ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ? – Kannada News

ಬೆಂಗಳೂರು, (ಜೂನ್ 08): ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ (DK Shivakumar) ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಹೌದು…ಡಿಕೆ ಶಿವಕುಮಾರ್ ಅವರು ಯಾವುದೇ ಪಕ್ಷ ಎನ್ನುವುದನ್ನು ನೋಡದೇ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳನ್ನು (Karnataka former chief minister) ಭೇಟಿ ಮಾಡುತ್ತಿದ್ದಾರೆ. ಸಿಎಂ ಆಗಿ ಪ್ರಮಾಣವಚನಕ್ಕೂ ಮುನ್ನವೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಎಚ್​​ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಂಡಿದ್ದರು. ಇದನ್ನು ಡಿಕೆ ಶಿವಕುಮಾರ್ ಮುಂದುವರೆಸಿದ್ದು, ಇಂದು (ಜೂನ್ 08) ಮಾಜಿ ಸಿಎಂಗಳಾದ ವೀರಪ್ಪ ಮೊಯ್​ಲಿ, ಡಿವಿ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸದಾನಂದಗೌಡ ಅವರ ಕುಟುಂಬ ಡಿಕೆ ಶಿವಕುಮಾರ್ ಅವರನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿರುವುದು ವಿಶೇಷ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯದ ಎಲ್ಲಾ ಮಾಜಿ ಸಿಎಂಗಳ ನಿವಾಸಕ್ಕೂ ಭೇಟಿ ನೀಡುತ್ತೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೂ ಹೋಗುತ್ತೇನೆ. ಕುಮಾರಸ್ವಾಮಿ ಸಮಯ ನೀಡಿದರೆ ಅವರನ್ನೂ ಭೇಟಿ ಮಾಡುತ್ತೇ‌ನೆ. ಮಾಜಿ ಮುಖ್ಯಮಂತ್ರಿಗಳ ಅನುಭವ ಕೇಳಬೇಕಲ್ವಾ? ಎಲ್ಲರ ಅನುಭವ ಮತ್ತು ಮಾರ್ಗದರ್ಶನ ಕೇಳಬೇಕಲ್ವೇ? ಮಾಜಿ ಮುಖ್ಯಮಂತ್ರಿಗಳು ಕೂಡ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಏನು ಗೌರವ ನೀಡಬೇಕೋ ಕೊಡುತ್ತೇನೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿಯ ಹೆಗಲಿಗೊರಗಿ ಕಣ್ಣೀರಿಟ್ಟ ತಾಯಿ; ಮನಕಲಕುವ ವಿಡಿಯೋ ಇಲ್ಲಿದೆ – Kannada News

ನವದೆಹಲಿ, ಜೂನ್ 8: ಇಂದು ಭಾರತದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಮರಣೋತ್ತರ ಪ್ರಶಸ್ತಿಯನ್ನು ಸ್ವೀಕರಿಸುವಾಗ ಆ ಸೈನಿಕರ ಕುಟುಂಬಸ್ಥರು ಕಣ್ಣೀರಿಟ್ಟ ದೃಶ್ಯಗಳು ನೋಡುಗರನ್ನು ಕೂಡ ಭಾವುಕರನ್ನಾಗಿಸಿದವು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರ ತಾಯಿಯು ತಮ್ಮ ಮಗನ ಪರವಾಗಿ ‘ಕೀರ್ತಿ ಚಕ್ರ’ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣ ಇಡೀ ದೇಶವನ್ನೇ ಭಾವುಕಗೊಳಿಸಿದೆ.

ಜುಲೈ 6, 2024ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದ ಸಿಪಾಯಿ ಪ್ರವೀಣ್ ಪ್ರಭಾಕರ್, ಇಬ್ಬರು ಉಗ್ರರನ್ನು ಹತ್ಯೆಗೈದು ವೀರಮರಣ ಅಪ್ಪಿದ್ದರು. ಅವರ ಈ ಸಾಹಸ ಮತ್ತು ದೇಶಕ್ಕಾಗಿ ನೀಡಿದ ಬಲಿದಾನವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಗಿದೆ. ಈ ವೇಳೆ ಅವರ ತಾಯಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಗಲಿಗೊರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ರಾಷ್ಟ್ರಪತಿ ಸಾಂತ್ವನಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮುಖ ವಿಪರೀತ ಊದಿಕೊಂಡಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್ – Kannada News

ಮಾಡೆಲಿಂಗ್ ಹಾಗೂ ವಿಭಿನ್ನ ಫ್ಯಾಷನ್ ಉಡುಪುಗಳ ಮೂಲಕವೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಉರ್ಫಿ ಜಾವೇದ್ (Uorfi Javed) ಕಳೆದ ವರ್ಷ ತಮ್ಮ ಮುಖದ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದರು. ಅವರ ಕಣ್ಣು, ಕೆನ್ನೆ ಹಾಗೂ ತುಟಿಗಳು ವಿಪರೀತವಾಗಿ ಉಬ್ಬಿಕೊಂಡಿದ್ದ ಫೋಟೋಗಳು ವೈರಲ್ ಆದಾಗ, ನೆಟ್ಟಿಗರು ‘ಕಾಸ್ಮೆಟಿಕ್ ಫಿಲ್ಲರ್ಸ್ (Plastic Surgery/Fillers) ಮಾಡಿಸಿಕೊಳ್ಳಲು ಹೋಗಿ ಮುಖ ಹಾಳು ಮಾಡಿಕೊಂಡಿದ್ದಾರೆ’ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ಆದರೆ, ತಮ್ಮ ಮುಖ ಆ ರೀತಿ ಉಬ್ಬಿಕೊಳ್ಳಲು ಯಾವುದೇ ಪ್ಲಾಸ್ಟಿಕ್ ಸರ್ಜರಿ ಅಥವಾ ಫಿಲ್ಲರ್ಸ್ ಕಾರಣವಲ್ಲ, ಬದಲಿಗೆ ಅದೊಂದು ಆರೋಗ್ಯ ಸಮಸ್ಯೆ ಎಂದು ಈಗ ಉರ್ಫಿ ಜಾವೇದ್ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಸಲಿ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ‘ಇದು ಫಿಲ್ಲರ್ಸ್ ಅಲ್ಲ, ಹೈ ಕಾರ್ಟಿಸೋಲ್ ಮತ್ತು ಮಾನಸಿಕ ಒತ್ತಡ’ ಎಂದು ಅವರು ಹೇಳಿದ್ದಾರೆ.

ತಮ್ಮ ಹಳೆಯ ಮುಖದ ಫೋಟೋಗಳನ್ನು ವಿಡಿಯೋದಲ್ಲಿ ತೋರಿಸುತ್ತಾ ಮಾತನಾಡಿದ ಉರ್ಫಿ, ‘ಇದು ಒಂದುವರೆ ವರ್ಷದ ಹಿಂದೆ ನನ್ನ ಮುಖ ಇದ್ದ ಸ್ಥಿತಿ. ಆಗ ಎಲ್ಲರೂ ನಾನು ಫಿಲ್ಲರ್ಸ್ ಮಾಡಿಸಿಕೊಂಡು ಮುಖದ ಶೇಪ್ ಹಾಳು ಮಾಡಿಕೊಂಡಿದ್ದೇನೆ ಅಂದುಕೊಂಡಿದ್ದರು. ಆದರೆ ಅಸಲಿಗೆ ನನ್ನ ದೇಹದಲ್ಲಿದ್ದ ಅತಿಯಾದ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಮತ್ತು ವಿಪರೀತ ಮಾನಸಿಕ ಒತ್ತಡದಿಂದಾಗಿ ನನ್ನ ಮುಖ ಆ ರೀತಿ ಊದಿಕೊಂಡಿತ್ತು. ನಾನು ಯಾವುದೇ ಕಾಸ್ಮೆಟಿಕ್ ಸರ್ಜರಿ ಮಾಡಿಸಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಉರ್ಫಿ ಜಾವೇದ್ ವೈರಲ್ ವಿಡಿಯೋ:

ಮುಖ ಉಬ್ಬಿಕೊಳ್ಳಲು ಮತ್ತೊಂದು ಪ್ರಮುಖ ಕಾರಣವನ್ನು ಉರ್ಫಿ ಜಾವೇದ್ ಬಿಚ್ಚಿಟ್ಟಿದ್ದಾರೆ. ಅವರಿಗೆ ಬೆಕ್ಕುಗಳೆಂದರೆ ಅಲರ್ಜಿ! ಈ ವಿಷಯವೇ ಮೊದಲು ಅವರಿಗೆ ತಿಳಿದಿರಲಿಲ್ಲವಂತೆ. ‘ನನ್ನ ಮನೆಯಲ್ಲಿ ಮೂರು ಮುದ್ದಿನ ಬೆಕ್ಕುಗಳಿವೆ. ಆದರೆ ನನಗೆ ಬೆಕ್ಕಿನ ರೋಮಗಳಿಂದ ಅಲರ್ಜಿ ಆಗುತ್ತದೆ ಎಂಬುದು ತಡವಾಗಿ ತಿಳಿಯಿತು. ಹಲವು ವೈದ್ಯರನ್ನು ಭೇಟಿಯಾದಾಗ ಕೆಲವರು ಇದು ಸೈನಸ್ ಸಮಸ್ಯೆ ಎಂದಿದ್ದರು. ಕೊನೆಗೆ ಟೆಸ್ಟ್ ಮಾಡಿಸಿದಾಗ ನನ್ನ ಮುದ್ದಿನ ಬೆಕ್ಕುಗಳೇ ಈ ಅಲರ್ಜಿಗೆ ಕಾರಣ ಎಂದು ಗೊತ್ತಾಯಿತು. ಆದರೆ ಅಷ್ಟರಲ್ಲಾಗಲೇ ನಾನು ಅವುಗಳ ಜೊತೆ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲು ಆರಂಭಿಸಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ: 40 ಸಾವಿರ ರೂ. ಸಂಬಳ ಇದ್ದಾಗ ಮನೆ ನಡೆಸಲು ಕಷ್ಟಪಟ್ಟಿದ್ದ ಉರ್ಫಿ ಜಾವೇದ್; ಈಗ ಎಷ್ಟು?

‘ಹಿಂದೆ ನಾನು ದಪ್ಪಗಾಗುತ್ತೇನೆ ಎಂಬ ಭಯದಿಂದ ಸರಿಯಾಗಿ ಊಟವನ್ನೇ ಮಾಡುತ್ತಿರಲಿಲ್ಲ. ಆದರೆ ಈಗ ನಾನು ನನ್ನ ಆರೋಗ್ಯದ ಕಡೆ ಗಮನ ಹರಿಸುತ್ತಿದ್ದೇನೆ. ವರ್ಕೌಟ್‌ ಮಾಡಲು ಹಾಗೂ ಅಲರ್ಜಿಯನ್ನು ತಡೆಗಟ್ಟಲು ಇಮ್ಯುನೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಸರಿಯಾಗಿ ಆಹಾರ ಸೇವಿಸುತ್ತಿರುವುದರಿಂದ ನನ್ನ ಮುಖ ಮೊದಲಗಿಂತ ತುಂಬಾ ಚೆನ್ನಾಗಿದೆ’ ಎಂದು ತಮ್ಮ ಫಿಟ್‌ನೆಸ್ ರಹಸ್ಯವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ – Kannada News

ಮನಿಲಾ, (ಜೂನ್ 08): ದಕ್ಷಿಣ ಫಿಲಿಪೈನ್ಸ್‌ ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಹಾಗೂ ಪ್ರಮುಖ ಸೇತುವೆಗೆ ಹಾನಿಯಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಸುಮಾರು 1 ಮೀಟರ್ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ. ಇನ್ನು ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಭೂಕಂಪದ ಕೇಂದ್ರಬಿಂದು ಬುರಿಯಾಸ್​ನಿಂದ 24.7 ಕಿ.ಮೀ ದೂರದಲ್ಲಿದ್ದು, ಪತ್ತೆ ಹಚ್ಚಿ ತಕ್ಷಣ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮತ್ತು ಜಪಾನ್ ಹವಾಮಾನ ಇಲಾಖೆ ಜಂಟಿಯಾಗಿ ಫಿಲಿಪೈನ್ಸ್​, ಇಂಡೋನೇಷ್ಯಾ, ತೈವಾನ್ ಮತ್ತು ಜಪಾನ್ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಿವೆ. ಇನ್ನು ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ಎನ್ನುವುದನ್ನು ನೋಡಿ.

ವಿದೇಶ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೀರ ಯೋಧರಿಗೆ ರಾಷ್ಟ್ರಪತಿಯಿಂದ ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ – Kannada News

ನವದೆಹಲಿ, ಜೂನ್ 8: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯಲ್ಲಿ ತೋರಿದ ಅಪ್ರತಿಮ ಸಾಹಸ ಮತ್ತು ಧೀರತನಕ್ಕಾಗಿ ಭಾರತೀಯ ವಾಯುಪಡೆಯ (IAF) ವೀರ ಅಧಿಕಾರಿಗಳಿಗೆ ವೀರ ಚಕ್ರ (Vir Chakra) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಕ್ಷಣಾ ಪಡೆಯ ಯೋಧರಿಗೆ ಕೀರ್ತಿ ಚಕ್ರ, ಶೌರ್ಯ ಚಕ್ರ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗಿದೆ. ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ 2026ರ ರಕ್ಷಣಾ ಹೂಡಿಕೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು 7 ಕೀರ್ತಿ ಚಕ್ರ, 15 ವೀರ ಚಕ್ರ ಮತ್ತು 29 ಶೌರ್ಯ ಚಕ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

‘ವೀರ ಚಕ್ರ’ ಯುದ್ಧದ ಸಮಯದಲ್ಲಿ ಶತ್ರುಗಳ ಎದುರು ಪ್ರದರ್ಶಿಸುವ ಅಪ್ರತಿಮ ಶೌರ್ಯಕ್ಕಾಗಿ ನೀಡಲಾಗುವ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಪ್ರಾಣದ ಹಂಗು ತೊರೆದು ಶತ್ರುಗಳ ಯುದ್ಧ ವಿಮಾನಗಳನ್ನು ಅಥವಾ ನೆಲೆಗಳನ್ನು ಅತ್ಯಂತ ಚಾಣಾಕ್ಷತನದಿಂದ ಹಿಮ್ಮೆಟ್ಟಿಸಿದ ವಾಯುಪಡೆಯ ಫೈಟರ್ ಪೈಲಟ್‌ಗಳು ಮತ್ತು ಕಮಾಂಡರ್‌ಗಳಿಗೆ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಾಗತಿಕ ಮಟ್ಟದಲ್ಲಿ ಭಾರತೀಯ ವಾಯುಪಡೆಯ ತಾಂತ್ರಿಕ ಮತ್ತು ಯುದ್ಧ ಕೌಶಲ್ಯದ ಪ್ರಾಬಲ್ಯವನ್ನು ಈ ಅಧಿಕಾರಿಗಳು ಜಗತ್ತಿಗೆ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗಳ ಗಮನಸೆಳೆದ ಬೆಂಗಳೂರು ಕರಗ: ಅಧ್ಯಕ್ಷರನ್ನ ಕರೆಯಿಸಿ ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?

ಮರಣೋತ್ತರ ಗೌರವ:

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹಲವು ವೀರ ಯೋಧರಿಗೆ ಮರಣೋತ್ತರವಾಗಿಯೂ ಕೀರ್ತಿ ಚಕ್ರ, ಶೌರ್ಯ ಚಕ್ರ, ವೀರ ಚಕ್ರ ಗೌರವವನ್ನು ನೀಡಲಾಗಿದ್ದು, ಅವರ ಕುಟುಂಬಸ್ಥರು ಕಣ್ಣೀರಿನ ನಡುವೆ ಪ್ರಶಸ್ತಿ ಸ್ವೀಕರಿಸಿದರು.

ಕೀರ್ತಿ ಚಕ್ರ ಪ್ರಶಸ್ತಿ:

ಯುದ್ಧ ರಂಗದ ಹೊರಗೆ ಶಾಂತಿ ಸಮಯದಲ್ಲಿ ನೀಡಲಾಗುವ ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯ ಪ್ರಮುಖ ಪುರಸ್ಕೃತರೆಂದರೆ,

ಕ್ಯಾಪ್ಟನ್ ಅಂಶುಮಾನ್ ಸಿಂಗ್ (ಮರಣೋತ್ತರ): ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸಹ ಯೋಧರನ್ನು ರಕ್ಷಿಸಿ ಹುತಾತ್ಮರಾದ ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು.

ಹವಿಲ್ದಾರ್ ಪ್ರದೀಪ್ ಸಿಂಗ್ (ರಾಜಪೂತ್ ರೈಫಲ್ಸ್): ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೋರಿದ ಅಪ್ರತಿಮ ಧೈರ್ಯಕ್ಕಾಗಿ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಯೋಧ ಹುತಾತ್ಮ

ರೈಫಲ್‌ಮ್ಯಾನ್ ಅಲೋಕ್ ರಾವ್ (ಅಸ್ಸಾಂ ರೈಫಲ್ಸ್ – ಮರಣೋತ್ತರ): ಈಶಾನ್ಯ ರಾಜ್ಯದಲ್ಲಿ ಶಾಂತಿ ಕಾಪಾಡುವ ಕಾರ್ಯಾಚರಣೆಯ ವೇಳೆ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೀರ ಚಕ್ರ ಪ್ರಶಸ್ತಿ:

ಯುದ್ಧದ ಸಮಯದಲ್ಲಿ ಶತ್ರುಗಳ ಎದುರು ಪ್ರದರ್ಶಿಸುವ ಧೀರತನಕ್ಕಾಗಿ ನೀಡಲಾಗುವ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿ ಇದಾಗಿದೆ. ಗಡಿ ನಿಯಂತ್ರಣ ರೇಖೆ (LoC) ಹಾಗೂ ಅಂತಾರಾಷ್ಟ್ರೀಯ ಗಡಿಗಳಲ್ಲಿ ಶತ್ರುಗಳ ವಾಯುಪಡೆ ಹಾಗೂ ನುಸುಳುವಿಕೆಯನ್ನು ಅತ್ಯಂತ ಚಾಣಾಕ್ಷತನದಿಂದ ಹಿಮ್ಮೆಟ್ಟಿಸಿದ ವಾಯುಪಡೆ ಮತ್ತು ಭೂಸೇನೆಯ ವೀರ ಅಧಿಕಾರಿಗಳಿಗೆ ಈ ಬಾರಿ ವೀರ ಚಕ್ರ ನೀಡಿ ಗೌರವಿಸಲಾಗಿದೆ.

ಶೌರ್ಯ ಚಕ್ರ ಪುರಸ್ಕೃತರು:

ಶಾಂತಿ ಸಮಯದಲ್ಲಿ ಶೌರ್ಯ, ಸಾಹಸ ಪ್ರದರ್ಶಿಸಿದ ಯೋಧರಿಗೆ ನೀಡಲಾಗುವ ಮೂರನೇ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಈ ಬಾರಿ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಅರೆಸೇನಾ ಪಡೆಗಳ ಹಲವು ಯೋಧರಿಗೆ ಈ ಗೌರವ ಸಂದಿದೆ. ಅವರಲ್ಲಿ ಪ್ರಮುಖರೆಂದರೆ,

ಮೇಜರ್ ದಿಗ್ವಿಜಯ್ ಸಿಂಗ್ ರಾವತ್ (ಪ್ಯಾರಾಚೂಟ್ ರೆಜಿಮೆಂಟ್ – ವಿಶೇಷ ಪಡೆ): ಮಣಿಪುರದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಭಯೋತ್ಪಾದಕರ ಜಾಲವನ್ನು ಧ್ವಂಸಗೊಳಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಮೇಜರ್ ದೀಪೇಂದ್ರ ವಿಕ್ರಮ್ ಬಸ್ನೆಟ್: ಜಮ್ಮು-ಕಾಶ್ಮೀರದ ಗಡಿಯಲ್ಲಿ ನುಸುಳುವಿಕೆಯನ್ನು ತಡೆದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಪವನ್ ಕುಮಾರ್ (ರಾಷ್ಟ್ರೀಯ ರೈಫಲ್ಸ್ – ಮರಣೋತ್ತರ): ಉಗ್ರರೊಂದಿಗಿನ ನೇರ ಗುಂಡಿನ ಚಕಮಕಿಯಲ್ಲಿ ವೀರಮರಣ ಅಪ್ಪುವ ಮುನ್ನ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಕ್ಕಾಗಿ ಶೌರ್ಯ ಚಕ್ರ ನೀಡಲಾಗಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀರ ಯೋಧರ ಕಥೆಗಳು ಮತ್ತು ಹುತಾತ್ಮ ಯೋಧರ ಹೆತ್ತ ತಾಯಂದಿರು ಹಾಗೂ ಪತ್ನಿಯರು ಪ್ರಶಸ್ತಿ ಸ್ವೀಕರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿವೆ. ಭಾರತೀಯ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯ ಮತ್ತು ದೇಶದ ಭದ್ರತೆಯ ಬದ್ಧತೆಯನ್ನು ಈ ಗೌರವಗಳು ಮತ್ತೊಮ್ಮೆ ಎತ್ತಿಹಿಡಿದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ – Kannada News

ಬೆಂಗಳೂರು, ಜೂ.8: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಈ ಸೌಜನ್ಯದ ಭೇಟಿಯು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಭೇಟಿಯ ಸಂದರ್ಭದಲ್ಲಿ, ಡಿಕೆ ಶಿವಕುಮಾರ್ ಮತ್ತು ಜಗದೀಶ್ ಶೆಟ್ಟರ್ ನಡುವೆ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಹಲವರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಿಂದೆ ಪ್ರಮುಖ ನಾಯಕರಾಗಿ ಹಲವು ಬಾರಿ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳಲಾಯಿತು. ಮುಂದಿನ ರಾಜ್ಯಸಭೆ ಚುನಾವಣೆಗಳು, ವಿಧಾನ ಪರಿಷತ್ ಟಿಕೆಟ್ ಹಂಚಿಕೆ, ಹಾಗೂ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಈ ಭೇಟಿಯಲ್ಲಿ ಪ್ರಮುಖ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪಕ್ಷದೊಳಗಿನ ಕಾರ್ಯತಂತ್ರಗಳು ಮತ್ತು ಮುಂಬರುವ ಚುನಾವಣಾ ಸಿದ್ಧತೆಗಳ ಕುರಿತು ಚರ್ಚಿಸಲು ಈ ಭೇಟಿ ಸಹಕಾರಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Women’s T20 World Cup: ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ? – Kannada News

2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಇದೇ ಜೂನ್ 12 ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇನ್ನು ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಈ ಪ್ರತಿಷ್ಠಿತ ಮೆಗಾ ಈವೆಂಟ್‌ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳು ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿವೆ. ಆದರೆ ಅದಕ್ಕೂ ಮುನ್ನ ಈ ಟೂರ್ನಮೆಂಟ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ತಂಡಗಳು ಯಾವುವು ಎಂಬುದನ್ನು ನೋಡೋಣ.

ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಅತಿ ಹೆಚ್ಚು ಫೈನಲ್‌ಗಳನ್ನು ಆಡಿದ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ ನಡೆದ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ 7 ಬಾರಿ ಫೈನಲ್ ತಲುಪಿ ದಾಖಲೆ ನಿರ್ಮಿಸಿದೆ. ಈ ಪೈಕಿ ಆರು ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿದೆ. 2016 ರಲ್ಲಿ ಮಾತ್ರ ವೆಸ್ಟ್ ಇಂಡೀಸ್ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಬಾರಿಯೂ ಕಾಂಗರೂ ತಂಡವು ಪ್ರಶಸ್ತಿ ಫೇವರಿಟ್ ಆಗಿ ಕಣಕ್ಕೆ ಇಳಿಯುತ್ತಿದೆ.

ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್

ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡ ಇಂಗ್ಲೆಂಡ್. ಇಂಗ್ಲೆಂಡ್ ತಂಡ ಒಟ್ಟು ನಾಲ್ಕು ಬಾರಿ ಫೈನಲ್‌ನಲ್ಲಿ ಆಡಿದೆ. ಆದರೆ ಮೂರು ಬಾರಿ ಫೈನಲ್‌ನಲ್ಲಿ ಸೋತಿರುವ ಇಂಗ್ಲೆಂಡ್ 2009 ರಲ್ಲಿ ಮಾತ್ರ ಚಾಂಪಿಯನ್ ಆಗಿದೆ. ಉಳಿದಂತೆ 2012, 2014 ಮತ್ತು 2018 ರ ಫೈನಲ್‌ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಸೋತಿದೆ.

3ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್

ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಇದುವರೆಗೆ ಮೂರು ಬಾರಿ ಫೈನಲ್ ತಲುಪಿದೆ. ಕಿವೀಸ್ ಪಡೆ 2009 ಮತ್ತು 2010 ರಲ್ಲಿ ಫೈನಲ್ ತಲುಪಿದೆಯಾದರೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ 2024 ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಕಳೆದ ಎರಡು ಆವೃತ್ತಿಗಳಲ್ಲಿ (2023 ಮತ್ತು 2024) ಫೈನಲ್‌ನಲ್ಲಿ ಆಡಿದೆಯಾದರೂ ದುರದೃಷ್ಟವಶಾತ್ ಎರಡೂ ಬಾರಿಯೂ ರನ್ನರ್ ಅಪ್ ಆಗಿಯೇ ಉಳಿದಿದೆ.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಒಮ್ಮೆ ಫೈನಲ್ ತಲುಪಿರುವ ಭಾರತ

ಟೀಮ್ ಇಂಡಿಯಾ ವಿಷಯಕ್ಕೆ ಬಂದರೆ, 2020 ರಲ್ಲಿ ಭಾರತೀಯ ಮಹಿಳಾ ತಂಡ ಇಲ್ಲಿಯವರೆಗೆ ಒಮ್ಮೆ ಮಾತ್ರ ಫೈನಲ್ ತಲುಪಿದೆ. ಆದರೆ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನು ಎದುರಿಸಬೇಕಾಯಿತು. ಆದಾಗ್ಯೂ, ಈ ಬಾರಿ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ, ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದಿದೆ. ಇನ್ನು ವೆಸ್ಟ್ ಇಂಡೀಸ್ ತಂಡವು 2016 ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದ್ದು, ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುತ್ತಿರುವಾಗಲೇ ಲೋಕಾ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು: ಬೆಂಗಳೂರಿನಲ್ಲಿ ಲೋಕಾಯುಕ್ತ ಭರ್ಜರಿ ಟ್ರ್ಯಾಪ್ – Kannada News

ಬೆಂಗಳೂರು, ಜೂ.8: ಸಿಲಿಕಾನ್ ಸಿಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಪಾರ್ಟ್‌ಮೆಂಟ್ ಪರಿಶೀಲನೆ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕರನ್ನು (Deputy Chief Electrical Inspector) ಹಣ ಸಹಿತ ವಶಕ್ಕೆ ಪಡೆದಿದ್ದಾರೆ. ಲೋಕಾ ಬಲೆಗೆ ಬಿದ್ದ ಈ ಭ್ರಷ್ಟ ಅಧಿಕಾರಿಯನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಅಪಾರ್ಟ್‌ಮೆಂಟ್ ಕಟ್ಟಡದ ಆವರ್ತಕ ಪರಿಶೀಲನೆ ನಡೆಸಲು ಮತ್ತು ಅದಕ್ಕೆ ಸಂಬಂಧಿಸಿದ ಬಾಕಿ ಇರುವ ವಿದ್ಯುತ್ ಸುರಕ್ಷತಾ ವರದಿಗಳನ್ನು ನೀಡಲು ಅಧಿಕಾರಿ ಸಿದ್ದಪ್ಪ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯುತ್ ಗುತ್ತಿಗೆದಾರರಾದ ರಘುರಾಜ್ ಮತ್ತು ನಾಗರಾಜ್ ಅವರು ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿ, ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದರು.

ಇದನ್ನೂ ಓದಿ: ‘ರಸ್ತೆ ಗುಂಡಿಗೆ ಬಿದ್ದು ಪ್ರಾಣ ಹೋದರೆ ಇಂಜಿನಿಯರ್‌ಗಳೇ ನೇರ ಹೊಣೆ’: ಸಚಿವ ಯು.ಟಿ.ಖಾದರ್ ಖಡಕ್ ವಾರ್ನಿಂಗ್

ಮುಖ್ಯಾಂಶಗಳು:

ಲಂಚ ಸ್ವೀಕರಿಸುತ್ತಿದ್ದ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಲೋಕಯುಕ್ತ ಬಲೆಗೆ

ಅಪಾರ್ಟ್‌ಮೆಂಟ್ ಕಟ್ಟಡ ವಿದ್ಯುತ್ ಸುರಕ್ಷತಾ ವರದಿಗಳನ್ನು ನೀಡಲು ಲಂಚಕ್ಕೆ ಬೇಡಿಕೆ

ಆರೋಪಿ ಸಿದ್ದಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆಯೇ ಇಂದು ದೂರುದಾರರಾದ ರಘುರಾಜ್ ಮತ್ತು ನಾಗರಾಜ್ ಅವರು ಅಧಿಕಾರಿ ಸಿದ್ದಪ್ಪ ಅವರನ್ನು ಭೇಟಿಯಾಗಿ, ಅವರು ಕೇಳಿದ್ದ 20,000 ರೂಪಾಯಿ ಲಂಚದ ಹಣವನ್ನು ಹಸ್ತಾಂತರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳ ತಂಡ ದಾಳಿ ನಡೆಸಿ, ಲಂಚದ ಹಣದೊಂದಿಗೆ ಸಿದ್ದಪ್ಪನನ್ನು ಸ್ಥಳದಲ್ಲೇ ಟ್ರ್ಯಾಪ್ ಮಾಡಿದೆ. ಸದ್ಯ ಆರೋಪಿ ಸಿದ್ದಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

ಮೊಬೈಲ್ ಲೈಸೆನ್ಸ್‌ಗೆ ಲಂಚ ಪಡೆದು ಸಿಕ್ಕಿಬಿದ್ದ ಲೇಡಿ ಆಫೀಸರ್ ವಾಣಿಶ್ರೀ:

ಲಂಚ ಸ್ವೀಕರಿಸುತ್ತಿದ್ದ ಕಾನೂನು ಮಾಪನಶಾಸ್ತ್ರ ಇಲಾಖೆಯ ಮಹಿಳಾ ಅಧಿಕಾರಿಯನ್ನು ಸಾಕ್ಷಿ ಸಮೇತ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ನಾಗರಭಾವಿಯಲ್ಲಿರುವ ಕಚೇರಿಯ ಸಹಾಯಕ ನಿಯಂತ್ರಕಿ ಎಂ.ಎಸ್. ವಾಣಿಶ್ರೀ ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ. ದೂರುದಾರರು ಮೊಬೈಲ್ ಆಕ್ಸೆಸರೀಸ್ ಪ್ಯಾಕೇಜಿಂಗ್ ಪರವಾನಗಿ ಪಡೆಯಲು ಕಾನೂನು ಮಾಪನಶಾಸ್ತ್ರ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪರವಾನಗಿ ನೀಡಲು ಸಹಾಯಕ ನಿಯಂತ್ರಕಿ ವಾಣಿಶ್ರೀ ಅವರು ಒಟ್ಟು 10,000 ರೂಪಾಯಿ ಲಂಚ ನೀಡುವಂತೆ ದೂರುದಾರರಿಗೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದರು. ಅಧಿಕಾರಿಯ ಕಿರುಕುಳದಿಂದ ಬೇಸತ್ತ ಅರ್ಜಿದಾರರು ತಕ್ಷಣವೇ ಈ ಬಗ್ಗೆ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಅಧಿಕಾರಿಗಳ ಮಾಸ್ಟರ್ ಪ್ಲಾನ್‌ನಂತೆ, ಇಂದು ದೂರುದಾರರು ಲಂಚದ ಒಟ್ಟು ಮೊತ್ತದ ಪೈಕಿ ಮೊದಲ ಕಂತಾಗಿ 5,000 ರೂಪಾಯಿ ನಗದು ಹಣವನ್ನು ನಾಗರಭಾವಿ ಕಚೇರಿಯಲ್ಲಿ ಅಧಿಕಾರಿ ವಾಣಿಶ್ರೀ ಅವರಿಗೆ ಹಸ್ತಾಂತರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಎಸ್ಪಿ (SP) ಶಿವಪ್ರಕಾಶ್ ದೇವರಾಜ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಕಚೇರಿಯ ಮೇಲೆ ಧಿಡೀರ್ ದಾಳಿ ನಡೆಸಿ, ಲಂಚದ ಹಣದೊಂದಿಗೆ ವಾಣಿಶ್ರೀ ಅವರನ್ನು ಹಿಡಿದಿದ್ದಾರೆ. ಸದ್ಯ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆ ಶಿವಕುಮಾರ್ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ: ಯಾರಿವರು? – Kannada News

ಬೆಂಗಳೂರು, (ಜೂನ್ 08): 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನೀಲ್‌ ಕನುಗೋಳು (Poll strategist Sunil Kanugolu) ಅವರನ್ನು ಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಬಳ್ಳಾರಿ ಮೂಲದ ಈ ಸುನೀಲ್ ಕನುಗೋಳು ಹಿಂದೆ ಸಿದ್ದರಾಮಯ್ಯನವರ ಸಲಹೆಗಾರರಾಗಿದ್ದರು. ಇದೀಗ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಡಿಕೆ ಶಿವಕುಮಾರ್ ಅವರ ಸಲಹೆಗಾರರನ್ನಾಗಿ ನೇಮಕ ಮಾಡಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ
  • ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಸಲಹೆಗಾರರಾಗಿದ್ದ ಕನುಗೋಳು
  • ಈಗ ಡಿಕೆಶಿಗೂ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ
  • ಸುನೀಲ್ ಕನುಗೋಳುಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ

ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ ಮಾಡಲಾಗಿದ್ದು, ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹಾಗೂ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ: IAS, IPS ಅಧಿಕಾರಿಗಳ ವರ್ಗಾವಣೆ: ಮುನೀಶ್‌ ಮೌದ್ಗಿಲ್‌ಗೆ ಮಹತ್ವದ ಜವಾಬ್ದಾರಿ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಗೆಲ್ಲಲು ಸುನೀಲ್‌ ಕನುಗೋಳು ಅವರ ಚುನಾವಣಾ ತಂತ್ರಗಾರಿಕೆ ಬಹಳಷ್ಟು ಕೆಲಸ ಮಾಡಿದೆ. ಈಗಾಗಿ ಸರ್ಕಾರದ ಮಟ್ಟದಲ್ಲೂ ಅವರ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಸುನೀಲ್‌ ಕನುಗೋಳು ಅವರನ್ನು ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದೀಗ ಡಿಕೆ ಶಿವಕುಮಾರ್ ಸಹ ಅದೇ ಮಾದರಿಯನ್ನು ಅನುಸರಿಸಿದ್ದಾರೆ.

ಯಾರು ಈ ಸುನೀಲ್‌ ಕನುಗೋಳು!

ಕರ್ನಾಟಕದ ಬಳ್ಳಾರಿ ಮೂಲದವರಾದ ಸುನೀಲ್ ಕನುಗೋಳು ಬೆಳೆದಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಚುನಾವಣಾ ತಂತ್ರಗಾರರಾಗಿ ಕೆಲಸ ಆರಂಭಿಸಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದರು. ಅದಲ್ಲದೇ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ತಂಡದಲ್ಲಿ ಪ್ರಮುಖ ಪಾತ್ರವನ್ನು ಸುನೀಲ್‌ ಕನುಗೋಳು ನಿರ್ವಹಿಸಿದ್ದರು.

ಇನ್ನು, 2014ರ ಲೋಕಸಭಾ ಚುನಾವಣೆ, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಸುನೀಲ್‌ ಕನುಗೋಳು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪರ ಕೆಲಸ ಮಾಡಿದ್ದರು. ಬಳಿಕ 2021ರಲ್ಲಿ ಡಿಎಂಕೆ ಪರ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿಯ ಬಿಲಿಯನ್ ಮೈಂಡ್ಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ಹತ್ತಿರವಾದ ಸುನೀಲ್‌, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಭಾರತ್ ಜೋಡೋ ಯಾತ್ರೆಯ ರೂಪುರೇಷೆಯನ್ನು ಸುನೀಲ್‌ ಕನುಗೋಳು ಸಿದ್ಧಪಡಿಸಿದ್ದು, ಅದು ಕರ್ನಾಟಕದಲ್ಲಿ ಈ ಯಾತ್ರೆ ಕಾಂಗ್ರೆಸ್‌ಗೆ ಭಾರೀ ಫಲ ಕೊಟ್ಟಿತ್ತು. ಅದಲ್ಲದೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಸುನೀಲ್ ಕನುಗೋಳು ಅವರ ತಂಡ ನಿರಂತರವಾಗಿ ಕೆಲಸ ಮಾಡಿತ್ತು.  ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲೂ ಕನುಗೋಳು  ಕೊಟ್ಟ ಸಲಹೆಗಳಂತೆ ಮತದಾರರಿಗೆ ಭರವಸೆಗಳನ್ನ ನೀಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಅಭೂತಪೂರ್ವಾಗಿ ಗೆಲ್ಲುವಲ್ಲಿ ಯಶಸ್ವಿ ಆಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸ್ಲಮ್ ಡಾಗ್’ ಟೀಸರ್: ವಿಜಯ್ ಸೇತುಪತಿ ಜೊತೆ ದುನಿಯಾ ವಿಜಯ್ ಪಾತ್ರವೂ ಹೈಲೈಟ್ – Kannada News

ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ದುನಿಯಾ ವಿಜಯ್ (Duniya Vijay) ಈಗ ಮತ್ತೊಂದು ಭರ್ಜರಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh) ಮತ್ತು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ (Slum Dog) ಚಿತ್ರದಲ್ಲಿ ದುನಿಯಾ ವಿಜಯ್ ಭೀಕರ ವಿಲನ್ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ.

ಸದ್ಯ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ ಈ ಆ್ಯಕ್ಷನ್ ಡ್ರಾಮಾ ಸಿನಿಮಾದ ಟೀಸರ್, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಸಿನಿಮಾದ ಕಥೆಯ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗ ಆಗಿಲ್ಲ. ಆದರೆ ಸಿಕ್ಕಾಪಟ್ಟೆ ಕೌತುಕ ನಿರ್ಮಾಣ ಆಗಿದೆ. ವಿಜಯ್ ಸೇತುಪತಿ ರೀತಿಯೇ ದುನಿಯಾ ವಿಜಯ್ ಪಾತ್ರ ಕೂಡ ಸಖತ್ ಹೈಲೈಟ್ ಆಗಿದೆ.

‘33 ಟೆಂಪಲ್ ರೋಡ್’ ಎಂಬ ಕುತೂಹಲಕಾರಿ ಟ್ಯಾಗ್‌ಲೈನ್ ಹೊಂದಿರುವ ಈ ಸಿನಿಮಾದ ಟೀಸರ್ ಆರಂಭವಾಗುವುದೇ ವಿಜಯ್ ಸೇತುಪತಿ ಅವರ ಖಡಕ್ ಡೈಲಾಗ್‌ನೊಂದಿಗೆ. ಭಿಕ್ಷುಕರ ಬದುಕು ಮತ್ತು ಅವರನ್ನು ಶೋಷಿಸುವ ದುಷ್ಟರ ವಿರುದ್ಧದ ಎಚ್ಚರಿಕೆಯ ಮಾತುಗಳೊಂದಿಗೆ ಟೀಸರ್ ತೆರೆದುಕೊಳ್ಳುತ್ತದೆ. ಆ್ಯಕ್ಷನ್ ಸೀಕ್ವೆನ್ಸ್‌ಗಳು, ಎಮೋಷನಲ್ ಸನ್ನಿವೇಶಗಳು ಮತ್ತು ಪಾತ್ರಗಳ ಪರಿಚಯದೊಂದಿಗೆ ಒಂದು ಅಪಾಯಕಾರಿ ಜಗತ್ತನ್ನು ಈ ಟೀಸರ್ ತೋರಿಸುತ್ತದೆ.

‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾದ ಟೀಸರ್:

ಆದರೆ, ಇಡೀ ಟೀಸರ್‌ನಲ್ಲಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿರುವುದು ವಿಜಯ್ ಸೇತುಪತಿ ಅವರ ಪಾತ್ರದ ರಹಸ್ಯ. ಚಿತ್ರದಲ್ಲಿ ಅವರು ಅಂಧ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರಾದರೂ, ಅವರ ಪಾತ್ರದ ಹಿಂದೆ ದೊಡ್ಡದೊಂದು ನಿಗೂಢ ಸತ್ಯ ಅಡಗಿದೆ ಎಂಬುದನ್ನು ಟೀಸರ್ ಸೂಚಿಸುತ್ತದೆ. ಅವರು ನಿಜವಾಗಿಯೂ ದೃಷ್ಟಿಹೀನರೇ ಅಥವಾ ಯಾವುದೋ ದೊಡ್ಡ ಉದ್ದೇಶಕ್ಕಾಗಿ ಈ ರೂಪ ಧರಿಸಿದ್ದಾರಾ ಎಂಬ ಕುತೂಹಲವು ಪ್ರೇಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ: ‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ

ಯಾವಾಗಲೂ ತಮ್ಮ ಸಿನಿಮಾಗಳಲ್ಲಿ ನಾಯಕನನ್ನು ವಿಭಿನ್ನವಾಗಿ ಪ್ರೆಸೆಂಟ್ ಮಾಡುವ ನಿರ್ದೇಶಕ ಪುರಿ ಜಗನ್ನಾಥ್, ಈ ಬಾರಿಯೂ ವಿಜಯ್ ಸೇತುಪತಿ ಅವರಿಗೆ ರಗಡ್ ಮೇಕ್ ಓವರ್ ನೀಡಿದ್ದಾರೆ. ಈ ಮಾಸ್ ಕಥೆಗೆ ಅಷ್ಟೇ ಬಲಿಷ್ಠವಾಗಿ ಟಕ್ಕರ್ ನೀಡಲು ದುನಿಯಾ ವಿಜಯ್ ಎದುರಾಗಿದ್ದಾರೆ. ಟೀಸರ್‌ನಲ್ಲಿ ಅವರ ಲುಕ್ ಭೀತಿ ಹುಟ್ಟಿಸುವಂತಿದ್ದು, ಚಿತ್ರದಲ್ಲಿ ಅವರು ಅತ್ಯಂತ ಅಪಾಯಕಾರಿ ವಿಲನ್ ಪಾತ್ರದಲ್ಲಿ ಮಿಂಚಿರುವುದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version