ಒಟಿಟಿಗೆ ಬಂತು ಸಂಕ್ರಾಂತಿಯ ಬ್ಲಾಕ್ ಬಸ್ಟರ್ ಸಿನಿಮಾ – Kannada News | Mana Shankara Vara Prasad Garu movie to be released on OTT Soon

ಪ್ರತಿ ವರ್ಷ ಸಂಕ್ರಾಂತಿ ಹಬ್ಬಕ್ಕೆ ಹಲವಾರು ಸಿನಿಮಾಗಳು (Cinema) ಅದರಲ್ಲೂ ದೊಡ್ಡ ಬಜೆಟ್​​ನ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತವೆ. ಈ ಸಂಕ್ರಾಂತಿಗೂ ಸಹ ಹಲವು ದೊಡ್ಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದವು. ಆದರೆ ಗೆದ್ದಿದ್ದು ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ. ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ವಿಜಯ ಸಾಧಿಸಿದೆ. ಇದೀಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು, ಹಲವಾರು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮೆಗಾಸ್ಟಾರ್ ಚಿರಂಜೀವಿ, ನಯನತಾರಾ, ವಿಕ್ಟರಿ ವೆಂಕಟೇಶ್ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಿತ್ತು. ಪಕ್ಕಾ ಹಾಸ್ಯಮಯ, ಆಕ್ಷನ್ ಸಿನಿಮಾ ಆಗಿದ್ದ ‘ಶಂಕರ ವರಪ್ರಸಾದ್’ ಸಿನಿಮಾವನ್ನು ತೆಲುಗು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದರು. ಕಳೆದ ಐದಾರು ವರ್ಷಗಳಿಂದ ಸತತ ಸೋಲು ಕಾಣುತ್ತಲೇ ಬಂದಿದ್ದ ಚಿರಂಜೀವಿ ಅವರಿಗೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಭಾರಿ ದೊಡ್ಡ ಗೆಲುವು ದೊರೆತಿದೆ. ಇದೀಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಡಲಿದ್ದು, ಅಲ್ಲಿಯೂ ಸಹ ಗೆಲುವು ಕಾಣುವ ಹಂಬಲದಲ್ಲಿದೆ.

ಇದನ್ನೂ ಓದಿ:ಕೊನೆಗೂ ಗೆದ್ದ ಚಿರಂಜೀವಿ: ‘ಶಂಕರ ವರ ಪ್ರಸಾದ್’ ಗಳಿಸಿದ್ದೆಷ್ಟು?

‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಜೀ5ನಲ್ಲಿ ಬಿಡುಗಡೆ ಆಗಲಿದೆ. ಅದೂ ಈ ವಾರ ಅಲ್ಲ ಬದಲಿಗೆ ಮುಂದಿನ ವಾರ. ಫೆಬ್ರವರಿ 11ರಂದು ಈ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ವಿಶೇಷವೆಂದರೆ ಸಂಕ್ರಾಂತಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಇದೀಗ ಪ್ರೇಮಿಗಳ ದಿನಾಚರಣೆಗೆ ಒಟಿಟಿಗೆ ಬರುತ್ತಿದೆ. ಮತ್ತೊಂದು ವಿಶೇಷವೆಂದರೆ ತೆಲುಗಿನ ಈ ಸಿನಿಮಾ ಒಟಿಟಿಯಲ್ಲಿ ಬರೋಬ್ಬರಿ ಏಳು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಜೊತೆಗೆ ಮರಾಠಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ವಿಕ್ಟರಿ ವೆಂಕಟೇಶ್ ಕನ್ನಡಿಗನ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಚಿರಂಜೀವಿ ತಮ್ಮ ಅದ್ಭುತ ಕಾಮಿಡಿ ಟೈಮಿಂಗ್ ಜೊತೆಗೆ ಅದ್ಭುತ ಡ್ಯಾನ್ಸ್ ಮೂಲಕವು ಗಮನ ಸೆಳೆದಿದ್ದಾರೆ. ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆಗಿ 22 ದಿನಗಳಾಗಿದ್ದು ಈ ವರೆಗೆ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 500 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:38 pm, Tue, 3 February 26

Source link

ಊಟ ಮಾಡುವಾಗ ಬೆವರು ಬರುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಲಕ್ಷಣ? – Kannada News | Eating & Sweating: Is It a Disease?

ಊಟ ಮಾಡುವಾಗ ಕೆಲವರಿಗೆ ಬೆವರು (Sweating) ಬರುವುದನ್ನು ನೀವು ಗಮನಿಸಿರಬಹುದು. ಕೆಲವರಿಗೆ ಇದು ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿದರೆ ಇನ್ನು ಕೆಲವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಹಣೆಯ ಮೇಲೆ ಬೆವರುವ ಪ್ರಮಾಣ ಅಧಿಕವಾಗಿರುತ್ತದೆ. ಬಿಸಿ ಆಹಾರ ಸೇವನೆ ಮಾಡುವುದರಿಂದ ಈ ರೀತಿಯ ಸಮಸ್ಯೆಯಾಗುತ್ತದೆ. ಆದರೆ ಪ್ರತಿ ಬಾರಿ ಒಟ್ಟ ಮಾಡುವಾಗ ಅಥವಾ ತಣಿದ ಆಹಾರ ಸೇವನೆ ಮಾಡುವಾಗಲೂ ಈ ರೀತಿ ಆಗುತ್ತಿದ್ದರೆ ಅಥವಾ ಚಳಿಯ ವಾತಾವರಣದಲ್ಲಿಯೂ ಈ ರೀತಿ ಬೆವರುತ್ತಿದ್ದರೆ ಅದು ಸಾಮಾನ್ಯವಲ್ಲ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಇದು ಯಾವುದಾದರೂ ಕಾಯಿಲೆಯೇ ಸಂಕೇತವೇ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿ ಏಮ್ಸ್‌ನ ಡಾ. ಹಿಮಾಂಶು ಭದಾನಿ ಹೇಳುವ ಪ್ರಕಾರ, ಊಟ ಮಾಡುವಾಗ ಬೆವರುವ ಸಮಸ್ಯೆಯನ್ನು ವೈದ್ಯಕೀಯವಾಗಿ ಗಸ್ಟೇಟರಿ ಸ್ವೆಟಿಂಗ್ ಎಂದು ಕರೆಯಲಾಗುತ್ತದೆ. ತುಂಬಾ ಮಸಾಲೆಯುಕ್ತ ಆಹಾರ ಸೇವಿಸಿದಾಗ ದೇಹ ಬೆವರಲು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ದೇಹ ಬೆಚ್ಚಗಿರುವವರಲ್ಲಿ ಇದು ಕಂಡುಬರುತ್ತದೆ. ಊಟ ಮಾಡುವಾಗ ಬೆವರುವುದು ಕೆಲವರಿಗೆ ಸಾಮಾನ್ಯ, ಆದರೆ ಇತರರಿಗೆ ಇದು ಹಲವಾರು ಕಾಯಿಲೆಗಳ ಲಕ್ಷಣವಾಗಿರಬಹುದು.

ಊಟ ಮಾಡುವಾಗ ಬೆವರುವುದು ಮಧುಮೇಹದ ಲಕ್ಷಣವೇ?

ಡಾ. ಹಿಮಾಂಶು ಅವರು, ಊಟ ಮಾಡುವಾಗ ಬೆವರುವುದು ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಯಾರಿಗಾದರೂ ಮಧುಮೇಹವಿದ್ದರೆ, ಅದು ನರಗಳ ಹಾನಿಗೆ ಕಾರಣವಾಗಬಹುದು, ಹಾಗಾಗಿ ಇದು ಊಟ ಮಾಡುವಾಗ ಬೆವರುವಿಕೆಗೆ ಕಾರಣವಾಗುತ್ತದೆ, ಆದರೆ ಇದು ಎಲ್ಲಾ ಸಂದರ್ಭಗಳಲ್ಲಿಯೂ ಕಂಡುಬರುವುದಿಲ್ಲ. ಕೆಲವರಿಗೆ ಥೈರಾಯ್ಡ್ ಅಥವಾ ಹಾರ್ಮೋನುಗಳ ಬದಲಾವಣೆಗಳಿಂದಲೂ ಈ ರೀತಿ ಆಗಬಹುದು.

ಇದನ್ನೂ ಓದಿ: ಪದೇ ಪದೇ ಸಿಹಿತಿಂಡಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು!

ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆಯೇ?

ಸಾಮಾನ್ಯವಾಗಿ ದೊಡ್ಡವರಂತೆ ಮಕ್ಕಳು ಕೂಡ ಊಟ ಮಾಡುವಾಗ ಬೆವರಬಹುದು. ಮಕ್ಕಳು ಮಸಾಲೆಯುಕ್ತ ಆಹಾರ ಸೇವಿಸಿದಾಗ, ಅದನ್ನು ಜೀರ್ಣಿಸಿಕೊಳ್ಳಲು ದೇಹದ ಉಷ್ಣತೆಯು ಹೆಚ್ಚಾಗುತ್ತದೆ, ಇದು ಬೆವರುವಿಕೆಗೆ ಕಾರಣವಾಗುತ್ತದೆ. ಆದರೆ ಸಾಮಾನ್ಯ ಆಹಾರ ಸೇವಿಸುವಾಗಲೂ ಕೂಡ ಮಗು ಬೆವರುತ್ತಿದ್ದರೆ ಅಥವಾ ತೂಕ ವೇಗವಾಗಿ ಕಡಿಮೆಯಾಗುತ್ತಿದ್ದರೆ ಜೊತೆಗೆ ಆಹಾರ ಸೇವಿಸುವಾಗ ಹೃದಯ ಬಡಿತ ವೇಗವಾಗದರೆ ಇಂತಹ ಸಂದರ್ಭಗಳಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಊಟ ಮಾಡುವಾಗ ಬೆವರುವುದನ್ನು ತಡೆಯಲು ಸಲಹೆಗಳು:

  • ತುಂಬಾ ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ.
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
  • ದಿನಕ್ಕೆ ಕನಿಷ್ಠ 7 ಗ್ಲಾಸ್ ನೀರು ಕುಡಿಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು – Kannada News | K Manju said Producers lost 250 crore rs in three months

ಪ್ರತಿ ಶುಕ್ರವಾರ ಕನ್ನಡದ ಹಲವು ಸಿನಿಮಾಗಳು (Cinema) ಬಿಡುಗಡೆ ಆಗುತ್ತಲೇ ಇದೆ. ಆದರೆ ಗೆಲುವು ಕಾಣುತ್ತಿರುವುದು ಮಾತ್ರ ವರ್ಷಕ್ಕೆ ಬೆರಳೆಣಿಕೆಯಷ್ಟು ಸಿನಿಮಾಗಳು. ಸಿನಿಮಾ ಸೋತಾಗ ತೀವ್ರ ಬಾಧೆಗೆ ಗುರಿ ಆಗುವುದು ನಿರ್ಮಾಪಕರು. ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಕೆ ಮಂಜು, ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಕಳೆದ ನವೆಂಬರ್​​ನಿಂದ ಜನವರಿ ವರೆಗೆ ಕೇವಲ ಮೂರೇ ತಿಂಗಳಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು 250 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ’ ಎಂದಿದ್ದಾರೆ. ನಿರ್ಮಾಪಕರ ಇಂದಿನ ಸ್ಥಿತಿ ಚಿಂತಾಜನಕವಾಗಿದೆ. ಹೀಗಿರುವಾಗ ನಿರ್ಮಾಪಕರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ – Kannada News | PM Modi and Donald Trump announce India US trade deal Key Highlights

ನವದೆಹಲಿ, ಫೆಬ್ರವರಿ 3: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ನಿನ್ನೆ (ಸೋಮವಾರ) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಘೋಷಿಸಿದ ಈ ವ್ಯಾಪಾರ ಒಪ್ಪಂದವು ಹಲವಾರು ಅಂಶಗಳನ್ನು ಒಳಗೊಂಡಿದೆ. ಆದರೆ, ಟ್ರಂಪ್ ಘೋಷಿಸಿದ ಈ ಅಂಶಗಳ ಬಗ್ಗೆ ಭಾರತ ಸರ್ಕಾರ ಇನ್ನೂ ಸರಿಯಾದ ಸ್ಪಷ್ಟನೆ ನೀಡಿಲ್ಲ. ಕೇವಲ ವ್ಯಾಪಾರ ಒಪ್ಪಂದದ ಬಗ್ಗೆ ಮಾತ್ರ ಪ್ರಧಾನಿ ಮೋದಿ (PM Modi) ಖಚಿತಪಡಿಸಿದ್ದಾರೆ. ಅದರಲ್ಲಿರುವ ಉಳಿದ ವಿಷಯಗಳ ಬಗ್ಗೆ ಯಾವುದೇ ಸ್ಪಷ್ಟೀಕರಣವಾಗಲಿ, ದೃಢೀಕರಣವಾಗಲಿ ಬಂದಿಲ್ಲ.

ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ್ದರು. ಅದರಲ್ಲಿ ಶೇ. 25ರಷ್ಟು ಸುಂಕವನ್ನು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದಕ್ಕೆ ದಂಡದ ರೂಪದಲ್ಲಿ ವಿಧಿಸಲಾಗಿತ್ತು. ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡಿದೆ ಎಂದು ಟ್ರಂಪ್ ಪದೇ ಪದೇ ಹೇಳಿದ್ದರು.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯ ಮೂಲಕ ವ್ಯಾಪಾರ ಒಪ್ಪಂದವನ್ನು ದೃಢಪಡಿಸಿದ್ದರು “ಇಂದು ನನ್ನ ಆತ್ಮೀಯ ಗೆಳೆಯ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿ ಖುಷಿಯಾಯಿತು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇ. 18ರಷ್ಟು ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಶತಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್‌ಗೆ ಹೃತ್ಪೂರ್ವಕ ಧನ್ಯವಾದಗಳು. ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ ಅದು ನಮ್ಮ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಹಾಗೇ ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕಾಗಿ ಅಪಾರ ಅವಕಾಶಗಳನ್ನು ತೆರೆಯುತ್ತದೆ. ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ. ಶಾಂತಿಗಾಗಿ ಅವರ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಮೋದಿ ಹೇಳಿದ್ದರು.

ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ

ನಿನ್ನೆ ನಡೆದ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 7 ಪ್ರಮುಖ ಅಂಶಗಳು ಇಲ್ಲಿವೆ:

– ಭಾರತವು ಅಮೆರಿಕದ ರಫ್ತಿನ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಿದೆ.

– ಅಮೆರಿಕವು ಆಮದು ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲಿದೆ.

– ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ.

– ಭಾರತವು ಅಮೆರಿಕದಿಂದ ತೈಲ ಖರೀದಿಯನ್ನು ಹೆಚ್ಚಿಸಲಿದೆ.

– ಭಾರತವು ವೆನೆಜುವೆಲಾದಿಂದ ತೈಲ ಖರೀದಿಯನ್ನು ಪ್ರಾರಂಭಿಸಲಿದೆ.

ಆದರೆ, ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದಾಗಿ ಮಾತ್ರ ಘೋಷಿಸಿರುವ ಪ್ರಧಾನಿ ಮೋದಿ ಈ ಯಾವ ವಿಚಾರಗಳ ಬಗ್ಗೆಯೂ ಇನ್ನೂ ಸ್ಪಷ್ಟನೆ ನೀಡಿಲ್ಲ. ಇದು ಕೇವಲ ಟ್ರಂಪ್ ಮಾಡಿರುವ ಘೋಷಣೆಯಷ್ಟೇ. ಭಾರತದ ಇನ್ನೊಂದು ಆಪ್ತ ದೇಶವಾಗಿರುವ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಭಾರತವಾಗಲಿ ಅಥವಾ ರಷ್ಯಾವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಈ ಬಗ್ಗೆ ಇನ್ನೂ ಗೊಂದಲ ಉಳಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:02 pm, Tue, 3 February 26

Source link

ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ – Kannada News | Karnataka’s Sweet Neem Tree Mystery: Villagers Astonished by Miraculous Sap in Hanur

ಸಿಹಿ ಬೇವಿನ ಮರ ಹನೂರುImage Credit source: Tv9 kannada

ಚಾಮರಾಜನಗರ, ಫೆ.3: ಬೇವಿನ ಮರ ಕಹಿಯಾಗಿರುವುದನ್ನು ಕೇಳಿರಬಹುದು, ಆದರೆ ಯಾವತ್ತಾದರೂ ಸಿಹಿಯಾಗಿರುವುದನ್ನು ಕೇಳಿದ್ದೀರಾ? ಆದರೆ ಈ ಗ್ರಾಮದಲ್ಲಿ ಒಂದು ಅಚ್ಚರಿಯೇ ನಡೆದಿದೆ. ಇದೀಗ ಈ ಘಟನೆಗೆ ಇಡೀ ಗ್ರಾಮವೇ ದಿಗ್ಭ್ರಮೆಗೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬೇವಿನ ಮರವೊಂದು ಸಿಹಿ ದ್ರಾವಣವನ್ನು ಹರಿಸುವ ಮೂಲಕ ಭಾರಿ ಅಚ್ಚರಿ ಮೂಡಿಸಿದೆ. ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಮುನಿ ಸಿದ್ದ ಎಂಬುವವರ ಜಮೀನಿನಲ್ಲಿ ಈ ಬೇವಿನ ಮರವಿದೆ. ಸಾಮಾನ್ಯವಾಗಿ ಕಹಿಯಾಗಿರುವ ಬೇವಿನ ಮರದ ರೆಂಬೆ (Sweet Neem Tree )ಕೊಂಬೆಗಳಿಂದ ಬಿಳಿ ಬಣ್ಣದ ದ್ರಾವಣ ಬರುತ್ತಿದೆ. ಈ ದ್ರಾವಣವು ಬೆಲ್ಲದ ಪಾಕ ಅಥವಾ ಸಕ್ಕರೆಯಂತೆ ಸಿಹಿಯಾಗಿದೆ ಎಂದು ಅದನ್ನು ಸೇವಿಸಿದ ಗ್ರಾಮಸ್ಥರು ತಿಳಿಸಿದ್ದಾರೆ. ಮರದಿಂದ ಜಿನಗುತ್ತಿರುವ ಈ ಸಿಹಿ ದ್ರವವನ್ನು ಕಂಡ ಗ್ರಾಮಸ್ಥರು ಇದೊಂದು ಪವಾಡ ಎಂದು ನಂಬಿದ್ದಾರೆ.

ಇನ್ನು ಮರದ ಬುಡದ ಬಳಿ ಬಂದು ಸೇರುತ್ತಿರುವ ಈ ದ್ರಾವಣವನ್ನು ನೋಡಲು ಮತ್ತು ರುಚಿ ನೋಡಲು ಜನರು ಕುತೂಹಲದಿಂದ ಆಗಮಿಸುತ್ತಿದ್ದಾರೆ. ಬೇವಿನ ಮರದಿಂದ ಬಿಳಿ ದ್ರವ ಬರುವುದು ಸಾಮಾನ್ಯವಾದರೂ, ಅದು ಸಿಹಿಯಾಗಿರುವುದು ಇದೊಂದು ವಿಚಿತ್ರ ಘಟನೆಯಾಗಿದೆ. ಈ ದ್ರಾವಣವು ಯಾವ ರಾಸಾಯನಿಕ ಬದಲಾವಣೆಯಿಂದ ಸಿಹಿಯಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ. ಸಸ್ಯ ಶಾಸ್ತ್ರಜ್ಞರು ಅಥವಾ ರಸಾಯನಶಾಸ್ತ್ರಜ್ಞರು ಈ ದ್ರಾವಣವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದ ನಂತರವಷ್ಟೇ ಇದರ ಹಿಂದಿನ ಅಸಲಿ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಇನ್ನು ಸಾಮಾನ್ಯವಾಗಿ ಬೇವಿನ ಮರ ಕಹಿಯಿಂದ ಕೂಡಿರುತ್ತೆ ಬೇವಿನ ಎಲೆ ಬೇವಿನ ಕಾಯಿ ಕಹಿಯಾಗಿರುತ್ತೆ ಆದ್ರೆ ಈ ಬೇವಿನ ಮರದಲ್ಲಿ ಮಾತ್ರ ಹೇಗೆ ಸಿಹಿ ದ್ರಾವಣ ಬರುತ್ತಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ. ದೇಶದ ಹಲವೆಡೆ ಬೇವಿನ ಮರದಿಂದ ನೀರು ಬರುವುದು ಬಿಳಿ ದ್ರವ ಬರುವುದು ಕಂಡಿದ್ದೇವೆ, ಕೇಳಿದ್ದೇವೆ ಆದ್ರೆ ಈ ರೀತಿ ಸಿಹಿಯಾಗಿರುವುದು ಇದೆ ಮೊದಲಾಗಿದೆ. ಯಾವ ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ಸಿಹಿ ದ್ರವ್ಯ ಸೃಷ್ಠಿಯಾಗ್ತಾಯಿದೆ ಅನ್ನೋದೆ ನಿಜಕ್ಕೂ ಅಚ್ಚರಿಗಾಗಿದೆ ಎಂದು ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದು ಜಮೀನಿನ ಮಾಲೀಕ ಮುನಿ ಸಿದ್ದ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Cricket Rules 2026: ಟೆಸ್ಟ್ ಹಾಗೂ ಮಹಿಳಾ ಕ್ರಿಕೆಟ್​ನಲ್ಲಿ ನೂತನ ನಿಯಮಗಳು ಜಾರಿಗೆ – Kannada News | MCC New Cricket Rules 2026: Major Changes for Test, Women’s and Junior Game

ಕ್ರಿಕೆಟ್ ನಿಯಮಗಳನ್ನು ರೂಪಿಸುವ ಸರ್ವೋಚ್ಚ ಸಂಸ್ಥೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC), 2026 ಕ್ಕೆ ಆಟದಲ್ಲಿ ಪಾರದರ್ಶಕತೆ ಮತ್ತು ಉತ್ಸಾಹವನ್ನು ಹೆಚ್ಚಿಸಲು ಟೆಸ್ಟ್ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಹೊಸ ಕಾನೂನುಗಳನ್ನು ಘೋಷಿಸಿದೆ. ಈ ಪ್ರಕಾರ ಟೆಸ್ಟ್ ಕ್ರಿಕೆಟ್​ನಲ್ಲಿ (Test cricket) ಎಂಸಿಸಿ ತಂದಿರುವ ನೂತನ ನಿಯಮ ಬ್ಯಾಟಿಂಗ್ ತಂಡಕ್ಕೆ ಆಘಾತ ನೀಡಿದ್ದರೆ, ಬೌಲಿಂಗ್ ತಂಡಕ್ಕೆ ಮತ್ತೊಂದು ವಿಕೆಟ್ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ಮಹಿಳಾ ಕ್ರಿಕೆಟ್ ಹಾಗೂ ಜೂನಿಯರ್ ಕ್ರಿಕೆಟ್‌ನಲ್ಲಿ (13 ವರ್ಷದೊಳಗಿನವರು) ಬಳಸುವ ಚೆಂಡಿನ ತೂಕ ಹಾಗೂ ಸುತ್ತಳತೆಯಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಓವರ್ ಪೂರ್ಣಗೊಳ್ಳಲೇಬೇಕು

ಇಲ್ಲಿಯವರೆಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಂಪ್ರದಾಯವಿತ್ತು. ಅದೆನಂದರೆ, ದಿನದ ಆಟದ ಕೊನೆಯಲ್ಲಿ (ಕೊನೆಯ ಓವರ್‌ನಲ್ಲಿ) ಯಾವುದೇ ವಿಕೆಟ್ ಬಿದ್ದರೆ, ಆ ದಿನದ ಆಟವು ತಕ್ಷಣವೇ ಕೊನೆಗೊಳ್ಳುತ್ತಿತ್ತು. ಇದು ಬ್ಯಾಟಿಂಗ್ ತಂಡಕ್ಕೆ ನೆರವಾಗುತ್ತಿತ್ತು. ಮರುದಿನ ಬೆಳಿಗ್ಗೆ ತಮ್ಮ ತಂತ್ರದ ಪ್ರಕಾರ ಹೊಸ ಬ್ಯಾಟರ್ ಅನ್ನು ಕಳುಹಿಸುತ್ತಿದ್ದವು. ಆದರೆ, ಹೊಸ ಎಂಸಿಸಿ ಕಾನೂನು 12.5.2 ರ ಪ್ರಕಾರ.. ಈಗ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೂ, ಆ ಓವರ್ ಅನ್ನು ಪೂರ್ಣಗೊಳಿಸಬೇಕು. ಅಂದರೆ, ಹೊಸ ಬ್ಯಾಟರ್ ತಕ್ಷಣ ಕ್ರೀಸ್‌ಗೆ ಬಂದು ಆ ಓವರ್‌ನ ಉಳಿದ ಎಸೆತಗಳನ್ನು ಎದುರಿಸಬೇಕು. ಇದು ಫೀಲ್ಡಿಂಗ್ ತಂಡಕ್ಕೆ ಬ್ಯಾಟರ್ ಮೇಲೆ ಒತ್ತಡವನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ.

ಚೆಂಡಿನ ತೂಕ ಮತ್ತು ಗಾತ್ರ ಬದಲಾವಣೆ

ಇನ್ನು ಮಹಿಳಾ ಕ್ರಿಕೆಟ್​ಗೆ ಸಂಬಂಧಿಸಿದಂತೆ​ ಎಂಸಿಸಿ ಚೆಂಡಿನ ತೂಕ ಮತ್ತು ಗಾತ್ರವನ್ನು ಬದಲಾಯಿಸಿದೆ. ಇಲ್ಲಿಯವರೆಗೆ, ಮಹಿಳಾ ಕ್ರಿಕೆಟ್‌ನಲ್ಲಿ ಚೆಂಡಿನ ತೂಕ 140 ರಿಂದ 151 ಗ್ರಾಂಗಳ ನಡುವೆ ಇತ್ತು. ಈಗ ಅದನ್ನು 140 ರಿಂದ 149 ಗ್ರಾಂಗಳಿಗೆ ಇಳಿಸಲಾಗಿದೆ. ಚೆಂಡಿನ ಗಾತ್ರವನ್ನು 21.5 ರಿಂದ 22 ಸೆಂಟಿಮೀಟರ್‌ಗಳಿಗೆ ನಿರ್ಧರಿಸಲಾಗಿದೆ. ಇದು ಬೌಲರ್‌ಗಳು ವೇಗವಾಗಿ ಬೌಲಿಂಗ್ ಮಾಡಲು ಮತ್ತು ಬ್ಯಾಟರ್‌ಗಳು ದೊಡ್ಡ ಹೊಡೆತಗಳನ್ನು ಹೊಡೆಯಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ, ಜೂನಿಯರ್ ಕ್ರಿಕೆಟ್‌ನಲ್ಲೂ ಬದಲಾವಣೆ ತರಲಾಗಿದೆ. 13 ವರ್ಷದೊಳಗಿನವರ ಜೂನಿಯರ್ ಕ್ರಿಕೆಟ್‌ನಲ್ಲಿ ಬಳಸುವ ಚೆಂಡಿನ ತೂಕವನ್ನು 140-144 ಗ್ರಾಂಗೆ ನಿಗದಿಪಡಿಸಲಾಗಿದೆ. ಇದರ ಗಾತ್ರವನ್ನು 20.5 ರಿಂದ 21 ಸೆಂಟಿಮೀಟರ್‌ಗಳ ನಡುವೆ ಬದಲಾಯಿಸಲಾಗಿದೆ. ಭವಿಷ್ಯದಲ್ಲಿ ಹಿರಿಯರ ಮಟ್ಟಕ್ಕೆ ಹೋದಾಗ ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಉದಯೋನ್ಮುಖ ಆಟಗಾರರು ಸರಿಯಾದ ತೂಕದ ಚೆಂಡಿನೊಂದಿಗೆ ಅಭ್ಯಾಸ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ನಿಯಮಗಳು ಯಾವಾಗ ಜಾರಿಗೆ ಬರುತ್ತವೆ?

ಹೊಸ ನಿಯಮಗಳು ಜನವರಿ 2026 ರಿಂದ ಪ್ರಪಂಚದಾದ್ಯಂತದ ಎಲ್ಲಾ ಅಧಿಕೃತ ಕ್ರಿಕೆಟ್ ಪಂದ್ಯಗಳಿಗೆ ಅನ್ವಯಿಸುತ್ತವೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಂದಿರುವ ನೂತನ ನಿಯಮದಿಂದಾಗಿ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆಗಳಿವೆ. ವಿಶೇಷವಾಗಿ ಡ್ರಾ ಕಡೆಗೆ ಸಾಗುತ್ತಿರುವ ಪಂದ್ಯಗಳಲ್ಲಿ ನಿರ್ದಿಷ್ಟ ಫಲಿತಾಂಶವನ್ನು ನಿರೀಕ್ಷಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೃದಯ ಸಮುದ್ರ ಕಲಕಿದ್ದ ಸಂಗೀತ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ – Kannada News | Famous music director SP Venkatesh passed away in Chennai

‘ಅಶ್ವಮೇಧ’ ಸಿನಿಮಾದ (Cinema) ‘ಹೃದಯ ಸಮುದ್ರ ಕಲಕಿ’ ಸೇರಿದಂತೆ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಎಸ್​​ಪಿ ವೆಂಕಟೇಶ್ ಅವರು ಇಂದು (ಫೆಬ್ರವರಿ 03) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೆಳೆದಿದ್ದಾರೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ವೆಂಕಟೇಶ್ ನಿಧನಕ್ಕೆ ತಮಿಳು, ಮಲಯಾಳಂನ ಹಲವಾರು ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಗಿಟಾರಿಸ್ಟ್ ಆಗಿ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಎಸ್​​​ಪಿ ವೆಂಕಟೇಶ್ ಅವರು ನೂರಾರು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಿಗೂ ಸಹ ಸಂಗೀತ ನೀಡಿದ್ದಾರೆ. ಅದರಲ್ಲೂ ಮಲಯಾಳಂ ಮತ್ತು ತಮಿಳಿನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಶ್ರೇಯ ಎಸ್​​ಪಿ ವೆಂಕಟೇಶ್ ಅವರದ್ದಾಗಿದೆ.

ಕನ್ನಡದಲ್ಲಿ ಸಹ ಹಲವಾರು ಸಿನಿಮಾಗಳಿಗೆ ವೆಂಕಟೇಶ್ ಅವರು ಸಂಗೀತ ನೀಡಿದ್ದಾರೆ. ‘ಪ್ರೇಮ ಯುದ್ಧ’ ಸಿನಿಮಾದಿಂದ ಆರಂಭಿಸಿದ, ‘ಅಶ್ವಮೇಧ’, ‘ಶರವೇಗದ ಸರದಾರ’, ‘ಸುಂದರಕಾಂಡ’, ‘ಪಂಚಮವೇದ’, ‘ಮೇಘ ಮಂದಾರ’ ಇನ್ನೂ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಎಸ್​​ಪಿ ವೆಂಕಟ್ ನೀಡಿರುವ ‘ಹೃದಯ ಸಮುದ್ರ ಕಲಕಿ’ ಹಾಡನ್ನು ಕೇಳದ ಕನ್ನಡಿಗನೇ ಇಲ್ಲ ಎನ್ನಬಹುದೇನು.

ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ?

ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯೂಂಕಿ’ಗೆ ಸಂಗೀತ ನೀಡಿರುವುದು ವೆಂಕಟೇಶ್. ಮಾತ್ರವಲ್ಲದೆ, ಅನಿಲ್ ಕಪೂರ್-ಟಬು ನಟನೆಯ ‘ಥೇವರ್ ಮಗನ್’ ಸಿನಿಮಾ ರೀಮೇಕ್ ‘ವಿರಾಸತ್’ಗೂ ವೆಂಕಟೇಶ್ ಅವರದ್ದೇ ಸಂಗೀತ. ಹಿಂದಿಯ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹಂಗಾಮ’ಗೂ ವೆಂಕಟೇಶ್ ಅವರದ್ದೇ ಸಂಗೀತ. ಮಲಯಾಳಂನಲ್ಲಂತೂ ಹಲವಾರು ಸಿನಿಮಾಗಳಿಗೆ ವೆಂಕಟೇಶ್ ಸಂಗೀತ ನೀಡಿದ್ದಾರೆ.

ವೆಂಕಟೇಶ್ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದ ಕೆಲವು ಖ್ಯಾತ ಗಾಯಕರು, ಸಂಗೀತಕರ್ಮಿಗಳು ಸಹ ಎಸ್​​ಪಿ ವೆಂಕಟೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ ಅವರ ಅಂತಿಮ ಕಾರ್ಯಗಳು ನಾಳೆ (ಫೆಬ್ರವರಿ 04) ಚೆನ್ನೈನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್​​ಟಿಓ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲು, – Kannada News | Karnataka RTO Officers Exposed Again, Without Inspection Officer Issues CC To Buses With Tampered Chassis

ಬೆಂಗಳೂರು, (ಫೆಬ್ರವರಿ 03): ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲಾಗಿದೆ. ಸಾಕಷ್ಟು ಬ್ರೋಕರ್ ಗಳು ಬೇರೆ ಬೇರೆ ರಾಜ್ಯಗಳಲ್ಲಿ ನಕಲಿ ದಾಖಲೆಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಮತ್ತೆ ಎಲೆಕ್ಟ್ರಾನಿಕ್ ಸಿಟಿ ಮತ್ತು ಚಂದಾಪುರ ಆರ್ಟಿಓದಲ್ಲಿ ಕ್ಲಿಯರೆನ್ಸ್ ಮಾಡಿಸಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆದ್ರೆ, ಅಧಿಕಾರಿಗಳು ಮಾತ್ರ ‌ಬಸ್ಸುಗಳನ್ನು ತಪಾಸಣೆ ಮಾಡದೆಯೇ  ಬಸ್ಸುಗಳಿಗೆ ಸಿಸಿ ನೀಡುತ್ತಿರುವುದು ಬಯಲಾಗಿದೆ. ಈ ಬಗ್ಗೆ ದೂರುದಾರ ಪ್ರವೀಣ್ ಎಂಬುವರು ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಸಿನಿಮಾದ 20 ನಿಮಿಷ ದೃಶ್ಯಕ್ಕೆ ಕತ್ತರಿ? ವಿಜಯ್​​​ಗೆ ನಿರಾಸೆ – Kannada News | Producer agrees to cut 20 minutes scene from Jana Nayagan movie

ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗಿರುವ ‘ಜನ ನಾಯಗನ್’ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ರೀಮೇಕ್ ಸಿನಿಮಾ ಆಗಿದ್ದರೂ ಸಹ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನಿರಾಕರಿಸಿದ್ದು, ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ನ್ಯಾಯಾಲಯದಲ್ಲಿ ಸಹ ಚಿತ್ರತಂಡಕ್ಕೆ ನ್ಯಾಯ ವಿಳಂಬ ಆಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಹ ಸನಿಹದಲ್ಲೇ ಇದ್ದು, ಒಂದೊಮ್ಮೆ ಚುನಾವಣೆ ಘೋಷಣೆ ಆಗಿಬಿಟ್ಟರೆ ಸಿನಿಮಾ ಬಿಡುಗಡೆ ಎರಡು ತಿಂಗಳು ಮುಂದೂಡಲೇ ಬೇಕಾಗುತ್ತದೆ. ಇದೇ ಕಾರಣಕ್ಕೆ ಇದೀಗ ಚಿತ್ರತಂಡವು, ಆಗಿದ್ದು ಆಗಲೆಂದು 20 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿದೆ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾವು ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದೆ. ಆದರೆ ವಿಜಯ್ ಅವರಿಗೆ ರಾಜಕೀಯವಾಗಿ ಅನುಕೂಲವಾಗಲೆಂದು ಕೆಲವು ದೃಶ್ಯಗಳನ್ನು, ಸಂಭಾಷಣೆಗಳನ್ನು ಸೇರಿಸಲಾಗಿದೆಯಂತೆ. ವಿಜಯ್ ಅವರ ರಾಜಕೀಯ ಪಕ್ಷದ ಸಿದ್ಧಾಂತ, ಆದರ್ಶಗಳ ಪ್ರಚಾರ ಮಾಡುವಂಥ ಕೆಲವು ಸಂಭಾಷಣೆಗಳಿವೆ, ಜೊತೆಗೆ ವಿಪಕ್ಷಗಳನ್ನು ಟೀಕೆ ಮಾಡುವ ಕೆಲವು ಸಂಭಾಷಣೆ, ದೃಶ್ಯಗಳು ಸಿನಿಮಾನಲ್ಲಿದ್ದು ಇದೇ ಕಾರಣಕ್ಕೆ ಸಿಬಿಎಫ್​​ಸಿ ‘ಜನ ನಾಯಗನ್’ಗೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣ ತಡವಾಗುವ ಸಂಭವ ಇರುವ ಕಾರಣ, ಚಿತ್ರತಂಡವು ಇದೀಗ ಎಲ್ಲ ರಾಜಕೀಯ ಸಂಬಂಧಿಸಿದ ದೃಶ್ಯಗಳಿಗೂ ಕತ್ತರಿ ಹಾಕಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿರುವ ರಾಜಕೀಯ ಅಂಶಗಳಿಂದಾಗಿಯೇ ಸಿನಿಮಾ ವಿವಾದಕ್ಕೆ ಸಿಲುಕಿದ್ದು, ವಿವಾದಕ್ಕೆ ಕಾರಣವಾದ ಎಲ್ಲ ದೃಶ್ಯಗಳು, ಸಂಭಾಷಣೆಗಳನ್ನು ತೆಗೆದು ಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಇದರಿಂದ, ನ್ಯಾಯಾಲಯದ ವಿಚಾರಣೆ ಇಲ್ಲದೆ, ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲಿದ್ದು, ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಘೋಷಣೆ ಆಗಲಿದ್ದು, ತಮಿಳುನಾಡಿನ ಎಲ್ಲ ಕ್ಷೇತ್ರದಿಂದಲೂ ವಿಜಯ್ ಅವರ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ‘ಜನ ನಾಯಗನ್’ ಸಿನಿಮಾವನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸುವ ಯೋಜನೆ ಹಾಕಿಕೊಂಡಿದ್ದರು ವಿಜಯ್, ಆದರೆ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕಿದೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟಿ ಮಮಿತಾ ಬಿಜು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್​​ ನಿರ್ಮಾಣ ಸಂಸ್ಥೆಯ ಮಾಲೀಕ ವೆಂಕಟ್. ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ಸಮಯಪ್ರಜ್ಞೆಯಿಂದ ಬೆಂಗಳೂರಿನಲ್ಲಿ ತಪ್ಪಿದ ಭಾರೀ ದೊಡ್ಡ ದುರಂತ – Kannada News | Akshayanagar Explosives: Bengaluru Police Action Foils Illegal Blasting Operation

ಹುಳಿಮಾವು ಪ್ರದೇಶದಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ

ಬೆಂಗಳೂರು, ಫೆ.3: ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯನಗರದಲ್ಲಿ ಈ ಘಟನೆ ನಡೆದಿದೆ. ಚಂದ್ರು ಎಂಬುವವರ ಮಾಲೀಕತ್ವದ 100×100 ಅಳತೆಯ ಸೈಟ್‌ನಲ್ಲಿ ಬಂಡೆ ಒಡೆಯಲು ಅನುಮತಿ ಇಲ್ಲದೆ ಜಿಲೆಟಿನ್ ಕಡ್ಡಿಗಳನ್ನು (Bengaluru explosives seizure) ಬಳಸಲಾಗುತ್ತಿತ್ತು. ಮಧ್ಯಾಹ್ನ 10:30 ರಿಂದ 2 ಗಂಟೆಯ ಅವಧಿಯಲ್ಲಿ ಜನನಿಬಿಡ ಪ್ರದೇಶದಲ್ಲೇ ಈ ಸ್ಫೋಟ ನಡೆಸಲಾಗುತ್ತಿತ್ತು. ವಿಷಯ ತಿಳಿದ ತಕ್ಷಣ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಿಂದ 15 ಜಿಲೆಟಿನ್ ಕಡ್ಡಿಗಳು ಮತ್ತು 30 ಡಿಟೋನೇಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಒಂದು ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೆಲ್ಲರೂ ಪರಾರಿಯಾಗಿದ್ದಾರೆ. ಹುಳಿಮಾವು ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ.

ಇದನ್ನೂ ಓದಿ: ಕಟ್ಟಡ ಮಾಲೀಕರಿಗೆ ಬಿಗ್​​ ಶಾಕ್ ನೀಡಿದ GBA: 437 ಕೋಟಿ ರೂ. ತೆರಿಗೆ ಬಾಕಿ

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸೈಟ್ ಮಾಲೀಕ ಚಂದ್ರು ಎಂಬುವವರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಸಂಗ್ರಹಿಸಿ ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಪರವಾನಗಿ ಇಲ್ಲದೆ ಅಪಾಯಕಾರಿ ಸ್ಫೋಟಕಗಳನ್ನು ಬಳಸಿದ್ದಕ್ಕಾಗಿ ಸೈಟ್ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಬಾಂಬ್ ಸ್ಕ್ವಾಡ್ ಪರಿಶೀಲನೆಯ ನಂತರ ಸ್ಫೋಟಕಗಳ ಮೂಲದ ಬಗ್ಗೆ ವರದಿ ಸಲ್ಲಿಕೆಯಾಗಲಿದ್ದು, ಅದರ ಆಧಾರದ ಮೇಲೆ ನ್ಯಾಯಾಲಯದ ವಿಚಾರಣೆ ಮುಂದುವರಿಯಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version