ಅರಹಳ್ಳಿ ಕೆರೆಯಲ್ಲಿ ದುರಂತ: ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ತೆತ್ತ ಮಹಿಳೆಯರು

ಅರಹಳ್ಳಿ ಕೆರೆಯಲ್ಲಿ ದುರಂತ: ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ತೆತ್ತ ಮಹಿಳೆಯರು

ಕೋಲಾರ, ಏಪ್ರಿಲ್​ 13: ಕೆರೆಗೆ ಬಿದ್ದಿದ್ದ ಮಕ್ಕಳನ್ನ ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲಾದ (death) ಘಟನೆ ಕೋಲಾರದ ಅರಹಳ್ಳಿ ಕೆರೆಯಲ್ಲಿ ನಡೆದಿದೆ. ಮೊಹಮದಿ(25) ಮತ್ತು ಸಲ್ಮಾ (26) ನೀರುಪಾಲಾದ ಮಹಿಳೆಯರು. ಮೃತ ಮಹಿಳೆಯರು ನಿಸಾರ್ ನಗರದ ನಿವಾಸಿಗಳು. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ಕೋಲಾರದ ಅರಹಳ್ಳಿ ಕೆರೆಗೆ ಮಹಿಳೆಯರು ಸೇರಿದಂತೆ ಮಕ್ಕಳು ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ  ಮಕ್ಕಳು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಮೊಹಮದಿ ಮತ್ತು ಸಲ್ಮಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕಾರ್ಯಕ್ರಮ ಹಿನ್ನೆಲೆ ಸಲ್ಮಾ ಬೆಂಗಳೂರಿಂದ ಬಂದಿದ್ದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು, ಯುವಕ ಸಾವು!

ಇನ್ನು ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕೃಷ್ಣಾವರಂ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ಕ್ರೆಟಾ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಜಲ ಕಂಟಕ: ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 10 ಮಂದಿ ನೀರು ಪಾಲು

ಅಪಘಾತದಲ್ಲಿ ಬೆಂಗಳೂರು ಮೂಲದ ದೇವಾನಂದ್ (24) ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಸರ್ವೇಶ್ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಪ್ರಯಾಣಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೇತಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಪಘಾತಕ್ಕೀಡಾದ ವಾಹನವನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅತಿಯಾದ ವೇಗವೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜನ ನಾಯಗನ್’ ರೀತಿ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಕೆಡಿ’ ಸಿನಿಮಾಗೂ ಸೆನ್ಸಾರ್ ಸಮಸ್ಯೆ

‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ನಿರ್ಮಾಣ ಮಾಡಿರುವ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿರುವುದು ಗೊತ್ತೇ ಇದೆ. ಈಗ ಅದೇ ನಿರ್ಮಾಣ ಸಂಸ್ಥೆಯ ‘ಕೆಡಿ’ ಸಿನಿಮಾ (KD Movie) ಕೂಡ ಇದೇ ರೀತಿಯ ಸಮಸ್ಯೆಗೆ ಸಿಲುಕಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಿದ್ದು, ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಹೊಸ ಸಂಕಷ್ಟ ಶುರುವಾಗಿದೆ. ಚಿತ್ರತಂಡದ ಗಮನಕ್ಕೂ ಬಾರದಂತೆ ಈ ಸಿನಿಮಾವನ್ನು ಸೆನ್ಸಾರ್ (Censor) ಮಂಡಳಿಯ ರಿವೈಸಿಂಗ್ ಕಮಿಟಿಗೆ ಕಳಿಸಲಾಗಿದೆ.

‘ಕೆಡಿ’ ಸಿನಿಮಾವನ್ನು ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ರಕ್ತಪಾತ ಇರುವುದರಿಂದ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಲು ಸಜ್ಜಾಗಿತ್ತು. ಹಾಡಿನ ಸಾಹಿತ್ಯದಲ್ಲಿ ಕೆಲವು ಸಾಲುಗಳನ್ನು ಬದಲಾಯಿಸುವಂತೆ ಸೂಚಿಸಲಾಗಿತ್ತು. ಅದನ್ನು ಚಿತ್ರತಂಡ ಕೂಡ ಒಪ್ಪಿಕೊಂಡಿತ್ತು. ಆದರೆ ಅಂತಿಮವಾಗಿ ಈ ಚಿತ್ರಕ್ಕೆ ಪ್ರಮಾಣಪತ್ರ ನೀಡಿಲ್ಲ.

ಪ್ರಾದೇಶಿಕ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡುವ ಬದಲು ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ರಿವೈಸಿಂಗ್ ಕಮಿಟಿಗೆ ಸಿನಿಮಾವನ್ನು ಕಳಿಸಲಾಗಿದೆ. ನಿರ್ದೇಶಕರಿಗಾಗಲೀ, ನಿರ್ಮಾಣ ಸಂಸ್ಥೆಗಾಗಲಿ ತಿಳಿಸದೆಯೇ ‘ಕೆಡಿ’ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳಿಸಿದ್ದು ಚಿತ್ರತಂಡದ ಅಸಮಾಧಾನಕ್ಕೆ ಕಾರಣ ಆಗಿದೆ. ಸೆನ್ಸಾರ್ ಮಂಡಳಿಯಿಂದ ನಿಯಮ ಉಲ್ಲಂಘನೆ ಆಗಿದೆ ಎಂದು ಚಿತ್ರತಂಡ ಆರೋಪಿಸಿದೆ.

ದೊಡ್ಡ ಬಜೆಟ್​ನಲ್ಲಿ ‘ಕೆಡಿ’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಒಂದು ವೇಳೆ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ವಿಳಂಬವಾದರೆ ಚಿತ್ರದ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಜನ ನಾಯಗನ್’ ಸಿನಿಮಾ ಈ ತೊಂದರೆಯನ್ನು ಅನುಭವಿಸಿದೆ. ರಾಜಕೀಯದ ಕಾರಣದಿಂದ ಸಿನಿಮಾಗೆ ತೊಂದರೆ ಮಾಡಲಾಗಿದೆ ಎಂಬ ಅಭಿಪ್ರಾಯ ಇದೆ.

ಇದನ್ನೂ ಓದಿ: ‘ಕೆಡಿ’ ಹಾಡಿಗಿಂತಲೂ ಅಶ್ಲೀಲ ಸಾಹಿತ್ಯ: ‘ವಾಲ್ಯೂಮ್ 1’ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ

‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆ ಆಗಾದ ಕೂಡ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಆ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಮಹಿಳಾ ಆಯೋಗ ಕೂಡ ಚಿತ್ರತಂಡಕ್ಕೆ ನೋಟಿಸ್ ನೀಡಿತ್ತು. ಅದರ ಪರಿಣಾಮವಾಗಿ ಪೂರ್ತಿ ಹಾಡನ್ನು ಡಿಲೀಟ್ ಮಾಡಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನೀರ್‌ ಹತ್ರ ಯಾಕೆ ಹೋಗ್ತೀಯಾ; ನೀರಿಗೆ ಬಿದ್ದ ಕಂದಮ್ಮನನ್ನು ರಕ್ಷಿಸಿದ ತಾಯಿ ಸಿಂಹ

ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳು ತಮ್ಮ ಕಂದಮ್ಮಗಳನ್ನು ಪ್ರೀತಿಸುತ್ತವೆ, ಕಾಳಜಿ ವಹಿಸುತ್ತವೆ. ತಪ್ಪು ಮಾಡಿದರೆ ದಂಡಿಸುತ್ತವೆ. ಇದೀಗ ತಾಯಿ ಸಿಂಹವೊಂದು ನೀರಿಗೆ ಬಿದ್ದ ತನ್ನ ಕಂದನನ್ನು ರಕ್ಷಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿಯ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

gulnara.de ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೃಗಾಲಯದ ದೃಶ್ಯವನ್ನು ಕಾಣಬಹುದು. ಕೆರೆಗೆ ಬಿದ್ದ ಮರಿಯನ್ನು ಹೆಣ್ಣು ಸಿಂಹವೊಂದು ರಕ್ಷಣೆ ಮಾಡಿದೆ. ಇದೇ ವೇಳೆ ಗಂಡು ಸಿಂಹವೂ ಅಡ್ಡಿ ಪಡಿಸಿದೆ.  ಆದರೆ ಗಂಡು ಸಿಂಹದೊಂದಿಗೆ ಜಗಳಕ್ಕಿಳಿದ ಹೆಣ್ಣು ಸಿಂಹವೊಂದು ಕೊನೆಗೂ ತನ್ನ ಮರಿಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ಈ ವಿಡಿಯೋ 3.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯಿಗಿಂತ ನಮ್ಮನ್ನು ಸದಾ ಕಾಪಾಡುವ ಜೀವ ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಂಗೆ ಒಂದು ಕ್ಷಣ ಗಾಬರಿಯಾಯ್ತು, ಒಳ್ಳೆಯ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲಾ ಗಂಡಸರು ಒಂದೇ ರೀತಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ: ವಿದ್ಯಾರ್ಥಿಗಳ ಪ್ರಶ್ನೆಗೆ ನೀಡ್ತಾರೆ ಫಟಾಫಟ್​​ ಉತ್ತರ!

ಉಡುಪಿ, ಏಪ್ರಿಲ್​​ 13: ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಹೊತ್ತಿರುವ ಬೈಂದೂರು ತಾಲೂಕಿನ ಸರಕಾರಿ ಶಾಲೆ ರಾಜ್ಯದ ಉಳಿದ ಶಾಲೆಗಳು ಮೂಗಿನ ಮೇಲೆ ಬೆರಳಿಡುವ ಕೆಲಸ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಹಾಗೂ ತಂತ್ರಜ್ಞಾನ ಆಧಾರಿತ ನವೀನ ಸಾಧನಗಳ ಮೂಲಕ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬೈಂದೂರು ವಲಯದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ರಾಜ್ಯದಲ್ಲೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಬೋಧನೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಿಕ್ಷಕಿ ಐರಿಸ್​​ನ ಪರಿಚಯಿಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಇದು ವಿದ್ಯಾರ್ಥಿಗಳಿಗೆ ನೇರ ಬೋಧನೆ ಆರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ರೋಬೋಟ್​​ನ ಕಾರ್ಯನಿರ್ವಹಣೆಗೆ ಸಜ್ಜುಗೊಳಿಸುವ ತರಬೇತಿ ಹಾಗೂ ತಾಂತ್ರಿಕ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಶುರುವಾಗಿದೆ. ಐರಿಸ್ ಎಐ ಶಿಕ್ಷಕಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಮೂಲಕ ವೈಯಕ್ತಿಕ ಕಲಿಕೆಯ ಅನುಭವವನ್ನು ಒದಗಿಸಲಿದೆ. ಸೀರೆ ಧಾರಣೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಐರಿಸ್, ಕೈಕುಲುಕಿ ಮಾತನಾಡುವಂತಹ ವೈಶಿಷ್ಟ್ಯಗಳಿಂದ ಮಕ್ಕಳ ಗಮನ ಸೆಳೆಯುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟರೆ ಅದನ್ನು ರಿವರ್ಸ್ ಮಾಡಬಹುದಾ? ಇಲ್ಲಿದೆ ತಿಳಿದಿರಬೇಕಾದ ಮಾಹಿತಿ

ಭಾರತದಲ್ಲಿ ಕಳೆದ ಆರೇಳು ವರ್ಷಗಳಿಂದ ಯುಪಿಐ ಪೇಮೆಂಟ್ ಸಿಸ್ಟಂ (UPI) ಬಹಳ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೋಟ್ಯಂತರ ಜನರು ನಿತ್ಯವೂ ಪೇಮೆಂಟ್​ಗೆ ಯುಪಿಐ ಬಳಸುತ್ತಾರೆ. ಅಂಗಡಿಯಲ್ಲಿ ಪೇಮೆಂಟ್ ಮಾಡಲು, ಸ್ನೇಹಿತರಿಗೆ ಹಣ ಕಳುಹಿಸಲು, ಪರಿಚಿತರಿಗೆ ಹಣ ಕಳುಹಿಸಲು, ಥರ್ಡ್ ಪಾರ್ಟಿಗೆ ಹಣ ಕಳುಹಿಸಲು ಹೀಗೆ ಯುಪಿಐ ಬಳಕೆ ತೀರಾ ಸಾಮಾನ್ಯವಾಗಿದೆ.

ಮಾರ್ಚ್ ತಿಂಗಳಲ್ಲಿ ದೇಶದಲ್ಲಿ 2,264 ಕೋಟಿ ಸಂಖ್ಯೆಗಳಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ. ಇಷ್ಟು ಅಪಾರ ಪ್ರಮಾಣದಲ್ಲಿ ಟ್ರಾನ್ಸಾಕ್ಷನ್​ಗಳು ಆಗುವಾಗ ಕೆಲವೊಮ್ಮೆ ತಪ್ಪುಗಳಾಗಬಹುದು. ಯುಪಿಐ ಪೇಮೆಂಟ್ ಮಾಡುವಾಗ ಸಾಮಾನ್ಯವಾಗಿ ಸ್ವೀಕೃತರ ಮೊಬೈಲ್ ನಂಬರ್ ಅನ್ನು ಹಾಕಿ ಪೇಮೆಂಟ್ ಮಾಡಲಾಗುತ್ತದೆ. ಈ ವೇಳೆ ಮೊಬೈಲ್ ನಂಬರ್ ತಪ್ಪಾಗಿ ಹಾಕಿಬಿಟ್ಟರೆ ತಪ್ಪಾದ ವ್ಯಕ್ತಿಗೆ ಪೇಮೆಂಟ್ ಹೋಗಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂಥ ತಪ್ಪು ಆಗದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: 10,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ, ಐಎಂಪಿಎಸ್ ಪೇಮೆಂಟ್ 1 ಗಂಟೆ ವಿಳಂಬ? ಆರ್​ಬಿಐ ಹೊಸ ಕ್ರಮಕ್ಕೆ ಯೋಜನೆ

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿದರೆ ಏನು ಮಾಡಬೇಕು?

ತಪ್ಪಾದ ವ್ಯಕ್ತಿಗಳಿಗೆ ಯುಪಿಐ ಪೇಮೆಂಟ್ ಮಾಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಣವನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವೇ? ಅಥವಾ ಪೇಮೆಂಟ್ ರಿವರ್ಸ್ ಮಾಡಲು ಸಾಧ್ಯವೇ? ಇದಕ್ಕೆ ಸಿಂಪಲ್ಲಾದ ಉತ್ತರ ಎಂದರೆ ಆಗೊಲ್ಲ ಎನ್ನುವುದು.

ಯುಪಿಐ ಮೂಲಕ ಪೇಮೆಂಟ್ ಮಾಡಿದಾಗ ಅದನ್ನು ರಿವರ್ಸ್ ಮಾಡುವ ಅವಕಾಶ ಇರುವುದಿಲ್ಲ. ಇದು ರಿಯಲ್ ಟೈಮ್​ನಲ್ಲಿ ಮಾಡಲಾಗುವ ಪೇಮೆಂಟ್. ಸರ್ಕಾರ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಮೌಲ್ಯದ ಯುಪಿಐ ಪೇಮೆಂಟ್​ನಲ್ಲಿ ಒಂದು ಗಂಟೆ ಕೂಲಿಂಗ್ ಆಫ್ ಅವಧಿಯ ನಿಯಮ ಮಾಡಲು ಆರ್​ಬಿಐ ಯೋಜಿಸುತ್ತಿದೆ. ಆಗ ಪೇಮೆಂಟ್ ರಿವರ್ಸ್ ಮಾಡಿಸಲು ಅವಕಾಶ ಸಿಗಬಹುದು.

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ಯುಪಿಐ ಪೇಮೆಂಟ್ ಮೂಲಕ ಹಣವು ಬೇರೆ ವ್ಯಕ್ತಿಯ ಬ್ಯಾಂಕ್ ಅಕೌಂಟ್​ಗೆ ಹೋಗಿಬಿಟ್ಟರೆ ಅದನ್ನು ಹಿಂಪಡೆಯಲು ಇರುವ ಏಕೈಕ ಮಾರ್ಗ ಎಂದರೆ ಅದು ಸ್ವೀಕೃತರು ಮಾತ್ರವೇ. ಹಣ ಸ್ವೀಕರಿಸಿದವರನ್ನು ನೀವು ಸಂಪರ್ಕಿಸಿ ಮನವಿ ಮಾಡಿಕೊಳ್ಳಬಹುದು ಅಷ್ಟೇ. ಅವರು ಹಾಕಿದರೆ ಆಯಿತು. ಇಲ್ಲದಿದ್ದರೆ ಕೆಲ ದೂರುಗಳನ್ನು ಸಲ್ಲಿಸುವುದಷ್ಟೇ ಉಳಿದಿರುವ ಮಾರ್ಗೋಪಾಯಗಳು.

ಸ್ವೀಕೃತರು ಸ್ಪಂದಿಸದಿದ್ದಾಗ ಥರ್ಡ್ ಪಾರ್ಟಿ ಆ್ಯಪ್​ನಲ್ಲಿ ‘ರಿಪೋರ್ಟ್ ಇಷ್ಯೂ’ (Report Issue) ಆಯ್ಕೆ ಬಳಸಬಹುದು. ಎನ್​ಪಿಸಿಐ ಸಿಸ್ಟಂ ಮೂಲಕ ದೂರು ಸಲ್ಲಿಸಬಹುದು. ಇಲ್ಲಿ ಪರಿಹಾರ ಸಿಗದಿದ್ದಾಗ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಅಲ್ಲಿಯೂ ಕೆಲಸವಾಗದಿದ್ದಾಗ ಆರ್​ಬಿಐ ಓಂಬುಡ್ಸ್​ಮ್ಯಾನ್ (RBI Ombudsman) ಅವರ ಬಳಿ ದೂರು ಕೊಂಡೊಯ್ಯಬಹುದು. ಅಲ್ಲಿಯೂ ನಿಮ್ಮ ಹಣ ವಾಪಸ್ ಬರಲು ಸಾಧ್ಯವಾಗುತ್ತದೆ ಎಂದನ್ನಲು ಕಷ್ಟ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮಗೂ ಉಸಿರಾಡುವಾಗ ತೊಂದರೆಯಾಗುತ್ತಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆ ಇರಬಹುದು ಎಚ್ಚರ

ಇತ್ತೀಚಿನ ದಿನಗಳಲ್ಲಿ ಅನೇಕರು ಉಸಿರಾಟ ಸಂಬಂಧಿ (Difficulty Breathing) ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರಿಗಿಂತ ಅದನ್ನು ನಿರ್ಲಕ್ಸ್ಯ ಮಾಡುವವರ ಸಂಖ್ಯೆಯೇ ಹೆಚ್ಚು. ಈ ರೀತಿ ಸಮಸ್ಯೆಗಳನ್ನು ಸರಿಯಾದ ಸಮಯದಲ್ಲಿ ಕಡಿಮೆ ಮಾಡಿಕೊಳ್ಳದಿರುವುದು ಬಹಳ ಅಪಾಯಕಾರಿ ಅದಲ್ಲದೆ ಇದು ದೇಹದ ಒಳಗಿನ ಗಂಭೀರ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾಗಿ ಈ ರೀತಿ ಆಗುವುದಕ್ಕೆ ಕಾರಣ, ರೋಗಲಕ್ಷಣಗಳು ಹೇಗಿರುತ್ತವೆ ಮತ್ತು ಯಾರಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಸಿರಾಟದ ತೊಂದರೆಗೆ ಸಾಮಾನ್ಯ ಕಾರಣಗಳು

ಅತಿಯಾದ ಶಾರೀರಿಕ ಚಟುವಟಿಕೆ, ದೇಹದ ದುರ್ಬಲತೆ, ಅತಿಯಾದ ತೂಕ, ಮಾನಸಿಕ ಒತ್ತಡ ಮತ್ತು ಆತಂಕ ಇವುಗಳಿಂದಲೂ ಉಸಿರಾಟದಲ್ಲಿ ತೊಂದರೆ ಉಂಟಾಗಬಹುದು. ಜೊತೆಗೆ ಧೂಳು, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಅಲರ್ಜಿ ಸಮಸ್ಯೆಗಳು ಉಸಿರಾಟದ ಮೇಲೆ ಪರಿಣಾಮ ಬೀರುತ್ತವೆ.

ಯಾವ ರೋಗಗಳ ಲಕ್ಷಣವಾಗಿರಬಹುದು?

ನಿರಂತರವಾಗಿ ಉಸಿರು ಕಡಿಮೆಯಾಗುವುದು ಅಸ್ಥಮಾ, ಬ್ರಾಂಕೈಟಿಸ್ ಹಾಗೂ ಇತರ ಫೆಫ್ಸು ಸಂಬಂಧಿತ ಕಾಯಿಲೆಗಳ ಲಕ್ಷಣವಾಗಿರಬಹುದು. ಇದಲ್ಲದೆ ಹೃದಯ ಸಂಬಂಧಿತ ಸಮಸ್ಯೆಗಳು, ಉದಾಹರಣೆಗೆ ಹಾರ್ಟ್ ಫೇಲಿಯರ್ ಅಥವಾ ರಕ್ತನಾಳಗಳಲ್ಲಿ ಬ್ಲಾಕೇಜ್ ಇದ್ದರೂ ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು. ಅನಿಮಿಯಾ (ರಕ್ತಹೀನತೆ) ಇರುವವರಲ್ಲಿ ದೇಹಕ್ಕೆ ಅಗತ್ಯವಾದ ಆಮ್ಲಜನಕ ಕಡಿಮೆ ಸಿಗುವುದರಿಂದ ಉಸಿರಾಟ ಹೆಚ್ಚಾಗುತ್ತದೆ. ಕೆಲ ಸಂದರ್ಭಗಳಲ್ಲಿ ಥೈರಾಯ್ಡ್ ಅಸಮತೋಲನ ಅಥವಾ ಫೆಫ್ಸು ಸೋಂಕುಗಳೂ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು. ಉಸಿರಾಟದ ತೊಂದರೆಯ ಜೊತೆ ಎದೆನೋವು, ತಲೆ ಸುತ್ತುವುದು ಅಥವಾ ತೀವ್ರ ದಣಿವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ!

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ಹಿರಿಯರು, ಧೂಮಪಾನ ಮಾಡುವವರು, ಮಾಲಿನ್ಯ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಅತಿಯಾದ ತೂಕ ಹೊಂದಿರುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಜೊತೆಗೆ ಚಟುವಟಿಕೆ ಕಡಿಮೆ ಇರುವ ಜೀವನಶೈಲಿ ಹೊಂದಿರುವವರಲ್ಲೂ ಈ ಸಮಸ್ಯೆ ಸಾಮಾನ್ಯವಾಗಿದೆ.

ತಡೆಗಟ್ಟುವುದು ಹೇಗೆ?

ನಿಯಮಿತ ವ್ಯಾಯಾಮದಿಂದ ಫೆಫ್ಸುಗಳ ಶಕ್ತಿ ಹೆಚ್ಚುತ್ತದೆ ಮತ್ತು ಸಹನಶಕ್ತಿ ಉತ್ತಮಗೊಳ್ಳುತ್ತದೆ. ಸಮತೋಲನದ ಆಹಾರ ಸೇವನೆ ಮತ್ತು ಧೂಮಪಾನದಿಂದ ದೂರವಿರುವುದು ಒಳ್ಳೆಯದು. ಮಾಲಿನ್ಯದಿಂದ ರಕ್ಷಣೆಗಾಗಿ ಮಾಸ್ಕ್ ಬಳಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸ್ಕ್ಯಾನಿಂಗ್​ಗೆ ಒಳಗಾಗಲಿರುವ ರೋಹಿತ್; ಮುಂದಿನ ಪಂದ್ಯಕ್ಕೆ ಡೌಟ್

Source link

ಕೊಡಗು: 3000 ಎಕರೆ ಕಾಫಿ ಎಸ್ಟೇಟ್ ಹರಾಜಿಗೆ ಮುಂದಾದ ಬ್ಯಾಂಕ್​​ಗಳು; ಆತಂಕದಲ್ಲಿ ಮಾಲೀಕರು, ಆಗಿದ್ದೇನು?

ಕೊಡಗು, ಏಪ್ರಿಲ್​ 13: ಒಂದು ಕಾಲದಲ್ಲಿ ಸಾವಿರಾರು ಎಕರೆ ಕಾಫಿ ತೋಟದ (Coffee Estates) ಒಡೆಯರಾಗಿ, ಕಾರು-ಬಂಗಲೆಗಳೊಂದಿಗೆ ರಾಜವೈಭೋಗದ ಜೀವನ ನಡೆಸುತ್ತಿದ್ದ ಕೊಡಗಿನ ಬೆಳೆಗಾರರು ಇಂದು ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ. ಸರಿಸುಮಾರು 3000 ಎಕರೆಗೂ ಅಧಿಕ ವಿಸ್ತೀರ್ಣದ ಕಾಫಿ ಎಸ್ಟೇಟ್‌ಗಳು ಮಾಲೀಕರ ಕೈತಪ್ಪಿ ಹೋಗುವ ಹಂತಕ್ಕೆ ತಲುಪಿವೆ. ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ತೋಟವನ್ನು ಅಡವಿಟ್ಟು ಪಡೆದ ಸಾಲ (Debt) ಇದೀಗ ಬೆಳೆಗಾರರ ಪಾಲಿಗೆ ಉರುಳಾಗಿ ಪರಿಣಮಿಸಿದೆ.

ಸಾವಿರಾರು ರೈತರಿಂದ 500 ಕೋಟಿ ರೂ ಸಾಲ

ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಸುಮಾರು 6000 ಕಾಫಿ ಬೆಳೆಗಾರರು ಕಳೆದ 10-15 ವರ್ಷಗಳಲ್ಲಿ ವಿವಿಧ ಬ್ಯಾಂಕ್​ಗಳಿಂದ ಲಕ್ಷಾಂತರ ರೂ ಸಾಲ ಪಡೆದಿದ್ದಾರೆ. 10 ವರ್ಷಗಳ ಹಿಂದೆ ಕಾಫಿ ತೋಟದ ನಿರ್ವಹಣೆ ಅಸಾಧ್ಯವಾಗಿತ್ತು. ಕಾಫಿ ಬೆಲೆ ಪಾತಾಳಕ್ಕೆ ಕುಸಿದಿತ್ತು. ತೋಟವನ್ನು ನಿರ್ವಹಣೆ ಮಾಡಲೇಬೇಕಿತ್ತು. ಹಾಗಾಗಿ ಮೂರು ಜಿಲ್ಲೆಯ ಸಾವಿರಾರು ರೈತರು ವಿವಿಧ ಬ್ಯಾಂಕ್​ಗಳಿಂದ ಸುಮಾರು 500 ಕೋಟಿ ರೂ ಸಾಲ ಪಡೆದಿದ್ದಾರೆ.

ಇದನ್ನೂ ಓದಿ: ಎಂಎಲ್​​ಸಿ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ ನೋಡಿ!

ಕೆಲವರು ಬಡ್ಡಿ ಸಮೇತ ಅಸಲು ಕಟ್ಟಿದ್ದರೆ, ಬಹುತೇಕ ಮಂದಿ ಸಾಲ ಮರು ಪಾವತಿ ಮಾಡಲೇ ಇಲ್ಲ. ಇದು ಕಳೆದ ಐದು-ಆರು ವರ್ಷಗಳಿಂದ ವಿವಿಧ ಹಂತಗಳಲ್ಲಿ ಕಾನೂನು ಹೋರಾಟ ನಡೆದು 2021ರಲ್ಲಿ ಕರ್ನಾಟಕ ಹೈಕೋರ್ಟ್​ ಕಾಫಿ, ವಾಣಿಜ್ಯ ಬೆಳೆ ಆದ್ದರಿಂದ ಅದು ಸರ್ಫೇಸಿ ಕಾಯ್ದೆಯಡಿ ಬರುತ್ತದೆ ಎಂದು ತೀರ್ಪು ನೀಡಿತ್ತು. ಹಾಗಾಗಿ ಈ ಕಾಯ್ದೆ ಅನುಷ್ಠಾನಕ್ಕೆ ಬ್ಯಾಂಕ್​ಗಳು ಮುಂದಾಗಿದ್ದವು. ಈ ಸಂದರ್ಭ 2023ರಲ್ಲಿ ಕಾಫಿ ಬೆಳೆಗಾರರ ನಿಯೋಗ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿ ಪರಿಹಾರ ಕೋರಿತ್ತು.

ಮುಗಿದ ಡೆಡ್​ ಲೈನ್: ಹರಾಜು ಪ್ರಕ್ರಿಯೆ ಆರಂಭ

ಈ ಹಿನ್ನೆಲೆಯಲ್ಲಿ ಸೀತಾರಾಮನ್ 2025ರ ಜೂನ್​ 30ರ ಒಳಗೆ ಸಾಲದ ಕನಿಷ್ಟ ಬಡ್ಡಿ ಪಾವತಿಸುವಂತೆ ಒನ್ ಟೈಮ್ ಸೆಟಲ್ಮೆಂಟ್​ ಸೂಚಿಸಿದ್ದರು. ಅದರಂತೆ ಒಂದಷ್ಟು ಬೆಳೆಗಾರರು ಕನಿಷ್ಟ ಬಡ್ಡಿ ಪಾವತಿಸಿ ಸಂಕಷ್ಟದಿಂದ ತಾತ್ಕಾಳಿಕವಾಗಿ ಪಾರಾಗಿದ್ದರು. ಆದರೆ ಈ ತಾತ್ಕಾಲಿಕ ಪರಿಹಾರವನ್ನ ಸದ್ಬಳಕೆ ಮಾಡಿಕೊಳ್ಳದ ಬಹುತೇಕ ಸಾಲಗಾರರು ಇನ್ನೂ ಅಸಲು, ಬಡ್ಡಿ ಎಲ್ಲಾ ಉಳಿಸಿಕೊಂಡಿದ್ದಾರೆ. ಇದೀಗ ಡೆಡ್​ ಲೈನ್ ಮುಗಿದಿರುವುದರಿಂದ ಬ್ಯಾಂಕ್​ಗಳು ಕಾಫಿ ತೋಟಗಳನ್ನ ವಶಪಡಿಸಿಕೊಂಡು ಹರಾಜು ಹಾಕಲು ಸಿದ್ಧತೆ ನಡೆಸಿವೆ. ಆನ್​ಲೈನ್​ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ: ಮಲೆನಾಡಿನಲ್ಲಿ ಶುದ್ಧ ಗಾಳಿ! ನಿಮ್ಮ ನಗರದ AQI ಎಷ್ಟಿದೆ?

ಸದ್ಯ ಕಾಫಿ ಬೆಳೆಗಾರರಿಗೆ ತಮ್ಮ ಎಸ್ಟೇಟ್ ಉಳಿಸಿಕೊಳ್ಳುವ ಎಲ್ಲಾ ಮಾರ್ಗಗಳು ಮುಚ್ಚಿಹೋಗಿವೆ. ಮುಂದೇನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಲಕ್ಷಗಳ ಸಾಲಕ್ಕೆ ಬ್ಯಾಂಕ್​ಗಳು ಕೋಟ್ಯಂತರ ರೂ ಬೆಲೆ ಬಾಳುವ ಇಡೀ ಎಸ್ಟೇಟ್​ ಅನ್ನೇ ಹರಾಜು ಹಾಕುವ ಮಟ್ಟಕ್ಕೆ ಹೋಗುತ್ತಿವೆ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಹಾಗಾಗಿ ಸಂತ್ರಸ್ತ ಬೆಳೆಗಾರರು ತಕ್ಷಣವೇ ಕಾಫಿ ಬೆಳೆಗಾರರ ವಿವಿಧ ಸಂಘಟನೆಗಳನ್ನ ಸಂಪರ್ಕಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಪಡೆಯಲು ಪ್ರಯತ್ನಿಸುವಂತೆ ಸಲಹೆ ನೀಡಲಾಗಿದೆ.

ಕಾನೂನು ತಿದ್ದುಪಡಿಯೊಂದೇ ದಾರಿ?

ನೆರೆರಾಜ್ಯ ಕೇರಳದಲ್ಲಿ ಕಾಫಿಯನ್ನ ಕೃಷಿ ಬೆಳೆ ಎಂದು ಪರಿಗಣಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಾಫಿಯನ್ನ ವಾಣಿಜ್ಯ ಬೆಳೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಕೃಷಿಕರು. ರಾಜ್ಯ ಸರ್ಕಾರ ಕಂದಾಯ ಕಾನೂನಿಗೆ ತಿದ್ದುಪಡಿ ಮಾಡಿ ಕಾಫಿಯನ್ನ ಕೃಷಿಯಾಧಾರಿತ ಬೆಳೆ ಎಂದು ಪರಿವರ್ತಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ಈ ಸಮಸ್ಯೆ ಪರಿಹಾರಕ್ಕೆ ಹಲವು ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯ ಕಾನೂನು ತಿದ್ದುಪಡಿಯೊಂದೇ ಈ ಕಾಫಿ ತೋಟಗಳನ್ನ ಉಳಿಸಬಹುದು ಎನ್ನುತ್ತಾರೆ ತಜ್ಞರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಚನಾನಂದ ಸ್ವಾಮೀಜಿ ಉಚ್ಛಾಟನೆ: ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ದಾವಣಗೆರೆ, ಏಪ್ರಿಲ್​​ 13: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿದ್ದು, ಧರ್ಮದರ್ಶಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿರುವ ನಡುವೆ ಶ್ರೀಗಳ ಉಚ್ಛಾಟನೆಯ ನಿರ್ಧಾರಕ್ಕೆ ಪ್ರಮುಖ ಕಾರಣಗಳು ಏನು ಎಂಬುದನ್ನು ಸಮಿತಿ ಬಹಿರಂಗಪಡಿಸಿದ್ದು, ಸಾಲು ಸಾಲು ಆರೋಪಗಳನ್ನು ಮಾಡಿದೆ. ಇದೇ ಕಾರಣಕ್ಕೆ ಪದಚ್ಯುತಿಯ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸಮರ್ತಿಸಿಕೊಂಡಿದೆ.

ಶ್ರೀಗಳ ಮೇಲೆ ಸಮಿತಿಯ ಆರೋಪಗಳೇನು?

  • ಪೀಠಾರೋಹಣಕ್ಕೂ ಮೊದಲು ಬೆಂಗಳೂರಿನಲ್ಲಿ ನಡೆಸುತ್ತಿದ್ದ ‘ಶ್ವಾಸ ಕೇಂದ್ರ’ದ ಚಟುವಟಿಕೆಗಳಿಂದ ಸಂಪೂರ್ಣವಾಗಿ ಹೊರಬರುವುದಾಗಿ ಒಪ್ಪಿಕೊಂಡಿದ್ದರೂ, ಪೀಠಕ್ಕೆ ಬಂದ ನಂತರವೂ ಅಲ್ಲಿನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹರಿಹರದ ಪೀಠದಲ್ಲಿ ನೆಲೆಸಿ ಭಕ್ತರಿಗೆ ದರ್ಶನ ನೀಡುವ ಬದಲು, ನಿರಂತರವಾಗಿ ಬೆಂಗಳೂರಿನ ಶ್ವಾಸ ಕೇಂದ್ರಕ್ಕೆ ಭೇಟಿ ನೀಡುವುದು ಮತ್ತು ಅಲ್ಲಿಯೇ ವಾರಗಟ್ಟಲೆ ವಾಸ್ತವ್ಯ ಹೂಡಿ ವ್ಯವಹಾರ ನಡೆಸುತ್ತಿದ್ದಾರೆ. ಶ್ವಾಸ ಕೇಂದ್ರದ ಸಂಪರ್ಕ ಕಡಿದುಕೊಳ್ಳಲು 24.03.2026 ರವರೆಗೆ ಅಂತಿಮ ಗಡುವು ನೀಡಿದ್ದರೂ, ಅದನ್ನು ಪಾಲಿಸದೆ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.
  • ಹರಜಾತ್ರೆಯ ಹೆಸರಿನಲ್ಲಿ ಭಕ್ತರಿಂದ ಮತ್ತು ದಾನಿಗಳಿಂದ ಆಡಳಿತ ಮಂಡಳಿಗೆ ತಿಳಿಯದಂತೆ ಗೌಪ್ಯವಾಗಿ ಹಣ ವಸೂಲಿ ಮಾಡಿ ಜವಾಬ್ದಾರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪೀಠಕ್ಕೆ ಬರುವ ಗುರುಕಾಣಿಕೆ ಮತ್ತು ಭಕ್ತರ ಕಾಣಿಕೆಗಳನ್ನು ಮಠದ ಟ್ರಸ್ಟ್‌ಗೆ ವರ್ಗಾಯಿಸದೆ, ರಹಸ್ಯವಾಗಿ ತಮ್ಮ ವೈಯಕ್ತಿಕ ‘ಶ್ವಾಸ ಕೇಂದ್ರ’ದ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ತಮ್ಮ ಪೀಠದ ಬಲವನ್ನು ಉಪಯೋಗಿಸಿಕೊಂಡು ಅಧಿಕಾರಿಗಳನ್ನು ಹೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳು ನಡೆದಿವೆ. ಐಷಾರಾಮಿ ಜೀವನ ಮತ್ತು ವಿದೇಶ ಪ್ರವಾಸಗಳಿಗೆ ಅವರು ಬಳಸುತ್ತಿರುವ ಹಣದ ಮೂಲದ ಬಗ್ಗೆ ಟ್ರಸ್ಟ್ ಕೇಳಿದ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ
  • ಮಠದ ವಸತಿ ನಿಲಯದಲ್ಲಿದ್ದ ಅನಾಥ ಮತ್ತು ಬಡ ಮಕ್ಕಳಿಂದ ನಿರಂತರವಾಗಿ ಮಸಾಜ್ ಮಾಡಿಸಿಕೊಳ್ಳುವ ವಿಕೃತಿ ತೋರುತ್ತಿದ್ದರು. ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮಠದಲ್ಲಿದ್ದ 60 ಮಕ್ಕಳ ಸಂಖ್ಯೆ ಈಗ ಕೇವಲ 5ಕ್ಕೆ ಇಳಿದಿದೆ.
  • ವೀರಶೈವ ಲಿಂಗಾಯತ ಸಂಪ್ರದಾಯಗಳನ್ನು ಗಾಳಿಗೆ ತೂರಿ, ತಾವು ‘ಅಘೋರಿ ಮತ್ತು ವಾಮಾಚಾರಿ ವಿದ್ಯೆಯಲ್ಲಿ ಪರಿಣಿತ’ ಎಂದು ಹೇಳಿಕೊಂಡು ಮಠದ ಆವರಣದಲ್ಲಿಯೇ ಅಂತಹ ಪೂಜೆಗಳನ್ನು ನಡೆಸಿದ್ದಾರೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಇಷ್ಟಲಿಂಗ ಪೂಜೆ ಮಾಡುವುದು ಕಡ್ಡಾಯವಾಗಿದ್ದರೂ, ಅವರು ಎಂದಿಗೂ ಇಷ್ಟಲಿಂಗ ಪೂಜೆ ಮಾಡಿಲ್ಲ.
  • ಸಾರ್ವಜನಿಕ ಸಭೆಗಳಲ್ಲಿ ಮತ್ತು ಭಕ್ತರ ಜೊತೆ ಮಾತನಾಡುವಾಗ ಅತ್ಯಂತ ಅಸಭ್ಯ, ಕೆಟ್ಟ ಮತ್ತು ಅಶ್ಲೀಲ ಪದಗಳನ್ನು ಬಳಸುತ್ತಿದ್ದಾರೆ. ಮಠದ ಸಿಬ್ಬಂದಿ ಮತ್ತು ಪೂಜಾರಿಗಳ ಜೊತೆ ಹೀನಾಯವಾಗಿ ನಡೆದುಕೊಂಡು ಅವರಿಗೆ ಗೌರವ ನೀಡದೆ ಕಿರುಕುಳ ನೀಡುತ್ತಿದ್ದರು; ಈ ಕಾರಣದಿಂದ ಮಠದ ಪೂಜಾರಿಗಳು ಮತ್ತು ಸಿಬ್ಬಂದಿ ಕೆಲಸ ಬಿಟ್ಟು ಹೋಗಿದ್ದಾರೆ. ಭಕ್ತರಿಗೆ ಭೇಟಿಯಾಗಲು ಸಮಯ ನೀಡುವುದಿಲ್ಲ ಮತ್ತು ಅಪ್ಪಿತಪ್ಪಿ ಸಿಕ್ಕಿದರೂ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ.
  • ಸಮಾಜ ವಿರೋಧಿ ಮತ್ತು ಸಂಚಿನ ಚಟುವಟಿಕೆಗಳು ಸಮಾಜದ ಭಕ್ತರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಸಮಾಜವನ್ನು ಒಡೆಯುವ ಮತ್ತು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಒಂದು ಖಾಸಗಿ ಪಡೆಯನ್ನು ನಿರ್ಮಿಸಿಕೊಂಡು, ಮಠದ ಅಧಿಕೃತ ಆಡಳಿತ ಮಂಡಳಿಯ ವಿರುದ್ಧವಾಗಿ ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
  • ಲೌಕಿಕ ವ್ಯಾಮೋಹ ಮತ್ತು ಐಷಾರಾಮಿ ಜೀವನ ಸನ್ಯಾಸತ್ವ ಸ್ವೀಕರಿಸಿದ್ದರೂ ಸಹ ಸುಂದರವಾಗಿ ಕಾಣಬೇಕೆಂದು ತಮ್ಮ ತಲೆಗೂದಲು ಮತ್ತು ಗಡ್ಡಕ್ಕೆ ಬಣ್ಣ ಹಚ್ಚಿಕೊಳ್ಳುವ ಲೌಕಿಕ ಕೆಲಸಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ಐಷಾರಾಮಿ ಜೀವನ ನಡೆಸಲು ಉತ್ಸುಕರಾಗಿರುತ್ತಾರೆ. ವರ್ಷದಲ್ಲಿ ಹಲವಾರು ಬಾರಿ ವಿದೇಶ ಪ್ರವಾಸ ಕೈಗೊಂಡು 20 ರಿಂದ 40 ದಿನಗಳ ಕಾಲ ಅಲ್ಲಿಯೇ ಉಳಿಯುತ್ತಾರೆ; ಇದರಿಂದ ಸಮಾಜಕ್ಕಾಗಲೀ ಮಠಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದೇ ರಾಶಿಗೆ 4 ಕ್ರೂರ ಗ್ರಹಗಳ ಎಂಟ್ರಿ!: ಉದ್ಯೋಗ, ಹಣ ಕಳೆದುಕೊಳ್ಳವ ಸಾಧ್ಯತೆ, ಆದರೆ ಒಂದು ಸಮಾಧಾನ

ಮೀನ ರಾಶಿಯಲ್ಲಿ ಶನಿ, ಕುಜ, ರವಿ ಮತ್ತು ಬುಧ – ಈ ನಾಲ್ಕು ಪ್ರಬಲ ಗ್ರಹಗಳ ಯುತಿ ನಡೆಯುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ವಿದ್ಯಮಾನವಾಗಿದೆ. ಈ ಚತುರ್ಗ್ರಹಿ ಯೋಗವು ದ್ವಾದಶ ರಾಶಿಗಳ ಮೇಲೆ ವೈವಿಧ್ಯಮಯ ಪರಿಣಾಮಗಳನ್ನು ಬೀರುತ್ತದೆ. ಈ ಸಂಯೋಗವು ಏಪ್ರಿಲ್ 11ರಿಂದ ಆರಂಭವಾಗಿ ಏಪ್ರಿಲ್15ರವರೆಗೆ ಇರಲಿದೆ. ಅಲ್ಪಾವಧಿಯಾದರೂ ಗ್ರಹಗಳು ತಮ್ಮ ಕಾರ್ಯವನ್ನು ಮಾಡಿ ಮುಂದಡಿಯಿಡುತ್ತವೆ.

​ಶುಭ ಫಲದ ರಾಶಿಗಳು

​ವೃಷಭ ರಾಶಿ:

ನಿಮಗೆ ಈ ಸಂಯೋಗವು ಲಾಭ ಸ್ಥಾನದಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಉತ್ತಮ ಪ್ರಗತಿ ಕಂಡುಬರಲಿದೆ. ಹಳೆಯ ಬಾಕಿ ಹಣ ವಾಪಸ್ ಬರಬಹುದು ಮತ್ತು ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

​ಮಿಥುನ ರಾಶಿ:

ಕರ್ಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದ್ದು, ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

​ಕರ್ಕಾಟಕ ರಾಶಿ:

ಭಾಗ್ಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ದೂರದ ಪ್ರಯಾಣದಿಂದ ಲಾಭವಾಗಲಿದ್ದು, ತಂದೆಯ ಕಡೆಯಿಂದ ಬೆಂಬಲ ಸಿಗಲಿದೆ.

​ವೃಶ್ಚಿಕ ರಾಶಿ:

ಬುದ್ಧಿವಂತಿಕೆಯಿಂದ ಕಠಿಣ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದ್ದು, ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆ ಇದೆ.

​ಮಿಶ್ರ ಫಲದ ರಾಶಿಗಳು

​ಮೇಷ ರಾಶಿ:

ವ್ಯಯ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ಖರ್ಚುಗಳು ಹೆಚ್ಚಾಗಬಹುದು. ಆದರೆ ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯದ ಕಡೆ ಗಮನವಿರಲಿ.

​ಸಿಂಹ ರಾಶಿ:

ಅಷ್ಟಮ ಸ್ಥಾನದ ಈ ಯುತಿಯು ಹಠಾತ್ ಧನಲಾಭ ತರಬಹುದು, ಆದರೆ ವಾಹನ ಚಲಾಯಿಸುವಾಗ ಮತ್ತು ಸಂವಹನದಲ್ಲಿ ಜಾಗ್ರತೆ ಅಗತ್ಯ.

​ತುಲಾ ರಾಶಿ:

ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಗುಪ್ತ ರೋಗಗಳು ಅಥವಾ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳ ಬಗ್ಗೆ ಎಚ್ಚರವಿರಲಿ.

​ಧನು ರಾಶಿ:

ಸುಖ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಮನೆ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು.

​ಅಶುಭದ ರಾಶಿಗಳು

​ಕನ್ಯಾ ರಾಶಿ:

ಸಪ್ತಮ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

​ಮಕರ ರಾಶಿ:

ತೃತೀಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧೈರ್ಯ ಹೆಚ್ಚಾಗುತ್ತದೆ, ಆದರೆ ಒಡಹುಟ್ಟಿದವರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಸಣ್ಣ ಪ್ರಯಾಣಗಳು ಅಡೆತಡೆಗಳಿಂದ ಕೂಡಿರಬಹುದು.

​ಕುಂಭ ರಾಶಿ:

ಎರಡನೇ ಮನೆಯಲ್ಲಿ ಈ ಗ್ರಹಗಳಿರುವುದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಕಲಹವಾಗದಂತೆ ನೋಡಿಕೊಳ್ಳಿ. ಕಣ್ಣಿನ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.

​ಮೀನ ರಾಶಿ:

ನಿಮ್ಮದೇ ರಾಶಿಯಲ್ಲಿ ಈ ನಾಲ್ಕು ಗ್ರಹಗಳಿರುವುದರಿಂದ ಮಾನಸಿಕ ಒತ್ತಡ ಹೆಚ್ಚಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಶನಿ ಮತ್ತು ಕುಜನ ಪ್ರಭಾವದಿಂದಾಗಿ ಕೋಪದ ಮೇಲೆ ಹತೋಟಿ ಇರಲಿ.

– ಲೋಹಿತ ಹೆಬ್ಬಾರ್

Source link

Exit mobile version