ಬೆನ್ ಸ್ಟೋಕ್ಸ್​ಗೆ ಗೇಟ್​ ಪಾಸ್; 4 ವರ್ಷಗಳ ಬಳಿಕ ಜೋ ರೂಟ್​ಗೆ ಟೆಸ್ಟ್ ನಾಯಕತ್ವ – Kannada News

ಪ್ರಸ್ತುತ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ (England vs New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಆತಿಥೇಯ ಇಂಗ್ಲೆಂಡ್‌ ಇದೀಗ ಎರಡನೇ ಪಂದ್ಯಕ್ಕಾಗಿ ತಯಾರಿ ಶುರು ಮಾಡಿದೆ. ಆದರೆ ಅದಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಖಾಯಂ ನಾಯಕ ಬೆನ್ ಸ್ಟೋಕ್ಸ್ (Ben Stokes) ಅವರನ್ನು ಸರಣಿಯ ಎರಡನೇ ಪಂದ್ಯದಿಂದ ಹೊರಗಿಡಲಾಗಿದೆ. ಹೀಗಾಗಿ ಅವರ ಬದಲಿಗೆ ಅನುಭವಿ ಜೋ ರೂಟ್ (Joe Root) ಅವರನ್ನು ತಂಡದ ನಾಯಕನಾಗಿ ನೇಮಿಸಲಾಗಿದೆ. ಈ ಮೂಲಕ ರೂಟ್ ಬರೋಬ್ಬರಿ 4 ವರ್ಷಗಳ ನಂತರ ಇಂಗ್ಲೆಂಡ್‌ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಕ್ಲಬ್​ನಲ್ಲಿ ಮಾತಿನ ಚಕಮಕಿ

ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಹೊರಗಿಡಲು ಕಾರಣವೂ ಬಹಿರಂಗವಾಗಿದೆ. ವಾಸ್ತವವಾಗಿ ಮೊದಲ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದ ಬಳಿಕ ನಾಯಕ ಬೆನ್ ಸ್ಟೋಕ್ಸ್ ಹಾಗೂ ವೇಗಿ ಅಟ್ಕಿನ್ಸನ್ ಕ್ಲಬ್‌ಗೆ ಹೋಗಿದ್ದರು. ಅಲ್ಲಿ ಇವರಿಬ್ಬರು ಕೆಲವು ರಗ್ಬಿ ಕ್ಲಬ್ ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದರು. ಆದಾಗ್ಯೂ, ಘಟನೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಪ್ರಸ್ತುತ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಇಡೀ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲದೆ ಅಶಿಸ್ತು ಮತ್ತು ತಂಡದ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕಾಗಿ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು ಮುಂದಿನ ಟೆಸ್ಟ್ ಪಂದ್ಯದಿಂದ ಹೊರಗಿಟ್ಟಿದೆ.

ವಾಸ್ತವವಾಗಿ ಇಂಗ್ಲೆಂಡ್ ಆಟಗಾರರು ಮೈದಾನದ ಹೊರಗೆ ಈ ರೀತಿಯ ದುವರ್ತನೆ ತೋರುತ್ತಿರುವುದು ಇದೇ ಮೊದಲಲ್ಲ ಇದಕ್ಕೂ ಮೊದಲು ಸಾಕಷ್ಟು ಬಾರಿ ಇಂಗ್ಲೆಂಡ್‌ ಆಟಗಾರರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಇದು ಇಸಿಬಿಗೆ ತಲೆನೋವಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಪ್ರವಾಸದ ಸಮಯದಲ್ಲಿಯೂ ಸಹ, ಆಟಗಾರರು ತಡರಾತ್ರಿವರೆಗೆ ಪಾರ್ಟಿ ಮಾಡುವುದು ಮತ್ತು ಮಿತಿ ಮೀರಿ ಮದ್ಯಪಾನ ಮಾಡಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದರು.

ಆರ್ಚರ್ ಮತ್ತು ಜೋರ್ಡಾನ್ ಕಾಕ್ಸ್ ಆಯ್ಕೆ

ಇದೀಗ ತಂಡದಿಂದ ಹೊರಬಿದ್ದಿರುವ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಬದಲಿಗೆ ಜೋರ್ಡಾನ್ ಕಾಕ್ಸ್ ಮತ್ತು ಜೋಫ್ರಾ ಆರ್ಚರ್ ಅವರನ್ನು 15 ಜನರ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದ ಆರ್ಚರ್ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇತ್ತ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋರ್ಡಾನ್ ಕಾಕ್ಸ್ ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಗಾಯದಿಂದಾಗಿ ಅವರು ಎರಡು ಬಾರಿ ಟೆಸ್ಟ್ ಚೊಚ್ಚಲ ಪಂದ್ಯವನ್ನು ತಪ್ಪಿಸಿಕೊಂಡಿದ್ದು ಇದೀಗ ಆಡುವ ಅವಕಾಶ ಸಿಗುವ ಸಾಧ್ಯತೆಗಳಿವೆ.

ರೂಟ್​ಗೆ ಮತ್ತೆ ನಾಯಕತ್ವ

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜೂನ್ 17 ರಿಂದ ಲಂಡನ್‌ನ ದಿ ಓವಲ್‌ನಲ್ಲಿ ಆರಂಭವಾಗಲಿದ್ದು, ಜೋ ರೂಟ್ ತಂಡವನ್ನು ಮುನ್ನಡೆಸಲಿದ್ದಾರೆ. ರೂಟ್ ತಂಡವನ್ನು ಮುನ್ನಡೆಸುತ್ತಿರುವುದು ಇದು ಎರಡನೇ ಬಾರಿ. ಅಲಸ್ಟೇರ್ ಕುಕ್ ನಂತರ ರೂಟ್ ಈ ಹಿಂದೆ 2017 ರಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದರು. ರೂಟ್ ಒಟ್ಟು 64 ಟೆಸ್ಟ್ ಪಂದ್ಯಗಳ ನಾಯಕತ್ವ ವಹಿಸಿದ್ದಾರೆ. ಆದಾಗ್ಯೂ, ಏಪ್ರಿಲ್ 2022 ರಲ್ಲಿ, ಕಳಪೆ ಫಾರ್ಮ್ ಮತ್ತು ಆಶಸ್ ಸರಣಿ ಸೋಲಿನ ನಂತರ, ಜೋ ರೂಟ್ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಬದಲಿಯಾಗಿ ಬೆನ್ ಸ್ಟೋಕ್ಸ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು.

ಚೊಚ್ಚಲ ಟೆಸ್ಟ್​ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್

ಇಂಗ್ಲೆಂಡ್ ತಂಡ : ಜೋ ರೂಟ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಮ್ಯಾಥ್ಯೂ ಫಿಶರ್, ಎಮಿಲಿಯೊ ಗೇ, ಜೇಮ್ಸ್ ರ್ಯು, ಓಲ್ಲಿ ರಾಬಿನ್ಸನ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್ – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಆಲ್ಪಾ’ (Alpha) ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ (Shah Rukh Khan) ಅವರು ಚಿತ್ರತಂಡಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಆಲಿಯಾ ಭಟ್ ಅವರ ಹೈ-ವೋಲ್ಟೇಜ್ ಆ್ಯಕ್ಷನ್ ಅವತಾರವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಶಾರುಖ್ ಖಾನ್ ಅವರು, ನಟಿಯನ್ನು ‘ಸಿಗ್ಮಾ ಗರ್ಲ್’ ಎಂದು ಕರೆದಿದ್ದಾರೆ. ಇದರೊಂದಿಗೆ ನಟ ಬಾಬಿ ಡಿಯೋಲ್ ಮತ್ತು ನಿರ್ದೇಶಕ ಶಿವ ರವೈಲ್ ಅವರನ್ನು ಶಾರುಖ್ ಶ್ಲಾಘಿಸಿದ್ದಾರೆ. ಇದರಿಂದಾಗಿ ‘ಧುರಂಧರ್’ (Dhurandhar) ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಶಾರುಖ್ ಗುರಿ ಆಗಿದ್ದಾರೆ.

‘ಆಲ್ಪಾ’ ಚಿತ್ರದ ಟೀಸರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಶಾರುಖ್ ಖಾನ್, ‘ವೆಲ್ ಡನ್ ಆಲಿಯಾ, ವರ್ಷಗಳಿಂದ ಜನರ ಹೃದಯ ಒಡೆಯುತ್ತಿದ್ದ ನೀನು ಈಗ ವಿಲನ್‌ಗಳ ಮೂಳೆ ಮುರಿಯುತ್ತಿದ್ದೀಯ. ನಿನ್ನ ಕೌಶಲ್ಯ ನಿರಂತರವಾಗಿ ವಿಸ್ತರಿಸುತ್ತಿದೆ. ಆಲ್ಪಾ ಸಿನಿಮಾ ಎಲ್ಲರ ಹೃದಯ ಗೆಲ್ಲಲಿ, ಹಾಗೆಯೇ ಸೀಕ್ವೆಲ್‌ಗಾಗಿ ಕೆಲವು ವಿಲನ್‌ಗಳನ್ನು ಉಳಿಸಲಿ. ಲಾರ್ಡ್ ಬಾಬಿ… ನೀವು ತುಂಬಾ ಅದ್ಭುತವಾಗಿ ಕಾಣುತ್ತೀರಿ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಬಿಗ್ ಹಗ್ ಹಾಗೂ ಆಲ್ ದಿ ಬೆಸ್ಟ್’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ.

ಶಾರುಖ್ ಖಾನ್ ಅವರ ಈ ಪೋಸ್ಟ್ ಬೆನ್ನಲ್ಲೇ ರಣವೀರ್ ಸಿಂಗ್ ಅಭಿಮಾನಿಗಳು ಕಿಂಗ್ ಖಾನ್ ಅವರನ್ನು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಕಾಂಬಿನೇಷನ್‌ನ ಬ್ಲಾಕ್‌ಬಸ್ಟರ್ ಚಿತ್ರ ‘ಧುರಂಧರ್’ ಸಿನಿಮಾಗೆ ಶಾರುಖ್ ಖಾನ್ ಯಾವುದೇ ರೀತಿಯ ಬೆಂಬಲ ನೀಡದಿದ್ದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಎಕ್ಸ್‌ನಲ್ಲಿ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ‘ಸರ್, ಕೆಲವು ತಿಂಗಳ ಹಿಂದಷ್ಟೇ ಧುರಂಧರ್ ಬಿಡುಗಡೆಯಾಗಿತ್ತು, ಆಗ ನೀವು ಎಲ್ಲಿದ್ದಿರಿ?’ ಎಂದು ಕೇಳಿದ್ದಾರೆ. ಇನ್ನೊಬ್ಬರು, ‘ಧುರಂಧರ್ ಬಿಡುಗಡೆಯ ನಂತರ ಇಂತಹ ಹಳೇ ವೈಆರ್‌ಎಫ್ ಸ್ಪೈ ಯೂನಿವರ್ಸ್ ಸಿನಿಮಾಗಳನ್ನು ಯಾರೂ ನೋಡುವುದಿಲ್ಲ, ವೈಆರ್‌ಎಫ್ ಇನ್ಮುಂದೆ ಅಳಬೇಕಾಗುತ್ತದೆ’ ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿ, ‘ಧುರಂಧರ್ ಟ್ರೇಲರ್, ರಿಲೀಸ್ ಅಥವಾ ಸಕ್ಸಸ್ ಇವೆಂಟ್ ಯಾವುದಕ್ಕೂ ನಿಮ್ಮ ಬೆಂಬಲ ಸಿಗಲಿಲ್ಲ, ನಿಮಗೆ ಅಸೂಯೆಯೇ ಅಥವಾ ಆಶ್ಚರ್ಯವಾಗಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸ್ಪೈ ಯೂನಿವರ್ಸ್‌ನ 7ನೇ ಚಿತ್ರವಾಗಿರುವ ‘ಆಲ್ಪಾ’ ಭಾರಿ ಸದ್ದು ಮಾಡುತ್ತಿದೆ. ಇದಕ್ಕೂ ಮುನ್ನ ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್ 3 ಮತ್ತು ವಾರ್ 2 ಚಿತ್ರಗಳು ಈ ಯೂನಿವರ್ಸ್‌ನ ಭಾಗವಾಗಿ ಮೂಡಿಬಂದಿವೆ. ಆ ಕಾರಣದಿಂದ ‘ಆಲ್ಫಾ’ ಸಿನಿಮಾ ಮೇಲೆ ಆಲಿಯಾ ಭಟ್ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗರ್ಭಿಣಿಯರಲ್ಲಿ ಅವಧಿ ಪೂರ್ವ ಹೆರಿಗೆಗೆ ವಾಯು ಮಾಲಿನ್ಯದ ಹೆಚ್ಚಳವೂ ಕಾರಣವಾಗುತ್ತದೆಯೇ? – Kannada News

ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯವು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಗರ್ಭಿಣಿಯರು (Pregnant Women) ಮತ್ತು ಗರ್ಭದಲ್ಲಿರುವ ಶಿಶುಗಳ ಆರೋಗ್ಯದ ಮೇಲೆ ಇದರ ದುಷ್ಪರಿಣಾಮ ಹೆಚ್ಚಾಗಿ ಕಂಡುಬರಬಹುದು ಎಂದು ಹೊಸ ಅಧ್ಯಯನಗಳು ಹೇಳಿವೆ. ಹೌದು, ದೆಹಲಿಯ ಏಮ್ಸ್ (AIIMS) ನಡೆಸಿದ ಅಧ್ಯಯನದಲ್ಲಿ ವಾಯು ಮಾಲಿನ್ಯದಲ್ಲಿರುವ ಸೂಕ್ಷ್ಮ ಕಣಗಳು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದು ಬೆಳಕಿಗೆ ಬಂದಿದೆ. ಹಾಗಾದರೆ ಇದು ಗರ್ಭದಲ್ಲಿರುವ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಈ ರೀತಿಯ ಅಪಾಯವನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಧ್ಯಯನದಿಂದ ತಿಳಿದುಬಂದ ಮಾಹಿತಿ ಪ್ರಕಾರ, ಗಾಳಿಯಲ್ಲಿ ಇರುವ PM2.5 ಮತ್ತು PM10 ಮಾಲಿನ್ಯ ಕಣಗಳು ಗರ್ಭನಾಳ (Placenta) ಒಳಗೆ ಪ್ರವೇಶಿಸಿ ಉರಿಯೂತ ಉಂಟುಮಾಡಬಹುದು. ಗರ್ಭನಾಳವು ಮಗುವಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಪ್ರಮುಖ ಅಂಗವಾಗಿದೆ. ಇದರ ಕಾರ್ಯಕ್ಷಮತೆ ಕುಂದಿದರೆ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.

ಗರ್ಭದಲ್ಲಿರುವ ಮಗುವಿಗೆ ಹೇಗೆ ಹಾನಿಯಾಗಬಹುದು?

ತಜ್ಞರ ಪ್ರಕಾರ, ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಗರ್ಭಿಣಿಯರಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಇದರಿಂದ ಮಗುವಿನ ಬೆಳವಣಿಗೆ ನಿಧಾನಗೊಳ್ಳುವುದು, ಕಡಿಮೆ ತೂಕದ ಶಿಶು ಜನಿಸುವುದು ಅಥವಾ ಅವಧಿಗೆ ಮುಂಚೆಯೇ ಹೆರಿಗೆ ಆಗುವ ಸಾಧ್ಯತೆ ಹೆಚ್ಚಾಗಬಹುದು. ಕೆಲವು ಸಂದರ್ಭಗಳಲ್ಲಿ ಮಗುವಿನ ಶ್ವಾಸಕೋಶ ಬೆಳವಣಿಗೆಯ ಮೇಲೂ ಪರಿಣಾಮ ಕಾಣಬಹುದು. ಇದರ ಜೊತೆಗೆ ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗುವುದು ಹಾಗೂ ಉಸಿರಾಟ ಸಮಸ್ಯೆಗಳೂ ಕಾಣಿಸಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಕೆಲ ಅಧ್ಯಯನಗಳು ದೀರ್ಘಕಾಲ ವಾಯು ಮಾಲಿನ್ಯಕ್ಕೆ ಒಳಗಾಗುವ ಗರ್ಭಿಣಿಯ ಮಕ್ಕಳಲ್ಲಿ ಕಲಿಕೆ ಮತ್ತು ಬುದ್ಧಿವಂತಿಕೆಯ ಬೆಳವಣಿಗೆಯ ಮೇಲೂ ಪರಿಣಾಮ ಕಾಣಬಹುದು ಎಂದು ಹೇಳಿವೆ.

ಇದನ್ನೂ ಓದಿ: ನೀವು ವಾಸಮಾಡುವ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ಯಾ? ಹಾಗಿದ್ರೆ ನಿಮಗೂ ಬರಬಹುದು ಮರೆವಿನ ಕಾಯಿಲೆ

ಅಪಾಯವನ್ನು ಕಡಿಮೆ ಮಾಡಲು ಏನು ಮಾಡಬೇಕು?

  • ಗರ್ಭಿಣಿಯರು ಸಾಧ್ಯವಾದಷ್ಟು ಮನೆಯೊಳಗೆ ಇರುವುದಕ್ಕೆ ಪ್ರಯತ್ನಿಸಬೇಕು
  • ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡಲು ಒಳಾಂಗಣ ಸಸಿಗಳನ್ನು ಬೆಳೆಸಬಹುದು
  • ಧೂಮಪಾನ, ಅಗರಬತ್ತಿ ಮತ್ತು ಹೊಗೆ ಉಂಟುಮಾಡುವ ವಸ್ತುಗಳಿಂದ ದೂರವಿರಬೇಕು
  • ಅಡುಗೆ ಮಾಡುವಾಗ ಎಕ್ಸಾಸ್ಟ್ ಫ್ಯಾನ್ ಅಥವಾ ಚಿಮ್ನಿ ಬಳಸುವುದು ಉತ್ತಮ
  • ವೈದ್ಯರ ಸಲಹೆಯಂತೆ ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು
  • ಸಾಕಷ್ಟು ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ

ವಾಯು ಮಾಲಿನ್ಯವನ್ನು ಸಂಪೂರ್ಣ ತಪ್ಪಿಸಲು ಸಾಧ್ಯವಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಗರ್ಭಿಣಿಯರು ಮತ್ತು ಮಗುವಿನ ಆರೋಗ್ಯವನ್ನು ಕೆಲವು ಮಟ್ಟಿಗೆ ರಕ್ಷಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​​ ದುರಾಡಳಿತದಿಂದ ಭಾರತವನ್ನು ಮುಕ್ತಗೊಳಿಸಿದ್ದೇ ನಮ್ಮ ಸರ್ಕಾರದ ಅತಿದೊಡ್ಡ ಸಾಧನೆ; ಪ್ರಧಾನಿ ಮೋದಿ ವಾಗ್ದಾಳಿ – Kannada News

ನವದೆಹಲಿ, ಜೂನ್ 10: ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಸರ್ಕಾರವು ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇಂದು ನಡೆದ ಮಹಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ದಶಕಗಳ ಕಾಲದ ದುರಾಡಳಿತವು ಭಾರತವನ್ನು ತೀವ್ರ ಹತಾಶೆ ಮತ್ತು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ದೇಶವನ್ನು ಕೋಟ್ಯಂತರ ರೂಪಾಯಿಗಳ ಹಗರಣಗಳಲ್ಲಿ ಮುಳುಗಿಸಿತ್ತು. ಆದರೆ, 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಹಣೆಬರಹವೇ ಬದಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಎನ್‌ಡಿಎ ಸರ್ಕಾರದ 12 ವರ್ಷಗಳ ಆಡಳಿತದ ಪ್ರಮುಖ ಯಶಸ್ಸೆಂದರೆ, ದೇಶವನ್ನು ಕಾಂಗ್ರೆಸ್‌ನ ವಿಷವರ್ತುಲದಿಂದ ಮುಕ್ತಗೊಳಿಸಿರುವುದು. ಭಾರತದಲ್ಲಿ ಅಭಿವೃದ್ಧಿ ಎಂಬುದು ಅತ್ಯಂತ ನಿಧಾನವಾಗಿ ಮಾತ್ರ ಸಾಧ್ಯ. ಇಲ್ಲಿ ವೇಗದ ಅಭಿವೃದ್ಧಿ ಅಸಾಧ್ಯ ಎಂದೇ ದೇಶದ ಜನ ಭಾವಿಸುವಂತೆ ಮಾಡಲಾಗಿತ್ತು. ಅತ್ಯಂತ ಚಾಣಾಕ್ಷತನದಿಂದ ಈ ಮಂದಗತಿಯ ಬೆಳವಣಿಗೆಗೆ ಒಂದು ಹೆಸರನ್ನು ನೀಡಲಾಯಿತು. ಅದೇ ‘ಹಿಂದೂ ಗ್ರೋತ್ ರೇಟ್’”. ವೇಗದ ಅಭಿವೃದ್ಧಿ ಅಸಾಧ್ಯ ಮತ್ತು ಆರ್ಥಿಕ ಪ್ರಗತಿ ಕೇವಲ ನಿಧಾನಗತಿಯಲ್ಲೇ ಸಾಗಲು ಸಾಧ್ಯ ಎಂದು ಕಾಂಗ್ರೆಸ್ ಸರ್ಕಾರಗಳು ಭಾರತೀಯರ ಮನಸ್ಸಿನಲ್ಲಿ ಬಿತ್ತಿದ್ದವು ಎಂದು ಪ್ರಧಾನಿ ಆರೋಪಿಸಿದರು. ಈ ಪದಪ್ರಯೋಗದ ಮೂಲಕ ಕಾಂಗ್ರೆಸ್ ತನ್ನ ನೀತಿ ವೈಫಲ್ಯಗಳ ಜವಾಬ್ದಾರಿಯಿಂದ ನುಣುಚಿಕೊಂಡು, ಆ ಕಳಂಕವನ್ನು ದೇಶದ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯ ಮೇಲೆ ಅನ್ಯಾಯವಾಗಿ ಹೊರಿಸಿತ್ತು ಎಂದು ಮೋದಿ ಟೀಕಿಸಿದರು.

ಇದನ್ನೂ ಓದಿ: ಇಷ್ಟು ದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ; ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ದೇಶದ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ‘ಭಾರತ್ ಮಂಟಪ’ದಲ್ಲಿ ಎನ್‌ಡಿಎ ಸಹೋದ್ಯೋಗಿಗಳನ್ನು ಉದ್ದೇಶಿಸಿ ಭಾಷಣವನ್ನು ಮಾಡಿದರು. ಭಾರತದ ಆರಂಭಿಕ ಆರ್ಥಿಕ ಇತಿಹಾಸದ ನೀತಿಗಳ ಮೇಲೆ ನೇರ ವಾಗ್ದಾಳಿ ನಡೆಸಿದ ಪ್ರಧಾನಿ, ದಶಕಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿದ್ದ ಅಭಿವೃದ್ಧಿಯ ಮಂದಗತಿಯಿಂದ ದೇಶಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ ಎಂದು ಘೋಷಿಸಿದರು.

ಸ್ವಾತಂತ್ರ್ಯೋತ್ತರ ಭಾರತದ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಲೇವಡಿ ಮಾಡಲು ಐತಿಹಾಸಿಕವಾಗಿ ಬಳಸಲಾಗುತ್ತಿದ್ದ “ಹಿಂದೂ ರೇಟ್ ಆಫ್ ಗ್ರೋತ್” ಎಂಬ ಪದಪ್ರಯೋಗವನ್ನು ಅವರು ತೀವ್ರವಾಗಿ ವಿರೋಧಿಸಿದರು. ಈ ವ್ಯವಸ್ಥಿತ ವೈಫಲ್ಯಗಳು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ್ದಾಗಿದ್ದು, ಇದನ್ನು ಇನ್ಮುಂದೆ “ಕಾಂಗ್ರೆಸ್ ಗ್ರೋತ್ ರೇಟ್” ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ನೆಹರು ದಾಖಲೆ ಮುರಿದ ಪ್ರಧಾನಿ ಮೋದಿಗೆ ಸಂಪುಟ ಸಚಿವರಿಂದ ಎದ್ದು ನಿಂತು ಚಪ್ಪಾಳೆಯ ಗೌರವ

ಎರಡು ವಿಭಿನ್ನ ರಾಜಕೀಯ ಸಿದ್ಧಾಂತಗಳ ಅಡಿಯಲ್ಲಿ ದೇಶವು ಕಂಡ ಆರ್ಥಿಕ ಬದಲಾವಣೆಯೇ ಪ್ರಧಾನಿ ಭಾಷಣದ ಪ್ರಮುಖ ಕೇಂದ್ರಬಿಂದುವಾಗಿತ್ತು. ಹಳೆಯ ‘ಕಾಂಗ್ರೆಸ್ ಗ್ರೋತ್ ರೇಟ್’ ಮತ್ತು ಸಮಕಾಲೀನ ‘ಎನ್‌ಡಿಎ ಗ್ರೋತ್ ರೇಟ್’ ನಡುವಿನ ಸ್ಪಷ್ಟವಾದ, ಅಂಕಿ-ಅಂಶಗಳ ಆಧಾರಿತ ವ್ಯತ್ಯಾಸವನ್ನು ಇಂದು ಜಾಗತಿಕ ಸಮುದಾಯ ಮತ್ತು ದೇಶದ ಮತದಾರರು ಕಣ್ಣಾರೆ ಕಂಡಿದ್ದಾರೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಹಿಂದಿನ ಹಣಕಾಸು ನೀತಿಗಳು ದೇಶದ ಅತ್ಯಂತ ನಿಧಾನಗತಿಯ ಪ್ರಗತಿಯನ್ನೇ ರಾಷ್ಟ್ರೀಯ ಮಾನದಂಡ ಎಂದು ಒಪ್ಪಿಕೊಳ್ಳುವಂತೆ ಜನರನ್ನು ಪ್ರೇರೇಪಿಸಿದ್ದವು. ಆದರೆ ಪ್ರಸ್ತುತ ಆಧುನಿಕ ಯುಗದಲ್ಲಿ ಬೃಹತ್ ಮೂಲಸೌಕರ್ಯಗಳ ವಿಸ್ತರಣೆ, ಡಿಜಿಟಲ್ ರೂಪಾಂತರ ಮತ್ತು ಬಂಡವಾಳ ವೆಚ್ಚಕ್ಕೆ ಗರಿಷ್ಠ ಆದ್ಯತೆ ನೀಡಲಾಗಿದೆ. ಈ ಕಾರ್ಯಾಚರಣೆಯ ಬದಲಾವಣೆಯು ಭಾರತವನ್ನು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದನ್ನಾಗಿ ನಿರಂತರವಾಗಿ ಮುಂಚೂಣಿಯಲ್ಲಿಟ್ಟಿದೆ, ಇದು ಸ್ವಾತಂತ್ರ್ಯೋತ್ತರ ಯುಗದ ಹಳೆಯ ಆರ್ಥಿಕ ಗ್ರಹಿಕೆಗಳಿಗೆ ನೇರ ಸವಾಲಾಗಿದೆ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾತಾಡಬೇಕಿರೋದು ಮಾತಾಡಿದ್ದೇನೆ, ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ: ಮಹತ್ವದ ಹೇಳಿಕೆ ನೀಡಿದ ಡಿಕೆಶಿ – Kannada News

ದೆಹಲಿ, ಜೂ.10: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಇಂದು (ಜೂ.10) ಕಾಂಗ್ರೆಸ್​​​ ನಾಯಕರನ್ನು ಭೇಟಿಯಾಗಿದ್ದಾರೆ. ನಾಳೆ (ಜೂ.11) ಪ್ರಧಾನಿ ಮೋದಿ ಅವರನ್ನು ಕೂಡ ಭೇಟಿಯಾಗಲಿದ್ದಾರೆ. ಇದರ ನಡುವೆ ಅವರು ರಾಜ್ಯ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. “ನಾನು ಏನು ಮಾತನಾಡಬೇಕೋ ಅದನ್ನು ಮಾತನಾಡಿದ್ದೇನೆ. ಆದರೆ ಎಲ್ಲವನ್ನೂ ಈಗ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಯಾರೊಂದಿಗೆ ಮಾತನಾಡಬೇಕೋ, ಏನು ಹೇಳಬೇಕೋ ಆ ಎಲ್ಲ ವಿಚಾರಗಳನ್ನು ಸೂಕ್ತ ವೇದಿಕೆಯಲ್ಲಿ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದ್ದಾರೆ. “ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ. ಕಾರ್ಯಕರ್ತನಾಗಿ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವಂತಹ ಪ್ರಯತ್ನವನ್ನು ಮಾಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಥವಾ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ, ತಾವು ಮಾಡಬೇಕಾದ ಮಾತುಕತೆಗಳನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಕಸದಲ್ಲಿ 36 ಸಾವಿರ ಕೋಟಿ ರೂ. ಲೂಟಿ ಆರೋಪ: ಬಿಜೆಪಿಗೆ ಡಿಕೆಶಿ ಓಪನ್ ಚಾಲೆಂಜ್ – Kannada News

ಬೆಂಗಳೂರು, (ಜೂನ್ 10): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಕಸದ ಗೋಲ್ಮಾಲ್​ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ದಾಖಲೆ ಬಿಚ್ಚಿಟ್ಟಿದ್ದಾರೆ. ಕಸ ಸಂಸ್ಕರಣೆಗೆ ಒಂದು ಟನ್​ಗೆ 260 ರೂಪಾಯಿ ಖರ್ಚಾಗುತ್ತೆ. ಆದ್ರೆ ಸರ್ಕಾರ ಕೊಡ್ತಿರೋದು 2012 ರೂಪಾಯಿ ಆಗಿದೆ. 30 ವರ್ಷಗಳಲ್ಲಿ 39 ಸಾವಿರ ಕೋಟಿ ರೂಪಾಯಿ ಹಣ ಕೊಡಲಾಗುತ್ತಿದ್ದು. ಟೆಂಡರ್​​ನಲ್ಲಿ ದೊಡ್ಡ ಗೋಲ್ಮಾಲ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಇನ್ನು ಈ ಆರೋಪವನ್ನು ಸ್ವತಃ ಡಿಕೆ ಶಿವಕುಮಾರ್ ಅಲ್ಲಗಳೆದಿದ್ದು, ಕುಮಾರಸ್ವಾಮಿ ಕೂಡಾ ಹಿಂದೆ ಇದನ್ನೆ ಮಾತನಾಡಿದ್ದರು. ಕಸದ್ದು ದೊಡ್ಡ ಲಾಭಿ ಇದೆ. ಅವರ ಕಾಲದಲ್ಲಿ ಟೆಂಡರ್ ಮಾಡಲಿಲ್ಲ. ಅವರು ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಸವಾಲು ಹಾಕಿದರು.

ಕಸದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಕಸದಿಂದ ಪವರ್ ಮಾಡಲು ಟೆಂಡರ್ ಮಾಡಿದ್ದೆವು. ಯಾರು ಬರಲಿಲ್ಲ, ಅವರ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ.ಬೇರೆ ಬೇರೆ ರಾಜ್ಯಗಳಲ್ಲಿ ನೋಡಿ ಈ ತಿರ್ಮಾನ ಮಾಡಿದೆ. ಅವರು ಆರು ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದಾರೆ.ದೊಡ್ಡ ಬಳ್ಳಾಪುರದಲ್ಲಿ ಜಾಗ ನೋಡಿದ್ದೇನೆ. ಕ್ಷೇತ್ರದಲ್ಲಿ ಕಸ ಹಾಕುವ ವಿಚಾರದಲ್ಲಿ ಸಾಕಷ್ಟು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಸದೊಂದು ಮಾಫಿಯ, ಅದರ ವಕ್ತಾರಾಗಿ ಆರ್ ಅಶೋಕ್ ಮಾತನಾಡುತ್ತಿದ್ದಾರೆ. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಸಾವಿರಾರು ಅಲ್ಲ ಹತ್ತು ಕೋಟಿ ಆದರೂ ತನಿಖೆ ಮಾಡಲಿ. ನಾನು ಸಿಎಂ ಆಗಿದ್ದು ಅವರಿಗೆ ತಡೆದುಕೊಳ್ಳಲು ಆಗ್ತಿಲ್ಲ. ಕೋರ್ಟ್ ನಮ್ಮ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಕಸದ ಟೆಂಡರ್​​ನಲ್ಲಿ ಅಕ್ರಮ ಆರೋಪ: ರಾಜ್ಯಪಾಲ ಗೆಹ್ಲೋಟ್​ಗೆ ಬಿಜೆಪಿ ನಿಯೋಗದಿಂದ ದೂರು

Source link

ಗೃಹಲಕ್ಷ್ಮಿ ಯೋಜನೆಗೆ ಮೇಜರ್ ಸರ್ಜರಿ: ಮಹತ್ವದ ಅಪ್ಡೇಟ್ ನೀಡಿದ ಸಿಎಂ ಡಿಕೆ ಶಿವಕುಮಾರ್

ನವದೆಹಲಿ, (ಜೂನ್ 10): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗ ಮೇಜರ್ ಸರ್ಜರಿಗೆ ಮುಂದಾಗಿದೆ. ಪ್ರಸ್ತುತ ಇಡೀ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷಕ್ಕೂ ಅಧಿಕ ಮಹಿಳಾ ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯೋಜನೆಯ ಅನುಷ್ಠಾನದಲ್ಲಿ ಕಂಡುಬಂದಿರುವ ಕೆಲವು ಗಂಭೀರ ಲೋಪದೋಷಗಳು ಹಾಗೂ ನಕಲಿ ಅರ್ಹತೆಗಳ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕಲು ಸರ್ಕಾರವು ಇನ್ಮುಂದೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ಕಠಿಣ ನಿರ್ಧಾರ ಕೈಗೊಂಡಿದೆ.

ಈ ಸಂಬಂಧ ದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಕೆಲವರು ಸಾವನ್ನಪ್ಪಿದ್ದು, ಆದರೂ ಗೃಹಲಕ್ಷ್ಮಿ ಹಣ ಯಾರಿಗೋ ಹೋಗುತ್ತಿದ್ದು, ಇದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಹೊಸದಾಗಿ ಐಡೆಂಟಿ ಆಗಬೇಕಿದೆ. ಮರುಪರಿಶೀಲನೆ ಮಾಡ್ತಾವಿದಿವಿ ಅಷ್ಟೇ. ಯಾರಿಗೆ ಸಿಗಬೇಕು ಅದು ಸಿಗಲಿ ಎಂದು ಸ್ಪಷ್ಟಪಡಿಸಿದರು.

Source link

ರಾಯಚೂರಲ್ಲಿ ಆರ್‌ಟಿಒ ಸಿಬ್ಬಂದಿ ಗೂಂಡಾಗಿರಿ: 500 ರೂ. ಲಂಚ ಪಡೆಯುತ್ತಿದ್ದ ವಿಡಿಯೋ ಮಾಡಿದ್ದಕ್ಕೆ ಚಾಲಕನಿಗೆ ಧರ್ಮದೇಟು – Kannada News

ರಾಯಚೂರು, ಜೂ.10: ಗಡಿ ಜಿಲ್ಲೆ ರಾಯಚೂರಿನಲ್ಲಿ ಆರ್‌ಟಿಒ (RTO) ಅಧಿಕಾರಿಗಳು ಹಾಗೂ ಸಿಬ್ಬಂದಿಯ ಲಂಚಾವತಾರ ಮತ್ತು ದಬ್ಬಾಳಿಕೆ ಮಿತಿಮೀರಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಆರ್‌ಟಿಒ ಸಿಬ್ಬಂದಿ ಬೇಕಾಬಿಟ್ಟಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ರಾತ್ರಿ ಭಾರಿ ಹೈಡ್ರಾಮಾವೊಂದು ನಡೆದಿದೆ. ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಹೆದ್ದಾರಿಯಲ್ಲಿ ಬರೋಬ್ಬರಿ 3 ಗಂಟೆಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಮತ್ತು ಸವಾರರು ಪರದಾಡುವಂತಾಗಿದೆ.

ನಿನ್ನೆ ಸಂಜೆ ಅಂದಾಜು 6.30 ರ ಸಮಯಕ್ಕೆ ಆಂಧ್ರಪ್ರದೇಶದಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್‌ಗೆ ತೆರಳುತ್ತಿದ್ದ ಲಾರಿಯೊಂದನ್ನು ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಬಳಿ ರೌಂಡ್ಸ್‌ನಲ್ಲಿದ್ದ ಆರ್‌ಟಿಒ ಸಿಬ್ಬಂದಿ ತಡೆದಿದ್ದಾರೆ. ಲಾರಿ ಚಾಲಕ ಮೋಸಮ್ ತಕ್ಷಣವೇ ಗಾಡಿಯ ಎಲ್ಲಾ ಅಧಿಕೃತ ದಾಖಲೆಗಳನ್ನು ತೋರಿಸಿದ್ದಾನೆ. ಆದರೆ, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಸಹ ಆರ್‌ಟಿಒ ಸಿಬ್ಬಂದಿ 500 ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ.

ಆರಂಭದಲ್ಲಿ ಚಾಲಕ ಮೋಸಮ್ ಲಂಚ ಕೊಡಲು ನಿರಾಕರಿಸಿದರೂ, ಸಿಬ್ಬಂದಿಯ ಕಿರುಕುಳ ತಾಳಲಾರದೆ ಕೊನೆಗೆ ಹಣ ಕೊಡಲು ಮುಂದಾಗಿದ್ದಾನೆ. ಈ ವೇಳೆ ಆರ್‌ಟಿಒ ಸಿಬ್ಬಂದಿ ಲಂಚ ಪಡೆಯುವುದನ್ನು ಚಾಲಕ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಸಿಬ್ಬಂದಿ, ಚಾಲಕನ ಟಿ-ಶರ್ಟ್ ಹಿಡಿದು ಮನಬಂದಂತೆ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೆ ಆತನ ಫೋನ್, ಪರ್ಸ್ ಹಾಗೂ ಲಾರಿಯ ಕೀಯನ್ನು ಬಲವಂತವಾಗಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಸ್ತುತ ಆಧುನಿಕ ಲಾರಿಗಳು ಸೆನ್ಸರ್ ವ್ಯವಸ್ಥೆಯನ್ನು ಹೊಂದಿರುವುದರಿಂದ, ಕೀ ಕಸಿದುಕೊಳ್ಳುತ್ತಿದ್ದಂತೆ ಏಕಾಏಕಿ ಸ್ಟೇರಿಂಗ್ ಲಾಕ್ ಆಗಿದೆ. ಇಳಿಜಾರಿನ ರಸ್ತೆಯಾಗಿದ್ದರಿಂದ ಲಾರಿ ನಿಯಂತ್ರಣ ತಪ್ಪಿ ಇಳಿಜಾರಿಗೆ ಚಲಿಸಿದೆ. ಈ ವೇಳೆ ಚಾಲಕ ಮೋಸಮ್ ತಕ್ಷಣವೇ ಸಮಯಪ್ರಜ್ಞೆ ಮೆರೆದು ಲಾರಿಯನ್ನು ಕಷ್ಟಪಟ್ಟು ನಿಯಂತ್ರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಲ್ಲದಿದ್ದರೆ ಲಾರಿ ಪಕ್ಕದಲ್ಲೇ ಇದ್ದ ಹಳಕ್ಕೆ ಉರುಳಿ ಬೀಳುವ ಸಾಧ್ಯತೆಯಿತ್ತು ಎಂದು ಚಾಲಕ ಅಳಲು ತೋಡಿಕೊಂಡಿದ್ದಾನೆ.

ಆರ್‌ಟಿಒ ಸಿಬ್ಬಂದಿ ಕೀ ಕಸಿದುಕೊಂಡು ಹೋದ ಕಾರಣ ಲಾರಿ ಹಳ್ಳದ ಕಿರಿದಾದ ಸೇತುವೆಯ ಮೇಲೆಯೇ ಅಡ್ಡಲಾಗಿ ಬಂದ್ ಆಗಿ ನಿಂತುಬಿಟ್ಟಿತ್ತು. ಪರಿಣಾಮವಾಗಿ ಲಿಂಗಸುಗೂರು ಮತ್ತು ರಾಯಚೂರು ಮಾರ್ಗವಾಗಿ ಸಂಚರಿಸುವ ನೂರಾರು ವಾಹನಗಳು ಸಂಪೂರ್ಣವಾಗಿ ಲಾಕ್ ಆದವು. ಬರೋಬ್ಬರಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ಬಸ್ ಪ್ರಯಾಣಿಕರು, ಮಹಿಳೆಯರು ಮತ್ತು ಮಕ್ಕಳು ತೀವ್ರ ಹೈರಾಣಾದರು.

ಇದನ್ನೂ ಓದಿ: ಮದುವೆ ಹೆಸರಲ್ಲಿ ಯುವತಿಗೆ ವಂಚನೆ ಕೇಸ್​​: ಆರೋಪಿ ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ

ಘಟನಾ ಸ್ಥಳಕ್ಕೆ ಸಿರವಾರ ಪೊಲೀಸರು ಧಾವಿಸಿದರೂ ಟ್ರಾಫಿಕ್ ನಿಯಂತ್ರಣ ಮಾಡುವುದು ಕೈಮೀರಿ ಹೋಗಿತ್ತು. ಈ ಸಂದರ್ಭದಲ್ಲಿ ಅಲ್ಲೇ ಸಿಲುಕಿಕೊಂಡಿದ್ದ ಸರ್ಕಾರಿ ಸಾರಿಗೆ ಬಸ್ ಚಾಲಕರು ಹಾಗೂ ಸ್ಥಳೀಯ ಲಾರಿ ಚಾಲಕರು ತಮ್ಮ ತಾಂತ್ರಿಕ ಜಾಣ್ಮೆ ಮೆರೆದರು. ಸ್ಟೇರಿಂಗ್ ಲಾಕ್ ಆಗಿದ್ದರೂ ಸಹ ಅದನ್ನೇನೋ ತಾಂತ್ರಿಕವಾಗಿ ಮ್ಯಾನೇಜ್ ಮಾಡಿ, ಲಾರಿಯನ್ನು ರಿಸ್ಟಾರ್ಟ್ ಮಾಡಿ ರಸ್ತೆಯ ಪಕ್ಕಕ್ಕೆ ತಳ್ಳುವಲ್ಲಿ ಯಶಸ್ವಿಯಾದರು. ಲಂಚದಾಸೆಗೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಆರ್‌ಟಿಒ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಯಚೂರು ಜನತೆ ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ – Kannada News

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ (Team India) ಯಾವುದೇ ಪ್ರಯೋಜನವಾಗಿರಲಿಲ್ಲ. ಏಕೆಂದರೆ ಈ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಭಾಗವಾಗಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ( WTC Points Table) 6ನೇ ಸ್ಥಾನದಲ್ಲಿಯೇ ಇದೆ. ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ಆಡಬೇಕೆಂದರೆ ಉಳಿದಿರುವ ಸರಣಿಗಳು ನಿರ್ಣಾಯಕವಾಗಿದೆ. ಅದರಂತೆ ಟೀಂ ಇಂಡಿಯಾ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಎಲ್ಲಿ, ಯಾವಾಗ, ಯಾವ ತಂಡದ ವಿರುದ್ಧ ಆಡಲಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಆಗಸ್ಟ್ 15 ರಿಂದ ಸರಣಿ ಆರಂಭ

ಕ್ರಿಕ್‌ಬಜ್ ವರದಿಯ ಪ್ರಕಾರ, ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಜೊತೆಗೆ ಟೀಂ ಇಂಡಿಯಾ ಟಿ20 ಸರಣಿಯನ್ನು ಆಡಲಿದೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ, ಉಭಯ ದೇಶಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15, 2026 ರಂದು ಪ್ರಾರಂಭವಾಗಲಿದೆ. ಆದಾಗ್ಯೂ ಬಿಸಿಸಿಐ ಆಗಲಿ ಶ್ರೀಲಂಕಾ ಕ್ರಿಕೆಟ್ ಆಗಲಿ ಈ ಸರಣಿಯ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲವಾದರೂ, ಸಂಪೂರ್ಣ ಸರಣಿಯ ವೇಳಾಪಟ್ಟಿ ಬಹುತೇಕ ಅಂತಿಮಗೊಂಡಿದೆ.

ಈ ಟೆಸ್ಟ್ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಭಾಗವಾಗಿರುವ ಕಾರಣ, ಫೈನಲ್​ಗೆ ಅರ್ಹತೆ ಪಡೆಯಲು ಈ ಸರಣಿಯು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ವರದಿಯ ಪ್ರಕಾರ, ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಗಾಲೆ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಿಂದ ಆಗಸ್ಟ್ 19 ರವರೆಗೆ ನಡೆಯುವ ನಿರೀಕ್ಷೆಯಿದೆ. ಮೊದಲ ಪಂದ್ಯದ ನಂತರ, ಎರಡೂ ತಂಡಗಳು ಕೊಲಂಬೊಗೆ ತೆರಳಲಿವೆ. ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಆಗಸ್ಟ್ 23 ರಿಂದ ಆಗಸ್ಟ್ 27 ರವರೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುವ ನಿರೀಕ್ಷೆಯಿದೆ.

9 ವರ್ಷಗಳ ನಂತರ ಸರಣಿ

ಒಂಬತ್ತು ವರ್ಷಗಳ ನಂತರ ಭಾರತ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಮೊದಲು 2017 ರಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಭಾರತ ತಂಡವು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಸಿಂಹಳೀಯರ ನಾಡಿಗೆ ಕಾಲಿಡುತ್ತಿರುವ ಯುವ ಪಡೆ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

ಟೆಸ್ಟ್ ಜೊತೆಗೆ ಟಿ20 ಸರಣಿ

ಮೇಲೆ ಹೇಳಿದಂತೆ ಈ ಟೆಸ್ಟ್ ಸರಣಿಯ ಜೊತೆಗೆ, ಎರಡೂ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಿವೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯ ಕುರಿತು ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ. ಹೀಗಾಗಿ ಟೆಸ್ಟ್ ಸರಣಿಯ ನಂತರ ಟಿ20 ಸರಣಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್ – Kannada News

ಕಾಲಿವುಡ್‌ನ ಯುವ ಸೆನ್ಸೇಷನ್ ಪ್ರದೀಪ್ ರಂಗನಾಥನ್ (Pradeep Ranganathan) ನಟನೆಯ ‘ಡ್ಯೂಡ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೆ ಬಿಡುಗಡೆಯಾಗಿದ್ದ ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ, ವಿಶ್ವಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ‘ಡ್ಯೂಡ್’ (Dude) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕೀರ್ತೀಶ್ವರನ್ ಮೊದಲ ಚಿತ್ರದಲ್ಲೇ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಈಗ ಅವರು ಈ ಸಿನಿಮಾದ ಸೀಕ್ವೆಲ್ (Dude 2) ಬಗ್ಗೆ ಒಂದು ಅಪ್​ಡೇಟ್ ನೀಡಿದ್ದಾರೆ.

ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡಿದ್ದ ಈ ಸಿನಿಮಾ, ಹೊಸ ತಲೆಮಾರಿನ GenZ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸಾಯಿ ಅಭ್ಯಂಕರ್ ಅವರ ಸೂಪರ್ ಹಿಟ್ ಸಂಗೀತ ಕೂಡ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಅಭಿಮಾನಿಗಳಿಗೆ ನಿರ್ದೇಶಕರು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಕೀರ್ತೀಶ್ವರನ್, ‘ಡ್ಯೂಡ್ 2’ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ನಾನು ಈಗಾಗಲೇ ಡ್ಯೂಡ್ 2 ಚಿತ್ರದ ಒಂದು ಸಣ್ಣ ಲೈನ್ ಅಥವಾ ಐಡಿಯಾವನ್ನು ಪ್ರದೀಪ್ ರಂಗನಾಥನ್ ಅವರಿಗೆ ವಿವರಿಸಿದ್ದೇನೆ. ಆ ಕಾನ್ಸೆಪ್ಟ್ ಪ್ರದೀಪ್ ಅವರಿಗೂ ತುಂಬಾ ಇಷ್ಟವಾಗಿದೆ. ಒಂದು ವೇಳೆ ಸೀಕ್ವೆಲ್ ಸೆಟ್ಟೇರಿದರೆ, ಮೊದಲ ಭಾಗದ ಪ್ರಸಿದ್ಧ ‘ಕಮ್ ಆನ್, ಡ್ಯೂಡ್’ ಸನ್ನಿವೇಶದಿಂದಲೇ ಕಥೆ ಮುಂದುವರಿಯಲಿದೆ’ ಎಂದು ಅವರು ಹೇಳಿದ್ದಾರೆ.

ಆದರೆ, ಚಿತ್ರದ ಸೀಕ್ವೆಲ್ ಬಗ್ಗೆ ಕೀರ್ತೀಶ್ವರನ್ ಒಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ಸದ್ಯಕ್ಕೆ ಇದು ಕೇವಲ ಒಂದು ಪ್ರಾಥಮಿಕ ಐಡಿಯಾ ಅಷ್ಟೇ. ಇದು ಇನ್ನೂ ಸಂಪೂರ್ಣವಾಗಿ ಫೈನಲ್ ಆಗಿಲ್ಲ. ಕಥೆ ಪೂರ್ತಿಯಾಗಿ ಸಿದ್ಧಗೊಂಡು, ಮೊದಲ ಭಾಗಕ್ಕಿಂತಲೂ ಅದ್ಭುತವಾಗಿ ಮೂಡಿಬರುತ್ತದೆ ಎಂಬ ಭರವಸೆ ಸಿಕ್ಕರೆ ಮಾತ್ರ ನಾವು ಡ್ಯೂಡ್ 2 ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದೇವೆ. ಸ್ಕ್ರಿಪ್ಟ್ ಆ ಹಂತಕ್ಕೆ ತಲುಪಿದ ನಂತರವೇ ಅಧಿಕೃತ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ 100 ಕೋಟಿ ರೂ. ಹ್ಯಾಟ್ರಿಕ್ ಸಾಧಿಸಿದ ಪ್ರದೀಪ್ ರಂಗನಾಥನ್

ಈ ಮೊದಲು ‘ಡ್ಯೂಡ್’ ಸಿನಿಮಾವನ್ನು ಫ್ರಾಂಚೈಸಿ ಅಥವಾ ಸೀಕ್ವೆಲ್ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಿರಲಿಲ್ಲ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಗಳಿಸಿದ ಅಭೂತಪೂರ್ವ ಯಶಸ್ಸು ಮತ್ತು ಪ್ರದೀಪ್ ರಂಗನಾಥನ್ ಪಾತ್ರಕ್ಕೆ ಸಿಕ್ಕ ಜನಪ್ರಿಯತೆ, ಈಗ ಸೀಕ್ವೆಲ್ ಮಾಡುವಂತೆ ಚಿತ್ರತಂಡವನ್ನು ಪ್ರೇರೇಪಿಸಿದೆ. ಸದ್ಯಕ್ಕೆ ಪ್ರದೀಪ್ ರಂಗನಾಥನ್ ಮತ್ತು ಕೀರ್ತೀಶ್ವರನ್ ಇಬ್ಬರೂ ತಮ್ಮ ಮುಂದಿನ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ನಿರ್ದೇಶಕರು ಈಗಾಗಲೇ ಸೀಕ್ವೆಲ್‌ಗೆ ಬೀಜ ಬಿತ್ತಿರುವುದರಿಂದ, ಮುಂದಿನ ದಿನಗಳಲ್ಲಿ ‘ಡ್ಯೂಡ್ 2’ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ದಟ್ಟವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version