ಕೊಪ್ಪಳ: ಬಸ್‌ನಲ್ಲಿ ಅರಳಿದ ಪ್ರೇಮ, ದೇವಸ್ಥಾನದಲ್ಲಿ ಮದುವೆಯಾದ ಜೋಡಿಗೆ ಈಗ ಜೀವಭಯ!

ಕೊಪ್ಪಳ: ಬಸ್‌ನಲ್ಲಿ ಅರಳಿದ ಪ್ರೇಮ, ದೇವಸ್ಥಾನದಲ್ಲಿ ಮದುವೆಯಾದ ಜೋಡಿಗೆ ಈಗ ಜೀವಭಯ!

ಕೊಪ್ಪಳ, ಏಪ್ರಿಲ್ 11: ‘ಪ್ರೀತಿ ಕುರುಡು’ ಎನ್ನುತ್ತಾರೆ. ಹಾಗೆಯೇ ‘ಪ್ರೀತಿಗೆ ಧರ್ಮದ ಹಂಗಿಲ್ಲ’ ಎಂಬುದನ್ನು ಕೊಪ್ಪಳದ (Koppal) ಜೋಡಿಯೊಂದು ಸಾಬೀತುಮಾಡಿದೆ. ಆದರೆ, ಅದುವೇ ಈಗ ಅವರ ಜೀವಭಯಕ್ಕೂ ಕಾರಣವಾಗಿದೆ. ಬಸ್​​ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿರುವ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ನವಜೋಡಿ ಈಗ ರಕ್ಷಣೆಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಮೆಟ್ಟಿಲೇರಿದ್ದಾರೆ.

ಬಸ್ ಪ್ರಯಾಣದಿಂದ ದೇವಸ್ಥಾನದಲ್ಲಿ ಮದುವೆ ವರೆಗೆ…

ಕನಕಗಿರಿ ತಾಲೂಕಿನ ಹುಲಿಹೈದರ್ ನಿವಾಸಿ ಕೇಶವ್ ಹಾಗೂ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದ ತಸ್ಲೀಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಸ್‌ನಲ್ಲಿ ಓಡಾಡುವಾಗ ಇವರ ಪರಿಚಯವಾಗಿತ್ತು. ಇತ್ತ ತಸ್ಲೀಮಾ ಮನೆಯಲ್ಲಿ ಆಕೆಗೆ ಬೇರೆಯವರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಈ ಜೋಡಿ ಕನಕಗಿರಿಯ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯ ನಂತರ ಮುಸ್ಲಿಂ ಯುವತಿ ತಸ್ಲೀಮಾ ಹಣೆಗೆ ಕುಂಕುಮ ಇಟ್ಟು, ಅರಿಶಿಣ ಕೊಂಬು ಕಟ್ಟಿಕೊಂಡು ಹಿಂದೂ ಧರ್ಮದ ಸಂಪ್ರದಾಯದಂತೆ ಕೇಶವ್ ಕೈ ಹಿಡಿದಿದ್ದಾರೆ.

ರಕ್ಷಣೆಗಾಗಿ ಎಸ್ಪಿ ಮೊರೆ

ಮದುವೆಯಾದ ಬೆನ್ನಲ್ಲೇ ತಮಗೆ ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಭೀತಿಯಲ್ಲಿರುವ ಈ ಜೋಡಿ, ವಕೀಲರೊಂದಿಗೆ ಕೊಪ್ಪಳ ಎಸ್ಪಿ ಕಚೇರಿಗೆ ಬಂದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಮ್ಮ ಮನೆಯವರಿಂದ ಏನಾದರೂ ತೊಂದರೆಯಾಗಬಹುದು ಎಂಬ ಭಯವಿದೆ. ಯಾರೂ ನಮಗೆ ಏನೂ ಮಾಡಬಾರದು, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಬೇಕು’ ಎಂದು ತಸ್ಲೀಮಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

ಲವ್ ಜಿಹಾದ್‌ನಂತಹ ಪ್ರಕರಣಗಳ ಕುರಿತು ಭಾರಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಈ ಅನ್ಯ ಕೋಮಿನ ವಿವಾಹ ನೆರವೇರಿದ್ದು, ಕೊಪ್ಪಳದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ಗೆ ಸೌತ್ ಆಫ್ರಿಕಾ ಆಲ್​ ರೌಂಡರ್ ಎಂಟ್ರಿ..!

Source link

Viral: ಧರ್ಮದ ಎಲ್ಲೆ ಮೀರಿ ಒಂದಾದ ಅಪರೂಪದ ಜೋಡಿ; 3 ಅಡಿ ಎತ್ತರದ ವರನ ಕೈಹಿಡಿದ 5 ಅಡಿ ಸುಂದರಿ

ಆಂಧ್ರಪ್ರದೇಶ: “ಪ್ರೀತಿಗೆ ಕಣ್ಣಿಲ್ಲ” ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಮಚಲಿಪಟ್ಟಣದ ಈ ಯುವ ಜೋಡಿ ಪ್ರೀತಿಗೆ ಎತ್ತರ, ಸೌಂದರ್ಯ, ಜಾತಿ ಮತ್ತು ಧರ್ಮ ಯಾವುದೂ ಮಿತಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ದೈಹಿಕ ವ್ಯತ್ಯಾಸಗಳಿಗಿಂತ ಮನಸ್ಸುಗಳ ಮಿಲನ ಮುಖ್ಯ ಎಂದು ಸಾರುವ ಮೂಲಕ ಈ ನವಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

9ನೇ ತರಗತಿಯಿಂದಲೇ ಶುರುವಾಗಿದ್ದ ಪ್ರೀತಿ:

ರಾಜಪೇಟೆಯ ವೇಮುಲಾ ಶಶಿ ಮತ್ತು ಶೇಖ್ ಗೌಸಿಯಾ ಅವರ ಸ್ನೇಹ ಆರಂಭವಾಗಿದ್ದು ಒಂಬತ್ತನೇ ತರಗತಿಯಲ್ಲಿ. ಶಾಲಾ ದಿನಗಳ ಆ ನಿಷ್ಕಲ್ಮಶ ಸ್ನೇಹ ಕಾಲಕ್ರಮೇಣ ಗಾಢ ಪ್ರೇಮವಾಗಿ ಬದಲಾಯಿತು. ಶಶಿ ಸದ್ಯ ಜಿಲ್ಲಾ ನ್ಯಾಯಾಲಯದಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರೆ, ಗೌಸಿಯಾ ಮೆಡಿಕಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶಶಿ ಅವರ ದೈಹಿಕ ಎತ್ತರ ಕಡಿಮೆ ಇದ್ದರೂ (ಕುಬ್ಜ), ಗೌಸಿಯಾ ಅವರ ವ್ಯಕ್ತಿತ್ವ ಮತ್ತು ಗುಣವನ್ನು ಕಂಡು ಮನಸೋತಿದ್ದರು.

ಧರ್ಮದ ಗೋಡೆ, ಹಿರಿಯರ ವಿರೋಧ:

ಇವರಿಬ್ಬರ ಪ್ರೀತಿಯ ಹಾದಿ ಸುಗಮವಾಗಿರಲಿಲ್ಲ. ಶಶಿ ಹಿಂದೂ ಧರ್ಮಕ್ಕೆ ಸೇರಿದವರಾದರೆ, ಗೌಸಿಯಾ ಮುಸ್ಲಿಂ ಸಮುದಾಯದವರು. ಇಬ್ಬರ ಧರ್ಮ ಬೇರೆ ಎಂಬ ಕಾರಣ ಒಂದು ಕಡೆಯಾದರೆ, ಯುವಕನ ಎತ್ತರ ಕಡಿಮೆ ಎಂಬುದು ಯುವತಿಯ ಮನೆಯವರ ತೀವ್ರ ವಿರೋಧಕ್ಕೆ ಕಾರಣವಾಯಿತು. ಕುಟುಂಬಸ್ಥರು ಮತ್ತು ಸಂಬಂಧಿಕರು ಇಬ್ಬರನ್ನೂ ಬೇರ್ಪಡಿಸಲು ಹರಸಾಹಸ ಪಟ್ಟಿದ್ದರು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ:

ಮನೆಯವರ ಒತ್ತಡ ಹೆಚ್ಚಾದಾಗ, ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಈ ಜೋಡಿ ಚರ್ಚ್‌ನಲ್ಲಿ ವಿವಾಹವಾದರು. ನಂತರ ರಕ್ಷಣೆ ಕೋರಿ ಇನುಕುದುರುಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಪೊಲೀಸರು ಎರಡೂ ಕುಟುಂಬದ ಹಿರಿಯರನ್ನು ಕರೆಸಿ ಕೌನ್ಸೆಲಿಂಗ್ ನಡೆಸಿದರು. ಕುಟುಂಬದವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಗೌಸಿಯಾ ಮಾತ್ರ “ನಾನು ನನ್ನ ಪತಿಯೊಂದಿಗೇ ಬಾಳುತ್ತೇನೆ” ಎಂದು ದೃಢವಾಗಿ ನಿರ್ಧರಿಸಿ ಎಲ್ಲರ ಅಚ್ಚರಿಗೆ ಕಾರಣರಾದರು. ದೈಹಿಕ ನ್ಯೂನತೆಯನ್ನು ಬದಿಗೊತ್ತಿ, ಪ್ರೀತಿಸಿದ ವ್ಯಕ್ತಿಯ ಜೀವನಕ್ಕೆ ಆಸರೆಯಾದ ಗೌಸಿಯಾ ಅವರ ಧೈರ್ಯಕ್ಕೆ ಈಗ ನೆಟ್ಟಿಗರು “ಇದೇ ನಿಜವಾದ ಪ್ರೀತಿ” ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಇಂಜಿನಿಯರ್; ಫೋಟೋ, ವೀಡಿಯೋ ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!

ರಾಯಚೂರು, ಏಪ್ರಿಲ್ 11: ಪ್ರೀತಿ, ಮದುವೆ ಹೆಸರಿನಲ್ಲಿ ವಂಚನೆ ಮಾಡಿದ ಆರೋಪದ ಮೇಲೆ ಇಂಜಿನಿಯರ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ರಾಯಚೂರು (Raichuru) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ದೇವದುರ್ಗ ಮೂಲದ ಮಲ್ಲಿಕಾರ್ಜುನ್ ಎಂಬ ಇಂಜಿನಿಯರ್ ವಿರುದ್ಧ ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಅತಿಥಿ ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.

ಬಲವಂತವಾಗಿ ಲೈಂಗಿಕ ಸಂಪರ್ಕ!

ಕಾಲೇಜು ದಿನಗಳಿಂದಲೇ ಜೊತೆಯಲ್ಲಿದ್ದ ಮಲ್ಲಿಕಾರ್ಜುನ್ ಮತ್ತು ಮಹಿಳೆ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೀಗೆ ಸುಮಾರು 7-8 ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿದ್ದು, ಮಂತ್ರಾಲಯ, ಆಲಮಟ್ಟಿ ಡ್ಯಾಂ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಓಡಾಡಿದ್ದರು ಎನ್ನಲಾಗಿದೆ. ಅಷ್ಟೆ ಅಲ್ಲದೆ ಮಹಿಳೆಗೆ ತಾನು ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿದ್ದ ಮಲ್ಲಿಕಾರ್ಜುನ್, ಹಲವು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪವನ್ನೂ ಶಿಕ್ಷಕಿ ಮಾಡಿದ್ದಾರೆ.

ಫೋಟೋ ವೀಡಿಯೋ ಸಮೇತ ದೂರು ದಾಖಲು

ಇಷ್ಟೆಲ್ಲ ಆದ ಬಳಿಕ ಈಗ ಇಬ್ಬರೂ ಬೇರೆ ಬೇರೆ ಜಾತಿಯವರೆಂದು ಸಬೂಬು ಹೇಳಿದ ಇಂಜಿನಿಯರ್, ಇನ್ನೂ ಹತ್ತು ಹಲವು ಕುಂಟು ನೆಪಗಳನ್ನು ಹೇಳಿ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಫೋಟೋ, ಆಡಿಯೋ, ವಿಡಿಯೋ ಹಾಗೂ ಮೆಸೇಜ್‌ಗಳೊಂದಿಗೆ ದೂರು ಸಲ್ಲಿಸಿದ್ದಾರೆ. ಸದ್ಯ ರಾಯಚೂರು ಮಹಿಳಾ ಠಾಣೆಯಲ್ಲಿ ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!

ಈ ಕುರಿತು ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಪ್ರತಿಕ್ರಿಯಿಸಿ, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. 7-8 ವರ್ಷಗಳ ಸಂಬಂಧದ ಬಗ್ಗೆ ವಿವರಗಳ ಪರಿಶೀಲನೆ ನಡೆಯುತ್ತಿದ್ದು, ಸತ್ಯಾಸತ್ಯತೆ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ ರಾಜ್​ ಬಿ ಶೆಟ್ಟಿ ನಟನೆಯ ‘ರಕ್ಕಸಪುರದೋಳ್’

ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿರುವ ಕನ್ನಡದ ಸೂಪರ್ ಹಿಟ್ ಚಿತ್ರ ‘ರಕ್ಕಸಪುರದೋಳ್’ ಅನ್ನು ತೆಲುಗು ಪ್ರೇಕ್ಷಕರಿಗೆ ಖ್ಯಾತ ನಿರ್ಮಾಪಕ ಕೆ.ಎಸ್.ರಾಮರಾವ್ ಅವರು ‘ರಾಕ್ಷಸಪುರಂ’ ಎಂಬ ಹೆಸರಿನಲ್ಲಿ ತರುತ್ತಿದ್ದಾರೆ. ಈ ಚಿತ್ರವನ್ನು ಕೆ.ಎನ್. ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ರವಿವರ್ಮ ನಿರ್ಮಿಸಿದ್ದಾರೆ. ಇದನ್ನು ರವಿ ಸಾರಂಗ ನಿರ್ದೇಶಿಸಿದ್ದಾರೆ. ಖ್ಯಾತ ನಿರ್ಮಾಪಕ ಕೆ.ಎಸ್.ರಾಮರಾವ್ ಪ್ರಸ್ತುತಪಡಿಸುತ್ತಿರುವ ರಾಕ್ಷಸಪುರಂ ಶೀಘ್ರದಲ್ಲೇ ಕ್ರಿಯೇಟಿವ್ ಕಮರ್ಷಿಯಲ್ಸ್ ಬ್ಯಾನರ್ ಅಡಿಯಲ್ಲಿ ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

ನಿರ್ಮಾಪಕ ಕೆ.ಎಸ್.ರಾಮರಾವ್ ಹೈದರಾಬಾದ್‌ನ ಎಫ್‌ಎನ್‌ಸಿಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ವಿವರಗಳನ್ನು ಹಂಚಿಕೊಂಡರು. ‘ನನ್ನ ವೃತ್ತಿಜೀವನ ಡಬ್ಬಿಂಗ್ ಚಿತ್ರದೊಂದಿಗೆ ಪ್ರಾರಂಭವಾಯಿತು. ನಾನು ಕಮಲ್ ಹಾಸನ್ ನಟಿಸಿದ ‘ಎರ್ರಾಗುಲಾಬೀಲು’ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದೆ. ಆ ಚಿತ್ರ ಭಾರಿ ಯಶಸ್ಸನ್ನು ಕಂಡಿತು. ಈಗನಾನು ನಮ್ಮ ಕ್ರಿಯೇಟಿವ್ ಕಮರ್ಷಿಯಲ್ಸ್ ಬ್ಯಾನರ್ ಅಡಿಯಲ್ಲಿ ರಕ್ಕಸಪುರದೋಳ್ ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ತರುತ್ತಿದ್ದೇನೆ’ ಎಂದು ರಾಮರಾವ್ ಹೇಳಿದರು.

‘ಈ ಚಿತ್ರವು ವಿಭಿನ್ನ ಕ್ರೈಮ್ ಥ್ರಿಲ್ಲರ್ ಆಗಿದೆ. ನಿರ್ದೇಶಕ ರವಿ ಸಾರಂಗ ಇದನ್ನು ಅದ್ಭುತವಾಗಿ ಮಾಡಿದ್ದಾರೆ. ನನ್ನ ಸ್ನೇಹಿತ ರವಿ ವರ್ಮ ಇದನ್ನು ನಿರ್ಮಿಸಿದ್ದಾರೆ. ಈ ಚಿತ್ರವನ್ನು ನೋಡಿದ ನಂತರ ನಾನು ಥ್ರಿಲ್ ಆಗಿದ್ದೆ. ನಾನು ನಿರ್ಮಾಪಕ ರವಿ ವರ್ಮಗೆ ಕರೆ ಮಾಡಿ ಈ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದೆ. ಈ ಚಿತ್ರದಲ್ಲಿ ನಾಯಕ ರಾಕ್ಷಸರನ್ನು ಕೊಲ್ಲುತ್ತಾನೆ. ಇದು ಒಂದು ಹಳ್ಳಿಯಲ್ಲಿ ನಡೆಯುತ್ತದೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: 25 ದಿನ ಪೂರೈಸಿ ಸೂಪರ್ ಹಿಟ್ ಎನಿಸಿಕೊಂಡ ‘ರಕ್ಕಸಪುರದೋಳ್’ ಸಿನಿಮಾ

‘1986 ರಲ್ಲಿ ನಾನು ಚಿರಂಜೀವಿ ಜೊತೆ ರಾಕ್ಷಸುಡು ಎಂಬ ಚಿತ್ರ ಮಾಡಿದೆ. ಆ ಚಿತ್ರದ ಶೀರ್ಷಿಕೆ ಕೆಲವರಿಗೆ ನಕಾರಾತ್ಮಕವಾಗಿ ಕಂಡಿತು. ಆದರೆ ನಾಯಕ ಮಾಡುವ ಎಲ್ಲವೂ ಚೆನ್ನಾಗಿದೆ, ಕಥೆಯೂ ಚೆನ್ನಾಗಿದೆ. ನಾಯಕ ಖಳನಾಯಕರಿಗೆ ದೈತ್ಯನಾಗಿರುವುದರಿಂದ ನಾವು ಆ ಶೀರ್ಷಿಕೆಯನ್ನು ನೀಡಿದ್ದೇವೆ. ಈ ರಾಕ್ಷಸಪುರಂನಲ್ಲಿಯೂ ನಾಯಕ ಖಳನಾಯಕರನ್ನು ರಾಕ್ಷಸರಂತೆ ಕೊಲ್ಲುತ್ತಾನೆ. ಇದು ವಿಭಿನ್ನ ಚಿತ್ರವಾದ್ದರಿಂದ, ಇದು ಈಗಿನ ಟ್ರೆಂಡ್‌ಗೆ ಇಷ್ಟವಾಗುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ ನಾವು ಈ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ನಿಮ್ಮೆಲ್ಲರೂ ಚಿತ್ರವನ್ನು ಬೆಂಬಲಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಕೆ.ಎಸ್. ರಾಮರಾವ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುವ ಅಭ್ಯಾಸವಿದ್ಯಾ… ಇದು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದಾ? ತಜ್ಞರ ಅಭಿಪ್ರಾಯವೇನು?

ಹಣ್ಣುಗಳು (Fruits) ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವುಗಳನ್ನು ಯಾವ ಸಮಯದಲ್ಲಿ ತಿನ್ನಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಾಗಾಗಿ ಕಂಡ ಕಂಡ ಸಮಯದಲ್ಲಿ ಸೇವನೆ ಮಾಡಿದಾಗ ಅದರಿಂದ ಸಿಗುವ ಲಾಭಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವನೆ ಮಾಡುವುದು ಒಳ್ಳೆಯದೇ ಅಥವಾ ತಪ್ಪೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ನೀಡಿರುವ ಸ್ಪಷ್ಟ ಮಾಹಿತಿ ಸ್ಟೋರಿಯಲ್ಲಿದೆ.

ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನಬಹುದೇ?

ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುವುದರಲ್ಲಿ ತಪ್ಪಿಲ್ಲ. ಆದರೆ ಯಾವ ಹಣ್ಣು ತಿನ್ನುತ್ತೀರಿ ಎಂಬುದು ಮುಖ್ಯವಾಗುತ್ತದೆ. ಸೇಬು, ಪಪ್ಪಾಯಿ, ಕರಬೂಜ್‌ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಆರೋಗ್ಯಕರ. ಆದರೆ ಬಾಳೆಹಣ್ಣು ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು.

ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವನೆ ಮಾಡುವುದರಿಂದ ಸಿಗುವ ಲಾಭಗಳು:

ಬೆಳಿಗ್ಗೆ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಸಕ್ರಿಯಗೊಳ್ಳುತ್ತದೆ. ಹಣ್ಣುಗಳು ಹಗುರವಾಗಿದ್ದು ಸುಲಭವಾಗಿ ಜೀರ್ಣವಾಗುತ್ತವೆ, ಇದರಿಂದ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ. ಹಣ್ಣುಗಳಲ್ಲಿ ಇರುವ ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆ. ಇದರಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗಿ ಅನಗತ್ಯವಾಗಿ ಮತ್ತೆ ಮತ್ತೆ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಹಣ್ಣು vs ಹಣ್ಣಿನ ಜ್ಯೂಸ್‌; ಇವೆರಡರಲ್ಲಿ ಯಾವುದರ ಸೇವನೆ ಬೆಸ್ಟ್‌

ಎಲ್ಲರಿಗೂ ಸೂಕ್ತವೇ?

ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುವುದು ಎಲ್ಲರಿಗೂ ಸೂಕ್ತವಲ್ಲ. ಅಜೀರ್ಣ, ಆಸಿಡ್ ಸಮಸ್ಯೆ ಸಮಸ್ಯೆಯಿರುವವರಿಗೆ ಇದು ಒಳ್ಳೆಯದಲ್ಲ. ವಿಶೇಷವಾಗಿ ಕಿತ್ತಳೆ ಮತ್ತು ಬಾಳೆಹಣ್ಣು ಇಂತಹವರಿಗೆ ಹೊಟ್ಟೆ ನೋವು ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಇಂತಹವರು ಮಿತ ಪ್ರಮಾಣದಲ್ಲಿ ಪಪ್ಪಾಯಿ ಹಣ್ಣು ಸೇವಿಸುವುದು ಉತ್ತಮ.

ಸರಿಯಾದ ವಿಧಾನ ಯಾವುದು?

ಹಣ್ಣುಗಳನ್ನು ಸದಾ ತಾಜಾ ರೂಪದಲ್ಲೇ ತಿನ್ನಬೇಕು. ಜ್ಯೂಸ್ ಮಾಡುವುದಕ್ಕಿಂತ ಹಣ್ಣು ತಿನ್ನುವುದು ಹೆಚ್ಚು ಲಾಭಕರ. ಆದರೆ ಒಂದೇ ವೇಳೆ ಎಲ್ಲಾ ರೀತಿಯ ಹಣ್ಣುಗಳನ್ನು ಮಿಶ್ರಣ ಮಾಡಿ ಹೆಚ್ಚೆಚ್ಚು ಪ್ರಮಾಣದಲ್ಲಿ ತಿನ್ನುವುದನ್ನು ತಪ್ಪಿಸಬೇಕು. ಹಣ್ಣು ತಿಂದ ತಕ್ಷಣವೇ ಊಟ ಮಾಡುವುದೂ ಕೂಡ ಸರಿಯಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಬೆಳಗಾವಿ, ಏಪ್ರಿಲ್ 11: ಬೆಳಗಾವಿಯ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಜಯಸಿಂಗ್ ರಜಪೂತಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯಗೊಂಡಿದ್ದು, ತನಿಖೆ ವೇಳೆ ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬೆಳಗಾವಿಯ ಆಂಜನೇಯ ನಗರ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಈ ವೇಳೆ 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಇದಲ್ಲದೆ 3.12 ಕೋಟಿ ರೂಪಾಯಿ ಬ್ಯಾಂಕ್ ಡೆಪಾಸಿಟ್ ಇಟ್ಟಿರುವುದು ಬೆಳಕಿಗೆ ಬಂದಿದೆ. ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿಯ ವಿವಿಧೆಡೆ ಒಟ್ಟು 18 ನಿವೇಶನಗಳನ್ನು ಅಜಯಸಿಂಗ್ ಖರೀದಿಸಿರುವುದು ದಾಖಲೆಗಳಿಂದ ಸಾಬೀತಾಗಿದೆ. ಮನೆಯಲ್ಲಿ ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ನೀಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಅಜಯಸಿಂಗ್ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸದ್ಯಕ್ಕೆ ಎಲ್ಲಾ ದಾಖಲೆಗಳು ಮತ್ತು ನಗದನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಸೋತ RCBಗೆ ನಾಳೆ ಮತ್ತೆ ಪಂದ್ಯ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಮೂರು ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ್ದ ಆರ್​ಸಿಬಿ, ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್​ಗಳಿಂದ ಬಗ್ಗು ಬಡಿದಿದ್ದರು. ಆದರೆ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿದೆ.

ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 201 ರನ್​ಗಳು. 202 ರನ್​ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ 18 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಆರ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇತ್ತ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 4ನೇ ಪಂದ್ಯಕ್ಕಾಗಿ ಸಜ್ಜಾಗಬೇಕಿದೆ. ಅದು ಕೂಡ ಒಂದೇ ದಿನದ ಅಂತರದಲ್ಲಿ. ಅಂದರೆ ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ನಾಳೆ (ಏ.12) ಆಡಲಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಶನಿವಾರ ಆರ್​ಸಿಬಿ ತಂಡ ಮುಂಬೈಗೆ ಬಂದಿಳಿಯಲಿದೆ. ಅಂದರೆ ಇಲ್ಲಿ ಆರ್​ಸಿಬಿ ತಂಡಕ್ಕೆ ಅಭ್ಯಾಸ ನಡೆಸಲು ಕೇವಲ ಒಂದು ದಿನ ಮಾತ್ರ ಸಿಗಲಿದೆ.

ಇತ್ತ ಮೊದಲ ವಾರದಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದ ಆರ್​ಸಿಬಿ ಇದೀಗ ಬ್ಯಾಕ್ ಟು ಬ್ಯಾಕ್ ಎರಡು ಮ್ಯಾಚ್​ಗಳನ್ನಾಡಬೇಕಿದೆ. ಅದರಂತೆ ಈಗಾಗಲೇ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಗಿಸಿ ಆರ್​ಸಿಬಿ ಪಡೆ ಮುಂಬೈಗೆ ಪ್ರಯಾಣಿಸಿದ್ದು, ನಾಳೆ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಅತ್ತ ಮುಂಬೈ ಇಂಡಿಯನ್ಸ್ ತಂಡವು ಕಳೆದ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 27 ರನ್​ಗಳಿಂದ ಸೋಲನುಭವಿಸಿತ್ತು. ಇದೀಗ ಆರ್​ಸಿಬಿ ತಂಡ ಕೂಡ ಆರ್​ಆರ್ ವಿರುದ್ಧವೇ ಸೋತು ಮುಂದಿನ ಮ್ಯಾಚ್​ಗಾಗಿ ಸಜ್ಜಾಗಿದೆ. ಅಂದರೆ ಇಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊನೆಯ ಪಂದ್ಯಗಳಲ್ಲಿ ಸೋತಿರುವ ಎರಡು ಟೀಮ್​ಗಳು ಮುಖಾಮುಖಿಯಾಗುತ್ತಿರುವುದು ವಿಶೇಷ.

ಹೀಗಾಗಿ ಈ ಪಂದ್ಯದ ಮೂಲಕ ಒಂದು ತಂಡವು ಗೆಲುವಿನ ಲಯಕ್ಕೆ ಮರಳಲಿದೆ. ಆ ತಂಡ ಮುಂಬೈ ಇಂಡಿಯನ್ಸ್ ಆಗಿರಲಿದೆಯಾ ಅಥವಾ ಆರ್​ಸಿಬಿ ಆಗಲಿದೆಯಾ ಎಂಬುದು ಖಚಿತವಾಗಲು ನಾಳೆಯ ಪಂದ್ಯ ಮುಗಿಯುವವರೆಗೆ ಕಾಯಲೇಬೇಕು.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್‌, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್​ಫೋರ್ಡ್​,​  ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.

ಇದನ್ನೂ ಓದಿ: ಬೌಲರ್ ಯಾರೇ ಇರಲಿ… RCB ಪಂದ್ಯದ ಬಳಿಕ ವೈಭವ್ ಎಚ್ಚರಿಕೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

 

Source link

Avoid Loud Voice: ಈ ಸ್ಥಳಗಳಲ್ಲಿ ಎಂದಿಗೂ ಏರು ಧ್ವನಿಯಲ್ಲಿ ಮಾತನಾಡಲೇಬೇಡಿ; ಕಾರಣ ಇಲ್ಲಿದೆ

ಹಿಂದೂ ಸನಾತನ ಸಂಸ್ಕೃತಿಯಲ್ಲಿನ ಸಂಪ್ರದಾಯ, ಪದ್ಧತಿ ಮತ್ತು ವಿಧಿವಿಧಾನಗಳನ್ನು ಅನುಸರಿಸುವುದರಿಂದ ತಾಳ್ಮೆ, ಸಹನೆ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದು ನಮ್ಮ ಮನಸ್ಸನ್ನು ಪ್ರಶಾಂತವಾಗಿಡಲು ಸಹಾಯ ಮಾಡುತ್ತದೆ. ಆಹಾರ, ಮಾತು, ಕಾರ್ಯಕ್ರಮಗಳು ಮತ್ತು ಮನಸ್ಸಿನ ಭಾವನೆಗಳು ನಮ್ಮ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಉತ್ತಮ ಪದ್ಧತಿಗಳು ಆಯಸ್ಸನ್ನು ಹೆಚ್ಚಿಸಿದರೆ, ನಕಾರಾತ್ಮಕ ಪದ್ಧತಿಗಳು ಅದನ್ನು ಕಡಿಮೆ ಮಾಡಬಹುದು. ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮಿಗಳು 110 ವರ್ಷಗಳ ಕಾಲ ಜೀವಿಸಿದ್ದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮೃದು ಮಾತಿನ ಪ್ರಾಮುಖ್ಯತೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ನಮ್ಮ ಮಾತಿನ ಕ್ರಮವು ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಮಾತು ಸೌಮ್ಯವೋ, ಗಟ್ಟಿಯೋ ಅಥವಾ ಜೋರಾಗಿದೆಯೋ ಎಂಬುದು ಮುಖ್ಯ. ಕೆಲವರು ಮೃದುವಾಗಿ ಮಾತನಾಡಿದರೆ, ಕೆಲವರು ಅದೇ ಮಾತನ್ನು ಜೋರಾಗಿ ಹೇಳುತ್ತಾರೆ ಅಥವಾ ಕಿರುಚುತ್ತಾರೆ. ಅರಚುವುದು, ಕಿರುಚುವುದು, ಗಟ್ಟಿಯಾಗಿ ಕೂಗುವುದು ಅಥವಾ ಜೋರು ಧ್ವನಿಯಲ್ಲಿ ಮಾತನಾಡುವುದು ಕೆಲವು ಸ್ಥಳಗಳಲ್ಲಿ ಸೂಕ್ತವಲ್ಲ. ಇಂತಹ ಜಾಗಗಳಲ್ಲಿ ತಾಳ್ಮೆಯಿಂದ, ಸಹನೆಯಿಂದ ಮತ್ತು ನಿಧಾನವಾಗಿ ಮಾತನಾಡಬೇಕು.

ಏರು ಧ್ವನಿಯಲ್ಲಿ ಎಲ್ಲಿ ಮಾತನಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ:

ಶಿಕ್ಷಣ ಸಂಸ್ಥೆಗಳು:

ಯಾವುದೇ ಶಾಲಾ, ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ವಿದ್ಯೆ ಕಲಿಸುವ ಸ್ಥಳದಲ್ಲಿ ನಾವು ಸೌಮ್ಯವಾಗಿ, ತಾಳ್ಮೆಯಿಂದ ಮತ್ತು ನಿಧಾನವಾಗಿ ಮಾತನಾಡಬೇಕು. ಇಲ್ಲಿ ಜೋರಾಗಿ ಮಾತನಾಡಿದಾಗ ನಮ್ಮ ಜ್ಞಾನ ಕುಂಠಿತವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ನ್ಯೂಟನ್‌ನ ಮೂರನೇ ನಿಯಮದಂತೆ, ನಾವು ನೀಡುವ ಆಕ್ಷನ್‌ಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಜೋರಾದ ಮಾತು ಜ್ಞಾನದ ಇಳಿಕೆಗೆ ಕಾರಣವಾಗಬಹುದು.

ಆಸ್ಪತ್ರೆಗಳು:

ಚಿಕ್ಕ ಕ್ಲಿನಿಕ್ ಇರಲಿ ಅಥವಾ ದೊಡ್ಡ ಆಸ್ಪತ್ರೆ ಇರಲಿ, ಚಿಕಿತ್ಸೆ ನೀಡುವ ಯಾವುದೇ ಸ್ಥಳದಲ್ಲಿ ಗಟ್ಟಿಯಾಗಿ ಮಾತನಾಡುವುದು ಶುಭವಲ್ಲ. ಇದು ಅನಾರೋಗ್ಯವನ್ನು ಉಲ್ಬಣಗೊಳಿಸಬಹುದು. ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ಪರಿಗಣಿಸಲಾಗುತ್ತದೆ. ಅವರೊಂದಿಗೆ ಮೃದುವಾಗಿ ಮಾತನಾಡುವುದು ನಮಗೂ, ರೋಗಿಗಳಿಗೂ ಒಳಿತು.

ಹಣ ಕೊಡಬೇಕಾದವರ ಬಳಿ:

ಯಾರಿಂದಲಾದರೂ ಹಣ ಪಡೆಯಬೇಕಾದಾಗ ಅಥವಾ ಹಣಕಾಸಿನ ವ್ಯವಹಾರ ನಡೆಸುವಾಗ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಬಾರದು. ಇದು ಸಮಸ್ಯೆಯನ್ನು ಹೆಚ್ಚಿಸಬಹುದು ಮತ್ತು ಸಂಬಂಧಗಳನ್ನು ಹದಗೆಡಿಸಬಹುದು. ಮುಳ್ಳಿನ ಮೇಲೆ ಬಟ್ಟೆ ಹಾಕಿದಂತೆ ಎಂಬಂತೆ ಇಂತಹ ವ್ಯವಹಾರಗಳನ್ನು ನಿಧಾನವಾಗಿ ನಿರ್ವಹಿಸಬೇಕು.

ಪೂಜಾ ಕೊಠಡಿ:

ಪೂಜೆ ಮಾಡುವಾಗ ಜೋರಾದ ಧ್ವನಿಯಲ್ಲಿ ಮಾತನಾಡುವುದು ಏಕಾಗ್ರತೆಗೆ ಭಂಗ ತರುತ್ತದೆ. ಇದರಿಂದ ಪೂಜೆಯ ಸಫಲತೆ ಕಡಿಮೆಯಾಗಿ, ದೈವಿಕ ಬಾಂಧವ್ಯ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ನಿರ್ವಿಘ್ನಗಳು ಸಹ ಉಂಟಾಗಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ದಂಪತಿಗಳ ನಡುವೆ:

ಗಂಡ-ಹೆಂಡತಿ ಪರಸ್ಪರ ಸೌಮ್ಯವಾಗಿ ಮಾತನಾಡಬೇಕು. ಹೆಂಡತಿಯನ್ನು ಗುಲಾಮರಂತೆ ನೋಡುವ ಅಥವಾ ಗಂಡನ ಜವಾಬ್ದಾರಿಯನ್ನು ಅಹಂನಿಂದ ನಿರ್ವಹಿಸುವ ಪ್ರವೃತ್ತಿ ಸರಿಯಲ್ಲ. ಸೌಮ್ಯ ಸಂವಹನ ಇಲ್ಲದಿದ್ದರೆ ಸಂಸಾರ ನೌಕೆ ಕಷ್ಟಗಳ ಸುಳಿಯಲ್ಲಿ ಸಿಲುಕಬಹುದು.

ಮೇಲಧಿಕಾರಿಗಳೊಂದಿಗೆ:

ನಿಮ್ಮ ಮೇಲಧಿಕಾರಿಗಳ ಶೈಕ್ಷಣಿಕ ಅರ್ಹತೆ ಏನೇ ಇರಲಿ, ಅವರೊಂದಿಗೆ ಸೌಮ್ಯವಾಗಿ ಮಾತನಾಡುವುದು ವೃತ್ತಿಜೀವನದಲ್ಲಿ ಪೂರ್ಣತೆಯನ್ನು ನೀಡುತ್ತದೆ. ಇದು ಕಚೇರಿಯಲ್ಲಿ ಸುಲಲಿತ ವಾತಾವರಣಕ್ಕೆ ಸಹಕಾರಿ.

ಮಕ್ಕಳೊಂದಿಗೆ:

ಮಕ್ಕಳೊಂದಿಗೆ ಅವರ ವಯಸ್ಸಿಗೆ ಅನುಗುಣವಾಗಿ ವಿಭಿನ್ನವಾಗಿ ಸಂವಹನ ಮಾಡಬೇಕು. ಪುಟ್ಟ ಮಕ್ಕಳಿದ್ದಾಗ ಪ್ರೀತಿಯಿಂದ ಮಾತನಾಡಿದರೆ, ದೊಡ್ಡವರಾದಾಗ ಸ್ನೇಹಿತರಂತೆ ಮೃದುವಾಗಿ ಮಾತನಾಡಬೇಕು. ಇದು ಸೌಹಾರ್ದಯುತ ಸಂಬಂಧಗಳನ್ನು ಬೆಳೆಸುತ್ತದೆ.

ಈ ಎಲ್ಲಾ ಸಂದರ್ಭಗಳಲ್ಲಿ ಮೃದು ಮಾತು ನಮ್ಮ ಜೀವನಕ್ಕೆ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Safe Motherhood Day 2026: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುವುದೇಕೆ ಗೊತ್ತಾ?

ತಾಯ್ತನ (Motherhood) ಎನ್ನುವಂತಹದ್ದು ಸುಂದರ ಅನುಭೂತಿಯಾಗಿದ್ದು, ಎಲ್ಲಾ ಹೆಣ್ಣಿಗೂ ತಾನು ಸಹ ಗರ್ಭಿಣಿಯಾಗಬೇಕು, ಮಗುವನ್ನು ಪಡೆಯಬೇಕು, ಮಗುವನ್ನು ಚೆನ್ನಾಗಿ ಆರೈಕೆ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ.  ಆದರೆ ಮಗವನ್ನು ಹೆತ್ತರೂ ಸಹ ತಮ್ಮನ್ನು ತಾವು ಹೇಗೆ ಆರೈಕೆ ಮಾಡಬೇಕು ಎನ್ನುವ ಕೊರತೆ ಕೆಲವು ಮಹಿಳೆಯರಿಗೆ ಇರುತ್ತದೆ. ಅಲ್ಲದೆ ಕೆಲವು ಮನೆಗಳಲ್ಲಿ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಗರ್ಭಿಣಿಯಾಗಿರುವಾಗ ಹಾಗೂ ಪ್ರಸವದ ಬಳಿಕ ಎಲ್ಲಾ ತಾಯಂದಿರಲ್ಲಿ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ತಾಯಂದಿರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅತ್ಯಗತ್ಯ. ಆದರೆ ಈ ಆರೈಕೆಯ ಕೊರತೆಯಿಂದಾಗಿ ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆಯ ನಂತರದ ಆರೋಗ್ಯ ಸಮಸ್ಯೆಗಳಿಂದ ಮಹಿಳೆಯರು ಮರಣ ಹೊಂದುತ್ತಿದ್ದಾರೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಪ್ರಸವದ ನಂತರದ ತಾಯಂದಿರಿಗೆ ನೀಡಬೇಕಾದ ಅಗತ್ಯ ಆರೈಕೆಯ ಬಗ್ಗೆ ಅರಿವು ಮೂಡಿಸಲು ಹಾಗೂ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್‌ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನದ ಇತಿಹಾಸವೇನು?

ರಾಷ್ಟ್ರೀಯ ಮಾತೃತ್ವ ದಿನದ ಆಚರಣೆ ‘ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾದ’ ಪ್ರಯತ್ನದ ಫಲವಾಗಿದೆ. ಭಾರತ ಸರ್ಕಾರವು ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾದ ಪ್ರಸ್ತಾವನೆಯ ಮೇರೆಗೆ 2003 ರಲ್ಲಿ ಏಪ್ರಿಲ್‌ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವದ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಏಪ್ರಿಲ್‌ 13 ಮಹಾತ್ಮ ಗಾಂಧೀಜಿಯ ಪತ್ನಿ ಕಸ್ತೂರ್‌ಬಾ ಗಾಂಧಿಯವರ ಜನ್ಮ ದಿನವಾಗಿರುವುದರಿಂದ, ಅವರ ಜನ್ಮ ದಿನದ ಸ್ಮರಣಾರ್ಥವಾಗಿ ಇದೇ ದಿನವನ್ನು ಆಯ್ಕೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆಯ ನಂತರದ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ಏಪ್ರಿಲ್‌ 5ರಂದೇ ರಾಷ್ಟ್ರೀಯ ಕಡಲ ದಿನವನ್ನು ಆಚರಿಸುವುದು ಏಕೆ?

ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನದ ಮಹತ್ವವೇನು?

  • ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವು ಭಾರತದಲ್ಲಿ ಗರ್ಭಿಣಿ ಮಹಿಳೆಯರು, ತಾಯಂದಿರು ಎದುರಿಸುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
  • ನವಜಾತ ಶಿಶುವಿನೊಂದಿದೆ ತಾಯಂದಿರ ಆರೋಗ್ಯವನ್ನು ಉತ್ತೇಜಿಸುವ, ಗರ್ಭಿಣಿಯರಿಗೆ ಸಕಾಲಿಕ ಆರೋಗ್ಯ ಸೇವೆಗಳನ್ನು ಒದಗಿಸುವ,  ಅವರ ಕುಟುಂಬಗಳಿಗೆ ಸುರಕ್ಷಿತ ಗರ್ಭಧಾರಣೆಯ ಬಗ್ಗೆ ಶಿಕ್ಷಣ ನೀಡುವ ಹಾಗೂ  ಭಾರತದಲ್ಲಿ ತಾಯಂದಿರು ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಮುಖ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
  • ಮಹಿಳೆಯರಿಗೆ ತಮ್ಮ ಮಾತೃತ್ವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ತಾಯಂದಿರಿಗಾಗಿ ಇರುವ  ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು ಈ ದಿನದ ಉದ್ದೇಶವಾಗಿದೆ.
  • ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವು ತಾಯಿಯ ಆರೋಗ್ಯವನ್ನು ಉತ್ತೇಜಿಸುವ, ತಾಯಿ ಹಾಗೂ ನವಜಾತ ಶಿಶುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ಭಾರತದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಮುಖ ಆಚರಣೆಯಾಗಿದೆ.
  • ಈ ದಿನ ತಾಯಿಯ ಆರೋಗ್ಯದ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡಲು ವಿವಿಧ  ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version