ENG vs NZ: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತ ನ್ಯೂಜಿಲೆಂಡ್ – Kannada News

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಡೆದ ಈ ಪಂದ್ಯ 4ನೇ ದಿನದ ಮೊದಲ ಸೆಷನ್‌ನಲ್ಲಿಯೇ ಅಂತ್ಯವಾಯಿತು. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್,ನ್ಯೂಜಿಲೆಂಡ್ ತಂಡವನ್ನು 115 ರನ್​ಗಳಿಂದ ಮಣಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಗೆಲುವಿಗೆ 254 ರನ್​ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ಕೇವಲ 40.3 ಓವರ್ ಬ್ಯಾಟಿಂಗ್‌ ಮಾಡಿ 138 ರನ್ ಕಲೆಹಾಕುವುದರೊಳಗೆ ತನ್ನಲ್ಲೇ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.

ಇಂಗ್ಲೆಂಡ್​ಗೆ ಏಕಪಕ್ಷೀಯ ಗೆಲುವು

ಈ ಇಡೀ ಪಂದ್ಯದಲ್ಲಿ ಬೌಲರ್​ಗಳ ಪಾರುಪತ್ಯವೇ ಹೆಚ್ಚಿತ್ತು. ಲಾರ್ಡ್ಸ್‌ನ ಬೌಲಿಂಗ್‌ ಸಹಾಯಕವಾದ ಈ ಪಿಚ್‌ನಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ವೇಗದ ಬೌಲರ್‌ಗಳು ಪಂದ್ಯದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಇತ್ತ ತವರಿನ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್‌ನ ಬೌಲರ್‌ಗಳು ನ್ಯೂಜಿಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ನ ಇನ್ನಿಲ್ಲದಂತೆ ಕಾಡಿದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 140 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಇತ್ತ ಇಂಗ್ಲೆಂಡ್‌ ಬೌಲರ್‌ಗಳ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಕೇವಲ 113 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.

ಆದಾಗ್ಯೂ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 226 ರನ್ ಕಲೆಹಾಕಿತು. ತಂಡದ ಪರ ಎಮಿಲಿಯೊ ಗೇ ನಿರ್ಣಾಯಕ 57 ರನ್​ಗಳ ಇನ್ನಿಂಗ್ಸ್ ಅಡಿದರೆ, ಜೇಮೀ ಸ್ಮಿತ್ ಕೂಡ 39 ರನ್ ಬಾರಿಸಿದರು. ಕೊನೆಯಲ್ಲಿ ಓಲ್ಲಿ ರಾಬಿನ್ಸನ್ 29 ರನ್ ಬಾರಿಸಿ ತಂಡ ಈ ಸ್ಕೋರ್ ತಲುಪಲು ಸಹಾಯ ಮಾಡಿದರು. ಅಂತಿಮವಾಗಿ 253 ರನ್‌ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ಕೇವಲ 138 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು 115 ರನ್‌ಗಳಿಂದ ಸೋತಿತು.

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ

WTC ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ

ಈ ಪಂದ್ಯಕ್ಕೂ ಮುನ್ನ, ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‘ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಈ ಹೀನಾಯ ಸೋಲಿನ ನಂತರ, ಕಿವೀಸ್ ಪಾಯಿಂಟ್‌ ಪಟ್ಟಿಯಲ್ಲಿ ಕುಸಿತ ಅನುಭವಿಸಿದ್ದು, ನೇರವಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಮತ್ತು ಶ್ರೀಲಂಕಾ ಮೂರನೇ ಸ್ಥಾನಕ್ಕೆ ಏರಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಇಂಗ್ಲೆಂಡ್ ಏಳನೇ ಸ್ಥಾನದಲ್ಲೇ ಉಳಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲ್ಲಿಯಲ್ಲಿ ಜೂನ್ 8ರಂದು ಜನಬಂಧನ್ ಸಭೆ; 23 ವಿಪಕ್ಷಗಳು ಭಾಗಿ; ಡಿಎಂಕೆ ಔಟ್, ಟಿವಿಕೆ ಇನ್ – Kannada News

ಕಾಂಗ್ರೆಸ್ ಬಾವುಟದ ಸಾಂದರ್ಭಿಕ ಚಿತ್ರImage Credit source: PTI

ನವದೆಹಲಿ, ಜೂನ್ 7: ಇಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಾಳೆ ಸೋಮವಾರ (ಜೂನ್ 8) ಮಧ್ಯಾಹ್ನ 12 ಗಂಟೆಗೆ ‘ಇಂಡಿಯಾ’ (I.N.D.I.A. bloc) ಮೈತ್ರಿಕೂಟದ ಪ್ರಮುಖ ಸಭೆ ಆಯೋಜಿಸಲಾಗಿದೆ. ಇದನ್ನು ‘ಜನಬಂಧನ್’ (Janbandhan) ಸಭೆ ಎಂದು ಹೆಸರಿಸಲಾಗಿದೆ. ಈ ಬೃಹತ್ ಸಭೆಯಲ್ಲಿ ಭಾಗವಹಿಸುವುದಾಗಿ ಮೈತ್ರಿಕೂಟದ ಒಟ್ಟು 23 ರಾಜಕೀಯ ಪಕ್ಷಗಳು ಅಧಿಕೃತವಾಗಿ ಖಚಿತಪಡಿಸಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. 2023ರ ಡಿಸೆಂಬರ್ ನಂತರ ನಡೆಯುತ್ತಿರುವ ಈ ಮೈತ್ರಿಕೂಟದ ಮೊದಲ ಪ್ರಮುಖ ಸಭೆಯಾಗಿದ್ದು, ಮೈತ್ರಿಕೂಟದ ಒಳಗಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಈ ಸಭೆ ನಡೆಯುತ್ತಿದೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ವೈವಿಧ್ಯತೆಯ ನಡುವೆಯೂ ಇಂಡಿಯಾ ಜನಬಂಧನ್ ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಸಂಸದ ಡೆರೆಕ್ ಒಬ್ರಿಯನ್ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಸ್ಪಷ್ಟ ಉದ್ದೇಶ ಮತ್ತು ಸೌಹಾರ್ದಯುತ ಮನೋಭಾವದೊಂದಿಗೆ ನಾವು ಈ ಸಭೆಯನ್ನು ಎದುರು ನೋಡುತ್ತಿದ್ದೇವೆ. ಇಂಡಿಯಾ ಒಕ್ಕೂಟ ಒಂದಾಗಿದೆ,” ಎಂದು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಈಗಾಗಲೇ ದೆಹಲಿಗೆ ತಲುಪಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ರಾತ್ರೋರಾತ್ರಿ ಬುಲ್ಡೋಜರ್ ದಾಳಿಗೆ ಬಿದ್ದ 100 ಮನೆಗಳು; ಅಧಿಕಾರಿಗಳಿಗೂ ಗೊತ್ತಿಲ್ಲ; ಭೂಮಾಫಿಯಾ ಕರಾಮತ್ತಾ?

ಸಭೆಯ ಪ್ರಮುಖ ಅಜೆಂಡಾ

ಸಭೆಯ ಅಧಿಕೃತ ಕಾರ್ಯಸೂಚಿ ಪ್ರಕಟವಾಗಿಲ್ಲವಾದರೂ, ಮುಂಬರುವ 2029 ರ ಲೋಕಸಭಾ ಚುನಾವಣೆಗೆ ಜಂಟಿ ಕಾರ್ಯತಂತ್ರ ರೂಪಿಸುವುದು ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಮೋದಿ ಸರ್ಕಾರವನ್ನು ಮುತ್ತಿಗೆ ಹಾಕಲು ನೀಲನಕ್ಷೆ ಸಿದ್ಧಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಂವಿಧಾನದ ರಕ್ಷಣೆ, ತನಿಖಾ ಸಂಸ್ಥೆಗಳ ದುರುಪಯೋಗ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಪ್ರಮುಖ ವಿಷಯಗಳ ವಿರುದ್ಧ ಜಂಟಿ ಹೋರಾಟದ ಕುರಿತು ಚರ್ಚೆ ನಡೆಯಲಿದೆ.

ಸಭೆಯಿಂದ ದೂರ ಉಳಿಯಲಿರುವ ಪ್ರಮುಖ ಪಕ್ಷಗಳು

ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಈ ಸಭೆಯಿಂದ ದೂರ ಉಳಿಯುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಅಚ್ಚರಿ ಜಯ ಸಾಧಿಸಿ ಗದ್ದುಗೆ ಹಿಡಿದಿರುವ ವಿಜಯ್ ಅವರ ಟಿವಿಕೆ ಪಕ್ಷ ಈ ಸಭೆಯಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ತಮಗೆ “ದ್ರೋಹ”ವಾಗಿದೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ. ಮೂಲಗಳ ಪ್ರಕಾರ ಆಪ್ (AAP) ಸಹ ಈ ಸಭೆಯಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು

ಸಿಪಿಐ(ಎಂ)-ಕಾಂಗ್ರೆಸ್ ನಡುವಿನ ತಿಕ್ಕಾಟ

ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು, ಸಿಪಿಐ(ಎಂ) ಪಕ್ಷವು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಈ ಕುರಿತು ಸ್ಪಷ್ಟನೆ ಕೋರಿದ್ದಾರೆ. ಆದಾಗ್ಯೂ, ಮೈತ್ರಿಕೂಟದ ಒಗ್ಗಟ್ಟಿಗಾಗಿ ಸಿಪಿಐ(ಎಂ) ಸಭೆಯಲ್ಲಿ ಭಾಗವಹಿಸಲಿದ್ದು, ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳಿದ್ದರೆ ನೀವು ಜೀವನಪರ್ಯಂತ ಬಡವರಾಗಿಯೇ ಉಳಿಯುತ್ತೀರಿ ಜೋಕೆ! – Kannada News

ಪ್ರತಿಯೊಬ್ಬರೂ ಸಹ ಶ್ರೀಮಂತಿಕೆಯನ್ನು ಗಳಿಸಬೇಕು, ಸಮೃದ್ಧ ಜೀವನವನ್ನು ಸಾಗಿಸಬೇಕು ಎಂದು ಬಯಸುತ್ತಾರೆ. ಇದರ ಸಲುವಾಗಿ ಕಷ್ಟಪಟ್ಟು ಕೆಲಸವನ್ನು ಕೂಡ ಮಾಡ್ತಾರೆ. ಆದರೆ ಕೆಲವರು ಎಷ್ಟು ಸಂಪಾದನೆ ಮಾಡಿದರೂ ಸಹ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಇದಕ್ಕೆ ಅವರ ಕೆಲವೊಂದು ಅಭ್ಯಾಸಗಳೇ ಕಾರಣ. ನಿಮ್ಮಲ್ಲೂ ಈ ರೀತಿಯ ಅಭ್ಯಾಸಗಳಿದ್ದರೆ, ನೀವು ಕೂಡ ಜೀವನಪರ್ಯಂತ ಬಡವರಾಗಿಯೇ (poor) ಉಳಿಯಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ನಮ್ಮ ಯಾವ ಅಭ್ಯಾಸಗಳು ನಮ್ಮನ್ನು ಬಡತನಕ್ಕೆ ನೂಕುತ್ತವೆ ಎಂಬುದನ್ನು ನೋಡೋಣ ಬನ್ನಿ.

ಬಡತನಕ್ಕೆ ಕಾರಣವಾಗುವ ಅಭ್ಯಾಸಗಳಿವು:

ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡದಿರುವುದು: ಯಾವಾಗಲೂ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಹಣ ಉಳಿತಾಯ ಮಾಡದವರು ಬಡವರಾಗಿಯೇ ಉಳಿಯುತ್ತಾರೆ. ಆಚಾರ್ಯ ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಆದಾಯದ ಒಂದು ಭಾಗವನ್ನು ಭವಿಷ್ಯಕ್ಕಾಗಿ ಯಾವಾಗಲೂ ಉಳಿಸಬೇಕು, ಮತ್ತು ಉಳಿತಾಯ ಮಾಡಿದ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಬೇಕು. ಈ ಬುದ್ಧಿವಂತಿಕೆಯಿದ್ದರೆ ಮಾತ್ರ ಶ್ರೀಮಂತಿಕೆ ಗಳಿಸಲು ಸಾಧ್ಯ.

ಅನಗತ್ಯ ಖರ್ಚು ಮಾಡುವುದು: ಯಾರು ಅನಗತ್ಯವಾಗಿ ಖರ್ಚು ಮಾಡುತ್ತಾರೋ ಅವರು ಕ್ರಮೇಣ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ, ಇದು ಮುಂದೊಂದು ದಿನ ಅವರನ್ನು ಬಡತನಕ್ಕೆ ನೂಕುತ್ತದೆ. ಚಾಣಕ್ಯ ತತ್ವದ ಪ್ರಕಾರ, ಹಣವನ್ನು ಯೋಜಿತವಲ್ಲದೆ ಖರ್ಚು ಮಾಡಬಾರದು. ಯಾವುದೇ ಕಾರಣವಿಲ್ಲದೆ ಹಣವನ್ನು ಖರ್ಚು ಮಾಡುವ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸ ವ್ಯಕ್ತಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ: ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸಬೇಕೇ? ಹಾಗಿದ್ರೆ ಸರಳ ಸಲಹೆ ಪಾಲಿಸಿ ಸಾಕು

ಸಾಲ ಮಾಡುವುದು: ಅನಗತ್ಯ ಸಾಲ ತೆಗೆದುಕೊಳ್ಳಬಾರದು, ಈ ಅಭ್ಯಾಸವು ಒಬ್ಬ ವ್ಯಕ್ತಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.  ಆಚಾರ್ಯ ಚಾಣಕ್ಯ ಹೇಳುವಂತೆ, ಕಾರಣವಿಲ್ಲದೆ ಯಾರಿಂದಲೂ ಸಾಲ ಪಡೆಯಬಾರದು. ಏಕೆಂದರೆ ಈ ಅಭ್ಯಾಸವು ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ. ಮತ್ತು ಜೀವನಪರ್ಯಂತ ಸಾಲವನ್ನೇ ತೀರಿಸುತ್ತಾ ಕೂರಬೇಕಾಗುತ್ತದೆ. ಹಾಗಾಗಿ ಅನಗತ್ಯ ವಿಚಾರಕ್ಕೆ ಎಂದಿಗೂ ಸಾಲವನ್ನು ಪಡೆಯಬೇಡಿ.

ಸೋಮಾರಿತ: ಸೋಮರಿತನ ಕೂಡ ಬಡತನಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ. ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನೀವು ಬಯಸದಿದ್ದರೆ ನೀವು ಸೋಮಾರಿತನವನ್ನು ಬಿಟ್ಟುಬಿಡಬೇಕು. ಸೋಮಾರಿತನವನ್ನು ಬಿಟ್ಟರೆ ಮಾತ್ರ ಹಣ ಸಂಪಾದಿಸಲು ಸಾಧ್ಯ, ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸೂರ್ಯನಿಗೆ ಅನ್ಯಾಯವಾಗಿದೆ’; ಬಿಸಿಸಿಐ ವಿರುದ್ಧ ಗರಂ ಆದ ಗವಾಸ್ಕರ್ – Kannada News

ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೆ ಅವರನ್ನು ತಂಡದಿಂದಲೂ ಹೊರಹಾಕಲಾಗಿದೆ. ಸೂರ್ಯಕುಮಾರ್ ಯಾದವ್ ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ತಂಡದಿಂ ಕೈಬಿಟ್ಟಿರುವುದು ಸರಿಯಾದ ನಿರ್ಧಾರವಾಗಿದೆ ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು ಸೂರ್ಯನಿಗೆ ಕೊನೆಯ ಅವಕಾಶವನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಒಬ್ಬರು.

ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಗವಾಸ್ಕರ್, ‘ಸೂರ್ಯಕುಮಾರ್ ಯಾದವ್ ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. 2028 ರಲ್ಲಿ ಟಿ20 ವಿಶ್ವಕಪ್ ಮತ್ತು ಒಲಿಂಪಿಕ್ಸ್ ಇದೆ. ಹೀಗಾಗಿ ಕನಿಷ್ಠ ಮುಂಬರುವ ಇಂಗ್ಲೆಂಡ್ ಸರಣಿಯವರೆಗೆ ಅವರಿಗೆ ಅವಕಾಶ ನೀಡಬೇಕಿತ್ತು. ಆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರವೇ ಆಯ್ಕೆದಾರರು ನಿರ್ಧಾರಕ್ಕೆ ಬಂದಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ 2026 ರ ಐಪಿಎಲ್​ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಆಯ್ಕೆದಾರರ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.

ಯುವ ನಾಯಕನ ಅಗತ್ಯವಿದೆ

ಆದರೆ, ಆಯ್ಕೆದಾರರ ಚಿಂತನೆ ಬೇರೆಯದೇ ಆಗಿರಬಹುದು ಎಂದಿರುವ ಗವಾಸ್ಕರ್, ‘ಬದಲಾವಣೆ ಈಗಲೇ ಆರಂಭವಾಗಬೇಕು ಎಂದು ಆಯ್ಕೆದಾರರು ಭಾವಿಸಿರಬಹುದು. ಸೂರ್ಯಗೆ ಈಗ 35 ಅಥವಾ 36 ವರ್ಷ. 2028 ರ ಹೊತ್ತಿಗೆ ಅವರಿಗೆ 38 ವರ್ಷ ವಯಸ್ಸಾಗಿರುತ್ತದೆ. ಆ ಸಮಯದಲ್ಲಿ, ನಾವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಅಥವಾ ವಿಶ್ವಕಪ್ ಉಳಿಸಿಕೊಳ್ಳಲು ಬಯಸಿದರೆ, ನಮಗೆ ಯುವ ನಾಯಕನ ಅಗತ್ಯವಿದೆ. ಅದಕ್ಕಾಗಿಯೇ ಶ್ರೇಯಸ್ ಅಯ್ಯರ್ ಅವರಂತಹ ಅನುಭವ ಹೊಂದಿರುವ ಯುವ ಆಟಗಾರನನ್ನು ಆಯ್ಕೆ ಮಾಡಿರಬಹುದು ಎಂದಿದ್ದಾರೆ.

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್

ಪರಂಪರೆಯಾಗಿ ಬಿಟ್ಟು ಹೋಗಿದ್ದಾರೆ

ನಾಯಕತ್ವದಿಂದ ತೆಗೆದುಹಾಕಲ್ಪಟ್ಟಿದ್ದರೂ ಸಹ, ಗವಾಸ್ಕರ್ ಸೂರ್ಯನ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಮಹೇಂದ್ರ ಸಿಂಗ್ ಧೋನಿಯಂತೆ ಸೂರ್ಯ ಮೈದಾನದಲ್ಲಿ ತುಂಬಾ ಶಾಂತವಾಗಿದ್ದರು. ಸೂರ್ಯ ತಂಡಕ್ಕೆ ತನ್ನ ಶಾಂತ ಸ್ವಭಾವವನ್ನು ಪರಂಪರೆಯಾಗಿ ಬಿಟ್ಟು ಹೋಗಿದ್ದಾರೆ. ಕಠಿಣ ಸಂದರ್ಭಗಳಲ್ಲಿಯೂ ಒತ್ತಡಕ್ಕೆ ಒಳಗಾಗದೆ ತಂಡವನ್ನು ಮುನ್ನಡೆಸುವಲ್ಲಿ ಅವರು ಧೋನಿಯಂತೆಯೇ ಇದ್ದರು ಎಂದು ಗವಾಸ್ಕರ್ ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಂಪತಿಗಳು ಎಂದಿಗೂ ಬೆಳಬೆಳಗ್ಗೆ ಈ ವಿಚಾರಗಳನ್ನು ಮಾತನಾಡಬಾರದು; ಏಕೆ ಗೊತ್ತಾ? – Kannada News

ಬೆಳಗ್ಗಿನ (morning) ಸಮಯ ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ಹೌದು ಬೆಳಿಗ್ಗೆ ಎದ್ದಾಗ ನಮ್ಮ ಮನಸ್ಸು ಶಾಂತವಾಗಿದ್ದಷ್ಟೂ, ನಮ್ಮ ದಿನವು ಸಂತೋಷದಾಯಕ ಮತ್ತು ಹೆಚ್ಚು ಸಕಾರಾತ್ಮಕವಾಗಿರುತ್ತದೆ. ವಿಶೇಷವಾಗಿ ದಾಂಪತ್ಯ ಜೀವನದ ಬಗ್ಗೆ ಮಾತನಾಡುವುದಾದರೆ  ಬೆಳಗ್ಗಿನ ಹೊತ್ತು ಗಂಡ ಮತ್ತು ಹೆಂಡತಿಯ ನಡುವೆ ವಿನಿಮಯವಾಗುವ ಮಾತುಗಳು ಮತ್ತು ಭಾವನೆಗಳು ಸಂಬಂಧವನ್ನು ಸದೃಢವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಸಂಗಾತಿಗಳು ಪರಸ್ಪರ ಸಕಾರಾತ್ಮಕ ಮಾತುಗಳನ್ನಾಡಬೇಕು. ಏನಾದ್ರೂ ಬೆಳಬೆಳಗ್ಗೆ ಈ ಕೆಲವು ನಕಾರಾತ್ಮಕ ಸಂಗತಿಗಳ ಬಗ್ಗೆ ಮಾತನಾಡಿದರೆ ಇದು ಸಂಸಾರದ ಶಾಂತಿ, ನೆಮ್ಮದಿಯನ್ನು ಕೆಡಿಸುವುದಲ್ಲದೆ ಇದು  ಕಾಲ ನಂತರದಲ್ಲಿ ದಾಂಪತ್ಯ ಜೀವನದಲ್ಲಿ ದುರ್ಬಲಗೊಳಿಸುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಗಂಡ ಹೆಂಡತಿ ಬೆಳಗ್ಗೆ ಎದ್ದ ತಕ್ಷಣ ಯಾವೆಲ್ಲಾ ವಿಚಾರಗಳನ್ನು ಮಾತನಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಗಂಡ ಹೆಂಡತಿ ಬೆಳಗ್ಗೆ ಎದ್ದ ತಕ್ಷಣವೇ ಈ ವಿಷಯಗಳ ಬಗ್ಗೆ ಮಾತನಾಡಬಾರದಂತೆ:

ಹಿಂದಿನ ತಪ್ಪುಗಳ ಬಗ್ಗೆ ಮಾತನಾಡುವುದು: ಬೆಳಗ್ಗೆ ಎದ್ದ ತಕ್ಷಣವೇ ಹಿಂದೆ ಅಥವಾ ಹಿಂದಿನ ದಿನ ನಡೆದಂತಹ ಜಗಳ, ಮನಸ್ತಾಪ ಅಥವಾ ತಪ್ಪುಗಳ ಬಗ್ಗೆಯೇ ಮಾತನಾಡಿದರೆ ಇದು ಕಿರಿಕಿರಿಯನ್ನು ಉಂಟು ಮಾಡುವುದಲ್ಲದೆ, ದಿನದ ಸಕಾರಾತ್ಮಕತೆಯನ್ನೇ ಹೋಗಲಾಡಿಸುತ್ತದೆ. ಈ ಒಂದು ತಪ್ಪಿನಿಂದ ಸಂಪೂರ್ಣ ದಿನವೇ ಹಾಳಾಗುವುದಲ್ಲದೆ, ಇದರಿಂದ ಸುಂದರ ಸಂಬಂಧಕ್ಕೂ ಪೆಟ್ಟು ಬೀಳುತ್ತದೆ.

ಹೋಲಿಕೆ ಮಾಡುವುದು: ಬೆಳಬೆಳಗ್ಗೆಯೇ ನಿಮ್ಮ ಸಂಗಾತಿಯನ್ನು ಬೇರೆಯವರೊಂದಿಗೆ ಹೋಲಿಸುವುದನ್ನು ಬಿಟ್ಟುಬಿಡಿ. ಉದಾಹರಣೆಗೆ ಆ ಪಕ್ಕದ ಮನೆಯವನು ತನ್ನ ಹೆಂಡತಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಹೆಂಡತಿಗೆ ಮನೆ ಕೆಲಸದಲ್ಲಿ ಎಷ್ಟು ಸಹಾಯ ಮಾಡ್ತಾನೆ, ನೀವು ನೋಡಿದ್ರೆ ನನಗೆ ಯಾವ ಸಹಾಯ ಕೂಡ ಮಾಡಲ್ಲ ಅಂತೆಲ್ಲಾ ಬೆಳಬೆಳಗ್ಗೆ ಕಿರಿಕಿರಿಯ ಮಾತುಗಳನ್ನಾಡಿದರೆ, ಈ ಮಾತುಗಳು ಸಂಗಾತಿಯ ಸ್ವಾಭಿಮಾನಕ್ಕೆ ಧಕ್ಕೆ ತರಬಹುದು ಅಲ್ಲದೆ ಇದು ನಿಮ್ಮಿಬ್ಬರ ನಡುವಿನ ಅಂತರವನ್ನು ಹೆಚ್ಚಿಸಬಹುದು.

ಖರ್ಚು ಮತ್ತು ಸಾಲದ ಬಗ್ಗೆ ತೀವ್ರವಾದ ಚರ್ಚೆಗಳು: ಪ್ರತಿಯೊಬ್ಬರೂ ಸಹ ಬೆಳಗಿನ ಟೀ ಕಾಫಿ ಸಮಯವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ಹೀಗಿರುವಾಗ ಈ ಸಮಯದಲ್ಲಿ ಗಂಡ-ಹೆಂಡತಿ ಸಾಲ, ಖರ್ಚುಗಳು, ಹಣಕಾಸಿನ ವಿಚಾರಗಳ ಬಗ್ಗೆ ಚರ್ಚಿಸಿದರೆ ಇದರಿಂದ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಂಪೂರ್ಣ ದಿನವೇ ಹಾಳಾಗುತ್ತದೆ. ಹಾಗಾಗಿ ಸಂಜೆ ಅಥವಾ ವಾರಾಂತ್ಯದಲ್ಲಿ ಹಣಕಾಸಿನ ವಿಷಯಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು.

ಇದನ್ನೂ ಓದಿ: ಗಂಡ-ಹೆಂಡತಿ ಪರಸ್ಪರ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ?

ವ್ಯಂಗ್ಯ ಅಥವಾ ಅಪಹಾಸ್ಯದ ಮಾತುಗಳು: ಬೆಳಬೆಳಗ್ಗೆ ನಿಮ್ಮ ಸಂಗಾತಿಯ ಬಗ್ಗೆ ಅಪಹಾಸ್ಯದ ಮಾತುಗಳನ್ನಾಡಬೇಡಿ. ನಿನ್ನಿಂದ ಏನು ಸಾಧ್ಯವಿಲ್ಲ, ನೀವು ಎಂದಾದ್ರೂ ಒಂದಾದ್ರೂ ಕೆಲಸ ನೆಟ್ಟಗೆ ಮಾಡಿದ್ದೀರಾ ಅಂತೆಲ್ಲಾ ಬೆಳಬೆಳಗ್ಗೆ ವ್ಯಂಗ ಮಾತುಗಳನ್ನಾಡುವುದು ಸಂಗಾತಿಯ ಮನಸ್ಸಿಗೆ ನೋವುಂಟು ಮಾಡುವುದಲ್ಲದೆ, ಇದು ಸಂಬಂಧವನ್ನು ಸಹ ದುರ್ಬಲಗೊಳಿಸುತ್ತದೆ.

ದಾಂಪತ್ಯ ಜೀವನವನ್ನು ಸದೃಢವಾಗಿಡಲು ಗಂಡ ಹೆಂಡತಿ ಏನು ಮಾಡಬೇಕು?

ಬೆಳಬೆಳಗ್ಗೆ ನಕಾರಾತ್ಮಕ ಮಾತುಗಳನ್ನಾಡುವ ಬದಲು ದಂಪತಿಗಳು ಪರಸ್ಪರ ಸಕಾರಾತ್ಮಕ ಮಾತುಗಳನ್ನಾಡಬೇಕು.  ನಗುನಗುತ್ತಾ ಒಬ್ಬರನ್ನೊಬ್ಬರು ಸ್ವಾಗತಿಸುತ್ತಾ ಮತ್ತು ದೈನಂದಿನ ಕೆಲಸಗಳಲ್ಲಿ ಪರಸ್ಪರ ಸಹಾಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಹಿಂದಿನ ದಿನ ನಡೆದ ಜಗಳವನ್ನು ಅಲ್ಲೇ ಬಿಟ್ಟು ಪ್ರೀತಿಯಿಂದ ಇಬ್ಬರು ಹೊಸ ದಿನವನ್ನು ಆರಂಭಿಸಬೇಕು. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಮುಖ್ಯವಾಗಿ ವೈವಾಹಿಕ ಸಂಬಂಧವು ಪರಸ್ಪರ ಗೌರವ ಮತ್ತು ತಿಳುವಳಿಕೆಯನ್ನು ಆಧರಿಸಿರುವುದರಿಂದ, ಬೆಳಿಗ್ಗೆ ನೋವುಂಟುಮಾಡುವ ಮಾತುಗಳನ್ನು ತಪ್ಪಿಸುವುದು ತುಂಬಾ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್‌ ಆಯ್ತು ದೃಶ್ಯ – Kannada News

ಮನೆಯಲ್ಲಿ ಪುಟಾಣಿ ಮಕ್ಕಳಿದ್ದರೆ (little girl) ಗೊಂಬೆಯಾಟ ಆಡುತ್ತಾರೆ. ಹೆಣ್ಣು ಮಕ್ಕಳು ಈ ಗೊಂಬೆಗಳಿಗೆ ಬಟ್ಟೆ ತೊಡಿಸುವುದು, ತಲೆ ಬಾಚುವುದು ಮತ್ತು ಆರೈಕೆ ಮಾಡುವ ಮೂಲಕ ಮಗುವಿನಂತೆ ನೋಡಿಕೊಳ್ಳುತ್ತಾರೆ. ಈ ದೃಶ್ಯ ನೋಡಿದಾಗ ದೊಡ್ಡವರ ಮುಖದಲ್ಲಿ ನಗು ಮೂಡುತ್ತದೆ. ಇದೀಗ ಇಂತಹದ್ದೇ ಮುದ್ದಾದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪುಟಾಣಿಯೊಂದು ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡುವ ದೃಶ್ಯವಿದೆ. ಈ ಪುಟಾಣಿಯ ಗೊಂಬೆಯಾಟ ನೋಡಿ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ಶೋಭಾ (shobha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿಯೊಂದು, ಸಣ್ಣ ಮಗುವಿಗೆ ಸ್ನಾನ ಮಾಡಿಸಿದ್ದಂತೆ ಗೊಂಬೆಗೆ ಸ್ನಾನ ಮಾಡಿಸುತ್ತಿದೆ. ಆರೈಕೆ ಮಾಡುವುದರಲ್ಲಿ ಬ್ಯುಸಿಯಾಗಿರುವ ಪುಟ್ಟ ಮಗುವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ವಿಡಿಯೋ ಒಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಗೊಂಬೆ ಅಂದ್ರೆ ಮಕ್ಕಳಿಗೆ ಇಷ್ಟ ಎಂದಿದ್ದಾರೆ. ಮತ್ತೊಬ್ಬರು, ಬಾಲ್ಯದ ದಿನಗಳು ಕಣ್ಣ ಮುಂದೆ ಬಂತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಆರೈಕೆ, ಕಾಳಜಿ ತೋರಿಸುವ ಬಂದು ಬಿಟ್ಟಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:11 pm, Sun, 7 June 26

Source link

ಗುಜರಾತ್​ನಲ್ಲಿ ರಾತ್ರೋರಾತ್ರಿ ಬುಲ್ಡೋಜರ್ ದಾಳಿಗೆ ಬಿದ್ದ 100 ಮನೆಗಳು; ಅಧಿಕಾರಿಗಳಿಗೂ ಗೊತ್ತಿಲ್ಲ; ಭೂಮಾಫಿಯಾ ಕರಾಮತ್ತಾ? – Kannada News

ಸೂರತ್​ನಲ್ಲಿ ಬುಲ್ಡೋಜರ್ ಕರಾಮತ್ತು. ಕಟ್ಟಡ ಅವಶೇಷಗಳ ಮೇಲೆ ಮಲಗಿರುವ ಒಬ್ಬ ಸಂತ್ರಸ್ತೆImage Credit source: PTI

ಅಹ್ಮದಾಬಾದ್, ಜೂನ್ 7: ಗುಜರಾತ್‌ನ ಸೂರತ್ ನಗರದಲ್ಲಿ ನೂರು ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದ್ದು, ಆದರೆ ಆ ಮನೆಗಳನ್ನು ಉರುಳಿಸಿದ್ದು ಯಾರು ಎಂಬುದು ಯಾರಿಗೂ ತಿಳಿಯದೆ ಒಂದು ನಿಗೂಢ ರಹಸ್ಯವಾಗಿ ಪರಿಣಮಿಸಿದೆ. ಸೂರತ್‌ನ ಲಿಂಬಾಯತ್ ಪ್ರದೇಶದ ಮಹಾದೇವನಗರ-3 ರಲ್ಲಿ ಈ ಘಟನೆ ನಡೆದಿದೆ. ಸುಮಾರು 100 ಕ್ಕೂ ಹೆಚ್ಚು ಕಡುಬಡವರ ಮನೆಗಳನ್ನು ಜೆಸಿಬಿ ಮತ್ತು ಬುಲ್ಡೋಜರ್ ಬಳಸಿ ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಕಾರ್ಯಾಚರಣೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸೂರತ್ ಮಹಾನಗರ ಪಾಲಿಕೆ (SMC) ಮತ್ತು ಸ್ಥಳೀಯ ಕಂದಾಯ ಇಲಾಖೆ (Revenue Department) ಸಂಪೂರ್ಣವಾಗಿ ಕೈತೊಳೆದುಕೊಂಡಿವೆ. ತಲೆಮಾರುಗಳಿಂದ ಅಲ್ಲಿಯೇ ವಾಸಿಸುತ್ತಿದ್ದ ನೂರಾರು ಕುಟುಂಬಗಳು ಯಾವುದೇ ಮುನ್ಸೂಚನೆ ಇಲ್ಲದೆ ಬೀದಿಗೆ ಬಿದ್ದಿದ್ದು, ತಮಗೆ ನ್ಯಾಯ ಬೇಕೆಂದು ಆಗ್ರಹಿಸುತ್ತಿದ್ದಾರೆ.

ಲಿಂಬಾಯತ್‌ನ ಈ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಬಹುತೇಕರು ದಿನಗೂಲಿ ಕಾರ್ಮಿಕರು ಮತ್ತು ಸಣ್ಣಪುಟ್ಟ ಕೆಲಸ ಮಾಡುವ ಬಡವರಾಗಿದ್ದಾರೆ. ಇತ್ತೀಚಿನ ರಾತ್ರಿಯೊಂದರಲ್ಲಿ ಯಾವುದೇ ಅಧಿಕೃತ ನೋಟಿಸ್ ನೀಡದೆ, ದಿಢೀರನೆ ಬುಲ್ಡೋಜರ್‌ಗಳೊಂದಿಗೆ ಬಂದ ಕೆಲವು ವ್ಯಕ್ತಿಗಳು ಸಾಲು ಸಾಲು ಮನೆಗಳನ್ನು ಧ್ವಂಸಗೊಳಿಸಲು ಪ್ರಾರಂಭಿಸಿದರು. ಸ್ಥಳೀಯರು ವಿರೋಧಿಸಲು ಯತ್ನಿಸಿದರೂ, ಯಾವುದೇ ಕರುಣೆ ತೋರದೆ ಇಡೀ ಬಡಾವಣೆಯನ್ನು ಧ್ವಂಸ ಮಾಡಲಾಯಿತು.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು

ಯಾರು ಮಾಡಿದ್ದು? ಅಧಿಕಾರಿಗಳೇ ಅಜ್ಞಾತರು

ಸಾಮಾನ್ಯವಾಗಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ಮಹಾನಗರ ಪಾಲಿಕೆ ಅಥವಾ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಪೊಲೀಸ್ ರಕ್ಷಣೆಯೊಂದಿಗೆ ಮಾಡಲಾಗುತ್ತದೆ. ಆದರೆ ಈ ಘಟನೆ ನಡೆದ ನಂತರ ಸಂತ್ರಸ್ತರು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆಘಾತಕಾರಿ ಉತ್ತರ ಲಭಿಸಿದೆ. “ನಾವು ಅಂತಹ ಯಾವುದೇ ತೆರವು ಆದೇಶ ನೀಡಿಲ್ಲ, ಅಲ್ಲಿಗೆ ಯಾವುದೇ ಬುಲ್ಡೋಜರ್ ಕಳುಹಿಸಿಲ್ಲ” ಎಂದು ಸೂರತ್ ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭೂಮಾಫಿಯಾ ಕೈವಾಡದ ಶಂಕೆ

ಸರ್ಕಾರಿ ಸಂಸ್ಥೆಗಳು ಜವಾಬ್ದಾರಿಯನ್ನು ನಿರಾಕರಿಸಿರುವುದರಿಂದ, ಈ ಜಾಗದ ಮೇಲೆ ಕಣ್ಣಿಟ್ಟಿರುವ ಪ್ರಭಾವಿ ಭೂಮಾಫಿಯಾ (Land Mafia) ಅಥವಾ ಖಾಸಗಿ ಬಿಲ್ಡರ್‌ಗಳು ಗೂಂಡಾಗಳನ್ನು ಬಳಸಿ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಬಡವರನ್ನು ಹೆದರಿಸಿ ಓಡಿಸಲು ಈ ರೀತಿ ಕಾನೂನುಬಾಹಿರವಾಗಿ ಬುಲ್ಡೋಜರ್ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ದೆಹಲಿಯ ಪ್ರಾಧ್ಯಾಪಕಿಯನ್ನು ಕೊಲ್ಲಲು 1,400 ಕಿ.ಮೀ ದೂರದಿಂದ ಬಂದಿದ್ದ ಹಂತಕರು

ಪ್ರತಿಭಟನೆ ಮತ್ತು ತನಿಖೆಗೆ ಆಗ್ರಹ

ಮನೆಗಳನ್ನು ಕಳೆದುಕೊಂಡು ಮಳೆ-ಗಾಳಿಗೆ ಸಿಲುಕಿರುವ ಸಂತ್ರಸ್ತರು ಸೂರತ್ ಜಿಲ್ಲಾಧಿಕಾರಿ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. “ನಮ್ಮ ಕಣ್ಣೆದುರೇ ನೂರು ಮನೆಗಳು ಉರುಳಿಬಿದ್ದರೂ ಯಾರಿಗೆ ಗೊತ್ತು ಎಂದು ಆಡಳಿತ ವ್ಯವಸ್ಥೆ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ತಕ್ಷಣವೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಈ ಅಕ್ರಮ ಬುಲ್ಡೋಜರ್ ಕಾರ್ಯಾಚರಣೆಯ ಹಿಂದಿರುವ ಕಿಡಿಗೇಡಿಗಳನ್ನು ಬಂಧಿಸಬೇಕು,” ಎಂದು ಸಂತ್ರಸ್ತ ಕುಟುಂಬಗಳು ಕಣ್ಣೀರಿಡುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather forecast: ಕರ್ನಾಟಕದಲ್ಲಿ 1 ವಾರ ಭಾರೀ ಮಳೆ ಮುನ್ಸೂಚನೆ: ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ – Kannada News

ಬೆಂಗಳೂರು, ಜೂನ್ 07): ಕರ್ನಾಟಕದಲ್ಲಿ ಮುಂಗಾರು (karnataka monsoon) ಚುರುಕುಗೊಂಡಿದ್ದು, ಇಂದಿನಿಂದ ಏಳು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ (karnataka Rains) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ವಿಪರೀತವಾಗಲಿದ್ದು, ಹವಾಮಾನ ಇಲಾಖೆಯು ಈ ಭಾಗಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನಗಳ ಕಾಲ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ.  ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಈ ಭಾಗದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, 204.5 ಮಿ.ಮೀ ಗಿಂತ ಹೆಚ್ಚು ವಿಪರೀತ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರ ನೆಮ್ಮದಿ ಕಸಿದ ಮಳೆರಾಯ: ಮನೆಗಳಿಗೆ ನುಗ್ಗಿದ ನೀರು, ಕುಸಿದ ಸೇತುವೆ

ಭಾರೀ ಮಳೆ ಇರುವುದರಿಂದ ಈ ಭಾಘದ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇರುವುದರಿಂದ ಈ ಪ್ರದೇಶದ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಇನ್ನು ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್ ಮುಂದುವರಿಯಲಿದೆ.

ಬೆಂಗಳೂರು ಮತ್ತು ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ತುಮಕೂರು ಭಾಗದಲ್ಲಿಯೂ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೂನ್ 12 ರವರೆಗೆ ಹಗುರದಿಂದ ಸಾಧಾರಣ ಹಾಗೂ ಕೆಲವು ಕಡೆ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳು ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ

ಉತ್ತರ ಕರ್ನಾಟಕ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಜೂನ್ 10 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ

ರಾಜ್ಯ ಕರಾವಳಿಗೆ ಮುಂಗಾರು ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ದಕ್ಷಿಣಕನ್ನಡ ಜಿಲ್ಲೆಗೆ NDRF ತಂಡ ಆಗಮಿಸಿದೆ. ಒಟ್ಟು 30 ಸದಸ್ಯರಿರುವ ತಂಡ ಸದ್ಯ ಪುತ್ತೂರಿನಲ್ಲಿ ಮೊಕ್ಕಾಂ ಹೂಡಿದ್ದು, ಎಲ್ಲಾ ರೀತಿಯ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿದೆ. ಪ್ರವಾಹ ವಿಪತ್ತು,ಕಟ್ಟಡ ಕುಸಿತ,ರಾಸಾಯನಿಕ ವಿಪತ್ತು,ವಿಕಿರಣ ವಿಪತ್ತು ಸೇರಿದಂತೆ ಎಲ್ಲಾ ರೀತಿಯ ಸನ್ನಿವೇಶ ಎದುರಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:41 pm, Sun, 7 June 26

Source link

ಈಗ ಸಿನಿಮಾ ಆಗಿದೆ 47 ವರ್ಷ ಹಿಂದಿನ ಕತೆ, ಕಮಲ್ ಹಾಸನ್ ನಟಿಸಬೇಕಿತ್ತು – Kannada News

ಕೆಲವು ಕತೆಗಳಿಗೆ ಸಮಯದ ಮಿತಿ ಇರುವುದಿಲ್ಲ. ಅವು ಸಾರ್ವಕಾಲಿಕ ಆಗಿರುತ್ತವೆ. ಅಂಥಹಾ ಕತೆಗಳುಳ್ಳ ಸಿನಿಮಾಗಳೇ ಗೆಲ್ಲುವುದು. 47 ವರ್ಷ ಹಿಂದೆ ಬರೆಯಲಾಗಿದ್ದ ಕತೆಯೊಂದು ಈಗ ಸಿನಿಮಾ ಆಗಿದ್ದು, ಬಿಡುಗಡೆಗೆ ರೆಡಿಯಾಗಿದೆ. 47 ವರ್ಷಗಳ ಹಿಂದೆ ಆ ಸಿನಿಮಾನಲ್ಲಿ ನಟ ಕಮಲ್ ಹಾಸನ್ (Kamal Haasan) ನಟಿಸಬೇಕಿತ್ತು. ಆದರೆ ಕಮಲ್ ಹಾಸನ್ ಅವರು ಆಗ ಬೇರೊಂದು ಕತೆಯನ್ನು ಆಯ್ದುಕೊಂಡರು. ಆದರೆ ಇಷ್ಟು ವರ್ಷ ಆ ಕತೆ ನಿರ್ದೇಶಕನ ಯೋಚನೆಯಲ್ಲಿತ್ತು, ಆದರೆ ಈಗ ಸಿನಿಮಾ ಆಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮುಂದೆ ಬರಲಿದೆ.

ಸಿಂಗೀತಮ್ ಶ್ರೀನಿವಾಸ್, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರು. ಅವರ ಸಿನಿಮಾಗಳು ಟೈಮ್​​ಲೆಸ್, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಹಲವಾರು ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ಹೆಸರು ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಇದೀಗ ಅವರಿಗೆ 90 ವರ್ಷ ವಯಸ್ಸು. ಆದರೆ ಈ ವಯಸ್ಸಿನಲ್ಲಿ ಮತ್ತೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದು ಮಾತ್ರವಲ್ಲ ಸಿನಿಮಾ ಒಂದನ್ನು ಯಶಸ್ವಿಯಾಗಿ ಮುಗಿಸಿ ಬಿಡುಗಡೆಗೆ ಸಜ್ಜುಗೊಳಿಸಿದ್ದಾರೆ.

ಸಿಂಗೀತ್ ಶ್ರೀನಿವಾಸ್ ಅವರು, ‘ಸಿಂಗ್-ಗೀತಂ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್ ಭಾಗಿ ಆಗಿದ್ದರು. ಈ ವೇಳೆ 47 ವರ್ಷ ಹಿಂದೆ ಹೇಳಿದ್ದ ಕತೆಯ ಗುಟ್ಟನ್ನು ರಟ್ಟು ಮಾಡಿದರು. ಕಮಲ್ ಹಾಸನ್ ಹೇಳಿರುವಂತೆ, ಯಾವುದೋ ಒಂದು ಅವಾರ್ಡ್​ ಕಾರ್ಯಕ್ರಮದ ಬಳಿಕ ಸಿಂಗೀತಂ ಅವರು ಕಮಲ್ ಅವರನ್ನು ಭೇಟಿಯಾಗಿ ಎರಡು ಕತೆಗಳನ್ನು ಹೇಳಿದರಂತೆ. ಅದರಲ್ಲಿ ಒಂದು ‘ಅದ್ವೈತಂ’ ಆ ಕತೆಯೇ ಮುಂದೆ ಕಲ್ಟ್ ಕ್ಲಾಸಿಕ್ ಸಿನಿಮಾ ‘ಪುಷ್ಪಕ ವಿಮಾನ’ ಆಯ್ತು. ಅದೇ ದಿನ ಸಿಂಗೀತಂ ಅವರು ಹೇಳಿದ್ದ ಇನ್ನೊಂದು ಕತೆಯೇ ಈಗ ‘ಸಿಂಗ್ ಗೀತಂ’ ಸಿನಿಮಾ ಆಗಿರುವ ಕತೆ.

ಇದನ್ನೂ ಓದಿ:94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ

47 ವರ್ಷಗಳ ಹಿಂದೆಯೇ ಸಿಂಗೀತಂ ಅವರು ಆ ಕತೆಯನ್ನು ರೆಡಿ ಮಾಡಿಕೊಟ್ಟುಕೊಂಡಿದ್ದರು. ಆ ಸಿನಿಮಾಕ್ಕೆ ಕಮಲ್ ಹಾಸನ್ ಅವರನ್ನು ನಾಯಕನನ್ನಾಗಿ ಹಾಕಿಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ದಶಕಗಳ ಕಾಲ ಆ ಕತೆ ಸಿಂಗೀತಂ ಅವರ ಬಳಿಯೇ ಉಳಿದಿತ್ತು. ಈಗ ಕೊನೆಗೂ ಅದನ್ನು ಸಿನಿಮಾ ಮಾಡಿದ್ದಾರೆ ಹಿರಿಯ ನಿರ್ದೇಶಕ. ಸಿನಿಮಾ ಜೂನ್ 11 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಹಲವು ಹೊಸ ನಟರು ‘ಸಿಂಗ್ ಗೀತಂ’ ಸಿನಿಮಾನಲ್ಲಿ ನಟಿಸಿದ್ದಾರೆ.

‘ಹಾಲು ಜೇನು’, ‘ಎರಡು ನಕ್ಷತ್ರ’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಜ್ವಾಲಾಮುಖಿ’, ಶಿವಣ್ಣ ನಟನೆಯ ಮೊದಲ ಸಿನಿಮಾ ‘ಆನಂದ್’, ‘ಶ್ರುತಿ ಸೇರಿದಾಗ’, ‘ದೇವತಾ ಮನುಷ್ಯ’, ಶಿವಣ್ಣ ನಟನೆಯ ‘ಸಂಯುಕ್ತ’, ‘ಟುವ್ವಿ, ಟುವ್ವಿ, ಟುವ್ವಿ’ ಇನ್ನೂ ಹಲವಾರು ಸಿನಿಮಾಗಳನ್ನು ಅವರು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ತೆಲುಗು ಮತ್ತು ತಮಿಳಿನಲ್ಲೂ ಇಂಥಹಾ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳ ನೀಡಿದ್ದಾರೆ. ಈಗ ಮತ್ತೆ ನಿರ್ದೇಶನ ಮಾಡಿದ್ದು, ಸಿನಿಮಾ ಜೂನ್ 11 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಈ ಗಿಡಗಳನ್ನು ನೆಡುವುದು ಉತ್ತಮ – Kannada News

ಮುಂಗಾರು ಮಳೆ ಆರಂಭವಾಗಿದ್ದು, ಈ ಮಳೆಗಾಲದಲ್ಲಿ ಮಳೆಯೊಂದಿಗೆ ಸೊಳ್ಳೆಗಳ (mosquitoes) ಕಾಟವೂ ತೀರಾ ಹೆಚ್ಚಿರುತ್ತದೆ.  ನಿಂತ ಮಳೆನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುತ್ತವೆ. ಇದರಿಂದಾಗಿ ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗುವುದಲ್ಲದೆ ಇವು  ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಕಾಯಿಲೆಯ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೀಗಾಗಿ ಈ ಸೊಳ್ಳೆಗಳ ಕಾಟದಿಂದ ಪಾರಾಗಲು ಜನ ನಾನಾ ಸರ್ಕಸ್‌ಗಳನ್ನು ಮಾಡುತ್ತಾರೆ. ಹೆಚ್ಚಾಗಿ ಕಾಯಿಲೆ, ಲಿಕ್ವಿಡ್‌ನಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟೇನು ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದರೊಂದಿಗೆ ಈ ಕೆಲವೊಂದು ಗಿಡಗಳನ್ನು ಬಾಲ್ಕನಿ ಮತ್ತು ಮನೆ ಸುತ್ತಲೂ ನೆಡುವ ಮೂಲಕ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು.

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ಈ ಗಿಡಗಳನ್ನು ನೆಡಿ:

ತುಳಸಿ ಗಿಡ: ಈ ಮಳೆಗಾಲದಲ್ಲಿ ಸೊಳ್ಳೆಗಳು ಮನೆ ಪ್ರವೇಶಿಸದಂತೆ ನೋಡಿಕೊಳ್ಳಲು ನೀವು ಮನೆ ಸುತ್ತಲೂ ಹಾಗೂ ಬಾಲ್ಕನಿಯಲ್ಲಿ ತುಳಸಿ ಗಿಡಗಳನ್ನು ನೆಡಬಹುದು.  ತುಳಸಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದ್ದು, ಈ ಸಸಿಯ ಬಲವಾದ ಸುವಾಸನೆಯು ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು  ಪರಿಸರವನ್ನು ಸಹ ಶುದ್ಧೀಕರಿಸುತ್ತದೆ.

ರೋಸ್ಮರಿ: ರೋಸ್ಮರಿಯನ್ನು ಹೆಚ್ಚಾಗಿ ಕೂದಲಿನ ಆರೈಕೆಯಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಇವುಗಳು ಸೊಳ್ಳೆಗಳನ್ನು ಓಡಿಸಲು ಸಹ ಪರಿಣಾಮಕಾರಿ. ಇವುಗಳ ಬಲವಾದ ವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಹೀಗಿರುವಾಗ ಬಾಲ್ಕನಿ, ಕಿಟಕಿ ಪಕ್ಕ ರೋಸ್ಮೆರಿ ಗಿಡಗಳನ್ನು ಇಡುವ ಮೂಲಕ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು.

ಲ್ಯಾವೆಂಡರ್: ಲ್ಯಾವೆಂಡರ್‌ ಸಸ್ಯ ಉಲ್ಲಾಸದಾಯಕ ಪರಿಮಳವನ್ನು ಹೊಂದಿದ್ದು, ಈ ಪರಿಮಳ ನಮ್ಮೆಲ್ಲರಿಗೂ ಇಷ್ಟವಾಗುತ್ತದೆ. ಆದರೆ ಸೊಳ್ಳೆಗಳು ಲ್ಯಾವೆಂಡರ್‌ನ ಪರಿಮಳವನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಮನೆ ಸುತ್ತಲೂ ಲ್ಯಾವೆಂಡರ್‌ ಗಿಡ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಈ ಗಿಡದ ಪರಿಮಳವು ನಮಗೆ ಚೆನ್ನಾಗಿ ನಿದ್ರೆ ಮಾಡಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸೋದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು

ಚೆಂಡುಹೂವಿನ ಗಿಡ: ಚೆಂಡು ಹೂವಿನ ಗಿಡವನ್ನು ಸುಲಭವಾಗಿ ಬೆಳೆಸಬಹುದು.  ಇದರ ಕೇಸರಿ ಮತ್ತು ಹಳದಿ ಬಣ್ಣದ ಹೂವುಗಳು ಮನೆಯ ವಾತಾವರಣವನ್ನು ಸುಂದರಗೊಳಿಸುವುದಲ್ಲದೆ, ಇವುಗಳು ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳುತ್ತವೆ.  ಚೆಂಡು ಹೂವುಗಳ ವಾಸನೆಯು ಸೊಳ್ಳೆಗಳಿಗೆ ಅಹಿತಕರವಾಗಿರುತ್ತದೆ ಮತ್ತು ಅವು ದೂರವಿರಲು ಬಯಸುತ್ತವೆ. ಆದ್ದರಿಂದ, ನಿಮ್ಮ ಮನೆಯ ಬಳಿ ಈ ಸಸ್ಯಗಳನ್ನು ನೆಡುವುದರಿಂದ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.

ಪುದೀನ: ನಾವೆಲ್ಲರೂ ಪುದೀನದ ತಾಜಾ ಪರಿಮಳವನ್ನು ಇಷ್ಟಪಡುತ್ತೇವೆ, ಆದರೆ ಸೊಳ್ಳೆಗಳು ಮತ್ತು ನೊಣಗಳಿಗೆ ಈ ಬಲವಾದ ವಾಸನೆ ಇಷ್ಟವಾಗುವುದಿಲ್ಲ. ಹೀಗಿರುವಾಗ ಪುದೀನಾ ಗಿಡವನ್ನು ಕಿಟಕಿ ಬಳಿ ಮತ್ತು ಬಾಲ್ಕನಿಯಲ್ಲಿ ಇಡುವ ಮೂಲಕ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು.

ಬೇವು: ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಬೇವು ಸೊಳ್ಳೆಗಳನ್ನು ಓಡಿಸುವಲ್ಲೂ ಪರಿಣಾಮಕಾರಿ. ಅದರ ಎಲೆಗಳು ಮತ್ತು ಸುವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version