WTC Points Table: ದಾಖಲೆ ಜಯ ಸಾಧಿಸಿದರೂ 6ನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ – Kannada News

ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿರುವ ಅಫ್ಘಾನಿಸ್ತಾನ  (India vs Afghanistan) ತಂಡ ಟೆಸ್ಟ್ ಸೋಲಿನೊಂದಿಗೆ ತನ್ನ ಪ್ರವಾಸವನ್ನು ಆರಂಭಿಸಿದೆ. ಚಂಡೀಗಢದ ಮಹಾರಾಜ ಯಾದವಿಂದರ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಮುಲ್ಲನ್‌ಪುರ) ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿತು. ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಗೆದ್ದು ಏಕೈಕ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಈ ಟೆಸ್ಟ್ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC Points Table) ಭಾಗವಾಗಿರಲಿಲ್ಲ. ಹೀಗಾಗಿ ಭಾರತ 300 ರನ್​ಗಳಿಂದ ಗೆದ್ದರೂ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

WTC ಪಾಯಿಂಟ್‌ಗಳ ಪಟ್ಟಿ ಹೇಗಿದೆ?

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರದ ಕಾರಣ ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದಾಗ್ಯೂ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ 115 ರನ್‌ಗಳಿಂದ ಸೋತಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕಿವೀಸ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿ ಗಮನಾರ್ಹ ಲಾಭವನ್ನು ಗಳಿಸಿವೆ. ಉಳಿದಂತೆ ಆಸ್ಟ್ರೇಲಿಯಾ 87.5 ಪ್ರತಿಶತದಷ್ಟು ಗೆಲುವಿನ ಶೇಕಡವಾರುವಿನೊಂದಿಗೆ ಅಗ್ರಸ್ಥಾನದಲ್ಲಿದೆ.

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

6ನೇ ಸ್ಥಾನದಲ್ಲೇ ಉಳಿದ ಭಾರತ

ಇತ್ತ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಜಯಗಳಿಸಿದರೂ, ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿಲ್ಲ. ಇಂಗ್ಲೆಂಡ್ ತಂಡವು ಭಾರತದ ನಂತರ ಏಳನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಲ್ಲಿಯವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಜಯ ದಾಖಲಿಸಿದೆ. ಭಾರತ ಈ ವರ್ಷ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ ಆತಿಥ್ಯ ವಹಿಸಲಿದೆ. ಈ ಮೂರು ಸರಣಿಗಳು ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್‌ಗೆ ತಲುಪುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್‌ ಕಳಿಸಿ ಎಂದ ಅಳಿಯ – Kannada News

ಗಂಡು ಮಕ್ಕಳಿಗೆ ಹೆಂಡ್ತಿ ತವರಿಗೆ ಹೊರಟು ನಿಂತರೆ ಅದೇನೋ ಖುಷಿ. ಹೆಂಡ್ತಿ ಮರಳಿ ಬರುವ ತನಕ ತಮ್ಮ ಸ್ನೇಹಿತರ ಪಾರ್ಟಿ, ಸುತ್ತಾಟ ಎಂದು ಬ್ಯುಸಿಯಾಗಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತವರಿಗೆ ಹೋದ ಹೆಂಡ್ತಿ ಬರ್ತಾಳೆ ಎಂದು ಕಾದು ಕೊನೆಗೆ ಅತ್ತೆ (mother-in-law) ಮನೆಗೆ ಹೋಗಿದ್ದಾನೆ. ಕೇಕ್ ತೆಗೆದುಕೊಂಡು ಹೋಗಿ ನನ್ನ ಹೆಂಡ್ತಿನಾ ಕೊಡಿ ಎಂದು ಕೇಳಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರಿಗೆ ನಗು ತಡೆಯಲಾಗಲಿಲ್ಲ.

Karan and Mona ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಂಡ್ತಿ ತವರಿಗೆ ಹೋದ ಹತ್ತು ದಿನದ ಬಳಿಕ ಅತ್ತೆ ಮನೆಗೆ ತೆರಳಿದ್ದಾನೆ. ಹೌದು, 11 ನೇ ದಿನ ಈ ವ್ಯಕ್ತಿ ಕೇಕ್‌ ಹಿಡಿದುಕೊಂಡು ಅತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಸುಳಿವೇ ನೀಡದೇ ಅತ್ತೆ ಮನೆಗೆ ಬಂದ ಅಳಿಯನನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. 15 ದಿನ ತವರು ಮನೆಯಲ್ಲಿ ಉಳಿದು ಬರುವೆ. ಫೋನ್ ಮಾಡುವೆ ಆಗ ಬನ್ನಿ ಎಂದಿದ್ದ ಪತ್ನಿಗೂ ಗಂಡನ ಆಗಮನದಿಂದ ಅಚ್ಚರಿಯಾಗಿದೆ. ಅತ್ತೆ ಮಾವನ ಬಳಿ ಪತ್ನಿಯನ್ನು ವಾಪಸ್ ಕೊಡಿ ಎಂದು ಕೇಳಿದ್ದಾನೆ. ಅಳಿಯನ ಮಾತು ಕೇಳಿ ಒಂದೆಡೆ ಶಾಕ್ ಆದರೆ, ಕೇಕ್ ಮೇಲೆ ನನಗೆ ನನ್ನ ಪತ್ನಿಯನ್ನು ವಾಪಸ್ ಕೊಡಿ ಎಂದು ಬರೆದಿದ್ದ ಸಾಲುಗಳನ್ನು ನೋಡಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಕೊನೆಗೆ ಅತ್ತೆ ಮಾವ ತಮ್ಮ ಮಗಳ ಕೈಹಿಡಿದು ಮತ್ತೆ ಅಳಿಯನ ಕೈಗೆ ಇಟ್ಟಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಹೊಸದಾಗಿ ಮದುವೆಯಾದ ಜೋಡಿ ಇರಬೇಕು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಅಳಿಯ ನಿಮಗೆ ಸಿಕ್ಕಿದ್ದು ಪುಣ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ವಲ್ಪ ವರ್ಷಗಳು ಕಳೆಯಲಿ ಹೆಂಡ್ತಿ ತವರು ಮನೆಯಿಂದ ಕರೆ ತರುವಾಗ ಇಷ್ಟೊಂದು ಖುಷಿ ಇರಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:34 pm, Mon, 8 June 26

Source link

ಶಿಕ್ಷಣ ಸಚಿವರ ರಾಜೀನಾಮೆ, ಮತ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಪತ್ರ; ಇಂಡಿಯ ಸಭೆಯ 5 ನಿರ್ಧಾರಗಳಿವು – Kannada News

ನವದೆಹಲಿ, ಜೂನ್ 8: ಇಂದು ಕಾಂಗ್ರೆಸ್ ನೇತೃತ್ವದಲ್ಲಿ ದೆಹಲಿಯಲ್ಲಿ ಇಂಡಿಯ (INDIA) ಒಕ್ಕೂಟದ ಸಭೆ ನಡೆಯಿತು. ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ದುರಾಡಳಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗಗನಕ್ಕೇರಿರುವ ಇಂಧನ ಬೆಲೆಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಯಿತು. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ದೇಶದ ಕೋಟ್ಯಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳ ಅಖಿಲ ಭಾರತ ಮೈತ್ರಿಕೂಟದ (ಇಂಡಿಯ)ನಿರ್ಣಾಯಕ ಸಭೆಯ ನಂತರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮೈತ್ರಿಕೂಟವು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಲಿದೆ ಎಂದು ಹೇಳಿದ್ದಾರೆ. ಮುಂದಿನ ಸಭೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸಭೆಯು 5 ವಿಷಯಗಳ ಬಗ್ಗೆ ಒಮ್ಮತಕ್ಕೆ ಬಂದಿತು. ಎಸ್‌ಐಆರ್ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುತ್ತೇವೆ. ಶಿಕ್ಷಣ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ದೇಶದ ಪರೀಕ್ಷಾ ವ್ಯವಸ್ಥೆಯ “ದೊಡ್ಡ ದುರಾಡಳಿತ” ಲಕ್ಷಾಂತರ ಆಕಾಂಕ್ಷಿಗಳ ಭರವಸೆಯನ್ನು ಮಣ್ಣುಪಾಲು ಮಾಡಿದೆ ಎಂದು ಖರ್ಗೆ ಟೀಕಿಸಿದ್ದಾರೆ. ವ್ಯಾಪಕ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ನೀಟ್-ಯುಜಿ 2026 (NEET-UG 2026) ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಿಗದಿಪಡಿಸಲಾಗಿತ್ತು. ಈ ವಿವಾದವು ದೇಶಾದ್ಯಂತ ಭಾರಿ ಪ್ರತಿಭಟನೆಗಳು, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಮತ್ತು ಹಲವರ ಬಂಧನಕ್ಕೆ ಕಾರಣವಾಗಿತ್ತು. ಹೀಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒಕ್ಕೂಟ ತೀವ್ರ ಒತ್ತಾಯ ಮಾಡಿದೆ.

ಈ ಸಭೆಯು 5 ವಿಷಯಗಳ ಬಗ್ಗೆ ಒಮ್ಮತಕ್ಕೆ ಬಂದಿದೆ ಎಂದು ಖರ್ಗೆ ಹೇಳಿದರು. “ಮೊದಲನೆಯದಾಗಿ, ಮತಗಟ್ಟೆ ವಂಚನೆಯ ವಿರುದ್ಧ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲಾಗುವುದು. ಎರಡನೆಯದಾಗಿ, ನೀಟ್-ಯುಜಿ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುವುದು. ಮೂರನೆಯದಾಗಿ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು. ನಾಲ್ಕನೆಯದಾಗಿ, ನಾವು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರುತ್ತೇವೆ. ಮುಂದಿನ ಸಭೆ ಆಗಸ್ಟ್ 8ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಐದನೆಯದಾಗಿ, ಸಂಸತ್ತಿನಲ್ಲಿ ಸರ್ವಪಕ್ಷ ಸಮನ್ವಯ ಮುಂದುವರಿಯುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ.

“ಭಾರತ ಮೈತ್ರಿಕೂಟ ಸಭೆಯಲ್ಲಿ 25 ಪಕ್ಷಗಳು ಭಾಗವಹಿಸಿದ್ದವು. ಉದ್ಧವ್ ಠಾಕ್ರೆ ಮತ್ತು ಹೇಮಂತ್ ಸೊರೇನ್ ಕೂಡ ವರ್ಚುವಲ್ ಆಗಿ ಸಭೆಗೆ ಸೇರಿಕೊಂಡರು. ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಎಲ್ಲಾ ವಿಷಯಗಳ ಬಗ್ಗೆಯೂ ಅವರು ಒಪ್ಪುತ್ತಾರೆ. ಇದಾದ ನಂತರ, ನಾವು ಐದು ಅಂಶಗಳ ಬಗ್ಗೆ ಒಮ್ಮತಕ್ಕೆ ಬಂದಿದ್ದೇವೆ. ನಾವು ಇಂದು ಒಪ್ಪಿಕೊಂಡಿದ್ದೇವೆ; ನಾವು ಈ ಸಮಸ್ಯೆಗಳಿಗಾಗಿ ಹೋರಾಡುತ್ತೇವೆ, ಅವುಗಳ ಮೇಲೆ ಕೆಲಸ ಮಾಡುತ್ತೇವೆ ಮತ್ತು ಮುಂದುವರಿಯುತ್ತೇವೆ” ಎಂದು ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ಬ್ರೇಕಪ್; ಇಂಡಿಯ ಒಕ್ಕೂಟದ ಸಭೆ ಬಹಿಷ್ಕರಿಸಲು ಡಿಎಂಕೆ ನಿರ್ಧಾರ

“ಎಸ್​ಐರ್, ಮತಗಟ್ಟೆಗಳಲ್ಲಿ ಅಕ್ರಮ ಮತ್ತು ಚುನಾವಣಾ ಕಳ್ಳತನಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಕಳುಹಿಸುವ ಬಗ್ಗೆ ಒಮ್ಮತವಿತ್ತು. ಈ ಪತ್ರವನ್ನು ಶೀಘ್ರದಲ್ಲೇ ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪಿಸಲಾಗುವುದು. ಎರಡನೆಯದಾಗಿ, ಶಿಕ್ಷಣ ಸಚಿವರು ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷೆಗಳಿಗೆ ಹಾಜರಾದ ಲಕ್ಷಾಂತರ ಯುವಕರಿಗೆ ದ್ರೋಹ ಬಗೆದ ಕಾರಣ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸುವ ಬಗ್ಗೆ ಸರ್ವಾನುಮತದ ಒಮ್ಮತವಿತ್ತು” ಎಂದು ಖರ್ಗೆ ಹೇಳಿದ್ದಾರೆ.

“ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆಗಳು ಮತ್ತು ಇತರ ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಎಲ್ಲಾ ಪಕ್ಷಗಳು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಬೇಕೆಂದು ನಿರ್ಧರಿಸಲಾಯಿತು. ಮಳೆಗಾಲದ ಅಧಿವೇಶನದಲ್ಲಿ ಸಂಸದೀಯ ಸಮನ್ವಯ ಮುಂದುವರಿಯುತ್ತದೆ ಮತ್ತು ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಪ್ರತಿದಿನ ಬೆಳಿಗ್ಗೆ ಸಭೆಗಳು ನಡೆಯುತ್ತವೆ” ಎಂದು ಖರ್ಗೆ ಹೇಳಿದರು.

ಈ ಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಜಾರ್ಖಂಡ್ ಮುಕ್ತಿ ಮೋರ್ಚಾ, ಶಿವಸೇನೆ (ಯುಬಿಟಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ವಿಮೋಚನೆ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ವಿದುತಲೈ ಚಿರುತೈಗಲ್ ಕಚ್ಚಿ, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಎಂ), ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ, ಭಾರತ್ ಆದಿವಾಸಿ ಪಕ್ಷ, ಲೋಕದಳ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಶೇತ್ಕರಿ ಕಾಮಗಾರಿ ಪಕ್ಷದ ನಾಯಕರು ಪಾಲ್ಗೊಂಡಿದ್ದರು.

5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಭಾರತ ಮೈತ್ರಿಕೂಟದ ಮೊದಲ ಸಭೆ ಇದಾಗಿತ್ತು. ಚುನಾವಣಾ ಸೋಲಿನ ನಂತರ ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಈ ಸಭೆಯಲ್ಲಿ ಭಾಗವಹಿಸಿದ್ದರು. ತಮಿಳುನಾಡಿನಲ್ಲಿನ ಸೋಲಿನ ನಂತರ ಡಿಎಂಕೆ ಇಂಡಿಯ ಮೈತ್ರಿಕೂಟದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ

Source link

ಡಿಕೆ ಶಿವಕುಮಾರ್ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ, ರಾಮಲಿಂಗಾರೆಡ್ಡಿಗೆ ಬಂಪರ್ – Kannada News

ಬೆಂಗಳೂರು, (ಜೂನ್ 07): ಡಿಕೆ ಶಿವಕುಮಾರ್ ಸಂಪುಟದ (DK Shivakumar Cabinet) ಮೊದಲ ಹಂತದ ನೂತನ 13 ಸಚಿವರಿಗೆ  ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿ ಇಂದು (ಜೂನ್ 08) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದ್ದು, ಇದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿಲ್ಲವೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರಿಗೆ ಬರೋಬ್ಬರಿಗೆ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಹೌದು…ರಾಮಲಿಂಗಾರೆಡ್ಡಿಗೆ 335, 336, 337, 337A ಕೊಠಡಿಗಳ ಹಂಚಿಕೆ ಮಾಡಲಾಗಿದೆ. ಈ ಮೂಲಕ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಡಿಕೆಶಿ ಸಂಪುಟದ 13 ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ
  • ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಗೆ 4 ಕೊಠಡಿಗಳ ಹಂಚಿಕೆ
  • ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ‌.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ರಾಮಲಿಂಗಾರೆಡ್ಡಿಗೆ
  • ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದ ಡಿ.ಕೆ.ಶಿವಕುಮಾರ್
  • ಈಗ ಅದೇ ಕೊಠಡಿಗಳನ್ನು ಸಚಿವ ರಾಮಲಿಂಗಾರೆಡ್ಡಿಗೆ ನೀಡಿ ಆದೇಶ

ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿಗೆ 335, 336, 337, 337A ಒಟ್ಟು 4 ಕೊಠಡಿಗಳ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ‌.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದರು. ಈಗ ಅದೇ ಕೊಠಡಿಗಳನ್ನು ಸಚಿವ ರಾಮಲಿಂಗಾರೆಡ್ಡಿಗೆ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ

ಯಾರ‍್ಯಾರಿಗೆ ಯಾವ ಕೊಠಡಿ?

  1. ಪರಮೇಶ್ವರ್ ಉಪ ಮುಖ್ಯಮಂತ್ರಿ (ಕಂದಾಯ ಮತ್ತು ಯುವಸಬಲೀಕರಣ) – ವಿಧಾನಸೌಧ 327/327a
  2.  ಕೆ.ಎಚ್ ಮುನಿಯಪ್ಪ, (ಆಹಾರ ಸಚಿವ)- ವಿಧಾನಸೌಧ – 340a/341/341a
  3. ಕೆಜೆ ಜಾರ್ಜ್ (ಇಂಧನ ಮತ್ತು ಪ್ರವಾಸೋದ್ಯುಮ) – ವಿಧಾನಸೌಧ, 317/317a
  4. ಎಂಬಿ ಪಾಟೀಲ್,  (ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ) – ವಿಧಾನಸೌಧ – 344/344a
  5.  ರಾಮಲಿಂಗಾರೆಡ್ಡಿ, (ಜಲಸಂಪನ್ಮೂಲ ಸಚಿವ) – ವಿಧಾನಸೌಧ, 335/336/337/337a
  6. ಸತೀಶ್ ಜಾರಕಿಹೊಳಿ, (ಲೋಕೋಪಯೋಗಿ ಸಚಿವ) – ವಿಕಾಸಸೌಧ, 444/445
  7.  ಕೃಷ್ಣ ಬೈರೇಗೌಡ, ಸಚಿವ -(ಬೆಂಗಳೂರು ನಗರಾಭಿವೃದ್ಧಿ ಸಚಿವ)  ವಿಕಾಸಸೌಧ, 244/245
  8.  ಪ್ರಿಯಾಂಕ್ ಖರ್ಗೆ, (ಗೃಹ ಇಲಾಖೆ ಮತ್ತು ಐಟಿಬಿಟಿ) – ವಿಕಾಸ ಸೌಧ, 242, 243
  9. ಯುಟಿ ಖಾದರ್,  (ಆರೋಗ್ಯ ಸಚಿವ) – ವಿಧಾನಸೌಧ, 315/315a
  10.  ಈಶ್ವರ್ ಖಂಡ್ರೆ, (ಗ್ರಾಮೀಣಾಭಿವೃದ್ಧಿ ಸಚಿವ) – ವಿಕಾಸಸೌಧ, 36/37
  11.  ಯತೀಂದ್ರ ಸಿದ್ದರಾಮಯ್ಯ, (ನಗರಾಭಿವೃದ್ಧಿ ಸಚಿವ) – ವಿಧಾನಸೌಧ, 314/314a
  12.  ಶರಣಪ್ರಕಾಶ್ ಪಾಟೀಲ್, (ವೈದ್ಯಕೀಯ ಶಿಕ್ಷಣ ಸಚಿವ) – ವಿಕಾಸಸೌಧ. 344/345
  13.  ಬೈರತಿ ಸುರೇಶ್, (ಸಾರಿಗೆ ಸಚಿವ) – ವಿಧಾನಸೌಧ, 316/316a

ಮುಖ್ಯಮಂತ್ರಿಗಳ ಗೃಹ ಕಚೇರಿ ದ್ವಾರ ಬದಲು

ಕುಮಾರಕೃಪಾ ಅತಿಥಿ ಗೃಹ ಇನ್ಮುಂದೆ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಲಿದೆ. ಸದ್ಯ ಮುಖ್ಯ ದ್ವಾರ ಪೂರ್ವ ಭಾಗದಲ್ಲಿದ್ದು, ಪೂರ್ವ ಭಾಗದ ದ್ವಾರದಲ್ಲೇ ಎಲ್ಲರ ಓಡಾಟ ಇತ್ತು. ಆದ್ರೆ, ಪೂರ್ವ ಭಾಗದಲ್ಲಿರುವ ಕಚೇರಿಯ ಮುಖ್ಯ ದ್ವಾರವನ್ನು ಬದಲಾವಣೆ ಮಾಡಲಾಗಿದ್ದು, ಸಿಎಂ ಡಿಕೆ ಶಿವಕುಮಾರ್ ತಮ್ಮ ಗೃಹ ಕಚೇರಿಗೂ ಉತ್ತರ ಬಾಗಿಲಿನಿಂದಲೇ ಪ್ರವೇಶ ದ್ವಾರ ಮಾಡಿಕೊಂಡಿದ್ದಾರೆ.

ಈಗ ಉತ್ತರ ಬಾಗಿಲಿನ ಮೂಲಕವೇ ಓಡಾಟ ಮಾಡಲು ನಿರ್ಧಾರ ಮಾಡಲಾಗಿದ್ದು,ಈಗಾಗಲೇ ಮುಖ್ಯಮಂತ್ರಿಗಳ ಗೃಹ ಕಚೇರಿಗಾಗಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಹೊಸ ಎಸಿ, ಹೊಸ ಬೃಹತ್ ಟಿವಿ ಸೇರಿದಂತೆ ಗೃಹ ಕಚೇರಿಯಲ್ಲಿ ಹೊಸ ಪೀಠೋಪಕರಣ ಅಳವಡಿಕೆ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ – Kannada News

ನವದೆಹಲಿ, ಜೂನ್ 8: ಕಳೆದ ವಾರ ಭಾರತದ ಷೇರು ಮಾರುಕಟ್ಟೆಯನ್ನು (Stock Market) ಮೀರಿಸಿ ಹಿಗ್ಗಿದ್ದ ತೈವಾನ್ ಮತ್ತು ಸೌತ್ ಕೊರಿಯನ್ ಮಾರುಕಟ್ಟೆಗಳು ಇದೀಗ ಸ್ವಸ್ಥಾನಕ್ಕೆ ಮರಳಿವೆ. ಇವೆರಡು ಮಾರುಕಟ್ಟೆಗಳು ಏಳು ಮತ್ತು ಎಂಟನೇ ಸ್ಥಾನಕ್ಕೆ ಇಳಿದಿವೆ. ಭಾರತದ ಷೇರು ಬಜಾರು ಆರನೇ ಸ್ಥಾನಕ್ಕೆ ಮರಳಿದೆ. ಒಂದು ವಾರದಲ್ಲಿ ಈ ವ್ಯತ್ಯಯಗಳಿಗೆ ಕಾರಣವಾಗಿದ್ದು ಎಐ ಬೂಮ್ ಮತ್ತು ಎಐ ಕುಸಿತ. ಎಐ ಕ್ಷೇತ್ರದ ಮೇಲೆ ಕಳೆದ ವಾರ ಹೂಡಿಕೆದಾರರು ಹಣ ಹಾಕಿದ ಪರಿಣಾಮ ಕೊರಿಯ ಮತ್ತು ತೈವಾನ್ ಮಾರುಕಟ್ಟೆ ಹಿಗ್ಗಿತ್ತು. ಈಗ ಎಐ ಕ್ಷೇತ್ರದಲ್ಲಿ ಹೂಡಿಕೆ ತಗ್ಗಿದ ಪರಿಣಾಮ ಮತ್ತೊಮ್ಮೆ ಇವೆರಡು ಮಾರುಕಟ್ಟೆಗಳು ಕುಸಿದಿವೆ.

ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ಜಾಗತಿಕ ಮಟ್ಟದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹವಾ ಭಾರಿ ಜೋರಾಗಿತ್ತು. ಎಐ ಚಿಪ್‌ಗಳನ್ನು ತಯಾರಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್, ಎಸ್‌ಕೆ ಹೈನಿಕ್ಸ್ ಹಾಗೂ ತೈವಾನ್‌ನ ಟಿಎಸ್‌ಎಂಸಿ (TSMC) ಕಂಪನಿಗಳ ಷೇರುಗಳು ಭಾರಿ ಏರಿಕೆ ಕಂಡಿದ್ದವು. ಇದರಿಂದಾಗಿ ದಕ್ಷಿಣ ಕೊರಿಯಾ ಭಾರತವನ್ನು ಹಿಂದಿಕ್ಕಿ ವಿಶ್ವದ 6ನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿತ್ತು.

ಆದರೆ, ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ (Tech Stocks) ಮತ್ತು ಸೆಮಿಕಂಡಕ್ಟರ್ ಕಂಪನಿಗಳ ಷೇರುಗಳ ಮೌಲ್ಯ ದಿಡೀರನೆ ಕುಸಿದಿದೆ. ಹೂಡಿಕೆದಾರರು ಎಐ ವಲಯದಲ್ಲಿದ್ದ ತಮ್ಮ ಹಣವನ್ನು ಹಿಂಪಡೆಯಲು ತೊಡಗಿದ್ದರಿಂದ ತೈವಾನ್ ಮತ್ತು ದಕ್ಷಿಣ ಕೊರಿಯಾದ ಮಾರುಕಟ್ಟೆಗಳು ತೀವ್ರ ಕುಸಿತ ಕಂಡವು.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ; ಸೋಲಾರ್ ಇಂಗಾಟ್ಸ್, ಸಿಲಿಕಾನ್ ವೇಫರ್ಸ್ ತಯಾರಿಸಲಿರುವ ಎಮ್ಮೀ ಗ್ರೂಪ್

ಭಾರತಕ್ಕೆ ಲಾಭ: ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಟೆಕ್ ಷೇರುಗಳು ನೆಲಕಚ್ಚಿದಾಗ, ಜಾಗತಿಕ ಹೂಡಿಕೆದಾರರು ಮತ್ತೆ ಸುರಕ್ಷಿತ ಮತ್ತು ವೈವಿಧ್ಯಮಯ ಮಾರುಕಟ್ಟೆಯಾದ ಭಾರತದ ಕಡೆಗೆ ಮುಖ ಮಾಡಿದ್ದಾರೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆಯ ಒಟ್ಟು ಮೌಲ್ಯ (Market Capitalization) ಮತ್ತೆ ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಿಗಿಂತ ಮೇಲಕ್ಕೆ ಜಿಗಿದಿದೆ. ಈ ಬೆಳವಣಿಗೆಯಿಂದಾಗಿ ಭಾರತವು ಜಾಗತಿಕ ಷೇರು ಮಾರುಕಟ್ಟೆಗಳ ಪಟ್ಟಿಯಲ್ಲಿ ತನ್ನ ಬಲಿಷ್ಠ ಸ್ಥಾನವನ್ನು ಮರಳಿ ಪಡೆದಿದೆ.

ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಕೇವಲ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್/ಸೆಮಿಕಂಡಕ್ಟರ್ ಕ್ಷೇತ್ರಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿವೆ. ಹೀಗಾಗಿ ಅಲ್ಲಿನ ಟೆಕ್ ವಲಯದಲ್ಲಿ ಸಣ್ಣ ಏರುಪೇರಾದರೂ ಇಡೀ ದೇಶದ ಮಾರುಕಟ್ಟೆ ತಲ್ಲಣಿಸುತ್ತದೆ. ಆದರೆ ಭಾರತೀಯ ಮಾರುಕಟ್ಟೆಯು ಬ್ಯಾಂಕಿಂಗ್, ಇಂಧನ, ಆಟೋಮೊಬೈಲ್, ಗ್ರಾಹಕ ಉತ್ಪನ್ನಗಳು (FMCG) ಮತ್ತು ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿರುವುದರಿಂದ ಹೆಚ್ಚು ಸ್ಥಿರವಾಗಿದೆ ಮತ್ತು ಜಾಗತಿಕ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ ಎಂಬುದು ವೇದ್ಯವಾಗಿದೆ.

ಇದನ್ನೂ ಓದಿ: ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

ಜಗತ್ತಿನ ಅತಿದೊಡ್ಡ ಷೇರುಮಾರುಕಟ್ಟೆ ಹೊಂದಿರುವ ದೇಶಗಳು

  1. ಅಮೆರಿಕ: 7,224 ಲಕ್ಷ ಕೋಟಿ ರೂ
  2. ಚೀನಾ: 1,023 ಲಕ್ಷ ಕೋಟಿ ರೂ
  3. ಜಪಾನ್: 687 ಲಕ್ಷ ಕೋಟಿ ರೂ
  4. ಯುಕೆ: 440 ಲಕ್ಷ ಕೋಟಿ ರೂ
  5. ಕೆನಡಾ: 389 ಲಕ್ಷ ಕೋಟಿ ರೂ
  6. ಭಾರತ: 374 ಲಕ್ಷ ಕೋಟಿ ರೂ
  7. ತೈವಾನ್: 372 ಲಕ್ಷ ಕೋಟಿ ರೂ
  8. ಸೌತ್ ಕೊರಿಯಾ: 351 ಲಕ್ಷ ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೇಂಟ್ ಹೊಡೆಯುವ ನೆಪದಲ್ಲಿ ಬಂದವರು ಕೇವಲ 5 ನಿಮಿಷದ ಗ್ಯಾಪ್‌ನಲ್ಲಿ 25 ಲಕ್ಷ ರೂ. ಮೌಲ್ಯ್​​ದ ಚಿನ್ನಾಭರಣದೊಂದಿಗೆ ಎಸ್ಕೇಪ್ – Kannada News

ಪೇಂಟ್ ಹೊಡೆಯುವ ನೆಪದಲ್ಲಿ ಚಿನ್ನ ದೋಚಿದ ಕಳ್ಳರು Image Credit source: Tv9 kannada

ಬೆಂಗಳೂರು, ಜೂ.8: ಮನೆಗೆ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುನ್ನ ಹಲವು ಬಾರಿ ಯೋಚನೆ ಮಾಡಬೇಕು. ಇದೀಗ ಸಿಲಿಕಾನ್ ಸಿಟಿಯಲ್ಲಿ ನಡೆದ ಘಟನೆಯೊಂದು ಭಾರೀ ಅಘಾತಗೊಳಿಸಿದೆ. ಮನೆಗೆ ಬಣ್ಣ ಬಳಿಯುವ ನೆಪದಲ್ಲಿ ಬಂದ ಪೇಂಟರ್‌ಗಳು ಮಾಲೀಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾಮಾಂಜನೇಯ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ನಿತ್ಯಾ ಮತ್ತು ಚಂದ್ರಶೇಖರ್ ದಂಪತಿಗಳ ಮನೆಯಲ್ಲೇ ಈ ದರೋಡೆ ನಡೆದಿದ್ದು, ಕದೀಮರ ಕೈಚಳಕಕ್ಕೆ ದಂಪತಿಗಳು ಕಣ್ಣೀರಿಡುವಂತಾಗಿದೆ.

ನಿತ್ಯಾ ಹಾಗೂ ಚಂದ್ರಶೇಖರ್ ದಂಪತಿಗಳು ರಾಮಾಂಜನೇಯ ಬಡಾವಣೆಯಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇವರ ಮನೆಯ ಮೊದಲ ಮಹಡಿಯಲ್ಲಿದ್ದ ಬಾಡಿಗೆದಾರರು ಖಾಲಿ ಮಾಡಿದ್ದರು. ಇದನ್ನು ಗಮನಿಸಿದ್ದ ಪೇಂಟರ್ ಲಿಂಗರಾಜು ಎಂಬಾತ, ಮನೆ ಮಾಲೀಕ ಚಂದ್ರಶೇಖರ್ ಅವರನ್ನು ಭೇಟಿಯಾಗಿ, ನಿಮ್ಮ ಮನೆಗೆ ನಾವೇ ಕಡಿಮೆ ದರದಲ್ಲಿ ಪೇಂಟ್ ಮಾಡಿಕೊಡುತ್ತೇವೆ ಎಂದು ನಂಬಿಸಿ ತನ್ನ ಮೊಬೈಲ್ ನಂಬರ್ ನೀಡಿದ್ದನು. ಎರಡು ದಿನಗಳ ಬಳಿಕ ಚಂದ್ರಶೇಖರ್ ಅವರು ಲಿಂಗರಾಜುವಿಗೆ ಕರೆ ಮಾಡಿ ಬಣ್ಣ ಬಳಿಯಲು ಒಪ್ಪಿಗೆ ನೀಡಿದ್ದರು.

ಇನ್ನು ಕೆಲಸ ಆರಂಭಿಸಬೇಕು ಎಂದು ಲಿಂಗರಾಜು ತನ್ನ ಜೊತೆಗೆ ಪವನ್ ಕುಮಾರ್, ಮಂಜುನಾಥ್ ಮತ್ತು ವೆಂಕಟೇಶ್ ಎಂಬ ಮೂವರು ಕೆಲಸಗಾರರನ್ನು ಕರೆತಂದು ಮೊದಲ ಮಹಡಿಗೆ ಪೇಂಟ್ ಮಾಡಿಸಿದ್ದನು. ಕೆಲಸ ಚೆನ್ನಾಗಿ ಮಾಡಿದ್ದರಿಂದ, ಮಾಲೀಕರು ತಾವು ವಾಸವಿದ್ದ ಕೆಳಮಹಡಿಯ ಕಿಟಕಿಗಳಿಗೂ ಬಣ್ಣ ಬಳಿಯುವಂತೆ ತಿಳಿಸಿದರು. ನಂತರ ಪೇಂಟರ್‌ಗಳು ನಿತ್ಯಾ ದಂಪತಿಗಳು ವಾಸವಿದ್ದ ಬೆಡ್‌ರೂಂಗೆ ಪೇಂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಬೆಡ್‌ ರೂಮ್​​​​ ಒಳಗಡೆ ಪೇಂಟ್ ನಡೆಯುತ್ತಿದ್ದಾಗ ಹೊರಗಡೆ ಮಗು ಜೋರಾಗಿ ಅಳುವ ಶಬ್ದ ಕೇಳಿಸಿದೆ. ತಾಯಿ ನಿತ್ಯಾ ಅವರು ಮಗುವನ್ನು ಸಮಾಧಾನಪಡಿಸಲು ರೂಮ್‌ನಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಪೇಂಟರ್‌ಗಳು ತಮ್ಮ ಕೈಚಳಕ ತೋರಿಸಿದ್ದರು. ಕೇವಲ ಐದಾರು ನಿಮಿಷಗಳ ಗ್ಯಾಪ್‌ನಲ್ಲಿ ಬೀರುವಿನಲ್ಲಿದ್ದ ಸುಮಾರು 254 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಜಾಗ ಖಾಲಿ ಮಾಡಿದ್ದಾರೆ.

ಇದನ್ನೂ ಓದಿ: ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ಕೆಲಸ ಮುಗಿಯುವ ಮುನ್ನವೇ ಪೇಂಟರ್‌ಗಳು ದಿಢೀರ್ ನಾಪತ್ತೆಯಾಗಿದ್ದನ್ನು ಕಂಡು ಅನುಮಾನಗೊಂಡ ನಿತ್ಯಾ ಅವರು ರೂಮ್​​​ನ ಬೀರು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕದ್ದ ಆಭರಣಗಳ ಒಟ್ಟು ಮೌಲ್ಯ ಸುಮಾರು 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಕದ್ದ ಒಡವೆಗಳನ್ನು ಪತ್ತೆಹಚ್ಚಿ ಕೊಡುವಂತೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಲಿಂಗರಾಜು ಮತ್ತು ಆತನ ಗ್ಯಾಂಗ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಭಾರತಕ್ಕೆ ಯಾರೂ ಹೇಳಿಲ್ಲ; ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ – Kannada News

ನವದೆಹಲಿ, ಜೂನ್ 8: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ರಷ್ಯಾದಿಂದ ಕಚ್ಚಾ ತೈಲ ಖರೀದಿ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಕುರಿತು ನೀಡಿರುವ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಬಾರದು ಎಂದು ಯಾವುದೇ ದೇಶ ಅಥವಾ ಜಾಗತಿಕ ಶಕ್ತಿಯು ನಮಗೆ ಅಧಿಕೃತವಾಗಿ ಆದೇಶಿಸಿಲ್ಲ ಅಥವಾ ನಿರ್ಬಂಧ ಹೇರಿಲ್ಲ. ಭಾರತವು ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು, ತನ್ನ ಇಂಧನ ಭದ್ರತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.

‘ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕೆಲವು ತೈಲ ಕಂಪನಿಗಳು ಅಥವಾ ಹಡಗುಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದರೂ, ಭಾರತಕ್ಕೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವಲ್ಲಿ ಯಾವುದೇ ತಾಂತ್ರಿಕ ಅಥವಾ ಕಾನೂನು ಸಮಸ್ಯೆಗಳು ಎದುರಾಗಿಲ್ಲ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಗೆ ಯಾವುದೇ ಧಕ್ಕೆಯಾಗದಂತೆ ಮತ್ತು ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಇಂಧನ ಸಿಗುವಂತೆ ನೋಡಿಕೊಳ್ಳಲು ಭಾರತವು ಎಲ್ಲಾ ಕಾನೂನು ಚೌಕಟ್ಟುಗಳಡಿಯೇ ವ್ಯಾಪಾರವನ್ನು ಮುಂದುವರಿಸಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್‌ಗೆ ಪುಟಿನ್ ತಿರುಗೇಟು

ಹಾಗೇ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವುದನ್ನು ಸಚಿವ ಹರ್ದೀಪ್ ಸಿಂಗ್ ಪುರಿ ಸಮರ್ಥಿಸಿಕೊಂಡಿದ್ದಾರೆ. ‘ಭಾರತದಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಇಂಧನ ಬೆಲೆಗಳು ನಿಯಂತ್ರಣದಲ್ಲಿರಲು ಈ ಖರೀದಿ ಅತಿ ಅಗತ್ಯವಾಗಿದೆ. ಭಾರತವು ರಷ್ಯಾದ ತೈಲವನ್ನು ಖರೀದಿಸದಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿದ್ದವು. ಇದು ಪರೋಕ್ಷವಾಗಿ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಸಹಾಯ ಮಾಡಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗ್ರಾಹಕರನ್ನು ರಕ್ಷಿಸುವುದು ಪ್ರಧಾನಿ ಮೋದಿಯವರಿಗೆ ಕೇವಲ ರಾಜಕೀಯ ಘೋಷಣೆಯಲ್ಲ, ಅದೊಂದು ಅವರ ಪರಮ ಬದ್ಧತೆಯಾಗಿದೆ. ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ಹೊಂದಿರುವ ಅಪ್ರತಿಮ ರಾಜತಾಂತ್ರಿಕ ಸಂಬಂಧಗಳು ಮತ್ತು ವಿಶ್ವದಾದ್ಯಂತ ಇಂಧನ ಪಾಲುದಾರಿಕೆಯನ್ನು ವಿಸ್ತರಿಸಲು ಅವರು ನಡೆಸಿದ ಪ್ರಯತ್ನಗಳೇ ಇದಕ್ಕೆ ಕಾರಣ ಎಂದು ಪುರಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ

ಭಾರತದ ಇಂಧನ ನೀತಿಯು ಕೇವಲ ತನ್ನ ರಾಷ್ಟ್ರೀಯ ಹಿತಾಸಕ್ತಿ, ಬೆಲೆಯ ಅನುಕೂಲ ಮತ್ತು ದೇಶದ ಜನರ ಅಗತ್ಯಗಳನ್ನು ಆಧರಿಸಿದೆಯೇ ಹೊರತು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಫೋಕ್ಸೋ ಕೇಸ್: ಬಿಎಸ್ ಯಡಿಯೂರಪ್ಪಗೆ ರಿಲೀಫ್ ನೀಡಿದ ಹೈಕೋರ್ಟ್​ – Kannada News

ಬೆಂಗಳೂರು, ಜೂನ್ 08): ಪೋಕ್ಸೋ ಪ್ರಕರಣಕ್ಕೆ  (pocso case) ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ  (BS Yediyurappa) ಅವರಿಗೆ ಕರ್ನಾಟಕ ಹೈಕೋರ್ಟ್‌ (Karnataka High Court  ರಿಲೀಫ್ ನೀಡಿದೆ. ಜಾಮೀನು ನೀಡುವ ಸಂದರ್ಭದಲ್ಲಿ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ ಅನ್ನು ಸಡಿಲಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಸಡಿಲಿಕೆ ಸಿಕ್ಕಿರುವುದರಿಂದ ಬಿಎಸ್ ಯಡಿಯೂರಪ್ಪ ಅವರು ಯಾವುದೇ ಕಾನೂನಾತ್ಮಕ ಅಡೆತಡೆ ಅಥವಾ ಮುಂಚಿತ ಅನುಮತಿಯ ಕಿರಿಕಿರಿ ಇಲ್ಲದೇ ಮುಕ್ತಾವಾಗಿ ದೇಶಾದ್ಯಂತ ಪ್ರವಾಸ ಕೈಗೊಳ್ಳಬಹುದಾಗಿದೆ.

ಮುಖ್ಯಾಂಶಗಳು

  • ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೊಕ್ಸೊ ಕೇಸ್
  • ಜಾಮೀನು ಷರತ್ತು ಸಡಿಲಿಕೆ ಕೋರಿ ಬಿಎಸ್ ಯಡಿಯೂರಪ್ಪ ಮನವಿಯನ್ನು ಪುರಸ್ಕರಿಸಿದ ಕೋರ್ಟ್​
  • ಜಾಮೀನು ಸಂದರ್ಭದಲ್ಲಿ ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳದಂತೆ ಷರತ್ತು ವಿಧಿಸಲಾಗಿತ್ತು.
  • ಇದೀಗ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ ಷರತ್ತು ಸಡಿಲಿಸಿದ ಹೈಕೋರ್ಟ್

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ  ದಾಖಲಾಗಿರುವ ಫೋಕ್ಸೋ ಪ್ರಕರಣ ಸಂಬಂಧ ಜಾಮೀನು ನೀಡುವ ಸಂದರ್ಭದಲ್ಲಿ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತು ಸಡಿಲಗೊಳಿಸಬೇಕೆಂದು ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆ ನಡೆಸಿದ ಕೋರ್ಟ್, ಯಡಿಯೂರಪ್ಪನವರಿಗೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಲಾಗಿದ್ದ ಷರತ್ತು ಸಡಿಲಿಕೆ ಮಾಡಿ ಆದೇಶಿಸಿದೆ.

ಇದನ್ನೂ ಓದಿ: BS Yediyurappa: ಬಿ.ಎಸ್​. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್​​; ಸುಪ್ರೀಂಕೋರ್ಟ್​​ನಿಂದ ಮಹತ್ವದ ಆದೇಶ

ಪ್ರಕರಣದ ಹಿನ್ನೆಲೆ

2024ರ ಫೆಬ್ರವರಿ 2ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯ ತಾಯಿ ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣವೊಂದಕ್ಕೆ ನ್ಯಾಯ ಒದಗಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ದಾಖಲಾದ ನಂತರ ಈ ಪ್ರಕರಣವನ್ನು ಸಿಐಡಿ (CID) ತನಿಖೆಗೆ ವಹಿಸಲಾಗಿದ್ದು, ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ದೋಷಾರೋಪಣ ಪಟ್ಟಿ (Chargesheet) ಸಲ್ಲಿಸಲಾಗಿದ್ದು, ಈಗಾಗಲೇ ಕೋರ್ಟ್ ಸಹ ಜಾಮೀನು ನೀಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಕಿಕ್ ಮಾಡಿ

Source link

IND vs AFG: ಅಫ್ಘನ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್​ಗಳ ಜಯ – Kannada News

ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯದವನ್ನು ನಿರೀಕ್ಷಿಸಿದ್ದಂತೆಯೇ ಆತಿಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಪೂರ್ಣ ಮೂರು ದಿನವೂ ನಡೆಯದ ಈ ಪಂದ್ಯದಲ್ಲಿ ಗಿಲ್​ ಪಡೆ ಇನ್ನಿಂಗ್ಸ್ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 564 ರನ್​ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಅಫ್ಘಾನಿಸ್ತಾನ 152 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 412 ರನ್​ಗಳ ಮುನ್ನಡೆ ಸಾಧಿಸಿದ್ದ ಭಾರತ ಫಾಲೋ ಆನ್ ಹೇರಿತು. ಆದ್ದರಿಂದ ಮತ್ತೆ ಬ್ಯಾಟಿಂಗ್​ಗೆ ಇಳಿದ ಅಫ್ಘನ್ ಪಡೆ 112 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮತ್ತು 300 ರನ್​ಗಳ ಹೀನಾಯ ಸೋಲು ಅನುಭವಿಸಿತು.

Published On – 3:04 pm, Mon, 8 June 26

Source link

Exit mobile version