Category Archives: Blog

Your blog category

Optical Illusion: ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿರಿ – Kannada News | Optical Illusion: Let’s find the panda hidden in this picture within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: kurir.mk

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದಿದ್ದೇ ತಿಳಿಯುವುದಿಲ್ಲ. ಕೆಲವರು ಕ್ಷಣಾರ್ಧದಲ್ಲಿ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳುತ್ತಾರೆ. ಆದರೆ, ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುತ್ತವೆ. ಇದೀಗ ಈ ಚಿತ್ರದಲ್ಲಿ ಜನರ ಹಿಂಡು ಇದೆ. ಈ ಜನರ ನಡುವೆ ಪಾಂಡವೊಂದು ಅಡಗಿ ಕುಳಿತಿದೆ. ಈ ಪ್ರಾಣಿಯನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಲು ಪ್ರಯತ್ನಿಸಿ.

ಈ ಚಿತ್ರ ನೋಡಿದಾಗ ನಿಮಗೆ ಏನು ಅನಿಸಿತು?

ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲ. ಈ ಒಗಟು ಅಷ್ಟೇ ಸವಾಲಿನದ್ದಾಗಿದೆ. ಈ ಚಿತ್ರದಲ್ಲಿ ನೀವು ಜನರ ಗುಂಪನ್ನು ನೋಡುತ್ತೀರಿ. ಈ ಜನರ ನಡುವೆ ಪಾಂಡವೊಂದು ಅಡಗಿದೆ. ನೀವು 10 ಸೆಕೆಂಡುಗಳ ಒಳಗೆ ಸರಿಯಾದ ಉತ್ತರ ಹೇಳಿದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಅತ್ಯುತ್ತಮವಾಗಿದೆ ಎಂದರ್ಥ. ನೀವು ಈ ಸವಾಲಿಗೆ ಸಿದ್ಧರಿದ್ದರೆ, ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಶ್ವಾನಗಳ ನಡುವೆ ಇರುವ ಚಿನ್ನದ ನಾಣ್ಯವನ್ನು ಗುರುತಿಸಬಲ್ಲಿರಾ

ಪಾಂಡ ನಿಮ್ಮ ಕಣ್ಣಿಗೆ ಕಾಣಿಸಿತೇ?

ನಿರ್ದಿಷ್ಟ ಸಮಯದೊಳಗೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಹುಡುಕಿ ಒಗಟು ಬಿಡಿಸಲು ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ನಿಮಗೆ ಈ ಪ್ರಾಣಿ ಕಣ್ಣಿಗೆ ಬಿದ್ದಿಲ್ಲವಾದರೆ ಹೆಚ್ಚು ಚಿಂತಿಸಬೇಡಿ. ಕೆಳಗೆ ನೀಡಲಾದ ಚಿತ್ರದಲ್ಲಿ ಪಾಂಡ ಇರುವ ಸ್ಥಳವನ್ನು ಕೆಂಪು ವೃತ್ತದಲ್ಲಿ ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ಪಾಂಡ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:47 am, Thu, 14 May 26

Source link

Viral: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ! – Kannada News | Haridwar Shocker: Husband Performs Pind Daan for Living Wife Over Reels Addiction

ಪತ್ನಿಯ ರೀಲ್ಸ್​​ ಹುಚ್ಚಿಗೆ ಆಕೆಗೆ ‘ಪಿಂಡದಾನ’ ಮಾಡಿದ ಗಂಡImage Credit source: instagram

ಹರಿದ್ವಾರ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚು ಸಂಸಾರಗಳ ಮಧ್ಯೆ ಎಂತಹ ಬಿರುಕು ಮೂಡಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಮಾತನ್ನು ಕೇಳದೆ ಸದಾ ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುವುದರಲ್ಲಿ ಮಗ್ನಳಾಗಿದ್ದ ಪತ್ನಿಯ ವರ್ತನೆಯಿಂದ ರೋಸಿಹೋದ ವ್ಯಕ್ತಿಯೊಬ್ಬ, ಆಕೆ ಬದುಕಿದ್ದಾಗಲೇ ಹರಿದ್ವಾರದಲ್ಲಿ ಆಕೆಗೆ ‘ಪಿಂಡದಾನ’ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಏನಿದು ಘಟನೆ?

ವರದಿಗಳ ಪ್ರಕಾರ, ರೀಲ್ಸ್ ಸ್ಟಾರ್ ಆಗಿರುವ ಹೇಮಾ ಚೌಧರಿ(@hemachoudhary986) ಎಂಬುವವರ ಪತಿಯೇ ಈ ವಿಚಿತ್ರ ಸಾಹಸಕ್ಕೆ ಕೈಹಾಕಿದವರು. ಹೇಮಾ ಅವರು ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವುದು ಮತ್ತು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಿದ್ದಳು. ಈ ವಿಚಾರವಾಗಿ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. “ರೀಲ್ಸ್ ಮಾಡುವುದನ್ನು ನಿಲ್ಲಿಸು, ಸಂಸಾರದ ಕಡೆ ಗಮನ ಕೊಡು” ಎಂಬ ಪತಿಯ ಮನವಿಗೆ ಹೇಮಾ ಕಿವಿಗೊಟ್ಟಿರಲಿಲ್ಲ ಎನ್ನಲಾಗಿದೆ.

ಪಿಂಡದಾನ ಮಾಡುವ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್​; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ!

ಬದುಕಿರುವಾಗಲೇ ಪತ್ನಿಗೆ ಅಂತ್ಯಸಂಸ್ಕಾರದ ವಿಧಿವಿಧಾನ:

ಅರೆಬರೆ ಬಟ್ಟೆತೊಟ್ಟು ರೀಲ್ಸ್​​ ಮಾಡುತ್ತಿದ್ದ ಪತ್ನಿಯಿಂದ ಅಸಮಾಧಾನಗೊಂಡ ಪತಿ ಆಯ್ದುಕೊಂಡ ದಾರಿ ಹರಿದ್ವಾರ. ಅಲ್ಲಿಗೆ ತೆರಳಿದ ಆತ, ಸಾಮಾನ್ಯವಾಗಿ ಸತ್ತವರಿಗೆ ಮಾಡುವ ‘ಪಿಂಡದಾನ’ ವಿಧಿವಿಧಾನವನ್ನು ತನ್ನ ಪತ್ನಿಯ ಹೆಸರಿನಲ್ಲಿ ನೆರವೇರಿಸಿದ್ದಾರೆ. ವಿಶೇಷವೆಂದರೆ, ಪತ್ನಿ ರೀಲ್ಸ್ ಮಾಡುವುದನ್ನು ವಿರೋಧಿಸುತ್ತಿದ್ದ ಪತಿ, ತಾನು ಮಾಡಿದ ಈ ಪಿಂಡದಾನದ ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. “ನನ್ನ ಪತ್ನಿ ಈಗ ನನಗೆ ಸತ್ತಂತೆ” ಎಂಬ ಸಂದೇಶವನ್ನು ರವಾನಿಸಲು ಆತ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗತ್ತಿನ ಎರಡು ದೊಡ್ಡ ಶಕ್ತಿಗಳ ಸಮ್ಮಿಲನ: ಸಂಘರ್ಷ ಬೇಡ ಸಹಕಾರವಿರಲಿ ಎಂದ ಜಿನ್‌ಪಿಂಗ್ – Kannada News | Xi Jinping to Trump: US and China Must Be Partners, Not Rivals, for Global Stability

ಬೀಜಿಂಗ್, ಮೇ.14: ಜಗತ್ತಿನ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ಪರಸ್ಪರ ಸಂಘರ್ಷದ ಹಾದಿ ಬಿಟ್ಟು ಸಹಕಾರದೊಂದಿಗೆ ಸಾಗಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಚೀನಾಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೀಜಿಂಗ್‌ನಲ್ಲಿ ಬರಮಾಡಿಕೊಂಡ ಜಿನ್‌ಪಿಂಗ್, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ನಾವು ಶತ್ರುಗಳಲ್ಲ, ಪಾಲುದಾರರಾಗಬೇಕು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾ “ವೈರಿಗಳಾಗುವ ಬದಲಿಗೆ ಪಾಲುದಾರರಾಗಬೇಕು” (Partners, not rivals). ಸಹಕಾರದಿಂದ ಎರಡೂ ದೇಶಗಳಿಗೆ ಲಾಭವಾಗಲಿದ್ದು, ಸಂಘರ್ಷದಿಂದ ನಷ್ಟವೇ ಹೆಚ್ಚು ಎಂದು ಅವರು ಪ್ರತಿಪಾದಿಸಿದರು. ಇಡೀ ಜಗತ್ತು ಪ್ರಸ್ತುತ ಕಳೆದ ಒಂದು ಶತಮಾನದಲ್ಲೇ ಕಂಡರಿಯದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಸ್ಥಿರ ಸಂಬಂಧ ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಚೀನಾ ಹಾಗೂ ಅಮೆರಿಕದ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂಬ ಜಾಗತಿಕ ಆತಂಕವನ್ನು ಮೀರಿ, ಹೊಸ ಮಾದರಿಯ ರಾಜತಾಂತ್ರಿಕ ಸಂಬಂಧ ಬೆಳೆಸುವ ಅಗತ್ಯವಿದೆ ಎಂದು ಜಿನ್‌ಪಿಂಗ್ ತಿಳಿಸಿದರು.

ಇದನ್ನೂ ಓದಿ: 9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ: ಟ್ರಂಪ್-ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ!

ಒಂಬತ್ತು ವರ್ಷಗಳ ನಂತರ ಚೀನಾಕ್ಕೆ ಭೇಟಿ ನೀಡಿದ ಟ್ರಂಪ್ ಅವರನ್ನು ಜಿನ್‌ಪಿಂಗ್ ಅಭಿನಂದಿಸಿದರು. ಅಲ್ಲದೆ, ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಮೆರಿಕದ ಜನತೆಗೆ ಶುಭಾಶಯ ಕೋರಿದರು. ಈ ಭೇಟಿಯು ವ್ಯಾಪಾರ, ತಂತ್ರಜ್ಞಾನ ಮತ್ತು ಜಾಗತಿಕ ಭದ್ರತೆಯ ದೃಷ್ಟಿಯಿಂದ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:04 am, Thu, 14 May 26

Source link

Shivlinga Worship: ಕಲ್ಲು, ಬೆಳ್ಳಿ ಲಿಂಗಗಳಿಗಿಂತ ಪಾದರಸ ಶಿವಲಿಂಗದ ಪೂಜೆ ಏಕೆ ಶ್ರೇಷ್ಠ? ಇಲ್ಲಿದೆ ಅಸಲಿ ಕಾರಣ! – Kannada News | Unlocking Divine Grace: A Guide to Mercury Shivlinga Worship

ಹಿಂದೂ ಧರ್ಮದಲ್ಲಿ ಶಿವನನ್ನು ವಿವಿಧ ರೂಪಗಳಲ್ಲಿ, ವಿಶೇಷವಾಗಿ ಶಿವಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಬೆಳ್ಳಿ, ಹಿತ್ತಾಳೆ, ಪಂಚಲೋಹ, ಕಲ್ಲು ಇತ್ಯಾದಿಗಳಿಂದ ಮಾಡಿದ ಶಿವಲಿಂಗಗಳನ್ನು ಪೂಜಿಸುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಆದರೆ, ತಕ್ಷಣವೇ ಸಂಪೂರ್ಣ ಶಿವಾನುಗ್ರಹಕ್ಕೆ ಪಾತ್ರರಾಗಲು ಒಂದು ವಿಶೇಷವಾದ ಶಿವಲಿಂಗ ಪೂಜಾ ವಿಧಾನವಿದೆ, ಅದುವೇ ಪಾದರಸ ಶಿವಲಿಂಗ ಪೂಜೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಯಾರಿಗೆ ಜೀವನದಲ್ಲಿ ಸಂಕಷ್ಟಗಳು ಎದುರಾಗಿವೆಯೋ, ದಾರಿ ಕಾಣದೆ ದಿಕ್ಕು ತೋಚದಂತಾಗಿರುತ್ತದೆಯೋ ಅಂತಹವರಿಗೆ ಪಾದರಸ ಶಿವಲಿಂಗದ ಆರಾಧನೆಯು ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಯಾರು ಸತತವಾಗಿ 48 ದಿನಗಳ ಕಾಲ ಪಾದರಸ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ, ಅವರಿಗೆ ಎಂತಹದೇ ಸಂಕಷ್ಟಗಳಿದ್ದರೂ ಅವು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಶಿವನು ಅಭಿಷೇಕ ಪ್ರಿಯನಾಗಿದ್ದಾನೆ ಎಂಬುದು ಇದರ ಹಿಂದಿನ ಮುಖ್ಯ ಕಾರಣ. ವಿಷ್ಣು ಅಲಂಕಾರ ಪ್ರಿಯ, ಗಣಪತಿ ನೈವೇದ್ಯ ಪ್ರಿಯ, ಭಾಸ್ಕರ ನಮಸ್ಕಾರ ಪ್ರಿಯರಾದಂತೆ, ಶಿವನಿಗೆ ಕೇವಲ ಸ್ವಲ್ಪ ನೀರನ್ನು ಅರ್ಪಿಸಿ ಪ್ರಾರ್ಥಿಸಿದರೆ ತಕ್ಷಣವೇ ಭೋಳಾಶಂಕರನು ಒಲಿಯುತ್ತಾನೆ.

ಪುರಾಣಗಳ ಪ್ರಕಾರ, ಚಿನ್ನದ ಶಿವಲಿಂಗವನ್ನು ಪೂಜಿಸುವುದರಿಂದ ದೊರೆಯುವ ಫಲಕ್ಕಿಂತ ಪಾದರಸ ಶಿವಲಿಂಗವನ್ನು ಪೂಜಿಸುವುದರಿಂದ ಒಂದು ಕೋಟಿ ಪಟ್ಟು ಹೆಚ್ಚಿನ ಫಲ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಹಿಂದಿನ ಜನ್ಮದ ಕರ್ಮಗಳನ್ನು, ಪಾಪಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾರು ಪ್ರತಿ ಸೋಮವಾರ ಸಂಧ್ಯಾಕಾಲದಲ್ಲಿ ಪಾದರಸ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಆ ಅಭಿಷೇಕದ ನೀರನ್ನು ತೀರ್ಥವಾಗಿ ಸ್ವೀಕರಿಸುತ್ತಾರೋ, ಅಂತಹವರ ಪೂರ್ವ ಜನ್ಮದ ಕರ್ಮಗಳು ಮತ್ತು ಪಾಪಗಳು ಕಡಿಮೆಯಾಗುತ್ತವೆ. ಇದು ಔಷಧಿ ಸೇವಿಸಿದಂತೆ ತಕ್ಷಣಕ್ಕೆ ಪರಿಹಾರ ನೀಡಿ, ಕ್ರಮೇಣ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಪಾದರಸ ಶಿವಲಿಂಗ ಪೂಜೆಯಿಂದ ಕೇವಲ ಶಿವನ ಅನುಗ್ರಹ ಮಾತ್ರವಲ್ಲದೆ, ಸರ್ವ ದೇವತೆಗಳ ಆಶೀರ್ವಾದವೂ ದೊರೆಯುತ್ತದೆ. ಶಾಸ್ತ್ರಗಳ ಪ್ರಕಾರ, ಈ ಶಿವಲಿಂಗವನ್ನು ಪೂಜಿಸುವುದರಿಂದ ಲಕ್ಷ್ಮಿ ಮತ್ತು ಕುಬೇರರ ಕೃಪೆಯೂ ಲಭಿಸುತ್ತದೆ. ಈ ಪಾದರಸ ಶಿವಲಿಂಗವನ್ನು ಮನೆಯಲ್ಲೂ ಕೂಡ ಇಟ್ಟು ಪೂಜಿಸಬಹುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಶಿವಲಿಂಗದ ಅಭಿಷೇಕದ ನೀರನ್ನು ಸ್ನಾನದ ನೀರಿಗೆ ಸೇರಿಸಿ ಸ್ನಾನ ಮಾಡುವುದರಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಪಾದರಸ ಶಿವಲಿಂಗ ಪೂಜೆಗೆ ಯಾವುದೇ ವಿಧಿವಿಧಾನಗಳಲ್ಲಿ ಅಥವಾ ಮಂತ್ರಗಳಲ್ಲಿ ವಿಶೇಷ ಮಾರ್ಪಾಡುಗಳಿಲ್ಲ. ಕೇವಲ ಶ್ರದ್ಧೆಯಿಂದ ನೀರಿನ ಅಭಿಷೇಕವನ್ನು ಮಾಡುವುದರಿಂದಲೇ ಶುಭ ಫಲಗಳು ದೊರೆಯುತ್ತವೆ ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲೀಪ್ ರಾಜ್ ಕೊನೆಯ ಕ್ಷಣಗಳು ಹೇಗಿತ್ತು? ಅಂಬ್ಯುಲೆನ್ಸ್ ನೀಡಿದ್ದರೆ ಉಳಿಯುತ್ತಿತ್ತು ಜೀವ? – Kannada News | Dileep Raj Demise: Auto driver Explains Wife Vidya’s Tragic Fight; Hospital Negligence Questioned

ಕನ್ನಡದ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೇ 13ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ದಿಲೀಪ್ ರಾಜ್ ಅವರನ್ನು ಉಳಿಸಿಕೊಳ್ಳಲು ಅವರ ಪತ್ನಿ ಶ್ರೀವಿದ್ಯಾ ನಡೆಸಿದ ಹೋರಾಟ ಈಗ ಕಣ್ಣೀರು ತರಿಸುವಂತಿದೆ. ಆ ಕೊನೆಯ ಕ್ಷಣಗಳಲ್ಲಿ ನಡೆದಿದ್ದೇನು ಎಂಬುದನ್ನು ಸ್ವತಃ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ.

‘ನಾನು ದಿಲೀಪ್ ಅವರ ಮನೆಯ ಹತ್ತಿರವೇ ಇದ್ದೆ. ಬೆಳಿಗ್ಗೆ ಸುಮಾರು 6:10ಕ್ಕೆ ಅವರ ಪತ್ನಿ ಶ್ರೀವಿದ್ಯಾ  ಆತಂಕದಿಂದ ಕರೆದರು. ಕೂಡಲೇ ಹೋದೆ. ನಾನು ಮತ್ತು ಅವರ ಮನೆಯ  ಭದ್ರತಾ ಸಿಬ್ಬಂದಿ ಸೇರಿ ದಿಲೀಪ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡೆವು. ಆ ಸಮಯದಲ್ಲಿ ಅವರಿಗೆ ಸಿಪಿಆರ್ (CPR) ಕೂಡ ಮಾಡಿದೆವು. ಸ್ವಲ್ಪ ಉಸಿರಾಟ ಇತ್ತು. ಆದರೆ 6:15ರ ಸುಮಾರಿಗೆ ರಾಜರಾಜೇಶ್ವರಿ ನಗರದ ಆರ್ಚ್ ಹತ್ತಿರ ಬರುತ್ತಿದ್ದಂತೆ ದೊಡ್ಡ ಉಸಿರು ಬಿಟ್ಟರು’ ಎಂದು ದೇವೇಂದ್ರ ನಾಯ್ಡು ಆ ಕ್ಷಣಗಳನ್ನು ನೆನೆದಿದ್ದಾರೆ.

‘ದಿಲೀಪ್ ಅವರ ಸ್ಥಿತಿ ಕಂಡು ಪತ್ನಿ ಶ್ರೀವಿದ್ಯಾ  ಅವರು ಮೊದಲು ಜಯದೇವ ಆಸ್ಪತ್ರೆಗೆ ಹೋಗೋಣ ಎಂದಿದ್ದರು. ಆದರೆ ಅದು ದೂರವಾಗುತ್ತದೆ ಎಂಬ ಕಾರಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು ಹೋದ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಸಿಬ್ಬಂದಿಗಳು ಕೇವಲ ಬಿಪಿ ಚೆಕ್ ಮಾಡಿ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರು. ಕೆಆರ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಯಾವುದೇ ಸ್ಪಂದನೆ ಬರಲಿಲ್ಲ’ ಎಂದು ಆಟೋ ಚಾಲಕ ವಿವರಿಸಿದ್ದಾರೆ.

ಅಂಬ್ಯುಲೆನ್ಸ್ ನೀಡದ ಆಸ್ಪತ್ರೆ ವಿರುದ್ಧ ಆಕ್ರೋಶ:

ದಿಲೀಪ್ ಅವರನ್ನು ಉಳಿಸಿಕೊಳ್ಳಲು ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಹಾಯ ಕೇಳಿದಾಗ ಕೆಆರ್ ಆಸ್ಪತ್ರೆಯವರು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಅಲ್ಲಿ ಎರಡು ಅಂಬ್ಯುಲೆನ್ಸ್ ಇತ್ತು. ಆದರೂ ಅವರು ನಮಗೆ ಸಹಾಯ ಮಾಡಲಿಲ್ಲ. ಬಹುಶಃ ಭಯದಿಂದ ಇರಬಹುದು ಅಥವಾ ಅವರಿಗೆ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದಿರಬಹುದು. ಆದರೆ ಮಾನವೀಯತೆ ದೃಷ್ಟಿಯಿಂದ ಅಂಬ್ಯುಲೆನ್ಸ್ ನೀಡಿದ್ದರೆ ಇಂದು ದಿಲೀಪ್ ಅವರು ನಮ್ಮೊಂದಿಗೆ ಇರುತ್ತಿದ್ದರೇನೋ’ ಎಂದು ಆಟೋ ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಚಿತ್ರ ಒಟಿಟಿಯಲ್ಲಿ ಗಮನ ಸೆಳೆಯುವಾಗಲೇ ಕೊನೆಯುಸಿರೆಳೆದ ದಿಲೀಪ್ ರಾಜ್

ಆಸ್ಪತ್ರೆಯಲ್ಲಿ ಪತ್ನಿಯ ಆಕ್ರಂದನ:

‘ಕೊನೆಗೆ ಕಾರ್ ಮೂಲಕ ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಸುದ್ದಿ ಕೇಳುತ್ತಿದ್ದಂತೆ ದಿಲೀಪ್ ಪತ್ನಿ ಇಡೀ ಆಸ್ಪತ್ರೆಗೆ ಕೇಳಿಸುವಂತೆ ಜೋರಾಗಿ ಕಿರುಚಾಡಿ ಅತ್ತಿದ್ದಾರೆ. ಎಲ್ಲಾ ದೇವರಿಗೂ ಬೇಡಿಕೊಂಡರು, ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಪ್ರಾರ್ಥಿಸಿದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು’ ಎಂದು ದೇವೇಂದ್ರ ನಾಯ್ಡು ಭಾವುಕರಾಗಿ ವಿವರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಗೆಲುವಿನಿಂದ ಸಂಕಷ್ಟಕ್ಕೆ ಸಿಲುಕಿದ 6 ತಂಡಗಳು!

Source link

ಕೋಲಾರ: ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು, ಸಿಸಿಟಿವಿಲಿ ಸೆರೆಯಾಯ್ತು ಖದೀಮರ ಕೈಚಳಕ – Kannada News | Kolar Crime: Thieves Steal 1 Lakh from Bike Box Near Bethamangala Police Station; Caught by Public

ಕೋಲಾರ, ಮೇ 14: ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಬೈಕ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್ ಎಂಬುವವರು ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಬೈಕ್ ಬಾಕ್ಸ್​ನಲ್ಲಿ ಇರಿಸಿದ್ದರು. ಬೈಕ್ ನಿಲ್ಲಿಸಿ ರಮೇಶ್ ಅಂಗಡಿಯೊಂದಕ್ಕೆ ಹೋದ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳರು ಹಣವನ್ನು ದೋಚಿದ್ದಾರೆ. ಅಚ್ಚರಿಯ ವಿಷಯವೆಂದರೆ ಈ ಕೃತ್ಯ ಬೇತಮಂಗಲ ಪೊಲೀಸ್ ಠಾಣೆಯ ಸಮೀಪವೇ ನಡೆದಿದೆ.

ಕಳ್ಳರು ಹಣದೊಂದಿಗೆ ಪರಾರಿಯಾಗುತ್ತಿದ್ದಂತೆ ರಮೇಶ್ ಅವರ ಮಗ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಸ್ಥಳೀಯರು ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಪೊಲೀಸ್ ಠಾಣೆ ಎದುರೇ ಇಂತಹ ಘಟನೆ ನಡೆದಿದ್ದರೂ ಪೊಲೀಸರು ತಕ್ಷಣ ಸ್ಪಂದಿಸದ ಬಗ್ಗೆ ಸ್ಥಳೀಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಯಿ ಪಲ್ಲವಿ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ರಾಮಾಯಣ’ ಟೀಂ – Kannada News | Sai Pallavi’s Hindi Pronunciation Sparks Ramayana Controversy: Dubbing Considered for Sita

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದಲ್ಲಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಚೊಚ್ಚಲ ಹಿಂದಿ ಸಿನಿಮಾ ‘ಏಕ್ ದಿನ್’ ಸೋತಿರುವುದು ಮಾತ್ರವಲ್ಲದೆ, ಚಿತ್ರದಲ್ಲಿ ಅವರ ಹಿಂದಿ ಉಚ್ಚಾರಣೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ, ತಂಡ ದೊಡ್ಡ ನಿರ್ಧಾರ ಮಾಡಿದೆ ಎನ್ನಲಾಗಿದೆ.

‘ಏಕ್ ದಿನ್’ ಚಿತ್ರದಲ್ಲಿ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ ಪಲ್ಲವಿ ಹಿಂದಿ ಭಾಷೆಯ ಮೇಲಿನ ಹಿಡಿತ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ ಎಂಬುದು ಸಿನಿಪ್ರೇಮಿಗಳ ಅಭಿಪ್ರಾಯ. ಸೀತಾ ಮಾತೆಯ ಪಾತ್ರಕ್ಕೆ ಅತ್ಯಂತ ಶುದ್ಧವಾದ ಮತ್ತು ಸ್ಪಷ್ಟವಾದ ಹಿಂದಿ ಉಚ್ಚಾರಣೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಸಾಯಿ ಪಲ್ಲವಿ ಅವರ ಧ್ವನಿಯನ್ನು ಬಳಸುವ ಬದಲು ಬೇರೆ ವೃತ್ತಿಪರ ಡಬ್ಬಿಂಗ್ ಕಲಾವಿದರಿಂದ ಧ್ವನಿ ನೀಡಿಸಲು ತಯಾರಕರು ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಸಾಯಿ ಪಲ್ಲವಿ ಅವರ ಹಿಂದಿ ಮಾತುಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಶುರುವಾಗಿವೆ. ‘ಮೂಲ ಹಿಂದಿ ಪದಗಳನ್ನೇ ಸರಿಯಾಗಿ ಉಚ್ಚರಿಸಲು ಬಾರದ ನಟಿಯನ್ನು ಸೀತೆ ಪಾತ್ರಕ್ಕೆ ಆಯ್ಕೆ ಮಾಡಿದ್ದಾದರೂ ಏಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಹಿಂದೆ ಇದೇ ಪಾತ್ರಕ್ಕೆ ಆಲಿಯಾ ಭಟ್ ಅವರನ್ನು ಫೈನಲ್ ಮಾಡಲಾಗಿತ್ತು, ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ಹೊರಬಂದಿದ್ದರು. ಈಗ ಸಾಯಿ ಪಲ್ಲವಿ ಅವರ ಆಯ್ಕೆಯ ಬಗ್ಗೆ ಸಿನಿಮಾ ಪಂಡಿತರಲ್ಲೇ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ‘ಏಕ್ ದಿನ್’ ಸೋಲು, ಪಾತ್ರದ ಬಗ್ಗೆ ಸಾಯಿ ಪಲ್ಲವಿ ನೆಗೆಟಿವ್ ಕಮೆಂಟ್

ರಣಬೀರ್ ಕಪೂರ್ ರಾಮನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸುತ್ತಿರುವ ಈ ಬೃಹತ್ ಚಿತ್ರದ ಮೊದಲ ಭಾಗ ಇದೇ ವರ್ಷದ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಎರಡನೇ ಭಾಗ 2027ರ ದೀಪಾವಳಿಗೆ ಪ್ಲಾನ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದರಸಾದಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದ ಧರ್ಮ ಬೋಧಕ: ದೌರ್ಜನ್ಯ ತಾಳಲಾರದೆ ತಪ್ಪಿಸಿಕೊಂಡ ಬಿಹಾರದ 24 ಮಕ್ಕಳು! – Kannada News | FIR Registered Against Tumakuru Madrasa Preacher for Physical Abuse and Forced Labour of 24 Children

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ತುಮಕೂರು, ಮೇ 14: ತುಮಕೂರು (Tumakuru) ಜಿಲ್ಲೆಯ ಮದರಸಾವೊಂದರಲ್ಲಿ ಮಕ್ಕಳಿಗೆ ದೈಹಿಕ ಕಿರುಕುಳ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಅಮಾನವೀಯ ಕೃತ್ಯ ಎಸಗಿದ ಆರೋಪದ ಮೇಲೆ ಧರ್ಮಬೋಧಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದರಸಾದಲ್ಲಿ ನಡೆಯುತ್ತಿದ್ದ ದೌರ್ಜನ್ಯ ತಾಳಲಾರದೆ 24 ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಬಂದ ಸಿನಿಮೀಯ ಘಟನೆಯ ನಂತರ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಮುಖ್ಯಾಂಶಗಳು

  • ತುಮಕೂರು ಜಿಲ್ಲೆಯ ಆಮಲಾಪುರ ಗ್ರಾಮದ ಮದರಸಾದಲ್ಲಿ 24 ಮಕ್ಕಳಿಗೆ ದೈಹಿಕ ಕಿರುಕುಳ ನೀಡಿದ ಆರೋಪ.
  • ಧರ್ಮ ಬೋಧಕ ಮೌಲಾಲಿ ಎಂಬಾತನ ವಿರುದ್ಧ ಪ್ರಕರಣ ದಾಖಲು.
  • ಬೆಂಗಳೂರಿನ ಕೆಎಸ್‌ಆರ್ ರೈಲ್ವೇ ನಿಲ್ದಾಣದಲ್ಲಿ ಮಕ್ಕಳನ್ನು ರಕ್ಷಿಸಿದ ರೈಲ್ವೇ ರಕ್ಷಣಾ ಪಡೆ

ಘಟನೆಯ ವಿವರ

ತುಮಕೂರಿನ ಮದರಸಾದಿಂದ ತಪ್ಪಿಸಿಕೊಂಡಿದ್ದ 8 ರಿಂದ 17 ವರ್ಷ ವಯಸ್ಸಿನ 24 ಮಕ್ಕಳು ಬಿಹಾರದ ತಮ್ಮ ಮನೆಗಳಿಗೆ ಮರಳಲು ಯತ್ನಿಸುತ್ತಿದ್ದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಮಕ್ಕಳನ್ನು ಗಮನಿಸಿದ ರೈಲ್ವೇ ರಕ್ಷಣಾ ಪಡೆ (RPF) ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮದರಸಾದಲ್ಲಿ ನಡೆಯುತ್ತಿದ್ದ ಕರಾಳ ಕೃತ್ಯಗಳು ಹೊರಬಂದಿವೆ. ಮದರಸಾದಲ್ಲಿ ಹಿಂಸೆ ನೀಡುತ್ತಿದ್ದರು ಮತ್ತು ಮದರಸಾದ ಆವರಣದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸುವಂತಹ ಕಠಿಣ ಕೆಲಸಗಳನ್ನು ಬಲವಂತವಾಗಿ ಮಾಡಿಸಲಾಗುತ್ತಿತ್ತು ಎಂದು ಮಕ್ಕಳು ತಿಳಿಸಿದ್ದಾರೆ.

ತನಿಖೆ ಮತ್ತು ಕ್ರಮ

ಮಕ್ಕಳನ್ನು ಸದ್ಯ ಮಕ್ಕಳ ಕಲ್ಯಾಣ ಸಮಿತಿಯ (CWC) ವಶಕ್ಕೆ ನೀಡಲಾಗಿದ್ದು, ಅವರಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಈ ಪ್ರಕರಣವನ್ನು ಮೊದಲು ರೈಲ್ವೇ ಪೊಲೀಸರು ದಾಖಲಿಸಿಕೊಂಡು, ನಂತರ ಹೆಚ್ಚಿನ ತನಿಖೆಗಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಮೌಲಾಲಿ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆ (JJ Act), ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಬಾಲಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಕೋರಮಂಗಲ ರಾತ್ರಿ ಸಂಚಾರಕ್ಕೆ ಡೇಂಜರ್​: ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಆಟೋ ಕಳ್ಳಾಟಕ್ಕೆ ಟ್ರಾಫಿಕ್ ಪೊಲೀಸ್ ಬ್ರೇಕ್, ಮೂರೇ ತಿಂಗಳಲ್ಲಿ ಸುಮಾರು 3 ಸಾವಿರ ಕೇಸ್ ದಾಖಲು! – Kannada News | Bengaluru Traffic Police Crackdown: Nearly 3000 Cases Filed Against Auto Drivers for Overcharging and Refusal

ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ (Bengaluru) ಪ್ರಯಾಣಿಕರ ಸುಲಿಗೆಗೆ ಇಳಿಯುವ ಮತ್ತು ಕರೆದ ಕಡೆ ಬರಲು ನಿರಾಕರಿಸುವ ಆಟೋ ಚಾಲಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವ ಮತ್ತು ಸಂಜೆ ಆಗುತ್ತಿದ್ದಂತೆ ಮೀಟರ್ ದರಕ್ಕಿಂತ ಒಂದೂವರೆ ಪಟ್ಟು (One and Half) ಹಣ ಕೇಳುವ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ತಿಂಗಳ ಅವಧಿಯಲ್ಲೇ 2,988 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಹೆಚ್ಚುವರಿ ಹಣ ವಸೂಲಿ ಮತ್ತು ಬಾಡಿಗೆಗೆ ಬರಲು ನಿರಾಕರಿಸಿದ ಆಟೋ ಚಾಲಕರ ವಿರುದ್ಧ ಕಳೆದ 3 ತಿಂಗಳಲ್ಲಿ ಒಟ್ಟು 2,988 ಪ್ರಕರಣಗಳು ದಾಖಲು.
  • ಹೆಚ್ಚುವರಿ ಬಾಡಿಗೆ ಕೇಳಿದ 1,354 ಮತ್ತು ನಿಗದಿಪಡಿಸಿದ ಸ್ಥಳಕ್ಕೆ ಬರಲು ನಿರಾಕರಿಸಿದ 1,634 ಚಾಲಕರ ವಿರುದ್ಧ ದೂರು ದಾಖಲು.
  • ರಾತ್ರಿ 10 ಗಂಟೆಯ ಬದಲಿಗೆ 8 ಗಂಟೆಗೇ ಒಂದೂವರೆ ಪಟ್ಟು (One and Half) ದರ ಕೇಳುವವರ ವಿರುದ್ಧ ಪೊಲೀಸರ ಕಟ್ಟುನಿಟ್ಟಿನ ಕ್ರಮ.

ಕಾರ್ಯಾಚರಣೆಯ ವಿವರ

ನಗರದ ಅನೇಕ ಭಾಗಗಳಲ್ಲಿ ಆಟೋ ಚಾಲಕರು ಪ್ರಯಾಣಿಕರು ಕರೆದ ಕಡೆ ಬರುವುದಿಲ್ಲ ಹಾಗೂ ಒಂದು ವೇಳೆ ಬಂದರೂ ದುಪ್ಪಟ್ಟು ಹಣ ಕೇಳುತ್ತಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಕಳೆದ ಮೂರು ತಿಂಗಳಿನಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ. ವಿಶೇಷವಾಗಿ ಭಾಷೆ ತಿಳಿಯದ ಹೊರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುವ ಚಾಲಕರ ವಿರುದ್ಧ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

ಆಟೋ ಚಾಲಕರ ಬಗ್ಗೆ ಪ್ರಯಾಣಿಕರ ಅಸಮಾಧಾನ

ನಿಯಮದ ಪ್ರಕಾರ ರಾತ್ರಿ 10 ಗಂಟೆಯ ನಂತರವಷ್ಟೇ ಒಂದೂವರೆ ಪಟ್ಟು ದರ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಅನೇಕ ಚಾಲಕರು ರಾತ್ರಿ 8 ಗಂಟೆಯಿಂದಲೇ ಈ ದರ ವಸೂಲಿ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಪ್ರಯಾಣಿಕ ರಾಮು, ಚಾಲಕರ ಈ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಆಟೋ ಚಾಲಕ ಸತೀಶ್ ಅವರು, ‘ಪ್ರಯಾಣಿಕರೇ ನಮ್ಮ ದೇವರು, ನಾವು ದುಪ್ಪಟ್ಟು ಹಣ ಕೇಳಬಾರದು’ ಎಂದು ಸಹೋದ್ಯೋಗಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಾರಿಯಾಗದ ಆಟೋ ಮೀಟರ್ ಹೊಸ ದರ: ದುಪ್ಪಟ್ಟು ವಸೂಲಿ, ಪ್ರಯಾಣಿಕರು ಆಕ್ರೋಶ

ಕೆಲವೇ ಕೆಲವು ಚಾಲಕರ ಇಂತಹ ದುರ್ವರ್ತನೆಯಿಂದ ಇಡೀ ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸದ್ಯ ಪೊಲೀಸರು ಅಲರ್ಟ್ ಆಗಿದ್ದು, ಸಾರ್ವಜನಿಕರು ದೂರು ನೀಡಿದ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link