ದಾವಣಗೆರೆ, ಏಪ್ರಿಲ್ 13: ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರುಪೀಠದಿಂದ ವಚನಾನಂದ ಸ್ವಾಮೀಜಿಯನ್ನ ಉಚ್ಚಾಟನೆ ಮಾಡಿದ್ದಕ್ಕೆ ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮದರ್ಶಿಗಳು ಹೋಗುತ್ತಿದ್ದ ವಾಹನಕ್ಕೆ ಚಪ್ಪಲಿ ತೋರಿಸಿ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಹನಗವಾಡಿಯ ಪಂಚಮಸಾಲಿ ಗುರುಪೀಠದ ಎದುರು ಭಾರೀ ಹೈಡ್ರಾಮಾವೇ ನಡೆದಿದೆ. ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದಶ್ರೀ, ನನ್ನ ಉಚ್ಚಾಟನೆ ಹಾಸ್ಯಾಸ್ಪದ. ಟ್ರಸ್ಟ್ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಆರೋಪಿಸಿದರು. ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಶ್ವಾಸಪೀಠ ಹಾಗೂ ನನ್ನ ಹೆಸರಿನಲ್ಲಿ ಒಂದು ಇಂಚು ಭೂಮಿ ಇಲ್ಲ. ಪೀಠಾಧ್ಯಕ್ಷರಾದ ಬಳಿಕ ಪೂರ್ವಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಕಿರಿಕಾರಿದರು. ಇನ್ನು ಕಾನೂನು ಹೋರಾಟದ ಬಗ್ಗೆ ಭಕ್ತರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಆಂಧ್ರಪ್ರದೇಶ, ಏ.13: ಹಲವು ಆಸೆಗಳು, ಆಗಷ್ಟೇ ಕೈ ತುಂಬಾ ಸಂಬಳ ಸಿಗುವ ಕೆಲಸಕ್ಕೆ ಸೇರಿದ್ದ ಮನೆ ನಂದಾದೀಪ, ಇದೀಗ ಆ ವಿಧಯಾಟಕ್ಕೆ ಬಲಿಯಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕ್ಷಿಪ್ರಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ 27 ವರ್ಷದ ಕ್ಷಿಪ್ರಾ ಪ್ರಾಣ ಬಿಟ್ಟಿದ್ದಾರೆ.
ಸುಳ್ಯದ ಕಂದಡ್ಕ ನಿವಾಸಿ ಶಶಿಕಲಾ ಭಟ್ ಅವರ ಏಕೈಕ ಪುತ್ರಿ ಕ್ಷಿಪ್ರಾ (27), ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದರು. ಶನಿವಾರ ರಾತ್ರಿ ಪ್ರಯಾಣಿಸುತ್ತಿದ್ದ ವೇಳೆ, ಚಾಲಕನಿಗೆ ಮಂಪರು ಆವರಿಸಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕ್ಷಿಪ್ರಾ ಅವರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಸಹೋದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷಿಪ್ರಾ ಅವರು ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ ಮುಗಿಸಿ, ನಿಟ್ಟೆ ಕಾಲೇಜಿನಲ್ಲಿ ಎಂಟೆಕ್ ಪದವಿ ಪಡೆದಿದ್ದರು. ತಂದೆಯನ್ನು ಮೊದಲೇ ಕಳೆದುಕೊಂಡಿದ್ದ ಇವರು, ತಾಯಿ ಶಶಿಕಲಾ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೆಯ ಏಕೈಕ ಆಧಾರ ಸ್ತಂಭವಾಗಿದ್ದ ಮಗಳ ನಿಧನದಿಂದ ಸುಳ್ಯದ ಕಂದಡ್ಕ ಪರಿಸರದಲ್ಲಿ ಶೋಕ ಮಡುಗಟ್ಟಿದೆ.
ನೆಲಮಂಗಲ, ಏಪ್ರಿಲ್ 13: ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ಆರ್ಟಿಒ ಕಚೇರಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಆರ್ಟಿಒ ಕಚೇರಿಯ ಪ್ರೊಬೇಷನರಿ ಇನ್ಸ್ಪೆಕ್ಟರ್ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅಧಿಕಾರಿಗಳು ಗೂಗಲ್ ಪೇ ಮೂಲಕ 2,000, 1,000 ರೂಪಾಯಿ ಹಣವನ್ನು ಲಂಚ ಪಡೆದಿದ್ದರು. ಇಂದು ಖಾಸಗಿ ವ್ಯಕ್ತಿ ರಮೇಶ್ 300 ರೂ. ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರು ಇವರನ್ನು ಖೆಡ್ಡಾಕೆ ಕೆಡವಿದ್ದಾರೆ. ಓವರ್ಲೋಡ್ ಟ್ರಕ್ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಹಾರಾಷ್ಟ್ರ ಮೂಲದ ಪ್ರಶಾಂತ್ ದತ್ತಾತ್ರೇಯ ಎಂಬುವವರು ಲೋಕಾಯುಕ್ತಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಇಂದಿನ ಈ ಕಾಲಘಟ್ಟದಲ್ಲಿ ಕೃಷಿಯಲ್ಲಿ ಕೀಟನಾಶಕಗಳನ್ನು (pesticides) ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಕೀಟನಾಶಕಗಳು ಬೆಳೆಗಳನ್ನು ರೋಗಗಳು ಮತ್ತು ಕೀಟಗಳಿಂದ ರಕ್ಷಿಸುತ್ತವೆ ನಿಜ. ಆದರೆ ಈ ರಾಸಾಯನಿಕಗಳ ಅವಶೇಷಗಳು ಹಣ್ಣು, ತರಕಾರಿಗಳ ಮೇಲ್ಮೈನಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ಹೀಗಿರುವಾಗ ಮಾರುಕಟ್ಟೆಯಿಂದ ತಂದಂತಹ ಹಣ್ಣು-ತರಕಾರಿಗಳನ್ನು ಬರೀ ನೀರಿನಿಂದ ತೊಳೆದರೆ ರಾಸಾಯನಿಕ ಶೇಷ ಹಾಗೆಯೇ ಉಳಿದು ಬಿಡುತ್ತದೆ. ಇದು ನಮ್ಮ ದೇಹವನ್ನು ತಲುಪಿ ಕ್ರಮೇಣ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಈ ರಾಸಾಯನಿಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹಾರ್ಮೋನು ಅಸಮತೋಲನ, ಅಲರ್ಜಿ ಮತ್ತು ಕ್ಯಾನ್ಸರ್ನಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಅದಕ್ಕಾಗಿ ಹಣ್ಣು ತರಕಾರಿಗಳನ್ನು ತೊಳೆಯಲು ನೀವು ಈ ಕ್ಲೀನಿಂಗ್ ಟಿಪ್ಸ್ ಫಾಲೋ ಮಾಡಿ.
ಹಣ್ಣು- ತರಕಾರಿಗಳಿಂದ ಕೀಟನಾಶಕಗಳನ್ನು ತೆಗೆದುಹಾಕುವ ಸರಳ ವಿಧಾನ:
ಹರಿಯುವ ನೀರಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ: ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಲು ದೊಡ್ಡ ಪಾತ್ರೆಯನ್ನು ಬಳಸಿ. ನೀರನ್ನು ಸೇರಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಎರಡರಿಂದ ಐದು ನಿಮಿಷಗಳ ಕಾಲ ಅದರಲ್ಲಿ ಬಿಡಿ. ತೊಳೆಯುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ನೆನೆಸುವುದರಿಂದ ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಂತರ ನಲ್ಲಿಯನ್ನು ಆನ್ ಮಾಡಿ ಹಣ್ಣು ತರಕಾರಿಗಳನ್ನು ಉಜ್ಜುವ ಮೂಲಕ ಚೆನ್ನಾಗಿ ಸ್ವಚ್ಛಗೊಳಿಸಿ. ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿ ಸಿಲುಕಿರುವ ಕೀಟನಾಶಕಗಳು, ಧೂಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಕನಿಷ್ಠ 2-3 ನಿಮಿಷಗಳ ಕಾಲ ಅವುಗಳನ್ನು ಚೆನ್ನಾಗಿ ಸ್ಕ್ರಬ್ ಮಾಡಬೇಕು.
ಉಪ್ಪು ನೀರಿನಲ್ಲಿ ನೆನೆಸಿ: ಕೀಟನಾಶಕಗಳನ್ನು ತೆಗೆದುಹಾಕಲು ಉಪ್ಪುನೀರು ತುಂಬಾ ಸಹಾಯಕವಾಗಿದೆ. ನೀರಿಗೆ 1-2 ಟೀ ಚಮಚ ಉಪ್ಪನ್ನು ಸೇರಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಅದರಲ್ಲಿ 10-15 ನಿಮಿಷಗಳ ಕಾಲ ನೆನೆಸಿಡಿ. ಉಪ್ಪಿನ ದ್ರಾವಣವು ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈಯಲ್ಲಿರುವ ರಾಸಾಯನಿಕಗಳನ್ನು ಸಡಿಲಗೊಳಿಸುತ್ತದೆ, ಇದರಿಂದ ಅವುಗಳನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ. ಈ ವಿಧಾನವು ಬದನೆಕಾಯಿ, ಬೆಂಡೆಕಾಯಿ ಮತ್ತು ಎಲೆಕೋಸು ಮುಂತಾದ ತರಕಾರಿಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ನೆನೆಸಿದ ನಂತರ, ಅವುಗಳನ್ನು ಮತ್ತೆ ಶುದ್ಧ ನೀರಿನಿಂದ ತೊಳೆಯಬೇಕು.
ಅಡಿಗೆ ಸೋಡಾ ಬಳಸಿ: ಅರ್ಧ ಟೀಚಮಚ ಅಡಿಗೆ ಸೋಡಾವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು 10-15 ನಿಮಿಷಗಳ ಕಾಲ ನೆನೆಸಿಡಿ. ಅಡಿಗೆ ಸೋಡಾ ಹಣ್ಣು, ತರಕಾರಿಗಳ ಮೇಲಿನ ರಾಸಾಯನಿಕಗಳು ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಈ ವಿಧಾನವು ಸೇಬು, ಟೊಮೆಟೊ ಮತ್ತು ಕ್ಯಾಪ್ಸಿಕಂನಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಶುಚಿಗೊಳಿಸಲು ಉಪಯುಕ್ತವಾಗಿದೆ.
ವಿನೆಗರ್ನಿಂದ ಸ್ವಚ್ಛಗೊಳಿಸಿ: ವಿನೆಗರ್ ನೈಸರ್ಗಿಕ ಶುಚಿಗೊಳಿಸುವ ಏಜೆಂಟ್ ಆಗಿದ್ದು, ಅದು ಬ್ಯಾಕ್ಟೀರಿಯಾ ಮತ್ತು ಸ್ವಲ್ಪ ಮಟ್ಟಿಗೆ ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ 1-2 ಚಮಚ ವಿನೆಗರ್ ಸೇರಿಸಿ, ನಂತರ ಅದರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು 10 ನಿಮಿಷಗಳ ಕಾಲ ನೆನೆಸಿಡಿ. ಈ ವಿಧಾನವು ಟೊಮೆಟೊ ಅಥವಾ ಸೌತೆಕಾಯಿಯಂತಹ ತರಕಾರಿಗಳನ್ನು ಕ್ಲೀನ್ ಮಾಡಲು ಒಳ್ಳೆಯದು. ಆದ್ರೆ ಹೆಚ್ಚು ವಿನೆಗರ್ ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ರುಚಿ ಮತ್ತು ವಾಸನೆಯ ಮೇಲೆ ಪರಿಣಾಮ ಬೀರುತ್ತದೆ.
ಉಗುರು ಬೆಚ್ಚಗಿನ ನೀರು: ತರಕಾರಿಗಳು ಮತ್ತು ಹಣ್ಣುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದಕ್ಕೆ ಬೇಕಾದರೆ ಉಪ್ಪನ್ನು ಕೂಡ ಸೇರಿಸಬಹುದು. ಇದು ಹಣ್ಣು ತರಕಾರಿಗಳ ಮೇಲ್ಮೈನಲ್ಲಿ ಅಂಟಿರುವ ರಾಸಾಯನಿಕ ಶೇಷಗಳನ್ನು ತೆಗೆದು ಹಾಕುತ್ತದೆ.
ಭಾರತೀಯ ಚಿತ್ರರಂಗದ ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಗಲಿಕೆಯಿಂದ ಅಭಿಮಾನಿಗಳು, ಆಪ್ತರು ಮತ್ತು ಕುಟುಂಬದವರು ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಈ ದುಃಖದ ಸಂದರ್ಭದಲ್ಲೂ ನಟಿ ಅಥಿಯಾ ಶೆಟ್ಟಿ (Athiya shetty) ಅವರು ಮಾಡಿದ ಒಂದು ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಆಶಾ ಭೋಸ್ಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭರದಲ್ಲಿ ಅಥಿಯಾ ಅವರು ಲತಾ ಮಂಗೇಶ್ಕರ್ (Lata Mangeshkar) ಫೋಟೋವನ್ನು ಹಂಚಿಕೊಂಡಿರುವುದೇ ಈ ವಿವಾದಕ್ಕೆ ಕಾರಣ ಆಗಿದೆ.
ಏಪ್ರಿಲ್ 12ರಂದು ಮುಂಬೈನಲ್ಲಿ ಆಶಾ ಭೋಸ್ಲೆ ನಿಧನರಾದ ನಂತರ, ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂತಾಪ ಸೂಚಕ ಸಂದೇಶವೊಂದನ್ನು ಹಾಕಿದ್ದರು. ಆದರೆ, ಆ ಸಂದೇಶದೊಂದಿಗೆ ಅವರು ಲಗತ್ತಿಸಿದ್ದು ಆಶಾ ಭೋಸ್ಲೆ ಅವರ ಫೋಟೋವನ್ನಲ್ಲ. ಬದಲಾಗಿ, 2022ರಲ್ಲಿ ನಿಧನರಾದ ಲತಾ ಮಂಗೇಶ್ಕರ್ ಅವರ ಫೋಟೋವನ್ನು!
ಈ ತಪ್ಪನ್ನು ತಕ್ಷಣವೇ ಗುರುತಿಸಿದ ನೆಟ್ಟಿಗರು ಅಥಿಯಾ ವಿರುದ್ಧ ಮುಗಿಬಿದ್ದಿದ್ದಾರೆ. ತಪ್ಪು ಅರಿವಾದ ತಕ್ಷಣ ಅಥಿಯಾ ಆ ಪೋಸ್ಟ್ ಡಿಲೀಟ್ ಮಾಡಿ, ನಂತರ ಆಶಾ ಭೋಸ್ಲೆ ಅವರ ಸರಿಯಾದ ಫೋಟೋವನ್ನು ಹಂಚಿಕೊಂಡರೂ ಸಹ, ಅದಾಗಲೇ ಅದರ ಸ್ಕ್ರೀನ್ಶಾಟ್ಗಳು ವೈರಲ್ ಆಗಿದ್ದವು. ಅಥಿಯಾ ಅವರ ಈ ನಡೆಯನ್ನು ‘ಬೇಜವಾಬ್ದಾರಿತನ’ ಎಂದು ಕರೆದಿರುವ ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ.
‘ಬುದ್ಧಿಯಿಲ್ಲದ ಬ್ಯೂಟಿ’ ಎಂದು ನೆಟ್ಟಿಗರೊಬ್ಬರು ಅಥಿಯಾ ಅವರನ್ನು ಟ್ರೋಲ್ ಮಾಡಿದ್ದಾರೆ. ‘ಅಥಿಯಾ ಶೆಟ್ಟಿ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಆಶಾ ಭೋಸ್ಲೆ ಅವರ ಬದಲಿಗೆ ಲತಾ ಜೀ ಫೋಟೋ ಹಾಕಿದ್ದಾರೆ. ನೆಪೋ ಕಿಡ್ಗಳಿಗೆ ಕಷ್ಟಪಡದೆ ಪ್ರಸಿದ್ಧಿ ಬೇಕು. ಅದಕ್ಕೇ ಇಂತಹ ಎಡವಟ್ಟುಗಳನ್ನು ಮಾಡುತ್ತಾರೆ’ ಎಂಬ ಖಾರದ ಕಮೆಂಟ್ ಕೂಡ ಬಂದಿದೆ.
‘ಇಂತಹ ಗಂಭೀರ ವಿಷಯಗಳಲ್ಲಿ ಇಷ್ಟು ಅಸಡ್ಡೆ ತೋರುವುದು ಸರಿಯಲ್ಲ. ಕನಿಷ್ಠ ಫೋಟೋ ಸರಿಯಾಗಿದೆಯೇ ಎಂದು ಪರಿಶೀಲಿಸುವ ವ್ಯವಧಾನವೂ ಇಲ್ಲದಿದ್ದರೆ ಸುಮ್ಮನಿರಬೇಕು’ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ತಮ್ಮದೇ ಚಿತ್ರರಂಗದ ಹಿರಿಯರ ಬಗ್ಗೆ ಇಷ್ಟೊಂದು ಅಜ್ಞಾನ ಸರಿಯಲ್ಲ’ ಎಂದು ಕೂಡ ಅಥಿಯಾ ಶೆಟ್ಟಿ ಅವರನ್ನು ಟೀಕಿಸಲಾಗಿದೆ.
ಸಂಬಳ ಇತ್ಯಾದಿ ನಿಯಮಿತ ಸಂಪಾದನೆ ಹೊಂದಿರುವ ಜನರಿಗೆ ಎಸ್ಐಪಿ (SIP- Systematic Investment Plan) ಮೂಲಕ ಹೂಡಿಕೆ ಮಾಡುವುದು ಬಹಳ ಪ್ರಯೋಜನಕಾರಿ. ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದಾಗ ದೀರ್ಘಾವಧಿಯಲ್ಲಿ ಅಚ್ಚರಿ ಎನಿಸುವಷ್ಟು ದೊಡ್ಡ ಮೊತ್ತವಾಗಿ ಬೆಳೆದಿರುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಗಳಿಂದ ಇದು ಸಾಧ್ಯ. ಎಸ್ಐಪಿಗಳು ಎಲ್ಲಾ ಅಗತ್ಯಗಳಿಗೂ ಹೊಂದಿಕೆಯಾಗುವ ಹೂಡಿಕೆ ಯೋಜನೆಗಳಾಗಿವೆ. ಎಸ್ಐಪಿ ಜೊತೆಗೆ ಸ್ಟೆಪ್ ತಂತ್ರ ಅನುಸರಿಸಿದರೆ ಪ್ರಯೋಜನ ಇನ್ನೂ ಹೆಚ್ಚಿನದ್ದಾಗಿರುತ್ತದೆ.
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ ಅವರು ಎಸ್ಐಪಿ ಹಾಗೂ ವಾರ್ಷಿಕ ಸ್ಟೆಪಪ್ ತಂತ್ರ ಮಾಡುವ ಮ್ಯಾಜಿಕ್ ಅನ್ನು ತೋರಿಸಿ, ಎಕ್ಸ್ ಪೋಸ್ಟ್ ಹಾಕಿದ್ದಾರೆ. ‘ಸಣ್ಣ ಮೊತ್ತದ ಎಸ್ಐಪಿ ಇದ್ದರೆ ವಾರ್ಷಿಕ ಶೇ. 10 ಸ್ಟೆಪಪ್ ಏಕೈಕ ಪರಿಹಾರ ಎನಿಸುತ್ತದೆ’ ಎಂದು ತಿಳಿಸಿರುವ ಕೌಶಿಕ್ ಅವರು ಒಂದು ಉದಾಹರಣೆ ಕೂಡ ಕೊಟ್ಟಿದ್ದಾರೆ.
25ರ ವಯಸ್ಸಿನಲ್ಲಿ ನೀವು 2,000 ರೂಗಳ ಮಾಸಿಕ ಎಸ್ಐಪಿ ಹೂಡಿಕೆ ಆರಂಭಿಸುತ್ತೀರಿ. ಹೀಗೆ 55 ವರ್ಷ ವಯಸ್ಸಿನವರೆಗೆ, ಪ್ರತೀ ತಿಂಗಳು ಹೂಡಿಕೆ ಮಾಡಿದಾಗ, ಮತ್ತು ಆ ಫಂಡ್ನಿಂದ ಶೇ. 12ರಷ್ಟು ರಿಟರ್ನ್ ಬಂದರೆ 2,000 ರೂಗಳ ಮಾಸಿಕ ಎಸ್ಐಪಿಯ ಮೌಲ್ಯ 70.6 ಲಕ್ಷ ರೂ ಆಗುತ್ತದೆ. ಶೇ. 6ರ ಹಣದುಬ್ಬರ ಪರಿಗಣಿಸಿ, 30 ವರ್ಷಗಳ ನಂತರ ಈ 70 ಲಕ್ಷ ರೂನ ನಿಜಮೌಲ್ಯ ಇವತ್ತಿನ 12.3 ಲಕ್ಷ ರೂಗೆ ಸಮವಾಗಿರುತ್ತದೆ ಎನ್ನುವುದು ಕೌಶಿಕ್ ಅವರ ವಾದ.
ಮ್ಯಾಜಿಕ್ನಂತೆ ಕೆಲಸ ಮಾಡುತ್ತೆ ಸ್ಟೆಪಪ್ ಎಸ್ಐಪಿ
ಎಸ್ಐಪಿ ಹೂಡಿಕೆಯಲ್ಲಿ ಸ್ಟೆಪಪ್ ವಿಧಾನ ಜನಪ್ರಿಯವಾಗಿದೆ. ಸ್ಟೆಪಪ್ ಎಂದರೆ ಹೂಡಿಕೆ ಹೆಚ್ಚಿಸುವುದು. ಸಂಬಳದವರಾಗಿದ್ದರೆ ವರ್ಷ ವರ್ಷ ವೇತನ ಏರಿಕೆ ಆಗುವ ಅವಕಾಶ ಇರುತ್ತದೆ. ಹೀಗೆ ಆದಾಯ ಹೆಚ್ಚಿದಾಗ ಹೂಡಿಕೆಯನ್ನೂ ಹೆಚ್ಚಿಸುವುದು ಉತ್ತಮ. ಅದೇ ಸ್ಟೆಪಪ್.
ನಿಮ್ಮ ಮಾಸಿಕ 2,000 ರೂ ಎಸ್ಐಪಿಗೆ ಪ್ರತೀ ವರ್ಷ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ ಹೋಗಿ. 30 ವರ್ಷದಲ್ಲಿ ನಿಮ್ಮದು 2.17 ಕೋಟಿ ರೂ ಕಾರ್ಪಸ್ ಆಗಿರುತ್ತದೆ. ಅದೂ ಕೇವಲ 2,000 ರೂ ಮಾಸಿಕ ಹೂಡಿಕೆಯಿಂದಲೇ.
ಒಂದು ವೇಳೆ ನೀವು ತಿಂಗಳಿಗೆ 10,000 ರೂ ಹೂಡಿಕೆ ಮಾಡಬಲ್ಲಿರಾದರೆ, ಮತ್ತು ಪ್ರತೀ ವರ್ಷ ಶೇ. 10ರಷ್ಟು ಹೂಡಿಕೆ ಹೆಚ್ಚಿಸಬಲ್ಲಿರಾದರೆ, 25 ವರ್ಷದಲ್ಲಿ ನಿಮ್ಮ ಹೂಡಿಕೆ ಹೆಚ್ಚೂಕಡಿಮೆ 4 ಕೋಟಿ ರೂ ಮೊತ್ತ ನಿಮ್ಮೊಂದಿಗೆ ಇರುತ್ತದೆ. ಇದೇ ರೀತಿ ಹೂಡಿಕೆಯನ್ನು ಇನ್ನೂ ಐದು ವರ್ಷ ಮುಂದುವರಿಸಿಬಿಟ್ಟರೆ ನಿಮ್ಮ ಕಾರ್ಪಸ್ ಬರೋಬ್ಬರಿ 8 ಕೋಟಿ ರೂ ಆಗುತ್ತದೆ. ಇವೆಲ್ಲಾ ಎಣಿಕೆಗಳು ನಿಜವಾಗಬೇಕಾದರೆ ನೀವು ಹೂಡಿಕೆ ಮಾಡಿರುವ ಫಂಡ್ ವಾರ್ಷಿಕ ಶೇ. 12ರ ವೇಗದಲ್ಲಿ ಗಳಿಕೆ ಮಾಡಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 13: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಸದ (Garbage)ಸಮಸ್ಯೆ ತಲೆದೂರಿದೆ. ಹೀಗಾಗಿ ಬಿದ್ದ ರಾಶಿ ರಾಶಿ ಕಸವನ್ನು ಜನರೇ ಎತ್ತಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ರಸ್ತೆ ಬಳಿ ಬಿದ್ದ ಕಸವನ್ನು ಜನರೇ ಜೆಸಿಬಿ ಮತ್ತು ಲಾರಿ ಕರೆಸಿ ಕಸ ಎತ್ತಿಸಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಈ ಮಧ್ಯೆ ನಗರದಲ್ಲಿನ ಕಸವನ್ನು ಸಂಗ್ರಹ ಮಾಡಿ, ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಬಿಎ ವಿರುದ್ಧ ಉದ್ಯಮಿ ಗರಂ
ಈ ಬಗ್ಗೆ ಎಕ್ಸ್ನಲ್ಲಿ ಕಸದ ವಿಡಿಯೋ ಮಾಡಿ ಪೋಸ್ಟ್ ಮಾಡಿ, ಟ್ವೀಟ್ ಮಾಡಿರುವ ಉದ್ಯಮಿ ಕಿರಣ್ ಮಜುಂದಾರ್ ಶಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಳಿಸಿಕೊಳ್ಳುತ್ತಿದೆಯಾ? ಇಲ್ಲಾ ನಟಿಸುತ್ತಿದೆಯಾ? ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕಸದ ಸಮಸ್ಯೆಗೆ ಕಿರಣ್ ಮಜುಂದಾರ್ ಕಿಡಿಕಾರಿದ್ದರು.
ತಾವೇ ಕಸ ಎತ್ತಿದ ಸ್ಥಳೀಯರು
ಇನ್ನು ಜಯನಗರ ವಿಧಾನಸಭಾ ಕ್ಷೇತ್ರದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 171 ಗುರಪ್ಪನಪಾಳ್ಯದಲ್ಲಿ ಎಲೆಡೆ ಕಸದ ದರ್ಶನವೇ ಆಗುತ್ತೆ. ವಾರ ಅಲ್ಲ, ತಿಂಗಳುಗಳೇ ಕಳೆದರೂ ಕಸ ಎತ್ತುವುದಕ್ಕೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡಿಲ್ಲ.
ಈ ವಾರ್ಡ್ ಅನ್ನ ಮರೆತೇ ಬಿಟ್ಟಿದ್ದಾರೆ. ಹೀಗಾಗಿ ದಿಕ್ಕು ತೋಚದ ಸ್ಥಳೀಯರು ತಾವೇ ನಿನ್ನೆ ಕಸ ಎತ್ತಿಸಿದ್ದಾರೆ. ಸ್ಥಳೀಯ ನಿವಾಸಿ ಹಾಗೂ ಸಮಾಜ ಸೇವಕ ಮಾಸ್ತಿ ಜಾಕಿರ್ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಕಸ ಎತ್ತುವ ಅಭಿಯಾನ ಮಾಡಿದ್ದಾರೆ.
ಅಧಿಕಾರಿಗಳಿಗೆ ಹಿಡಿಶಾಪ
ಅದೇ ರೀತಿ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ಸ್ಥಳೀಯ ನಿವಾಸಿಗಳು ರೊಚ್ಚಿಗೆದ್ದಿದ್ದರು. GBA ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಿದ್ದು ನಾರುತ್ತಿರುವ ಕಸದ ರಾಶಿಯಿಂದ ಎದುರಾಗಿರುವ ಅನಾನುಕೂಲಗಳನ್ನು ಹೇಳುತ್ತಾ ಹಿಡಿಶಾಪ ಹಾಕಿದರು. ಕಸವನ್ನಾದರೂ ಎತ್ತಿ, ಇಲ್ಲವಾದರೆ ಮತ್ತೆ ಕಸ ಬೀಳದಂತೆ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
ಬೆಂಗಳೂರು, (ಏಪ್ರಿಲ್ 13): ಕರ್ನಾಟಕದಲ್ಲಿ ಎರಡು ಉಪ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ (Cabinet Reshuffle) ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು 25 ಕ್ಕೂ ಅಧಿಕ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಆದ್ರೆ, ಶಾಸಕರ ದೆಹಲಿ ಯಾತ್ರೆಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಬೆಂಬಲಿಸಿದರೆ ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. ಅಲ್ಲದೇ ಖಡಕ್ ಎಚ್ಚರಿಕೆಯನ್ನೂ ಸಹ ನೀಡಿದ್ದು, ಇದು ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ
ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ಶಾಸಕರ ದೆಹಲಿ ಪ್ರವಾಸ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲಾ ಶಾಸಕರು ಮಾತನಾಡಬೇಕು. ಕೆಲವರು ಏನೇನು ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದೇನೆ. ಆದರೆ ಮೀಡಿಯಾ ನಿಮ್ಮ ಭವಿಷ್ಯ ಅಲ್ಲ, ಪಾರ್ಟಿ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು. ಇದು ಸಂಪುಟ ಪುನಾರಚನೆ ಕೇಳುವ ಟೈಂ ಅಲ್ಲ. ಈಗ ಮಂತ್ರಿ ಮಾಡೋ ಟೈಂ ಅಲ್ಲ, ಮೊದಲು ಚುನಾವಣೆ ಮಾಡೋಣ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವರಿಷ್ಠರನ್ನ ಭೇಟಿ ಮಾಡೋದು ತಪ್ಪೇನಿಲ್ಲ. ಆದ್ರೆ ಬೇಕಾಬಿಟ್ಟಿ ಏನೇನೋ ಕಮೆಂಟ್ ಮಾಡೋದಾದ್ರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಹತ್ತಿರ ಕೆಲವರು ಬಂದು ಹೇಳಿದ್ದರು. ಹೋಗಿ ಕೇಳೋದರಲ್ಲಿ ತಪ್ಪು ಇಲ್ಲ . ಫಸ್ಟ್ ಎಂಎಎಲ್ ಆದವರು, ಎರಡನೇ ಬಾರಿ ಆದವರು ಕೇಳೋದು ತಪ್ಪು ಏನೆಲ್ಲ. ಹಿಂದೆ ಎಲ್ಲಾ ನಡೆದಿದೆ. ಆದ್ರೆ ಇದು ಟೈಮ್ ಅಲ್ಲ, ಇದು ಟೈಮ್ ಅಲ್ಲ. ಈಗ ಎಲೆಕ್ಷನ್ ಇನ್ನೂ ನಡೆಯುತ್ತಿದೆ. ಹೀಗಾಗಿ ಮೊದಲು ಎಲೆಕ್ಷನ್ ಮಾಡೋಣ ಎಂದಿದ್ದಾರೆ.
ಶಾಸಕರ ದೆಹಲಿ ದಂಡಯಾತ್ರೆ ಬೆಂಬಲಿಸಿದ ಸಿಎಂ
ಹೌದು…ಅತ್ತ ಡಿಕೆ ಶಿವಕುಮಾರ್ ಸಚಿವ ಪುನಾರಚಣೆಗೆ ವಿರೋಧ ವ್ಯಕ್ತಪಡಿಸಿದ್ದು, ದೆಹಲಿಗೆ ತೆರಳಿದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದ್ರೆ, ಇದಕ್ಕೂ ಮೊದಲು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಸಂಬಂಧ ದೆಹಲಿಗೆ ತೆರಳಿದ ಶಾಸಕರ ಪರವಾಗಿ ಮಾತನಾಡಿದ್ದಾರೆ
ಶಾಸಕರ ನಡೆ ಬಗ್ಗೆ ನಿನ್ನೆ(ಏಪ್ರಿಲ್ 12) ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೆಹಲಿಗೆ ಹೋದ್ರೆ ತಪ್ಪೇನು, ಬೇಡ ಅಂದೋರು ಯಾರು? ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್ನಿಂದ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಬೆಂಬಲಿಸಿದ್ದಾರೆ.
ಮತ್ತೆ ಶುರುವಾಯ್ತಾ ಡಿಕೆಶಿ-ಸಿದ್ದರಾಮಯ್ಯ ಮುಸುಕಿನ ಗುದ್ದಾಟ?
ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಮಯ ಸಂದರ್ಭ ಬಂದಾಗೆಲ್ಲಾ ಡಿಕೆ ಶಿವಕುಮಾರ್ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಸಿಎಂ ಆಗಲೇಬೇಕೆಂದು ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಆಗಾಗ ದೆಹಲಿಗೆ ಹೋಗಿರು ಬರುತ್ತಲೇ ಇದ್ದಾರೆ. ಇನ್ನು ಅವರ ಬೆಂಬಲಿಗ ಶಾಸಕರು ಸಹ ನಾಯಕತ್ವ ಬದಲಾವಣೆ ಬಗ್ಗೆಯೂ ಧ್ವನಿ ಎತ್ತುತ್ತಲೇ ಇದ್ದಾರೆ. ಆದ್ರೆ, ಇದೀಗ ಸಂಪುಟ ಪುನಾರಚನೆಗೆ ಡಿಕೆ ಶಿವಕುಮಾರ್ ಆಗಲಿ ಅಥವಾ ಅವರ ಬಣದ ಶಾಸಕರಾಗಲಿ ಯಾವುದೇ ಬೆಂಬಲ ಕೊಡುತ್ತಿಲ್ಲ, ಬದಲಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜೂನಿಯರ್ ಎನ್ಟಿಆರ್ (JR NTR) ಅವರು ಇತ್ತೀಚೆಗೆ ಸುದ್ದಿ ಆಗಿದ್ದಾರೆ. ಅವರು ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಾಗಿ ಅವರು ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಈಗ ಜೂನಿಯರ್ ಎನ್ಟಿಆರ್ ಅವರು ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಕೊನೆಯದಾಗಿ ತೆಲುಗಿನಲ್ಲಿ ಕಾಣಿಸಿಕೊಂಡಿದ್ದು ‘ದೇವರ’ ಚಿತ್ರದಲ್ಲಿ. ಈ ಸಿನಿಮಾ ಮೋಡಿ ಮಾಡುವಲ್ಲಿ ವಿಫಲವಾಯಿತು. ಆ ಬಳಿಕ ಅವರು ‘ವಾರ್ 2’ ಸಿನಿಮಾ ಮಾಡಿದರು. ಈ ಚಿತ್ರ ಹೀನಾಯವಾಗಿ ಸೋಲು ಕಂಡಿತು. ಈಗ ಅವರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ನಿಂತಿದೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ತಂಡದವರು ಪ್ರತಿ ಹಂತದಲ್ಲೂ ಇದಕ್ಕೆ ಸ್ಪಷ್ಟನೆ ನೀಡುತ್ತಾ ಹೊಗುತ್ತಿದ್ದಾರೆ. ಈಗ ಜೂನಿಯರ್ ಎನ್ಟಿಆರ್ ಟ್ರೋಲ್ಗಳಿಗೆ ಉತ್ತರ ನೀಡಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಈಗ ಹಿಂಭಾಗದಿಂದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಫಿಟ್ ಆದ ಬಾಡಿ ಗಮನ ಸೆಳೆದಿದೆ. ‘ಇದನ್ನು ನಿರ್ಮಿಸಿದ್ದು, ಖರೀದಿ ಮಾಡಿದ್ದಲ್ಲ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಅವರು ಉತ್ತರ ಕೊಟ್ಟಿದ್ದಾರೆ.
‘ಡ್ರ್ಯಾಗನ್’ ಚಿತ್ರಕ್ಕಾಗಿ ಜೂ.ಎನ್ಟಿಆರ್ ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಕೆಲವರಿಗೆ ಈ ಬಗ್ಗೆ ಬೇಸರ ಇದೆ. ಅವರು ಸಿನಿಮಾ ಶೂಟ್ ಮುಗಿದ ಬಳಿಕ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ಬೆಳ್ತಂಗಡಿ, ಏ.13: ತಾಲೂಕಿನ ಕೊಡಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ಅತೀ ವೇಗವಾಗಿ ಬಂದ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪಾದಚಾರಿಗಳ ಮೇಲೆ ಉರುಳಿ ಬಿದ್ದಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಬೊಲೆರೋ ಜೀಪ್ನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಮಾರುತಿ ಓಮ್ನಿ ಕಾರು, ತೀಕ್ಷ್ಣವಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಉರುಳುತ್ತಾ ಬಂದ ಕಾರು ಹಠಾತ್ತಾಗಿ ಪಾದಚಾರಿಗಳ ಗುಂಪಿನ ಮೇಲೆ ಹರಿದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಕೂದಲೆಳೆ ಅಂತರದಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಮತ್ತೊಬ್ಬ ಮಹಿಳೆ ಪಲ್ಟಿಯಾದ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಕಾರಿನ ಅಡಿಯಲ್ಲಿ ಸಿಲುಕಿದ್ದ ಮಹಿಳೆಯನ್ನು ಹೊರತೆಗೆದು ತಕ್ಷಣವೇ ಆಟೋರಿಕ್ಷಾ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಇಡೀ ಘಟನೆಯ ಭಯಾನಕ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.