60 ದಿನ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಯಾವುದೇ ಸುಂಕವಿಲ್ಲ: ಟ್ರಂಪ್ – Kannada News | Trump: Hormuz Strait Tariff Free for 60 Days Amid Iran Tensions; Global Shipping Impact

ವಾಷಿಂಗ್ಟನ್, ಜೂನ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಜಾಗತಿಕ ವ್ಯಾಪಾರ ವಲಯಕ್ಕೆ ದೊಡ್ಡ ಸಮಾಧಾನಕರ ಸುದ್ದಿ ನೀಡಿದ್ದಾರೆ. ಇರಾನ್ ಜೊತೆಗಿನ ಪ್ರಸ್ತುತ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಜಗತ್ತಿನ ಪ್ರಮುಖ ಸಮುದ್ರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಬಳಸುವ ವಾಣಿಜ್ಯ ಹಡಗುಗಳಿಗೆ ಯಾವುದೇ ಹೆಚ್ಚುವರಿ ಸುಂಕ ಅಥವಾ ಟೋಲ್ ವಿಧಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಕದನ ವಿರಾಮದ 60 ದಿನಗಳ ಅವಧಿಯಲ್ಲಿ ಮತ್ತು ಆ ಅವಧಿ ಮುಗಿದ ನಂತರವೂ ಹಡಗುಗಳು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮುಕ್ತವಾಗಿ ಓಡಾಡಬಹುದು. ಒಂದು ವೇಳೆ ಇರಾನ್ ಜೊತೆಗಿನ ವಿಶಾಲ ಶಾಂತಿ ಒಪ್ಪಂದದ ಮಾತುಕತೆಗಳು ವಿಫಲವಾದರೆ, ಅಮೆರಿಕವು ಭವಿಷ್ಯದಲ್ಲಿ ಕಠಿಣ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಮಧ್ಯಪ್ರಾಚ್ಯದ ದೇಶಗಳಿಗೆ ಅಮೆರಿಕವು ವರ್ಷಗಳಿಂದ ‘ಗಾರ್ಡಿಯನ್ ಏಂಜೆಲ್’ ತರಹ ಸೇವೆ ಸಲ್ಲಿಸಿದೆ. ಈ ರಕ್ಷಣೆಗಾಗಿ ಅಮೆರಿಕ ಮಾಡಿದ ಹಳೆಯ, ಪ್ರಸ್ತುತ ಮತ್ತು ಭವಿಷ್ಯದ ವೆಚ್ಚಗಳ ಮರುಪಾವತಿಯಾಗಿ ಈ ಸುಂಕಗಳನ್ನು ಬಳಸಲಾಗುವುದು ಎಂದು ಟ್ರಂಪ್ ತಮ್ಮದೇ ಶೈಲಿಯಲ್ಲಿ ವಾದಿಸಿದ್ದಾರೆ.

ಮತ್ತಷ್ಟು ಓದಿ: ನಿಮ್ಮ ಸ್ನೇಹದಿಂದ ನನಗೇನೂ ಲಾಭವಾಗಿಲ್ಲ; ಟ್ರಂಪ್ ಆರೋಪಕ್ಕೆ ಮೆಲೋನಿ ಖಡಕ್ ಉತ್ತರ

ಇರಾನ್‌ನಿಂದ ಜಲಸಂಧಿ ಮತ್ತೆ ಬಂದ್, ಬಿಕ್ಕಟ್ಟಿಗೆ ಕಾರಣವೇನು?
ಟ್ರಂಪ್ ಅವರ ಈ ಹೇಳಿಕೆ ಹೊರಬೀಳುವ ಕೆಲವೇ ಗಂಟೆಗಳ ಮುನ್ನ, ಇರಾನ್ ಮಿಲಿಟರಿ ಅಧಿಕಾರಿಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚುವುದಾಗಿ ಆಘಾತಕಾರಿ ಘೋಷಣೆ ಮಾಡಿದ್ದರು.
ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ನಿರಂತರವಾಗಿ ಭೀಕರ ವೈಮಾನಿಕ ದಾಳಿಗಳನ್ನು ಮುಂದುವರೆಸಿದೆ. ಅಮೆರಿಕ ತನ್ನ ಮಿತ್ರರಾಷ್ಟ್ರ ಇಸ್ರೇಲ್ ಅನ್ನು ತಡೆಯುವಲ್ಲಿ ಮತ್ತು ಒಪ್ಪಂದದ ಬದ್ಧತೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಇರಾನ್ ಜಲಸಂಧಿಯನ್ನು ಬಂದ್ ಮಾಡಲು ಮುಂದಾಗಿದೆ.

ಹಾರ್ಮುಜ್ ಜಲಸಂಧಿ ಜಗತ್ತಿಗೆ ಏಕೆ ಇಷ್ಟೊಂದು ಮುಖ್ಯ?
ಹಾರ್ಮುಜ್ ಜಲಸಂಧಿಯು ಇಡೀ ವಿಶ್ವದಲ್ಲೇ ಅತಿ ಪ್ರಮುಖ ಸಮುದ್ರ ಮಾರ್ಗವಾಗಿದೆ. ಜಗತ್ತಿನ ಒಟ್ಟು ತೈಲ ಮತ್ತು ಇಂಧನ ರಫ್ತಿನ ಬಹುದೊಡ್ಡ ಪಾಲು ಇದೇ ಕಿರಿದಾದ ಮಾರ್ಗದ ಮೂಲಕ ಸಾಗುತ್ತದೆ.
ಈ ಜಲಮಾರ್ಗದಲ್ಲಿ ಸಣ್ಣ ಅಡಚಣೆ ಉಂಟಾದರೂ ಜಾಗತಿಕವಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರುತ್ತವೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಅಸ್ತವ್ಯಸ್ತಗೊಳ್ಳುತ್ತದೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಕದನ ವಿರಾಮ ಒಪ್ಪಂದ ಉಳಿಯುತ್ತದೆಯೇ ಅಥವಾ ಇಂಧನ ಮಾರುಕಟ್ಟೆ ಸಂಕಷ್ಟಕ್ಕೆ ಸಿಲುಕುತ್ತದೆಯೇ ಎಂದು ಜಗತ್ತಿನಾದ್ಯಂತದ ಸರ್ಕಾರಗಳು ತೀವ್ರ ಕಳವಳದಿಂದ ಗಮನಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂತಾರಾಷ್ಟ್ರೀಯ ಯೋಗ ದಿನ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಯೋಗಾಭ್ಯಾಸ – Kannada News | Union Minister H.D. Kumaraswamy Leads International Yoga Day Celebrations in Mandya

ಮಂಡ್ಯ, ಜೂನ್​​ 21: ನಗರದ ಪಿಇಟಿ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಬಳಿಕ ಸಾರ್ವಜನಿಕರೊಂದಿಗೆ ಕುಮಾರಸ್ವಾಮಿ ಅವರು ಸ್ವತಃ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಚಂದ್ರವನ ಆಶ್ರಯದ ತ್ರಿನೇತ್ರ ಶಿವಯೋಗಿ ಸ್ವಾಮೀಜಿ, ಡಿಸಿ ಡಾ.ಕುಮಾರ್ ಪೊಲೀಸ್​ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಜಿಪಂ ಸಿಇಒ ನಂದಿನಿ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Happy Father’s Day 2026: ನಿಮ್ಮ ಜೀವನದ ಸೂಪರ್‌ ಹೀರೋಗೆ ಈ ರೀತಿ ಫಾದರ್ಸ್‌ ಡೇ ಶುಭಾಶಗಳನ್ನು ತಿಳಿಸಿ – Kannada News | Happy Father’s Day 2026: here are some meaningful wishes and messages to Share with Your Dad

ತಂದೆಯಂದಿರ ದಿನದ ಶುಭಾಶಯಗಳುImage Credit source: png magic

ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ ಎಂದರೆ ಅದು ತಂದೆ (Father). ತಂದೆಯಂದಿರುವ ತನ್ನೆಲ್ಲಾ ಖುಷಿಯನ್ನು ತ್ಯಾಗ ಮಾಡಿ ಮಕ್ಕಳ ಭವಿಷ್ಯ ಹಾಗೂ ಕುಟುಂಬಕ್ಕಾಗಿ ಹಗಲಿರುಳೆನ್ನದೆ ದುಡಿಯುತ್ತಾರೆ. ಇಂತಹ ತ್ಯಾಗಮಯಿ ತಂದೆಯ ಗೌರವಿಸಲು, ಸ್ಮರಿಸಲು ಪ್ರತಿವರ್ಷ ಜೂನ್‌ ಮೂರನೇ ಭಾನುವಾರದಂದು ಫಾದರ್ಸ್‌ ಡೇಯನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನವಲ್ಲ, ತಂದೆಯಂದಿರು ತಮ್ಮ ಕುಟುಂಬಕ್ಕಾಗಿ ಮಾಡುವ ತ್ಯಾಗ ಮತ್ತು ಪ್ರೀತಿಗಾಗಿ ಅವರಿಗೆ ಧನ್ಯವಾದ ಹೇಳಲಿರುವ ಅವಕಾಶವಾಗಿದೆ. ಇಂದು ವಿಶ್ವ ತಂದೆಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಈ ಶುಭದಿನದಂದು ನಿಮ್ಮ ಜೀವನದ ಸೂಪರ್‌ ಹೀರೋಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಅರ್ಥಪೂರ್ಣ ಶುಭ ಸಂದೇಶಗಳು.

ಫಾದರ್ಸ್‌ ಡೇಯ ಅರ್ಥಪೂರ್ಣ ಶುಭ ಸಂದೇಶಗಳು ಇಲ್ಲಿವೆ:

  • ಜಗತ್ತಿನಲ್ಲೇ ದೀ ಬೆಸ್ಟ್‌ ಅಪ್ಪ ನೀವು. ಇವತ್ತು ನನ್ನ ಜೀವನ ಸುಗಮವಾಗಿ ಸಾಗುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ನೀವು ತೋರಿದ ಪ್ರೀತಿ, ಮಾರ್ಗದರ್ಶನ. ನನಗೆ ಎಲ್ಲವನ್ನೂ ಕೊಟ್ಟ ನಿಮಗೆ ಥ್ಯಾಂಕ್ಸ್.‌ ಹ್ಯಾಪಿ ಫಾದರ್ಸ್‌ ಡೇ.
  • ಯಾವುದೇ ಸಂದರ್ಭದಲ್ಲೂ ಸದಾ ನನ್ನ ಜೊತೆ ನಿಲ್ಲುವ ವ್ಯಕ್ತಿ ನೀವು. ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು ಡ್ಯಾಡಿ.
  • ಆಗಸದಷ್ಟು ಪ್ರೀತಿ ಕೊಟ್ಟು, ಸದಾ ನನಗೆ ಬೆನ್ನೆಲುಬಾಗಿ ನಿಂತ ನನ್ನ ಮುದ್ದಿನ ಅಪ್ಪನಿಗೆ ಫಾದರ್ಸ್‌ ಡೇಯ ಶುಭಾಶಯಗಳು.
  • ಅಪ್ಪಾ… ನನ್ನ ಪಾಲಿಗೆ ನೀವೇ ಸೂಪರ್‌ ಹೀರೋ, ನೀವೇ ರೋಲ್‌ ಮಾಡೆಲ್‌. ನನಗೆ ಚಂದದ ಜೀವನ ನೀಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.
  • ಕೇಳದೆಯೇ ಎಲ್ಲವನ್ನೂ ನೀಡಿದ, ನಿಸ್ವಾರ್ಥ ಪ್ರೀತಿ ತೋರುವ, ಸದಾ ನನ್ನ ಜೊತೆ ನಿಲ್ಲುವ ನನ್ನ ಪ್ರೀತಿಯ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ.
  • ಯಾವಾಗಲೂ ನನ್ನನ್ನು ಬೆಂಬಲಿಸಿದ ಮತ್ತು ನನ್ನ ಕನಸುಗಳನ್ನು ಪ್ರೋತ್ಸಾಹಿಸಿದ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ. ವಿಶ್ವದ ಅತ್ಯುತ್ತಮ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು.
  • ನೀವು ನನ್ನ ಹೀರೋ, ನನ್ನ ಸ್ಪೂರ್ತಿ ಹ್ಯಾಪಿ ಫಾದರ್ಸ್‌ ಡೇ ಅಪ್ಪ. ಈ ಮುದ್ದಿನ ಮಗಳು ಸದಾ ನಿಮ್ಮೊಂದಿಗಿದ್ದಾಳೆ.
  • ನಿಮ್ಮಂಥ ಅಪ್ಪ ಸಿಕ್ಕಿದ್ದು ನನ್ನ ಭಾಗ್ಯ, ನಿಮ್ಮ ಜೊತೆಗಿರುವ ಪ್ರತಿ ಕ್ಷಣವೂ ನನಗೆ ಹಬ್ಬ. ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ.
  • ಅಪ್ಪಾ… ನನ್ನ ಭುಜದ ಮೇಲೆ ಕೈ ಇಟ್ಟು ನೀವು ಹೇಳುವ ಆ ಸ್ಫೂರ್ತಿಯ ಮಾತುಗಳೇ ನನಗೆ ದಾರಿ ದೀಪ. ಹ್ಯಾಪಿ ಫಾದರ್ಸ್‌ ಡೇ ಅಪ್ಪ.
  • ಅಪ್ಪ ಎಂದರೆ ಪ್ರೀತಿಯ ನಿಧಿ, ಅಪ್ಪ ಎಂದರೆ ಮಮತೆಯ ಗಣಿ. ನನ್ನ ಮುದ್ದಿನ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ.
  • ನಮ್ಮ ಒಳಿತಿಗಾಗಿ ನೀವು ಸದಾ ಶ್ರಮಿಸಿದ್ದೀರಿ, ನಮ್ಮ ಖುಷಿಗೆ ನಿಮ್ಮ ಸಮಯವನ್ನು ನೀಡಿದ್ದೀರಿ, ಯಾವಾಗಲೂ ನಮಗೆ ಪ್ರೋತ್ಸಾಹಿಸಿದ್ದೀರಿ, ಬೆಂಬಲವನ್ನು ನೀಡುತ್ತಿದ್ದೀರಿ. ನಿಮ್ಮ ಈ ಪ್ರೀತಿಯೇ ಸುಂದರ ಅಪ್ಪ. ಈ ನಮ್ಮ ತ್ಯಾಗಮಯಿ ಅಪ್ಪನಿಗೆ ತಂದೆಯಂದಿರ ದಿನದ ಶುಭಾಶಯಗಳು.
  • ಸದಾ ದಾರಿ ತೋರುವ ಗುರುವಾಗಿದ್ದೀರಿ, ಗುರಿ ಮುಟ್ಟಿಸುವ ಬೆಳಕಾಗಿದ್ದೀರಿ, ನಿಮ್ಮ ಪ್ರೀತಿ ಜೇನಿಗಿಂತಲೂ ಸಿಹಿ. ಈ ನನ್ನ ಪ್ರೀತಿಯ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು.
  • ನೀವು ದೇವರು ನನಗೆ ಕೊಟ್ಟಂತಹ ಬೆಲೆಬಾಳುವ ಉಡುಗೊರೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ಶ್ರೀರಕ್ಷೆ. ನಿಮಗೆ ತಂದೆಯಂದಿರ ದಿನದ ಶುಭಾಶಯಗಳು.
  • ಬಾಳಿಗೆ ದಾರಿ ದೀಪವಾಗಿ, ಬದುಕುವ ಕಲೆ ಕಲಿಸಿದ ನಮ್ಮ ಪ್ರೀತಿಯ ಅಪ್ಪನಿಗೆ ತಂದೆಯಂದಿರ ದಿನದ ಹಾರ್ದಿಕ ಶುಭಾಶಯಗಳು.
  • ನೀವು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣವ ಹೇಗೆ ತೀರಿಸಲು ಸಾಧ್ಯ. ನೋವನ್ನು ಉಂಡು ನಮಗೆ ಬರಿ ಖುಷಿ, ಸಂತೋಷವನ್ನೇ ನೀಡಿದ ಈ ನನ್ನ ತ್ಯಾಗಮಯಿ ಅಪ್ಪನಿಗೆ ಹ್ಯಾಪಿ ಫಾದರ್ಸ್‌ ಡೇ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲಗಾನ್’ ಸಿನಿಮಾಗೆ 25 ವರ್ಷ: ಚಿತ್ರತಂಡಕ್ಕೆ ಅತ್ಯಮೂಲ್ಯ ಸಲಹೆ ನೀಡಿದ್ದ ಸಚಿನ್ ತೆಂಡುಲ್ಕರ್ – Kannada News | 25 Years of Lagaan: Sachin Tendulkar recalls Wankhede Stadium Crowd Sound connection

ಭಾರತೀಯ ಸಿನಿಮಾ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ‘ಲಗಾನ್’ (Lagaan) ಬಿಡುಗಡೆಯಾಗಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದೆ. ಈ ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಇಡೀ ಚಿತ್ರರಂಗವೇ ಈ ಸಿನಿಮಾವನ್ನು ಮತ್ತೆ ನೆನಪಿಸಿಕೊಳ್ಳುತ್ತಿದೆ. ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಕೂಡ ಈ ಚಿತ್ರದೊಂದಿಗಿನ ತಮ್ಮ ಅಪರೂಪದ ತೆರೆಮರೆಯ ಸಂಪರ್ಕವನ್ನು ನೆನಪು ಮಾಡಿಕೊಂಡಿದ್ದಾರೆ. ಆಮಿರ್ ಖಾನ್ ನಟನೆಯ ಈ ಸಿನಿಮಾ ತಂಡಕ್ಕೆ ಸಚಿನ್ ಅವರು ಒಂದು ಸಲಹೆಯನ್ನು ನೀಡಿದ್ದರು.

ಆಶುತೋಷ್ ಗೋವಾರಿಕರ್ ನಿರ್ದೇಶನದ, ಆಮಿರ್ ಖಾನ್ ನಿರ್ಮಾಣದ ಈ ಕ್ರೀಡಾ ಆಧಾರಿತ, ದೇಶಭಕ್ತಿ ಕಥಾಹಂದರದ ಸಿನಿಮಾ 2001ರಲ್ಲಿ ತೆರೆಕಂಡು ಇತಿಹಾಸ ಸೃಷ್ಟಿಸಿತ್ತು. ಬ್ರಿಟಿಷರ ಕಾಲಘಟ್ಟದ ಕಥೆ ಹೊಂದಿದ್ದ ಈ ಚಿತ್ರದಲ್ಲಿ, ಗ್ರಾಮಸ್ಥರು ಭಾರಿ ತೆರಿಗೆಯಿಂದ ಮುಕ್ತಿ ಪಡೆಯಲು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಕ್ರಿಕೆಟ್ ಪಂದ್ಯದ ಸವಾಲನ್ನು ಗೆಲ್ಲಬೇಕಾದ ರೋಮಾಂಚನಕಾರಿ ಕಹಾನಿಯನ್ನು ತೋರಿಸಲಾಗಿತ್ತು.

ಇತ್ತೀಚಿನ ಸಂವಾದವೊಂದರಲ್ಲಿ ಸಚಿನ್ ತೆಂಡುಲ್ಕರ್ ಅವರು, ಸಿನಿಮಾದ ಶೂಟಿಂಗ್ ಹಂತದಲ್ಲಿ ನಡೆದ ಒಂದು ಆಸಕ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದಾರೆ. ‘ಲಗಾನ್’ ಚಿತ್ರದ ಕ್ರಿಕೆಟ್ ಪಂದ್ಯಗಳ ದೃಶ್ಯಗಳಿಗಾಗಿ ನೈಜವಾದ ವೀಕ್ಷಕರ ಧ್ವನಿಗಾಗಿ ನಿರ್ದೇಶಕರು ಹುಡುಕಾಟ ನಡೆಸುತ್ತಿದ್ದಾಗ ತಾವು ನೆರವಾಗಿದ್ದನ್ನು ಸಚಿನ್ ನೆನಪಿಸಿಕೊಂಡಿದ್ದಾರೆ.

ಸಚಿನ್ ತೆಂಡುಲ್ಕರ್ ವಿಡಿಯೋ:

ಆ ದಿನಗಳನ್ನು ನೆನೆದ ಸಚಿನ್, ‘ಚಿತ್ರ ಬಿಡುಗಡೆಯಾಗುವ ಎರಡು ವರ್ಷಗಳ ಮೊದಲು, ನಿರ್ದೇಶಕರು ನನ್ನ ಬಳಿ ಬಂದು ಸ್ಟೇಡಿಯಂನಲ್ಲಿ ನೈಜವಾಗಿ ಕೇಳಿಸುವ ವೀಕ್ಷಕರ ಧ್ವನಿ ಎಲ್ಲಿ ಸಿಗಬಹುದು ಎಂದು ಕೇಳಿದ್ದರು. ನಾವು ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಆಡುತ್ತಿದ್ದೇವೆ. ನೀವೇಕೆ ನೇರವಾಗಿ ವಾಂಖೆಡೆ ಸ್ಟೇಡಿಯಂಗೆ ಬಂದು ಅಲ್ಲಿನ ಲೈವ್ ಆಡಿಯೋ ರೆಕಾರ್ಡ್ ಮಾಡಿಕೊಳ್ಳಬಾರದು ಅಂತ ನಾನು ಸಲಹೆ ನೀಡಿದ್ದೆ’ ಎಂದು ಹೇಳಿದ್ದಾರೆ. ಅದರಂತೆಯೇ ಚಿತ್ರತಂಡ ಸ್ಟೇಡಿಯಂ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡು ಸಿನಿಮಾದಲ್ಲಿ ಬಳಸಿಕೊಂಡಿತ್ತು.

ಇದನ್ನೂ ಓದಿ: ‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್

ಅಷ್ಟೇ ಅಲ್ಲದೆ, ತಮ್ಮ ಮಗ ಅರ್ಜುನ್ ತೆಂಡುಲ್ಕರ್ ಚಿಕ್ಕವನಿದ್ದಾಗ ಪ್ರತಿ ಸಂಜೆ ಕ್ರಿಕೆಟ್ ಆಡಿ ಬಂದ ನಂತರ ಊಟ ಮಾಡುವಾಗ ‘ಲಗಾನ್’ ಚಿತ್ರವನ್ನು ಟಿವಿಯಲ್ಲಿ ನೋಡುತ್ತಿದ್ದ ದಿನಗಳಲ್ಲಿ ಸಚಿನ್ ನೆನಪಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಈ ಚಿತ್ರದ ಹಾಡುಗಳು ಇಂದಿಗೂ ತಮ್ಮ ಇಡೀ ಕುಟುಂಬಕ್ಕೆ ಖುಷಿ ನೀಡುತ್ತವೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bheema Ekadashi 2026: ನಿರ್ಜಲ ಏಕಾದಶಿ; ಒಂದೇ ದಿನದ ಕಠಿಣ ವ್ರತದಿಂದ ಸಿಗಲಿದೆ 26 ಏಕಾದಶಿಗಳ ಮಹಾ ಪುಣ್ಯ ಫಲ! – Kannada News | Bheema Ekadashi 2026: Significance, Rituals and Benefits of Nirjala Vrat for Al

ವೈಷ್ಣವ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಸ್ಥಾನ ಪಡೆದಿರುವ ಉಪವಾಸ ಎಂದರೆ ಅದು ‘ನಿರ್ಜಲ ಏಕಾದಶಿ’. ಶ್ರೀಮನ್ನಾರಾಯಣನಿಗೆ ಅರ್ಪಿತವಾದ ಈ ಶ್ರೇಷ್ಠ ವ್ರತದ ಉಲ್ಲೇಖಗಳು ವಿಷ್ಣು ಪುರಾಣ ಸೇರಿದಂತೆ ಸನಾತನ ಧರ್ಮದ ಹಲವು ಪ್ರಮುಖ ಗ್ರಂಥಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಆದರೆ, ಅಧಿಕ ಮಾಸ ಬರುವ ವರ್ಷಗಳಲ್ಲಿ ಈ ಸಂಖ್ಯೆ 26ಕ್ಕೆ ಏರುತ್ತದೆ. ಈ ಎಲ್ಲಾ ಏಕಾದಶಿಗಳಲ್ಲಿ ಜ್ಯೇಷ್ಠ ಮಾಸದ ಶುಕ್ಲ ಪಕ್ಷದಲ್ಲಿ ಬರುವ ‘ನಿರ್ಜಲ ಏಕಾದಶಿ’ ಅತ್ಯಂತ ಮಂಗಳಕರ ಹಾಗೂ ಆಧ್ಯಾತ್ಮಿಕವಾಗಿ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.

ಭೀಮನಿಗಾಗಿಯೇ ಮೂಡಿಬಂದ ವ್ರತದ ಹಿನ್ನೆಲೆ:

ಧಾರ್ಮಿಕ ನಂಬಿಕೆಗಳ ಪ್ರಕಾರ, ನಿರ್ಜಲ ಏಕಾದಶಿ ಉಪವಾಸವನ್ನು ನಿಗದಿತ ನಿಯಮಗಳೊಂದಿಗೆ ಆಚರಿಸುವುದರಿಂದ ವರ್ಷದ ಉಳಿದೆಲ್ಲಾ ಏಕಾದಶಿ ವ್ರತಗಳನ್ನು ಆಚರಿಸಿದಷ್ಟೇ ಪುಣ್ಯ ಲಭಿಸುತ್ತದೆ. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಒಬ್ಬನಾದ ಭೀಮನಿಗೆ ತನ್ನ ಅತಿಯಾದ ಹಸಿವಿನ ಕಾರಣದಿಂದಾಗಿ ಪ್ರತಿ ತಿಂಗಳೂ ಬರುವ ಏಕಾದಶಿ ಉಪವಾಸಗಳನ್ನು ಆಚರಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ವ್ಯಾಸ ಮಹರ್ಷಿಗಳು ಭೀಮನಿಗೆ ಇಡೀ ವರ್ಷದ ಏಕಾದಶಿಗಳ ಫಲವನ್ನು ಒಂದೇ ದಿನದಲ್ಲಿ ಪಡೆಯಲು ಜ್ಯೇಷ್ಠ ಮಾಸದ ಈ ನಿರ್ಜಲ ಏಕಾದಶಿಯನ್ನು ಆಚರಿಸಲು ಸೂಚಿಸಿದರು. ಈ ಕಾರಣದಿಂದಾಗಿಯೇ ಇದಕ್ಕೆ ‘ಭೀಮ ಏಕಾದಶಿ’ ಅಥವಾ ‘ಪಾಂಡವ ಏಕಾದಶಿ’ ಎಂಬ ಹೆಸರೂ ಇದೆ.

ನೀರಿಲ್ಲದ ಕಠಿಣ ಉಪವಾಸದ ಮಹತ್ವ:

ಹೆಸರೇ ಸೂಚಿಸುವಂತೆ ‘ನಿರ್ಜಲ’ ಎಂದರೆ ನೀರಿಲ್ಲದೆ ಇರುವುದು. ಈ ಉಪವಾಸವನ್ನು ಅತ್ಯಂತ ಕಠಿಣವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ವ್ರತದ ದಿನದಂದು ಭಕ್ತರು ಅನ್ನ-ಆಹಾರ ಮಾತ್ರವಲ್ಲದೆ, ಕನಿಷ್ಠ ಒಂದು ಹನಿ ನೀರನ್ನೂ ಸಹ ಸೇವಿಸದೆ ಸಂಪೂರ್ಣ ಉಪವಾಸ ಮಾಡಬೇಕಾಗುತ್ತದೆ. ಜ್ಯೇಷ್ಠ ಮಾಸದ ಕಡು ಬೇಸಿಗೆಯ ಸಮಯದಲ್ಲಿ ನೀರನ್ನೂ ಕುಡಿಯದೆ ಇಂತಹ ಕಠಿಣ ನಿಯಮವನ್ನು ಪಾಲಿಸುವುದು ಭಕ್ತರ ಮಾನಸಿಕ ಶಿಸ್ತು, ಧೃಢತೆ ಮತ್ತು ಭಗವಂತನ ಮೇಲಿರುವ ಅಚಲ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

2026ರ ನಿರ್ಜಲ ಏಕಾದಶಿಯ ವಿಶೇಷತೆ ಏನು?

2026ನೇ ವರ್ಷದಲ್ಲಿ ನಿರ್ಜಲ ಏಕಾದಶಿಯನ್ನು ಜೂನ್ 25 ರಂದು ಆಚರಿಸಲಾಗುತ್ತಿದೆ. ಈ ವರ್ಷದ ವಿಶೇಷತೆಯೆಂದರೆ, ಜ್ಯೇಷ್ಠ ಮಾಸದಲ್ಲಿ ‘ಅಧಿಕ ಮಾಸ’ ಸಂಭವಿಸಿದೆ. ಈ ಅಧಿಕ ಮಾಸದಲ್ಲಿ ಬರುವ ಪದ್ಮಿನಿ ಏಕಾದಶಿ ಮತ್ತು ಪರಮ ಏಕಾದಶಿಗಳನ್ನು ಸಹ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಎರಡು ವಿಶೇಷ ಏಕಾದಶಿಗಳ ಪುಣ್ಯವೂ ಸಹ ನಿರ್ಜಲ ಏಕಾದಶಿಯನ್ನು ಆಚರಿಸುವುದರಿಂದಲೇ ಸಿಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ಈ ವರ್ಷ ನಿರ್ಜಲ ಏಕಾದಶಿ ವ್ರತವನ್ನು ಶ್ರದ್ಧೆಯಿಂದ ಆಚರಿಸುವ ಭಕ್ತರಿಗೆ ಒಟ್ಟು 26 ಏಕಾದಶಿಗಳ ಮಹಾ ಪುಣ್ಯ ಫಲ ಪ್ರಾಪ್ತಿಯಾಗಲಿದೆ ಎಂದು ವಿದ್ವಾಂಸರು ಹೇಳುತ್ತಾರೆ.

ನಿರ್ಜಲ ಏಕಾದಶಿ ವ್ರತದ ದಿವ್ಯ ಫಲಗಳು:

ಇಡೀ ವರ್ಷದ ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಸಾಧ್ಯವಾಗದವರಿಗೆ ಧರ್ಮಶಾಸ್ತ್ರಗಳು ಈ ಒಂದು ನಿರ್ಜಲ ಏಕಾದಶಿಯನ್ನು ಭಕ್ತಿಯಿಂದ ಆಚರಿಸಲು ನಿರ್ದೇಶಿಸುತ್ತವೆ. ಈ ಪವಿತ್ರ ದಿನದಂದು ಶ್ರೀ ಮಹಾವಿಷ್ಣುವನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು ಹಾಗೂ ವಿಷ್ಣು ಸಹಸ್ರನಾಮ ಸೇರಿದಂತೆ ಭಗವಂತನ ನಾಮಸ್ಮರಣೆ ಮತ್ತು ಜಪವನ್ನು ಮಾಡಬೇಕು. ಸಾಧ್ಯವಾದರೆ, ರಾತ್ರಿಯಿಡೀ ನಿದ್ದೆಗೆಟ್ಟು ‘ಜಾಗರಣೆ’ ಮಾಡುವುದು ಅತ್ಯಂತ ಶ್ರೇಷ್ಠ. ಈ ರೀತಿ ನಿಯಮಬದ್ಧವಾಗಿ ವ್ರತ ಮುಗಿಸುವವರಿಗೆ ಸರ್ವ ಪಾಪಗಳು ನಾಶವಾಗಿ, ಕುಟುಂಬದಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಅಂತಿಮವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಪುರಾಣಗಳು ಹೇಳುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತಾರಾಷ್ಟ್ರೀಯ ಯೋಗ ದಿನ :30 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ – Kannada News | Kolkatas Red Road: 30K Join PM Modi for Yoga Day 2026, Emphasising Holistic Health

ಕೋಲ್ಕತ್ತಾ, ಜೂನ್ 21: ಪ್ರಧಾನಿ ನರೇಂದ್ರ ಮೋದಿ ಇಂದು ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ 30 ಸಾವಿರ ಜನರೊಂದಿಗೆ ಯೋಗಾಭ್ಯಾಸ ಮಾಡಿದರು. ಯೋಗ ಎಲ್ಲರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಇಡೀ ದೇಶ ಯೋಗದ ಶಕ್ತಿಯಿಂದ ಚೈತನ್ಯಭರಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೋಲ್ಕತ್ತಾದ ಜನತೆ ಸ್ವಚ್ಛತೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ಶ್ಲಾಘಿಸಿದರು.

ಪ್ರಧಾನಿ ಮೋದಿ ಅವರು ಬಂಗಾಳದ ಪವಿತ್ರ ಭೂಮಿಗೆ ಭಗವಾನ್ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಮತ್ತು ಲಹರಿ ಮಹಾಶಯರಂತಹ ಮಹಾನ್ ಯೋಗಿಗಳ ಕೊಡುಗೆಯನ್ನು ಸ್ಮರಿಸಿದರು. ಯೋಗ ಕೇವಲ ದೈಹಿಕ ಶ್ರಮವಲ್ಲ, ಅದು ಮಾನವ ಜೀವನದ ಸಮತೋಲನಕ್ಕೆ ದಾರಿ ತೋರಿಸುತ್ತದೆ. ಯೋಗವು ಯಾವುದೇ ವಯಸ್ಸಿನ ಮಿತಿಯಿಲ್ಲದೆ, ಉತ್ತಮ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ ಎಂದು ತಿಳಿಸಿದರು. ಭಗವದ್ಗೀತೆಯ ಉಲ್ಲೇಖದೊಂದಿಗೆ, ಯೋಗವು ದುಃಖಗಳನ್ನು ನಾಶಮಾಡಿ ಸಂತುಲಿತ ಜೀವನವನ್ನು ಕಲಿಯಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2 ಪಂದ್ಯಗಳು ಬಾಕಿ ಇರುವಾಗಲೇ ಪಾಕ್ ತಂಡದ ವಿಶ್ವಕಪ್ ಕನಸು ನುಚ್ಚುನೂರು! – Kannada News | Pakistan Eliminated From Women’s T20 World Cup 2026

ಮಹಿಳಾ ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಹೊರಬಿದ್ದಿದೆ. ಸೌತಾಂಪ್ಟನ್‌ನ ಆ್ಯಜಿಯಾಸ್ ಬೌಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 23 ರನ್​ಗಳ ಆಘಾತಕಾರಿ ಸೋಲಿನೊಂದಿಗೆ ಪಾಕ್ ಪಡೆಯ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

  • ಮೊದಲ ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 123 ರನ್​ಗಳು ಮಾತ್ರ.
  • 124 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡ 20 ಓವರ್​ಗಳಲ್ಲಿ ಕೇವಲ 100 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಈ ಮೂಲಕ ಬಾಂಗ್ಲಾದೇಶ್ ತಂಡವು 23 ರನ್​ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್​ ರೇಸ್​ನಲ್ಲಿ ಉಳಿದುಕೊಂಡಿದೆ. ಅತ್ತ ಬಾಂಗ್ಲಾ ವಿರುದ್ಧ ಹೀನಾಯವಾಗಿ ಸೋತಿರುವ ಪಾಕಿಸ್ತಾನ್ ತಂಡವು ಕೊನೆಯ ಎರಡು ಪಂದ್ಯಗಳಿರುವಾಗಲೇ ಟೂರ್ನಿಯಿಂದ ಹೊರಬಿದ್ದಿದೆ.

2 ಪಂದ್ಯಗಳು ಬಾಕಿ ಇರುವಾಗಲೇ ಹೊರಬಿದ್ದಿದ್ದೇಗೆ?

ಮಹಿಳಾ ಟಿ20 ವಿಶ್ವಕಪ್‌ ನಿಯಮಾವಳಿಗಳ ಪ್ರಕಾರ, ಪ್ರತಿ ಗ್ರೂಪ್‌ನಿಂದ ಕೇವಲ 2 ತಂಡಗಳು ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅದರಂತೆ ಲೀಗ್​ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್​ಗೇರಲಿದೆ.

ಇತ್ತ ಮೊದಲ ಮೂರು ಮ್ಯಾಚ್​ಗಳಲ್ಲೂ ಸೋಲನುಭವಿಸಿರುವ ಪಾಕಿಸ್ತಾನ್ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೂ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (6 ಅಂಕಗಳು) ತಂಡವನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಹಾಗೆಯೇ ಭಾರತ (4 ಅಂಕಗಳು) ತಂಡದ ನೆಟ್​ ರನ್ ರೇಟ್ ಮೀರಿ ದ್ವಿತೀಯ ಸ್ಥಾನಕ್ಕೇರಲು ಕೂಡ ಸಾಧ್ಯವಾಗುವುದಿಲ್ಲ.

ಏಕೆಂದರೆ ಪಾಕಿಸ್ತಾನದ ನೆಟ್​ ರನ್ ರೇಟ್​ -1.857 ನಲ್ಲಿದ್ದರೆ, ಭಾರತ ತಂಡ +3.975 ಬಲಿಷ್ಠ ನೆಟ್ ರನ್ ರೇಟ್ ಹೊಂದಿದೆ. ಇದರಿಂದ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದರೂ ಪಾಕ್ ಪಡೆಗೆ ಟೀಮ್ ಇಂಡಿಯಾವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಕ್ಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಪಂದ್ಯಗಳಿಗೂ ಮುನ್ನವೇ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಟಿ20 ವಿಶ್ವಕಪ್​ನಿಂದ ಹೊರಬಿದ್ದಂತಾಗಿದೆ.

ಪಾಕಿಸ್ತಾನ್ ತಂಡದ ಹ್ಯಾಟ್ರಿಕ್ ಸೋಲು:

  •  14 ಜೂನ್ 2026: ಭಾರತದ ವಿರುದ್ಧ 64 ರನ್‌ಗಳ ಹೀನಾಯ ಸೋಲು.
  •  17 ಜೂನ್ 2026: ಸೌತ್ ಆಫ್ರಿಕಾ ವಿರುದ್ಧ 2 ವಿಕೆಟ್‌ಗಳ ರೋಚಕ ಸೋಲು.
  • 20 ಜೂನ್ 2026: ಬಾಂಗ್ಲಾದೇಶ್ ವಿರುದ್ಧ 23 ರನ್‌ಗಳ ಆಘಾತಕಾರಿ ಸೋಲು.

ಇದನ್ನೂ ಓದಿ: 90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್: ರೋಚಕ ಘಟ್ಟದಲ್ಲಿ ENG vs NZ ಟೆಸ್ಟ್

ಈ ಮೂರು ಸೋಲುಗಳೊಂದಿಗೆ ಪಾಕಿಸ್ತಾನ್ ತಂಡದ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಇನ್ನು ಜೂನ್ 23 ರಂದು ಆಸ್ಟ್ರೇಲಿಯಾ ಹಾಗೂ ಜೂನ್ 27 ರಂದು ನೆದರ್ಲ್ಯಾಂಡ್ಸ್ ತಂಡಗಳ ವಿರುದ್ಧ ಪಾಕಿಸ್ತಾನ್ ಔಪಚಾರಿಕ ಪಂದ್ಯಗಳನ್ನಾಡಿ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಲಿದೆ.

Source link

90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್: ರೋಚಕ ಘಟ್ಟದಲ್ಲಿ ENG vs NZ ಟೆಸ್ಟ್ – Kannada News | England vs New Zealand, 2nd Test: 4th Day Highlights

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ತಲುಪಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಜೋ ರೂಟ್ ಬೌಲಿಂಗ್ ಆಯ್ದುಕೊಂಡಿದ್ದರು.

  • ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 391 ರನ್​ ಕಲೆಹಾಕಿತು.
  • ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು 291 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.
  • ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ತಂಡವು 362 ರನ್​ ಪೇರಿಸಿತು.
  • ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಹಿನ್ನಡೆಯೊಂದಿಗೆ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 463 ರನ್​ಗಳ ಗುರಿ ಪಡೆದುಕೊಂಡಿದೆ.

463 ರನ್​ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಆರಂಭಿಕರಾದ ಬೆನ್ ಡಕೆಟ್ (9) ಹಾಗೂ ಎಮಿಲಿಯೊ ಗೇ (11) ಬೇಗನೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್ (0) ಶೂನ್ಯಕ್ಕೆ ಔಟಾಗಿದ್ದಾರೆ.

ಈ ಹಂತದಲ್ಲಿ ಜೊತೆಗೂಡಿದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಅದು ರಕ್ಷಣಾತ್ಮಕ ಆಟದೊಂದಿಗೆ ಅಲ್ಲ ಎಂಬುದು ವಿಶೇಷ. ಮೂರು ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್​ಗಿಳಿದ ಬ್ರೂಕ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ಕೌಂಟರ್ ಅಟ್ಯಾಕ್ ಮಾಡಿದರು.

ಈ ಮೂಲಕ ಕೇವಲ 54 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ 58 ರನ್ ಬಾರಿಸಿದರು. ಈ ಬಿರುಸಿನ ಬ್ಯಾಟಿಂಗ್​ ಮುಂದುವರೆಸಲು ಮುಂದಾದ ಪರಿಣಾಮ ಬ್ರೂಕ್ ಔಟಾದರು. ಆ ಬಳಿಕ ಬಂದ ಜೇಮ್ಸ್ ರಿವ್ (15) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು.

ಇದಾಗ್ಯೂ ಮತ್ತೊಂದೆಡೆ ಕ್ಲಾಸಿಕಲ್ ಟೆಸ್ಟ್ ಆಡಿದ ಜೋ ರೂಟ್ ಏಕಾಂಗಿ ಹೋರಾಟ ಮುಂದುವರೆಸಿದ್ದಾರೆ. ಅದರಂತೆ 4ನೇ ದಿನದಾಟದ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 182 ರನ್​ ಕಲೆಹಾಕಿದೆ.

ಸದ್ಯ ಕ್ರೀಸ್​ನಲ್ಲಿ 137 ಎಸೆತಗಳಲ್ಲಿ 8 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿರುವ ಜೋ ರೂಟ್ ಹಾಗೂ ಜೋರ್ಡನ್ ಕಾಕ್ಸ್ 5ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್:

  • ಕೊನೆಯ ದಿನದಾಟದ 90 ಓವರ್​ಗಳಲ್ಲಿ ಇಂಗ್ಲೆಂಡ್ ತಂಡವು ಗೆಲ್ಲಲು 281 ರನ್​ ಕಲೆಹಾಕಬೇಕಿದೆ.
  • ನ್ಯೂಝಿಲೆಂಡ್ ತಂಡವು ಈ ಪಂದ್ಯದಲ್ಲಿ ಜಯ ಸಾಧಿಸಬೇಕಿದ್ದರೆ 5 ವಿಕೆಟ್ ಪಡೆದರೆ ಸಾಕು.

ಅಂದರೆ ಅಂತಿಮ ದಿನದಾಟದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಕ್ರೀಸ್​ನಲ್ಲಿ ಜೋ ರೂಟ್ ಇರುವುದರಿಂದ ಇಂಗ್ಲೆಂಡ್ ಕಡೆಯಿಂದ ದಿಟ್ಟ ಹೋರಾಟವನ್ನು ಎದುರು ನೋಡಬಹುದು. ಅದರಂತೆ ಈ ಪಂದ್ಯವು ಡ್ರಾ ಆಗಲಿದೆಯಾ? ನ್ಯೂಝಿಲೆಂಡ್ ಗೆಲ್ಲಲಿದೆಯಾ? ಅಥವಾ ಇಂಗ್ಲೆಂಡ್ ಜಯಭೇರಿ ಬಾರಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಎಮಿಲಿಯೊ ಗೇ , ಜೇಕಬ್ ಬೆಥೆಲ್ , ಜೋ ರೂಟ್ (ನಾಯಕ) , ಹ್ಯಾರಿ ಬ್ರೂಕ್ ,
ಜೇಮ್ಸ್ ರೆವ್ (ವಿಕೆಟ್ ಕೀಪರ್) , ಜೋರ್ಡನ್ ಕಾಕ್ಸ್ , ಜೋಫ್ರಾ ಆರ್ಚರ್ , ಜೋಶ್ ಟಂಗ್ , ಮ್ಯಾಥ್ಯೂ ಫಿಶರ್ , ಸೋನಿ ಬೇಕರ್.

ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ!

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡೆರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ , ವಿಲಿಯಂ ಒರೋಕ್.

Source link

ನೀವು 30ಕ್ಕಿಂತ 50ನೇ ವಯಸ್ಸಿನಲ್ಲಿ ಹೆಚ್ಚು ಚೈತನ್ಯಶೀಲರಾಗಿರಿ: ಪ್ರಧಾನಿ ಮೋದಿ – Kannada News | International Yoga Day 2026 Age Is Just a Number PM Modi Urges People to Stay More Energetic at 50 Than at 30

ಕೋಲ್ಕತ್ತಾ, ಜೂನ್ 21: ನೀವು 30ಕ್ಕಿಂತ 50ನೇ ವಯಸ್ಸಿನಲ್ಲಿ ಹೆಚ್ಚು ಚೈತನ್ಯಶೀಲರಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ. ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರೊಂದಿಗೆ ಜಂಟಿಯಾಗಿ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದರು.

ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ವಿಶೇಷ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ವಯಸ್ಸಾಗುತ್ತಿದ್ದಂತೆ ಜನರು ಎದುರಿಸುವ ಆರೋಗ್ಯದ ಸವಾಲುಗಳನ್ನು ಯೋಗದ ಮೂಲಕ ಹೇಗೆ ಮೆಟ್ಟಿ ನಿಲ್ಲಬಹುದು ಎಂಬುದನ್ನು ಈ ಧ್ಯೇಯವಾಕ್ಯವು ಸಾರುತ್ತದೆ.

ವಯಸ್ಸಾದಂತೆ ದೇಹದ ನಮ್ಯತೆ (Flexibility) ಮತ್ತು ಮೂಳೆಗಳ ಬಲವನ್ನು ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ. ವೃದ್ಧಾಪ್ಯದಲ್ಲಿ ಕಾಡುವ ಮರೆವು, ಆತಂಕ ಹಾಗೂ ಒಂಟಿತನವನ್ನು ದೂರ ಇಟ್ಟು ಮಾನಸಿಕ ನೆಮ್ಮದಿ ನೀಡಲು ಯೋಗ ನೆರವಾಗುತ್ತದೆ.

ಮತ್ತಷ್ಟು ಓದಿ: International Yoga Day: ಈ ಬಾರಿ ಕೊಲ್ಕತ್ತಾದಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಕಾರಣವೇನು?

ಜೀವನದ ಕೊನೆಯ ಹಂತದಲ್ಲಿ ಎದುರಾಗುವ ಏರಿಳಿತಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಯೋಗ ತುಂಬುತ್ತದೆ. ಹಿರಿಯ ನಾಗರಿಕರು ಯಾರ ಮೇಲೂ ಅವಲಂಬಿತರಾಗದೆ, ತಾವೇ ಸಕ್ರಿಯವಾಗಿ ಮತ್ತು ಉತ್ಸಾಹದಿಂದ ಬದುಕಲು ಯೋಗ ಉತ್ತೇಜನ ನೀಡುತ್ತದೆ. ವಯಸ್ಸಾದ ಮೇಲೂ ಯೌವನದ ಚೈತನ್ಯವನ್ನು ಉಳಿಸಿಕೊಳ್ಳಲು ಯೋಗ ಎಷ್ಟು ಮುಖ್ಯ ಎಂಬುದನ್ನು ಪ್ರಧಾನಿ ಮೋದಿ ಅವರು ಸ್ವತಃ ಯೋಗಾಸನಗಳನ್ನು ಮಾಡುವ ಮೂಲಕ ದೇಶದ ಜನರಿಗೆ ತೋರಿಸಿಕೊಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜೈಲಿಗೆ ಹೋಗಲಿರುವ ಪ್ರಭಾಸ್; ಆದರೆ ಅಭಿಮಾನಿಗಳಿಗೆ ಆತಂಕ ಬೇಡ – Kannada News | Prabhas starrer Spirit movie shooting to take place at Chanchalguda Jail

ಪ್ಯಾನ್-ಇಂಡಿಯಾ ಸ್ಟಾರ್ ನಟ ಪ್ರಭಾಸ್ (Prabhas) ಅವರು ಈಗ ‘ಸ್ಪಿರಿಟ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾಗೆ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಆ್ಯಕ್ಷನ್-ಕಟ್ ಹೇಳಿರುವುದರಿಂದ ನಿರೀಕ್ಷೆ ಜಾಸ್ತಿ ಇದೆ. ಈ ನಡುವೆ ಪ್ರಭಾಸ್ ಅವರು ಜೈಲಿಗೆ ಹೋಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಅಂದರೆ, ಅವರು ಜೈಲಿನ ಒಳಗೆ ಕಾಲಿಟ್ಟಿರುವುದು ‘ಸ್ಪಿರಿಟ್’ (Spirit) ಸಿನಿಮಾದ ಶೂಟಿಂಗ್ ಸಲುವಾಗಿ! ಅದಕ್ಕಾಗಿ ಚಿತ್ರತಂಡ ಸಂಪೂರ್ಣ ತಯಾರಿ ಮಾಡಿಕೊಂಡಿದೆ.

ಚಿತ್ರರಂಗದ ಲೇಟೆಸ್ಟ್ ಮಾಹಿತಿ ಪ್ರಕಾರ, ‘ಸ್ಪಿರಿಟ್’ ಚಿತ್ರದ ಅತ್ಯಂತ ಪ್ರಮುಖ ದೃಶ್ಯಗಳ ಚಿತ್ರೀಕರಣ ಹೈದರಾಬಾದ್‌ನ ಪ್ರಸಿದ್ಧ ಚಂಚಲಗೂಡ ಜೈಲಿನಲ್ಲಿ ನಡೆಯುತ್ತಿದೆ. ಪ್ರಭಾಸ್ ಈ ಶೂಟಿಂಗ್ ಶೆಡ್ಯೂಲ್‌ನಲ್ಲಿ ಭಾಗವಹಿಸಲಿದ್ದು, ಪ್ರಮುಖ ಆ್ಯಕ್ಷನ್ ಹಾಗೂ ಹೈ-ವೋಲ್ಟೇಜ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ಈ ಜೈಲು ಶೆಡ್ಯೂಲ್ ಮುಗಿದ ಬೆನ್ನಲ್ಲೇ ಚಿತ್ರತಂಡ ತನ್ನ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗಲಿದೆ.

ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ಬಾಲಿವುಡ್ ನಟಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದು, ವಿವೇಕ್ ಒಬೆರಾಯ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಹಿರಿಯ ನಟಿ ಕಾಂಚನಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ ನಿರ್ದೇಶನವಿರುವ ಈ ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಚಿತ್ರವು 2027ರ ಮಾರ್ಚ್ 5ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಂದೀಪ್ ರೆಡ್ಡಿ ವಂಗಾ ಇನ್​ಸ್ಟಾಗ್ರಾಮ್ ಪೋಸ್ಟ್:

ದಿನದಿಂದ ದಿನಕ್ಕೆ ‘ಸ್ಪಿರಿಟ್’ ಸಿನಿಮಾ ಭಾರಿ ಸೌಂಡ್ ಮಾಡುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ತಮ್ಮದೇ ಶೈಲಿಯ ಸಿನಿಮಾಗಳಿಂದ ಗುರುತಿಸಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ ಅವರು ಪ್ರಭಾಸ್ ಅವರನ್ನು ಈ ಬಾರಿ ಡಿಫರೆಂಟ್ ಆಗಿ ತೋರಿಸಲಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಬಿಡುಗಡೆಗೆ ರೆಡಿಯಾದ ನಟ ಪ್ರಭಾಸ್?

ಇತ್ತೀಚೆಗಷ್ಟೇ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಚಿತ್ರದ ರಹಸ್ಯಮಯ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್ ಮತ್ತು ಸಂದೀಪ್ ಇಬ್ಬರ ನೆರಳು ಕಾಣಿಸುತ್ತಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version