ಭಾರತ ಅಮೆರಿಕದ ಉತ್ತಮ ಸ್ನೇಹಿತ; ವಿವಾದದ ಬಳಿಕ ತೇಪೆ ಹಚ್ಚಿದ ಟ್ರಂಪ್ – Kannada News | India is a Great Country; Donald Trump’s Damage Control After Hell Hole Row

ವಾಷಿಂಗ್ಟನ್, ಏಪ್ರಿಲ್ 23: ಭಾರತ ಮತ್ತು ಚೀನಾದಂತಹ ದೇಶಗಳಿಗೆ 9 ತಿಂಗಳಾದ ಬಳಿಕ ಅಮೆರಿಕಕ್ಕೆ ಬರುವ ಮಹಿಳೆಯರು ಇಲ್ಲೇ ಬಂದು ಮಗುವನ್ನು ಹೆರುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸಿಗುತ್ತದೆ. ನಂತರ ಭಾರತ ಮತ್ತು ಚೀನಾದಂತಹ ನರಕಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವಕ್ಕಾಗಿ ಇಲ್ಲಿಗೆ ವಲಸೆ ಬರುತ್ತಾರೆ ಎಂದು ಅಮೆರಿಕದ ಪಾಡ್​ಕಾಸ್ಟ್​ನಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್ ವಿವಾದಾತ್ಮಕವಾಗಿ ಮಾತನಾಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆ ಹೇಳಿಕೆಗೆ ತನ್ನ ಸಹಮತ ಸೂಚಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್ ಭಾರತ ಅತ್ಯುತ್ತಮ ದೇಶ ಎಂದಿದ್ದಾರೆ.

ತನ್ನ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿರುವ ಡೊನಾಲ್ಡ್ ಟ್ರಂಪ್ ಭಾರತವನ್ನು ಹೊಗಳಿದ್ದಾರೆ. ಭಾರತ ದೇಶವನ್ನು ಮುನ್ನಡೆಸುವ ನನ್ನ ಬಹಳ ಉತ್ತಮ ಸ್ನೇಹಿತ ಅಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್

ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕದ ನಾಯಕ ಟ್ರಂಪ್ ಭಾರತದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ, ಭಾರತವನ್ನು ಒಂದು ಉತ್ತಮ ರಾಷ್ಟ್ರ ಎಂದು ಕರೆದಿದ್ದಾರೆ. ಅವರು ಭಾರತದ ಪ್ರಧಾನಿಯೊಂದಿಗೆ ವೈಯಕ್ತಿಕ ಸ್ನೇಹವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್

ಯುನೈಟೆಡ್ ಸ್ಟೇಟ್ಸ್‌ನ ಜನ್ಮಸಿದ್ಧ ಪೌರತ್ವ ಕಾನೂನಿನಲ್ಲಿ ಬದಲಾವಣೆಗಳಿಗೆ ಕರೆ ನೀಡುವ ಜನಾಂಗೀಯ ವಾಗ್ದಾಳಿಯಲ್ಲಿ ರೇಡಿಯೋ ಜಾಕಿ ಸ್ಯಾವೇಜ್ ಏಷ್ಯಾದ 2 ರಾಷ್ಟ್ರಗಳ ಜನರು 9ನೇ ತಿಂಗಳಲ್ಲಿ ಮಗುವನ್ನು ಹೆರುವ ಸಲುವಾಗಿಯೇ ಯುಎಸ್‌ಗೆ ಬರುತ್ತಾರೆ. ಇಲ್ಲಿನ ಕಾನೂನು ಅವರನ್ನು ಕೂಡಲೇ ಅಮೆರಿಕದ ನಾಗರಿಕರನ್ನಾಗಿ ಮಾಡುತ್ತದೆ ಎಂದು ಆರೋಪಿಸಿದ್ದರು. ಅಲ್ಲದೆ, ಭಾರತೀಯ ಮತ್ತು ಚೀನೀ ವಲಸಿಗರನ್ನು “ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ ದರೋಡೆಕೋರರು” ಎಂದು ಟೀಕಿಸಿದ್ದರು. ಈ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಮರು-ಪೋಸ್ಟ್ ಮಾಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:44 pm, Thu, 23 April 26

Source link

ಲಂಗ್ಸ್ ಡಿಟಾಕ್ಸ್ ನಿಜವಾಗಿಯೂ ಶ್ವಾಸಕೋಶವನ್ನು ಕ್ಲೀನ್ ಮಾಡುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ – Kannada News | How to Cleanse Lungs Naturally at Home: Foods and Exercises

ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಧೂಮಪಾನದಿಂದ ಲಂಗ್ಸ್ (Lungs) ಅಂದರೆ ಶ್ವಾಸಕೋಶದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಲಂಗ್ಸ್ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾದರೂ ಕೂಡ ಅದರ ಬಗ್ಗೆ ತಿಳಿಯದೆಯೇ ಮಾಡುವುದು ತಪ್ಪು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “ಲಂಗ್ಸ್ ಡಿಟಾಕ್ಸ್” ಎಂಬ ಹೆಸರಿನಲ್ಲಿ ಹಲವು ಪಾನೀಯಗಳು ಮತ್ತು ಉತ್ಪನ್ನಗಳು ಪ್ರಚಾರವಾಗುತ್ತಿವೆ. ಆದರೆ ಇದು ನಿಜವಾಗಿಯೂ ಶ್ವಾಸಕೋಶವನ್ನು ಡಿಟಾಕ್ಸ್ ಮಾಡುತ್ತದೆಯೇ, ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಜ್ಞರ ಪ್ರಕಾರ, ಯಾವುದೇ ವಿಶೇಷ ಡಿಟಾಕ್ಸ್ ಡ್ರಿಂಕ್ ಮೂಲಕ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಇವು ಸ್ವಾಭಾವಿಕವಾಗಿ ತಮ್ಮನ್ನು ತಾವು ಶುದ್ಧಗೊಳಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ ಲಂಗ್ಸ್ ಆರೋಗ್ಯ ಕಾಪಾಡಲು ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಧೂಮಪಾನದಿಂದ ಉರಿಯೂತ ಉಂಟಾಗುತ್ತದೆ ಮತ್ತು ದೀರ್ಘಕಾಲದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Lung Health: ನಿಮ್ಮ ಶ್ವಾಸಕೋಶ ಆರೋಗ್ಯವಾಗಿರಲು ನಿಯಮಿತವಾಗಿ ಈ ಹಣ್ಣುಗಳ ಸೇವನೆ ಮಾಡಿ

ವಾಯುಮಾಲಿನ್ಯದಿಂದ ರಕ್ಷಣೆ ಹೇಗೆ?

ಇಂದಿನ ದಿನಗಳಲ್ಲಿ ಕೆಟ್ಟ ಗಾಳಿಯ ಗುಣಮಟ್ಟವೂ ಲಂಗ್ಸ್ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಧೂಳು ಮತ್ತು ಮಾಲಿನ್ಯದ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ಒಳನುಗ್ಗಿ ಹಾನಿ ಮಾಡುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಧೂಳು ಇರುವ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ, ಅಗತ್ಯವಿದ್ದರೆ N-95 ಮಾಸ್ಕ್ ಬಳಸುವುದು ಉತ್ತಮ. AQI ಹೆಚ್ಚಿರುವ ದಿನಗಳಲ್ಲಿ ಹೊರಗೆ ವಾಕಿಂಗ್ ಮತ್ತು ವ್ಯಾಯಾಮ ಮಾಡುವುದನ್ನು ತಪ್ಪಿಸಿ, ಅದರ ಬದಲು ಮನೆಯಲ್ಲೇ ವ್ಯಾಯಾಮ ಮಾಡುವುದು ಸೂಕ್ತ. ಅದರ ಜೊತೆಗೆ ಪ್ರತಿದಿನ ಕನಿಷ್ಠ 30 ನಿಮಿಷಗಳಷ್ಟು ವಾಕಿಂಗ್, ಜಾಗಿಂಗ್ ಅಥವಾ ಯೋಗ ಮಾಡುವುದರಿಂದ ಲಂಗ್ಸ್ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಹಣ್ಣು ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಸಹಾಯಕ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ ಸಿನಿಮಾಗೆ ನಿಜವಾದ ಹೀರೋ ಕೆವಿಎನ್’: ಟ್ರೇಲರ್ ರಿಲೀಸ್ ವೇಳೆ ಪ್ರೇಮ್ ಮಾತು – Kannada News | Jogi Prem talks about KVN productions during KD movie trailer launch

ಏಪ್ರಿಲ್ 30ರಂದು ‘ಕೆಡಿ’ ಸಿನಿಮಾ (KD Movie) ರಿಲೀಸ್ ಆಗಲಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರು ಮಾತನಾಡಿದರು. ‘ಕೆಡಿ ಸಿನಿಮಾ ಹೀರೋ ಯಾರು ಎಂದರೆ ಧ್ರುವ ಅಲ್ಲ, ಪ್ರೇಮ್ ಅಲ್ಲ, ರವಿಚಂದ್ರನ್ ಅಲ್ಲ, ರಮೇಶ್ ಅಲ್ಲ. ಅದು ಕೆವಿಎನ್ ಸರ್ ಮಾತ್ರ’ ಎಂದು ಪ್ರೇಮ್ ಹೇಳಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಅದ್ದೂರಿಯಾಗಿ ಮೂಡಿಬರಲು ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಗೆ ಚಿತ್ರದ ಮೇಲಿರುವ ಪ್ಯಾಷನ್ ಕಾರಣ ಎಂದು ಅವರು ಹೇಳಿದರು.

‘ನನ್ನ ಸಿನಿಮಾಗೆ ಸಂಗೀತ ನಿರ್ದೇಶಕರೇ ಹೀರೋ ಅಂತ ನಾನು ಯಾವಾಗಲೂ ಹೇಳುತ್ತಿದ್ದೆ. ಆದರೆ ಈಗ ಕೆಡಿ ಸಿನಿಮಾಗೆ ನಿಜವಾಗಿಯೂ ಕೆವಿಎನ್ (ವೆಂಕಟ್ ಕೆ. ನಾರಾಯಣ್) ಸರ್ ಹೀರೋ. ಪ್ರತಿ ನಿರ್ಮಾಪಕರಿಗೆ ಒಂದು ಬಜೆಟ್​ನ ಮಿತಿ ಇರುತ್ತದೆ. ಒಂದು ವರ್ಷದಲ್ಲಿ ಸಿನಿಮಾ ಮುಗಿಸಿ ರಿಲೀಸ್ ಮಾಡಬೇಕು ಎಂಬ ಲೆಕ್ಕಾಚಾರ ಇರುತ್ತದೆ. ಎಲ್ಲ ನಿರ್ಮಾಪಕರ ಆಸೆ ಇದೇ ಆಗಿರುತ್ತದೆ. ಯಾಕೆಂದರೆ, ಬಂಡವಾಳ ಹಾಕುವ ಎಲ್ಲರೂ ಅದೇ ರೀತಿ ಯೋಚನೆ ಮಾಡುತ್ತಾರೆ. ಆದರೆ ಕೆವಿಎನ್ ಅವರಿಗೆ ಅದಕ್ಕಿಂತ ಹೆಚ್ಚಾಗಿ ಪ್ಯಾಷನ್ ಇದೆ’ ಎಂದು ಜೋಗಿ ಪ್ರೇಮ್ ಹೇಳಿದರು.

‘ಸಿನಿಮಾದ ಯಾವುದೇ ಕಂಟೆಂಟ್ ಅವರಿಗೆ ಕಳಿಸಿದರೂ ಇನ್ನೂ ಏನಾದರೂ ಚೆನ್ನಾಗಿ ಮಾಡಬಹುದಾ ನೋಡಿ ಅಂತ ಹುರಿದುಂಬಿಸುತ್ತಾರೆ. ತಮ್ಮ ಕೆಲಸಗಳ ನಡುವೆಯೂ ಅದನ್ನೆಲ್ಲ ನೋಡಿ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಇಷ್ಟು ಬೆಂಬಲ ನೀಡುವ ಈ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡದು. ಸಾವಿರಾರು ಜನರಿಗೆ ಅನ್ನ ಹಾಕಿದ್ದಾರೆ. ಹೀಗೆಯೇ ಈ ಸಂಸ್ಥೆ ದೊಡ್ಡದಾಗಿ ಬೆಳೆಯಲಿ ಅಂತ ನಾನು ಆಶಿಸುತ್ತೇನೆ’ ಎಂದಿದ್ದಾರೆ ಪ್ರೇಮ್.

ಇದನ್ನೂ ಓದಿ: ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ

ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಟ್ರೇಲರ್​​ನಲ್ಲಿ ಕ್ರೌರ್ಯ ಕಾಣಿಸಿದೆ. ಆದರೂ ಇದೊಂದು ಫ್ಯಾಮಿಲಿ ಎಂಟರ್​ಟೇನರ್ ಸಿನಿಮಾ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಂತು ಆನೆ ಬಲ

Source link

ಏ 24ರಂದು ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯ: ವಾಹನ ಪಾರ್ಕಿಂಗ್, ಸಂಚಾರ ಬದಲಾವಣೆ – Kannada News | RCB vs GT Match: bengaluru traffic advisory; Chinnaswamy Traffic and Parking Guide

ಪ್ರಾತಿನಿಧಿಕ ಚಿತ್ರ (ai generated image)Image Credit source: tv9 kannada

ಬೆಂಗಳೂರು, ಏಪ್ರಿಲ್​ 23: ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಅಂದರೆ ಏಪ್ರಿಲ್​ 24ರಂದು ಆರ್​ಸಿಬಿ ಮತ್ತು ಜಿಟಿ ನಡುವೆ ಐಪಿಎಲ್ ಪಂದ್ಯ (RCB vs GT Match) ನಡೆಯಲಿದೆ. ಫ್ಯಾನ್ಸ್​​ ಪಂದ್ಯ ನೋಡಲು ಕಾತರರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಸ್ಟೇಡಿಯಂ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಹಲವು ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ವಾಹನಗಳ ನಿಲುಗಡೆ ನಿಷೇಧ ಇರುವ ಸ್ಥಳಗಳು

ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ವೃತ್ತದಿಂದ ಸಿಟಿಒ ಜಂಕ್ಷನ್‌ವರೆಗೆ ಮತ್ತು ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ. ಇದರೊಂದಿಗೆ ಲಿಂಕ್ ರಸ್ತೆ, ರಾಜಭವನ್ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆಗಳಲ್ಲಿಯೂ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಐಪಿಎಲ್​​ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ BMRCL ಮತ್ತು BMTC: ಇಲ್ಲಿದೆ ಮಾಹಿತಿ

ಇನ್ನು ಕಬ್ಬನ್ ರಸ್ತೆಯ ಸಿಟಿಒ ವೃತ್ತದಿಂದ ಡಿಕ್ಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಾಮರಾಜ್ ರಸ್ತೆ ಜಂಕ್ಷನ್‌ನಿಂದ ಡಿಕ್ಕೆನ್ಸನ್ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಲವೆಲ್ಲೆ ರಸ್ತೆ ಹಾಗೂ ವಿಟ್ಠಲ್ ಮಲ್ಯ ರಸ್ತೆಗಳ ಪ್ರಮುಖ ಜಂಕ್ಷನ್‌ಗಳ ನಡುವೆಯೂ ಈ ನಿಯಮ ಅನ್ವಯವಾಗಲಿದೆ. ಅಲ್ಲದೆ, ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ, ಪ್ರೆಸ್ ಕ್ಲಬ್, ಬಾಲಭವನ್ ಹಾಗೂ ಫೌಂಟನ್ ರಸ್ತೆಗಳಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚಿಸಲಾಗಿದೆ.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಪಂದ್ಯ ವೀಕ್ಷಿಸಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಟೇಡಿಯಂ ಸುತ್ತಮುತ್ತಲಿನ ವಿವಿಧೆಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಸಿದ್ಧಲಿಂಗಯ್ಯ ವೃತ್ತದ ಬಳಿಯಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಹಾಗೂ ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಇವುಗಳ ಜೊತೆಗೆ ಫ್ರೀಡಂ ಪಾರ್ಕ್‌ನ ಬಹುಮಹಡಿ ಪಾರ್ಕಿಂಗ್ (MLCP), ಗರುಡ ಮಾಲ್, ಯು.ಬಿ. ಸಿಟಿ ಹಾಗೂ ಕಂಠೀರವ ಕ್ರೀಡಾಂಗಣದ ಆವರಣದಲ್ಲಿಯೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿಯೂ ಸಹ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಸ್ಟೇಡಿಯಂ ಪ್ರವೇಶಿಸುವು ಹೇಗೆ?

  • ಕಬ್ಬನ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-1 ರಿಂದ E-3, E-18, E-19, E-22 ಮತ್ತು E-23.
  • ಲಿಂಕ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-11 ರಿಂದ E-17.
  • ಕ್ವೀನ್ಸ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-05 ಮತ್ತು E-08.
  • ಗೇಟ್ ಸಂಖ್ಯೆ E-10 ಕೇವಲ ಆಟಗಾರರು ಮತ್ತು VIPಗಳಿಗೆ ಮಾತ್ರ ಮೀಸಲು.

ಬಿಆರ್‌ವಿ ಮೈದಾನ (ಗೇಟ್ ನಂ. 06) ಮತ್ತು ಮನೆಕ್‌ಶಾ ಪೆರೇಡ್ ಮೈದಾನ (ಗೇಟ್ ನಂ. 03) ಓಲಾ, ಉಬರ್, ಆಟೋ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳಗಳಿಗೆ ಅವಕಾಶ ನೀಡಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪಾರ್ಕಿಂಗ್ ಸಮಸ್ಯೆ ನೀಗಿಸಲು ಸಾರ್ವಜನಿಕರು ಹೆಚ್ಚಾಗಿ ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ವರದಿ: ವಿಕಾಸ್​, ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:17 pm, Thu, 23 April 26

Source link

ನೀವು ಆತ್ಮೀಯರಿಗೆ ಸಾಲ ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಈ ಸಲಹೆ ಪಾಲಿಸಿ – Kannada News | Follow these advice to get back the money you lent to your loved ones?

ಕೆಲವೊಂದು ಬಾರಿ ನಾವು ಆರ್ಥಿಕ ಸಂಕಷ್ಟದಲ್ಲಿರುವ ಸಂಬಂಧಿಕರು, ಸ್ನೇಹಿತರಿಗೆ ಸಾಲದ ರೂಪದಲ್ಲಿ ಹಣವನ್ನು (money) ನೀಡುತ್ತೇವೆ. ಆರ್ಥಿಕ ಸಹಾಯ ಮಾಡುತ್ತೇವೆ. ಆದರೆ ಕೆಲವೊಂದು ಬಾರಿ  ಸಾಲ ತೆಗೆದುಕೊಂಡ ಸ್ನೇಹಿತರು ನಾವು ನೀಡಿದಂತಹ ಹಣವನ್ನು ಮರಳಿ ಕೊಡಲು ಮರೆತುಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಹಲವರು ಸಂಬಂಧ ಎಲ್ಲಿ ಹಾಳಾಗಿಬಿಡುತ್ತದೋ ಎಂಬ ಕಾರಣಕ್ಕೆ ತಮ್ಮ ಹಣವನ್ನು ಮರಳಿ ಕೊಡಿ ಎಂದು ಕೇಳಲು ಹಿಂಜರಿಯುತ್ತಾರೆ. ನೀವು ಕೂಡ ಇದೇ ರೀತಿ ಸಾಲ ಕೊಟ್ಟ ಹಣವನ್ನು ವಾಪಸ್‌ ಕೇಳಲು ಹಿಂಜರಿಯುತ್ತಿದ್ದೀರಾ ಅಥವಾ ಸಾಲ ಕೊಟ್ಟ ಹಣವನ್ನು ಮರಳಿ ಕೇಳುವುದು ಹೇಗೆ ಎಂಬುದು ತಿಳಿದಿಲ್ವಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಸುಲಭವಾಗಿ ನಿಮ್ಮ ಹಣವನ್ನು ಮರಳಿ ಪಡೆಯಿರಿ.

ನೀವು ಸಾಲ ಕೊಟ್ಟ ಹಣವನ್ನು  ಆತ್ಮೀಯರಿಂದ ಮರಳಿ ಪಡೆಯುವುದು ಹೇಗೆ?

ನಿಮ್ಮ ಕಷ್ಟಗಳ ಬಗ್ಗೆ ಒತ್ತಿ ಹೇಳಿ: ನೀವು ಸ್ನೇಹಿತರಿಂದ ಹಣವನ್ನು ಮರಳಿ ಪಡೆಯಲು ನಿಮ್ಮ ಅಗತ್ಯಗಳನ್ನು ಬಹಿರಂಗವಾಗಿ ವಿವರಿಸಿ. ನೀವು ಕಷ್ಟದಲ್ಲಿದ್ದೀರಿ ಆದ ಕಾರಣ ತುರ್ತಾಗಿ ಹಣದ ಅವಶ್ಯಕತೆಯಿದೆ ಎಂದು ಅವರಿಗೆ ತಿಳಿಸಿ. ಹಣದ ವಹಿವಾಟಿನ ಬಗ್ಗೆ ನಿಮ್ಮ ಸ್ನೇಹಿತನೊಂದಿಗೆ ಫೋನ್ ಮೂಲಕ ಅಲ್ಲ, ಮುಖಾಮುಖಿಯಾಗಿ ಚರ್ಚಿಸಿ. ಈ ಟ್ರಕ್ಸ್‌ ನಿಮ್ಮ ಸ್ನೇಹಿತ ನಿಮ್ಮ ಹಣವನ್ನು ವಾಪಸ್‌ ನೀಡುವಂತೆ ಮಾಡುತ್ತದೆ.

ಪ್ರಾಮಾಣಿಕತೆಯಿಂದ ಹಣವನ್ನು ಕೇಳಿ: ಯಾವುದೇ ಕಾರಣಕ್ಕೂ ಕೊಟ್ಟ ಹಣವನ್ನು ವಾಪಸ್‌ ಕೇಳಲು ಹಿಂಜರಿಯಬೇಡಿ, ಪ್ರಾಮಾಣಿಕವಾಗಿ ನನಗೆ ಹಣದ ಅವಶ್ಯಕತೆಯಿದೆ, ದಯವಿಟ್ಟು ಹಣವನ್ನು ಮರಳಿ ಕೊಡಿ ಎಂದು ಕೇಳಿ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿವರಿಸಿ. ಈ ಮೂಲಕ ಸಂಬಂಧ ಹಾಳಾಗದ ರೀತಿಯಲ್ಲಿ ನಿಮ್ಮ ಹಣವನ್ನು ನೀವು ವಾಪಸ್‌ ಪಡೆಯಬಹುದು.

ಕಂತುಗಳನ್ನು ಹೊಂದಿಸಿ: ನೀವು ಸ್ನೇಹಿತರಿಗೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡಿದರೆ, ಮತ್ತು ನಿಮ್ಮ ಸ್ನೇಹಿತರಿಗೆ ಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ನೀವು ಸಾಲವನ್ನು ಮರುಪಾವತಿಸಲು ಕಂತುಗಳನ್ನು ಹೊಂದಿಸಬಹುದು. ತಿಂಗಳು ತಿಂಗಳು ಇಎಮ್‌ಐ ರೂಪದಲ್ಲಿ ಸಾಲದ ಮೊತ್ತವನ್ನು ಪಾವತಿಸುವಂತೆ ಮಾಡಬಹುದು. ಇದು ಸಂಬಂಧವನ್ನು ಹಾಳಾಗದಂತೆಯೂ ನೋಡಿಕೊಳ್ಳುತ್ತದೆ ಮತ್ತು ನಿಮ್ಮ ಸ್ನೇಹಿತರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ: ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಕುಟುಂಬ ಅಥವಾ ಇತರ ಸ್ನೇಹಿತರಿಂದ ಸಹಾಯ ಪಡೆಯಿರಿ: ನಿಮ್ಮ ಸ್ನೇಹಿತ ನಿಮ್ಮ ಹಣವನ್ನು ವಾಪಸ್‌ ನೀಡಲು ಒಲ್ಲೆ ಎನ್ನುತ್ತಿದ್ದರೆ, ಹಣವನ್ನು ಎರವಲು ಪಡೆದ ಸ್ನೇಹಿತನ ಕುಟುಂಬದೊಂದಿಗೆ ಮಾತನಾಡಿ, ಅಥವಾ ನಿಮ್ಮ ಫ್ರೆಂಡ್ಸ್‌, ಕುಟುಂಬದ ಮೂಲಕ ನಿಮ್ಮ ಸ್ನೇಹಿತನ ಮನವೊಲಿಸಲು ಪ್ರಯತ್ನಿಸಿ. ಈ ಮೂಲಕವೂ ಹಣವನ್ನು ವಾಪಸ್‌ ಕೇಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ; ದಾಖಲೆಯ ಶೇ. 91ರಷ್ಟು ಮತದಾನ – Kannada News | West Bengal assembly Elections Polling ends voter turnout over 91 per cent

ಕೊಲ್ಕತ್ತಾ, ಏಪ್ರಿಲ್ 23: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಈ ಬಾರಿ ಶೇ. 91ಕ್ಕಿಂತ ಹೆಚ್ಚು ಮತದಾನವಾಗಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 152 ಕ್ಷೇತ್ರಗಳಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ನಿಗದಿತ ಮುಕ್ತಾಯದ ಮೊದಲು ಮತದಾನ ಕೇಂದ್ರಗಳನ್ನು ತಲುಪಿದ ಮತದಾರರಿಗೆ ತಮ್ಮ ಮತದಾನವನ್ನು ಚಲಾಯಿಸಲು ಅವಕಾಶ ನೀಡಲಾಗಿತ್ತು.

ಚುನಾವಣಾ ಆಯೋಗದ ಪ್ರಕಾರ, 3.60 ಕೋಟಿ ಮತದಾರರಲ್ಲಿ ಶೇ. 91.46ರಷ್ಟು ಜನರು ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಿದ್ದಾರೆ. ರಾಜ್ಯದ ಇತ್ತೀಚಿನ ಚುನಾವಣಾ ಇತಿಹಾಸದಲ್ಲಿ ಇಂದಿನ ಮತದಾನ ಅತ್ಯಧಿಕವಾಗಿದೆ.

ಇದನ್ನೂ ಓದಿ: Tamil Nadu Elections: 74 ವರ್ಷದ ದಾಖಲೆ ಮುರಿದ ತಮಿಳುನಾಡು; ಇಂದಿನ ಚುನಾವಣೆಯಲ್ಲಿ ಶೇ. 84ರಷ್ಟು ಮತದಾನ

294 ಬಲದ ಪಶ್ಚಿಮ ಬಂಗಾಳ ವಿಧಾನಸಭೆಯ 152 ಕ್ಷೇತ್ರಗಳಲ್ಲಿ 167 ಮಹಿಳೆಯರು ಸೇರಿದಂತೆ 1,478 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ಬಿಗಿ ಭದ್ರತೆಯ ನಡುವೆ ಇಂದು ಬೆಳಿಗ್ಗೆ 7 ಗಂಟೆಗೆ 16 ಜಿಲ್ಲೆಗಳಲ್ಲಿ ಮತದಾನ ಪ್ರಾರಂಭವಾಯಿತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದೆ. ಇಂದು ಸಂಜೆ 6 ಗಂಟೆಗೆ ಪಶ್ಚಿಮ ಬಂಗಾಳದ ಎಲ್ಲಾ 152 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಅಧಿಕೃತವಾಗಿ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿತ ಮುಕ್ತಾಯದ ಸಮಯದಲ್ಲಿ ಇನ್ನೂ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಮತಗಟ್ಟೆಯಲ್ಲಿ ಹಾಜರಿರುವ ಪ್ರತಿಯೊಬ್ಬ ಅರ್ಹ ಮತದಾರರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಭುಗಿಲೆದ್ದ ಗಲಭೆ; ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ

2026ರ ಮತದಾನವು 2011ರ ದಾಖಲೆಯನ್ನು ಮೀರಿಸಿದೆ. 2011ರಲ್ಲಿ, ಶೇ. 84ರಷ್ಟು ಮತದಾನವಾಗಿತ್ತು. 2016ರಲ್ಲಿ ಶೇ. 82.66ರಷ್ಟು ಮತದಾನವಾಗಿತ್ತು. 2021ರಲ್ಲಿ, ಶೇ. 81.56ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 91.46ರಷ್ಟು ಮತದಾನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆ ಸಮಯದಲ್ಲಿ ವಿಜಯ್ ವಿರುದ್ಧ ದ್ವೇಷ ತೀರಿಸಿಕೊಂಡರೇ ನಟ ಅಜಿತ್ ಕುಮಾರ್? – Kannada News | Did Ajith Kumar indirectly said do not vote for Thalapathy Vijay

ತಮಿಳುನಾಡಿನಲ್ಲಿ ಚುನಾವಣೆ ಚಾಲ್ತಿಯಲ್ಲಿದೆ. ಇಂದು (ಏಪ್ರಿಲ್ 23) ಮತದಾನ ನಡೆದಿದೆ. ತಮಿಳು ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಸಹ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಸಹ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದಲೂ ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಪರಸ್ಪರ ಎದುರಾಳಿಗಳು. ಪರಸ್ಪರರ ಅಭಿಮಾನಿಗಳು ಸಹ ಎದುರಾಳಿಗಳಂತೇ ವರ್ತಿಸುತ್ತಾರೆ. ಇದೆಲ್ಲ ಹೀಗಿರುವಾಗ, ಅಜಿತ್ ಅವರು ಪರೋಕ್ಷವಾಗಿ ದಳಪತಿ ವಿಜಯ್​​ಗೆ ಮತ ಹಾಕಬೇಡಿ ಎಂಬ ಸಂದೇಶ ನೀಡಿದ್ದಾರೆ ಎಂಬ ಸುದ್ದಿ ಹರಡಿದೆ.

ಇತ್ತೀಚೆಗಷ್ಟೇ ಬೆಲ್ಜಿಯಂನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನವನ್ನು ಅಜಿತ್ ಪಡೆದುಕೊಂಡಿದ್ದಾರೆ. ಬುಧವಾರವಷ್ಟೇ ಚೆನ್ನೈಗೆ ಮರಳಿದ ಅಜಿತ್ ಅವರು, ಇಂದು ಬೆಳಗ್ಗೆ 7 ಗಂಟೆ ವೇಳೆಗೆ ತಿರುವನ್ಮಿಯೂರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಆದರೆ ಮತದಾನದ ನಂತರ ಹೊರಬಂದ ಅಜಿತ್ ಅವರಿಗೆ ಪತ್ರಕರ್ತರು ‘ತಮಿಳುನಾಡಿನಲ್ಲಿ ಸರ್ಕಾರದ ಬದಲಾವಣೆ ಬೇಕೇ?” ಎಂದು ಕೇಳಿದಾಗ, ಅಜಿತ್ ಅವರು ’ಬೇಡ’ ಎಂದು ಉತ್ತರಿಸಿದ್ದಾರೆ ಎಂಬ ಸುದ್ದಿ ವೈರಲ್ ಹಠಾತ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಇದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ:ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ: ಜೂನ್ 15ಕ್ಕೆ ವಿಚಾರಣೆ ಮುಂದೂಡಿಕೆ

ಈಗ ಆಡಳಿತದಲ್ಲಿರುವ ಡಿಎಂಕೆ ಪಕ್ಷವೇ ಮುಂದುವರೆಯಲಿ, ಹೊಸ ಪಕ್ಷಗಳಿಗೆ ಅಧಿಕಾರ ನೀಡುವುದು ಬೇಡ ಎಂಬ ಸಂದೇಶವನ್ನು ಅಜಿತ್ ನೀಡಿದ್ದಾರೆ. ಪರೋಕ್ಷವಾಗಿ ವಿಜಯ್ ಅವರಿಗೆ ಅಧಿಕಾರ ನೀಡುವುದು ಬೇಡ ಎಂಬ ಸಂದೇಶ ನೀಡಿದ್ದಾರೆ ಎಂಬ ಸುದ್ದಿ ಹರಡತೊಡಗಿತು. ಆದರೆ ಕೂಡಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಅಜಿತ್ ಅವರ ಮ್ಯಾನೇಜರ್ ಸುರೇಶ್, ಸುರೇಶ್ ಚಂದ್ರ, ‘ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಜಿತ್ ಕುಮಾರ್ ಅವರು ಪತ್ರಕರ್ತರೊಂದಿಗೆ ಯಾವುದೇ ಸಂವಾದ ನಡೆಸಿಲ್ಲ. ಅವರ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಚಿತ್ರರಂಗದಲ್ಲಿ ಸಮಕಾಲೀನರು. ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಬಾಕ್ಸ್ ಆಫೀಸ್​​ನಲ್ಲಿ ಎದುರಾಳಿಗಳೂ ಸಹ ಆಗಿದ್ದಾರೆ. ವಿಜಯ್ ಅಭಿಮಾನಿಗಳು, ಪದೇ ಪದೇ ಅಜಿತ್ ಬಗ್ಗೆ ಹೀನಾಯ ಟ್ರೋಲ್ ಮಾಡುವುದು, ಅಜಿತ್ ಅಭಿಮಾನಿಗಳು, ವಿಜಯ್ ಅವರನ್ನು ಟ್ರೋಲ್ ಮಾಡುವುದು ನಡದೇ ಇದೆ. ಇದೀಗ ಈ ಸುದ್ದಿ ವೈರಲ್ ಆಗುವ ಮೂಲಕ ಇಬ್ಬರು ನಟರ ಅಭಿಮಾನಿಗಳ ನಡುವೆ ಕಂದಕ ಇನ್ನೂ ಹೆಚ್ಚಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಭುಗಿಲೆದ್ದ ಗಲಭೆ; ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ – Kannada News | West Bengal Assembly Elections; BJP candidate Shuvendu Sarkar chased through Field and assaulted

ಕೊಲ್ಕತ್ತಾ, ಏಪ್ರಿಲ್ 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Elections) ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಬಂಗಾಳದ ದಕ್ಷಿಣ ದಿನಾಜ್‌ಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್ ಅವರನ್ನು ಟಿಎಂಸಿ ಕಾರ್ಯಕರ್ತರು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸುವೇಂದು ಸರ್ಕಾರ್ ಪೊಲೀಸರ ಜೊತೆ ಮೈದಾನದೊಳಗೆ ಓಡಿದ್ದಾರೆ. ಭದ್ರತಾ ಸಿಬ್ಬಂದಿಯೊಬ್ಬರು ಬಿಜೆಪಿ ಅಭ್ಯರ್ಥಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಟಿಎಂಸಿ ಕಾರ್ಯಕರ್ತರು ಸುವೇಂದು ಸರ್ಕಾರ್ ಅವರನ್ನು ಗದರಿಸುತ್ತಾ, ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತಗಟ್ಟೆಗೆ ತೆರಳುತ್ತಿದ್ದ ಸುವೇಂದು ಸರ್ಕಾರ್ ಅವರನ್ನು ತಡೆದು ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯಿಂದ ಪಾರಾಗಲು ಅವರು ಹೊಲದಲ್ಲಿ ಓಡಿದ್ದಾರೆ. ಆದರೂ ಬೆನ್ನಟ್ಟಿ ಬಂದ ಜನರು ಅವರ ಮೇಲೆ ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದಲ್ಲ, ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ‘ಧುರಂಧರ್ 2’?

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ವರ್ಷಗಳಿಂದಲೂ ಗಳಿಕೆಯ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಕುಳಿತಿದ್ದ ಸಿನಿಮಾಗಳನ್ನು ಒಂದೊಂದಾಗಿ ಹಿಂದಿಕ್ಕುತ್ತಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲೂ ಸಹ ‘ಧುರಂಧರ್ 2’ ಹವಾ ಎಬ್ಬಿಸಿದ್ದು, ಹಲವು ದೇಶಗಳಲ್ಲಿ, ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತದ ಸಿನಿಮಾ ಎನಿಸಿಕೊಂಡಿದೆ. ಇದೀಗ ಸಿನಿಮಾ ಬಿಡುಗಡೆ ಒಂದೂವರೆ ತಿಂಗಳಾಗುತ್ತಾ ಬಂದಿದ್ದು, ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ‘ಧುರಂಧರ್ 2’ ಒಂದಲ್ಲ ಬದಲಿಗೆ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಅಂದಹಾಗೆ ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆಗಿದ್ದ ಈ ಸಿನಿಮಾ ಒಟಿಟಿಯಲ್ಲೂ ಕಮಾಲ್ ಮಾಡಿತ್ತು. ಆದರೆ ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದಲೂ ಹರಿದಾಡುತ್ತಿದೆ. ‘ಧುರಂಧರ್ 2’ ನಿರ್ಮಾಣ ಮತ್ತು ವಿತರಣೆ ಸಂಸ್ಥೆ ಸಹ ಆಗಿದ್ದು, ಇದೀಗ ಸಿನಿಮಾವನ್ನು ತಮ್ಮ ಒಟಿಟಿಯಲ್ಲೇ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಂಡಿದೆ.

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಜೊತೆಗೆ ನೆಟ್​​ಫ್ಲಿಕ್ಸ್​ನಲ್ಲಿಯೂ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಜೊತೆಗೆ 150 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಅಂತರಾಷ್ಟ್ರೀಯ ಪ್ರೇಕ್ಷಕರನ್ನು ರೀಚ್ ಆಗುವ ಕಾರಣಕ್ಕೆ ನೆಟ್​​ಫ್ಲಿಕ್ಸ್​ನಲ್ಲಿಯೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದು, ನೆಟ್​​ಫ್ಲಿಕ್ಸ್​ ಜೊತೆಗೂ ದೊಡ್ಡ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ.

ಇದನ್ನೂ ಓದಿ:ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಸಿನಿಮಾ ಒಂದು ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ‘ಆರ್​​ಆರ್​​ಆರ್’ ಸಿನಿಮಾ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಿತ್ತು. ಎರಡೂ ಕಡೆ ದೊಡ್ಡ ಯಶಸ್ಸನ್ನು ಗಳಿಸಿತು. ಭಾರತದ ಇನ್ನೂ ಕೆಲವು ಸಿನಿಮಾಗಳು ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಿರುವುದುಂಟು. ಇದೀಗ ‘ಧುರಂಧರ್ 2’ ಸಿನಿಮಾ ಸಹ ಅದೇ ಹಾದಿ ಹಿಡಿದಂತಿದೆ.

‘ಧುರಂಧರ್ 2’ ಭಾರತದ ಸೈನಿಕನೋರ್ವ ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾದಕರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್, ಸಿನಿಮಾದ ಸಹ ನಿರ್ಮಾಣವನ್ನೂ ಅವರು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version