ಬೆಂಗಳೂರು, (ಏಪ್ರಿಲ್ 09): ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರ ಫಲಿತಾಂಶ (Karnataka 2nd PUC result 2026 declared) ಏಪ್ರಿಲ್ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಆನ್ಲೈನಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್ಸೈಟ್ https://www.karresults.nic.in/ ಮೂಲಕ ಫಲಿತಾಂಶ ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ಈ ಬಾರಿ ಪಿಯುಸಿ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಹೌದು…2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದ್ದು, ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಪ್ರೇಕ್ಷಕರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದೆ. ಈ ನಡುವೆ, ರಾಜಕಾರಣಿ ರಾಘವ್ ಚಡ್ಡಾ ಅವರು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಇತ್ತೀಚೆಗೆ ರಾಜಕೀಯದ ಏರಿಳಿತಗಳ ಕಾರಣದಿಂದ ಸುದ್ದಿಯಲ್ಲಿದ್ದ ರಾಘವ್ ಚಡ್ಡಾ (Raghav Chadha) ಅವರು ಈಗ ಬಾಲಿವುಡ್ ನಟನ ಸ್ನೇಹದ ಕಾರಣಕ್ಕಾಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಗುರುವಾರ (ಏ.9) ಇನ್ಸ್ಟಾಗ್ರಾಮ್ನಲ್ಲಿ ಸಂಜಯ್ ದತ್ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡ ರಾಘವ್ ಚಡ್ಡಾ, ಸಂಜು ಬಾಬಾ ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ಕುರ್ತಾ ಧರಿಸಿ, ರಾಘವ್ ಅವರ ಮನೆಯ ತೋಟದಲ್ಲಿ ಕುಳಿತು ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಅವರ ಫೋಸ್ಟ್ ವೈರಲ್ ಆಗಿದೆ.
‘ಕೆಲವು ಸಮಯದ ಹಿಂದೆ ನನ್ನ ನಿವಾಸಕ್ಕೆ ಅತಿಥಿಯಾಗಿ ಬಂದಿದ್ದ ಅತ್ಯಂತ ಆತ್ಮೀಯ ವ್ಯಕ್ತಿಗಳಲ್ಲಿ ಒಬ್ಬರಾದ ಸಂಜಯ್ ದತ್ ಅವರಿಗೆ ಆತಿಥ್ಯ ನೀಡುವ ಅವಕಾಶ ಸಿಕ್ಕಿತು. ಧುರಂಧರ್ ಚಿತ್ರದಿಂದ ನಿಮಗೆ ಸಿಗುತ್ತಿರುವ ಪ್ರೀತಿಯನ್ನು ಕಂಡು ಸಂತೋಷವಾಯಿತು. ನಿಮ್ಮ ಔರಾ ಮೊದಲಿನಂತೆಯೇ ಇದೆ ಮತ್ತು ಪ್ರತಿ ಕಾಲಘಟ್ಟದಲ್ಲೂ ನಿಮ್ಮ ಮೇಲಿರುವ ಅಭಿಮಾನ ಅಚಲವಾಗಿದೆ. ಈ ಯಶಸ್ಸಿಗೆ ನೀವು ಅರ್ಹರು. ನಾನು ಯಾವಾಗಲೂ ನಿಮಗೆ ಬೆಂಬಲವಾಗಿರುತ್ತೇನೆ’ ಎಂದು ರಾಘವ್ ಚಡ್ಡಾ ಬರೆದುಕೊಂಡಿದ್ದಾರೆ.
‘ಧುರಂಧರ್’ ಚಿತ್ರದಲ್ಲಿ ಸಂಜಯ್ ದತ್ ಅವರು ಎಸ್ಪಿ ಚೌಧರಿ ಅಸ್ಲಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವು ಪಾಕಿಸ್ತಾನದ ರಿಯಲ್ ಲೈಫ್ ಪೊಲೀಸ್ ಅಧಿಕಾರಿ ಎಸ್ಪಿ ಚೌಧರಿ ಅಸ್ಲಂ ಅವರ ಜೀವನದಿಂದ ಪ್ರೇರಿತವಾಗಿದೆ. ಸಂಜಯ್ ದತ್ ಅವರ ಗಂಭೀರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಶೇಷವೆಂದರೆ, ಖುದ್ದು ಚೌಧರಿ ಅಸ್ಲಂ ಅವರ ಪತ್ನಿ ನೌರೀನ್ ಅಸ್ಲಂ ಕೂಡ ಸಂಜಯ್ ದತ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ‘ಪರದೆಯ ಮೇಲೆ ನೋಡುವಾಗ ಒಂದು ಕ್ಷಣ ನನ್ನ ಪತಿ ಅಸ್ಲಂ ಅವರೇ ಬಂದಿದ್ದಾರೆ ಎಂದು ಅನಿಸಿತು’ ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ‘ಧುರಂಧರ್ 2’ ಸಿನಿಮಾದಿಂದಾಗಿ ಸಂಜಯ್ ದತ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.
ಮೊದಲೆಲ್ಲಾ ಬಿಳಿ ಕೂದಲು (White Hair) ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ತಜ್ಞರ ಪ್ರಕಾರ, ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದಲ್ಲಿ ವಿಟಮಿನ್ ಕೊರತೆ ಅಥವಾ ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಹೌದು ಮಗುವಿನ ಕೂದಲಿನ ಬಣ್ಣವು ಅವರ ಆರೋಗ್ಯ, ಪೋಷಣೆ ಮತ್ತು ದೇಹದ ಆಂತರಿಕ ಸ್ಥಿತಿಯನ್ನು ಸಹ ಪ್ರತಿಬಿಂಬಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಈ ರೀತಿಯಾಗುವ ಬದಲಾವಣೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಪರಿಹಾರ ಕಂಡುಕೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹಲವು ಬಾರಿ, ಇದು ಕೇವಲ ಬಾಹ್ಯ ಬದಲಾವಣೆಯಲ್ಲ, ಬದಲಾಗಿ ದೇಹದೊಳಗೆ ಸಂಭವಿಸುವ ಕೆಲವು ಅಸಮತೋಲನವನ್ನು ಸೂಚಿಸುತ್ತಿರಬಹುದು ಹಾಗಾಗಿ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಈ ರೀತಿಯಾಗುವುದಕ್ಕೆ ನಿಜವಾದ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಿಟಮಿನ್ ಕೊರತೆಯೇ ಪ್ರಮುಖ ಕಾರಣ:
ಚರ್ಮ ತಜ್ಞೆ ಡಾ. ಸೌಮ್ಯ ಪ್ರಕಾರ, ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ವಿಟಮಿನ್ ಬಿ12, ಐರನ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯಿಂದಾಗಿರಬಹುದು. ಈ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸರಿಯಾದ ಪೋಷಕಾಂಶ ಸಿಗದಿದ್ದರೆ ಕೂದಲು ಬೇಗ ಬಿಳಿಯಾಗುವ ಸಾಧ್ಯತೆ ಇದೆ.
ರೋಗಗಳ ಸೂಚನೆಯೂ ಆಗಿರಬಹುದು:
ಕೆಲವು ಸಂದರ್ಭಗಳಲ್ಲಿ ಥೈರಾಯ್ಡ್ ಸಮಸ್ಯೆಗಳು, ಆಟೋಇಮ್ಯೂನ್ ರೋಗಗಳು ಅಥವಾ ಚರ್ಮ ಸಂಬಂಧಿತ ಕಾಯಿಲೆಗಳು ಕೂಡ ಕೂದಲಿನ ಬಣ್ಣ ಬದಲಾವಣೆಗೆ ಕಾರಣವಾಗಬಹುದು. ಮಕ್ಕಳಲ್ಲಿ ವೇಗವಾಗಿ ಕೂದಲು ಬಿಳಿಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ಕುಟುಂಬದಲ್ಲಿ ಇಂತಹ ಸಮಸ್ಯೆ ಇದ್ದರೆ, ಇದು ವಂಶಪಾರಂಪರ್ಯದಿಂದಲೂ ಬರಬಹುದು. ಜೊತೆಗೆ ಅಸಮತೋಲನದ ಆಹಾರ, ಜಂಕ್ ಫುಡ್ ಹೆಚ್ಚು ಸೇವನೆ, ನಿದ್ರೆ ಕೊರತೆ ಮತ್ತು ಮಾನಸಿಕ ಒತ್ತಡವೂ ಮಕ್ಕಳ ಕೂದಲಿನ ಆರೋಗ್ಯವನ್ನು ಹಾಳುಮಾಡಬಹುದು. ಕೆಮಿಕಲ್ ಇರುವ ಹೇರ್ ಪ್ರಾಡಕ್ಟ್ಸ್ ಬಳಕೆ ಮತ್ತು ಪರಿಸರ ಮಾಲಿನ್ಯವೂ ಕೂಡ ಈ ರೀತಿ ಸಮಸ್ಯೆಗೆ ಕಾರಣವಾಗಬಹುದು.
ಬಿಳಿ ಕೂದಲನ್ನು ಹೇಗೆ ತಡೆಗಟ್ಟಬಹುದು?
ಈ ಸಮಸ್ಯೆಯನ್ನು ತಡೆಯಲು ಮಕ್ಕಳ ಆಹಾರದಲ್ಲಿ ಹಸಿರು ತರಕಾರಿ, ಹಣ್ಣು, ಹಾಲು, ದಾಲ್ ಮತ್ತು ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇರಿಸಬೇಕು. ಇದೆಲ್ಲದರ ಜೊತೆಗೆ ಸರಿಯಾಗಿ ನಿದ್ರೆ ಮತ್ತು ಒತ್ತಡರಹಿತ ವಾತಾವರಣವೂ ಅಗತ್ಯವಾಗಿರುತ್ತದೆ. ಕೆಮಿಕಲ್ ಇರುವ ಉತ್ಪನ್ನಗಳನ್ನು ತಪ್ಪಿಸಿ, ಕೂದಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಚಿಕ್ಕ ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಣ್ಣ ಸಮಸ್ಯೆಯಂತೆ ಕಂಡರೂ, ಇದು ದೇಹದ ಒಳಗಿನ ಅಸಮತೋಲನದ ಸೂಚನೆಯಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಗಮನಿಸಿ, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.
ನವದೆಹಲಿ, ಏಪ್ರಿಲ್ 9: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಜಗತ್ತಿನ ಶೇ. 20ರಷ್ಟು ತೈಲ ಸರಬರಾಜು ಆಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಅನೇಕ ದೇಶಗಳಿಗೆ ಪೆಟ್ರೋಲ್, ಡೀಸಲ್ ಪೂರೈಕೆ ಕಡಿಮೆ ಆಗಿತ್ತು. ಅದರಲ್ಲೂ ಏಷ್ಯನ್ ರಾಷ್ಟ್ರಗಳು ತತ್ತರಿಸಿವೆ. ಭಾರತದಂತಹ ಕೆಲ ದೇಶಗಳು ಈ ಬಿಕ್ಕಟ್ಟನ್ನು (oil crisis) ತಕ್ಕಮಟ್ಟಿಗೆ ನಿರ್ವಹಿಸಲು ಯಶಸ್ವಿಯಾಗಿವೆ. ಭಾರತ ಈ ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ.
ಏಳು ವರ್ಷಗಳ ನಂತರ ಇರಾನ್ನಿಂದ ತೈಲ ಆಮದು
ಇರಾನ್ ಜೊತೆ ಭಾರತಕ್ಕೆ ಮೊದಲಿಂದಲೂ ಉತ್ತಮ ಸಂಬಂಧ ಇದೆ. ಆದರೆ, ಅಮೆರಿಕದ ನಿಷೇಧ ಕ್ರಮದ ಕಾರಣ 2019ರಿಂದ ಇರಾನ್ನಿಂದ ಭಾರತ ತೈಲ ಪಡೆದಿಲ್ಲ. ಈಗ ಯುದ್ಧ ಶುರುವಾದ ಬಳಿಕ ಅಮೆರಿಕವು ತೈಲ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರಿಂದ ಇರಾನ್ನಿಂದ ಸಾಕಷ್ಟು ತೈಲದ ಪೂರೈಕೆ ಪಡೆಯಿತು.
ತೈಲ ಪೂರೈಕೆ ಜಾಲ ವಿಸ್ತಾರ
ಭಾರತ ತೈಲ ಪೂರೈಕೆ ವಿಚಾರದಲ್ಲಿ ನಾಲ್ಕೈದು ದೇಶಗಳನ್ನು ನಂಬಿ ಕುಳಿತುಕೊಳ್ಳಲಿಲ್ಲ. ಇರಾನ್, ರಷ್ಯಾ, ಗಲ್ಫ್ ರಾಷ್ಟ್ರಗಳು, ಆಫ್ರಿಕನ್ ದೇಶಗಳು, ಅಮೆರಿಕನ್ ದೇಶಗಳು ಹೀಗೆ ಬೇರೆ ಬೇರೆ ಮೂಲಗಳಿಂದ ಭಾರತವು ಕಚ್ಚಾ ತೈಲದ ಪೂರೈಕೆ ಪಡೆಯುತ್ತಿದೆ. ಹೀಗಾಗಿ, ಭಾರತಕ್ಕೆ ಪೆಟ್ರೋಲ್, ಡೀಸಲ್ ಬಿಕ್ಕಟ್ಟು ಸೃಷ್ಟಿಯಾಗಲಿಲ್ಲ.
ಭಾರತವು ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಅದನ್ನು ಸಂಸ್ಕರಿಸಿ, ತನಗೆ ಬೇಕಾದ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾಡಿಕೊಳ್ಳುತ್ತದೆ. ಇವನ್ನು ಬೇರೆ ದೇಶಗಳಿಗೂ ರಫ್ತುಮಾಡುತ್ತದೆ. ಹಾಗೆಯೇ, ಅಂಡರ್ಗ್ರೌಂಡ್ ಸಂಗ್ರಹಗಾರಗಳಲ್ಲೂ ತೈಲ ಮತ್ತು ಪೆಟ್ರೋಲಿಯಂ ಅನ್ನು ಶೇಖರಿಸಿ ಇಡುತ್ತದೆ. ಈ ರೀತಿಯ ಪೆಟ್ರೋಲಿಯಂ ಸಂಗ್ರಹವು ಭಾರತಕ್ಕೆ ಹಲವು ವಾರಗಳಿಗೆ ಆಗುವಷ್ಟು ಇದೆ. ತೈಲ ಪೂರೈಕೆ ತೀರಾ ನಿಂತುಬಿಟ್ಟರೂ ಒಂದಷ್ಟು ದಿನಗಳ ಬಳಕೆಗೆ ಸಾಕಾಗುವಷ್ಟು ಪೆಟ್ರೋಲ್ ಸಂಗ್ರಹ ಇದೆ.
ನೌಕಾದಳ ಬಳಸಿ ಹಡಗುಗಳಿಗೆ ಭದ್ರತೆ
ಇರಾನ್ ಯುದ್ಧದ ವೇಳೆ ಹಾರ್ಮುಜ್ ಜಲಸಂಧಿ ಬಹುತೇಕ ಬಂದ್ ಆಗಿತ್ತು. ಇರಾನ್ ಈ ಜಲಮಾರ್ಗವನ್ನು ತಡೆದು ನಿಲ್ಲಿಸಿತ್ತು. ಭಾರತದ ಪ್ರಯತ್ನಗಳ ಫಲವಾಗಿ ಕೆಲ ಭಾರತೀಯ ಗ್ಯಾಸ್ ಹಡಗುಗಳಿಗೆ ಹೊರಹೋಗಲು ಅವಕಾಶ ಕೊಡಲಾಯಿತು. ಭಾರತದ ನೌಕಾದಳದ ಹಡಗುಗಳ ಬೆಂಗಾವಲಿನಲ್ಲಿ ಈ ಎಲ್ಪಿಜಿ ಟ್ಯಾಂಕರ್ಗಳು ಭಾರತವನ್ನು ತಲುಪಿದವು.
ಪರ್ಯಾಯ ಇಂಧನಕ್ಕೆ ಪ್ರಯತ್ನ
ಎಲ್ಪಿಜಿ ಬಿಕ್ಕಟ್ಟನ್ನು ಕಡಿಮೆ ಮಾಡಲು ಭಾರತ ನ್ಯಾಚುರಲ್ ಗ್ಯಾಸ್ ಬಳಕೆ ಹೆಚ್ಚಿಸಲು ಕ್ರಮ ತೆಗೆದುಕೊಂಡಿತು. ದೇಶೀಯವಾಗಿ ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಿಸಿ, ಪಿಎನ್ಜಿ ಪೂರೈಕೆ ಮಾಡುತ್ತಿದೆ. ಬೇರೆ ಬೇರೆ ದೇಶಗಳಿಂದ ಎಲ್ಎನ್ಜಿ ಪೂರೈಕೆ ಪಡೆದು ಅದನ್ನು ಪಿಎನ್ಜಿಯಾಗಿ ಸರಬರಾಜು ಮಾಡುತ್ತಿದೆ.
ಅಮೆರಿಕ ಇರಾನ್ ಮಧ್ಯೆ ಕದನ ವಿರಾಮ ಏರ್ಪಟ್ಟಾಗ ತೈಲ ಬೆಲೆ ನಿನ್ನೆ ದಿಢೀರನೇ ಕುಸಿದುಹೋಯಿತು. ಈ ಸಂದರ್ಭದಲ್ಲಿ ಭಾರತ ಹೆಚ್ಚಿನ ಮೊತ್ತದ ತೈಲವನ್ನು ಖರೀದಿಸಿದೆ. ಇದು ಮುಂದೆ ಸಹಾಯಕ್ಕೆ ಬರುವ ನಿರೀಕ್ಷೆ ಇದೆ.
ಬೆಂಗಳೂರು, ಏಪ್ರಿಲ್ 09: ಇರಾನ್, ಅಮೆರಿಕ ನಡುವಿನ ಯುದ್ಧಕ್ಕೆ 15 ದಿನಗಳ ವಿರಾಮ ಬಿದ್ದಿದೆ. ಇದರಿಂದ ಹೊರ್ಮುಝ್ನಲ್ಲಿ ಸಿಲುಕಿಕೊಂಡಿರುವ ಭಾರತದ ಹಡಗುಗಳು ಇನ್ಮುಂದೆ ಬರಲಿದೆ. ಆದರೆ ಕರ್ನಾಟಕದಲ್ಲಿ ಎಲ್ಪಿಜಿ ಗ್ಯಾಸ್ ಸಮಸ್ಯೆ ಮಾತ್ರ ಮುಂದುವರಿದಿದೆ. ಆ ಮೂಲಕ ಔಷಧಿ ತಯಾರಿಕೆಯ (medicine manufacturing) ಮೇಲೂ ಯುದ್ಧದ ಕರಿನೆರಳು ಆವರಿಸಿದಂತಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕುರಿತಾಗಿ ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ ಬರೆದಿವೆ.
ಔಷಧಿ ತಯಾರಿಕೆಗೂ ಹೊಡೆತ
ಎಲ್ಪಿಜಿ ಗ್ಯಾಸ್ ಸಮಸ್ಯೆ ಸರಿಯಾಗಿಲ್ಲ. ಹೀಗಾಗಿ ಹೋಟೆಲ್ ಉದ್ಯಮಕ್ಕೆ ಒಂದು ಕಡೆ ಸಂಕಷ್ಟದಲ್ಲಿ ಇದ್ದರೆ, ಮತ್ತೊಂದಡೆ ಔಷಧ ವಲಯದ ಮೇಲೆ ಯುದ್ಧದ ಕರಿನೆರಳು ಆವರಿಸಿದೆ. ಅಮೆರಿಕ, ಇಸ್ರೇಲ್, ಇರಾನ್ ಯುದ್ಧದ ಎಫೆಕ್ಟ್ ಸಾಕಷ್ಟು ವಲಯಗಳ ಮೇಲೆ ಪರಿಣಾಮ ಬೀರಿದೆ. ಇದರ ಮಧ್ಯೆ ಔಷಧಿ ತಯಾರಿಕೆಗೂ ಹೊಡೆತ ಬಿದ್ದಿದೆ.
ಎಲ್ಪಿಜಿ ಗ್ಯಾಸ್ ಕೊರತೆ ಬೆನ್ನಲ್ಲೇ ಔಷಧಿತಯಾರಿಕೆಗೂ ಹೊಡೆತ ಹಿನ್ನೆಲೆ ಫಾರ್ಮಾಸ್ಯುಟಿಕಲ್ಸ್ ಕಂಪನಿಯಿಂದ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಔಷಧಿ ತಯಾರಿಕೆಗೆ ಕಷ್ಟವಾಗಲಿದೆ ಎಂದು ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಔಷಧಗಳ ದರ ಏರಿಕೆ ಸಾಧ್ಯತೆ
ಇನ್ನು ಎಲ್ಪಿಜಿ ಗ್ಯಾಸ್ ಅಭಾವ ಹಿನ್ನಲೆ ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಯುದ್ಧದ ಪರಿಣಾಮ ಸಪ್ಕೈ ಚೈನ್ ಮೇಲೆ ಪರಿಣಾಮ ಬಿದ್ದ ಕಾರಣ ಔಷಧಗಳ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಮುಂದಿನ ವಾರದಿಂದ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಔಷಧಗಳ ದರ ಹೆಚ್ಚಳವಾಗಲಿದೆ.
ಸರಾಸರಿ 15 ರಿಂದ 20% ಔಷಧ ದರಗಳು ಹೆಚ್ಚಳ ಆಗಲಿದ್ದು. ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ಸ್ ಸೇರಿ 600 ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಳ ಆಗಲಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಔಷಧ ದರ ಹೆಚ್ಚಳ ಮಾಡಲಾಗುತ್ತದೆ. 5 ರಿಂದ 10% ದರ ಹೆಚ್ಚಳ ಇರುತ್ತದೆ. ಆದರೆ ಈ ಬಾರಿ ಯುದ್ಧದ ಎಫೆಕ್ಟ್ ಕಾರಣ 15 ರಿಂದ 20% ಪೂರ್ಣ ಏರಿಕೆ ಆಗುವ ಸಾಧ್ಯತೆ ಇದೆ.
ಬೆಂಗಳೂರು, (ಏಪ್ರಿಲ್ 09): ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಬಿಪಿಎಲ್ ಕಾರ್ಡ್ಗೆ (BPL Card) ಈಗಾಗಲೇ ಅರ್ಜಿ ಹಾಕಿದವರಿಗೆ ಆಹಾರ ಇಲಾಖೆ ಸಚಿವ ಕೆಚ್ಎಚ್ ಮುನಿಯಪ್ಪ (Minister KH Muniyappa )ಗುಡ್ ನ್ಯೂಸ್ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ. ಈ ಬಗ್ಗೆ ಈಗಾಗಲೇ ಸದನದಲ್ಲಿ ಕೂಡ ಇದಕ್ಕೆ ಉತ್ತರ ನೀಡಿದ್ದೇನೆ.ಒಂದು ವೇಳೆ ಕಾರ್ಡ್ ರದ್ದಾಗಿದ್ರೆ ತಹಶೀಲ್ದಾರರಿಗೆ ಅರ್ಜಿ ಹಾಕಬೇಕು. 15 ದಿನದೊಳಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೋಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಪಿಎಲ್ ಕಾರ್ಡ್ ಗೆ ನಾವು ಏನು ಮಾಡುತ್ತಿಲ್ಲ. ಎಪಿಎಲ್ ಗೆ ಸಾಕಷ್ಟು ಜನರು ಅರ್ಜಿ ಹಾಕಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಹೇಳಿದಂತೆ ಪರಿಷ್ಕರಣೆ ಮಾಡುತ್ತಿದ್ದೇವೆ. ಬಿಪಿಎಲ್ ಅರ್ಹರರಲ್ಲದವರು ಎಪಿಎಲ್ ಪಡೆಯಲಿ. ಏಳು ಲಕ್ಷ ಕಾರ್ಡುಗಳು ಅರ್ಹತೆ ಮಿರಿ ಎಪಿಎಲ್ ನವರು ಇದ್ದಾರೆ. ಸುಮಾರು 14 ಲಕ್ಷ ಕಾರ್ಡುಗಳು ಎಪಿಎಲ್ ನವರು ಬಿಪಿಎಲ್ ನಲ್ಲಿ ಇದ್ದಾರೆ. ನಿಧಾನವಾಗಿ ಬಿಪಿಎಲ್ ಗೆ ತೊಂದರೆಯಾಗದಂತೆ ಪರಿಷ್ಕರಣೆ ಮಾಡಬೇಕಿದ್ದು, ಹಂತ ಹಂತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಮಿಯಾ ಖಲೀಫಾ (Mia Khalifa), ವಿಶ್ವದ ಬಲು ಜನಪ್ರಿಯ ನೀಲಿ ಚಿತ್ರತಾರೆಯರಲ್ಲಿ ಒಬ್ಬರು. ಬಹು ಬೇಗನೇ ನಿವೃತ್ತಿ ಪಡೆದರಾದರೂ ಅವರ ಜನಪ್ರಿಯತೆ ಇಂದಿಗೂ ತಗ್ಗಿಲ್ಲ. ನೀಲಿ ಚಿತ್ರಗಳಲ್ಲಿ ನಟಿಸುವುದು ಬಿಟ್ಟ ಬಳಿಕ ಮಿಯಾ ಖಲೀಫಾ, ಇನ್ಸ್ಟಾಗ್ರಾಂ ಇನ್ಫ್ಲಯುಯೆನ್ಸರ್ ಆಗಿ, ವೆಬ್ ಕ್ಯಾಮ್ ಮಾಡೆಲ್ ಹಾಗೂ ಸ್ಪೋರ್ಟ್ ಕಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೆಬ್ ಕ್ಯಾಮ್ ಮಾಡೆಲಿಂಗ್ ಮೂಲಕ ದೊಡ್ಡ ಗಳಿಕೆಯನ್ನೇ ಮಾಡುತ್ತಿರುವ ಮಿಯಾ ಖಲೀಫಾ, ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋನಲ್ಲಿ ಕಣ್ಣೀರು ಹಾಕಿದ್ದಾರೆ.
ಮಿಯಾ ಖಲೀಫಾ, ನೆಲೆಸಿರುವುದು ಅಮೆರಿಕನಲ್ಲಿ ಆದರೆ ಅವರು ಮೂಲತಃ ಲೆಬನಾನ್ನವರು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಯುದ್ಧಕ್ಕೆ ಇದೀಗ ವಿರಾಮ ಬಿದ್ದಿದೆ. ಆದರೆ ಈ ಕದನ ವಿರಾಮದ ಬಳಿಕ ಇಸ್ರೇಲ್, ಲೆಬನಾನ್ ಮೇಲೆ ಭಾರಿ ಪ್ರಮಾಣದ ಬಾಂಬ್ ದಾಳಿ ಮಾಡಿದ್ದು, 250ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದನ್ನು ನಟಿ ಮಿಯಾ ಖಲೀಫಾ ಖಂಡಿಸಿದ್ದು, ತಮ್ಮ ಮಾತೃಭೂಮಿ ಮೇಲೆ ನಡೆದ ದಾಳಿಯಿಂದ ತೀವ್ರ ದುಃಖಿತರಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ಅಳುತ್ತಲೇ ಮಾತನಾಡಿರುವ ಮಿಯಾ ಖಲೀಫಾ, ‘ಇದು ಬಹಳ ನೋವಿನ ದಿನ. ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುವುದನ್ನು ಇಷ್ಟು ವರ್ಷಗಳಲ್ಲಿ ನೋಡಿಯೇ ಇಲ್ಲ. ನರಮೇಧವನ್ನೇ ನಡೆಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಇಂಥಹಾ ನರಮೇಧ ಯಾರೂ ನೋಡಿದ್ದಿಲ್ಲ. ಕೇವಲ 10 ನಿಮಿಷದಲ್ಲಿ 160 ವಾಯುದಾಳಿಗಳನ್ನು ಲೆಬನಾನ್ ಮೇಲೆ ಮಾಡಲಾಗಿದೆ. ಸ್ಕೂಲು, ಆಸ್ಪತ್ರೆ, ಸಾರ್ವಜನಿಕರು ವಾಸಿಸುವ ಪ್ರದೇಶಗಳು, ಸ್ಮಶಾನಗಳನ್ನು ಗುರಿ ಮಾಡಿಕೊಂಡು ಈ ದಾಳಿಯನ್ನು ಇಸ್ರೇಲ್ ನಡೆಸಿದೆ, ಅದೂ ಕದನ ವಿರಾಮದ ಅವಧಿಯಲ್ಲಿ’ ಎಂದಿದ್ದಾರೆ ಮಿಯಾ ಖಲೀಫಾ.
ಮುಂದುವರೆದು ಮಾತನಾಡಿ, ‘ನನ್ನ ತೆರಿಗೆ ಹಣವನ್ನು ನನ್ನ ಮಾತೃಭೂಮಿಯನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಅರ್ಥವಾಗುತ್ತಿಲ್ಲ. ನನಗೆ ಏನು ಹೇಳಲು ಸಹ ತೋಚುತ್ತಿಲ್ಲ. ನನಗೆ ಪದಗಳೇ ಹೊಳೆಯುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಳ್ಳುತ್ತಿದ್ದೆ. ಆದರೆ ಈಗ ನಾನೇ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ನಟಿ.
‘ಏನಾಗುತ್ತಿದೆ? ನಾವು ಮಂಗಳ ಗ್ರಹಕ್ಕೆ ಜನರನ್ನು ಕಳಿಸಿ ಜೀವ ಇರಬಹುದೇನೋ ಎಂದು ಹುಡುಕುತ್ತಿದ್ದೇವೆ, ಆದರೆ ಇಲ್ಲಿ ಭೂಮಿಯ ಮೇಲೆ ಇನ್ನೊಬ್ಬ ಜೀವಿಯನ್ನು ಕೊಲ್ಲಲಾಗುತ್ತಿದೆ. ಇದು ಅನಾಗರೀಕತೆ. ಇದೇ ರೀತಿಯ ದೌರ್ಜನ್ಯಕ್ಕೆ ತುತ್ತಾದ ದೇಶವನ್ನು ನಾವು ನೋಡಿದ್ದೇವೆ, ಈಗ ಮತ್ತೊಂದು ದೇಶದ ಮೇಲೆ ದೌರ್ಜನ್ಯ ಎಸೆಗಲಾಗುತ್ತಿದೆ. ಆದರೆ ಇದು ನಿಲ್ಲುವುದು ಯಾವಾಗ? ಎಂದು ಮಿಯಾ ಖಲೀಫಾ ಪ್ರಶ್ನೆ ಮಾಡಿದ್ದಾರೆ. ಮಿಯಾ ಖಲೀಫಾ ಅಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ, ಏಪ್ರಿಲ್ 9: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಹಾಸ್ಟೆಲ್ ಕೊಠಡಿಯಿಂದ ಜೀವಂತ ಕಾರ್ಟ್ರಿಡ್ಜ್ಗಳು ಮತ್ತು ನಕಲಿ ಕರೆನ್ಸಿ ಸೇರಿದಂತೆ ಹಲವು ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ಪೊಲೀಸರು ತಮಗೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದರು. ಆಗ ಸರ್ ಜಿಯಾವುದ್ದೀನ್ ಹಾಲ್ನ ಕೊಠಡಿಯಿಂದ 32 ಬೋರ್ ಪಿಸ್ತೂಲ್ ಗುಂಡುಗಳು, 12 ಬೋರ್ ಕಾರ್ಟ್ರಿಡ್ಜ್ಗಳು, ನಕಲಿ ಕರೆನ್ಸಿ, 8 ಮೊಬೈಲ್ ಫೋನ್ಗಳು ಮತ್ತು ಖಾಲಿ ಮ್ಯಾಗಜೀನ್ ಕವರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಶೇವಾಜ್ ಆ ಕೊಠಡಿಯಲ್ಲಿ ವಾಸವಾಗಿದ್ದನು. ಅವನು ಅಲ್ಲಿದ್ದ ನಿವಾಸಿಗಳನ್ನು ಬಲವಂತವಾಗಿ ಹೊರಗೆ ಕಳುಹಿಸಿದ್ದನು. ಹಲವಾರು ತಿಂಗಳುಗಳಿಂದ ಅಲ್ಲಿಯೇ ವಾಸಿಸುತ್ತಿದ್ದನು ಎಂದು ಎಎಂಯು ಪ್ರಾಕ್ಟರ್ ನವೇದ್ ಖಾನ್ ಹೇಳಿದ್ದಾರೆ.
ಪೊಲೀಸರು ಆ ಕೋಣೆಯ ಅಧಿಕೃತ ನಿವಾಸಿಗಳಲ್ಲಿ ಒಬ್ಬರನ್ನು ಬಂಧಿಸಿ ಪ್ರಶ್ನಿಸಿದರು. ಆ ಕೊಠಡಿಯಿಂದ ವಶಪಡಿಸಿಕೊಂಡ ದಾಖಲೆಗಳು ಆರೋಪಿಯು ಅನಿವಾಸಿ ವಿದ್ಯಾರ್ಥಿಯಾಗಿ ಎಎಂಯುಗೆ ಪ್ರವೇಶ ಪಡೆದಿದ್ದಾನೆ ಎಂದು ಸೂಚಿಸುತ್ತವೆ ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 6ರಂದು ಅಲಿಗಢದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯ ಘಟನೆಯ ತನಿಖೆ ನಡೆಯುತ್ತಿರುವ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಏಪ್ರಿಲ್ 6ರಂದು ಅಲಿಘಢದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವರದಿಯಾದ ಗುಂಡಿನ ದಾಳಿಯ ತನಿಖೆಗೆ ಈ ಚೇತರಿಕೆ ಸಂಬಂಧಿಸಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಮೂವರು ಶಂಕಿತರನ್ನು ಬಂಧಿಸಿದ್ದರು. ಅದರ ವಿಚಾರಣೆಯ ಸಮಯದಲ್ಲಿ ಶೆವಾಜ್ ಹೆಸರು ಕೇಳಿಬಂದಿತ್ತು.
ಮಂಗಳವಾರ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆ ಸಮಯದಲ್ಲಿ ಆರೋಪಿಯ ಹೆಸರು ಬೆಳಕಿಗೆ ಬಂದಿದ್ದು, ತನಿಖಾಧಿಕಾರಿಗಳು ಹಾಸ್ಟೆಲ್ ಕೋಣೆಗೆ ಕರೆದೊಯ್ಯಲಾಯಿತು. ಈ ಪ್ರಕರಣದ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 09: ರಾಜ್ಯದ ಜನರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಹಲ್ಲಿನ ಚಿಕಿತ್ಸೆಗೂ ವಿಮಾ ಯೋಜನೆ ಸಹಾಯ ಸಿಗುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲ್ಲಿನ ರೂಟ್ ಕ್ಯಾನಲ್ ಚಿಕಿತ್ಸೆ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ದಂತ ಚಿಕಿತ್ಸೆಯನ್ನೂ ಈ ಯೋಜನೆಯಡಿ ಫಲಾನುಭವಿಗಳು ಮಾಡಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡುವ ಮೂಲಕ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಸಚಿವರು ಹೇಳಿದ್ದೇನು?
Strengthening public healthcare, one gap at a time.
The Government of Karnataka has approved the inclusion of Root Canal Treatment under the AB PMJAY–CM’s Arogya Karnataka scheme, extending access to essential dental care for PHH and NPHH beneficiaries.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 9, 2026
ಸಾರ್ವಜನಿಕ ಆರೋಗ್ಯ ಸೇವೆಯನ್ನು ಹಂತ ಹಂತವಾಗಿ ಬಲಪಡಿಸುವ ದಿಸೆಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ ಎಂದಿರುವ ಸಚಿವರು, ಈ ಯೋಜನೆ ಮುಂಭಾಗ (Anterior) ಮತ್ತು ಹಿಂಭಾಗ (Posterior) ಹಲ್ಲುಗಳ ರೂಟ್ ಕ್ಯಾನಲ್ ಚಿಕಿತ್ಸೆಯನ್ನೂ ಒಳಗೊಂಡಿದ್ದು, ರಾಜ್ಯದಾದ್ಯಂತ ಸಮಯೋಚಿತ, ಕೈಗೆಟುಕುವ ಹಾಗೂ ಗುಣಮಟ್ಟದ ದಂತ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ನೆರವಾಗಲಿದೆ. CGHS ಟಿಯರ್-3 ಮಾನದಂಡದ ಪ್ಯಾಕೇಜ್ ದರಗಳು ಮತ್ತು ಸ್ಪಷ್ಟ ಕ್ಲಿನಿಕಲ್ ವರ್ಗೀಕರಣದೊಂದಿಗೆ, ಚಿಕಿತ್ಸೆಗಳಲ್ಲಿ ಏಕತೆಯನ್ನು ತರಲು ಇದು ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೆ ತರಲಾಗುತ್ತಿರುವ ಈ ಪ್ಯಾಕೇಜ್ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ವೆಚ್ಚಗಳನ್ನು ಒಳಗೊಂಡಿದ್ದು, ರೋಗಿಗಳು ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನ ಅತ್ಯಂತ ನಿರ್ಣಾಯಕ ಘಟ್ಟಗಳು. ಫಲಿತಾಂಶ ಬಂದ ನಂತರ “ಮುಂದೇನು ಓದಬೇಕು? ಯಾವ ಕೆಲಸಕ್ಕೆ ಬೇಡಿಕೆಯಿದೆ?” ಎಂಬ ಗೊಂದಲ ಸಹಜ. ನೀವು ಆಯ್ದುಕೊಳ್ಳುವ ಒಂದು ಕೋರ್ಸ್ ನಿಮ್ಮ ಇಡೀ ವೃತ್ತಿಜೀವನದ ದಿಕ್ಕನ್ನೇ ಬದಲಿಸಬಹುದು. ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಲಭ್ಯವಿರುವ ಅತ್ಯುತ್ತಮ ಮತ್ತು ಉದ್ಯೋಗಾಧಾರಿತ ಕೋರ್ಸ್ಗಳ ವಿವರ ಇಲ್ಲಿದೆ:
ವಿಜ್ಞಾನ ವಿಭಾಗ (Science):
ವಿಜ್ಞಾನ ವಿಭಾಗದಲ್ಲಿ ಓದಿದವರಿಗೆ ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ, ಹತ್ತಾರು ಹೊಸ ಹಾದಿಗಳಿವೆ.
ವೈದ್ಯಕೀಯ ಮತ್ತು ಅಲೈಡ್ ಸೈನ್ಸ್: MBBS ಹೊರತುಪಡಿಸಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಮತ್ತು ಬಿ.ಫಾರ್ಮಾ ಕೋರ್ಸ್ಗಳಿಗೆ ಈಗ ಭಾರಿ ಬೇಡಿಕೆಯಿದೆ.
ತಾಂತ್ರಿಕ ಕೋರ್ಸ್ಗಳು: ಬಿ.ಸಿ.ಎ (BCA) ಅಥವಾ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಮಾಡುವ ಮೂಲಕ ಸಾಫ್ಟ್ವೇರ್ ಕ್ಷೇತ್ರದಲ್ಲಿ ಮಿಂಚಬಹುದು.
ಸಂಶೋಧನಾ ಕ್ಷೇತ್ರ: ಫೋರೆನ್ಸಿಕ್ ಸೈನ್ಸ್, ಬಯೋಕೆಮಿಸ್ಟ್ರಿ, ಓಸಿಯೋನೋಗ್ರಫಿ (ಸಮುದ್ರ ವಿಜ್ಞಾನ) ಮತ್ತು ಬಯೋಮೆಡಿಕಲ್ ವೃತ್ತಿಗಳು ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿವೆ.
ಇತರೆ: ಆರ್ಕಿಟೆಕ್ಚರ್, ಏವಿಯೇಷನ್ (ವಿಮಾನಯಾನ), ಮತ್ತು ಸೌಂಡ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಆಸಕ್ತಿ ಇದ್ದರೆ ನೂರಕ್ಕೆ ನೂರರಷ್ಟು ಉದ್ಯೋಗ ಖಚಿತ.
ವಾಣಿಜ್ಯ ವಿಭಾಗ (Commerce):
ಲೆಕ್ಕಾಚಾರ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಆಸಕ್ತಿ ಇರುವವರಿಗೆ ವಾಣಿಜ್ಯ ವಿಭಾಗವು ಬಂಗಾರದಂತಹ ಅವಕಾಶ ನೀಡುತ್ತದೆ.
ಪದವಿ ಕೋರ್ಸ್ಗಳು: ಬಿ.ಕಾಂ (B.Com) ಅಥವಾ ಬಿ.ಬಿ.ಎ (BBA) ಮಾಡುವ ಮೂಲಕ ಕಂಪನಿಗಳಲ್ಲಿ ಅಕೌಂಟೆಂಟ್ ಅಥವಾ ಮ್ಯಾನೇಜರ್ ಹುದ್ದೆ ಪಡೆಯಬಹುದು.
ವೃತ್ತಿಪರ ಕೋರ್ಸ್ಗಳು: ಅತ್ಯಂತ ಹೆಚ್ಚು ಸಂಬಳ ತರುವ ಸಿಎ (CA – Chartered Accountancy) ಮಾಡುವುದು ವಾಣಿಜ್ಯ ವಿದ್ಯಾರ್ಥಿಗಳ ಮೊದಲ ಆದ್ಯತೆ. ಇದಲ್ಲದೆ ಕಂಪನಿ ಸೆಕ್ರೆಟರಿ (CS), ಸಿಪಿಎ (CPA) ಕೋರ್ಸ್ಗಳೂ ಇವೆ. ಚಾರ್ಟೆಡ್ ಅಕೌಂಟೆನ್ಸಿ ಇದು ಕಠಿಣವಾದರೂ, ಶ್ರಮವಹಿಸಿ ಪಾಸಾದರೆ ಸಮಾಜದಲ್ಲಿ ಗೌರವ ಮತ್ತು ಉನ್ನತ ಸಂಬಳ ಸಿಗುವುದು ಖಚಿತ. ವಾಣಿಜ್ಯ ವಿದ್ಯಾರ್ಥಿಗಳಿಗೆ ಇದು ‘ಗೋಲ್ಡನ್ ಚಾನ್ಸ್’.
ಆಧುನಿಕ ಆಯ್ಕೆಗಳು: ಡಿಜಿಟಲ್ ಮಾರ್ಕೆಟಿಂಗ್, ಬ್ಯಾಂಕಿಂಗ್ ಮತ್ತು ಅಕೌಂಟೆನ್ಸಿ ಕ್ಷೇತ್ರಗಳು ಈಗಿನ ಕಾಲಕ್ಕೆ ತಕ್ಕಂತ ಉದ್ಯೋಗಗಳನ್ನು ನೀಡುತ್ತವೆ.