ಹನಿಮೂನ್ ಮರ್ಡರ್ 2.0: ಮದುವೆಯಾದ 3 ತಿಂಗಳಲ್ಲೇ ಗಂಡನನ್ನು ಕೊಂದು ಅಪಘಾತವೆಂದು ನಂಬಿಸಿದ ಹೆಂಡತಿ – Kannada News | Honeymoon murder 2.0: Newlywed wife killed husband with lover masks it as accident in Rajasthan

ನವದೆಹಲಿ, ಫೆಬ್ರವರಿ 5: ಆಶಿಶ್ ಮತ್ತು ಅಂಜಲಿ ಇಬ್ಬರೂ ಮದುವೆಯಾಗಿ ಕೇವಲ 3 ತಿಂಗಳಾಗಿತ್ತು. ಬಹಳ ಅನ್ಯೋನ್ಯವಾಗಿಯೇ ಇದ್ದ ಅವರ ನಡುವೆ ಯಾವ ಜಗಳವೂ ಆಗಿರಲಿಲ್ಲ. ಅದೊಂದು ದಿನ ಅವರಿಬ್ಬರೂ ರಾತ್ರಿ ವಾಕಿಂಗ್ ಹೋಗಿದ್ದರು. ಆಗ ವೇಗವಾಗಿ ಬಂದ ವಾಹನವೊಂದು ಆಶಿಶ್​​ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ದೂರಕ್ಕೆ ಹಾರಿ ಬಿದ್ದ ಆಶಿಶ್ ಅಂಜಲಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದ. ಆಕೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದಾಗ ವಾಹನದಿಂದ ಇಳಿದ ಕೆಲವು ಮಂದಿ ಅಂಜಲಿಯ ಮೈಮೇಲಿದ್ದ ಒಡವೆಯನ್ನು ದೋಚಿಕೊಂಡು, ಆಕೆಯನ್ನು ತಳ್ಳಿ ಪರಾರಿಯಾಗಿದ್ದರು. ಇದು ಅಂಜಲಿ ಪೊಲೀಸರ ಬಳಿ ಹೇಳಿದ್ದ. ಕತೆ. ಮೊದಲು ಪೊಲೀಸರು ಇದೊಂದು ಅಪಘಾತ (Accident) ಎಂದೇ ಭಾವಿಸಿದ್ದರು.

ಆದರೆ, ಅದ್ಯಾಕೋ ಪೊಲೀಸರಿಗೆ ಅಂಜಲಿಯ ಮೇಲೆ ಸಣ್ಣದೊಂದು ಅನುಮಾನ ಮೂಡಿತ್ತು. ಇದಕ್ಕೆ ಕೆಲವೇ ತಿಂಗಳ ಹಿಂದೆ ನಡೆದಿದ್ದ ಮೇಘಾಲಯದ ಹನಿಮೂನ್ ಮರ್ಡರ್ ಕೂಡ ಒಂದು ಕಾರಣ. ಹೆಂಡತಿ ಹಾಗೂ ಆಕೆಯ ಪ್ರಿಯಕರನ ಸಂಚಿನಿಂದ ರಾಜಾ ರಘುವಂಶಿ ಕೊಲೆಯಾಗಿದ್ದರು.

ರಾಜಾ ರಘುವಂಶಿಯನ್ನು ಆತನ ಹೆಂಡತಿ ಸೋನಂ ಕೊಲೆ ಮಾಡಿಸಿದ ರೀತಿಯಲ್ಲೇ ಅಂಜಲಿ ಕೂಡ ತನ್ನ ಗಂಡನನ್ನು ಕೊಲ್ಲಲು ಪ್ಲಾನ್ ಮಾಡಿರಬಹುದಾ? ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಈ ದೃಷ್ಟಿಕೋನದಿಂದ ಯೋಚನೆ ಮಾಡಿದ ಪೊಲೀಸರು ಅಂಜಲಿ ಮೇಲೊಂದು ಕಣ್ಣಿಟ್ಟಿದ್ದರು. ಹೀಗಾಗಿ, ಮತ್ತೊಮ್ಮೆ ಪೊಲೀಸರು ತಮ್ಮದೇ ಸ್ಟೈಲ್​ನಲ್ಲಿ ತನಿಖೆ ನಡೆಸಿದಾಗ ಅಂಜಲಿ ತನ್ನ ಗೆಳೆಯ ಸಂಜು ಜೊತೆ ಸೇರಿ ಗಂಡ ಆಶಿಶ್ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ಬಯಲಾಗಿದೆ. ಈ ಮೂಲಕ ಮೇಘಾಲಯದ ರೀತಿಯಲ್ಲೇ ರಾಜಸ್ಥಾನದ ಹನಿಮೂನ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆ ದಿನ ಆಗಿದ್ದೇನು?:

ಅದು ಜನವರಿ 30ರ ಸಂಜೆ. ರಾತ್ರಿ 9ರ ಸುಮಾರಿಗೆ ರಸ್ತೆಯಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ತಕ್ಷಣ ಆ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಅಂಜಲಿ ಪೊಲೀಸರಿಗೆ ಮಾಹಿತಿ ನೀಡಿದಳು. ಆಗ ಪೊಲೀಸರು ಅಪಘಾತದ ಸ್ಥಳವನ್ನು ಸಮೀಕ್ಷೆ ಮಾಡಿದರು. ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ನಡೆಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಸಹ ಕರೆಸಲಾಯಿತು.

ಇದನ್ನೂ ಓದಿ: ಬಿಹಾರ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ

23 ವರ್ಷದ ಅಂಜಲಿ ತಾನು ಮತ್ತು ತನ್ನ ಪತಿ ಸಂಜೆ ವಾಕಿಂಗ್‌ಗೆ ಹೋದಾಗ ಆಶಿಶ್ ಮತ್ತು ತನಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಳು. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಸಹ ಅವರು ಹೇಳಿದ್ದಳು. ಆದರೆ, ತನಿಖೆಯ ಸಮಯದಲ್ಲಿ ವಾಸ್ತವ ಮತ್ತು ಅಂಜಲಿ ನೀಡಿದ ಸಾಕ್ಷ್ಯದ ನಡುವೆ ವ್ಯತ್ಯಾಸಗಳು ಕಂಡುಬಂದಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿತು. ಮರಣೋತ್ತರ ಪರೀಕ್ಷೆಯಲ್ಲಿ ಆಶಿಶ್‌ನ ದೇಹದಲ್ಲಿ ಗಾಯದ ಗುರುತುಗಳಿರುವುದಾಗಿ ತಿಳಿಸಲಾಗಿತ್ತು. ವೈದ್ಯಕೀಯ ವರದಿಯ ಪ್ರಕಾರ ಅವನ ಕತ್ತು ಹಿಸುಕಿ ಕೊಲ್ಲಲ್ಪಟ್ಟಂತೆ ಕಂಡುಬಂದಿತ್ತು. ಮತ್ತೊಂದೆಡೆ, ಚಿನ್ನ ದೋಚಿದರೂ ಅಂಜಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು.

ಅಂಜಲಿ ತನ್ನ ಮನೆಯ ಹತ್ತಿರ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಳು ಎಂದು ಆಕೆಯ ಫೋನ್ ದಾಖಲೆಗಳು ದೃಢಪಡಿಸಿತ್ತು. ಅಂಜಲಿ ಮತ್ತು ಆಶಿಶ್ 3 ತಿಂಗಳ ಹಿಂದೆ ವಿವಾಹವಾದರು. ಆದರೆ, ಈ ಮದುವೆಯಿಂದ ಅಂಜಲಿ ಅತೃಪ್ತಳಾಗಿದ್ದಳು. ಆಕೆ ತವರುಮನೆಗೆ ಬಂದಾಗ ಮತ್ತೆ ಮಾಜಿ ಪ್ರಿಯಕರ ಸಂಜು ಜೊತೆ ಸಂಬಂಧ ಬೆಳೆಸಿದಳು. ಆ ಸಮಯದಲ್ಲಿ ಇಬ್ಬರೂ ಆಶಿಶ್‌ನ ಕೊಲೆಯ ಪ್ಲಾನ್ ಮಾಡಿದ್ದರು.

ಇದನ್ನೂ ಓದಿ: ಮೇಘಾಲಯದ ಹನಿಮೂನ್​ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ

ಗಂಡನ ಮನೆಗೆ ಹೋದ ಬಳಿಕ ಮೊದಲೇ ಪ್ಲಾನ್ ಮಾಡಿದಂತೆ ಜನವರಿ 30ರಂದು ಅಂಜಲಿ ರಾತ್ರಿ ಊಟವಾದ ನಂತರ ಆಶಿಶ್‌ನ ಜೊತೆ ವಾಕಿಂಗ್ ಹೋಗಿದ್ದಳು. ಆಗ ಆಕೆ ಬೇಕೆಂದೇ ಆಶಿಶ್‌ನನ್ನು ಒಂದು ನಿರ್ಜನ ರಸ್ತೆಗೆ ಕರೆದೊಯ್ದಳು. ಅಲ್ಲಿ ಸಂಜು ಮತ್ತು ಅವನ ಸಹಚರರಾದ ರೋಹಿತ್, ಬಾದಲ್ ಪೊದೆಗಳಲ್ಲಿ ಅಡಗಿಕೊಂಡಿದ್ದರು. ಅವರು ಆಶಿಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದು, ನಂತರ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು. ತನ್ನ ಮೇಲೆ ಅನುಮಾನ ಬರಬಾರದು ಎಂದು ಅಂಜಲಿ ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಆರೋಪಿಗೆ ನೀಡಿ, ದರೋಡೆಯಾಗಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಳು. ಆ ದಾಳಿಯ ನಂತರ ಅವಳು ಪ್ರಜ್ಞಾಹೀನಳಂತೆ ನಟಿಸಿದಳು. ಆದರೆ ಆಶಿಶ್‌ನ ದೇಹದ ಮೇಲಿದ್ದ ಗಾಯದ ಗುರುತುಗಳು ಕೊಲೆಯ ಸಂಚು ಬಯಲಾಗಲು ಕಾರಣವಾಯಿತು.

ಪೊಲೀಸ್ ತನಿಖೆ ವೇಳೆ ಅಂಜಲಿ ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದುದರಿಂದ ಪೊಲೀಸರು ಅನುಮಾನಗೊಂಡರು. ಕೊನೆಗೆ ಈ ಬಗ್ಗೆ ಅಂಜಲಿಯ ತನಿಖೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಳು. ಪೊಲೀಸರು ಅಂಜಲಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಎಂಸಿಎ ಪ್ರಾಜೆಕ್ಟ್ ರೇಸ್​ನಿಂದ ಎಚ್​ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ? – Kannada News | Reason why HAL out of race for AMCA fighter jet project

ಬೆಂಗಳೂರು, ಫೆಬ್ರುವರಿ 5: ಸ್ವಂತವಾಗಿ ಐದನೇ ತಲೆಮಾರಿನ ಫೈಟರ್ ಜೆಟ್ ತಯಾರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಎಎಂಸಿಎ ಯೋಜನೆಯ (AMCA project) ರೇಸ್​ನಿಂದ ಎಚ್​ಎಎಲ್ ಹೊರಬಿದ್ದಿದೆ. ಟಾಟಾ ಗ್ರೂಪ್, ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಗುಂಪುಗಳು (Consortium) ಈಗ ಈ ರೇಸ್​ನಲ್ಲಿ ಉಳಿದಿವೆ. ಮುಂದಿನ ದಿನಗಳಲ್ಲಿ ಒಂದು ಸಂಸ್ಥೆಗೆ ಎಎಂಸಿಎ ಅಭಿವೃದ್ಧಿಪಡಿಸುವ ಮಹತ್ವದ ಪ್ರಾಜೆಕ್ಟ್ ಸಿಗಲಿದೆ. ಬಿಇಎಂಎಲ್, ಬಿಇಎಲ್, ಡಾಟಾ ಪ್ಯಾಟರ್ನ್ಸ್ ಇತ್ಯಾದಿ ಕಂಪನಿಗಳು ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಕನ್ಸಾರ್ಟಿಯಂಗಳಲ್ಲಿ ಇವೆ.

ಎಎಂಸಿಎ ಪ್ರಾಜೆಕ್ಟ್​ಗೆ ಆಯ್ಕೆಯಾದ ಸಂಸ್ಥೆಯು ಪ್ರೋಟೊಟೈಪ್​ಗಳನ್ನು ಮೊದಲು ನಿರ್ಮಿಸಬೇಕಾಗುತ್ತದೆ. ಈ ಪ್ರೋಟೋಟೈಪ್ ನಿರ್ಮಾಣ ಯೋಜನೆಯೇ 16,000 ಕೋಟಿ ರೂ ಆಗಿರುತ್ತದೆ. ಇವುಗಳ ಪ್ರಯೋಗಗಳು ಯಶಸ್ವಿಯಾದ ಬಳಿಕ ಫೈಟರ್ ಜೆಟ್​ಗಳ ಉತ್ಪಾದನೆ ಶುರುವಾಗುತ್ತದೆ. ಇದಕ್ಕೆ ಸುಮಾರು 10 ವರ್ಷಗಳಾಗುವ ನಿರೀಕ್ಷೆ ಇದೆ. ಪ್ರೋಟೋಟೈಪ್​ನ ಮೊದಲ ಫ್ಲೈಟ್ 2028 ಅಥವಾ 2029ರಲ್ಲಿ ನಡೆಯಬಹುದು. ಇದಕ್ಕೆ ಹಸಿರು ನಿಶಾನೆ ಸಿಕ್ಕರೆ ಜೆಟ್​ಗಳ ಪ್ರೊಡಕ್ಷನ್ 2035ರಲ್ಲಿ ಆರಂಭವಾಗಬಹುದು.

ಸದ್ಯ ಎಎಂಸಿಎ ಪ್ರಾಜೆಕ್ಟ್ ರೇಸ್​ನಲ್ಲಿ ಕಣಕ್ಕಿಳಿದಿರುವುವೆಲ್ಲಾ ಖಾಸಗಿ ಸಂಸ್ಥೆಗಳೇ ಎನ್ನುವುದು ವಿಶೇಷ. ಭಾರತೀಯ ವಾಯುಪಡೆಗೆ ನೂರಕ್ಕೂ ಅಧಿಕ ಫೈಟರ್​ಗಳ ಅಗತ್ಯ ಇದೆ. ಹೀಗಾಗಿ, ಈ ಎಎಂಸಿಎ ಪ್ರಾಜೆಕ್ಟ್​ನ ಮೌಲ್ಯ ಹಲವು ಲಕ್ಷ ಕೋಟಿ ರೂಗಳಿಗೂ ಅಧಿಕ ಇರಬಹುದು.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

ಎಚ್​ಎಎಲ್ ಈ ರೇಸ್​ನಿಂದ ಹೊರಬಿದ್ದಿದ್ದು ಯಾಕೆ?

ಫೈಟರ್ ಜೆಟ್ ತಯಾರಿಕೆ ಎಂದರೆ ಡೀಫಾಲ್ಟ್ ಆಗಿ ಎಲ್ಲರ ಕಣ್ಣು ಎಚ್​ಎಎಲ್​ನತ್ತಲ್ಲೇ ನೆಟ್ಟಿರುತ್ತದೆ. ಆದರೆ, ಎಎಂಸಿಎ ಪ್ರೋಗ್ರಾಮ್​ಗೆ ಸರ್ಕಾರ ಖಾಸಗಿಯವರಿಗೂ ಅವಕಾಶ ಕೊಡಲು ನಿರ್ಧರಿಸಿತು. ಪ್ರಾಜೆಕ್ಟ್​ಗೆ ಇಒಐ ಸಲ್ಲಿಸಲು ಕೆಲ ಮಾನದಂಡಗಳನ್ನು ಸರ್ಕಾರ ನಿಗದಿ ಮಾಡಿತು. ಅಂಥ ಒಂದು ಮಾನದಂಡದಲ್ಲಿ ಎಚ್​ಎಎಲ್ ವಿಫಲವಾಯತು ಎನ್ನಲಾಗಿದೆ.

ಎಚ್​ಎಎಲ್​ಗೆ ಮುಳುವಾದ ಆ ಮಾನದಂಡ ಯಾವುದು?

ಒಂದು ಕಂಪನಿಯ ಟರ್ನೋವರ್​ಗಿಂತ ಅದರ ಆರ್ಡರ್ ಬುಕ್ ಮೂರು ಪಟ್ಟು ಹೆಚ್ಚಾಗಿದ್ದರೆ ಪ್ರಾಜೆಕ್ಟ್ ಪರಿಗಣನೆಗೆ ಆದ್ಯತೆ ಕೊಡಲಾಗುವುದಿಲ್ಲ ಎನ್ನುವುದು ಒಂದು ನಿಯಮ. ಈ ವಿಚಾರವು ಎಚ್​ಎಎಲ್​ಗೆ ಮುಳುವಾಯಿತು. ಎಚ್​​​ಎಎಲ್​ನ ಟರ್ವೋವರ್​ಗಿಂತ ಅದರ ಆರ್ಡರ್ ಬುಕ್ ಎಂಟು ಪಟ್ಟು ಹೆಚ್ಚಿದೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

ಎಎಂಸಿಎ ಪ್ರಾಜೆಕ್ಟ್ ಯಾಕೆ ಮುಖ್ಯ?

ಎಎಂಸಿಎ ಪ್ರಾಜೆಕ್ಟ್ ಭಾರತಕ್ಕೆ ಬಹಳ ಮಹತ್ವದ್ದಾಗಿದೆ. ದೇಶೀಯವಾಗಿ ಐದನೇ ತಲೆಮಾರಿನ ಸ್ಟೀಲ್ತ್ ಜೆಟ್ ತಯಾರಿಸುವ ಯೋಜನೆ ಇದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರವೇ ಐದನೇ ತಲೆಮಾರಿನ ಜೆಟ್ ತಯಾರಿಸಿವೆ. ಫ್ರಾನ್ಸ್​ನ ರಫೇಲ್ ಜೆಟ್ 4.5 ತಲೆಮಾರಿನ ಜೆಟ್ ಎನಿಸಿದೆ. ಸ್ವಂತವಾಗಿ ಐದನೇ ತಲೆಮಾರಿನ ಜೆಟ್ ತಯಾರಿಕೆ ಎಂದರೆ ಅದರ ಎಂಜಿನ್ ಸೇರಿದಂತೆ ಪ್ರತಿಯೊಂದನ್ನೂ ದೆಶೀಯವಾಗಿ ಅಭಿವೃದ್ಧಿಪಡಿಸಿ ತಯಾರಿಸಬೇಕು. ಸ್ವಾವಲಂಬಿ ಭಾರತಕ್ಕೆ ಇದು ತಾಜಾ ನಿದರ್ಶನವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶದಲ್ಲಿ ಕನ್ನಡಿಗನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ! – Kannada News | Udupi Youth wins Rs 49 crore lottery in UAE’s Big Ticket lucky draw, to share prize with friend

ಉಡುಪಿ, (ಫೆಬ್ರವರಿ 05):ಓಮನ್​​​ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್​​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ (Karnataka) ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ (UAE’s Big Ticket lucky draw) 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ. ಉಡುಪಿಯ (Udupi) ಉದ್ಯಾವರ ಮೂಲದ 33 ವರ್ಷದ ಶಂತನು ಓಮನ್​​​ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್‌ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.

ಸ್ನೇಹಿತನೊಂದಿಗೆ ಸೇರಿ ಟಿಕೆಟ್ ಖರೀದಿಸಿದ್ದ ಶಂತನು

ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಸೇರಿಕೊಂಡು ಜಂಟಿಯಾಗಿ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಒಟ್ಟು 49 ಕೋಟಿ ರೂಪಾಯಿನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಂತನು ಹೇಳಿಕೊಂಡಿದ್ದಾನೆ. ಇನ್ನು ಶಂತನು ಲಾಟರಿಯಲ್ಲಿ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂತಸ, ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ. ಗ್ರಾಮಸ್ಥರು ಮತ್ತು ಸ್ನೇಹಿತರು ಶಂತನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇದನ್ನೂ ನೋಡಿ: ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ

ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಲೈವ್ ಡ್ರಾವನ್ನು ಸಾವಿರಾರು ಜನರು ವೀಕ್ಷಿಸುತ್ತಿದ್ದರು. ಬಹುಮಾನ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆಯೇ  ಶಂತನು, ಕಾರ್ಯಕ್ರಮ ಆಯೋಜಕರೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘2021ರಿಂದಲೂ ಬಿಗ್‌ ಟಿಕೆಟ್‌ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.

1992ರಲ್ಲಿ ಯುಎಇನಲ್ಲಿ ಬಿಗ್‌ ಟಿಕೆಟ್‌ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರೂ.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರರೂ.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ಈ ಲಾಟರಿಯಲ್ಲಿ ಕರ್ನಾಟಕದ ಯುವಕನಿಗೆ ಅದೃಷ್ಟ ಖುಲಾಯಿಸಿದೆ. ಇನ್ನು ಈ ಡ್ರಾದಲ್ಲಿ ಜಾಕ್​ಪಾಟ್ ಜೊತೆಗೆ ಹಲವು ಬಹುಮಾನಗಳು ಸೇರಿದ್ದವು. ಐದು ಜನಕ್ಕೆ ತಲಾ ದಿರ್​​ಹುಂ ಬಹುಮಾನದ ಜೊತೆಗೆ ಐಷರಾಮಿ ವಾಹನಗಳನ್ನು ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? – Kannada News | Youth Mental Health: 60% of Disorders Diagnosed in India

ದೇಹಕ್ಕೆ ಬಂದ ರೋಗವನ್ನು ಗುಣಪಡಿಸಬಹುದು ಆದರೆ ಮನಸ್ಸಿಗಾದ ನೋವನ್ನು ವಾಸಿ ಮಾಡಲು ಮಾತ್ರೆ, ಔಷಧಗಳಿಂದ ಸಾಧ್ಯವಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ಸಂಬಂಧ ಪಟ್ಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನ ಎಚ್ಛೆತ್ತುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಈ ಬಗ್ಗೆ ಅನೇಕ ರೀತಿಯ ಸಂಶೋಧನೆಗಳು ಕೂಡ ನಡೆದಿದ್ದು, ಭಾರತೀಯ ಮನೋವೈದ್ಯಕೀಯ ಸಂಘದ ದತ್ತಾಂಶದ ಪ್ರಕಾರ, ಭಾರತದಲ್ಲಿ ಶೇಕಡ 60 ರಷ್ಟು ಮಾನಸಿಕ ಕಾಯಿಲೆಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬರುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ. ಅದರ ಡೇಟಾವನ್ನು ಮಾಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಹಾಗಾದರೆ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ (Mental Health) ಕ್ಷೀಣಿಸುವುದಕ್ಕೆ ಕಾರಣವೇನು, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಶೋಧನೆಯಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಶೇಕಡ 34.6 ರಷ್ಟು ಮಾನಸಿಕ ಅಸ್ವಸ್ಥತೆಗಳು 14 ವರ್ಷಕ್ಕಿಂತ ಮೊದಲು, ಶೇಕಡ 48.4 ರಷ್ಟು 18 ವರ್ಷಕ್ಕಿಂತ ಮೊದಲು ಮತ್ತು ಶೇಕಡ 62.5 ರಷ್ಟು 25 ವರ್ಷ ವಯಸ್ಸಿನೊಳಗೆ ಪ್ರಾರಂಭವಾಗುತ್ತವೆ. ಇನ್ನು, ಹೆಚ್ಚಿನ ರೋಗಿಗಳಿಗೆ ಮಾನಸಿಕ ಅಸ್ವಸ್ಥತೆಯು ಪ್ರೌಢಾವಸ್ಥೆಗೆ ಮುಂಚೆಯೇ ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ 25 ವರ್ಷ ವಯಸ್ಸಿನವರಲ್ಲಿ ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD), ಆತಂಕ ಮತ್ತು ಅಸ್ವಸ್ಥತೆ ಕಂಡುಬಂದಿರುವ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ತಜ್ಞರು ಹೇಳಿದ್ದಾರೆ. ಖಿನ್ನತೆಯ ಪ್ರಕರಣಗಳು ಸಹ ಮೊದಲಿಗಿಂತ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತಿದ್ದು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅವು ಗಂಭೀರ ಸಮಸ್ಯೆಯಾಗಬಹುದು.

ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ ಕ್ಷೀಣಿಸುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಕಾಯಿಲೆಗಳು ಹೆಚ್ಚಾಗುವುದಕ್ಕೆ ಸಕಾಲಿಕ ಚಿಕಿತ್ಸೆಯ ಕೊರತೆ ಮತ್ತು ಈ ಪರಿಸ್ಥಿತಿಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಹದಿಹರೆಯದಲ್ಲಿ ಪ್ರಾರಂಭವಾಗುವ ಮಾನಸಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡದಿದ್ದರೆ, ಜೀವನದುದ್ದಕ್ಕೂ ಇದು ಮಹಾಮಾರಿಯಾಗಿ ಬೆನ್ನಿಗಿರುತ್ತದೆ. ಇದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಅವರ ಕುಟುಂಬದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: 30 ರಿಂದ 35 ನೇ ವಯಸ್ಸಿನಲ್ಲಿ ಬಿಪಿ ಬರುವುದನ್ನು ತಡೆಯಲು ಈ ಟ್ರಿಕ್ಸ್ ಪಾಲಿಸಿ ನೋಡಿ!

ಮಾನಸಿಕ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ?

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಏಳುವ ಅಭ್ಯಾಸವನ್ನು ಪ್ರಾರಂಭಿಸಿಕೊಳ್ಳಬೇಕು.
  • ಪ್ರತಿದಿನ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಿ.
  • ಆದಷ್ಟು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CBI Recruitment 2026: ಸೆಂಟ್ರಲ್ ಬ್ಯಾಂಕ್​ನಲ್ಲಿ 350 ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ – Kannada News | Central Bank of India SO Recruitment 2026: Last Date Extended for 350 Posts!

ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಜನರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಅವಕಾಶವನ್ನು ಒದಗಿಸಿದೆ. 2026ರ ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಒಟ್ಟು 350 ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಬ್ಯಾಂಕ್ ವಿಸ್ತರಿಸಿದೆ. ಮೊದಲಿಗೆ ಫೆಬ್ರವರಿ 3ಕ್ಕೆ ನಿಗದಿಯಾಗಿದ್ದ ಅರ್ಜಿ ಸಲ್ಲಿಕೆಯ ಗಡುವನ್ನು ಇದೀಗ ಫೆಬ್ರವರಿ 15 ರವರೆಗೆ ಮುಂದೂಡಲಾಗಿದೆ. ಇದರಿಂದ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ದೊರಕಿದೆ.

ಈ ನೇಮಕಾತಿ ಅಭಿಯಾನದಡಿಯಲ್ಲಿ ಮಾರ್ಕೆಟಿಂಗ್ ಮತ್ತು ವಿದೇಶಿ ವಿನಿಮಯ (ಫಾರಿನ್ ಎಕ್ಸ್‌ಚೇಂಜ್) ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್–I) ಹುದ್ದೆಗಳಿಗೆ 300 ಸ್ಥಾನಗಳು ಲಭ್ಯವಿದ್ದು, ವಿದೇಶಿ ವಿನಿಮಯ ಅಧಿಕಾರಿ (ಸ್ಕೇಲ್–III) ಹುದ್ದೆಗಳಿಗೆ 50 ಸ್ಥಾನಗಳು ಮೀಸಲಾಗಿವೆ. ಈ ಎಲ್ಲಾ ನೇಮಕಾತಿಗಳು ನಿಯಮಿತವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿನ ನಿಯಮಾನುಸಾರ ವೇತನ ಮತ್ತು ಇತರೆ ಭತ್ಯೆಗಳು ಲಭ್ಯವಾಗುತ್ತವೆ.

ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಹಾಗೂ ಮಾರ್ಕೆಟಿಂಗ್‌ನಲ್ಲಿ MBA ಅಥವಾ PGDM ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ ಎರಡು ವರ್ಷಗಳ ಸಂಬಂಧಿತ ಕೆಲಸದ ಅನುಭವ ಅಗತ್ಯವಿದೆ. ಈ ಹುದ್ದೆಗೆ ವಯಸ್ಸಿನ ಮಿತಿ 22 ರಿಂದ 30 ವರ್ಷಗಳ ನಡುವೆ ಇರಬೇಕು. ವಿದೇಶಿ ವಿನಿಮಯ ಅಧಿಕಾರಿ ಹುದ್ದೆಗೆ ಪದವಿ ಜೊತೆಗೆ IIBF ನೀಡುವ ವಿದೇಶಿ ವಿನಿಮಯ ಪ್ರಮಾಣಪತ್ರ ಮತ್ತು ಕನಿಷ್ಠ ಐದು ವರ್ಷಗಳ ಅನುಭವ ಅಗತ್ಯವಿದ್ದು, ವಯಸ್ಸಿನ ಮಿತಿ 25 ರಿಂದ 35 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಅಥವಾ ಐಬಿಪಿಎಸ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ರೂ. 850 ಜೊತೆಗೆ ಜಿಎಸ್ಟಿ ಅರ್ಜಿ ಶುಲ್ಕವಿದ್ದು, ಎಸ್‌ಸಿ, ಎಸ್‌ಟಿ, ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಜೊತೆಗೆ ಜಿಎಸ್ಟಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎಂಬ ಎರಡು ಹಂತಗಳಲ್ಲಿ ನಡೆಯಲಿದೆ. ಪರೀಕ್ಷೆಯನ್ನು ಫೆಬ್ರವರಿ–ಮಾರ್ಚ್ ನಲ್ಲಿ ನಡೆಸುವ ನಿರೀಕ್ಷೆಯಿದೆ. ವೇತನದ ವಿಚಾರದಲ್ಲಿ, ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಸುಮಾರು 48,480 ರಿಂದ 85,920 ರೂ. ವರೆಗೆ ಹಾಗೂ ವಿದೇಶಿ ವಿನಿಮಯ ಅಧಿಕಾರಿ ಹುದ್ದೆಗೆ 85,920 ರಿಂದ 1,05,280 ರೂ. ವರೆಗೆ ಮಾಸಿಕ ವೇತನ ಲಭ್ಯವಾಗಲಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಬ್ಯಾಂಕ್ ಸಲಹೆ ನೀಡಿದೆ. ಬ್ಯಾಂಕಿಂಗ್ ವಲಯದಲ್ಲಿ ಭದ್ರ ಮತ್ತು ಗೌರವಯುತ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆ: ಮರು ಎಣಿಕೆಯಲ್ಲೂ ‘ಕೈ’ ನಾಯಕನದ್ದೇ ಮೇಲುಗೈ – Kannada News | Malur MLA Nanjegowda Wins Vote Recount: Supreme Court Confirms Victory

ಕೋಲಾರ, ಫೆಬ್ರವರಿ 05: ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ಕಾರ್ಯದಲ್ಲಿಯೂ ಕಾಂಗ್ರೆಸ್​​ನ ಹಾಲಿ ಶಾಸಕ ಕೆ.ವೈ. ನಂಜೇಗೌಡ ಮೇಲುಗೈ ಸಾಧಿಸಿದ್ದಾರೆ. ಮರುಎಣಿಕೆ ನಡೆಸಿ ಸುಪ್ರೀಂಕೋರ್ಟ್​ಗೆ ಅಧಿಕಾರಿಗಳು ಸಲ್ಲಿಸಿದ್ದ ಮಾಹಿತಿಯೀಗ ಬಹಿರಂಗಗೊಂಡಿದ್ದು ಮರು ಎಣಿಕೆಯಲ್ಲಿ ಕಾಂಗ್ರೆಸ್​ನ ನಂಜೇಗೌಡಗೆ 50,957 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಜುನಾಥಗೌಡಗೆ 50,707  ಮತಗಳು ಬಂದಿವೆ. ಹೀಗಾಗಿ ನಂಜೇಗೌಡ ಅವರೇ ಮಾಲೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯುತ್ತಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ವಿರುದ್ಧ ಕಾಂಗ್ರೆಸ್​​ನ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಗೆದ್ದಿದ್ದರು. ಆದ್ರೆ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದ ಮಂಜುನಾಥ್ ಗೌಡ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕೋರ್ಟ್​​ ಮೆಟ್ಟಿಲೇರಿದ್ದರು. ಆ ಬಳಿಕ ಕೋರ್ಟ್​​ ಸೂಚನೆಯಂತೆ ಕೋಲಾರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನವೆಂಬರ್ 11ರಂದು ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆದಿತ್ತು. ಬಳಿಕ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರುಮತ ಎಣಿಕೆ ಕಾರ್ಯ ಅಂತ್ಯ; ಆದರೂ ತೃಪ್ತಿಯಾಗಿಲ್ಲ ಎಂದ ಬಿಜೆಪಿ ಪರಾಜಿತ ಅಭ್ಯರ್ಥಿ

ಆದರೆ ಮಾಜಿ ಶಾಸಕ ಮಂಜುನಾಥಗೌಡ ಮರು ಎಣಿಕೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದರು. ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸಿಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್ ಗಳನ್ನು ಎಣಿಸಬೇಕಿತ್ತು. ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಲಾಗಿದೆ. ಚುನಾವಣೆ ಮರುಎಣಿಕೆ ವಿರುದ್ದ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ನನ್ನ ಕೆಲವೊಂದು ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಇತ್ತ ನಂಜೇಗೌಡ ಮಾತ್ರ ಮರು ಎಣಿಕೆಯಲ್ಲಿಯೂ ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:56 pm, Thu, 5 February 26

Source link

ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಭಾರತದ ಶ್ರೀಮಂತ ಕುಟುಂಬದ ಕುಡಿ: ಯಾರೀಕೆ? – Kannada News | Ananya Birla started new movie production house Birla studios

ಸಿನಿಮಾ (Cinema) ನಿರ್ಮಾಣ ಎಂಬುದು ಬಹಳ ರಿಸ್ಕಿ ಉದ್ಯಮ. ಇಲ್ಲಿ ಸಣ್ಣ-ಪುಟ್ಟ ಜೇಬಿನವರು ಉಳಿಯುವುದು, ಬೆಳೆಯುವುದು ಬಹಳ ಕಷ್ಟ. ಈಗಂತೂ ಸಿನಿಮಾಗಳ ಸರಾಸರಿ ಬಜೆಟ್ 500 ಕೋಟಿ ದಾಟಿರುವ ಸಂದರ್ಭದಲ್ಲಿ ಎಲ್ಲ ನಿರ್ಮಾಪಕರು ಸಿನಿಮಾಗಳನ್ನು ಮಾಡಿ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಮುಂಚೆ ಎಲ್ಲ ಸಿನಿಮಾ ನಿರ್ಮಾಣ ಎಂಬುದು ವ್ಯವಹಾರದ ಜೊತೆಗೆ ಕಲಾಸಕ್ತಿ ಸಹ ಆಗಿತ್ತು. ಆದರೆ ಈಗ ಕಾರ್ಪೊರೇಟ್ ವ್ಯವಹಾರವಾಗಿದೆ, ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ವ್ಯವಸ್ಥಿತ ಉದ್ಯಮವಾಗಿ ಸಿನಿಮಾ ನಿರ್ಮಾಣವನ್ನು ನಡೆಸುತ್ತಿವೆ. ಈಗಾಗಲೇ ಅಂಥಹ ಹಲವು ಸಂಸ್ಥೆಗಳು ಭಾರತದಲ್ಲಿ ಸಕ್ರಿಯವಾಗಿದ್ದು, ಇದೀಗ ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿಕೊಂಡಿರುವ ಬಿರ್ಲಾ ಕುಟುಂಬವೂ ಸಹ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.

ಅಂಬಾನಿ, ಟಾಟಾ, ಜಿಂದಾಲ್, ಅದಾನಿ ಗ್ರೂಪ್​​ಗಳ ರೀತಿಯೇ ಬಿರ್ಲಾ ಗ್ರೂಪ್ ಭಾರತದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಸಮೂಹ ಸಂಸ್ಥೆ. ಫ್ಯಾಷನ್, ಕನ್​​ಸ್ಟ್ರಕ್ಷನ್, ಐಟಿ, ಫಾರ್ಮಸಿ, ಆಯಿಲ್ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಹೊಂದಿರುವ ಆದಿತ್ಯ ಬಿರ್ಲಾ ಸಂಸ್ಥೆ ಇದೀಗ ಮನೊರಂಜನಾ ಕ್ಷೇತ್ರಕ್ಕೂ ಕಾಲಿರಿಸಿದೆ. ಈ ಮೊದಲು ಮತ್ತೊಂದು ಸಂಸ್ಥೆಯ ಅಡಿಯಲ್ಲಿ ತೀರ ಸಣ್ಣ-ಪುಟ್ಟ ಎಂಟರ್ಟೈನ್​​ಮೆಂಟ್ ಪ್ರಾಜೆಕ್ಟ್​ಗಳನ್ನು ನಾಮ್​ ಕೆ ವಾಸ್ತೆ ಮಾಡಿದ್ದ ಬಿರ್ಲಾ ಸಂಸ್ಥೆ ಇದೀಗ ತನ್ನ ಹೆಸರಿನೊಂದಿಗೆ ಸಿನಿಮಾ ರಂಗಕ್ಕೆ ಇಳಿದಿದೆ.

ಇದನ್ನೂ ಓದಿ:ಸಿನಿಮಾ ನಿರ್ಮಾಣ ತ್ಯಜಿಸಿದ ವೆಟ್ರಿಮಾರನ್, ಕಾರಣ ಏನು?

ಆದಿತ್ಯ ಬಿರ್ಲಾ ಗ್ರೂಪ್​​ನ ಹಾಲಿ ಚೇರ್​​ಮ್ಯಾನ್​ ಆಗಿರುವ ಕುಮಾರ ಮಂಗಲಮ್ ಬಿರ್ಲಾ ಅವರ ಪುತ್ರಿ, ಉದ್ಯಮಿ ಅನನ್ಯಾ ಬಿರ್ಲಾ ಅವರು ಬಿರ್ಲಾ ಸ್ಟುಡಿಯೋಸ್ ಪ್ರಾರಂಭ ಮಾಡಿದ್ದು, ಸಿನಿಮಾ ನಿರ್ಮಾಣ, ವಿತರಣೆಗೆ ಇಳಿದಿದ್ದಾರೆ. ಅನನ್ಯಾ ಬಿರ್ಲಾ ಅವರು ಈ ಹಿಂದೆ ಬಿರ್ಲಾದ ಫ್ಯಾಷನ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳನ್ನು ನಿರ್ವಹಿಸಿದ ಅನುಭವ ಉಳ್ಳವರಾಗಿದ್ದು, ಇದೀಗ ಬಿರ್ಲಾ ಸ್ಟುಡಿಯೋಸ್​​ನ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ.

ಸ್ಟುಡಿಯೋ ಬಗ್ಗೆ ಹೊರಡಿಸಿರು ಪ್ರಕಟಣೆಯಲ್ಲಿ ಹೇಳಿರುವಂತೆ, ‘ಬಿರ್ಲಾ ಸ್ಟುಡಿಯೋಸ್ ಒಂದು ಉನ್ನತ ಪರಿಕಲ್ಪನೆಯ, ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಿಸುವತ್ತ ಗಮನಹರಿಸುವ ಚಲನಚಿತ್ರ ಸ್ಟುಡಿಯೋ ಆಗಿದೆ. ಕರಕುಶಲತೆ ಮತ್ತು ದೀರ್ಘಕಾಲದ ಪ್ರಸ್ತುತತೆಗೆ ಆದ್ಯತೆ ನೀಡುವ, ಬಹು ಸಮಯ ನೆನಪಿಡಬಹುದಾದ ಕಥೆಗಳು ಸ್ಟುಡಿಯೋದ ಆಯ್ಕೆ ಆಗಿರಲಿದೆ. ಬಿರ್ಲಾ ಸ್ಟುಡಿಯೋಸ್ ಗಟ್ಟಿ ಕತೆಗಳನ್ನು ಹೊಂದಿರುವ ವಾಣಿಜ್ಯ ಚಲನಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಅತ್ಯುತ್ತಮ ಪ್ರತಿಭೆ, ಉದಯೋನ್ಮುಖ ಪ್ರತಿಭಾವಂತರು ಮತ್ತು ದಿಟ್ಟ ವಿಚಾರಗಳಿಗೆ ಬೆಂಬಲ ನೀಡುತ್ತದೆ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:58 pm, Thu, 5 February 26

Source link

WPL 2026 Final: ಡೆಲ್ಲಿ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ? ಇತಿಹಾಸ ಬದಲಿಸುತ್ತಾ ಸ್ಮೃತಿ ಪಡೆ? – Kannada News | WPL 2026 Final: RCB vs DC in Vadodara – Battle for Glory and History

ಇನ್ನು ಈ ಫೈನಲ್‌ ಪಂದ್ಯಕ್ಕೂ ಮೊದಲು ಆರ್​ಸಿಬಿ ಮತ್ತು ಡೆಲ್ಲಿ ತಂಡಗಳ ನಡುವಿನ ಮುಖಾಮುಖಿ ದಾಖಲೆಯನ್ನು ನೋಡಿದರೆ, ಡೆಲ್ಲಿ ಕ್ಯಾಪಿಟಲ್ಸ್, ಆರ್​ಸಿಬಿ ಮೇಲೆ ಮೇಲುಗೈ ಸಾಧಿಸಿದೆ. ಇದುವರೆಗೆ ಎರಡು ತಂಡಗಳು ಒಂಬತ್ತು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆರರಲ್ಲಿ ಗೆದ್ದಿದ್ದರೆ, ಆರ್​ಸಿಬಿ ಉಳಿದ ಪಂದ್ಯಗಳನ್ನು ಗೆದ್ದಕೊಂಡಿದೆ.

Source link

ಮದುವೆಗೆ ಕೆಲವೇ ದಿನ ಬಾಕಿ ಇರುವಾಗಲೂ ಶೂಟಿಂಗ್ ನಿಲ್ಲಿಸಿಲ್ಲ ರಶ್ಮಿಕಾ ಮಂದಣ್ಣ – Kannada News | Rashmika Mandanna shooting for Allu Arjun new movie AA22XA6 in Mumbai ahead of marriage

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಹಾಗಿದ್ದರೂ ಕೂಡ ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್ (Allu Arjun) ಜೊತೆಗಿನ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್​ದಾರೆ. ಮುಂಬೈನಲ್ಲಿ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಅದರಲ್ಲಿ ರಶ್ಮಿಕಾ ಮಂದಣ್ಣ ಅವರು ಭಾಗಿಯಾಗಿದ್ದಾರೆ. ಈ ಸಿನಿಮಾಗೆ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ಇದನ್ನು ‘AA22xA6’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿನ ರಶ್ಮಿಕಾ ಮಂದಣ್ಣ ಅವರ ಪಾತ್ರದ ಬಗ್ಗೆ ಅಚ್ಚರಿಯ ಮಾಹಿತಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನೆಗೆಟಿವ್ ರೋಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಮೂಡಿದೆ.

ಮುಂಬೈನಲ್ಲಿ ‘AA22xA6’ ಚಿತ್ರಕ್ಕೆ ಶೂಟಿಂಗ್ ಮಾಡಲಾಗುತ್ತಿದೆ. ಸದ್ಯಕ್ಕೆ ರಶ್ಮಿಕಾ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಹಂತದ ಶೂಟಿಂಗ್ ಮುಗಿದ ಬಳಿಕ ರಶ್ಮಿಕಾ ಅವರು ಮದುವೆಗಾಗಿ ಬ್ರೇಕ್ ಪಡೆದುಕೊಳ್ಳಲಿದ್ದಾರೆ. ಇನ್ನುಳಿದ ಪಾತ್ರಧಾರಿಗಳಾದ ಅಲ್ಲು ಅರ್ಜುನ್ ಮತ್ತು ಜಾನ್ವಿ ಕಪೂರ್ ಅವರು ಮುಂದಿನ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಲೆಬ್ರಿಟಿ ಮದುವೆ ಎಂದರೆ ಬಹಳ ಅದ್ದೂರಿಯಾಗಿ ಇರುತ್ತದೆ. ಅದಕ್ಕೆ ತಯಾರಿ ಕೂಡ ಅಷ್ಟೇ ಜೋರಾಗಿರುತ್ತದೆ. ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಸ್ಟಾರ್. ಅದೇ ರೀತಿ ವಿಜಯ್ ದೇವರಕೊಂಡ ಕೂಡ ಸಖತ್ ಜನಪ್ರಿಯತೆ ಹೊಂದಿದ್ದಾರೆ. ಅವರಿಬ್ಬರ ಮದುವೆ ತಯಾರಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಹಾಗಿದ್ದರೂ ಕೂಡ ರಶ್ಮಿಕಾ ಮಂದಣ್ಣ ಅವರು ಇನ್ನೂ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆದರೆ ಈ ಬಗ್ಗೆ ಅವರು ಇನ್ನೂ ಸಾರ್ವಜನಿಕವಾಗಿ ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

42 ವರ್ಷದ ಬಳಿಕ ಸಿಕ್ಕಿತು ನ್ಯಾಯ! ಅಲಹಾಬಾದ್ ಹೈಕೋರ್ಟ್​​ನಿಂದ 100 ವರ್ಷದ ಕೊಲೆ ಆರೋಪಿ ಖುಲಾಸೆ – Kannada News | Justice after 42 years Allahabad High Court acquits 100 year old man convicted for murder

ಅಲಹಾಬಾದ್, ಫೆಬ್ರವರಿ 5: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವ ಪ್ರಕರಣವೂ ಬಹಳ ಬೇಗ ಇತ್ಯರ್ಥವಾಗುವುದಿಲ್ಲ ಎಂಬ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಈ ರೀತಿಯ ವಿಳಂಬದ ನ್ಯಾಯದಿಂದಾಗಿ ತಪ್ಪು ಮಾಡಿರದ ಆರೋಪಿಗಳು ತೀವ್ರ ತೊಂದರೆ ಅನುಭವಿಸಿದ ಉದಾಹರಣೆಗಳೂ ಇವೆ. ಈ ರೀತಿಯ ನ್ಯಾಯಾಂಗದ ವಿಳಂಬದ ದೀರ್ಘಾವಧಿಯ ಪರಿಣಾಮವನ್ನು ಒತ್ತಿಹೇಳುವ ಮಹತ್ವದ ತೀರ್ಪೊಂದು ಹೊರಬಿದ್ದಿದ್ದು, ಅಲಹಾಬಾದ್ ಹೈಕೋರ್ಟ್ (Allahabad High Court) 1982ರ ಹಿಂದಿನ ಕೊಲೆ ಪ್ರಕರಣದಲ್ಲಿ 100 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರ ವಿಭಾಗೀಯ ಪೀಠವು 1984ರಲ್ಲಿ ಹಮೀರ್‌ಪುರದ ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಧನಿರಾಮ್ ಅವರ ಶಿಕ್ಷೆಯನ್ನು ರದ್ದುಗೊಳಿಸಿತು. ಜೀವಾವಧಿ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿ 40 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ್‌ನಲ್ಲಿ ಬಾಕಿ ಇತ್ತು ಎಂಬುದು ವಿಚಿತ್ರ ಮತ್ತು ವಿಶೇಷ. ಆದರೆ, ಧನಿರಾಮ್ ಅವರ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ಇದನ್ನೂ ಓದಿ: 10 ವರ್ಷ ಹಿಂದೆ ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಪೊಲೀಸರಿಗೆ ಕರೆ

ಈ ಪ್ರಕರಣ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ 1982ರಲ್ಲಿ ಕೊಲೆ ನಡೆದಿದ್ದು, ಮೈಕು, ಸತ್ತಿ ದೀನ್ ಮತ್ತು ಧನಿ ರಾಮ್ ಎಂಬ ಮೂವರು ಆರೋಪಿಗಳಾಗಿದ್ದರು. ಕೊಲೆಯ ನಂತರ ಮೈಕು ತಲೆಮರೆಸಿಕೊಂಡಿದ್ದರೆ, ಹಮೀರ್‌ಪುರ ಸೆಷನ್ಸ್ ನ್ಯಾಯಾಲಯವು 2 ವರ್ಷಗಳ ನಂತರ 1984ರಲ್ಲಿ ಸತ್ತಿ ದೀನ್ ಮತ್ತು ಧನಿ ರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದೇ ವರ್ಷ ಧನಿ ರಾಮ್ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರ ಮೇಲ್ಮನವಿ ವಿಚಾರಣೆಯಲ್ಲಿರುವಾಗಲೇ ಸತ್ತಿ ದಿನ್ ನಿಧನರಾದರು, ಇದರಿಂದಾಗಿ ಈ ಪ್ರಕರಣದಲ್ಲಿ ಧನಿ ರಾಮ್ ಮಾತ್ರ ಬದುಕುಳಿದ ಮೇಲ್ಮನವಿದಾರರಾದರು.

ಅಂದಿನಿಂದ ಧನಿ ರಾಮ್ ಜಾಮೀನಿನ ಮೇಲೆ ಹೊರಗಿರುವುದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್, ಅವರ ಜಾಮೀನು ಬಾಂಡ್ ಅನ್ನು ರದ್ದುಗೊಳಿಸುವಂತೆ ನಿರ್ದೇಶಿಸಿತು ಮತ್ತು ಆರೋಪಿಯನ್ನು ಖುಲಾಸೆಗೊಳಿಸುವ ನಿರ್ಧಾರವು ಪ್ರಕರಣದ ಅರ್ಹತೆಯನ್ನು ಆಧರಿಸಿದೆ ಎಂದು ಹೇಳಿತು.

ಇದನ್ನೂ ಓದಿ: ಹಣಕ್ಕಾಗಿ ತ್ರಿವಳಿ ಕೊಲೆ ಶಂಕೆ: ತಂಗಿ ಗರ್ಭಿಣಿ ಎಂದು ಖಾಕಿ ಮುಂದೆ ಕತೆ ಹೇಳಿದ್ನಾ ಕಿರಾತಕ?

ತನ್ನ ತೀರ್ಪಿನಲ್ಲಿ, ಪ್ರಮುಖ ಆರೋಪಿ ಶೂಟರ್ ಮೈಕು ಅವರನ್ನು ಎಂದಿಗೂ ಬಂಧಿಸಲೇ ಇಲ್ಲ ಎಂದು ಹೈಕೋರ್ಟ್ ಗಮನಿಸಿದೆ. ಮೇಲ್ಮನವಿಯ ದೀರ್ಘಾವಧಿಯ ಬಾಕಿ ಉಳಿದಿರುವುದು ಮತ್ತು ಬದುಕುಳಿದ ಆರೋಪಿಯ ವಯಸ್ಸು ನಿರ್ಲಕ್ಷಿಸಲಾಗದ ಮಹತ್ವದ ಅಂಶಗಳಾಗಿವೆ ಎಂದು ಪೀಠ ಗಮನಿಸಿದೆ. ಹೀಗಾಗಿ, ಜೀವಾವಧಿ ಶಿಕ್ಷೆಯನ್ನು ಬದಿಗಿಟ್ಟು ಅಲಹಾಬಾದ್ ಹೈಕೋರ್ಟ್ ಧನಿರಾಮ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು ಮತ್ತು ಅವರ ಜಾಮೀನು ಬಾಂಡ್‌ಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version