ಪಿಲಿಚಂಡಿ ದೈವದ ಕಾರ್ಣಿಕ ಕಂಡು ಭಕ್ತರು ಶಾಕ್Image Credit source: tv9
ಮಂಗಳೂರು, ಫೆಬ್ರವರಿ 17: ಕರಾವಳಿಯಲ್ಲಿ (Coastal Karnataka) ಮತ್ತೆ ದೈವದ ಕಾರ್ಣಿಕದ ಕಂಡು ಭಕ್ತರು ಚಕಿತರಾಗಿದ್ದಾರೆ. ಮಂಗಳೂರಿನ (Mangalore) ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆ ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದ ದೃಶ್ಯ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ನೇಮೋತ್ಸವದ ಸಂದರ್ಭದಲ್ಲಿ ಪಿಲಿಚಂಡಿ ದೈವಕ್ಕೆ ಗಗ್ಗರ ಇಡುವಾಗ ದೈವಸ್ಥಾನ ಪ್ರದೇಶದಲ್ಲಿ ಏಕಾಏಕಿ ದೊಡ್ಡ ಸದ್ದು ಕೇಳಿಬಂದಿದ್ದು, ಸಿಡಿತದಂತಿದ್ದ ಶಬ್ದದಿಂದ ಅಲ್ಲಿದ್ದವರು ಕ್ಷಣಕಾಲ ಆತಂಕಗೊಂಡರು. ಬಳಿಕ ನೋಡಿದಾಗ ನೇಮೋತ್ಸವ ನಡೆಯುತ್ತಿದ್ದ ಸ್ಥಳದ ಮುಂಭಾಗದಲ್ಲಿರುವ ಹೊಳ್ಳರ ಚಾವಡಿಯಲ್ಲಿದ್ದ ದೈವದ ತೂಗುಯ್ಯಾಲೆ ತನ್ನಿಂದ ತಾನೇ ತೂಗುತ್ತಿರುವುದು ಕಂಡು ಭಕ್ತರು ಆಶ್ಚರ್ಯಕ್ಕೊಳಗಾದರು.
ದೈವದ ಕಾರ್ಣಿಕದ ವಿಡಿಯೋ ಇಲ್ಲಿ ನೋಡಿ
ಉಯ್ಯಾಲೆ ರೀತಿಯ ದೈವದ ಮಂಚದಲ್ಲಿ ಪಿಲಿಚಂಡಿ ದೈವ ತನ್ನ ಕಾರಣಿಕ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಭಕ್ತರು ನಂಬಿಕೆ ವ್ಯಕ್ತಪಡಿಸಿದ್ದಾರೆ. ನೇಮೋತ್ಸವದ ಸಂದರ್ಭದಲ್ಲಿ ನಡೆದ ಈ ಘಟನೆಗೆ ಸಾಕ್ಷಿಯಾದ ಭಕ್ತರು, ದೈವ ಪವಾಡವನ್ನು ಕಣ್ಣಾರೆ ಕಂಡ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೈವದ ಗಗ್ಗರ ಕಟ್ಟಲು ಕಾಲುಗಳೇ ಇಲ್ಲ: ದೈವ ನರ್ತಕನಿಗೆ ಆಸರೆಯಾದ ಕೃತಕ ಕಾಲು
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ದೈವಸ್ಥಾನಕ್ಕೆ ಹರಿದುಬಂದಿದ್ದು, ದೈವದ ಕಾರ್ಣಿಕ ಕಂಡು ಪುಳಕಿತರಾಗಿದ್ದಾರೆ. ಕರಾವಳಿ ಭಾಗದಲ್ಲಿ ದೈವ ನೇಮೋತ್ಸವಗಳ ವೇಳೆ ಇಂತಹ ಅಚ್ಚರಿಯ ಘಟನೆಗಳು ನಡೆದಿರುವ ಉದಾಹರಣೆಗಳು ಇದಕ್ಕೂ ಮೊದಲು ನಡೆದಿವೆ. ಪಿಲಿಚಂಡಿ ದೈವದ ಈ ಪವಾಡ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
