ಹೆಚ್ಚು ಸ್ಟ್ರೆಸ್‌ ಮಾಡಿಕೊಂಡರೆ ಕೂದಲು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆಯೇ?

ಹೆಚ್ಚು ಸ್ಟ್ರೆಸ್‌ ಮಾಡಿಕೊಂಡರೆ ಕೂದಲು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆಯೇ?

ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚು ಒತ್ತಡ (ಸ್ಟ್ರೆಸ್) ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ, ಸಮಯದ ಕೊರತೆ, ನಿದ್ರೆ ಸರಿಯಾಗಿ ಆಗದಿರುವುದು ಮತ್ತು ವೈಯಕ್ತಿಕ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ನಿರಂತರ ಒತ್ತಡ ದೇಹದ ಒಳಗಿನ ವ್ಯವಸ್ಥೆಗೆ ಅರಿವಿಲ್ಲದಂತೆ ಹಾನಿ ಉಂಟುಮಾಡಿ, ನಿಧಾನವಾಗಿ ಪರಿಣಾಮ ಬೀರುತ್ತದೆ. ಅನೇಕರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಹೆಚ್ಚು ಸ್ಟ್ರೆಸ್‌ನಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ಹದಗೆಟ್ಟು ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ದಣಿವು, ಗಮನ ಕೊರತೆ, ತಲೆನೋವು ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯವಾಗಿದೆ. ಅಷ್ಟೇಅಲ್ಲ, ಅದರ ಜೊತೆಗೆ ಕೂದಲು ಮತ್ತು ಚರ್ಮದಲ್ಲೂ ಬದಲಾವಣೆಗಳು ಕಾಣಿಸಬಹುದು. ಹಾಗಾದರೆ ಸ್ಟ್ರೆಸ್‌ (Stress) ಮಾಡಿಕೊಳ್ಳುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆಚ್ಚು ಸ್ಟ್ರೆಸ್‌ನಿಂದ ಕೂದಲಿಗಾಗುವ ಸಮಸ್ಯೆಗಳು:

ಡರ್ಮಟಾಲಜಿಸ್ಟ್ ಡಾ. ಸೌಮ್ಯ ಸಚ್‌ದೇವ ಅವರ ಪ್ರಕಾರ, ಹೆಚ್ಚು ಒತ್ತಡ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಿರಂತರ ಸ್ಟ್ರೆಸ್‌ನಿಂದ ಕೂದಲು ದುರ್ಬಲವಾಗಿ ಹೇರ್ ಫಾಲ್ ಹೆಚ್ಚಾಗಬಹುದು, ಕೂದಲು ತೆಳುವಾಗಿ ಬೆಳವಣಿಗೆ ನಿಧಾನಗೊಳ್ಳಬಹುದು, ಡ್ಯಾಂಡ್ರಫ್ ಮತ್ತು ಹೇನಿನ ಸಮಸ್ಯೆ ಕಾಣಿಸಬಹುದು, ಜೊತೆಗೆ ಸಮಯಕ್ಕೂ ಮುಂಚೆ ಕೂದಲು ಬಿಳಿಯಾಗಬಹುದು, ಕೂದಲಿನ ಹೊಳಪು ಕಡಿಮೆಯಾಗಿ ಒಣಗಿದಂತೆ ಕಾಣಬಹುದು. ಅಷ್ಟು ಮಾತ್ರವಲ್ಲ, ದೀರ್ಘಕಾಲದ ಒತ್ತಡ ಕೂದಲಿನ ದಟ್ಟತೆಯನ್ನೂ ಕಡಿಮೆ ಮಾಡಬಹುದು.

ಇದನ್ನೂ ಓದಿ: ಸ್ಟ್ರೆಸ್ ಮಲಬದ್ದತೆಗೆ ಹೇಗೆ ಕಾರಣವಾಗುತ್ತೆ ಗೊತ್ತಾ? ಈ ಬಗ್ಗೆ ಡಾ ಅನುರಾಗ್ ಶೆಟ್ಟಿ ಏನ್ ಹೇಳ್ತಾರೆ ನೋಡಿ

ಹೆಚ್ಚು ಸ್ಟ್ರೆಸ್‌ನಿಂದ ಚರ್ಮಕ್ಕಾಗುವ ಸಮಸ್ಯೆಗಳು:

ಸ್ಟ್ರೆಸ್‌ನ ಪರಿಣಾಮ ಚರ್ಮದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತದೆ. ಚರ್ಮ ದಣಿದಂತೆ ಕಾಣಿಸುತ್ತದೆ, ಪಿಂಪಲ್ಸ್, ಅಕ್ನೆ ಮತ್ತು ರ್ಯಾಶ್ ಸಮಸ್ಯೆಗಳು ಹೆಚ್ಚಾಗುತ್ತದೆ. ಒಣ ಚರ್ಮದ ಸಮಸ್ಯೆ ಕಾಡಬಹುದು. ಮುಂಚಿತವಾಗಿ ಫೈನ್ ಲೈನ್ಸ್ ಕಾಣಿಸಬಹುದು, ಚರ್ಮ ಸಂವೇದನಾಶೀಲವಾಗಿ, ಉರಿ ಹೆಚ್ಚಾಗಬಹುದು.

ಸ್ಟ್ರೆಸ್‌ನಿಂದ ಹೇಗೆ ರಕ್ಷಿಸಿಕೊಳ್ಳುವುದು?

  • ಸ್ಟ್ರೆಸ್ ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ಅಗತ್ಯ
  • ಪ್ರತಿದಿನ ಸರಿಯಾಗಿ ನಿದ್ರೆ ಮಾಡಿ
  • ಸಮಯಕ್ಕೆ ಸರಿಯಾಗಿ ಮಲಗುವ ಮತ್ತು ಎದ್ದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ
  • ಯೋಗ, ಧ್ಯಾನ ಮತ್ತು ಲಘು ವ್ಯಾಯಾಮ ಮಾಡಿ
  • ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ
  • ಪೌಷ್ಟಿಕ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ
  • ನಿಮಗಾಗಿ ಸಮಯ ಮೀಸಲಿಟ್ಟು ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs SRH Playing XI: ಟಾಸ್ ಗೆದ್ದ ಕೆಕೆಆರ್; ಎಸ್​ಆರ್​ಎಚ್ ತಂಡದಲ್ಲಿ ಬದಲಾವಣೆ

ಐಪಿಎಲ್ 2026 (IPL 2026) ರ ಆರನೇ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Kolkata Knight Riders vs Sunrisers Hyderabad) ನಡುವೆ ನಡೆಯುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಸೋತ ಎರಡೂ ತಂಡಗಳು ಒತ್ತಡದಲ್ಲಿವೆ. ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತರೆ, ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್​, ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಆದ್ದರಿಂದ, ಈ ಎರಡು ತಂಡಗಳು ತಮ್ಮ ಮೊದಲ ಗೆಲುವನ್ನು ಎದುರು ನೋಡುತ್ತಿವೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಯಾರು ಗೆಲುವು ಸಾಧಿಸುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

ಟಾಸ್ ಗೆದ್ದ ಕೋಲ್ಕತ್ತಾ ಬೌಲಿಂಗ್ ಆಯ್ಕೆ

ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆ ಬಳಿಕ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ ತಮ್ಮ ಪ್ಲೇಯಿಂಗ್ 11 ರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದಿದ್ದಾರೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಪ್ಲೇಯಿಂಗ್ 11 ರಲ್ಲಿ ಒಂದು ಬದಲಾವಣೆಯನ್ನು ಮಾಡಿದೆ. ಅದರಂತೆ ಹರ್ಷಲ್ ಪಟೇಲ್ ಬದಲಿಗೆ ಸ್ಪಿನ್ನರ್ ಶಿವಾಂಗ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಮುಖಾಮುಖಿ ದಾಖಲೆ

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೆ 30 ಪಂದ್ಯಗಳನ್ನು ಆಡಿವೆ. ಈ ಮುಖಾಮುಖಿಯಲ್ಲಿ ಕೆಕೆಆರ್ ಪ್ರಾಬಲ್ಯ ಸಾಧಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 20 ಪಂದ್ಯಗಳನ್ನು ಗೆದ್ದಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ಕೇವಲ 10 ಪಂದ್ಯಗಳನ್ನು ಗೆದ್ದಿದೆ. ಕಳೆದ ಆವೃತ್ತಿಯಲ್ಲಿ, ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿದ್ದವು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಮೇಲುಗೈ ಸಾಧಿಸಲಿದೆ.

KKR vs SRH IPL 2026 Live Score: ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೂನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ಬ್ಲೆಸಿಂಗ್ ಮುಜರಬಾನಿ.

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಮುಖ್ಯಸ್ಥ, ಇಶಾನ್ ಕಿಶನ್ (ವಿಕೆಟ್ ಕೀಪರ್/ ನಾಯಕ), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಶಿವಂಗ್ ಕುಮಾರ್, ಜಯದೇವ್ ಉನಾದ್ಕತ್, ಡೇವಿಡ್ ಪೇನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಮಹಿಳೆ ದುರಂತ ಸಾವು: ನೀರು ಕಾಯಿಸುವಾಗ ಇರಲಿ ಎಚ್ಚರಿಕೆ!

ಧಾರವಾಡ, ಏಪ್ರಿಲ್​ 02: ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್​ ಸ್ಪರ್ಶಿಸಿ ಗೃಹಿಣಿ ಬಾತ್ರೂಮ್​​ನಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತ ಗೃಹಿಣಿ. ನಿವೇದಿತಾ ನಾಯ್ಕರ್ ಎರಡು ಮಕ್ಕಳ ತಾಯಿ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ನಿವೇದಿತಾ ನಾಯ್ಕರ್​​ ಬಕೆಟ್​​ನಲ್ಲಿ ಕ್ವಾಯಿಲ್ ಮೂಲಕ ನೀರು ಕಾಯಿಸಲು ಇಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬಕೆಟ್​ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್​ ಸ್ಪರ್ಶದಿಂದ ನಿವೇದಿತಾ ಬಾತ್ರೂಮ್​​ನಲ್ಲೇ ಸಾವನ್ನಪ್ಪಿದ್ದಾರೆ.

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ದುರ್ಮರಣ

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ದುರ್ಮರಣ ಹೊಂದಿರುವಂತಹ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಖತಗಾಂವ್​ನಲ್ಲಿ ನಡೆದಿದೆ. ಔರಾದ್ ತಾಲೂಕಿನ ಅಲ್ಲಾಪುರದ ನಿವಾಸಿ ಜಿಂಟಪ್ಪಾ(19) ಮೃತ ಕಾರ್ಮಿಕ. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಪತಿಯಿಂದಲೇ ದಾರುಣವಾಗಿ ಪತ್ನಿಯ ಹತ್ಯೆ

ಹೊಸದಾಗಿ ವಿದ್ಯುತ್ ಕಂಬ ಅಳವಡಿಸುವಾಗ ಅವಘಡ ಸಂಭವಿಸಿದೆ. ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಕೂಲಿ ಕಾರ್ಮಿಕ ಜಿಂಟಪ್ಪಾ ಬಲಿಯಾಗಿದ್ದು, ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಬಂಧಿಕರಿಂದ ಕಮಲನಗರ ಪೊಲೀಸ್ ಠಾಣೆ ದೂರು ನೀಡಲಾಗಿದೆ.

ಅಪರಿಚಿತ ವಾಹನ ಡಿಕ್ಕಿಯಿಂದ ಬೈಕ್ ಸವಾರರಿಬ್ಬರ ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನಗವಾಡಿಯ ಸಮೀಪ ಸಾಸ್ವಿಹಳ್ಳಿ ಆನವೇರಿ ರಸ್ತೆಯಲ್ಲಿ ನಡೆದಿದೆ. ನವೀನ್ ಎನ್ ಎಂ (33) ಹಾಗೂ ಶಶಿಕುಮಾರ್ (32) ಮೃತ ಬೈಕ್ ಸವಾರರು.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಅಪರಿಚಿತ ವಾಹನ ಡಿಕ್ಕಿ ರಭಸಕ್ಕೆ ನವೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಶಶಿಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ಸ್ವಗ್ರಾಮದಿಂದ ಕಾರ್ಯ ನಿಮಿತ್ಯ ಆನವೇರಿಗೆ ಬೈಕ್ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಅಪಘಾತ ಮಾಡಿದ ಚಾಲಕ ವಾಹನ ಸಹಿತ ಪರಾರಿ ಆಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಮಾಡಿದ ವಾಹನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೌಂಟ್ ಎವೆರಸ್ಟ್​ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು

ನವದೆಹಲಿ, ಏಪ್ರಿಲ್ 2: ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಶಿಖರದ ಮಾರ್ಗದರ್ಶಕರು ಪರ್ವತಾರೋಹಿಗಳಿಗೆ (climbers) ವಿಷಪ್ರಾಶನ ಮಾಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೌಂಟ್ ಎವರೆಸ್ಟ್ (Mount Everest) ಮಾರ್ಗದರ್ಶಕರು ಪರ್ವತಾರೋಹಿಗಳಿಗೆ ವಿಷದ ಆಹಾರವನ್ನು ನೀಡಿ ಅವರನ್ನು ಅನಾರೋಗ್ಯಕ್ಕೆ ಒಳಪಡಿಸಿದ್ದಾರೆ, ಹೆಲಿಕಾಪ್ಟರ್ ಮೂಲಕ ಅಲ್ಲಿಂದ ತೆರಳಲು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಈ ಪ್ರಕರಣದಲ್ಲಿ 32 ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದೆ. 9 ಜನರನ್ನು ಬಂಧಿಸಲಾಗಿದೆ, ಉಳಿದವರು ಪರಾರಿಯಾಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರವಾಸಿಗರನ್ನು ಆಸ್ಪತ್ರೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಅನ್ನು ಕರೆಸಲಾಗುತ್ತದೆ. ಇದಾದ ನಂತರ ಅವರು ವಿಮೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಮಾರ್ಗದರ್ಶಕರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಗದರ್ಶಕರು ತಮ್ಮ ಜೊತೆಗಿದ್ದ ವಿದೇಶಿ ಪ್ರಯಾಣಿಕರು ಸಾಯುವ ಅಪಾಯವಿದೆ ಎಂದು ಬೆದರಿಸಿದರು. ಆದರೆ, ಅಂತಹ ಯಾವುದೇ ಸಮಸ್ಯೆ ಇರಲಿಲ್ಲ. ಆ ಪ್ರವಾಸಿಗರಿಗೆ ನೀಡಲಾದ ಆಹಾರದಲ್ಲಿ ಪಾಯ್ಸನ್ ಇತ್ತು ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ. ಮಾರ್ಗದರ್ಶಕರು ಪ್ರವಾಸಿಗರ ಆಹಾರಕ್ಕೆ ಡೈಮಾಕ್ಸ್ (ಅಸೆಟಾಜೋಲಾಮೈಡ್) ಮಾತ್ರೆಗಳನ್ನು ಹಾಕುತ್ತಿದ್ದರು. ಬಳಿಕ ವೈದ್ಯಕೀಯ ತುರ್ತುಸ್ಥಿತಿಗಾಗಿ ರಕ್ಷಣಾ ಹೆಲಿಕಾಪ್ಟರ್ ಅನ್ನು ಕರೆಸಲು ಅಗತ್ಯವಾದ ಲಕ್ಷಣಗಳನ್ನು ಉಂಟುಮಾಡಲು ಹೆಚ್ಚು ನೀರನ್ನು ನೀಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

ಇದು ಒಂದು ಬಗೆಯಾದರೆ ಇನ್ನೊಂಂದು ಮಾರ್ಗವೆಂದರೆ ಮಾರ್ಗದರ್ಶಕರೊಂದಿಗೆ ಪರ್ವತಾರೋಹಿಗಳನ್ನು ಕೂಡ ಈ ಹಗರಣದಲ್ಲಿ ಸೇರಿಸಿಕೊಳ್ಳುವುದು. ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ನಂತರ ಮುಂದೆ ಹೋಗಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದ ಪ್ರಯಾಣಿಕರಿಗೆ ಮಾರ್ಗದರ್ಶಕರು ಅನಾರೋಗ್ಯವಾಗಿದೆ ಎಂದು ನಟಿಸುವ ಆಯ್ಕೆಯನ್ನು ನೀಡುತ್ತಿದ್ದರು. ನಂತರ ಮಾರ್ಗದರ್ಶಕರು ಹೆಲಿಕಾಪ್ಟರ್ ಅನ್ನು ಕರೆಸುತ್ತಿದ್ದರು.

ರಕ್ಷಣಾ ಹೆಲಿಕಾಪ್ಟರ್ ಅನ್ನು ಕರೆಸಿದ ನಂತರ ಒಂದೇ ಹೆಲಿಕಾಪ್ಟರ್ ಬಂದು ಬಹು ಪ್ರಯಾಣಿಕರನ್ನು ಹೊತ್ತೊಯ್ದಿತು. ಆದರೂ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನಲ್ಲಿ ವಿಮಾ ಹಣಕ್ಕೆ ಪೂರ್ಣ ಬೆಲೆಯ ಇನ್‌ವಾಯ್ಸ್‌ಗಳನ್ನು ಸಲ್ಲಿಸಲಾಯಿತು. ಇದಾದ ನಂತರ ಇದೊಂದು ಹಗರಣ ಎಂಬುದು ಬೆಳಕಿಗೆ ಬಂದಿತು. ಕೆಲವೊಮ್ಮೆ ಆ ಪರ್ವತಾರೋಹಿಗಳು ದಾಖಲಾಗುವ ಆಸ್ಪತ್ರೆಗಳ ವೈದ್ಯರನ್ನು ಕೂಡ ಈ ನಾಟಕದಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. ವೈದ್ಯಕೀಯ ಅಧಿಕಾರಿಗಳು ಡಿಸ್ಚಾರ್ಜ್ ಸಮ್ಮರಿ ನಕಲಿ ಮಾಡಿರುವ ಮತ್ತು ಈ ಪ್ರಕರಣಗಳಲ್ಲಿ ಭಾಗಿಯಾಗದ ಹಿರಿಯ ವೈದ್ಯರ ಡಿಜಿಟಲ್ ಸಹಿಗಳನ್ನು ಬಳಸಿರುವ ಪ್ರಕರಣಗಳೂ ನಡೆದಿವೆ.

ಇದನ್ನೂ ಓದಿ: Phone Hijack Scam: ಫೋನ್ ಹೈಜಾಕ್ ಹಗರಣ ಎಂದರೇನು?: ಲಕ್ಷಾಂತರ ಹಣ ಕಳೆದುಕೊಳ್ಳುವ ಮುನ್ನ ಎಚ್ಚರ

CIB ತನಿಖೆಯ ವರದಿ ಪ್ರಕಾರ, “ಅನಾರೋಗ್ಯ”ಕ್ಕೆ ಚಿಕಿತ್ಸೆ ಪಡೆಯಬೇಕಾಗಿದ್ದ ಕೆಲವು ರೋಗಿಗಳು ಆಸ್ಪತ್ರೆಯ ಕೆಫೆಟೇರಿಯಾದಲ್ಲಿ ಬಿಯರ್ ಸೇವಿಸುತ್ತಿರುವುದು ಕಂಡುಬಂದಿದೆ. CIB 32 ವ್ಯಕ್ತಿಗಳ ಮೇಲೆ ಆರೋಪ ಹೊರಿಸಿದೆ ಎಂದು ಔಟ್ಲೆಟ್ ವರದಿ ಮಾಡಿದೆ. ಅವರಲ್ಲಿ 9 ಜನರನ್ನು ಬಂಧಿಸಲಾಗಿದೆ ಮತ್ತು ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆಪಾದಿತ ಹಗರಣದಲ್ಲಿ ಹೆಸರಿಸಲಾದವರಲ್ಲಿ 3 ಹೆಲಿಕಾಪ್ಟರ್ ಕಂಪನಿಗಳ ನಿರ್ವಾಹಕರು ಮತ್ತು ಸಿಬ್ಬಂದಿ, ವಿವಿಧ ಆಸ್ಪತ್ರೆಗಳ ವೈದ್ಯರು ಮತ್ತು ನಿರ್ವಾಹಕರು ಕೂಡ ಸೇರಿದ್ದಾರೆ.

ಅಧಿಕಾರಿಗಳ ಪ್ರಕಾರ, ಆಪಾದಿತ ಹಗರಣದಲ್ಲಿ ಭಾಗಿಯಾಗಿರುವ ಗುಂಪುಗಳು ಕನಿಷ್ಠ 185 ಕೋಟಿ ರೂ. ವಿಮಾ ಪಾವತಿಗಳನ್ನು ಪಡೆದಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆಯುರ್ವೇದ ಔಷಧಿ ಹೆಸರಲ್ಲಿ ಗೋಧಿ ಹಿಟ್ಟಿನ ಮಾರಾಟ: ದೆಹಲಿ ಮೂಲದ ಆರೋಪಿ ಅರೆಸ್ಟ್​

ತುಮಕೂರು, ಏಪ್ರಿಲ್​​ 02: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮಾಡಿ ತೂಕ ಇಳಿಕೆ ಪೌಡರ್ ಮತ್ತು ಇತರ ಉತ್ಪನ್ನಗಳ ಹೆಸರಲ್ಲಿ ನಕಲಿ ಆಯುರ್ವೇದ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ರಾಕೆಟ್‌ನ್ನು ತುಮಕೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ದೆಹಲಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಸಂಸ್ಥೆಯೊಂದರ ಮಾಲಕರು ತಮ್ಮ ಟ್ರೇಡ್‌ಮಾರ್ಕ್ ದುರುಪಯೋಗವಾಗಿದೆ ಎಂದು 2025ರ ಆಗಸ್ಟ್ 14ರಂದು ನೀಡಿದ್ದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಲಾಗಿತ್ತು ಎನ್ನಲಾಗಿದೆ.

ಆರೋಪಿಗಳು ‘RK ಟ್ರೇಡರ್ಸ್’ ಹೆಸರಿನಲ್ಲಿ ಆನ್‌ಲೈನ್ ಮೂಲಕ ಗ್ರಾಹಕರ ಆರೋಗ್ಯಕ್ಕೆ, ವಿಶೇಷವಾಗಿ ಯುವಕರಿಗೆ ಅಪಾಯ ಉಂಟುಮಾಡಬಲ್ಲ ನಕಲಿ ತೂಕ ಇಳಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಮಾರ್ಚ್ 27ರಂದು ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು, ದೊಡ್ಡ ಪ್ರಮಾಣದ ನಕಲಿ ಉತ್ಪನ್ನಗಳು, ಆಯುರ್ವೇದ ಟ್ಯಾಬ್ಲೆಟ್‌ಗಳು, ಕಾಸ್ಮೆಟಿಕ್ ಕ್ರೀಮ್‌ಗಳು ಮತ್ತು ಪೌಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಕೆಲವೊಮ್ಮೆ ಸಾಮಾನ್ಯ ಗೋಧಿ ಹಿಟ್ಟನ್ನು ಸ್ಲಿಂ ಪೌಡರ್ ಎಂದು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬ ವಿಚಾರವೂ ಈ ವೇಳೆ ಬಯಲಾಗಿದೆ.

ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ; ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ಪ್ರಕರಣದಲ್ಲಿ ಪ್ರಮುಖ ಆರೋಪಿಯ ಪುತ್ರರೂ ಶಾಮೀಲಾಗಿದ್ದು,  ಸುಮಾರು ಒಂದೂವರೆ ವರ್ಷಗಳಿಂದ RK ಟ್ರೇಡರ್ಸ್, MK ಟ್ರೇಡರ್ಸ್ ಮತ್ತು MHK ಟ್ರೇಡರ್ಸ್ ಎಂಬ ವಿವಿಧ ಕಂಪನಿಗಳ ಹೆಸರಿನಲ್ಲಿ ಈ ದಂಧೆ ನಡೆಸುತ್ತಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ವಿಶೇಷ ತಂಡ, ಮುಖ್ಯ ಆರೋಪಿ 56 ವರ್ಷದ ರಾಜೀವ್ ಖನ್ನಾನನ್ನು ಮಾರ್ಚ್ 28ರಂದು ದೆಹಲಿಯಲ್ಲಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಬಳಿಕ ಆತನನ್ನು ಕರ್ನಾಟಕಕ್ಕೆ ಕರೆತಂದು ಶಿರಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ದಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

ನವದೆಹಲಿ ಏಪ್ರಿಲ್ 2: ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ರಾಘವ್ ಚಡ್ಡಾ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡಬಾರದು ಎಂದು ಹೇಳಿದೆ. “ಅಶೋಕ್ ಕುಮಾರ್ ಮಿತ್ತಲ್ ಅವರನ್ನು ರಾಜ್ಯಸಭಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಕುರಿತು ಎಎಪಿ ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತ ಪತ್ರವನ್ನು ಕಳುಹಿಸಿದೆ” ಎಂದು ಆಮ್ ಆದ್ಮಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

ಆಮ್ ಆದ್ಮಿ ಪಕ್ಷದ ಜನಪ್ರಿಯ ನಾಯಕ ರಾಘವ್ ಚಡ್ಡಾ ಈ ಹಿಂದೆ ಭಾರತದಲ್ಲಿ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕೆಂದು ಪ್ರತಿಪಾದಿಸುವ ಮೂಲಕ ಸುದ್ದಿಗಳಲ್ಲಿದ್ದರು. ಆರೈಕೆ ಮಾಡುವುದು ಇಬ್ಬರೂ ಪೋಷಕರ ನಡುವೆ ಹಂಚಿಕೆಯ ಜವಾಬ್ದಾರಿಯಾಗಿರಬೇಕು ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: MP Raghav Chadha: ರಾಜ್ಯಸಭೆಯಲ್ಲಿ ಎಎಪಿ ಪಕ್ಷದ ನಾಯಕನಾಗಿ ಸಂಸದ ರಾಘವ್ ಚಡ್ಡಾ ನೇಮಕ

ಪ್ರಸ್ತುತ, ಎಎಪಿ ರಾಜ್ಯಸಭೆಯಲ್ಲಿ 10 ಸದಸ್ಯರನ್ನು ಹೊಂದಿದೆ. ಇದರಲ್ಲಿ ಪಂಜಾಬ್‌ನಿಂದ 7 ಮತ್ತು ದೆಹಲಿಯಿಂದ ಮೂವರು ಸೇರಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ 2012ರಲ್ಲಿ ಎಎಪಿ ಸ್ಥಾಪನೆಯಾದಾಗಿನಿಂದ ಪಕ್ಷದಲ್ಲಿದ್ದಾರೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು.

ರಾಘವ್ ಚಡ್ಡಾ ಮೇಲ್ಮನೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಒಬ್ಬರು. ಅವರು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ತಟ್ಟೆ ತೊಳೆದ ಪ್ರಿಯಾಂಕಾ ಚೋಪ್ರಾ’, ‘ಕಸ ಗುಡಿಸಿದ ಜಗ್ಗೇಶ್’ ಒಂದೇ ಅಲ್ಲವೇನು?

ಭಾರತ ಮೂಲದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚೆಗೆ ಅಮೃತಸರ ಗೋಲ್ಡನ್ ಟೆಂಪಲ್​​ನಲ್ಲಿ ಭಕ್ತರು ತಿಂದುಂಡ ತಟ್ಟೆ, ಲೋಟ ತೊಳೆದಿದ್ದು ದೊಡ್ಡ ಸುದ್ದಿಯಾಯ್ತು. ಇದೀಗ ಆ ಸುದ್ದಿಯನ್ನು ಕನ್ನಡದ ಜನಪ್ರಿಯ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಶ್ನೆಯೊಂದನ್ನು ಎತ್ತಿದ್ದಾರೆ. ತಟ್ಟೆ ಲೋಟ ತೊಳೆದ ಪ್ರಿಯಾಂಕಾ ಚೋಪ್ರಾಗೆ ಭೇಷ್ ಎಂದ ರಾಯರ ಮಠದಲ್ಲಿ ಜನ ಕಸ ಗುಡಿಸಿದ ತಮ್ಮನ್ನು ಅಣಕಿಸಿದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡು ಅಪಘಾತದ ವಿಷಯವನ್ನೂ ಸಹ ಹಂಚಿಕೊಂಡಿದ್ದಾರೆ.

ರಾಯರ ಭಕ್ತರಾಗಿರುವ ಜಗ್ಗೇಶ್ ಅವರು ರಾಯರ ಮಠದಲ್ಲಿ ಕಸ ಗುಡಿಸುತ್ತಿರುವ ವಿಡಿಯೋಕ್ಕೆ ಸಾಕಷ್ಟು ಟೀಕೆ ಹಿಂದೆ ವ್ಯಕ್ತವಾಗಿತ್ತು, ಆದರೆ ಈಗ ಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದಿದ್ದನ್ನು ಹೊಗಳಲಾಗುತ್ತಿದೆ ಎಂದಿರುವ ಜಗ್ಗೇಶ್ ಅವರು, ತಮಗೆ ಆದ ಎರಡು ಅಪಘಾತಗಳ ಮಾಹಿತಿಯನ್ನು ಹಂಚಿಕೊಂಡಿರುವ ಜೊತೆಗೆ ತಾವೇಕೆ ರಾಯರ ಮಠದಲ್ಲಿ ಕಸ ಗುಡಿಸಿದೆ ಎಂಬುದನ್ನು ಸಹ ಹೇಳಿದ್ದಾರೆ.

ಜ್ಯೋತಿಷ್ಯದಲ್ಲಿ ನಂಬಿಕೆ ಇರಿಸುವ ಜಗ್ಗೇಶ್ ಅವರು ಗ್ರಹಗಳ ಕಾರಣದಿಂದಾಗಿ ತಮಗೆ ಅಪಘಾತ ಸಂಭವಿಸಲಿದೆ ಎಂಬುದನ್ನು ಅರಿತು ದೋಷ ನಿವೃತ್ತಿಗೆ ಆಲಯ ಗುಡಿಸುವ ಸೇವೆ ಮಾಡಬೇಕೆಂದು, ಇದೇ ಶ್ರೇಷ್ಠ ಪರಿಹಾರ ಎಂದು ರಾಯರ ಮಠದ ಕಸಗುಡಿಸುವ ಸೇವೆ ಮಾಡಿದರಂತೆ. ಇದರಿಂದ ದೋಷಕ್ಕೆ ಪರಿಹಾರವಾಯ್ತು, ಅಪಘಾತ ಆದರೂ ತಮಗೆ ಏನೂ ಆಗಲಿಲ್ಲ ಎಂದು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಭಕ್ತರು ತಿಂದುಂಡ ತಟ್ಟೆ-ಲೋಟ ತೊಳೆದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ದೆಹಲಿಯಲ್ಲಿ ತಮ್ಮ ಕಾರಿಗೆ ಮುಂದೆ ಮತ್ತು ಹಿಂದೆಯಿಂದಲೂ ಕೆಲವು ಕಾರುಗಳ ಢಿಕ್ಕಿ ಆದವೆಂದು ಆದರೆ ತಮಗಾಗಲಿ, ಕಾರಿನಲ್ಲಿದ್ದ ತಮ್ಮ ಸಿಬ್ಬಂದಿಗಾಗಲಿ ಏನೂ ಅಪಾಯ ಆಗಲಿಲ್ಲ ಎಂದಿದ್ದಾರೆ ಜಗ್ಗೇಶ್. ಚಾಲಕನ ಅಚಾತುರ್ಯದಿಂದ ತಮ್ಮ ಕಾರು ಮರಕ್ಕೆ ಢಿಕ್ಕಿ ಆಗಿ ಅಪಘಾತವಾಯ್ತು, ಹಾಗೂ ಕಾರಿನ ರಿಪೇರಿಗೆ ಲಕ್ಷ ರೂಪಾಯಿಗಳು ಖರ್ಚಾದುವೆಂದು ಆದರೆ ತಮಗೆ ಏನೂ ಆಗಲಿಲ್ಲ ಎಂದು ಜಗ್ಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಅವರ ಕಾರ್ಯ(ವಿಶೇಷವಾಗಿ ಸೆಲಿಬ್ರಿಟಿಗಳ ವೈಯಕ್ತಿಕ ವಿಷಯ) ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿ ಬರುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು. ಅಣಕ, ಅಪಹಾಸ್ಯ, ದೇವರ ಸೇವೆ ಮಾಡುವ ಮನುಷ್ಯನಿಗೆ ಮಾಡಿದಾಗ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂಟಿತವಾಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್ 10ರಿಂದ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ 2026: ಭವಿಷ್ಯದ ಹೆಜ್ಜೆಗಳನ್ನು ಗುರುತಿಸಿ

ಬೆಂಗಳೂರು, ಏಪ್ರಿಲ್ 2: ವಿದ್ಯಾರ್ಥಿ ಜೀವನದಲ್ಲೇ ಸರಿಯಾದ ಕರಿಯರ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ, ಹಾಗು ಬಹಳ ಕಷ್ಟಕರ ಕೆಲಸವೂ ಹೌದು. ಈ ಕಾರ್ಯವನ್ನು ಸುಲಭವಾಗಿಸಬಲ್ಲುದು ಟಿವಿ9 ಕನ್ನಡ ಎಜುಕೇಶ್ ಸಮಿಟ್ 2026 (TV9 Kannada Education Summit). ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಏಪ್ರಿಲ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ಮಹಾ ಕಾರ್ಯಕ್ರಮ ಶಿಕ್ಷಣದ ಭವಿಷ್ಯ ಹೆಜ್ಜೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅದ್ಭುತವಾದ ವೇದಿಕೆ ಇದಾಗಿದೆ.

ನಿಮ್ಮ ಕನಸುಗಳು ತೆರೆಯಲು ಅನುವಾಗಿಸಿ…

ನೀವು ಉನ್ನತ ಶಿಕ್ಷಣ ಮಾಡಬೇಕೆಂದು ಆಲೋಚಿಸುತ್ತಿದ್ದು, ಯಾವ ಕೋರ್ಸ್ ಆಯ್ದುಕೊಳ್ಳಬೇಕು, ಎಲ್ಲಿ ಅವಕಾಶಗಳಿವೆ ಎಂದು ಅರಸುತ್ತಿರುವ ವಿದ್ಯಾರ್ಥಿಯಾಗಿದ್ದರೆ ಇಗೋ ನಿಮಗಾಗಿ ಇದೆ ಟಿವಿ9 ಕನ್ನಡ ಎಜುಕೇಶ್ ಸಮಿಟ್. ಹಾಗೆಯೇ, ನಿಮ್ಮ ಮಗ ಅಥವಾ ಮಗಳ ಶಿಕ್ಷಣದ ದಿಕ್ಕುದೆಸೆ ನಿರ್ಧರಿಸಬೇಕೆಂದಿರುವ ಪೋಷಕರು ನೀವಾಗಿದ್ದರೆ ನಿಮಗೂ ಒಳ್ಳೆಯ ಪ್ಲಾಟ್​ಫಾರ್ಮ್ ಇದು. ಈ ಎಜುಕೇಶನ್ ಸಮಿಟ್​ನಲ್ಲಿ ಅಗ್ರಮಾನ್ಯ ಕಾಲೇಜುಗಳು, ಯೂನಿವರ್ಸಿಟಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಒಂದೇ ಕಡೆ ಎಲ್ಲವನ್ನೂ ಅವಲೋಕಿಸಿ ಮಾಹಿತಿ ತಿಳಿದುಕೊಳ್ಳಬಹುದು.

ವಿವಿಧ ಕೋರ್ಸ್​ಗಳ ಪ್ರಪಂಚವೇ ಅನಾವರಣ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆಯಲ್ಲಿ ಅನೇಕ ವಿಭಾಗಗಳಲ್ಲಿ ಯಾವ್ಯಾವ ಕೋರ್ಸ್​ಗಳು ಲಭ್ಯ ಇವೆ ಎಂಬುದನ್ನು ತಿಳಿಯಬಹುದು. ಈ ಕೆಳಕಾಣಿಸಿದ ವಿಭಾಗಗಳ ಕೋರ್ಸ್​ಗಳ ಮಾಹಿತಿ ಅಲ್ಲಿ ಸಿಗುತ್ತದೆ:

  • ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ
  • ಔಷಧ ಮತ್ತು ಹೆಲ್ತ್​ಕೇರ್
  • ಫಾರ್ಮಸಿ
  • ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಟಡೀಸ್
  • ಕಲೆ ಮತ್ತು ವಿಜ್ಞಾನ
  • ಕಾಮರ್ಸ್ ಮತ್ತು ಫೈನಾನ್ಸ್
  • ಹೋಟೆಲ್ ಮ್ಯಾನೇಜ್ಮೆಂಟ್
  • ಅನಿಮೇಶನ್ ಮತ್ತು ಕ್ರಿಯೇಟಿವ್ ಕ್ಷೇತ್ರ
  • ಅಗ್ನಿ ಶಾಮಕ ಹಾಗೂ ತಜ್ಞ ಕೋರ್ಸ್

ಇವಲ್ಲದೆ ಇನ್ನೂ ಹಲವು ವಿಭಾಗಗಳಲ್ಲಿ ಕೋರ್ಸ್​ಗಳಿದ್ದು, ಅವೆಲ್ಲವನ್ನೂ ಅವಲೋಕಿಸಬಹುದು. ಎಐ ಕಲಿಯಲು ಇರುವ ಕೋರ್ಸ್​ಗಳ ಬಗ್ಗೆ ಮಾರ್ಗದರ್ಶನ ಪಡೆಯಬಹುದು.

ತಜ್ಞರಿಂದ ನೇರವಾಗಿ ಮಾಹಿತಿ ಪಡೆಯಿರಿ…

ಟಿವಿ9 ಕನ್ನಡ ಎಜುಕೇಶನ್ ಸಮಿಟ್​ನಲ್ಲಿ ಕಾಣುವ ಬಹಳ ಮುಖ್ಯ ಸಂಗತಿ ಎಂದರೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ಕೊಡಲು ಅಪ್ಪಟ ವೃತ್ತಿಪರರು ಉಪಸ್ಥಿತರಿರುತ್ತಾರೆ. ಶಿಕ್ಷಣ ಸಂಸ್ಥೆಗಳ ವೃತ್ತಿಪರರೊಂದಿಗೆ ನೇರವಾಗಿ ಮಾತನಾಡಿ ನಿಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಕೋರ್ಸ್​ಗಳ ಆಳ ಅಗಲ; ಅಡ್ಮಿಶನ್ ಆಗುವುದು ಹೇಗೆ; ಕೋರ್ಸ್ ಸೇರಲು ಅರ್ಹತಾ ಮಾನದಂಡ; ಪ್ರವೇಶ ಪರೀಕ್ಷೆ; ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಅವಕಾಶ ಇರುತ್ತದೆ.

ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2026 ವಿವರ

  • ಸಮಿಟ್ ದಿನಾಂಕ: 2026ರ ಏಪ್ರಿಲ್ 10, 11 ಮತ್ತು 12, ಶುಕ್ರವಾರದಿಂದ ಭಾನುವಾರದವರೆಗೆ
  • ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ
  • ಸ್ಥಳ: ಬೆಂಗಳೂರಿನ ಅರಮನೆ ಮೈದಾನ, ತ್ರಿಪುರ ವಾಸಿನಿ.

ಗಮನಿಸಿ: ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಉಚಿತ ಇರುತ್ತದೆ. ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ ಇರುತ್ತದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಜಸ್ಟ್ 9 ಸೆಕೆಂಡುಗಳಲ್ಲಿ ಈ ಗಾರ್ಡನ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಬ್ರೈನ್ ಟೀಸರ್ ಸೇರಿದಂತೆ ಪಝಲ್‌ಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಇಂತಹ ಒಗಟಿನ ಆಟಗಳು ನಿಮ್ಮ ದೃಷ್ಟಿ ಹಾಗೂ ಬುದ್ಧಿವಂತಿಕೆಗೆ ಸವಾಲು ಎಸೆದು ತಾಳ್ಮೆಯನ್ನು ಪರೀಕ್ಷಿಸುತ್ತವೆ. ಇದೀಗ ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವ ಸಮಯ. ಈ ಇಲ್ಯೂಷನ್ ಚಿತ್ರದಲ್ಲಿ ಬಣ್ಣದ ಚಿಟ್ಟೆಯೊಂದಿದೆ. ನೀವು ಒಂಬತ್ತು ಸೆಕೆಂಡುಗಳೊಳಗೆ ಚಿಟ್ಟೆಯನ್ನು ಗುರುತಿಸಬೇಕು. ನೀವು ಈ ಒಗಟು ಬಿಡಿಸಲು ರೆಡಿ ಇದ್ರೆ, ಈ ಚಿತ್ರದತ್ತ ಒಮ್ಮೆ ಗಮನ ಹರಿಸಿ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು ?

ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಉದ್ಯಾನವನವನ್ನು ಕಾಣಬಹುದು. ಇಲ್ಲಿ ಹಚ್ಚಹಸಿರಿನಿಂದ ಕೂಡಿದ ಮರಗಳು ಸಸ್ಯಗಳು ಹಾಗೂ ಬಣ್ಣ ಬಣ್ಣದ ಹೂವುಗಳು ಗೋಚರಿಸುತ್ತವೆ. ಆದರೆ ಈ ಗಾರ್ಡನ್‌ನಲ್ಲಿ ಬಣ್ಣದ ಚಿಟ್ಟೆಯಿದೆ. ನೀವು ಹತ್ತಿರದಿಂದ ನೋಡಿದರೆ ಮಾತ್ರ ಆ ಚಿಟ್ಟೆಯನ್ನು ಗುರುತಿಸಲು ಸಾಧ್ಯ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ. ನೀವೀಗ ಈ ಸವಾಲನ್ನು ಸ್ವೀಕರಿಸಿದ್ದೀರಾ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಹುಲಿಗಳ ನಡುವೆ ಅಡಗಿರುವ ಜೀಬ್ರಾವನ್ನು ಕಂಡು ಹಿಡಿಯಬಲ್ಲಿರಾ

ಬಣ್ಣದ ಚಿಟ್ಟೆಯನ್ನು ಗುರುತಿಸಲು ಸಾಧ್ಯವಾಯಿತೇ?

ಇಲ್ಯೂಷನ್ ಚಿತ್ರಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ನಿಮ್ಮ ಕಣ್ಣನ್ನು ಮೋಸಗೊಳಿಸಿ ನಿಮ್ಮ ಏಕಾಗ್ರತೆಯನ್ನು ಬೇರೆಡೆ ಸೆಳೆಯುತ್ತದೆ. ಈ ಚಿತ್ರ ನೋಡಿದಾಗ ನಿಮಗೂ ಕೂಡ ಹಾಗೆಯೇ ಆಗಿದ್ದೀರಬಹುದು. ಎಷ್ಟೇ ಪ್ರಯತ್ನಿಸಿದರೂ ಚಿಟ್ಟೆ ಕಣ್ಣಿಗೆ ಬಿದ್ದಿಲ್ಲವೇ, ನಿಮ್ಮ ಕಣ್ಣಿಗೆ ಒತ್ತಡ ಹಾಕಬೇಡಿ. ನಿಧಾನವಾಗಿ ಪ್ರತಿಯೊಂದು ಮೂಲೆಯತ್ತ ಕಣ್ಣುಹಾಯಿಸಿ. ಒಂದು ವೇಳೆ ಚಿಟ್ಟೆ ಕಾಣಿಸಿಲ್ಲ ಎಂದಾದರೆ ಚಿಂತಿಸಬೇಡಿ. ನಾವೇ ನಿಮಗೆ ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪ್ರಯಾಣಿಕರ ಗಮನಕ್ಕೆ: ಏ 5ರಂದು ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು, ಏಪ್ರಿಲ್​ 02: ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್​​) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್​ 5ರಂದು ಅಂದರೆ ಭಾನುವಾರ ಬೆಳಿಗ್ಗೆ 2 ಗಂಟೆ ನೆರಳೆ ಮಾರ್ಗದಲ್ಲಿ ಮೆಟ್ರೋ ಸೇವೆ (Namma Metro) ತಾತ್ಕಾಲಿಕ ಸ್ಥಗಿತವಾಗಲಿದೆ. ವಿಜಯನಗರ ಮತ್ತು ಅತ್ತಿಗುಪ್ಪೆ ನಿಲ್ದಾಣಗಳಲ್ಲಿ ಅಗತ್ಯ ನಿರ್ವಹಣೆ ಕಾಮಗಾರಿ ಹಿನ್ನೆಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್​ಸಿಎಲ್​​ ತಿಳಿಸಿದೆ.

ಭಾನುವಾರದಂದು ಮೆಟ್ರೋ ರೈಲು ಸೇವೆ ತಾತ್ಕಾಲಿಕ ಸ್ಥಗಿತ

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್​ಸಿಎಲ್, ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು (ಭಾನುವಾರ) ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯನ್ನು ನೆರವೇರಿಸಲು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 07ರಿಂದ 09 ಗಂಟೆಯವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ನಮ್ಮ ಮೆಟ್ರೋ ಟ್ವೀಟ್​

ಇತರೆ ಎಲ್ಲಾ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ದಿಂದ ಮೈಸೂರು ರಸ್ತೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ನಿಂದ ವೈಟೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಮತ್ತು ಆ‌ರ್.ವಿ.ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಸೇವೆಗಳು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 07 ಗಂಟೆಯಿಂದ ವೇಳಾಪಟ್ಟಿಯಂತೆ ಸಂಚರಿಸಲಿವೆ.

ಇದನ್ನೂ ಓದಿ: ಐಪಿಎಲ್ ಕ್ರೇಜ್: ಪಂದ್ಯ ಮುಗಿದ 50 ನಿಮಿಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 22,000 ಜನ ಪ್ರಯಾಣ!

ಬೆಳಿಗ್ಗೆ 09 ಗಂಟೆಯ ನಂತರ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳು ಎಂದಿನಂತೆ ಸಂಚರಿಸಲಿವೆ. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ಮತ್ತು ಸಹಕರಿಸುವಂತೆ ಬಿಎಂಆರ್​ಸಿಎಲ್​ ವಿನಂತಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version