ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಅಜ್ಮೇರ್, ಏಪ್ರಿಲ್ 9: ಬಟ್ಟೆ ಒಗೆಯುವ ಕಾಯದ ಧೋಬಿಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ಬರೋಬ್ಬರಿ 598 ಕೋಟಿ ರೂಗಳ ಟ್ಯಾಕ್ಸ್ ನೋಟೀಸ್ ಬಂದಿದೆ. ಧೋಬಿ ಹೆಸರಲ್ಲಿ ದೊಡ್ಡ ಪ್ರಮಾಣದ ಡೈಮಂಡ್ ವ್ಯಾಪಾರ ನಡೆದಿದ್ದ ಹಿನ್ನೆಲೆಯಲ್ಲಿ ಇನ್ಕಮ್ ಟ್ಯಾಕ್ಸ್ ಇಲಾಖೆಯು ಆತನ ಬೆನ್ನು ಬಿದ್ದಿದೆ. ರಾಜಸ್ಥಾನದ ಅಜ್ಮೇರ್ ನಗರದ ರಾಮಗಂಜ್ ಎಂಬಲ್ಲಿನ ರಸ್ತೆಬದಿಯಲ್ಲಿ ಬಟ್ಟೆ ಒಗೆಯುವ ಮತ್ತು ಇಸ್ತ್ರಿ ಮಾಡುವ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ ಕುಮಾರ್ ಎನ್ನುವ ಈ ಅಮಾಯಕ ವ್ಯಕ್ತಿ ಈಗ ನೂರಾರು ಕೋಟಿ ರೂ ಮಾತುಗಳನ್ನು ಕೇಳಿ ದಿಕ್ಕು ತೋಚದಂತಾಗಿದ್ದಾನೆ.

ಬ್ಯಾಂಕ್ ಅಕೌಂಟ್ ಇವನದ್ದಲ್ಲ… ಆದರೆ, ನೋಟೀಸ್ ಯಾಕೆ?

ಜಿತೇಂದ್ರ ಕುಮಾರ್ ಅವರ ಹೆಸರಿನಲ್ಲಿ ಇರುವ ಬ್ಯಾಂಕ್ ಅಕೌಂಟ್​ನಿಂದ ನೂರಾರು ಕೋಟಿ ರೂ ಮೊತ್ತದ ವಹಿವಾಟು ನಡೆದಿದೆ. ಆದರೆ, ಇವರನ್ನು ಕೇಳಿದಾಗ, ಆ ಬ್ಯಾಂಕ್ ಅಕೌಂಟ್ ತನ್ನದಲ್ಲ. ತನಗೇನೂ ಗೊತ್ತಿಲ್ಲ ಎಂದಿದ್ದಾನೆ. ಆದರೆ, ಎರಡು ವರ್ಷದ ಹಿಂದೆ ಪಾಲಿಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದಾಗಿ ಒಂದು ಮಾಹಿತಿ ನೀಡುತ್ತಾನೆ.

ಇದನ್ನೂ ಓದಿ: ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಜಿತೇಂದ್ರ ಕುಮಾರ್ ಅವರು ವಕೀಲರೊಬ್ಬರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವಕೀಲ ರಾಕೇಶ್ ತಾಡ ಅವರು ಪಾಲಿಯಲ್ಲಿರುವ ಯಾರೂ ವ್ಯಾಪಾರಿಯು ಜಿತೇಂದ್ರನ ಅಕೌಂಟ್ ಅನ್ನು ನಿಭಾಯಿಸುತ್ತಿರಬಹುದು ಎಂದು ಅನುಮಾನಿಸಿದ್ದಾರೆ. ಬ್ಯಾಂಕ್ ಹಾಗೂ ಅಕೌಂಟ್ ನಿಭಾಯಿಸುತ್ತಿರುವ ವ್ಯಕ್ತಿಯ ವಿರುದ್ಧ ಎಫ್​ಐಆರ್ ಸಲ್ಲಿಸಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ.

‘598 ಕೋಟಿ ರೂ ವಹಿವಾಟು ನಡೆಸಲಾಗಿರುವುದರ ವಿವರ ಕೇಳಿ ಐಟಿ ಇಲಾಖೆ ಶೋಕಾಸ್ ನೋಟೀಸ್ ಕೊಟ್ಟಿದೆ. ನಾವು ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದೇವೆ’ ಎಂದು ರಾಕೇಸ್ ತಾಡ ಮಾಹಿತಿ ನೀಡಿದ್ದಾರೆ.

ಪ್ಯಾನ್ ಕಾರ್ಡ್ ಕಳುವಾದರೆ ಏನು ಮಾಡಬೇಕು?

ಪ್ಯಾನ್ ಮತ್ತು ಆಧಾರ್ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಗುರುತಿನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು, ಅದಕ್ಕೆ ನಿಮ್ಮ ಪ್ಯಾನ್ ಅನ್ನು ನೀಡಲಾಗುತ್ತದೆ. ಆ ಅಕೌಂಟ್​ನಲ್ಲಿ ಏನೇ ವಹಿವಾಟು ಆದರೂ ಪ್ಯಾನ್​ನಲ್ಲಿ ದಾಖಲಾಗುತ್ತದೆ. ಇದರಿಂದ ವಂಚಕರು ಸಿಕ್ಕಿಬೀಳುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಇಂಥ ದುರ್ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಅಪರಿಚಿತರಿಗೆ ಮೊಬೈಲ್ ಒಟಿಪಿ ನೀಡಬಾರದು. ಆಗಾಗ್ಗೆ ಕ್ರೆಡಿಟ್ ಸ್ಕೋರ್ ಪರಿಶೀಲಿಸಬೇಕು. ಕ್ರೆಡಿಟ್ ರಿಪೋರ್ಟ್ ಕೂಡ ತೆಗೆಸುತ್ತಿರಬೇಕು. ಅದರಲ್ಲಿ ಪ್ಯಾನ್ ಅಡಿಯಲ್ಲಿ ಏನೇನು ವಹಿವಾಟು ನಡೆದಿದೆ ಎಲ್ಲವೂ ದಾಖಲಾಗಿರುತ್ತದೆ. ನಿಮ್ಮ ಸಮ್ಮತಿ ಇಲ್ಲದೆ ಯಾವುದಾದರೂ ವಹಿವಾಟು ನಡೆದಿದ್ದರೆ ದೂರು ಕೊಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್

ಪುದುಚೇರಿ, ಏಪ್ರಿಲ್ 9: ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ (AINRC) ಮುಖ್ಯಸ್ಥ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆ ವೇಳೆ ಸರಳತೆ ಮೆರೆದಿದ್ದಾರೆ. ಮಂಗಲಂ, ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಅವರು, ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತದಾನದ ಬಳಿಕ ಅದೇ ಬೈಕ್‌ನಲ್ಲಿ ಮರಳಿದ ಸಿಎಂ ಅವರ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಡಿಯೋ ಕೃಪೆ: ಎಎನ್​ಐ

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಹೀಗೆ ಮಾಡಿದ್ರೆ ಮಾತ್ರ RCB ಇಬ್ಬರನ್ನು ಜೊತೆಯಾಗಿ ಕಣಕ್ಕಿಳಿಸಬಹುದು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಶುಕ್ರವಾರ (ಏ.10) ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವ ವಿದೇಶಿ ವೇಗಿ ಯಾರು ಎಂಬುದೇ ಈಗ ಕುತೂಹಲ. ಏಕೆಂದರೆ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್​ವುಡ್ ಇದೀಗ ಸಂಪೂರ್ಣ ಫಿಟ್​ ಆಗಿದ್ದಾರೆ. ಹೀಗಾಗಿ ಅವರು ಆರ್​ಆರ್​ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಜೇಕಬ್ ಡಫಿ ಆಡುವ ಬಳಗದಿಂದ ಹೊರಗುಳಿಯಬೇಕಾಗಬಹುದು.

ಆದರೆ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಈ ಒಂದು ತಂತ್ರ ಅನುಸರಿಸಿದರೆ, ಇಬ್ಬರು ವಿದೇಶಿ ವೇಗಿಗಳನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್​ಸಿಬಿ ಮುಂದಿರುವ ಆಯ್ಕೆಗಳು ಈ ಕೆಳಗಿನಂತಿವೆ…

  • ಐಪಿಎಲ್ ನಿಯಮದ ಪ್ರಕಾರ ಒಂದು ಪಂದ್ಯದಲ್ಲಿ ಗರಿಷ್ಠ ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ. ಪ್ರಸ್ತುತ ಆರ್‌ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಪ್ರಮುಖ ವಿದೇಶಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ನಡುವೆ ಇಬ್ಬರು ವಿದೇಶಿ ವೇಗಿಗಳನ್ನು ಸೇರಿಸುವುದು ಸವಾಲಿನ ಕೆಲಸ.

ಇಬ್ಬರನ್ನೂ ಆಡಿಸಲು ಇರುವ ಆಯ್ಕೆಗಳು:

ಒಬ್ಬ ವಿದೇಶಿ ಬ್ಯಾಟರ್ ಅನ್ನು ಕೈಬಿಡುವುದು:  ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಆರ್‌ಸಿಬಿ ಒಬ್ಬ ವಿದೇಶಿ ಪವರ್-ಹಿಟ್ಟರ್ ಅನ್ನು ಕೈಬಿಡಬೇಕಾಗುತ್ತದೆ. ಅಂದರೆ ಫಿಲ್ ಸಾಲ್ಟ್ ಅಥವಾ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್​… ಇವರಲ್ಲಿ ಇಬ್ಬರನ್ನು ಕೈ ಬಿಡುವುದು ಅನಿವಾರ್ಯ.

ಫಿಲ್ ಸಾಲ್ಟ್​ಗೆ ಕೊಕ್: ಆರ್​ಸಿಬಿ ಮ್ಯಾನೇಜ್ಮೆಂಟ್​ ಫಿಲ್ ಸಾಲ್ಟ್ ಬದಲಿಗೆ ಜೋಶ್ ಹೇಝಲ್‌ವುಡ್ ಅಥವಾ ಜೇಕಬ್ ಡಫಿ ಅವರನ್ನು ಆಡಿಸಿದರೆ, ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಬಹುದು.

ಫಿನಿಶರ್ ಬದಲಿಗೆ: ಸ್ಪೋಟಕ ದಾಂಡಿಗ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್ ಬದಲಿಗೆ ಹೆಚ್ಚುವರಿ ವಿದೇಶಿ ಬೌಲರ್ ಅನ್ನು ಆಯ್ಕೆ ಮಾಡಿದರೆ, ಕೆಳ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅವರು ಫಿನಿಶಿಂಗ್ ಜವಾಬ್ದಾರಿ ಹೊರಬೇಕಾಗುತ್ತದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಕೆ:

ಐಪಿಎಲ್​ನ ಇಂಪ್ಯಾಕ್ಟ್ ಪ್ಲೇಯರ್  ನಿಯಮವನ್ನು ಚಾಣಾಕ್ಷತನದಿಂದ ಬಳಸಿಕೊಂಡರೆ ಆರ್​ಸಿಬಿ ಜೋಶ್ ಹೇಝಲ್​ವುಡ್ ಹಾಗೂ ಜೇಕಬ್ ಡಫಿಯನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್​ಸಿಬಿ ಮಾಡಬೇಕಿರುವುದು…

  • 3 ವಿದೇಶಿ ಆಟಗಾರರು: ಪಂದ್ಯದ ಆರಂಭದಲ್ಲಿ ಆರ್​ಸಿಬಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಹೆಸರಿಸಬೇಕು.
  • ಇಂಪ್ಯಾಕ್ಟ್ ಸಬ್: ಮೊದಲು ಬ್ಯಾಟಿಂಗ್ ಮಾಡುವಾಗ ಮೂವರು ವಿದೇಶಿ ಆಟಗಾರರೊಂದಿಗೆ ಆಡಿ, ನಂತರ ಬೌಲಿಂಗ್ ಮಾಡುವಾಗ ಒಬ್ಬ ಭಾರತೀಯ ಬ್ಯಾಟರ್ ಬದಲಿಗೆ ಜೇಕಬ್ ಡಫಿ ಅಥವಾ ಜೋಶ್ ಹೇಝಲ್​ವುಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತರಬಹುದು.
  • ಏನು ಮಾಡಬೇಕು: ಇದಕ್ಕಾಗಿ ಆರ್​ಸಿಬಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಹಾಗೂ ಜೋಶ್ ಹೇಝಲ್​ವುಡ್​ ಅವರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಸೇರಿಸಬೇಕು. ಅಲ್ಲದೆ ರೊಮಾರಿಯೊ ಶೆಫರ್ಡ್​ ಹಾಗೂ ಜೇಕಬ್ ಡಫಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿರಿಸಬೇಕು.
  • ಮಾಸ್ಟರ್ ಪ್ಲ್ಯಾನ್: ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮತ್ತೋರ್ವ ವಿದೇಶಿ ಆಟಗಾರನನ್ನು ಕಣಕ್ಕಿಳಿಸಬಹುದು. ಅದರಂತೆ ಬ್ಯಾಟಿಂಗ್​ಗೆ ಅನಿವಾರ್ಯತೆ ಇದ್ದರೆ ಮಾತ್ರ ರೊಮಾರಿಯೋ ಶೆರ್ಫಡ್​ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬೇಕು. ಒಂದು ವೇಳೆ ಆರ್​ಸಿಬಿ ತಂಡಕ್ಕೆ ರೊಮಾರಿಯೊ ಶೆಫರ್ಡ್ ಅವರ ಬ್ಯಾಟಿಂಗ್​ನ ಅನಿವಾರ್ಯತೆ ಬರದಿದ್ದರೆ, ಬೌಲಿಂಗ್ ವೇಳೆ ಜೇಕಬ್ ಡಫಿಯನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಬಹುದು.

ಈ ಮೂಲಕ ಜೇಕಬ್ ಡಫಿ ಹಾಗೂ ಜೋಶ್ ಹೇಝಲ್​ವುಡ್​ ಅವರನ್ನು ಆರ್​ಸಿಬಿ ಜೊತೆಯಾಗಿ ಕಣಕ್ಕಿಳಿಸಬಹುದು. ಅಂದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಜೇಕಬ್ ಡಫಿಯನ್ನು ಆಡಿಸಲು ಬಯಸಿದರೆ, ಆರ್​ಸಿಬಿ ಮೊದಲು ಬ್ಯಾಟಿಂಗ್​ ಮಾಡುವಾಗ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಯ್ಕೆ ಮಾಡುವುದು ಅನಿವಾರ್ಯ.

ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ರೊಮಾರಿಯೋ ಶೆಫರ್ಡ್ ಹಾಗೂ ಜೇಕಬ್ ಡಫಿ ಅವರನ್ನು ಸೇರ್ಪಡೆಗೊಳಿಸಬೇಕು. ಇಲ್ಲಿ ಆರ್​ಸಿಬಿ ಬೇಗನೆ ಹೆಚ್ಚಿನ ವಿಕೆಟ್ ಕಳೆದುಕೊಂಡರೆ ಮಾತ್ರ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು. ಒಂದು ವೇಳೆ ಆರ್​ಸಿಬಿ 3 ಅಥವಾ 4 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಿದರೆ ಶೆಫರ್ಡ್ ಅವಶ್ಯಕತೆ ಎದುರಾಗುವುದಿಲ್ಲ.

ಇದನ್ನೂ ಓದಿ: VIDEO: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!

ಹೀಗಾಗಿ ಬ್ಯಾಟಿಂಗ್ ವೇಳೆ ಇಂಪ್ಯಾಕ್ಟ್ ಪ್ಲೇಯರ್​ನನ್ನು ಬಳಸಿಕೊಳ್ಳದಿರುವುದು ಉತ್ತಮ. ಅಲ್ಲದೆ ಬೌಲಿಂಗ್ ವೇಳೆ ಓರ್ವ ಬ್ಯಾಟರ್​ನನ್ನು ಕೈ ಬಿಟ್ಟು ಜೇಕಬ್ ಡಫಿ ಅನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೋಶ್ ಹೇಝಲ್​ವುಡ್ ಹಾಗೂ ಜೇಕಬ್ ಡಫಿ ಎಂಬ ವೇಗಾಸ್ತ್ರದೊಂದಿಗೆ ಕಣಕ್ಕಿಳಿಯಬಹುದು.

 

Source link

ಬಾಗಲಕೋಟೆ ಬೈ ಎಲೆಕ್ಷನ್​​: ಮತದಾರರಿಗೆ ಹಣ ಹಂಚಿತಾ ಕಾಂಗ್ರೆಸ್​​?; ವಿಡಿಯೋ ವೈರಲ್​​

ಬಾಗಲಕೋಟೆ, ಏಪ್ರಿಲ್​​ 09: ಉಪ ಚುನಾವಣೆ ಗೆಲ್ಲಲು ಕಾಂಗ್ರೆಸಿಗರು ಕೋಟ್ಯಾಂತರ ರೂಪಾಯಿ ಹಣವನ್ನು ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ದೂರಿದ್ದ ಬೆನ್ನಲ್ಲೇ ಮತದಾರರಿಗೆ ಕಾಂಗ್ರೆಸಿಗರು 500 ರೂಪಾಯಿ ಹಂಚಿರುವ ಆರೋಪ ಕೇಳಿಬಂದಿದೆ. ನವನಗರದ ವಾಂಬೆ ಕಾಲೋನಿಯಲ್ಲಿ ಕಾರಲ್ಲಿ ಬಂದವರು ಮತದಾರರಿಗೆ ಹಣ ನೀಡಿ ಆಮಿಷವೊಡ್ಡಿದ್ದು, ಕಾಂಗ್ರೆಸಿಗರು ಕೇವಲ ಐದುನೂರು ಕೊಟ್ಟರು ಎಂದು ಮಹಿಳೆಯೋರ್ವರು ಅಲವತ್ತುಕೊಂಡ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ಮುಂಜಾನೆ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತ ಬೆಂಗಳೂರಿನ ಯುವತಿ

ಬೆಂಗಳೂರು, ಏಪ್ರಿಲ್‌ 09: ಹೆಣ್ಣಿನ ಅಂದ ಚಂದವನ್ನು ಹೆಚ್ಚಿಸುವುದೇ ಈ ಸೀರೆ . ಎಷ್ಟೇ ಫ್ಯಾಶನ್‌, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಮೈಸೂರು ಸಿಲ್ಕ್ ಸೀರೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಹೀಗಾಗಿ ಎಷ್ಟೇ ದುಬಾರಿಯಾದ್ರು ಈ ಸೀರೆಯನ್ನು ಖರೀದಿಸದೇ ಇರಲಾರರು. ಬೆಂಗಳೂರಿನಲ್ಲಿ (Bengaluru) ಕೆಎಸ್‌ಐಸಿ (KSIC) ಮೈಸೂರು ಸಿಲ್ಕ್ ಸೀರೆಗಾಗಿ ಯುವತಿಯೂ ಬೆಳಗಿನ ಜಾವ 4 ಗಂಟೆಗೆ ಬಂದು 6 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿದ ಘಟನೆ ವೈರಲ್ ಆಗಿದೆ. ಈ ವೇಳೆ ತಮಗಾದ ಅನುಭವವನ್ನು ಯುವತಿ  ಹಂಚಿಕೊಂಡು ಈ ಸೀರೆಗೆ ಎಷ್ಟು ಕ್ರೇಜ್ ಇದೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

sona_sebin ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವತಿಯೂ, ಜಯನಗರದಲ್ಲಿರುವ ಕೆಎಸ್‌ಐಸಿ ಮೈಸೂರು ಸಿಲ್ಕ್ಸ್  ಮಳಿಗೆಗೆ ಬೆಳಗಿನ ಜಾವ ಭೇಟಿ ನೀಡಿದ್ದನ್ನು ದಾಖಲಿಸಿದ್ದಾರೆ. ಮೈಸೂರು ಸಿಲ್ಕ್ ಸೀರೆಗಾಗಿ ಬೆಳಗ್ಗೆ 4 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಿರುವ ಬಗ್ಗೆ ಹೇಳಿದ್ದಾರೆ. ಅದಲ್ಲದೇ, ಸೀರೆ ಖರೀದಿಸಲು ಮಹಿಳೆಯರು ಬೆಳಗಿನ ಜಾವ 3-4 ಗಂಟೆಗೆ ಬಂದು ಟೋಕನ್ ಪಡೆಯಲು ಗಂಟೆಗಟ್ಟಲೆ ಕಾಯುತ್ತಿರುವುದನ್ನು ತೋರಿಸಿದ್ದಾರೆ. ಆ ಬಳಿಕ ಕಾಫಿ ಕುಡಿಯಲು ಸ್ವಲ್ಪ ಹೊತ್ತು ಹೊರಗೆ ಹೋದ ನಂತರ, ಹಿಂತಿರುಗಿ ಬಂದಾಗ ಈ ಲಿಸ್ಟ್ ಗೆ 53 ಹೆಸರುಗಳು ಸೇರ್ಪಡೆಯಾಗಿವೆ ಎಂದು ಹೇಳುತ್ತಿರುವುದನ್ನು ಕಾಣಬಹುದು. ಶೋರೂಮ್ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ಜನರನ್ನು ಮಾತನಾಡಿಸಿದ್ದು, ಒಬ್ಬ ಮಹಿಳೆ ಬೆಳಗಿನ ಜಾವ 3 ಗಂಟೆಗೆ ಬಂದಿದ್ದೇನೆ ಎಂದು ಹೇಳಿದರೆ, ವ್ಯಕ್ತಿಯೊಬ್ಬ ಹಿಂದಿನ ರಾತ್ರಿ 9 ಗಂಟೆಗೆ ಬಂದಿದ್ದಾಗಿ ಹೇಳಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಆ ಬಳಿಕ ಈ ಯುವತಿಯೂ, ಅಂಗಡಿ ಬೆಳಿಗ್ಗೆ 10-10:30 ರ ಸುಮಾರಿಗೆ ಮಾತ್ರ ತೆರೆಯುತ್ತದೆ. ಒಮ್ಮೆ 10 ಜನರಿಗೆ ಮಾತ್ರ ಪ್ರವೇಶವಿದ್ದು, ಕೇವಲ 10 ನಿಮಿಷಗಳಲ್ಲಿ ಸೀರೆ ಆರಿಸಬೇಕು. ಒಂದು ಟೋಕನ್‌ಗೆ ಒಂದು ಸೀರೆ ಮಾತ್ರ ಸಿಗುತ್ತದೆ. ಮೈಸೂರು ಸಿಲ್ಕ್ ಸೀರೆಗಳ ಬೆಲೆ 23,000 ರೂನಿಂದ 2.5 ಲಕ್ಷ ರೂವರೆಗೆ ಇರುತ್ತದೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ನಿರ್ಮಾಣದ ಹೆಸರಿನಲ್ಲಿ ಹದಗೆಟ್ಟ ಬೆಂಗಳೂರು; ವರ್ಷಗಳ ಬಳಿಕ ನಗರಕ್ಕೆ ಮರಳಿದ ವ್ಯಕ್ತಿ ಹೀಗೆಂದಿದ್ದೇಕೆ?

ಈ ವಿಡಿಯೋ ನಾಲ್ಕೂವರೆ  ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆಣ್ಮಕ್ಕಳಿಗೆ ಸೀರೆ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದರೆ, ಮತ್ತೊಬ್ಬರು, ಒಂದು ಸೀರೆ ಖರೀದಿಸಲು ಇಷ್ಟು ಕಷ್ಟ ಪಡಬೇಕಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎಲ್ಲಾ ಸೀರೆ ಮಹಿಮೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Naim Qassem Killed: ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆ

ಇಸ್ರೇಲ್, ಏಪ್ರಿಲ್ 09: ಇರಾನ್ ಮತ್ತು ಅಮೆರಿಕ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿರುವ ನಡುವೆ, ಇಸ್ರೇಲ್ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್‌ನನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಯುದ್ಧದ ಹೊರತಾಗಿ, ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಮೇಲೆ ಭಾರೀ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.ಬೈರುತ್‌ನಲ್ಲಿ ನಡೆದ ಗುರಿ ದಾಳಿಯಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ.

ಈ ದಾಳಿಗಳಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 28 ರಂದು ಭುಗಿಲೆದ್ದ ಈ ಸಂಘರ್ಷವು ಅದೇ ದಿನ ನಡೆದ ಬೃಹತ್ ವಾಯುದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಸಾವನ್ನಪ್ಪಿದ್ದರು. ಅವರ ಮಗ ಮೊಜ್ತಬಾ ಖಮೇನಿಯನ್ನು ಮಾರ್ಚ್ 8 ರಂದು ಸುಪ್ರೀಂ ಲೀಡರ್ ಎಂದು ಘೋಷಿಸಲಾಯಿತು. ಇದರ ನಂತರ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ನಿಧನರಾದರು. ಐಆರ್‌ಜಿಸಿ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್‌ಪೂರ್ ಕೂಡ ಹತ್ಯೆಗೀಡಾದರು.

 

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

Source link

ಕಥೆಕದ್ದ ಆರೋಪದ ಬೆನ್ನಲ್ಲೇ ‘ಧುರಂಧರ್ 2’ ಚಿತ್ರಕ್ಕೆ ಮತ್ತೊಂದು ಶಾಕ್; ಪ್ರಮುಖ ಹಾಡು ಡಿಲೀಟ್?

‘ಧುರಂಧರ್ 2’ (Dhurandhar 2) ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬರುತ್ತಿರುವಾಗ ಚಿತ್ರಕ್ಕೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಕಥೆ ಕದ್ದಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಸಿನಿಮಾದ ಹಾಡೊಂದಕ್ಕೆ ಕತ್ತರಿ ಬೀಳುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಆ ಹಾಡನ್ನು ಉಳಿಸಿಕೊಳ್ಳಬೇಕು ಎಂದಾದರೆ ಇವರು ದೊಡ್ಡ ಮೊತ್ತ ಪಾವತಿಸಬೇಕಾಗಿ ಬರಹುದು ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ಧುರಂಧರ್ 2’ ಸಿನಿಮಾನ ಆದಿತ್ಯ ಧಾರ್ ಹಾಗೂ ಜಿಯೋ ಸ್ಟುಡಿಯೋ ಒಟ್ಟಾಗಿ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಅನೇಕ ಹಳೆಯ ಹಾಡುಗಳನ್ನು ಬಳಕೆ ಮಾಡಲಾಗಿದೆ. ಈ ಸಿನಿಮಾದಲ್ಲಿ ‘ರಂಗ್ ದೆ ಲಾಲ್’ ಎಂಬ ಹಾಡಿದೆ. ಈ ಚಿತ್ರದ ಮೂಲ ಹಾಡು ‘ತ್ರಿದೇವ್’ನಲ್ಲಿ ಬಳಕೆ ಆಗಿತ್ತು ಎನ್ನಲಾಗಿದೆ. ಈ ಹಾಡನ್ನು ಆನಂದ್ ಭಕ್ಷಿ, ಕಲ್ಯಾಣ್​, ಆನಂದ್ ಕಂಪೋಸ್ ಮಾಡಿದ್ದರು. ಈ ಹಾಡನ್ನು ಅಮಿತ್ ಕುಮಾರ್ ಹಾಗೂ ಸಪ್ನಾ ಮುಖರ್ಜಿ ಹಾಡಿದ್ದರು.

ಈಗ ತ್ರಿಮೂರ್ತಿ ಫಿಲ್ಮ್ಸ್ ಅವರು ಈ ಹಾಡಿನ ಹಕ್ಕು ತಮ್ಮದು ಎಂದು ಪ್ರತಿಪಾದಿಸಿದ್ದಾರೆ. ‘ರಂಗ್ ದೇ ಲಾಲ್’ ಹಾಡು ನಮ್ಮ ಹಾಡಿಗೆ ಹೋಲಿಕೆ ಆಗುತ್ತದೆ ಎಂಬುದು ಕಂಪನಿಯ ಆರೋಪ. ಸರಿಯಾದ ಒಪ್ಪಿಗೆ ಪಡೆಯದೇ ಈ ಹಾಡನ್ನು ಬಳಕೆ ಮಾಡಲಾಗಿದೆ ಎಂಬುದು ತ್ರಿಮೂರ್ತಿ ಫಿಲ್ಮ್ಸ್ ಆರೋಪ.

ತ್ರಿಮೂರ್ತಿ ಫಿಲ್ಮ್ಸ್ ಸದ್ಯ ಈ ಹಾಡನ್ನು ಬಳಕೆ ಮಾಡದಂತೆ ಆದೇಶ ನೀಡಬೇಕು ಎಂದು ಕೋರ್ಟ್ ಬಳಿ ಕೋರಿದೆ ಎನ್ನಲಾಗಿದೆ. ಜೊತೆಗೆ ಈ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಿದ್ದಕ್ಕೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದೆ. ಒಂದೊಮ್ಮೆ ‘ಧುರಂಧರ್ 2’ ತಂಡದ ತಪ್ಪು ಕಂಡು ಬಂದು ಈ ಬಗ್ಗೆ ಆದೇಶ ಹೊರಡಿಸಿದರೆ ಸಿನಿಮಾಗೆ ಸಾಕಷ್ಟು ನಷ್ಟ ಉಂಟಾಗಲಿದೆ.

ಇದನ್ನೂ ಓದಿ: ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್

ಈ ಮೊದಲು ‘ಧುರಂಧರ್ 2’ ವಿರುದ್ಧ ಕಥೆ ಕದ್ದ ಆರೋಪ ಬಂದಾಗ ಇದನ್ನು ನಿರ್ದೇಶಕ ಆದಿತ್ಯ ಧಾರ್ ಅವರು ನಿರಾಕರಿಸಿದ್ದರು. ಈಗ ಈ ಆರೋಪವನ್ನು ತಂಡ ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜಾಂಬಿ ಡ್ರಗ್’ ಬಗ್ಗೆ ದುನಿಯಾ ವಿಜಿ ಆತಂಕ: ಯುವಕರು, ಪೋಷಕರಿಗೆ ಮನವಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಲೋಕದ ಪರಿವೆ ಇಲ್ಲದೆ ನಿಂತಿದ್ದ ಕಡೆಯೇ ನಿಂತು, ವಾಲಾಡುತ್ತಾ ಇರುವ ಯುವಕರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಈ ಸ್ಥಿತಿಗೆ ಹೊಸದಾಗಿ ಬಂದಿರುವ ಜಾಂಬಿ ಡ್ರಗ್ (Zombie drug) ಕಾರಣ ಎನ್ನಲಾಗುತ್ತಿದೆ. ‘ಜಾಂಬಿ ಡ್ರಗ್’ ಮಾದಕ ವಸ್ತು ಸೇವಿಸಿದರೆ ಹೀಗೆ ಯುವಕರು ನಿಂತಿದ್ದ ಕಡೆಯೇ ನಿಂತಿರುತ್ತಾರೆ, ಸಿನಿಮಾಗಳ ಬರುವ ಜಾಂಬಿ ರೀತಿಯ ಸ್ಥಿತಿಗೆ ತಲುಪುತ್ತಾರೆ ಎನ್ನಲಾಗುತ್ತಿದೆ. ಈ ರೀತಿಯ ಮಾದಕ ವಸ್ತು ಬೆಂಗಳೂರಿಗೂ ಬಂದಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ನಟ, ನಿರ್ದೇಶಕ ದುನಿಯಾ ವಿಜಿ (Duniya Vijay) ಈ ಬಗ್ಗೆ ಮಾತನಾಡಿದ್ದಾರೆ.

ದುನಿಯಾ ವಿಜಯ್ ಅವರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ನಾವು ‘ಭೀಮ’ ಸಿನಿಮಾನಲ್ಲಿ ಗಾಂಜಾ, ಡ್ರೈಡಲ್ ಮತ್ತು ಇತರೆ ಕೆಲ ಡ್ರಗ್ ಬಗ್ಗೆ ಮಾತನಾಡಿದ್ದೆವು, ಅವುಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೆವು. ಈಗ ಜಾಂಬಿ ಹೆಸರಿನ ಡ್ರಗ್ ಬಂದಿದೆ ಎನ್ನಲಾಗುತ್ತಿದೆ. ಈ ಕುರಿತು ಯುವಕರು ಮತ್ತು ಪೋಷಕರು ಜಾಗೃತವಾಗಿರಬೇಕು’ ಎಂದಿದ್ದಾರೆ.

‘ಈ ಜಾಂಬಿ ಡ್ರಗ್ಸ್ ನಿಜವಾ? ಸುಳ್ಳಾ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು, ಈಗಾಗಲೇ ಮಾದಕ ವಸ್ತು ನಿಗ್ರಹಕ್ಕೆ ಪೊಲೀಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಹೊಸ ರೀತಿಯ ಡ್ರಗ್ಸ್ ಬಗ್ಗೆ ಅವರು ತನಿಖೆ ನಡೆಸಿ ಇದರಿಂದ ಯುವಕರನ್ನು ರಕ್ಷಿಸಬೇಕು ಎಂದು ನಾನು ಕರ್ನಾಟಕ ಪೊಲೀಸರ ಬಳಿ ಮನವಿ ಮಾಡುತ್ತೇನೆ. ಮಾತ್ರವಲ್ಲದೆ, ಈ ರೀತಿ ಜಾಂಬಿ ಡ್ರಗ್ಸ್ ಅಥವಾ ಅದನ್ನು ತೆಗೆದುಕೊಂಡಿರುವವರು ನಿಮ್ಮ ಪ್ರದೇಶದಲ್ಲಿ ಕಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿರೆಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ:‘ನೀರಿಗೆ ಬಾರೆ ಚನ್ನಿ’ ಹಾಡಿಗೆ ರಚಿತಾ-ದುನಿಯಾ ವಿಜಯ್ ಡ್ಯಾನ್ಸ್

ದುನಿಯಾ ವಿಜಿ ಅವರು ತಮ್ಮ ಸಿನಿಮಾಗಳ ಮೂಲಕ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಅವರ ನಿರ್ದೇಶನದ ‘ಭೀಮ’ ಸಿನಿಮಾವು ಬೆಂಗಳೂರಿನ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿತ್ತು. ‘ಭೀಮ’ ಸಿನಿಮಾದ ಬಿಡುಗಡೆಗೆ ಮುಂಚೆ ಖುದ್ದು ದುನಿಯಾ ವಿಜಿ ಅವರು ಕೆಲವು ಡ್ರಗ್ಸ್​ಗಳು ಹೇಗೆ ಯಾವುದೇ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಸ್ಟೋರ್​​ಗಳವರು ಯುವಕರಿಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಸಹ ತೋರಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

VIDEO: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವು ಕೇವಲ ರನ್ ರೋಚಕತೆಗೆ ಮಾತ್ರವಲ್ಲದೆ, ಕ್ರೀಡಾಂಗಣದಲ್ಲಿ ಕಂಡುಬಂದ ಅಸಾಧಾರಣ ಫೀಲ್ಡಿಂಗ್ ಸಾಹಸಕ್ಕೂ ಸಾಕ್ಷಿಯಾಯಿತು. ಗುಜರಾತ್ ಟೈಟಾನ್ಸ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಅವರು ಅಸಾಧ್ಯವೆನಿಸುವ ಕ್ಯಾಚ್ ಒಂದನ್ನು ಹಿಡಿಯಲು ಪ್ರಯತ್ನಿಸಿ ಕ್ರಿಕೆಟ್ ಲೋಕವನ್ನು ಬೆರಗುಗೊಳಿಸಿದ್ದಾರೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೇಸಿಂಗ್ ಮಾಡುತ್ತಿದ್ದಾಗ 6ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ವೇಗಿ ಅಶೋಕ್ ಶರ್ಮಾ ಎಸೆದ ಚೆಂಡನ್ನು ಡೆಲ್ಲಿ ಓಪನರ್ ಕೆ.ಎಲ್. ರಾಹುಲ್ ಜೋರಾಗಿ ಬಾರಿಸಲು ಪ್ರಯತ್ನಿಸಿದರು. ಆದರೆ ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡು ಆಕಾಶಕ್ಕೆ ಚಿಮ್ಮಿತು.

ಚೆಂಡು ಯಾರೂ ಇಲ್ಲದ ‘ನೋ ಮ್ಯಾನ್ಸ್ ಲ್ಯಾಂಡ್’ನಲ್ಲಿ ಬೀಳುವ ಮುನ್ಸೂಚನೆ ಇತ್ತು. ಆದರೆ 30 ಗಜಗಳ ವೃತ್ತದ ಒಳಗಿದ್ದ ಗ್ಲೆನ್ ಫಿಲಿಪ್ಸ್ ಸುಮಾರು 20-25 ಮೀಟರ್‌ಗಳಷ್ಟು ಹಿಂದೆ ಓಡಿ, ಗಾಳಿಯಲ್ಲಿ ಅಡ್ಡಲಾಗಿ ಹಾರಿ ಚೆಂಡನ್ನು ಹಿಡಿಯಲು ಯತ್ನಿಸಿದರು.

ಫಿಲಿಪ್ಸ್ ಅವರ ಈ ಜಿಗಿತ ಮತ್ತು ಚೆಂಡಿನ ಹಾದಿಯನ್ನು ಗಮನಿಸಿದ ಕಾಮೆಂಟೇಟರ್‌ಗಳು ಮತ್ತು ಅಭಿಮಾನಿಗಳು ಇದನ್ನು “ಶತಮಾನದ ಕ್ಯಾಚ್” ಎಂದು ಬಣ್ಣಿಸಲು ಆರಂಭಿಸಿದ್ದರು. ಆದರೆ ದುರದೃಷ್ಟವಶಾತ್, ಚೆಂಡು ಅವರ ಬೆರಳುಗಳ ತುದಿಗೆ ತಗುಲಿ ಕೆಲವೇ ಇಂಚುಗಳ ಅಂತರದಲ್ಲಿ ನೆಲಕ್ಕೆ ಬಿದ್ದಿತು. ರಾಹುಲ್ ಜೀವದಾನ ಪಡೆದರಾದರೂ, ಫಿಲಿಪ್ಸ್ ಅವರ ಈ ಅಪ್ರತಿಮ ಪ್ರಯತ್ನಕ್ಕೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಗ್ಲೆನ್ ಫಿಲಿಪ್ಸ್ ಅವರ ಈ ಅದ್ಭುತ ಪ್ರಯತ್ನವನ್ನು ಇದೀಗ ಗ್ಲೆನ್ ಫಿಲಿಪ್ಸ್ ಇದ್ದಾರೆ ಬ್ಯಾಟ್ಸ್​ಮನ್​ಗಳೇ ಎಚ್ಚರಿಕೆ! ಎಂಬ ಟ್ಯಾಗ್​ಲೈನ್​ ಮೂಲಕ ಹಾಡಿ ಹೊಗಳಲಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ಗಳಲ್ಲಿ 209 ರನ್​ಗಳಿಸಿ ಕೇವಲ ಒಂದು ರನ್​​ನಿಂದ ಸೋಲೊಪ್ಪಿಕೊಂಡಿದೆ.

Source link

ನಿಮ್ಮ ಬಿಲ್‌ನಲ್ಲಿ ‘M.D. Penalty’ ಬರುತ್ತಿದೆಯೇ? ದಂಡದಿಂದ ತಪ್ಪಿಸಿಕೊಳ್ಳಲು ಈ ಸರಳ ಸೂತ್ರ ಅನುಸರಿಸಿ!

ಬೆಂಗಳೂರು, ಏ.9: ನಿಮ್ಮ ವಿದ್ಯುತ್ ಬಿಲ್‌ನಲ್ಲಿ ‘M.D. Penalty’ (Maximum Demand Penalty) ಏಕೆ ಬರುತ್ತದೆ ಮತ್ತು ಅದನ್ನು ತಪ್ಪಿಸುವುದು ಹೇಗೆ ಎಂಬ ಬಗ್ಗೆ ಮಹಿಳೆಯೊಬ್ಬರು ವಿಡಿಯೋ ಮಾಡಿದ್ದಾರೆ, ಇದನ್ನು @Karnataka Portfolio ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘M.D. Penalty’ ಎಂದರೆ ವಿದ್ಯುತ್​​​​ನ ಗರಿಷ್ಠ ಬೇಡಿಕೆ ದಂಡ. ಇದನ್ನು ಯಾಕೆ ವಿಧಿಸಲಾಗುತ್ತದೆ ಎಂಬ ಬಗ್ಗೆ ವಿವರವಾಗಿ ಹೇಳಿದ್ದಾರೆ. ನೀವು ನಿಮ್ಮ ಮನೆಗೆ ಅಥವಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವಾಗ ಇಂತಿಷ್ಟೇ ಕಿಲೋವ್ಯಾಟ್ (kw) ವಿದ್ಯುತ್ ಬಳಸುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿರುತ್ತೀರಿ. ಇದನ್ನು ‘Sanctioned Load’ ಎಂದು ಕರೆಯಲಾಗುತ್ತದೆ. ನೀವು ಒಮ್ಮೆಗೆ ಬಳಸುವ ವಿದ್ಯುತ್ ಈ ಮಿತಿಗಿಂತ ಹೆಚ್ಚಾದಾಗ, ವಿದ್ಯುತ್ ಸರಬರಾಜು ಕಂಪನಿಗಳು (BESCOM ಅಥವಾ ಇತರ) ದಂಡವನ್ನು ವಿಧಿಸುತ್ತವೆ, ಅದನ್ನೇ ‘M.D. Penalty’ ಎನ್ನಲಾಗುತ್ತದೆ. ನೀವು ಏಕಕಾಲದಲ್ಲಿ ಗೀಸರ್, ವಾಷಿಂಗ್ ಮೆಷಿನ್ ಮತ್ತು ಇತರ ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳನ್ನು ಆನ್ ಮಾಡಿದರೆ, ಲೋಡ್ ಹೆಚ್ಚಾಗುತ್ತದೆ. ವಿಡಿಯೋದಲ್ಲಿ ತೋರಿಸಿರುವಂತೆ, ಒಬ್ಬ ಗ್ರಾಹಕರು 1kw ಮಿತಿಯನ್ನು ಹೊಂದಿದ್ದು, 1.006kw ಬಳಸಿದಾಗ ಅವರಿಗೆ ದಂಡ ವಿಧಿಸಲಾಗುತ್ತದೆ. ಹಳೆಯ ಬಿಲ್‌ನಲ್ಲಿ ‘M.D. Penalty’ ಶೂನ್ಯವಾಗಿದ್ದರೆ, ಬಿಲ್ ಮೊತ್ತ ಕಡಿಮೆ ಇರುತ್ತದೆ (ಉದಾಹರಣೆಗೆ 604 ರೂ.).ಹೊಸ ಬಿಲ್‌ನಲ್ಲಿ ಮಿತಿ ಮೀರಿದಾಗ (ಉದಾಹರಣೆಗೆ 1003.24 ರೂ.), ಅಲ್ಲಿ ಮಿತಿ ಮೀರಿದ ಲೋಡ್ ಅನ್ನು ಮಾರ್ಕ್ ಮಾಡಲಾಗಿರುತ್ತದೆ. ಗೀಸರ್ ಮತ್ತು ವಾಷಿಂಗ್ ಮೆಷಿನ್‌ನಂತಹ ಅತಿ ಹೆಚ್ಚು ವಿದ್ಯುತ್ ಬಳಸುವ ಯಂತ್ರಗಳನ್ನು ಒಂದೇ ಸಮಯದಲ್ಲಿ ಆನ್ ಮಾಡಬೇಡಿ. ಮನೆಯಲ್ಲಿ ಉಪಕರಣಗಳು ಹೆಚ್ಚಾಗಿದ್ದರೆ, ನಿಮ್ಮ ‘Sanctioned Load’ ಅನ್ನು 1kw ನಿಂದ 1kw ಅಥವಾ ಅದಕ್ಕಿಂತ ಹೆಚ್ಚಕ್ಕೆ ಏರಿಸಿಕೊಳ್ಳಲು ಅರ್ಜಿ ಸಲ್ಲಿಸಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version