ಗೃಹಲಕ್ಷ್ಮಿ ಯೋಜನೆಗೆ ಮೇಜರ್ ಸರ್ಜರಿ: ಮಹತ್ವದ ಅಪ್ಡೇಟ್ ನೀಡಿದ ಸಿಎಂ ಡಿಕೆ ಶಿವಕುಮಾರ್

ನವದೆಹಲಿ, (ಜೂನ್ 10): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗ ಮೇಜರ್ ಸರ್ಜರಿಗೆ ಮುಂದಾಗಿದೆ. ಪ್ರಸ್ತುತ ಇಡೀ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷಕ್ಕೂ ಅಧಿಕ ಮಹಿಳಾ ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯೋಜನೆಯ ಅನುಷ್ಠಾನದಲ್ಲಿ ಕಂಡುಬಂದಿರುವ ಕೆಲವು ಗಂಭೀರ ಲೋಪದೋಷಗಳು ಹಾಗೂ ನಕಲಿ ಅರ್ಹತೆಗಳ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕಲು ಸರ್ಕಾರವು ಇನ್ಮುಂದೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ಕಠಿಣ ನಿರ್ಧಾರ ಕೈಗೊಂಡಿದೆ.

ಈ ಸಂಬಂಧ ದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಕೆಲವರು ಸಾವನ್ನಪ್ಪಿದ್ದು, ಆದರೂ ಗೃಹಲಕ್ಷ್ಮಿ ಹಣ ಯಾರಿಗೋ ಹೋಗುತ್ತಿದ್ದು, ಇದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಹೊಸದಾಗಿ ಐಡೆಂಟಿ ಆಗಬೇಕಿದೆ. ಮರುಪರಿಶೀಲನೆ ಮಾಡ್ತಾವಿದಿವಿ ಅಷ್ಟೇ. ಯಾರಿಗೆ ಸಿಗಬೇಕು ಅದು ಸಿಗಲಿ ಎಂದು ಸ್ಪಷ್ಟಪಡಿಸಿದರು.

Source link

ರಾಯಚೂರಲ್ಲಿ ಆರ್‌ಟಿಒ ಸಿಬ್ಬಂದಿ ಗೂಂಡಾಗಿರಿ: 500 ರೂ. ಲಂಚ ಪಡೆಯುತ್ತಿದ್ದ ವಿಡಿಯೋ ಮಾಡಿದ್ದಕ್ಕೆ ಚಾಲಕನಿಗೆ ಧರ್ಮದೇಟು – Kannada News

ರಾಯಚೂರು, ಜೂ.10: ಗಡಿ ಜಿಲ್ಲೆ ರಾಯಚೂರಿನಲ್ಲಿ ಆರ್‌ಟಿಒ (RTO) ಅಧಿಕಾರಿಗಳು ಹಾಗೂ ಸಿಬ್ಬಂದಿಯ ಲಂಚಾವತಾರ ಮತ್ತು ದಬ್ಬಾಳಿಕೆ ಮಿತಿಮೀರಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಆರ್‌ಟಿಒ ಸಿಬ್ಬಂದಿ ಬೇಕಾಬಿಟ್ಟಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ರಾತ್ರಿ ಭಾರಿ ಹೈಡ್ರಾಮಾವೊಂದು ನಡೆದಿದೆ. ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಹೆದ್ದಾರಿಯಲ್ಲಿ ಬರೋಬ್ಬರಿ 3 ಗಂಟೆಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಮತ್ತು ಸವಾರರು ಪರದಾಡುವಂತಾಗಿದೆ.

ನಿನ್ನೆ ಸಂಜೆ ಅಂದಾಜು 6.30 ರ ಸಮಯಕ್ಕೆ ಆಂಧ್ರಪ್ರದೇಶದಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್‌ಗೆ ತೆರಳುತ್ತಿದ್ದ ಲಾರಿಯೊಂದನ್ನು ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಬಳಿ ರೌಂಡ್ಸ್‌ನಲ್ಲಿದ್ದ ಆರ್‌ಟಿಒ ಸಿಬ್ಬಂದಿ ತಡೆದಿದ್ದಾರೆ. ಲಾರಿ ಚಾಲಕ ಮೋಸಮ್ ತಕ್ಷಣವೇ ಗಾಡಿಯ ಎಲ್ಲಾ ಅಧಿಕೃತ ದಾಖಲೆಗಳನ್ನು ತೋರಿಸಿದ್ದಾನೆ. ಆದರೆ, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಸಹ ಆರ್‌ಟಿಒ ಸಿಬ್ಬಂದಿ 500 ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ.

ಆರಂಭದಲ್ಲಿ ಚಾಲಕ ಮೋಸಮ್ ಲಂಚ ಕೊಡಲು ನಿರಾಕರಿಸಿದರೂ, ಸಿಬ್ಬಂದಿಯ ಕಿರುಕುಳ ತಾಳಲಾರದೆ ಕೊನೆಗೆ ಹಣ ಕೊಡಲು ಮುಂದಾಗಿದ್ದಾನೆ. ಈ ವೇಳೆ ಆರ್‌ಟಿಒ ಸಿಬ್ಬಂದಿ ಲಂಚ ಪಡೆಯುವುದನ್ನು ಚಾಲಕ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಸಿಬ್ಬಂದಿ, ಚಾಲಕನ ಟಿ-ಶರ್ಟ್ ಹಿಡಿದು ಮನಬಂದಂತೆ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೆ ಆತನ ಫೋನ್, ಪರ್ಸ್ ಹಾಗೂ ಲಾರಿಯ ಕೀಯನ್ನು ಬಲವಂತವಾಗಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಸ್ತುತ ಆಧುನಿಕ ಲಾರಿಗಳು ಸೆನ್ಸರ್ ವ್ಯವಸ್ಥೆಯನ್ನು ಹೊಂದಿರುವುದರಿಂದ, ಕೀ ಕಸಿದುಕೊಳ್ಳುತ್ತಿದ್ದಂತೆ ಏಕಾಏಕಿ ಸ್ಟೇರಿಂಗ್ ಲಾಕ್ ಆಗಿದೆ. ಇಳಿಜಾರಿನ ರಸ್ತೆಯಾಗಿದ್ದರಿಂದ ಲಾರಿ ನಿಯಂತ್ರಣ ತಪ್ಪಿ ಇಳಿಜಾರಿಗೆ ಚಲಿಸಿದೆ. ಈ ವೇಳೆ ಚಾಲಕ ಮೋಸಮ್ ತಕ್ಷಣವೇ ಸಮಯಪ್ರಜ್ಞೆ ಮೆರೆದು ಲಾರಿಯನ್ನು ಕಷ್ಟಪಟ್ಟು ನಿಯಂತ್ರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಲ್ಲದಿದ್ದರೆ ಲಾರಿ ಪಕ್ಕದಲ್ಲೇ ಇದ್ದ ಹಳಕ್ಕೆ ಉರುಳಿ ಬೀಳುವ ಸಾಧ್ಯತೆಯಿತ್ತು ಎಂದು ಚಾಲಕ ಅಳಲು ತೋಡಿಕೊಂಡಿದ್ದಾನೆ.

ಆರ್‌ಟಿಒ ಸಿಬ್ಬಂದಿ ಕೀ ಕಸಿದುಕೊಂಡು ಹೋದ ಕಾರಣ ಲಾರಿ ಹಳ್ಳದ ಕಿರಿದಾದ ಸೇತುವೆಯ ಮೇಲೆಯೇ ಅಡ್ಡಲಾಗಿ ಬಂದ್ ಆಗಿ ನಿಂತುಬಿಟ್ಟಿತ್ತು. ಪರಿಣಾಮವಾಗಿ ಲಿಂಗಸುಗೂರು ಮತ್ತು ರಾಯಚೂರು ಮಾರ್ಗವಾಗಿ ಸಂಚರಿಸುವ ನೂರಾರು ವಾಹನಗಳು ಸಂಪೂರ್ಣವಾಗಿ ಲಾಕ್ ಆದವು. ಬರೋಬ್ಬರಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ಬಸ್ ಪ್ರಯಾಣಿಕರು, ಮಹಿಳೆಯರು ಮತ್ತು ಮಕ್ಕಳು ತೀವ್ರ ಹೈರಾಣಾದರು.

ಇದನ್ನೂ ಓದಿ: ಮದುವೆ ಹೆಸರಲ್ಲಿ ಯುವತಿಗೆ ವಂಚನೆ ಕೇಸ್​​: ಆರೋಪಿ ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ

ಘಟನಾ ಸ್ಥಳಕ್ಕೆ ಸಿರವಾರ ಪೊಲೀಸರು ಧಾವಿಸಿದರೂ ಟ್ರಾಫಿಕ್ ನಿಯಂತ್ರಣ ಮಾಡುವುದು ಕೈಮೀರಿ ಹೋಗಿತ್ತು. ಈ ಸಂದರ್ಭದಲ್ಲಿ ಅಲ್ಲೇ ಸಿಲುಕಿಕೊಂಡಿದ್ದ ಸರ್ಕಾರಿ ಸಾರಿಗೆ ಬಸ್ ಚಾಲಕರು ಹಾಗೂ ಸ್ಥಳೀಯ ಲಾರಿ ಚಾಲಕರು ತಮ್ಮ ತಾಂತ್ರಿಕ ಜಾಣ್ಮೆ ಮೆರೆದರು. ಸ್ಟೇರಿಂಗ್ ಲಾಕ್ ಆಗಿದ್ದರೂ ಸಹ ಅದನ್ನೇನೋ ತಾಂತ್ರಿಕವಾಗಿ ಮ್ಯಾನೇಜ್ ಮಾಡಿ, ಲಾರಿಯನ್ನು ರಿಸ್ಟಾರ್ಟ್ ಮಾಡಿ ರಸ್ತೆಯ ಪಕ್ಕಕ್ಕೆ ತಳ್ಳುವಲ್ಲಿ ಯಶಸ್ವಿಯಾದರು. ಲಂಚದಾಸೆಗೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಆರ್‌ಟಿಒ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಯಚೂರು ಜನತೆ ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ – Kannada News

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ (Team India) ಯಾವುದೇ ಪ್ರಯೋಜನವಾಗಿರಲಿಲ್ಲ. ಏಕೆಂದರೆ ಈ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಭಾಗವಾಗಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ( WTC Points Table) 6ನೇ ಸ್ಥಾನದಲ್ಲಿಯೇ ಇದೆ. ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ಆಡಬೇಕೆಂದರೆ ಉಳಿದಿರುವ ಸರಣಿಗಳು ನಿರ್ಣಾಯಕವಾಗಿದೆ. ಅದರಂತೆ ಟೀಂ ಇಂಡಿಯಾ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಎಲ್ಲಿ, ಯಾವಾಗ, ಯಾವ ತಂಡದ ವಿರುದ್ಧ ಆಡಲಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಆಗಸ್ಟ್ 15 ರಿಂದ ಸರಣಿ ಆರಂಭ

ಕ್ರಿಕ್‌ಬಜ್ ವರದಿಯ ಪ್ರಕಾರ, ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಜೊತೆಗೆ ಟೀಂ ಇಂಡಿಯಾ ಟಿ20 ಸರಣಿಯನ್ನು ಆಡಲಿದೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ, ಉಭಯ ದೇಶಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15, 2026 ರಂದು ಪ್ರಾರಂಭವಾಗಲಿದೆ. ಆದಾಗ್ಯೂ ಬಿಸಿಸಿಐ ಆಗಲಿ ಶ್ರೀಲಂಕಾ ಕ್ರಿಕೆಟ್ ಆಗಲಿ ಈ ಸರಣಿಯ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲವಾದರೂ, ಸಂಪೂರ್ಣ ಸರಣಿಯ ವೇಳಾಪಟ್ಟಿ ಬಹುತೇಕ ಅಂತಿಮಗೊಂಡಿದೆ.

ಈ ಟೆಸ್ಟ್ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಭಾಗವಾಗಿರುವ ಕಾರಣ, ಫೈನಲ್​ಗೆ ಅರ್ಹತೆ ಪಡೆಯಲು ಈ ಸರಣಿಯು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ವರದಿಯ ಪ್ರಕಾರ, ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಗಾಲೆ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಿಂದ ಆಗಸ್ಟ್ 19 ರವರೆಗೆ ನಡೆಯುವ ನಿರೀಕ್ಷೆಯಿದೆ. ಮೊದಲ ಪಂದ್ಯದ ನಂತರ, ಎರಡೂ ತಂಡಗಳು ಕೊಲಂಬೊಗೆ ತೆರಳಲಿವೆ. ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಆಗಸ್ಟ್ 23 ರಿಂದ ಆಗಸ್ಟ್ 27 ರವರೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುವ ನಿರೀಕ್ಷೆಯಿದೆ.

9 ವರ್ಷಗಳ ನಂತರ ಸರಣಿ

ಒಂಬತ್ತು ವರ್ಷಗಳ ನಂತರ ಭಾರತ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಮೊದಲು 2017 ರಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಭಾರತ ತಂಡವು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಸಿಂಹಳೀಯರ ನಾಡಿಗೆ ಕಾಲಿಡುತ್ತಿರುವ ಯುವ ಪಡೆ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

ಟೆಸ್ಟ್ ಜೊತೆಗೆ ಟಿ20 ಸರಣಿ

ಮೇಲೆ ಹೇಳಿದಂತೆ ಈ ಟೆಸ್ಟ್ ಸರಣಿಯ ಜೊತೆಗೆ, ಎರಡೂ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಿವೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯ ಕುರಿತು ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ. ಹೀಗಾಗಿ ಟೆಸ್ಟ್ ಸರಣಿಯ ನಂತರ ಟಿ20 ಸರಣಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್ – Kannada News

ಕಾಲಿವುಡ್‌ನ ಯುವ ಸೆನ್ಸೇಷನ್ ಪ್ರದೀಪ್ ರಂಗನಾಥನ್ (Pradeep Ranganathan) ನಟನೆಯ ‘ಡ್ಯೂಡ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೆ ಬಿಡುಗಡೆಯಾಗಿದ್ದ ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ, ವಿಶ್ವಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ‘ಡ್ಯೂಡ್’ (Dude) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕೀರ್ತೀಶ್ವರನ್ ಮೊದಲ ಚಿತ್ರದಲ್ಲೇ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಈಗ ಅವರು ಈ ಸಿನಿಮಾದ ಸೀಕ್ವೆಲ್ (Dude 2) ಬಗ್ಗೆ ಒಂದು ಅಪ್​ಡೇಟ್ ನೀಡಿದ್ದಾರೆ.

ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡಿದ್ದ ಈ ಸಿನಿಮಾ, ಹೊಸ ತಲೆಮಾರಿನ GenZ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸಾಯಿ ಅಭ್ಯಂಕರ್ ಅವರ ಸೂಪರ್ ಹಿಟ್ ಸಂಗೀತ ಕೂಡ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಅಭಿಮಾನಿಗಳಿಗೆ ನಿರ್ದೇಶಕರು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಕೀರ್ತೀಶ್ವರನ್, ‘ಡ್ಯೂಡ್ 2’ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ನಾನು ಈಗಾಗಲೇ ಡ್ಯೂಡ್ 2 ಚಿತ್ರದ ಒಂದು ಸಣ್ಣ ಲೈನ್ ಅಥವಾ ಐಡಿಯಾವನ್ನು ಪ್ರದೀಪ್ ರಂಗನಾಥನ್ ಅವರಿಗೆ ವಿವರಿಸಿದ್ದೇನೆ. ಆ ಕಾನ್ಸೆಪ್ಟ್ ಪ್ರದೀಪ್ ಅವರಿಗೂ ತುಂಬಾ ಇಷ್ಟವಾಗಿದೆ. ಒಂದು ವೇಳೆ ಸೀಕ್ವೆಲ್ ಸೆಟ್ಟೇರಿದರೆ, ಮೊದಲ ಭಾಗದ ಪ್ರಸಿದ್ಧ ‘ಕಮ್ ಆನ್, ಡ್ಯೂಡ್’ ಸನ್ನಿವೇಶದಿಂದಲೇ ಕಥೆ ಮುಂದುವರಿಯಲಿದೆ’ ಎಂದು ಅವರು ಹೇಳಿದ್ದಾರೆ.

ಆದರೆ, ಚಿತ್ರದ ಸೀಕ್ವೆಲ್ ಬಗ್ಗೆ ಕೀರ್ತೀಶ್ವರನ್ ಒಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ಸದ್ಯಕ್ಕೆ ಇದು ಕೇವಲ ಒಂದು ಪ್ರಾಥಮಿಕ ಐಡಿಯಾ ಅಷ್ಟೇ. ಇದು ಇನ್ನೂ ಸಂಪೂರ್ಣವಾಗಿ ಫೈನಲ್ ಆಗಿಲ್ಲ. ಕಥೆ ಪೂರ್ತಿಯಾಗಿ ಸಿದ್ಧಗೊಂಡು, ಮೊದಲ ಭಾಗಕ್ಕಿಂತಲೂ ಅದ್ಭುತವಾಗಿ ಮೂಡಿಬರುತ್ತದೆ ಎಂಬ ಭರವಸೆ ಸಿಕ್ಕರೆ ಮಾತ್ರ ನಾವು ಡ್ಯೂಡ್ 2 ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದೇವೆ. ಸ್ಕ್ರಿಪ್ಟ್ ಆ ಹಂತಕ್ಕೆ ತಲುಪಿದ ನಂತರವೇ ಅಧಿಕೃತ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ 100 ಕೋಟಿ ರೂ. ಹ್ಯಾಟ್ರಿಕ್ ಸಾಧಿಸಿದ ಪ್ರದೀಪ್ ರಂಗನಾಥನ್

ಈ ಮೊದಲು ‘ಡ್ಯೂಡ್’ ಸಿನಿಮಾವನ್ನು ಫ್ರಾಂಚೈಸಿ ಅಥವಾ ಸೀಕ್ವೆಲ್ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಿರಲಿಲ್ಲ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಗಳಿಸಿದ ಅಭೂತಪೂರ್ವ ಯಶಸ್ಸು ಮತ್ತು ಪ್ರದೀಪ್ ರಂಗನಾಥನ್ ಪಾತ್ರಕ್ಕೆ ಸಿಕ್ಕ ಜನಪ್ರಿಯತೆ, ಈಗ ಸೀಕ್ವೆಲ್ ಮಾಡುವಂತೆ ಚಿತ್ರತಂಡವನ್ನು ಪ್ರೇರೇಪಿಸಿದೆ. ಸದ್ಯಕ್ಕೆ ಪ್ರದೀಪ್ ರಂಗನಾಥನ್ ಮತ್ತು ಕೀರ್ತೀಶ್ವರನ್ ಇಬ್ಬರೂ ತಮ್ಮ ಮುಂದಿನ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ನಿರ್ದೇಶಕರು ಈಗಾಗಲೇ ಸೀಕ್ವೆಲ್‌ಗೆ ಬೀಜ ಬಿತ್ತಿರುವುದರಿಂದ, ಮುಂದಿನ ದಿನಗಳಲ್ಲಿ ‘ಡ್ಯೂಡ್ 2’ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ದಟ್ಟವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ? – Kannada News

2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಜೂನ್ 12 ರಿಂದ ಆರಂಭವಾಗಲಿದೆ. ಇಂಗ್ಲೆಂಡ್​ನ ಆತಿಥ್ಯದಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಟಿ20 ವಿಶ್ವಕಪ್​ನ ಹೈವೋಲ್ಟೇಜ್ ಕದನ ಜೂನ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ. ಟೂರ್ನಿಯಲ್ಲಿ ಈ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಮೊದಲ ಮುಖಾಮುಖಿ ಇದಾಗಿದೆ. ಅಂದರೆ, ಭಾರತ ಮತ್ತು ಪಾಕಿಸ್ತಾನ ತಂಡಗಳು 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪರಸ್ಪರ ವಿರುದ್ಧವಾಗಿ ಆಡುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿವೆ.

ಮುಖಾಮುಖಿ ದಾಖಲೆ

ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಂದಿಗೂ ಟಿ20 ಸರಣಿಯನ್ನು ಆಡಿಲ್ಲ. ಆದರೆ ಈ ಎರಡೂ ತಂಡಗಳು ಐಸಿಸಿ ಟೂರ್ನಿಗಳು, ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್ ಅಥವಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿಯವರೆಗೆ, ಈ ಎರಡೂ ತಂಡಗಳು 16 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ.

ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ

ಇಲ್ಲಿಯವರೆಗೆ, ಟಿ20 ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳ ನಡುವೆ 8 ಪಂದ್ಯಗಳು ನಡೆದಿವೆ. ಈ ಪೈಕಿ 6 ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿದೆ. ಪಾಕಿಸ್ತಾನ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಈಗ, ಈ ಎರಡೂ ತಂಡಗಳು ಒಂಬತ್ತನೇ ಬಾರಿಗೆ ಮುಖಾಮುಖಿಯಾಗಲಿವೆ. ಕೊನೆಯ ಬಾರಿಗೆ ಎರಡೂ ತಂಡಗಳು 2024 ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳ ಪ್ರಯಾಣ

ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ವಿಭಿನ್ನ ಪ್ರದರ್ಶನಗಳನ್ನು ನೀಡಿವೆ. ಭಾರತ ಹಲವು ಬಾರಿ ನಾಕೌಟ್ ಹಂತವನ್ನು ತಲುಪಿದ್ದರೂ, ಪಾಕಿಸ್ತಾನ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಹೆಣಗಾಡಿದೆ. ಭಾರತ ತಂಡವು 2020 ರಲ್ಲಿ ಪ್ರಶಸ್ತಿಗೆ ಹತ್ತಿರವಾಗಿದ್ದು, ರನ್ನರ್ ಅಪ್ ಸ್ಥಾನ ಪಡೆದಿತ್ತು. ಕಳೆದ ವಿಶ್ವಕಪ್‌ನಲ್ಲಿ ಎರಡೂ ತಂಡಗಳ ಪ್ರಯಾಣ ಗುಂಪು ಹಂತದಲ್ಲಿಯೇ ಕೊನೆಗೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಪ್ರಧಾನಿ ಮೋದಿ-ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ಕೇಂದ್ರ ಸಚಿವರ ಜತೆಗೂ ಮಾತುಕತೆಗೆ ಪ್ಲಾನ್ – Kannada News

ದೆಹಲಿ, ಜೂ.10: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿರುವ ಡಿ.ಕೆ. ಶಿವಕುಮಾರ್ ಅವರು ನಾಳೆ (ಜೂ.11) ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದಾರೆ. ಪ್ರಧಾನಮಂತ್ರಿಯವರ ಭೇಟಿಗೆ ಅಧಿಕೃತ ಸಮಯ ಸಿಕ್ಕಿರುವುದನ್ನು ಖಚಿತಪಡಿಸಿರುವ ಸಿಎಂ, ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. “ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದರು. ಜೊತೆಗೆ ರಾಜ್ಯದ ಅಭಿವೃದ್ಧಿಗೆ ಅಗತ್ಯ ಸಹಕಾರ ಕೊಡುವುದಾಗಿಯೂ ಭರವಸೆ ನೀಡಿದ್ದರು. ನಾಳೆ ಅವರ ಭೇಟಿಗೆ ಸಮಯ ನಿಗದಿಯಾಗಿದ್ದು, ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ನೀರಾವರಿ ಹಾಗೂ ಆರ್ಥಿಕ ಯೋಜನೆಗಳ ಕುರಿತು ಮಾತುಕತೆ ನಡೆಸಲಾಗುವುದು” ಎಂದು ಸಿಎಂ ತಿಳಿಸಿದ್ದಾರೆ. ನಾಳೆ ದೆಹಲಿಯಲ್ಲಿ ನಡೆಯಲಿರುವ ‘ನೀತಿ ಆಯೋಗ’ದ (NITI Aayog) ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ದೆಹಲಿಯಲ್ಲೇ ಇರುವ ಕೆಲವು ಪ್ರಮುಖ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸಹ ಸಿಎಂ ಸಮಯ ಕೋರಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ವೈದ್ಯರು ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿ – Kannada News

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಅವುಗಳಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ (Constipation) ಸಮಸ್ಯೆಗಳು ಕೂಡ ಒಂದು. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಉಷ್ಣತೆ ಹೆಚ್ಚಿದ್ದಾಗ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಮಲ ವಿಸರ್ಜನೆ ಕಷ್ಟಕರವಾಗಬಹುದು. ಇದರ ಪರಿಣಾಮವಾಗಿ ದೇಹದಲ್ಲಿ ದೌರ್ಬಲ್ಯ, ಅಸ್ವಸ್ಥತೆ ಮತ್ತು ದಣಿವು ಕಾಣಿಸಿಕೊಳ್ಳಬಹುದು. ತಜ್ಞರ ಪ್ರಕಾರ, ದೇಹವು ಹೆಚ್ಚು ಬೆವರುವವರು ಸಾಕಷ್ಟು ನೀರು ಕುಡಿಯದಿದ್ದರೆ ದೇಹವು ತನ್ನಲ್ಲಿರುವ ನೀರನ್ನೇ ಹೀರಿಕೊಳ್ಳುತ್ತದೆ. ಇದರಿಂದ ಮಲ ಗಟ್ಟಿಯಾಗುತ್ತದೆ ಮತ್ತು ಮಲ ವಿಸರ್ಜನೆ ವೇಳೆ ತೊಂದರೆ ಉಂಟಾಗುತ್ತದೆ. ಹಾಗಾದರೆ ಮಲಬದ್ಧತೆಯ ಲಕ್ಷಣಗಳು ಹೇಗಿರುತ್ತವೆ, ಈ ಸಮಸ್ಯೆ ತಡೆಗಟ್ಟಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಲಬದ್ಧತೆಯ ಸಾಮಾನ್ಯ ಲಕ್ಷಣಗಳು:

  • ವಾರದಲ್ಲಿ ಮೂರು ಬಾರಿಗಿಂತ ಕಡಿಮೆ ಮಲ ವಿಸರ್ಜನೆ ಆಗುವುದು
  • ಮಲ ಗಟ್ಟಿಯಾಗಿ ಮತ್ತು ಒಣಗಿದಂತೆ ಕಾಣಿಸುವುದು
  • ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆ
  • ಮಲ ವಿಸರ್ಜನೆ ಸಮಯದಲ್ಲಿ ಹೆಚ್ಚು ಒತ್ತಡ ಹಾಕಬೇಕಾಗುವುದು
  • ಹೊಟ್ಟೆ ಸಂಪೂರ್ಣ ಖಾಲಿಯಾಗಿಲ್ಲ ಎಂಬ ಭಾವನೆ
  • ಆಸಿಡಿಟಿ, ಅಲಸ್ಯ ಮತ್ತು ಹಸಿವು ಕಡಿಮೆಯಾಗುವುದು

ಮಲಬದ್ಧತೆ ಹೆಚ್ಚಾಗಲು ಕಾರಣಗಳೇನು?

ನೀರಿನ ಕೊರತೆ: ಸಾಕಷ್ಟು ನೀರು ಕುಡಿಯದಿದ್ದರೆ ದೇಹದಲ್ಲಿ ಡೀಹೈಡ್ರೇಶನ್ ಉಂಟಾಗುತ್ತದೆ. ಇದು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ.

ಫೈಬರ್ ಆಹಾರದ ಕೊರತೆ: ಹಣ್ಣು, ತರಕಾರಿ ಮತ್ತು ಪೌಷ್ಟಿಕ ಆಹಾರ ಕಡಿಮೆ ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗಬಹುದು.

ಜಂಕ್ ಫುಡ್ ಸೇವನೆ: ಹೆಚ್ಚು ಎಣ್ಣೆ, ಮಸಾಲೆ ಮತ್ತು ಪ್ರಾಸೆಸ್ಡ್ ಆಹಾರ ಸೇವಿಸುವುದರಿಂದ ಹೊಟ್ಟೆ ಸಮಸ್ಯೆಗಳು ಹೆಚ್ಚಾಗಬಹುದು.

ವ್ಯಾಯಾಮದ ಕೊರತೆ: ತೀವ್ರ ಬಿಸಿಲಿನ ಕಾರಣದಿಂದ ಅನೇಕರು ವ್ಯಾಯಾಮ ಅಥವಾ ನಡೆಯುವ ಅಭ್ಯಾಸವನ್ನು ಕಡಿಮೆ ಮಾಡುತ್ತಾರೆ. ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಂಡುಬರುವ ಮಲಬದ್ಧತೆಗೆ ಇಲ್ಲಿದೆ ಪರಿಹಾರ

ಮಲಬದ್ಧತೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು?

  • ಪ್ರತಿದಿನ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಿರಿ
  • ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಹಣ್ಣು, ಮಜ್ಜಿಗೆ ಮುಂತಾದ ನೀರಿನ ಅಂಶ ಹೆಚ್ಚಿರುವ ಆಹಾರ ಸೇವಿಸಿ
  • ಹಸಿರು ತರಕಾರಿ, ಧಾನ್ಯ ಮತ್ತು ಫೈಬರ್ ಅಧಿಕವಾಗಿರುವ ಆಹಾರವನ್ನು ಡೈಟ್‌ನಲ್ಲಿ ಸೇರಿಸಿ
  • ಜಂಕ್ ಫುಡ್, ಹೆಚ್ಚು ಕಾಫಿ ಮತ್ತು ಟೀ ಸೇವನೆಯನ್ನು ಕಡಿಮೆ ಮಾಡಿ
  • ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
  • ನಿಯಮಿತ ವ್ಯಾಯಾಮ ಮತ್ತು ಚೆನ್ನಾಗಿ ನಿದ್ರೆ ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆಗೆ ವಿಶೇಷ ಪೂಜೆ, ಉರುಳು ಸೇವೆ – Kannada News

ರಾಯಚೂರು, ಜೂನ್ 10): ಡಿಕೆ ಶಿವಕುಮಾರ್ ಸರ್ಕಾರದ ಸಂಪುಟ ವಿಸ್ತರಣೆ ಆಗಬೇಕಿದ್ದು, ಬಾಕಿ ಇರುವ 20 ಸಚಿವ ಸ್ಥಾನಗಳಿಗೆ ಬರೋಬ್ಬರಿ 40 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ. ಕೆಲವರು ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಅವರ ಬೆಂಬಲಿಗರು ಕ್ಷೇತ್ರದಲ್ಲಿ ಪ್ರತಿಭಟನೆಗಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದ ಹಿರಿಯ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಇನ್ನು  ಹಂಪನಗೌಡ ಬಾದರ್ಲಿಗೆ ಮತ್ರಿ ಸ್ಥಾನ ಕರುಣಿಸಲಿ ಎಂದು ಅವರ ಅಭಿಮಾನಿಗಳು, ಗಾಳಿ ದುರ್ಗಮ್ಮ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದ್ದು, ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆ ಗಾಳಿ ದುರ್ಗಮ್ಮಗೆ 101 ತೆಂಗಿನಕಾಯಿ ಒಡೆದ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಇನ್ನು ಈ ಬಗ್ಗೆ ನಮ್ಮ ರಾಯಚೂರು ಜಿಲ್ಲಾ ಪ್ರತಿನಿಧಿ ಭೀಮೇಶ್ ನೀಡಿರೋ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Source link

ಇಷ್ಟು ದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ; ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ – Kannada News

ನವದೆಹಲಿ, ಜೂನ್ 10: ಅತಿ ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ ಪ್ರಧಾನಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ (PM Narendra Modi) ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಸಂದರ್ಭವನ್ನು ಆಚರಿಸಲು ದೆಹಲಿಯ ಭಾರತ್ ಮಂಟಪದಲ್ಲಿ ಎನ್​ಡಿಎ ನಾಯಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಎನ್​ಡಿಎ ಮೈತ್ರಿಕೂಟದ ಎಲ್ಲಾ ನಾಯಕರಲ್ಲದೆ, ಎನ್‌ಡಿಎ ಆಡಳಿತವಿರುವ ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಕೂಡ ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮುಂದೊಂದು ದಿನ ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. 12 ವರ್ಷ ಭಾರತಮಾತೆಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ದೇವರು ನನಗೆ ಕಲ್ಪಿಸಿಕೊಟ್ಟ ಅವಕಾಶ ಎಂದಿದ್ದಾರೆ.

ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆ ಈಗ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ಮತ್ತು ಸ್ಥಿರ ಸರ್ಕಾರದ ನಿರ್ಣಾಯಕ ನಿರ್ಧಾರಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು. ‘ವಿಕಸಿತ ಭಾರತ’ದ ಕನಸು ಯಾವುದೇ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ್ದಲ್ಲ, ಬದಲಿಗೆ ಅದು ದೇಶದ ಪ್ರತಿಯೊಬ್ಬ ನಾಗರಿಕನ ಸಂಕಲ್ಪವಾಗಿದೆ. ನನಗೆ ಜನರೇ ಜನಾರ್ದನ” ಎಂದರು.

“ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ದೇಶದ ಜನತೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರ ಪ್ರಬುದ್ಧತೆಯಿಂದಾಗಿಯೇ ನನಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: PM Modi Speech Live: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ; ಲೈವ್​​ ವಿಡಿಯೋ ಇಲ್ಲಿದೆ ನೋಡಿ

ಪ್ರಧಾನಿ ಮೋದಿ ಅವರು ಬುಧವಾರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದರು. 1952ರ ಸಾರ್ವತ್ರಿಕ ಚುನಾವಣೆಯ ನಂತರ ಚುನಾಯಿತ ಪ್ರಧಾನಿಯಾಗಿ ನೆಹರು ಅವರು ಹೊಂದಿದ್ದ 4,398 ದಿನಗಳ ನಿರಂತರ ಅಧಿಕಾರಾವಧಿಯ ದಾಖಲೆಯನ್ನು ಮೋದಿ ಹಿಂದಿಕ್ಕಿದ್ದಾರೆ. ನೆಹರು ಅವರ 1947ರಿಂದ 1952ರವರೆಗಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಅವಧಿಯಾಗಿತ್ತು. ಏಕೆಂದರೆ 1952ರವರೆಗೆ ದೇಶದಲ್ಲಿ ಚುನಾವಣೆಗಳು ನಡೆದಿರಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಒಟ್ಟು 14 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆಯಾದರೂ ಅವರ ಅಧಿಕಾರಾವಧಿಯು ನಿರಂತರವಾಗಿರಲಿಲ್ಲ. ಇದೀಗ ಸಚಿವ ಸಂಪುಟದಲ್ಲಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಚುನಾಯಿತರಾದ ಪ್ರಧಾನ ಮಂತ್ರಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “2014ರಲ್ಲಿ ಭಾರತವು ತನಗೆ ಅಗತ್ಯವಿದ್ದ ಬಹುಪಾಲು ಮೊಬೈಲ್ ಫೋನ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು, ಭಾರತವು ದೇಶೀಯವಾಗಿಯೇ 33 ಕೋಟಿಗೂ (330 ಮಿಲಿಯನ್) ಹೆಚ್ಚು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುತ್ತಿದೆ. 2014ರಲ್ಲಿ ದೇಶದ ಸೌರಶಕ್ತಿ ಸಾಮರ್ಥ್ಯವು ಕೇವಲ 2.5 ಗಿಗಾವ್ಯಾಟ್ ಆಗಿತ್ತು. ಇಂದು ಅದು 150 ಗಿಗಾವ್ಯಾಟ್‌ಗಳನ್ನು ಮೀರಿದೆ. ಎಥೆನಾಲ್ ಮಿಶ್ರಣವು 2014ರಲ್ಲಿ ಕೇವಲ 1.5%ರಷ್ಟಿತ್ತು, ಆದರೆ ಇಂದು ಅದು 20% ತಲುಪಿದೆ. 2014ರಲ್ಲಿ ದೇಶದಲ್ಲಿ ಒಂದೇ ಒಂದು ಸೆಮಿಕಂಡಕ್ಟರ್ ಘಟಕ ಇರಲಿಲ್ಲ. ಇಂದು ನಿರ್ಮಾಣ ಹಂತದಲ್ಲಿರುವ 10ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಘಟಕಗಳು ಭಾರತವನ್ನು ಆಧುನಿಕತೆಯತ್ತ ಮುನ್ನಡೆಸುತ್ತಿವೆ” ಎಂದು ವಿವರಿಸಿದರು.

“ನಾವು ದೇಶದ ಅಗತ್ಯತೆಗಳನ್ನೇ ನಮ್ಮ ನೀತಿಗಳು ಮತ್ತು ನಿರ್ಧಾರಗಳ ಅಡಿಪಾಯವನ್ನಾಗಿ ಮಾಡಿಕೊಂಡೆವು. ಹೊಸ ಉಪಕ್ರಮಗಳನ್ನು ಕೈಗೊಳ್ಳಲು ಹೊಸ ಆಲೋಚನಾ ಶೈಲಿಯನ್ನು ಅಳವಡಿಸಿಕೊಂಡೆವು. ಯುವಕರಿಗಾಗಿ ನಾವು ಪ್ರತ್ಯೇಕ ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದೆವು. ಸಹಕಾರ ವಲಯವನ್ನು ಬಲಪಡಿಸಲು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಲಾಯಿತು ಮತ್ತು ನಮ್ಮ ಮೀನುಗಾರರಿಗಾಗಿ ಮೀಸಲಾದ ಮೀನುಗಾರಿಕೆ ಸಚಿವಾಲಯವನ್ನು ಸ್ಥಾಪಿಸಲಾಯಿತು. ಅಭಿವೃದ್ಧಿಯ ಈ ಓಟದಲ್ಲಿ ಯಾರೂ ಹಿಂದೆ ಉಳಿಯಬಾರದು ಎಂಬುದು ನಮ್ಮ ಸ್ಪಷ್ಟ ಗುರಿಯಾಗಿತ್ತು. ನಾವು ದಿವ್ಯಾಂಗರಿಗಾಗಿ (ವಿಕಲಚೇತನರು) ಕಾನೂನುಗಳನ್ನು ರೂಪಿಸಿದೆವು. ಬುಡಕಟ್ಟು ಜನಾಂಗದವರಿಗಾಗಿ ‘ಜನ್ಮನ್’ನಂತಹ ಯೋಜನೆಗಳನ್ನು ಪ್ರಾರಂಭಿಸಿದೆವು” ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

ಇದನ್ನೂ ಓದಿ: ನೆಹರು ದಾಖಲೆ ಮುರಿದ ಪ್ರಧಾನಿ ಮೋದಿಗೆ ಸಂಪುಟ ಸಚಿವರಿಂದ ಎದ್ದು ನಿಂತು ಚಪ್ಪಾಳೆಯ ಗೌರವ

“ಇಂದು, ಈ ಸುದೀರ್ಘ ಪಯಣದ ಭಾಗವಾಗಿರುವ ಎಲ್ಲಾ ಸಹೋದ್ಯೋಗಿಗಳಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಎನ್‌ಡಿಎ ಕುಟುಂಬದ ಸದಸ್ಯರು ಅಭಿನಂದನಾ ನಿರ್ಣಯವನ್ನು ಮಂಡಿಸಿದ್ದಾರೆ. ಇದು ನಿಮ್ಮ ಪ್ರೀತಿ ಮತ್ತು ಉದಾರತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ನಾನು ಈ ಪಯಣವನ್ನು ನನ್ನ ವೈಯಕ್ತಿಕ ಸಾಧನೆ ಎಂದು ಪರಿಗಣಿಸುವುದಿಲ್ಲ. ಇದು ಪ್ರತಿಯೊಂದು ವಿಷಯದಲ್ಲೂ ನಮ್ಮ ಸಾಮೂಹಿಕ ಸಾಧನೆಯಾಗಿದೆ. ಎನ್‌ಡಿಎಯ ಪ್ರತಿಯೊಂದು ಪಾಲುದಾರ ಪಕ್ಷದ ಜಂಟಿ ಯಶಸ್ಸಾಗಿದೆ. ಆದ್ದರಿಂದ, ನಾನು ಈ ನಿರ್ಣಯವನ್ನು ನಿಮಗೆ ಮತ್ತು ಬಿಜೆಪಿ ಸೇರಿದಂತೆ ನಮ್ಮ ಎನ್‌ಡಿಎ ಕುಟುಂಬದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಅರ್ಪಿಸುತ್ತೇನೆ. ಭಾರತದ ಜನರ ಸಹಜ ಬುದ್ಧಿವಂತಿಕೆ ಯಾವಾಗಲೂ ಅಪಾರವಾದದ್ದು.” ಎಂದು ಮೋದಿ ಹೇಳಿದರು.

“ಭಾರತ ಮಾತೆಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವುದು, ಆಕೆಯ ಸೇವೆ ಮಾಡುವ ಸೌಭಾಗ್ಯ ಸಿಗುವುದು ದೇವರ ವಿಶೇಷ ಕೃಪೆಯಿಂದ ಮಾತ್ರ ಸಾಧ್ಯ. ಮತ್ತು ನನಗೆ, ಜನರೇ ದೇವರ ಸ್ವರೂಪ. ಅದಕ್ಕಾಗಿಯೇ ನಾನು ಈ ಸೇವೆಯನ್ನು ಯಾವಾಗಲೂ ಒಂದು ಆಧ್ಯಾತ್ಮಿಕ ಸಾಧನೆ ಅಥವಾ ತಪಸ್ಸು ಎಂದು ಭಾವಿಸಿದ್ದೇನೆ. ಈ ಆಧ್ಯಾತ್ಮಿಕ ಸಾಧನೆ ಎಂದಿಗೂ ಏಕಾಂಗಿಯಾಗಿರಲಿಲ್ಲ. ಇದೊಂದು ಸಾಮೂಹಿಕ ‘ಯಜ್ಞ’ವಾಗಿದ್ದು, ಇದರಲ್ಲಿ ನೀವೆಲ್ಲರೂ ಮತ್ತು ಇತರ ಅನೇಕ ಸಹೋದ್ಯೋಗಿಗಳು ಕರ್ತವ್ಯ ಪ್ರಜ್ಞೆಯಿಂದ ತಮ್ಮ ಸೇವೆಯನ್ನು ಕೊಡುಗೆಯಾಗಿ ನೀಡಿದ್ದೀರಿ” ಎಂದು ಪ್ರಧಾನಿ ಮೋದಿ ಭಾವುಕರಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ವರ್ಷದಲ್ಲಿ 13 ಸಿನಿಮಾ: ಹಳೆಯ ದಿನಗಳ ನೆನೆದ ಶ್ರುತಿ

ನಟಿ ಶ್ರುತಿ (Shruthi) ಕನ್ನಡ ಚಿತ್ರರಂಗದ ಹಿರಿಯ ನಟಿ. ಹಾಸ್ಯ, ಗಂಭೀರ, ಎಮೋಷನಲ್, ಗ್ರಾಮೀಣ, ಪೌರಾಣಿಕ, ಜನಪದ, ಕಲಾತ್ಮಕ ಸಿನಿಮಾ ಹೀಗೆ ಹಲವು ರೀತಿಯ ಸಿನಿಮಾಗಳು, ಪಾತ್ರಗಳಲ್ಲಿ ನಟಿಸಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಶ್ರುತಿ ಅವರ 175ನೇ ಸಿನಿಮಾ ‘ಮದರ್’ ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿದ್ದು, ನಟಿ ಶ್ರುತಿ ಅವರು ಮುಹೂರ್ತದ ಸಂದರ್ಭದಲ್ಲಿ ಮಾಧ್ಯಮದವರೊಟ್ಟಿಗೆ ಮಾತನಾಡುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version