NEET UG 2026: ಅಡ್ವಾನ್ಸ್ ಎಗ್ಜಾಮ್ ಸಿಟಿ ಇಂಟಿಮೇಶನ್ ಸ್ಲಿಪ್ ಬಿಡುಗಡೆ; ಡೌನ್​ಲೋಡ್ ಮಾಡುವುದು ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ

NEET UG 2026: ಅಡ್ವಾನ್ಸ್ ಎಗ್ಜಾಮ್ ಸಿಟಿ ಇಂಟಿಮೇಶನ್ ಸ್ಲಿಪ್ ಬಿಡುಗಡೆ; ಡೌನ್​ಲೋಡ್ ಮಾಡುವುದು ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಏಪ್ರಿಲ್ 13: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಈ ವರ್ಷದ ನೀಟ್ ಯುಜಿ (NEET UG 2026) ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ‘ಅಡ್ವಾನ್ಸ್ ಎಗ್ಜಾಮ್ ಸಿಟಿ ಇಂಟಿಮೇಶನ್ ಸ್ಲಿಪ್’ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಸ್ಲಿಪ್ ಮೂಲಕ ಅಭ್ಯರ್ಥಿಗಳು ತಮ್ಮ ಪರೀಕ್ಷೆ ನಡೆಯುವ ನಗರವನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ಈ ವಿವರಗಳನ್ನು ಪರಿಶೀಲಿಸಬಹುದು. ಆದರೆ, ಸಂಸ್ಥೆ ಸ್ಪಷ್ಟಪಡಿಸಿರುವಂತೆ ಈ ಸ್ಲಿಪ್ ಕೇವಲ ಮಾಹಿತಿಗಾಗಿ ಮಾತ್ರವಾಗಿದ್ದು, ಇದು ಪ್ರವೇಶ ಪತ್ರ (Admit Card) ಆಗಿರುವುದಿಲ್ಲ. ಅಡ್ಮಿಟ್ ಕಾರ್ಡ್‌ನಲ್ಲಿ ಮಾತ್ರ ಪರೀಕ್ಷಾ ಕೇಂದ್ರದ ನಿಖರ ವಿಳಾಸ, ಪ್ರವೇಶ ಸಮಯ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಸೂಚನೆಗಳು ನೀಡಲಾಗುತ್ತವೆ. ಆದ್ದರಿಂದ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್​ಗಾಗಿ ಕಾಯಬೇಕಾಗುತ್ತದೆ.

ಪರೀಕ್ಷೆ ಯಾವಾಗ?

ನೀಟ್ ಪರೀಕ್ಷೆ ಮೇ 3, 2026ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಪರೀಕ್ಷೆಯನ್ನು ಪೆನ್ ಮತ್ತು ಪೇಪರ್ ಮಾದರಿಯಲ್ಲಿ ನಡೆಸಲಾಗುತ್ತದೆ. ಭಾರತದಲ್ಲಿನ 552 ನಗರಗಳು ಹಾಗೂ ವಿದೇಶದಲ್ಲಿನ 14 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತದೆ.

ಈ ಸಿಟಿ ಸ್ಲಿಪ್ ವಿದ್ಯಾರ್ಥಿಗಳಿಗೆ ಪೂರ್ವ ಯೋಜನೆಗೆ ಸಹಾಯ ಮಾಡುತ್ತದೆ. ದೂರದ ಸ್ಥಳಗಳಿಗೆ ಪ್ರಯಾಣಿಸುವವರು ರೈಲು, ವಿಮಾನ ಅಥವಾ ವಸತಿ ವ್ಯವಸ್ಥೆಗಳನ್ನು ಮುಂಚಿತವಾಗಿ ಬುಕ್ ಮಾಡಿಕೊಳ್ಳಬಹುದು. ಇದರಿಂದ ಪರೀಕ್ಷಾ ದಿನದ ಒತ್ತಡವನ್ನು ಕಡಿಮೆ ಮಾಡಬಹುದು.

ಸಿಟಿ ಇಂಟಿಮೇಶನ್ ಸ್ಲಿಪ್ ಡೌನ್‌ಲೋಡ್ ಮಾಡುವುದು ಹೇಗೆ?

ಅಭ್ಯರ್ಥಿಗಳು ಅಧಿಕೃತ NTA ಅಥವಾ NEET ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ರುಜುವಾತುಗಳೊಂದಿಗೆ ಲಾಗಿನ್ ಆಗಬೇಕು. ಡ್ಯಾಶ್‌ಬೋರ್ಡ್ ಒಳಗೆ ಹೋದ ನಂತರ, ಪರೀಕ್ಷಾ ನಗರದ ವಿವರಗಳನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.ವಿದ್ಯಾರ್ಥಿಗಳು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಮತ್ತು ಪರೀಕ್ಷಾ ದಿನಾಂಕದ ಮೊದಲು ನಗರದ ಸ್ಥಳವನ್ನು ಚೆನ್ನಾಗಿ ತಿಳಿದುಕೊಳ್ಳಲು ಸೂಚಿಸಲಾಗಿದೆ.

ತಾಂತ್ರಿಕ ದೋಷ ಎದುರಾದರೆ ಏನು ಮಾಡಬೇಕು?

ಸ್ಲಿಪ್ ಡೌನ್‌ಲೋಡ್ ಆಗದಿದ್ದಲ್ಲಿ ಅಥವಾ ತಾಂತ್ರಿಕ ತೊಂದರೆ ಎದುರಾದಲ್ಲಿ, ಅಭ್ಯರ್ಥಿಗಳು NTA ಸಹಾಯವಾಣಿ ಸಂಖ್ಯೆ 011-40759000 ಅಥವಾ 011-69227700 ಅಥವಾ neetug2026@nta.ac.in ಅನ್ನು ಇಮೇಲ್ ಮೂಲಕ ಸಂಪರ್ಕಿಸಬಹುದು. ಅಧಿಕೃತ ವೆಬ್‌ಸೈಟ್‌ನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸಂಸ್ಥೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಹಾಸನ (ಏಪ್ರಿಲ್.13): 8 ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ (Lover) ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (Hassan) ನಡೆದಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ಚಿಸ್ಟ್ ಸಿಕ್ಕಿದೆ. ಮನೆಬಿಟ್ಟು ಹೋಗಿ ಪ್ರಿಯಕರನ ಕೈಯಿಂದ ತಾಳಿಕಟ್ಟಿಸಿಕೊಂಡಿದ್ದ ಮಹಿಳೆ ಇದೀಗ ತನ್ನನ್ನು ವಾಪಸ್ ಕರೆದುಕೊಂಡು ಹೋಗಿ ಎಂದು ಗಂಡನ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹೌದು…ಪ್ರಕಾಶ್-ಹರ್ಷಿತಾ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಪ್ರಿಯಕರನಿಂದ ಹೋಗಿದ್ಯಾಕೆ? ಕಾರಿನಲ್ಲಿ ತಾಳಿಕಟ್ಟಿಸಿಕೊಂಡಿದ್ಯಾಕೆ? ಎನ್ನುವುದನ್ನು ಗಂಡನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಪ್ಪಾಯ್ತು ಎಂದು ಸಹ ಬೇಡಿಕೊಂಡಿದ್ದಾಳೆ.

ಇದನ್ನೂ ಓದಿ : ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ಪ್ರಕಾಶ್-ಹರ್ಷಿತಾ ಮಾತನಾಡಿದ ಆಡಿಯೋನಲ್ಲೇನಿದೆ?

ಪ್ರಕಾಶ್ (ಗಂಡ) : ಇಷ್ಟೆಲ್ಲಾ ಆಗಿದೆ ಅಪ್ಪಿ ಏನ್ಮಾಡೋದು, ನೋಡಿದ್ರೆ ಅವನು‌ ನೂರಕ್ಕೆ ನೂರು ಈ ತರ ಆಗಿದೆ ಬೇಕಾದರೆ ರಿಪೋರ್ಟ್ ಎಲ್ಲಾ ಇದೆ ಕಳುಸ್ಲಾ ಅಂದ

ಹರ್ಷಿತಾ (ಹೆಂಡ್ತಿ) : ಕಳುಸ್ಕೊಡಿ ಆಯ್ತು

ಪ್ರಕಾಶ್ : ಗೊತ್ತಾಗುತ್ತಲಾ ಈಗ ಆಗಿರೋದು ಏನು ಅಂಥ, ನೀನು ಅದು ಹೇಗೆ ಕಾರಿನಲ್ಲಿ ನಗು ನಗುತ್ತಾ ತಾಳಿ ಕಟ್ಟಿಸಿಕೊಂಡೆ, ಬ್ಲಾಕ್‌ಮೇಲೆ ಮಾಡಿದ್ರೆ ನಿನ್ನ ಮನಸ್ಸಿನಲ್ಲಿ, ಮುಖದಲ್ಲಿ ಇದು ಇರಬೇಕಿತ್ತು

ಹರ್ಷಿತಾ : ಅವಾಗ ಬ್ಲಾಕ್‌ಮೇಲ್ ಅಲ್ಲಾ, ಈಗ ಲಾಸ್ಟ್‌ಗೆ ಬ್ಲಾಕ್‌ಮೇಲ್ ಮಾಡಿದ್ದು ಅದಕ್ಕೆ ಬಂದಿದ್ದು, ಇಲ್ಲ ಅಂದರೆ ಏನಕ್ಕೆ ಬರ್ತಿದ್ದೆ

ಪ್ರಕಾಶ್ : ಅವಾಗ ಮಾತ್ರ ಏಕೆ ಖುಷಿಯಾಗಿ ಕಟ್ಟಿಸಿಕೊಂಡೆ

ಹರ್ಷಿತಾ : ಅವಾಗ ಅವನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದ, ನನ್ನ ತಲೆಗೆ ಎಲ್ಲಿ ಬರುತ್ತೆ ನಾನು ಹೇಳಿಬಿಟ್ಟು ಸುಮ್ನೆ ಬರೋಣ ಅಂಥ ಬಂದೆ, ಹಿಂಗೆ ಆಗುತ್ತೆ, ಬ್ಲಾಕ್ ಮೇಲ್ ಮಾಡ್ತಾನೆ ಅಂಥ ಗೊತ್ತಿರಲಿಲ್ಲ

ಪ್ರಕಾಶ್ : ಅವನ್ಯಾಕೆ ಸೂಸೈಡ್ ಮಾಡ್ಕತನೆ, ನಿನಗೆ ಏಕೆ ಹೀಗ್ ಮಾಡ್ದಾ, ನೀನು ಹೇಳದ್ರಲ್ಲಿ ಒಂದು ಕ್ಲಾರಿಫಿಕೇಷನ್ ಇಲ್ಲಾ

ಹರ್ಷಿತಾ : ಸೂಸೈಡ್ ಮಾಡ್ಕತಿನಾ ಅಂದ ಅದ್ಕೆ

ಪ್ರಕಾಶ್ : ನೀನು ಕಾರಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಿದ್ದಿಯಲ್ಲವಾ

ಹರ್ಷಿತಾ : ಒಂಚೂರು ವಿಷ ಕುಡಿದಿದ್ದಕ್ಕೆ ಹಾಸನಕ್ಕೆ ಬಂದೆ

ಪ್ರಕಾಶ್ : ಪಡುವಲಹಿಪ್ಪೆ ಆಸ್ಪತ್ರೆಯಲ್ಲಿ ರೆಡ್ ಶರ್ಟ್ ಹಾಕೊಂಡು ಗ್ಲೂಕೋಸ್ ಹಾಕುಸ್ಕಂಡು ನೀನು ಮದುವೆ ಆಗಲಿಲ್ಲ ಎಂದರೆ ಸೂಸೈಡ್ ಮಾಡ್ಕತಿನಿ ಅಂಥ ಅವನಿಗೆ ಕಳ್ಸಿದಿಯಾ, ಆ ಫೋಟೋ ನನ್ನ ಹತ್ರ ಇದೆ

ಹರ್ಷಿತಾ : ನಾನು ಮದುವೆಯಾಗು ಅಂಥ ಏನು ಹೇಳೇ ಇಲ್ಲ, ಯಾವುದೇ ಕಾರಣಕ್ಕೂ ಹೇಳೇ ಇಲ್ಲಾ, ನಾನು ಯಾವ ಟೀ ಶರ್ಟ್ ಹಾಕಂಡು ಏನಕ್ಕೆ ಹೋಗಲಿ

ಪ್ರಕಾಶ್ : ಹ್ಯಾಪಿ ಮ್ಯಾರಿಡ್ ಲೈಫ್ ಕಿರಾಕತ ಅಂಥ ಕಳ್ಸಿದಿಯಾ, ಅವತ್ತು ನೀನು ಬಹಳ ಖುಷಿಯಾಗಿದಿಯಾ, ಇಲ್ಲಿ ಸಾಕ್ಷಿ ಸಿಗುತ್ತಿದಿದೆಯೆಲ್ಲಾ, ನಾನು ಆಸ್ಪತ್ರೆಯಿಂದ ಮನೆಗೆ ಬಂದಾಗ ಅವನು ಊಟ ಮಾಡಿಸಿ ಹೋದನಂತೆ

ಹರ್ಷಿತಾ : ಅವನು ಹೇಗೆ ಊಟ ಮಾಡುಸ್ತನೆ, ಪಕ್ಕದ ಬೆಡ್ ಅವರು ಇರಲಿಲ್ಲಾ, ಅವನು ಬಂದು ನೋಡಿಕೊಂಡು ಹೋದ ಅಷ್ಟೇ, ಊಟ ಮಾಡಿಸಲಿಲ್ಲ

ಪ್ರಕಾಶ್ : ನಾನು ಊಟ ತಂದು ಕೊಟ್ಟಿರಲಿಲ್ವಾ ಮುಂಡಗೋಡಿಗೆ ಹೋಗಿ ಲೋಕೇಷನ್ ಹಾಕು ಅಂಥ ಹೇಳಿರ್ಲಿಲ್ವಾ

ಹರ್ಷಿತಾ : ನಾನು ತಡೆ ಒಡೆಸಲು ಹೋಗಿದ್ದೆ

ಪ್ರಕಾಶ್ : ಈಗಲೂ ಸುಳ್ಳು ಹೇಳ್ತಿದಿಯಲ್ಲಾ, ಹೇಳು ಈಗ

ಹರ್ಷಿತಾ : ಸರಿ ಈಗ ಬರ್ತಿನಿ, ಅವನು ಜೊತೆ ಹೋಗಲ್ಲ, ಅವನಿಗೂ ನನಗೂ ಸಂಬಂಧವಿಲ್ಲ, ಅವನ ಹತ್ತಿರನೂ ಸಹಿ ಹಾಕಿಸಿಕೊಳ್ಳಿ, ತಪ್ಪಾಯ್ತು, ಇನ್ಮುಂದೆ ಹೀಗೆ ಮಾಡಲ್ಲ, ಪಾಪು ಮುಖ ನೋಡ್ಕಂಡು ಇರ್ತಿನಿ, ಬಂದು ಕರ್ಕಂಡು ಹೋಗಿ ಇಲ್ಲಿಂದ

ಪ್ರಕಾಶ್: ಬೇರೆ ಏನೇನ್ ಮುಚ್ಚಿಟ್ಟಿದ್ದೀ ನನ್ನಿಂದ ಹೇಳು

ಹರ್ಷಿತಾ : ಇಷ್ಟೇ ಬೇರೆ ಏನು ನಡೆದಿಲ್ಲಾ

ಪ್ರಕಾಶ್ : ಸುಳ್ಳು ಮೇಲೆ ಸುಳ್ಳು ಹೇಳ್ಕಂಡೆ ಹೋದೆ

ಹರ್ಷಿತಾ : ಮನೆ ಹತ್ತಿರ ಬಂದು ಜಗಳ ಆಡ್ತಿರಾ ಅಂಥ ಹೇಳ್ದೆ

ಪ್ರಕಾಶ್ : ನನ್ನ ಕೈಯಲ್ಲಿ ಏನು ಆಗಲ್ಲ ಅನ್ಕೊಂಡೆ ಅಲ್ವಾ, ಎಲ್ಲಾ ಏನಂತಾರೆ ಗೊತ್ತಾ ಈಗ, ಮೂಮೂಲಿ ಕ್ರಿಮಿನಲ್ ಅಲ್ಲಾ, ಇಂಟರ್‌ನ್ಯಾಷನಲ್ ಕ್ರಿಮಿನಲ್ ತರ ಯೋಚನೆ ಮಾಡಿದ್ದಾಳೆ ಅಂತಾರೆ, ಆ ತರ ಮೈಂಡ್ ಯಾರಿಗೂ ಓಡಿಲ್ಲ, ಆ ಸ್ಪೀಡ್‌ಲಿ ಮೈಂಡ್ ಓಡ್ಸಿದಿಯಾ

ಹರ್ಷಿತಾ : ಎಲ್ಲಾ ಅವನು ಹೇಳ್ಕೊಟ್ಟಿದ್ದು, ನಾನೇನು ಹೇಳಿಲ್ಲ, ಲಾಯರ್ ಹತ್ರ ಅವನೇ ಮಾತನಾಡಿದ್ದು, ನೀನು ಹೋದರೆ ಫೋಟೋಸ್ ಸೋಷಿಯಲ್‌ ಮಿಡಿಯಾಗೆ ಹಾಕ್ತಿನಿ ಅಂಥ ಹೆದ್ರುಸ್ದಾ, ನನ್ನ ಹತ್ತಿರ ದುಡ್ಡು ಎಲ್ಲಿ ಇತ್ತು ಲಾಯರ್‌ಗೆ ಕೊಡೊಕೆ

ಪ್ರಕಾಶ್ : ಅವರ ಮನೆ ಆಯಾ ಮಾಡ್ಸೋ ವಿಡಿಯೋ ಮಾಡಿದ್ದೀರಿ ಮನೆ, ಸೈಟ್ ಸಿಗುತ್ತೆ ಅಂಥ ಖುಷಿ ಆಗ್ಬಿಟ್ಟೆ ಅಲ್ವಾ

ಹರ್ಷಿತಾ : ಅವನು ಬ್ಲಾಕ್‌ಮೇಲ್ ಮಾಡ್ದಾ, ಅವನು ಸೋಷಿಯಲ್ ಮಿಡೀಯಾದಲ್ಲಿ ಹಾಕಿದ್ರೆ ಏನ್ ಮಾಡ್ಲಿ

ಪ್ರಕಾಶ್ : ನೀನು ಹೇಳಬೇಕಿತ್ತು

ಹರ್ಷಿತಾ : ನಾನು ರಕ್ಷಿ ಹತ್ತಿರ ಹೇಳ್ಕೊಬೇಕಿತ್ತು

ಪ್ರಕಾಶ್ : ಅವತ್ತು ಬೇಡ, ಇನ್ಸ್‌ಪೆಕ್ಟರ್ ಅಷ್ಟು ಕೇಳ್ದಾಗ್ಲೆ ಹೇಳಬೇಕಿತ್ತಲ್ವಾ, ಯಾವುದು ಹೊರಗಡೆ ಬರ್ದಂಗೆ ಮಾಡೋರು, ಗೊರೂರಲ್ಲಿ ಅಷ್ಟೊಂದು ಹೇಳಿದ್ರು, ನೀನು ಏನು ಮಾಡ್ಲಿಲ್ವಲಾ, ಯಾವ್ಯಾವ ತರ ಸುಳ್ಳು ಹೇಳ್ದೆ, ಈಗಲೂ ಸುಳ್ಳು ಹೇಳ್ದೆ ನೀನು, ಕನ್ಸಿವ್ ಆಗಿದೆ ಅಂದೆ, ನನ್ನಿಂದ ಅಂತೂ ಆಗಿಲ್ಲ, ಈಗ ಕ್ಲಿಯರ್ ಮಾಡ್ಕಂಡಾ, ಈಗ ಪಕ್ಕ ಅವನಿಂದ ಅಲ್ವಾ

ಹರ್ಷಿತಾ : ಕ್ಲಿಯರ್ ಮಾಡ್ಕಂಡೆ, ಅವನದ್ದು ಅಂಥ ಹೇಗೆ ಪಕ್ಕಾ ಆಗುತ್ತೆ, ನನಗೆ ಬೇಡ ಅಂಥ ಕ್ಲಿಯರ್ ಮಾಡ್ಕಂಡೆ, ಅವನ ಜೊತೆ ಸೇರಿದ್ರೆ ಸುಮ್ನೆ ಮಾಡ್ಕೊತ್ತಿದ್ದೆ

ಪ್ರಕಾಶ್ : ಸೇರಿರೋದ್ಕೆ ಬೇಡ ಅಂತ ಈ ತರ ಮಾಡ್ಕಂಡಿದಿಯಾ

ಹರ್ಷಿತಾ : ನಾನು ನನಗೆ ಬೇಡ ಅಂಥ ಮಾಡ್ಕಂಡಿದ್ದು

ಪ್ರಕಾಶ್ : ಎಸ್‌ಎಸ್‌ಎಂ ಆಸ್ಪತ್ರೆಗೆ ತೋರ್ಸಿದ್ನಾ

ಹರ್ಷಿತಾ : ಎಸ್‌ಎಸ್‌ಎಂಗಲ್ಲ, ನಾನು ಅವನಿಗೆ ಏನು ಹೇಳಿಲ್ಲ, ನಿಮಗೆ ಹೇಳ್ಕಂಡು ಮಾಡ್ಕೊಂಡಿರೋದು

ಪ್ರಕಾಶ್ : ಅವನು ನನ್ನಂದಾನೆ ಆಗಿರೋದು ರಿಪೋರ್ಟ್ ಇದೆ ಅಂಥ ಹೇಳ್ದಾ

ಹರ್ಷಿತಾ : ನೀವು ತಾನೇ ಸಹಿ ಮಾಡಿದ್ದು ಆಸ್ಪತ್ರೆಲಿ, ಅವನನ್ನು ಕೇಳಿದ್ರೆ ಅವನೇ ಮಾಡ್ದಿದ್ದಾ ತಾನೇ

ಪ್ರಕಾಶ್ : ನನ್ನನ್ನು ಉಪಯೋಗಿಸಿಕೊಂಡೆ ಅಷ್ಟೇ, ನನ್ನನ್ನು ನಂಬ್ಸಿದಿಯಾ, ಇಷ್ಟು ವರ್ಷದಿಂದ ಆಗದ್ದು ಈಗ ಹೇಗೆ ಆಗುತ್ತೆ

ಹರ್ಷಿತಾ : ಆ ತರ ಇದ್ದಿದ್ರೆ ಅವನನ್ನು ಕೇಳಿ ಅವನತ್ರನೇ ತೆಗಿಸಿಕೊಳ್ತಿದ್ದೆ

ಪ್ರಕಾಶ್ : ಅರ್ಧ ಗಂಟೆಯಿಂದಲೂ ಸುಳ್ಳೇ ಹೇಳ್ತಿದಿಯಾ

ಹರ್ಷಿತಾ : ಸತ್ಯ ಹೇಳ್ತಿದ್ದೀನಿ ಅಷ್ಟೇ, ಅವನು ಬ್ಲಾಕ್‌ಮೇಲ್ ಮಾಡ್ದಾ, ಅದಕ್ಕೆ ಹೋಗಿದ್ದು, ಗೋಲ್ಡ್ ಹರಾಜಾಗುತ್ತೆ ಅಂಥ ತಗೊಂಡು ಹೋದೆ, ದುಡ್ಡು ನಾನೇ ಹಾಕ್ಲಿಲ್ವಾ

ಪ್ರಕಾಶ್ : ಹಾಕ್ದೆ, ಅಲ್ಲಿ ಕೋಟಿ ಕೋಟಿ ಸಿಗುತ್ತೆ, ಅವನತ್ರ ಮನೆ, ಸೈಟ್ ಸಿಗುತ್ತೆ, ದಿಲ್‌ದಾರ್ ಆಗಿ ಇರಬಹುದು ಅಂಥ ಹಾಕ್ದೆ, ಅವನ ಕಥೆ ಏನು ಹೇಳು

ಹರ್ಷಿತಾ : ನನಗು ಅವನಿಗೂ ಸಂಬಂಧವಿಲ್ಲ, ಪೊಲೀಸ್ ಠಾಣೆಯಲ್ಲಿ ಬರ್ಕೊಡ್ತಿನಿ

ಪ್ರಕಾಶ್ : ನಿರಂಜನ್ ಅನ್ನೋನ್ನನ್ನ ಏಕೆ ಉಪಯೋಗಿಸಿಕೊಂಡೆ

ಹರ್ಷಿತಾ : ಆದರ್ಶ್‌ಗೆ ಎಲ್ಲಾ ಗೊತ್ತು ಅದು

ಪ್ರಕಾಶ್ : ಫೋಟೋ ಎಲ್ಲಾ ಕಳ್ಸಿದಿಯಾ, ಇವರ ಜೊತೆ ನನ್ನ ಎಂಗೇಜ್ಮೆಂಟ್ ಇದೆ ಅಂಥ, ಇಸ್ಕ್ಟಾಗ್ರಾಂ ಅಕೌಂಟ್ ಏಕೆ ಎರಡೆರಡು ಮಾಡ್ಕೊಂಡೆ

ಹರ್ಷಿತಾ : ನನ್ನ ಹತ್ತಿರ ಎರಡು ಎಲ್ಲಿದೆ, ಒಂದೇ ಅಕೌಂಟ್ ಇರೋದು

ಪ್ರಕಾಶ್ : ವರ್ಷಾ 29 ನಾ

ಹರ್ಷಿತಾ : ಅದಲ್ಲಾ, ವರ್ಷಾP29 ರೆಡ್ ಶರ್ಟ್ ಹಾಕಿರೋದು, ಅದನ್ನು ಹ್ಯಾಕ್ ಮಾಡಿ ಎಲ್ಲರಿಗೂ ಮೆಸೇಜ್ ಮಾಡಿದ್ರು, ಕಿರಗಡಲು ದರ್ಶು ಕೇಳಿ

ಪ್ರಕಾಶ್ : ನೀನು ಬರ್ತಾ ಬರ್ತಾ ಸಿಂಗಲ್ ಫೋಟೋ ಹಾಕೋದು, ಏಕೆ ಬೇಕಾಗಿತ್ತು ನಿನಗೆ ಇದೆಲ್ಲವಾ, ಅವಾಗ್ಲೆ ವಾರ್ನ್ ಮಾಡಿದ್ದೆ, ನಾನೇ ಊಟ ಮಾಡ್ಸಿದ್ದೆ, ಅವತ್ತು ನಾನು ತಿಳಿದುಕೊಳ್ಳಲಿಲ್ಲ, ನಿನಗೆ ದುಡ್ಡು ಮುಖ್ಯ ಆಯ್ತು ಅಷ್ಟೇ, ಫೋನ್ ಇಡು

Source link

ವಚನಾನಂದ ಸ್ವಾಮೀಜಿಗೆ ಬಿಗ್​​ ಶಾಕ್ ಕೊಟ್ಟ ಧರ್ಮದರ್ಶಿ ಸಮಿತಿ​​: ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ

ದಾವಣಗೆರೆ, ಏಪ್ರಿಲ್​​ 13: ಲೆಕ್ಕ ಕೊಡಿ ಅಭಿಯಾನ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ವಚನಾನಂದ ಸ್ವಾಮೀಜಿಗೆ ಬಿಗ್​​ ಶಾಕ್​​ ಕೊಡಲಾಗಿದ್ದು, ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಲಾಗಿದೆ. ಗುರುಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಟ್ಟು 15 ಜನ ಇರುವ ಧರ್ಮದರ್ಶಿ ಸಮಿತಿ ಸಭೆಯಲ್ಲಿ 12 ಜನ ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದಾರೆ ಎಂದು ಧರ್ಮದರ್ಶಿ ಸಮಿತಿ ಸದಸ್ಯರಾದ ಬಸವರಾಜ್ ದಿಂಡೂರ ಹಾಗೂ ಬಾವಿ ಬೆಟ್ಟಪ್ಪ ತಿಳಿಸಿದ್ದಾರೆ.

ಇನ್ನು ಧರ್ಮದರ್ಶಿ ಸಮಿತಿಯ ನಿರ್ಧಾರದ ಬಗ್ಗೆಸಂಸ್ಥಾಪಕ ಟ್ರಸ್ಟಿ ಎಚ್. ಪಿ. ಬಸವರಾಜ್ ಕಿಡಿ ಕಾರಿದ್ದಾರೆ. ಸಭೆಯಲ್ಲಿ ವಚನಾನಂದ ಸ್ವಾಮೀಜಿಗಳನ್ನ ಮಠದ ಗುರು ಪೀಠದ ಉಚ್ಛಾಟನೆಗೆ ಸಮಿತಿ ಮುಂದಾದ ಕಾರಣ ಸಭೆಯಿಂದ ನಾನು ಹೊರಬಂದಿದ್ದೇನೆ. ಸಮಿತಿಯ ಈ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಸಭೆ ಕರೆಯುವ ಏಳು ದಿನ ಮೊದಲು ಧರ್ಮದರ್ಶಿ ಸಮಿತಿ ಸದಸ್ಯರಿಗೆ ನೋಟಿಸ್ ಕೊಡಬೇಕು. ಆದ್ರೆ ತಡ ರಾತ್ರಿ ಬಂದು ಸ್ವಾಮೀಜಿಗಳು ಇರುವ ಮಠದ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಜೊತೆಗೆ ಸ್ವಾಮೀಜಿ ವಿರುದ್ಧ ಇರುವ ಆರೋಪ ಪಟ್ಟಿ ಕೊಡಬೇಕು. ಇದ್ಯಾವುದನ್ನೂ ಮಾಡದೆ ಧರ್ಮದರ್ಶಿ ಸಮಿತಿ ಸಭೆ ನಡೆಸಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ಇಂದು ಬೆಳಿಗ್ಗೆಯಿಂದಲೇ ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿತ್ತು. ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭಕ್ತರನ್ನು ಮಠದ ಗೇಟ್ ಬಳಿಯೇ ತಡೆಯಲಾಗಿತ್ತು. ಅಲ್ಲದೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಕೂಡ ಪಡೆದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ವಿರಾಟ್ ಕೊಹ್ಲಿಯ ಗಾಯದ ಬಗ್ಗೆ ಬಿಗ್ ಅಪ್​ಡೇಟ್

Source link

ಹಿಮಾಚಲ ಪ್ರದೇಶ: ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು

ಶಿಮ್ಲಾ, ಏಪ್ರಿಲ್ 13: ಹಿಮಾಚಲ ಪ್ರದೇಶ ಇಂದು(ಏಪ್ರಿಲ್ 13) ನಡೆದ ಒಂದು ಪೈಶಾಚಿಕ ಕೃತ್ಯ ಜನತೆಯನ್ನು ಆತಂಕಕ್ಕೆ ದೂಡಿದೆ. ಕಾಲೇಜಿಗೆ ತೆರಳಿ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ 19 ವರ್ಷದ ಯುವತಿಯನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಶಿರಚ್ಛೇದ ಮಾಡಿ ಹತ್ಯೆ(Murder) ಮಾಡಿರುವ ಘಟನೆ ಮಂಡಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಸುಮಾರು 9.15ರ ಸಮಯ. ಮಂಡಿ ಜಿಲ್ಲೆಯ ಸರ್ಕಾಘಾಟ್ ಪ್ರದೇಶದಲ್ಲಿ ಜನಜಂಗುಳಿ ನಡುವೆಯೇ ಈ ಘೋರ ದುರಂತ ಸಂಭವಿಸಿದೆ. ಎಂದಿನಂತೆ ಕಾಲೇಜಿಗೆಂದು ಮನೆಯಿಂದ ಹೊರಟಿದ್ದ ವಿದ್ಯಾರ್ಥಿನಿಯ ಮೇಲೆ ಅಪರಿಚಿತರು ರಸ್ತೆಯ ಮಧ್ಯದಲ್ಲೇ ಏಕಾಏಕಿ ದಾಳಿ ನಡೆಸಿದ್ದಾರೆ. ಕ್ರೌರ್ಯದ ಮಿತಿಯನ್ನೇ ಮೀರಿದ ಹಂತಕರು, ಆಕೆಯ ತಲೆಯನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ.

ರಸ್ತೆಯ ತುಂಬೆಲ್ಲಾ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯ ದೇಹವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಕಂಡು ದಬಾಬಾಜಿ ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಮಂಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ವಿನೋದ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಬೈಕ್‌ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಮತ್ತಷ್ಟು ಓದಿ: ಪ್ಯಾಸೆಂಜರ್ ವಿಚಾರಕ್ಕೆ ಗಲಾಟೆ: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನ ಭೀಕರ ಹತ್ಯೆ

ಘಟನೆಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹಂತಕರನ್ನು ಪತ್ತೆಹಚ್ಚಲು ಈಗಾಗಲೇ ಹಲವು ತಂಡಗಳನ್ನು ರಚಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಎಂದು ಎಸ್‌ಪಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ನಡುರಸ್ತೆಯಲ್ಲಿ, ಅದೂ ಹಗಲು ಹೊತ್ತಿನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಇಷ್ಟು ಭೀಕರವಾಗಿ ಹತ್ಯೆ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶವನ್ನು ಮೂಡಿಸಿದೆ. ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯೇ ಅಥವಾ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದ್ದೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಸ್ತುತ, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಸರ್ಕಾಘಾಟ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನರು ಭೀತಿಯಲ್ಲಿ ದಿನ ದೂಡುವಂತಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ರಾಜಸ್ಥಾನ್ ರಾಯಲ್ಸ್ (RR) ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖೆಗೆ ಗುರಿಯಾಗಿದ್ದಾರೆ. ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಈ ವಿವಾದಕ್ಕೆ ಕಾರಣವಾಗಿದೆ.

ವಿವಾದದ ಹಿನ್ನೆಲೆ ಏನು?

ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಡಗೌಟ್‌ನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲಿ ಕುಳಿತಿದ್ದ ರೋಮಿ ಭಿಂದರ್ ಅವರು ಮೊಬೈಲ್ ಫೋನ್ ಬಳಸುತ್ತಿರುವುದು ಟೆಲಿವಿಷನ್ ಪರದೆಯ ಮೇಲೆ ಸ್ಪಷ್ಟವಾಗಿ ಗೋಚರಿಸಿತ್ತು.

ಐಪಿಎಲ್ ನಿಯಮಗಳ ಪ್ರಕಾರ, ‘ಪ್ಲೇಯರ್ಸ್ ಅಂಡ್ ಮ್ಯಾಚ್ ಆಫೀಶಿಯಲ್ಸ್ ಏರಿಯಾ’ (PMOA) ಅಡಿಯಲ್ಲಿ ಡಗೌಟ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಬಿಸಿಸಿಐ ಕ್ರಮವೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವೀಡಿಯೊ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖಾ ವರದಿಯ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯಾವ ಕ್ರಮ ಕೈಗೊಳ್ಳಬಹುದು?

  • ಪಂದ್ಯದ ನಿಷೇಧ: ಮುಂದಿನ ಕೆಲವು ಪಂದ್ಯಗಳಿಗೆ ಡಗೌಟ್‌ಗೆ ಪ್ರವೇಶ ನಿಷೇಧಿಸಬಹುದು.
  • ಭಾರೀ ದಂಡ: ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆಯಿದೆ.
  • ಎಚ್ಚರಿಕೆ: ಮೊದಲ ಬಾರಿಯ ತಪ್ಪೆಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಬಹುದು.

ವೈದ್ಯಕೀಯ ಕಾರಣ ಮುಂದಿಟ್ಟ ರೋಮಿ:

ಇನ್ನೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಮೊಬೈಲ್ ಬಳಸಿದ್ದು ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಅವರು ಶ್ವಾಸಕೋಶದ ಸಮಸ್ಯೆಯಿಂದ (Collapsed lungs) ಚೇತರಿಸಿಕೊಂಡಿದ್ದು, ಅವರಿಗೆ ಮೆಟ್ಟಿಲು ಹತ್ತುವುದು ಅಥವಾ ಹೆಚ್ಚು ಓಡಾಟ ಮಾಡುವುದು ಕಷ್ಟಕರವಾಗಿದೆ.

ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್ ನಡುವೆ ಪದೇ ಪದೇ ಓಡಾಡಲು ಸಾಧ್ಯವಾಗದ ಕಾರಣ ಅವರು ತಮ್ಮ ಬಳಿಯೇ ಫೋನ್ ಇಟ್ಟುಕೊಂಡಿದ್ದರು ಎಂಬ ವಾದ ಕೇಳಿಬರುತ್ತಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಸದ್ಯ ರಾಜಸ್ಥಾನ್ ರಾಯಲ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ಈ ಪಂದ್ಯದಲ್ಲಿ ರೋಮಿ ಭಿಂದರ್ ತಂಡದೊಂದಿಗೆ ಇರುತ್ತಾರೆಯೇ ಅಥವಾ ಇಲ್ಲವೇ ಎಂಬುದು ಎಸಿಯು ವರದಿಯ ಮೇಲೆ ಅವಲಂಬಿತವಾಗಿದೆ. ಕ್ರಿಕೆಟ್‌ನ ಪಾವಿತ್ರ್ಯತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ಖಡಕ್ ಎಚ್ಚರಿಕೆ ನೀಡುವ ಸಾಧ್ಯತೆ ಹೆಚ್ಚಿದೆ.

Source link

ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ 53 ಎಕರೆ ಭೂಮಿ ಪರಭಾರೆ: ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶ

ಬೆಂಗಳೂರು, ಏಪ್ರಿಲ್ 13: ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ, ಇಲ್ಲದ ಕಂಪನಿಯೊಂದಕ್ಕೆ ಸುಮಾರು 53 ಎಕರೆ 26 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ (Karnataka High Court) ‘ಸಂವಿಧಾನಕ್ಕೆ ಮಾಡಿದ ವಂಚನೆ’ ಎಂದು ಕರೆದಿದೆ. ಈ ಬಹುಕೋಟಿ ಹಗರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಆದೇಶಿಸಿರುವ ನ್ಯಾಯಾಲಯ, ಸಂಬಂಧಪಟ್ಟ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಏನಿದು ಹಗರಣ?

ಹೆಬ್ಬಾಳದ ಅಮಾನಿಕೆರೆ ಬಳಿಯ ಅತೀ ಹೆಚ್ಚು ಮೌಲ್ಯದ ಜಮೀನನ್ನು 2004ರಲ್ಲಿ ರೈತರಿಂದ ಎಕರೆಗೆ ಕೇವಲ 15 ಲಕ್ಷ ರೂಪಾಯಿಯಂತೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ‘ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್’ ಎಂಬ ಸಂಸ್ಥೆಗೆ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಸಂಸ್ಥೆಯು ಜಮೀನಿಗಾಗಿ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದ್ದೇ 2011ರಲ್ಲಿ! ಅಂದರೆ, ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಭೂಮಿ ನೀಡಲು ಅಂದಿನ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ನ್ಯಾಯಾಲಯದ ಗಂಭೀರ ಅವಲೋಕನ

ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠವು ಈ ಪ್ರಕರಣದಲ್ಲಿ ಸರ್ಕಾರದ ಒಳಸಂಚನ್ನು ಬಯಲಿಗೆಳೆದಿದೆ. ನ್ಯಾಯಾಲವು ಉಲ್ಲೇಖಿಸಿರುವ ಅಂಶಗಳು ಹೀಗಿವೆ;

  • ಅರ್ಜಿ ಸಲ್ಲಿಸಿದ 5 ದಿನದಲ್ಲೇ ಅನುಮೋದನೆ: ಸಂಸ್ಥೆ ಅರ್ಜಿ ಸಲ್ಲಿಸಿದ ಐದೇ ದಿನಗಳಲ್ಲಿ ಸಭೆ ನಡೆಸಿ ಭೂಸ್ವಾಧೀನಕ್ಕೆ ಶಿಫಾರಸು ಮಾಡಲಾಗಿತ್ತು.
  • ಕಡಿಮೆ ಬಂಡವಾಳ: ಕೇವಲ 1 ಲಕ್ಷ ರೂಪಾಯಿ ಷೇರ್ ಕ್ಯಾಪಿಟಲ್ ಹೊಂದಿರುವ, ಪ್ರಸ್ತುತ ಮೌಲ್ಯ ಮೈನಸ್ 8.60 ಲಕ್ಷ ರೂಪಾಯಿ ಇರುವ ಸಂಸ್ಥೆಗೆ ಸಾವಿರಾರು ಕೋಟಿ ಮೌಲ್ಯದ ಭೂಮಿ ನೀಡಲಾಗಿದೆ.
  • ಉದ್ದೇಶ ಬದಲಾವಣೆ: ಪ್ರವಾಸೋದ್ಯಮ ಕೇಂದ್ರದ ಹೆಸರಲ್ಲಿ ಭೂಮಿ ಪಡೆದು, ನಂತರ ಅದನ್ನು ಕಮರ್ಷಿಯಲ್ ಟೌನ್‌ಶಿಪ್‌ಗಾಗಿ ಬಳಸಲು 2023ರಲ್ಲಿ ಸರ್ಕಾರ ನಿರ್ಧರಿಸಿತ್ತು.

‘ಈ ಭೂಸ್ವಾಧೀನ ಪ್ರಕ್ರಿಯೆಯೇ ಸಾರ್ವಜನಿಕ ಉದ್ದೇಶದ್ದಾಗಿರಲಿಲ್ಲ. ಸರ್ಕಾರದ ಅಧಿಕಾರಿಗಳೇ ಖಾಸಗಿಯವರೊಂದಿಗೆ ಒಳಸಂಚು ನಡೆಸಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಗಳಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲದ ಕಾರಣ ಸಿಬಿಐಗೆ ವಹಿಸಲಾಗುತ್ತಿದೆ’ ಎಂದು ಹೈಕೋರ್ಟ್ ಆದೇಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ತಂಡದಲ್ಲಿ ‘ಧುರಂಧರ’ರ ದಂಡೇ ಇದೆ: ಎದುರಾಳಿಗಳು ನಡುಗುತ್ತಿದ್ದಾರೆ!

IPL 2026: ಒಬ್ಬ ಕ್ರಿಕೆಟ್ ತಂಡದ ನಾಯಕನಿಗೆ ತನ್ನ ತಂಡ ಸತತವಾಗಿ 200ಕ್ಕೂ ಹೆಚ್ಚು ರನ್ ಗಳಿಸುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸಮಾಧಾನ ಮತ್ತೊಂದಿಲ್ಲ. ಪ್ರಸ್ತುತ ನನ್ನ ತಂಡದ ಬ್ಯಾಟಿಂಗ್ ಲೈನಪ್ ನೋಡಿದರೆ, ಕೇವಲ ಆಟಗಾರರಲ್ಲ, ಅಪ್ಪಟ ‘ಧುರಂಧರ’ರ ದಂಡೇ ಅಲ್ಲಿ ನಿಂತಿದೆ ಅನ್ನಿಸುತ್ತದೆ. ಹೀಗಂದಿರುವುದು ಮತ್ಯಾರೂ ಅಲ್ಲ, ರಾಯಲ್ ಚಾಲೆಂಜರ್ಸ್​ ಬೆಂಗಳೂರು  ತಂಡದ ನಾಯಕ ರಜತ್ ಪಾಟಿದಾರ್.

‘ಧುರಂಧರ’ರ ದಂಡು:

ಪ್ರತಿ ಪಂದ್ಯದಲ್ಲೂ 200 ರನ್ ದಾಟುವುದು ಸುಲಭದ ಮಾತಲ್ಲ. ಇದಕ್ಕೆ ಆರಂಭಿಕರಿಂದ ಹಿಡಿದು ಫಿನಿಶರ್‌ಗಳವರೆಗೆ ಎಲ್ಲರ ಕೊಡುಗೆಯೂ ಮುಖ್ಯ. ನಮ್ಮ ತಂಡದ ಬ್ಯಾಟರ್‌ಗಳು ಮೈದಾನಕ್ಕಿಳಿದರೆ ಸಾಕು, ಬೌಲರ್‌ಗಳ ಬೆವರಿಳಿಯುತ್ತಿದೆ. ಸಿಕ್ಸರ್-ಬೌಂಡರಿಗಳ ಸುರಿಮಳೆಯಾಗುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ರಜತ್ ಪಾಟಿದಾರ್ ಹೇಳಿದ್ದಾರೆ.

ನಾಯಕನಾಗಿ ಹೆಮ್ಮೆಯ ಕ್ಷಣ:

ತಂಡದಲ್ಲಿ ಇಷ್ಟೊಂದು ಮ್ಯಾಚ್-ವಿನ್ನರ್‌ಗಳು ಇದ್ದಾಗ ನಾಯಕನ ಕೆಲಸ ಸುಲಭವಾಗುತ್ತದೆ. ಯಾವುದೇ ಹಂತದಲ್ಲಿ ವಿಕೆಟ್ ಬಿದ್ದರೂ, ನಂತರ ಬರುವ ಆಟಗಾರ ಪಂದ್ಯವನ್ನು ಅಷ್ಟೇ ವೇಗವಾಗಿ ಮುಂದೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದಾನೆ.

ಈ ರೀತಿಯ ಬ್ಯಾಟಿಂಗ್ ಬಲ ಇರುವುದರಿಂದ, ಬೌಲರ್‌ಗಳ ಮೇಲೆ ಒತ್ತಡ ಕಡಿಮೆ ಇರುತ್ತದೆ ಮತ್ತು ನಾಯಕನಾಗಿ ನಾನು ಹೆಚ್ಚು ಆಕ್ರಮಣಕಾರಿ ತಂತ್ರಗಳನ್ನು ರೂಪಿಸಲು ಸಾಧ್ಯವಾಗುತ್ತಿದೆ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಸವಾಲು ಮತ್ತು ಜವಾಬ್ದಾರಿ:

ಆರ್​ಸಿಬಿ ತಂಡದಲ್ಲಿ ಇಷ್ಟೊಂದು ಪ್ರತಿಭಾವಂತ ಆಟಗಾರರಿದ್ದಾಗ ಎಲ್ಲರಿಗೂ ಸರಿಯಾದ ಅವಕಾಶ ನೀಡುವುದು ಕೂಡ ದೊಡ್ಡ ಸವಾಲು. ಬ್ಯಾಟಿಂಗ್ ಕ್ರಮಾಂಕವನ್ನು ಸಮತೋಲನದಲ್ಲಿಟ್ಟುಕೊಂಡು, ಈ ಫಾರ್ಮ್ ಅನ್ನು ಟೂರ್ನಿಯ ಕೊನೆಯವರೆಗೂ ಕಾಯ್ದುಕೊಳ್ಳುವುದು ಈಗಿನ ಮುಖ್ಯ ಗುರಿ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!

ಅದರಂತೆ ನಾವು ಮುಂಬೈ ಇಂಡಿಯನ್ಸ್ ವಿರುದ್ಧಅವರ ತವರಿನಲ್ಲೇ ಗೆದ್ದಿದ್ದೇವೆ. ಮುಂದಿನ ಪಂದ್ಯಗಳಲ್ಲೂ ಗೆಲ್ಲುವ ವಿಶ್ವಾಸವಿದೆ.  ಎದುರಾಳಿ ಯಾರೇ ಇರಲಿ, ನಮ್ಮ ಧುರಂಧರರು ಅಬ್ಬರಿಸಲು ಸಜ್ಜಾಗಿದ್ದಾರೆ. ಈ ರನ್ ಮಳೆ ಹೀಗೆಯೇ ಮುಂದುವರಿಯಲಿ ಎಂಬುದು ನನ್ನ ಆಶಯ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

 

Source link

ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್: ನಾಪತ್ತೆಯಾಗಿದ್ದ ಮಹಿಳೆಯಿಂದ ಸ್ಫೋಟಕ ಹೇಳಿಕೆ

ಬೆಂಗಳೂರು, ಏಪ್ರಿಲ್​​ 13: ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪ್ರಕರಣವು ಇದೀಗ ಮಹತ್ವದ ತಿರುವನ್ನು ಪಡೆದುಕೊಂಡಿದೆ. ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಮಹಿಳೆಯು ಇದೀಗ ಯು-ಟರ್ನ್ ಹೊಡೆದಿದ್ದಾರೆ. ವಿಡಿಯೋ ರಿಲೀಸ್ ಮಾಡಿರುವ ಅವರು, ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ, ತನ್ನ ಮತ್ತು ಸ್ವಾಮೀಜಿ ನಡುವೆ ಗುರು-ಭಕ್ತಿಯ ಸಂಬಂಧವಿದೆ ಎಂದು ವಿಡಿಯೊ ಮೂಲಕ ಸ್ಪಷ್ಟಪಡಿಸಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ದೂರು ದಾಖಲಿಸಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಲ್ಲದೆ ಏಪ್ರಿಲ್ 6ರಂದು ದೂರು ನೀಡಿರುವುದು ಯಾರು ಅಂತಾ ಗೊತ್ತಿಲ್ಲ. ಅದೊಂದು ಸುಳ್ಳು ದೂರು, ಆ ದೂರನ್ನು ಯಾರೂ ನಂಬಬೇಡಿ. ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನಗಳ ಬಳಿಕ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯೊಂದಿಗಿನ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ

ವಿಜಯಪುರ, ಏಪ್ರಿಲ್​​ 13: ಹದಿಹರೆಯದ ಪ್ರೇಮ ಪ್ರಕರಣಗಳು ಕೆಲವೊಮ್ಮೆ ಜೀವಕ್ಕೇ ಕಂಟಕವಾಗಿಬಿಡುತ್ತವೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಲಿಯಾದವರ ಸಂಖ್ಯೆ ದೊಡ್ಡದ್ದೇ ಇದೆ. ಆದರೆ ವಿಜಯಪುರದಲ್ಲಿ ಇದಕ್ಕೆ ತುಸು ಭಿನ್ನವೆಂಬಂತಹ ಪ್ರಕರಣವೊಂದು ನಡೆದಿದೆ. ತಾನು ಪ್ರೀತಿಸಿದ್ದ ಯುವತಿಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಗಿದ್ದಕ್ಕೆ ರೊಚ್ಚಿಗೆದ್ದ ಯುವಕ ಮಾಡಿದ ಕೆಲಸ, ಮದುವೆಯ ಕನಸು ಕಂಡಿದ್ದ ಯುವತಿಯ ಪ್ರಾಣವನ್ನೇ ತೆಗೆದಿದೆ.

ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ 22 ವರ್ಷದ ಯುವತಿ ಜಯಶ್ರೀ ಬಿರಾದಾರ್​​ಗೆ ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು, ಈ ಸಂಬಂಧ ನಿಶ್ಚಿತಾರ್ಥವನ್ನೂ ನಡೆಸಿದ್ದರು. ಆದರೆ ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ವಿವಾಹದ ವಿಷಯ ತಿಳಿದ ಆತ ವ್ಯತಿರಿಕ್ತವಾಗಿ ವರ್ತಿಸಿದ್ದಾನೆ. ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಶ್ರೀಶೈಲ್ ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್​​ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​​ ಮಾಡಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಸ್ವಾಮೀಜಿ ಬೆತ್ತಲೆ ವೀಡಿಯೋ ಕಾಲ್ ಕೇಸಿಗೆ ಸ್ಫೋಟಕ ಟ್ವಿಸ್ಟ್​; ಆರೋಪಿಸಿದ ಮಹಿಳೆಯೇ ನಾಪತ್ತೆ

ಪ್ರೇಮ ಪ್ರಕರಣ ಹೊರ ಬಂದ ಕಾರಣ ಅವಮಾನವಾಗಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದ ಬಾವಿಗೆ ಜಯಶ್ರೀ ಹಾರಿದ್ದಾಳೆ. ನಿನ್ನೆ ಸಾಯಂಕಾಲ ಘಟನೆ ನಡೆದಿದ್ದು, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆ ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಡಬಾರದ ಕೃತ್ಯ ಮಾಡಿರುವ ಪಾಗಲ್ ಪ್ರೇಮಿ ಶ್ರೀಶೈಲ್ ಬಡಾನೂರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಘಟನೆ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version