Category Archives: Blog

Your blog category

ಆಧಾರ್ ಅಪ್​ಡೇಟ್ ಮಾಡದಿರುವವರ ಗಮನಕ್ಕೆ; ಉಚಿತ ಅಪ್​ಡೇಟ್ ಅವಕಾಶ ಮತ್ತೆ 1 ವರ್ಷ ವಿಸ್ತರಣೆ – Kannada News | Free Aadhaar Update Deadline Extended for One Year: Available upto 2027 June 14th

ನವದೆಹಲಿ, ಮೇ 18: ಕೋಟಿಗಟ್ಟಲೆ ಆಧಾರ್ ಕಾರ್ಡ್ (Aadhaar) ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಮೈಆಧಾರ್ (myAadhaar) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸಲು (Document Update) ನೀಡಲಾಗಿದ್ದ ಕೊನೆಯ ದಿನಾಂಕವನ್ನು ಯುಐಡಿಎಐ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಕಳೆದ ಕೆಲ ವರ್ಷಗಳಿಂದ ಈ ಅವಕಾಶವನ್ನು ವಿಸ್ತರಿಸುತ್ತಲೇ ಬರಲಾಗುತ್ತಿದೆ.

ಈ ಸುದ್ದಿಯ ಮುಖ್ಯಾಂಶಗಳು

  • ಈ ಹಿಂದೆ ನಿಗದಿಪಡಿಸಲಾಗಿದ್ದ ಉಚಿತ ಆಧಾರ್ ಅಪ್‌ಡೇಟ್ ಗಡುವನ್ನು ಈಗ ಮತ್ತೊಂದು ವರ್ಷದವರೆಗೆ ವಿಸ್ತರಿಸಲಾಗಿದೆ.
  • ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ಈಗ 2027ರ ಜೂನ್ 14 ರವರೆಗೆ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನವೀಕರಿಸಬಹುದು.
  • ಈ ಉಚಿತ ಸೌಲಭ್ಯವು ಕೇವಲ ಅಧಿಕೃತ ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಆಫ್‌ಲೈನ್ ಕೇಂದ್ರಗಳಲ್ಲಿ ಎಂದಿನಂತೆ ಶುಲ್ಕ ಅನ್ವಯವಾಗುತ್ತದೆ.

ವಿಸ್ತರಣೆಗೆ ಕಾರಣ ಮತ್ತು ಪ್ರಯೋಜನ

ಯುಐಡಿಎಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಮೈಆಧಾರ್ ಪೋರ್ಟಲ್ ಮೂಲಕ ಲಕ್ಷಾಂತರ ನಾಗರಿಕರು ತಮ್ಮ ವಿವರಗಳನ್ನು ಯಶಸ್ವಿಯಾಗಿ ನವೀಕರಿಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಧನಾತ್ಮಕ ಸ್ಪಂದನೆಯನ್ನು ಪರಿಗಣಿಸಿ, ಇನ್ನುಳಿದ ಜನರಿಗೂ ಅವಕಾಶ ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ತಮ್ಮ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದು, ಇದುವರೆಗೆ ಒಮ್ಮೆಯೂ ಯಾವುದೇ ದಾಖಲೆಗಳನ್ನು ನವೀಕರಿಸದ ನಾಗರಿಕರು ತಮ್ಮ ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆಗಳನ್ನು (PoA) ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

ಆನ್‌ಲೈನ್ ಮತ್ತು ಆಫ್‌ಲೈನ್ ವ್ಯತ್ಯಾಸ

ಸಾರ್ವಜನಿಕರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಉಚಿತ ಸೌಲಭ್ಯವು ಕೇವಲ ಆನ್‌ಲೈನ್‌ನಲ್ಲಿ (myaadhaar.uidai.gov.in/) ಸ್ವತಃ ಅಪ್‌ಡೇಟ್ ಮಾಡುವವರಿಗೆ ಮಾತ್ರ ಸೀಮಿತವಾಗಿದೆ. ಒಂದು ವೇಳೆ ನಾಗರಿಕರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ನವೀಕರಿಸಲು ಬಯಸಿದರೆ, ಅಲ್ಲಿ ನಿಯಮಿತ ಸೇವಾ ಶುಲ್ಕವಾದ 75 ರೂ ಅನ್ನು ಪಾವತಿಸಬೇಕಾಗುತ್ತದೆ. ಆಧಾರ್ ಡೇಟಾಬೇಸ್‌ನ ನಿಖರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ವಿವರಗಳನ್ನು ನವೀಕರಿಸಿಕೊಳ್ಳುವಂತೆ ಯುಐಡಿಎಐ ಮನವಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಾವಸ್ಥೆಯಲ್ಲಿ ಬಿಪಿ ಪರೀಕ್ಷೆ ಮಾಡಿಸುವುದು ಎಷ್ಟು ಅಗತ್ಯ ಗೊತ್ತಾ? ಇಲ್ಲದಿದ್ದರೆ ಏನ್ ಆಗುತ್ತೆ ನೋಡಿ – Kannada News | Normal Blood Pressure Range For Pregnant Women: Doctor’s Safety Guide

ಗರ್ಭಾವಸ್ಥೆಯಲ್ಲಿಯೂ ರಕ್ತದೊತ್ತಡವನ್ನು (Blood Pressure) ನಿಯಮಿತವಾಗಿ ಪರೀಕ್ಷಿಸುವುದು ಬಹಳ ಮುಖ್ಯ ಎಂಬುದು ನಿಮಗೆ ತಿಳಿದಿರಬಹುದು. ಆರೋಗ್ಯ ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುವುದರಿಂದ ಬಿಪಿ ಏರಿಳಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಹಲವಾರು ಸಂದರ್ಭಗಳಲ್ಲಿ ಹೈ ಬಿಪಿಗೆ ಆರಂಭದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಆದ್ದರಿಂದ ಕೇವಲ ದೇಹದ ಲಕ್ಷಣಗಳನ್ನು ಆಧರಿಸಿ ಸಮಸ್ಯೆಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಪ್ರತಿಯೊಂದು ಆಂಟಿನೇಟಲ್ ತಪಾಸಣೆಯಲ್ಲೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲ್ವಿಚಾರಣೆ ಸುಲಭವಾಗುತ್ತದೆ. ಆದರೆ ಯಾಕೆ ಗರ್ಭಾವಸ್ಥೆಯಲ್ಲಿ ಹೈ ಬಿಪಿ ಅಪಾಯಕಾರಿಯಾಗಿರುತ್ತದೆ, ಯಾರು ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗರ್ಭಾವಸ್ಥೆಯಲ್ಲಿ ಹೈ ಬಿಪಿ ಏಕೆ ಅಪಾಯಕಾರಿ?

ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಿದ ರಕ್ತದೊತ್ತಡ ಜಸ್ಟೇಷನಲ್ ಹೈಪರ್‌ಟೆನ್ಷನ್ ಅಥವಾ ಪ್ರೀ- ಎಕ್ಲಾಂಪ್ಸಿಯಾ ಎಂಬ ಗಂಭೀರ ಸಮಸ್ಯೆಗಳ ಸೂಚನೆಯಾಗಿರಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಮೆದುಳು, ಮೂತ್ರಪಿಂಡ, ಯಕೃತ್ ಮತ್ತು ರಕ್ತ ಗಟ್ಟಿಯಾಗುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ಪರಿಣಾಮ ಗರ್ಭದಲ್ಲಿರುವ ಮಗುವಿನ ಮೇಲೂ ಬೀಳಬಹುದು. ಮಗುವಿನ ಬೆಳವಣಿಗೆ ನಿಧಾನವಾಗುವುದು, ಜನನ ಸಮಯದಲ್ಲಿ ತೂಕ ಕಡಿಮೆ ಇರುವುದು ಅಥವಾ ಅವಧಿಗೆ ಮುನ್ನ ಹೆರಿಗೆ ಅಗತ್ಯವಾಗುವ ಪರಿಸ್ಥಿತಿ ಉಂಟಾಗಬಹುದು.

ಇದನ್ನೂ ಓದಿ: ಹೈ ಬಿಪಿ ಮತ್ತು ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತಾ? ಈ ಬಗ್ಗೆ ವೈದ್ಯರು ಏನ್ ಹೇಳ್ತಾರೆ ನೋಡಿ

ಯಾರು ಹೆಚ್ಚು ಜಾಗ್ರತೆ ವಹಿಸಬೇಕು?

ಹಿಂದಿನಿಂದಲೇ ಹೈ ಬಿಪಿ, ಡಯಾಬಿಟೀಸ್, ಕಿಡ್ನಿ ಸಮಸ್ಯೆ, ಅತಿಯಾದ ತೂಕ ಅಥವಾ ಜೋಡಿ ಗರ್ಭಧಾರಣೆ ಇರುವ ಮಹಿಳೆಯರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಹೈ ಬಿಪಿ ಇತಿಹಾಸ ಇದ್ದರೂ ಅಪಾಯ ಹೆಚ್ಚಾಗಬಹುದು. ಇಂತಹ ಮಹಿಳೆಯರಿಗೆ ವೈದ್ಯರು ಹೆಚ್ಚುವರಿ ಬಿಪಿ ಪರೀಕ್ಷೆ, ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಸಲಹೆ ನೀಡಬಹುದು. ಇದರಿಂದ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ನಿಯಮಿತ ಬಿಪಿ ಪರೀಕ್ಷೆಯಿಂದ ಏನು ಲಾಭ?

ಸಾಮಾನ್ಯವಾಗಿ ನಿಯಮಿತ ಬಿಪಿ ತಪಾಸಣೆಯಿಂದ ಗಂಭೀರ ಸಮಸ್ಯೆಗಳನ್ನು ತುರ್ತು ಪರಿಸ್ಥಿತಿಗೆ ತಲುಪುವ ಮುನ್ನವೇ ಗುರುತಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದರೆ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಹೆಚ್ಚಿಸಬಹುದು. ಇದು ಸರಳ ಮತ್ತು ಕಡಿಮೆ ವೆಚ್ಚದ ಪರೀಕ್ಷೆಯಾಗಿದ್ದರೂ, ಹಲವಾರು ಬಾರಿ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ? – Kannada News | Know How India’s LPG Shortage Is Effecting California’s Fuel Prices

ಅಮೆರಿಕದಲ್ಲಿ ಪೆಟ್ರೋಲ್ (ಗ್ಯಾಸೊಲಿನ್)Image Credit source: Getty Images

ಕ್ಯಾಲಿಫೋರ್ನಿಯಾ, ಮೇ 18: ಜಾಗತಿಕ ಆರ್ಥಿಕತೆಯು ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬುದಕ್ಕೆ ಅತ್ಯಂತ ಆಶ್ಚರ್ಯಕರ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸದ್ಯ ಎದುರಾಗಿರುವ ಅಡುಗೆ ಅನಿಲ (LPG) ಕೊರತೆಯು, ಅಮೆರಿಕದ ಪ್ರಮುಖ ರಾಜ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಬೆಲೆ ಗಗನಕ್ಕೇರಲು ನೇರ ಕಾರಣವಾಗಿದೆ. ಇರಾನ್ ಮತ್ತು ಯುಎಸ್-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ (fuel supply chain) ಉಂಟಾಗಿರುವ ವ್ಯತ್ಯಯವೇ ಇದಕ್ಕೆ ಮುಖ್ಯ ಕಾರಣ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.

ಈ ಸುದ್ದಿಯ ಮುಖ್ಯಾಂಶಗಳು

  • ಭಾರತದ ಎಲ್‌ಪಿಜಿ ಕೊರತೆ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಗ್ಯಾಲನ್‌ಗೆ $6 ದಾಟಿದ ಇಂಧನ ದರಕ್ಕೆ ಪಶ್ಚಿಮ ಏಷ್ಯಾದ ಯುದ್ಧವೇ ಪ್ರಮುಖ ಕಾರಣವಾಗಿದೆ.
  • ಅಡುಗೆ ಅನಿಲದ ಬಿಕ್ಕಟ್ಟು ನಿವಾರಿಸಲು ಭಾರತೀಯ ತೈಲ ಕಂಪನಿಗಳು ‘ಅಲ್ಕಿಲೇಟ್ಸ್’ (Alkylate) ಎಂಬ ಪೆಟ್ರೋಲ್ ರಾಸಾಯನಿಕದ ಉತ್ಪಾದನೆಯನ್ನು ಕಡಿತಗೊಳಿಸಿವೆ.
  • ಕ್ಯಾಲಿಫೋರ್ನಿಯಾದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಳಸುವ ವಿಶೇಷ ಪೆಟ್ರೋಲ್ ತಯಾರಿಕೆಗೆ ಭಾರತದ ಈ ‘ಅಲ್ಕಿಲೇಟ್ಸ್’ ರಫ್ತು ಅತ್ಯಂತ ನಿರ್ಣಾಯಕವಾಗಿತ್ತು.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಹೇಗೆ?

ಭಾರತವು ತನ್ನ ಅಡುಗೆ ಅನಿಲದ ಅಗತ್ಯಕ್ಕಾಗಿ ಶೇಕಡಾ 90 ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳನ್ನು ಅವಲಂಬಿಸಿದೆ. ಆದರೆ ಯುದ್ಧದ ಕಾರಣದಿಂದಾಗಿ ಇರಾನ್ ದೇಶವು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೇಟ್ ಆಫ್ ಹಾರ್ಮುಜ್’ (Strait of Hormuz) ಅನ್ನು ಭಾಗಶಃ ಮುಚ್ಚಿರುವುದರಿಂದ ಭಾರತಕ್ಕೆ ಎಲ್‌ಪಿಜಿ ಆಮದು ಮಾಡಿಕೊಳ್ಳುವುದು ಕಷ್ಟವಾಗಿದೆ. ದೇಶೀಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದರಿಂದ, ಭಾರತ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಲು ದೇಶದ ತೈಲ ಶುದ್ಧೀಕರಣ ಸಂಸ್ಥೆಗಳಿಗೆ (Refiners) ಸೂಚಿಸಿತು. ಪರಿಣಾಮವಾಗಿ, ಭಾರತೀಯ ಕಂಪನಿಗಳು ದೇಶೀಯ ಬಳಕೆಗಾಗಿ ಅಡುಗೆ ಅನಿಲ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿವೆ.

ಕ್ಯಾಲಿಫೋರ್ನಿಯಾದ ಮೇಲೆ ಇದರ ಪರಿಣಾಮವೇನು?

ಭಾರತೀಯ ತೈಲ ಸಂಸ್ಕರಣಾಗಾರಗಳು ಅಡುಗೆ ಅನಿಲ ಉತ್ಪಾದನೆಗೆ ಆದ್ಯತೆ ನೀಡಿದ್ದರಿಂದ, ಪೆಟ್ರೋಲ್ ತಯಾರಿಕೆಯಲ್ಲಿ ಬಳಸಲಾಗುವ ‘ಅಲ್ಕಿಲೇಟ್ಸ್’ ಎಂಬ ರಾಸಾಯನಿಕದ ಉತ್ಪಾದನೆ ಮತ್ತು ರಫ್ತನ್ನು ಗಣನೀಯವಾಗಿ ಕಡಿತಗೊಳಿಸಿವೆ. ಭಾರತ ಕಚ್ಛಾ ತೈಲವನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದರೆ, ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ಕಚ್ಚಾ ತೈಲವನ್ನು ಸಂಸ್ಕರಿಸಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ತಯಾರಿಸಿ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸರಬರಾಜು ಮಾಡುತ್ತವೆ. ಈ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಆಲ್ಕಿಲೇಟ್ಸ್ ಕೂಡ ಒಂದು.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ವಾಯು ಮಾಲಿನ್ಯವನ್ನು (Smog) ಕಡಿಮೆ ಮಾಡಲು ಅತ್ಯಂತ ಶುದ್ಧವಾದ ವಿಶೇಷ ಇಂಧನ ಮಿಶ್ರಣವನ್ನು ಬಳಸಲಾಗುತ್ತದೆ. ಈ ವಿಶೇಷ ಪೆಟ್ರೋಲ್ ತಯಾರಿಕೆಗೆ ಭಾರತದಿಂದ ರಫ್ತಾಗುತ್ತಿದ್ದ ‘ಅಲ್ಕಿಲೇಟ್ಸ್’ ಅತ್ಯಗತ್ಯವಾಗಿತ್ತು. ಈಗ ಭಾರತದಿಂದ ಇದರ ಪೂರೈಕೆ ಸ್ಥಗಿತಗೊಂಡಿರುವುದರಿಂದ, ಕ್ಯಾಲಿಫೋರ್ನಿಯಾದಲ್ಲಿ ಪೆಟ್ರೋಲ್ ಕೊರತೆ ಉಂಟಾಗಿ ದರವು 2022 ರ ನಂತರದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರತಿ ಗ್ಯಾಲನ್‌ಗೆ ಬೆಲೆ 6 ಡಾಲರ್ ಆಗಿದೆ. ಸುಮಾರು 577 ರೂ. ಒಂದು ಗ್ಯಾಲನ್ ಎಂದರೆ ಸುಮಾರು 3.785 ಲೀಟರ್ ಇರುತ್ತದೆ. ಒಂದು ಲೀಟರ್ ಪೆಟ್ರೋಲ್ ಅಥವಾ ಗ್ಯಾಸೊಲಿನ್ ಬೆಲೆ ಸುಮಾರು 150 ರುಪಾಯಿಗೆ ಏರಿದೆ. ಇದು ಅಮೆರಿಕದ ಮಟ್ಟಿಗೆ ಬಹಳ ದೊಡ್ಡ ದರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹ ವಾರ್ಷಿಕೋತ್ಸವ: ದರ್ಶನ್-ವಿಜಯಲಕ್ಷ್ಮಿ ಮುಖಾಮುಖಿ ಭೇಟಿಗೆ ಅವಕಾಶ ಇದೆಯಾ? – Kannada News | Will Darshan and Vijayalakshmi meet in Parappana Agrahara Jail on Wedding Anniversary

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮುಖಾಮುಖಿ ಭೇಟಿ ಮಾಡಲು ಅವಕಾಶ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ವಿಜಯಲಕ್ಷ್ಮಿ ಅವರು ಬಂದು ಕೇಳಿಕೊಂಡಿದ್ದಾರೆ. ಮೇ 19ರಂದು ಅವರ ವಿವಾಹ ವಾರ್ಷಿಕೋತ್ಸವ (Darshan Wedding Anniversary) ಇದೆ. ಸುಪ್ರೀಂ ಕೋರ್ಟ್​​ನಲ್ಲಿ ಜಾಮೀನು ರದ್ದಾದ ಬಳಿಕ ದರ್ಶನ್ ಅವರು ಮಾನಸಿಕವಾಗಿ ಬಹಳ ಕುಗ್ಗಿದ್ದಾರೆ. ನಮಗೆ ಮನವಿ ಕೊಟ್ಟಿದ್ದಾರೆ. ಸಂಜೆಯೊಳಗೆ ನಾವು ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

‘ಜೈಲಿನಲ್ಲಿ ಎಲ್ಲ ಕೈದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಸರಿಯಾಗಿ ಇರಬೇಕು. ನಡತೆ ಸರಿ ಇರುವ ಕೈದಿಗಳ ಕುಟುಂಬದವರನ್ನು ಭೇಟಿ ಮಾಡಿಸುತ್ತೇನೆ. ವಯಸ್ಸಾದ ತಂದೆ-ತಾಯಿ ಇದ್ದರೆ, ಗರ್ಭಿಣಿ ಪತ್ನಿ ಇದ್ದರೆ ಭೇಟಿ ಮಾಡಿಸುತ್ತೇವೆ. ಯಾಕೆಂದರೆ ಇಲ್ಲಿ ಎಲ್ಲರ ಮಾನಸಿಕ ಆರೋಗ್ಯ ಸರಿಯಾಗಿ ಇರಬೇಕು’ ಎಂದಿದ್ದಾರೆ ಡಿಜಿಪಿ ಅಲೋಕ್ ಕುಮಾರ್.

ಇಷ್ಟು ದಿನಗಳ ಕಾಲ ವಿಜಯಲಕ್ಷ್ಮಿ ಅವರು ಪ್ರತಿ ವಾರ ಬಂದು ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದರು. ಆದರೆ ಈಗ ಅವರು ಮನವಿ ಮಾಡಿರುವ ಭೇಟಿ ಯಾವ ರೀತಿ ಇರಲಿದೆ ಎಂಬ ಬಗ್ಗೆಯೂ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ‘ಸಾಮಾನ್ಯ ಭೇಟಿಯಲ್ಲಿ ಕೈದಿಗಳ ಹಾಗೂ ಕುಟುಂಬದವರ ನಡುವೆ ಗಾಜಿನ ಗೋಡೆ ಇರುತ್ತದೆ. ಇಂಟರ್​ಕಾಮ್ ಮೂಲಕ ಮಾತನಾಡಬೇಕು. ಆದರೆ ವಿಶೇಷ ಸಂದರ್ಭದಲ್ಲಿ ಆ ಗೋಡೆ ಇಲ್ಲದೇ ಮುಖಾಮುಖಿಯಾಗಿ ಭೇಟಿ ಮಾಡಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ವಯಸ್ಸಾದವರು, ಚಿಕ್ಕ ಮಕ್ಕಳು, ಗರ್ಭಿಣಿಯರು, ದಿವ್ಯಾಂಗರು ಇದ್ದಾಗ ನಾವು ಸೌಕರ್ಯ ನೀಡುತ್ತೇವೆ. ಈ ರೀತಿಯ ಭೇಟಿಯಿಂದಾಗಿ ಕೈದಿಗಳಿಗೆ ತಮ್ಮ ಅಪರಾಧದ ಬಗ್ಗೆ ಆತ್ಮಾವಲೋಕನ ಮಾಡಲು ಅವಕಾಶ ಸಿಗುತ್ತದೆ. ಮುಂದಿನ ಬದುಕನ್ನು ಅವರು ತಿದ್ದಿಕೊಳ್ಳುತ್ತಾರೆ. ಆ ಉದ್ದೇಶದಿಂದ ನಾವು ಈ ರೀತಿಯ ಭೇಟಿಯನ್ನು ಉತ್ತೇಜಿಸುತ್ತೇವೆ’ ಎಂದು ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ

ದರ್ಶನ್ ಅವರನ್ನು ಕ್ವಾರೆಂಟೈನ್ ಸೆಲ್​ನಲ್ಲಿ ಇಡಲಾಗಿದೆ ಎಂಬ ಆರೋಪ ಬಂದಿತ್ತು. ಅದು ತಪ್ಪು ತಿಳಿವಳಿಕೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ‘ಕೋವಿಡ್ ಸಮಯದಲ್ಲಿ ಅದು ಕ್ವಾರಂಟೈನ್ ಸೆಲ್ ಆಗಿತ್ತು. ಆದರೆ ಅದು ಹೊಸ ಕಟ್ಟಡ. ಅದನ್ನು ಎನ್​ಎಕ್ಸ್ 1 ಎಂದು ಕರೆಯಬಹುದು. ಅದನ್ನು ಕ್ವಾರಂಟೈನ್ ಸೆಲ್ ಎಂದು ಹೇಳುವುದು ಸರಿಯಲ್ಲ. ಅಲ್ಲಿ ಎಲ್ಲ ಸೌಲಭ್ಯ ಇದೆ. ಆದರೆ ಕ್ವಾರಂಟೈನ್ ಸೆಲ್ ಎಂಬ ಹೆಸರಿನ ಕಾರಣಕ್ಕೆ ಜನರಿಗೆ ತಪ್ಪು ಭಾವನೆ ಬರುತ್ತಿದೆ’ ಎಂದಿದ್ದಾರೆ ಅಲೋಕ್ ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: 7 ಜಿಲ್ಲೆಗಳಲ್ಲಿ ನಾಳೆ ಆರೆಂಜ್​​ ಅಲರ್ಟ್​​, ಒಂದು ವಾರ ರಾಜ್ಯದಲ್ಲಿ ವರುಣನ ಅಬ್ಬರ – Kannada News | Karnataka Weather Alert: 7 Districts Under Orange Alert Tomorrow, Heavy Rain Likely for Next 7 Days

ಬೆಂಗಳೂರಲ್ಲಿ ಸುರಿದ ಮಳೆImage Credit source: Tv9 Kannada

ಬೆಂಗಳೂರು, ಮೇ 18: ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ, ಗುಡುಗು-ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರಿ ಮಳೆಯ ಸಾಧ್ಯತೆ ಹಿನ್ನೆಲೆ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್​​ ಮತ್ತು ಕಲಬುರಗಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ನಾಳೆ (ಮೇ 19) ಮಳೆಯಾಗಲಿದ್ದು, ಆ ಪೈಕಿ 7 ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳು ಮಳೆ
  • ಭಾರೀ ಮಳೆ ಜೊತೆಗೆ ಗುಡುಗು-ಮಿಂಚು & ಬಿರುಗಾಳಿ ಸಾಧ್ಯತೆ
  • ರಾಜ್ಯದ 7 ಜಿಲ್ಲೆಗಳಲ್ಲಿ ನಾಳೆ ಆರೆಂಜ್​​ ಅಲರ್ಟ್​​ ಘೋಷಣೆ

ಎಲ್ಲೆಲ್ಲಿ ಮಳೆ ಅಬ್ಬರ?

ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ನೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಮೈಸೂರಿನಲ್ಲಿಯೂ ಮಳೆಯ ಮುನ್ಸೂಚನೆ ಇದೆ.

ಇದನ್ನೂ ಓದಿ: ಬೆಂಗಳೂರಿನ ವಿವಿಧೆಡೆ ಗಾಳಿ ಮಳೆ; ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟ

ಮುಂದಿನ 7 ದಿನಗಳು ಮಳೆ ಸಾಧ್ಯತೆ

ಉತ್ತರ ಒಳನಾಡು ಭಾಗದಲ್ಲಿ ಮೇ 21ರವರೆಗೆ ಮಳೆಯ ಚಟುವಟಿಕೆ ಮುಂದುವರಿಯುವ ನಿರೀಕ್ಷೆಯಿದ್ದು, ಬಳಿಕ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು. ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯೊಂದಿಗೆ ಗುಡುಗು-ಮಿಂಚಿನ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಧ್ಯಾಹ್ನದ ಬಳಿಕ ಮೋಡಗಟ್ಟುವಿಕೆ ಹಾಗೂ ಸಂಜೆ ವೇಳೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Personality Test: ಈ ಚಿತ್ರದಲ್ಲಿರುವ ಒಂದು ತರಕಾರಿಯನ್ನು ಆರಿಸಿ, ನಿಮ್ಮ ಮಾನಸಿಕ ಶಕ್ತಿ ಹೇಗಿದೆ ಪರೀಕ್ಷಿಸಿ – Kannada News | Personality Test: Choose one of the vegetables in this picture and test your mental strength

ವ್ಯಕ್ತಿತ್ವ ಪರೀಕ್ಷೆImage Credit source: google gemini

ಪ್ರತಿಯೊಬ್ಬರಿಗೂ ತಮ್ಮ ನಿಗೂಢ ವ್ಯಕ್ತಿತ್ವ (Personality), ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚಿನವರು ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಗಿಣಿಶಾಸ್ತ್ರದ ಮೊರೆ ಹೋಗ್ತಾರೆ. ಇದಲ್ಲದೆ ದೇಹ ಲಕ್ಷಣಗಳು, ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಇತ್ಯಾದಿ ಪರ್ಸನಾಲಿಟಿ ಟೆಸ್ಟ್‌ ಆಟಗಳ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷಿಸಬಹುದು. ಇಲ್ಲೊಂದು ಅದೇ ರೀತಿಯ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಟೊಮೆಟೊ, ಪಾಲಕ್‌, ಟೊಮೆಟೊ ಈ ಮೂರು ತರಕಾರಿಗಳಿದ್ದು, ಅದರಲ್ಲಿ ಯಾವುದಾದರೊಂದು ತರಕಾರಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಮಾನಸಿಕ ಶಕ್ತಿ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಚಿತ್ರದಲ್ಲಿ ನೀವು ಆರಿಸುವ ತರಕಾರಿ ನಿಮ್ಮ ಮಾನಸಿಕ ಶಕ್ತಿಯನ್ನು ಬಹಿರಂಗಪಡಿಸುತ್ತದೆ:

ಟೊಮೆಟೊ:

ಚಿತ್ರದಲ್ಲಿ ನೀವು ಟೊಮೆಟೊವನ್ನು ಆಯ್ಕೆ ಮಾಡಿದರೆ, ನೀವು  ಉತ್ಸಾಹಭರಿತರು, ನಿಜವಾಗಿಯೂ ಶಕ್ತಿಯುತರು ಮತ್ತು ಭಾವನಾತ್ಮಕವಾಗಿ ಅಭಿವ್ಯಕ್ತಿಶೀಲರು ಎಂದರ್ಥ. ಜನರು ಏನೆಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ನೀವು ಎಲ್ಲಾ ವಿಷಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುವ ಸ್ಟ್ರೈಟ್‌ ಫಾರ್ವರ್ಡ್‌ ವ್ಯಕ್ತಿಗಳು ನೀವು. ಆತ್ಮವಿಶ್ವಾಸ ಮತ್ತು ಈ ಸ್ಥಿರವಾದ ಆಶಾವಾದ ನಿಮ್ಮ ನಿಜವಾದ ಶಕ್ತಿ ಅಂತಾನೇ ಹೇಳಬಹುದು. ನೀವು ಜನರೊಂದಿಗೆ  ಬೆರೆಯುವುದನ್ನು ಆನಂದಿಸುತ್ತೀರಿ.

ನಿಮ್ಮ ಸಾಮರ್ಥ್ಯ:

  • ಆತ್ಮವಿಶ್ವಾಸ
  • ಆಶಾವಾದಿ ಮನಸ್ಥಿತಿ
  • ಹಿನ್ನಡೆ, ಸೋಲುಗಳಿಂದ ತ್ವರಿತವಾಗಿ ಚೇತರಿಕೆಗೊಳ್ಳುವುದು
  • ಶಕ್ತಿ ಮತ್ತು ಸಾಮಾಜಿಕವಾಗಿ  ಬೆರೆಯುವ ಸಾಮರ್ಥ್ಯ

ಆಲೂಗಡ್ಡೆ:

ಮೇಲಿನ ಚಿತ್ರದಲ್ಲಿ ನೀವು ಆಲುಗಡ್ಡೆಯನ್ನು ಆಯ್ಕೆ ಮಾಡಿದರೆ, ನೀವು ಭಾವನಾತ್ಮಕವಾಗಿ ಸ್ಥಿರವಾಗಿರುವ ವ್ಯಕ್ತಿ ಎಂದರ್ಥ. ನೀವು ವಿಶ್ವಾಸಾರ್ಹರಾಗಿರುತ್ತೀರಿ, ನೀವು ಹೊಸ ಸನ್ನಿವೇಶಗಳಿಗೆ ಮತ್ತು ಜನರ ವಿಭಿನ್ನ ಮನಸ್ಥಿತಿಗಳಿಗೆ ಸರಾಗವಾಗಿ ಹೊಂದಿಕೊಳ್ಳುತ್ತೀರಿ. ಯಾವುದೇ ಒತ್ತಡದ ಪರಿಸ್ಥಿತಿಯಲ್ಲೂ ನೀವು ಶಾಂತವಾಗಿರುತ್ತೀರಿ.

ನಿಮ್ಮ ನಿಗೂಢ ಸಾಮರ್ಥ್ಯ:

  • ಎಲ್ಲರೊಂದಿಗೂ ಹೊಂದಿಕೊಳ್ಳುವ ವ್ಯಕ್ತಿತ್ವ
  • ಶಾಂತ ಸ್ವಭಾವ
  • ನಿಷ್ಠೆ ಮತ್ತು ಬೆಂಬಲ ನೀಡುವ ಸ್ವಭಾವ
  • ಸಮಸ್ಯೆ ಪರಿಹರಿಸುವ ಸಾಮರ್ಥ್ಯ

ಇದನ್ನೂ ಓದಿ: ನಿಮ್ಮ ನೆಚ್ಚಿನ ಹಣ್ಣು ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವದ ಗುಟ್ಟು

ಪಾಲಕ್:‌

ಮೇಲಿನ ಚಿತ್ರದಲ್ಲಿ ನೀವು ಪಾಲಕ್ ಸೊಪ್ಪನ್ನು ಆಯ್ಕೆ ಮಾಡಿದರೆ  ನೀವು ಶಾಂತ, ಶಿಸ್ತಿನ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವವರಾದ ನೀವು  ಜೀವನ ವಿಧಾನದಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತೀರಿ, ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತೀರಿ. ನಿಮ್ಮ ಗುರಿಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಹೆಚ್ಚಿನ ಆದ್ಯತೆ ನೀಡುವ ವ್ಯಕ್ತಿಯಾಗಿರುತ್ತೀರಿ. ಏನಾದರೂ ಕಠಿಣ ಪರಿಸ್ಥಿತಿ ಎದುರಾದಾಗ, ನೀವು ಅದನ್ನು ಪ್ರಬುದ್ಧತೆಯಿಂದ ನಿಭಾಯಿಸುತ್ತೀರಿ.

ನಿಮ್ಮ ಸಾಮರ್ಥ್ಯ:

  • ದೃಢನಿಶ್ಚಯ
  • ಬಲವಾದ ಸ್ವಯಂ ಶಿಸ್ತು
  • ಸಕಾರಾತ್ಮಕ ಮನೋಭಾವ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ? – Kannada News | Vande bharat sleeper train between bengaluru mumbai soon why it is important

ಬೆಂಗಳೂರು, ಮೇ 18: ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವವರಿಗೆ ಇದು ಅತ್ಯಂತ ದೊಡ್ಡ ಮತ್ತು ಸಂತಸದ ಸುದ್ದಿ. ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲು ಶೀಘ್ರದಲ್ಲೇ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  • ಶೀಘ್ರದಲ್ಲೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ
  • ಪ್ರಯಾಣದ ಸಮಯ ಉಳಿತಾಯ
  • ದೂರದ ಊರುಗಳ ರಾತ್ರಿ ಪ್ರಯಾಣಕ್ಕಾಗಿ ವಿಶೇಷವಾದ ವಿನ್ಯಾಸ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕಕ್ಕೆ ರೈಲ್ವೆ ನಿಧಿಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು 2,160 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ಪೈಕಿ 9 ನಿಲ್ದಾಣಗಳು ಈಗಾಗಲೇ ಪೂರ್ಣಗೊಂಡಿವೆ. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು 485 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಯಶವಂತಪುರ ನಿಲ್ದಾಣವನ್ನು 367 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಇದಲ್ಲದೆ, 2014ರಿಂದ ಕರ್ನಾಟಕದಲ್ಲಿ ಸುಮಾರು 1,750 ಕಿಲೋಮೀಟರ್ ಹೊಸ ರೈಲು ಮಾರ್ಗಗಳನ್ನು ಹಾಕಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 3 ರೈಲುಗಳ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜುಗಳಿಗೆ ಹಾನಿ

ಕರ್ನಾಟಕವು ಪ್ರಸ್ತುತ 14 ಜಿಲ್ಲೆಗಳನ್ನು ಒಳಗೊಂಡಂತೆ 12 ಜೋಡಿ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುತ್ತದೆ. 270 ಕೋಟಿ ರೂ. ವೆಚ್ಚದಲ್ಲಿ ಥಣಿಸಂದ್ರದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಡಿಪೋವನ್ನು ಸ್ಥಾಪಿಸಲಾಗುವುದು. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಇದು ಮಡಗಾಂವ್ ವರೆಗಿನ ಕರಾವಳಿ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ:

ರಾತ್ರಿ ಪ್ರಯಾಣದ ಸೌಲಭ್ಯ:

ಸದ್ಯಕ್ಕೆ ಚಾಲ್ತಿಯಲ್ಲಿರುವ ವಂದೇ ಭಾರತ್ ರೈಲುಗಳು ಕೇವಲ ಕುಳಿತುಕೊಳ್ಳುವ ಸೌಲಭ್ಯ ಹೊಂದಿದ್ದು, ಹಗಲು ಪ್ರಯಾಣಕ್ಕೆ ಸೀಮಿತವಾಗಿವೆ. ಆದರೆ, ಹೊಸ ಸ್ಲೀಪರ್ ರೈಲನ್ನು ದೂರದ ಊರುಗಳ ರಾತ್ರಿ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರಯಾಣದ ಸಮಯ ಉಳಿತಾಯ:

ಈ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಳಿಗಳ ನವೀಕರಣ ಪೂರ್ಣಗೊಂಡ ನಂತರ, ಬೆಂಗಳೂರು-ಮುಂಬೈ ನಡುವಿನ ಪ್ರಯಾಣದ ಸಮಯವು ಸದ್ಯ ಇರುವ ಸಾಮಾನ್ಯ ರೈಲುಗಳಿಗಿಂತ ಗಣನೀಯವಾಗಿ ಕಡಿಮೆಯಾಗಲಿದೆ.

ಪ್ರಾಯೋಗಿಕ ಪರೀಕ್ಷೆ:

ವಂದೇ ಭಾರತ್ ಸ್ಲೀಪರ್ ರೈಲಿನ ಮಾದರಿಯ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಈ ರೈಲುಗಳ ಉತ್ಪಾದನೆಯನ್ನು ಚುರುಕುಗೊಳಿಸಲಾಗಿದೆ. ಬೆಂಗಳೂರು-ಮುಂಬೈ ದೇಶದ ಪ್ರಮುಖ ವಾಣಿಜ್ಯ ಮಾರ್ಗವಾಗಿರುವುದರಿಂದ, ಈ ಮಾರ್ಗಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಐಷಾರಾಮಿ ವಿನ್ಯಾಸ:

ಈ ರೈಲನ್ನು ರಾಜಧಾನಿ ಎಕ್ಸ್​ಪ್ರೆಸ್ ಅಥವಾ ಹಮ್‌ಸಫರ್ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ಎಸಿ ರೈಲುಗಳಿಗಿಂತಲೂ ಹೆಚ್ಚು ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿದೆ.

ಅತ್ಯುತ್ತಮ ಸೀಟು ಮತ್ತು ಬರ್ತ್‌ಗಳು:

ಪ್ರಯಾಣಿಕರಿಗೆ ಯಾವುದೇ ರೀತಿಯ ಜರ್ಕ್ ಇಲ್ಲದೆ ಆರಾಮದಾಯಕ ನಿದ್ರೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೆತ್ತನೆಯ ಹಾಸಿಗೆಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

ಆಧುನಿಕ ಸೌಲಭ್ಯಗಳು:

ಸ್ವಯಂಚಾಲಿತ ಒಳಗಿನ ಬಾಗಿಲುಗಳು ಸೆನ್ಸಾರ್ ಆಧಾರಿತ ಲೈಟಿಂಗ್, ಪ್ರತಿ ಕೋಚ್‌ನಲ್ಲಿ ಮಿನಿ ಪ್ಯಾಂಟ್ರಿ ಮತ್ತು ವಿಮಾನದ ಮಾದರಿಯ ವ್ಯಾಕ್ಯೂಮ್ ಶೌಚಾಲಯಗಳು ಇರಲಿವೆ.

ಶಬ್ದ ನಿಯಂತ್ರಣ:

ರೈಲಿನೊಳಗೆ ಹೊರಗಿನ ಶಬ್ದ ಕೇಳಿಸದಂತೆ ವಿಶೇಷ ತಂತ್ರಜ್ಞಾನ ಬಳಸಲಾಗಿದ್ದು, ರೈಲಿನೊಳಗೆ ಪ್ರಶಾಂತವಾದ ವಾತಾವರಣವಿರುತ್ತದೆ.

ಈ ಮಾರ್ಗ ಏಕೆ ಮುಖ್ಯ?:

ಬೆಂಗಳೂರು (ಭಾರತದ ಸಿಲಿಕಾನ್ ವ್ಯಾಲಿ) ಮತ್ತು ಮುಂಬೈ (ಭಾರತದ ಆರ್ಥಿಕ ರಾಜಧಾನಿ) ನಡುವೆ ಪ್ರತಿದಿನ ಸಾವಿರಾರು ಉದ್ಯಮಿಗಳು ಮತ್ತು ಸಾಫ್ಟ್‌ವೇರ್ ಉದ್ಯೋಗಿಗಳು ಪ್ರಯಾಣಿಸುತ್ತಾರೆ. ಬೆಂಗಳೂರು ವಿಮಾನ ನಿಲ್ದಾಣವು ನಗರದಿಂದ ದೂರವಿರುವುದರಿಂದ, ವಿಮಾನ ಪ್ರಯಾಣದ ಕಿರಿಕಿರಿ ಬೇಡದವರಿಗೆ ಮತ್ತು ಬಸ್‌ಗಿಂತ ವೇಗವಾಗಿ ಹಾಗೂ ಆರಾಮದಾಯಕವಾಗಿ ಪ್ರಯಾಣಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ. ಬಹಳ ಆರಾಮದಾಯಕ ಪ್ರಯಾಣದ ಅನುಭವ ಸಿಗುವುದರಿಂದ ರಾತ್ರಿ ಹತ್ತಿ ಮಲಗಿದರೆ ಬೆಳಿಗ್ಗೆ ಮುಂಬೈ ಅಥವಾ ಬೆಂಗಳೂರು ತಲುಪಿ ನೇರವಾಗಿ ಕಚೇರಿ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು. ಈ ರೈಲಿನ ನಿಖರವಾದ ವೇಳಾಪಟ್ಟಿ ಮತ್ತು ಟಿಕೆಟ್ ದರಗಳ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಪಾನಿಯರಂತೆ ಆರೋಗ್ಯಕರವಾಗಿ ಜೀವನ ನಡೆಸಲು ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | Follow these Japanese habits to stay healthy and fit

ತಂತ್ರಜ್ಞಾನ ಮಾತ್ರವಲ್ಲ ಆರೋಗ್ಯ, ಆಯಸ್ಸಿನ ವಿಚಾರದಲ್ಲೂ ಜಪಾನ್‌ ಸದಾ ಮುಂದಿದೆ. ಜಗತ್ತಿನ ಬಹುತೇಕ ಜನ ಒತ್ತಡದ ಜೀವನವನ್ನು ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಜನರು ಮಾತ್ರ ಆರೋಗ್ಯಕರ (healthy life), ನೆಮ್ಮದಿಯ, ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಪದ್ಧತಿಯೇ ಇವರ ಸದೃಢ ಮತ್ತು ಆರೋಗ್ಯಕರ ಜೀವನದ ಗುಟ್ಟು. ಜಪಾನಿನ ಜನರ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಾವು ಸಹ ಅವರಂತೆಯೇ ಆರೋಗ್ಯವಂತರಾಗಿ ಜೀವನವನ್ನು ನಡೆಸಬಹುದು. ನಿಮಗೂ ಕೂಡ ಫಿಟ್‌ ಆಗಿರಬೇಕು, ನೂರ್ಕಾಲ ಆರೋಗ್ಯವಂತರಾಗಿ ಜೀವನ ಸಾಗಿಸಬೇಕು ಎಂಬ ಹಂಬಲವಿದ್ದರೆ, ಜಪಾನಿಯರ ಈ ಕೆಲವು ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ.

ನೂರ್ಕಾಲ ಆರೋಗ್ಯವಂತರಾಗಿರಲು ಜಪಾನೀಯರ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ:

ಪೌಷ್ಟಿಕಾಂಶಯುಕ್ತ ಆಹಾರ ಸೇವನೆ: ಜಪಾನಿನ ಜನರು ಯಾವಾಗಲೂ ಹೆಚ್ಚಿನ ಪೌಷ್ಟಿಕಾಂಶಯುಕ್ತ, ಸಮತೋಲಿತ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಹೌದು ಅವರು ಸಮುದ್ರಾಹಾರ, ಹಸಿರು ತರಕಾರಿಗಳು,  ಸುಟ್ಟ ಮತ್ತು ಆವಿಯಲ್ಲಿ ಬೇಯಿಸಿದ ಆಹಾರಗಳು ಸೇರಿದಂತೆ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಮತ್ತು ಇವರು ಸಂಸ್ಕರಿಸಿದ ಆಹಾರ, ಜಂಕ್‌ ಫುಡ್‌ಗಳ ಸೇವನೆಯನ್ನು ತಪ್ಪಿಸುತ್ತಾರೆ. ಇವು ಚಯಾಪಚಯಕ್ರಿಯೆಯನ್ನು ಹೆಚ್ಚಿಸಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜಪಾನಿಯರ ಈ ಆಹಾರಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ಬಾಳಬಹುದು.

ಚಾಪ್‌ಸ್ಟಿಕ್‌ಗಳ ಬಳಕೆ: ನಾವು ಕೈಯಲ್ಲಿ ಆಹಾರವನ್ನು ಸೇವನೆ ಮಾಡುವಂತೆ ಜಪಾನಿಯರು ಚಾಪ್‌ಸ್ಟಿಕ್‌ನಲ್ಲಿ ತಿನ್ನುತ್ತಾರೆ. ಇದು ಅವರಿಗೆ ಸಣ್ಣ ಆಹಾರವನ್ನು ಆಹಾರವನ್ನು ಸೇವಿಸಲು ಅನುವು ಮಾಡಿಕೊಡುತ್ತದೆ.  ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ಸಹ ಜಪಾನಿಯರಂತೆ ಸಣ್ಣ ಸಣ್ಣ ತುತ್ತು ತಿನ್ನುವ ಮೂಲಕ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೇಗ ಊಟ ಮಾಡುವುದು:  ಜಪಾನಿನ ಜನರು ಸಂಜೆ 7 ಗಂಟೆಯೊಳಗೆ ತಮ್ಮ ರಾತ್ರಿಯ ಭೋಜನವನ್ನು ಮುಗಿಸುತ್ತಾರೆ. ಮತ್ತು ಅವರು ಕಡಿಮೆ ಪ್ರಮಾಣದ ಹಾಗೂ ಹಗುರವಾದ ಆಹಾರವನ್ನು ಸೇವನೆ ಮಾಡುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮಾತ್ರವಲ್ಲದೆ, ದೇಹದಲ್ಲಿ ಬೊಜ್ಜು ಸಂಗ್ರಹವಾಗುವುದನ್ನು ತಡೆಯುತ್ತದೆ. ಫಿಟ್‌ ಮತ್ತು ಆರೋಗ್ಯಕರವಾಗಿರಲು ನೀವು ಕೂಡ ಈ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಗ್ರೀನ್ ಟೀ ಸೇವನೆ: ಜಪಾನ್‌ನಲ್ಲಿ ಗ್ರೀನ್ ಟೀ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ, ತೂಕ ನಿಯಂತ್ರಣದಲ್ಲಿರುತ್ತದೆ ಮತ್ತು ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ನೀವು ಸಹ ಆರೋಗ್ಯವಂತರಾಗಿರಲು ಗ್ರೀನ್‌ ಟೀ ಸೇವಿಸಿ.

ಇದನ್ನೂ ಓದಿ: ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ

ವಾಕಿಂಗ್‌ ಮತ್ತು ಸೈಕ್ಲಿಂಗ್: ಜಪಾನಿನ ಜನರು ತಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಸೈಕ್ಲಿಂಗ್ ಮಾಡುತ್ತಾರೆ ಮತ್ತು ವಾಕಿಂಗ್‌ ಹೋಗುತ್ತಾರೆ.  ಇದು  ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ. ಇದಲ್ಲದೆ, ಇದು ಫಿಟ್‌ ಆಗಿರಲು ಕೂಡ ಸಹಕಾರಿ. ನೀವು ಕೂಡ  ಊಟದ ನಂತರ ವಾಕಿಂಗ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಬಲವಾದ ಸಾಮಾಜಿಕ ಸಂಬಂಧಗಳು:  ಜಪಾನಿಯರು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇದು ಅವರ ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುತ್ತದೆ. ಭಾವನಾತ್ಮಕ ಆರೋಗ್ಯಕ್ಕೆ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮುಖ್ಯವಾಗಿದೆ. ಇದು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತದೆ, ಇದು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಕೂಡ ನಿಮ್ಮವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಂಗಾರ’ದಂತಾ ಬದುಕಿಗೆ ಗ್ರಹಣ: ಚಿನ್ನಾಭರಣ ಖರೀದಿ ಕುಸಿತ; ಬೀದಿಗೆ ಬಿದ್ದ ಹಾಸನದ ಅಕ್ಕಸಾಲಿಗರ ಬದುಕು – Kannada News | Hassan Jewellers Struggle as Iran Israel War and Rising Gold Prices Hurt Livelihoods

ಸಂಕಷ್ಟಕ್ಕೆ ಸಿಲುಕಿದ ಅಕ್ಕಸಾಲಿಗರುImage Credit source: tv9 kannada

ಹಾಸನ, ಮೇ 18: ನಿತ್ಯವೂ ಕೆಜಿಗಟ್ಟಲೆ ಬಂಗಾರವನ್ನು (Gold) ಕೈಯಲ್ಲಿ ಹಿಡಿದು, ನೂರಾರು ಡಿಸೈನ್​​ ಒಡವೆಗಳನ್ನು ತಯಾರಿಸುವ ಅಕ್ಕಸಾಲಿಗರ (Goldsmith) ಬದುಕು ಮಾತ್ರ ಬಂಗಾರದಂತಿಲ್ಲ. ಇರಾನ್-ಇಸ್ರೇಲ್ ಯುದ್ಧ, ಚಿನ್ನದ ಬೆಲೆ ಏರಿಕೆ ಮತ್ತು ಆಮದು ಸುಂಕ ಹೆಚ್ಚಳದ ತ್ರಿವಳಿ ಏಟಿಗೆ ಸಿಲುಕಿ ರಾಜ್ಯದ ಅದರಲ್ಲೂ ಹಾಸನ ಜಿಲ್ಲೆಯ ಸಾವಿರಾರು ಅಕ್ಕಸಾಲಿಗರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಖ್ಯಾಂಶಗಳು

  • ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಆಭರಣ ಖರೀದಿ ಭಾರೀ ಕುಸಿತ
  • ಆರ್ಡರ್ ಇಲ್ಲದೆ ಸಾವಿರಾರೂ ಅಕ್ಕಸಾಲಿಗರು ಕೆಲಸ ಕಳೆದುಕೊಂಡ ಆತಂಕ
  • 400ಕ್ಕೂ ಹೆಚ್ಚು ಸಣ್ಣ ಜ್ಯುವೆಲರಿ ವರ್ಕ್ಸ್‌ಗಳು ನಷ್ಟದ ಸುಳಿಯಲ್ಲಿ

ಯುದ್ಧದ ಬಿಸಿ: ಚಿನ್ನಕ್ಕೆ ಸುಟ್ಟ ಗಾಯ

ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ ಜಗತ್ತಿನ ಬಹುತೇಕ ದೇಶಗಳು ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಪೂರೈಕೆ ವ್ಯತ್ಯಯದ ನಡುವೆ ಹಳದಿ ಲೋಹದ ವ್ಯಾಪಾರದಲ್ಲಿ ದೊಡ್ಡ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಚಿನ್ನದ ಆಮದು ಸುಂಕ ಹೆಚ್ಚಿಸಿದ ಪರಿಣಾಮ ಚಿನ್ನದ ದರ ಮತ್ತಷ್ಟು ಏರಿಕೆಯಾಗಿದೆ. ಇದರಿಂದ ಚಿನ್ನಾಭರಣ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮಾರಾಟ ಕುಸಿದ ಕಾರಣ ಜ್ಯುವೆಲರಿ ಶಾಪ್‌ಗಳಿಂದ ಆಭರಣ ತಯಾರಿಕೆಗೆ ಆರ್ಡರ್ ಬರುತ್ತಿಲ್ಲ.

ಹಾಸನದಲ್ಲಿ 3 ಸಾವಿರ ಕುಟುಂಬಗಳ ಆಕ್ರಂದನ

ಹಾಸನ ಜಿಲ್ಲೆಯೊಂದರಲ್ಲೇ ಸುಮಾರು 400ಕ್ಕೂ ಹೆಚ್ಚು ಸಣ್ಣಪುಟ್ಟ ಜ್ಯುವೆಲರಿ ವರ್ಕ್ ಶಾಪ್‌ಗಳಿದ್ದು, 2 ರಿಂದ 3 ಸಾವಿರಕ್ಕೂ ಹೆಚ್ಚು ನುರಿತ ಕರಕುಶಲ ಕಾರ್ಮಿಕರು ಇದನ್ನೇ ನಂಬಿ ಬದುಕುತ್ತಿದ್ದಾರೆ. ‘ನಮಗೆ ಬೇರೆ ಕೆಲಸ ಗೊತ್ತಿಲ್ಲ. ಈಗ ಕೆಲಸವೂ ಇಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸ್ ಕಟ್ಟಲು ಪರದಾಡುತ್ತಿದ್ದೇವೆ. ನಮಗೆ ಕೊರೊನಾ ದಿನಗಳು ನೆನಪಾಗುತ್ತಿವೆ’ ಎಂದು ಅಕ್ಕಸಾಲಿಗರು ಅಳಲು ತೋಡಿಕೊಂಡಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳ ಹೊಡೆತ

ಇನ್ನೊಂದೆಡೆ, ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ದೊಡ್ಡ ದೊಡ್ಡ ಕಾರ್ಪೊರೇಟ್ ಜ್ಯುವೆಲರಿ ಸಂಸ್ಥೆಗಳು ತಮ್ಮದೇ ಆದ ಸ್ವಂತ ಫ್ಯಾಕ್ಟರಿಗಳ ಮೂಲಕ ಒಡವೆ ತಯಾರಿಸಿಕೊಳ್ಳುತ್ತಿವೆ. ಇದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳನ್ನು ನಂಬಿಕೊಂಡಿದ್ದ ದೇಶೀಯ ಕರಕುಶಲ ಕರ್ಮಿಗಳು ತೀವ್ರ ನಷ್ಟದ ಸುಳಿಗೆ ಸಿಲುಕಿದ್ದಾರೆ.

ಸರ್ಕಾರಕ್ಕೆ ಕಣ್ಣೀರಿನ ಮನವಿ

ಯುದ್ಧ ಆರಂಭವಾಗಿ ಸುಮಾರು ತಿಂಗಳು ಕಳೆಯುತ್ತಾ ಬಂದಿದ್ದು, ಸಮಸ್ಯೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದ್ರಿಂದ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಹಲವರ ಬದುಕು ಅತಂತ್ರವಾಗುತ್ತಿದೆ. ನಮ್ಮಂತ ನಲುಗಿದ ಕಾರ್ಮಿಕರ ಕೈಹಿಡಿಯುವ ಕೆಲಸ ಸರ್ಕಾರ ಮಾಡಬೇಕಿದ್ದು, ತಕ್ಷಣವೇ ನಮ್ಮ ನೆರವಿಗೆ ಬರಬೇಕು ಎಂದು ಅಕ್ಕಸಾಲಿಗರ ಸಂಘಟನೆಗಳು ಮನವಿ ಮಾಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:05 pm, Mon, 18 May 26

Source link

ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿಗೆ ಅಸಲಿ ಕಾರಣ ಬಿಚ್ಚಿಟ್ಟ ಜನರಲ್ ಸೆಕ್ರೆಟರಿ ಬಿಂದುಗೌಡ

ಬೆಂಗಳೂರು, ಮೇ 18: ನಿನ್ನೆ ಹಲವು ಪದಾಧಿಕಾರಿಗಳನ್ನು ವಜಾ ಮಾಡಿದ್ದ ಯುವ ಕಾಂಗ್ರೆಸ್​​​ ಇಂದು ಅದೇ ವಿಚಾರಕ್ಕೆ ಪದಾಧಿಕಾರಿಗಳ ನಡುವೆ ಗಲಾಟೆ ನಡೆದಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ​ಗೌಡ ಮತ್ತು ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಸದ್ಯ ಈ ಬಗ್ಗೆ ಟಿವಿ9ಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಂದುಗೌಡ ಪ್ರತಿಕ್ರಿಯಿಸಿದ್ದು, ಇಂದು ಯೂತ್ ಕಾಂಗ್ರೆಸ್ ಸಭೆ ಕರೆದಿದ್ದರು. ಸಭೆ ನಡೆಯುವ ವೇಳೆ ಈ ರೀತಿ ಆಗಿದೆ. ಇದು ನಮ್ಮ ಆಂತರಿಕ ವಿಚಾರ. ಬಿಜೆಪಿ, ಜೆಡಿಎಸ್​ನವರು ದೊಡ್ಡದು ಮಾಡುತ್ತಿದ್ದಾರೆ. ಸಭೆಗೆ ಬರುತ್ತಿಲ್ಲ ಅಂತ ಕಾಯ್ದಿರಿಸಿದ್ದರು, ನಮ್ಮನ್ನ ಎಲ್ಲಿಯೂ ಅಮಾನತು ಮಾಡಿರಲಿಲ್ಲ. 15 ಜನರಿಗೆ ಈ ರೀತಿ ಆಗಿದೆ. ಇದರ ಬಗ್ಗೆ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಹೀಗಾಗಿ ಗಲಾಟೆ ಆಗಿದೆ. ಪಕ್ಷದ ಒಳಗಡೆ ಬಗೆಹರಿಸಿಕೊಳ್ಳಬೇಕಿತ್ತು. ಈ ರೀತಿ ಆಗಿದ್ದು ನಾವೇ ಆಹಾರವಾದಂತೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link