Birthday Celebrations: ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಗೊತ್ತಾ? – Kannada News

ಹುಟ್ಟುಹಬ್ಬದ ಸಾರ್ಥಕ ಆಚರಣೆImage Credit source: Pinterest

ನಮ್ಮ ಸಂಸ್ಕೃತಿಯಲ್ಲಿ ವಿವಾಹ ಅಥವಾ ಜನ್ಮದಿನದಂತಹ ಆಚರಣೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನ್ಮದಿನಾಚರಣೆಯ ವಿಧಾನಗಳು ಆಧುನೀಕರಣಗೊಂಡಿವೆ. ಕೇಕ್ ಕತ್ತರಿಸುವುದು, ಮೇಣದಬತ್ತಿ ಆರಿಸುವುದು, ಬಲೂನ್‌ಗಳನ್ನು ಸಿಡಿಸುವುದು ಮುಂತಾದ ಪದ್ಧತಿಗಳು ನಮ್ಮ ಮೂಲ ಸಂಪ್ರದಾಯಗಳಿಂದ ಭಿನ್ನವಾಗಿವೆ. ಇಂತಹ ಆಚರಣೆಗಳು ಶುಭಕರವೇ ಅಥವಾ ಅಶುಭಕರವೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಉತ್ತರ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಜನ್ಮದಿನವು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ನಾನು ಹುಟ್ಟಿದ ಮೇಲೆ ನನ್ನ ಜೀವನದಲ್ಲಿ ಏನು ಸಾಧಿಸಿದ್ದೇನೆ? ಮುಂದಿನ ವರ್ಷದೊಳಗೆ ನಾನು ಯಾವ ಶುಭ ಕಾರ್ಯಗಳನ್ನು ಮಾಡಬೇಕು? ನನ್ನ ಕುಟುಂಬವನ್ನು ಹೇಗೆ ರಕ್ಷಿಸಬೇಕು? ಸಮಾಜಕ್ಕೆ ನನ್ನ ಕೊಡುಗೆ ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯ ಇದು. ಕ್ಯಾಲೆಂಡರ್ ದಿನಾಂಕದ ಪ್ರಕಾರ ಜನ್ಮದಿನ ಆಚರಿಸುವ ಪದ್ಧತಿ ಹಿಂದೂ ಸನಾತನ ಸಂಸ್ಕೃತಿಯಲ್ಲಿಲ್ಲ. ಬದಲಿಗೆ, ತಿಥಿಯ ಆಧಾರದ ಮೇಲೆ ಜನ್ಮದಿನವನ್ನು ಆಚರಿಸುವುದು ಮಹಾ ಶುಭಕರವೆಂದು ನಂಬಲಾಗಿದೆ.

ಜನ್ಮದಿನವನ್ನು ಸಾರ್ಥಕಗೊಳಿಸುವ ಮಾರ್ಗಗಳು ಅನೇಕ. ಅಶಕ್ತರಿಗೆ ಸಹಾಯ ಮಾಡುವುದು ಅತ್ಯಂತ ಪುಣ್ಯದ ಕೆಲಸ. ಅನ್ನದಾನ, ಪುಸ್ತಕ ದಾನ, ವಸ್ತ್ರದಾನ, ಔಷಧ ದಾನ ಇವುಗಳೆಲ್ಲವೂ ಅತ್ಯುತ್ತಮ ದಾನಗಳು. ಅನಾಥಾಲಯಗಳಲ್ಲಿ ಒಂದು ಹೊತ್ತಿನ ಊಟ ನೀಡುವುದು, ವೃದ್ಧಾಶ್ರಮಗಳಲ್ಲಿ ವೃದ್ಧರಿಗೆ ಔಷಧಿ, ಊರುಗೋಲು, ಛತ್ರಿ ಅಥವಾ ಬೆಡ್‌ಶೀಟ್ ನೀಡುವುದು ಜನ್ಮದಿನಕ್ಕೆ ವಿಶೇಷ ಅರ್ಥ ನೀಡುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ದೀರ್ಘಾಯುಷ್ಯಕ್ಕಾಗಿ ಮಾರ್ಕಂಡೇಯ ಋಷಿಯನ್ನು ಸ್ಮರಿಸಬೇಕು. ದೀಪ ಹಚ್ಚಬೇಕೇ ಹೊರತು ಅದನ್ನು ಆರಿಸಬಾರದು. ಜನ್ಮದಿನಾಂಕದ ದಿನ ಸುಂದರಕಾಂಡ ಪಾರಾಯಣ ಮಾಡುವುದು ಅತೀವ ಶಕ್ತಿಯನ್ನು ತರುತ್ತದೆ. ಕೆಲವು ಆಚರಣೆಗಳನ್ನು ತಪ್ಪಿಸುವುದು ಕೂಡ ಮುಖ್ಯ. ಜನ್ಮದಿನದಂದು ಉಗುರು ಕತ್ತರಿಸಬಾರದು, ಯಾವುದೇ ಪ್ರಾಣಿಗೆ ಹಾನಿ ಮಾಡಬಾರದು ಮತ್ತು ಯಾವುದೇ ಮನಸ್ಸಿಗೆ ನೋವುಂಟು ಮಾಡಬಾರದು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ನಿಯಮಗಳನ್ನು ಪಾಲಿಸುವುದು ಜನ್ಮದಿನಕ್ಕೆ ಸಾರ್ಥಕತೆಯನ್ನು ನೀಡುತ್ತದೆ.

ಬೆಳಗ್ಗೆ ಸ್ನಾನ ಮಾಡಿ, ಹಿರಿಯರ ಆಶೀರ್ವಾದ ಪಡೆದು, ಅವರ ಪಾದಗಳಿಗೆ ನಮಸ್ಕರಿಸಿ, ಇಷ್ಟ ದೇವತಾ ಮತ್ತು ಕುಲ ದೇವತಾ ದರ್ಶನ ಮಾಡುವುದು, ಒಳ್ಳೆಯ ಮಾತುಗಳನ್ನು ಆಡುವುದು, ಚಿಕ್ಕ ಮಕ್ಕಳಿಗೆ ಆರೈಕೆ ಮಾಡುವುದು ಇವೆಲ್ಲವೂ ಜನ್ಮದಿನದ ಶುಭ ಆಚರಣೆಗಳು. ಪ್ರಾರ್ಥನೆಯು ವಿಧಿಯನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಜನ್ಮದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರ್ಥನಾ ದಿನವಾಗಿ ಆಚರಿಸಿದರೆ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಬರುತ್ತವೆ. ನಾವು ಮಾಡಿದ ದಾನ ಪ್ರಯೋಜನಕಾರಿಯಾಗಿರಬೇಕು, ಅಪ್ರಾಪ್ತ ದಾನವಾಗಬಾರದು. ಹೀಗೆ ಸರಿಯಾದ ಮಾರ್ಗದಲ್ಲಿ ಹುಟ್ಟುಹಬ್ಬವನ್ನು ಆಚರಿಸುವುದರಿಂದ ನಮಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಮುನ್ನೆಲೆಗೆ ಬಂದ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಪರ, ವಿರೋಧ ಚರ್ಚೆ ಶುರು – Kannada News

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆImage Credit source: Tv9 Kannada

ತುಮಕೂರು, ಜೂನ್​​ 11: ಹೇಮಾವತಿ ನೀರನ್ನು ಲಿಂಕಿಂಗ್ ಕೆನಾಲ್ ಮೂಲಕ ಕುಣಿಗಲ್​​ಗೆ ಹರಿಸುವ ನಿರ್ಧಾರ ತುಮಕೂರು ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿತ್ತು. ಕಾಮಗಾರಿ ಸ್ಥಳದಲ್ಲಿ ನಡೆದ ಭಾರಿ ಹೈಡ್ರಾಮಾ ಬಳಿಕ ಯೋಜನೆಗೆ ಬ್ರೇಕ್ ಬಿದಿತ್ತು. ಆದರೆ ಹತ್ತು ತಿಂಗಳ ಬಳಿಕ ಈ ಯೋಜನೆಗೆ ಸರ್ಕಾರ ಮರು ಜೀವ ನೀಡಲು ಮುಂದಾಗಿರೋದು ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧಕ್ಕೆ ನಾಂದಿ ಹಾಡಿದೆ. ಹೀಗಾಗಿ ಮತ್ತೆ ವಿರೋಧ ಕಿಡಿ ಹೊತ್ತಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

ಮುಖ್ಯಾಂಶಗಳು

  • ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಮರುಜೀವ
  • ಕಾಮಗಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರದ ಸಿದ್ಧತೆ
  • ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧ ಚರ್ಚೆ ಆರಂಭ

ಕಳೆದ 10 ತಿಂಗಳಿಂದ ರೈತರ ವಿರೋಧದ ಹಿನ್ನೆಲೆ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮುಂದುವರಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮತ್ತೊಂದೆಡೆ ಕುಣಿಗಲ್ ಶಾಸಕ ಡಾ.ರಂಗನಾಥ್, ನಮಗೆ ಬರಬೇಕಾದ ಹೇಮಾವತಿ ನೀರಿನ ಪಾಲನ್ನು ಪಡೆಯಲೇಬೇಕು. ಕುಣಿಗಲ್ ಭಾಗಕ್ಕೆ ನ್ಯಾಯ ಸಿಗಬೇಕಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಸಚಿವ ಸೋಮಣ್ಣ ಬಿಗ್ ಅಪ್​ಡೇಟ್

ಆದರೆ ಯೋಜನೆಗೆ ವಿರೋಧದ ಧ್ವನಿಯೂ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್, ಯಾವುದೇ ಕಾರಣಕ್ಕೂ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಗುಬ್ಬಿಯಿಂದ ಕುಣಿಗಲ್ ಮಾರ್ಗವಾಗಿ ಮಾಗಡಿವರೆಗೆ ಹೇಮಾವತಿ ನೀರನ್ನು ಸಾಗಿಸುವ ಉದ್ದೇಶದ ಈ ಯೋಜನೆ ಆರಂಭದಿಂದಲೇ ವಿವಾದಕ್ಕೆ ಕಾರಣವಾಗಿತ್ತು. ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಮತ್ತೆ ಕಾಮಗಾರಿ ಆರಂಭಿಸಲು ಮುಂದಾಗಿರುವುದರಿಂದ, ಜಿಲ್ಲೆಯಲ್ಲಿ ಹೇಮಾವತಿ ಹೋರಾಟದ ಕಾವು ಮತ್ತೊಮ್ಮೆ ಜೋರಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:23 am, Thu, 11 June 26

Source link

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್​ನ ಹಲವು ಪ್ರದೇಶಗಳ ಮೇಲೆ ಮತ್ತೆ ಅಮೆರಿಕ ದಾಳಿ, ಹಾರ್ಮುಜ್ ಜಲಸಂಧಿ ಮತ್ತೆ ಬಂದ್ – Kannada News

ಟೆಹ್ರಾನ್, ಜೂನ್ 11: ಇರಾನ್​ನ ಹಲವು ಪ್ರದೇಶಗಳ ಮೇಲೆ ಅಮೆರಿಕ(America) ಮತ್ತೆ ದಾಳಿ ನಡೆಸಿದೆ, ಇದರ ಪರಿಣಾಮ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಬಂದ್ ಮಾಡಲಾಗಿದೆ. ಅಮೆರಿಕದ ಮಿಲಿಟರಿ ಕ್ರಮಗಳ ಬೆನ್ನಲ್ಲೇ, ಇರಾನ್ ನಾಯಕರು ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ ಸಂವಹನ ನಡೆಸಿದ್ದಾರೆ. ಅಮೆರಿಕ ವಿಧಿಸಿರುವ ಷರತ್ತುಗಳನ್ನು ಇರಾನ್ ಒಪ್ಪಿಕೊಂಡರೆ ಪ್ರಸ್ತುತ ಬಿಕ್ಕಟ್ಟು ತಕ್ಷಣವೇ ಕೊನೆಗೊಂಡು ಶಾಂತಿ ಒಪ್ಪಂದ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

ಕುವೈತ್, ಬಹ್ರೇನ್ ಮತ್ತು ಜೋರ್ಡಾನ್ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಕೂಡ ಹೇಳಿಕೊಂಡಿದೆ. ಐದು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಜೋರ್ಡಾನ್ ಹೇಳಿದೆ, ಇವು ಅಮೆರಿಕದ ಮಿಲಿಟರಿ ವಿಮಾನಗಳನ್ನು ಹೊಂದಿದ್ದ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿವೆ ಎಂದು ಇರಾನ್ ಹೇಳಿದೆ. ಬಹ್ರೇನ್ ಮತ್ತು ಕುವೈತ್ ಒಳಬರುವ ಗುಂಡಿನ ದಾಳಿಯನ್ನು ತಡೆದಿದ್ದೇವೆ ಎಂದು ಹೇಳಿಕೊಂಡಿವೆ.

ಈ ದಾಳಿಗಳು ಮತ್ತೊಮ್ಮೆ ಮಾತುಕತೆಗಳನ್ನು ಹಳಿತಪ್ಪಿಸುವ ನಿರೀಕ್ಷೆಯಿದೆ, ಆದರೆ ಟ್ರಂಪ್ ಈ ಹಿಂದೆ ಹೇಳಿದ್ದ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯುತ್ತಿವೆ. ಒಪ್ಪಂದವನ್ನು ಬಯಸಿದರೆ ಅಮೆರಿಕ ಬಲಪ್ರಯೋಗದ ಬೆದರಿಕೆಗಳಿಂದ ದೂರವಿರಬೇಕು ಎಂದು ಇರಾನ್ ಹೇಳಿದೆ.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್

ಮತ್ತೊಂದೆಡೆ ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದ ಉದ್ವಿಗ್ನತೆಯ ನಡುವೆಯೇ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಕೆಲವು ಆಶಾದಾಯಕ ಬೆಳವಣಿಗೆಗಳು ಕೂಡ ನಡೆಯುತ್ತಿತ್ತು. ಇರಾನಿನ ಮಾಧ್ಯಮಗಳ ಪ್ರಕಾರ, ಹಾರ್ಮುಜ್ ಜಲಸಂಧಿಯ ಬಳಿ ಮತ್ತು ಬಂದರ್ ಅಬ್ಬಾಸ್, ಮಿನಾಬ್, ಸಿರಿಕ್, ಕಾರ್ಗನ್ ಮತ್ತು ಕೆಶ್ಮ್ ದ್ವೀಪದಂತಹ ನಗರಗಳಲ್ಲಿ ಮತ್ತು ಸುತ್ತಮುತ್ತ ಸ್ಫೋಟಗಳು ವರದಿಯಾಗಿವೆ. ಆದಾಗ್ಯೂ, ದಾಳಿಯಿಂದ ಉಂಟಾದ ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ವಿವರಗಳಿಲ್ಲ.

ಜಲಸಂಧಿಯನ್ನು ಮುಚ್ಚಲಾಗಿದೆ ಎಂಬ ವದಂತಿಗಳನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನಿರಾಕರಿಸಿದೆ. ವಾಣಿಜ್ಯ ಹಡಗುಗಳು ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸುತ್ತಿದ್ದು, ಜಾಗತಿಕ ತೈಲ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿ ಸ್ಥಿರವಾಗಿದೆ ಎಂದು ಹೇಳಿದೆ. ಇರಾನ್ ನಡೆಸಿದ ಕ್ಷಿಪಣಿ ದಾಳಿಗಳನ್ನು ಜೋರ್ಡಾನ್, ಬಹ್ರೇನ್ ಮತ್ತು ಕುವೈತ್ ದೇಶಗಳು ಅತ್ಯಂತ ಯಶಸ್ವಿಯಾಗಿ ತಡೆದು ಭದ್ರತೆ ಕಾಯ್ದುಕೊಂಡಿವೆ. ಅಲ್ಲದೆ, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆ ಹಾಗೂ ಯುದ್ಧನೌಕೆಗಳು ಸಂಪೂರ್ಣ ಸುರಕ್ಷಿತವಾಗಿವೆ.

ಮಧ್ಯಪ್ರಾಚ್ಯದಲ್ಲಿ ದಶಕಗಳ ಆತಂಕವನ್ನು ಕೊನೆಗೊಳಿಸಲು ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಉಗ್ರಗಾಮಿ ಗುಂಪುಗಳೊಂದಿಗಿನ ಮೈತ್ರಿಯನ್ನು ಕೈಬಿಡಬೇಕು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ತಿಳಿಸಿದ್ದು, ಇದು ದೀರ್ಘಕಾಲೀನ ಪ್ರಾದೇಶಿಕ ಶಾಂತಿಗೆ ದಾರಿಯಾಗಬಹುದು. ಈ ಕಡಲ ಮಾರ್ಗವು ಸುರಕ್ಷಿತವಾಗಿರುವುದರಿಂದ ಜಾಗತಿಕ ಸರಬರಾಜು ಸರಪಳಿ ಹಾಗೂ ಕಚ್ಚಾ ತೈಲ ಮಾರುಕಟ್ಟೆಯ ಮೇಲೆ ಆಗಬಹುದಾಗಿದ್ದ ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮವನ್ನು ಯಶಸ್ವಿಯಾಗಿ ತಪ್ಪಿಸಲಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಅಗತ್ಯವಿರುವ ಸೂತ್ರವನ್ನು ಪುನರುಚ್ಚರಿಸಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕೊನೆಗೊಳಿಸಿ, ಹಿಜ್ಬೊಲ್ಲಾ ಸಂಘಟನೆಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡರೆ, ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ದಶಕಗಳ ಆತಂಕ ದೂರವಾಗಿ ಶಾಂತಿ ನೆಲೆಸಲು ದಾರಿಯಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೇರಳ, ತಮಿಳುನಾಡು ಮಾದರಿ: ಡಿಕೆಶಿ ಸಂಪುಟದಲ್ಲಿ 3-4 ಯುವ ಮುಖಗಳಿಗೆ ಮಣೆ ಸಾಧ್ಯತೆ – Kannada News

ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಡಿಕೆ ಶಿವಕುಮಾರ್Image Credit source: @DKShivakumar

ಬೆಂಗಳೂರು, ಜೂನ್ 11: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಜಿದ್ದಾಜಿದ್ದಿ, ಪ್ರಮುಖ ಖಾತೆಗಳಿಗಾಗಿ ಸಚಿವರ ಪಟ್ಟು ಹಾಗೂ ಸಚಿವ ಸ್ಥಾನ ವಂಚಿತರ ಬೆಂಬಲಿಗರ ಭಾರಿ ಪ್ರತಿಭಟನೆಗಳ ನಡುವೆಯೇ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆಯೂ ಜೋರಾಗಿದೆ. ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ದೆಹಲಿಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಮುಖ್ಯಾಂಶಗಳು

  • ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿ ಡಿಕೆಶಿ-ಪರಮೇಶ್ವರ್.
  • 3-4 ಯುವ ಮುಖಗಳಿಗೆ ಸಚಿವ ಭಾಗ್ಯದ ಸಾಧ್ಯತೆ.
  • ಖಾತೆ ಬದಲಾವಣೆಗೆ ಮುನಿಯಪ್ಪ, ಕೃಷ್ಣಭೈರೇಗೌಡ ಪಟ್ಟು.

ಕೇರಳ, ತಮಿಳುನಾಡು ಮಾದರಿ: ಯುವ ಮುಖಗಳಿಗೆ ಮಣೆ?

ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಯುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂಬ ಗಂಭೀರ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸದ್ಯ ಖಾಲಿ ಇರುವ ಒಟ್ಟು 20 ಸಚಿವ ಸ್ಥಾನಗಳ ಪೈಕಿ ಕನಿಷ್ಠ 3 ರಿಂದ 4 ಸ್ಥಾನಗಳನ್ನು ಮೊದಲ ಬಾರಿಗೆ ಅಥವಾ ಯುವ ಶಾಸಕರಿಗೆ ನೀಡುವ ಸಾಧ್ಯತೆಗಳಿವೆ. ಇದರ ಭಾಗವಾಗಿ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ರಾಜಕೀಯ ಪ್ರಭಾವವನ್ನು ಹತ್ತಿಕ್ಕಲು ನಾರಾ ಭರತ್ ರೆಡ್ಡಿ ಅವರಿಗೆ ಮಂತ್ರಿಗಿರಿ ನೀಡುವ ಪ್ರಸ್ತಾಪ ಮುಂಚೂಣಿಗೆ ಬಂದಿದೆ. ಇದರೊಂದಿಗೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರದೀಪ್ ಈಶ್ವರ್, ಅಜಯ್ ಸಿಂಗ್, ಪ್ರಿಯಾಕೃಷ್ಣ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಯುವ ನಾಯಕರ ಹೆಸರುಗಳು ದೆಹಲಿ ವಲಯದಲ್ಲಿ ಕೇಳಿಬರುತ್ತಿವೆ.

ಈ ಕುರಿತು ಮಾತನಾಡಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಒಬಿಸಿ (OBC) ಕೋಟಾದಡಿ ಯುವಕರಿಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ನಂಬಿಕೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೃಷ್ಣಭೈರೇಗೌಡ, ಮುನಿಯಪ್ಪ ಖಾತೆ ಕ್ಯಾತೆ: ಜಯಚಂದ್ರ ಅಸಮಾಧಾನ

ಮತ್ತೊಂದೆಡೆ, ಸಚಿವರ ಖಾತೆಗಳ ಕುರಿತಾದ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದ್ದರೂ ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಸಂಸ್ಥೆಗಳನ್ನು ಹೊರತುಪಡಿಸಿದ ಇಲಾಖೆ ತಮಗೆ ಬೇಡ ಎಂದು ಪಟ್ಟು ಹಿಡಿದಿರುವ ಕೃಷ್ಣಭೈರೇಗೌಡರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಇತ್ತ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಕೂಡ ತಮ್ಮ ಖಾತೆ ಬದಲಾಯಿಸುವಂತೆ ಸಿಎಂ ಬೆನ್ನಬಿದ್ದಿದ್ದು, ಬುಧವಾರ ದೇವನಹಳ್ಳಿ ವಿಮಾನ ನಿಲ್ದಾಣದವರೆಗೂ ಬಂದು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನು ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಟಿ.ಬಿ. ಜಯಚಂದ್ರ ಅವರನ್ನು ಮುಂದುವರಿಸಿ ಹೊರಡಿಸಿರುವ ಆದೇಶ ಜಯಚಂದ್ರ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂ.ಬಿ. ಪಾಟೀಲ್, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲವನ್ನೂ ಹೈಕಮಾಂಡ್ ಬಗೆಹರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಮಿಸ್ ಆಗಿರುವುದಕ್ಕೆ ಹಿರಿಯ ನಾಯಕ ಜಮೀರ್ ಅಹಮದ್ ಖಾನ್ ಬೆಂಬಲಿಗರು ಬಾಗಲಕೋಟೆ, ಜಮಖಂಡಿ, ಮಹಾಲಿಂಗಪುರ ಹಾಗೂ ಹಾಸನದಲ್ಲಿ ಭಾರಿ ಪ್ರತಿಭಟನೆ ನಡೆಸಿ ಅಲ್ಪಸಂಖ್ಯಾತ ನಾಯಕನಿಗೆ ಮಂತ್ರಿಗಿರಿ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ ಕೆಪಿಸಿಸಿ ಕಚೇರಿಗೆ ಬಂದಿದ್ದ ಜಮೀರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಂಡಿದ್ದಾರೆ. ಇತ್ತ ಗದಗದಲ್ಲಿ ಜಿ.ಎಸ್. ಪಾಟೀಲ್ ಬೆಂಬಲಿಗರು ಪುಟ್ಟರಾಜ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರೆ, ಬಳ್ಳಾರಿಯಲ್ಲಿ ಬಿ. ನಾಗೇಂದ್ರ, ಬೀದರ್‌ನಲ್ಲಿ ರಹೀಂ ಖಾನ್ ಮತ್ತು ಹಾವೇರಿಯಲ್ಲಿ ಎಚ್.ಕೆ. ಪಾಟೀಲ್ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಸೋನಿಯಾ ಗಾಂಧಿ ಭೇಟಿಯಾದ ಸಿಎಂ ಡಿಕೆಶಿ

ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಸಿಎಂ ಮತ್ತು ಡಿಸಿಎಂ ಇಬ್ಬರೂ ಇಂದು ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಹೈಕಮಾಂಡ್ ಅಂತಿಮವಾಗಿ ಯಾರಿಗೆ ಮಂತ್ರಿಗಿರಿ ನೀಡಲಿದೆ ಎಂಬ ಆತಂಕ ಮತ್ತು ಕುತೂಹಲ ಸಚಿವ ಆಕಾಂಕ್ಷಿಗಳಲ್ಲಿ ಮನೆಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:12 am, Thu, 11 June 26

Source link

75 ಲಕ್ಷ ರೂಪಾಯಿ ಪಡೆದರೂ ಪ್ರಚಾರಕ್ಕೆ ಅಸಹಕಾರ ತೋರಿದ ‘ರನ್ನ’ ನಟಿ ವರಲಕ್ಷ್ಮಿ? – Kannada News

ಕನ್ನಡದಲ್ಲಿ ಸುದೀಪ್ (Sudeep) ನಟನೆಯ ‘ರನ್ನ’, ‘ಮಾಣಿಕ್ಯ’ ಹಾಗೂ ‘ಮ್ಯಾಕ್ಸ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಕನ್ನಡಿಗರಿಗೂ ಹತ್ತಿರವಾದವರು ನಟಿ ವರಲಕ್ಷ್ಮಿ ಶರತ್‌ಕುಮಾರ್‌. ಅವರು ಈಗ ಟಾಲಿವುಡ್‌ನಲ್ಲಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಬಲವಾದ ಪಾತ್ರಗಳ ಮೂಲಕ ಅಲ್ಲಿನ ಪ್ರೇಕ್ಷಕರ ಮನಗೆದ್ದಿದ್ದ ವರಲಕ್ಷ್ಮಿ ವಿರುದ್ಧ ಈಗ ನಿರ್ದೇಶಕರೊಬ್ಬರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ತೆಲುಗಿನಲ್ಲಿ ‘ಪೊಲೀಸ್ ಕಂಪ್ಲೇಂಟ್’ ಹೆಸರಿನ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಚಿತ್ರದ ನಿರ್ದೇಶಕರು ವರಲಕ್ಷ್ಮಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವರಲಕ್ಷ್ಮಿ ಅವರು ಚಿತ್ರತಂಡಕ್ಕೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬುದು ಅವರ ಮುಖ್ಯ ದೂರು. ಇದು ಚರ್ಚೆಯ ವಿಷಯವಾಗಿದೆ.

‘ಈ ಸಿನಿಮಾಗೆ ವರಲಕ್ಷ್ಮಿ 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅವರ ವೈಯಕ್ತಿಕ ಸಿಬ್ಬಂದಿಯ ಖರ್ಚಿಗಾಗಿಯೇ ದಿನಕ್ಕೆ ಬರೋಬ್ಬರಿ 50,000 ರೂಪಾಯಿ ನೀಡಲಾಗಿದೆ. ಸಿನಿಮಾದ ಪ್ರಚಾರದ ಈವೆಂಟ್‌ಗಳಲ್ಲಿ ಭಾಗವಹಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ, ಅವರು ಕೊಟ್ಟಿದ್ದು ಕೇವಲ 40 ನಿಮಿಷ ಮಾತ್ರ’ ಎಂಬುದು ನಿರ್ದೇಶಕರ ಆರೋಪ. ‘ತಮ್ಮ ಇತರ ಚಿತ್ರದ ಕೆಲಸಗಳ ನೆಪ ಹೇಳಿ, ‘ಪೊಲೀಸ್ ಕಂಪ್ಲೇಂಟ್’ ಚಿತ್ರದ ಡಬ್ಬಿಂಗ್ ಅನ್ನು ವರಲಕ್ಷ್ಮಿ ಅವರು ಉದ್ದೇಶಪೂರ್ವಕವಾಗಿ ತಡ ಮಾಡಿದ್ದಾರೆ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ

ವರಲಕ್ಷ್ಮಿ ಅವರಿಗೆ ವಿವಾದಗಳು ಸುತ್ತಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಅವರು ನಿರ್ದೇಶನ ಮಾಡಿದ್ದ ‘ಎಸ್ ಸರಸ್ವತಿ’ ಚಿತ್ರದ ಪ್ರಚಾರದ ಸಮಯದಲ್ಲೂ ದೊಡ್ಡ ಗದ್ದಲವೇ ನಡೆದಿತ್ತು. ಈ ಚಿತ್ರಕ್ಕೆ ಖ್ಯಾತ ಬರಹಗಾರ ಸಾಯಿ ಮಾಧವ್ ಬುರ್ರಾ ಕಥೆ ಬರೆದಿದ್ದರು. ‘ನನ್ನ ಕಥೆಗೆ ಚಿತ್ರತಂಡದವರು ಇಲ್ಲದ ಬದಲಾವಣೆಗಳನ್ನು ಮಾಡಿ, ಕಥೆಯನ್ನೇ ಸಂಪೂರ್ಣವಾಗಿ ಹಾಳುಗೆಡವಿದ್ದಾರೆ’ ಎಂದು ಅವರು ಬಹಿರಂಗವಾಗಿಯೇ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು. ಆ ಸಮಯದಲ್ಲಿ ವರಲಕ್ಷ್ಮಿ ತಮ್ಮನ್ನು ತಾವು ಸಮರ್ಥಿಸಿಕೊಂಡು, ವಿವಾದಕ್ಕೆ ಫುಲ್‌ಸ್ಟಾಪ್ ಇಡಲು ಪ್ರಯತ್ನಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಅಬ್ಬರ; ತೀವ್ರ ಗಾಳಿಯ ಎಚ್ಚರಿಕೆ – Kannada News

ಬೆಂಗಳೂರು, ಜೂನ್​​ 11: ನೈಋತ್ಯ ಮುಂಗಾರು ರಾಜ್ಯದ ಬಹುತೇಕ ಭಾಗಗಳನ್ನು ಆವರಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುಂದಿನ ಒಂದು ವಾರ ಮಳೆ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರೀ ಮಳೆ, ಗುಡುಗು-ಮಿಂಚು ಮತ್ತು ಬಲವಾದ ಗಾಳಿಯ ಎಚ್ಚರಿಕೆ ನೀಡಿದೆ.

ಐಎಂಡಿಯ ಏಳು ದಿನಗಳ ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಜೂನ್ 11 (ಇಂದು) ಮತ್ತು 12ರಂದು ಭಾರಿ ಮಳೆ ಸಾಧ್ಯತೆ ಇದೆ. ಜೂನ್ 14ರಿಂದ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗಲಿದ್ದು, ಜೂನ್ 15 ಮತ್ತು 16ರಂದು ಯಾವುದೇ ಪ್ರಮುಖ ಎಚ್ಚರಿಕೆಗಳನ್ನು ನೀಡಿಲ್ಲ. ಉತ್ತರ ಒಳನಾಡು ಕರ್ನಾಟಕದಲ್ಲಿ ಈ ವಾರ ಗುಡುಗು, ಮಿಂಚು, ಬಿರುಗಾಳಿ ಮತ್ತು ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ, ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮೂಡಿಗೆರೆಯಲ್ಲಿ ಬಿರುಗಾಳಿ ಮಳೆ ಆರ್ಭಟ; ಅಂಗನವಾಡಿ ಶಿಕ್ಷಕಿ ಮನೆಯ ಮೇಲೆ ಬಿದ್ದ ಮರ

ದಕ್ಷಿಣ ಒಳನಾಡು ಕರ್ನಾಟಕದಲ್ಲಿಯೂ ಇದೇ ರೀತಿಯ ಹವಾಮಾನ ಮುಂದುವರಿಯಲಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚು, ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಹಾಗೂ ಗಂಟೆಗೆ 30-40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಒಂದು ಅಥವಾ ಎರಡು ಕಡೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಎಲ್ಲೆಲ್ಲಿ ಮಳೆ?

ಬೀದರ್​​, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ, ಹಾವೇರಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇಂದು ಈ ರಾಶಿಯವರಿಗೆ ಲಾಭ-ನಷ್ಟದ ಮಿಶ್ರಫಲವಿದ್ದು, ಕೋಪ-ತಾಪಗಳ ಬಗ್ಗೆ ಎಚ್ಚರಿಕೆ ಅಗತ್ಯ

ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 11ರ ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಅಧಿಕ ಜ್ಯೇಷ್ಠ ಮಾಸದಲ್ಲಿ ಬರುವ ಏಕಾದಶಿ ತಿಥಿಯನ್ನು ಒಳಗೊಂಡಿದ್ದು, ಇದನ್ನು ಸರ್ವತ್ರ ಏಕಾದಶಿ ಅಥವಾ ಪರಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವಿಶೇಷ ದಿನದಂದು ಅಲ್ಪ ಜಪದಿಂದಲೂ ಅಪಾರ ಫಲ ದೊರೆಯುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ. ಪ್ರತಿ ರಾಶಿಗೆ ಅನುಗುಣವಾಗಿ ಅವರು ನೀಡಿರುವ ದಿನ ಭವಿಷ್ಯದ ಮಾಹಿತಿ ಈ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೊದಲ ಮಗು ಹೆಣ್ಣಾದರೆ ಅದೃಷ್ಟಗಳ ಮಹಾಪೂರ! – Kannada News

ಮೊದಲ ಮಗು ಹೆಣ್ಣು ಮಗುವಾದರೆ ಅದು ಅದೃಷ್ಟವೇ, ಅಶುಭವೇ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗಿದೆಯಾದರೂ, ಹಲವರ ಮನಸ್ಸಿನಲ್ಲಿ ಇನ್ನೂ ಇದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್​’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಅವರು ಹೇಳಿರುವಂತೆ, ನಮ್ಮ ಸನಾತನ ಸಂಸ್ಕೃತಿಯ ಪ್ರಕಾರ, ಮೊದಲ ಹೆಣ್ಣು ಮಗು ಜನಿಸುವುದು ಮನೆಗೆ ಮಹಾಲಕ್ಷ್ಮಿಯ ಆಗಮನಕ್ಕೆ ಸಮಾನ. ಇದು ಕೇವಲ ಶುಭ ಸಂಕೇತ ಮಾತ್ರವಲ್ಲದೆ, ಕುಟುಂಬಕ್ಕೆ, ವಿಶೇಷವಾಗಿ ತಂದೆಗೆ, ಅಪಾರ ಅದೃಷ್ಟವನ್ನು ತರುತ್ತದೆ.

ಮೊದಲ ಹೆಣ್ಣು ಮಗು ತಂದೆಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಗು ಪೂರ್ವಿಕರ ಅನುಗ್ರಹವನ್ನು ಹೊತ್ತು ತರುತ್ತದೆ. ಮನೆಯಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಬಲವನ್ನು ಹೆಚ್ಚಿಸುತ್ತದೆ. ಚಂದ್ರನು ಮನಃಕಾರಕನಾದರೆ, ಶುಕ್ರನು ಸೌಂದರ್ಯ, ಐಷಾರಾಮಿ ಮತ್ತು ಸಮೃದ್ಧಿಯ ಪ್ರತೀಕ. ಹೆಣ್ಣು ಮಗು ಬೆಳೆದಂತೆಲ್ಲಾ ಕುಟುಂಬದಲ್ಲಿ ಸಂಪತ್ತು ವೃದ್ಧಿಯಾಗಿ, ಸುಖ ಸಂತೋಷಗಳು ತುಂಬುತ್ತವೆ. ಆದ್ದರಿಂದ, ಮೊದಲ ಹೆಣ್ಣು ಮಗು ಅದೃಷ್ಟದ ಸಂಕೇತವೇ ಹೊರತು ಯಾವುದೇ ಅಶುಭವಲ್ಲ ಎಂದಿದ್ದಾರೆ ಗುರೂಜಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಅನ್ಯ ಮನಃಸ್ಥಿತಿಯಿಂದ ಉದ್ಯಮ ನಷ್ಟ – Kannada News

ಮೇಷ ರಾಶಿ:

ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕಾಗಬಹುದು. ಕೂಡಿಟ್ಟ ಹಣವು ಇಂದು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ಅನಾರೋಗ್ಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸವಾಗಲಿದೆ. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ.

ವೃಷಭ ರಾಶಿ:

ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕಿ. ಬರಬೇಕಾದ ಹಣವು ಮಧ್ಯದಲ್ಲೇ ನಿಲ್ಲಬಹುದು. ಧನಾತ್ಮಕ ಅಂಶಗಳನ್ನು ಹುಡುಕಿ ಮುನ್ನಡೆಯಿರಿ. ದಾರಿ ತಾನಾಗಿಯೇ ತೆರದುಕೊಳ್ಳುವುದು. ಮಕ್ಕಳಿಗೆ ಜವಾಬ್ದಾರಿ ಕೊಡಲು ಭಯ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ಖುಷಿ ಕೊಡಲಿದೆ.

ಮಿಥುನ ರಾಶಿ:

ದೇಹ ಸೌಂದರ್ಯವನ್ನು ಬೆಳೆಸಿಕೊಳ್ಳಲು ಸಮಯವನ್ನು ಮೀಸಲಿಡುವಿರಿ. ವಿಧಿಯನ್ನು ಹಳಿದು ನಿಮಗೆ ಸಮಾಧಾನವನ್ನು ತಂದುಕೊಳ್ಳುವಿರಿ. ನಿಮ್ಮ ಮಾತುಗಳಿಂದ ಕೆಲವರು ಪ್ರೇರಣೆ ಪಡೆದರೆ, ಕೆಲವರು ನಿಮ್ಮ ಮಾತನ್ನೇ ಆಡಿಕೊಳ್ಳುವರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿ ಹೊರ ಜಗತ್ತನ್ನು ಮರೆಯುವರು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು.

ಕರ್ಕಾಟಕ ರಾಶಿ:

ಅನಾರೋಗ್ಯದಿಂದ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಒತ್ತಾಯ ಪೂರ್ವಕವಾಗಿ ನಿಮಗೆ ಇಚ್ಛೆಯಿರುವ ವಿಷಯವನ್ನು ಹೇರಬೇಡಿ. ಹಂಚಿಕೆಯ ವಿಚಾರದಲ್ಲಿ ನಿಮಗೆ ಪೂರ್ಣವಾದ ಮನಸ್ಸಿರದು. ಆಯ್ಕೆ ಮಾಡಲು ಅವರಿಗೆ ಸ್ವಾತಂತ್ರ್ಯವಿರಲಿ. ಇದರಿಂದ ನಿಮಗೆ ನಿರಾಸೆಯಾಗಲಿದೆ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಅನ್ಯರಿಮಂದ ಕಿರಿಕಿರಿ.

ಸಿಂಹ ರಾಶಿ:

ವಿದೇಶಕ್ಕೆ ಹೋಗಲು ಆಲೋಚನೆ ಮಾಡದಿದ್ದರೂ ಹೋಗುವ ಅನಿವಾರ್ಯ ಬರಲಿದೆ. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಆಪ್ತರ ಚಿಕಿತ್ಸೆಗೆ ಧನಸಹಾಯ ಮಾಡಬೇಕಾಗುವುದು. ರಾಜಕಾರಣಿಗಳು ಗೆಲ್ಲುವ ತಂತ್ರವನ್ನು ಹೂಡುವರು. ದೈಹಿಕ ಶ್ರಮವು ಇಂದು ಅಧಿಕವಾಗುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಲಿದೆ.

ಕನ್ಯಾ ರಾಶಿ:

ಆಪ್ತರ ಜೊತೆ‌ ಮನಸ್ಸು ಬಿಚ್ಚಿ ಮಾತನಾಡಿ. ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವಕ್ಕೆ ಮೊರೆ ಹೋಗಬೇಕಾಗುವುದು. ಭಾರವಾದುದನ್ನು ಎತ್ತಿ ಅಪಾಯ ತಂದುಕೊಳ್ಳುವಿರಿ. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಆದರಿಸದೇ ಇರಬಹುದು. ಸುತ್ತಾಟದಿಂದ ಆಯಾಸವಿದೆ. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು.

ತುಲಾ ರಾಶಿ:

ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಪ್ರವಾಹದ ವಿರದ್ಧ ಈಜಲು ಸಾಧ್ಯವಾಗದು. ವಾಹನ ಅಪಘಾತವು ಆಗಬಹುದು, ಜಾಗರೂಕತೆಯಿಂದ ಇರಿ. ಕೃಷಿಕರು ತಾವು ಬೆಳೆದ ಬೆಳೆಯಿಂದ ನಷ್ಟವನ್ನು ಅನುಭವಿಸುವಿರಿ. ನಿಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ.

ವೃಶ್ಚಿಕ ರಾಶಿ:

ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ ಅನ್ನಿಸಬಹುದು. ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ಅನಾರೋಗ್ಯವು ನಿರ್ಲಕ್ಷ್ಯದಿಂದ ಹೆಚ್ಚಾಗುವುದು. ನಿಮಗೆ ಬರಬೇಕಾದ ಹಣದ ಕುರಿತು ಲೆಕ್ಕವಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಮನಸ್ಸಿನ ನೆಮ್ಮದಿಯು ಕೆಡಬಹುದು. ಆಗದೇ ಇರುವ ಕೆಲಸಕ್ಕೆ ಬೇಸರ ಬೇಡ. ವೃತ್ತಿಯಲ್ಲಿ ಆತಂಕವು ಇರಲಿದೆ.

ಧನು ರಾಶಿ:

ಅನಿರೀಕ್ಷಿತ ಎದುರಾದ ಖರ್ಚಿನಿಂದಾಗಿ ಸ್ನೇಹಿತರಲ್ಲಿ ಹಣವನ್ನು ಕೇಳುವಿರಿ. ನಿಮ್ಮ ಬಳಿ ಅತಿಯಾದ ಕೆಲಸವನ್ನು ಪಡೆಯಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ಅತಿಯಾದ ಸೌಖ್ಯವನ್ನು ಪಡೆಯಲು ಹೋಗಿ ಅನಾಹುತವನ್ನು ಮಾಡಿಕೊಳ್ಳಬಹುದು. ತಪ್ಪಿನಿಂದ ಹೊಬರಲಾಗದು. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷಗೊಳ್ಳುವುದು. ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಲಿದ್ದೀರಿ.

ಮಕರ ರಾಶಿ:

ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ಹಣಕಾಸಿನ ವಿಚಾರವಾಗಿ ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ತಾತ್ಕಾಲಿಕ ಜವಬ್ದಾರಿಯೇ ಪೂರ್ಣಾವಧಿಯಾಗಿ ಮಾಡಬೇಕಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನೀವು ನಿಮ್ಮವರನ್ನು ದ್ವೇಷಿಸಬಹುದು. ಉದ್ಯೋಗದಲ್ಲಿ ಒತ್ತಡವಿದ್ದು ಅದನ್ನು ನಿಭಾಯಿಸುವ ಕ್ರಮವನ್ನು ಕಲಿತುಕೊಳ್ಳಿ. ನಿಮ್ಮೊಳಗೆ ಸಿಟ್ಟಿನಿಂದ ಕುದಿಯುವಿರಿ. ಆಪ್ತರ ಜೊತೆ ಒಂದಿಷ್ಟು ಸಮಯವನ್ನು ಕಳೆಯಬಹುದು.

ಕುಂಭ ರಾಶಿ:

ದೂರದಲ್ಲಿರುವ ನಿಮಗೆ ಸಂಗಾತಿಯ ಸಂಗ ಸಿಗುವ ಸಾಧ್ಯತೆ ಇದೆ. ನಟನೆಯಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಬಡ್ತಿಯನ್ನು ಪಡೆಯಲು ನಾನಾ ಪ್ರಯತ್ನ ನಡೆಯಲಿದೆ. ಇಂದು ನ್ಯಾಯಾಲಯದಲ್ಲಿ ತೀರ್ಪು ಬರಲಿದೆ. ಎಂತಹದೇ ತೀರ್ಮಾನ ಬಂದರೂ ಸ್ವೀಕರಿಸಿ‌. ಹಿರಿಯರಿಂದ ಆಶೀರ್ವಾದವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಲಾಭಗಳಿಸಬಹುದಾಗಿದೆ‌. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡುವರು.

ಮೀನ ರಾಶಿ:

ಸ್ವಬುದ್ಧಿಯನ್ನು ಬಳಸಿಯೇ ಕಾರ್ಯಗಳನ್ನು ಮಾಡಿ. ನಿಮ್ಮ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗದು. ಜಾಗೃತಿ ಮೊದಲಾದ ಸಾಮಾಜಿಕ ಕಾರ್ಯಗಳಿಗೆ ತೆರಳಿ ಒಂಟಿತನವನ್ನು ದೂರಮಾಡಿಕೊಳ್ಳುವಿರಿ. ಇಂದು ನಿಮಗೆ ಹೊಸತನ್ನೇನಾದರೂ ಮಾಡುವ ಮನಸ್ಸಿದ್ದರೂ ಬೇಕಾದ ವ್ಯವಸ್ಥೆ, ಪರಿಸ್ಥಿತಿಗಳು ಇಲ್ಲದೇ ನಿಲ್ಲಿಸಬೇಕಾದೀತು. ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಮಾತನ್ನು ಹಿತವೂ ಮಿತವೂ ಆಗುವಂತೆ ಮಾಡಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಆಯುಷ್ಮಾನ್, ಕರಣ : ಬಾಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:01 – 15:38, ಯಮಗಂಡ ಕಾಲ 05:57 – 07:34, ಗುಳಿಕ ಕಾಲ 09:10 – 10:47

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಕಾಶ್ಮೀರದ ದೋಡಾ ಜಿಲ್ಲೆಯ ಹೆದ್ದಾರಿಯಲ್ಲಿ ಭೀಕರ ಭೂಕುಸಿತ; ವಾಹನ ಸಂಚಾರ ಸಂಪೂರ್ಣ ಸ್ಥಗಿತ – Kannada News

ಶ್ರೀನಗರ, ಜೂನ್ 10: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾದ ಥಾತ್ರಿ-ಕಿಲೋತ್ರಾನ್ ಹೆದ್ದಾರಿಯ ಧಾರಿವಾರಿ ನಲ್ಲಾ ಬಳಿ ಇಂದು ಭಾರಿ ಪ್ರಮಾಣದ ಭೂಕುಸಿತ (Landslide) ಸಂಭವಿಸಿದೆ. ಪಕ್ಕದ ಗುಡ್ಡದಿಂದ ಬೃಹತ್ ಗಾತ್ರದ ಬಂಡೆಗಳು ಮತ್ತು ಟನ್‌ಗಟ್ಟಲೆ ಮಣ್ಣು ಹೆದ್ದಾರಿಯ ಮೇಲೆ ಬಿದ್ದ ಪರಿಣಾಮವಾಗಿ ಇಡೀ ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಈ ಹೆದ್ದಾರಿಯು ಗಂದೋಹ್ ಮತ್ತು ಭಲೇಶ್ಸಾ ಸೇರಿದಂತೆ ಹಲವು ಗ್ರಾಮೀಣ ಮತ್ತು ದೂರದ ಪ್ರದೇಶಗಳನ್ನು ಜಿಲ್ಲಾ ಕೇಂದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಜೋಡಿಸುವ ಪ್ರಮುಖ ರಸ್ತೆಯಾಗಿದೆ.

ಭೂಕುಸಿತದ ಕಾರಣದಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ಪ್ರಯಾಣಿಕ ವಾಹನಗಳು, ಸರಕು ಸಾಗಣೆ ಲಾರಿಗಳು ಮತ್ತು ಆಂಬ್ಯುಲೆನ್ಸ್‌ಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಕಚೇರಿ ಮತ್ತು ಶಾಲೆ-ಕಾಲೇಜುಗಳಿಗೆ ತೆರಳುವ ದಿನನಿತ್ಯದ ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ದೋಡಾ ಜಿಲ್ಲಾಡಳಿತವು ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ರಸ್ತೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿ ಹಸಿರು ನಿಶಾನೆ ನೀಡುವವರೆಗೆ ಈ ಮಾರ್ಗದಲ್ಲಿ ಪ್ರಯಾಣಿಸದಂತೆ ಮತ್ತು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಮತ್ತಷ್ಟು ಮಣ್ಣು ಕುಸಿಯುವ ಭೀತಿ ಇರುವುದರಿಂದ ರಕ್ಷಣಾ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಆಡಳಿತ, ಸಾರ್ವಜನಿಕ ಲೋಕೋಪಯೋಗಿ ಇಲಾಖೆ (PWD) ಮತ್ತು ರಸ್ತೆ ನಿರ್ಮಾಣ ಸಂಸ್ಥೆಗಳ ಸಿಬ್ಬಂದಿ ಜೆಸಿಬಿ (JCB) ಹಾಗೂ ಅಗತ್ಯ ಯಂತ್ರೋಪಕರಣಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬೃಹತ್ ಬಂಡೆಗಳನ್ನು ಸಣ್ಣದಾಗಿ ಪುಡಿಮಾಡಿ ರಸ್ತೆಯಿಂದ ಪಕ್ಕಕ್ಕೆ ಸರಿಸಲಾಗುತ್ತಿದೆ. ಹೆದ್ದಾರಿಯ ಮೇಲಿರುವ ಮಣ್ಣಿನ ಅವಶೇಷಗಳನ್ನು ತೆರವುಗೊಳಿಸಿ, ಆದಷ್ಟು ಬೇಗ ವಾಹನ ಸಂಚಾರವನ್ನು ಮರುಸ್ಥಾಪಿಸಲು ಅಧಿಕಾರಿಗಳು ಮತ್ತು ಕಾರ್ಮಿಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version