‘ವೈಚಾರಿಕ ನಕ್ಸಲರನ್ನು ಗುರುತಿಸಿ, ಬಹಿಷ್ಕರಿಸಬೇಕು’; ಪ್ರಧಾನಿ ಮೋದಿ ವಾಗ್ದಾಳಿ – Kannada News | ‘Dimagi Naxals Must Be Identified and Isolated’; PM Modis Warning in Independence Day speech

ನವದೆಹಲಿ, ಆಗಸ್ಟ್ 15: ದೇಶದಲ್ಲಿ ಸಶಸ್ತ್ರ ನಕ್ಸಲಿಸಂ ಅನ್ನು ಬಲಹೀನಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ, “ವೈಚಾರಿಕ ನಕ್ಸಲಿಸಂ” ಅಥವಾ “ದಿಮಾಗಿ ನಕ್ಸಲಿಸಂ” (Dimaagi Naxals) ಇನ್ನೂ ಹಿಂಸಾಚಾರ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುತ್ತಿದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ. ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ (Independence Day) ಸಮಾರಂಭದಲ್ಲಿ ಮಾತನಾಡಿದ ಮೋದಿ, ಭಾರತವನ್ನು ನಕ್ಸಲ್ ಹಿಂಸಾಚಾರದಿಂದ ಮುಕ್ತಗೊಳಿಸುವ ತಮ್ಮ ಸರ್ಕಾರದ ವಾಗ್ದಾನವನ್ನು ಈಡೇರಿಸಲಾಗಿದೆ ಎಂದು ಹೇಳಿದರು.

2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಮಯವನ್ನು ಸ್ಮರಿಸಿದ ಪ್ರಧಾನಿ ಮೋದಿ, “ನಕ್ಸಲಿಸಂ ಈ ಭೂಮಿಯನ್ನು ರಕ್ತಸಿಕ್ತಗೊಳಿಸಿತ್ತು. ಆಗ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿತ್ತು. ಒಮ್ಮೆ ನಕ್ಸಲೈಟ್ ಹಿಂಸಾಚಾರಕ್ಕೆ ಹೆಸರಾಗಿದ್ದ ಪ್ರದೇಶಗಳು ಈಗ ಅಭಿವೃದ್ಧಿ ಮತ್ತು ಹೆಚ್ಚಿನ ವಿಶ್ವಾಸಕ್ಕೆ ಸಾಕ್ಷಿಯಾಗುತ್ತಿವೆ. ಒಂದು ಕಾಲದಲ್ಲಿ ಎಲ್ಲಿ ನಕ್ಸಲೈಟ್ ಗುಂಡುಗಳು ಹಾರುತ್ತಿದ್ದವೋ, ಎಲ್ಲಿ ಒಮ್ಮೆ ಭೂಮಿ ರಕ್ತಸಿಕ್ತವಾಗುತ್ತಿತ್ತೋ, ಇಂದು ಅದೇ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಶ್ರಮದ ತ್ರಿವರ್ಣ ಧ್ವಜ ಹಾರಾಡುತ್ತಿದೆ” ಎಂದು ಮೋದಿ ಹೇಳಿದರು.

ಈ ನಡುವೆ, ವೈಚಾರಿಕ ನಕ್ಸಲಿಸಂ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, “ಹಲವು ವರ್ಷಗಳಿಂದ ಮಾವೋವಾದಿ ಮನಸ್ಥಿತಿಯ ಜನರು ದೇಶದ ಅಧಿಕಾರದ ಕಾರಿಡಾರ್‌ಗಳನ್ನು ಆಕ್ರಮಿಸಿಕೊಂಡು ಕುಳಿತಿದ್ದರು. ಸರ್ಕಾರಿ ಸಮಿತಿಗಳಲ್ಲಿ ಸಲಹೆಗಾರರಾಗಿಯೂ ಈ ಮಾವೋವಾದಿ ಮನಸ್ಥಿತಿಯು ನೀತಿಗಳ ಮೇಲೆ ಪ್ರಭಾವ ಬೀರಿತ್ತು. ಈಗಲೂ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಾಡುಗಳಲ್ಲಿದ್ದ ಸಶಸ್ತ್ರ ನಕ್ಸಲರನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಆ ಬಿಕ್ಕಟ್ಟಿನಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಶಸ್ತ್ರ ನಕ್ಸಲರು ತೊಲಗಿದ್ದಾರೆ. ಆದರೆ ವೈಚಾರಿಕ ನಕ್ಸಲರು (ಬುದ್ಧಿಜೀವಿಗಳು) ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಯುತ್ತಿರುವ ಅವರನ್ನು ಬಹಿಷ್ಕರಿಸಬೇಕು” ಎಂದು ಮೋದಿ ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ – Kannada News | Hanur Forest Encounter: 3 Poachers Dead, Relatives Vandalize Kaveri Sanctuary Office

ಚಾಮರಾಜನಗರ,ಆ.15: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ಗೆ ಮೂವರು ಬಲಿಯಾಗಿದ್ದಾರೆ. ಘಟನೆಯ ನಂತರ ಆಕ್ರೋಶಗೊಂಡ ಮೃತರ ಸಂಬಂಧಿಕರು ಅರಣ್ಯ ಇಲಾಖೆಯ ಕಚೇರಿಯನ್ನು ಧ್ವಂಸಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಿಗೆ ನುಗ್ಗಿ ಬೇಟೆಗಾರರು ಕಾಡುಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ತಕ್ಷಣವೇ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಆ ಮೂವರು ಅರಣ್ಯ ಸಿಬ್ಬಂದಿ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ನಡೆಸಿದ ಕೌಂಟರ್ ಫೈರಿಂಗ್‌ನಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಮೂವರನ್ನು ಹನೂರು ತಾಲೂಕಿನ ತೋಮಿಯರ್​ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ DRFO (ಉಪ ವಲಯ ಅರಣ್ಯಾಧಿಕಾರಿ) ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೆ ಶಾಕ್! 6 ಹೋಟೆಲ್​ಗಳಿಗೆ ಒಟ್ಟೂ 1.6 ಲಕ್ಷ ರೂ ಭಾರಿ ದಂಡ

ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕುಟುಂಬ ಸದಸ್ಯರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. “ದನ ಮೇಯಿಸಲು ಹೋಗಿದ್ದಾರೆ. ಪ್ರಾಣಿಗಳನ್ನು ಬೇಟೆ ಮಾಡಿದ್ದಾರೆ ಎಂಬುದಕ್ಕೆ ಯಾವ ಸಾಕ್ಷಿ ಇದೆ. ಅವರು ಕೃಷಿಕರು. ಒಂದು ವೇಳೆ ಬೇಟೆ ಮಾಡಲು ಹೋಗಿದ್ದರೆ ಎಂದರೆ ಅವರನ್ನು ಬಂಧಿಸಬೇಕಿತ್ತು. ಶೂಟ್​​​​​ ಯಾಕೆ ಮಾಡಬೇಕಿತ್ತು. ತರಬೇತಿಯಲ್ಲಿರುವ ಗಾರ್ಡ್​​​ಗಳು ಈ ಕೆಲಸ ಮಾಡಿದ್ದಾರೆ. ನಾವು ಅವರನ್ನು ಕುಟುಂಬದವರಂತೆ ನೋಡುತ್ತೇವೆ. ಈ ಬಗ್ಗೆ ತನಿಖೆ ಆಗಬೇಕು” ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:28 am, Sat, 15 August 26

Source link

Karnataka Dam Water Level: ಆಲಮಟ್ಟಿ ಭರ್ತಿ, ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ – Kannada News | Karnataka Reservoir Water Level on August 15; Almatti, KRS, Kabini, Bhadra, Linganamakki Status Update

ಬೆಂಗಳೂರು, ಆಗಸ್ಟ್ 15: ರಾಜ್ಯದ ಪ್ರಮುಖ ಜಲಾಶಯಗಳಿಗೆ ಹರಿಬರುತ್ತಿರುವ ನೀರಿನ ಪ್ರಮಾಣದಲ್ಲಿ ತೀವ್ರ ವ್ಯತ್ಯಾಸಗಳು ಕಂಡುಬರುತ್ತಿದ್ದು, ವಿವಿಧ ನದಿ ಜಲಾನಯನ ಪ್ರದೇಶಗಳಲ್ಲಿ ಜಲಾಶಯ ನಿರ್ವಹಣೆ ಕುರಿತು ಸಾರ್ವಜನಿಕ ಚರ್ಚೆಗಳು ತೀವ್ರಗೊಂಡಿವೆ. ಕೃಷ್ಣಾ, ಕಾವೇರಿ ಮತ್ತು ಭದ್ರಾ ನದಿ ಪಾತ್ರದ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ವಿವರಗಳು ಹೀಗಿವೆ.

1. ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಆಲಮಟ್ಟಿ ಜಲಾಶಯಕ್ಕೆ ಉತ್ತಮ ಒಳಹರಿವು ದಾಖಲಾಗಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.51 ಮೀಟರ್
  • ಒಳಹರಿವು: 33,891 ಕ್ಯೂಸೆಕ್
  • ಹೊರಹರಿವು: 22,155 ಕ್ಯೂಸೆಕ್

2. ಕಬಿನಿ ಜಲಾಶಯ

ಕಬಿನಿ ಜಲಾಶಯದಲ್ಲಿ ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿದ್ದು, ಸಿಡಬ್ಲ್ಯೂಎಂಎ (CWMA) ಆದೇಶ ಪಾಲನೆಗಾಗಿ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ನೀರಿನ ಮಟ್ಟ: 81.63 ಅಡಿ
  • ಒಟ್ಟು ಸಾಮರ್ಥ್ಯ: 19.52 ಟಿಎಂಸಿ (ಪ್ರಸ್ತುತ ಸಂಗ್ರಹ 18.01 ಟಿಎಂಸಿ)
  • ಒಳಹರಿವು: 8,701 ಕ್ಯೂಸೆಕ್
  • ಹೊರಹರಿವು: 11,896 ಕ್ಯೂಸೆಕ್ (3,168 ಕ್ಯೂಸೆಕ್ ಹೆಚ್ಚುವರಿ ನೀರು ನದಿಗೆ)

3. ಕೆ.ಆರ್.ಎಸ್ ಜಲಾಶಯ

ಕೆ.ಆರ್.ಎಸ್ ಜಲಾಶಯದ ಗೇಟ್‌ಗಳಿಂದ ನದಿಗೆ ನೀರು ಹರಿಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಅಧಿಕೃತ ಅಂಕಿ-ಅಂಶಗಳನ್ನು ಮುಚ್ಚಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಾಲೆಗಳಿಗೆ ಮಾತ್ರ ನೀರು ಬಿಡಲಾಗಿದೆ ಎಂದು ತಿಳಿಸಿದ್ದ ಸರ್ಕಾರ, ತಡರಾತ್ರಿಯಿಂದ ನದಿಗೆ ನೀರು ಹರಿಸುತ್ತಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 109.75 ಅಡಿ
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ (ಇಂದಿನ ಸಂಗ್ರಹ: 31.471 ಟಿಎಂಸಿ)
  • ಒಳಹರಿವು: 2,274 ಕ್ಯೂಸೆಕ್
  • ಹೊರಹರಿವು: 2,699 ಕ್ಯೂಸೆಕ್

4. ಭದ್ರಾ ಜಲಾಶಯ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಹುಲಿಬಂಡೆ ಸಿದ್ಧೇಶ್ವರ ದೇವಾಲಯ ಟ್ರಸ್ಟ್ ನೀಡಿರುವ ಭದ್ರಾ ಜಲಾಶಯ ಯೋಜನೆಯ ಅಧಿಕೃತ ವರದಿ ಇಲ್ಲಿದೆ.

  • ಪೂರ್ಣ ಸಾಮರ್ಥ್ಯ ಮಟ್ಟ: 186.00 ಅಡಿ (ಸಮುದ್ರ ಮಟ್ಟಕ್ಕೆ: 2158.00 ಅಡಿ)
  • ಇಂದಿನ ಜಲಾಶಯ ಮಟ್ಟ: 172.09 ಅಡಿ (ಸಮುದ್ರ ಮಟ್ಟಕ್ಕೆ: 2144.75 ಅಡಿ)
  • ಒಟ್ಟು ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ (ಇಂದಿನ ಸಂಗ್ರಹ: 55.871 ಟಿಎಂಸಿ)
  • ಒಳಹರಿವು: 4,438 ಕ್ಯೂಸೆಕ್
  • ಹೊರಹರಿವು: 202 ಕ್ಯೂಸೆಕ್ (ನದಿ ಸ್ಲೂಯಿಸ್: 100 ಕ್ಯೂಸೆಕ್, ಆವಷ್ಟೀಕರಣ: 102 ಕ್ಯೂಸೆಕ್)

5. ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ನೀರಿನ ಮಟ್ಟ: 1794.05 ಅಡಿ (ಪ್ರಸ್ತುತ 54.15% ನೀರು ಸಂಗ್ರಹ)
  • ಇಂದಿನ ಏರಿಕೆ: 0.45 ಅಡಿ
  • ಒಳಹರಿವು: 13,921 ಕ್ಯೂಸೆಕ್
  • ಕಳೆದ ವರ್ಷ 15-08-2025 ರಂದು ಜಲಾಶಯದ ಮಟ್ಟ 1812.05 ಅಡಿ ಅಂದರೆ 85.25% ನಷ್ಟಿತ್ತು.

ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಉಚಿತ ಆನ್‌ಲೈನ್ ಕೋಚಿಂಗ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ; 2036ರ ಒಲಿಂಪಿಕ್ಸ್‌ಗೆ ಭಾರತ ಸಿದ್ಧ! – Kannada News | PM Modis Vision: Free Coaching Initiatives and Indias Sporting Ascent Towards 2036 Olympics

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, ಯುವಜನತೆ ಮತ್ತು ಕ್ರೀಡಾ ಕ್ಷೇತ್ರದ ಭವಿಷ್ಯದ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಮಧ್ಯಮ ವರ್ಗದ ಕುಟುಂಬಗಳ ಮೇಲೆ ಕೋಚಿಂಗ್ ತರಗತಿಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ಸರ್ಕಾರವು ಉಚಿತ ಆನ್‌ಲೈನ್ ತರಬೇತಿ ಜಾಲವನ್ನು ರೂಪಿಸಲಿದೆ ಎಂದು ಮೋದಿ ಘೋಷಿಸಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಡಿಜಿಟಲ್ ಮೂಲಸೌಕರ್ಯ ಮತ್ತು ಉತ್ತಮ ಶಿಕ್ಷಕರನ್ನು ಬಳಸಿಕೊಂಡು ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನೆರವಾಗಲಿದೆ.

ಕ್ರೀಡಾ ಮೂಲಸೌಕರ್ಯ, ತರಬೇತಿ, ವೈದ್ಯಕೀಯ ಮತ್ತು ಪೌಷ್ಟಿಕಾಂಶ ಕ್ಷೇತ್ರಗಳಲ್ಲಿ ಭಾರತವು ಮುನ್ನಡೆಯುತ್ತಿದೆ. 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತವು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದು, 2030ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗೆ ಆತಿಥ್ಯ ವಹಿಸಲಿದೆ. ಕ್ರೀಡಾಪಟುಗಳಲ್ಲದಿದ್ದರೂ ಕ್ರೀಡಾ ಬೆಂಬಲ ವ್ಯವಸ್ಥೆಯಲ್ಲಿ ಯುವಜನರಿಗೆ ಅಪಾರ ಅವಕಾಶಗಳಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

PM Modi Speech: ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಕೋಚಿಂಗ್ ಕ್ಲಾಸ್; ಪ್ರಧಾನಿ ಮೋದಿ ಮಾಡಿದ ಪ್ರಮುಖ ಘೋಷಣೆಗಳಿವು – Kannada News | Big announcements by PM Modi in Independence Day Speech including Free Online Coaching For Competitive Exams

ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ಕೆಂಪು ಕೋಟೆಯ (Red Fort) ಬುರುಜಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಲವು ಘೋಷಣೆಗಳನ್ನು ಮಾಡಿದ್ದಾರೆ. ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ತೆರಳುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆಯಾಗಿದೆ ಎಂಬುದನ್ನು ಒಪ್ಪಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ತರಬೇತಿ (ಕೋಚಿಂಗ್) ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಘೋಷಿಸಿದ ಪ್ರಮುಖ ಯೋಜನೆಗಳು:

ಎಐ (AI) ಯುವ ಕೌಶಲ್ಯ ತರಬೇತಿ: ಮುಂಬರುವ ವರ್ಷದಲ್ಲಿ ರಾಷ್ಟ್ರವ್ಯಾಪಿ ಮಿಷನ್ ಮೋಡ್ ಮೂಲಕ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ.

ಇದನ್ನೂ ಓದಿ: Saptadhara: ಸಪ್ತಧಾರಾ; ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಘೋಷಿಸಿದ ‘ವಿಕಸಿತ ಭಾರತ’ದ 7 ಸುಧಾರಣೆಗಳಿವು

ಉಚಿತ ಆನ್‌ಲೈನ್ ಕೋಚಿಂಗ್: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರಿಗೆ ಉಚಿತ ಆನ್‌ಲೈನ್ ಕೋಚಿಂಗ್ (ತರಬೇತಿ) ಸೌಲಭ್ಯ.

ನಾಗರಿಕ ರಕ್ಷಣಾ ಸುಧಾರಣೆ: ಬದಲಾಗುತ್ತಿರುವ ಭದ್ರತಾ ಅಗತ್ಯಗಳನ್ನು ಎದುರಿಸಲು ಆಧುನಿಕ ತರಬೇತಿ ಮತ್ತು ಸುಧಾರಿತ ಸಾಮರ್ಥ್ಯ ನಿರ್ಮಾಣ.

ಕ್ರೀಡಾ ಪ್ರತಿಭಾ ಶೋಧ: ಗ್ರಾಮೀಣ ಮತ್ತು ನಗರ ಪ್ರದೇಶಗಳ 5ರಿಂದ 15 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ದೇಶವ್ಯಾಪಿ ಪ್ರಚಾರ ಅಭಿಯಾನ.

ಇದನ್ನೂ ಓದಿ: PM Modi Speech: ‘ಭಾರತ ಬೇರೆ ದೇಶಗಳ ಮೇಲೆ ಅವಲಂಬಿತವಾಗಬಾರದು’; ಕೆಂಪುಕೋಟೆಯಲ್ಲಿ ಮೋದಿಯಿಂದ ಆತ್ಮನಿರ್ಭರದ ಘೋಷಣೆ

ಸೆಮಿಕಂಡಕ್ಟರ್: ಮುಂಬರುವ 1ರಿಂದ 2 ವರ್ಷಗಳಲ್ಲಿ 7ರಿಂದ 8 ಹೊಸ ಉತ್ಪಾದನಾ ಘಟಕಗಳ (ಪ್ಲಾಂಟ್‌ಗಳು) ಕಾರ್ಯಾಚರಣೆ.

ಅಣುಶಕ್ತಿ: 2047ರ ವೇಳೆಗೆ 100 ಗಿಗಾವ್ಯಾಟ್ (GW) ಸಾಮರ್ಥ್ಯ ಸಾಧನೆಯ ಗುರಿ ಹಾಗೂ ಮುಂಬರುವ 6ರಿಂದ 7 ವರ್ಷಗಳಲ್ಲಿ 5 ಹೊಸ ರಿಯಾಕ್ಟರ್‌ಗಳ ಕಾರ್ಯಾಚರಣೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:44 am, Sat, 15 August 26

Source link

ಸ್ವಾತಂತ್ರ್ಯ ದಿನದ ಪರೇಡ್ ವೇಳೆ ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡ ತ್ರಿಷಾ – Kannada News | Trisha Spotted with Vijay Family at Independence Day Parade Event

ನಟಿ ತ್ರಿಷಾ ಹಾಗೂ ವಿಜಯ್ ಸಂಬಂಧದ ಬಗ್ಗೆ ಚರ್ಚೆ ಆಗುತ್ತಿರುವುದು ಇಂದು ನಿನ್ನೆಯಿಂದ ಅಲ್ಲ. ಇತ್ತೀಚೆಗೆ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೂ ಅಲ್ಲದೆ, ಪತಿಗೆ ನಟಿಯ ಜೊತೆ ಅನೈತಿಕ ಸಂಬಂಧ ಇದೆ ಆರೋಪಿಸಿದ್ದು ಚರ್ಚೆಯ ಕೇಂದ್ರ ಬಿಂದು ಆಯಿತು. ಆ ಬಳಿಕ ವಿಜಯ್ ಜೊತೆ ತ್ರಿಷಾ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ. ಈಗ ತ್ರಿಷಾ ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡು ಸುದ್ದಿ ಆಗಿದ್ದಾರೆ.

ದಳಪತಿ ವಿಜಯ್ ಅವರು ತಮಿಳುನಾಡಿನ ಸಿಎಂ. ಇಂದು ಚೆನ್ನೈನಲ್ಲಿ ಸ್ವಾತಂತ್ರ್ಯ ದಿನದ ಪರೇಡ್ ನಡೆದಿದೆ. ಈ ವೇಳೆ ವಿಜಯ್ ಅವರು ತೆರೆದ ವಾಹನದಲ್ಲಿ ನಿಂತು ಪೆರೇಡ್​​ನಲ್ಲಿ ನಿಂತವರಿಗೆ ಸೆಲ್ಯೂಟ್ ಮಾಡಿದ್ದಾರೆ. ಆಗ ವೇದಿಕೆಯಲ್ಲಿ ಕುಳಿತಿದ್ದ ವಿಜಯ್ ತಂದೆ-ತಾಯಿ ಹಾಗೂ ತ್ರಿಷಾ ತಿರುಗಿ ಸೆಲ್ಯೂಟ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಉದಯನಿಧಿ ಒಳ್ಳೆಯವರು, ಕೆಟ್ಟದಾಗಿ ಮಾತನಾಡೋ ಯೂಟ್ಯೂಬರ್​ಗಳ ಶಿಕ್ಷಿಸಿ’; ವಿಜಯ್​ಗೆ ವಿಶಾಲ್ ಬೇಡಿಕೆ

ಕೆಲವರು ವಿಜಯ್ ಅವರು ಸೆಲ್ಯೂಟ್ ಮಾಡಿದ್ದನ್ನು ತಪ್ಪಾಗಿ ಭಾವಿಸಿದ್ದಾರೆ. ‘ವಿಜಯ್ ಅವರು ತಂದೆ-ತಾಯಿ ಹಾಗೂ ತ್ರಿಷಾಗೆ ಸೆಲ್ಯೂಟ್ ಮಾಡಿದ್ದಾರೆ’ ಎಂದು ವಿಡಿಯೋ ವೈರಲ್ ಮಾಡಿದ್ದಾರೆ. ಆದರೆ, ಅಲ್ಲಿ ಅಸಲಿಯತ್ತೇ ಬೇರೆ ಇದೆ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ತಿದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ.

ವಿಜಯ್ ಅವರ ಪತ್ನಿ ಸಂಗೀತಾ ಲಂಡನ್​ ಅಲ್ಲಿ ವಾಸವಿದ್ದಾರೆ. ವಿಜಯ್ ಅವರಿಂದ ವಿಚ್ಛೇದನ ಬೇಕು ಎಂದು ಚೆನ್ನೈನ ಫ್ಯಾಮಿಲಿ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಪದೇ ಪದೇ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಅವರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ವಿಜಯ್ ಹಾಗೂ ಸಂಗೀತಾ ಮಧ್ಯೆ ಎಲ್ಲವೂ ಸರಿ ಆಯಿತು ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Naga Panchami 2026: ಕಾಲಸರ್ಪ ದೋಷ ನಿವಾರಣೆಗೆ ಈ ಸರಳ ಪರಿಹಾರ ತಪ್ಪದೇ ಮಾಡಿ! – Kannada News | Naga panchami 2026 kalasarpa dosha remedies and serpent worship significance

ಹಿಂದೂ ಧರ್ಮದಲ್ಲಿ ನಾಗ ಪಂಚಮಿ ಹಬ್ಬಕ್ಕೆ ಅತ್ಯಂತ ಪವಿತ್ರವಾದ ಮತ್ತು ವಿಶೇಷವಾದ ಸ್ಥಾನವಿದೆ. ಈ ಶ್ರೇಷ್ಠ ದಿನದಂದು ಸರ್ಪ ದೇವರನ್ನು ಆರಾಧಿಸುವುದು ಅತ್ಯಂತ ಫಲಾಭಿಪ್ರಾಯ ನೀಡುತ್ತದೆ ಎಂಬ ನಂಬಿಕೆಯಿದೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವೈದಿಕ ಪಂಚಾಂಗದ ಪ್ರಕಾರ, ಈ ವರ್ಷ ಆಗಸ್ಟ್ 17 ರಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಸರ್ಪ ದೇವತೆಯನ್ನು ಭಕ್ತಿಯಿಂದ ಪೂಜಿಸುವುದರಿಂದ ಜಾತಕದಲ್ಲಿರುವ ‘ಕಾಲಸರ್ಪ ದೋಷ’ದ ದುಷ್ಪರಿಣಾಮಗಳು ಶಮನಗೊಂಡು, ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.

ಕಾಲಸರ್ಪ ದೋಷ ಎಂದರೇನು ಮತ್ತು ಅದರ ಪ್ರಭಾವ:

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿನ ಎಲ್ಲಾ ಏಳು ಗ್ರಹಗಳು ರಾಹು ಮತ್ತು ಕೇತು ಗ್ರಹಗಳ ನಡುವೆ ಬಂದಾಗ ಕಾಲಸರ್ಪ ಯೋಗ ಅಥವಾ ದೋಷ ರೂಪುಗೊಳ್ಳುತ್ತದೆ. ಆಸ್ಟ್ರೋಪತ್ರಿಯ ಪ್ರಸಿದ್ಧ ಜ್ಯೋತಿಷಿ ಶ್ರೀ ಚಂದ್ರೇಶ್ ಶರ್ಮಾ ಅವರ ಪ್ರಕಾರ, ಕಾಲಸರ್ಪ ದೋಷವು ವ್ಯಕ್ತಿಯ ಜೀವನದಲ್ಲಿ ಅನಗತ್ಯ ಅಡೆತಡೆಗಳು, ವಿಪರೀತ ಮಾನಸಿಕ ಒತ್ತಡ ಹಾಗೂ ಆರ್ಥಿಕ ಏರಿಳಿತಗಳಿಗೆ ಮುಖ್ಯ ಕಾರಣವಾಗುತ್ತದೆ. ಆದರೆ, ನಾಗ ದೇವತೆಗಳು ಹಾಗೂ ರಾಹು-ಕೇತುಗಳ ನಕಾರಾತ್ಮಕ ಪ್ರಭಾವವನ್ನು ಶಾಂತಗೊಳಿಸಲು ನಾಗ ಪಂಚಮಿಯು ವರ್ಷದಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರವಾದ ಸಂದರ್ಭವಾಗಿದೆ.

ಬೆಳ್ಳಿಯ ನಾಗರಹಾವಿನಿಂದ ಪರಿಹಾರ:

ಕಾಲಸರ್ಪ ದೋಷದಿಂದ ಮುಕ್ತಿ ಪಡೆಯಲು ನಾಗಪಂಚಮಿಯ ದಿನದಂದು ಪುರೋಹಿತರ ಸಲಹೆಯಂತೆ ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಸಣ್ಣ ಹಾವಿನ ಜೋಡಿಯನ್ನು ಸಿದ್ಧಪಡಿಸಿಕೊಳ್ಳಿ. ಪೂಜೆಯ ಸಮಯದಲ್ಲಿ ಅವುಗಳಿಗೆ ಹಸಿ ಹಾಲು ಮತ್ತು ಪವಿತ್ರ ನೀರಿನಿಂದ ಅಭಿಷೇಕ ಮಾಡಿ. ನಂತರ ನಿಮ್ಮ ಮನದ ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಾ, ಹರಿಯುವ ಪವಿತ್ರ ನದಿಯಲ್ಲಿ ಅವುಗಳನ್ನು ತೇಲಿಸಿ. ಈ ಪರಿಹಾರವು ರಾಹು ಮತ್ತು ಕೇತುಗಳಿಂದ ಉಂಟಾಗುವ ತೊಂದರೆ ಹಾಗೂ ನೋವನ್ನು ಶಮನಗೊಳಿಸುತ್ತದೆ.

ಶಿವಲಿಂಗಕ್ಕೆ ವಿಶೇಷ ಜಲಾಭಿಷೇಕ ಮಾಡುವುದು:

ನಾಗ ಪಂಚಮಿಯ ದಿನದಂದು ಶಿವನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಶ್ರೇಷ್ಠ. ತಾಮ್ರದ ಪಾತ್ರೆಯಲ್ಲಿ ನೀರು, ಸ್ವಲ್ಪ ಹಸಿ ಹಾಲು, ಕಪ್ಪು ಎಳ್ಳು ಮತ್ತು ಗಂಗಾಜಲವನ್ನು ಮಿಶ್ರಣ ಮಾಡಿಕೊಳ್ಳಿ. ಶಿವಲಿಂಗಕ್ಕೆ ಈ ಜಲದಿಂದ ಅಭಿಷೇಕ ಮಾಡುತ್ತಾ “ಓಂ ನಮಃ ಶಿವಾಯ” ಅಥವಾ “ಮಹಾಮೃತ್ಯುಂಜಯ ಮಂತ್ರ”ವನ್ನು ಜಪಿಸಿ. ಹಾವುಗಳು ಪರಮಶಿವನಿಗೆ ಅತ್ಯಂತ ಪ್ರಿಯವಾದ ಆಭರಣವಾಗಿರುವುದರಿಂದ, ಈ ದಿನ ಶಿವಾರಾಧನೆಯು ಕಾಲಸರ್ಪ ದೋಷವನ್ನು ಶೀಘ್ರವಾಗಿ నిವಾರಿಸುತ್ತದೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ರುದ್ರಾಕ್ಷಿ ಧರಿಸುವುದು ಮತ್ತು ನವಿಲು ಗರಿಯ ಬಳಕೆ:

ನೀವು  ಸತತ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಶುಭ ದಿನದಂದು 8 ಮುಖದ ರುದ್ರಾಕ್ಷಿಯನ್ನು ಧರಿಸುವುದು ಬಹಳ ಪ್ರಯೋಜನಕಾರಿ. ಇದರೊಂದಿಗೆ ಮನೆಯ ಮುಖ್ಯ ದ್ವಾರದಲ್ಲಿ ಮತ್ತು ಪೂಜಾ ಕೊಠಡಿಯಲ್ಲಿ ನವಿಲು ಗರಿಯನ್ನು ಇರಿಸಿ. ನವಿಲು ಹಾವಿನ ಶತ್ರುವಾಗಿರುವುದರಿಂದ, ಇದು ರಾಹುವಿನ ದುಷ್ಪ್ರಭಾವವನ್ನು ತಕ್ಷಣವೇ ಕಡಿಮೆ ಮಾಡಲು ಮತ್ತು ನಕಾರಾತ್ಮಕ ಶಕ್ತಿಯನ್ನು ದೂರಮಾಡಲು ನೆರವಾಗುತ್ತದೆ.

ನಾಗ ಸ್ತೋತ್ರ ಪಠಣ ಮತ್ತು ದಾನ ಧರ್ಮದ ಮಹತ್ವ:

ನಾಗ ಪಂಚಮಿಯಂದು ಶ್ರೀ ನವನಾಗ ಸ್ತೋತ್ರವನ್ನು 11 ಬಾರಿ ಭಕ್ತಿಯಿಂದ ಪಠಿಸಿ. ಪೂಜೆ ಮುಗಿದ ನಂತರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಪ್ಪು ಎಳ್ಳು, ನೀಲಿ ಬಟ್ಟೆ, ಕರಿಬೇವು ಮತ್ತು ದಕ್ಷಿಣೆಯನ್ನು ನಿರ್ಗತಿಕರಿಗೆ ಅಥವಾ ಅರ್ಹರಿಗೆ ದಾನ ಮಾಡಿ. ಈ ರೀತಿ ದಾನ ಮಾಡುವುದರಿಂದ ಜೀವನದಲ್ಲಿ ತಡೆಯಿಡಿದ ಕೆಲಸಗಳು ಶೀಘ್ರವಾಗಿ ಪೂರ್ಣಗೊಂಡು ಯಶಸ್ಸು ಮತ್ತು ಸುಖ-ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Independence Day 2026: ಸಿಗಂದೂರು ಸೇತುವೆ ಮೇಲೆ ನಡುರಾತ್ರಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದ ಜನ! – Kannada News | 80th Independence Day: Midnight Flag Hoisting on Sigandur Bridge in Shivamogga

ಶಿವಮೊಗ್ಗ, ಆಗಸ್ಟ್ 15: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಐತಿಹಾಸಿಕ ಸಿಗಂದೂರು ಸೇತುವೆಯ ಮೇಲೆ ಕರೂರು ಹೋಬಳಿಯ ಸ್ಥಳೀಯ ಜನರು ನಡುರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆದಿದ್ದಾರೆ. ಕರೂರಿನ ಕಳಸವಳ್ಳಿ-ಅಂಬಾರಗೋಡ್ಲು ಸಂಪರ್ಕಿಸುವ ಶರಾವತಿ ಹಿನ್ನೀರಿನ ಬೃಹತ್ ಸೇತುವೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾ ಕೀ ಜೈ’ ಎಂಬ ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಲಾಯಿತು. ಈ ಅಪರೂಪದ ಕ್ಷಣದಲ್ಲಿ ಸ್ಥಳೀಯ ಪ್ರಮುಖರಾದ ಪ್ರಸನ್ನ ಕೆರೆಕೈ, ರಾಜೇಂದ್ರ ಅವಿನಹಳ್ಳಿ, ಗಿರೀಶ್, ಶ್ರೀಧರ್ ಚುಟ್ಟಿಕೆರೆ ಸೇರಿದಂತೆ ನೂರಾರು ದೇಶಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ತಡರಾತ್ರಿಯಲ್ಲೂ ಕಂಠಪೂರ್ತಿ ದೇಶಪ್ರೇಮದ ಗೀತೆಗಳನ್ನು ಹಾಡಿ ಸಂಭ್ರಮ ಹಂಚಿಕೊಂಡರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: 600ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ – Kannada News | IND vs SL 1st Test: India’s 600th Test Begins in Galle, Gill Wins Toss and Playing XI

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆಗಸ್ಟ್ 15 ರಂದು ಈ ಟೆಸ್ಟ್ ಪಂದ್ಯ ಶುರುವಾಗಿರುವುದು ಭಾರತೀಯರಿಗೆ ವಿಶೇಷವಾಗಿರುವುದರ ಜೊತೆಗೆ ಇದು ಟೀಂ ಇಂಡಿಯಾಕ್ಕೆ 600ನೇ ಟೆಸ್ಟ್ ( 600th Test) ಪಂದ್ಯವಾಗಿದೆ. ಈ ಮೂಲಕ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಈ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಮತ್ತಷ್ಟು ಸ್ಮರಣೀಯಗೊಳಿಸಲು ನೋಡುತ್ತಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ (Shubman Gill) ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಪ್ಲೇಯಿಂಗ್ 11 ಹೀಗಿದೆ

ತಂಡದ ಪ್ಲೇಯಿಂಗ್ 11 ನೋಡುವುದಾದರೆ.. ಈ ಮೊದಲೇ ನಿರೀಕ್ಷಿಸಿದ ಹೆಸರುಗಳೇ ಆಡುವ ಹನ್ನೊಂದರ ಬಳಗದಲ್ಲಿವೆ. ತಂಡದಲ್ಲಿ 4 ಬ್ಯಾಟರ್​ಗಳು, ಮೂವರು ವಿಕೆಟ್ ಕೀಪರ್​ಗಳು, ಇಬ್ಬರು ಆಲ್​ರೌಂಡರ್​ಗಳ ಜೊತೆಗೆ ಒಬ್ಬ ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳಿದ್ದಾರೆ. ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ದ್ರುವ್ ಜುರೇಲ್ ತಂಡದಲ್ಲಿರುವ ವಿಕೆಟ್ ಕೀಪರ್​ಗಳಾಗಿದ್ದು, ಇವರಲ್ಲಿ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರೆ, ಅವರಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸಾಥ್ ನೀಡಲಿದ್ದಾರೆ.

ಭಾರತದ 600ನೇ ಟೆಸ್ಟ್

ಮೇಲೆ ಹೇಳಿದಂತೆ ಇದು ಟೀಂ ಇಂಡಿಯಾದ 600ನೇ ಟೆಸ್ಟ್ ಪಂದ್ಯವಾಗಿದೆ. ಈ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಾತ್ರ ಮೊದಲೆರಡು ಸ್ಥಾನಗಳಲ್ಲಿವೆ. ಇನ್ನು ಈ ವಿಶೇಷ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್​ನಲ್ಲಿ ಉಳಿಯಲು ಯತ್ನಿಸಲಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತದ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಭಾರತದ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:01 am, Sat, 15 August 26

Source link

ಬೆಂಗಳೂರಿನ ವಿದ್ಯಾರ್ಥಿನಿಯಿಂದ ‘ಡೆಕ್ ಆಫ್ ಕಿಂಗ್ಸ್’ ಕಾರ್ಡ್ ಗೇಮ್: ಇತಿಹಾಸ ಕಲಿಕೆಗೆ ಹೊಸ ಸ್ಪರ್ಶ – Kannada News | Bengaluru Teen Creates ‘Deck of Kings’ History Card Game

ಬೆಂಗಳೂರಿನ ವಿದ್ಯಾರ್ಥಿನಿಯಿಂದ ‘ಡೆಕ್ ಆಫ್ ಕಿಂಗ್ಸ್’ ಕಾರ್ಡ್ ಗೇಮ್

ಬೆಂಗಳೂರು, ಆಗಸ್ಟ್ 15: ನಗರದ (Bengaluru) 10ನೇ ತರಗತಿಯ 15 ವರ್ಷದ ವಿದ್ಯಾರ್ಥಿನಿ ಸಿಂಚನಾ ಎಸ್. ಇತಿಹಾಸದ ಪಾಠಗಳನ್ನು ಸುಲಭವಾಗಿ ಮತ್ತು ಆಸಕ್ತಿದಾಯಕವಾಗಿ ಕಲಿಯಲು ‘ಡೆಕ್ ಆಫ್ ಕಿಂಗ್ಸ್’ (Deck of Kings) ಎಂಬ ವಿಶೇಷ ಕಾರ್ಡ್ ಗೇಮ್ ಅನ್ನು ವಿನ್ಯಾಸಗೊಳಿಸಿದ್ದಾಳೆ. ಇತಿಹಾಸದ ಪಠ್ಯಪುಸ್ತಕಗಳಲ್ಲಿನ ಹೆಸರು ಮತ್ತು ದಿನಾಂಕಗಳನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಆಟವನ್ನು ರೂಪಿಸಲಾಗಿದೆ.

ಪೋಕೆಮೋನ್ ಪ್ರೇರಣೆ

‘ಪೋಕೆಮೋನ್’ (Pokemon) ಟ್ರೇಡಿಂಗ್ ಕಾರ್ಡ್‌ಗಳಿಂದ ಪ್ರೇರಣೆ ಪಡೆದ ಸಿಂಚನಾ, ಎನ್‌ಸಿಇಆರ್‌ಟಿ (NCERT) 7 ರಿಂದ 10 ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಬರುವ 50 ಭಾರತೀಯ ರಾಜರ ಮಾಹಿತಿಯನ್ನು ಒಳಗೊಂಡ ಕಾರ್ಡ್‌ಗಳನ್ನು ತಯಾರಿಸಿದ್ದಾಳೆ. ಅಶೋಕ, ಕೃಷ್ಣದೇವರಾಯ ಹಾಗೂ ಶಿವಾಜಿ ಮಹಾರಾಜರಂತಹ ಪ್ರಮುಖ ಆಡಳಿತಗಾರರು ಈ ಆಟದಲ್ಲಿದ್ದಾರೆ. ಪ್ರತಿಯೊಂದು ಕಾರ್ಡ್‌ನಲ್ಲೂ ರಾಜರ ಸೈನಿಕ ಶಕ್ತಿ, ಸಮಾಜ ಕಲ್ಯಾಣ, ಸಂಪತ್ತು ಮತ್ತು ಐತಿಹಾಸಿಕ ಪ್ರಭಾವಕ್ಕೆ ಸಂಬಂಧಿಸಿದಂತೆ ಅಂಕಗಳನ್ನು ನೀಡಲಾಗಿದ್ದು, ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಹೋಲಿಕೆ ಮಾಡುತ್ತಾ ಆಟವಾಡಬಹುದು.

ವಿನ್ಯಾಸ, ವಿತರಣೆ ಮತ್ತು ಸರಕಾರಿ ಶಾಲೆಗಳಿಗೆ ನೆರವು

ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಾರಂಭವಾದ ಈ ಆಲೋಚನೆಯನ್ನು ಸಿಂಚನಾ ಕ್ಯಾನ್ವಾ (Canva) ಮತ್ತು ಎಐ (AI) ಉಪಕರಣಗಳನ್ನು ಬಳಸಿ ಸುಮಾರು ಆರಕ್ಕೂ ಹೆಚ್ಚು ಬಾರಿ ಪರಿಷ್ಕರಿಸಿ, ಮೇ ತಿಂಗಳಲ್ಲಿ ಅಂತಿಮ ರೂಪ ನೀಡಿದ್ದಾಳೆ. ಈ ಶೈಕ್ಷಣಿಕ ಆಟವನ್ನು ತಮ್ಮ ಶಾಲೆಯಲ್ಲಿ ಪರಿಚಯಿಸುವುದರ ಜೊತೆಗೆ, ಬಿಬಿಎಂಪಿ (BBMP) ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು 170 ಕಾರ್ಡ್ ಸೆಟ್‌ಗಳನ್ನು ಉಚಿತವಾಗಿ ಹಂಚಿ, ಆಡುವ ವಿಧಾನವನ್ನು ತಿಳಿಸಿಕೊಟ್ಟಿದ್ದಾಳೆ.

ಮುಂದಿನ ಯೋಜನೆಗಳು

ವಿದ್ಯಾರ್ಥಿಗಳಲ್ಲಿ ಇತಿಹಾಸದ ಬಗ್ಗೆ ಕುತೂಹಲ ಮೂಡಿಸುವುದು ಸಿಂಚನಾ ಅವರ ಮುಖ್ಯ ಉದ್ದೇಶವಾಗಿದೆ. ಇವರ ಈ ವಿಶಿಷ್ಟ ಪ್ರಯತ್ನಕ್ಕೆ ‘ಬೆಂಗಳೂರು ವೆಸ್ಟ್ ಸಿಟಿ ಕಾರ್ಪೊರೇಷನ್’ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ. ಪ್ರಸ್ತುತ, ಸಿಂಚನಾ ಅವರು ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆ ಮತ್ತು ಹೂಡಿಕೆ ಜ್ಞಾನವನ್ನು ಸರಳವಾಗಿ ತಿಳಿಸಿಕೊಡುವ ಹೊಸ ಶೈಕ್ಷಣಿಕ ಆಟದ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version