ದೆಹಲಿ: ಅಗ್ನಿ ಅವಘಡ, 3 ಮಂದಿ ಸಾವು, ಶಾರ್ಟ್​ಸರ್ಕ್ಯೂಟ್ ಅಲ್ಲ, ಘಟನೆಗೂ ಮುನ್ನ ಕಾಣಿಸಿಕೊಂಡ ಮುಸುಕುಧಾರಿ ಮಹಿಳೆ ಯಾರು? – Kannada News | Delhi Fire Mystery: Masked Woman on CCTV Before Fatal Blaze, Not Short Circuit

ನವದೆಹಲಿ, ಜೂನ್ 14: ಆಗ್ನೇಯ ದೆಹಲಿಯ ಗೋವಿಂದಪುರಿ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಇತ್ತೀಚೆಗೆ ಸಂಭವಿಸಿದ ದುರದೃಷ್ಟಕರ ಬೆಂಕಿ ಅವಘಡ(Fire Accident) ತನಿಖೆಯಲ್ಲಿ ದೆಹಲಿ ಪೊಲೀಸರಿಗೆ ಸುಳಿವು ಲಭ್ಯವಾಗಿದೆ. ಪ್ರಕರಣದ ಹಿಂದಿರುವ ರಹಸ್ಯವನ್ನು ಭೇದಿಸಲು ಹಾದಿ ಸುಗಮವಾಗಿದೆ. ಆರಂಭದಲ್ಲಿ ಕೇವಲ ಶಾರ್ಟ್ ಸರ್ಕ್ಯೂಟ್ ಇರಬಹುದು ಎಂದು ಶಂಕಿಸಲಾಗಿದ್ದ ಈ ಘಟನೆಗೆ, ಈಗ ಲಭ್ಯವಾಗಿರುವ ಸಿಸಿಟಿವಿ (CCTV) ದೃಶ್ಯಾವಳಿಗಳು ತನಿಖೆಯನ್ನು ತಾರ್ಕಿಕ ಅಂತ್ಯದತ್ತ ಕೊಂಡೊಯ್ಯಲು ನೆರವಾಗಿವೆ.

ತುಘಲಕಾಬಾದ್ ಎಕ್ಸ್‌ಟೆನ್ಶನ್‌ನ ಪಾರ್ಕಿಂಗ್ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂನ್ 11-12ರ ರಾತ್ರಿ ಬೆಳಗಿನ ಜಾವ 2.23 ರ ಸುಮಾರಿಗೆ ಮುಸುಕುಧಾರಿ ಮಹಿಳೆಯೊಬ್ಬಳು ಕಟ್ಟಡ ಪ್ರವೇಶಿಸುವುದು ಕಂಡುಬಂದಿದೆ. ಆಕೆ ಹೋದ ಕೆಲವೇ ಕ್ಷಣಗಳಲ್ಲಿ ಗೇಟ್ ಒಳಗಿನಿಂದ ಬೆಳಕಿನ ಮಿಂಚು ಕಾಣಿಸಿಕೊಂಡಿದ್ದು, ತಕ್ಷಣವೇ ಆಕೆ ಕಟ್ಟಡದಿಂದ ಹೊರನಡೆದಿದ್ದಾಳೆ. ಈ ದೃಶ್ಯವು ಪೊಲೀಸರಿಗೆ ತನಿಖೆಯ ದಿಕ್ಕನ್ನು ನಿಖರಗೊಳಿಸಲು ಮತ್ತು ಶಂಕಿತ ವ್ಯಕ್ತಿಯನ್ನು ಪತ್ತೆಹಚ್ಚಲು ಭಾರಿ ದೊಡ್ಡ ಪುರಾವೆಯಾಗಿ ಸಿಕ್ಕಿದೆ.

ಬೆಳಗಿನ ಜಾವ 2.31 ಕ್ಕೆ ಕರೆ ಬಂದ ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಅತ್ಯಂತ ವೇಗವಾಗಿ ಕಾರ್ಯಾಚರಣೆ ಆರಂಭಿಸಿದರು. ದಟ್ಟವಾದ ಹೊಗೆಯ ನಡುವೆಯೂ ಕಟ್ಟಡದೊಳಗೆ ಸಿಲುಕಿದ್ದ ಹಲವಾರು ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ. ಗಾಯಗೊಂಡಿರುವ ಗುಡ್ಡಿ ದೇವಿ ಹಾಗೂ ಮೋನಿ ಅವರಿಗೆ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಓದಿ: ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ

ಕಟ್ಟಡದಲ್ಲಿದ್ದ ನಿವಾಸಿಗಳು ತಮ್ಮ ಅದ್ಭುತ ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ಎರಡನೇ ಮಹಡಿಯ ಪ್ರಕಾಶ್ ಮಂಡಲ್ ಅವರು ಪಕ್ಕದ ಫ್ಲಾಟ್‌ನಿಂದ ಎಸೆದ ಸೀರೆಯನ್ನು ಪೈಪ್‌ಗೆ ಕಟ್ಟಿ ಸಾಹಸದಿಂದ ಕೆಳಗೆ ಇಳಿದರೆ, ಐದನೇ ಮಹಡಿಯ ರಾಧೇಶ್ಯಾಮ್ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಟೆರೇಸ್‌ನಿಂದ ಪಕ್ಕದ ಛಾವಣಿಗೆ ಹಾರಿ ಪಾರಾಗಿದ್ದಾರೆ. ಇನ್ನು ಕೆಲವು ಕುಟುಂಬಗಳು ಬೇಸಿಗೆ ರಜೆಗಾಗಿ ಮುಂಚಿತವಾಗಿಯೇ ಊರಿಗೆ ತೆರಳಿದ್ದರಿಂದ ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದಂತಾಗಿದೆ.

ವಿಡಿಯೋ

ಮಾಳವೀಯ ನಗರದ ಹೋಟೆಲ್ ಅವಘಡದ ನಂತರ ದೆಹಲಿ ಪೊಲೀಸರು ಇಂತಹ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ವಿಧಿವಿಜ್ಞಾನ (Forensic) ತಂಡಗಳು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ತಾಂತ್ರಿಕ ಸಾಕ್ಷ್ಯಗಳನ್ನು ವಿಶ್ಲೇಷಿಸುತ್ತಿದ್ದು, ಶಂಕಿತ ಮಹಿಳೆಯನ್ನು ಬಂಧಿಸಲು ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ. ಕಳ್ಳತನ ಅಥವಾ ದುಷ್ಕೃತ್ಯದ ಯಾವುದೇ ಸಂಚು ಇದ್ದರೂ ಅದನ್ನು ಶೀಘ್ರದಲ್ಲೇ ಬಯಲಿಗೆಳೆದು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಇಲಾಖೆ ಸಂಪೂರ್ಣ ಬದ್ಧವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ – Kannada News | Govt School Students May Get Shoes or Slippers Depending on Regional Weather Conditions

ಸಾಂದರ್ಭಿಕ ಚಿತ್ರImage Credit source: newindianexpress.com

ಬೆಂಗಳೂರು, ಜೂನ್​​ 14: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶೂ-ಸಾಕ್ಸ್ ಯೋಜನೆಯಲ್ಲಿ ಕೊಂಚ ಬದಲಾವಣೆ ತರಲು ಶಿಕ್ಷಣ ಇಲಾಖೆ ಮುಂದಾದಗಿದ್ದು, ವಾತಾವರಣಕ್ಕೆ ತಕ್ಕಂತೆ ಮಕ್ಕಳಿಗೆ ಶೂ ಅಥವಾ ಚಪ್ಪಲಿ ನೀಡಲು ಚಿಂತನೆ ನಡೆಸಿದೆ. ದೀರ್ಘ ಕಾಲ ಶೂ ಧರಿಸುವುದರಿಂದ ಕೆಲ ವಿದ್ಯಾರ್ಥಿಗಳಲ್ಲಿ ಕಾಲಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಗಳು ವರದಿಯಾದ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಇಲಾಖೆ ಮುಂದಾಗಿದೆ. ಯಾವೆಲ್ಲ ಪ್ರದೇಶಗಳಲ್ಲಿ ಮಕ್ಕಳಿಗೆ ಶೂ ಅಥವಾ ಚಪ್ಪಲಿ ಸೂಕ್ತ ಎಂಬ ಬಗ್ಗೆ ಜಿಲ್ಲಾ ಉಪನಿರ್ದೇಶಕರಿಂದ ಮಾಹಿತಿಯನ್ನೂ ಕೇಳಲಾಗಿದೆ.

ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್; ಯೋಜನೆಯಲ್ಲಿ ಕೊಂಚ ಬದಲಾವಣೆ
  • ವಾತಾವರಣಕ್ಕೆ ತಕ್ಕಂತೆ ಶೂ ಅಥವಾ ಚಪ್ಪಲಿ ನೀಡಲು ಚಿಂತನೆ
  • ಮಕ್ಕಳ ಆರೋಗ್ಯ ಸೇರಿ ಹಲವು ಅಂಶ ಪರಿಗಣಿಸಿರುವ ಶಿಕ್ಷಣ ಇಲಾಖೆ

ಚಪ್ಪಲಿ ವಿತರಣೆಗೆ ಹೆಚ್ಚಿನ ಒಲವು ಯಾಕೆ?

ಮಳೆ ಮತ್ತು ಬೇಸಿಗೆ ಕಾಲಗಳೆರಡರಲ್ಲೂ ಚಪ್ಪಲಿಯನ್ನು ಧರಿಸೋದು ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ. ಅಲ್ಲದೆ ದೀರ್ಘ ಕಾಲ ಶೂ ಧರಿಸೋದು ವಿವಿಧ ಸೋಂಕುಗಳಿಗೂ ಕಾರಣವಾಗಬಹುದು. ಜೊತೆಗೆ ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗಿ ವಾಸನೆ ಬರುವ ಸಾಧ್ಯತೆಯೂ ಹೆಚ್ಚಿರಲಿದೆ. ಈ ಎಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಚಪ್ಪಲಿ ವಿತರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಇ, ಬಿಟೆಕ್, ಎಂಟೆಕ್ ವಿದ್ಯಾರ್ಥಿಗಳಿಗೆ ಡಿಆರ್‌ಡಿಒದಲ್ಲಿ ಇಂಟರ್ನ್‌ಶಿಪ್ ಅವಕಾಶ; ಸ್ಟೈಫಂಡ್ ಕೂಡ ಲಭ್ಯ!

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ಒಂದು ಜೊತೆ ಶೂ ಮತ್ತು ಎರಡು ಜತೆ ಸಾಕ್ಸ್ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಕಳೆದ ವರ್ಷ ಒಂದರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರೂ., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ.ಗಳನ್ನು ಸರ್ಕಾರ ನಿಗದಿ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:11 am, Sun, 14 June 26

Source link

ಕೆಎಲ್ ರಾಹುಲ್​ ಸಿಕ್ಸ್​ಗೆ ಬೆರಗಾದ ಗೌತಮ್ ಗಂಭೀರ್! – Kannada News | Gambhir’s Rare Reaction To KL Rahul’s Sublime Shot Goes Viral!

ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು.  ಈ ಸ್ಫೋಟಕ ಬ್ಯಾಟಿಂಗ್​ ನಡುವೆ ಕೆಲವು ಕ್ಲಾಸ್ ಶಾಟ್​ಗಳಿಂದ ಗಮನ ಸೆಳೆದಿದ್ದರು. ಈ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ರಿಯಾಕ್ಷನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಗಂಭೀರ್ ರಿಯಾಕ್ಷನ್!

21ನೇ ಓವರ್​ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 161 ರನ್​ ಕಲೆಹಾಕಿತ್ತು. ಅದರಂತೆ ಕೊನೆಯ 4 ಓವರ್​ಗಳಲ್ಲಿ ಭಾರತ ತಂಡಕ್ಕೆ 33 ರನ್​ಗಳ ಅವಶ್ಯಕತೆಯಿತ್ತು. 22ನೇ ಓವರ್​ನಲ್ಲಿ ಅಫ್ಘಾನಿಸ್ತಾನದ ವೇಗಿ ಝಿಯಾ ಉರ್ ರೆಹಮಾನ್ ಶರೀಫಿ ಎಸೆದ ಫುಲ್ ಲೆಂಗ್ತ್ ಎಸೆತವನ್ನು ಕೆಎಲ್ ರಾಹುಲ್ ಅತ್ಯಂತ ನಯವಾಗಿ, ಬ್ಯಾಟ್ ಫೇಸ್ ಓಪನ್ ಮಾಡಿ ಕವರ್ಸ್ ಮೇಲಿಂದ ಭರ್ಜರಿಯಾಗಿ ಸಿಕ್ಸರ್​​ಗಟ್ಟಿದರು.

ಸಾಮಾನ್ಯವಾಗಿ ಗಂಭೀರ ಮುಖಭಾವಕ್ಕೇ ಹೆಸರಾದ ಗೌತಮ್ ಗಂಭೀರ್, ಈ ಶಾಟ್ ನೋಡಿದ ತಕ್ಷಣ ಒಂದು ಕ್ಷಣ ಆಶ್ಚರ್ಯಚಕಿತರಾದರು. ತಕ್ಷಣವೇ ಪಕ್ಕದಲ್ಲೇ ಕುಳಿತಿದ್ದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಕಡೆಗೆ ತಿರುಗಿ ಅಚ್ಚರಿಯ ನೋಟವನ್ನು ವಿನಿಮಯ ಮಾಡಿಕೊಂಡರು. ಗಂಭೀರ್ ಅವರ ಈ ಅಪರೂಪದ ಹಾವಭಾವದ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯದ ಮುಖ್ಯಾಂಶಗಳು:

  • ಕೆಎಲ್ ಕಮಾಲ್: 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಬ್ಬರದ 39 ರನ್* ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
  • ಗಿಲ್ ಮೈಲಿಗಲ್ಲು: ನಾಯಕ ಶುಭ್​ಮನ್ ಗಿಲ್ 84* ರನ್ ಗಳಿಸಿ ಅಜೇಯರಾಗಿ ಉಳಿದಿದ್ದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ (62 ಇನಿಂಗ್ಸ್) 3,000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು.
  • ಅಫ್ಘಾನ್ ಹೋರಾಟ: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ, ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ಅವರ ಆಕರ್ಷಕ ಶತಕದ (102 ರನ್) ನೆರವಿನೊಂದಿಗೆ 194 ರನ್‌ಗಳಿಸಲು ಶಕ್ತರಾಗಿದ್ದರು.
  • ಟೀಮ್ ಇಂಡಿಯಾಗೆ ಜಯ: ಮಳೆಯ ಕಾರಣ 25 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ 22.5 ಓವರ್​ಗಳಲ್ಲಿ 195 ರನ್​ ಬಾರಿಸಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: Shubman Gill: ಪರವಾಗಿಲ್ಲ, ತಪ್ಪು ನನ್ನದೇ ಅಂದಿದ್ದಾರೆ..!

ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇನ್ನು ಉಭಯ ತಂಡಗಳ ಎರಡನೇ ಮುಖಾಮುಖಿ ಜುಲೈ 17 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಲಕ್ನೋನ ಏಕಾನ ಸ್ಟೇಡಿಯಂ ಆತಿಥ್ಯವಹಿಸಲಿದೆ.

Source link

‘ನಾನು ಸಲಿಂಗಿ ಅಲ್ಲ’: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಸ್ಪಷ್ಟನೆ – Kannada News | Mouni Roy denies her rumours of Disha Patani after Divorce with Suraj Nambiar

ಬಾಲಿವುಡ್ ನಟಿ ಮೌನಿ ರಾಯ್ (Mouni Roy) ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದರು. ಪತಿ ಸೂರಜ್ ನಂಬಿಯಾರ್ ಅವರಿಂದ ಅಧಿಕೃತವಾಗಿ ಬೇರ್ಪಟ್ಟ ಬೆನ್ನಲ್ಲೇ, ನಟಿಯ ಲೈಂಗಿಕ ಆದ್ಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡತೊಡಗಿದ್ದವು. ದಿಶಾ ಪಟಾನಿ (Disha Patani) ಮತ್ತು ಮೌನಿ ರಾಯ್ ಅವರು ಆಪ್ತವಾಗಿ ಇರುವುದನ್ನು ಹಲವರು ತಪ್ಪಾಗಿ ಅರ್ಥೈಸಿದ್ದರು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಮೌನಿ ರಾಯ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ತಾವು ಸಲಿಂಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ‘ಮೋನಿಕಾ ಶರ್ಮಾ ಚಾಟ್ ಶೋ’ನಲ್ಲಿ ಭಾಗವಹಿಸಿದ್ದ ಮೌನಿ ರಾಯ್ ಅವರಿಗೆ, ಬಾಲಿವುಡ್‌ನಲ್ಲಿ ನಿಮ್ಮ ಬಗ್ಗೆ ಕೇಳಿಬಂದ ಅತ್ಯಂತ ದೊಡ್ಡ ವದಂತಿ ಯಾವುದು ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಯಾವುದೇ ಮುಜುಗರವಿಲ್ಲದೇ ಉತ್ತರಿಸಿದ ಮೌನಿ, ‘ಓಹ್.. ನಾನು ಗೇ (ಸಲಿಂಗಕಾಮಿ) ಎಂಬ ವದಂತಿ!’ ಎಂದು ನಗುತ್ತಲೇ ಉತ್ತರಿಸಿದರು.

ಪತಿಯಿಂದ ಬೇರ್ಪಟ್ಟ ನಂತರದ ದಿನಗಳ ಬಗ್ಗೆ ಮಾತನಾಡಿದ 40ರ ಪ್ರಾಯದ ಮೌನಿ ರಾಯ್, ‘ನನ್ನ ಕಷ್ಟದ ದಿನಗಳಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ಬಂಡೆಯಂತೆ ನನ್ನ ಪರವಾಗಿ ನಿಂತಿದ್ದಾರೆ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟವಂತೆ. ಅದರಲ್ಲೂ ನನ್ನ ಸ್ನೇಹಿತೆಯರು ನನ್ನ ಜೀವನದ ಏಳು-ಬೀಳುಗಳು, ಒಳ್ಳೆಯ ಹಾಗೂ ಕೆಟ್ಟ ದಿನಗಳಲ್ಲಿ ನನಗೆ ಗಟ್ಟಿ ಬೆಂಬಲ ನೀಡಿದ್ದಾರೆ’ ಎಂದು ತಮಗೆ ಸಿಕ್ಕ ಪ್ರೀತಿಯನ್ನು ಸ್ಮರಿಸಿಕೊಂಡರು.

ಜೊತೆಗೆ, ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಪರಸ್ಪರ ಪ್ರೋತ್ಸಾಹಿಸುವ ಮತ್ತು ಧೈರ್ಯ ತುಂಬುವ ಇಂತಹ ಉತ್ತಮ ಗೆಳತಿಯರು ಇರುವುದು ತುಂಬಾ ಮುಖ್ಯ ಎಂದೂ ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಯುವತಿಯರಿಗೆ ಮಹತ್ವದ ಸಂದೇಶ ನೀಡಿದ ಮೌನಿ, ‘ಪ್ರತಿಯೊಬ್ಬ ಯುವತಿಯೂ ಜೀವನದಲ್ಲಿ ಎದುರಾಗುವ ಏರುಪೇರುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕಾದರೆ, ಅವರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅತ್ಯಂತ ಅಗತ್ಯ’ ಎಂದು ಹೇಳಿದರು.

ಇದನ್ನೂ ಓದಿ: ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?

2022ರಲ್ಲಿ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿದ್ದ ಮೌನಿ ರಾಯ್, ಕಳೆದ ತಿಂಗಳಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪರಸ್ಪರ ಒಪ್ಪಿಗೆಯಿಂದ ಸೌಹಾರ್ದಯುತವಾಗಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಅವರಿಬ್ಬರ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ರಾಜ್ಯಾದ್ಯಂತ ಮುಂಗಾರು ಅಬ್ಬರ: ಕರಾವಳಿ, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಭಾರಿ ಸುಧಾರಣೆ! – Kannada News | Karnataka AQI Update: Bangalore Air Quality Improves, Gadag Tops Clean Air List

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಭಾರಿ ಸುಧಾರಣೆ!
Image Credit source: Deccan herald

ಬೆಂಗಳೂರು, ಜೂನ್ 14: ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಬಹುತೇಕ ನಗರಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ. ಇಂದು ಕರ್ನಾಟಕದ ಪ್ರಮುಖ ನಗರಗಳು ಮತ್ತು ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳ ವಾಯು ಗುಣಮಟ್ಟ ಸೂಚ್ಯಂಕ (AQI) ವಿವರ ಇಲ್ಲಿದೆ.

ಮುಖ್ಯಾಂಶಗಳು

  • ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿತ ಕಂಡಿದೆ.
  • ಗದಗ ನಗರದಲ್ಲಿ ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿ ದಾಖಲಾಗಿದೆ.
  • ಧಾರವಾಡ ಮತ್ತು ಮಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಕೊಂಚ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಹೇಗಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ ಇಂದು 33 ರಿಂದ 56ರ ಆಸುಪಾಸಿನಲ್ಲಿ ದಾಖಲಾಗಿದ್ದು, ಉತ್ತಮ ಹಾಗೂ ಸಾಧಾರಣ ಶ್ರೇಣಿಯಲ್ಲಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ಕಡಿಮೆಯಾಗಿವೆ.

  • ಹೆಬ್ಬಾಳ: 30 (ಉತ್ತಮ – ಅತ್ಯಂತ ಶುದ್ಧ ಗಾಳಿ)
  • ಸಿಲ್ಕ್ ಬೋರ್ಡ್: 54 (ಸಾಧಾರಣ)
  • ಹೊಂಬೇಗೌಡ ನಗರ: 51 (ಸಾಧಾರಣ)
  • ಬಿಟಿಎಂ ಲೇಔಟ್: 63 (ಸಾಧಾರಣ)
  • ಕಡಬೀಸನಹಳ್ಳಿ : 97 (ಅಪಾಯಕಾರಿ)

ಒಟ್ಟಾರೆಯಾಗಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾದ ಪೂರಕ ವಾತಾವರಣವಿದೆ. ರಾಜ್ಯದ ಇತರೆ ನಗರಗಳ ಇಂದಿನ ವಾಯು ಗುಣಮಟ್ಟದ ಶ್ರೇಯಾಂಕಗಳನ್ನು ಗಮನಿಸಿದರೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಧೂಳಿನಿಂದಾಗಿ ಮಾಲಿನ್ಯ ಕೊಂಚ ಏರಿದ್ದರೆ, ಕರಾವಳಿ ಮತ್ತು ಮಲೆನಾಡು ಭಾಗಗಳು ಅತ್ಯಂತ ಶುದ್ಧ ಗಾಳಿಯನ್ನು ಹೊಂದಿವೆ.

ಹೆಚ್ಚು ಮಾಲಿನ್ಯವಿರುವ ನಗರಗಳು

  • ಧಾರವಾಡ: 153 (ಕಳಪೆ)
  • ಮಂಗಳೂರು: 108 (ಸಾಧಾರಣಕ್ಕಿಂತ ಕೊಂಚ ಹೆಚ್ಚು)
  • ಹುಬ್ಬಳ್ಳಿ: 86 (ಸಾಧಾರಣ)

ಅತ್ಯಂತ ಶುದ್ಧ ಗಾಳಿಯಿರುವ ನಗರಗಳು

  • ಗದಗ: 19 (ಅತ್ಯುತ್ತಮ ಹಾಗೂ ಅತ್ಯಂತ ಸ್ವಚ್ಛ ಗಾಳಿ)
  • ಕೊಪ್ಪಳ: 44 (ಉತ್ತಮ)
  • ಮೈಸೂರು: 56 (ಸಾಧಾರಣ)
  • ಶಿವಮೊಗ್ಗ: 77 (ಸಾಧಾರಣ)

ಮಳೆಯ ಮುನ್ಸೂಚನೆ ಇರುವುದರಿಂದ ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಳೇ ವಾಹನಗಳ ಬಳಕೆ ಕಡಿಮೆ ಮಾಡುವುದು ಮತ್ತು ಹಸಿರು ವಲಯವನ್ನು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ರಾಜ್ಯದಲ್ಲಿ ಮುಂಗಾರು ಚುರುಕು; ಯೆಲ್ಲೋ ಅಲರ್ಟ್​ ಘೋಷಣೆ – Kannada News | Karnataka Weather Forecast: Rain and Gusty Winds Forecasted Across Many Districts

ರಾಜ್ಯದಲ್ಲಿ ಮುಂಗಾರು ಚುರುಕು; ಯೆಲ್ಲೋ ಅಲರ್ಟ್​ ಘೋಷಣೆ
Image Credit source: India Today

ಬೆಂಗಳೂರು, ಜೂನ್ 14: ನಗರದ ಹಲವೆಡೆ ಶನಿವಾರ ರಾತ್ರಿ ಧಾರಾಕಾರ ಮಳೆ (Weather) ಸುರಿದಿದೆ. ಇಂದೂ ಸಹ ಹಲವೆಡೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗಾಳಿ ಮುಖಾಂತರ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ.

ಮುಖ್ಯಾಂಶಗಳು

  • ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗಲಿದೆ.
  • ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಗುಡುಗು ಸಹಿತ ಮಳೆ ಮುನ್ಸೂಚನೆ.

ಎಲ್ಲೆಲ್ಲಿ ಮಳೆ?

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು, ಮಿಂಚು ಹಾಗೂ ಗಂಟೆಗೆ 30-40 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬಾಗಲಕೋಟೆ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಈ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಇದನ್ನೂ ಓದಿ Karnataka Weather Forecast: ನಾಳೆಯಿಂದ ರಾಜ್ಯದಲ್ಲಿ ಮುಂದಿನ ಮೂರು ದಿನ ವರುಣದ್ದೇ ಹಾವಳಿ!

ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಮಳೆಯ ಸಮಯದಲ್ಲಿ ಗಂಟೆಗೆ **30-40 ಕಿ.ಮೀ** ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಈ ಮಳೆ ತಂಪೆರೆಯಲಿದ್ದು, ಕೃಷಿ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shubman Gill: ಎಲ್ಲವೂ ಸರಿಯಾಗಿದೆ, ತಪ್ಪು ನನ್ನದೇ ಅಂದಿದ್ದಾರೆ..! – Kannada News | Shubman gill post match interview after IND vs AFG

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮಳೆಯಿಂದಾಗಿ ತಡವಾಗಿ ಆರಂಭಗೊಂಡು, ತಲಾ 25 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ರಹಮಾನುಲ್ಲಾ ಗುರ್ಬಾಝ್ (102) ಶತಕ ಸಿಡಿಸಿದರು. ಈ ಶತಕದ ನೆರವಿನೊಂದಿಗೆ ಅಫ್ಘಾನಿಸ್ತಾನ್ 24.5 ಓವರ್​ಗಳಲ್ಲಿ 194 ರನ್ ಕಲೆಹಾಕಿತು. ಈ ಗುರಿಯನ್ನು ಭಾರತ ತಂಡವು 22.5 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶುಭ್​​ಮನ್ ಗಿಲ್, “ಓವರ್‌ಗಳು ಕಡಿಮೆಯಾಗಿದ್ದರಿಂದ ಇದು ಒಂಥರಾ ಟಿ20 ಪಂದ್ಯದಂತೆಯೇ ಭಾಸವಾಯಿತು. ನಾವು ಉತ್ತಮ ಆರಂಭವನ್ನು ಪಡೆದಿದ್ದೆವು. ಆದರೆ ಅಫ್ಘಾನ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಅದ್ಭುತವಾಗಿ ಬ್ಯಾಟ್ ಬೀಸಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿದ್ದರು. ಆದರೆ, ನಮ್ಮ ಬೌಲರ್‌ಗಳು ಮಿಡಲ್ ಮತ್ತು ಡೆತ್ ಓವರ್‌ಗಳಲ್ಲಿ ಕಂಬ್ಯಾಕ್ ಮಾಡಿದ ರೀತಿ ಅಪ್ರತಿಮವಾಗಿತ್ತು” ಎಂದು ಶ್ಲಾಘಿಸಿದ್ದಾರೆ.

“ಇನ್ನು ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ ಗುರ್ನೂರ್ ಬ್ರಾರ್ ಹೊಸ ಚೆಂಡಿನಲ್ಲಿ ಅತ್ಯುತ್ತಮ ವೇಗ ಮತ್ತು ಸ್ವಿಂಗ್ ಪ್ರದರ್ಶಿಸಿದರು. ಅವರು ನಿರಂತರವಾಗಿ ಕರಾರುವಾಕ್ ಲೆಂಗ್ತ್​​ನಲ್ಲಿ ಬೌಲಿಂಗ್ ಮಾಡಿದ್ದು ಇಂಪ್ರೆಸಿವ್ ಆಗಿತ್ತು. ಇನ್ನು ಹರ್ಷ್ ದುಬೆ ತಮ್ಮ ಮೊದಲ ಓವರ್‌ನಲ್ಲಿ 16-17 ರನ್ ಬಿಟ್ಟುಕೊಟ್ಟರೂ ಧೃತಿಗೆಡಲಿಲ್ಲ. ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು, ಚೆಂಡನ್ನು ಲೂಪ್ ಮಾಡಿ ವಿಕೆಟ್ ಪಡೆದರು. ಏಕದಿನ ಕ್ರಿಕೆಟ್‌ನಲ್ಲಿ ಮಿಡಲ್ ಓವರ್‌ಗಳು ಅತ್ಯಂತ ಪ್ರಮುಖವಾಗಿದ್ದು, ರನ್ ರೇಟ್ ನಿಯಂತ್ರಿಸಿ ವಿಕೆಟ್ ಕೀಳುವುದು ತಂಡದ ಮುಖ್ಯ ತಂತ್ರವಾಗಿದೆ” ಎಂದು ಗಿಲ್ ವಿವರಿಸಿದರು.

ತಪ್ಪು ನನ್ನದೇ!

ಇದೇ ವೇಳೆ ರೋಹಿತ್ ಶರ್ಮಾ ಅವರ ರನೌಟ್ ಕುರಿತು ಮಾತನಾಡಿದ ಶುಭ್​ಮನ್ ಗಿಲ್, “ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್​ನಲ್ಲಿ ರಿಪ್ಲೇ ನೋಡಿದ್ದಾರೆ, ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಕಳೆದ ಬಾರಿ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಪಂದ್ಯದಲ್ಲೂ ಅವರು ಹೀಗೆಯೇ ರನ್-ಔಟ್ ಆಗಿದ್ದರು” ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಅಂದರೆ ಇಲ್ಲಿ ರೋಹಿತ್ ಶರ್ಮಾ ಎಲ್ಲವೂ ಸರಿಯಾಗಿದೆ ಎನ್ನಲು ಮುಖ್ಯ ಕಾರಣ, ಅವರ ರನೌಟ್​ಗೆ ಅವರೇ ಕಾರಣವಾಗಿದ್ದು. ಏಕೆಂದರೆ ಶುಭ್​ಮನ್ ಗಿಲ್ ರನ್ ಬೇಡ ಎಂದು ಕರೆ ನೀಡಿದ್ದರೂ ಗಮನಿಸದೇ ರೋಹಿತ್ ಶರ್ಮಾ ಓಡಿ ಹೋಗಿದ್ದರು. ಆದರೆ ಅತ್ತ ಕಡೆಯಿಂದ ಗಿಲ್ ನಿರಾಕರಿಸುತ್ತಿರುವುದು ಗಮನಿಸಿ ಹಿಂತಿರುಗುವಷ್ಟರಲ್ಲಿ ರನೌಟ್ ಮಾಡಲಾಗಿತ್ತು. ಹೀಗಾಗಿಯೇ ರೋಹಿತ್ ಶರ್ಮಾ ಎಲ್ಲವೂ ಸರಿಯಾಗಿದೆ, ತಪ್ಪು ನನ್ನದೇ ಎಂದಿದ್ದಾರೆ ಎಂದು ಗಿಲ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್ ಬಗ್ಗೆ ಮಾತನಾಡಿದ ಗಿಲ್, “ನಾನು ಸ್ಲಿಪ್ ಕ್ಯಾಚಿಂಗ್‌ಗಾಗಿ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದೇನೆ. ಪಂದ್ಯಕ್ಕೂ ಮುನ್ನ ನನ್ನ ಸ್ನೇಹಿತನೊಬ್ಬ ‘ನೀನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಅದ್ಭುತ ಒನ್-ಹ್ಯಾಂಡೆಡ್ ಕ್ಯಾಚ್ ಹಿಡಿದಿಲ್ಲ’ ಎಂದು ರೇಗಿಸಿದ್ದ. ಈ ಪಂದ್ಯದಲ್ಲಿ ಅಂತಹ ಕ್ಯಾಚ್ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ” ಎಂದರು.

ಇದನ್ನೂ ಓದಿ: ತೂಫಾನ್ ಸೆಂಚುರಿ… ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ ಶುರು!

ಒಟ್ಟಾರೆಯಾಗಿ ಹೇಳುವುದಾದರೆ, ಧರ್ಮಶಾಲಾದಲ್ಲಿ ನಡೆದ ಈ ಮುಖಾಮುಖಿ ಕೇವಲ ಒಂದು ಸರಣಿಯ ಆರಂಭವಾಗಿರಲಿಲ್ಲ. ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಗಳನ್ನು ಜಗತ್ತಿಗೆ ಪರಿಚಯಿಸಿದ ವೇದಿಕೆಯಾಗಿತ್ತು. ಮಳೆಯ ಅಡ್ಡಿಯ ನಡುವೆಯೂ ಟಿ20 ಶೈಲಿಯ ರೋಮಾಂಚನ ನೀಡಿದ ಈ ಪಂದ್ಯ, ನಾಯಕನಾಗಿ ಶುಭ್‌ಮನ್ ಗಿಲ್ ಅವರ ಪ್ರಬುದ್ಧತೆ ಮತ್ತು ಯುವ ಆಟಗಾರರ ಕದನ ಕೌಶಲಕ್ಕೆ ಸಾಕ್ಷಿಯಾಯಿತು. ಅಫ್ಘಾನ್ ಪಡೆಯ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಯುವ ಬೌಲರ್‌ಗಳು ನೀಡಿದ ತಿರುಗೇಟು ಭಾರತ ತಂಡದ ಬೆಂಚ್ ಸ್ಟ್ರೆಂತ್ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸಾರಿದೆ. ಇದೀಗ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಟೀಮ್ ಇಂಡಿಯಾ, ಇದೇ ಉತ್ಸಾಹದೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

Source link

ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ 39,437 ಕೋಟಿ ಟೆಂಡರ್ ವಿವಾದ: ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ವಿಶೇಷ ಮನವಿ – Kannada News | Bengaluru Waste Management Tender Controversy: Oppn Leader R Ashoka Urges High Level Committee to Submit Unbiased Report

ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ವಿಶೇಷ ಮನವಿImage Credit source: PTI

ಬೆಂಗಳೂರು, ಜೂನ್ 14: ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 39,437 ಕೋಟಿ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ವಿಶೇಷ ಮನವಿಯನ್ನು ಮಾಡಿದ್ದಾರೆ. ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಆಗ್ರಹಿಸಿರುವ ಅವರು, ಇದು ಕೇವಲ ಒಂದು ಟೆಂಡರ್ ವಿಚಾರವಲ್ಲ. ಬೆಂಗಳೂರಿನ ಭವಿಷ್ಯ, ತೆರಿಗೆದಾರರ ಹಣ ಮತ್ತು ಸಾರ್ವಜನಿಕ ವಿಶ್ವಾಸದ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

ಅಶೋಕ್​​ ಮನವಿಯಲ್ಲಿ ಏನಿದೆ?

ಬೆಂಗಳೂರಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿಮ್ಮನ್ನು ಉನ್ನತ ಮಟ್ಟದ ಸಮಿತಿಗೆ ನೇಮಿಸಿದೆ. ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ. ನೀವು ಈ ನಗರದ ನಾಗರಿಕರು, ತೆರಿಗೆ ಪಾವತಿಸುವವರು, ಬೆಂಗಳೂರಿನ ಪ್ರಗತಿಯ ಪಾಲುದಾರರು ಮತ್ತು ಹಕ್ಕುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ನಿಮ್ಮ ಮುಂದೆ ಇರುವ ಪ್ರಶ್ನೆ ಕೇವಲ ಒಂದು ಟೆಂಡರ್ ಕಡತದ ಪ್ರಶ್ನೆಯಲ್ಲ. ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಜನರ ಹಣ, ನಗರದ ಆಡಳಿತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಬೆಂಗಳೂರು ಕಸದಲ್ಲಿ 36 ಸಾವಿರ ಕೋಟಿ ರೂ. ಲೂಟಿ ಆರೋಪ; ಬಿಜೆಪಿಗೆ ಡಿಕೆಶಿ ಓಪನ್ ಚಾಲೆಂಜ್

ರಾಜ್ಯದ ಹಣಕಾಸು ಇಲಾಖೆಯೇ ಈ ಟೆಂಡ‌ರ್​​ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿದೆ. ಈಗಾಗಲೇ ಬೆಂಗಳೂರು ನಗರದ ಜನರು ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರವನ್ನು ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು. ನಿಮ್ಮ ಸಮಿತಿಯ ವರದಿ ಕೇವಲ ಸರ್ಕಾರಕ್ಕೆ ಸಲ್ಲಿಸುವ ಒಂದು ದಾಖಲೆಯಾಗಿರುವುದಿಲ್ಲ; ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುವ ನಿರ್ಧಾರದ ಅಡಿಪಾಯವಾಗಲಿದೆ. ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಒತ್ತಡಗಳಿಗೆ ಮಣಿಯದೆ, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ, ಸಾರ್ವಜನಿಕ ಹಿತಾಸಕ್ತಿಯನ್ನು ಮಾತ್ರ ಮಾನದಂಡವನ್ನಾಗಿಸಿಕೊಂಡು ಸಂಪೂರ್ಣ ಪಾರದರ್ಶಕ, ಪ್ರಾಮಾಣಿಕ ಹಾಗೂ ನಿರ್ಭೀತ ವರದಿಯನ್ನು ಸಲ್ಲಿಸುವಂತೆ ವಿನಂತಸೋದಾಗಿ ಮನವಿಯಲ್ಲಿ ಅಶೋಕ್​​ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಸಂಧ್ಯಾಕಾಲದಲ್ಲಿ, ಮನೆ ಬಾಗಿಲ ಮುಂದೆ ಕುಳಿತುಕೊಳ್ಳಬಾರದು ಯಾಕೆ? – Kannada News | Daily Devotional: Is Sitting at the Doorstep in the Evening Auspicious or Inauspicious?

ಮನೆಯ ಸಿಂಹದ್ವಾರದ ಮಹತ್ವImage Credit source: Pinterest

ಭಾರತೀಯ ಸಂಸ್ಕೃತಿಯಲ್ಲಿ ಮನೆ ಮತ್ತು ಅದರ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಪಾವಿತ್ರ್ಯತೆ ಹಾಗೂ ಮಹತ್ವವಿದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರ, ಇದನ್ನು ಸಿಂಹದ್ವಾರ ಎಂದು ಕರೆಯುತ್ತೇವೆ, ಇದು ಕೇವಲ ಪ್ರವೇಶ ದ್ವಾರ ಮಾತ್ರವಲ್ಲದೆ, ಮನೆಯ ಶಕ್ತಿ ಕೇಂದ್ರವೂ ಹೌದು. ಆದರೆ, ಅನೇಕ ಮನೆಗಳಲ್ಲಿ, ವಿಶೇಷವಾಗಿ ಹಳ್ಳಿಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲೂ, ಸಂಜೆ ವೇಳೆ ಮನೆ ಬಾಗಿಲ ಮುಂದೆ ಅಥವಾ ಜಗಳಿಯ ಮೇಲೆ ಕುಳಿತುಕೊಳ್ಳುವ ರೂಢಿ ಕಂಡುಬರುತ್ತದೆ. ಈ ಅಭ್ಯಾಸ ಶುಭಕರವೇ ಅಥವಾ ಅಶುಭಕರವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಜನರು ಸಾಮಾನ್ಯವಾಗಿ ಸೂರ್ಯಾಸ್ತದ ಸಮಯದಲ್ಲಿ, ಸಂಧ್ಯಾಕಾಲದಲ್ಲಿ ಮನೆಯ ಮುಂದೆ ಕುಳಿತುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಮನಸ್ಸಿಗೆ ಒಂದು ರೀತಿಯ ನೆಮ್ಮದಿ, ಬೀದಿಯಲ್ಲಿ ಹೋಗುವವರನ್ನು ಗಮನಿಸುವುದು, ಅಥವಾ ಅಕ್ಕಪಕ್ಕದವರೊಂದಿಗೆ ಹರಟೆ ಹೊಡೆಯುವುದು. ಆದರೆ, ಈ ಸಮಯದಲ್ಲಿ ಯಾವುದೇ ದೇವರ ನಾಮಸ್ಮರಣೆ ಅಥವಾ ಆಧ್ಯಾತ್ಮಿಕ ಚಿಂತನೆಗಿಂತ ಹೆಚ್ಚಾಗಿ ಲೌಕಿಕ ವಿಷಯಗಳ ಬಗ್ಗೆಯೇ ಮಾತುಕತೆ ನಡೆಸುವುದು ಹೆಚ್ಚು ಸಾಮಾನ್ಯವಾಗಿದೆ. ಈ ಅಭ್ಯಾಸದ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಸಿಂಹದ್ವಾರದ ಅಪಾರ ಮಹತ್ವ:

ಮನೆಯ ಮುಖ್ಯ ಬಾಗಿಲು ಅಥವಾ ಸಿಂಹದ್ವಾರವನ್ನು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯ ಶಕ್ತಿ ಕೇಂದ್ರ ಎಂದು ಕರೆಯುವುದರಲ್ಲಿ ತಪ್ಪಿಲ್ಲ. ಈ ಬಾಗಿಲಿಗೆ ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಮತ್ತು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡುವ ಸಾಮರ್ಥ್ಯವಿದೆ. ಶಾಸ್ತ್ರೋಕ್ತವಾಗಿ ಈ ಬಾಗಿಲನ್ನು ಪ್ರತಿಷ್ಠಾಪಿಸುವಾಗ, ಅದರ ಅಡಿಯಲ್ಲಿ ಚಿನ್ನ, ಬೆಳ್ಳಿ, ಹಳೆಯ ನಾಣ್ಯಗಳು ಅಥವಾ ಕುಟುಂಬದ ಕೆಲವು ಪವಿತ್ರ ವಸ್ತುಗಳನ್ನು ಇಡುವ ಸಂಪ್ರದಾಯವಿದೆ. ಇದು ಬಾಗಿಲಿಗೆ ಮತ್ತಷ್ಟು ದೈವಿಕ ಶಕ್ತಿಯನ್ನು ನೀಡುತ್ತದೆ.

ಬೆಳಗಿನ ಬ್ರಾಹ್ಮಿ ಮುಹೂರ್ತ, ಅಭಿಜಿತ್ ಮುಹೂರ್ತ ಮತ್ತು ವಿಶೇಷವಾಗಿ ಸಂಜೆಯ ಗೋದೋಳಿ ಮುಹೂರ್ತದಲ್ಲಿ ಸಿಂಹದ್ವಾರಕ್ಕೆ ಅಪಾರ ಶಕ್ತಿ ಇರುತ್ತದೆ. ಈ ಸಮಯದಲ್ಲಿ ಮಹಾಲಕ್ಷ್ಮಿಯು ಮನೆಯೊಳಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಮನೆಯ ಗಡಿಭಾಗ ಮತ್ತು ಪ್ರವೇಶ ದ್ವಾರವಾಗಿರುವುದರಿಂದ, ಯಾವುದೇ ಶುಭ ಶಕ್ತಿಯು ಮೊದಲು ಈ ಬಾಗಿಲಿನ ಮೂಲಕವೇ ಪ್ರವೇಶಿಸುತ್ತದೆ. ಹಾಗಾಗಿ, ಈ ಬಾಗಿಲನ್ನು ಸದಾ ಶುಭ್ರವಾಗಿ ಮತ್ತು ಪವಿತ್ರವಾಗಿಡುವುದು ಅತಿ ಮುಖ್ಯ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಸಂಜೆ ವೇಳೆ ಬಾಗಿಲ ಮುಂದೆ ಕುಳಿತುಕೊಳ್ಳುವುದು ಏಕೆ ಅಶುಭ?

ಮಹಾಲಕ್ಷ್ಮಿ ಪ್ರವೇಶಿಸುವ ಇಂತಹ ಪವಿತ್ರ ಸ್ಥಳದಲ್ಲಿ ಸಂಧ್ಯಾಕಾಲದಲ್ಲಿ ಕುಳಿತುಕೊಳ್ಳುವುದು ಅಷ್ಟು ಶುಭಸೂಚಕವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ ಹಲವಾರು ಕಾರಣಗಳಿವೆ:

  • ನಕಾರಾತ್ಮಕ ಶಕ್ತಿಗಳ ಪ್ರವೇಶ: ಸಂಧ್ಯಾಕಾಲದಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಾರ ಹೆಚ್ಚಿರುತ್ತದೆ ಎಂದು ನಂಬಲಾಗಿದೆ. ಮನೆಯ ಮುಂದೆ ಕುಳಿತಿರುವ ವ್ಯಕ್ತಿಯು ಆ ಶಕ್ತಿಗಳಿಗೆ ದ್ವಾರಪಾಲಕನಂತೆ ವರ್ತಿಸಬಹುದು, ಇದರಿಂದ ಅವು ಸುಲಭವಾಗಿ ಮನೆಯೊಳಗೆ ಪ್ರವೇಶಿಸಬಹುದು.
  • ಅನವಶ್ಯಕ ಮಾತುಕತೆ ಮತ್ತು ಒತ್ತಡ: ಮನೆ ಬಾಗಿಲ ಮುಂದೆ ಕುಳಿತಾಗ, ಅನೇಕರು ನೆರೆಹೊರೆಯವರ ಬಗ್ಗೆ, ಹಾದಿಹೋಕರ ಬಗ್ಗೆ, ಅವರ ಮದುವೆ, ಮಕ್ಕಳು, ವೃತ್ತಿಯ ಬಗ್ಗೆ ಹೀಗೆ ಹಲವು ವಿಷಯಗಳನ್ನು ಅತಿಯಾಗಿ ಮಾತನಾಡುತ್ತಾರೆ. ಇಂತಹ ಗಾಸಿಪ್ ಮತ್ತು ಅನವಶ್ಯಕ ಮಾತುಕತೆಗಳು ಮನೆಯೊಳಗೆ ನಕಾರಾತ್ಮಕ ಕಂಪನಗಳನ್ನು ತರುತ್ತವೆ ಮತ್ತು ಮನೆಯ ಸದಸ್ಯರಲ್ಲಿ ಒತ್ತಡವನ್ನು ಸೃಷ್ಟಿಸುತ್ತವೆ. ಇದು ಮನೆಯ ಶಾಂತಿ ಮತ್ತು ಸಮೃದ್ಧಿಗೆ ಭಂಗ ತರುತ್ತದೆ.
  • ಮಹಾಲಕ್ಷ್ಮಿಗೆ ಅಡ್ಡಿ: ಮಹಾಲಕ್ಷ್ಮಿ ಪ್ರವೇಶಿಸುವ ದ್ವಾರದಲ್ಲಿ ವ್ಯಕ್ತಿ ಕುಳಿತಿದ್ದರೆ, ಅದು ಲಕ್ಷ್ಮಿಯ ಪ್ರವೇಶಕ್ಕೆ ಅಡ್ಡಿಯಾಗಬಹುದು. ಅಲ್ಲದೆ, ಅಶುಭ ಮಾತುಕತೆಗಳು ಲಕ್ಷ್ಮಿಗೆ ಸ್ವಾಗತಾರ್ಹವಲ್ಲ.

ಪೌರಾಣಿಕ ಉಲ್ಲೇಖ:

ವಿಷ್ಣುಪುರಾಣದಲ್ಲಿ ಬರುವ ಹಿರಣ್ಯಕಶಿಪುವಿನ ಸಂಹಾರದ ಕಥೆಯೂ ಸಿಂಹದ್ವಾರದ ಮಹತ್ವವನ್ನು ಎತ್ತಿ ತೋರಿಸುತ್ತದೆ. ನರಸಿಂಹನು ಹಿರಣ್ಯಕಶಿಪುವನ್ನು ಮನೆಯ ಹೊಸ್ತಿಲ ಮೇಲೆ ಇಟ್ಟುಕೊಂಡು ಸಂಹಾರ ಮಾಡುತ್ತಾನೆ. ಇದು ಹೊಸ್ತಿಲಿಗೆ ಇರುವ ಬಲ ಮತ್ತು ಅದರ ಮಹತ್ವವನ್ನು ಸೂಚಿಸುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ಅನವಶ್ಯಕವಾಗಿ ಕುಳಿತು ನಕಾರಾತ್ಮಕ ಕಾರ್ಯಗಳಲ್ಲಿ ತೊಡಗುವುದು ಸಮಂಜಸವಲ್ಲ.

ಆದ್ದರಿಂದ, ಸಂಧ್ಯಾಕಾಲದಲ್ಲಿ ಮನೆ ಬಾಗಿಲ ಮುಂದೆ ಕುಳಿತುಕೊಳ್ಳುವ ಪದ್ಧತಿ ಅಷ್ಟು ಶುಭಕರವಲ್ಲ. ಮನೆಯವರು ಅಥವಾ ಅನ್ಯರು ಯಾರೇ ಆಗಿರಲಿ, ಈ ಪವಿತ್ರ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಮನೆಯ ಶಾಂತಿಗೆ ಮತ್ತು ಧನಾತ್ಮಕ ಶಕ್ತಿಗಳ ಪ್ರವೇಶಕ್ಕೆ ಧಕ್ಕೆಯಾಗುತ್ತದೆ. ಬದಲಿಗೆ, ಸಂಜೆಯ ಸಮಯದಲ್ಲಿ ವಾಕಿಂಗ್ ಹೋಗುವುದು, ದೇವರ ನಾಮಸ್ಮರಣೆ ಮಾಡುವುದು ಅಥವಾ ಮನೆಯೊಳಗೆ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಸೂಕ್ತ. ಮನೆಯ ಸಮೃದ್ಧಿ ಮತ್ತು ಶಾಂತಿಗಾಗಿ ಈ ಧಾರ್ಮಿಕ ಸಲಹೆಯನ್ನು ಪಾಲಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಬ್ಸೆಷನ್’ ಚಿತ್ರಕ್ಕೆ ಹೆಚ್ಚು ಶೋ: ತಮ್ಮ ಸಿನಿಮಾಗೆ ಚಿತ್ರಮಂದಿರ ಸಿಗದಿದ್ದಕ್ಕೆ ಅನುರಾಗ್ ಕಶ್ಯಪ್ ಬೇಸರ – Kannada News | Bandar director Anurag Kashyap unhappy with Obsession movie shows in India

ಕಳೆದ ಕೆಲವು ದಿನಗಳಿಂದ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರಾದೇಶಿಕ ಸಿನಿಮಾಗಳು ಮತ್ತು ಹಾಲಿವುಡ್ ಚಿತ್ರ ‘ಅಬ್ಸೆಷನ್’ (Obsession) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಚಿತ್ರಮಂದಿರಗಳಲ್ಲಿ ಬರೋಬ್ಬರಿ 14ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದು, ಪರದೆಗಾಗಿ ಕಸರತ್ತು ನಡೆಸುತ್ತಿವೆ. ಈ ಮಧ್ಯೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರು ಚಿತ್ರಮಂದಿರಗಳ ಶೋ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಬಂದರ್’ ಸಿನಿಮಾಗೆ ಸರಿಯಾದ ಶೋಗಳು ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಅನುರಾಗ್ ಕಶ್ಯಪ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೂಪರ್ ಹಿಟ್ ಆಗಿ ಮುನ್ನುಗ್ಗುತ್ತಿರುವ ಹಾಲಿವುಡ್ ಚಿತ್ರ ‘ಅಬ್ಸೆಷನ್’ಗೆ ಪ್ರೈಮ್ ಟೈಮ್ (ಉತ್ತಮ ಪ್ರದರ್ಶನದ ಸಮಯ) ನೀಡಲಾಗುತ್ತಿದೆ, ಆದರೆ ನಮ್ಮದೇ ದೇಶದ ಸಿನಿಮಾಗಳು ಚಿತ್ರಮಂದಿರ ಸಿಗದೇ ಪರದಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರತಿಯೊಬ್ಬರೂ ಅಬ್ಸೆಷನ್ ಸಿನಿಮಾ ನೋಡಲು ಬಯಸುತ್ತಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಕಡಿಮೆ ಶೋಗಳೊಂದಿಗೆ ಆ ಸಿನಿಮಾ ದೀರ್ಘಕಾಲ ಓಡಬಹುದು. ನಾವು ನಮ್ಮದೇ ಆದ ಸಿನಿಮಾಗಳಿಗೆ ಆದ್ಯತೆ ನೀಡಿ ಉತ್ತಮ ಪ್ರದರ್ಶನಗಳನ್ನು ನೀಡದಿದ್ದರೆ, ನಮ್ಮ ಚಿತ್ರರಂಗ ಹೇಗೆ ಬೆಳೆಯಲು ಸಾಧ್ಯ?’ ಎಂದು ಅನುರಾಗ್ ಕಶ್ಯಪ್ ಪ್ರಶ್ನೆ ಮಾಡಿದ್​ದಾರೆ.

‘ಕಳೆದ ವಾರ ನನ್ನ ‘ಬಂದರ್’ ಚಿತ್ರಕ್ಕೆ ಹೀಗಾಯಿತು. ಈ ವಾರ ಇಮ್ತಿಯಾಜ್ ಅಲಿ ಅವರ ‘ಮೈ ವಾಪಸ್ ಆವುಂಗಾ’, ‘ಸಿಂಗ್ ಗೀತಂ’ ಮತ್ತು ‘ಗವರ್ನರ್’ ಚಿತ್ರಗಳಿಗೆ ಇದೇ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ ‘ಮೈ ವಾಪಸ್ ಆವುಂಗಾ’ ಮತ್ತು ‘ಗವರ್ನರ್’ ಚಿತ್ರಗಳಿಗೆ ಕೇವಲ ಒಂದು ಬೆಳಗಿನ ಪ್ರದರ್ಶನ ಸಿಕ್ಕಿದೆ. ಇನ್ನು ‘ಸಿಂಗ್ ಗೀತಂ’ ಚಿತ್ರಕ್ಕೆ ಒಂದೂ ಶೋ ಸಿಕ್ಕಿಲ್ಲ. ಆದರೆ ‘ಅಬ್ಸೆಷನ್’ ಚಿತ್ರಕ್ಕೆ ದಿನಕ್ಕೆ 6 ರಿಂದ 7 ಶೋಗಳನ್ನು ನೀಡಲಾಗುತ್ತಿದೆ’ ಎಂದು ಅನುರಾಗ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮೈ ವಾಪಸ್ ಆವುಂಗಾ’, ‘ಭಾರತ್ ಭಾಗ್ಯ ವಿಧಾತ’, ‘ಹಾಂಟೆಡ್ 3ಡಿ’, ‘ಹೀರ್ ಸಾರಾ’, ‘ಡಿಸ್ಕ್ಲೋಸರ್ ಡೇ’ ಸೇರಿದಂತೆ ಹಲವು ಚಿತ್ರಗಳು ಚಿತ್ರಮಂದಿರದಲ್ಲಿವೆ. ಇದರೊಂದಿಗೆ ಕಳೆದ ವಾರ ಬಿಡುಗಡೆಯಾಗಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ‘ಬಂದರ್’ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದ್ದರೂ, ಶೋಗಳ ಕೊರತೆಯ ನಡುವೆ ಇದುವರೆಗೆ ಕೇವಲ 4 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version