Category Archives: Blog

Your blog category

ಜಾಗತಿಕ ಹೂಡಿಕೆಗೆ ಭಾರತ ವಿಶ್ವಾಸಾರ್ಹ ತಾಣ: ಹೂಡಿಕೆ ಒಪ್ಪಂದಕ್ಕೆ ಜೋಶಿ ಮಾತುಕತೆ ಫಲಪ್ರದ – Kannada News | Davos WEF: India a reliable destination for global investment; Pralhad Joshi holds important discussions with national leaders

ದಾವೋಸ್​​, ಜನವರಿ 20: ಭಾರತ ಪ್ರಸ್ತುತದಲ್ಲಿ ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಮತ್ತು ಭವಿಷ್ಯದ ಸುಭದ್ರ ತಾಣವಾಗಿ ಹೊರ ಹೊಮ್ಮುತ್ತಿದ್ದು, ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (WEF) ಎರಡನೇ ದಿನದ ಶೃಂಗ ಸಭೆ ಇದಕ್ಕೆ ಸಾಕ್ಷಿಯಾಯಿತು. 2026ರ ಶುರುವಿನಲ್ಲೇ ಈ ವಿಶ್ವ ಆರ್ಥಿಕ ವೇದಿಕೆ ಮಹತ್ವದ ಸಭೆಯಲ್ಲಿ ಮಂಗಳವಾರ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಭಾರತದೊಂದಿಗೆ ಹೂಡಿಕೆ ಒಪ್ಪಂದಕ್ಕೆ ಫಲಪ್ರದ ಮಾತುಕತೆ ಮತ್ತು ಚರ್ಚೆ ಮಾಡಿದ್ದಾರೆ.

ಭಾರತದ ತ್ವರಿತ, ಶುದ್ಧ ಇಂಧನ ವಿಸ್ತರಣೆಯಲ್ಲಿ ಪಾಲುದಾರರಾಗಲು ಜಾಗತಿಕ ಹೂಡಿಕೆದಾರರನ್ನು ಸೆಳೆದರು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖ ಪಾತ್ರದಾರಿಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ಸಚಿವ ಪ್ರಲ್ಹಾದ ಜೋಶಿ ಟ್ವೀಟ್​

“ಸುಸ್ಥಿರತೆ ಮತ್ತು ಜಾಗತಿಕ ಪರಿವರ್ತನೆಗೆ ಮಾರ್ಗಗಳು” ಕುರಿತ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿದ್ದ ಸಚಿವ ಪ್ರಲ್ಹಾದ ಜೋಶಿ, ಸುಸ್ಥಿರತೆ ಬಾಹ್ಯ ಕಾಳಜಿ ಮಾತ್ರವಲ್ಲ, ಸ್ಪರ್ಧಾತ್ಮಕತೆ, ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ಕೇಂದ್ರ ಚಾಲಕವಾಗಿದೆ ಎಂದು ಒತ್ತಿ ಹೇಳಿದರು.

ಇದನ್ನೂ ಓದಿ: ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಭಾಗಿ

“ಜಗತ್ತು ಪರಿವರ್ತನೆಗೊಳ್ಳಬೇಕೆ ಬೇಡವೇ?” ಎಂಬುದು ಈ ದಶಕದ ನಿರ್ಣಾಯಕ ಸವಾಲು ಅಲ್ಲ, ಆದರೆ ಸುಸ್ಥಿರತೆಯನ್ನು ಅಗತ್ಯ ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ಆರ್ಥಿಕವಾಗಿ ಬಲಪಡಿಸುವ ರೀತಿಯಲ್ಲಿ ಹೇಗೆ ತಲುಪಿಸಬಹುದು? ಎಂಬುದೇ ನಮ್ಮ ಮುಂದಿರುವ ನಿಜವಾದ ಸವಾಲು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಡಿಸೆಂಬರ್ 2025ರ ವೇಳೆಗೆ 267 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸಿದೆ ಮತ್ತು 2030ರ ಗುರಿಗಳನ್ನು ಪೂರೈಸುವ ಹಾದಿಯಲ್ಲಿದೆ ಎಂದು ಇದೇ ವೇಳೆ ಜಾಗತಿಕವಾಗಿ ಗಮನ ಸೆಳೆದರು. ಶುದ್ಧ ಇಂಧನ ಮತ್ತು ಸುಸ್ಥಿರತೆಯಲ್ಲಿ ನಮ್ಮ ಬಲವಾದ ದೇಶೀಯ ಉತ್ಪಾದನೆ, ಗ್ರಿಡ್ ಆಧುನೀಕರಣ, ಇಂಧನ ಸಂಗ್ರಹ ಪರಿಹಾರಗಳು ಮತ್ತು ಪರಮಾಣು ಶಕ್ತಿಗಾಗಿ ಉದಯೋನ್ಮುಖ ಚೌಕಟ್ಟುಗಳಿಂದ ಬೆಂಬಲಿತವಾಗಿದೆ. ಸುಸ್ಥಿರ ಮತ್ತು ಅಂತರ್ಗತ ಜಾಗತಿಕ ಇಂಧನ ಪರಿವರ್ತನೆಯನ್ನು ಸಕ್ರಿಯಗೊಳಿಸಲು ಬಂಡವಾಳ ಹಾಗೂ ಸರ್ಕಾರಗಳು, ಖಾಸಗಿ ವಲಯ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಹಯೋಗದ ಅಗತ್ಯವಿದೆ ಎಂದು ಜೋಶಿ ಅಭಿಪ್ರಾಯಪಟ್ಟರು.

2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವ ಜೋಶಿ, ಭಾರತದ ವಿಧಾನವು “ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಹೇಳಿದರು.

ಸುಸ್ಥಿರತೆ ಭಾರತದ ಒಂದು ಕಾರ್ಯತಂತ್ರ

ಭಾರತ ಸುಸ್ಥಿರತೆಯನ್ನು ಕೇವಲ ತಾಂತ್ರಿಕ ಬದಲಾವಣೆಯಾಗಿ ನೋಡದೆ ಆರ್ಥಿಕತೆ ಮತ್ತು ಸಮಾಜದ ಕಾರ್ಯತಂತ್ರದ ರೂಪಾಂತರವಾಗಿ ನೋಡುತ್ತದೆ ಮತ್ತು ಬೆಳವಣಿಗೆಗೆ ಅತ್ಯಂತ ವಿಶ್ವಾಸಾರ್ಹ ಹಾಗೂ ಕೈಗೆಟುಕುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಮಾರ್ಗವಾಗಿ ದೃಢ ನಿಶ್ಚಯದಿಂದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅನುಸರಿಸುತ್ತಿದೆ ಎಂದು ದೃಢಪಡಿಸಿದರು.

ಇದೇ ವೇಳೆ ಸಚಿವ ಪ್ರಲ್ಹಾದ ವಿವಿಧ ರಾಷ್ಟ್ರಗಳ ಕೈಗಾರಿಕಾ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಸಭೆ ಸಹ ನಡೆಸಿದರು. ಓಮನ್‌ ಪ್ರಧಾನಿ ಕಚೇರಿ ಆರ್ಥಿಕ ಸಲಹೆಗಾರ ಡಾ. ಸೈದ್ ಮೊಹಮ್ಮದ್ ಅಹ್ಮದ್ ಅಲ್ ಸಕ್ರಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸೌರ, ಪವನ, ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹದಲ್ಲಿ ಭಾರತದ ಮಹತ್ತರ ಸಾಧನೆ ಬಗ್ಗೆ ತಿಳಿಯಪಡಿಸಿದರು. ಭಾರತ-ಓಮನ್ ಸಿಇಪಿಎ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ ಬಗ್ಗೆ ಚರ್ಚೆ ಮಾಡಿದ್ದಾರೆ.

ಬೆಲ್ಜಿಯಂ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳು, ಯುರೋಪಿಯನ್ ವ್ಯವಹಾರಗಳು ಮತ್ತು ಅಭಿವೃದ್ಧಿ ಸಹಕಾರ ಸಚಿವ ಮ್ಯಾಕ್ಸಿಮ್ ಪ್ರೆವೋಟ್ ಅವರೊಂದಿಗೆ ಸಹ ಮಹತ್ವದ ಸಭೆ ನಡೆಸಿ, ಭಾರತ-ಬೆಲ್ಜಿಯಂ ಪಾಲುದಾರಿಕೆ ಬಗ್ಗೆ ಪುನರುಚ್ಚರಿಸಿದರು.

ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಸುಬೈಹ್ ಅಬ್ದುಲ್ ಅಜೀಜ್ ಅಲ್-ಮುಖೈಝೀಮ್ ಅವರೊಂದಿಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಸಂಬಂದ ಚರ್ಚಿಸಿದರು.

WEF ವಾರ್ಷಿಕ ಸಭೆಯ ಹೊರತಾಗಿ ಪ್ರಲ್ಹಾದ ಜೋಶಿ ಅವರು ಅಂತಾರಾಷ್ಟ್ರೀಯ ಸಹಕಾರ ಮತ್ತು ಶುದ್ಧ ಇಂಧನದಲ್ಲಿ ಹೂಡಿಕೆಯನ್ನು ಬಲಪಡಿಸಲು ಉನ್ನತ ಮಟ್ಟದ ದ್ವಿಪಕ್ಷೀಯ ಸಂವಾದ ನಡೆಸಿದರು. ಭಾರತದಲ್ಲಿ ದೀರ್ಘಕಾಲೀನ ಹವಾಮಾನ ಮತ್ತು ಶುದ್ಧ ಇಂಧನ ಹೂಡಿಕೆ ಹೆಚ್ಚಿಸುವತ್ತ ಗಮನಹರಿಸಿದ ಜೋಶಿ, ಲಾ ಕೈಸ್ಸೆಯ ಅಧ್ಯಕ್ಷ ಮತ್ತು ಸಿಇಒ ಚಾರ್ಲ್ಸ್ ಎಮಂಡ್ ಮತ್ತು ಸಿಒಒ ಶ್ರೀಮತಿ ಸಾರಾ ಬೌಚರ್ಡ್ ಅವರೊಂದಿಗೆ ಚರ್ಚೆ ನಡೆಸಿದರು. 2030ರ ವೇಳೆಗೆ ಗುಂಪಿನ ಬದ್ಧ USD 400 ಶತಕೋಟಿ ಹವಾಮಾನ ಕ್ರಿಯಾ ಹೂಡಿಕೆಗಳನ್ನು ಬಳಸಿಕೊಳ್ಳಲು “ಭಾರತದೊಂದಿಗೆ ಪಾಲುದಾರಿಕೆ” ವೃದ್ಧಿಗೆ ಪ್ರೋತ್ಸಾಹಿಸಿದರು.

ಐಕಿಯಾ ಚಿಲ್ಲರೆ ವ್ಯವಹಾರವನ್ನು ನಿರ್ವಹಿಸುವ ಇಂಗ್ಕಾ ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷ ಜುವೆನ್ಸಿಯೊ ಮೇಜ್ಟು ಅವರನ್ನು ಭೇಟಿಯಾದ ಪ್ರಲ್ಹಾದ ಜೋಶಿ, ಅವರಲ್ಲಿ ಇಂಗ್ಕಾ ಗ್ರೂಪ್ ಭಾರತದ ನವೀಕರಿಸಬಹುದಾದ ಇಂಧನ ವಲಯವನ್ನು ವಿಶೇಷವಾಗಿ ಸೌರ, ಪವನ ಮತ್ತು ಹೈಬ್ರಿಡ್ ಪರಿಹಾರಗಳಲ್ಲಿ ಪ್ರವೇಶಿಸಲು ಆಸಕ್ತಿ ವ್ಯಕ್ತಪಡಿಸಿದೆ.

ಇಂಡಿಯಾ ಪೆವಿಲಿಯನ್ ಉದ್ಘಾಟನೆ

ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಭೆ ವೇಳೆ ಪ್ರಮುಖವಾಗಿ “ಇಂಡಿಯಾ ಪೆವಿಲಿಯನ್” ಸಹ ಉದ್ಘಾಟನೆ ಕಂಡಿತು. ಸಚಿವ ಪ್ರಹ್ಲಾದ್ ಜೋಶಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ವಿವಿಧ ರಾಜ್ಯಗಳ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗವಹಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಯುಎಇಯ ಫ್ರಂಟ್​​ಲೈನ್ ಆರೋಗ್ಯ ಕಾರ್ಯಕರ್ತರಿಗೆ ಶುಭ ಸುದ್ದಿ; 37 ಕೋಟಿ ರೂ. ಆರ್ಥಿಕ ನಿಧಿ ಘೋಷಿಸಿದ ಬುರ್ಜೀಲ್ ಹೋಲ್ಡಿಂಗ್ಸ್

ಇಂಡಿಯಾ ಪೆವಿಲಿಯನ್ ಉದ್ಘಾಟನೆ ವೇಳೆ ಸಚಿವ ಪ್ರಲ್ಹಾದ ಜೋಶಿ ‘ದಿ ಇಂಡಿಯಾ ಸ್ಟೋರಿ’ ಹೆಸರಿನ ಹಸಿರು ಹೂಡಿಕೆ ಕೈಪಿಡಿ ಸಹ ಬಿಡುಗಡೆ ಮಾಡಿದರು. ಇದು ಉತ್ಪಾದನೆ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತದ ಸಾಮರ್ಥ್ಯ ಹಾಗೂ 2047ರ ವಿಕಸಿತ ಭಾರತದ ದೃಷ್ಟಿಕೋನ ಮತ್ತು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಗೆ ಬದ್ಧತೆಯನ್ನು ಪ್ರಸ್ತುತಪಡಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದರು.

ಭಾರತ NDC ಗುರಿಗಳಿಗಿಂತ ಐದು ವರ್ಷಗಳ ಮೊದಲೇ ಶೇ.50% ಪಳೆಯುಳಿಕೆ ರಹಿತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಿದೆ. ಇಂಧನ ಪರಿವರ್ತನೆಯನ್ನು ಜನ-ಕೇಂದ್ರಿತ ಚಳುವಳಿಯಾಗಿ ಪರಿವರ್ತಿಸಿದೆ ಎಂದು ಪ್ರಲ್ಹಾದ ಜೋಶಿ ವಿದೇಶಿ ನಾಯಕರ ಗಮನ ಸೆಳೆದರು.

ಶೇ.8ರಷ್ಟು ಸೌರ ಸುಂಕ ಕಡಿಮೆ

ಭಾರತದಲ್ಲಿ ಸೌರ ಸುಂಕಗಳು ಸುಮಾರು ಶೇ.80ರಷ್ಟು ಕಡಿಮೆಗೊಳಿಸಿ ನವೀಕರಿಸಬಹುದಾದ ಇಂಧನ ಮತ್ತು ಸಂಗ್ರಹಣೆಗೆ ಒಟ್ಟು ನೀಡಿದೆ. ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಜಾಗತಿಕವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿದ್ದು, ದೇಶೀಯ ಉತ್ಪಾದನಾ ಸಾಮರ್ಥ್ಯವು 144 GW ಗೆ ವಿಸ್ತರಣೆ ಕಂಡಿದೆ. ಭಾರತವನ್ನು ಕೇವಲ ಮಾರುಕಟ್ಟೆಯಾಗಿ ಮಾತ್ರವಲ್ಲದೆ, “ವಿಕಸಿ ಭಾರತ 2047” ಕಡೆಗೆ ಪ್ರಯಾಣದಲ್ಲಿ ವಿಶ್ವಾಸಾರ್ಹ ಉತ್ಪಾದನಾ ಮತ್ತು ಹೂಡಿಕೆ ಕೇಂದ್ರವಾಗಿ ಸ್ಥಾನ ಪಡೆದಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವ ಆರ್ಥಿಕ ವೇದಿಕೆ ಗಮನ ಸೆಳೆದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್ – Kannada News | BMTC suspends four conductors for misusing UPI ticketing system In Bengaluru

ಬೆಂಗಳೂರು, (ಜನವರಿ 20): ಚಿಲ್ಲರೆ ಸಮಸ್ಯೆ ತಪ್ಪಿಸಲು ಪ್ರಯಾಣಿರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ಕೂಡ ಬಸ್​ಗಳಲ್ಲಿ (BMTC Bus)  ಕ್ಯೂರ್ ಕೋಡ್ ಅಳವಡಿಸಿದೆ. ಆದ್ರೆ, ಇದು ಪ್ರಯಾಣಿಕರಿಗೆ ಉಪಯೋಗವಾದ್ರೆ, ಕಂಡಕ್ಟರ್​ಗಳು ಮಾತ್ರ ದುರುಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೌದು.. ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್ ಗಳು ಬಿಎಂಟಿಸಿ ಬಸ್ ನಲ್ಲಿರುವ ಯುಪಿಐ ಸ್ಕ್ಯಾನರ್ ಗಳನ್ನು ಕಿತ್ತು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿ ತಮ್ಮ ಬ್ಯಾಂಕ್ ಅಕೌಂಟ್ ಗೆ ಲಕ್ಷಾಂತರ ರುಪಾಯಿ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟಿವಿ9 ವರದಿ ಬಿತ್ತರಿಸಿದ ಬೆನ್ನಲ್ಲೇ ಬಿಎಂಟಿಸಿ ನಿಗಮ ನಡೆಸಿದ ತನಿಖೆಯಲ್ಲಿ ಕಂಡಕ್ಟರ್ ಗಳ ಕಳ್ಳಾಟ ಬಯಲಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಕಂಡಕ್ಟರ್​​ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಮಂಚೇಗೌಡ, ಸುಪ್ರೀತ, ಅಶ್ವಕ್ ಖಾನ್, ಸುರೇಶ್ ಅಮಾನತುಗೊಂಡ ನಿರ್ವಾಹಕರು.

ಮಂಚೇಗೌಡ, ಸುಪ್ರೀತ, ಅಶ್ವಕ್ ಖಾನ್, ಸುರೇಶ್ ಎನ್ನುವರು ಕನ್ನಡ ಬಾರದವರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಪೀಕಿದ್ದಾರೆ. ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಫ್ರೀ ಟಿಕೆಟ್ ಎಂದು ಪ್ರಿಂಟ್ ಮಾಡಲಾಗಿದೆ. ಇಂಗ್ಲಿಷ್ ನಲ್ಲಿ ಫ್ರೀ ಟಿಕೆಟ್ ಎಂದು ಪ್ರಿಂಟ್ ಮಾಡಿಲ್ಲ, ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ನಾರ್ಥ್ ಇಂಡಿಯನ್ಸ್, ಸೌತ್ ಇಂಡಿಯನ್ಸ್ ಗೆ ಶಕ್ತಿ ಯೋಜನೆಯ ಫ್ರೀ ಟಿಕೆಟ್ ನೀಡಿ ಹಣ ತಮ್ಮ ವೈಯಕ್ತಿಕ ಅಕೌಂಟ್​​ಗೆ ಹಾಕಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಅಕೌಂಟ್ ಪರಿಶೀಲನೆ ಮಾಡಿದಾಗ  ನಾಲ್ವರು ಕಂಡಕ್ಟರ್​ಗಳು ಸೇರಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಹಣ  ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ತನಿಖೆಯಿಂದ ಬಯಲಿಗೆ ಬಂದಿದೆ.

ಇದನ್ನೂ ಓದಿ: BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು

ಯಾಱರ ಖಾತೆಗೆ ಎಷ್ಟೆಷ್ಟು ಹಣ

ಡಿಪೋ 3ರ ಕಂಡಕ್ಟರ್ ಮಂಚೇಗೌಡ ಖಾತೆಗೆ 51 ಸಾವಿರ ಜಮಾ ಆದ್ರೆ, ಡಿಪೋ 11ರ ಕಂಡಕ್ಟರ್ ಸುಪ್ರೀತ ಖಾತೆಗೆ 30 ಸಾವಿರ ರೂ, ಡಿಪೋ 14ರ ಕಂಡಕ್ಟರ್ ಅಶ್ವಕ್ ಖಾನ್ ಖಾತೆಗೆ 3 ಸಾವಿರ ಹಾಗೂ ಡಿಪೋ 51ರ ಕಂಡಕ್ಟರ್ ಸುರೇಶ್ ಅಕೌಂಟ್​​ಗೆ 45 ಸಾವಿರ ರೂ ಜಮೆ ಆಗಿದೆ.

ತಮ್ಮ ಖಾತೆಗೆ ಹೇಗೆ ಹಣ ಹಾಕಿಸಿಕೊಳ್ಳುತ್ತಿದ್ರು?

ಇನ್ನೂ ಈ ಕಿಲಾಡಿ ಕಂಡಕ್ಟರ್ ಗಳು ಡಿಪೋದಿಂದ ಬಸ್ ಗಳು ಹೊರಗೆ ಬರ್ತಿದ್ದಂತೆ, ಬಸ್ ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್ ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ.ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್ ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್ ನಲ್ಲಿರುವ ಸ್ವಂತ ಅಕೌಂಟಿನ ಸ್ಕ್ಯಾನರ್ ಗಳನ್ನು ನೀಡಿ ಪ್ರಯಾಣಿಕರಿಂದ ತಮ್ಮ ಸ್ವಂತ ಅಕೌಂಟ್ ಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯುರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ ಗಳು ಸಿಕ್ಕಿಬಿದ್ದಿದ್ದರು. ಇನ್ನೂ ಟಿವಿ9 ಈ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಬಿಎಂಟಿಸಿ ಎಂಡಿ, ನಾಲ್ಕು ಜನ ಕಂಡಕ್ಟರ್ ಗಳನ್ನು ಮಾಡಿ ಆದೇಶ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ ಶೆಟ್ಟಿ – Kannada News | Rakshita Shetty talks about her bond with Gilli Nata in Bigg Boss Kannada Season 12 show

ಬಿಗ್ ಬಾಸ್ (BBK 12) ಮನೆಯಲ್ಲಿ ಗಿಲ್ಲಿ ನಟ ಅವರನ್ನು ಕಂಡರೆ ರಕ್ಷಿತಾ ಶೆಟ್ಟಿ ತುಂಬಾ ಇಷ್ಟಪಡುತ್ತಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಎಷ್ಟೋ ಬಾರಿ ತಮಾಷೆಗೆ ಗಿಲ್ಲಿ ನಟ (Gilli Nata) ಅವರು ರಕ್ಷಿತಾ ಶೆಟ್ಟಿಗೆ ಹೊಡೆದಿದ್ದರು. ಒಂದು ವೇಳೆ ಆ ಜಾಗದಲ್ಲಿ ರಕ್ಷಿತಾ ಅಲ್ಲದೇ ಬೇರೆ ಯಾರಾದರೂ ಇದ್ದಿದ್ದರೆ ದೊಡ್ಡ ರಂಪಾಟ ಆಗುವ ಸಾಧ್ಯತೆ ಇರುತ್ತಿತ್ತು. ಆ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮಾತನಾಡಿದ್ದಾರೆ. ‘ನಾನು ಮತ್ತು ಗಿಲ್ಲಿ ಟಾಮ್ ಆ್ಯಂಡ್ ಜೆರಿ ರೀತಿ ಇದ್ದೆವು. 24 ಗಂಟೆಯಲ್ಲಿ ಅವರು ಹಲವು ಬಾರಿ ನನಗೆ ಹೊಡೆಯುತ್ತಿದ್ದರು. ಅದನ್ನೆಲ್ಲ ಬಿಗ್ ಬಾಸ್ ಕಟ್ ಮಾಡುತ್ತಾರೆ ಎಂದುಕೊಂಡಿದ್ದೆ. ಈಗ ಮೊಬೈಲ್​ನಲ್ಲಿ ನೋಡಿದೆ. ಅವರು ತಳ್ಳಿದಾಗ ನಾನು ಬಿದ್ದಿದ್ದಕ್ಕೆ ಎಷ್ಟು ನೋವಾಯಿತು ಗೊತ್ತಾ? ಅವರು ಹೊಡೆದಾಗ ನನಗೆ ಖುಷಿ ಆಗುತ್ತಿತ್ತು. ಬೇಜಾರು ಆಗುತ್ತಿರಲಿಲ್ಲ. ನಾನು ಎಂಜಾಯ್ ಮಾಡುತ್ತಿದ್ದೆ’ ಎಂದು ರಕ್ಷಿತಾ ಶೆಟ್ಟಿ (Rakshita Shetty) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಯಚೂರಿನಲ್ಲಿ ಲಾರಿ, 2 ಗೂಡ್ಸ್ ವಾಹನಗಳ ಮಧ್ಯೆ ಸರಣಿ ಅಪಘಾತ: ಐವರು ಸಾವು

ರಾಯಚೂರು, ಜನವರಿ 20: ಲಾರಿ ಮತ್ತು ಎರಡು ಗೂಡ್ಸ್ ವಾಹನ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ನಡೆದಿದೆ. ಮೃತರು ಹಾಗೂ ಗಾಯಾಳುಗಳ ಗುರುತು ಪತ್ತೆಯಾಗಿಲ್ಲ. ಭೀಕರ ಅಪಘಾತದಲ್ಲಿ ಕೆಲ ಕುರಿಗಳು ಕೂಡ ಸಾವನ್ನಪ್ಪಿವೆ. ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೈಕೋ ಯುವಕ – Kannada News | A Kerala based Youth Arrested For stealing women undergarments at Bengaluru

ಬೆಂಗಳೂರು, (ಜನವರಿ 20): ಇತ್ತೀಚೆಗೆ ಕರ್ನಾಟಕದಲ್ಲಿ (Karnataka) ಬ್ಯಾಂಕ್, ಎಟಿಎಂ ದರೋಡೆ ಪ್ರಕರಣಗಳು ನಡೆದಿವೆ. ಇದರ ಜೊತೆಗೆ ಮಹಿಳೆಯರ ಒಳ ಉಡುಪು ಕಳ್ಳತನ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ. ಕಳೆದ ಸೆಪ್ಟೆಂಬರ್ ನಲ್ಲಿ ಹುಬ್ಬಳ್ಳಿಯಲ್ಲಿ (Hubballi) ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಸೈಕೋ ಕಳ್ಳ ಸಿಕ್ಕಿಬಿದ್ದಿದ್ದ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲೂ ಸಹ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಹೌದು… ಮಹಿಳೆಯರು ಮತ್ತು ಯುವತಿಯರ ಒಳ ಉಡುಪುಗಳನ್ನು ಕದ್ದು ವಿಲಕ್ಷಣವಾಗಿ ವರ್ತಿಸುತ್ತಿದ್ದ ‘ಸೈಕೋ’ ಕಳ್ಳ ಇದೀಗ ಬೆಂಗಳೂರಿನ (Bengaluru) ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೇರಳ ಮೂಲದ ಅಮಲ್(23) ಬಂಧಿತ ಆರೋಪಿ.

ಕೇರಳ ಮೂಲದ 23 ವರ್ಷದ ಅಮಲ್, ಮನೆ ಮಹಡಿ, ಹಾಗೂ ಆಚೆ ಒಣಹಾಕಿರುವ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ. ಹೊರಗಡೆ ಸುತ್ತಾಡಿ ಮನೆಗಳನ್ನು ದೂರದಿಂದಲೇ ಪರಿಶೀಲನೆ ಮಾಡುತ್ತಿದ್ದ. ನಂತರ ಯಾರು ಇಲ್ಲದ ವೇಳೆ ನುಗ್ಗಿ ಒಳ ಉಡುಪುಗಳನ್ನು ಕದ್ದೊಯ್ಯುತ್ತಿದ್ದ. ಬಳಿಕ ಅವುಗಳನ್ನು ತಾನು ಧರಿಸಿಕೊಂಡು ಫೋಟೋ ತೆಗೆದುಕೊಂಡು ವಿಕೃತ ಆನಂದ ಪಡುತ್ತಿದ್ದ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಹುಬ್ಬಳ್ಳಿಯಲ್ಲಿ ಸೈಕೋ ವ್ಯಕ್ತಿ ಅಂದರ್​

ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ವಿಕೃತ ಕಾಮಿ ಅಮಲ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಕದ್ದ ಒಳ ಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಮೊಬೈಲ್​​ನಲ್ಲಿ ಪತ್ತೆಯಾಗಿವೆ. ಹಾಗೇ ಅಮಲ್ ವಾಸವಿದ್ದ ಮನೆಯಲ್ಲಿಯೂ ಸಹ ಮಹಿಳೆಯರ ಒಳ ಉಡುಪುಗಳನ್ನ ಸಂಗ್ರಹಿಸಿ ಇಟ್ಟುಕೊಂಡಿರುವುದು ಕಂಡುಬಂದಿದೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:57 pm, Tue, 20 January 26

Source link

ಗಿಲ್ಲಿನ ಗಗನಾ ಅವಾಯ್ಡ್ ಮಾಡಿದ್ದು ಯಾಕೆ? ಕಾವ್ಯಾ ಹೇಳೋದು ಕೇಳಿ.. – Kannada News | Kavya Shaiva says This is why Gagana Bhari avoided Gilli Nata

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿರುವ ಗಿಲ್ಲಿ ನಟ (Gilli Nata) ಅವರ ಬಗ್ಗೆ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ (Kavya Shaiva) ಅವರು ಕ್ಲೋಸ್ ಆಗಿದ್ದರು. ಅದರಿಂದ ಕಾವ್ಯಾ ಅವರಿಗೆ ಹಲವು ಬಾರಿ ಕಿರಿಕಿರಿ ಆಗಿದ್ದು ಕೂಡ ಉಂಟು. ಯಾವಾಗಲೂ ಗಿಲ್ಲಿ ತಮಾಷೆ ಮಾಡುತ್ತಾರೆ. ಆದರೆ ಅದು ಕೆಲವೊಮ್ಮೆ ಅತಿಯಾಗುತ್ತದೆ. ಇದರಿಂದಾಗಿ ಕಾವ್ಯಾ ಟ್ರೋಲ್ ಆಗುವ ಸನ್ನಿವೇಶ ಕೂಡ ಎದುರಾಗುತ್ತದೆ. ಈ ಮೊದಲು ಗಿಲ್ಲಿ ಜೊತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಗಗನಾ (Gagana Bhari) ಅವರನ್ನೂ ಜನರು ಟ್ರೋಲ್ ಮಾಡಿದ್ದರು. ಆ ಬಗ್ಗೆ ಈಗ ಕಾವ್ಯಾ ಶೈವ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಇದರ ಬಗ್ಗೆ ನಾನು ಮತ್ತು ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಮಾತನಾಡಿದ್ದೆವು. ಅದು ಪ್ರಸಾರ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಾಯಶಃ ಗಗನಾ ಈಗ ಗಿಲ್ಲಿಯನ್ನು ಯಾಕೆ ಅವಾಯ್ಡ್ ಮಾಡಿರಬಹುದು? ಒಂದು ಸ್ನೇಹ ಜನರಿಗೆ ಇಷ್ಟ ಆಗಿರುತ್ತದೆ. ಅದು ಬೇರೆ ರೀತಿ ಬಿಂಬಿತ ಆಗುತ್ತಿದೆ ಎಂದಾಗ ಹುಡುಗಿಯಾಗಿ ಗಗನಾ ತನ್ನ ನಿರ್ಧಾರ ತೆಗೆದುಕೊಂಡಿದ್ದಾಳೆ ಅಂತ ಹೇಳಲು ನಾನು ಇಷ್ಟಪಡುತ್ತೇನೆ’ ಎಂದಿದ್ದಾರೆ ಕಾವ್ಯಾ ಶೈವ.

‘ಹಾಗಂತ, ನನಗೆ ನೀವು ಪದೇಪದೇ ಏನೋ ಹೇಳಿದರೆ ನಾನು ಅವಾಯ್ಡ್ ಮಾಡುತ್ತೇನೆ ಅಂತೇನಿಲ್ಲ. ನಾನು ಗಿಲ್ಲಿ ನಂಬರ್ ಬ್ಲಾಕ್ ಮಾಡುತ್ತೇನೆ ಅಂತ ಹೇಳಿದ್ದನ್ನು ಕೂಡ ಜನರು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಸ್ನೇಹದಲ್ಲಿ ನಾವು ಜಗಳ ಆಡುತ್ತಿದ್ವಿ, ಇಷ್ಟಪಡುತ್ತಿದ್ವಿ. ರೇಗಿಸಿದರೆ ಬ್ಲಾಕ್ ಮಾಡುತ್ತೇನೆ ಎಂಬುದನ್ನು ನಾನು ಯಾವ ಉದ್ದೇಶದಲ್ಲಿ ಹೇಳಿದ್ದೇನೆ ಅಂತ ನಿಮಗೆ ಗೊತ್ತಿದೆ. ಅದನ್ನು ನೀವು ಸೀರಿಯಸ್ ಆಗಿ ತೆಗೆದುಕೊಂಡರೆ, ಅದಕ್ಕೆ ನಾನು ಏನು ಹೇಳಬೇಕು ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಕಾವ್ಯಾ.

‘ನಮ್ಮ ಸ್ನೇಹ ಬಿಗ್ ಬಾಸ್ ಮನೆ ಒಳಗೆ ಹೇಗೆ ಇತ್ತೋ ಹೊರಗಡೆ ಕೂಡ ಹಾಗೆಯೇ ಮುಂದುವರಿಯುತ್ತದೆ. ಆ ಸ್ನೇಹ ಮುರಿಯಲು ನನಗೆ ಸೂಕ್ತ ಕಾರಣಗಳು ಇಲ್ಲ. ನಾನು ಏನು ಮಾಡಿದರೂ ತಪ್ಪಾಗಿ ಕಾಣಿಸುತ್ತಿದೆ. ನಾನು ಗರಗಸದ ರೀತಿ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಆದರೂ ಪರವಾಗಿಲ್ಲ. ನೆಗೆಟಿವ್ ಆಗುತ್ತದೆ ಎಂಬ ಕಾರಣಕ್ಕೆ ನಾನು ಏನನ್ನೂ ಬದಲಾಯಿಸಿಕೊಳ್ಳಲ್ಲ’ ಎಂದು ಕಾವ್ಯಾ ಶೈವ ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು

ಗಿಲ್ಲಿ ನಟ, ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮತ್ತು ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ತಲುಪಿದ್ದರು. ಕಾವ್ಯಾ ಮತ್ತು ಗಿಲ್ಲಿ ಅವರು ಫಿನಾಲೆ ತನಕ ಯಾವುದೇ ಕಿರಿಕ್ ಇಲ್ಲದೇ ಸ್ನೇಹ ಮುಂದುವರಿಸಿದ್ದನ್ನು ಕಂಡು ಅವರ ಅಭಿಮಾನಿಗಳಿಗೆ ಖುಷಿ ಆಗಿತ್ತು. ನಿಜ ಜೀವನದಲ್ಲಿಯೂ ಕಾವ್ಯಾ-ಗಿಲ್ಲಿ ಜೋಡಿ ಆಗಲಿ ಎಂಬ ಆಸೆ ಅನೇಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು – Kannada News | Bengaluru Accidental Fire: Sheds Housing Suspected Bangladeshi Migrants Gutted

ಆನೇಕಲ್​​, ಜನವರಿ 20: ಶಂಕಿತ ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್​ಗಳಿಗೆ ಬೆಂಕಿ ಬಿದ್ದಿರುವಂತಹ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಬಳಿಯ ಎಸ್​​.ಬಿಂಗೀಪುರ ಕೆರೆ ಸಮೀಪ ಅವಘಡ ಸಂಭವಿಸಿದೆ. ಆಕಸ್ಮಿಕ ಬೆಂಕಿಯಿಂದಾಗಿ ಗುಜರಿ ಶೆಡ್​ಗಳು ಹೊತ್ತಿ ಉರಿದಿವೆ. ಒಂದು ವಾರದ ಹಿಂದೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶಂಕಿತ ಬಾಂಗ್ಲಾ ವಲಸಿಗರನ್ನು ತೆರವುಗೊಳಿಸಿದ್ದರು. ಸದ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಂಕಿತ ಬಾಂಗ್ಲಾ ವಲಸಿಗರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಲ್ಲೇಶ್ವರಂನ ಸಂಪಿಗೆ ರಸ್ತೆ ದುಬಾರಿ: ಪೇ ಆ್ಯಂಡ್​ ಪಾರ್ಕಿಂಗ್​ ವ್ಯವಸ್ಥೆ ಜಾರಿ – Kannada News | Bengaluru Pay and Park: Malleswaram Sampige Rd Shoppers Face New Parking Fees

ಬೆಂಗಳೂರು, ಜನವರಿ 20: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರದ ಕೇಂದ್ರ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪೇ ಆ್ಯಂಡ್ ಪಾರ್ಕ್ (Pay and Park) ಯೋಜನೆಯನ್ನು ನಗರದಾದ್ಯಂತ ವಿಸ್ತರಿಸಲು ಮುಂದಾಗಿದೆ. ಹಾಗಾಗಿ ಇದೀಗ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್​ ಮಲ್ಲೇಶ್ವರನ ಸಂಪಿಗೆ ರಸ್ತೆಯಲ್ಲಿ ಪೇ ಅಂಡ್​ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಮಲ್ಲೇಶ್ವರನ ಸಂಪಿಗೆ ರಸ್ತೆ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್. ಸಂಪಿಗೆ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳು ಸದಾ ವಿವಿಧ ಚಟುವಟಿಕೆಗಳಿಂದ ಗಿಜುಗುಡುತ್ತಿರುತ್ತವೆ. ಆದರೆ ಶಾಪಿಂಗ್ ಅಂತಾ ಕಾರು, ಬೈಕ್​ಗಳಲ್ಲಿ ಬರುವ ಜನರು ಮಾತ್ರ ಶೀಘ್ರದಲ್ಲೇ ಪಾರ್ಕಿಂಗ್​​​ ಅಂತಲೇ ಹೆಚ್ಚುವರಿ ಹಣ ತೆರಬೇಕು.

ಪೇ ಅಂಡ್​ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರಿನ ಮಲ್ಲೇಶ್ವರಂ ಐಕಾನಿಕ್ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿನ ಸಂಪಿಗೆ ರಸ್ತೆ ಶಾಪಿಂಗ್ ಪ್ರಿಯರಿಗೆ ಅಚ್ಚುಮೆಚ್ಚು. ಕಾರು, ಬೈಕ್​ಗಳಲ್ಲಿ ಶಾಪಿಂಗ್ ಅಂತಾ​ ಇಲ್ಲಿಗೆ ಬರುತ್ತಿದ್ದ ಗ್ರಾಹಕರು ಉಚಿತವಾಗಿ ವಾಹನಗಳನ್ನ ಪಾರ್ಕಿಂಗ್​ ಮಾಡಿ ಹೋಗುತ್ತಿದ್ದರು. ಆದರೆ ಈ ರಸ್ತೆಯಲ್ಲಿ ಪೇ ಆ್ಯಂಡ್​ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡುವುದಕ್ಕೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಮುಂದಾಗಿದೆ.

ಇದನ್ನೂ ಓದಿ: Bengaluru Pay and Park: ಬೆಂಗಳೂರಿನಲ್ಲಿ ಅಲ್ಲಲ್ಲಿ ವಾಹನ ಪಾರ್ಕ್​ ಮಾಡುವವರಿಗೆ ಜಿಬಿಎ ಶಾಕ್!

ಇನ್ನು ಪಶ್ಚಿಮ ನಗರ ಪಾಲಿಕೆ ಟೆಂಡರ್ ಆಹ್ವಾನ ಮಾಡಿದ್ದು, ಸಂಪಿಗೆ ರಸ್ತೆ, 11,15 ಹಾಗೂ 18ನೇ ಅಡ್ಡರಸ್ತೆಗಳಲ್ಲಿ ಪಾರ್ಕಿಂಗ್​ಗೆ ಶುಲ್ಕ ಸಂಗ್ರಹಿಸಲಿದೆ. ವಾರ್ಷಿಕ ಪರವಾನಿಗೆ ಪಡೆಯಲು ಬಯಸುವ ಏಜೆನ್ಸಿಗಳಿಗೆ 2.20 ಕೋಟಿ ರೂಪಾಯಿಗಳ ಶುಲ್ಕವನ್ನ ನಿಗದಿ ಮಾಡಿದೆ. ಆದರೆ ಪಾಲಿಕೆ ನಿರ್ಧಾರದ ವಿರುದ್ಧ ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ವೈಟ್​ ಟ್ಯಾಪಿಂಗ್​ ರಸ್ತೆಗಳಲ್ಲೆಲ್ಲ ಶೀಘ್ರ ಪೇ ಆ್ಯಂಡ್​ ಪಾರ್ಕಿಂಗ್​? ದುಬಾರಿ ವೆಚ್ಚ ಸರಿದೂಗಿಸಲು ಜಿಬಿಎ ಹೊಸ ಪ್ಲಾನ್

ಬಟ್ಟೆ, ಚಪ್ಪಲಿ, ಅಲಂಕಾರಿಕ ವಸ್ತುಗಳು, ಆಹಾರ ಉತ್ಪನ್ನಗಳ ಖರೀದಿಗೆ ಮುಗಿಬೀಳುತ್ತಿದ್ದ ಗ್ರಾಹಕರಿಗೆ ಸಂಪಿಗೆ ರಸ್ತೆ ಮತ್ತಷ್ಟು ದುಬಾರಿಯಾಗಲಿದೆ. ಉಚಿತವಾಗಿ ಪಾರ್ಕ್ ಮಾಡಿ ಹೋಗುತ್ತಿದ್ದ ಜನರಿಗೆ ಶೀಘ್ರದಲ್ಲೇ ಈ ಹೊರೆ ಬಿಸಿಮುಟ್ಟಿಸಲಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್​ನಲ್ಲಿ ಪ್ರಹ್ಲಾದ ಜೋಷಿ – Kannada News | Indian economy accelerated while world slowed down, says Pralhad Joshi

ನವದೆಹಲಿ, ಜನವರಿ 20: ಜಗತ್ತಿನ ಆರ್ಥಿಕತೆ ಹಿನ್ನಡೆ ಅನುಭವಿಸುತ್ತಿರುವ ಹೊತ್ತಿನಲ್ಲೂ ಭಾರತವು ತನ್ನ ಬೆಳವಣಿಗೆಯ ವೇಗ ಹೆಚ್ಚಿಸಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ. ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ (WEF Summit 2026, Davos) ಪ್ರಹ್ಲಾದ್ ಜೋಷಿ ಮಾತನಾಡುತ್ತಾ, ಭಾರತದ ಆರ್ಥಿಕ ವ್ಯವಸ್ಥೆ ಸುದೃಢವಾಗಿರುವುದನ್ನು ಎತ್ತಿತೋರಿಸಿದ್ದಾರೆ.

‘ಜಾಗತಿಕ ಸರಬರಾಜು ಸರಪಳಿಗಳಿಗೆ ಧಕ್ಕೆಯಾದಾಗ ಭಾರತವು ದೂರದೃಷ್ಟಿಯೊಂದಿಗೆ ತನ್ನ ಅಡಿಪಾಯಗಳನ್ನು ಭದ್ರಗೊಳಿಸುವ ಮೂಲಕ ಮತ್ತು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕ ಕ್ಷಮತೆಯನ್ನು ನಿರ್ಮಿಸಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರೂ ಆದ ಜೋಷಿ ಟ್ವೀಟ್ ಮಾಡಿದ್ದಾರೆ.

ಪ್ರಹ್ಲಾದ ಜೋಷಿ ಅವರ ಎಕ್ಸ್ ಪೋಸ್ಟ್

‘ಸರ್ಕಾರದ ಸ್ಥಿರ ನೀತಿ, ಸುಧಾರಣೆಗಳು, ಉತ್ತಮ ಇಕೋಸಿಸ್ಟಂ ನಿರ್ಮಾಣಗೊಂಡಿರುವ ಫಲವಾಗಿ ಭಾರತವು ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಸ್ಥಳವೆನಿಸಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. ಹೂಡಿಕೆದಾರರಿಗೆ ಸ್ಥಿರ ಲಾಭ ತರುತ್ತಿರುವುದು ಮಾತ್ರವಲ್ಲ, ದೂರಗಾಮಿ ಬೆಳವಣಿಗೆಗೆ ಸಹಕಾರಿಯಾಗುವ ನಾವೀನತ್ಯೆ, ವಿಸ್ತರಣೆ ಹಾಗೂ ಸುಸ್ಥಿರ ಮೌಲ್ಯ ಸೃಷ್ಟಿ ಮಾಡುತ್ತಿದೆ’ ಎಂದು ಪ್ರಲ್ಹಾದ್ ಜೋಷಿ ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು

ಜನಸಂಖ್ಯೆ ಶೇ. 17; ಮಾಲಿನ್ಯ ಹೊರಸೂಸುವಿಕೆ ಶೇ. 4 ಮಾತ್ರ

ಡಾವೋಸ್ ಸಮಿಟ್​ನಲ್ಲಿ ಮಾತನಾಡುತ್ತಿದ್ದ ನವೀಕರಣ ಇಂಧನ ಸಚಿವ ಪ್ರಲ್ಹಾದ್ ಜೋಷಿ ಅವರು ಭಾರತ ಅಭಿವೃದ್ಧಿಶೀಲ ಆರ್ಥಿಕತೆಯಾದರೂ ಪರಿಸರ ಮಾಲಿನ್ಯಕ್ಕಾಗಿ ಪಡುತ್ತಿರುವ ಶ್ರಮ ಹಾಗೂ ಆ ನಿಟ್ಟಿನಲ್ಲಿ ಮಾಡಿದ ಸಾಧನೆಯನ್ನು ತಿಳಿಸಿದ್ದಾರೆ.

ವಿಶ್ವದ ಶೇ. 17ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದೆ. ಆದರೆ, ಜಾಗತಿಕವಾಗಿ ಹೊರಸೂಸುವ ಮಾಲಿನ್ಯದಲ್ಲಿ ಭಾರತದ ಪಾಲು ಶೇ. 4 ಮಾತ್ರ ಎಂದು ಜೋಷಿ ಹೇಳಿದ್ದಾರೆ.

ಇದನ್ನೂ ಓದಿ: ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ

ಭಾರತದಲ್ಲಿ ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸಮಿಟ್​ನಲ್ಲಿ ಜೋಷಿ ಪ್ರಸ್ತಾಪ ಮಾಡಿದ್ದಾರೆ. ಸಚಿವರು ಈ ಸಂದರ್ಭದಲ್ಲಿ ಕೆನಡಾ ಮೂಲದ ಲಾ ಕೇಸ್ಸೆ (La Caisse) ಎನ್ನುವ ಕಂಪನಿಯ ಸಿಇಒ ಹಾಗೂ ಸಿಒಒ ಅವರುಗಳೊಂದಿಗೆ ಹೂಡಿಕೆ ವಿಚಾರವಾಗಿ ಚರ್ಚೆ ಕೂಡ ನಡೆಸಿದರು. 2030ರೊಳಗೆ ಹವಾಮಾನ ಬದಲಾವಣೆ ಎದುರಿಸಬಲ್ಲ ಕಾರ್ಯಕ್ರಮಗಳಲ್ಲಿ 400 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಈ ಕಂಪನಿ ಬದ್ಧವಾಗಿದೆ. ಈ ಕಾರ್ಯದಲ್ಲಿ ಭಾರತದೊಂದಿಗೆ ಜೊತೆಯಾಗಬೇಕೆಂದು ಜೋಷಿ ಈ ಸಂದರ್ಭದಲ್ಲಿ ಶಿಫಾರಸು ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಖಾನೆಗಳ ಹೊಗೆಗೆ ರೋಸಿ ಹೋದ ಅನ್ನದಾತ: ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನ ಕರೀತಿವಿ ಎಂದ ರೈತರು – Kannada News | Koppal’s Hirebaganal: Factory Smoke Turns Crops Black, Farmers Suffer and Protest

ಕೊಪ್ಪಳ, ಜನವರಿ 20: ಕೊಪ್ಪಳ (Koppal) ಜಿಲ್ಲೆ ಕಾರ್ಖಾನೆಗಳ (Factory) ಊರು. ಈ ಜಿಲ್ಲೆಯಲ್ಲಿ ಕಾರ್ಖಾನೆ ವಿರೋಧಿಸಿ ಕಳೆದ 80 ದಿನಗಳಿಂದ ಹೋರಾಟ ನಡೆಯುತ್ತಿದೆ. ಮತ್ತೊಂದು ಕಡೆ ಕಾರ್ಖಾನೆಗಳ ಹೊಗೆಯಿಂದ ಆ ಗ್ರಾಮದ ಜನ ರೋಸಿ ಹೋಗಿದ್ದಾರೆ. ನಿನ್ನೆ ಆ ಗ್ರಾಮದ ಜನ ಕಾರ್ಖಾನೆ ಅಧಿಕಾರಿಗಳನ್ನ ಗ್ರಾಮಕ್ಕೆ ಕರೆಸಿ ತರಾಟೆಗೆ ತಗೆದುಕೊಂಡಿದ್ದರು. ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದ ಏನೆಲ್ಲಾ ಸಮಸ್ಯೆ ಆಗತ್ತೆ ಅನ್ನೊದನ್ನ ಬಿಚ್ಚಿಟ್ಟಿದ್ದರು. ಸಭೆಯಲ್ಲಿ ಅಧಿಕಾರಿಗಳು ಇನ್ಮುಂದೆ ಹೊಗೆ ಬಿಡಲ್ಲ ಎಂದು ಬರೆದುಕೊಟ್ಟಿದ್ದರು. ಆದರೂ ಆ ಗ್ರಾಮದಲ್ಲಿ ಹೊಗೆ ಮಾತ್ರ ಕಡಿಮೆ ಆಗಿಲ್ಲ. ಕಾರ್ಖಾನೆಗಳು ಬಿಡುವ ಹೊಗೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಜಮೀನುಗಳಲ್ಲಿ ಬೆಳೆದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಇದರಿಂದ ರೋಸಿಹೋದ ರೈತರು ಇದೀಗ ಗವಿ ಸಿದ್ದಪ್ಪನ ಮೊರೆ ಹೋಗಲು ಸಿದ್ಧರಾಗಿದ್ದಾರೆ.

ರೈತರಿಗೆ ಸಂಕಷ್ಟ ತಂದಿಟ್ಟ ಕಾರ್ಖಾನೆಗಳ ಹೊಗೆ

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮ ಕಾರ್ಖಾನೆಗಳಿಂದ ನಲುಗಿ ಹೋಗಿದೆ. ಹೀರೆಬಗನಾಳ ಗ್ರಾಮದ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಕಾರ್ಖಾನೆಗಳು ಬಿಡುವ ಹೊಗೆಯಿಂದ ಇದೀಗ ರೈತರಿಗೆ ಸಂಕಷ್ಟಕ್ಕೆ ತಂದಿಟ್ಟಿದೆ. ಹೊಗೆಯಿಂದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಬೆಳೆಗಳ ಮೇಲೆ ಕಪ್ಪು ಬೂದಿ ಬಂದು ಕೂತಿದೆ. ಇದರಿಂದ ಜಾನುವಾಗಳು ಸಹ ಬೆಳೆ ತಿನ್ನುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು

ಗ್ರಾಮದ ಬಹುತೇಕ ಜಮೀನುಗಳು ಕಪ್ಪು ಬೂದಿಯಿಂದ ನಲುಗಿವೆ. ಹಿರೇಬಗನಾಳ ಗ್ರಾಮದ ಗವಿಸಿದ್ದಪ್ಪ ಪಲ್ಲೇದ್ ಅನ್ನೋ ರೈತ ಜಾನುವಾರುಗಳಿಗಾಗಿ ಮೆಕ್ಕೆಜೋಳ ಬೆಳದಿದ್ದರು. ಆದರೆ ಇದೀಗ ಮೆಕ್ಕೆಜೋಳ ಸಂಪೂರ್ಣ ಕಪ್ಪಾಗಿದೆ. ಮೆಕ್ಕೆಜೋಳ ಎಲೆಯ ಮೇಲೆಲ್ಲಾ ಕಪ್ಪು ಧೂಳು ಬಂದು ಕೂತಿದೆ. ನಿನ್ನೆ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳ ಸಿಬ್ಬಂದಿಯನ್ನ ಕರೆದು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೆ ಹೊಗೆ ಬಂದ್ ಮಾಡುವಂತೆ ಸಹಿ ಮಾಡಿಸಿಕೊಂಡಿದ್ದರು. ಅಧಿಕಾರಿಗಳ ಸಹಿ ಮಾಡಿದ ಬಳಿಕ ಇಂದು ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ಕಾರ್ಖಾನೆಗಳ ಹೊಗೆಯಿಂದಾದ ಸಮಸ್ಯೆಯನ್ನ ತೆರೆದಿಟ್ಟಿದೆ.

ಗವಿ ಸಿದ್ದೇಶ್ವರ ಸ್ವಾಮೀಜಿಗಳ ಮೊರೆ

ನಿನ್ನೆ ಹಿರೇಬಗನಾಳ ಗ್ರಾಮದ ಜನ ಗ್ರಾಮದ ಸುತ್ತಮುತ್ತ ಇರುವ ವನ್ಯ ಸ್ಟೀಲ್, ಐಎಲ್​ಸಿ, ಪಿಬಿಎಸ್, ಠಾಕೂರ್ ಸೇರಿ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಂದ ಕಳೆದ ಹಲವು ವರ್ಷಗಳಿಂದ ಗ್ರಾಮದ ಜನ ನರಕ ಅನುಭವಿಸುತ್ತಿದ್ದಾರೆ. ನಿನ್ನೆ ಕಾರ್ಖಾನೆ ಅಧಿಕಾರಿಗಳನ್ನ ಕರೆದು ತರಾಟೆಗೆ ತಗೆದುಕೊಂಡಿದ್ರು, ಅದಾದ ಬಳಿಕವೂ ಕಾರ್ಖಾನೆ ಅಧಿಕಾರಿಗಳು ಹೊಗೆ ಬಿಡೋದನ್ನ ನಿಲ್ಲಿಸಿಲ್ಲ. ಇಂದಿಗೂ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳ ಹೊಗೆಯಿಂದ ನರಳುತ್ತಿದ್ದಾರೆ. ಗ್ರಾಮದ ಜಮೀನನಲ್ಲಿ ಬೆಳೆದ ಬೆಳೆಗಳು ಇದೀಗ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಖಾನೆಗಳು ಹೊಗೆ ಕಡಿಮೆ ಮಾಡದೆ ಹೋದರೆ ನಾವು ಬದಕಲ್ಲ, ಹೋರಾಟಕ್ಕೆ ಗವಿ ಸಿದ್ದೇಶ್ವರ ಸ್ವಾಮೀಜಿಗಳನ್ನ ಕರೆಯುತ್ತೇವೆ ಅನ್ನೋದು ರೈತರ ಮಾತು.

ಇದನ್ನೂ ಓದಿ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿರೋಧಕ್ಕೆ ಸೆಡ್ಡು: ಬಲ್ಡೋಟಾ ಕಂಪನಿಗಾಗಿ ಪ್ರತಿಭಟನೆ

ಒಟ್ಟಾರೆ ಹಿರೇಬಗನಾಳ ಗ್ರಾಮದ ಜನ, ಕಾರ್ಖಾನೆಗಳಿಂದ ನರಕಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಗಳನ್ನ ಜಾನುವಾರುಗಳು ಕೂಡ ತಿನ್ನಲಾಗದಂತಹ ಸ್ಥಿತಿನಿರ್ಮಾಣವಾಗಿದೆ. ನಿನ್ನೆ ಕಾಟಾಚಾರಕ್ಕೆ ಕಾರ್ಖಾನೆ ಅಧಿಕಾರಿಗಳು ಬಂದು ಹೋಗಿದ್ದು ಬಿಟ್ಟರೆ ಯಾವ ಬದಲಾವಣೆ ಆಗಿಲ್ಲ. ಎಂದಿನಂತೆ ಕಾರ್ಖಾನೆಗಳು ಹೊಗೆಯನ್ನ ಉಗುಳುತ್ತಿವೆ. ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ದೊಡ್ಡ ಹೋರಾಟ ಆಗೋದು ಖಚಿತ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:50 pm, Tue, 20 January 26

Source link