೋರ್ಟ್ ಅಸಿಂಧು ಮಾಡಿದೆ. ಇದರ ಜೊತೆ ನನ್ನನ್ನ ಶಾಸಕನಾಗಿ ಘೋಷಣೆ ಮಾಡಿ ಎಂದು ಮುನಿರಾಜು ಅವರು ಕೇಳಿದರು. ಈಗ ಎರಡೂವರೆ ವರ್ಷ ವಾದ ಮಾಡಿ ಕೋರ್ಟ್ ಅಸಿಂಧು ಮಾಡಿದೆ. ಶಾಸಕರನ್ನ ಅನರ್ಹ ಮಾಡಿದೆ, ಈಗ ಅವರು ಶಾಸಕರು ಅಲ್ಲ. ಒಂದು ವೇಳೆ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ಗೆ ಹೋದರೆ ಹೈಕೋರ್ಟ್ ಆದೇಶ ಸ್ಟೇ ಆಗಬಹುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Bengaluru ED Raid: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳು ಸೇರಿ ಬೆಂಗಳೂರಿನ 5 ಕಡೆ ಇಡಿ ದಾಳಿ
ಎರಡು ಕೋಟಿ ರೂ.ಯಷ್ಟು ತೆರಿಗೆ ಕಟ್ಟಿಲ್ಲ, ಶಾಸಕರು ಆಗಿರುವವರೇ ಟ್ಯಾಕ್ಸ್ ಕಟ್ಟಿಲ್ಲ ಎಂದು ವಾದ ಮಾಡಿದಿದ್ದೇವೆ. ಹೀಗಾಗಿ ಇವರನ್ನ ಮುಂದುವರಿಯುವುದಕ್ಕೆ ಬಿಡಬಾರದು ಎಂದು ವಾದಿಸಿದ್ದೇವೆ. ಸುಪ್ರೀಂ ಕೋರ್ಟ್ನವರು ಕೂಡ ನಮ್ಮ ವಾದಕ್ಕೆ ಅವರು ತೀರ್ಪು ಕೊಡಬಹುದು. ಇಲ್ಲಂದರೆ ಹೊಸ ಚುನಾವಣೆಗೆ ಹೋಗಬಹುದು. ಮುನಿರಾಜು ಗೆಲುವು ಅಂತ ಕೋರ್ಟ್ ಹೇಳಿಲ್ಲ, ಇದಕ್ಕೆ ಕಾರಣವೂ ಕೊಟ್ಟಿಲ್ಲ. ಎರಡನೇ ಅತೀ ಹೆಚ್ಚು ಮತ ತೆಗೆದುಕೊಂಡಿದ್ಧು ಮುನಿರಾಜು ಅವರು. ಅವರು ತೀರ್ಮಾನ ಮಾಡಿದರೆ ಸುಪ್ರೀಂ ಕೋರ್ಟ್ಗೆ ಹೋಗಬಹುದು. ಗೆಜೆಟ್ ನೋಟಿಫಿಕೇಶನ್ ಆದರೆ ಅನರ್ಹ ಎಂದು ಆದೇಶ ಆಗುತ್ತದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
