Philippines Earthquake: ದಕ್ಷಿಣ ಫಿಲಿಪೈನ್ಸ್​​ನಲ್ಲಿ 7.8 ತೀವ್ರತೆಯ ಭೂಕಂಪ, ಓರ್ವ ಸಾವು, ಹಲವರಿಗೆ ಗಾಯ, ಸುನಾಮಿ ಎಚ್ಚರಿಕೆ – Kannada News

ಮನಿಲಾ, ಜೂನ್ 08: ದಕ್ಷಿಣ ಫಿಲಿಪೈನ್ಸ್​ನಲ್ಲಿ 7.8 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಓರ್ವ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ ಸುನಾಮಿ ಎಚ್ಚರಿಕೆ ಕೂಡ ನೀಡಲಾಗಿದೆ. ಪ್ರಕೃತಿ ವಿಕೋಪಗಳ ಸವಾಲುಗಳ ನಡುವೆಯೂ ಮಾನವನ ಧೈರ್ಯ ಮತ್ತು ಆಡಳಿತ ವ್ಯವಸ್ಥೆಯ ತ್ವರಿತ ಮುನ್ನೆಚ್ಚರಿಕೆ ಕ್ರಮಗಳು ಹೇಗೆ ಜೀವಗಳನ್ನು ರಕ್ಷಿಸಬಲ್ಲವು ಎಂಬುದಕ್ಕೆ ಫಿಲಿಪೈನ್ಸ್‌ನ ಇಂದಿನ ಘಟನೆ ಸಾಕ್ಷಿಯಾಗಿದೆ.

ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದ ಬೆನ್ನಲ್ಲೇ, ಅಲ್ಲಿನ ಸರ್ಕಾರ ಮತ್ತು ಅಂತರರಾಷ್ಟ್ರೀಯ ರಕ್ಷಣಾ ಸಂಸ್ಥೆಗಳು ಅತ್ಯಂತ ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿವೆ.

ಪ್ರಬಲ ಭೂಕಂಪದ ಹೊರತಾಗಿಯೂ, ಮುಂಚಿತವಾಗಿಯೇ ಸಿದ್ಧವಾಗಿದ್ದ ವಿಪತ್ತು ನಿರ್ವಹಣಾ ನೀತಿಗಳಿಂದಾಗಿ ಭಾರಿ ಪ್ರಮಾಣದ ಪ್ರಾಣಹಾನಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ. ಸದ್ಯಕ್ಕೆ ಒಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ವರದಿಯಾಗಿದ್ದು, ಗಾಯಾಳುಗಳಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಭೂಕಂಪದ ಕೇಂದ್ರಬಿಂದು ಬುರಿಯಾಸ್​ನಿಂದ 24.7 ಕಿ.ಮೀ ದೂರದಲ್ಲಿದ್ದು, ಪತ್ತೆ ಹಚ್ಚಿ ತಕ್ಷಣ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮತ್ತು ಜಪಾನ್ ಹವಾಮಾನ ಇಲಾಖೆ ಜಂಟಿಯಾಗಿ ಫಿಲಿಪೈನ್ಸ್​, ಇಂಡೋನೇಷ್ಯಾ, ತೈವಾನ್ ಮತ್ತು ಜಪಾನ್ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಿವೆ.

ವಿಡಿಯೋ

ಕರಾವಳಿ ಭಾಗದ ಜನರನ್ನು ತಕ್ಷಣವೇ ಎತ್ತರ ಹಾಗೂ ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಡಲ ಅಲೆಗಳ ಏರಿಳಿತವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನೌಕಾಸೇನೆ ಮತ್ತು ಕರಾವಳಿ ರಕ್ಷಣಾ ಪಡೆಗಳು ಸನ್ನದ್ಧವಾಗಿವೆ.

ಮತ್ತಷ್ಟು ಓದಿ: Earthquake: ಭಾರೀ ಭೂಕಂಪದ ಅಪಾಯದಲ್ಲಿ ಭಾರತ, ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ; ಐಐಟಿ ವಿಜ್ಞಾನಿ ಆತಂಕ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ಭೂಕಂಪನದ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅತ್ಯಂತ ಶಾಂತವಾಗಿ, ಶಿಸ್ತುಬದ್ಧವಾಗಿ ಮುಕ್ತ ಮೈದಾನಕ್ಕೆ ಕರೆತಂದು ಸುರಕ್ಷತೆ ಖಚಿತಪಡಿಸಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಸಂತ್ರಸ್ತ ಪ್ರದೇಶದ ಜನರಿಗೆ ಆಡಳಿತ ಮಂಡಳಿಯು ತಾತ್ಕಾಲಿಕ ವಸತಿ, ಆಹಾರ, ಶುದ್ಧ ನೀರು ಮತ್ತು ವೈದ್ಯಕೀಯ ಕಿಟ್‌ಗಳನ್ನು ವಿತರಿಸಲು ತುರ್ತು ಕೇಂದ್ರಗಳನ್ನು ತೆರೆದಿದೆ.

ಫಿಲಿಪೈನ್ಸ್ ದೇಶವು ಪೆಸಿಫಿಕ್ ಮಹಾಸಾಗರದ “ರಿಂಗ್ ಆಫ್ ಫೈರ್”  ಅಂದರೆ ಭೂಕಂಪನ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಇರುವುದರಿಂದ, ಇಲ್ಲಿನ ನಾಗರಿಕರು ಮತ್ತು ರಕ್ಷಣಾ ಪಡೆಗಳು ಇಂತಹ ಸವಾಲುಗಳನ್ನು ಎದುರಿಸಲು ಮೊದಲೇ ತರಬೇತಿ ಪಡೆದಿರುತ್ತಾರೆ. ಸರ್ಕಾರದ ತ್ವರಿತ ಸ್ಪಂದನೆ, ಡ್ರೋನ್ ತಂತ್ರಜ್ಞಾನದ ಕಣ್ಗಾವಲು ಮತ್ತು ನೆರೆರಾಷ್ಟ್ರಗಳ ಸೌಹಾರ್ದಯುತ ಬೆಂಬಲದಿಂದಾಗಿ ಮಿಂಡಾನಾವೊ ಪ್ರದೇಶವು ಅತ್ಯಂತ ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಪುನರ್ನಿರ್ಮಾಣ ಕಾರ್ಯಗಳು ಸಶಕ್ತವಾಗಿ ಆರಂಭಗೊಂಡಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರು ಕೋಪ ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 08, ಸೋಮವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ ಅಷ್ಟಮಿ, ಪೂರ್ವಾಭಾದ್ರ ನಕ್ಷತ್ರ, ವಿಷ್ಕಂಭ ಯೋಗ ಮತ್ತು ಬಾಲವಕರಣ ಇರತಕ್ಕಂತಹ ಈ ದಿನದ ರಾಹುಕಾಲ 7:29 ರಿಂದ 9:05 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ 9:05 ರಿಂದ 10:42 ರವರೆಗೆ ಇರುತ್ತದೆ.

ಇಂದು ವಿಶ್ವ ಸಾಗರ ದಿನವೂ ಹೌದು. ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಓಂ ನಮಃ ಶಿವಾಯ ಮಂತ್ರ ಜಪಿಸುವುದರಿಂದ ಸಕಲ ಅಭೀಷ್ಟಗಳು ಈಡೇರುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

Daily Devotional: ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ? – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಅಧಿಕ ಮಾಸ, ಇದನ್ನು ಪುರುಷೋತ್ತಮ ಮಾಸವೆಂದೂ ಕರೆಯುತ್ತಾರೆ, ಈ ಮಾಸದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಕುರಿತು ಕೆಲವೊಂದು ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ, ಚೈತ್ರ ಮಾಸದಿಂದ ಹಿಡಿದು 12 ಮಾಸಗಳಲ್ಲಿ ಶುಭ-ಅಶುಭಗಳು ಸಂಭವಿಸುತ್ತವೆ. ಆದರೆ, ಮಗುವಿನ ಜನನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ, ಏಕೆಂದರೆ ಜನಿಸಿದ ಮಾಸಕ್ಕೆ ತಕ್ಕಂತೆ ದೇವರ ಅನುಗ್ರಹ ಆ ಮಗುವಿನ ಮೇಲೆ ಇರುತ್ತದೆ.

ಇತ್ತೀಚೆಗೆ ಅನೇಕರು ಅಧಿಕ ಮಾಸದಲ್ಲಿ ಮಕ್ಕಳ ಜನನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಧಿಕ ಮಾಸವು ಒಂದು ವಿಶೇಷ ಮಾಸವಾಗಿದ್ದು, ಕೆಲವರು ಇದನ್ನು ಶೂನ್ಯ ಮಾಸ, ಮಲ ಮಾಸ ಅಥವಾ ಶುಭ ಮಾಸವಲ್ಲ ಎಂದು ತಪ್ಪಾಗಿ ಭಾವಿಸುತ್ತಾರೆ. ಈ ರೀತಿಯ ನಕಾರಾತ್ಮಕ ಭಾವನೆಗಳು ಮಾನಸಿಕವಾಗಿ ಜನರನ್ನು ಕಾಡುತ್ತವೆ ಎಂದು ಗುರೂಜಿ ಹೇಳಿದ್ದಾರೆ.

Source link

ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ – Kannada News

ನೆಪೋಟಿಸಂ ಬಗ್ಗೆ ಬಾಲಿವುಡ್​​ನಲ್ಲಿ ಚರ್ಚೆ ಆದಷ್ಟು ಕನ್ನಡ ಚಿತ್ರರಂಗದಲ್ಲಿ ಆಗೋದಿಲ್ಲ. ಇಲ್ಲಿ ಟ್ಯಾಲೆಂಟ್ ಇದ್ದರೆ ಮಾತ್ರ ಅವಕಾಶಗಳು ಸಿಗುತ್ತವೆ. ಇತ್ತೀಚೆಗೆ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ನೆಪೋಟಿಸಂ ಹೇಳಿಕೆ ಚರ್ಚೆಗೆ ಬಂದಿತ್ತು. ಸುದೀಪ್​​ಗೆ ಈ ಬಗ್ಗೆ ಪ್ರಶ್ನೆ ಕೂಡ ಎದುರಾಯಿತು. ಆಗ ಕಿಚ್ಚ (Kichcha Sudeep) ‘ಶಿವರಾಜ್​​ಕುಮಾರ್​​ಗೆ ಈ ಪ್ರಶ್ನೆ ಏಕೆ ಕೇಳಲ್ಲ’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದರು. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಎದುರಾದ ಪ್ರಶ್ನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಿವಣ್ಣ, ‘ಆ ರೀತಿಯ ಪ್ರಶ್ನೆಯನ್ನು ಕೇಳಿದ್ದೇ ತಪ್ಪು’ ಎಂದು ನೇರವಾಗಿ ಹೇಳಿದ್ದಾರೆ.

‘ಮ್ಯಾಂಗೋ ಪಚ್ಚ’ ವಿಶೇಷ ಶೋ ನೋಡಿ ಬಂದ ಶಿವಣ್ಣ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪತ್ರಕರ್ತರೊಬ್ಬರು ಸುದೀಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ‘ನೆಪೋಟಿಸಂ ಪ್ರಶ್ನೆಯನ್ನು ಶಿವಣ್ಣ ಅವರಿಗೆ ಏಕೆ ಕೇಳಿಲ್ಲ ಎಂದು ಸುದೀಪ್ ಹೇಳಿದ್ದಾರೆ’ ಎಂಬ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದರು. ಈ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಶಿವಣ್ಣ, ‘ನೀವು ಆ ಪ್ರಶ್ನೆಯನ್ನು ಏಕೆ ಕೇಳಿದ್ರಿ? ನಾನು ಆ ವಿಡಿಯೋ ನೋಡಿದ್ದೇನೆ. ಆದರೆ ನೀವು ಆ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ? ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ’ ಎಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು

ಯಾರ ಮಕ್ಕಳು ಬೇಕಾದರೂ ಕನಸು ಕಾಣಬಹುದು:

ಮುಂದುವರಿದು ಮಾತನಾಡಿದ ಶಿವಣ್ಣ, ‘ಚಿತ್ರರಂಗದಲ್ಲಿ ಕೇವಲ ಇವರ ಮಕ್ಕಳು ಅಥವಾ ಅವರ ಮಕ್ಕಳೇ ಬಂದು ಕನಸು ಕಾಣಬೇಕು ಎಂದೇನೂ ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ. ಚಿತ್ರರಂಗಕ್ಕೆ ಯಾರ ಮಕ್ಕಳು ಬೇಕಾದರೂ ಬರಬಹುದು, ನೀವು ಕೂಡ ಬರಬಹುದು. ಎಲ್ಲರಿಗೂ ಇಲ್ಲಿ ಅವಕಾಶವಿದೆ’ ಎಂದು ನೆಪೋಟಿಸಂ ವಾದಕ್ಕೆ ತಕ್ಕ ಉತ್ತರ ನೀಡಿದರು.

ಶಿವಣ್ಣನ ‘ಗ್ರೇಟ್‌ನೆಸ್’ ಕೊಂಡಾಡಿದ ಕಿಚ್ಚ ಸುದೀಪ್:

ಶಿವಣ್ಣ ಅವರು ಪತ್ರಕರ್ತನಿಗೆ ಖಡಕ್ ಆಗಿ ಉತ್ತರಿಸುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ನಟ ಕಿಚ್ಚ ಸುದೀಪ್ ಅವರು ಮುಗುಳ್ನಗುತ್ತಿದ್ದರು. ಶಿವಣ್ಣ ಮಾತು ಮುಗಿಸುತ್ತಿದ್ದಂತೆ ಮೈಕ್ ಕೈಗೆತ್ತಿಕೊಂಡ ಸುದೀಪ್, ‘ಗ್ರೇಟ್‌ನೆಸ್ ಅಂದ್ರೆ ಏನು ಗೊತ್ತಾ? ಈ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದ್ರಲ್ಲ’ ಎಂದು ಸುದೀಪ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಮುಂಗಾರು ಮಳೆ ಚುರುಕು, ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; 2 ದಿನ ರೆಡ್‌ ಅಲರ್ಟ್‌ – Kannada News

ಹುಬ್ಬಳ್ಳಿಯಲ್ಲಿ ಸುರಿದ ಮಳೆImage Credit source: tv9

ಬೆಂಗಳೂರು, ಜೂನ್ 8: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಚುರುಕು ಪಡೆದುಕೊಂಡಿದ್ದು ದಕ್ಷಿಣ ಕನ್ನಡ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಮನೆ, ಆಸ್ಪತ್ರೆ ಹಾಗೂ ಕಚೇರಿಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಈ ಮಧ್ಯೆ, ಕೇಂದ್ರ ಹವಾಮಾನ ಇಲಾಖೆ (IMD) ಇಡೀ ರಾಜ್ಯಕ್ಕೆ ಜೂನ್ 9 (ಮಂಗಳವಾರ) ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಿಗೆ ಮತ್ತು ಜೂನ್ 10 (ಬುಧವಾರ) ರಾಜ್ಯಾದ್ಯಂತ ರೆಡ್ ಅಲರ್ಟ್ (Red Alert) ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಚುರುಕುಗೊಂಡ ಮುಂಗಾರು ಮಳೆ.
  • ರಾಜ್ಯಾದ್ಯಂತ ಮುಂದಿನ ಎರಡು ದಿನ ರೆಡ್ ಅಲರ್ಟ್.
  • ಕರಾವಳಿಯಲ್ಲಿ ಕಟ್ಟೆಚ್ಚರ, ಎನ್‌ಡಿಆರ್‌ಎಫ್ ತಂಡ ನಿಯೋಜನೆ.

ಎಲ್ಲೆಲ್ಲಿ ರೆಡ್ ಅಲರ್ಟ್?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜೂನ್ 9ರ ಮಂಗಳವಾರದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 10ರ ಬುಧವಾರದಂದು ಕರ್ನಾಟಕದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಗಳಲ್ಲಿ ಮಳೆ ಅವಾಂತರಗಳ ಮಹಾಪೂರ

ಬಳ್ಳಾರಿ: ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರೇಣುಕಾನಗರ, ರಾಣಿಪೇಟ್ ಮತ್ತು ಹಳೇ ತಾಲೂಕು ಕಚೇರಿ ರಸ್ತೆಗಳು ಜಲಮಯವಾಗಿದ್ದು, ಪ್ರಸಿದ್ಧ ವಿಮ್ಸ್ ಆಸ್ಪತ್ರೆಯ ಒಳಗೂ ನೀರು ನುಗ್ಗಿದೆ. ಇದರಿಂದಾಗಿ ರೋಗಿಗಳನ್ನು ಮಳೆ ನೀರಿನಲ್ಲೇ ಸಾಗಿಸಬೇಕಾದ ದುಃಸ್ಥಿತಿ ಎದುರಾಯಿತು. ಜೆಸ್ಕಾಂ ಕಚೇರಿಯ ಆವರಣ ಜಲಾವೃತಗೊಂಡು ಟ್ರಾನ್ಸ್‌ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಕೊಠಡಿಗೆ ನೀರು ನುಗ್ಗಿರುವುದು

ಚಿತ್ರದುರ್ಗ, ಬೆಳಗಾವಿ: ಚಿತ್ರದುರ್ಗ ನಗರದಲ್ಲಿ ರಾತ್ರಿ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದಿದ್ದು, ತುರುವನೂರು ರಸ್ತೆಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ವೃದ್ಧರೊಬ್ಬರು ಗಾಯಗೊಂಡಿದ್ದಾರೆ. ಬೆಳಗಾವಿಯ ಖಾನಾಪುರ ತಾಲೂಕಿನ ಪಾರಶ್ವಾಡ ಗ್ರಾಮದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಅದೇ ನೀರಿನಲ್ಲೇ ಟ್ರ್ಯಾಕ್ಟರ್ ಹಾಗೂ ಬೈಕ್‌ಗಳು ಸಂಚಸಿವೆ.

ಬಾಗಲಕೋಟೆ, ಹಾವೇರಿ: ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಚೆನ್ನಗೀರೇಶ್ವರ ದೇವಸ್ಥಾನದ ಅಂಗಳ ಜಲಾವೃತಗೊಂಡು, ಮೆಟ್ಟಿಲುಗಳಿಂದ ಜಲಪಾತದಂತೆ ನೀರು ಹರಿದಿದೆ. ವಲ್ಲಭಬಾಯಿ ವೃತ್ತದ ಬಳಿ ಮನೆಯೊಂದರ ಮೇಲ್ಚಾವಣಿ ಕುಸಿದು ಬಿದ್ದಿದೆ. ಹಾವೇರಿಯ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಕೇವಲ ಎರಡು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.

ರೈತರು ಕಂಗಾಲು, ಕರಾವಳಿಯಲ್ಲಿ ಹೈ ಅಲರ್ಟ್

ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮಾವು, ಬಾಳೆ, ಪಪ್ಪಾಯ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕಳೆದ ಒಂದು ತಿಂಗಳಲ್ಲಿ ಸುಮಾರು 1200 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಆಸ್ಪತ್ರೆ ಎದುರು ರಸ್ತೆಗಳು ಜಲಾವೃತವಾಗಿದ್ದರೆ, ಗೋಕರ್ಣ ಮಾರ್ಗ ಮಧ್ಯೆ ಪ್ರವಾಸಿಗರ ವಾಹನದ ಮೇಲೆಯೇ ಬೃಹತ್ ಮರ ಉರುಳಿ ಬಿದ್ದಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಮನೆ‌ ಮೇಲ್ಚಾವಣಿ: ತಂದೆ, ಮಗನ ಜೀವ ಉಳಿಸಿದ ಸಾಕು ಬೆಕ್ಕು

ಮುಂಗಾರು ಅಬ್ಬರ ಹೆಚ್ಚಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 24X7 ಕಂಟ್ರೋಲ್ ರೂಮ್ ತೆರೆಯಲಾಗಿದೆ. ಪುತ್ತೂರಿನಲ್ಲಿ 30 ಸದಸ್ಯರ ಎನ್‌ಡಿಆರ್‌ಎಫ್ (NDRF) ತಂಡ ಬೀಡುಬಿಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 08 June : ಇಂದು ಈ ರಾಶಿಯವರು ಹಿತಶತ್ರುಗಳ ಪಾಲಾಗುವ ಸಾಧ್ಯತೆ ಇದೆ – Kannada News

ಇಂದು ಈ ರಾಶಿಯವರು ಹಿತಶತ್ರುಗಳ ಪಾಲಾಗುವ ಸಾಧ್ಯತೆ ಇದೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೈಧೃತಿ, ಕರಣ : ಕೌಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:33 – 09:10, ಯಮಗಂಡ ಕಾಲ 10:47 – 12:24, ಗುಳಿಕ ಕಾಲ 14:00 – 16:37

ಮೇಷ ರಾಶಿ :

ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವ ಸಂದರ್ಭ ಪ್ರಾಪ್ತಿ. ನೀವು ಕಾಯವನ್ನು ದಂಡಿಸಲು ಒಪ್ಪಲಾರಿರಿ. ವಿದ್ಯಾರ್ಥಿಗಳು ಯಂತ್ರೋಪಕರಣಗಳನ್ನು ಪಡೆದು ಆನಂದಿಸುವರು. ನಿಮ್ಮ ಸಂಕಷ್ಟಕ್ಕೆ ಇತರರ ಸಹಾಯವನ್ನು ಪಡೆದುಕೊಳ್ಳುವಿರಿ. ಸಮಾಜಮುಖೀ ಕಾರ್ಯಗಳ ಕಡೆ ಗಮನಹರಿಸುವಿರಿ. ಹಿರಿಯರ ಮಾತು ನಿಮ್ಮ ಸ್ವಭಾವವನ್ನು ಪರಿವರ್ತಿಸಬಹುದು. ರಾಜಕಾರಣದ ಸ್ಪರ್ಶದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ಸಿಗಬಹುದು. ಹಳೆಯ ಯಂತ್ರಗಳು ದುರಸ್ತಿಗೆ ಬರುವ ಸಾಧ್ಯತೆ ಇದೆ.

ವೃಷಭ ರಾಶಿ :

ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ, ಕಾರ್ಯ ಚಟುವಟಿಕೆಗಳು ಚುರುಕು. ನಿಮ್ಮ ಕೆಲಸಗಳಿಗೆ ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಆಸ್ತಿಯ ಹಂಚಿಕೆಯಿಂದ ನಿಮಗೆ ಸಂತೋಷವಾಗಲಿದೆ. ಸಾಹಸ ಮಾಡಲು ಹೋಗಿ ಮುಖಭಂಗವಾದೀತು. ಆಪ್ತರಿಂದ ಏನಾನ್ನಾದರೂ ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು. ಕೆಲವು ರೀತಿಯ ಹಾನಿಯ ಬಗ್ಗೆಯೂ ಚಿಂತಿಸುವುದು ಅಗತ್ಯ.

ಮಿಥುನ ರಾಶಿ :

ಮನೆಯ ಕಾರ್ಯಗಳಲ್ಲಿ ಮಗ್ನರಾಗಿ ಆಯಾಸವನ್ನು ತರಿಸಿಕೊಳ್ಳುವಿರಿ. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಆದಾಯ, ಪ್ರಭಾವಗಳು ಹೆಚ್ಚಾಗಲಿದೆ‌. ಯಾರಾದರೂ ತಟಸ್ಥರಾದರೆ ಶಾಂತವಾಗಲಿದೆ. ತಲೆ ಮುಂತಾದ ಕೆಲವು ಭಾಗಗಳಲ್ಲಿ ನೋವುಗಳು ಕಾಣಿಸಬಹುದು. ಬೆಂಗಾವಲು ಪಡೆಯನ್ನು ಇಟ್ಟುಕೊಂಡು ಓಡಾಡಿ. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿಕೊಳ್ಳಿ. ಇನ್ನೊಬ್ಬರು ಹೇಳುವ ತನಕ ಕಾಯುವುದು ಬೇಡ‌.

ಕರ್ಕಾಟಕ ರಾಶಿ :

ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮಲ್ಲಿಗೆ ಬರುವರು. ಕಾರ್ಯದ ಒತ್ತಡದ ನಡುವೆಯೂ ಕುಟುಂಬದಲ್ಲಿನ ಆಗು ಹೋಗುಗಳತ್ತ ಗಮನಹರಿಸುವಿರಿ. ಹೂಡಿಕೆಯ ವ್ಯವಹಾರಗಳಲ್ಲಿ ಏಳಿಗೆಯು ಅಷ್ಟಾಗಿ ಇರುವುದಿಲ್ಲ. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.

ಸಿಂಹ ರಾಶಿ :

ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಲಾಗದು. ಇದೆ ಎಂದ ಮಾತ್ರಕ್ಕೆ ಏನನ್ನೋ ಮಾಡುವುದು ಔಚಿತ್ಯವಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡುವುದು. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ.

ಕನ್ಯಾ ರಾಶಿ :

ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ, ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ನಿಮ್ಮ ಯೋಜನೆಗೆ ನಕಾರಾತ್ಮಕತೆ ಬರಬಹುದು. ನಿಮ್ಮ ಪ್ರಯಾಣವು ಸರಿಯಾದ ಯೋಜನೆಯಿಂದ ಕೂಡಿರಲಿ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ತಾಳ್ಮೆಯೇ ಅತ್ಯವಶ್ಯ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆದು, ಅಧ್ಯಯನವನ್ನು ನಿರ್ಲಕ್ಷಿಸಬಹುದು.

ತುಲಾ ರಾಶಿ :

ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ನಿರೀಕ್ಷಿಸಲಾರಿರಿ. ಹಣವು ದೀರ್ಘಕಾಲದವರೆಗೆ ಬಾರದೇ ಇರುವುದರಿಂದ ಇದನ್ನು ಶಾಂತವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಲು ಹೋಗಿ ಪರಿಸ್ಥಿತಿಯಲ್ಲಿ ನೀವು ಸಿಲುಕಿಕೊಳ್ಳುವಿರಿ. ಕೃತಕವಾದ ಸಂತೋಷದಲ್ಲಿ ಮೈಮರೆಯುವಿರಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.‌

ವೃಶ್ಚಿಕ ರಾಶಿ :

ನಿಮ್ಮ ಸಂಗಾತಿಯನ್ನು ತಪ್ಪಾಗಿ ಗ್ರಹಿಸುವಿರಿ. ಇಷ್ಟಾರ್ಥಗಳು ಸಿದ್ಧಿಸುವ ಬಗ್ಗೆ ಅಸಮಾಧಾನ ಕಾಣಿಸುವುದು. ಇದೇ ನಿಮ್ಮ ನಡುವಿನ ಅಂತರಕ್ಕೆ ಕಾರಣವಾಗಲಿದೆ. ನಿಮ್ಮ ಸಂಬಂಧವನ್ನು ಸುಧಾರಿಸಲು ಬಯಸಿದರೆ ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ. ನೀವು ಅಮೂಲ್ಯ ವಸ್ತುವನ್ನು ಖರೀದಿಸಲು ಆಲೋಚಿಸಿದರೆ ಒಳ್ಳೆಯದೇ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ.

ಧನು ರಾಶಿ :

ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಂಡಂತಾಗುತ್ತದೆ. ಅತಿಯಾದ ಸಂತೋಷದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲವಾದರೆ ನೀವು ನಷ್ಟವನ್ನು ಅನುಭವಿಸುವಿರಿ. ಇಲ್ಲದವರನ್ನು ಇಂದು ಬಹುವಾಗಿ ನೆನೆಸುವಿರಿ. ಮನೆಯ ವಾತಾವರಣವು ಪ್ರಿಯವಾಗುವುದು. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ.

ಮಕರ ರಾಶಿ :

ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯವನ್ನು ಸಾಧಿಸವಹುದು. ಅದಕ್ಕೆ ಅವಕಾಶವನ್ನು ಕೊಡಬೇಡಿ. ದ್ರವವ್ಯಾಪಾರದಿಂದ ಲಾಭದ ಕಡೆಗೆ ಪಯಣ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದು ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ಇಂದಿನ ನಿಮ್ಮ ಪ್ರಯಾಣದಿಂದ ಕಷ್ಟವಾಗಬಹುದು.

ಕುಂಭ ರಾಶಿ :

ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಅದು ನಿಮ್ಮ ಆತಂಕವನ್ನು ಹೆಚ್ಚಿಸುತ್ತದೆ. ಸಾಕುಗುವಷ್ಟನ್ನು ಮಾತ್ರ ಗಳಿಸಿ. ಅತಿಯಾದ ಆಸೆ ಬೇಡ. ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆ. ಆದರೆ ಅದನ್ನು ನಿಮಗೆ ಪರಿಚಯಿಸುವ ಕೆಲಸವಾಗಬೇಕು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲವಾಗಿರುವುದು. ಇಂದು ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ.

ಮೀನ ರಾಶಿ :

ವಿದ್ಯಾರ್ಥಿಯಾಗಿದ್ದರೆ ಶಿಕ್ಷಣದಲ್ಲಿನ ಅಡೆತಡೆಗಳು ಸರಿಯಾಗಬಹುದು. ಇರುವುದನ್ನು ಇರುವಂತೆ ಹೇಳಲಾಗದು. ದಾಂಪತ್ಯಜೀವನದಲ್ಲಿ ನೀವು ಪ್ರೀತಿಯನ್ನು ಅನುಭವಿಸುವಿರಿ. ಕೆಲವು ದಿನಗಳ ಕಾಲ ಮನೆಯಿಂದ ಹೊರಗೆ ಸುತ್ತಾಡಲು ಯೋಜಿಸಬಹುದು. ಉದ್ಯೋಗಿಗಳಿಗೆ ಇಂದು ಶುಭ ಸೂಚನೆಗಳು ಸಿಗಲಿದೆ. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಹೋಗಲು ಅನ್ಯಾನ್ಯ ಕಾರಣಗಳಿವೆ.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

ನರ್ಸ್​​ಗಳ ಬಗ್ಗೆ, ಅವರ ಸಮವಸ್ತ್ರದ ಬಗ್ಗೆ ನಟಿ ಕಂಗನಾ ಮಾತು – Kannada News

ಬಾಲಿವುಡ್ (Bollywood) ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರು ತಮ್ಮ ನಟನೆಯ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಲೂ ಪದೇ ಪದೇ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ನಟಿ ಕಂಗನಾ ಹೊಸದೊಂದು ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಬಿಡುಗಡೆ ವೇಳೆ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿದೆ. ಕಂಗನಾ ರನೌತ್ ಅವರು ಶುಶ್ರೂಕಿ (ನರ್ಸ್)ಗಳ ಕುರಿತಾದ ‘ಭಾರತ ಭಾಗ್ಯ ವಿದಾತ’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾದ ಪ್ರಚಾರದ ವೇಳೆ ಅವರು ನರ್ಸ್​​ಗಳ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ಭಾರತದಲ್ಲಿ ಶುಶ್ರೂಶಕಿಯ ವೃತ್ತಿಯನ್ನು ತೀವ್ರವಾಗಿ ಸೆಕ್ಷುಲೈಸ್ಡ್ ಮಾಡಲಾಗಿದೆ. ನರ್ಸ್​​ಗಳಿಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂದಿದ್ದಾರೆ. ‘ನರ್ಸಿಂಗ್ ಎನ್ನುವುದು ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಾಗಿ ಲೈಂಗಿಕೀಕರಿಸಲ್ಪಟ್ಟ ವೃತ್ತಿಯಾಗಿದೆ. ಚಲನಚಿತ್ರಗಳು, ಹಾಸ್ಯ ಪ್ರದರ್ಶನಗಳು (comedy shows) ಮತ್ತು ಪಾಪ್ ಸಂಸ್ಕೃತಿಯಲ್ಲಿ ಅವರನ್ನು ಬಿಂಬಿಸುವ ವಿಧಾನವೇ ಇದಕ್ಕೆ ಪ್ರಮುಖ ಕಾರಣ. ಇದು ಅವರಿಗೆ ಸಿಗಬೇಕಾದ ಗೌರವವನ್ನು ಕಸಿದುಕೊಳ್ಳುತ್ತದೆ’ ಎಂದು ಕಂಗನಾ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ನಟಿ ಕಂಗನಾ, ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿರುವ ಅವರ ಯೂನಿಫಾರ್ಮ್ ಭಾರತೀಯ ಪರಿಸರಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದಿದ್ದಾರೆ. ‘ಅವರ ಬ್ರಿಟಿಷ್ ಕಾಲದ ಯೂನಿಫಾರ್ಮ್ ಅವರಿಗೆ ಒಂದು ವಿದೇಶಿ ಲುಕ್ ನೀಡುತ್ತದೆ, ಇದು ನಮ್ಮ ಗ್ರಾಮೀಣ ಅಥವಾ ಸಾಂಪ್ರದಾಯಿಕ ಭಾರತೀಯರಿಗೆ ಅವರೊಂದಿಗೆ ಸುಲಭವಾಗಿ ಕನೆಕ್ಟ್ ಆಗಲು ಬಿಡುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಈ ಮಹಿಳೆಯರಿಗೆ ಸಮಾಜದಲ್ಲಿ ಹೆಚ್ಚಿನ ಘನತೆ ಮತ್ತು ಗೌರವ ಸಿಗಬೇಕು ಎಂದು ಕಂಗನಾ ಒತ್ತಿ ಹೇಳಿದ್ದಾರೆ. ನರ್ಸ್ ಜೀವರಕ್ಷಕಿಯಾಗಿದ್ದು, ಅವರನ್ನು ಕೇವಲ ಒಂದು ಗ್ಲಾಮರ್ ಅಥವಾ ಲೈಂಗಿಕ ವಸ್ತುವಾಗಿ ನೋಡುವುದನ್ನು ನಿಲ್ಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಕಂಗನಾ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಕೆಲವರು ಅವರ ಮಾತನ್ನು ಬೆಂಬಲಿಸಿ, ಸಿನಿಮಾಗಳಲ್ಲಿ ನರ್ಸ್ ಪಾತ್ರಗಳನ್ನು ತಪ್ಪಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಯೂನಿಫಾರ್ಮ್ ಮತ್ತು ವಿದೇಶಿ ಲುಕ್ ಬಗ್ಗೆ ಅವರು ಮಾಡಿರುವ ಕಾಮೆಂಟ್‌ಗಳನ್ನು ಟೀಕಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಖುದ್ದು ಕರೆ ಮಾಡಿ ನಟಿ ಮಮತಾ ಬಳಿ ಕ್ಷಮೆ ಕೇಳಿದ್ದ ರಜನೀಕಾಂತ್ – Kannada News

ನಟ ರಜನೀಕಾಂತ್ (Rajinikanth), ಭಾರತದ ಟಾಪ್ ಸೂಪರ್ ಸ್ಟಾರ್. ಅವರೊಟ್ಟಿಗೆ ನಟಿಸಲು ಖ್ಯಾತ ನಟ-ನಟಿಯರು ಈಗಲೂ ಸಾಲು ಗಟ್ಟಿ ನಿಂತಿದ್ದಾರೆ. ರಜನೀಕಾಂತ್, ತಮಿಳುನಾಡಿನಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳನ್ನು ಎದುರಿಸಿ ಬೆಳೆದು ಬಂದ ವ್ಯಕ್ತಿ. ಯಾರಿಗೂ ತಲೆಬಾಗಿ ನಡೆದವರೇ ಅಲ್ಲ. ಆದರೆ ಇಂಥಹಾ ರಜನೀಕಾಂತ್ ಅವರು ನಟಿಯೊಬ್ಬರಿಗೆ ಖುದ್ದು ಕರೆ ಮಾಡಿ ಕ್ಷಮೆ ಯಾಚನೆ ಮಾಡಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಮಮತಾ ಮೋಹನ್​​ದಾಸ್, ಈ ವಿಷಯವನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಮಮತಾ ಮೋಹನ್​​ದಾಸ್ ಒಂದು ಸಮಯದಲ್ಲಿ ಬಲು ಬೇಡಿಕೆ ಇದ್ದ ಜನಪ್ರಿಯ ನಟಿ. ಕನ್ನಡದಲ್ಲಿ ಸುದೀಪ್ ಜೊತೆಗೆ ‘ಗೂಳಿ’ ಸಿನಿಮಾನಲ್ಲಿ ಸಹ ನಟಿಸಿರುವ ಮಮತಾ, ತೆಲುಗು ಹಾಗೂ ತಮಿಳಿನ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಮತಾ ಅವರು ರಜನೀಕಾಂತ್ ನಟಿಸಿರುವ ‘ಕುಸೇಲನ್’ ಸಿನಿಮಾನಲ್ಲಿ ನಟಿಸಿದ್ದರು.

ಸಿನಿಮಾನಲ್ಲಿ ಅವರದ್ದು ಸಿನಿಮಾ ನಿರ್ದೇಶಕಿಯ ಪಾತ್ರ. ಸಿನಿಮಾನಲ್ಲಿ ಮಮತಾ ನಟಿಸಿದ್ದರಾದರೂ ಸಿನಿಮಾ ಬಿಡುಗಡೆ ಆದಮೇಲೆ ಅವರ ಒಂದೇ ಒಂದು ಶಾಟ್ ಸಹ ಸಿನಿಮಾನಲ್ಲಿ ಇರಲಿಲ್ಲ. ಕೇವಲ ಅವರ ಒಂದು ಬ್ಯಾಕ್ ಶಾಟ್ ಮಾತ್ರವನ್ನೇ ಉಳಿಸಿಕೊಳ್ಳಲಾಗಿತ್ತು. ಇದಕ್ಕೆ ಮುಖ್ಯ ಕಾರಣ ನಯನತಾರಾ. ನಟಿ ನಯನತಾರಾ ಆ ಸಿನಿಮಾದ ನಾಯಕಿ, ತಾನು ಬೇರೆ ನಾಯಕಿಯ ಜೊತೆ ನಟಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಕ್ಕೆ. ಮಮತಾ ಅವರು ಡ್ಯಾನ್ಸ್ ಮಾಡಬೇಕಿದ್ದ ಹಾಡನ್ನು ರದ್ದು ಮಾಡಿದ್ದಲ್ಲದೆ, ಅವರ ದೃಶ್ಯಗಳನ್ನು ಸಹ ಕತ್ತರಿಸಲಾಯ್ತು.

ಇದನ್ನೂ ಓದಿ:ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ

ಆದರೆ ಸಿನಿಮಾ ಬಿಡುಗಡೆ ಆಗಿ ಕೆಲ ದಿನಗಳ ಬಳಿಕ ಮಮತಾಗೆ ರಜನೀಕಾಂತ್ ಕಚೇರಿ ಇಂದ ಕರೆ ಬಂತಂತೆ. ಖುದ್ದು ರಜನೀಕಾಂತ್ ಅವರೇ ಮಾತನಾಡಿ, ನಾಲ್ಕು ದಿನಗಳ ಕಾಲ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆ ಇರಲಿ. ನನ್ನ ಕೈಯಲ್ಲಿ ಏನೂ ಇರಲಿಲ್ಲ. ನಾನು ಕ್ಷಮೆ ಕೇಳುವುದಷ್ಟೆ ನನ್ನ ನಿಯಂತ್ರಣದಲ್ಲಿ ಇರುವುದು ಎಂದರಂತೆ. ಈ ವಿಷಯವನ್ನು ನಟಿ ಮಮತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಕುಸೇಲನ್’ ಸಿನಿಮಾನಲ್ಲಿ ರಜನೀಕಾಂತ್ ಸೂಪರ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ನಯನತಾರಾ ಖುದ್ದು ನಾಯಕಿ ನಯನತಾರಾ ಪಾತ್ರದಲ್ಲಿ ನಟಿಸಿದ್ದಾರೆ. ಪಶುಪತಿ, ರಜನೀಕಾಂತ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಬಳಿಕ ತೆಲುಗಿನಲ್ಲೂ ರೀಮೇಕ್ ಆಯ್ತು. ಹಿಂದಿಯಲ್ಲಿ ಶಾರುಖ್ ಖಾನ್ ಮತ್ತು ಇರ್ಫಾನ್ ಖಾನ್ ಅವರು ಈ ಸಿನಿಮಾನಲ್ಲಿ ನಟಿಸಿದರು. ಅಲ್ಲಿ ‘ಬಿಲ್ಲು ಬಾರ್ಬರ್’ ಎಂದು ಸಿನಿಮಾದ ಹೆಸರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:51 pm, Sun, 7 June 26

Source link

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್​​ನಲ್ಲಿ ಮುಂದುವರಿದ ಭಾರತದ ಪ್ರಾಬಲ್ಯ: ಚಿನ್ನದ ಪದಕ ಗೆದ್ದ ಹೀನಾ ರಾಜಗೋರ್! – Kannada News

ಅಹಮದಾಬಾದ್, (ಜೂನ್ 7): ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ (World Yoga Championship) ಭಾರತ (India) ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮಾಜಿ ಮಿಸ್ ಗುಜರಾತ್ ಸೂಪರ್ ಮಾಡೆಲ್ ವಿಜೇತೆ ಹೀನಾ ರಾಜಗೋರ್ (Heena Rajgor)  ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದಿದ್ದಾರೆ. ಇಕೆಎ (EKA) ಅರೆನಾದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತವು 40 ಚಿನ್ನ, 8 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 50 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಮುಖ್ಯಾಂಶಗಳು

  • ಅಹಮದಾಬಾದ್ ನ ಏಕಾ ಎರೆನಾದಲ್ಲಿ ನಡೆಯುತ್ತಿರುವ ವಿಶ್ವ ಯೋಗಾಸನ ಚಾಂಪಿಯನ್ ಶಿಪ್
  • ಮಾಜಿ ಮಿಸ್ ಗುಜರಾತ್ ಸೂಪರ್ ಮಾಡೆಲ್ ವಿಜೇತೆ ಹೀನಾ ರಾಜಗೋರ್ ಭಾರತಕ್ಕೆ ಚಿನ್ನದ ಪದಕ
  • 40 ಚಿನ್ನ, 8 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಈವರೆಗೆ ಒಟ್ಟು 50 ಪದಕ ಬಾಚಿರುವ ಭಾರತ

ಜಪಾನ್ ಮೂರು ಚಿನ್ನದ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಎರಡು ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದಿರುವ ಸಿಂಗಾಪುರ ಮೂರನೇ ಸ್ಥಾನದಲ್ಲಿದೆ.

ಗುಜರಾತ್‌ನ ಭುಜ್ ಮೂಲದ ಹೀನಾ ರಾಜಗೋರ್, ಪ್ರಸ್ತುತ ಯೋಗದಲ್ಲಿ ಪಿಎಚ್‌ಡಿ (PhD) ಅಧ್ಯಯನ ಮಾಡುತ್ತಿದ್ದು, ಹಿರಿಯರ ‘ಬಿ’ ಮಹಿಳಾ ವಿಭಾಗದ ಫಾರ್ವರ್ಡ್ ಬೆಂಡ್ ಸ್ಪರ್ಧೆಯಲ್ಲಿ 43.50 ಅಂಕಗಳನ್ನು ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಓಮನ್‌ನ ಪ್ರೀತಿ ಜೈಮಾನಿ ಬೆಳ್ಳಿ ಪದಕ ಗೆದ್ದರೆ, ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಮತ್ತು ಜೋರ್ಡನ್‌ನ ಮಾಯಾ ಅಲ್ ಅಲೋಸ್ಥಾತ್ ಕಂಚಿನ ಪದಕಗಳನ್ನು ಹಂಚಿಕೊಂಡರು.

“ತವರಿನಲ್ಲಿ ಚಿನ್ನದ ಪದಕ ಗೆಲ್ಲುವುದು ವಿಶೇಷ ಅನುಭವ. ಕೋವಿಡ್ ನಂತರ ಸ್ಪರ್ಧಾತ್ಮಕ ಯೋಗಾಸನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆ. ಬಳಿಕ ಮಾನಸಿಕ ಏಕಾಗ್ರತೆಯ ಮೇಲೆ ಗಮನಹರಿಸಿದ್ದು, ಅದರ ಫಲ ಈಗ ಕಾಣಿಸುತ್ತಿದೆ” ಎಂದು ಹೀನಾ ಸಂತಸ ವ್ಯಕ್ತಪಡಿಸಿದರು.

ಭಾರತೀಯ ಅಥ್ಲೀಟ್‌ಗಳು ವಿವಿಧ ವಿಭಾಗಗಳಲ್ಲಿ ಪದಕಗಳ ಬೇಟೆ ಮುಂದುವರಿಸಿದ್ದರೆ, ಜಪಾನ್‌ನ ಹಿಸಾಶಿ ವತಾನಬೆ ಮತ್ತು ಟೊಮೊಕಾ ಶಿಮಿಜು ತಮ್ಮ ವಿಭಾಗಗಳಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ರಷ್ಯಾದ ಸ್ವೆಟ್ಲಾನಾ ಲುಕಾಶೋವಾ ಸೀನಿಯರ್ ‘ಬಿ’ ಮಹಿಳಾ ಸೂಪೈನ್ ಇಂಡಿವಿಜುವಲ್ ವಿಭಾಗದಲ್ಲಿ ಚಿನ್ನ ಗೆದ್ದರೆ, ಉಜ್ಬೇಕಿಸ್ತಾನದ ಕಾಮೋಲಾತ್ದಿನ್ ರಖ್ಮಾನೊವ್ ಲೆಗ್ ಬ್ಯಾಲೆನ್ಸ್ ಇಂಡಿವಿಜುವಲ್ ಸೀನಿಯರ್ ‘ಸಿ’ ಪುರುಷ ವಿಭಾಗದಲ್ಲಿ ಜಯ ಸಾಧಿಸಿ, ತಮ್ಮ ದೇಶಕ್ಕೆ ಈ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ; ನಾಯಕತ್ವ ಸಿಕ್ಕ ಬಳಿಕ ಶ್ರೇಯಸ್ ಮೊದಲ ಮಾತು – Kannada News

ಭಾರತದ ಟಿ20 ತಂಡಕ್ಕೆ ಹೊಸ ನಾಯಕನ ನೇಮಕವಾಗಿದೆ. ಟೀಂ ಇಂಡಿಯಾವನ್ನು ಟಿ20 ಚಾಂಪಿಯನ್‌ ಆಗಿ ಮಾಡಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಚುಟುಕು ಮಾದರಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿಗೆ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ನಾಯಕನಾಗಿ ನೇಮಿಸಿದೆ. ಈ ಮಾದರಿಯಲ್ಲಿ ಅಪಾರ ಅನುಭವವನ್ನು ಹೊಂದಿರುವ ಶ್ರೇಯಸ್ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು ನಾಯಕತ್ವ ಸಿಕ್ಕ ಬಳಿಕ ಇದೇ ಮೊದಲನೇ ಬಾರಿಗೆ ಮಾತನಾಡಿರುವ ಶ್ರೇಯಸ್ ಅಯ್ಯರ್, ತಮ್ಮ ಮುಂದಿನ ಗುರಿ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ

ಪ್ರಸ್ತುತ ಮುಂಬೈ ಟಿ20 ಲೀಗ್​ನಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್, ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಮನದಾಳ ತೆರೆದಿಟ್ಟಿದ್ದು, ‘ನಾಯಕನಾದ ಕೂಡಲೇ ನಾನು ನನ್ನ ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ. ನಾನು ಮೊದಲಿನಂತೆಯೇ ಇರುತ್ತೇನೆ. ನಾನು ಯಾರಂತೆಯೂ ಇರಲು ಅಥವಾ ಯಾರ ನೆರಳಿನಲ್ಲಿ ಬದುಕಲು ಪ್ರಯತ್ನಿಸುವುದಿಲ್ಲ. ಸ್ಪಷ್ಟವಾಗಿ, ನಾನು ಬಾಲ್ಯದಿಂದಲೂ ಸವಾಲುಗಳನ್ನು ಎದುರಿಸುವುದನ್ನು ಆನಂದಿಸಿದ್ದೇನೆ. ವಿಶೇಷವಾಗಿ ಮುಂಬೈನಿಂದ ಬಂದಿರುವುದರಿಂದ, ಅಲ್ಲಿ ಕ್ರಿಕೆಟ್​ಗೆ ವಿಶೇಷ ಮನ್ನಣೆಯಿದ್ದು, ಸ್ಪರ್ಧೆಯು ತುಂಬಾ ತೀವ್ರವಾಗಿರುತ್ತದೆ. ಪ್ರತಿಯೊಂದು ಮಗುವೂ ಮುಂಬೈ ಪರ ಆಡಲು ಬಯಸುತ್ತದೆ ಎಂದಿದ್ದಾರೆ.

ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೀರಿ

ಮುಂದವರೆದು ಮಾತನಾಡಿದ ಅಯ್ಯರ್, ‘ನಾನು ಯಾರ ವಿರುದ್ಧ ಆಡಿದ್ದರೂ, ನನ್ನ ಮನಸ್ಥಿತಿ ಯಾವಾಗಲೂ ಗೆಲ್ಲುವುದೇ ಆಗಿದೆ, ಅದು ಕಲಿಯುವುದಾಗಲಿ ಅಥವಾ ಗೆಲ್ಲುವುದಾಗಲಿ. ಆದ್ದರಿಂದ ಕಲಿಯುವುದು ಅಥವಾ ಗೆಲ್ಲುವುದು ಗೌಣ, ಆದರೆ ನೀವು ಆಟವನ್ನು ಹೆಚ್ಚು ಆನಂದಿಸುತ್ತೀರಿ. ನೀವು ಹೆಚ್ಚು ಸ್ಪರ್ಧಾತ್ಮಕವಾಗಿ ಬೆಳೆದಷ್ಟೂ, ವಿಶೇಷವಾಗಿ ಕ್ರಿಕೆಟ್ ಅಥವಾ ಯಾವುದೇ ಇತರ ಕ್ರೀಡೆಯನ್ನು ಆಡುವಾಗ, ನೀವು ಸಾಕಷ್ಟು ಕಲಿಯುತ್ತೀರಿ. ಅದು ನಿಮ್ಮನ್ನು ಮುಂದಿನ ಹಂತಕ್ಕೆ ತಳ್ಳುತ್ತದೆ. ಇದರಿಂದ ನೀವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೀರಿ. ಈಗ ನನಗೆ ಆ ಜವಾಬ್ದಾರಿ ಸಿಕ್ಕಿರುವುದರಿಂದ, ಅದು ನನಗೊಂದು ಒಂದು ದೊಡ್ಡ ಸವಾಲು ಎಂದಿದ್ದಾರೆ.

ಶ್ರೇಯಸ್ ಅಯ್ಯರ್​ಗೆ ಟಿ20 ತಂಡದ ನಾಯಕತ್ವ; ಯಾರಿಗೆ ಸಿಗಲಿದೆ ಉಪನಾಯಕತ್ವ?

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸ ಮಾಡಲಿದೆ. ಜೂನ್ 26 ರಿಂದ ಐರ್ಲೆಂಡ್ ವಿರುದ್ಧದ ಟಿ20 ಸರಣಿ ನಡೆದರೆ, ಆ ಬಳಿಕ ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಈ ಎರಡು ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಯಾವ ರೀತಿಯಾಗಿ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಎರಡು ಸರಣಿಗಳ ಬಳಿಕ ಟೀಂ ಇಂಡಿಯಾ ಏಷ್ಯನ್ ಗೇಮ್ಸ್​ನಲ್ಲಿ ಪಾಲ್ಗೊಳ್ಳಲಿದೆ. ಅಲ್ಲೂ ಕೂಡ ಶ್ರೇಯಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version