ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್ – Kannada News

ಕ್ಯಾಲಿಫೋರ್ನಿಯಾ, ಜೂನ್ 7: ಗೂಗಲ್ ಮತ್ತು ಸ್ಪೇಸ್‌ಎಕ್ಸ್ (SpaceX) ನಡುವೆ ಒಂದು ಬೃಹತ್ ಒಪ್ಪಂದ ನಡೆದಿದೆ. ಸ್ಪೇಸ್​ಎಕ್ಸ್​ನ ಎಐ ಕಂಪ್ಯೂಟಿಂಗ್ ಸೌಲಭ್ಯ ಬಳಸಲು ಗೂಗಲ್ ಈ ಡೀಲ್ ಮಅಡಿಕೊಂಡಿದೆ. ಅದರಂತೆ, ಗೂಗಲ್ ಸಂಸ್ಥೆಯು ಸ್ಪೇಸ್‌ಎಕ್ಸ್‌ಗೆ ಪ್ರತಿ ತಿಂಗಳು $920 ಮಿಲಿಯನ್ (ಸುಮಾರು 8,700 ಕೋಟಿ ರುಪಾಯಿ) ಹಣವನ್ನು ಪಾವತಿಸಲಿದೆ. ಈ ಒಪ್ಪಂದವು ಒಟ್ಟು 32 ತಿಂಗಳುಗಳ ಕಾಲ (ಈ ವರ್ಷದ ಅಕ್ಟೋಬರ್‌ನಿಂದ ಜೂನ್ 2029 ರವರೆಗೆ) ಚಾಲ್ತಿಯಲ್ಲಿರಲಿದೆ. ಇಲಾನ್ ಮಸ್ಕ್ (Elon Musk) ಅವರ AI ಕಂಪನಿಯಾದ xAI ಡೇಟಾ ಸೆಂಟರ್‌ಗಳಲ್ಲಿನ ಕೃತಕ ಬುದ್ಧಿಮತ್ತೆ (AI) ಕಂಪ್ಯೂಟಿಂಗ್ ಸೌಲಭ್ಯವನ್ನು (Compute Capacity) ಬಾಡಿಗೆಗೆ ಪಡೆಯಲು ಗೂಗಲ್ ಈ ಒಪ್ಪಂದ ಮಾಡಿಕೊಂಡಿದೆ.

ಗೂಗಲ್ ಏಕೆ ಈ ಒಪ್ಪಂದ ಮಾಡಿಕೊಂಡಿದೆ?

ಗೂಗಲ್ ತನ್ನ ದೊಡ್ಡ ಉದ್ಯಮ ಗ್ರಾಹಕರಿಗಾಗಿ ಪರಿಚಯಿಸಿರುವ ‘ಜೆಮಿನಿ ಎಂಟರ್‌ಪ್ರೈಸ್’ (Gemini Enterprise) ಎಂಬ AI ಪ್ಲಾಟ್‌ಫಾರ್ಮ್‌ಗೆ ಜಾಗತಿಕವಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಬೇಡಿಕೆ ಬಂದಿದೆ. ಈ ಗ್ರಾಹಕರ ಬೇಡಿಕೆಯನ್ನು ತಕ್ಷಣವೇ ಪೂರೈಸಲು ಗೂಗಲ್‌ಗೆ ಬೃಹತ್ ಮಟ್ಟದ ತಾಂತ್ರಿಕ ಮೂಲಸೌಕರ್ಯದ (Infrastructure) ಅಗತ್ಯವಿತ್ತು. ಅದಕ್ಕಾಗಿ ಸ್ಪೇಸ್‌ಎಕ್ಸ್‌ನ ಡೇಟಾ ಸೆಂಟರ್‌ಗಳನ್ನು ಬಳಸಿಕೊಳ್ಳಲು ಗೂಗಲ್ ನಿರ್ಧರಿಸಿದೆ.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ಗೂಗಲ್ ಏನನ್ನು ಬಳಸಿಕೊಳ್ಳಲಿದೆ?

ಈ ಒಪ್ಪಂದದ ಪ್ರಕಾರ, ಸ್ಪೇಸ್‌ಎಕ್ಸ್‌ನ ಡೇಟಾ ಸೆಂಟರ್‌ಗಳಲ್ಲಿರುವ ಸುಮಾರು 1,10,000 ಎನ್‌ವಿಡಿಯಾ (Nvidia) ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳನ್ನು (GPUs) ಹಾಗೂ ಇತರ ಸೆಂಟ್ರಲ್ ಪ್ರೊಸೆಸರ್‌ಗಳು ಮತ್ತು ಮೆಮೊರಿ ಘಟಕಗಳನ್ನು ಗೂಗಲ್ ಬಳಸಿಕೊಳ್ಳಲಿದೆ. ಸೆಪ್ಟೆಂಬರ್ 30, 2026 ರೊಳಗೆ ಸ್ಪೇಸ್‌ಎಕ್ಸ್ ಈ ಭರವಸೆ ನೀಡಿದಷ್ಟು ಜಿಪಿಯು (GPU) ಸಾಮರ್ಥ್ಯವನ್ನು ಒದಗಿಸಲು ವಿಫಲವಾದರೆ, ಗೂಗಲ್ ಈ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸುವ ಹಕ್ಕನ್ನು ಹೊಂದಿದೆ.

ಸ್ಪೇಸ್‌ಎಕ್ಸ್‌ಗೆ ಇದರಿಂದ ಏನು ಲಾಭ?

ಸ್ಪೇಸ್‌ಎಕ್ಸ್ ಸಂಸ್ಥೆಯು ಮುಂದಿನ ವಾರವಷ್ಟೇ ಷೇರು ಮಾರುಕಟ್ಟೆಯಲ್ಲಿ ತನ್ನ ಐಪಿಒ (IPO – Initial Public Offering) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಕಂಪನಿಯು ಸಾರ್ವಜನಿಕವಾಗಿ ಲಿಸ್ಟ್ ಆಗುವ ಮುನ್ನವೇ ಇಂತಹ ಬೃಹತ್ ಒಪ್ಪಂದ ಮಾಡಿಕೊಂಡಿರುವುದು ಹೂಡಿಕೆದಾರರಲ್ಲಿ ಭಾರಿ ನಂಬಿಕೆ ಮೂಡಿಸಿದೆ. ಅಲ್ಲದೆ, ಫೆಬ್ರವರಿಯಲ್ಲಿ ಇಲಾನ್ ಮಸ್ಕ್ ಅವರ AI ಸ್ಟಾರ್ಟ್‌ಅಪ್ ‘xAI’ ಅನ್ನು ಸ್ಪೇಸ್‌ಎಕ್ಸ್‌ನೊಂದಿಗೆ ವಿಲೀನಗೊಳಿಸಲಾಗಿತ್ತು. ಆ ಡೇಟಾ ಸೆಂಟರ್‌ಗಳಿಂದ ಆದಾಯ ಗಳಿಸಲು ಸ್ಪೇಸ್‌ಎಕ್ಸ್‌ಗೆ ಈ ಒಪ್ಪಂದ ದೊಡ್ಡ ನೆರವಾಗಿದೆ. ಗೂಗಲ್‌ಗಿಂತ ಮುಂಚೆ, ಮೇ ತಿಂಗಳಲ್ಲಿ ‘ಆಂಥ್ರೋಪಿಕ್’ (Anthropic) ಕಂಪನಿಯೂ ಸಹ ಸ್ಪೇಸ್‌ಎಕ್ಸ್ ಜೊತೆ ಇಂತಹುದೇ ಒಪ್ಪಂದ ಮಾಡಿಕೊಂಡಿತ್ತು.

ಇದನ್ನೂ ಓದಿ: ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು

ಗೂಗಲ್ ಮತ್ತು ಇಲಾನ್ ಮಸ್ಕ್ ಸಂಬಂಧ

ವಿಶೇಷವೆಂದರೆ, ಗೂಗಲ್‌ನ ಪೋಷಕ ಸಂಸ್ಥೆಯಾದ ಆಲ್ಫಾಬೆಟ್ (Alphabet), 2015 ರಲ್ಲೇ ಸ್ಪೇಸ್‌ಎಕ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿತ್ತು. ಆಗ ಸ್ಪೇಸ್‌ಎಕ್ಸ್ ಮೌಲ್ಯ ಕೇವಲ $12 ಬಿಲಿಯನ್ ಆಗಿತ್ತು. ಆದರೆ ಮುಂದಿನ ವಾರ ಐಪಿಒ ಬರಲಿರುವ ಸ್ಪೇಸ್‌ಎಕ್ಸ್ ಕಂಪನಿಯ ಒಟ್ಟು ಮೌಲ್ಯ ಈಗ $1.75 ಟ್ರಿಲಿಯನ್ (165 ಲಕ್ಷ ಕೋಟಿ ರೂ) ದಾಟುವ ನಿರೀಕ್ಷೆಯಿದೆ. ಇದರಿಂದಾಗಿ ಗೂಗಲ್‌ಗೆ ಹಳೆಯ ಹೂಡಿಕೆಯಿಂದಲೂ ಭಾರಿ ಲಾಭ ಸಿಕ್ಕಂತಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್, ಓಪನ್ಎಐ ಮತ್ತು ಮೆಟಾ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡಲು ಗೂಗಲ್ ತನ್ನ AI ತಂತ್ರಜ್ಞಾನದ ಮೇಲಿನ ವೆಚ್ಚವನ್ನು ಈ ವರ್ಷ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಕಾರ್ಪೊರೇಟ್ ಜೀವನವು ನನ್ನನ್ನು ಒತ್ತಡಕ್ಕೆ ಸಿಲುಕಿಸಿದೆ; ಯುವತಿ ಹೀಗೆಂದಿದ್ದೇಕೆ? – Kannada News

ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳ ಸಿಕ್ಕಿದ್ರು ಒತ್ತಡ ಮಾತ್ರ ಡಬಲ್ ಆಗಿರುತ್ತದೆ. ಹೀಗಾಗಿ ಈ ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡೋದಕ್ಕೆ ಈ ಕಾರ್ಪೋರೇಟ್ ಉದ್ಯೋಗಿಗಳು ಒದ್ದಾಡ್ತಾರೆ. ಇದೀಗ ಕೆಲಸ ಮುಗಿದ ನಂತರವು ಕಾರ್ಪೊರೇಟ್ ಜೀವನವು ತನ್ನನ್ನು ಒತ್ತಡದಲ್ಲಿರಿಸಿದೆ ಎಂದು ಯುವತಿಯೂ ಹೇಳಿದ್ದಾಳೆ. ಈ ವಿಡಿಯೋ ಕಾರ್ಪೊರೇಟ್ ಕೆಲಸದ ಸಂಸ್ಕೃತಿಯ ಬಗ್ಗೆ ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ವಂಶಿಕಾ ರಥಿ (vanshika_recording) ಎಂಬ ಯುವತಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನನ್ನ ಮೆದುಳು ಲಾಗ್ ಔಟ್ ಆಗಲು ನಿರಾಕರಿಸುತ್ತದೆ ಎಂದು ಬರೆದುಕೊಂಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ಕಚೇರಿ ಸಮಯದ ನಂತರವೂ ಕೆಲಸಕ್ಕೆ ಸಂಬಂಧಿಸಿದ ಆಲೋಚನೆಗಳು ಹೇಗೆ ಮುಂದುವರಿಯುತ್ತವೆ ಎಂಬುದರ ಕುರಿತು ಮಾತನಾಡಿದ್ದಾಳೆ. ನಾವು ಕಾರ್ಪೊರೇಟ್ ಕಂಪನಿಗೆ ಸೇರಿದಾಗಿನಿಂದ, ನಾವು ಯಾವಾಗಲೂ ಯಾವುದೇ ಕಾರಣವಿಲ್ಲದೆ ಒತ್ತಡದಲ್ಲಿದ್ದೇನೆ ಎಂದು ನೀವು ಎಂದಾದರೂ ಗಮನಿಸಿದ್ದೀರಾ?. ನನ್ನ ಮೆದುಳು ನಾಳೆಯ ಕೆಲಸವನ್ನು ಇಂದೇ ಮಾಡು, ನಾಳೆ ನಾನು ಕೂಲ್ ಆಗಿರಲು ಹೇಳುತ್ತಿದೆ ಎಂಬುದರ ಅರ್ಥವೇನು?. ಆದರೆ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ನಾನು ನಾಳೆ ಲಾಗಿನ್ ಆದ ನಂತರ ನಾನು ಏನು ಮಾಡಬೇಕೆಂದು ನಿರಂತರವಾಗಿ ಯೋಚಿಸುತ್ತಲೇ ಇರುತ್ತೇನೆ. ಕಾರ್ಪೊರೇಟ್ ಕಂಪನಿಯಿಂದ ಹೊರಬರದೆ ನಾನು ಈ ರೀತಿ ಒತ್ತಡದಿಂದ ಹೇಗೆ ಹೊರಬರುವುದು? ಎಂದು ಕೇಳಿದ್ದಾಳೆ.

ಇದನ್ನೂ ಓದಿ: ಬೆಂಗಳೂರಲ್ಲಿ 1.4 ಲಕ್ಷ ರೂ ಸಂಬಳ ಇದ್ರೂ , ಊರಲ್ಲಿ ಸಿಗುವ 40 ಸಾವಿರದಲ್ಲೇ ನಾನು ಶ್ರೀಮಂತ; ಯುವಕ ಹೀಗೆಂದಿದ್ದೇಕೆ?

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ನನ್ನ ಮಾನಸಿಕ ಆರೋಗ್ಯಕ್ಕಾಗಿ ಇಂದು ರಜೆ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ನಲ್ಲಿ, ನಾನು ಯಾವುದಕ್ಕೂ ಹೆಚ್ಚು ತಲೆಗೆ ಹಚ್ಚಿಕೊಳ್ಳಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ಹೆಚ್ಚು ಒತ್ತಡ ಅನಿಸಿದರೆ ಬೇರೆ ಕೆಲಸದ ಹುಡುಕಾಟದತ್ತ ಗಮನ ಹರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಣಕ್ಕಿಳಿದಿಲ್ಲ, ಸ್ಪರ್ಧಾತ್ಮಕ ಪಂದ್ಯವಾಡಿಲ್ಲ: ಹರ್ಷಿತ್ ರಾಣಾ ಆಯ್ಕೆ ನ್ಯಾಯವೇ? – Kannada News

ಕಳೆದ ನಾಲ್ಕು ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದ ಆಟಗಾರನನ್ನು ನೇರವಾಗಿ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು ಎಷ್ಟು ತಾರ್ಕಿಕ? ಬಿಸಿಸಿಐ (BCCI) ಇತ್ತೀಚೆಗೆ ಪ್ರಕಟಿಸಿದ ಭಾರತೀಯ ಟಿ20 ತಂಡದಲ್ಲಿ ವೇಗಿ ಹರ್ಷಿತ್ ರಾಣಾ ಅವರ ಸೇರ್ಪಡೆ ಈ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏಕೆಂದರೆ ಹರ್ಷಿತ್ ರಾಣಾ ಕೊನೆಯ ಬಾರಿ ಕಣಕ್ಕಿಳಿದದ್ದು ಫೆಬ್ರವರಿ ತಿಂಗಳಲ್ಲಿ. ಇದಾದ ಬಳಿಕ ಅವರು ಒಂದೇ ಒಂದು ಪಂದ್ಯವಾಡಿಲ್ಲ.

ನೇರ ಆಯ್ಕೆ ನ್ಯಾಯವೇ?

ಹರ್ಷಿತ್ ರಾಣಾ ಫೆಬ್ರವರಿಯಲ್ಲಿ ನಡೆದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಆ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರು ಉಳಿದಿದ್ದರು. ಇದರ ಪರಿಣಾಮವಾಗಿ ಅವರು ಇಡೀ ಟಿ20 ವಿಶ್ವಕಪ್ ಮತ್ತು ಐಪಿಎಲ್ 2026 ಹೊರಗುಳಿಯಬೇಕಾಯಿತು.

ಯಾವುದೇ ಒಬ್ಬ ಆಟಗಾರ ತಂಡಕ್ಕೆ ಮರಳಬೇಕಾದರೆ ಕನಿಷ್ಠ ಪಕ್ಷ ದೇಶಿ ಕ್ರಿಕೆಟ್ ಅಥವಾ ಯಾವುದೇ ಲೀಗ್ ಪಂದ್ಯಗಳಲ್ಲಿ ತನ್ನ ಫಿಟ್‌ನೆಸ್ ಮತ್ತು ಲಯವನ್ನು ಸಾಬೀತುಪಡಿಸಬೇಕು. ಆದರೆ, ರಾಣಾ ಅವರ ವಿಷಯದಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಕೇವಲ ಎನ್‌ಸಿಎ ಫಿಟ್‌ನೆಸ್ ಸರ್ಟಿಫಿಕೇಟ್ ಆಧಾರದ ಮೇಲೆ ಅವರನ್ನು ನೇರವಾಗಿ ಆಯ್ಕೆ ಮಾಡಿರುವುದು ಇತರೆ ಆಟಗಾರರಿಗೆ ಮಾಡಿದ ಅನ್ಯಾಯ ಎನ್ನದೇ ವಿಧಿಯಿಲ್ಲ.

ಯುವ ಪ್ರತಿಭೆಗಳಿಗೆ ಅನ್ಯಾಯ:

ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿ, ನಿರಂತರವಾಗಿ ವಿಕೆಟ್ ಪಡೆದು ಫಿಟ್ ಆಗಿರುವ ಹಲವು ಯುವ ವೇಗದ ಬೌಲರ್‌ಗಳು ದೇಶದಲ್ಲಿದ್ದಾರೆ. ದೇಶಿ ಟೂರ್ನಿಗಳಲ್ಲಿ ಬೆವರಿಳಿಸಿ ಕಾಯುತ್ತಿರುವ ಆಟಗಾರರನ್ನು ಬದಿಗೊತ್ತಿ, ತಿಂಗಳುಗಳಿಂದ ಮೈದಾನಕ್ಕೇ ಇಳಿಯದ ಆಟಗಾರನಿಗೆ ಮಣೆ ಹಾಕಿರುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದು ಅತ್ಯುತ್ತಮ ಲಯದಲ್ಲಿರುವ ಇತರ ಬೌಲರ್‌ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಆಯ್ಕೆಯಾಗಿದೆ.

ಏಕೆಂದರೆ ಈ ಬಾರಿಯ ಐಪಿಎಲ್​​ನಲ್ಲಿ ಆರ್​ಸಿಬಿ ವೇಗಿ ರಾಸಿಖ್ ಸಲಾಂ ಬರೋಬ್ಬರಿ 18 ವಿಕೆಟ್ ಪಡೆದು ಮಿಂಚಿದ್ದರು. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡದ ಯುವ ವೇಗಿ ಅಶೋಕ್ ಶರ್ಮಾ 22 ವಿಕೆಟ್ ಕಬಳಿಸಿದ್ದರು. ಹಾಗೆಯೇ ಕೆಕೆಆರ್ ತಂಡದ ವೇಗಿ ಕಾರ್ತಿಕ್ ತ್ಯಾಗಿ ಕೂಡ 18 ವಿಕೆಟ್ ಉರುಳಿಸಿದ್ದರು.

ಹೀಗೆ ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಲವು ಆಟಗಾರರಿದ್ದರೂ, ಕಳೆದ ನಾಲ್ಕು ತಿಂಗಳುಗಳಿಂದ ಒಂದೇ ಒಂದು ಪಂದ್ಯವಾಡದ ಆಟಗಾರನಿಗೆ ನೇರವಾಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಕಲ್ಪಿಸುವುದು ಎಷ್ಟು ಸರಿ ಎಂಬುದೇ ಪ್ರಶ್ನೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಒಟ್ಟರೆಯಾಗಿಹರ್ಷಿತ್ ರಾಣಾ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಸಂಶಯವಿಲ್ಲ. ಅವರಲ್ಲಿರುವ ವೇಗ ಮತ್ತು ವಿಕೆಟ್ ಪಡೆಯುವ ಕೌಶಲ್ಯ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಗಾಯದ ನಂತರ ಯಾವುದೇ ಮ್ಯಾಚ್ ಪ್ರ್ಯಾಕ್ಟೀಸ್ ಇಲ್ಲದೆ ಅವರನ್ನು ನೇರವಾಗಿ ಅಂತರರಾಷ್ಟ್ರೀಯ ಸರಣಿಗೆ ಆಯ್ಕೆ ಮಾಡಿರುವುದು ಬಿಸಿಸಿಐ ಮಾಡಿದ ತಪ್ಪು ಆಯ್ಕೆ ಎಂದೇ ಹೇಳಬಹುದು.

Source link

ವಾರ ಭವಿಷ್ಯ: ಜೂನ್ 8 ರಿಂದ 14 ರ ವರೆಗಿನ ದ್ವಾದಶ ರಾಶಿಗಳ ಫಲಾಫಲ – Kannada News

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಜೂನ್ 8 ರಿಂದ ಜೂನ್ 14ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಈ ವಾರದಲ್ಲಿ ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ ಮತ್ತು ಚತುರ್ದಶಿ ಸೇರಿದಂತೆ ಪ್ರಮುಖ ತಿಥಿಗಳು ಬರಲಿವೆ. ಜ್ಯೋತಿಷ್ಯದ ಪ್ರಕಾರ, ಈ ಅವಧಿಯು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು ಮತ್ತು ಕೃಷ್ಣ ಪಕ್ಷದಲ್ಲಿ ನಡೆಯುತ್ತದೆ. ಈ ಗ್ರಹಗತಿಗಳು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಡಾ. ಗುರೂಜಿ ವಿವರಿಸಿದ್ದಾರೆ.

ವಿಶೇಷವಾಗಿ, ಈ ವಾರದಲ್ಲಿ ವಿಶ್ವ ಸಾಗರದ ದಿನ, ಸರ್ವತ್ರ ಏಕಾದಶಿ, ಪ್ರದೋಷ ಮತ್ತು ಮಾಸಿಕ ಶಿವರಾತ್ರಿಯಂತಹ ಆಚರಣೆಗಳು ಇವೆ. ಈ ಶುಭದಿನಗಳು ಮತ್ತು ತಿಥಿಗಳ ಮಹತ್ವ, ಅವುಗಳ ಆಚರಣೆಯ ವಿಧಾನ ಹಾಗೂ ದ್ವಾದಶ ರಾಶಿಗಳ ವ್ಯಕ್ತಿಗಳ ಮೇಲೆ ಅವುಗಳ ಪ್ರಭಾವದ ಕುರಿತು ಗುರೂಜಿ ಸಮಗ್ರ ಮಾಹಿತಿ ಒದಗಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗೆ ಇಲ್ಲಿ ಕ್ಲಿಕ್​​ ಮಾಡಿ.

Source link

CM DKS in Metro: ಮೆಟ್ರೋ ಪ್ರಯಾಣಿಕರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಫೋಟೋ ! – Kannada News

ಬೆಂಗಳೂರು, ಜೂನ್ 07: ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂದು ವಿಧಾನಸೌಧದಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಬಿಎಂಆರ್‌ಸಿಎಲ್‌ ಉನ್ನತಾಧಿಕಾರಿಗಳಿಂದ ಬೆಂಗಳೂರಿನ ಮೆಟ್ರೋ ಜಾಲ ಮತ್ತು ಮುಂಬರುವ ಸಂಪರ್ಕ ಯೋಜನೆಗಳ ಕುರಿತು ಪ್ರಮುಖ ಮಾಹಿತಿಗಳನ್ನು ಪಡೆದುಕೊಂಡರು.

ಮುಖ್ಯಮಂತ್ರಿಗಳನ್ನು ಮೆಟ್ರೋದಲ್ಲಿ ಕಂಡ ಸಾರ್ವಜನಿಕರು ಹಾಗೂ ಸಹಪ್ರಯಾಣಿಕರು ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದರು. ಅನೇಕ ಮೆಟ್ರೋ ಪ್ರಯಾಣಿಕರು ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ರೈಲಿನಲ್ಲಿದ್ದ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಸ್ತಲಾಘವ ಮಾಡಿದ ಡಿ.ಕೆ. ಶಿವಕುಮಾರ್ ಅವರು ಕುಶಲೋಪರಿ ವಿಚಾರಿಸಿದರು. ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣದವರೆಗೆ ಮೆಟ್ರೋದಲ್ಲಿಯೇ ತೆರಳಿದ ಮುಖ್ಯಮಂತ್ರಿಗಳು, ಅಲ್ಲಿಂದ ಮುಂದೆ ರಸ್ತೆ ಮಾರ್ಗವಾಗಿ ಕನಕಪುರಕ್ಕೆ ಪ್ರಯಾಣ ಬೆಳೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

ಟಾಲಿವುಡ್ ನಟ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ (Janhvi Kapoor) ನಟನೆಯ ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದ್ದರೂ, ಚಿತ್ರದಲ್ಲಿ ಮಹಿಳೆಯರನ್ನು ಬಿಂಬಿಸಿರುವ ರೀತಿಯ ಬಗ್ಗೆ ತೀವ್ರ ವಿವಾದ ವ್ಯಕ್ತವಾಗಿದೆ. ಈ ವಿವಾದದ ಬೆನ್ನಲ್ಲೇ ನಿರ್ದೇಶಕ ಬುಚ್ಚಿ ಬಾಬು ಸನಾ (Buchi Babu Sana) ಇತ್ತೀಚೆಗಷ್ಟೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಆದರೆ, ಇದೀಗ ಜಾನ್ವಿ ಕಪೂರ್ ಅವರು ತಮ್ಮ ಫ್ಯಾನ್ ಕ್ಲಬ್‌ಗಳೊಂದಿಗೆ ನಡೆಸಿರುವ ಆಘಾತಕಾರಿ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಇಂಟರ್ನೆಟ್‌ನಲ್ಲಿ ಲೀಕ್ ಆಗಿದ್ದು, ಸಂಚಲನ ಮೂಡಿಸಿವೆ.

ಚಿತ್ರದಲ್ಲಿ ತಮ್ಮ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗುತ್ತಿದೆ ಎಂದು ಶೂಟಿಂಗ್ ಹಂತದಲ್ಲೇ ಜಾನ್ವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದನ್ನು ಈ ಲೀಕ್ ಆದ ಮೆಸೇಜ್‌ಗಳು ಸಾಬೀತುಪಡಿಸುತ್ತಿವೆ. ಅಕ್ಟೋಬರ್ 30ರಂದು ನಡೆದಿರುವ ಚಾಟ್‌ನಲ್ಲಿ ಜಾನ್ವಿ ಕಪೂರ್, ಚಿತ್ರೀಕರಣದ ವೇಳೆ ತಮಗೆ ಮುಜುಗರ ತರುವಂತಹ ಆ್ಯಂಗಲ್‌ಗಳನ್ನು ಬಳಸದಂತೆ ನಿರ್ದೇಶಕರಿಗೆ ಖಡಕ್ ಆಗಿ ಹೇಳಿದ್ದಾಗಿ ಬರೆದುಕೊಂಡಿದ್ದಾರೆ.

‘ನಾನು ನಿರ್ದೇಶಕರಿಗೆ ನನ್ನ ಎದೆ ಮತ್ತು ಸೊಂಟದ ಭಾಗದ ಕ್ಲೋಸಪ್ ಶಾಟ್‌ಗಳನ್ನು ತೆಗೆದುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ’ ಎಂದು ಜಾನ್ವಿ ಕಪೂರ್ ಉಲ್ಲೇಖಿಸಿದ್ದಾರೆ. ಇದೇ ಚಾಟ್‌ನಲ್ಲಿ ಜಾನ್ವಿ ಕಪೂರ್ ಅವರು ನಟ ರಾಮ್ ಚರಣ್ ಅವರ ನಡೆಗೆ ಧನ್ಯವಾದ ತಿಳಿಸಿದ್ದಾರೆ. ‘ರಾಮ್ ಸರ್ ತುಂಬಾ ಒಳ್ಳೆಯವರು. ಅವರು ನನ್ನ ಪರವಾಗಿ ನಿಂತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಬೈದಿದ್ದರು. ಇನ್ನೊಮ್ಮೆ ಆಕೆಯ ಇಂತಹ ಆ್ಯಂಗಲ್‌ಗಳನ್ನು ಶೂಟ್ ಮಾಡಬೇಡಿ ಅಂತ ಗದರಿಸಿದ್ದರು. ಇದರಿಂದಾಗಿ ನಿರ್ದೇಶಕರು ಬೇಸರ ಮಾಡಿಕೊಂಡಿದ್ದರು’ ಎಂದು ಜಾನ್ವಿ ಮೆಸೇಜ್‌ನಲ್ಲಿ ತಿಳಿಸಿದ್ದಾರೆ.

ಜಾನ್ವಿ ಕಪೂರ್ ವೈರಲ್ ಚಾಟ್:

‘ಗೇಮ್ ಚೇಂಜರ್’ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಎದುರಿಸಿದ ಇಂತಹದೇ ಪರಿಸ್ಥಿತಿಯನ್ನು ಅಭಿಮಾನಿಯೊಬ್ಬರು ನೆನಪಿಸಿದಾಗ, ಜಾನ್ವಿ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ. ‘ಇಲ್ಲ, ಪೆದ್ದಿ ಸಿನಿಮಾದಲ್ಲಿ ಅವರು ಶೂಟ್ ಮಾಡುತ್ತಿದ್ದ ಆ್ಯಂಗಲ್‌ಗಳು ಅದಕ್ಕಿಂತಲೂ ಕೆಟ್ಟದಾಗಿದ್ದವು. ಆದರೆ ರಾಮ್ ಸರ್ ತಡೆದರು. ಸೌತ್ ಇಂಡಸ್ಟ್ರಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ’ ಎಂದು ಜಾನ್ವಿ ಅವರು ದಕ್ಷಿಣದ ಚಿತ್ರರಂಗದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ನಟಿಯನ್ನು ಕೀಳಾಗಿ ತೋರಿಸೋ ಉದ್ದೇಶವಿರಲಿಲ್ಲ’; ಜಾನ್ವಿ ಹೊಕ್ಕುಳ ಪ್ರದರ್ಶನದ ಬಗ್ಗೆ ನಿರ್ದೇಶಕರ ಸ್ಪಷ್ಟನೆ

ಕೆಲವು ನಟಿಯರ ಪೋಷಕರು ಶೂಟಿಂಗ್ ಸೆಟ್‌ಗೆ ಬರುವ ಬಗ್ಗೆ ಫ್ಯಾನ್ಸ್ ಪ್ರಸ್ತಾಪಿಸಿದ್ದಾರೆ. ಆದಕ್ಕೆ ಜಾನ್ವಿ ಈ ರೀತಿ ಉತ್ತರಿಸಿದ್ದಾರೆ. ‘ಒಂದು ವೇಳೆ ನನ್ನ ತಂದೆ ಬೋನಿ ಕಪೂರ್ ಸೆಟ್‌ಗೆ ಬಂದರೆ ಪರಿಸ್ಥಿತಿ ಉಗ್ರ ರೂಪ ಪಡೆದುಕೊಳ್ಳುತ್ತದೆ’ ಎಂದಿದ್ದಾರೆ. ಈ ರೀತಿಯ ಘಟನೆಯಿಂದ ಜಾನ್ವಿ ಕಪೂರ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂಬುದು ಚಾಟ್ಸ್‌ನಿಂದ ತಿಳಿಯುತ್ತದೆ. ‘ನಾನು ಇವರೊಂದಿಗೆ ವಾದ ಮಾಡಿ ಸಾಕಾಗಿಹೋಗಿದೆ. ಇನ್ನು ಸಾಕು, ಇನ್ಮುಂದೆ ಸಿನಿಮಾವೇ ಬೇಡ’ ಎಂದು ಜಾನ್ವಿ ಭಾವುಕರಾಗಿ ಮೆಸೇಜ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟ: ವಾರ್ಡರ್ ಮೇಲೆ ಹಲ್ಲೆಗೆ ಯತ್ನ! – Kannada News

ಬೆಂಗಳೂರು, ಜೂನ್ 07: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕೈದಿಗಳು (Inmates) ಜೈಲು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ, ಧರ್ಮದ ಪರ ಘೋಷಣೆಗಳನ್ನು ಕೂಗಿ ಪುಂಡಾಟ ನಡೆಸಿರುವ ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆಯಿಂದಾಗಿ ಜೈಲು ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಾಂಬ್ ಸ್ಫೋಟದ ಕೈದಿಗಳು ಪುಂಡಾಟ ನಡೆಸಿದ್ದಾರೆ.
  • ನಿಯಮ ಉಲ್ಲಂಘನೆ ಪ್ರಶ್ನಿಸಿದ ಜೈಲು ವಾರ್ಡರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.
  • ಐವತ್ತಕ್ಕೂ ಹೆಚ್ಚು ಕೈದಿಗಳು ಒಟ್ಟಾಗಿ ಧರ್ಮದ ಪರ ಘೋಷಣೆ ಕೂಗಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ವಾಗ್ವಾದ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು (ಉಗ್ರರು) ಜೈಲು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆದರೆ, ಅವರು ನಿಯಮ ಉಲ್ಲಂಘಿಸಿ ಬೇರೆ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಜೈಲು ವಾರ್ಡರ್ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರು ಕೈದಿಗಳ ಗುರುತು ಪತ್ತೆಯಾಗಿದೆ. ಬೇರೆ ಕೈದಿ ಹೆಸರಿನಲ್ಲಿ ಯಾಕೆ ಬಂದಿದ್ದೀರಿ ಎಂದು ವಾರ್ಡರ್ ಪ್ರಶ್ನಿಸಿದಾಗ, ಉಗ್ರರು ಮತ್ತು ವಾರ್ಡರ್ ಮಧ್ಯೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ಆರಂಭವಾಗಿದೆ.

ಖೈದಿಗಳ ಜಮಾವಣೆ

ವಾರ್ಡರ್ ಪ್ರಶ್ನಿಸುತ್ತಿದ್ದಂತೆ ಜೈಲಿನಲ್ಲಿದ್ದ ಇತರ ಬಾಂಬ್ ಸ್ಫೋಟ ಪ್ರಕರಣದ 50ಕ್ಕೂ ಹೆಚ್ಚು ಉಗ್ರ ಕೈದಿಗಳು ತಕ್ಷಣ ಒಂದೆಡೆ ಜಮಾವಣೆಗೊಂಡಿದ್ದಾರೆ. ವಾರ್ಡರ್ ಕ್ರಮವನ್ನು ವಿರೋಧಿಸಿದ ಕೈದಿಗಳ ಗುಂಪು, ಜೈಲಿನೊಳಗೇ ಒಂದು ಧರ್ಮದ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಜೈಲು ವಾರ್ಡರ್ ಮೇಲೆ ಹಲ್ಲೆ ಮಾಡಲು ಸಹ ಕೈದಿಗಳು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ

ಘಟನೆಯಿಂದ ಜೈಲಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಎಚ್ಚೆತ್ತ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೈದಿಗಳನ್ನು ಮನವೊಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಜೈಲಿನಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ. ಆದರೆ, ಇಷ್ಟೆಲ್ಲಾ ಹಂಗಾಮಾ ನಡೆದಿದ್ದರೂ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Vasthu Tips: ದಾಂಪತ್ಯದಲ್ಲಿ ಕಲಹವೇ? ನಿಮ್ಮ ಬೆಡ್‌ರೂಮ್‌ನ ಈ ವಾಸ್ತು ದೋಷಗಳೇ ಕಾರಣ! – Kannada News

ದಾಂಪತ್ಯದಲ್ಲಿ ಕಲಹವೇ? Image Credit source: Pinterest

ಪತಿ-ಪತ್ನಿಯರ ಸಂಬಂಧವನ್ನು ಅತ್ಯಂತ ಪವಿತ್ರ ಮತ್ತು ಪ್ರಮುಖವಾದುದು ಎಂದು ಪರಿಗಣಿಸಲಾಗುತ್ತದೆ. ಈ ದಾಂಪತ್ಯ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಾಮರಸ್ಯ ನೆಲೆಸಬೇಕಾದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positive energy) ಇರುವುದು ಅತ್ಯಂತ ಅವಶ್ಯಕ. ಆದರೆ, ಹಲವು ಬಾರಿ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಕಾರಣವಿಲ್ಲದೆ ಪತಿ-ಪತ್ನಿಯರ ನಡುವೆ ಅನಗತ್ಯ ಜಗಳ ಮತ್ತು ಮುನಿಸು ಉಂಟಾಗುತ್ತದೆ. ಇಂತಹ ಸನ್ನಿವೇಶಗಳ ಹಿಂದೆ ಬೆಡ್‌ರೂಮ್‌ನ (ಮಲಗುವ ಕೋಣೆ) ವಾಸ್ತು ದೋಷ ಪ್ರಮುಖ ಕಾರಣವಾಗಿರಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ದೋಷಗಳಿದ್ದರೆ ಪತಿ-ಪತ್ನಿಯರ ನಡುವೆ ಅಂತರ ಹೆಚ್ಚಾಗತೊಡಗುತ್ತದೆ. ಒಂದು ವೇಳೆ ನೀವು ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಬೆಡ್‌ರೂಮ್‌ನಲ್ಲಿ ಈ ಕೆಳಗಿನ ವಾಸ್ತು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದಾಂಪತ್ಯವನ್ನು ಮಧುರವಾಗಿಸಿಕೊಳ್ಳಬಹುದು.

ಬೆಡ್‌ರೂಮ್ ಮತ್ತು ಮಲಗುವ ದಿಕ್ಕು ಸರಿಯಾಗಿರಲಿ:

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮಲಗುವ ಕೋಣೆಗೆ ದಕ್ಷಿಣ-ಪಶ್ಚಿಮ (ನೈಋತ್ಯ) ದಿಕ್ಕನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಬೆಡ್‌ರೂಮ್ ಇರುವುದರಿಂದ ದಂಪತಿಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇದರೊಂದಿಗೆ, ಮಲಗುವಾಗ ನಿಮ್ಮ ತಲೆ ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ. ಇನ್ನು ನೀವು ಬಳಸುವ ಮಂಚವು (ಬೆಡ್) ಯಾವಾಗಲೂ ಆಯತಾಕಾರದಲ್ಲಿರಬೇಕೇ ವಿನಃ ಅಡ್ಡಾದಿಡ್ಡಿ ಆಕಾರದಲ್ಲಿರಬಾರದು.

ಗೋಡೆಗಳ ಬಣ್ಣಗಳ ಆಯ್ಕೆ ಆಹ್ಲಾದಕರವಾಗಿರಲಿ:

ಬೆಡ್‌ರೂಮ್‌ನ ಗೋಡೆಗಳಿಗೆ ಹಚ್ಚುವ ಬಣ್ಣಗಳು ನಮ್ಮ ಮನಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ಗೋಡೆಗಳಿಗೆ ಯಾವಾಗಲೂ ತಿಳಿ ಗುಲಾಬಿ (Light Pink) ಅಥವಾ ಪೀಚ್ (Peach) ಬಣ್ಣಗಳನ್ನು ಬಳಸುವುದು ಉತ್ತಮ. ಇಂತಹ ತಿಳಿ ಬಣ್ಣಗಳು ದಂಪತಿಗಳ ನಡುವೆ ಪ್ರೀತಿ ಮತ್ತು ಮನಸ್ಸಿಗೆ ಶಾಂತಿಯನ್ನು ವೃದ್ಧಿಸಲು ಸಹಾಯ ಮಾಡುತ್ತವೆ. ಗಾಢವಾದ ಅಥವಾ ಕತ್ತಲೆಯ ಅನುಭವ ನೀಡುವ ಬಣ್ಣಗಳನ್ನು ಬೆಡ್‌ರೂಮ್‌ನಲ್ಲಿ ಬಳಸಬೇಡಿ.

ಕನ್ನಡಿಯ ಸ್ಥಾನದ ಬಗ್ಗೆ ಇರಲಿ ಎಚ್ಚರ:

ಅನೇಕರು ತಮಗರಿವಿಲ್ಲದೇ ಮಾಡುವ ದೊಡ್ಡ ವಾಸ್ತು ತಪ್ಪು ಎಂದರೆ ಬೆಡ್‌ರೂಮ್‌ನಲ್ಲಿ ಕನ್ನಡಿ (Glass) ಇಡುವ ಜಾಗ. ಮಲಗುವ ಕೋಣೆಯಲ್ಲಿ ಮಂಚದ ನೇರ ಎದುರುಗಡೆ ಅಂದರೆ ನೀವು ಮಲಗಿದ್ದಾಗ ನಿಮ್ಮ ಪ್ರತಿಬಿಂಬ ಕಾಣಿಸುವಂತೆ ಎಂದಿಗೂ ಕನ್ನಡಿಯನ್ನು ಅಳವಡಿಸಬಾರದು. ಈ ರೀತಿಯ ತಪ್ಪು ವಾಸ್ತು ಸ್ಥಿತಿಯಿಂದಾಗಿ ದಂಪತಿಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಪರಸ್ಪರ ಅಪನಂಬಿಕೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಪ್ರೀತಿಯ ಸಂಕೇತದ ಚಿತ್ರಗಳನ್ನು ಅಲಂಕರಿಸಿ:

ದಾಂಪತ್ಯ ಜೀವನದಲ್ಲಿ ಸಂತೋಷ ಮೂಡಲು ಬೆಡ್‌ರೂಮ್‌ನಲ್ಲಿ ಲವ್‌ಬರ್ಡ್ಸ್ (Lovebirds) ಅಥವಾ ಹಂಸಗಳ ಜೋಡಿಯ ಸುಂದರವಾದ ಚಿತ್ರಗಳನ್ನು ಹಾಕಬೇಕು. ಇದು ವೈವಾಹಿಕ ಜೀವನದಲ್ಲಿ ಸಂತಸವನ್ನು ತರುತ್ತದೆ. ಇದರೊಂದಿಗೆ, ದಂಪತಿಗಳು ತಮ್ಮದೇ ಆದ ನಗುತ್ತಿರುವ ಸುಂದರ ಭಾವಚಿತ್ರವನ್ನು (Couple photo) ಕೋಣೆಯ ದಕ್ಷಿಣ-ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಹಾಕಬಹುದು. ಆದರೆ ನೆನಪಿರಲಿ, ಬೆಡ್‌ರೂಮ್‌ನಲ್ಲಿ ಯುದ್ಧದ ದೃಶ್ಯಗಳು, ಉಗ್ರ ಪ್ರಾಣಿಗಳು ಅಥವಾ ಒಂಟಿತನ ಹಾಗೂ ಉದಾಸೀನತೆ ಬಿಂಬಿಸುವ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಹಾಕಬಾರದು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ:

ನಿಮ್ಮ ಮಲಗುವ ಕೋಣೆಯಲ್ಲಿ ಕಸ-ಕಡ್ಡಿ, ಅನಗತ್ಯ ವಸ್ತುಗಳು ಅಥವಾ ಕೆಟ್ಟುಹೋದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಎಂದಿಗೂ ಇಡಬೇಡಿ. ಬೆಡ್‌ರೂಮ್‌ನಲ್ಲಿ ಇಂತಹ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡುವುದರಿಂದ ಅಲ್ಲಿ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಪತಿ-ಪತ್ನಿಯರ ನಡುವೆ ಸಣ್ಣ ವಿಷಯಗಳಿಗೂ ದೊಡ್ಡ ಮಟ್ಟದ ಜಗಳಗಳು ಮತ್ತು ಅಸಮಾಧಾನಗಳು ಸೃಷ್ಟಿಯಾಗಲು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಕೋಣೆಯನ್ನು ಸದಾ ಸ್ವಚ್ಛವಾಗಿಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,750 ರೂ ಇಳಿಕೆ; ಬೆಳ್ಳಿಯೂ ಅಗ್ಗ – Kannada News

ನವದೆಹಲಿ, ಜೂನ್ 7: ಈ ವಾರಾಂತ್ಯದಲ್ಲಿ ಭಾರತವೂ ಒಳಗೊಂಡಂತೆ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ (Gold Price) ಭರ್ಜರಿ ಇಳಿಕೆ ಆಗಿದೆ. ಭಾರತದಲ್ಲಿ ಹತ್ತು ಗ್ರಾಮ್ ಆಭರಣ ಚಿನ್ನದ ಬೆಲೆ 2,750 ರೂನಷ್ಟು ಕಡಿಮೆಗೊಂಡಿದೆ. ಇದರ ಬೆಲೆ ಗ್ರಾಮ್​ಗೆ 14,000 ರೂ ಮಟ್ಟಕ್ಕೆ ತಗ್ಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,273 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,000 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,455 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,273 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,000 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,000 ರೂ
  • ಚೆನ್ನೈ: 14,200 ರೂ
  • ಮುಂಬೈ: 14,000 ರೂ
  • ದೆಹಲಿ: 14,015 ರೂ
  • ಕೋಲ್ಕತಾ: 14,000 ರೂ
  • ಕೇರಳ: 14,000 ರೂ
  • ಅಹ್ಮದಾಬಾದ್: 14,005 ರೂ
  • ಜೈಪುರ್: 14,015 ರೂ
  • ಲಕ್ನೋ: 14,015 ರೂ
  • ಭುವನೇಶ್ವರ್: 14,000 ರೂ

ಇದನ್ನೂ ಓದಿ: Domestic LPG Cylinder Price Hike: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 576 ರಿಂಗಿಟ್ (13,633 ರುಪಾಯಿ)
  • ದುಬೈ: 521.75 ಡಿರಾಮ್ (13,546 ರುಪಾಯಿ)
  • ಅಮೆರಿಕ: 142.50 ಡಾಲರ್ (13,588 ರುಪಾಯಿ)
  • ಸಿಂಗಾಪುರ: 190.50 ಸಿಂಗಾಪುರ್ ಡಾಲರ್ (14,074 ರುಪಾಯಿ)
  • ಕತಾರ್: 522 ಕತಾರಿ ರಿಯಾಲ್ (13,653 ರೂ)
  • ಸೌದಿ ಅರೇಬಿಯಾ: 537 ಸೌದಿ ರಿಯಾಲ್ (13,638 ರುಪಾಯಿ)
  • ಓಮನ್: 54.85 ಒಮಾನಿ ರಿಯಾಲ್ (13,586 ರುಪಾಯಿ)
  • ಕುವೇತ್: 43.81 ಕುವೇತಿ ದಿನಾರ್ (13,610 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮ್ಮು ಮತ್ತು ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಯೋಧ ಹುತಾತ್ಮ – Kannada News

ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ

ರಾಜೌರಿ, ಜೂನ್ 07: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ರಾಜೌರಿಯಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಸೈನಿಕರೊಬ್ಬರು ಹುತಾತ್ಮರಾಗಿರುವ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಕಠಿಣ ಪರ್ವತ ಪ್ರದೇಶಗಳಲ್ಲಿ ದೇಶದ ಭದ್ರತೆಗಾಗಿ ಹಾಗೂ ಗಡಿಗಳನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ಅಪ್ರತಿಮ ಧೈರ್ಯದಿಂದ ಹೋರಾಡುತ್ತಿದ್ದ ಭಾರತೀಯ ಸೇನೆಯ ವೀರ ಅಧಿಕಾರಿ, ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಶನಿವಾರ ಸಂಜೆ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ.

ರಾಜೌರಿಯ ದುರ್ಗಮ ಕಾಡುಗಳಲ್ಲಿ ಅಡಗಿರುವ ಪಾಕಿಸ್ತಾನಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಕಳೆದ 15 ದಿನಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಜಂಟಿ ಕಾರ್ಯಾಚರಣೆಯಾದ ‘ಆಪರೇಷನ್ ಶೇರುವಾಲಿ’ ನೇತೃತ್ವವನ್ನು ಇವರು ವಹಿಸಿದ್ದರು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಅರೆಸೈನಿಕ ಪಡೆಗಳು ಜಂಟಿಯಾಗಿ ನಡೆಸುತ್ತಿದ್ದ ಈ ಮಹತ್ವದ ಶೋಧ ಕಾರ್ಯಾಚರಣೆಯು ಯಶಸ್ಸಿನ ಹಂತ ತಲುಪಿತ್ತು. ಶನಿವಾರ ಸಂಜೆ ಡೋರಿಮಲ್ ಪ್ರದೇಶದ ಕಡಿದಾದ ಬಂಡೆಗಳು ಹಾಗೂ ದುರ್ಗಮ ಪರ್ವತಗಳ ನಡುವೆ ಕಾರ್ಯಾಚರಣೆಯಲ್ಲಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಅಪಾಯಕಾರಿ ಭೌಗೋಳಿಕ ಪರಿಸ್ಥಿತಿಯಿಂದಾಗಿ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಆಕಸ್ಮಿಕವಾಗಿ 30 ಮೀಟರ್ ಆಳದ ಕಂದಕಕ್ಕೆ ಜಾರಿ ಬಿದ್ದರು.

ಮತ್ತಷ್ಟು ಓದಿ: Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ

ತಕ್ಷಣವೇ ಸಹ ಸೈನಿಕರು ಅತ್ಯಂತ ವೇಗವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಹೊರತೆಗೆದರಾದರೂ, ಗಂಭೀರ ಗಾಯಗಳಾಗಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೀರ ಅಧಿಕಾರಿಯ ಈ ಅತ್ಯುನ್ನತ ದೇಶಭಕ್ತಿಯನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹಂಚಿಕೊಂಡಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತೀವ್ರ ಸಂತಾಪ ಸೂಚಿಸಿದೆ.

ಅಪಾಯಕಾರಿ ಮತ್ತು ಕಠಿಣ ಪರಿಸ್ಥಿತಿಗಳಲ್ಲೂ ಧೃತಿಗೆಡದೆ ರಾಷ್ಟ್ರ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರ ಶೌರ್ಯಕ್ಕೆ ಇಡೀ ದೇಶ ತಲೆಬಾಗುತ್ತದೆ. ಕರ್ತವ್ಯ ಪ್ರಜ್ಞೆ, ಧೈರ್ಯ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ನಿಸ್ವಾರ್ಥ ಸೇವೆ ಸಮಾಜದ ಎಲ್ಲಾ ವರ್ಗಗಳಿಗೆ ಮತ್ತು ಮುಂಬರುವ ಯುವ ಪೀಳಿಗೆಗೆ ಎಂದಿಗೂ ಸ್ಫೂರ್ತಿಯ ಮೂಲವಾಗಿ ಮುಂದುವರೆಯುತ್ತದೆ.

ಅಧಿಕಾರಿಯ ತ್ಯಾಗವನ್ನು ವ್ಯರ್ಥವಾಗಲು ಬಿಡದ ಭಾರತೀಯ ಸಶಸ್ತ್ರ ಪಡೆಗಳು, ರಾಜೌರಿ ಪ್ರದೇಶವನ್ನು ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ತನ್ನ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಹೆಚ್ಚುವರಿ ಪಡೆಗಳನ್ನು ಗಡಿಗೆ ನಿಯೋಜಿಸಲಾಗಿದ್ದು, ಆಧುನಿಕ ಡ್ರೋನ್‌ಗಳು ಮತ್ತು ಅತ್ಯಾಧುನಿಕ ತಾಂತ್ರಿಕ ಕಣ್ಗಾವಲು ವಿಧಾನಗಳನ್ನು ಬಳಸಿ ಇಡೀ ಕಾಡನ್ನು ಸುತ್ತುವರಿಯಲಾಗಿದೆ. ದೇಶದ ಗಡಿ ಕಾಯುವಲ್ಲಿ ಮತ್ತು ನಾಗರಿಕರ ರಕ್ಷಣೆಯಲ್ಲಿ ಭಾರತೀಯ ಸೇನೆ ತೋರುತ್ತಿರುವ ಈ ಅದಮ್ಯ ಬದ್ಧತೆ ಮತ್ತು ದೇಶಭಕ್ತಿ ಇಡೀ ಭಾರತೀಯರ ಹೆಮ್ಮೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:24 am, Sun, 7 June 26

Source link

Exit mobile version