ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ; ಕ್ಯಾಮೆರಾ ನೋಡಿ ಪ್ರತಿಕ್ರಿಯಿಸಿದ್ದು ಹೇಗೆ ನೋಡಿ.. – Kannada News | Darshan wife Vijayalakshmi reaction after noticing media camera in Parappana Agrahara jail

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಅವರು ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇರುವ ಅವರನ್ನು ನೋಡಲು ಇಂದು (ಏಪ್ರಿಲ್ 16) ಪತ್ನಿ ವಿಜಯಲಕ್ಷ್ಮಿ ಅವರು ಆಗಮಿಸಿದ್ದರು. ಅವರ ಜೊತೆ ನಟ ಧನ್ವೀರ್ ಕೂಡ ಬಂದಿದ್ದಾರೆ. ಜೈಲಿನ ಆವರಣದಲ್ಲಿ ನಡೆದು ಬರುವಾಗ ಮಾಧ್ಯಮಗಳ ಕ್ಯಾಮೆರಾ ನೋಡಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಸೆರೆ ಹಿಡಿಯುತ್ತಿರುವುದು ಏಕೆ ಎಂದು ವಿಜಯಲಕ್ಷ್ಮಿ (Vijayalakshmi Darshan) ಕಡೆಯವರು ಪ್ರಶ್ನಿಸಿದ್ದಾರೆ. ‘ಮಾಧ್ಯಮದವರು’ ಎಂದು ಹೇಳಿದ ಬಳಿಕ ಅವರು ಸುಮ್ಮನಾಗಿದ್ದಾರೆ. ವಾರಕ್ಕೆ ಎರಡು ಬಾರಿ ದರ್ಶನ್ ಅವರನ್ನು ನೋಡಲು ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಿದ್ದಾರೆ. ಆದಷ್ಟು ಬೇಗ ದರ್ಶನ್ ಅವರಿಗೆ ಜಾಮೀನು ಸಿಗಲಿ ಎಂಬುದು ಅಭಿಮಾನಿಗಳ ಬಯಕೆ. ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

MI vs PBKS: ಐಪಿಎಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್ – Kannada News | Quinton de Kock’s IPL 2026 Heroics: First Century, MI’s Savior, New Records!

ಇದು ಐಪಿಎಲ್ 2026 ರಲ್ಲಿ ಡಿ ಕಾಕ್ ಅವರ ಮೊದಲ ಶತಕ ಮತ್ತು ಅವರ ಐಪಿಎಲ್ ವೃತ್ತಿಜೀವನದ ಮೂರನೇ ಶತಕವಾಗಿದೆ. ಈ ಶತಕದೊಂದಿಗೆ ಡಿ ಕಾಕ್ ಪ್ರಮುಖ ದಾಖಲೆಯನ್ನು ನಿರ್ಮಿಸಿದ್ದು, ಐಪಿಎಲ್‌ನಲ್ಲಿ ಮೂರು ವಿಭಿನ್ನ ತಂಡಗಳ ಪರ ಶತಕಗಳನ್ನು ಬಾರಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಡಿ ಕಾಕ್ ಪಾತ್ರರಾಗಿದ್ದಾರೆ.

Source link

ದಾಖಲೆ ಬರೆದ ಕಲಬುರಗಿ ಬಿಸಿಲು: ಆರೆಂಜ್ ಅಲಟ್೯ ಘೋಷಣೆ, ಈ ಸಮಯದಲ್ಲಿ ಹೊರಬಾರದಂತೆ ಸೂಚನೆ – Kannada News | Extreme Heat Alert in Kalyana Karnataka Districts: Orange Alert, advice not to venture out during this time

ಕಲಬುರಗಿ, ಏಪ್ರಿಲ್​ 16: ಕಲಬುರಗಿ (kalaburagi) ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ. ಇದೀಗ ರಣಬಿಸಿಲಿನ (Heatwave) ಕೇಂದ್ರವಾಗಿಯೂ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಇದೀಗ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಜನರು ಮನೆ ಬಿಟ್ಟು ಹೊರಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಜಿಲ್ಲೆಯಲ್ಲಿ ಬರೋಬ್ಬರಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಣಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಜಿಲ್ಲೆಯ ಜನ 

ಕಲಬುರಗಿ ಅದುವೆ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗ. ರಣಬಿಸಿಲಿನ ಹೊಡೆತಕ್ಕೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಬೇಸಿಗೆ ಆರಂಭ ಬಳಿಕ ರಾಜ್ಯದಲ್ಲಿಯೇ ಅತಿ ಹೆಚ್ಚು ‌ಬಿಸಿಲು ಜಿಲ್ಲೆಯಲ್ಲಿ ದಾಖಲಾಗಿದೆ. ಇದು ಜನರನ್ನು ಬೆಚ್ಚಿಬಿಳಿಸಿದೆ. ನಿನ್ನೆಯಷ್ಟೆ ಕಲಬುರಗಿ ತಾಲೂಕಿನ ಔರಾದನಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ಯಾರೋ ಹೇಳುತ್ತಿರುವ ಮಾತಲ್ಲ, ಹವಾಮಾನ ಇಲಾಖೆಯೇ ನೀಡಿರುವ ಮಾಹಿತಿ.

ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂದ ಕರ್ನಾಟಕ: ಬೆಂಗಳೂರು ಸೇರಿ ವಿವಿಧೆಡೆ ಹೀಟ್‌ವೇವ್ ಅಲರ್ಟ್

ಬಿಸಿಲೂರು ಎಂದೇ ಎಂದು ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಇದೇ ವಾರದಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಝಳಕ್ಕೆ ಕೆಲಸಕ್ಕೆ ಹೋಗುವ ಜನರು ಭಯಭೀತಗೊಂಡಿದ್ದಾರೆ. ಕೆಲ ಜನರು ತಂಪು ಪಾನಿಯಗಳ ಮೊರೆ ಹೋಗ್ತಿದ್ದಾರೆ. ನಿಂಬೆ ಹಣ್ಣಿನ ರಸ, ಕಬ್ಬಿನ ಹಾಲು, ತೆಂಗಿನಕಾಯಿ ನೀರು, ಸೇರಿದಂತೆ ಕಲ್ಲಂಗಡಿ ಹಣ್ಣಿನ ಸೇವನೆ ಮಾಡ್ತಿದ್ದಾರೆ. ಬಿರು ಬಿಸಿಲಿನ ಹೊಡೆತಕ್ಕೆ ಸರ್ಕಾರಿ ಕಚೇರಿಯ ಸಮಯದಲ್ಲಿಯೂ ಸಹ ಬದಲಾವಣೆ ಮಾಡಲಾಗಿದೆ. ಆದರೆ ಜನ ಮಾತ್ರ ಪಾರ್ಕ್​​ಗಳಲ್ಲಿನ ಗಿಡ ಮರಗಳ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.

ಕಲಬುರಗಿಯಲ್ಲಿ ಬಿಸಿಲಿನ ತಾಪಮಾನ ದಿನದಿಂದದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ಔರಾದನಲ್ಲಿ 45 ಡಿಗ್ರಿ ಸೆಲ್ಸಿಯಸ್, ಚಿಂಚೋಳಿ ತಾಲೂಕಿನ ಐನಾಪೂರದಲ್ಲಿ 44 ಡಿಗ್ರಿ ಸೆಲ್ಸಿಯಸ್, ಅಫಜಲಪುರ ತಾಲೂಕಿನ ಆನೂರ್​ನಲ್ಲಿ 44 ಸೆಲ್ಸಿಯಸ್, ಆಳಂದ ತಾಲೂಕಿನ ಮಾದನಹಿಪ್ಪರಗಾದಲ್ಲಿ 44 ಡಿಗ್ರಿ ಸೆಲ್ಸಿಯಸ್ ಹೀಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗ್ತಿದೆ.

ಮನೆಯಿಂದ ಹೊರಹೋಗದಂತೆ ಆದೇಶ

ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಕೆಲವು ದಿನ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ. ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೂ ಮನೆಯಿಂದ ಹೊರಹೋಗುವುದನ್ನು ತಪ್ಪಿಸಬೇಕಿದೆ‌. ಬಿಸಿ ಗಾಳಿ ಬೀಸುತ್ತಿರುವ ಹಿನ್ನಲೆ ಈಗಾಗಲೇ ಆರೇಂಜ್ ಅಲಟ್೯ ಘೋಷಣೆ ಸಹ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ ಆದೇಶ ಹೊರಡಿಸಿದ್ದಾರೆ.

ಆರೋಗ್ಯದ ಮೇಲೂ ಪರಿಣಾಮ

ಬಿಸಿಲಿನ ಪರಿಣಾಮ ಆರೋಗ್ಯದ ಮೇಲೂ ಗಂಭಿರ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಡಿಹೈಡ್ರೇಶನ್ ಉಂಟಾಗಿ ವಾಂತಿ, ಭೇದಿ ಸೇರಿದಂತೆ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸುಡು ಬಿಸಿಲಿಗೆ ಬೆಂದ ಕರ್ನಾಟಕ: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ

ಇನ್ನು ಪ್ರತಿ ಬಾರಿಗಿಂತ ಈ ಬಾರಿ ಸಹ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಮುಂದಿನ ತಿಂಗಳು ಮೇ ಇನ್ನೂ ‌ಹೆಚ್ಚಿನ ಗರಿಷ್ಠ ಮಟ್ಟದ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇವಲ ಕಲಬುರಗಿ ಅಷ್ಟೇ ಅಲ್ಲದೆ ಯಾದಗಿರಿ, ರಾಯಚೂರು, ಬೀದರ್, ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಸೂರ್ಯನ ಪ್ರಖರತೆಗೆ ಜಿಲ್ಲೆಯ ಜನ ತತ್ತರಿಸಿರುವುದಂತು ನಿಜ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬದಲಾಗುತ್ತಿರುವ ಹವಾಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಆಯುರ್ವೇದ ತಜ್ಞರು ನೀಡಿದ ಸಲಹೆ – Kannada News | Ayurvedic Tips to Stay Healthy During Seasonal Change

ದೇಶದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ಅಕಸ್ಮಿಕ ಬದಲಾವಣೆಗಳು ಕಾಣಿಸುತ್ತಿವೆ. ಹಗಲು ಸಮಯದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಸಂಜೆ ವೇಳೆಗೆ ಸ್ವಲ್ಪ ತಂಪು ಅನುಭವವಾಗುತ್ತಿದೆ. ಕೆಲವೊಮ್ಮೆ ಏಕಾಏಕಿ ಮಳೆ, ಮತ್ತೆ ತೀವ್ರ ಬಿಸಿಲು ಈ ರೀತಿಯ ಬದಲಾವಣೆಗಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಆದರೆ ಹವಾಮಾನ ಬದಲಾವಣೆ ಈ ರೀತಿ ಬದಲಾಗುತ್ತಿರುವಾಗ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸರಳ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಬೇಕಾಗಬಹುದು. ಹಾಗಾದರೆ ಆಹಾರದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು, ರೋಗನಿರೋಧಕ ಶಕ್ತಿ (Immune System) ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹವಾಮಾನ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳು:

ಆಯುರ್ವೇದದ ಪ್ರಕಾರ, ಹವಾಮಾನ ಬದಲಾವಣೆ ದೇಹದ ವಾತ, ಪಿತ್ತ ಮತ್ತು ಕಫ ದೋಷಗಳ ಸಮತೋಲನವನ್ನು ಹಾಳು ಮಾಡುತ್ತದೆ. ಇದರಿಂದ ಜ್ವರ, ಶೀತ, ಕೆಮ್ಮು, ಅಲರ್ಜಿ ಹಾಗೂ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ವೈರಲ್ ಸೋಂಕುಗಳ ಅಪಾಯವೂ ಹೆಚ್ಚಾಗುತ್ತದೆ. ವೈದ್ಯರಾದ ಡಾ. ಚಂಚಲ ಅವರ ಪ್ರಕಾರ, ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಆಹಾರ ಮತ್ತು ಜೀವನಶೈಲಿ ಬಹಳ ಮುಖ್ಯ ಎನ್ನುತ್ತಾರೆ.

ಇದನ್ನೂ ಓದಿ: ಬೆಂಗಳೂರಿಗರೇ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

ಈ ಹವಾಮಾನದಲ್ಲಿ ಹಗುರವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ. ಪಪ್ಪಾಯಿ, ದಾಳಿಂಬೆ, ಕಿತ್ತಳೆ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಬಹುದು. ಜೊತೆಗೆ ಶುಂಠಿ ಮತ್ತು ತುಳಸಿ ಚಹಾ ಸೇವಿಸುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಫಾಸ್ಟ್ ಫುಡ್ ಮತ್ತು ಎಣ್ಣೆ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ, ಏಕೆಂದರೆ ಇವು ಪಿತ್ತ ಮತ್ತು ಕಫವನ್ನು ಹೆಚ್ಚಿಸಬಹುದು. ತಣ್ಣೀರು ಬದಲಾಗಿ ಕೊಂಚ ಬೆಚ್ಚಗಿನ ಅಥವಾ ಸಾಮಾನ್ಯ ನೀರನ್ನು ಕುಡಿಯುವುದು ಆರೋಗ್ಯಕರ. ಇದರ ಜೊತೆಗೆ ತುಳಸಿ, ಗಿಲೋಯ್ ಮತ್ತು ಅಶ್ವಗಂಧಾ ಮುಂತಾದ ಔಷಧೀಯ ಸಸ್ಯಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕ. ಇವು ದೇಹವನ್ನು ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತವೆ.

ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

ಮಧ್ಯಾಹ್ನ 12ರಿಂದ 4 ಗಂಟೆಯ ನಡುವೆ ತೀವ್ರ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಹೋಗುವಾಗ ತಲೆ ಮುಚ್ಚಿಕೊಳ್ಳುವುದು ಉತ್ತಮ. ಸಾಕಷ್ಟು ನೀರು ಕುಡಿಯುವುದು ಮತ್ತು ದೇಹವನ್ನು ಹೈಡ್ರೇಟ್ ಇಟ್ಟುಕೊಳ್ಳುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಐಸಿಯಿಂದ ಎರಡು ಹೊಸ ಆ್ಯಪ್​ಗಳು ಬಿಡುಗಡೆ; ಗ್ರಾಹಕರಿಗೆ MyLIC, ಮಾರಾಟಗಾರರಿಗೆ Super Sales Saathi ಆ್ಯಪ್ – Kannada News | LIC of India introduces MyLIC App and Super Sales Saathi App

ಮುಂಬೈ, ಏಪ್ರಿಲ್ 16: ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಡಿಜಿಟಲ್ ರೂಪಾಂತರದ ಭಾಗವಾಗಿ ಗ್ರಾಹಕರು ಮತ್ತು ಮಾರಾಟ ಪ್ರತಿನಿಧಿಗಳಿಗಾಗಿ (Intermediaries) ಎರಡು ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಅವರು ಈ ಆಪ್‌ಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್‌ಐಸಿ ಸಿಇಒ ಮತ್ತು ಎಂಡಿ ಆರ್. ದೊರೈಸ್ವಾಮಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಹಕರಿಗಾಗಿ ಇರುವ MyLIC ಆಪ್

MyLIC ತನ್ನ ಪಾಲಿಸಿದಾರರಿಗಾಗಿ ವಿನ್ಯಾಸಗೊಳಿಸಲಾದ ಮುಂದಿನ ಪೀಳಿಗೆಯ ಆಪ್ ಆಗಿದ್ದು, ಇನ್ಷೂರೆನ್ಸ್ ಪೋರ್ಟ್‌ಫೋಲಿಯೋ ನಿರ್ವಹಣೆಯನ್ನು ಸುಲಭಗೊಳಿಸಲಿದೆ. ಇದರಲ್ಲಿ ಇರುವ ಪ್ರಮುಖ ಫೀಚರ್ಸ್ ಇಂತಿವೆ:

  • ಪೋರ್ಟ್‌ಫೋಲಿಯೋ ನಿರ್ವಹಣೆ: ನಿಮ್ಮ ಎಲ್ಲಾ ಪಾಲಿಸಿಗಳನ್ನು ಒಂದೇ ಕಡೆ ನೋಡಬಹುದು ಮತ್ತು ನಿರ್ವಹಿಸಬಹುದು.
  • ತ್ವರಿತ ಪ್ರೀಮಿಯಂ ಪಾವತಿ: ಯಾವುದೇ ವಿಳಂಬವಿಲ್ಲದೆ ಆನ್‌ಲೈನ್ ಮೂಲಕ ಪ್ರೀಮಿಯಂ ಕಟ್ಟಬಹುದು.
  • ಪೇಪರ್‌ಲೆಸ್ ಲೋನ್: ಪಾಲಿಸಿ ಮೇಲೆ ಸಾಲ ಪಡೆಯಲು ಕಚೇರಿಗೆ ಹೋಗುವ ಅಗತ್ಯವಿಲ್ಲ, ಡಿಜಿಟಲ್ ಆಗಿಯೇ ಸಾಲ ಸೌಲಭ್ಯ ಪಡೆಯಬಹುದು.
  • ಪಾಲಿಸಿ ನವೀಕರಣ: ಸ್ಥಗಿತಗೊಂಡಿರುವ (Lapsed) ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿಯೇ ಪುನಶ್ಚೇತನಗೊಳಿಸಬಹುದು.
  • ಇ-ಕೆವೈಸಿ (e-KYC): ವೇಗವಾದ ಮತ್ತು ಕಾಗದರಹಿತ ಕೆವೈಸಿ ಪ್ರಕ್ರಿಯೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ

ಸೂಪರ್ ಸೇಲ್ಸ್ ಸಾಥಿ ಆ್ಯಪ್ (Super Sales Saathi)

ಇದು ಎಲ್‌ಐಸಿ ವಿಮಾ ಏಜೆಂಟ್‌ಗಳು ಮತ್ತು ಮಾರ್ಕೆಟಿಂಗ್ ಸಿಬ್ಬಂದಿಗಾಗಿ ರೂಪಿಸಲಾದ ಆಪ್ ಆಗಿದೆ. ಇದರಲ್ಲಿರುವ ಪ್ರಮುಖ ಫೀಚರ್ಸ್ ಇಂತಿವೆ:

  • ರಿಯಲ್-ಟೈಮ್ ಟ್ರ್ಯಾಕಿಂಗ್: ಗ್ರಾಹಕರ ಪಾಲಿಸಿ ಸ್ಥಿತಿಗತಿಗಳನ್ನು ಕ್ಷಣಕ್ಷಣಕ್ಕೂ ಗಮನಿಸಬಹುದು.
  • AI ಆಧಾರಿತ ನೆರವು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಸೂಕ್ತ ಸಲಹೆ ನೀಡಲು ಇದು ನೆರವಾಗಲಿದೆ.
  • ಡಿಜಿಟಲ್ ಸೇಲ್ಸ್ ಕಿಟ್: ಪಾಲಿಸಿಗಳ ಬಗ್ಗೆ ವಿವರಿಸಲು ಬೇಕಾದ ಡಿಜಿಟಲ್ ಮಾಹಿತಿಗಳು ಮತ್ತು ಪ್ರೆಸೆಂಟೇಶನ್‌ಗಳು ಈ ಆಪ್‌ನಲ್ಲಿ ಲಭ್ಯವಿರುತ್ತವೆ.
  • ಸ್ವಯಂಚಾಲಿತ ರಿಮೈಂಡರ್: ಗ್ರಾಹಕರನ್ನು ಫಾಲೋ-ಅಪ್ ಮಾಡಲು ಇದು ಏಜೆಂಟ್‌ಗಳಿಗೆ ನೆನಪಿಸುತ್ತದೆ.

ಡಿಜಿಟಲ್ ರೂಪಾಂತರದ ‘ಡೈವ್’ (DIVE)

ಈ ಎರಡೂ ಅಪ್ಲಿಕೇಶನ್‌ಗಳನ್ನು ಎಲ್‌ಐಸಿಯ ‘ಡೈವ್’ (DIVE- Digital Innovation & Value Enhancement) ಎಂಬ ಡಿಜಿಟಲ್ ರೂಪಾಂತರ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎಲ್‌ಐಸಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮತ್ತು ಗ್ರಾಹಕರಿಗೆ ತಡೆರಹಿತ ಸೇವೆ ನೀಡಲು ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ

ಈ ಆಪ್‌ಗಳ ಬಳಕೆಯಿಂದಾಗಿ ಎಲ್‌ಐಸಿ ಗ್ರಾಹಕರು ಈಗ ವಿಮಾ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪಲಿದ್ದು, ಬೆರಳ ತುದಿಯಲ್ಲೇ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಬೆಂಗಳೂರಿನಲ್ಲಿ 6 ತಿಂಗಳು ಉಳಿದ್ರೆ ಸಾಕು ಈ ಊರು ನಿಮಗೆ ಸ್ವಂತ; ಮಹಿಳೆ ಹೀಗೆಂದಿದ್ದೇಕೆ? – Kannada News | Bengaluru: If you stay in Bengaluru for six months, will you become a complete Bengalureans

ಬೆಂಗಳೂರು, ಏಪ್ರಿಲ್ 16: ಓದು ಮುಗಿಯುತ್ತಿದ್ದಂತೆ ತಮ್ಮ ಹುಟ್ಟೂರನ್ನು ತೊರೆದು ಬೆಂಗಳೂರಿನತ್ತ (Bengaluru) ಯುವಕ ಯುವತಿಯರು ಹೆಜ್ಜೆ ಹಾಕ್ತಾರೆ. ಹೀಗೆ ಬಂದವರಲ್ಲಿ ಅನೇಕರಿಗೆ ಹೊಸ ಊರಿಗೆ ಹೊಂದಿಕೊಳ್ಳೋದು ಕಷ್ಟವಾಗುತ್ತದೆ. ಆದರೆ ಈ ಬೆಂಗಳೂರಿನ ಮಹಿಳೆಯೊಬ್ಬರು ಹೊಸಬರು ಬಂದು ಈ ನಗರದಲ್ಲಿ ವಾಸಿಸುವುದರಿಂದ ಅಲ್ಲಿನ  ಅಭ್ಯಾಸ ಮತ್ತು ಮನಸ್ಥಿತಿ ಹೇಗೆ ಬದಲಾಗುತ್ತದೆ. ನಗರದ ವಿಶಿಷ್ಟ ಸಂಸ್ಕೃತಿಗೆ ಹೊಸಬರು ಹೇಗೆ ಕ್ರಮೇಣ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

zindgeonrecord ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಸೈಯದ್ ಅಫ್ರೀಂಜ್ ಎಂಬ ಮಹಿಳೆ ಬೆಂಗಳೂರಿಗೆ ಹೊಸಬರು ಹೇಗೆ ಹೊಂದಿಕೊಳ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಅಂದ್ರೆ ಪ್ರೀತಿ. ಅದು ನಿಮ್ಮನ್ನು ಮುಕ್ತ ತೋಳುಗಳಿಂದ ಸ್ವಾಗತಿಸುತ್ತದೆ. ಒಮ್ಮೆ ಬಂದು ನೀವೇ ನೋಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ನೀವು ಆರು ತಿಂಗಳು ಬೆಂಗಳೂರಿಗೆ ಬಂದು ನೋಡಿ, ಸಂಪೂರ್ಣವಾಗಿ ಬೆಂಗಳೂರಿಗರಾಗಿ ಬದಲಾಗುತ್ತೀರಿ. ಟ್ರಾಫಿಕ್‌ನಲ್ಲಿ ಸಾಮಾನ್ಯವಾಗಿ ವರ್ತಿಸುವಂತೆ, ಎಲ್ಲರನ್ನೂ ‘ಸಹೋದರ’ ಎಂದು ಕರೆಯುತ್ತೀರಿ. 300 ರೂ ಕಾಫಿ ಸಾಮಾನ್ಯ ಎಂದು ಭಾವಿಸುತ್ತೀರಿ, ಮಳೆಯಲ್ಲಿ ‘ವಾವ್, ಎಂತಹ ಅದ್ಭುತ ಹವಾಮಾನ’ ಎಂದು ಹೇಳುವಂತೆ ಎಲ್ಲದರೊಂದಿಗೆ ನೀವು ಬೆರೆತು ಹೋಗುತ್ತೀರಿ. ನೀವು ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದರೆ, ಬೆಂಗಳೂರಿಗೆ ಸ್ವಾಗತ.ಈ ಊರು ನಿಮ್ಮನ್ನು ಪೂರ್ಣ ಹೃದಯದಿಂದ ಅಪ್ಪಿಕೊಳ್ಳುತ್ತದೆ. ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಯೋಚಿಸುತ್ತಿರುವ ಯಾರಿಗಾದರೂ ಈ ರೀಲ್‌ನ್ನು ಹಂಚಿಕೊಳ್ಳಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೋ ಕಿಡ್ಸ್, ಡಬಲ್ ಇನ್ಕಮ್; ಬೆಂಗಳೂರಿನಲ್ಲಿ ನೆಲೆಸಿರುವ ಈ ದಂಪತಿಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಸಂಚಾರ ತಾಳ್ಮೆಯ ಮಟ್ಟ ನಿಮಗೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಅರಿತುಕೊಳ್ಳದೆಯೇ ಬೆಂಗಳೂರು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದು ನಿಜ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 300 ರೂ ಕಾಫಿ ಸಾಮಾನ್ಯ ಭಾವನೆಯಾಗಿದ್ರು ನೋವಿನಿಂದ ಕೂಡಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೂ ಶಾಕ್ ಆಗುತ್ತಿದ್ದ; ಅಮಿತ್ ಶಾಗೆ ಪ್ರಿಯಾಂಕಾ ಗಾಂಧಿ ತಮಾಷೆ

ನವದೆಹಲಿ, ಏಪ್ರಿಲ್ 16: ಲೋಕಸಭೆ ಅಧಿವೇಶನದಲ್ಲಿ ಇಂದು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಮಹಿಳಾ ಮೀಸಲಾತಿ ಮಸೂದೆ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಮಾತನಾಡಿದ್ದಾರೆ. ಕಾಂಗ್ರೆಸ್ ಮಹಿಳಾ ಸಂಸದರಿಗೆ ಮೀಸಲಾತಿ ನೀಡುವುದನ್ನು ಬೆಂಬಲಿಸುತ್ತದೆಯಾದರೂ ಈಗಿರುವ ಚರ್ಚೆ ಅದರ ಬಗ್ಗೆ ಅಲ್ಲ. ಈ ಮಸೂದೆ ರಾಜಕೀಯದ ಉದ್ದೇಶವನ್ನು ಹೊಂದಿದೆ ಎಂಬ ಅಂಶದ ಬಗ್ಗೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಮಹಿಳಾ ಮೀಸಲಾತಿಯ ಪ್ರಸ್ತಾಪ ಚುನಾವಣಾ ಲಾಭವನ್ನು ಉಳಿಸಿಕೊಳ್ಳಲು ಎನ್‌ಡಿಎ ಸರ್ಕಾರದ ರಾಜಕೀಯ ಟ್ರಂಪ್ ಕಾರ್ಡ್ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದರು.

ಪ್ರಿಯಾಂಕಾ ಗಾಂಧಿಯ ಮಾತು ಕೇಳಿ ಗೃಹ ಸಚಿವ ಅಮಿತ್ ಶಾ ನಗುತ್ತಾ ಕುಳಿತಿದ್ದರು. ಅದನ್ನು ನೋಡಿದ ಪ್ರಿಯಾಂಕಾ ಗಾಂಧಿ ಅಮಿತ್ ಶಾ ಅವರನ್ನು ತತ್ವಜ್ಞಾನಿ ಮತ್ತು ರಾಜಕೀಯ ತಂತ್ರಜ್ಞ ಚಾಣಕ್ಯ ಅವರ ಜೊತೆ ಹೋಲಿಸಿ ತಮಾಷೆ ಮಾಡಿದ್ದಾರೆ. ಅಮಿತ್
ಶಾ ಮತ್ತು ಇತರ ಹಲವಾರು ಬಿಜೆಪಿ ಸಂಸದರು ತಮ್ಮ ಹೇಳಿಕೆಗೆ ನಗುತ್ತಿರುವುದನ್ನು ನೋಡಿದ ಪ್ರಿಯಾಂಕಾ ಗಾಂಧಿ, “ಗೃಹ ಸಚಿವರು ನಗುತ್ತಿದ್ದಾರೆ. ನೀವೆಲ್ಲರೂ ಸಂಪೂರ್ಣವಾಗಿ ಪ್ಲಾನ್ ಮಾಡಿಕೊಂಡೇ ಬಂದಿದ್ದೀರಿ. ಇಂದು ಚಾಣಕ್ಯ ಜೀವಂತವಾಗಿದ್ದರೆ ನಿಮ್ಮ ಕುತಂತ್ರವನ್ನು ನೋಡಿ ಅವರೂ ಆಘಾತಕ್ಕೊಳಗಾಗುತ್ತಿದ್ದರು” ಎಂದು ಹೇಳಿದ್ದಾರೆ. ಈ ವೇಳೆ ವಿರೋಧ ಪಕ್ಷದ ಸಂಸದರು ಮೇಜು ತಟ್ಟಿ ನಗುತ್ತಾ ಹೌದೆಂಬಂತೆ ಸಮ್ಮತಿ ವ್ಯಕ್ತಪಡಿಸಿದರು. ಅತ್ತ ಅಮಿತ್ ಶಾ ಕೂಡ ನಗುತ್ತಾ ಈ ತಮಾಷೆಯನ್ನು ಸ್ವೀಕರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್ – Kannada News | Kangana Ranaut backs Deepika Padukone 8 Hour work shift demand

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಕಳೆದ ವರ್ಷ ಸಿನಿಮಾ ಚಿತ್ರೀಕರಣದ ವೇಳೆ ‘ನಾನು ದಿನಕ್ಕೆ 8 ಗಂಟೆಗಳು ಮಾತ್ರ ಕೆಲಸ ಮಾಡೋದು’ ಎಂದು ಖಡಕ್ ಆಗಿ ಬೇಡಿಕೆ ಇಟ್ಟಿದ್ದರಿಂದ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಈಗ ಈ ವಿಷಯದ ಕುರಿತು ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ದೀಪಿಕಾ ಪರವಾಗಿ ಧ್ವನಿ ಎತ್ತಿದ್ದಾರೆ. ಇತ್ತೀಚಿನ ಒಂದು ಪಾಡ್‌ಕಾಸ್ಟ್​ನಲ್ಲಿ ಮಾತನಾಡಿದ ಕಂಗನಾ ರಣಾವತ್ ಅವರು ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವು ಅನುಭವದೊಂದಿಗೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಪ್ರಭಾಸ್ ನಟನೆಯ ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರದಿಂದ ದೀಪಿಕಾ ಹೊರಬಂದಿದ್ದರು. ತಾವು ತಾಯಿ ಆಗಿರುವುದರಿಂದ ಮಗುವಿನ ಆರೈಕೆಗಾಗಿ ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಅವರು ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್​ನಿಂದಲೂ ಹಿಂದೆ ಸರಿದಿದ್ದರು ಎಂಬ ಸುದ್ದಿ ಇದೆ. ದೀಪಿಕಾ ಅವರ ಈ ಬೇಡಿಕೆಯನ್ನು ಕೆಲವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಸಿನಿಮಾ ಕ್ಷೇತ್ರದಲ್ಲಿ ಇದು ಅಸಾಧ್ಯ ಎಂದು ಟೀಕಿಸಿದ್ದರು.

ಆ ಬಗ್ಗೆ ಕಂಗನಾ ಈಗ ಪ್ರತಿಕ್ರಿಯಿಸಿದ್ದಾರೆ. ‘ಇದನ್ನೊಂದು ವಿವಾದ ಮಾಡುವ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ. ದೀಪಿಕಾ ಪಡುಕೋಣೆ ಅವರು ಇಂದು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ನಾವು ನೋಡಬೇಕು. ಆಕೆ ಅಂತಹ ಬೇಡಿಕೆಯನ್ನು ಇಡುವ ಹಕ್ಕನ್ನು ಸಂಪಾದಿಸಿದ್ದಾರೆ. ಆಕೆ ಒಬ್ಬ ತಾಯಿ ಮತ್ತು ದೇಶದ ನಂಬರ್ ಒನ್ ನಟಿ. ಇಂದು ಆಕೆ 8 ಗಂಟೆ ಕೆಲಸ ಮಾಡಲು ಬಯಸಿದರೆ ಅದರಲ್ಲಿ ತಪ್ಪೇನಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಕಂಗನಾ, ‘ನಾನು ಮತ್ತು ದೀಪಿಕಾ ವೃತ್ತಿಜೀವನದ ಆರಂಭದಲ್ಲಿದ್ದಾಗ ದಿನಕ್ಕೆ 12-14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆವು. ಆಗ ನಮಗೆ ಯಶಸ್ಸಿನ ಹಸಿವಿತ್ತು ಮತ್ತು ನಾವು ಯಾರಿಗೂ ಅನಿವಾರ್ಯವಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ದೀಪಿಕಾ ಇಂದು ಒಬ್ಬ ತಾಯಿ, ಆಕೆಗೆ ಮಗು ಮತ್ತು ಕುಟುಂಬದ ಜವಾಬ್ದಾರಿ ಇದೆ. ಆ ಸ್ಥಾನದಲ್ಲಿ ನಿಂತು ನೋಡಿದಾಗ ಅವರ ಬೇಡಿಕೆ ನ್ಯಾಯಯುತವಾಗಿದೆ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

ಕೆಲಸದ ಅವಧಿಯ ವಿವಾದದ ನಡುವೆಯೂ ದೀಪಿಕಾ ಪಡುಕೋಣೆ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ. ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ದೀಪಿಕಾ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಅಭಿನಯದ ‘ಕಿಂಗ್’ ಚಿತ್ರದಲ್ಲೂ ದೀಪಿಕಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಇರುವ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

MI vs PBKS: ಬ್ಯಾಕ್ ಟು ಬ್ಯಾಕ್ ವಿಕೆಟ್; ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್ – Kannada News | Arshdeep Singh’s IPL Century: Punjab Kings Pacer Dominates MI with 100 Wickets

ಪಂಜಾಬ್ ಕಿಂಗ್ಸ್ ತಂಡದ ವೇಗಿ ಅರ್ಶ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಪವರ್‌ಪ್ಲೇನಲ್ಲಿ ಸತತ ಎರಡು ಎಸೆತಗಳಲ್ಲಿ ರಿಕಿ ಪಾಂಟಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಅವರು ಮುಂಬೈ ಇಂಡಿಯನ್ಸ್ ತಂಡದ ಬೆನ್ನೆಲುಬನ್ನು ಮುರಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಕೇವಲ ಒಂದು ರನ್ ನೀಡಿದರು ಆದರೆ ಎರಡನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಅರ್ಶ್‌ದೀಪ್, ರಿಕಲ್ಟನ್ ಅವರನ್ನು ಔಟ್ ಮಾಡಿದರೆ, ಮುಂದಿನ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದರು. ಈ ಮೂಲಕ ವಿಶೇಷ ದಾಖಲೆಯನ್ನು ನಿರ್ಮಿಸಿದರು.

ರಿಕಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಅರ್ಶ್‌ದೀಪ್ ಸಿಂಗ್ ಐಪಿಎಲ್​ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಐಪಿಎಲ್​ನಲ್ಲಿ 100 ವಿಕೆಟ್ ಪಡೆದ ಐದನೇ ಎಡಗೈ ವೇಗಿ ಮತ್ತು ಪಂಜಾಬ್ ಪರ 100 ವಿಕೆಟ್ ಪಡೆದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದಾಗ್ಯೂ ಅರ್ಶ್‌ದೀಪ್ ಕೆಲವು ಸಮಯದಿಂದ ಕಳಪೆ ಫಾರ್ಮ್ ನಲ್ಲಿದ್ದಾರೆ. ಪವರ್ ಪ್ಲೇನಲ್ಲಿ ವಿಕೆಟ್ ಉರುಳಿಸಲು ಹೆಸರುವಾಸಿಯಾಗಿರುವ ಅವರು ಕಳೆದ 10 ಇನ್ನಿಂಗ್ಸ್ ಗಳಲ್ಲಿ ಪವರ್ ಪ್ಲೇನಲ್ಲಿ ವಿಕೆಟ್ ಪಡೆದಿರಲಿಲ್ಲ. ಆದರೆ ಈಗ, ಮುಂಬೈ ಇಂಡಿಯನ್ಸ್ ವಿರುದ್ಧ ಪವರ್ ಪ್ಲೇನಲ್ಲಿ ರಿಕಲ್ಟನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದರು.

ಅರ್ಶ್‌ದೀಪ್ ಸಿಂಗ್ ತಮ್ಮ ಅಲ್ಪ ವೃತ್ತಿಜೀವನದಲ್ಲಿ ಅನೇಕ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಐಪಿಎಲ್ ಜೊತೆಗೆ, ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಅವರಿಗೆ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿಯೂ ಲಭಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ – Kannada News | India’s First Semiconductor Fab Plant in Dholera SEZ: A New Era of Chip Manufacturing

ನವದೆಹಲಿ, ಏಪ್ರಿಲ್ 16: ಭಾರತದ ಆರ್ಥಿಕ ಮತ್ತು ತಾಂತ್ರಿಕ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ, ಗುಜರಾತ್‌ನ ಧೋಲೇರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ (Semiconductor Fab Plant) ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯವಾಗಿ (SEZ) ಅನುಮೋದನೆ ನೀಡಿದೆ. ಈ ಯೋಜನೆಯನ್ನು ‘ಟಾಟಾ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್’ ನಿರ್ವಹಿಸುತ್ತಿದ್ದು, ಸುಮಾರು 91,000 ಕೋಟಿ ರೂ ಹೂಡಿಕೆ ಮಾಡಲು ಯೋಜಿಸಿದೆ.

66.16 ಹೆಕ್ಟೇರ್ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ಘಟಕದಿಂದ ಸುಮಾರು 21,000 ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಏಪ್ರಿಲ್ 9 ರಂದು ವಾಣಿಜ್ಯ ಸಚಿವಾಲಯವು ಈ SEZ ಕುರಿತು ಅಧಿಸೂಚನೆ ಹೊರಡಿಸಿದ್ದು, ಇದು ಎಲೆಕ್ಟ್ರಾನಿಕ್ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳಿಗೆ ಪ್ರತ್ಯೇಕವಾಗಿ ಮೀಸಲಾಗಿರುತ್ತದೆ.

ಇದನ್ನೂ ಓದಿ: ಟಿಸಿಎಸ್ ಪ್ರಕರಣ: ತನಿಖೆ ತೀವ್ರ, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್

ಹೂಡಿಕೆ ಉತ್ತೇಜನಕ್ಕಾಗಿ ನಿಯಮಗಳ ಸಡಿಲಿಕೆ

ಸೆಮಿಕಂಡಕ್ಟರ್ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರವು 2025ರ ಜೂನ್‌ನಲ್ಲಿ SEZ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ಇದರ ಅನ್ವಯ, ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಬೇಕಾದ ಕನಿಷ್ಠ ಭೂಮಿಯ ಅಗತ್ಯತೆಯನ್ನು 50 ಹೆಕ್ಟೇರ್‌ನಿಂದ 10 ಹೆಕ್ಟೇರ್‌ಗೆ ಇಳಿಸಲಾಗಿತ್ತು. ಈ ನಿಯಮ ಬದಲಾವಣೆಯು ಕಂಪನಿಗಳಿಗೆ ಪ್ರಾಜೆಕ್ಟ್ ಆರಂಭಿಸಲು ಸುಲಭಗೊಳಿಸಿದಂತಾಗಿದೆ. ಟಾಟಾ ಸಂಸ್ಥೆಗೂ ಇದು ಅನುಕೂಲವಾಯಿತು.

ಇತರ ಪ್ರಮುಖ ಯೋಜನೆಗಳು

ಟಾಟಾ ಸಂಸ್ಥೆಯಲ್ಲದೆ, ಇನ್ನೂ ನಾಲ್ಕು ಕಂಪನಿಗಳ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಘಟಕಗಳಿಗೆ ಸರ್ಕಾರ ಅನುಮೋದನೆ ನೀಡಿದೆ:

  1. ಮೈಕ್ರಾನ್ (Micron): 13,000 ಕೋಟಿ ರೂ ಹೂಡಿಕೆ, 20,000 ಉದ್ಯೋಗಗಳ ಗುರಿ.
  2. ಸಿಜಿ ಸೆಮಿ (CG Semi): 2,150 ಕೋಟಿ ರೂ ಹೂಡಿಕೆ (ಅಸೆಂಬ್ಲಿ ಮತ್ತು ಟೆಸ್ಟಿಂಗ್).
  3. ಕೇನ್ಸ್ ಸೆಮಿಕಾನ್ (Kaynes Semicon): 681 ಕೋಟಿ ರೂ ಹೂಡಿಕೆ.

ಇದನ್ನೂ ಓದಿ: ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು

ಇದರ ಪ್ರಾಮುಖ್ಯತೆ ಏನು?

ಪ್ರಸ್ತುತ ಕೃತಕ ಬುದ್ಧಿಮತ್ತೆ (AI), ಆಟೋಮೊಬೈಲ್ ಮತ್ತು ಸ್ಮಾರ್ಟ್‌ಫೋನ್ ವಲಯಗಳಲ್ಲಿ ಚಿಪ್‌ಗಳ ಬೇಡಿಕೆ ಹೆಚ್ಚಿದೆ. ಸದ್ಯ ಭಾರತವು ಇವುಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದೆ. ಈ ಸ್ವದೇಶಿ ತಯಾರಿಕಾ ಘಟಕಗಳು ಆರಂಭವಾದರೆ, ಆಮದು ಅವಲಂಬನೆ ಕಡಿಮೆಯಾಗುವುದಲ್ಲದೆ, ಭಾರತವು ಜಾಗತಿಕ ‘ಸೆಮಿಕಂಡಕ್ಟರ್ ಹಬ್’ ಆಗಿ ಹೊರಹೊಮ್ಮಲು ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version