Plane Crash: ಡೊಮಿನಿಕನ್ ಗಣರಾಜ್ಯದಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ಅಪಘಾತ, ಬೆಂಕಿಗಾಹುತಿ, ಇಬ್ಬರು ಸಾವು – Kannada News

ಸ್ಯಾಂಟೊ ಡೊಮಿಂಗೊ, ಜೂನ್ 08: ಕೆರೆಬಿಯನ್ ದ್ವೀಪ ರಾಷ್ಟ್ರವಾದ ಡೊಮಿನಿಕನ್ ಗಣರಾಜ್ಯದ ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ( Plane Accident)ವೊಂದು ಸಂಭವಿಸಿದೆ. ತಾಂತ್ರಿಕ ದೋಷದ ಕಾರಣದಿಂದಾಗಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸುತ್ತಿದ್ದ ಖಾಸಗಿ ವಿಮಾನ ರನ್​ ವೇ ಮೇಲೆ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್, ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಬೇರೆ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಇರಲಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ಗಲ್ಫ್‌ಸ್ಟ್ರೀಮ್ ಜಿ200 (Gulfstream G200) ಮಾದರಿಯ ಈ ಖಾಸಗಿ ಜೆಟ್ ವಿಮಾನವು ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ, ಹಾರಾಟದ ಮಧ್ಯೆ ವಿಮಾನದಲ್ಲಿ ತೀವ್ರ ಯಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸಿಬ್ಬಂದಿಯು ಲಾ ರೊಮಾನಾದ ನೈಋತ್ಯಕ್ಕೆ ಸುಮಾರು 16 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ತುರ್ತು ಪರಿಸ್ಥಿತಿಯನ್ನು (Emergency) ಘೋಷಿಸಿದರು.

ಅಪಾಯವನ್ನು ಅರಿತ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ಹತ್ತಿರದ ಲಾ ರೊಮಾನಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಿ ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸಿದರು. ಆದರೆ, ವಿಮಾನವು ಅತ್ಯಂತ ವೇಗವಾಗಿ ಬಂದು ರನ್‌ವೇ ನೆಲವನ್ನು ಮುಟ್ಟಿದ ತಕ್ಷಣ (Rough Landing) ನಿಯಂತ್ರಣ ತಪ್ಪಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು. ಕ್ಷಣಾರ್ಧದಲ್ಲೇ ಜೆಟ್ ಸಂಪೂರ್ಣವಾಗಿ ಬೆಂಕಿಯ ಉಂಡೆಯಂತೆ ಸ್ಫೋಟಗೊಂಡಿತು.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
ಅಪಘಾತದ ಭೀಕರತೆಯನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿವೆ. ವಿಮಾನ ನಿಲ್ದಾಣದ ರನ್‌ವೇ ಮೇಲೆ ಜೆಟ್ ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಆವೃತವಾಗಿರುವುದು ಮತ್ತು ಆಕಾಶಕ್ಕೆ ದಟ್ಟವಾದ ಕಪ್ಪು ಹೊಗೆಯ ಕಾರಂಜಿ ಚಿಮ್ಮುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣವೇ ವಿಮಾನ ನಿಲ್ದಾಣದ ಅಗ್ನಿಶಾಮಕ ವಾಹನಗಳು ಧಾವಿಸಿ ಬಂದು ನೀರನ್ನು ಸಿಂಪಡಿಸುವ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ.

ಮತ್ತಷ್ಟು ಓದಿ: Colombia Plane Crash: ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನ, 30ಕ್ಕೂ ಅಧಿಕ ಮಂದಿ ಸಾವು

ಉನ್ನತ ಮಟ್ಟದ ತನಿಖೆಗೆ ಆದೇಶ
ಗಲ್ಫ್‌ಸ್ಟ್ರೀಮ್ ಜಿ200 ಜೆಟ್ ಅಪಘಾತಕ್ಕೆ ಕಾರಣವಾದ ನಿಖರವಾದ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಲು ಡೊಮಿನಿಕನ್ ಗಣರಾಜ್ಯದ ವಿಮಾನಯಾನ ಸಂಸ್ಥೆಗಳು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿವೆ.

ವಿಮಾನಯಾನ ಇಲಾಖೆಯು ಸಂಬಂಧಿತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಿದೆ. ಡೊಮಿನಿಕನ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಏವಿಯೇಷನ್ (IDAC) ಮತ್ತು ಸಿವಿಲ್ ಏವಿಯೇಷನ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಕಮಿಷನ್ (CIAA) ಜಂಟಿಯಾಗಿ ಈ ದುರಂತದ ತನಿಖೆ ನಡೆಸುತ್ತಿದ್ದು, ವರದಿ ಸಿದ್ಧವಾದ ತಕ್ಷಣ ಹೆಚ್ಚುವರಿ ಮಾಹಿತಿಯನ್ನು ಒದಗಿಸಲಾಗುವುದು.

ವಿಡಿಯೋ

ಲಾ ರೊಮಾನಾ ವಿಮಾನ ನಿಲ್ದಾಣವು ಡೊಮಿನಿಕನ್ ಗಣರಾಜ್ಯದ ಪ್ರಮುಖ ಪ್ರವಾಸಿ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಪ್ರವಾಸೋದ್ಯಮವನ್ನೇ ಪ್ರಮುಖ ಆರ್ಥಿಕ ಮೂಲವಾಗಿ ನಂಬಿರುವ ಈ ದೇಶದಲ್ಲಿ ವಿಮಾನಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ 2021 ರಲ್ಲಿ ರಾಜಧಾನಿ ಸ್ಯಾಂಟೊ ಡೊಮಿಂಗೊದ ಲಾಸ್ ಅಮೆರಿಕಾಸ್ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ನಂತರ ನಡೆದ ಇಂತಹುದೇ ಮತ್ತೊಂದು ಖಾಸಗಿ ವಿಮಾನ ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರು ಎಂಬುದು ಇಲ್ಲಿ ಗಮನಾರ್ಹ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:14 am, Mon, 8 June 26

Source link

ಫಾಲೋಆನ್​ ಹೇರಿದ ಟೀಮ್ ಇಂಡಿಯಾ: ಭಾರತದ ಗೆಲುವು ಖಚಿತ..! – Kannada News

ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಅಫ್ಘಾನಿಸ್ತಾನ್ ತಂಡ ಕೇವಲ 152 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಶುಭ್​ಮನ್ ಗಿಲ್ (126) ಶತಕ ಬಾರಿಸಿದರೆ, ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್ ಹಾಗೂ ರಿಷಭ್ ಪಂತ್ ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 564 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು.

ಇದಕ್ಕುತ್ತರವಾಇಗ ಮೊದಲ ಇನಿಂಗ್ಸ್ ಆಡಿದ ಅಫ್ಘಾನಿಸ್ತಾನ್ ತಂಡವು ಯುವ ಸ್ಪಿನ್ನರ್ ಮಾನವ್ ಸುತಾರ್ ಸ್ಪಿನ್ ದಾಳಿಗೆ ನಲುಗಿ ಹೋಗಿದೆ. ಪರಿಣಾಮ ಕೇವಲ 152 ರನ್​ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್​ನಲ್ಲಿ 412 ರನ್​ಗಳ ಹಿನ್ನಡೆ ಅನುಭವಿಸಿದೆ.

ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿರುವ ಮಾನವ್ ಸುತಾರ್ 26 ಓವರ್​ಗಳಲ್ಲಿ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಫಾಲೋಆನ್​ ಹೇರಿದ ಟೀಮ್ ಇಂಡಿಯಾ:

ಅಫ್ಘಾನಿಸ್ತಾನ್ ತಂಡವು 412 ರನ್​ಗಳ ಹಿನ್ನಡೆ ಅನುಭವಿಸಿರುವ ಕಾರಣ ಟೀಮ್ ಇಂಡಿಯಾ ಫಾಲೋಆನ್ ಹೇರಿದೆ. ಅದರಂತೆ ಇದೀಗ ಅಫ್ಘಾನ್ ತಂಡ ಮತ್ತೆ ಬ್ಯಾಟ್ ಮಾಡಲಿದೆ. ಅಂದರೆ ಅಫ್ಘಾನಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ ಆರಂಭಿಸಲಿದೆ.

ದ್ವಿತೀಯ ಇನಿಂಗ್ಸ್​ನಲ್ಲಿ 412 ರನ್​ಗಳಿಸಿದ ಬಳಿಕವಷ್ಟೇ  ರನ್​ ಲೆಕ್ಕಾಚಾರ ಶುರುವಾಗಲಿದೆ. ಅಂದರೆ ಫಾಲೋಆನ್ ಹೇರಿದ ಬಳಿಕ ಹಿನ್ನಡೆ ರನ್​ಗಳನ್ನು ಪೂರೈಸಿದ ಬಳಿಕವಷ್ಟೇ ಎದುರಾಳಿ ತಂಡಕ್ಕೆ ಗುರಿ ನೀಡಬಹುದು.

ಅದಕ್ಕೂ ಮುನ್ನ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಆಲೌಟ್ ಮಾಡಿದರೆ ಇನಿಂಗ್ಸ್ ಹಾಗೂ ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಬಹುದು.

ಟೀಮ್ ಇಂಡಿಯಾ ಗೆಲುವು ಖಚಿತ:

ಮೊದಲ ಇನಿಂಗ್ಸ್​ನಲ್ಲಿ ಕೇವಲ 152 ರನ್​ಗಳಿಗೆ ಆಲೌಟ್ ಆಗಿರುವ ಕಾರಣ ಅಫ್ಘಾನಿಸ್ತಾನ್ ತಂಡವು 412 ರನ್​ಗಳನ್ನು ಪೂರೈಸಿ ಟೀಮ್ ಇಂಡಿಯಾಗೆ ಗುರಿ ನೀಡುವ ಸಾಧ್ಯತೆಯಿಲ್ಲ. ಅದರೊಳಗೆ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡವನ್ನು ಆಲೌಟ್ ಆಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಈ ಮ್ಯಾಚ್​ನಲ್ಲಿ ಭಾರತ ತಂಡದ ಗೆಲ್ಲುವುದು ಖಚಿತ ಎಂದೇ ಹೇಳಬಹುದು.

ಇದನ್ನೂ ಓದಿ: WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

Published On – 11:16 am, Mon, 8 June 26

Source link

ಕೇವಲ 60 ಸೆಕೆಂಡುಗಳಲ್ಲಿ 1.273 ಕೆಜಿ ಜೇನುತುಪ್ಪ ತಿಂದು ಗಿನ್ನಿಸ್ ವಿಶ್ವದಾಖಲೆ ಬರೆದ ವ್ಯಕ್ತಿ – Kannada News

ಬರ್ಲಿನ್, ಜೂನ್ 08: ಜಗತ್ತಿನಾದ್ಯಂತ ವಿಚಿತ್ರ ಹಾಗೂ ಅಸಾಧಾರಣ ತಿನಿಸುಗಳನ್ನು ತಿನ್ನುವ ಸ್ಪರ್ಧೆಗಳಲ್ಲಿ ಸದಾ ಹೊಸ  ಇತಿಹಾಸ ಸೃಷ್ಟಿಸುತ್ತಿರುವ ಜರ್ಮನಿಯ ಪ್ರಸಿದ್ಧ ಸಾಹಸಿ ಆಂಡ್ರೆ ಓರ್ಟೋಲ್ಫ್ (Andre Ortolf), ಕೇವಲ ಒಂದು ನಿಮಿಷದಲ್ಲಿ ಬರೋಬ್ಬರಿ 1,273 ಗ್ರಾಂ (1.273 ಕಿಲೋಗ್ರಾಂ) ಜೇನುತುಪ್ಪ(Honey)ವನ್ನು ಪೂರ್ಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ (Guinness World Record) ಹೊಸ ಇತಿಹಾಸ ಬರೆದಿದ್ದಾರೆ. ಜರ್ಮನಿಯ ಆಗ್ಸ್‌ಬರ್ಗ್‌ನಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಈ ದಾಖಲೆಯನ್ನು ಸೃಷ್ಟಿಸಿದ್ದು, ಇಲಾಖೆಯ ವತಿಯಿಂದ ಅವರನ್ನು ಜಗತ್ತಿನ ಅತ್ಯಂತ ವೇಗದ ಜೇನುತುಪ್ಪ ಸೇವಿಸುವ ವ್ಯಕ್ತಿ ಎಂದು ಘೋಷಿಸಲಾಗಿದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಒಂದು ಚಮಚ ಜೇನುತುಪ್ಪ ಸವಿಯುವುದೇ ಕಷ್ಟ. ಆದರೆ, ಇಷ್ಟೊಂದು ಬೃಹತ್ ಪ್ರಮಾಣದ ಸಕ್ಕರೆ ಹಾಗೂ ಕ್ಯಾಲೊರಿಗಳನ್ನು ಒಳಗೊಂಡಿರುವ 1.2 ಕಿಲೋಗ್ರಾಂ ಜೇನುತುಪ್ಪವನ್ನು ಕೇವಲ 60 ಸೆಕೆಂಡುಗಳಲ್ಲಿ ಖಾಲಿ ಮಾಡುವುದು ಸಾಮಾನ್ಯ ಮನುಷ್ಯನ ಊಹೆಗೂ ನಿಲುಕದ ಸಾಹಸವಾಗಿದೆ.

ಆಂಡ್ರೆ ಅವರು ಅತ್ಯಂತ ಸರಳವಾಗಿ ಈ ಸವಾಲನ್ನು ಪೂರ್ಣಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಈ ಸಾಹಸವನ್ನು ಕಂಡು ಆಶ್ಚರ್ಯಚಕಿತರಾದ ಇಂಟರ್ನೆಟ್ ಬಳಕೆದಾರರು ಆಂಡ್ರೆ ಅವರಿಗೆ ಮಾನವ ಜೇನುನೊಣ (Human Bee), “ಜೇನು ರಾಜ” (Honey King) ಮತ್ತು ಬೀ ಮ್ಯಾನ್ ಎಂಬ ಅಡ್ಡಹೆಸರುಗಳನ್ನು ಇಟ್ಟು ಪ್ರಶಂಸಿಸುತ್ತಿದ್ದಾರೆ.

ಮತ್ತಷ್ಟು ಓದಿ: ಮಗುವಿಗೆ ಜೇನುತುಪ್ಪ ಏಕೆ ಕೊಡಬಾರದು? ಬೊಟುಲಿಸಂ ರೋಗ ಎಷ್ಟು ಅಪಾಯಕಾರಿ ಗೊತ್ತಾ?

ಸ್ಪೀಡ್ ಈಟಿಂಗ್ ಮತ್ತು ಸ್ಪೀಡ್ ಡ್ರಿಂಕಿಂಗ್ ಲೋಕದಲ್ಲಿ ಆಂಡ್ರೆ ಓರ್ಟೋಲ್ಫ್ ಅತ್ಯಂತ ಚಿರಪರಿಚಿತ ಹೆಸರು. ಅವರು ಕೇವಲ ಜೇನುತುಪ್ಪ ಮಾತ್ರವಲ್ಲದೆ, ಈ ಹಿಂದೆ ಅತ್ಯಂತ ವೇಗವಾಗಿ ‘ಹಾಟ್ ಸಾಸ್’ (ಖಾರದ ಸಾಸ್) ಕುಡಿಯುವುದು, ಅತಿ ಹೆಚ್ಚಿನ ಪ್ರಮಾಣದಲ್ಲಿ ಮೊಸರು ತಿನ್ನುವುದು ಸೇರಿದಂತೆ ಹಲವು ವಿಭಿನ್ನ ಆಹಾರ ಸವಾಲುಗಳಲ್ಲಿ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಸದಾ ಹೊಸ ಮತ್ತು ಕಠಿಣ ಗುರಿಗಳನ್ನು ತಾವೇ ನಿಗದಿಪಡಿಸಿಕೊಂಡು ಅದನ್ನು ಯಶಸ್ವಿಯಾಗಿ ಮುರಿಯುವುದು ಅವರ ಹವ್ಯಾಸವಾಗಿದೆ.

ತಿಂಗಳುಗಳ ಕಠಿಣ ತರಬೇತಿ ಮತ್ತು ಶಿಸ್ತು
ಯಾವುದೇ ಜಾಗತಿಕ ದಾಖಲೆಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲ ಮತ್ತು ಇವುಗಳ ಹಿಂದೆ ತಿಂಗಳುಗಳ ಕಾಲದ ನಿರಂತರ ಶ್ರಮ ಇರುತ್ತದೆ ಎಂದು ಆಂಡ್ರೆ ಹೇಳಿದ್ದಾರೆ.

ಇಂತಹ ಸವಾಲುಗಳನ್ನು ಎದುರಿಸಲು ದೇಹ ಮತ್ತು ಮನಸ್ಸನ್ನು ಮೊದಲೇ ಸಿದ್ಧಪಡಿಸಬೇಕಾಗುತ್ತದೆ. ಹೊಟ್ಟೆಯ ಆಹಾರ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ವಿಶೇಷ ವ್ಯಾಯಾಮಗಳು, ಸರಿಯಾದ ಉಸಿರಾಟದ ತಂತ್ರಗಳು ಹಾಗೂ ಅತ್ಯಂತ ವೇಗವಾಗಿ ಆಹಾರವನ್ನು ಅಗಿದು ನುಂಗುವ ಪ್ರಕ್ರಿಯೆಗಳನ್ನು ನಾನು ನಿರಂತರವಾಗಿ ಅಭ್ಯಾಸ ಮಾಡುತ್ತೇನೆ. ಯಾವುದೇ ಮೈಲಿಗಲ್ಲು ತಲುಪಲು ಕೇವಲ ಇಚ್ಛಾಶಕ್ತಿ ಮಾತ್ರ ಸಾಲದು, ಅದರ ಜೊತೆಗೆ ಶಿಸ್ತಿನ ತರಬೇತಿಯೂ ಅತಿ ಮುಖ್ಯ.

ಅಪಾಯಕಾರಿ ಪ್ರಮಾಣದ ಸಕ್ಕರೆಯನ್ನು ಕೇವಲ 60 ಸೆಕೆಂಡುಗಳಲ್ಲಿ ಜೀರ್ಣಿಸಿಕೊಂಡ ಆಂಡ್ರೆ ಅವರ ಈ ಅಸಾಧಾರಣ ದೈಹಿಕ ಸಾಮರ್ಥ್ಯ ಮತ್ತು ಮಾನವ ಸಹಿಷ್ಣುತೆಯು ಇಡೀ ಜಗತ್ತನ್ನು ಬೆರಗುಗೊಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate: ಚಿನ್ನದ ಬೆಲೆ 95 ರೂ, ಬೆಳ್ಳಿ ಬೆಲೆ 5 ರೂ ಕುಸಿತ – Kannada News

ನವದೆಹಲಿ, ಜೂನ್ 8: ಚಿನ್ನದ ಬೆಲೆಯ ಸತತ ಇಳಿಕೆ ಈ ವಾರವೂ ಶುರುವಾಗಿದೆ. ಈ ಹಳದಿ ಲೋಹದ ಬೆಲೆ (Gold Price) ಸೋಮವಾರ ಗ್ರಾಮ್​ಗೆ 95 ರೂಗಳಷ್ಟು ಕಡಿಮೆ ಆಗಿದೆ. ಹಲವು ದಿನಗಳ ನಂತರ 14,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ. ಆದರೆ ಇವತ್ತು ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಇನ್ನು, ಚಿನ್ನದಂತೆ ಬೆಳ್ಳಿ ಬೆಲೆಯ ಇಳಿಕೆ ಮುಂದುವರಿದೆ. ಇವತ್ತು ಇದರ ಬೆಲೆ ಗ್ರಾಮ್​ಗೆ 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,39,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,39,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 8ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,169 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,905 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,377 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,169 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,905 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,905 ರೂ
  • ಚೆನ್ನೈ: 14,070 ರೂ
  • ಮುಂಬೈ: 13,905 ರೂ
  • ದೆಹಲಿ: 13,920 ರೂ
  • ಕೋಲ್ಕತಾ: 13,905 ರೂ
  • ಕೇರಳ: 13,905 ರೂ
  • ಅಹ್ಮದಾಬಾದ್: 13,910 ರೂ
  • ಜೈಪುರ್: 13,920 ರೂ
  • ಲಕ್ನೋ: 13,920 ರೂ
  • ಭುವನೇಶ್ವರ್: 13,905 ರೂ

ಇದನ್ನೂ ಓದಿ: ಇಂಟರ್ನೆಟ್ ಬಳಕೆಯಲ್ಲಿ ಮನುಷ್ಯರನ್ನು ಮೀರಿಸಿವೆಯಂತೆ ಎಐ ಏಜೆಂಟ್​ಗಳು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 576 ರಿಂಗಿಟ್ (13,485 ರುಪಾಯಿ)
  • ದುಬೈ: 521.75 ಡಿರಾಮ್ (13,535 ರುಪಾಯಿ)
  • ಅಮೆರಿಕ: 142.50 ಡಾಲರ್ (13,579 ರುಪಾಯಿ)
  • ಸಿಂಗಾಪುರ: 190.70 ಸಿಂಗಾಪುರ್ ಡಾಲರ್ (14,083 ರುಪಾಯಿ)
  • ಕತಾರ್: 522 ಕತಾರಿ ರಿಯಾಲ್ (13,643 ರೂ)
  • ಸೌದಿ ಅರೇಬಿಯಾ: 537 ಸೌದಿ ರಿಯಾಲ್ (13,628 ರುಪಾಯಿ)
  • ಓಮನ್: 54.85 ಒಮಾನಿ ರಿಯಾಲ್ (13,574 ರುಪಾಯಿ)
  • ಕುವೇತ್: 43.81 ಕುವೇತಿ ದಿನಾರ್ (13,600 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭೆಗೆ ಕಣಕ್ಕಿಳಿದ ಪ್ರೊ. ಎಂ. ನಾಗರಾಜ; ಮಾಜಿ ಪ್ರಧಾನಿ ದೇವೇಗೌಡರ ಸ್ಥಾನಕ್ಕೆ ಬಿಜೆಪಿ ಇವರನ್ನೇ ಆರಿಸಿದ್ದೇಕೆ? – Kannada News

ಪ್ರೊ. ಎಂ. ನಾಗರಾಜImage Credit source: The Hindu

ಬೆಂಗಳೂರು, ಜೂನ್ 08: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ಭಾನುವಾರ ರಾತ್ರಿ ತನ್ನ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಘೋಷಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಪ್ರೊ. ನಾಗರಾಜ ಅವರಿಗೆ ಮನ್ನಣೆ ನೀಡಿದೆ.ಇದರೊಂದಿಗೆ, ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳಾಗಿ ಲಿಂಗರಾಜ ಪಾಟೀಲ ಮತ್ತು ರಘು ಕೌಟಿಲ್ಯ ಅವರ ಹೆಸರುಗಳನ್ನು ಕೂಡ ಬಿಜೆಪಿ ಪ್ರಕಟಿಸಿದೆ

ಮುಖ್ಯಾಂಶಗಳು

  • ಪ್ರೊ. ಎಂ. ನಾಗರಾಜ ಅವರನ್ನು ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ.
  • ಮಾಜಿ ಪ್ರಧಾನಿ ದೇವೇಗೌಡರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಇವರ ಆಯ್ಕೆಯಾಗಿದೆ.
  • ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ಬಿಜೆಪಿ ಒಬಿಸಿ ಕಾರ್ಡ್ ಬಳಸಿದೆ.

ಯಾರು ಈ ಪ್ರೊ. ಎಂ. ನಾಗರಾಜ?

ಪ್ರೊ. ಎಂ. ನಾಗರಾಜ ಅವರು ಮೂಲತಃ ಹುಬ್ಬಳ್ಳಿಯವರಾಗಿದ್ದು, ಶಿಕ್ಷಣ ತಜ್ಞ ಹಾಗೂ ಹಿರಿಯ ಒಬಿಸಿ (OBC) ನಾಯಕರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಕ್ರಿಯ ಕಾರ್ಯಕರ್ತರಾಗಿದ್ದ ಇವರು, ಬಿಜೆಪಿಯ ತಳಮಟ್ಟದ ನಿಷ್ಠಾವಂತ ನಾಯಕ. ಈ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದವರು.

ಇದನ್ನೂ ಓದಿ ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ

ಆಯ್ಕೆಗೆ ಕಾರಣಗಳೇನು?

  • ಒಬಿಸಿ ಮತಬ್ಯಾಂಕ್ ತಂತ್ರ:ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ, ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ (OBC) ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ಈ ತಂತ್ರ ರೂಪಿಸಿದೆ.
  • ದೇವೆಗೌಡರ ಯುಗದ ಅಂತ್ಯದ ಮುನ್ಸೂಚನೆ: ಹಾಲಿ ಸಂಸದರಾಗಿದ್ದ 93 ವರ್ಷದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮತ್ತೊಮ್ಮೆ ಅವಕಾಶ ನೀಡದೆ, ಅವರ ಸ್ಥಾನಕ್ಕೆ ಪ್ರೊ. ನಾಗರಾಜ ಅವರನ್ನು ತರುವ ಮೂಲಕ ಮೈತ್ರಿಕೂಟದಲ್ಲಿ ಬಿಜೆಪಿ ಹೊಸ ಸಂದೇಶ ರವಾನಿಸಿದೆ. ಜೆಡಿಎಸ್‌ಗೆ ಸ್ವಂತ ಬಲದಿಂದ ಗೆಲ್ಲಲು ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಈ ನಿರ್ಧಾರ ಅನಿವಾರ್ಯವಾಯಿತು.
  • ನಿಷ್ಠೆಗೆ ಸಂದ ಗೌರವ: ಯಾವುದೇ ವಿವಾದಗಳಿಲ್ಲದೆ ದಶಕಗಳಿಂದ ಆರ್‌ಎಸ್‌ಎಸ್ ಮತ್ತು ಪಕ್ಷಕ್ಕಾಗಿ ದುಡಿದ ಸಂಘಟನಾತ್ಮಕ ನಿಷ್ಠಾವಂತರಿಗೆ ಹೈಕಮಾಂಡ್ ಮನ್ನಣೆ ನೀಡಿದೆ.

ಜೂನ್ 25 ರಂದು ದೇವೇಗೌಡರು ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಜೂನ್ 18 ರಂದು ಚುನಾವಣೆ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಷ್ಟದ ಭೀತಿಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ನಿರ್ಮಾಪಕರು – Kannada News

ಚಿತ್ರರಂಗದಲ್ಲಿ ದೊಡ್ಡ ತಾರಾಗಣ ಹಾಗೂ ಭರ್ಜರಿ ಪ್ರಚಾರದೊಂದಿಗೆ ತೆರೆಗೆ ಬರುವ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತವೆ ಎಂಬ ನಂಬಿಕೆ ಸದಾ ನಿಜವಾಗುವುದಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ಸಿಕ್ಕಿದೆ. ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿದ್ದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಕಾಣದೆ ಸಂಪೂರ್ಣವಾಗಿ ಮಕಾಡೆ ಮಲಗುವ ಸೂಚನೆ ನೀಡಿದೆ. ವೀಕೆಂಡ್ ಮುಗಿದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ ಚಿತ್ರದ ಗಳಿಕೆಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ.

ಪ್ರಸ್ತುತ ದೇಶಾದ್ಯಂತ 1,380 ಶೋಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದ್ದರೂ ಪ್ರೇಕ್ಷಕರು ಇಲ್ಲದೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಭಾನುವಾರ 9 ಕೋಟಿ ರೂಪಾಯಿ ಗಳಿಸಿರೋ ಈ ಚಿತ್ರ ಈವರೆಗೆ ಭಾರತದಲ್ಲಿ 24.08 ಕೋಟಿ ರೂಪಾಯಿಗೆ ತಲುಪಿದೆ. ಸದ್ಯಕ್ಕೆ ಚಿತ್ರದ ಅಂತಿಮ ಕಲೆಕ್ಷನ್ ವರದಿಗಳು ಬಾಕಿ ಇವೆಯಾದರೂ, ಸದ್ಯದ ಟ್ರೆಂಡ್ ನೋಡಿದರೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ.

ಈ ಚಿತ್ರದ ಒಟ್ಟು ವೆಚ್ಚ ಬರೋಬ್ಬರಿ 55 ಕೋಟಿ ರೂಪಾಯಿ ಎನ್ನಲಾಗಿದೆ. ಥಿಯೇಟರ್‌ಗಳಿಂದ ಬರುವ ಒಟ್ಟಾರೆ ಕಲೆಕ್ಷನ್ ಹಣ ನೇರವಾಗಿ ನಿರ್ಮಾಪಕರ ಕೈ ಸೇರುವುದಿಲ್ಲ. ಚಿತ್ರಮಂದಿರಗಳಿಂದ ಬರುವ ಒಟ್ಟು ಗಳಿಕೆಯಲ್ಲಿ ಕೇವಲ ಅರ್ಧದಷ್ಟು (ಸುಮಾರು 50 ಪ್ರತಿಶತ) ಹಣ ಮಾತ್ರ ನಿರ್ಮಾಪಕರ ಕೈ ಸೇರುವ ಸಾಧ್ಯತೆ ಇರುತ್ತದೆ. ಇನ್ನುಳಿದ ಅರ್ಧದಷ್ಟು ಮೊತ್ತ ಚಿತ್ರಮಂದಿರದ ಮಾಲೀಕರು, ವಿತರಕರು ಹಾಗೂ ತೆರಿಗೆ ಪಾಲಾಗುತ್ತದೆ.

ಇದನ್ನೂ ಓದಿ: 200 ಕೋಟಿ ರೂಪಾಯಿ ಕ್ಲಬ್ ಸೇರಿದ ರಾಮ್ ಚರಣ್ ಸಿನಿಮಾ ‘ಪೆದ್ದಿ’; ಆದರೂ ಇದೆ ಸವಾಲು

ಈ ಲೆಕ್ಕಾಚಾರವನ್ನು ಅನ್ವಯಿಸಿ ನೋಡುವುದಾದರೆ, 55 ಕೋಟಿ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರಿಗೆ ಸದ್ಯ ಬಂದಿರುವ ಕಲೆಕ್ಷನ್‌ನಿಂದ ಕೈಗೆ ಸಿಗುವುದು ತೀರಾ ಕಡಿಮೆ ಮೊತ್ತ. ಸಿನಿಮಾ ಕನಿಷ್ಠ 110 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದರೆ ಮಾತ್ರ ನಿರ್ಮಾಪಕರು ಸೇಫ್ ಜೋನ್ ತಲುಪಲು ಸಾಧ್ಯವಿತ್ತು. ಆದರೆ ಸದ್ಯ ಸಿನಿಮಾ 30 ಕೋಟಿಯ ಗಡಿಯನ್ನೂ ದಾಟಲು ಒದ್ದಾಡುತ್ತಿರುವುದರಿಂದ, ಬಂಡವಾಳ ಹೂಡಿದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿಗಳ ಭಾರಿ ಪ್ರಮಾಣದ ನಷ್ಟ ಉಂಟಾಗುವುದು ಈಗ ಶೇಕಡಾ ನೂರರಷ್ಟು ಖಚಿತವಾದಂತಿದೆ. ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳಿಂದ ಚಿತ್ರ ಹಣ ಮಾಡಿದರೂ ನಿರ್ಮಾಪಕರ ನಷ್ಟವನ್ನು ಸಂಪೂರ್ಣವಾಗಿ ಭರಿಸಲು ಇದು ಸಹಾಯ ಮಾಡದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಹಿಳಾ ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್​ ಜೂನ್ 12 ರಿಂದ ಶುರುವಾಗಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ. ಈ ಹನ್ನೆರಡು ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್​ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ.

  • ಗ್ರೂಪ್ A: ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ಬಾಂಗ್ಲಾದೇಶ್, ನೆದರ್ಲ್ಯಾಂಡ್ಸ್.
  • ಗ್ರೂಪ್ B: ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ಶ್ರೀಲಂಕಾ, ಸ್ಕಾಟ್ಲೆಂಡ್, ಐರ್ಲೆಂಡ್.

ಇದನ್ನೂ ಓದಿ: ನಾನು RCB ತಂಡದ ಕಟ್ಟಾ ಅಭಿಮಾನಿ: ವೈಭವ್ ಅಚ್ಚರಿಯ ಹೇಳಿಕೆ!

ಭಾರತ ತಂಡವು ಗ್ರೂಪ್​ A ನಲ್ಲಿರುವ ಕಾರಣ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ್, ಸೌತ್ ಆಫ್ರಿಕಾ, ಬಾಂಗ್ಲಾದೇಶ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಎದುರಿಸಲಿದೆ.

ಮಹಿಳಾ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ:

ದಿನಾಂಕ

ಮುಖಾಮುಖಿ

ಸ್ಥಳ

12-06-2026

ಇಂಗ್ಲೆಂಡ್ vs ಶ್ರೀಲಂಕಾ

ಎಡ್ಜ್‌ಬಾಸ್ಟನ್

13-06-2026

ಸ್ಕಾಟ್ಲೆಂಡ್ vs ಐರ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

13-06-2026

ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ,

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

13-06-2026

ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್

ಹ್ಯಾಂಪ್‌ಶೈರ್ ಬೌಲ್

14-06-2026

ಬಾಂಗ್ಲಾದೇಶ್ vs ನೆದರ್ಲ್ಯಾಂಡ್ಸ್

ಎಡ್ಜ್‌ಬಾಸ್ಟನ್

14-06-2026

ಭಾರತ vs. ಪಾಕಿಸ್ತಾನ್

ಎಡ್ಜ್‌ಬಾಸ್ಟನ್

16-06-2026

ನ್ಯೂಝಿಲೆಂಡ್ vs ಶ್ರೀಲಂಕಾ

ಹ್ಯಾಂಪ್‌ಶೈರ್ ಬೌಲ್

16-06-2026

ಇಂಗ್ಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

17-06-2026

ಆಸ್ಟ್ರೇಲಿಯಾ vs ಬಾಂಗ್ಲಾದೇಶ್

ಹೆಡಿಂಗ್ಲೆ

17-06-2026

ಭಾರತ vs ನೆದರ್ಲ್ಯಾಂಡ್ಸ್

ಹೆಡಿಂಗ್ಲೆ

17-06-2026

ಸೌತ್ ಆಫ್ರಿಕಾ vs ಪಾಕಿಸ್ತಾನ್

ಎಡ್ಜ್‌ಬಾಸ್ಟನ್

18-06-2026

ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

19-06-2026

ನ್ಯೂಝಿಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

20-06-2026

ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್

ಹ್ಯಾಂಪ್‌ಶೈರ್ ಬೌಲ್

20-06-2026

ಪಾಕಿಸ್ತಾನ್ vs ಬಾಂಗ್ಲಾದೇಶ್

ಹ್ಯಾಂಪ್‌ಶೈರ್ ಬೌಲ್

20-06-2026

ಇಂಗ್ಲೆಂಡ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

21-06-2026

ವೆಸ್ಟ್ ಇಂಡೀಸ್ vs ಶ್ರೀಲಂಕಾ

ಬ್ರಿಸ್ಟಲ್ ಕೌಂಟಿ ಗ್ರೌಂಡ್

21-06-2026

ಸೌತ್ ಆಫ್ರಿಕಾ vs ಭಾರತ

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

23-06-2026

ನ್ಯೂಝಿಲೆಂಡ್ vs ಸ್ಕಾಟ್ಲೆಂಡ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

23-06-2026

ಶ್ರೀಲಂಕಾ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

23-06-2026

ಆಸ್ಟ್ರೇಲಿಯಾ vs. ಪಾಕಿಸ್ತಾನ್

ಹೆಡಿಂಗ್ಲೆ

24-06-2026

ಇಂಗ್ಲೆಂಡ್ vs ವೆಸ್ಟ್ ಇಂಡೀಸ್

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

25-06-2026

ಭಾರತ vs ಬಾಂಗ್ಲಾದೇಶ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

25-06-2026

ಸೌತ್ ಆಫ್ರಿಕಾ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

26-06-2026

ಶ್ರೀಲಂಕಾ vs ಸ್ಕಾಟ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್

27-06-2026

ಪಾಕಿಸ್ತಾನ್ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

27-06-2026

ವೆಸ್ಟ್ ಇಂಡೀಸ್ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಗ್ರೌಂಡ್

27-06-2026

ಇಂಗ್ಲೆಂಡ್ vs ನ್ಯೂಝಿಲೆಂಡ್

ದಿ ಓವಲ್

28-06-2026

ಸೌತ್ ಆಫ್ರಿಕಾ vs ಬಾಂಗ್ಲಾದೇಶ್

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

28-06-2026

ಆಸ್ಟ್ರೇಲಿಯಾ vs ಭಾರತ

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

30-06-2026

ಸೆಮಿಫೈನಲ್ 1

ದಿ ಓವಲ್

02-07-2026

ಸೆಮಿಫೈನಲ್ 2

ದಿ ಓವಲ್

05-07-2026

ಫೈನಲ್

ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್

Source link

WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

Source link

ಸಚಿನ್ ಪೈಲಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ…ಅಶೋಕ್ ಗೆಹ್ಲೋಟ್ ಹೇಳಿದ್ದೇನು? – Kannada News

ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ Image Credit source: NDTV

ಜೈಪುರ, ಜೂನ್ 08: ರಾಜಸ್ಥಾನ(Rajasthan) ರಾಜಕಾರಣದಲ್ಲಿ ಸುಡು ಬಿಸಿಲಿನಂತೆಯೇ ರಾಜಕೀಯ  ಉಷ್ಣತೆಯೂ ಗಣನೀಯವಾಗಿ ಹೆಚ್ಚಾಗಿದೆ. 2020ರ ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ರಾಜಸ್ಥಾನ ಕಾಂಗ್ರೆಸ್​ನ ಮಾನೇಸರ್ ರೆಸಾರ್ಟ್​ ಘಟನೆಯು ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಕುರಿತು ಜೂನ್ 7ರ ಭಾನುವಾರದಂದು ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ತಮ್ಮದೇ ಪಕ್ಷದ ಸಹೋದ್ಯೋಗಿ ಸಚಿನ್ ಪೈಲಟ್ ವಿರುದ್ಧ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಸಚಿನ್ ಪೈಲಟ್ ಅವರು ಅಂದು ತಾವು ಮಾಡಿದ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೆ, ವಿರೋಧ ಪಕ್ಷವಾದ ಬಿಜೆಪಿಗೆ ಈ ಮಾನೇಸರ್ ಘಟನೆಯ ವಿಷಯವನ್ನು ಪದೇ ಪದೇ ಕಾಂಗ್ರೆಸ್ ಅನ್ನು ಕೆಣಕಲು ಯಾವುದೇ ಅವಕಾಶ ಸಿಗುತ್ತಿರಲಿಲ್ಲ ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್ 25, 2022 ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಬಹಿಷ್ಕಾರದ ವಿವಾದವನ್ನು ಪ್ರಸ್ತಾಪಿಸಿದ ಗೆಹ್ಲೋಟ್, ಆ ಸಮಯದಲ್ಲಿ ಹೈಕಮಾಂಡ್ ವಿರುದ್ಧ ಯಾವುದೇ ಬಂಡಾಯ ಅಥವಾ ಅಸಮಾಧಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಅದು ಕೇವಲ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸುವ ಪ್ರಸ್ತಾಪದ ವಿರುದ್ಧ ಶಾಸಕರು ವ್ಯಕ್ತಪಡಿಸಿದ ತೀವ್ರ ಭಿನ್ನಾಭಿಪ್ರಾಯವಾಗಿತ್ತು ಎಂದು ಅವರು ವಿವರಿಸಿದರು.

ಮತ್ತಷ್ಟು ಓದಿ: ರಾಜಸ್ಥಾನ ಸಿಎಂ ಆಯ್ಕೆ ಮಾಡುವ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರಿಗಿದೆ: ಸಚಿನ್ ಪೈಲಟ್ ಬಣ

ಅಂದು 100 ಕ್ಕೂ ಹೆಚ್ಚು ಶಾಸಕರ ಆಕ್ಷೇಪವೇನೆಂದರೆ ಯಾರು 2020 ರಲ್ಲಿ ತಮ್ಮದೇ ಪಕ್ಷದ ಶಾಸಕರನ್ನು ಕರೆದುಕೊಂಡು ಹರಿಯಾಣದ ಮಾನೇಸರ್‌ಗೆ ಹೋಗಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದರೋ, ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಗೆ ಒಪ್ಪಲು ಸಾಧ್ಯವಿಲ್ಲ ಎಂಬುದಾಗಿತ್ತು. ಒಂದು ವೇಳೆ ಹೈಕಮಾಂಡ್ ವಿರುದ್ಧವೇ ನಿಜವಾದ ದಂಗೆ ನಡೆದಿದ್ದರೆ, ನನ್ನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುತ್ತಿರಲಿಲ್ಲ. ಆದರೆ, ಇಡೀ ಘಟನೆಯನ್ನು ತಪ್ಪಾಗಿ ಬಿಂಬಿಸಿ ನನಗೆ ಕೆಟ್ಟ ಹೆಸರು ತರಲು ಸಚಿನ್ ಪೈಲಟ್ ಅವರ ಆಪ್ತರು ಸಂಚು ರೂಪಿಸಿದ್ದರು.

ಪೈಲಟ್ ನನಗೆ ಮಗನಿದ್ದಂತೆ, ವೈಯಕ್ತಿಕ ದ್ವೇಷವಿಲ್ಲ
ಸಚಿನ್ ಪೈಲಟ್ ಅವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ಹಗೆತನವಿಲ್ಲ ಎಂಬುದನ್ನು ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ನಾವಿಬ್ಬರೂ ಈಗಲೂ ಪರಸ್ಪರ ಭೇಟಿಯಾಗುತ್ತೇವೆ, ನಗುತ್ತೇವೆ, ಮಾತನಾಡುತ್ತೇವೆ ಮತ್ತು ತಮಾಷೆ ಮಾಡುತ್ತೇವೆ. ನಾನು ಅವರನ್ನು ಮೊದಲಿನಿಂದಲೂ ಕುಟುಂಬದ ಕಿರಿಯ ಸದಸ್ಯನಂತೆ, ಮಗನಂತೆ ನಡೆಸಿಕೊಂಡಿದ್ದೇನೆ. ಆದರೆ, ಅವರು ಸತ್ಯವನ್ನು ಒಪ್ಪಿಕೊಳ್ಳಲು ಇನ್ನೂ ಕಲ್ತಿಲ್ಲ, ಅದಕ್ಕಾಗಿಯೇ ಈ ವಿವಾದ ಪದೇ ಪದೇ ಜೀವಂತವಾಗಿದೆ. ನಾನು ಆ ಘಟನೆಯ ನಂತರವೇ ‘ಮರೆತು ಕ್ಷಮಿಸಿ’ ಎಂದು ಹೇಳಿದ್ದೆ. ಆ ಭಾವನೆಯನ್ನು ಪೈಲಟ್ ಅರ್ಥ ಮಾಡಿಕೊಳ್ಳಬೇಕಿತ್ತು, ಎಂದಿದ್ದಾರೆ.

ಕೇಂದ್ರದಲ್ಲಿ ಸಚಿವರಾಗಲು ಸಹಾಯ ಮಾಡಿದ್ದೆ
ತಮ್ಮ ರಾಜಕೀಯ ಇತಿಹಾಸದ ಮತ್ತೊಂದು ಪುಟವನ್ನು ಬಿಚ್ಚಿಟ್ಟ ಗೆಹ್ಲೋಟ್, ಸಚಿನ್ ಪೈಲಟ್ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಲು ತಾವು ದೊಡ್ಡ ಮಟ್ಟದ ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅವರು ಸಚಿವರಾಗಲು ಬಯಸಿ ನನಗೆ ಕರೆ ಮಾಡಿದಾಗ, ನಾನು ಅವರ ಪರವಾಗಿ ಹೈಕಮಾಂಡ್ ಜೊತೆ ಬ್ಯಾಟಿಂಗ್ ಮಾಡಿ ಸಚಿವ ಸ್ಥಾನ ಸಿಗುವಂತೆ ಮಾಡಿದ್ದೆ. ಆದರೆ ಪೈಲಟ್ ಇದನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ ಎಂಬ ಬೇಸರ ನನಗಿದೆ. ಅಶೋಕ್ ಗೆಹ್ಲೋಟ್ ನನಗೆ ಸಹಾಯ ಮಾಡಿದ್ದಾರೆ ಎಂದು ಅವರು ತಮ್ಮ ಸ್ನೇಹಿತರ ಮುಂದೆ ಹೇಳಿದ್ದರೂ ನನ್ನ ಹೃದಯ ತುಂಬಿ ಬರುತ್ತಿತ್ತು ಎಂದು ಭಾವುಕರಾಗಿ ನುಡಿದಿದ್ದಾರೆ.

 ರಾಜಕೀಯ ಸಲಹೆಗಾರರ ವಿರುದ್ಧ ಅಸಮಾಧಾನ
ಕೆಲವು ರಾಜಕೀಯ ಸಲಹೆಗಾರರು,  ಸಚಿನ್ ಪೈಲಟ್ ಅವರ ಸುತ್ತ ನಿರಂತರವಾಗಿ ಅವಾಸ್ತವಿಕ ರಾಜಕೀಯ ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ, ಇದು ವಾಸ್ತವದಲ್ಲಿ ಪೈಲಟ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಾನಿ ಮಾಡುತ್ತಿದೆ ಎಂದು ಗೆಹ್ಲೋಟ್ ಎಚ್ಚರಿಸಿದ್ದಾರೆ. ಪ್ರಸ್ತುತ ದೇಶ ಮತ್ತು ಕಾಂಗ್ರೆಸ್ ಪಕ್ಷ ಎರಡೂ ಕಠಿಣ ಬಿಕ್ಕಟ್ಟಿನ ಹಂತದಲ್ಲಿದ್ದು, ಹಳೆಯ ಕಹಿ ನೆನಪುಗಳನ್ನು ಮರೆತು ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವತ್ತ ಎಲ್ಲ ನಾಯಕರು ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಅಶೋಕ್ ಗೆಹ್ಲೋಟ್ ಅವರ ಈ ಭರ್ಜರಿ ರಾಜಕೀಯ ಹೇಳಿಕೆಗಳು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದರೂ, ಸಚಿನ್ ಪೈಲಟ್ ಕಡೆಯಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೈಲಟ್ ಅವರು ಈ ಸುದೀರ್ಘ ಹೇಳಿಕೆಗಳ ಕುರಿತು ಸಂಪೂರ್ಣ ಮೌನ ವಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಲಬುರಗಿ: ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್​ಐ, ಕಾನ್​ಸ್ಟೇಬಲ್ – Kannada News

ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಶಿವಶರಣಪ್ಪ, ಮಹಿಳಾ ಕಾನ್‌ಸ್ಟೆಬಲ್ ಜ್ಯೋತಿ

ಕಲಬುರಗಿ, ಜೂನ್ 8: ಕಲಬುರಗಿ ನಗರದಲ್ಲಿ ಅತ್ಯಂತ ಅಮಾನವೀಯ ಮತ್ತು ಲಜ್ಜೆಗೆಟ್ಟ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೋಕ್ಸೋ (POCSO) ಪ್ರಕರಣದ ಸಂತ್ರಸ್ತೆಯ ತಾಯಿಯಿಂದಲೇ ಲಂಚ ಸ್ವೀಕರಿಸುತ್ತಿದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ASI) ಹಾಗೂ ಮಹಿಳಾ ಕಾನ್‌ಸ್ಟೆಬಲ್ ಅವರನ್ನು ಲೋಕಾಯುಕ್ತ ಪೊಲೀಸರು ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಸಂತ್ರಸ್ತೆಯ ತಾಯಿಗೆ ಕಾನೂನು ನೆರವು ನೀಡುವ ನೆಪದಲ್ಲಿ ಲಂಚ ಪಡೆಯುತ್ತಿದ್ದರು.

ಮುಖ್ಯಾಂಶಗಳು

  • 10 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಅರೆಸ್ಟ್.
  • ಕಾನೂನು ನೆರವು ನೀಡುವ ನೆಪದಲ್ಲಿ ಸಂತ್ರಸ್ತೆಯ ತಾಯಿಗೆ ವಂಚನೆ.
  • ತಪ್ಪಿಸಿಕೊಳ್ಳಲು ಯತ್ನಿಸಿದ ಎಎಸ್‌ಐ ಕೂಡ ಬಂಧನ.

ಕಾನೂನು ನೆರವು ನೀಡುವ ನೆಪದಲ್ಲಿ ದೋಚುತ್ತಿದ್ದ ಪೊಲೀಸರು

ಬಂಧಿತ ಆರೋಪಿಗಳು ಪೋಕ್ಸೋ ಸಂತ್ರಸ್ತೆಯ ತಾಯಿಗೆ ನ್ಯಾಯಾಲಯದಲ್ಲಿ ಕಾನೂನು ನೆರವು ಮತ್ತು ರಕ್ಷಣೆ ಒದಗಿಸುವ ನೆಪವೊಡ್ಡಿ 10,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಷ್ಟೇ ಅಲ್ಲದೆ, ಈ ಮುಂಚೆಯೇ ಸರ್ಕಾರಿ ಅಭಿಯೋಜಕರ (Public Prosecutor) ಶುಲ್ಕ ಎಂದು ಹೇಳಿ ಸಂತ್ರಸ್ತೆಯ ತಾಯಿಯಿಂದ 1,000 ರೂಪಾಯಿ ಹಣವನ್ನು ಪಡೆದಿದ್ದರು ಎಂಬ ಆರೋಪವಿದೆ. ಪೊಲೀಸರ ಈ ಕಿರುಕುಳದಿಂದ ಬೇಸತ್ತ ಮಹಿಳೆ ತಕ್ಷಣವೇ ಕಲಬುರಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಸಿಕ್ಕಿಬಿದ್ದ ಮಹಿಳಾ ಸಿಬ್ಬಂದಿ, ತಪ್ಪಿಸಿ ಓಡಲೆತ್ನಿಸಿದ ಎಎಸ್‌ಐ ಸೆರೆ

ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅರುಣ್‌ಕುಮಾರ್ ಮುರಗುಂಡಿ ಹಾಗೂ ಸಿಬ್ಬಂದಿ ವರ್ಗದವರು ಸ್ಟೇಷನ್ ಬಜಾರ್ ಠಾಣೆಯ ಬಳಿ ತೆರಳಿದ್ದರು. ಸಂತ್ರಸ್ತೆಯ ತಾಯಿಯಿಂದ ಮಹಿಳಾ ಕಾನ್‌ಸ್ಟೆಬಲ್ ಜ್ಯೋತಿ 10,000 ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆಕೆಯನ್ನು (ರೆಡ್‌ಹ್ಯಾಂಡೆಡ್ ಆಗಿ ವಶಕ್ಕೆ ಪಡೆದಿದ್ದಾರೆ. ಇತ್ತ ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಎಎಸ್‌ಐ ಶಿವಶರಣಪ್ಪ ಠಾಣೆಯಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಲೋಕಾಯುಕ್ತ ಜಾಗೃತ ದಳವು ಆತನನ್ನು ಬೆನ್ನಟ್ಟಿ ಆಳಂದ ತಾಲೂಕಿನ ಕಡಗಂಚಿ ಎಂಬಲ್ಲಿ ಹೆಡೆಮುರಿ ಕಟ್ಟಿದೆ.

ಇದನ್ನೂ ಓದಿ: ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು!

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಬಂಧಿತ ಇಬ್ಬರು ಭ್ರಷ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version