RR vs RCB Playing XI: ಟಾಸ್ ಗೆದ್ದ ರಾಜಸ್ಥಾನ್; ಆರ್​ಸಿಬಿ ತಂಡಕ್ಕೆ ಹೇಜಲ್‌ವುಡ್ ಎಂಟ್ರಿ

RR vs RCB Playing XI: ಟಾಸ್ ಗೆದ್ದ ರಾಜಸ್ಥಾನ್; ಆರ್​ಸಿಬಿ ತಂಡಕ್ಕೆ ಹೇಜಲ್‌ವುಡ್ ಎಂಟ್ರಿ

ಐಪಿಎಲ್ 2026 (IPL 2026) ರ 16ನೇ ಪಂದ್ಯದಲ್ಲಿ ಎರಡು ಅಜೇಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡವನ್ನು ತನ್ನ ತವರು ಮೈದಾನದಲ್ಲಿ ಎದುರಿಸುತ್ತಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಆವೃತ್ತಿಯಲ್ಲಿ ಆಡಿದ ಸತತ 2 ಪಂದ್ಯಗಳನ್ನು ಗೆದ್ದಿದೆ. ಇತ್ತ ರಾಜಸ್ಥಾನ ಕೂಡ ಸತತ 3 ಪಂದ್ಯಗಳನ್ನು ಗೆದ್ದಿದೆ. ಆದ್ದರಿಂದ, ಏಪ್ರಿಲ್ 10 ರ ಶುಕ್ರವಾರದಂದು ರಾಜಸ್ಥಾನ ಮತ್ತು ಬೆಂಗಳೂರಿನ ನಡುವೆ ಯಾವ ತಂಡವು ತಮ್ಮ ಗೆಲುವಿನ ಓಟವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ನೋಡುವುದು ಆಸಕ್ತದಾಯಕವಾಗಿರಲಿದೆ.

ಟಾಸ್ ಗೆದ್ದ ರಾಜಸ್ಥಾನ್

ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್​​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆಗಳನ್ನು ಮಾಡಲಾಗಿದೆ. ರಾಜಸ್ಥಾನ್ ತಂಡದಲ್ಲಿ ತುಷಾರ್ ದೇಶಪಾಂಡೆ ಬದಲಿಗೆ ಬ್ರಿಜೆಶ್ ಬಂದಿದ್ದರೆ, ಇತ್ತ ಆರ್​ಸಿಬಿ ತಂಡದಲ್ಲಿ ಜೆಕೋಬ್ ಡಫಿ ಬದಲಿಗೆ ಜೋಶ್ ಹೇಜಲ್​ವುಡ್ ಆಡುತ್ತಿದ್ದಾರೆ.

ಹೆಡ್ ಟು ಹೆಡ್ ರೆಕಾರ್ಡ್

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದುವರೆಗೆ 34 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ ಕೇವಲ 14 ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಪ್ರಸ್ತುತ ಫಾರ್ಮ್ ಅನ್ನು ಆಧರಿಸಿ, ಎರಡೂ ತಂಡಗಳು ಮೇಲುಗೈ ಸಾಧಿಸಿರುವಂತೆ ತೋರುತ್ತದೆ.

RR vs RCB IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ

ಪಾಯಿಂಟ್ ಪಟ್ಟಿಯಲ್ಲಿ ತಂಡಗಳ ಸ್ಥಾನ

ರಾಜಸ್ಥಾನ್ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 6 ಅಂಕಗಳನ್ನು ಹೊಂದಿರುವ ರಾಜಸ್ಥಾನ್ ತಂಡದ ನೆಟ್ ರನ್​ ರೇಟ್ +2.403 ಆಗಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ +2.501 ನೆಟ್ ರನ್ ರೇಟ್​ನೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದರೆ ಮತ್ತೊಂದೆಡೆ ಆರ್​ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಆರ್‌ಸಿಬಿ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್ ಮತ್ತು ಜೋಶ್ ಹೇಜಲ್​ವುಡ್.

ರಾಜಸ್ಥಾನ್ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಮತ್ತು ಸಂದೀಪ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಲಡ್ ಟೆಸ್ಟ್‌ಗೆ ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದು ಉತ್ತಮವಾ ಅಥವಾ ಲ್ಯಾಬ್‌ಗೆ ಹೋಗುವುದೇ? ಇಲ್ಲಿದೆ ತಜ್ಞರ ಸಲಹೆ

ಇಂದಿನ ಕಾಲದಲ್ಲಿ ಆರೋಗ್ಯ ತಪಾಸಣೆ (Health check-up) ಮಾಡಿಸಿಕೊಳ್ಳುವುದು ಬಹಳ ಸುಲಭ. ಅನೇಕ ಲ್ಯಾಬ್‌ಗಳು ಈಗ ಮನೆಬಾಗಿಲಿಗೇ ಬಂದು ಬ್ಲಡ್ ಸ್ಯಾಂಪಲ್ ಸಂಗ್ರಹಿಸುವ ಸೌಲಭ್ಯ ನೀಡುತ್ತಿವೆ. ಇದರಿಂದ ಹಲವರು ಲ್ಯಾಬ್‌ಗೆ ಹೋಗದೇ ಮನೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಮನೆ ಸ್ಯಾಂಪಲ್ ಕಲೆಕ್ಷನ್ ಉತ್ತಮವೇ ಅಥವಾ ಲ್ಯಾಬ್‌ಗೆ ಹೋಗಿ ಪರೀಕ್ಷೆ ಮಾಡಿಸುವುದೇ ಉತ್ತಮವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಹಾಗಾದರೆ ಮನೆ ಸ್ಯಾಂಪಲ್ ಕಲೆಕ್ಷನ ಮಾಡಿಸುವುದರಿಂದ ಆಗುವ ಲಾಭಗಳೇನು, ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳೇನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದರಿಂದಾಗುವ ಲಾಭಗಳು:

ಸಾಮಾನ್ಯವಾಗಿ ಮನೆ ಸ್ಯಾಂಪಲ್ ಕಲೆಕ್ಷನ್‌ನ ಮುಖ್ಯ ಲಾಭವೆಂದರೆ ಸಮಯ ಉಳಿವು. ಲ್ಯಾಬ್ ದೂರದಲ್ಲಿರುವವರು, ಹಿರಿಯರು ಅಥವಾ ಹೊರಗೆ ಹೋಗಲು ಅಸಾಧ್ಯವಾಗಿರುವವರು ಈ ಸೇವೆಯನ್ನು ಸುಲಭವಾಗಿ ಬಳಸಬಹುದು. ಪ್ರಯಾಣದ ತೊಂದರೆ, ದೀರ್ಘ ಸಾಲಿನಲ್ಲಿ ನಿಲ್ಲುವ ಸಮಸ್ಯೆ ತಪ್ಪುತ್ತದೆ. ಆದರೆ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರು ಸರಿಯಾಗಿ ತರಬೇತಿ ಪಡೆದವರಾಗಿರಬೇಕು ಮತ್ತು ಲ್ಯಾಬ್ ಮಾನ್ಯತೆ ಪಡೆದಿರಬೇಕು ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗುತ್ತದೆ.

ಇದನ್ನೂ ಓದಿ: ಶೀಘ್ರವೇ ಬರಲಿದೆ ಡೆಂಗ್ಯೂ ಲಸಿಕೆ! ಏನಿದರ ವಿಶೇಷತೆ? ಹೇಗೆ ಕಾರ್ಯನಿರ್ವಹಿಸುತ್ತೆ ತಿಳಿದುಕೊಳ್ಳಿ

ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳು:

ಲ್ಯಾಬ್‌ಗೆ ಹೋಗಿ ಸ್ಯಾಂಪಲ್ ನೀಡುವುದು ಹೆಚ್ಚು ವಿಶ್ವಾಸಾರ್ಹವಾಗಿದೆ. ಲ್ಯಾಬ್‌ನಲ್ಲಿ ಎಲ್ಲಾ ಅಗತ್ಯ ಯಂತ್ರೋಪಕರಣಗಳು ಮತ್ತು ತಜ್ಞರು ಇರುವುದರಿಂದ ಸ್ಯಾಂಪಲ್ ಗುಣಮಟ್ಟ ಉತ್ತಮವಾಗಿರುತ್ತದೆ. ಸ್ಯಾಂಪಲ್ ತಕ್ಷಣವೇ ಪ್ರಾಸೆಸ್ ಆಗುವುದರಿಂದ ಫಲಿತಾಂಶಗಳು ಹೆಚ್ಚು ನಿಖರವಾಗಿರುವ ಸಾಧ್ಯತೆ ಇದೆ. ಮನೆಯಿಂದ ಲ್ಯಾಬ್‌ಗೆ ಸ್ಯಾಂಪಲ್ ಸಾಗಿಸುವಾಗ ತಾಪಮಾನ ನಿಯಂತ್ರಣ ಮತ್ತು ಸರಿಯಾದ ಹ್ಯಾಂಡ್ಲಿಂಗ್ ಸಮಸ್ಯೆಗಳು ಎದುರಾಗಬಹುದು. ಆದರೆ ಲ್ಯಾಬ್‌ನಲ್ಲಿ ಈ ಸಮಸ್ಯೆಗಳು ಕಡಿಮೆ.

ಯಾವುದು ಉತ್ತಮ?

ಸಾಮಾನ್ಯ ಮತ್ತು ರೂಟೀನ್ ಟೆಸ್ಟ್‌ಗಳಿಗೆ ಮನೆ ಸ್ಯಾಂಪಲ್ ಕಲೆಕ್ಷನ್ ಸೂಕ್ತವಾಗಬಹುದು. ಆದರೆ HIV, ಇನ್ಫೆಕ್ಷನ್, ಥೈರಾಯ್ಡ್ ಅಥವಾ ಹೃದಯ ಸಂಬಂಧಿತ ಪ್ರಮುಖ ಪರೀಕ್ಷೆಗಳಿಗಾಗಿ ಲ್ಯಾಬ್‌ಗೆ ಹೋಗುವುದು ಉತ್ತಮ. ಅಂತಿಮವಾಗಿ, ಯಾವ ಪರೀಕ್ಷೆ ಮಾಡಿಸುತ್ತೀರಿ ಎಂಬುದರ ಮೇಲೆ ಆಯ್ಕೆ ಅವಲಂಬಿತವಾಗಿರುತ್ತದೆ. ಆದ್ರಂಗ್ ವಿಶ್ವಾಸಾರ್ಹ ಲ್ಯಾಬ್ ಆಯ್ಕೆಮಾಡಿ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರ ಸ್ವಚ್ಛತೆ ಗಮನಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

10,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ, ಐಎಂಪಿಎಸ್ ಪೇಮೆಂಟ್ 1 ಗಂಟೆ ವಿಳಂಬ? ಆರ್​ಬಿಐ ಹೊಸ ಕ್ರಮಕ್ಕೆ ಯೋಜನೆ

ನವದೆಹಲಿ, ಏಪ್ರಿಲ್ 10: ಆನ್ಲೈನ್ ವಂಚನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಡಿಜಿಟಲ್ ಪೇಮೆಂಟ್ ಸಿಸ್ಟಂನಲ್ಲಿ (Digital payment system) ಸರ್ಕಾರ ಒಂದಷ್ಟು ಮಾರ್ಪಾಡು ಮಾಡಲು ಹೊರಟಿದೆ. ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಅಧಿಕ ಮೌಲ್ಯದ ವಹಿವಾಟುಗಳಿಗೆ ಒಂದು ಗಂಟೆ ವಿಳಂಬ ಪಾವತಿ ವ್ಯವಸ್ಥೆ ತರುವ ಪ್ರಸ್ತಾಪವ ಆರ್​ಬಿಐ ಮುಂದಿದೆ ಎಂದು ವರದಿಗಳು ಹೇಳುತ್ತಿವೆ. ಈ ಪ್ರಸ್ತಾಪದ ಪ್ರಕಾರ ಯುಪಿಐ ಮತ್ತು ಐಎಂಪಿಎಸ್ ಇತ್ಯಾದಿ ಮೂಲಕ ಮಾಡಲಾಗುವ 10,000 ರೂಗೂ ಅಧಿಕ ಮೊತ್ತದ ಪೇಮೆಂಟ್​ಗಳು ರಿಯಲ್ ಟೈಮ್​ನಲ್ಲಿ ಸಂದಾಯವಾಗುವುದಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ ಈ ನಿರ್ಬಂಧವು ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಪೇಮೆಂಟ್​ಗೆ ಅನ್ವಯ ಆಗುತ್ತದೆ. ವರ್ತಕರಿಗೆ ಮಾಡಲಾಗುವ ಪೇಮೆಂಟ್​ಗಳು ಮಾಮೂಲಿ ರೀತಿಯಲ್ಲಿ ರಿಯಲ್​ಟೈಮ್​ನಲ್ಲೇ ಆಗುತ್ತವೆ.

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

10,000 ರೂಗಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಮಾಡಿದಾಗ ಒಂದು ಗಂಟೆಯ ಕೂಲಿಂಗ್ ಪೀರಿಯಡ್ ಜಾರಿಗೆ ಬರುತ್ತದೆ. ಈ ಸಂದರ್ಭದಲ್ಲಿ ಆ ಹಣವು ತತ್​ಕ್ಷಣವೇ ವ್ಯಕ್ತಿಯ ಖಾತೆಗೆ ರವಾನೆಯಾಗುವುದಿಲ್ಲ. ಆನ್​ಲೈನ್​ನಲ್ಲಿ ಕೆಲವರು ಲಿಂಕ್​ಗಳನ್ನು ಕಳುಹಿಸಿ ಅಕ್ರಮವಾಗಿ ಪೇಮೆಂಟ್ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹಲವು ಬೆಳಕಿಗೆ ಬರುತ್ತಿವೆ. ಹಾಗೆಯೇ, ಯುಪಿಐ ಗ್ರಾಹಕರು ತಪ್ಪಾಗಿ ಹಣ ಕಳುಹಿಸುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಆರ್​ಬಿಐ ಈ ರೀತಿಯ ಕ್ರಮ ತೆಗೆದುಕೊಂಡಿದೆ.

ಪರಿಚಿತ ವ್ಯಕ್ತಿಗಳ ವೈಟ್​ಲಿಸ್ಟ್

ಆರ್​ಬಿಐ ಬಳಿ ಇನ್ನೊಂದು ಪ್ರಸ್ತಾಪ ಇದೆ. ಹಣ ಕಳುಹಿಸಲಾಗುವ ವ್ಯಕ್ತಿಗಳು ಅಪರಿಚಿತರಾಗಿದ್ದರೆ ರಿಯಲ್​ಟೈಮ್​ನಲ್ಲಿ ಪೇಮೆಂಟ್ ಮಾಡುವುದು ಅಪಾಯ ಆಗಬಹುದು. ಆದರೆ, ಪರಿಚಿತರಾಗಿದ್ದರೆ? ಆರ್​ಬಿಐ ಇದಕ್ಕೊಂದು ಪರಿಹಾರ ಹುಡುಕಿದೆ. ನೆಟ್​ಬ್ಯಾಂಕಿಂಗ್​ನಲ್ಲಿ ಇರಲಾಗುವಂತೆ ಪರಿಚಿತ ಅಥವಾ ಖಾತ್ರಿ ಇರುವ ವ್ಯಕ್ತಿಗಳಿಗೆ ಪೂರ್ವಾನುಮತಿ ಕೊಡಲು ವೈಟ್​ಲಿಸ್ಟಿಂಗ್​ನಂತಹ ವ್ಯವಸ್ಥೆ ಮಾಡುವುದು ಆರ್​ಬಿಐನ ಉದ್ದೇಶವಾಗಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

10,000ಕ್ಕೂ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್​ಗಳ ಮೇಲೆ ಆರ್​ಬಿಐ ನಿರ್ಬಂಧ ಹಾಕಲು ಕಾರಣವಿದೆ. ಹೆಚ್ಚಿನ ಫ್ರಾಡ್ ಕೇಸ್​ಗಳು ಈ ಮೊತ್ತದ ಟ್ರಾನ್ಸಾಕ್ಷನ್​ಗಳಿಗೆ ಸಂಬಂಧಿಸಿದ್ದೇ ಆಗಿವೆ. ಈ ಫ್ರಾಡ್​ಗಳಿಗೆ ಜನರು ಕಳೆದುಕೊಂಡಿರುವ ಒಟ್ಟೂ ಹಣದ ಶೇ. 98.5ರಷ್ಟು ಮೊತ್ತವು ಈ ಕೆಟಗರಿಯದ್ದಾಗಿದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಯುಪಿಐ, ಐಎಂಪಿಎಸ್ ಪೇಮೆಂಟ್ ನಿಯಮವನ್ನು ಆರ್​ಬಿಐ ಬಿಗಿಗೊಳಿಸಲು ಮುಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಂಡರ್​ಗಾಗಿ ಗ್ಯಾಸ್ ಏಜೆನ್ಸಿ ಸಿಬ್ಬಂದಿ-ಗ್ರಾಹಕನ ಮಧ್ಯೆ ಹೊಡೆದಾಟ: ಇಬ್ಬರು ಆಸ್ಪತ್ರೆಗೆ ದಾಖಲು

ಹಾವೇರಿ, ಏಪ್ರಿಲ್​ 10: ಅತ್ತ ಮಧ್ಯ ಪ್ರಾಚ್ಯದಲ್ಲಿ ಕದನವಿರಾಮ ಘೋಷಣೆಯಾಗಿದ್ದರೂ, ಇತ್ತ ಕರುನಾಡಿನಲ್ಲಿ ಮಾತ್ರ ಇನ್ನೂ ಗ್ಯಾಸ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸೌದೆ ಒಲೆಯಲ್ಲೇ ಅಡುಗೆ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಅಡುಗೆ ಸಿಲಿಂಡರ್​ಗಾಗಿ (Gas Cylinder) ಹಾವೇರಿಯಲ್ಲಿ ಗಲಾಟೆಯೇ (Fight) ನಡೆದಿದೆ. ಇ-ಕೆವೈಸಿ ಮಾಡಿಸಲು ಬಂದ ಗ್ರಾಹಕರ ಮೇಲೆ ಹಲ್ಲೆ HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವಂತಹ ಘಟನೆ ನಗರದ ಹುಕ್ಕೇರಿಮಠದ ಎದುರಿರುವ HP ಗ್ಯಾಸ್ ಕಚೇರಿಯಲ್ಲಿ ನಡೆದಿದೆ.

ನಡೆದಿದ್ದೇನು? 

ಬ್ಲಾಕ್​​ನಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ, ನಮಗೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕನಕಾಪುರ ಗ್ರಾಮದ ಮಾಲತೇಶ್​ ಗಾಜಿ ಮೇಲೆ ಮ್ಯಾನೇಜರ್ ಅಲೀಂ ಮತ್ತು ಗಣೇಶ ಸೇರಿ ನಾಲ್ವರಿಂದ ಹಲ್ಲೆ ಮಾಡಲಾಗಿದೆ. ಸದ್ಯ ಮ್ಯಾನೇಜರ್ ಅಲೀಂ ಮತ್ತು ಗಾಯಾಳು ಗ್ರಾಹಕ ಮಾಲತೇಶ್​ರನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನಾವು ಹಲ್ಲೆ ಮಾಡಿಲ್ಲ ಎಂದ ಸಿಬ್ಬಂದಿ

ಇನ್ನು ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ. ಆದರೆ ನಾವು ಹಲ್ಲೆ ಮಾಡಿಲ್ಲ, ಅವರೇ ಹಲ್ಲೆ ಮಾಡಿ ನಮ್ಮ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂದು HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಸಿಸಿಟಿವಿ ಪರಿಶೀಲನೆ ಮಾಡುವಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

HP ಗ್ಯಾಸ್ ಮ್ಯಾನೇಜರ್ ಅಲೀಂ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ HP ಗ್ಯಾಸ್ ಮ್ಯಾನೇಜರ್ ಅಲೀಂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಚೇರಿಯಲ್ಲಿ ಕ್ಯೂ ಇತ್ತು. ಗ್ರಾಹಕ ಕ್ಯೂ ಬಿಟ್ಟು ನಮ್ಮ ಬಳಿ ಬಂದು ಇ-ಕೆವೈಸಿ ಮಾಡಿ ಎಂದಿದ್ದಾರೆ. ಕಚೇರಿಯಲ್ಲಿ ಫ್ಯಾನ್​​ ಇಲ್ಲ, ಸಿಲಿಂಡರ್ ಇಲ್ಲ ಹೇಗೆ ಕ್ಯೂ ನಿಲ್ಲುವುದು ಅಂತಾ ಬಂದು ಜಗಳ ಮಾಡಿದ್ದಾರೆ. ನಮ್ಮ ಮೇಲೆ ಗ್ರಾಹಕನೇ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಓಟಿಪಿಯಿಂದ ಬದುಕಿತು ಬಡಜೀವ: 3 ದಿನ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ

ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇತ್ತ ಜಿಲ್ಲಾಸ್ಪತ್ರೆ ಮುಂದೆ ಕಚೇರಿಯ ಸಿಬ್ಬಂದಿ ಮತ್ತು ಗ್ರಾಹಕರ ಕಡೆಯ ಜನರು ಜಮಾವಣೆಗೊಂಡಿದ್ದಾರೆ. ದೂರು-ಪ್ರತಿದೂರು ಆಗುವ ಸಾಧ್ಯತೆ ಕೂಡ ಇದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು

ಮಥುರಾ, ಏಪ್ರಿಲ್ 10: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಶೃಂಗಾರ್ ಘಾಟ್ ಬಳಿ ಯಮುನಾ ನದಿಯಲ್ಲಿ (Yamuna River) ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿದ ಪರಿಣಾಮವಾಗಿ 10 ಜನರು ಸಾವನ್ನಪ್ಪಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಪಂಜಾಬ್‌ನ ಲುಧಿಯಾನದ ಸುಮಾರು 25 ಭಕ್ತರು ಪ್ರಯಾಣಿಸುತ್ತಿದ್ದ ಬೋಟ್ ಮಗುಚಿ ಬಿದ್ದಿದೆ. ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಲು ಈ ಭಕ್ತರು ಗಂಗಾ ನದಿಯ ಮೂಲಕ ಬೋಟ್​​ನಲ್ಲಿ ಸಾಗುತ್ತಿದ್ದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮಥುರಾ ಜಿಲ್ಲೆಯಲ್ಲಿ ನಡೆದ ದೋಣಿ ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ದುರಂತ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ. “ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಲು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ಭಗವಾನ್ ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಚುನಾವಣೆ: ‘ಧುರಂಧರ್’ ಪ್ರದರ್ಶನಕ್ಕೆ ಇಲ್ಲ ತಡೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತಮಿಳುನಾಡು ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯವು ಆರಂಭಿಕ ಹಂತದಲ್ಲೇ ವಜಾಗೊಳಿಸುವ ಮೂಲಕ ಚಿತ್ರತಂಡಕ್ಕೆ ದೊಡ್ಡ ರಿಲೀಫ್ ನೀಡಿದೆ.

ನ್ಯಾಯಮೂರ್ತಿ ಸಂಜಯ್ ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ತಮಿಳುನಾಡು ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಚಿತ್ರಮಂದಿರ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂಬ ಮಧ್ಯಂತರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ಅರ್ಜಿದಾರರ ವಾದವೇನಿತ್ತು? ಮಧುರೈ ನಿವಾಸಿಯೊಬ್ಬರು ಸಲ್ಲಿಸಿದ್ದ ಈ ಅರ್ಜಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ರಾಜಕೀಯ ಪ್ರೇರಿತ ಚಿತ್ರಗಳ ಪ್ರದರ್ಶನವು ಮತದಾರರ ಮೇಲೆ ಪ್ರಭಾವ ಬೀರಬಹುದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯಕ್ಕೆ ಈ ಚಿತ್ರದ ಪ್ರದರ್ಶನ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ, ಈ ವಾದಗಳನ್ನು ಒಪ್ಪದ ಹೈಕೋರ್ಟ್, ಚಿತ್ರದ ಪ್ರದರ್ಶನ ನಿಲ್ಲಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ‘ಧುರಂಧರ್ 2’ ಸಿನಿಮಾ ಎಂದಿನಂತೆ ಪ್ರದರ್ಶನ ಮುಂದುವರಿಸಲಿದೆ. ಈ ಸಿನಿಮಾದಲ್ಲಿ ಬಿಜೆಪಿ ಪರವಾದ ಪ್ರೊಪಗಾಂಡ ಇದೆ ಎಂದು ಅನೇಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಯಶಸ್ಸು: ಸಂಜಯ್ ದತ್ ಬಗ್ಗೆ ಮೆಚ್ಚುಗೆಯ ಮಾತಾಡಿದ ರಾಘವ್ ಚಡ್ಡಾ

ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. 2026ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ಈ ಸಿನಿಮಾದ ಕಥಾವಸ್ತು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Update: ಬೆಂಗಳೂರಲ್ಲಿ ಅಬ್ಬರಿಸಿದ ವರುಣ; ರಾಜ್ಯದ ಎಲ್ಲೆಲ್ಲಿ ನಾಳೆ ಮಳೆ?

ಬೆಂಗಳೂರು, ಏಪ್ರಿಲ್​​ 10: ರಾಜಧಾನಿ ಬೆಂಗಳೂರಿನ (Bengaluru) ಹಲವೆಡೆ ವರುಣ ಅಬ್ಬರಿಸಿದ್ದು, ಮೆಜೆಸ್ಟಿಕ್, ರಾಜಾಜಿನಗರ, ವಸಂತನಗರ, ಕಲಾಸಿಪಾಳ್ಯ, ಟೌನ್​ಹಾಲ್, ವಿಜಯನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​​ ಉಂಟಾಗಿದ್ದು ಮಂದಗತಿಯಲ್ಲಿ ವಾಹನಗಳು ಸಾಗಿವೆ. ರಾಜ್ಯದ ಹಲವೆಡೆ ಇನ್ನೂ ಕೆಲ ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ

ಇನ್ನು ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ (Hot and Humid) ಹೆಚ್ಚಿರಲಿದೆ. ಹವಾಮಾನವು ಸಾಮಾನ್ಯವಾಗಿ ಒಣಗಿದ್ದರೂ, ಸೆಖೆಯ ಅನುಭವ ಹೆಚ್ಚಾಗಿರಲಿದೆ. ಹೀಗಾಗಿ ಏಪ್ರಿಲ್​​ 10ರಿಂದ  12ರ ವರೆಗೆ ಈ ಭಾಗದಲ್ಲಿ ಐಎಂಡಿ ಯೆಲ್ಲೋ ಅಲರ್ಟ್​​ ಘೋಷಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ಉತ್ತರ ಒಳನಾಡಿನಲ್ಲಿ ಕೆಂಡದಂಥಾ ಬಿಸಿಲು, ದಕ್ಷಿಣದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ದಕ್ಷಿಣ ಒಳನಾಡು ಭಾಗದ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದ ಕೆಲವು ಭಾಗಗಳಲ್ಲಿ ಭಾಗಶಃ ಮೋಡದಿಂದ ಆಕಾಶ ಕೂಡಿರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವಾಮಾನದ ಜೊತೆಗೆ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಹಾಗೆಯೇ ಬೆಂಗಳೂರಿನಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬರಲಿದೆ. ನಗರದ ಗರಿಷ್ಠ ಉಷ್ಣಾಂಷ 35 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ಉಷ್ಣಾಂಷ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 6-13 ಕಿಲೋ ಮೀಟರ್​​ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ice Cream Health Risks: ಬೇಸಿಗೆಯಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ದೇಹ ತಂಪಾಗುತ್ತಾ? ಡಾ. ಸಂದೀಪ್ ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ತಾಪಮಾನ ಏರುತ್ತಿದ್ದಂತೆ, ಸೆಖೆಯಿಂದ ಪಾರಾಗಲು ಜನ ಐಸ್‌ಕ್ರೀಮ್ (Ice Cream) ಮೊರೆ ಹೋಗುತ್ತಿದ್ದಾರೆ. ಆದರೆ, ದೇಹಕ್ಕೆ ಕ್ಷಣಕಾಲ ತಂಪು ನೀಡುವ ಈ ಆಹಾರ ಗಮನಕ್ಕೆ ಬಾರದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಅದು ನಿಜ. ಬೇಸಿಗೆಯಲ್ಲಿ ಆಹಾರವು ಕಲುಷಿತಗೊಳ್ಳುವ ಅಪಾಯ ಹೆಚ್ಚಾಗಿರುವುದರಿಂದ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆ ವೇಗವಾಗಿರುತ್ತದೆ. ಅದರಲ್ಲಿಯೂ ಫ್ರೋಜನ್ ಉತ್ಪನ್ನಗಳು ಸುರಕ್ಷಿತವಲ್ಲ. ಘನೀಕರಣವು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆಯೇ ಹೊರತು ಎಲ್ಲಾ ಹಾನಿಕಾರಕ ಜೀವಿಗಳನ್ನು ನಾಶಪಡಿಸುವುದಿಲ್ಲ. ಹಾಗಾದರೆ ಐಸ್‌ಕ್ರೀಮ್ ಪದೇ ಪದೇ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಟಿವಿ9 ಕನ್ನಡ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಆದ ಡಾ. ಸಂದೀಪ್ ಎಸ್ ರೆಡ್ಡಿ (Sandeep S Reddy) ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಡಾ. ಸಂದೀಪ್ ಎಸ್ ರೆಡ್ಡಿ ಅವರು ಹೇಳುವ ಪ್ರಕಾರ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ, ಇ.ಕೋಲಿ ಮತ್ತು ಸ್ಟ್ಯಾಫಿಲೋಕೊಕಸ್ ಆರಿಯಸ್‌ನಂತಹ ರೋಗಕಾರಕಗಳು ಡೈರಿ ಮತ್ತು ಶೈತ್ಯೀಕರಿಸಿದ ಸಿಹಿಪದಾರ್ಥಗಳಿಗೆ ಸಂಬಂಧಿಸಿದ ಆಹಾರಗಳಲ್ಲಿ ಸೇರಿಕೊಂಡಿದ್ದು ಸೋಂಕು, ವಾಂತಿ, ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇವು ಹೆಚ್ಚಾಗಿ ಕಂಡುಬರಬಹುದು. ಸೂಕ್ಷ್ಮಜೀವಿಗಳ ಅಪಾಯದ ಹೊರತಾಗಿ, ಐಸ್‌ಕ್ರೀಮ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಸಂಸ್ಕರಿಸಿದ ಸಕ್ಕರೆ ಅಧಿಕವಾಗಿರುತ್ತದೆ, ಇದು ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಹೃದಯದ ಮೇಲಿನ ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ತಡೆಗಟ್ಟುವಿಕೆಯು ಸುರಕ್ಷಿತ ಉತ್ಪನ್ನಗಳ ಆಯ್ಕೆಯಿಂದ ಪ್ರಾರಂಭವಾಗಬೇಕು. ಸರಿಯಾದ ಶೈತ್ಯೀಕರಣವನ್ನು ನಿರ್ವಹಿಸುವ ವಿಶ್ವಾಸಾರ್ಹ ಮಳಿಗೆಗಳಿಂದ ಐಸ್‌ಕ್ರೀಮ್ ಖರೀದಿಸಿ. ಭಾಗಶಃ ಕರಗಿದ ಅಥವಾ ಮತ್ತೆ ಹೆಪ್ಪುಗಟ್ಟಿದಂತೆ ಕಾಣುವ ವಸ್ತುಗಳ ಸೇವನೆ ಮಾಡುವುದನ್ನು ತಪ್ಪಿಸಿ ಮತ್ತು ಸ್ವಚ್ಛ ಜಾಗದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ. ಕೈಗಳ ಸ್ವಚ್ಛತೆ, ಬಡಿಸುವ ಉಪಕರಣಗಳು ಸ್ವಚ್ಛವಾಗಿರುವುದು ಮತ್ತು ಯಂತ್ರಗಳ ಸರಿಯಾದ ನೈರ್ಮಲ್ಯವು ಮಾಲಿನ್ಯದ ಅಪಾಯವನ್ನು ಕಡಿಮೆ ಮಾಡಲು ಅತ್ಯಗತ್ಯ. ಮನೆಯಲ್ಲಿ, ಐಸ್‌ಕ್ರೀಮ್ ಅನ್ನು ಸರಿಯಾದ ಫ್ರೀಜರ್ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಬಡಿಸುವ ಸಮಯದಲ್ಲಿ ದೀರ್ಘಕಾಲದವರೆಗೆ ಹೊರಗೆ ಇಡಬಾರದು. ಒಂದು ವೇಳೆ ಉತ್ಪನ್ನವು ಕರಗಿ ಮತ್ತೆ ಹೆಪ್ಪುಗಟ್ಟಿದ್ದರೆ, ಅದನ್ನು ಸೇವಿಸುವ ಬದಲು ಎಸೆಯುವುದು ಒಳ್ಳೆಯದು. ಬೇಸಿಗೆಯ ತಿಂಗಳುಗಳಲ್ಲಿ ಆಹಾರದಿಂದ ಹರಡುವ ಸೋಂಕುಗಳಿಗೆ ಸುಲಭವಾಗಿ ಒಳಗಾಗುವ ಮಕ್ಕಳ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು.

ಇದನ್ನೂ ಓದಿ: ಮಂಗಳೂರಿಗರೇ ಸೆಖೆ ತುಂಬಾ ಇದ್ಯಾ? ಹಾಗಿದ್ರೆ ಅದರಿಂದ ಪಾರಾಗಲು ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಟಿಪ್ಸ್

ಆರಂಭಿಕ ಆರೈಕೆ ಏಕೆ ಮುಖ್ಯ?

ರೋಗಲಕ್ಷಣಗಳು ಪ್ರಾರಂಭವಾದಾಗ ಸ್ವಯಂ- ಮದ್ದನ್ನು ಮಾಡಬಾರದು. ನಿರಂತರ ವಾಂತಿ, ಅತಿಸಾರ, ಜ್ವರ, ಹೊಟ್ಟೆ ನೋವು, ಮಲದಲ್ಲಿ ರಕ್ತ ಅಥವಾ ನಿರ್ಜಲೀಕರಣದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಗಮನಕ್ಕೆ ತರಬೇಕು. ಚಿಕಿತ್ಸೆಯಲ್ಲಿ ವಿಳಂಬ ಮಾಡುವುದರಿಂದ ಗುಣಪಡಿಸಬಹುದಾದ ಸೋಂಕು ಉಲ್ಬಣಗೊಳ್ಳಬಹುದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಇದು ಅಪಾಯಕಾರಿಯಾಗಬಹುದು. ಆರಂಭಿಕ ತಪಾಸಣೆಯು ವೈದ್ಯರಿಗೆ ಅದು ಆಹಾರದಲ್ಲಿ ಸೇರಿಕೊಂಡ ವಿಷವೋ (Food Poisoning), ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಆಗಿದೆಯೋ ಅಥವಾ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವ ಇತರ ಸ್ಥಿತಿಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸಮಯೋಚಿತ ವೈದ್ಯಕೀಯ ಆರೈಕೆಯು ಗಂಭೀರ ಸಮಸ್ಯೆಗಳನ್ನು ಮತ್ತು ಅನಗತ್ಯ ಆಸ್ಪತ್ರೆ ದಾಖಲಾಗುವುದನ್ನು ತಡೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲಂಗಾಣ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; 1 ಕೋಟಿ ಗಿಳಿ ಹಸಿರು ಸೀರೆ ಆರ್ಡರ್ ಮಾಡಿದ ಸಿಎಂ

ಹೈದರಾಬಾದ್, ಏಪ್ರಿಲ್ 10: ತೆಲಂಗಾಣ ಸರ್ಕಾರವು (Telangana Government) ಈ ವರ್ಷ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಾರಿ ಸೀರೆಗಳಿಗೆ ಹೊಸ ಬಣ್ಣ ಮತ್ತು ವಿನ್ಯಾಸವನ್ನು ಪರಿಚಯಿಸುತ್ತಿದೆ. ತೆಲಂಗಾಣ ಸರ್ಕಾರವು ಹಿಂದಿನ ಬಾರಿ ವಿತರಿಸಲಾದ ನೀಲಿ ಸೀರೆಗಳ ಬದಲು ಗಿಳಿ ಹಸಿರು ಸೀರೆಗೆ ಕೆಂಪು ಜರಿ ಇರುವ ಸೀರೆಗಳನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ನವೀಕರಿಸಿದ ವಿನ್ಯಾಸಗಳನ್ನು ಪರಿಚಯಿಸಲು ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರ 450 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೀರೆಗಳನ್ನು ಉತ್ಪಾದಿಸುವ ಆದೇಶವನ್ನು ಟೆಸ್ಕೊಗೆ ನೀಡಿದೆ. ಕಳೆದ ವರ್ಷ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಂದು ನವೆಂಬರ್ 19ರಂದು ಸರ್ಕಾರ ಸುಮಾರು 86 ಲಕ್ಷ ಸೀರೆಗಳನ್ನು ವಿತರಿಸಿತ್ತು. ಪ್ರಸ್ತುತ ಸರ್ಕಾರ ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಲು ಮತ್ತು ಈ ವರ್ಷ ಅದೇ ದಿನಾಂಕದಂದು ಮತ್ತೆ ಸೀರೆಗಳನ್ನು ವಿತರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಮರುನಾಮಕರಣ

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಒಂದೇ ಬಣ್ಣವನ್ನು ಕಾಯ್ದುಕೊಳ್ಳುವ ಬದಲು ಪ್ರತಿ ವರ್ಷ ಬೇರೆ ಬೇರೆ ವಿನ್ಯಾಸ ಮತ್ತು ಬಣ್ಣದ ಸೀರೆಗಳನ್ನು ವಿತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಈ ಬಾರಿ ಅಧಿಕಾರಿಗಳು ಗಿಳಿ ಹಸಿರು ಬಣ್ಣದ ಸೀರೆಯನ್ನು ನೀಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನವೆಂಬರ್ 19ರಂದು ಇಂದಿರಾ ಗಾಂಧಿ ಜಯಂತಿಯಂದು ಈ ಸೀರೆ ವಿತರಣಾ ಯೋಜನೆಯನ್ನು ತಂದಿತು. ಇದರ ಭಾಗವಾಗಿ, ಕಳೆದ ವರ್ಷ ರಾಜ್ಯದಲ್ಲಿ ಸುಮಾರು 86 ಲಕ್ಷ ಜನರಿಗೆ ಸೀರೆಗಳನ್ನು ವಿತರಿಸಲಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಸೀರೆಗಳನ್ನು ಏಕಕಾಲದಲ್ಲಿ ವಿತರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ನವೆಂಬರ್‌ನಲ್ಲಿ ಇಂದಿರಾ ಗಾಂಧಿ ಜಯಂತಿಯಂದು ವಿತರಿಸಲು ಸರ್ಕಾರ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಧೋನಿ ಫ್ಯಾನ್ಸ್​ಗೆ ಸಿಹಿ ಸುದ್ದಿ; ಕಂಬ್ಯಾಕ್​ಗೆ ದಿನಾಂಕ ನಿಗದಿ

Source link

Exit mobile version