Category Archives: Blog

Your blog category

ಶರ್ಮಿಳಾ ಮಾಂಡ್ರೆ ಮದುವೆ ಸುದ್ದಿ ಕೇಳಿ ಹಾರ್ಟ್​ ಬ್ರೇಕ್ ಎಮೋಜಿ ಹಾಕಿದ ಪವನ್ ಕುಮಾರ್ – Kannada News | Pawan Kumar’s Viral Reel on Sharmiela Mandre’s Engagement: Gaalipata 2 Connection

ಬಹುಭಾಷಾ ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಮಿಳಿನ ಖ್ಯಾತ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಮುಂದಿನ ವಾರ ಶರ್ಮಿಳಾ ಅವರ ನಿಶ್ಚಿತಾರ್ಥ ನೆರವೇರಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ, ಈ ಸಂತಸದ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಪ್ರಖ್ಯಾತ ನಿರ್ದೇಶಕ, ನಟ ಪವನ್ ಕುಮಾರ್ ಅವರಿಗೆ ‘ಹಾರ್ಟ್ ಬ್ರೇಕ್’ ಆಗಿದೆ.
ಹೌದು, ಶರ್ಮಿಳಾ ಮಾಂಡ್ರೆ ಅವರ ಮದುವೆ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಪವನ್ ಕುಮಾರ್ ತಮ್ಮದೇ ಶೈಲಿಯಲ್ಲಿ ತಮಾಷೆಯ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಏನಿದು ‘ಗಾಳಿಪಟ 2’ ಕನೆಕ್ಷನ್?

ನಿರ್ದೇಶಕ ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಸಿನಿಮಾದಲ್ಲಿ ಪವನ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಾಗಿ ನಟಿಸಿದ್ದರು. ಚಿತ್ರದಲ್ಲಿ ಶರ್ಮಿಳಾ ಅವರನ್ನು ಪವನ್ ಜೀವಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ, ಶರ್ಮಿಳಾ ಬೇರೆಯವರನ್ನು ಮದುವೆಯಾಗಿ ಪವನ್ ಅವರ ಹೃದಯ ಒಡೆಯುತ್ತಾರೆ. ಇದೀಗ ನಿಜ ಜೀವನದಲ್ಲೂ ಶರ್ಮಿಳಾ ತಮಿಳು ನಿರ್ಮಾಪಕನ ಕೈ ಹಿಡಿಯುತ್ತಿರುವುದಕ್ಕೆ, ಪವನ್ ಕುಮಾರ್ ಸಿನಿಮಾ ಶೈಲಿಯಲ್ಲೇ ರೀಲ್ಸ್ ಮಾಡಿ ಕಾಲೆಳೆದಿದ್ದಾರೆ.

ವೈರಲ್ ವಿಡಿಯೋದಲ್ಲೇನಿದೆ?

ವಿಡಿಯೋದ ಆರಂಭದಲ್ಲಿ ಶರ್ಮಿಳಾ ಮಾಂಡ್ರೆ ಸೋಫಾ ಮೇಲೆ ಕೂತು ಪುಸ್ತಕ ಓದುತ್ತಿರುತ್ತಾರೆ. ಹಿನ್ನೆಲೆಯಲ್ಲಿ ‘ಗಾಳಿಪಟ 2’ ಚಿತ್ರದ ಹಾಡು ಪ್ಲೇ ಆಗುತ್ತಿರುತ್ತದೆ. ಕ್ಯಾಮೆರಾ ತಿರುಗುತ್ತಿದ್ದಂತೆ ಅಲ್ಲಿ ಪವನ್ ಕುಮಾರ್ ಹತಾಶರಾಗಿ ನಿಂತಿರುತ್ತಾರೆ ಮತ್ತು ಅವರ ಎದೆಯ ಮೇಲೆ ಒಡೆದ ಹೃದಯದ ಎಮೋಜಿ ಮೂಡುತ್ತದೆ. ನಂತರ ಶರ್ಮಿಳಾ ಹಾಗೂ ಸುಧನ್ ಸುಂದರಂ ಅವರ ನಿಶ್ಚಿತಾರ್ಥದ ಸುದ್ದಿ ಕಾಣಿಸಿಕೊಳ್ಳುತ್ತದೆ. ಕೊನೆಯಲ್ಲಿ ಪವನ್, ‘ನಿಮ್ಮ ನಿರ್ಧಾರಕ್ಕೆ ನನ್ನ ಸಂತೋಷವಿದೆ ಶಮ್ಮಿ ಮ್ಯಾಮ್’ ಎನ್ನುತ್ತಾ ಅಳುತ್ತಿರುವ ಫನ್ನಿ ಮೀಮ್ ಒಂದನ್ನು ಸೇರಿಸಿ ವಿಡಿಯೋ ಮುಗಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗುತ್ತಿದ್ದಾರಾ ಶರ್ಮಿಳಾ ಮಾಂಡ್ರೆ, ವರ ಯಾರು ಗೊತ್ತೆ?

ರೀಲ್ ಲೈಫ್ ಕಥೆ ರಿಯಲ್ ಲೈಫ್‌ನಲ್ಲೂ ಮರುಕಳಿಸಿದೆ ಎಂದು ಪವನ್ ಕುಮಾರ್ ಮಾಡಿರುವ ಈ ಕ್ರಿಯೇಟಿವ್ ಪೋಸ್ಟ್‌ಗೆ ನೆಟ್ಟಿಗರು ಹಾಗೂ ಚಿತ್ರರಂಗದ ಗಣ್ಯರು ಬಿದ್ದು ಬಿದ್ದು ನಗುತ್ತಿದ್ದಾರೆ. ‘ನಿಮ್ಮ ಪ್ರೀತಿ ಸಿನಿಮಾದಲ್ಲೂ ಸಿಗಲಿಲ್ಲ, ನಿಜ ಜೀವನದಲ್ಲೂ ಸಿಗಲಿಲ್ಲವೇ?’ ಎಂದು ನೆಟ್ಟಿಗರು ಪವನ್ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋಗೆ ‘ಓಹ್ ಮೈ ಗಾಡ್’ ಅಂತ ಶರ್ಮಿಳಾ ಕಮೆಂಟ್ ಹಾಕಿದ್ದಾರೆ. ಇದಕ್ಕೆ ಉತ್ತರಿಸಿರೋ ಪವನ್, ‘ಶರ್ಮಿಳಾ ಮಾಂಡ್ರೆ ಎಂಥಾ ಗೆಳತಿ ಅಂದ್ರೆ, ಯುಗಯುಗಗಳೇ ಕಳೆದ್ರೂ ನನಗೆ ಸಿಗಲ್ಲ. ಆದರೆ, ನಾವು ಯಾವಾಗ ಮಾತನಾಡಿದರೂ ನಮ್ಮ ನಡುವೆ ಅಷ್ಟೇ ಸೂಪರ್ ಕನೆಕ್ಷನ್ ಇರುತ್ತೆ. ಇನ್ನು ನಮ್ಮಿಬ್ಬರ ಮಧ್ಯೆ ಇರೋ ಆ ಚುಚ್ಚುವ, ನೋವುಂಟುಮಾಡುವ,ಕೊಂಕು ಮತ್ತು ರೇಗಿಸುವ ಡಾರ್ಕ್ ಹ್ಯೂಮರ್ ಅಂದ್ರೆ ನಮಗೆ ಸಖತ್ ಇಷ್ಟ. ಕಂಗ್ರಾಜುಲೇಷನ್ಸ್ ಕಣೋ.. ನಾನೇ ಮುಂದೆ ನಿಂತು ಖುಷಿಯಿಂದ ಕನ್ಯಾದಾನ ಮಾಡ್ತೀನಿ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಣ್ಣಿಗೆ ಸನ್​ಗ್ಲಾಸ್… ಆರ್ಚರ್ ಎದುರು ಫಿಲಿಪ್ಸ್ ಮಾಸ್!

ಲಂಡನ್‌ನ ಓವಲ್ ಮೈದಾನದಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ಜೋಫ್ರಾ ಆರ್ಚರ್ ನಡುವೆ ನಡೆದ ರೋಚಕ ಹಣಾಹಣಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಝಿಲೆಂಡ್ ತಂಡದ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಿ, ಇಂಗ್ಲೆಂಡ್‌ನ ಅತ್ಯಂತ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬೌನ್ಸರ್‌ಗಳನ್ನು ಎದುರಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್​ಗ್ಲಾಸ್ ಧರಿಸಲು ಕಾರಣವೇನು?

ಪಂದ್ಯದ 67ನೇ ಓವರ್​ ವೇಳೆ ಓವಲ್ ಮೈದಾನದ ಸೈಟ್‌ಸ್ಕ್ರೀನ್‌ನಿಂದ ಸೂರ್ಯನ ಬೆಳಕು ತೀವ್ರವಾಗಿ ಕಣ್ಣಿಗೆ ಬಡಿಯುತ್ತಿದ್ದ ಕಾರಣ, ಚೆಂಡನ್ನು ಸ್ಪಷ್ಟವಾಗಿ ಗುರುತಿಸಲು ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಲು ನಿರ್ಧರಿಸಿದರು.

ಫಿಲಿಪ್ಸ್ ಹೆಲ್ಮೆಟ್ ಒಳಗಡೆ ದೊಡ್ಡ ಕನ್ನಡಕ ಧರಿಸಿ ಕ್ರೀಸ್‌ನಲ್ಲಿ ನಿಂತಾಗ, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಲೇವಡಿ ಮಾಡಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇದನ್ನು ಫಿಲಿಪ್ಸ್ ಅವರ ಅಪ್ರತಿಮ “ಸ್ವಾಗ್” ಮತ್ತು ಧೈರ್ಯ ಎಂದು ಬಣ್ಣಿಸಿದ್ದಾರೆ.

ಜೋಫ್ರಾ ಆರ್ಚರ್ vs ಗ್ಲೆನ್ ಫಿಲಿಪ್ಸ್:

ವೇಗವಾಗಿ ರನ್ ಗಳಿಸುತ್ತಿದ್ದ ಗ್ಲೆನ್ ಫಿಲಿಪ್ಸ್ (23 ಎಸೆತಗಳಲ್ಲಿ 33 ರನ್) ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ನಾಯಕ ಜೋ ರೂಟ್, ಜೋಫ್ರಾ ಆರ್ಚರ್ ಅವರನ್ನು ಮರಳಿ ಬೌಲಿಂಗ್‌ಗೆ ತಂದರು. ಆರ್ಚರ್ ಸನ್‌ಗ್ಲಾಸ್ ಧರಿಸಿದ್ದ ಫಿಲಿಪ್ಸ್ ವಿರುದ್ಧ ಸತತ 8 ಓವರ್‌ಗಳ ಕಾಲ ಕೇವಲ ಶಾರ್ಟ್-ಪಿಚ್ ಎಸೆತಗಳ ಮೂಲಕ ದಾಳಿ ನಡೆಸಿದರು. ಫಿಲಿಪ್ಸ್ ಸನ್‌ಗ್ಲಾಸ್ ಧರಿಸಿದ ತಕ್ಷಣ ಎದುರಿಸಿದ ಆರ್ಚರ್ ಅವರ ಮೊದಲ ಬೌನ್ಸರ್ ನೇರವಾಗಿ ಅವರ ಹೆಗಲಿಗೆ ಬಡಿಯಿತು.

ಚಹಾ ವಿರಾಮದ ನಂತರ ಆರ್ಚರ್ ಎಸೆದ 40 ಎಸೆತಗಳಲ್ಲಿ 33 ಎಸೆತಗಳು ಶಾರ್ಟ್-ಪಿಚ್ ಆಗಿದ್ದವು. ಸುಮಾರು 138 ಕಿ.ಮೀ ವೇಗದಲ್ಲಿ ಬಂದ ಕುತ್ತಿಗೆ ಮಟ್ಟದ ಬೌನ್ಸರ್ ಒಂದರಿಂದ ತಪ್ಪಿಸಿಕೊಳ್ಳಲು ಫಿಲಿಪ್ಸ್ ಕ್ರೀಸ್‌ನಲ್ಲಿ ಮಲಗಬೇಕಾಯಿತು.

ಆರ್ಚರ್ ಎಸೆದ ಈ ಭೀಕರ ಬೌನ್ಸರ್‌ನಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದ ಫಿಲಿಪ್ಸ್, ಹಾಗೆಯೇ ಮಲಗಿ ನ್ಯೂಝಿಲೆಂಡ್ ಡ್ರೆಸ್ಸಿಂಗ್ ರೂಮ್ ಕಡೆಗೆ ‘ಥಂಬ್ಸ್-ಅಪ್’ ತೋರಿಸಿದರು. ಇದನ್ನು ಕಂಡು ಸಹ ಆಟಗಾರ ಡೆರಿಲ್ ಮಿಚೆಲ್ ಸೇರಿದಂತೆ ಇಡೀ ಕಿವೀಸ್ ಬಳಗ ನಗೆಗಡಲಲ್ಲಿ ತೇಲಿದರು.

ಇದಾಗ್ಯೂ ಸನ್​ಗ್ಲಾಸ್ ಧರಿಸಿಯೇ ಏಕಾಂಗಿ ಹೋರಾಟ ಮುಂದುವರೆಸಿರುವ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟದ ಅಂತ್ಯಕ್ಕೆ 74 ಎಸೆತಗಳಲ್ಲಿ 9 ಫೋರ್​ ಬಾರಿಸಿ ಅಜೇಯ 49 ರನ್ ಕಲೆಹಾಕಿದ್ದಾರೆ. ಇತ್ತ ಫಿಲಿಪ್ಸ್ ಅವರ ಈ ಕೆಚ್ಚೆದೆಯ ಪ್ರದರ್ಶನದ ಫಲವಾಗಿ ನ್ಯೂಝಿಲೆಂಡ್ ತಂಡವು ಮೊದಲ ದಿನದಲ್ಲೇ ಆಲೌಟ್ ಆಗುವುದರಿಂದ ಬಚಾವಾಗಿದೆ. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್​ನಲ್ಲಿ 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದೆ.

 

 

Source link

ಶಿವಸೇನೆಯಲ್ಲಿ ಮತ್ತೊಂದು ಬಿರುಕು? ಆಪರೇಷನ್ ಟೈಗರ್ ವದಂತಿ ಬೆನ್ನಲ್ಲೇ ಉದ್ಧವ್ ಠಾಕ್ರೆ ತುರ್ತು ಸಭೆ – Kannada News | Shiv Sena UBT Split Uddhav Thackeray Calls Urgent Meet Amidst ‘Operation Tiger’ Rumors

ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಪಕ್ಷಾಂತರದ ಬಿರುಗಾಳಿ ಎದ್ದಿದೆ. ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೆ ಸೀಳು ಉಂಟಾಗಬಹುದು ಎಂಬ ಊಹಾಪೋಹಗಳ ನಡುವೆ, ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray)ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯಲ್ಲಿ ಪಕ್ಷದ ಸಂಸದರ ನಿರ್ಣಾಯಕ ಸಭೆ ಕರೆದಿದ್ದಾರೆ. ಪಕ್ಷವನ್ನು ಒಗ್ಗಟ್ಟಾಗಿಡಲು ಮತ್ತು ಸಂಸದರು ಕೈಕೊಡುವುದನ್ನು ತಪ್ಪಿಸಲು ಈ ಸಭೆಯಲ್ಲಿ ಎಲ್ಲಾ ಲೋಕಸಭಾ ಸದಸ್ಯರಿಗೂ ಹಾಜರಿರಲು ವಿಪ್ ಜಾರಿ ಮಾಡಲಾಗಿದೆ.

ಯುಬಿಟಿ ಪಕ್ಷದ ಒಟ್ಟು 9 ಲೋಕಸಭಾ ಸಂಸದರಲ್ಲಿ 6 ಸಂಸದರು ತಮ್ಮ ಕಡೆ ಇದ್ದಾರೆ ಎಂದು ಬಂಡಾಯ ನಾಯಕರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದೆ. ಈ ಬಂಡಾಯ ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ಸಂಸದರನ್ನು ಸೆಳೆಯಲು ತಲಾ 50 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂದು ಉದ್ಧವ್ ಠಾಕ್ರೆ ಆಪ್ತ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. ಶಿವಸೇನೆ (ಯುಬಿಟಿ) ಸಂಸದ ಅನಿಲ್ ದೇಸಾಯಿ ಅವರ ಪ್ರಕಾರ, ಬಂಡಾಯಗಾರರು ಕಾನೂನಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ.
ಕೇವಲ 3ನೇ 2ರಷ್ಟು (6 ಸಂಸದರು) ಬಹುಮತ ಇದೆ ಎಂದ ತಕ್ಷಣ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಮೂಲ ಪಕ್ಷ ನಿರ್ಧಾರ ಮಾಡಿದರೆ ಮಾತ್ರ ವಿಲೀನ ಸಾಧ್ಯ. ಹಾಗಾಗಿ ಬಂಡಾಯಗಾರರ ಸಂಖ್ಯೆ ಎಷ್ಟೇ ಇದ್ದರೂ ಸ್ಪೀಕರ್ ನಿಯಮಗಳ ಪ್ರಕಾರ ಅವರನ್ನು ಮಾನ್ಯ ಮಾಡಲು ಬರುವುದಿಲ್ಲ.

ಮತ್ತಷ್ಟು ಓದಿ:ನಿಯತ್ತಿಲ್ಲದವರು ಪಕ್ಷ ಬಿಟ್ಟು ಹೋಗಬಹುದು; ‘ಆಪರೇಷನ್ ಟೈಗರ್’ ಬೆನ್ನಲ್ಲೇ ಸಂಸದರಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ

ಸದ್ಯಕ್ಕೆ ಚೆಂಡು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಂಗಳದಲ್ಲಿದೆ. ಯಾವುದೇ ಕಾನೂನುಬಾಹಿರ ಪಕ್ಷಾಂತರಕ್ಕೆ ಅವಕಾಶ ನೀಡದಂತೆ ಉದ್ಧವ್ ಬಣ ಈಗಾಗಲೇ ಸ್ಪೀಕರ್‌ಗೆ ಮನವಿ ಮಾಡಿದೆ. ಉದ್ಧವ್ ಕರೆದಿರುವ ಇಂದಿನ ಸಭೆಗೆ ಎಷ್ಟು ಜನ ಸಂಸದರು ಗೈರಾಗುತ್ತಾರೆ ಎಂಬುದರ ಮೇಲೆ ‘ಆಪರೇಷನ್ ಟೈಗರ್’ ಭವಿಷ್ಯ ನಿರ್ಧಾರವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾಸ್ಟೆಲ್ ವಿದ್ಯಾರ್ಥಿಗಳ ಪೋಷಕರೇ ಎಚ್ಚರ: ಸುಲಭ ಹಣ, ಮಜಾ ಉಡಾಯಿಸಲು ಬೈಕ್ ಕಳ್ಳತನಕ್ಕೆ ಇಳಿದ ಬಿಎ, ಬಿಕಾಂ ಸ್ಟೂಡೆಂಟ್ಸ್ – Kannada News | Raichur Police Busts Student Bike Theft Racket, Recovers 15 Stolen Motorcycles

ರಾಯಚೂರು, ಜೂ.18: ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ಬಿಟ್ಟು ಓದಿಸುತ್ತಿರುವ ಪೋಷಕರು ಒಮ್ಮೆ ಈ ಸ್ಟೋರಿ ಓದಲೇಬೇಕು. ರಾಯಚೂರಿನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸುಲಭವಾಗಿ ಹಣ ಗಳಿಸಿ ಮಜಾ ಉಡಾಯಿಸುವ ಹಪಾಹಪಿಗೆ ಬಿದ್ದ ಇಬ್ಬರು ಪದವಿ ವಿದ್ಯಾರ್ಥಿಗಳು ಸ್ಥಳೀಯ ಯುವಕನೊಂದಿಗೆ ಸೇರಿ ದೊಡ್ಡ ಮಟ್ಟದ ಬೈಕ್ ಕಳ್ಳತನದ ಜಾಲವನ್ನು ನಡೆಸುತ್ತಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ರಾಯಚೂರು ನಗರದ ನೇತಾಜಿನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಬರೋಬ್ಬರಿ 15 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ರಾಯಚೂರು ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸವಿದ್ದ ಬಿಎ (BA) ವಿದ್ಯಾರ್ಥಿ ಆಕಾಶ್, ಬಿಕಾಂ (B.Com) ವಿದ್ಯಾರ್ಥಿ ಕಾರ್ತಿಕ್ ಮತ್ತು ಸ್ಥಳೀಯ ಒಡನಾಡಿ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ. ನಾರಾಯಣ ಎಂಬ ವಿದ್ಯಾರ್ಥಿಯ ಪಲ್ಸರ್ ಬೈಕ್ ಮೇ 25 ರಂದು ಕಳ್ಳತನವಾಗಿತ್ತು. ಈ ಕುರಿತು ಆತ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಆಕಾಶ್ ಮತ್ತು ಗ್ಯಾಂಗ್ ನಾರಾಯಣನ ಪಲ್ಸರ್ ಬೈಕ್ ಕದ್ದು, ಅದರ ನಂಬರ್ ಪ್ಲೇಟ್ ಹಾಗೂ ಬಿಡಿಭಾಗಗಳನ್ನು ಸಂಪೂರ್ಣ ಮಾರ್ಪಾಡು (Modify) ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದರು.

ಕೆಲವು ದಿನಗಳ ನಂತರ, ನಾರಾಯಣನ ಮೊಬೈಲ್‌ಗೆ ಗೆಳೆಯರ ಮೂಲಕ “ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಮಾರಾಟಕ್ಕಿದೆ” ಎಂಬ ಜಾಹೀರಾತಿನ ಫೋಟೋವೊಂದು ಬಂದಿದೆ. ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ ನಾರಾಯಣ, ಅದು ಮಾರ್ಪಾಡಾಗಿದ್ದರೂ ತನ್ನದೇ ಹಳೆಯ ಬೈಕ್ ಎಂಬುದನ್ನು ಖಾತ್ರಿಪಡಿಸಿಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

ಮಾಹಿತಿ ಸಿಗುತ್ತಿದ್ದಂತೆ ನೇತಾಜಿನಗರ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಬೈಕ್ ಮಾರಾಟ ಮಾಡುವ ನೆಪದಲ್ಲಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಅವರ ಒಡನಾಡಿ ಲಾಕ್ ಆಗಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇವರು ರಾಯಚೂರು ಸುತ್ತಮುತ್ತಲಿನ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ನೆರೆಯ ತೆಲಂಗಾಣ ರಾಜ್ಯದಲ್ಲೂ ಬೈಕ್‌ಗಳನ್ನು ಕದ್ದು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಅವರಿಂದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಅವರ ವಿರೋಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ಸೋಲೊಪ್ಪಿಕೊಂಡಿದೆ ಎಂದ ಇರಾನ್ – Kannada News | US Iran Peace Deal Signed: 110 Day Conflict Ends, Iran Claims US Surrender

ಟೆಹ್ರಾನ್, ಜೂನ್ 18: ಅಮೆರಿಕ ಹಾಗೂ ಇರಾನ್ ನಡುವೆ 110 ದಿನಗಳ ಕಾಲ ನಡೆಯುತ್ತಿದ್ದ ಸಂಘರ್ಷ ಇದೀಗ ಅಧಿಕೃತವಾಗಿ ಅಂತ್ಯವಾಗಿದೆ. ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆಯನ್ನ ಒತ್ತಲಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಪ್ರತಿನಿಧಿ ಪೆಜಸ್ಕಿಯಾನ್ ಔಪಚಾರಿಕವಾಗಿ ಸಹಿ ಹಾಕಿದ್ದಾರೆ. ಇದು 14 ಅಂಶಗಳನ್ನೊಳಗೊಂಡ ಶಾಂತಿ ಒಪ್ಪಂದವಾಗಿದೆ.

ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯಲ್ಲಿ ಉಭಯ ನಾಯಕರು ಭಾಗಿಯಾಗಿದ್ದ ಸಂದರ್ಭದಲ್ಲಿಯೇ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ವೇದಿಕೆ ಸಿದ್ಧವಾಗಿದ್ದರೂ, ಒಂದು ದಿನ ಮೊದಲೇ ಸಹಿ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲೆಕ್ಟ್ರಾನಿಕ್ ಸಹಿಗಳ ಮೂಲಕ ಈ ಐತಿಹಾಸಿಕ ಒಪ್ಪಂದಕ್ಕೆ ಸಾಕ್ಷಿಯಾಗಿದೆ.

ಈ ಒಪ್ಪಂದದ ನಂತರ, ಅಮೆರಿಕ ಸೋಲೊಪ್ಪಿಕೊಂಡಿದೆ ಎಂದು ಇರಾನ್ ಹೇಳಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ನಂತಹ ವಿಶ್ವದ ಅಗ್ರ ಶಕ್ತಿಗಳನ್ನು ತಾವು ಮಿಲಿಟರಿ ಮಾರ್ಗದಲ್ಲೇ ಸೋಲಿಸಿದ್ದೇವೆ ಎಂದು ಇರಾನ್ ಪ್ರತಿಪಾದಿಸಿದೆ. “ಯುದ್ಧ ಘೋಷಿಸಿದ್ದೇ ಅಮೆರಿಕ, ಈಗ ಅದನ್ನು ಅಂತ್ಯಗೊಳಿಸುತ್ತಿರುವುದು ಕೂಡ ಅವರೇ” ಎಂದು ಇರಾನ್ ಸಂಸತ್ತಿನ ಸ್ಪೀಕರ್ ಗಲೀಬಾಫ್ ಲೇವಡಿ ಮಾಡಿದ್ದಾರೆ. ಈ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಹೊಸ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳಿಗೆ ಕಾರಣವಾಗುವ ನಿರೀಕ್ಷೆಯಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Traditional beliefs: ಪತಿ ಕೆಲಸಕ್ಕೆ ಮನೆಯಿಂದ ಹೊರಟ ತಕ್ಷಣ ಈ ತಪ್ಪು ಮಾಡಲೇಬೇಡಿ! ಕಾರಣ ಇಲ್ಲಿದೆ – Kannada News | Family Prosperity: What Wives Shouldn’t Do After Husband Leaves

ಜ್ಯೋತಿಷ್ಯ ಮತ್ತು ಜಾನಪದ ನಂಬಿಕೆImage Credit source: gemini ai

ಜ್ಯೋತಿಷ್ಯ ಮತ್ತು ಜಾನಪದ ನಂಬಿಕೆಗಳ ಪ್ರಕಾರ, ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕೆಲವು ಆಚರಣೆಗಳನ್ನು ಅನುಸರಿಸಬೇಕೆಂದು ಹಿರಿಯರು ಸೂಚಿಸುತ್ತಾರೆ. ಗಂಡಂದಿರು ಕೆಲಸ, ವ್ಯವಹಾರ ಅಥವಾ ಇತರ ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ಹೊರಬಂದ ತಕ್ಷಣ, ಹೆಂಡತಿಯರು ಕೆಲವು ಕೆಲಸಗಳನ್ನು ಮಾಡುವುದನ್ನು ತಡೆಯಬೇಕು ಎಂದು ನಂಬಲಾಗಿದೆ. ಇವು ವೈಜ್ಞಾನಿಕವಾಗಿ ಸಾಬೀತಾಗಿರುವ ನಿಯಮಗಳಲ್ಲದಿದ್ದರೂ, ಸಾಂಪ್ರದಾಯಿಕ ನಂಬಿಕೆಗಳಲ್ಲಿ ಇವುಗಳಿಗೆ ವಿಶೇಷ ಸ್ಥಾನವಿದೆ. ಅಂತಹ ನಂಬಿಕೆಗಳ ಪ್ರಕಾರ ಯಾವ ವಿಷಯಗಳನ್ನು ತಪ್ಪಿಸಬೇಕು ಎಂಬುದನ್ನು ವಿವರವಾಗಿ ಇಲ್ಲಿ ತಿಳಿದುಕೊಳ್ಳಿ.

ಮನೆಯನ್ನು ತಕ್ಷಣ ಗುಡಿಸುವುದು ಅಥವಾ ಒರೆಸುವುದು:

ಪತಿ ಕೆಲಸಕ್ಕೆ ಹೋದ ತಕ್ಷಣ ಮನೆಯನ್ನು ಗುಡಿಸುವುದು ಅಥವಾ ನೆಲ ಒರೆಸುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪತಿ ಹೊರಟ ತಕ್ಷಣ ಈ ಕೆಲಸಗಳನ್ನು ಮಾಡುವುದರಿಂದ ಮನೆಯಿಂದ ಸಕಾರಾತ್ಮಕ ಶಕ್ತಿಯು ಬರಿದಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಪತಿ ಹೋದ ತಕ್ಷಣ ಕಸ ಗುಡಿಸದೆ, ಸ್ವಲ್ಪ ಸಮಯ ಕಳೆದ ನಂತರವೇ ಈ ಕೆಲಸಗಳನ್ನು ಮಾಡಲು ಹಿರಿಯರು ಸೂಚಿಸುತ್ತಾರೆ.

ತಕ್ಷಣವೇ ಸ್ನಾನ ಮಾಡುವುದು:

ಕೆಲವು ಧರ್ಮಗ್ರಂಥಗಳು ಮತ್ತು ಹಿರಿಯರ ನಂಬಿಕೆಗಳ ಪ್ರಕಾರ, ಪತಿ ಯಾವುದೇ ಪ್ರಮುಖ ಕೆಲಸಕ್ಕೆ ಹೋದ ತಕ್ಷಣ ಹೆಂಡತಿ ಸ್ನಾನ ಮಾಡುವುದು ಸೂಕ್ತವಲ್ಲ. ಪತಿ ಮನೆಯಿಂದ ಹೊರಟ ತಕ್ಷಣವೇ ಸ್ನಾನ ಮಾಡುವುದರಿಂದ, ಅವರು ಹೋಗುತ್ತಿರುವ ಪ್ರಯಾಣದಲ್ಲಿ ಅಥವಾ ಕೈಗೆತ್ತಿಕೊಂಡ ಪ್ರಮುಖ ಕೆಲಸಗಳಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ ಎಂಬ ನಂಬಿಕೆ ಜಾನಪದದಲ್ಲಿದೆ.

ಕೂದಲು ಬಾಚುವುದು ಮತ್ತು ಉಗುರು ಕತ್ತರಿಸುವುದು:

ಜ್ಯೋತಿಷ್ಯ ನಂಬಿಕೆಗಳು ಸೂಚಿಸುವಂತೆ, ಪತಿ ಹೋದ ತಕ್ಷಣ ಕನ್ನಡಿಯ ಮುಂದೆ ಕುಳಿತು ಕೂದಲು ಬಾಚಿಕೊಳ್ಳುವುದನ್ನು ಅಥವಾ ಉಗುರು ಕತ್ತರಿಸುವುದನ್ನು ಮಾಡಬಾರದು. ಪತಿ ಹೊರಟ ತಕ್ಷಣ ಇಂತಹ ಕೆಲಸಗಳನ್ನು ಮಾಡುವುದರಿಂದ ರಾಹು ಮತ್ತು ಕೇತುವಿನ ಋಣಾತ್ಮಕ ಪರಿಣಾಮಗಳು ಹೆಚ್ಚಾಗುತ್ತವೆ ಮತ್ತು ಪತಿಯ ಉದ್ಯೋಗ ಅಥವಾ ವ್ಯವಹಾರದಲ್ಲಿ ಅಡೆತಡೆಗಳು ಉಂಟಾಗಬಹುದು ಎಂದು ನಂಬಲಾಗಿದೆ.

ಮೇಕಪ್ ಅಥವಾ ಆಭರಣಗಳನ್ನು ತಕ್ಷಣವೇ ತೆಗೆಯುವುದು:

ಕೆಲವು ಮಹಿಳೆಯರು ತಮ್ಮ ಪತಿ ಕಾರ್ಯಕ್ರಮ ನಿಮಿತ್ತ ಹೊರಗೆ ಹೋಗಿ ಬಂದ ನಂತರ ಅಥವಾ ತಾವು ಹೊರಗೆ ಹೋಗಿ ಬಂದ ತಕ್ಷಣ ತಮ್ಮ ಆಭರಣ ಮತ್ತು ಮೇಕಪ್ ಅನ್ನು ತೆಗೆಯುತ್ತಾರೆ. ಆದಾಗ್ಯೂ, ಜಾನಪದ ನಂಬಿಕೆಗಳ ಪ್ರಕಾರ, ಪತಿ ಸುರಕ್ಷಿತವಾಗಿ ತಾನು ಹೋಗಬೇಕಾದ ಗಮ್ಯಸ್ಥಾನವನ್ನು ತಲುಪುವವರೆಗೆ ಹೆಂಡತಿ ಆಭರಣಗಳನ್ನು ಅಥವಾ ಮಂಗಲ ದ್ರವ್ಯಗಳನ್ನು ತೆಗೆಯದಿರುವುದು ಶುಭವೆಂದು ಪರಿಗಣಿಸಲಾಗಿದೆ.

ಪಾತ್ರೆಗಳನ್ನು ತೊಳೆಯುವುದು ಮತ್ತು ಅಡುಗೆಮನೆ ಸ್ವಚ್ಛಗೊಳಿಸುವುದು:

ಕೆಲವು ಸಂಪ್ರದಾಯಗಳು ಅಡುಗೆಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಅಥವಾ ಪತಿ ಹೋದ ತಕ್ಷಣ ಸಿಂಕ್‌ನಲ್ಲಿರುವ ಪಾತ್ರೆಗಳನ್ನು ತೊಳೆಯುವುದನ್ನು ತಪ್ಪಿಸಬೇಕಾದ ಕೆಲಸ ಎಂದು ಹೇಳುತ್ತವೆ. ಅನ್ನಪೂರ್ಣ ದೇವಿಯ ಆಶೀರ್ವಾದ ಮನೆಯಲ್ಲಿ ಸದಾ ಇರಬೇಕೆಂದರೆ, ಪತಿ ಹೋದ ತಕ್ಷಣ ಅಡುಗೆಮನೆ ತೊಳೆಯದೆ ಸ್ವಲ್ಪ ಸಮಯ ಕಾಯಬೇಕು ಎಂದು ಹಿರಿಯರು ನಂಬುತ್ತಾರೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಉಪ್ಪು ಅಥವಾ ಚೂಪಾದ ವಸ್ತುಗಳನ್ನು ಸಾಲವಾಗಿ ನೀಡುವುದು:

ಪತಿ ಮನೆಯಿಂದ ಹೊರಬಂದ ತಕ್ಷಣ ನೆರೆಹೊರೆಯವರಿಗೆ ಉಪ್ಪು, ಸೂಜಿ, ಕತ್ತರಿ ಮತ್ತು ಚಾಕುಗಳಂತಹ ವಸ್ತುಗಳನ್ನು ಸಾಲವಾಗಿ ನೀಡಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಕುಟುಂಬದ ಆರ್ಥಿಕ ಯೋಗಕ್ಷೇಮ ಕಡಿಮೆಯಾಗುತ್ತದೆ, ಲಕ್ಷ್ಮಿ ದೇವಿಯು ಮನೆಯಿಂದ ಹೊರನಡೆಯುತ್ತಾಳೆ ಮತ್ತು ಪತಿಗೆ ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವಾಗಬಹುದು ಎಂಬ ಬಲವಾದ ನಂಬಿಕೆಯಿದೆ.

ಮನೆಯ ಮುಂದೆ ನೀರು ಸುರಿಯುವುದು ಮತ್ತು ಖಾಲಿ ಪಾತ್ರೆಗಳನ್ನು ಇಡುವುದು:

ಪತಿ ಹೋದ ತಕ್ಷಣ ಮನೆಯ ಮುಖ್ಯ ದ್ವಾರದ ಮುಂದೆ ನೀರು ಸುರಿಯುವುದು ಅಶುಭ ಸಂಕೇತವೆಂದು ಪರಿಗಣಿಸಲಾಗಿದೆ. ಅದರಲ್ಲೂ ಮನೆಯಲ್ಲಿ ನೀರಿನ ಬಕೆಟ್, ಮಡಿಕೆಗಳು ಅಥವಾ ಯಾವುದೇ ಪಾತ್ರೆಗಳನ್ನು ಸಂಪೂರ್ಣವಾಗಿ ಖಾಲಿ ಇಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ಅವು ಖಾಲಿಯಾಗಿದ್ದರೆ, ಜಾನಪದ ನಂಬಿಕೆಯ ಪ್ರಕಾರ ಅವುಗಳನ್ನು ನೇರವಾಗಿ ಇಡದೆ ತಲೆಕೆಳಗಾಗಿ ಇಡುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ – Kannada News | Lionel Messi breaks Cristiano Ronaldo’s World Cup hat trick record

ವಿಶ್ವ ಫುಟ್‌ಬಾಲ್‌ನ ಇಬ್ಬರು ಧ್ರುವತಾರೆಗಳಾದ ಲಿಯೋನೆಲ್ ಮೆಸ್ಸಿ (Lionel Messi) ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ನಡುವಿನ ಪೈಪೋಟಿ ಈ ಬಾರಿಯ ವಿಶ್ವಕಪ್​ನಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ ಮೊದಲ ಪಂದ್ಯದಲ್ಲೇ ಮೆಸ್ಸಿ,  ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಲ್ಲಿದ್ದ ಐತಿಹಾಸಿಕ ವಿಶ್ವಕಪ್ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ. (PC: gettyimages)

Source link

ನೀರಿನ ಬಿಲ್ ಕೇಳೋ ಅಧಿಕಾರಿಗಳು ಈಗ ಎಲ್ಲಿದ್ದಾರೆ?; ಮಂಗಳೂರಿನಲ್ಲಿ ಕಲುಷಿತ ನೀರು ಕುಡಿದು 100ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ – Kannada News | Lab Confirms Unsafe Drinking Water in Mangaluru: Public Outraged by MCC Inaction

ಮಂಗಳೂರು, ಜೂ.18: ಮಂಗಳೂರು ಮಹಾನಗರ ಪಾಲಿಕೆಯ (MCC) ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಕರಾವಳಿಯ ನಾಗರಿಕರು ಭಾರಿ ಬೆಲೆ ತೆರುವಂತಾಗಿದೆ. ಪಾಲಿಕೆಯಿಂದ ಸರಬರಾಜಾಗುತ್ತಿರುವ ಕಲುಷಿತ ಕುಡಿಯುವ ನೀರನ್ನು ಸೇವಿಸಿ ನಗರದ ನೂರಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರದ ಬಿಜೈ ನ್ಯೂರೋಡ್ ಹಾಗೂ ಬಟ್ಟಗುಡ್ಡೆ ಭಾಗದಲ್ಲಿ ಕಳೆದ ಮೂರು-ನಾಲ್ಕು ವಾರಗಳಿಂದ ಮನೆಯ ಟ್ಯಾಪ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರನ್ನು ಬಳಸಿದ ಹಿರಿಯ ನಾಗರಿಕರು ಮತ್ತು ಪುಟಾಣಿ ಮಕ್ಕಳು ತೀವ್ರವಾದ ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. ಪ್ರಾರಂಭದಲ್ಲಿ ಇದು ಸಾಮಾನ್ಯ ಇನ್ಫೆಕ್ಷನ್ ಎಂದುಕೊಂಡಿದ್ದ ಜನರಿಗೆ, ಇಡೀ ಬಡಾವಣೆಯ ನೂರಕ್ಕೂ ಹೆಚ್ಚು ಮನೆಗಳಲ್ಲಿ ಇದೇ ಪರಿಸ್ಥಿತಿ ಇರುವುದು ಕಂಡುಬಂದಾಗ ಆತಂಕ ಮೂಡಿದೆ. ಇನ್ನು ಇದಕ್ಕಾಗಿ ಅನೇಕರು ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಂಡರೂ ಆರೋಗ್ಯ ನಿಯಂತ್ರಣಕ್ಕೆ ಬಾರದೆ ಸುಸ್ತಾಗಿದ್ದಾರೆ.

ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ನಾಗರಿಕರು, ಆರೋಗ್ಯ ಇಲಾಖೆಯ ಮೂಲಕ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ಬಂದಿರುವ ಸಂಗತಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪಾಲಿಕೆ ಸರಬರಾಜು ಮಾಡುತ್ತಿರುವ ಈ ನೀರು ‘ಕುಡಿಯಲು ಯಾವುದೇ ಕಾರಣಕ್ಕೂ ಯೋಗ್ಯವಲ್ಲ’ ಎಂದು ಲ್ಯಾಬ್ ವರದಿಯಲ್ಲಿ ಅಧಿಕೃತವಾಗಿ ದೃಢಪಟ್ಟಿದೆ. ವರದಿ ಹೊರಬೀಳುತ್ತಿದ್ದಂತೆ ಕಂಗಾಲಾಗಿರುವ ಬಿಜೈ ನಿವಾಸಿಗಳು ಸದ್ಯ ದುಬಾರಿ ಹಣ ಕೊಟ್ಟು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (ಕ್ಯಾನ್ ನೀರು) ಖರೀದಿಸಿ ಬಳಸುತ್ತಿದ್ದಾರೆ.

ನಗರದ ಹಲವೆಡೆ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ (ಡ್ರೈನೇಜ್) ಪೈಪ್‌ಲೈನ್‌ಗಳನ್ನು ಒಟ್ಟೊಟ್ಟಿಗೇ ಅಳವಡಿಸಲಾಗಿದೆ. ಇತ್ತೀಚೆಗೆ ನಡೆದ ಯಾವುದೋ ದುರಸ್ತಿ ಕಾಮಗಾರಿಗಳ ವೇಳೆ ಜೆಸಿಬಿ ತಗುಲಿ ಅಥವಾ ಪೈಪ್‌ಗಳು ಒಡೆದು ಹೋಗಿ, ಡ್ರೈನೇಜ್ ನೀರು ನೇರವಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ತೂರಿ ಮಿಶ್ರಣವಾಗಿರುವ ಬಲವಾದ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪಾಲಿಕೆಯ ತಾಂತ್ರಿಕ ಇಂಜಿನಿಯರ್‌ಗಳು ತಕ್ಷಣವೇ ಪರಿಶೀಲನೆ ನಡೆಸಿ ಲೀಕೇಜ್ ಪತ್ತೆ ಹಚ್ಚಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ ಕಾಮಗಾರಿ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಎಂಜಿನಿಯರ್‌

ಲಕ್ಷ ಸಂಬಳ ತಗೊಂಡು ಎಸಿ ರೂಮ್‌ನಲ್ಲಿ ಕೂರ್ತಾರೆ: ಟಿವಿ 9 ಮುಂದೆ ಜನರ ಅಳಲು

ಇಷ್ಟೆಲ್ಲಾ ಭೀಕರ ಪರಿಸ್ಥಿತಿ ನಿರ್ಮಾಣವಾಗಿ, ನೂರಾರು ಜನ ಆಸ್ಪತ್ರೆ ಸೇರುತ್ತಿದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಮಹಾನಗರ ಪಾಲಿಕೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ಟಿವಿ 9 ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ತೆರಿಗೆ ಕಟ್ಟಿಲ್ಲ, ನೀರಿನ ಬಿಲ್ ಕಟ್ಟಿಲ್ಲ ಎಂದರೆ ಸಾಕು ಪಾಲಿಕೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆದರೆ, ಇಷ್ಟೊಂದು ಜನ ವಾಂತಿ-ಬೇದಿಯಿಂದ ನರಳುತ್ತಿದ್ದರೂ ಯಾರೂ ಮುಖ ತೋರಿಸುತ್ತಿಲ್ಲ. ಇವರು ಲಕ್ಷಗಟ್ಟಲೆ ಸಂಬಳ ಪಡೆದು ಕೇವಲ ಎಸಿ ರೂಮ್‌ಗಳಲ್ಲಿ ಕೂರಲು ಇರೋದಾ? ಹೆಲ್ತ್ ಇನ್ಸ್‌ಪೆಕ್ಟರ್ ತಕ್ಷಣ ಬಂದು ಪ್ರತಿ ಮನೆಯ ಸ್ಯಾಂಪಲ್ ಪರಿಶೀಲಿಸಬೇಕು. ಪಾಲಿಕೆ ಅಧಿಕಾರಿಗಳು ಕೇವಲ ದುಡ್ಡು ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಸಾರ್ವಜನಿಕರು ಮಾಧ್ಯಮಗಳ ಮುಂದೆ ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ – Kannada News | Historic US Iran Agreement: Impact on Global Oil Prices and Indias Fuel Costs

ವಾಷಿಂಗ್ಟನ್, ಜೂನ್ 18: ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಅಂತ್ಯ ಹಾಡಿ, ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ನಂತರ ಹಾರ್ಮುಕ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವು ಬಿರುಸಿನಿಂದ ಸಾಗುತ್ತಿದೆ. ಗ್ಯಾಸ್ ಮತ್ತು ಕಚ್ಚಾತೈಲ ಟ್ಯಾಂಕರ್‌ಗಳು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳತ್ತ ಪ್ರಯಾಣ ಬೆಳೆಸುತ್ತಿವೆ. ಅಮೆರಿಕವು ಇರಾನ್ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕಿದ ತಕ್ಷಣ, ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ.

ಹಾರ್ಮುಜ್ ಮೂಲಕ ಭಾರತಕ್ಕೆ 28 ಹಡಗುಗಳು ಬರುತ್ತಿದ್ದು, ಇದು ದೇಶದಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು ಸಿಎನ್‌ಜಿ ಬೆಲೆಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವು ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ಗೆ ಕುಸಿದಿದೆ. ಇದು ಕಳೆದ ಮೂರು ತಿಂಗಳಲ್ಲಿ ದಾಖಲಾದ ಕನಿಷ್ಠ ಮಟ್ಟವಾಗಿದೆ. ಅಮೆರಿಕದಲ್ಲಿ ಪ್ರತಿ ಗ್ಯಾಲನ್ ಅನಿಲದ ಬೆಲೆಯಲ್ಲಿ 4 ಡಾಲರ್‌ಗಳಷ್ಟು ಇಳಿಕೆಯಾಗಿದೆ. ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಆಗಿದ್ದಾಗ ಇಡೀ ವಿಶ್ವವೇ ಒಂದು ನಿರ್ಣಾಯಕ ಪರಿಸ್ಥಿತಿಯನ್ನು ಎದುರಿಸಿತ್ತು. ಈಗ ದಿಗ್ಬಂಧನಗಳು ತೆರವಾದ ನಂತರ ಹಡಗುಗಳ ಸಂಚಾರ ಮುಕ್ತವಾಗಿದ್ದು, ಭಾರತಕ್ಕೆ ತೈಲ ಪೂರೈಕೆ ಸುಗಮವಾಗಲಿದೆ.

ಈ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2015ರಲ್ಲಿ ಒಬಾಮಾ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಇದು ಅತ್ಯಂತ ಉತ್ತಮವಾದ ಒಪ್ಪಂದ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜಸ್ಕಿಯನ್ ಅವರು ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಧಿಕೃತ ಸಹಿ ಕಾರ್ಯಕ್ರಮವು ನಾಳೆ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿ ನಡೆಯಲಿದೆ. ಕಳೆದ 109 ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಈಗ ಕೊನೆಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲೂ ಯಾವುದೇ ರೀತಿಯ ಸಂಘರ್ಷವಿಲ್ಲ. ಇರಾನ್‌ನ 11 ಹಡಗುಗಳು ಈಗಾಗಲೇ ವಿವಿಧ ದೇಶಗಳಿಗೆ ಸಂಚರಿಸಿದ್ದು, ಇರಾನ್‌ಗೆ ಬರುವ ಹಡಗುಗಳು ನಿರಾತಂಕವಾಗಿ ಬಂದರುಗಳನ್ನು ತಲುಪಬಹುದಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Thursday Yellow Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸುವುದರ ಹಿಂದಿರುವ ರಹಸ್ಯವೇನು ಗೊತ್ತಾ? – Kannada News | Thursday Yellow Color Astrology: Jupiter Benefits and Remedies for Weak Guru Graha

ಗುರುವಾರ ಹಳದಿ ಬಣ್ಣದ ಬಟ್ಟೆImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನವೂ ಒಂದೊಂದು ನಿರ್ದಿಷ್ಟ ಗ್ರಹದಿಂದ ಆಳಲ್ಪಡುತ್ತದೆ. ಅದರಂತೆ ಗುರುವಾರವನ್ನು ‘ಗುರು’ (ಬೃಹಸ್ಪತಿ) ಗ್ರಹವು ಆಳುತ್ತದೆ. ಈ ಗ್ರಹದ ಅತ್ಯಂತ ನೆಚ್ಚಿನ ಬಣ್ಣ ಹಳದಿಯಾಗಿರುವುದರಿಂದ, ಈ ದಿನ ಹಳದಿ ಬಟ್ಟೆಗಳನ್ನು ಧರಿಸುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಗುರು ಗ್ರಹವನ್ನು ಜ್ಞಾನ, ಶಿಕ್ಷಣ, ಸಂಪತ್ತು, ಸಂತಾನ ಭಾಗ್ಯ, ಮದುವೆ ಮತ್ತು ಆಧ್ಯಾತ್ಮಿಕತೆಯ ಕಾರಕ ಎಂದು ನಂಬಲಾಗಿದೆ. ಗುರುವಿನ ಆಶೀರ್ವಾದವಿದ್ದರೆ ಜೀವನದಲ್ಲಿ ಅಭಿವೃದ್ಧಿ, ಗೌರವ ಮತ್ತು ಸಮೃದ್ಧಿ ಲಭಿಸುತ್ತದೆ.

ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಮಾಡಬೇಕಾದ ಪರಿಹಾರಗಳು:

ಜ್ಯೋತಿಷ್ಯ ತಜ್ಞರ ಪ್ರಕಾರ, ಯಾರ ಜಾತಕದಲ್ಲಿ ಗುರು ಗ್ರಹವು ದುರ್ಬಲವಾಗಿದೆಯೋ, ಅವರು ಗುರುವಾರದಂದು ಹಳದಿ ಬಣ್ಣದ ವಸ್ತುಗಳನ್ನು ಬಳಸುವುದು ಅಥವಾ ದಾನ ಮಾಡುವುದು ಅತ್ಯಂತ ಶ್ರೇಷ್ಠ. ಈ ದಿನದಂದು ವಿಶೇಷವಾಗಿ ಹಣೆಯ ಮೇಲೆ ಹಳದಿ ಶ್ರೀಗಂಧ ಅಥವಾ ಹಳದಿ ತಿಲಕವನ್ನು ಧರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಹಳದಿ ಬೇಳೆ (ಕಡಲೆಬೇಳೆ), ಅರಿಶಿನ, ಕೇಸರಿ, ಬೆಲ್ಲ ಮತ್ತು ತುಪ್ಪದಂತಹ ವಸ್ತುಗಳನ್ನು ದಾನ ಮಾಡುವುದರಿಂದ ಗ್ರಹದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ದಾನ ಧರ್ಮಗಳಿಂದ ಸಿಗುವ ಶುಭ ಫಲಗಳು:

ಗುರುವಾರದಂದು ಹಳದಿ ಬಣ್ಣದ ಬಟ್ಟೆಗಳು, ಹಳದಿ ಧಾನ್ಯಗಳು, ಹಳದಿ ಹಣ್ಣುಗಳು, ಹಿತ್ತಾಳೆ ಪಾತ್ರೆಗಳು ಅಥವಾ ಚಿನ್ನವನ್ನು ದಾನ ಮಾಡುವುದರಿಂದ ಅತ್ಯಂತ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಈ ಸರಳ ಆಚರಣೆಗಳು ಜಾತಕದಲ್ಲಿ ಗುರು ಗ್ರಹವನ್ನು ಬಲಪಡಿಸುತ್ತವೆ. ಇದರ ಪರಿಣಾಮವಾಗಿ ಶಿಕ್ಷಣ, ಉದ್ಯೋಗ, ವ್ಯಾಪಾರ-ವ್ಯವಹಾರ ಮತ್ತು ವಿವಾಹದಂತಹ ಪ್ರಮುಖ ಕ್ಷೇತ್ರಗಳಲ್ಲಿ ಎದುರಾಗುವ ಅಡೆತಡೆಗಳು ದೂರವಾಗಿ, ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.

ಶ್ರೀ ಮಹಾವಿಷ್ಣುವಿನ ಆರಾಧನೆ ಮತ್ತು ಧಾರ್ಮಿಕ ಮಹತ್ವ:

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಗುರುವಾರವನ್ನು ಸೃಷ್ಟಿಪಾಲಕನಾದ ಶ್ರೀ ಮಹಾವಿಷ್ಣುವಿಗೆ ಮೀಸಲಾದ ದಿನವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಹಳದಿ ಬಣ್ಣವೆಂದರೆ ಮಹಾವಿಷ್ಣುವಿಗೆ ಅತ್ಯಂತ ಪ್ರೀತಿ. ಆದ್ದರಿಂದಲೇ ಈ ದಿನ ಆತನ ಪೂಜೆಯಲ್ಲಿ ಹಳದಿ ಹೂವುಗಳು, ಹಳದಿ ಅಕ್ಷತೆ, ಹಳದಿ ಶ್ರೀಗಂಧ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಗುರುವಾರ ಬಾಳೆ ಮರವನ್ನು ಪೂಜಿಸುವ ವಾಡಿಕೆಯೂ ಇದೆ, ಇದು ಕುಟುಂಬದಲ್ಲಿ ಸುಖ-ಸಂಪತ್ತನ್ನು ವೃದ್ಧಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮದುವೆ ವಿಳಂಬ ಮತ್ತು ವೈವಾಹಿಕ ಸಮಸ್ಯೆಗಳಿಗೆ ಸರಳ ಉಪಾಯ:

ವೈವಾಹಿಕ ಜೀವನದಲ್ಲಿ ತೊಂದರೆ ಎದುರಿಸುತ್ತಿರುವವರು ಅಥವಾ ವಿವಾಹ ಯೋಗ ತಡವಾಗುತ್ತಿರುವವರು ಗುರುವಾರದಂದು ವಿಶೇಷ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಈ ದಿನ ಸಂಪೂರ್ಣ ಭಕ್ತಿಯಿಂದ ಶ್ರೀ ಮಹಾವಿಷ್ಣು ಹಾಗೂ ಗುರುರಾಯರನ್ನು ಪೂಜಿಸಿ, ಕಡ್ಡಾಯವಾಗಿ ಹಳದಿ ಬಟ್ಟೆಗಳನ್ನು ಧರಿಸಬೇಕು. ಪೂಜೆಯ ನಂತರ ಹಳದಿ ಬಣ್ಣದ ಸಾತ್ವಿಕ ಆಹಾರವನ್ನೇ ಸೇವಿಸುವುದರಿಂದ ವಿವಾಹದಲ್ಲಿ ಉಂಟಾಗುವ ಅಡೆತಡೆಗಳು ನಿವಾರಣೆಯಾಗಿ, ಕಲ್ಯಾಣ ಯೋಗ ಕೂಡಿಬರುತ್ತದೆ ಎಂದು ನಂಬಲಾಗಿದೆ.

ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಹಳದಿ ಬಣ್ಣ:

ಒಟ್ಟಾರೆಯಾಗಿ ಹೇಳುವುದಾದರೆ, ಗುರುವಾರ ಹಳದಿ ಬಣ್ಣಕ್ಕೆ ಪ್ರಾಮುಖ್ಯತೆ ನೀಡುವುದರ ಹಿಂದೆ ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರಣಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಹಳದಿ ಬಣ್ಣವು ನಮ್ಮ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯನ್ನು (Positive Energy) ಮತ್ತು ಉತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಜ್ಞಾನ, ಸಂಪತ್ತು, ವೈವಾಹಿಕ ಸಂತೋಷ ಮತ್ತು ಯಶಸ್ಸನ್ನು ಬಯಸುವ ಪ್ರತಿಯೊಬ್ಬರಿಗೂ ಗುರುವಾರದ ಹಳದಿ ಬಣ್ಣದ ಆಚರಣೆಯು ಉತ್ತಮ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link