ಗಿಲ್ಲಿ ನಟ ಅವರ ಗೆಲುವಿನ ಬಳಿಕ ಅಶ್ವಿನಿ ಗೌಡ (Ashwini Gowda) ಅವರು ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ. ಗಿಲ್ಲಿ ನಟ ಬಡವನ ರೀತಿ ನಟಿಸಿದ್ದರು ಎಂಬ ಅರ್ಥದಲ್ಲಿ ಅಶ್ವಿನಿ ಮಾತಾಡಿದ್ದಾರೆ. ಆ ಮೂಲಕ ಬಿಗ್ ಬಾಸ್ (BBK 12) ಮುಗಿದ ಮೇಲೂ ಅವರು ಕೆಣಕಿದ್ದಾರೆ. ಅಶ್ವಿನಿ ಗೌಡ ಅವರ ಈ ಹೇಳಿಕೆಗೆ ಗಿಲ್ಲಿ ನಟ ಖಡಕ್ ತಿರುಗೇಟು ನೀಡಿದ್ದಾರೆ. ‘ಮೇಡಂ ಏನು ಹೇಳಿದ್ದಾರೋ ನಾನು ನೋಡಿಲ್ಲ. ಒಂದು ವೇಳೆ ಅವರು ಹೇಳಿದ್ದರೆ, ನಾನು ಬಡವ ಅಂತ ಯಾವತ್ತೂ ಹೇಳಿಕೊಂಡಿಲ್ಲ. ನಾನು ಬನಿಯನ್ ಹಾಕಿಕೊಂಡಿದ್ದಕ್ಕೆ ಬಡವ ಅಂತ ಹೇಳೋಕೆ ಆಗಲ್ಲ. ಶ್ರೀಮಂತರು ಬನಿಯನ್, ನೈಟ್ ಪ್ಯಾಂಟ್, ಚಡ್ಡಿ ಹಾಕಲ್ವಾ? ಮೇಡಂ ಮಾತಿನ ಭರದಲ್ಲಿ ಆ ರೀತಿ ಹೇಳಿರಬಹುದು’ ಎಂದು ಬಿಗ್ ಬಾಸ್ ಮನೆಯೊಳಗಿನ ರೀತಿಯೇ ಗಿಲ್ಲಿ ನಟ (Gilli Nata) ಅವರು ತಿರುಗೇಟು ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ’ ವಿಜೇತ (Bigg Boss Kannada 12 Winner) ಗಿಲ್ಲಿ ನಟ ಅವರ ಬಗ್ಗೆಯೇ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಗೆದ್ದಿರುವ ಅವರು ಮಂಡ್ಯ, ಮದ್ದೂರು, ಮಳವಳ್ಳಿ ಮುಂತಾದೆಡೆ ಮೆರವಣಿಗೆಯಲ್ಲಿ ಭಾಗಿ ಆಗಿದ್ದಾರೆ. ಗಿಲ್ಲಿ ಹೋದಲ್ಲೆಲ್ಲ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಗಿಲ್ಲಿ ನಟನನ್ನು ನೋಡಲು ಬಂದಿದ್ದಾರೆ. ಗಿಲ್ಲಿ ನಟ (Gilli Nata) ಅವರು ಸ್ವಗ್ರಾಮವಾದ ದಡದಪುರಕ್ಕೆ ಹೋಗಿದ್ದಾರೆ. ಆದರೆ ಸ್ವಂತ ಮನೆಗೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ! ಹಾಗಾಗಿ ಅವರು ಕೂಡಲೇ ವಾಪಸ್ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದ್ದಾರೆ.
ಇಂದು (ಜನವರಿ 19) ಸಂಜೆ ವೇಳೆಗೆ ಗಿಲ್ಲಿ ನಟ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ತಲುಪಿದರು. ಸ್ವಗ್ರಾಮಕ್ಕೆ ಗಿಲ್ಲಿ ನಟರಾಜ್ ಬರುತ್ತಿದ್ದಂತೆಯೇ ಗ್ರಾಮಸ್ಥರಿಂದ ಸಂಭ್ರಮ ಜೋರಾಯಿತು. ದಡದಪುರ ಗ್ರಾಮದಲ್ಲಿ ಟ್ರೋಫಿ ಜೊತೆ ಗಿಲ್ಲಿ ನಟ ಮೆರವಣಿಗೆ ಮಾಡಿದರು. ಬಸವೇಶ್ವರ ದೇಗುಲದವರೆಗೆ ಗಿಲ್ಲಿ ನಟನ ಮೆರವಣಿಗೆ ನಡೆಯಿತು. ಗ್ರಾಮಸ್ಥರು ಗಿಲ್ಲಿ ಗಿಲ್ಲಿ ಎಂದು ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮೂರಿನ ಹುಡುಗನಿಗೆ ಮಹಿಳೆಯರು ಆರತಿ ಬೆಳಗಿದರು.
ಗಿಲ್ಲಿ ಮನೆ ಬಳಿ ನೂರಾರು ಅಭಿಮಾನಿಗಳು ನೆರೆದಿದ್ದರು. ಮಗನ ಆಗಮನಕ್ಕಾಗಿ ಮನೆ ಮುಂದೆ ಸಗಣಿ ಸಾರಿಸಿ, ರಂಗೋಲಿ ಹಾಕಲಾಗಿತ್ತು. ಕೈಯಲ್ಲಿ ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡು ಬಂದಿದ್ದ ಅಭಿಮಾನಿಗಳು ಕೂಡ ಅಲ್ಲಿ ಜಮಾಯಿಸಿದ್ದರು. ಸ್ವಗ್ರಾಮದ ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣದಿಂದ ಗಿಲ್ಲಿ ನಟ ಅವರು ಊರಿಗೆ ಬಂದರೂ ಮನೆಗೆ ಬಾರದೇ ವಾಪಸ್ ಬೆಂಗಳೂರಿಗೆ ತೆರಳುವಂತಾಯಿತು.
ಅದಕ್ಕೂ ಮುನ್ನ ಮಳವಳ್ಳಿಯ ಪ್ರಮುಖ ರಸ್ತೆಗಳಲ್ಲಿ ಗಿಲ್ಲಿಯ ಮೆರವಣಿಗೆ ನಡೆಯಿತು. ದಂಡಿನಮಾರಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಹೊರಟಿತು. ಬಿಗ್ಬಾಸ್ ರಿಯಾಲಿಟಿ ಶೋಗೆ ಹೋಗುವಾಗಲೂ ಗಿಲ್ಲಿ ನಟ ಅವರು ಇಲ್ಲಿ ಪೂಜೆ ಮಾಡಿಸಿದ್ದರು. ಆದ್ದರಿಂದ ಈಗ ಬಿಗ್ಬಾಸ್ ಟ್ರೋಫಿ ಜೊತೆ ಬಂದು ದಂಡಿನಮಾರಮ್ಮನ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.
ಮದ್ದೂರು, ಕೆ.ಎಂ.ದೊಡ್ಡಿ ಸೇರಿ ಹಲವು ಊರುಗಳಲ್ಲಿ ತೆರೆದ ವಾಹನದಲ್ಲಿ ನೂರಾರು ಅಭಿಮಾನಿಗಳ ಜೊತೆ ಗಿಲ್ಲಿ ನಟ ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಸ್ಥಾನದಿಂದ ದಡದಪುರದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ವೇಳೆ ಗಿಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಬೆಂಗಳೂರು, ಜನವರಿ 19: ಡಿಜಿಪಿ ರಾಮಚಂದ್ರ ರಾವ್ (DGP Ramachandra rao) ಕಚೇರಿಯಲ್ಲಿಯೇ, ಅದು ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ರಾಸಲೀಲೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಆ ಮೂಲಕ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ರಾಮಚಂದ್ರ ರಾವ್ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಸೇರಿದಂತೆ ಹಲವು ಕೇಸ್ಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ಮೇಲಿರುವ ಆರೋಪಗಳು ಯಾವವು?
ಸದ್ಯ ರಾಮಚಂದ್ರ ರಾವ್ ಕಥೆ, ಬೇಲಿಯೇ ಎದ್ದು ಹೊಲ ಮೆಯ್ದಂತೆ ಆಗಿದೆ. ಇವರ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. 2014ರಲ್ಲಿ ಮೈಸೂರಿನ ಇಲವಾಲದಲ್ಲಿ ನಡೆದಿದ್ದ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರ ರಾವ್ ಹಣವನ್ನು ದುರ್ಬಳಕೆ ಆರೋಪ ಕೇಳಿಬಂದಿತ್ತು. ಬಸ್ನಲ್ಲಿ ಸಾಗಿಸಲಾಗುತ್ತಿದ್ದ 2 ಕೋಟಿಗೂ ಅಧಿಕ ಹಣ ರಾಬರಿ ಮಾಡಲಾಗಿತ್ತು. ಈ ರಾಮಚಂದ್ರ ರಾವ್ ದಕ್ಷಿಣ ವಲಯದ ಐಜಿಪಿ ಆಗಿದ್ದರು. ರಿಕವರಿ ಮಾಡಲಾಗಿದ್ದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.
2017ರಲ್ಲಿ ರಾಮಚಂದ್ರ ರಾವ್ ಬೆಳಗಾವಿ ಉತ್ತರ ವಲಯದ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ, 2017ರ ನವೆಂಬರ್ 30ರಂದು ನಡೆದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಂಶಯಾಸ್ಪದ ಪೊಲೀಸ್ ಎನ್ಕೌಂಟರ್ ಮತ್ತು ಗಂಗಾಧರ ಚಡಚಣ ಸಂಶಯಾಸ್ಪದ ಕೊಲೆ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಹೆಸರು ಕೇಳಿಬಂದಿತ್ತು. ಈ ಎರಡೂ ಪ್ರಕರಣಗಳನ್ನು ನಂತರ ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಅಂದಿನ ಸಿಐಡಿ ಎಸ್ಪಿ ಆನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ, ಈ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಪಾತ್ರ ಇಲ್ಲ ಎಂಬುವುದು ಸಾಬೀತಾಗಿತ್ತು. ಬಳಿಕ ಕಲಬುರಗಿ ಐಜಿಯಾಗಿದ್ದಾಗಲೂ ಮತ್ತೊಂದು ಆರೋಪ ಕೇಳಿಬಂದಿತ್ತು.
2024ರಲ್ಲಿ ಮಗನ ಹೆಸರಲ್ಲಿ ಬಿಟ್ ಕಾಯಿನ್ನಲ್ಲಿ ಹೂಡಿಕೆ ಆರೋಪ ಕೇಳಿಬಂದಿತ್ತು. ಇನ್ನು ಇತ್ತೀಚೆಗೆ ಮಗಳು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ಗೆ ಎಸ್ಕಾರ್ಟ್ ಕೊಟ್ಟ ಆರೋಪದಲ್ಲೂ ರಾಮಚಂದ್ರ ರಾವ್ ಸಸ್ಪೆಂಡ್ ಆಗಿದ್ದರು. ಹೀಗೆ ರಾಮಚಂದ್ರ ರಾವ್ ತಮ್ಮ ಅಧಿಕಾರದಲ್ಲಿರುವಾಗಲೇ ಸಾಕಷ್ಟು ಆರೋಪಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ನೊಯ್ಡಾ, ಡಿಸೆಂಬರ್ 19: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರು ನೊಯ್ಡಾ ಟೆಕ್ಕಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಮೀರತ್ ವಿಭಾಗೀಯ ಆಯುಕ್ತರು ಈ SIT ನೇತೃತ್ವ ವಹಿಸಲಿದ್ದಾರೆ. ಮೀರತ್ ವಲಯದ ಹೆಚ್ಚುವರಿ ಮಹಾನಿರ್ದೇಶಕರು (ADG) ಮತ್ತು ಲೋಕೋಪಯೋಗಿ ಇಲಾಖೆಯ (PWD) ಮುಖ್ಯ ಎಂಜಿನಿಯರ್ ಕೂಡ ಈ ತಂಡದಲ್ಲಿರಲಿದ್ದಾರೆ. 5 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಂಡಕ್ಕೆ ಸೂಚಿಸಲಾಗಿದೆ. ಇದಲ್ಲದೆ, ಐಎಎಸ್ ಅಧಿಕಾರಿ ಲೋಕೇಶ್ ಎಂ ಅವರನ್ನು ನೊಯ್ಡಾ ಪ್ರಾಧಿಕಾರದ ಸಿಇಒ ಸ್ಥಾನದಿಂದ ವಜಾಗೊಳಿಸಲಾಗಿದೆ.
ಗ್ರೇಟರ್ ನೊಯ್ಡಾದಲ್ಲಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದು 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಅವರು ತನ್ನ ಪ್ರಾಣ ಉಳಿಸಿಕೊಳ್ಳಲು ಕಾರಿನ ಬಾಗಿಲು ತೆರೆದು ಕಾರಿನ ಮೇಲೆ ಕುಳಿತಿದ್ದರು. ಮೊಬೈಲ್ ಟಾರ್ಚ್ ಬೀಸುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದರು. ಕೊನೆಗೆ ತನ್ನ ತಂದೆಗೆ ಫೋನ್ ಮಾಡಿ ತಾನು ಬಿದ್ದಿರುವ ವಿಷಯ ತಿಳಿಸಿದ್ದರು. ಆದರೆ, ಮೈ ಕೊರೆಯುತ್ತಿದ್ದ ನೀರಿನಲ್ಲಿ ಕಾರು ಮುಳುಗಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.
ಪೊಲೀಸರು ಹಲವಾರು ಗಂಟೆಗಳ ಕಾಲ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಅವರ ದೇಹವನ್ನು ಹೊರಗೆ ತೆಗೆಯಲಾಯಿತು. ಈ ವೇಳೆ ಡೆಲಿವರಿ ಬಾಯ್ ಒಬ್ಬರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅವರನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಮುಂಜಾನೆ ದಟ್ಟವಾದ ಮಂಜಿನ ನಡುವೆ ಮೆಹ್ತಾ ಅವರ ಕಾರು ನಿಯಂತ್ರಣ ತಪ್ಪಿ ಸೆಕ್ಟರ್ 150ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಗಾಗಿ ಅಗೆದ 20 ಅಡಿಗಳಿಗಿಂತ ಹೆಚ್ಚು ಆಳದ ಗುಂಡಿಗೆ ಬಿದ್ದಿತ್ತು. ಅವರು ಸಾವನ್ನಪ್ಪಿದ ಗುಂಡಿ ನೀರಿನಿಂದ ತುಂಬಿತ್ತು. ತಕ್ಷಣ ಅವರು ತಮ್ಮ ತಂದೆಗೆ ಫೋನ್ ಮಾಡಿ ತಾನು ನೀರಿನ ಗುಂಡಿಗೆ ಬಿದ್ದಿದ್ದೇನೆಂದು ತಿಳಿಸಿ ಹೇಗಾದರೂ ನನ್ನನ್ನು ಬದುಕಿಸಿ ಎಂದು ಗೋಗರೆದಿದ್ದರು. ಅವರು ಮನೆಯಿಂದ ಆ ಸ್ಥಳಕ್ಕೆ ಬರುವಷ್ಟರಲ್ಲಿ ಅವರ ಮಗ ಪ್ರಾಣ ಬಿಟ್ಟಾಗಿತ್ತು.
27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ತಮ್ಮ ಮನೆಯಿಂದ ಕೆಲವೇ ನಿಮಿಷಗಳ ದೂರದಲ್ಲಿದ್ದಾಗ ಈ ದುರಂತ ಸಂಭವಿಸಿತ್ತು. ಅವರ ಎಸ್ಯುವಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು, ಕಟ್ಟಡ ನಿರ್ಮಾಣಕ್ಕೆ ಅಗೆದ ಆಳವಾದ, ನೀರಿನಿಂದ ತುಂಬಿದ ಗುಂಡಿಗೆ ಬಿದ್ದಿತು. ದಟ್ಟವಾದ ಮಂಜು ಕವಿದಿದ್ದರಿಂದ ಅವರಿಗೆ ರಸ್ತೆ ಸರಿಯಾಗಿ ಕಾಣದೆ ಈ ದುರಂತ ಸಂಭವಿಸಿತ್ತು. ಈ ಸ್ಥಳದಲ್ಲಿ ಯಾವುದೇ ಬ್ಯಾರಿಕೇಡ್ಗಳು, ಪ್ರತಿಫಲಕಗಳು ಅಥವಾ ಎಚ್ಚರಿಕೆ ದೀಪಗಳು ಇರಲಿಲ್ಲ. ಅನೇಕ ಬಾರಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಜನವರಿ 19): ಅಬಕಾರಿ ಡಿಸಿ ಲೋಕಾ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಅವರಿಗೂ ಸಂಕಷ್ಟ ಎದುರಾಗಿದೆ. ಲಂಚದ ಬಹುಪಾಲು ಹಣವನ್ನ ಮಿನಿಸ್ಟರ್ಗೆ ಕೊಡಬೇಕು ಎನ್ನುವ ಅಬಕಾರಿ ಡಿಸಿಯ (Excise DC) ಆಡಿಯೊ ಆಧಾರದ ಮೇಲೆ ಆರ್.ಬಿ ತಿಮ್ಮಾಪುರ್ (RB Timmapur) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹೀಗಾಗಿ ಅಬಕಾರಿ ಲೈಸೆನ್ಸ್ ಗಾಗಿ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಅಬಕಾರಿ ಡಿಸಿ ಪ್ರಕರಣ ಇದೀಗ ಸಚಿವರ ಬುಡಕ್ಕೂ ಬಂದಿದೆ.
ಬ್ಯಾಟರಾಯನಪುರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವ ಕೆಲವೇ ನಿಮಿಷಗಳ ಮುಂಚೆ ದೂರುದಾರ ಲಕ್ಷ್ಮೀನಾರಾಯಣ ಮತ್ತು ಡಿಸಿ ಜಗದೀಶ್ ನಾಯ್ಕ್ ಲೈಸೆನ್ಸ್ ಡೀಲಿಂಗ್ ಮಾತಾಡಿದ್ದರು. ಈ ವೇಳೆ ಡಿಸಿ ಜಗದೀಶ್ ಲಂಚದ ಹಣವನ್ನ ಕೆಲವು ಅಧಿಕಾರಿಗಳ ಜೊತೆ ಸಚಿವರಿಗೂ ಕೊಡಬೇಕು ಎಂದಿದ್ದರು. ಇದೆಲ್ಲವನ್ನ ದೂರುದಾರರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇದೀಗ ಈ ಆಡಿಯೋ ಆಧಾರದ ಮೇಲೆ ಸಚಿವರ ವಿರುದ್ಧವೇ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್-7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ತಮ್ಮ ಮೇಲಿನ ಆರೋಪ ಅಲ್ಲಗೆಳೆದ ಸಚಿವ
ಇನ್ನು ಅಬಕಾರಿ ಇಲಾಖೆ ಲಂಚ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ ತಿಮ್ಮಾಪುರ್,
ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಕೆಲಸ, ನಾನು ಕಾನೂನು ಹೋರಾಟ ಮಾಡುತ್ತೇನೆ. ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಅಂತಾನಾ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಲೋಕಾಯುಕ್ತ ಎಸ್ ಪಿ ಶಿವಪ್ರಕಾಶ್ ದೇವರಾಜ್ ಗೆ ದೂರುದಾರ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಲೋಕಾಯುಕ್ತರು ಮಂತ್ರಿ ವಿರುದ್ಧ ಅದ್ಯಾವ ರೀತಿ ತನಿಖೆ ನಡೆಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಮಹಿಳಾ ಪ್ರೀಮಿಯರ್ ಲೀಗ್ನ 12ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಎರಡನೇ ಓವರ್ನಲ್ಲೇ ಎರಡು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಎಂದಿನಂತೆ ಆರ್ಸಿಬಿ ಪರ ಲಾರೆನ್ ಬೆಲ್ ಮೊದಲ ಓವರ್ ಬೌಲ್ ಮಾಡಿದರು. ಈ ಓವರ್ನಲ್ಲಿ ಗುಜರಾತ್ ಕೇವಲ 3 ರನ್ ಕಲೆಹಾಕಿತ್ತು. ಹೀಗಾಗಿ ಎರಡನೇ ಓವರ್ನಲ್ಲಿ ರನ್ ಕಲೆಹಾಕಲೇಬೇಕಾದ ಒತ್ತಡದಲ್ಲಿದ್ದ ಗುಜರಾತ್ ಓಪನರ್ ಬೆತ್ ಮೂನಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಓವರ್ನ ಮೊದಲ ಎಸೆತದಲ್ಲೇ ಕ್ಲಿನ್ ಬೌಲ್ಡ್ ಆದರು. ನಂತರ ಸ್ಟ್ರೈಕ್ಗೆ ಬಂದ ಮತ್ತೊಬ್ಬ ಓಪನರ್ ಸೋಫಿ ಡಿವೈನ್ ಕೂಡ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಮೂನಿ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಡಿವೈನ್ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಎರಡೂ ವಿಕೆಟ್ಗಳು ಭಾರತೀಯ ಬೌಲರ್ ಸಯಾಲಿ ಸತ್ಘರೆಗೆ ಬಿದ್ದವು.
ಬೆಂಗಳೂರು, ಜನವರಿ 19: ಬಸ್ಸಿನಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಹೆಣ್ಣು ಮಕ್ಕಳಿಗೆ ಹಾಡುಹಗಲಲ್ಲೇ ಅಹಿತಕರ ಅನುಭವವಾಗಿರಬಹುದು. ಆದರೆ ಬೆಂಗಳೂರಿನ (Bengaluru) ಹೊರವಲಯದಲ್ಲಿರಾತ್ರಿ ಓಡಾಡುತ್ತಿದ್ದ ಮಹಿಳೆಗೆ , ಹೆಣ್ಣು ಮಕ್ಕಳಿಗೆ ಈ ಸ್ಥಳ ಸೇಫ್ ಅಲ್ಲ ಎಂದೆನಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಜಿಮ್ನಿಂದ ಹಿಂತಿರುಗುವ ವೇಳೆ ವಿಡಿಯೋ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.
ದಿಯಪ್ಪರ್ಗರ್ಲಿ (@theyappergirlie) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೂ ಬೆಂಗಳೂರಿನ ಹೊರವಲಯದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಜಿಮ್ನಿಂದ ಹಿಂತಿರುಗಿದಾಗ ಬೀದಿ ದೀಪಗಳಿಲ್ಲದ ಈ ಪ್ರದೇಶವನ್ನು ನೋಡಿ ಶಾಕ್ ಆಗಿದ್ದಾರೆ. ಇಲ್ಲಿ ನಿಶ್ಯಬ್ದ ಮತ್ತು ಕತ್ತಲೆ ಮಾತ್ರ ಎಂದು ತನ್ನ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ನಾನು ಈ ಸ್ಥಳದಿಂದ ದೂರ ಹೋಗಲು ಬಯಸುತ್ತೇನೆ. ಬೀದಿ ದೀಪಗಳಿಲ್ಲದ ಈ ಸ್ಥಳ ತುಂಬಾ ಅಪಾಯಕಾರಿ ಎಂದೆನಿಸುತ್ತಿದೆ. ಹೆಣ್ಣು ಮಕ್ಕಳೇ ನೀವು ಹೊರವಲಯಕ್ಕೆ ಬರಲು ಬಯಸಿದರೆ, ದಯವಿಟ್ಟು ಎರಡು ಬಾರಿ ಯೋಚಿಸಿ. ನಗರದ ಭಾಗವು ತುಂಬಾ ಚೆನ್ನಾಗಿದೆ. ಆದರೆ ಹೊರವಲಯ ಖಂಡಿತ ಸೇಫ್ ಇಲ್ಲ ಎಂದು ಹೇಳಿರುವುದನ್ನು ನೋಡಬಹುದು.
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬ್ಲೂಆರ್ನ ಹೊರವಲಯಗಳು ಹಗಲು ಹೊತ್ತಿನಲ್ಲಿಯೂ ಅಪಾಯಕಾರಿ ಎನಿಸುತ್ತಿದ್ದವು, ಆ ಪ್ರದೇಶಗಳನ್ನು ಹಾದುಹೋಗುವಾಗ ನಿಮ್ಮ ಕ್ಯಾಮೆರಾವನ್ನು ಆನ್ನಲ್ಲಿ ಇರಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇವತ್ತು ಬೆಂಗಳೂರಿನಲ್ಲಿ ಎಲ್ಲೇ ಹೋದರೂ ರಾತ್ರಿ 9 ಗಂಟೆಯ ನಂತರ ನಿಮಗೆ ಹಾಗೆಯೇ ಅನಿಸುತ್ತದೆ ಎಂದಿದ್ದಾರೆ.
ಇನ್ನೊಬ್ಬರು, ನಗರದ ಬಗ್ಗೆ ಇಲ್ಲಸಲ್ಲದನ್ನು ಹೇಳುವುದನ್ನು ನಿಲ್ಲಿಸಿ. ನಾನು 13 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ ಮತ್ತು ಕಳೆದ ವರ್ಷದಿಂದ ನಾವು ಹೊರವಲಯಕ್ಕೆ ಸ್ಥಳಾಂತರಗೊಂಡಿದ್ದೇವೆ. ನನ್ನನ್ನು ನಂಬಿರಿ, ಇದು ಇತರ ಸ್ಥಳಗಳಿಗಿಂತ ತುಂಬಾ ಉತ್ತಮವಾಗಿದೆ. ನೀವು ಹೊರವಲಯದ ಯಾವ ಸ್ಥಳದಲ್ಲಿದ್ದೀರಿ ಎಂದು ನನಗೆ ಖಚಿತವಿಲ್ಲ. ಆದರೆ ನಾವು ನಗರ ಮಿತಿಯ ಹೊರವಲಯದಲ್ಲಿದ್ದೇವೆ, ಈ ಸ್ಥಳ ಅದ್ಭುತವಾಗಿದೆ. ಹೊಂದಿಕೊಳ್ಳಲು ಪ್ರಯತ್ನಿಸಿ ಮತ್ತು ದೂರು ನೀಡುವುದನ್ನು ನಿಲ್ಲಿಸಿ. ನೀವು ಇನ್ನೂ ಅಸುರಕ್ಷಿತರಾಗಿದ್ದರೆ ಪೆಪ್ಪರ್ ಸ್ಪ್ರೇ ಅನ್ನು ಕೈಯಲ್ಲಿ ಇಟ್ಟುಕೊಳ್ಳಿ. ನೀವು ಇಲ್ಲಿ ಅಸುರಕ್ಷಿತರೆಂದು ಭಾವಿಸಿದರೆ, ಇತರ ಎಲ್ಲಾ ನಗರದ ಹೊರವಲಯಗಳು ಒಂದೇ ಆಗಿರುತ್ತವೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾಬೂಲ್, ಜನವರಿ 19: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ (Blast) 7 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೊಡ್ಡ ಕಚೇರಿ ಕಟ್ಟಡಗಳು, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ರಾಯಭಾರ ಕಚೇರಿಗಳನ್ನು ಹೊಂದಿರುವ ಪ್ರದೇಶದಲ್ಲೇ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಈ ಸ್ಫೋಟ ನಡೆದ ಶಹರ್-ಎ-ನಾವ್ ಕಾಬೂಲ್ನ ಸುರಕ್ಷಿತ ಭಾಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸ್ಫೋಟದ ಜವಾಬ್ದಾರಿಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಮನೆ ಊಟ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಕಾನೂನಿನ ತೊಡಕು ಉಂಟಾಗುತ್ತಿದೆ. ಪವಿತ್ರಾ ಗೌಡ (Pavithra Gowda) ಅವರು ಗಂಭೀರವಾದ ಕೊಲೆ ಪ್ರಕರಣದಲ್ಲಿ ಸಿಲುಕುಕೊಂಡಿರುವುದರಿಂದ ಅವರಿಗೆ ಜೈಲಿನಲ್ಲಿ ನಿಯಮಗಳು ಕಠಿಣ ಆಗಿವೆ. ಕೊನೇ ಪಕ್ಷ ವಾರಕ್ಕೆ ಒಮ್ಮೆಯಾದರೂ ಮನೆ ಊಟ ಪಡೆಯಲು ಕೂಡ ಅವರು ಕಷ್ಟಪಡುವಂತಾಗಿದೆ.
ಈ ಮೊದಲು ಪವಿತ್ರಾ ಗೌಡ ಅವರಿಗೆ ಮನೆ ಊಟ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಜೈಲಧಿಕಾರಿಗಳು ಪ್ರಶ್ನೆ ಮಾಡಿದ್ದರು. ಈ ವಿಷಯದಲ್ಲಿ ಕೋರ್ಟ್ ತನ್ನದೇ ತೀರ್ಪನ್ನು ಮಾರ್ಪಾಡು ಮಾಡಿತ್ತು. ವಾರದಲ್ಲಿ ಒಮ್ಮೆ ಮಾತ್ರ ಊಟ ನೀಡಲು ಅವಕಾಶ ನೀಡಿತ್ತು. ಆದರೆ ಈಗ ಆ ಆದೇಶವನ್ನು ಕೂಡ ಪ್ರಶ್ನಿಸಿ ರಿಟ್ ಅರ್ಜಿ ಹಾಕಲಾಗಿದೆ.
ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ಗೆ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿರುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ರಿಟ್ ಅರ್ಜಿ ಸಲ್ಲಿಸಿದೆ. ಕೊಲೆ ಕೇಸಿನ ಯಾವುದೇ ಆರೋಪಿಗಳಿಗೆ ಮನೆ ಊಟ ನೀಡುವ ಸೌಲಭ್ಯವಿಲ್ಲ. ಕೋರ್ಟ್ ಆದೇಶ ಪಾಲಿಸಿದರೆ ಇತರೆ ಆರೋಪಿಗಳೂ ಕೇಳುತ್ತಾರೆ ಎಂಬ ಕಾರಣದಿಂದ ಸರ್ಕಾರ ರಿಟ್ ಅರ್ಜಿ ಸಲ್ಲಿಕೆ ಮಾಡಿದೆ.
ಜೈಲಿನ ಊಟಕ್ಕೆ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) 4 ಸ್ಟಾರ್ ನೀಡಿದೆ. ಆದ್ದರಿಂದ ಜೈಲಿನ ಊಟದ ಗುಣಮಟ್ಟದ ಬಗ್ಗೆ ಬೇರೆ ಕೈದಿಗಳು ಆಕ್ಷೇಪ ಎತ್ತಿಲ್ಲ. ಹೀಗಾಗಿ 57ನೇ ಸಿಸಿಹೆಚ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಸರ್ಕಾರ ಮನವಿ ಮಾಡಿದೆ.
ಪವಿತ್ರಾ ಗೌಡ ಅವರು ಜೈಲಿನ ಊಟದ ಬಗ್ಗೆ ತಕರಾರು ಎತ್ತಿದ್ದರು. ಜೈಲೂಟದಿಂದ ಚರ್ಮರೋಗ ಉಂಟಾಗಿದೆ. ಮೈಮೇಲೆ ಗುಳ್ಳೆಗಳು ಆಗುತ್ತಿವೆ ಎಂದು ಅವರು ವಾದ ಮಂಡಿಸಿದ್ದರು. ಜೈಲೂಟದಿಂದ ಫುಡ್ಪಾಯಿಸನ್ ಕೂಡ ಆಗುತ್ತಿದೆ ಎಂದು ನ್ಯಾಯಾಲಯದ ಎದುರು ಪವಿತ್ರಾ ಗೌಡ ಅವರು ಹೇಳಿದ್ದರು. ಅವರ ವಾದ ಆಲಿಸಿದ ಬಳಿಕ ವಾರಕ್ಕೊಮ್ಮೆ ಮನೆ ಊಟಕ್ಕೆ ಕೋರ್ಟ್ ಆದೇಶಿಸಿತ್ತು.
ನವದೆಹಲಿ, ಜನವರಿ 19: 2 ಗಂಟೆಗಳ ಭಾರತದ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮರದ ಕೆತ್ತನೆಯ ಉಯ್ಯಾಲೆ ಮತ್ತು ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡರು. ಬಳಿಕ ಅವರು ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸವಾದಲ್ಲಿ ಸಭೆ ನಡೆಸಿದರು. ತಮ್ಮ ಅತಿ ಸಣ್ಣ ಭೇಟಿಯನ್ನು ಮುಗಿಸಿಕೊಂಡು ವಾಪಾಸ್ ಹೊರಟ ಯುಎಇ ಅಧ್ಯಕ್ಷರಿಗೆ ವಿಶೇಷವಾದ ಉಡುಗೊರೆ ನೀಡಲಾಯಿತು.
ಗುಜರಾತಿನ ಕರಕುಶಲಕರ್ಮಿಗಳು ಕೆತ್ತಿದ ಮರದ ಉಯ್ಯಾಲೆಯನ್ನು ಯುಎಇ ಅಧ್ಯಕ್ಷರಿಗೆ ನೀಡಲಾಯಿತು. ಅದನ್ನು ಹೂವಿನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳೊಂದಿಗೆ ಕೈಯಿಂದ ಕೆತ್ತಲಾಗಿದೆ. ಗುಜರಾತಿ ಸಂಸ್ಕೃತಿಯಲ್ಲಿ ತಲೆಮಾರುಗಳಾದ್ಯಂತ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಪ್ರತಿನಿಧಿಸುವ ಈ ಉಯ್ಯಾಲೆಯ ಜೊತೆಗೆ ಕಾಶ್ಮೀರದ ಪಶ್ಮಿನಾ ಶಾಲನ್ನು ಸಹ ಉಡುಗೊರೆಯಾಗಿ ನೀಡಲಾಯಿತು. ಈ ಶಾಲನ್ನು ತುಂಬಾ ಉತ್ತಮವಾದ ಉಣ್ಣೆಯನ್ನು ಬಳಸಿ ಕೈಯಿಂದ ನೇಯಲಾಗಿದ್ದು, ಇದು ಮೃದು ಮತ್ತು ಬೆಚ್ಚಗಿರುತ್ತದೆ ಇದನ್ನು ತೆಲಂಗಾಣದಲ್ಲಿ ತಯಾರಿಸಲಾದ ಅಲಂಕಾರಿಕ ಬೆಳ್ಳಿ ಪೆಟ್ಟಿಗೆಯಲ್ಲಿ ಇರಿಸಿ ನೀಡಲಾಗಿದೆ. ಇದು ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ