ಆಟೋ ಚಾಲಕನ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಆರನೇ ರ್ಯಾಂಕ್!

ಆಟೋ ಚಾಲಕನ ಮಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೇ ಆರನೇ ರ್ಯಾಂಕ್!

ರಾಯಚೂರು, ಏಪ್ರಿಲ್ 11: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (PUC results) ಉತ್ತಮ ಶ್ರೇಣಿಯಲ್ಲಿ ಪಾಸಾದವರು ಹಲವರಿದ್ದಾರೆ. ಅದರಲ್ಲಿ ರಾಯಚೂರಿನ ಒಬ್ಬ ಬಡ ವಿದ್ಯಾರ್ಥಿಯ ಸಾಧನೆಯೂ ಸೇರಿದೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಕಷ್ಟ ಪಟ್ಟು ಓದಿದರೆ ಯಾವುದೂ ಅಸಾಧ್ಯವಲ್ಲವೆಂದು ಈ ವಿದ್ಯಾರ್ಥಿ ಸಾಧಿಸಿ ತೋರಿಸಿದ್ದಾನೆ. ರಾಜ್ಯಕ್ಕೇ ಆರನೆ ಸ್ಥಾನ ಪಡೆದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾರ್ಥಕತೆ ಮೆರೆದಿದ್ದಾನೆ.

ತಂದೆಯ ಕಷ್ಟದ ಜೀವನವೇ ಸಾಧನೆಗೆ ಇಂಧನ!

ಆಟೋ ಚಾಲಕರಾದ ಹನಮಂತು ಅವರ ಮಗನಾದ ವಿಕಾಸ್, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಆರನೇ ರ್ಯಾಂಕ್ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ. ಜಿಲ್ಲೆಯ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ, 600ರಲ್ಲಿ 594 ಅಂಕಗಳನ್ನು ಗಳಿಸಿ ಶೇ99 ಫಲಿತಾಂಶ ಸಾಧಿಸಿದ್ದಾನೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರೂ ತಂದೆಯ ಶ್ರಮವನ್ನು ನೋಡಿ ಏನಾದರೂ ಸಾಧಿಸಬೇಕು ಎಂಬ ದೃಢಸಂಕಲ್ಪದಿಂದ, ಪರಿಶ್ರಮದಿಂದ ಓದಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ.

ಇದನ್ನೂ ಓದಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಹಾ ಎಡವಟ್ಟು! 600ಕ್ಕೆ 683 ಅಂಕ ನೀಡಿದ ಬೋರ್ಡ್​!

ಸಾಲ ಮಾಡಿ ಓದಿಸಿದ್ದಕ್ಕೂ ಸಾರ್ಥಕವಾಯ್ತು ಎಂದ ಪೋಷಕರು!

ಮಗನ ಸಾಧನೆ ಕಂಡು ಕುಟುಂಬಸ್ಥರು ಆನಂದಭಾಷ್ಪ ಸುರಿಸಿದ್ದಾರೆ. ಟಿವಿ9 ಜೊತೆ ಮಾತನಾಡಿತ ವಿಕಾಸ್​ ತಂದೆ-ತಾಯಿ ಭಾವುಕರಾಗಿ, ಸಾಲ ಮಾಡಿ ಓದಿಸಿದ್ದ ಮಗ ಇಷ್ಟು ದೊಡ್ಡ ಸಾಧನೆ ಮಾಡಿದಿದ್ದಾನೆ. ಇದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ವಿಕಾಸ್ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಸಂಕಷ್ಟಗಳ ನಡುವೆಯೂ ಗುರಿ ಸಾಧಿಸಬಹುದೆಂಬ ನಂಬಿಕೆಯನ್ನು ಬಲಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ಗಗನಯಾತ್ರಿಗಳ ತಂಡ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಕ್ಯಾಲಿಫೋರ್ನಿಯಾ, ಏಪ್ರಿಲ್ 11: ಸುಮಾರು ಐದು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಚಂದ್ರನತ್ತ ಪ್ರಯಾಣ ಬೆಳೆಸಿದ್ದ ನಾಸಾದ ‘ಆರ್ಟೆಮಿಸ್-2 (Artemis II)’ ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಭೂಮಿಗೆ ಮರಳಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಒರಿಯಾನ್ ಕ್ಯಾಪ್ಸೂಲ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದೆ (Splashdown). ಈ ತಂಡವು ಚಂದ್ರನ ಅಂಗಳಕ್ಕೆ ಇಳಿಯದಿದ್ದರೂ, ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕಿ ಭವಿಷ್ಯದ ಮಾನವ ಚಂದ್ರಯಾನ ಯೋಜನೆಗಳಿಗೆ ಪೂರಕವಾದ ಮಹತ್ವದ ಅಧ್ಯಯನ ಮತ್ತು ತಾಂತ್ರಿಕ ಪರಿಶೀಲನೆಗಳನ್ನು ನಡೆಸಿ ಬಂದಿದೆ. ಇದು ಚಂದ್ರನ ಮೇಲೆ ಮಾನವನನ್ನು ಮತ್ತೆ ಇಳಿಸುವ ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗೆ ಬಲ ನೀಡಿದೆ. ಸುರಕ್ಷಿತವಾಗಿ ಮರಳಿದ ಗಗನಯಾತ್ರಿಗಳನ್ನು ನಾಸಾ ವಿಜ್ಞಾನಿಗಳು ಮತ್ತು ನೌಕಾಪಡೆಯ ತಂಡ ಸಂಭ್ರಮದಿಂದ ಸ್ವಾಗತಿಸಿತು. ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ಆರ್ಟೆಮಿಸ್-3 ಮಿಷನ್‌ಗೆ ಈ ಯಶಸ್ಸು ಭದ್ರ ಬುನಾದಿ ಹಾಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: RCB ಸೋಲಿಗೆ ಈ 5 ಅಂಶಗಳೇ ಕಾರಣ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ್ ತಂಡ ಇನ್ನು 12 ಎಸೆತಗಳು ಬಾಕಿ ಇರುವಂತೆಯೇ ತಲುಪಿದೆ. ಈ ಮೂಲಕ 6 ವಿಕೆಟ್​ಗಳ ಜಯ ಸಾಧಿಸಿದೆ.

ಇತ್ತ ಆರ್​ಸಿಬಿ ತಂಡವು ಬೃಹತ್ ಮೊತ್ತ ಪೇರಿಸಿದರೂ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದಿರುವುದು ಅಚ್ಚರಿ. ಅಂದರೆ ಆರ್​ಸಿಬಿಗಿಂತ ರಾಜಸ್ಥಾನ್ ರಾಯಲ್ಸ್ ತಂಡವು ಅತ್ಯುತ್ತಮವಾಗಿ ಆಡಿರುವುದು ಸ್ಪಷ್ಟ. ಈ ಭರ್ಜರಿ ಆಟದೊಂದಿಗೆ ಆರ್​ಸಿಬಿ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಗಿನಂತಿದೆ…

ವೈಭವ್ ಸೂರ್ಯವಂಶಿ ಬಿರುಗಾಳಿ: ರಾಜಸ್ಥಾನ್ ರಾಯಲ್ಸ್​ ತಂಡದ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ (7 ಸಿಕ್ಸರ್, 8 ಬೌಂಡರಿ) ಸಿಡಿಸಿ ಆರ್‌ಸಿಬಿ ಬೌಲರ್‌ಗಳನ್ನು ಕಂಗೆಡಿಸಿದರು. ಪವರ್‌ಪ್ಲೇನಲ್ಲಿ ಅವರು ನೀಡಿದ ಈ ಸ್ಫೋಟಕ ಆರಂಭವೇ ಪಂದ್ಯದ ದಿಕ್ಕನ್ನು ಬದಲಿಸಿತು.

ಧ್ರುವ್ ಜುರೆಲ್ ಜವಾಬ್ದಾರಿಯುತ ಆಟ: ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಾಗ ಧ್ರುವ್ ಜುರೆಲ್ ಅಜೇಯ 81* ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರ ಸ್ಥಿರ ಆಟದಿಂದಾಗಿ ರಾಜಸ್ಥಾನ್ ರಾಯಲ್ಸ್​ ತಂಡ ಸುಲಭವಾಗಿ ಗುರಿ ತಲುಪಲು ಸಾಧ್ಯವಾಯಿತು.

ದುಬಾರಿಯಾದ ಬೌಲಿಂಗ್: ಆರ್‌ಸಿಬಿ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾದರು. ಅದರಲ್ಲೂ ಅಭಿನಂದನ್ ಸಿಂಗ್ 3 ಓವರ್‌ಗಳಲ್ಲಿ 54 ರನ್ ನೀಡಿ ಅತ್ಯಂತ ದುಬಾರಿಯಾದರು. ಪಂದ್ಯದ ನಂತರ ಮಾತನಾಡಿದ ನಾಯಕ ರಜತ್ ಪಾಟಿದಾರ್, ಬೌಲಿಂಗ್ ವೈಫಲ್ಯವೇ ಸೋಲಿಗೆ ಮುಖ್ಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದ ಕುಸಿತ: ಬ್ಯಾಟಿಂಗ್ ವೇಳೆ ಒಂದು ಹಂತದಲ್ಲಿ ಆರ್‌ಸಿಬಿ 94 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ಅವರ ಸ್ಪಿನ್ ದಾಳಿಗೆ ಬ್ಯಾಟರ್‌ಗಳು ತತ್ತರಿಸಿದರು. ಅಂತಿಮವಾಗಿ ವೆಂಕಟೇಶ್ ಅಯ್ಯರ್ ಅವರ ಅಬ್ಬರದಿಂದಾಗಿ ತಂಡ 200ರ ಗಡಿ ದಾಟಿತು.

ಪವರ್​ಪ್ಲೇನಲ್ಲಿ ಇಲ್ಲದ ಪವರ್​: ಆರ್​ಸಿಬಿ ತಂಡವು ಪವರ್​ಪ್ಲೇನಲ್ಲಿ ಪವರ್​ ತೋರಿಸುವಲ್ಲಿ ವಿಫಲವಾಗಿದ್ದರು. ಅಂದರೆ ಮೊದಲ 6 ಓವರ್​ಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು 61 ರನ್​ಗಳು. ಈ 61 ರನ್​ಗಳಲ್ಲಿ ಒಂದೇ ಒಂದು ಸಿಕ್ಸ್​ ಇರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಪವರ್​ಪ್ಲೇನಲ್ಲಿ ಬಿಗ್ ಹಿಟ್​ಗಳ ಮೂಲಕ ಆರ್​ಸಿಬಿ ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಗಿದ್ದಾರೆ ಎಂದೇ ಹೇಳಬಹುದು.

ಈ ಕಾರಣಗಳಿಂದಾಗಿ ಆರ್​ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿದೆ. ಈ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಅಚ್ಚರಿ ಎನಿಸಿದರೂ ಸತ್ಯ… ಒಂದು ಸಿಕ್ಸ್​​ಗಾಗಿ 11.3 ಓವರ್​ ಆಡಿದ RCB

ಪಂದ್ಯದ ಸಂಕ್ಷಿಪ್ತ ಸ್ಕೋರ್:

  • ರಾಯಲ್ ಚಾಲೆಂಜರ್ಸ್​ ಬೆಂಗಳೂರು: 201/8 (20 ಓವರ್) – ರಜತ್ ಪಾಟಿದಾರ್ 63, ವೆಂಕಟೇಶ್ ಅಯ್ಯರ್ 29*.
  • ರಾಜಸ್ಥಾನ್ ರಾಯಲ್ಸ್: 202/4 (18 ಓವರ್) – ಧ್ರುವ್ ಜುರೆಲ್ 81*, ವೈಭವ್ ಸೂರ್ಯವಂಶಿ 78.

Source link

‘ಗೇಮ್ ಆಫ್ ಥ್ರೋನ್ಸ್’ ಸರಣಿಯಲ್ಲಿ ನಟಿಸಿದ ಕಲಾವಿದ ನಿಧನ

ಜನಪ್ರಿಯ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ನಲ್ಲಿ ಪಾತ್ರ ಒಂದನ್ನು ಮಾಡಿದ್ದ ನಟ ಮೈಕೆಲ್ ಪ್ಯಾಟ್ರಿಕ್ ನಿಧನರಾಗಿದ್ದಾರೆ. ಅವರು ಕೇವಲ 35 ನೇ ವಯಸ್ಸಿನಲ್ಲಿ ಈ ಲೋಕಕ್ಕೆ ಕೊನೆಯ ವಿದಾಯ ಹೇಳಿದರು. ಮೋಟಾರ್ ನ್ಯೂರಾನ್ ಕಾಯಿಲೆಯೊಂದಿಗೆ ದೀರ್ಘ ಹೋರಾಟದ ನಂತರ ಅವರು ಅಂತಿಮವಾಗಿ ನಿಧನರಾದರು. ಮೈಕೆಲ್‌ಗೆ ಸುಮಾರು ಮೂರು ವರ್ಷಗಳ ಹಿಂದೆ ಅಂದರೆ ಫೆಬ್ರವರಿ 2023ರಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಯಿತು. ಇದು ಉಸಿರಾಟ, ಮಾತನಾಡುವುದು ಮತ್ತು ನಡೆದಾಡುವ ಅಗತ್ಯ ಕಾರ್ಯಗಳಿಗೆ ಕಾರಣವಾಗಿರುವ ನರ ಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ. ಮೈಕೆಲ್ ಅವರ ಪತ್ನಿ ನವೋಮಿ ಶೀಹನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನವೋಮಿ ಮೈಕೆಲ್ ಜೊತೆಗಿನ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಮೈಕೆಲ್ ಉತ್ತರ ಐರ್ಲೆಂಡ್ ಹಾಸ್ಪಿಟಲ್​ನಲ್ಲಿ ನಿಧನರಾದರು. ಅವರಿಗೆ ಫೆಬ್ರವರಿ 1, 2023 ರಂದು ಮೋಟಾರ್ ನ್ಯೂರಾನ್ ಕಾಯಿಲೆ ಇರುವುದು ಪತ್ತೆಯಾಯಿತು. ಕೇವಲ ಹತ್ತು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಅವರು ಬರೆದಿದ್ದಾರೆ.

‘ಜಗತ್ತಿನಲ್ಲಿ ಅತಿ ಮುಖ್ಯವಾದ ವಿಷಯವೆಂದರೆ ತಿನ್ನಲು ಏನಾದರೂ, ಕುಡಿಯಲು ಏನಾದರೂ ಮತ್ತು ಪ್ರೀತಿಸಲು ಯಾರಾದರೂ ಇರುವುದು. ಆದ್ದರಿಂದ ಹೆಚ್ಚು ಯೋಚಿಸಬೇಡಿ, ತಿನ್ನಿರಿ.. ಕುಡಿಯಿರಿ ಮತ್ತು ಪ್ರೀತಿಸಿ’ ಎಂದು ಬರೆದುಕೊಂಡಿದ್ದಾರೆ. ಮೈಕೆಲ್‌ಗೆ ದೇಹದಲ್ಲಿನ ಸ್ನಾಯುಗಳನ್ನು ನಿಯಂತ್ರಿಸುವ ನರಗಳು ಕ್ರಮೇಣ ನಿಷ್ಕ್ರಿಯಗೊಳ್ಳುವ ಕಾಯಿಲೆ ಇರುವುದು ಪತ್ತೆಯಾಯಿತು. ಕಳೆದ ಕೆಲವು ತಿಂಗಳುಗಳಿಂದ ಅವರ ಸ್ಥಿತಿ ಹದಗೆಟ್ಟಿತ್ತು.

ಇದನ್ನೂ ಓದಿ: ‘ಸಲಾರ್​ಗಾಗಿ ಹೊಸ ಪ್ರಪಂಚ ಸೃಷ್ಟಿಸಿದ್ದಾರೆ ಪ್ರಶಾಂತ್ ನೀಲ್’, ಗೇಮ್ ಆಫ್ ಥ್ರೋನ್ಸ್​ಗೆ ಹೋಲಿಸಿದ ನಟಿ

ಮೈಕೆಲ್‌ಗೆ ಉಸಿರಾಡಲು ಸಹಾಯ ಮಾಡಲು ಟ್ರಾಕಿಯೊಸ್ಟೊಮಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. ಆದರೆ ಮೈಕೆಲ್ ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದರು. ಅವರು ತಮ್ಮ ಉಳಿದ ಜೀವನವನ್ನು ಆಸ್ಪತ್ರೆಯಲ್ಲಿ ಕಳೆಯುವ ಬದಲು ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಬದುಕಲು ನಿರ್ಧರಿಸಿದರು. ‘ಗೇಮ್ ಆಫ್ ಥ್ರೋನ್ಸ್’ ನ ಆರನೇ ಸೀಸನ್‌ನಲ್ಲಿ ಮೈಕೆಲ್ ವೈಲ್ಡ್ಲಿಂಗ್ ರೈಟರ್ ಪಾತ್ರವನ್ನು ನಿರ್ವಹಿಸಿದರು. ಈ ಸೀಸನ್‌ನಲ್ಲಿ ಅವರು ‘ದಿ ಬ್ರೋಕನ್ ಮ್ಯಾನ್’ ಸಂಚಿಕೆಯಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಅವರು ಶೇಕ್ಸ್‌ಪಿಯರ್ ನಾಟಕಗಳಲ್ಲಿಯೂ ಕೆಲಸ ಮಾಡಿದರು. ಅವರು ‘ಬ್ಲೂ ಲೈಟ್ಸ್’, ‘ದಿಸ್ ಟೌನ್’, ‘ದಿ ಸ್ಪೆಕ್ಟಾಕ್ಯುಲರ್’ ಮತ್ತು ‘ಬ್ಲಾಸ್ಟ್ಸ್ ಫ್ರಮ್ ದಿ ಪಾಸ್ಟ್’ ನಂತಹ ಶೋನಲ್ಲಿಯೂ ಕಾಣಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನದಲ್ಲಿಂದು ಇರಾನ್-ಅಮೆರಿಕ ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!

ಇಸ್ಲಾಮಾಬಾದ್, ಏಪ್ರಿಲ್ 11: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆರಂಭಗೊಂಡಿದೆ. ಈ ಮಹತ್ವದ ಸಭೆಯಲ್ಲಿ ಅಮೆರಿಕವನ್ನು ಉಪಾಧ್ಯಕ್ಷ ಜೆಡಿ ಬ್ಯಾನ್ಸ್ ಪ್ರತಿನಿಧಿಸುತ್ತಿದ್ದರೆ, ಇರಾನ್ ಸ್ಪೀಕರ್ ಮೊಹಮ್ಮದ್ ಭಗರ್ ಭಾಗಿಯಾಗಲಿದ್ದಾರೆ. ಮಾತುಕತೆಗೂ ಮುನ್ನ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿತ್ತು. ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳು ಮತ್ತು ಅವುಗಳ ಷರತ್ತುಗಳ ಕುರಿತು ಇಂದು ಚರ್ಚೆ ನಡೆಯಲಿದೆ.

ನಾಯಕರ ಸುರಕ್ಷತೆ ದೃಷ್ಟಿಯಿಂದ ಇಸ್ಲಾಮಾಬಾದ್ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ. ಸಭೆ ನಡೆಯುವ ಸೆರೆನಾ ಹೋಟೆಲ್ ಸುತ್ತಮುತ್ತ ಮೂರು ಕಿಲೋಮೀಟರ್ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭದ್ರತೆಗಾಗಿ 11,000 ಸೈನಿಕರನ್ನು ನಿಯೋಜಿಸಲಾಗಿದೆ. ಸಭೆಗೂ ಮುನ್ನವೇ ಅಮೆರಿಕದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಇರಾನ್ ಸಂಸದೀಯ ಸ್ಪೀಕರ್ ಗಾಲಿಬಾಫ್ ಹೇಳಿಕೆ ನೀಡಿರುವುದು ಸಭೆಯ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟಿದ ಊರಿನ ಮೇಲೆ ರಾಜ್​​ಕುಮಾರ್​​ಗೆ ಇತ್ತು ಅಪಾರ ಮಮತೆ; ಕಾರಣ ಏನು?

ರಾಜ್​​ಕುಮಾರ್ ಅವರ ಪುಣ್ಯಸ್ಮರಣೆ ಏಪ್ರಿಲ್ 12ರಂದು ನಡೆಯಲಿದೆ. ಈ ಸಂದರ್ಭದಂದು ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಅವರು ಇಲ್ಲದೆ ಬರೋಬ್ಬರಿ 20 ವರ್ಷಗಳು ಕಳೆದಿವೆ. ಏಪ್ರಿಲ್ 12ರ , 2006ರಲ್ಲಿ ರಾಜ್​​ಕುಮಾರ್ ಅವರು ಅನಾರೋಗ್ಯದಿಂದ ಮೃತಪಟ್ಟರು. ರಾಜ್​ಕುಮಾರ್ ಅವರು ಹುಟ್ಟಿದ್ದು ಗಾಜನೂರಿನಲ್ಲಿ. ಆ ಊರಿನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಇದನ್ನು ಅನೇಕ ಬಾರಿ ಅವರು ಹಂಚಿಕೊಂಡಿದ್ದರು.

ರಾಜ್​​ಕುಮಾರ್ ಕೃಷಿ ಹಿನ್ನೆಲೆ ಕುಟುಂಬದಿಂದ ಬಂದವರು. ಗಾಜನೂರಿನಲ್ಲಿ ಸಣ್ಣ ಮನೆ ಹೊಂದಿದ್ದ ಅವರು ಅಲ್ಲಿಯೇ ವಾಸಿಸಲು ಬಯಸುತ್ತಿದ್ದರು. ಹಸಿರನ್ನು ತುಂಬಾನೇ ಇಷ್ಟಪಡುತ್ತಿದ್ದರು. ಗುಡ್ಡ ಬೆಟ್ಟಗಳು ಎಂದರೆ ಅವರಿಗೆ ಇಷ್ಟ. ಗಾಜನೂರು ಈ ಎಲ್ಲಾ ಅಂಶಗಳನ್ನು ಹೊಂದಿದ್ದರಿಂದ ಅದರ ಮೇಲೆ ಅವರಿಗೆ ಅಪಾರ ಮಮತೆ ಇತ್ತು.

‘ಬಂಗಲೆ ನೋಡಿದಾಗ ಆಗದ ಆನಂದ ಈ ಪುಟ್ಟ ಮನೆ ಕಂಡಾಗ ಆಗುತ್ತದೆ’ ಎಂದು ರಾಜ್​​ಕುಮಾರ್ ಹೇಳಿದ್ದರು. ರಾಜ್​​ಕುಮಾರ್ ತಂದೆಯೂ ನಾಟಕಾಭ್ಯಸ ನಡೆಸುತ್ತಿದ್ದರು. ‘ತಂದೆ-ತಾಯಿ ಇಬ್ಬರೂ ನಮ್ಮನ್ನು ಉತ್ತಮವಾಗಿ ಸಾಕಿದ್ದಾರೆ. ಯಾರಿಗೂ ತೋರದ ಪ್ರಿತಿಯನ್ನು ನಮಗೆ ತೋರಿಸುತ್ತಿದ್ದರು. ಅವರು ಹಸಿವಿದ್ದುಕೊಂಡು ನಮಗೆ ಊಟ ಹಾಕುತ್ತಿದ್ದರು’ ಎಂದು ರಾಜ್​​ಕುಮಾರ್ ಅವರು ವಿವರಿಸಿದ್ದರು.

ಇದನ್ನೂ ಓದಿ: ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ರಾಜ್​​ಕುಮಾರ್ ಅವರು ‘ಬೇಡರಕಣ್ಣಪ್ಪ’ ಸಿನಿಮಾ 1954ರಲ್ಲಿ ರಿಲೀಸ್ ಆಯಿತು. ಮುತ್ತುರಾಜ್ ಅವರು ಈ ಸಿನಿಮಾ ಮೂಲಕ ರಾಜ್​ಕುಮಾರ್ ಆಗಿ ಬದಲಾದರು. ಆ ಬಳಿಕ ರಾಜ್​​ಕುಮಾರ್ ಅವರು ಹಿಂದಿರುಗಿ ನೋಡಲೇ ಇಲ್ಲ. ರಾಜ್​​ಕುಮಾರ್ ಅವರು ಕೊನೆಯವರೆಗೂ ಸಿನಿಮಾ ಮಾಡುತ್ತಿದ್ದರು. ಈ ಚಿತ್ರಕ್ಕೆ ಪಂಡರೀಬಾಯಿ ನಾಯಕಿ ಆಗಿದ್ದರು. ಹಲವು ಹಾಡುಗಳನ್ನು ರಾಜ್​​ಕುಮಾರ್ ಹಾಡಿದ್ದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಚ್ಚರಿ ಎನಿಸಿದರೂ ಸತ್ಯ… ಒಂದು ಸಿಕ್ಸ್​​ಗಾಗಿ 11.3 ಓವರ್​ ಆಡಿದ RCB

Source link

ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಹೆಚ್ಚಾಯ್ತು ತಾಪಮಾನ; ಉಡುಪಿ, ಉತ್ತರ ಕನ್ನಡದಲ್ಲಿಂದು ಹೀಟ್ ವೇವ್ ಅಲರ್ಟ್​!

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ(Weather Forecast)  ಶುಷ್ಕ ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ನಿನ್ನೆಯವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಯಿತ್ತು ಆದರೆ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಹೀಟ್​ ವೇವ್, ಒಣ ಹವೆ?

ಕರಾವಳಿಯಲ್ಲಿಂದು 35 ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನವಿರಲಿದ್ದು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಬಿಟ್ಟರು. ಇದರಲ್ಲಿ ಸೀಕ್ವೆಲ್ ಕೂಡ ಇತ್ತು ಅನ್ನೋದು ಅಚ್ಚರಿಯ ಸಂಗತಿ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದ ದೀಪಿಕಾ, ಸೀಕ್ವೆಲ್​ ಮಾಡದೆ ಸಿನಿಮಾದಿಂದ ಹೊರ ನಡೆದರು. ಈಗ ದೀಪಿಕಾ ಪಡುಕೋಣೆ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಪಡೆದುಕೊಳ್ಳುತ್ತಿರುವ ಸಂಭಾವನೆ ಕುರಿತು ಚರ್ಚೆ ಆಗುತ್ತಿದೆ.

ದೀಪಿಕಾ ಪಡುಕೋಣೆ ಅವರು ಸದಾ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಹೀರೋಗೆ ಸಿಕ್ಕಷ್ಟೇ ಸಂಭಾವನೆ ತಮಗೂ ಸಿಗಬೇಕು ಎಂದು ಅವರು ಬಯಸುತ್ತಾರೆ. ಇದನ್ನು ಅನೇಕ ಕಡೆಗಳಲ್ಲಿ ವಾದಿಸಿದ್ದಾರೆ ಕೂಡ. ಇನ್ನು, 8 ಗಂಟೆ ಮಾತ್ರ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ದೀಪಿಕಾ ಅವರನ್ನು ಅನೇಕ ಸಿನಿಮಾಗಳಿಗೆ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಅವರು ‘ರಾಕಾ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ, ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾಗಾಗಿ ಅಲ್ಲು ಅರ್ಜುನ್ ಅವರು ಬರೋಬ್ಬರಿ 175 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದರ ಜೊತೆಗೆ ಅವರಿಗೆ ಸಿನಿಮಾದ ಲಾಭದಲ್ಲೂ ಪಾಲಿದೆ ಎನ್ನಲಾಗುತ್ತಿದೆ. ಆದರೆ, ದೀಪಿಕಾಗೆ ಅಲ್ಲು ಅರ್ಜುನ್​ಗೆ ಸರಿಯಾಗಿ ಸಂಭಾವನೆ ನೀಡಿಲ್ಲ. ಅವರಿಗೆ 25 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ.

ಉಳಿದ ಹೀರೋಯಿನ್​​ಗಳಿಗೆ ಹೋಲಿಕೆ ಮಾಡಿದರೆ ದೀಪಿಕಾಗೆ ಸಿಕ್ಕ ಸಂಭಾವನೆ ತುಂಬಾನೇ ದೊಡ್ಡದು. ಆದರೆ, ಅಲ್ಲು ಅರ್ಜುನ್ ಜೊತೆ ಹೋಲಿಕೆ ಮಾಡಿದರೆ ಇಬ್ಬರ ಸಂಭಾವನೆಯಲ್ಲಿ ಅಜಗಜಾಂತರ ವ್​ಯತ್ಯಾಸ ಇದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಮಗು ಜನಿಸಿದ ಬಳಿಕ ಸಿನಿಮಾ ಶೂಟಿಂಗ್​ ಮಾಡಲು ಸಾಕಷ್ಟು ಕಂಡೀಷನ್ ಹಾಕುತ್ತಿದ್ದಾರೆ. ಈ ಕಂಡೀಷನ್​​ಗೆ ಒಪ್ಪಿಕೊಳ್ಳಲು ಎಲ್ಲರೂ ರೆಡಿ ಇರೋದಿಲ್ಲ. ದೀಪಿಕಾ ಪಡುಕೋಣೆ ಷರತ್ತುಗಳನ್ನು ಅಟ್ಲಿ ತಂಡ ಒಪ್ಪಿಕೊಂಡಿದೆ. ಅವರ ಪಾತ್ರ ಹೇಗಿದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ವಾಹನ ಖರೀದಿ ಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 11, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ನವಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.

 

 

 

 

Source link

Exit mobile version