ಬೆಂಗಳೂರಿಗಾಗಿ ದಿನಕ್ಕೆ 100 ಕೋಟಿ ಖರ್ಚು!: ಇಷ್ಟೊಂದು ಖರ್ಚಾದರೂ ಸಮಸ್ಯೆಗಳೇಕೆ ತಪ್ಪುತ್ತಿಲ್ಲ? ಈ ಹಣ ಎಲ್ಲಿಗೆ ಹೋಗುತ್ತಿದೆ?

ಬೆಂಗಳೂರಿಗಾಗಿ ದಿನಕ್ಕೆ 100 ಕೋಟಿ ಖರ್ಚು!: ಇಷ್ಟೊಂದು ಖರ್ಚಾದರೂ ಸಮಸ್ಯೆಗಳೇಕೆ ತಪ್ಪುತ್ತಿಲ್ಲ? ಈ ಹಣ ಎಲ್ಲಿಗೆ ಹೋಗುತ್ತಿದೆ?

ಬೆಂಗಳೂರು, ಏ.13: ಬೆಂಗಳೂರಿನಲ್ಲಿ ದಿನಕ್ಕೊಂದು ನಡೆಯುವ ಅಭಿವೃದ್ಧಿ ಕೆಲಸಕ್ಕಾಗಿ ದೊಡ್ಡ ಮಟ್ಟದ ಹಣಗಳು ವ್ಯಯವಾಗುತ್ತದೆ. ಈ ಬಗ್ಗೆ ಶಾಕಿಂಗ್​ ವರದಿಯೊಂದು ಕೇಳಿ ಬಂದಿದೆ. ನಗರದ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮತ್ತು ವಿವಿಧ ಸಾರ್ವಜನಿಕ ಸಂಸ್ಥೆಗಳು ಪ್ರತಿದಿನ ಸರಾಸರಿ 100 ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ಖರ್ಚು ಮಾಡುತ್ತಿವೆ. ‘ಜನಾಗ್ರಹ’ ಸಂಸ್ಥೆಯು 2021-22ನೇ ಸಾಲಿನ 13 ವಿವಿಧ ಪ್ರಾಧಿಕಾರಗಳ ಸುಮಾರು 70 ಹಣಕಾಸು ದಾಖಲೆಗಳನ್ನು ಪರಿಶೀಲಿಸಿ ಈ ವರದಿಯನ್ನು ನೀಡಿದೆ. ಒಂದು ವರ್ಷದಲ್ಲಿ ಒಟ್ಟು ಸಾರ್ವಜನಿಕ ವೆಚ್ಚ 38,455 ಕೋಟಿ ರೂಪಾಯಿ ತಲುಪಿದೆ ಎಂದು ಅಚ್ಚರಿಯ ವರದಿಯನ್ನು ನೀಡಿದೆ.

ಬೆಂಗಳೂರಿನ ಒಟ್ಟು ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಪಾಲು ಕೇವಲ ಶೇ. 20ರಷ್ಟು ಮಾತ್ರ. ಉಳಿದ ಶೇ. 80ರಷ್ಟು ಹಣದ ಮೇಲೆ ಈ ಕೆಳಗಿನ ಏಜೆನ್ಸಿಗಳು ನಿಯಂತ್ರಣ ಹೊಂದಿವೆ.

ಬೆಸ್ಕಾಂ (BESCOM): ವಿದ್ಯುತ್ ಸರಬರಾಜು.

ಬಿಎಂಆರ್‌ಸಿಎಲ್ (BMRCL): ನಮ್ಮ ಮೆಟ್ರೋ ಯೋಜನೆ.

ಬೆಮಜಮಂ (BWSSB): ನೀರು ಸರಬರಾಜು ಮತ್ತು ಒಳಚರಂಡಿ.

ಬಿಎಂಟಿಸಿ (BMTC): ಸಾರಿಗೆ ಸೇವೆ.

ಇದನ್ನೂ ಓದಿ: ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್​​!

ಇಷ್ಟೊಂದು ಖರ್ಚಾದರೂ ಸಮಸ್ಯೆಗಳೇಕೆ ತಪ್ಪುತ್ತಿಲ್ಲ?

ಸಾವಿರಾರು ಕೋಟಿ ರೂಪಾಯಿ ಖರ್ಚಾಗುತ್ತಿದ್ದರೂ, ಬೆಂಗಳೂರಿನ ರಸ್ತೆ ಗುಂಡಿಗಳು, ಟ್ರಾಫಿಕ್ ಕಿರಿಕಿರಿ ಮತ್ತು ನೀರಿನ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಇದಕ್ಕೆ ಕೆಲವೊಂದು ಪ್ರಮುಖ ಕಾರಣಗಳನ್ನು ಕೂಡ ನೀಡಲಲಾಗಿದೆ.

ಜವಾಬ್ದಾರಿಯ ಕೊರತೆ: ಹಣವು ವಿವಿಧ ಏಜೆನ್ಸಿಗಳ ನಡುವೆ ಹಂಚಿಹೋಗಿರುವುದರಿಂದ, ಹಣ ಎಲ್ಲಿ ಮತ್ತು ಹೇಗೆ ಬಳಕೆಯಾಯಿತು ಎಂಬ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿ: 2020ರಿಂದ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಸಾರ್ವಜನಿಕರ ನೇರ ನಿಗಾ ಕಡಿಮೆಯಾಗಿದೆ.

ಏಕೀಕೃತ ವ್ಯವಸ್ಥೆಯ ಕೊರತೆ: ನಗರಕ್ಕೆ ಸಮಗ್ರವಾದ ಏಕೈಕ ಹಣಕಾಸು ವ್ಯವಸ್ಥೆ ಇಲ್ಲದಿರುವುದು ಆಡಳಿತಾತ್ಮಕ ಗೊಂದಲಕ್ಕೆ ಕಾರಣವಾಗಿದೆ.

ವರದಿಯ ಪ್ರಕಾರ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದಿದ್ದರೆ ಎಷ್ಟು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದರೂ ಅದು ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯಾಗಿ ಬದಲಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Explainer: ಸಂಸತ್​​ನಲ್ಲಿ ಅಂಗೀಕಾರವಾಗುತ್ತಾ ಮಹಿಳಾ ಮೀಸಲಾತಿ ಮಸೂದೆ? ಏನಿದರ ಮಹತ್ವ, ವಿಪಕ್ಷಗಳ ವಿರೋಧವೇಕೆ?

ನವದೆಹಲಿ, ಏಪ್ರಿಲ್ 13: ಏಪ್ರಿಲ್ 16ರಿಂದ 18ರವರೆಗೆ ಮಹಿಳಾ ಮೀಸಲಾತಿ (Women’s Reservation Bill) ಕಾನೂನನ್ನು ತಿದ್ದುಪಡಿ ಮಾಡಲು ಸಂಸತ್ತು ವಿಶೇಷ ಅಧಿವೇಶನವನ್ನು ನಡೆಸಲಿದೆ. 2029ರ ಸಾರ್ವತ್ರಿಕ ಚುನಾವಣೆಗಳಿಂದ ನಾರಿ ಶಕ್ತಿ ವಂದನ ಅಧಿನಿಯಮವನ್ನು (Nari Shakti Vandan Adhiniyam) ಜಾರಿಗೆ ತರಲು ಸರ್ಕಾರ ಗುರಿ ಹೊಂದಿದೆ. ಈ ಬದಲಾವಣೆಗಳು ಭವಿಷ್ಯದ ಜನಗಣತಿ ಮತ್ತು ಸೀಮಾ ನಿರ್ಣಯದಿಂದ ಕೋಟಾವನ್ನು ಬೇರ್ಪಡಿಸುತ್ತವೆ. ಇದು 2029ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮಹಿಳಾ ಮೀಸಲಾತಿ ಜಾರಿಯಲ್ಲಿರಲು ಅನುವು ಮಾಡಿಕೊಡುತ್ತದೆ. ಏಪ್ರಿಲ್ 16ರಿಂದ 18ರವರೆಗೆ ಮೂರು ದಿನಗಳ ವಿಶೇಷ ಸಂಸತ್ತಿನ ಅಧಿವೇಶನವು ಮಹಿಳಾ ಮೀಸಲಾತಿ ಕಾನೂನಿಗೆ ಪ್ರಮುಖ ತಿದ್ದುಪಡಿಗಳನ್ನು ತೆಗೆದುಕೊಳ್ಳಲು ಸಜ್ಜಾಗಿದೆ. ಸರ್ಕಾರವು 2029ರ ಸಾರ್ವತ್ರಿಕ ಚುನಾವಣೆಗಳಿಂದ ಕೋಟಾಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ. ಆದರೆ, ಈ ವಿಶೇಷ ಅಧಿವೇಶನಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆಯನ್ನು 2023ರಲ್ಲಿ ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯು ಪ್ರಸ್ತಾವಿತ ಶಾಸನದ ಅಡಿಯಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಾತಿ ಮಾಡುವ ಗುರಿಯನ್ನು ಹೊಂದಿದೆ. 2023ರ ಮಹಿಳಾ ಮೀಸಲಾತಿ ಮಸೂದೆ 128ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ 2023 ಮತ್ತು 106ನೇ ತಿದ್ದುಪಡಿ ಕಾಯ್ದೆ 2023ರ ಅಡಿಯಲ್ಲಿ ಬರುತ್ತದೆ. ಈ ಮಸೂದೆಯು ಲೋಕಸಭೆ, ದೆಹಲಿ ಮತ್ತು ಶಾಸಕಾಂಗ ಸಭೆಯ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಖಚಿತಪಡಿಸುತ್ತದೆ. ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಸ್ಥಾನ ಮೀಸಲಾತಿಗಾಗಿ 2023ರ ಮೀಸಲಾತಿ ಮಸೂದೆಯು ಎಸ್​ಸಿಗಳು (ಪರಿಶಿಷ್ಟ ಜಾತಿಗಳು) ಮತ್ತು ಎಸ್​ಟಿಗಳಿಗೆ (ಪರಿಶಿಷ್ಟ ಪಂಗಡಗಳು) ಅನ್ವಯಿಸುತ್ತದೆ.

ಇದನ್ನೂ ಓದಿ: Women’s Reservation Bill 2026: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬೆಂಬಲ ಕೋರಿ ಸಂಸದರಿಗೆ ಪ್ರಧಾನಿ ಮೋದಿ ಪತ್ರ

ಪ್ರಸ್ತುತ ನಿಬಂಧನೆಗಳ ಅಡಿಯಲ್ಲಿ, ಮುಂದಿನ ಜನಗಣತಿಯ ಆಧಾರದ ಮೇಲೆ ಸೀಮಿತೀಕರಣದ ನಂತರವೇ ಈ ಮೀಸಲಾತಿ ಜಾರಿಗೆ ಬರುತ್ತದೆ. 2029ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಜಾರಿಗೆ ತರಲು ಸರ್ಕಾರ ತಿದ್ದುಪಡಿಗಳ ಮೇಲೆ ಕೆಲಸ ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಏಪ್ರಿಲ್ 8ರಂದು ಕರಡು ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿತು. ಇದು ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಕಾನೂನನ್ನು ಜಾರಿಗೆ ತರಲು ದಾರಿ ಮಾಡಿಕೊಟ್ಟಿತು. ವಿಶೇಷ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಒಮ್ಮತವನ್ನು ಒತ್ತಾಯಿಸಿ ಪ್ರಯತ್ನಗಳನ್ನು ಹೆಚ್ಚಿಸಿದ್ದಾರೆ. ಏಪ್ರಿಲ್ 16ರಿಂದ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಸಂಬಂಧಿಸಿದ ಐತಿಹಾಸಿಕ ಚರ್ಚೆ ನಡೆಯಲಿದೆ.

ಮಹಿಳಾ ಮೀಸಲಾತಿ ಮಸೂದೆ ಎಂದರೇನು?:

ಈ ಮೂರು ದಿನಗಳ ಅಧಿವೇಶನದಲ್ಲಿ, 2027ರ ಜನಗಣತಿ ಪೂರ್ಣಗೊಳ್ಳುವ ಮೊದಲು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ನೀಡುವ ಈ ಕಾನೂನಿಗೆ ತಿದ್ದುಪಡಿಯನ್ನು ಅಂಗೀಕರಿಸಲು ಮೋದಿ ಸರ್ಕಾರ ಗುರಿಯನ್ನು ಹೊಂದಿದೆ. ಇದಲ್ಲದೆ, ಈ ಮಸೂದೆಯು ಲೋಕಸಭೆಯನ್ನು 816 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಹೊಂದಿದೆ. ಅದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.

ಇದನ್ನೂ ಓದಿ: ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ: 2029 ರಿಂದ ಶೇ. 33 ಮಹಿಳಾ ಮೀಸಲಾತಿ ಜಾರಿ, ವಿಶೇಷ ಅಧಿವೇಶನಕ್ಕೆ ಕೇಂದ್ರದ ಕರೆ

ಈ ಮಸೂದೆ ಅಂಗೀಕಾರವಾದರೆ ಈ ಮೀಸಲಾತಿಯನ್ನು ಜಾರಿಗೆ ತರುವ ಮೊದಲ ಚುನಾವಣೆಗಳು ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಮತ್ತು ಉತ್ತರಾಖಂಡದಲ್ಲಿ ನಡೆಯಲಿವೆ. ಸಾಂವಿಧಾನಿಕ ತಿದ್ದುಪಡಿಯಾಗಿರುವ ಈ ಮಸೂದೆಯನ್ನು ಅಂಗೀಕರಿಸಲು ವಿಶೇಷ ಬಹುಮತದ ಅಗತ್ಯವಿದೆ. ಇದರಲ್ಲಿ ಸದನದ ಒಟ್ಟು ಸದಸ್ಯರ ಬಹುಮತ ಮತ್ತು ಹಾಜರಿರುವ ಮತ್ತು ಮತ ಚಲಾಯಿಸುವ ಮೂರನೇ ಎರಡರಷ್ಟು ಸದಸ್ಯರ ಬಹುಮತವೂ ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ಕೋಟಾ ಅನುಷ್ಠಾನಕ್ಕಾಗಿ ರಾಜಕೀಯ ಪಕ್ಷಗಳ ಬೆಂಬಲವನ್ನು ಕೋರಿದ್ದಾರೆ.

ವಿರೋಧ ಪಕ್ಷಗಳ ಆಕ್ಷೇಪ:

ಏಪ್ರಿಲ್ 12ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಸಂಸತ್ ಅಧಿವೇಶನದ ಸಮಯವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಗಳ ಮಧ್ಯೆ ಅಧಿವೇಶನ ನಡೆಸುವುದು “ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ” ಎಂದು ಅವರು ಹೇಳಿದ್ದಾರೆ. “ರಾಜ್ಯಗಳ ಚುನಾವಣೆಗಳ ಸಮಯದಲ್ಲಿ ವಿಶೇಷ ಅಧಿವೇಶನವನ್ನು ಕರೆಯುವುದು ನಿಮ್ಮ ಸರ್ಕಾರವು ಮಹಿಳೆಯರನ್ನು ನಿಜವಾಗಿಯೂ ಸಬಲೀಕರಣಗೊಳಿಸುವ ಬದಲು ರಾಜಕೀಯ ಲಾಭ ಪಡೆಯಲು ಮಸೂದೆಯ ಅನುಷ್ಠಾನವನ್ನು ತ್ವರಿತಗೊಳಿಸುತ್ತಿದೆ ಎಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ” ಎಂದು ಖರ್ಗೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಏಪ್ರಿಲ್ 29ರ ನಂತರ ಸರ್ವಪಕ್ಷ ಸಭೆ ನಡೆಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಖರ್ಗೆ ಪುನರುಚ್ಚರಿಸಿದ್ದಾರೆ.

ಇದರ ನಡುವೆ, ಏಪ್ರಿಲ್ 16ರಿಂದ 18ರವರೆಗೆ ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿದೆ.

ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದ ಕರಡು ತಿದ್ದುಪಡಿ ಮಸೂದೆಯು ಲೋಕಸಭೆಯ ಬಲವನ್ನು 543ರಿಂದ 816 ಸ್ಥಾನಗಳಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಇದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪ್ರಸ್ತಾವಿತ ಕಾನೂನುಗಳು ಒಮ್ಮೆ ಅಂಗೀಕರಿಸಲ್ಪಟ್ಟ ನಂತರ 2029ರ ಮಾರ್ಚ್ 31ರೊಳಗೆ ಜಾರಿಗೆ ಬರುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಗುಜರಾತ್‌ನ ಅಪಘಾತದಲ್ಲಿ 7 ಜನ ಸಾವು; ರಾಷ್ಟ್ರಪತಿ, ಪ್ರಧಾನಿ ಮೋದಿ ಸಂತಾಪ

ನವದೆಹಲಿ, ಏಪ್ರಿಲ್ 13: ಇಂದು ಬೆಳಗಿನ ಜಾವ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ದುರಂತ ಸಂಭವಿಸಿದ್ದು, ವೇಗವಾಗಿ ಬಂದ ಟ್ರಕ್ ಯಾತ್ರಿಕರ ಗುಂಪಿನ ಮೇಲೆ ಡಿಕ್ಕಿ ಹೊಡೆದ ಪರಿಣಾಮವಾಗಿ 7 ಜನರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಲಖ್ತಾರ್-ವಿರಮ್‌ಗಮ್ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಸುಮಾರು 1.30 ಗಂಟೆಗೆ ಭಕ್ತರು ರಾಜ್‌ಕೋಟ್‌ನಿಂದ ಬಹುಚರಾಜಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Mumru) ಸಂತಾಪ ಸೂಚಿಸಿದ್ದಾರೆ.

ಲಖ್ತಾರ್ ಪೊಲೀಸ್ ಇನ್ಸ್‌ಪೆಕ್ಟರ್ ಯೋಗೇಶ್ ಪಟೇಲ್ ಅವರ ಪ್ರಕಾರ, ಈ ಗುಂಪು ಸುಮಾರು 500 ಯಾತ್ರಿಕರ ದೊಡ್ಡ ಮೆರವಣಿಗೆಯ ಭಾಗವಾಗಿತ್ತು. ಅವರು ಭಾಸ್ಕರ್‌ಪಾರ ಗ್ರಾಮದ ಹೊರವಲಯವನ್ನು ತಲುಪುತ್ತಿದ್ದಂತೆ ಹತ್ತಿಯನ್ನು ತುಂಬಿದ್ದ ಟ್ರಕ್ ಹಿಂದಿನಿಂದ ಅತಿ ವೇಗದಲ್ಲಿ ಬಂದಿತು. ಯಾತ್ರಿಕರು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಡಂಪರ್ ಟ್ರಕ್ ಅನ್ನು ದಾಟಿ ಹೋಗಲು ಪ್ರಯತ್ನಿಸುತ್ತಿದ್ದಾಗ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಭೀಕರವಾಗಿದ್ದು, ನಾಲ್ವರು ಮಹಿಳೆಯರು ಮತ್ತು ಸ್ಥಿರ ಡಂಪರ್‌ನ ಚಾಲಕ ಸೇರಿದಂತೆ 6 ಜನರು ತಕ್ಷಣವೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹಾಪುರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಆರು ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಬದುಕುಳಿದ ನಾಲ್ವರಲ್ಲಿ ಮೂವರು ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯನ್ನು ಹೆಚ್ಚಿನ ವಿಶೇಷ ಆರೈಕೆಗಾಗಿ ರಾಜ್‌ಕೋಟ್‌ನಲ್ಲಿರುವ ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದೆ. ಗುಜರಾತ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಜೀವಹಾನಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಅಪಘಾತವನ್ನು ಅತ್ಯಂತ ದುರಂತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಮುಂಬೈಗೆ ಮಣ್ಣು ಮುಕ್ಕಿಸಿರುವ ಆರ್​ಸಿಬಿಗೆ ಮುಂದಿನ ಎದುರಾಳಿ ಯಾರು? ಪಂದ್ಯ ಯಾವಾಗ?

ಐಪಿಎಲ್​ 2026 ರ (IPL 2026) 20ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಅವರ ನೆಲದಲ್ಲಿ 18 ರನ್​ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡ ಮತ್ತೆ ತನ್ನ ತವರು ನೆಲದತ್ತ ಪ್ರಯಾಣಿಸಲಿದೆ. ಮೊದಲ ಎರಡು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಿದ್ದ ಆರ್​ಸಿಬಿ ಆ ಬಳಿಕ ಎದುರಾಳಿ ತಂಡಗಳ ತವರು ನೆಲದಲ್ಲಿ ಆಡಲು ಅಲ್ಲಿಗೆ ಪ್ರಯಾಣ ಬೆಳೆಸಿತ್ತು. ಇದೀಗ ಆರ್​ಸಿಬಿ (RCB) ತನ್ನ ಐದನೇ ಪಂದ್ಯವನ್ನು ತನ್ನ ತವರು ನೆಲದಲ್ಲಿ ಆಡಲಿದೆ. ಲೀಗ್​ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಆರ್​ಸಿಬಿ ಮೂರು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಈ ಮೂಲಕ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲೇರುವ ಇರಾದೆಯಲ್ಲಿ ರಜತ್ ಪಡೆ ಇದೆ.

ಐಪಿಎಲ್ 2026 ರ 23ನೇ ಪಂದ್ಯದಲ್ಲಿ ಆರ್​​ಸಿಬಿ ಯಾವ ತಂಡವನ್ನು ಎದುರಿಸಲಿದೆ?

ಐಪಿಎಲ್ 2026 ರ 23ನೇ ಪಂದ್ಯದಲ್ಲಿ ಆರ್​​ಸಿಬಿ ಲಕ್ನೋ ಸೂಪರ್​ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಏಪ್ರಿಲ್ 15 ರ ಬುಧವಾರದಂದು ನಡೆಯಲಿದೆ.

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಎಷ್ಟು ಗಂಟೆಗೆ ಆರಂಭ?

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ. ಟಾಸ್ 7 ಗಂಟೆಗೆ ನಡೆಯಲಿದೆ.

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯವನ್ನು ವೀಕ್ಷಿಸುವುದು ಹೇಗೆ?

ಐಪಿಎಲ್ 2026 ರಲ್ಲಿ ಆರ್​​ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಹಾಗೆಯೇ ಜಿಯೋ ಹಾಟ್​ಸ್ಟಾರ್​ನಲ್ಲೂ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

MI vs RCB: ವಾಂಖೆಡೆಯಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಲಕ್ನೋ ಸೂಪರ್​ಜೈಂಟ್ಸ್: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್(ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಶಹಬಾಜ್ ಅಹ್ಮದ್, ಮಯಾಂಕ್ ಯಾದವ್, ಹಿಮ್ಮತ್ ಸಿಂಗ್, ಅನ್ರಿಚ್ ನೋಕಿಯಾ, ಮೊಹ್ಸಿನ್ ಖಾನ್, ಅರ್ಜುನ್ ತೆಂಡೂಲ್ಕರ್, ಆಕಾಶ್ ಮಹಾರಾಜ್ ಸಿಂಗ್, ಅಕ್ಷತ್ ರಘುವಂಶಿ, ಅರ್ಶಿನ್ ಕುಲಕರ್ಣಿ, ನಮನ್ ತಿವಾರಿ, ಜಾರ್ಜ್ ಲಿಂಡೆ, ಜೋಶ್ ಇಂಗ್ಲಿಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾರಿನಲ್ಲೇ ಪ್ರಿಯಕರನಿಂದ ತಾಳಿಕಟ್ಟಿಸಿಕೊಂಡ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಮಹಿಳೆ ಹೇಳಿದ್ದೇನು?

ಹಾಸನ, (ಏಪ್ರಿಲ್ 13): 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಮಹಿಳೆ (Women) ತನ್ನ ಗಂಡ ಹಾಗೂ ಮಗಳನ್ನು ಬಿಟ್ಟು ರಾತ್ರೋ ರಾತ್ರಿ ಲವರ್ ಜೊತೆ ಪರಾರಿಯಾಗಿರೋ ಘಟನೆ ಹಾಸನ (Hassan) ಗೆರೂರು ಪೊಲೀಸ್​ ಠಾಣಾ (Police Station) ವ್ಯಾಪ್ತಿಯಲ್ಲಿ ನಡೆದಿದೆ. ಓಡಿ ಹೋಗಿದ್ದಷ್ಟೇ ಅಲ್ಲ ಕಾರಿನಲ್ಲಿ ಪ್ರಿಯಕರನ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದು, ಸದ್ಯ ಈ ವಿಡಿಯೋ (Video) ಇದೀಗ ವೈರಲ್ ಅಗಿದೆ. ಆದ್ರೆ, ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಾಳಿ ಕಟ್ಟಿಸಿಕೊಂಡ ಬಳಿಕ ಪತಿ ಪ್ರಕಾಶ್ ನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದ ಹರ್ಷಿತಾ, ತಪ್ಪಾಯ್ತು ತನ್ನ ಕರೆದುಕೊಂಡು ಹೋಗಿ ಎಂದು ಬೇಡಿಕೊಂಡಿದ್ದಳು. ಆದ್ರೆ, ಇದಕ್ಕೆ ಪ್ರಕಾಶ್ ಒಪ್ಪದಿದ್ದಾಗ ಹರ್ಷಿತಾ ಸಹ ರೊಚ್ಚಿಗೆದ್ದಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ.

ಪತಿ ಪ್ರಕಾಶ್ ಹೇಳಿದ್ದೇನು?

ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಬಗ್ಗೆ ಪತಿ ಪ್ರಕಾಶ್ ಟಿವಿ9 ಜೊತೆ ಮಾತನಾಡಿದ್ದು, 15 ಹಸು ಇತ್ತು ನಿತ್ಯ 100 ಲೀಟರ್ ಹಾಲು ಹಾಕ್ತಿದ್ದೆ. ಟ್ರ್ಯಾಕ್ಟರ್ ಆಸ್ತಿ ಮನೆ‌ ಎಲ್ಲವೂ ಇತ್ತು. ತಿಂಗಳಿಗೆ ಕನಿಷ್ಠ 80 ಸಾವಿರ ರೂಪಾಯಿ ಆದಾಯ ಇತ್ತು. ಎಲ್ಲಾ ವ್ಯವಹಾರ ಪತ್ನಿಗೆ ಕೊಟ್ಟಿದ್ದೆ. ನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದು ಮದವೆ ಆಗಿದ್ದಳು. ಸ್ವಂತ ಸೋದರ ಮಾವನ ಮಗಳನ್ನ ನಾನೂ ಇಷ್ಟಪಟ್ಟು ಮದುವೆ ಆಗಿದ್ದೆ. ಎಂದೂ ಅನುಮಾನ ಬರದಂತೆ ಇದ್ದು ಹೀಗೆ ಮೋಸ ಮಾಡಿದಾಳೆ. ಆಸ್ಪತ್ರೆಗೆ ಹೋಗ್ತಿನಿ ಎಂದು ವಾಪಸ್ ಬರ್ಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಗಂಡನೊಂದಿಗೆ ಇರ್ತೀನಿ ಅಂತ ನಾಟಕ

ಲೋ ಬಿಪಿ ಇರೋ ಪತ್ನಿ ಎಲ್ಲಿ ಅನಾರೋಗ್ಯದಿಂದ ಬಿದ್ದು ಹೋದಲು ಎಂದು ಹುಡುಕಾಡಿದ್ದೆ. ಆದರೆ ಗೆಳತಿ ಮನೆಯಲ್ಲಿ ಇರೋದಾಗಿ ಹೇಳಿ ಕಡೆಗೆ ನೀನು ನಂಗೆ ಇಷ್ಟ ಇಲ್ಲ ಎಂದು ಮೆಸೇಜ್ ಮಾಡಿದ್ದಳು. ಬಳಿಕ ಪೊಲೀಸರಿಗೆ ದೂರು ನೀಡಿದಾಗ ಗೊರೂರು ಠಾಣೆಗೆ ಬಂದಿದ್ದಳು. ಈ ವೇಳೆ ನನಗೆ ಪತಿ ಇಷ್ಟ ಇಲ್ಲ ಎಂದು ಹೇಳಿದ್ದ ಹರ್ಷಿತಾಳನ್ನು ಕಡೆಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ‌ ಫೋನ್‌ಮಾಡಿ ತಪ್ಪಾಯ್ತು ಬಂದು ಕರ್ಕೊಂಡ್ ಹೋಗಿ ಅಂದಿದ್ದಳು. ಹೋದಾಗ ಕಾಲು ಹಿಡಿದು ಕಣ್ಣೀರು ಹಾಕಿದ್ದಳು. ಮಗನಿಗಾಗಿ ಕ್ಷಮಿಸಿ ಕರೆದೊಯ್ದರೆ ಏಪ್ರಿಲ್ 10 ರ ರಾತ್ರಿ ನನಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್ ಆಗಿದ್ದಾಳೆ. ಮನೆಯಿಂದ 200 ಗ್ರಾಂ ಚಿನ್ನ ಏಳು ಲಕ್ಷ ಹಣ ತೆಗೆದುಕೊಂಡು ಹೋಗಿದ್ದಾಳೆ. ನಮಗೆ ಅಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆಕೆ ವಾಪಸ್ ಬಂದ್ರೆ ಯಾವುದೇ ಕಾರಣದಿಂದ‌ ಮತ್ತೆ ಕ್ಷಮಿಸಲ್ಲ.
ಅವಳು ವಾಪಸ್ ಬಂದರೆ ನಮ್ಮನ್ನೆ ಉಳಿಸಲ್ಲ. ಅವಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟ ಹರ್ಷಿತಾ

ಯಾವಾಗ ಪತಿ ಕ್ಷಮಿಸಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ಪತ್ನ ಹರ್ಷಿತಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಗಂಡನ ಆರೋಪವನ್ನು ಅಲ್ಲಗೆಳೆದಿದ್ದಾಳೆ. ಅಲ್ಲದೇ ಕೆಲವೊಂದಿಷ್ಟು ಆರೋಪ ಮಾಡಿದ್ದು, ಡಿವೋರ್ಸ್ ಬೇಕೆಂದಿದ್ದಾಳೆ.

ಇದನ್ನೂ ಓದಿ: ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ನಂಗೆ ಡಿವೋರ್ಸ್ ಬೇಕು ಅಷ್ಟೇ

ನನ್ನ ಯಾರೂ ಕಿಡ್ನಾಪ್‌ ಮಾಡಿಲ್ಲ. ಪ್ರಕಾಶ್ ಜೊತೆ ಜೀವನ ಮಾಡಲು ನಂಗೆ ಇಷ್ಟ ಇಲ್ಲ. ಹಾಗಾಗಿ ನಾನೇ ‌ಸ್ವ ಇಚ್ಚೆಯಿಂದ ಹೊರಗೆ ಬಂದಿದ್ದೇನೆ. ಮಹೇಶ್ ಹೇಮಂತ್, ಪ್ರಕಾಶ್ ಮೆಂಟಲಿ ಟಾರ್ಚರ್ ಮಾಡಿದಾರೆ. ಮಾದ್ಯಮದ ಮುಂದೆ ಹೋಗಿ ಮಾನ ಮರ್ಯಾದೆ‌ ಕಳೆದಿದಾರೆ. ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ
ನಂಗೆ ಡಿವೋರ್ಸ್ ಬೇಕು ಅಷ್ಟೇ. ಹೀಗೆ ಬಲವಂತ ಮಾಡಿದ್ರೆ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಿನಿ ‌ಎಂದು ಎಚ್ಚರಿಕೆ ನೀಡಿದ್ದಾಳೆ.

ನನ್ನ ಯಾರೂ ಬಲವಂತವಾಗಿ ಕರೆತಂದಿಲ್ಲ

ಅವರು 200 ಗ್ರಾಂ ಚಿನ್ನ ಹಣ ತಂದಿರುವುದಾಗಿ ಹೇಳಿರುವುದ ಸುಳ್ಳು. ನನ್ನ ಯಾರೂ ಬಲವಂತವಾಗಿ ಕರೆತಂದಿಲ್ಲ ಯಾರೂ ಟಾರ್ಚರ್ ಮಾಡಿಲ್ಲ ನಾನೇ ಸ್ವಾ ಇಚ್ಚೆಯಿಂದ ಬಂದಿದ್ದೇನೆ. ಅವರು ಬೇಡಾ ಎಂದು ದೂರು ಕೊಟ್ಟಿದ್ದೆ. ಹಾಗಾಗಿ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದರು. ನಂತರ ಮನೆಗೆ ಕರ್ಕೊಂಡ್ ಹೋಗಿದ್ರು. ಪ್ರಕಾಶ್ ಚಿಕ್ಕಪ್ಪನ‌ಮಗ ಹೇಮಂತ್ ನನ್ನ ಕತ್ತರಿಸಿ ಹಾಕ್ತಿನಿ ಎಂದು ಹೆದರಿಸಿದ್ದ. ಪ್ರಕಾಶ್ ಕೂಡ ಹಾಗೇ ಹೇಳಿದ್ದರು ಹಕ್ಕು ಖುಲಾಸೆಗೆ ಸಹಿ ಹಾಕಿಸಿಕೊಂಡು ಹಿಂಸೆ ನೀಡಿದ್ರು. ನನಗೆ ಹೊರಗಿನ ಪ್ರಪಂಚ ನೋಡದ ಹಾಗೆ ಮಾಡುತ್ತೇನೆ. ಮನೆ ಕೆಲಸ ಮಾಡಿಕೊಂಡು ಬಿದ್ದಿರು ಅಂದ್ರು. ಊಟ ಕೊಡುತ್ತಿರಲಿಲ್ಲ, ಬಾಯಿಗೆ ಬಂದಂಗೆ ಬೈಯ್ದರು. ಹಾಗಾಗಿ ಇರಲಾಗಲಿಲ್ಲ ಎಂದಿದ್ದಾಳೆ.

ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ‌

ನಾನು ಮನೆ ಬಿಟ್ಟು ಬರಲು ಸಹಾಯ ಮಾಡಿದ್ದು ಹೇಮಂತ್. ಒಂದು ಊರಿಗೆ ಬಂದು ಯಾರ ಸಹಾಯ ಇಲ್ಲದೆ ಹುಡುಗಿನ ಕರ್ಕೊಂಡ್ ಹೋಗಲು ಆಗಲ್ಲ. ನಮಗೆ ಸಹಾಯ ಮಾಡಿದ್ದು ಹೇಮಂತ್. ನನಗೆ ಪಾಪು ಬೇಡ ಎಂದು ಹೇಳಿಲ್ಲ. ನಾನು ಪ್ರಕಾಶ್ ಗೆ ಡಿವೋರ್ಸ್ ಕೊಟ್ಟು ಹೇಗೊ ಮಗು ಸಾಕುತ್ತೇನೆ. ಯಾರೋ ಬಲವಂತ ಮಾಡಿದ್ರು ಎಂದು ಈ ಹೇಳಿಕೆ ನೀಡುತ್ತಿಲ್ಲ. ನಾನೇ ಇಷ್ಟಪಟ್ಟು ಮನೆಯಿಂದ ಹೊರಗೆ ಬಂದಿದ್ದೇನೆ. ಅವರು ಕುಡಿದು ಬಂದು ಹೊಡೆದಿದ್ದಾರೆ. ಹಾಗಾಗಿ ಅವರ ಜೊತೆ ಜೀವನ ಮಾಡಲು ಇಷ್ಟ ಇಲ್ಲ‌ಎಂದು ಸ್ಪಷ್ಟಪಡಿಸಿದ್ದಾಳೆ.

Source link

ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್​​!

ಬೆಂಗಳೂರು, ಏಪ್ರಿಲ್​​ 13: ದೇವಾಲಯಗಳು ಮತ್ತು ಸಮುದಾಯ ಭವನಗಳನ್ನು ಚಲನಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಕ್ಕಾಗಿ ಬಾಡಿಗೆಗೆ ನೀಡುವ ಮೂಲಕವೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 71 ಲಕ್ಷ ಆದಾಯ ಗಳಿಸಿದೆ. 2023–24ರಿಂದ 2025–26ರವರೆಗೆ ಚಿತ್ರ ಚಿತ್ರೀಕರಣದಿಂದ 53.91 ಲಕ್ಷ ರೂ. , ಧಾರಾವಾಹಿಗಳಿಂದ 16.86 ಲಕ್ಷ ರೂ. ಬಂದಿದೆ. ಡಾಕ್ಯುಮೆಂಟರಿ, ನ್ಯೂಸ್ ಫೀಚರ್ ಹಾಗೂ ಜಾಹೀರಾತುಗಳಿಂದ ಹೆಚ್ಚುವರಿಯಾಗಿ 42 ಸಾವಿರ ಹಣವನ್ನು ಇಲಾಖೆ ಗಳಿಸಿದೆ.

ಮೈಸೂರು ನಗರದ ನಂಜರಾಜ ಬಹಾದೂರು ಚೌಲ್ಟ್ರಿ 13.27 ಲಕ್ಷ ಆದಾಯ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ 11.13 ಲಕ್ಷ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರುದಲ್ಲಿರುವ ಶ್ರೀ ರಾಯ ರಾಯ ಕಲ್ಯಾಣ ಮಂಟಪ 9.73 ಲಕ್ಷ ಆದಾಯ ತಂದಿದೆ. ಕನ್ನಡ ಚಿತ್ರಗಳ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರತಂಡಗಳು ಸಹ ಈ ಸ್ಥಳಗಳನ್ನು ಬಳಸಿದ್ದು, ಇದರಿಂದ ಆದಾಯ ಹೆಚ್ಚಾಗಿದೆ. ಇನ್ನು ಈ ಆದಾಯವನ್ನು ಆಸ್ತಿಗಳ ನಿರ್ವಹಣೆಗೆ ಬಳಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?

ಹಳೆಯ ಮೈಸೂರು ಭಾಗವೇ ಫೆವರೇಟ್​​

ಹಳೆಯ ಮೈಸೂರು ಭಾಗದ ದೇವಾಲಯಗಳು ಮತ್ತು ಸಮುದಾಯ ಭವನಗಳು ಚಿತ್ರ ನಿರ್ಮಾಪಕರಿಗೆ ಹೆಚ್ಚು ಮೆಚ್ಚಿನ ತಾಣಗಳಾಗಿವೆ. ಹೀಗಾಗಿ ಈ ಭಾಗದ ಮುಜರಾಯಿ ಆಸ್ತಿಗಳಿಗೆ ಹೆಚ್ಚಿನ ಚಿತ್ರೀಕರಣ ಬೇಡಿಕೆ ಬರುತ್ತಿದೆ. ಮಂಡ್ಯ ಜಿಲ್ಲೆಯ ಚೆಲುವನಾರಾಯಣಸ್ವಾಮಿ ದೇವಾಲಯ ಮತ್ತು ನಿಮಿಷಾಂಬಾ ದೇವಾಲಯಗಳು ಚಿತ್ರ ಹಾಗೂ ಧಾರಾವಾಹಿ ತಂಡಗಳನ್ನು ಹೆಚ್ಚು ಆಕರ್ಷಿಸಿವೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ದೇವಾಲಯಗಳು ಧಾರಾವಾಹಿ ಚಿತ್ರೀಕರಣಕ್ಕೆ ಹೆಚ್ಚು ಬೇಡಿಕೆಯಲ್ಲಿವೆ. ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳದ ಹುಳಿಗೆಮ್ಮದೇವಿ ದೇವಾಲಯ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಾಲಯಗಳಲ್ಲಿ ಮಾತ್ರ ಚಿತ್ರೀಕರಣ ನಡೆದಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಯಾವುದೇ ಚಿತ್ರೀಕರಣ ನಡೆದಿಲ್ಲ.

ಎ-ಗ್ರೇಡ್ ಆಸ್ತಿಗಳಿಗೆ ದಿನಕ್ಕೆ 15,000 ಮತ್ತು ಬಿ-ಗ್ರೇಡ್ ಆಸ್ತಿಗಳಿಗೆ 10,000 ಬಾಡಿಗೆ ನಿಗದಿಯಾಗಿದೆ. ಆದರೆ ದಾಖಲೆಗಳ ಪ್ರಕಾರ, ಬಹುತೇಕ ಎ-ಗ್ರೇಡ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ ಚಿತ್ರತಂಡಗಳು ಕೇವಲ 5,000 ಮಾತ್ರ ಪಾವತಿಸಿರುವುದು ಕಂಡುಬಂದಿದೆ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ದೇವಾಲಯಗಳು ಮತ್ತು ಸಮುದಾಯ ಭವನಗಳ ನಿರ್ವಹಣೆ ಮುಜರಾಯಿ ಇಲಾಖೆಯಾದರೂ, ಚಿತ್ರೀಕರಣಕ್ಕೆ ಅನುಮತಿ ನೀಡುವುದು ಹಾಗೂ ದರ ನಿಗದಿಪಡಿಸುವುದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಚಿತ್ರ ಅಥವಾ ಧಾರಾವಾಹಿಯ ಬಜೆಟ್‌ ಆಧರಿಸಿ ರಿಯಾಯಿತಿ ನೀಡಲಾಗಿರಬಹುದು. ಮಾಹಿತಿ ಪ್ರಧಾನ ಹಾಗೂ ರಾಜ್ಯ ಪ್ರಚಾರ ಯೋಜನೆಗಳಿಗೆ ಸಹ ಬಾಡಿಗೆ ರಿಯಾಯಿತಿ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜನ ನಾಯಗನ್’ ಲೀಕ್ ಬೆನ್ನಲ್ಲೇ ಕಠಿಣ ಕ್ರಮ: ಸೈಬರ್ ಕ್ರೈಂ ಪೊಲೀಸರಿಂದ 6 ಜನರ ಬಂಧನ

ಕಾಲಿವುಡ್ ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾಗೆ ಪೈರಸಿ ಕಾಟ ಎದುರಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾವನ್ನು ಲೀಕ್ ಮಾಡಲಾಗಿದೆ. ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ಈಗಾಗಲೇ ಆರು ಜನರನ್ನು ಬಂಧಿಸಿದ್ದಾರೆ. ಈ ಚಿತ್ರವನ್ನು ಪ್ರತಿಷ್ಠಿತ ಕೆವಿಎನ್ (KVN) ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಸಿನಿಮಾ ಲೀಕ್ ಆಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂಸ್ಥೆಯ ಪರವಾಗಿ ಕಾನೂನು ಸಲಹೆಗಾರರಾದ ವಿಜಯನ್ ಸುಬ್ರಹ್ಮಣ್ಯಂ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಜನ ನಾಯಗನ್ ಚಿತ್ರದ ದೃಶ್ಯಗಳನ್ನು ಕಾನೂನುಬಾಹಿರವಾಗಿ ಹಂಚಿಕೊಂಡ ಆರೋಪದ ಮೇಲೆ ಸೈಬರ್ ಕ್ರೈಂ ಪೊಲೀಸರು ಈಗಾಗಲೇ 6 ಜನರನ್ನು ಬಂಧಿಸಿದ್ದಾರೆ. ಇನ್ನು ಮುಂದೆ ಯಾರಾದರೂ ಈ ಲೀಕ್ ಆದ ದೃಶ್ಯಗಳನ್ನು ಡೌನ್‌ಲೋಡ್ ಮಾಡುವುದು, ಫಾರ್ವರ್ಡ್ ಮಾಡುವುದು ಅಥವಾ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಹಂಚಿಕೊಳ್ಳುವುದು ಕಂಡುಬಂದಲ್ಲಿ, ಅವರನ್ನು ಪತ್ತೆಹಚ್ಚಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ನಿರ್ಮಾಣ ಸಂಸ್ಥೆಯು ಈಗಾಗಲೇ ಸಾರ್ವಜನಿಕ ನೋಟಿಸ್ ಹೊರಡಿಸಿದ್ದು, ಚಿತ್ರವು ನೂರಾರು ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಸಿದ್ಧವಾಗಿದೆ ಎಂದು ತಿಳಿಸಿದೆ. ಎಚ್. ವಿನೋದ್ ನಿರ್ದೇಶನದ ಮತ್ತು ಅನಿರುದ್ಧ್ ರವಿಚಂದರ್ ಸಂಗೀತವಿರುವ ಈ ಚಿತ್ರವು ಥಿಯೇಟರ್, ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳ ಮೂಲಕ ಭಾರಿ ಮೌಲ್ಯವನ್ನು ಹೊಂದಿದೆ. ಅಂತಹ ಚಿತ್ರದ ದೃಶ್ಯಗಳನ್ನು ಕಳುವು ಮಾಡಿ ಹಂಚುತ್ತಿರುವುದು ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.

ವಾಟ್ಸಾಪ್, ಟೆಲಿಗ್ರಾಮ್, ಎಕ್ಸ್, ಫೇಸ್‌ಬುಕ್ ಅಥವಾ ಯಾವುದೇ ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾದ ತುಣುಕುಗಳನ್ನು ಹಂಚುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಯಾವುದೇ ವಿನಾಯಿತಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ತಿಳಿಸಿದೆ. ಸಿನಿಮಾ ರಂಗದ ಮೇಲೆ ನಂಬಿಕೆ ಇಟ್ಟು ನೂರಾರು ಕೋಟಿ ಹೂಡಿಕೆ ಮಾಡುವ ನಿರ್ಮಾಪಕರ ಹಿತದೃಷ್ಟಿಯಿಂದ ಪ್ರೇಕ್ಷಕರು ಪೈರಸಿಯನ್ನು ಪ್ರೋತ್ಸಾಹಿಸಬಾರದು ಎಂದು ಚಿತ್ರತಂಡ ಮನವಿ ಮಾಡಿದೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್​​ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆರೋಪ

ವಿಜಯ್ ಅವರು ಶೀಘ್ರದಲ್ಲೇ ರಾಜಕೀಯ ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಸಿನಿಮಾ ಲೀಕ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇತ್ತ ಇಡೀ ದಕ್ಷಿಣ ಭಾರತದ ಚಿತ್ರೋದ್ಯಮ ವಿಜಯ್ ಬೆಂಬಲಕ್ಕೆ ನಿಂತಿದೆ. ಮೆಗಾ ಸ್ಟಾರ್ ಚಿರಂಜೀವಿ, ಸೂರ್ಯ, ಶಿವಕಾರ್ತಿಕೇಯನ್, ಖುಷ್ಬೂ ಸುಂದರ್, ಕಾರ್ತಿ, ಜಿ.ವಿ. ಪ್ರಕಾಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಈ ಪೈರಸಿ ಕೃತ್ಯವನ್ನು ಖಂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು

ದಾವಣಗೆರೆ, ಏಪ್ರಿಲ್​ 13: ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರುಪೀಠದಿಂದ ವಚನಾನಂದ ಸ್ವಾಮೀಜಿಯನ್ನ ಉಚ್ಚಾಟನೆ ಮಾಡಿದ್ದಕ್ಕೆ ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮದರ್ಶಿಗಳು ಹೋಗುತ್ತಿದ್ದ ವಾಹನಕ್ಕೆ ಚಪ್ಪಲಿ ತೋರಿಸಿ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಹನಗವಾಡಿಯ ಪಂಚಮಸಾಲಿ ಗುರುಪೀಠದ ಎದುರು ಭಾರೀ ಹೈಡ್ರಾಮಾವೇ ನಡೆದಿದೆ. ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದಶ್ರೀ, ನನ್ನ ಉಚ್ಚಾಟನೆ ಹಾಸ್ಯಾಸ್ಪದ. ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಆರೋಪಿಸಿದರು. ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಶ್ವಾಸಪೀಠ ಹಾಗೂ ನನ್ನ ಹೆಸರಿನಲ್ಲಿ ಒಂದು ಇಂಚು ಭೂಮಿ ಇಲ್ಲ. ಪೀಠಾಧ್ಯಕ್ಷರಾದ ಬಳಿಕ ಪೂರ್ವಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಕಿರಿಕಾರಿದರು. ಇನ್ನು ಕಾನೂನು ಹೋರಾಟದ ಬಗ್ಗೆ ಭಕ್ತರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮ್ಮನಿಗೆ ಆಸರೆ ಆಗಿದ್ದ ಮಗಳು ವಿಧಿಯಾಟಕ್ಕೆ ಬಲಿ: ಪ್ರವಾಸಕ್ಕೆ ಹೋಗಿದ್ದಾಗ ಸುಳ್ಯದ ಯುವ ಇಂಜಿನಿಯರ್ ದುರಂತ ಅಂತ್ಯ

ಆಂಧ್ರಪ್ರದೇಶ, ಏ.13: ಹಲವು ಆಸೆಗಳು, ಆಗಷ್ಟೇ ಕೈ ತುಂಬಾ ಸಂಬಳ ಸಿಗುವ ಕೆಲಸಕ್ಕೆ ಸೇರಿದ್ದ ಮನೆ ನಂದಾದೀಪ, ಇದೀಗ ಆ ವಿಧಯಾಟಕ್ಕೆ ಬಲಿಯಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಕ್ಷಿಪ್ರಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ 27 ವರ್ಷದ ಕ್ಷಿಪ್ರಾ ಪ್ರಾಣ ಬಿಟ್ಟಿದ್ದಾರೆ.

ಸುಳ್ಯದ ಕಂದಡ್ಕ ನಿವಾಸಿ ಶಶಿಕಲಾ ಭಟ್ ಅವರ ಏಕೈಕ ಪುತ್ರಿ ಕ್ಷಿಪ್ರಾ (27), ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದರು. ಶನಿವಾರ ರಾತ್ರಿ ಪ್ರಯಾಣಿಸುತ್ತಿದ್ದ ವೇಳೆ, ಚಾಲಕನಿಗೆ ಮಂಪರು ಆವರಿಸಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಯಮ ಪಾಶದಂತೆ ಹಾರಿ ಬಂದ ಓಮ್ನಿ: ಪಾದಚಾರಿಗಳ ಮೇಲೆ ಎರಗಿದ ಭಯಾನಕ ದೃಶ್ಯ

ಅಪಘಾತದ ತೀವ್ರತೆಗೆ ಕ್ಷಿಪ್ರಾ ಅವರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಸಹೋದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷಿಪ್ರಾ ಅವರು ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ ಮುಗಿಸಿ, ನಿಟ್ಟೆ ಕಾಲೇಜಿನಲ್ಲಿ ಎಂಟೆಕ್ ಪದವಿ ಪಡೆದಿದ್ದರು. ತಂದೆಯನ್ನು ಮೊದಲೇ ಕಳೆದುಕೊಂಡಿದ್ದ ಇವರು, ತಾಯಿ ಶಶಿಕಲಾ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೆಯ ಏಕೈಕ ಆಧಾರ ಸ್ತಂಭವಾಗಿದ್ದ ಮಗಳ ನಿಧನದಿಂದ ಸುಳ್ಯದ ಕಂದಡ್ಕ ಪರಿಸರದಲ್ಲಿ ಶೋಕ ಮಡುಗಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು

ನೆಲಮಂಗಲ, ಏಪ್ರಿಲ್​​ 13: ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ಆರ್​ಟಿಒ ಕಚೇರಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಆರ್​ಟಿಒ ಕಚೇರಿಯ ಪ್ರೊಬೇಷನರಿ ಇನ್ಸ್​ಪೆಕ್ಟರ್​ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಗಳು ಗೂಗಲ್ ಪೇ ಮೂಲಕ 2,000, 1,000 ರೂಪಾಯಿ ಹಣವನ್ನು ಲಂಚ ಪಡೆದಿದ್ದರು. ಇಂದು ಖಾಸಗಿ ವ್ಯಕ್ತಿ ರಮೇಶ್ 300 ರೂ. ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರು ಇವರನ್ನು ಖೆಡ್ಡಾಕೆ ಕೆಡವಿದ್ದಾರೆ. ಓವರ್​ಲೋಡ್ ಟ್ರಕ್ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಹಾರಾಷ್ಟ್ರ ಮೂಲದ ಪ್ರಶಾಂತ್ ದತ್ತಾತ್ರೇಯ ಎಂಬುವವರು ಲೋಕಾಯುಕ್ತಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಎಸ್​ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

Exit mobile version