ಜಮ್ಮು ಮತ್ತು ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಯೋಧ ಹುತಾತ್ಮ – Kannada News

ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ

ರಾಜೌರಿ, ಜೂನ್ 07: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ರಾಜೌರಿಯಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಸೈನಿಕರೊಬ್ಬರು ಹುತಾತ್ಮರಾಗಿರುವ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಕಠಿಣ ಪರ್ವತ ಪ್ರದೇಶಗಳಲ್ಲಿ ದೇಶದ ಭದ್ರತೆಗಾಗಿ ಹಾಗೂ ಗಡಿಗಳನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ಅಪ್ರತಿಮ ಧೈರ್ಯದಿಂದ ಹೋರಾಡುತ್ತಿದ್ದ ಭಾರತೀಯ ಸೇನೆಯ ವೀರ ಅಧಿಕಾರಿ, ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಶನಿವಾರ ಸಂಜೆ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ.

ರಾಜೌರಿಯ ದುರ್ಗಮ ಕಾಡುಗಳಲ್ಲಿ ಅಡಗಿರುವ ಪಾಕಿಸ್ತಾನಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಕಳೆದ 15 ದಿನಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಜಂಟಿ ಕಾರ್ಯಾಚರಣೆಯಾದ ‘ಆಪರೇಷನ್ ಶೇರುವಾಲಿ’ ನೇತೃತ್ವವನ್ನು ಇವರು ವಹಿಸಿದ್ದರು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಅರೆಸೈನಿಕ ಪಡೆಗಳು ಜಂಟಿಯಾಗಿ ನಡೆಸುತ್ತಿದ್ದ ಈ ಮಹತ್ವದ ಶೋಧ ಕಾರ್ಯಾಚರಣೆಯು ಯಶಸ್ಸಿನ ಹಂತ ತಲುಪಿತ್ತು. ಶನಿವಾರ ಸಂಜೆ ಡೋರಿಮಲ್ ಪ್ರದೇಶದ ಕಡಿದಾದ ಬಂಡೆಗಳು ಹಾಗೂ ದುರ್ಗಮ ಪರ್ವತಗಳ ನಡುವೆ ಕಾರ್ಯಾಚರಣೆಯಲ್ಲಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಅಪಾಯಕಾರಿ ಭೌಗೋಳಿಕ ಪರಿಸ್ಥಿತಿಯಿಂದಾಗಿ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಆಕಸ್ಮಿಕವಾಗಿ 30 ಮೀಟರ್ ಆಳದ ಕಂದಕಕ್ಕೆ ಜಾರಿ ಬಿದ್ದರು.

ಮತ್ತಷ್ಟು ಓದಿ: Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ

ತಕ್ಷಣವೇ ಸಹ ಸೈನಿಕರು ಅತ್ಯಂತ ವೇಗವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಹೊರತೆಗೆದರಾದರೂ, ಗಂಭೀರ ಗಾಯಗಳಾಗಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೀರ ಅಧಿಕಾರಿಯ ಈ ಅತ್ಯುನ್ನತ ದೇಶಭಕ್ತಿಯನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹಂಚಿಕೊಂಡಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತೀವ್ರ ಸಂತಾಪ ಸೂಚಿಸಿದೆ.

ಅಪಾಯಕಾರಿ ಮತ್ತು ಕಠಿಣ ಪರಿಸ್ಥಿತಿಗಳಲ್ಲೂ ಧೃತಿಗೆಡದೆ ರಾಷ್ಟ್ರ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರ ಶೌರ್ಯಕ್ಕೆ ಇಡೀ ದೇಶ ತಲೆಬಾಗುತ್ತದೆ. ಕರ್ತವ್ಯ ಪ್ರಜ್ಞೆ, ಧೈರ್ಯ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ನಿಸ್ವಾರ್ಥ ಸೇವೆ ಸಮಾಜದ ಎಲ್ಲಾ ವರ್ಗಗಳಿಗೆ ಮತ್ತು ಮುಂಬರುವ ಯುವ ಪೀಳಿಗೆಗೆ ಎಂದಿಗೂ ಸ್ಫೂರ್ತಿಯ ಮೂಲವಾಗಿ ಮುಂದುವರೆಯುತ್ತದೆ.

ಅಧಿಕಾರಿಯ ತ್ಯಾಗವನ್ನು ವ್ಯರ್ಥವಾಗಲು ಬಿಡದ ಭಾರತೀಯ ಸಶಸ್ತ್ರ ಪಡೆಗಳು, ರಾಜೌರಿ ಪ್ರದೇಶವನ್ನು ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ತನ್ನ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಹೆಚ್ಚುವರಿ ಪಡೆಗಳನ್ನು ಗಡಿಗೆ ನಿಯೋಜಿಸಲಾಗಿದ್ದು, ಆಧುನಿಕ ಡ್ರೋನ್‌ಗಳು ಮತ್ತು ಅತ್ಯಾಧುನಿಕ ತಾಂತ್ರಿಕ ಕಣ್ಗಾವಲು ವಿಧಾನಗಳನ್ನು ಬಳಸಿ ಇಡೀ ಕಾಡನ್ನು ಸುತ್ತುವರಿಯಲಾಗಿದೆ. ದೇಶದ ಗಡಿ ಕಾಯುವಲ್ಲಿ ಮತ್ತು ನಾಗರಿಕರ ರಕ್ಷಣೆಯಲ್ಲಿ ಭಾರತೀಯ ಸೇನೆ ತೋರುತ್ತಿರುವ ಈ ಅದಮ್ಯ ಬದ್ಧತೆ ಮತ್ತು ದೇಶಭಕ್ತಿ ಇಡೀ ಭಾರತೀಯರ ಹೆಮ್ಮೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:24 am, Sun, 7 June 26

Source link

ರಾಜ್ಯಸಭೆ ಚುನಾವಣೆ ನಾಮಪತ್ರಕ್ಕೆ ನಾಳೆ ಕೊನೆ ದಿನ: ಅಭ್ಯರ್ಥಿಯನ್ನ ಅಂತಿಮಗೊಳಿಸದ ಬಿಜೆಪಿ, ಜೆಡಿಎಸ್; ಇಂದು ಘೋಷಣೆ ಸಾಧ್ಯತೆ – Kannada News

ಬೆಂಗಳೂರು, ಜೂನ್​ 07: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನ. ಇತ್ತ ಬಿಜೆಪಿ (BJP) ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು (HD Deve Gowda) ಎನ್‌ಡಿಎ ಅಭ್ಯರ್ಥಿಯಾಗಿ ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇಂದು ಮಧ್ಯಾಹ್ನದ ಬಳಿಕ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸಲು ಒಪ್ಪದಿದ್ದರೆ, ಉಭಯ ಪಕ್ಷಗಳಿಗೂ ಸಮ್ಮತಿಯಾಗುವ ಹೋಟೆಲ್ ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡುವ ಬಗ್ಗೆಯೂ ತೆರೆಮರೆಯ ಗಂಭೀರ ಚರ್ಚೆಗಳು ನಡೆಯುತ್ತಿವೆ.

ಮುಖ್ಯಾಂಶಗಳು

  • ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
  • ರಾಜ್ಯಸಭೆಯ 1 ಸ್ಥಾನಕ್ಕೆ ರೇಸ್​ನಲ್ಲಿ ಮೂವರು
  • ಇಂದು ಮಧ್ಯಾಹ್ನದ ಬಳಿಕ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಸಾಧ್ಯತೆ

ಯಾರೆಲ್ಲಾ ರೇಸ್​ನಲ್ಲಿ? 

ಇನ್ನು ರಾಜ್ಯಸಭೆಯ ಆ ಒಂದು ಸ್ಥಾನಕ್ಕೆ ದೇವೇಗೌಡರು ಕಣಕ್ಕಿಳಿಯದಿದ್ದರೆ ಮಾತ್ರ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಸದ್ಯ ಈ 1 ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರೇಸ್​ನಲ್ಲಿ ಮೂವರು ಇದ್ದಾರೆ. ಮಾಜಿ ಸಿಎಂ ಡಿವಿ ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಹಿರಿಯ ನಾಯಕ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಆದರೆ ದೇವೇಗೌಡರು ಸ್ಪರ್ಧಿಸುವುದು ಖಚಿತವಾದರೆ, ಬಿಜೆಪಿ ಕೇವಲ ವಿಧಾನಪರಿಷತ್​​ನ ಎರಡು ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಲಿದೆ. ಹೀಗಾಗಿ ಹೈಕಮಾಂಡ್‌ನ ಮುಂದಿನ ನಿರ್ಧಾರದ ಮೇಲೆ ಇದೀಗ ಮೈತ್ರಿಕೂಟದ ಎಲ್ಲಾ ನಾಯಕರ ಕಣ್ಣು ನೆಟ್ಟಿದೆ.

ಮಹಿಳಾ ಮಣಿಗಳ ಮಧ್ಯೆ ತೀವ್ರ ಪೈಪೋಟಿ

ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲೂ ಬಿಜೆಪಿಯಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಆಕಾಂಕ್ಷಿಗಳ ರೇಸ್‌ನಲ್ಲಿ ನಟಿ ಶ್ರುತಿ, ಸಿ. ಮಂಜುಳಾ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಎನ್. ಮಹೇಶ್, ನಳೀನ್ ಕುಮಾರ್ ಕಟೀಲ್ ಹಾಗೂ ವೇಣುಗೋಪಾಲ್ ಇದ್ದಾರೆ. ಇವರಲ್ಲಿ ಮಹಿಳಾ ಕೋಟಾದಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ನಟಿ ಶ್ರುತಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ಪರಿಷತ್ ಟಿಕೆಟ್ ಹಂಚಿಕೆಯಲ್ಲಿ ‘ಒಬ್ಬ ಮಹಿಳೆ ಮತ್ತು ಒಬ್ಬ ಲಿಂಗಾಯತ’ ಅಥವಾ ‘ಒಬ್ಬ ಮಹಿಳೆ ಮತ್ತು ಒಬ್ಬ ಒಬಿಸಿ’ ಸೂತ್ರಕ್ಕೆ ಚಿಂತನೆ ನಡೆಸಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿರುವ ಪಟ್ಟಿಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟು ಹೊಸ ಮುಖಗಳಿಗೆ ಹೈಕಮಾಂಡ್​ ಮಣೆ ಹಾಕುವ ಸಾಧ್ಯತೆ ಕೂಡ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಹಾವನ್ನು ಹಿಡಿದು ಬ್ಯಾಗ್​ಗೆ ತುಂಬಿದ ಬ್ಲಿಂಕಿಟ್ ಡೆಲಿವರಿ ಬಾಯ್

ಮುಂಬೈ, ಜೂನ್ 07: ಜನರಲ್ಲಿ ಆತಂಕ ಸೃಷ್ಟಸಿದ್ದ ಹಾವನ್ನು ಬ್ಲಿಂಕಿಟ್ ಡೆಲಿವರಿ ಬಾಯ್ ಹಿಡಿದು ಬ್ಯಾಗ್​ಗೆ ತುಂಬಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ರಸ್ತೆಯೊಂದರಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಏಜೆಂಟ್ ತೋರಿರುವ ಅದ್ಭುತ ಧೈರ್ಯ ಮತ್ತು ಸಮಯಪ್ರಜ್ಞೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ರಸ್ತೆಯ ಮಧ್ಯದಲ್ಲಿ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಹಾವೊಂದನ್ನು ಯಾವುದೇ ಅಂಜಿಕೆಯಿಲ್ಲದೆ, ಹಿಡಿದು ಸುರಕ್ಷಿತವಾಗಿ ಬ್ಯಾಗ್​ಗೆ ಹಾಕಿರುವ ಈ ಯುವಕನ ಸಾಹಸಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಮಿರಾ ಆಂಡ್ರೀವಾ – Kannada News

ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ನಡೆದ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) 2026ರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ  19 ವರ್ಷದ ರಷ್ಯಾದ ಆಟಗಾರ್ತಿ ಮಿರಾ ಆಂಡ್ರೀವಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಜೂನ್ 6ರಂದು ನಡೆದ ಅಂತಿಮ ಹಣಾಹಣಿಯಲ್ಲಿ ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕಾ ವಿರುದ್ಧ 6-3, 6-2 ನೇರ ಸೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಂಡ್ರೀವಾ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲ ಐದು ಗೇಮ್‌ಗಳಲ್ಲಿ ಚ್ವಾಲಿನ್ಸ್ಕಾ 3-2 ಮುನ್ನಡೆ ಕಾಯ್ದುಕೊಂಡಿದ್ದರು.

ಆ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ 8ನೇ ಶ್ರೇಯಾಂಕಿತೆ ಆಂಡ್ರೀವಾ, ಸತತ 9 ಗೇಮ್‌ಗಳನ್ನು ಗೆಲ್ಲುವ ಮೂಲಕ ಎದುರಾಳಿಗೆ ದಿಕ್ಕುತೋಚದಂತೆ ಮಾಡಿದರು. ಈ ಮೂಲಕ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡರು.

ಎರಡನೇ ಸೆಟ್‌ನಲ್ಲಿ 5-0 ಭಾರಿ ಮುನ್ನಡೆ ಪಡೆದ ಆಂಡ್ರೀವಾ, ಅಂತಿಮವಾಗಿ ಎದುರಾಳಿಯ ಸರ್ವ್ ಅನ್ನು ಬ್ರೇಕ್ ಮಾಡಿ 6-2 ಅಂತರದಿಂದ ದ್ವಿತೀಯ ಸೆಟ್​ ಗೆದ್ದುಕೊಂಡರು.

ಈ ಮೂಲಕ ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕಾ ಅವರನ್ನು 6-3, 6-2 ಅಂತರದಿಂದ ಸೋಲಿಸಿ ಮಿರಾ ಆಂಡ್ರೀವಾ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿರಾ ಸಾಧನೆ:

  • ಕಿರಿಯ ವಯಸ್ಸಿನ ಚಾಂಪಿಯನ್: 19 ವರ್ಷದ ಮಿರಾ ಆಂಡ್ರೀವಾ, 1992ರಲ್ಲಿ ಮೋನಿಕಾ ಸೆಲೆಸ್ (18 ವರ್ಷ) ಪ್ರಶಸ್ತಿ ಗೆದ್ದ ನಂತರ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  •  ಕೋಚ್ ಪ್ರೇರಣೆ: ಮಾಜಿ ಚಾಂಪಿಯನ್ ಕಾನ್ಚಿತಾ ಮಾರ್ಟಿನೆಜ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಆಂಡ್ರೀವಾ, ಈ ಗೆಲುವಿನೊಂದಿಗೆ ಡಬ್ಲ್ಯೂಟಿಎ (WTA) ರೇಂಕಿಂಗ್‌ನಲ್ಲಿ ಅಗ್ರಸ್ಥಾನದತ್ತ ಮುನ್ನಡೆದಿದ್ದಾರೆ.

ಮಾಯಾ ಸಾಧನೆ:

  •  ಚ್ವಾಲಿನ್ಸ್ಕಾ ಮಿಂಚಿಂಗ್: ಫೈನಲ್ ಪಂದ್ಯದಲ್ಲಿ ಸೋತರೂ ಸಹ, ವಿಶ್ವ ರ್ಯಾಂಕಿಂಗ್​​ನಲ್ಲಿ 114ನೇ ಸ್ಥಾನದಲ್ಲಿದ್ದ ಪೋಲೆಂಡ್‌ನ 24 ವರ್ಷದ ಮಾಯಾ ಚ್ವಾಲಿನ್ಸ್ಕಾ ಕ್ವಾಲಿಫೈಯರ್ ಹಂತದಿಂದ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
  • ರ್ಯಾಂಕಿಂಗ್​ನಲ್ಲಿ ಜಿಗಿತ: ಈ ರನ್ನರ್-ಅಪ್ ಪ್ರಶಸ್ತಿಯೊಂದಿಗೆ ಅವರು ವಿಶ್ವ ರ್ಯಾಂಕಿಂಗ್​​ನಲ್ಲಿ ಮಾಯಾ ಚ್ವಾಲಿನ್ಸ್ಕಾ  21ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇದನ್ನೂ ಓದಿ: ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ

ಪುರುಷರ ಫೈನಲ್ ಯಾವಾಗ?

ಫ್ರೆಂಚ್ ಓಪನ್ 2026ರ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವು ಇಂದು ಭಾನುವಾರ, 7 ಜೂನ್ 2026 ರಂದು ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೇರೆಫ್ ಮತ್ತು ಇಟಲಿಯ ಯುವ ಆಟಗಾರ ಫ್ಲೇವಿಯೊ ಕೊಬೊಲ್ಲಿ  ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

Published On – 10:20 am, Sun, 7 June 26

Source link

Poha Day: ಇಂದು ವಿಶ್ವ ಅವಲಕ್ಕಿ ದಿನ, ಹೊಟ್ಟೆಗೆ ಹಗುರ, ಬೇಗ ಜೀರ್ಣವಾಗುವ ಪೋಹಾ ಬಗ್ಗೆ ಒಂದಿಷ್ಟು ಮಾಹಿತಿ – Kannada News

ನವದೆಹಲಿ, ಜೂನ್ 07: ಇಂದು ವಿಶ್ವ ಅವಲಕ್ಕಿ ದಿನ(Poha Day), ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪೌಷ್ಠಿಕ ಆಹಾರಗಳಲ್ಲಿ ಅವಲಕ್ಕಿ ಕೂಡಾ ಒಂದು. ಹೊಟ್ಟೆಗೆ ಹಗುರ ಹಾಗೂ ಬೇಗ ಜೀರ್ಣವಾಗುವ ಆಹಾರ. 100 ಗ್ರಾಂ ಅವಲಕ್ಕಿಯಲ್ಲಿ ಸುಮಾರು 25 ಮಿ.ಗ್ರಾಂ ನಷ್ಟು ಕಬ್ಬಿಣಾಂಶವಿದ್ದು, ಇದು ಮಕ್ಕಳ ಬೆಳವಣಿಗೆಗೆ ಮತ್ತು ರಕ್ತಹೀನತೆ ತಡೆಯಲು ಅತ್ಯುತ್ತಮ. ಈ ಪೋಹಾವನ್ನು ಮಹಾರಾಷ್ಟ್ರ, ಪುಣೆ ಭಾಗಗಳಲ್ಲಿ ಹೆಚ್ಚಾಗಿ ಕಾಣಬಹುದು. ಇನ್ನು ಕರ್ನಾಟಕದಲ್ಲೂ ಕೂಡ ಅವಲಕ್ಕಿ ಹೆಸರಿನಿಂದ ಪ್ರಚಲಿತದಲ್ಲಿದೆ.

ಕೇವಲ 15 ನಿಮಿಷಗಳಲ್ಲಿ ಒಗ್ಗರಣೆ ಅವಲಕ್ಕಿ, ಮೊಸರು ಅವಲಕ್ಕಿ, ಮಸಾಲೆ ಅವಲಕ್ಕಿ ತಯಾರಿಸಬಹುದು. ಇಂದೋರ್​ನಲ್ಲಿ ಪೋಹಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹಲವಾರು ಸ್ಥಳೀಯ ದತ್ತಿ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದವು. ಸಂಸ್ಥೆಗಳ ಸದಸ್ಯರು ತಮ್ಮ ಕೈಗಳಿಂದಲೇ ಬಿಸಿ ಪೋಹಾವನ್ನು ತಯಾರಿಸಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಬಡಿಸಿದರು.

ರಾಜವಾಡದ ಮುಂದೆ ನೂರಾರು ಜನರು ಏಕಕಾಲದಲ್ಲಿ ಇಂದೋರ್‌ನ ಪೋಹಾವನ್ನು ಸವಿದರು. ಈ ಕಾರ್ಯಕ್ರಮವು ಪರಿಸರ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿತು, ಜೊತೆಗೆ ಇಂದೋರ್‌ನ ಸಮುದಾಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿತು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಜೂನ್ 7 ರ ಭಾನುವಾರದಂದು ‘ವಿಶ್ವ ಪೋಹಾ ದಿನ’ವನ್ನು (World Poha Day) ಅತ್ಯಂತ ಸಡಗರ ಮತ್ತು ದಾಖಲೆಯೊಂದಿಗೆ ಆಚರಿಸಲಾಗಿದೆ. ಭಾರತದ ಖ್ಯಾತ ಶೆಫ್ ವಿಷ್ಣು ಮನೋಹರ್ ಅವರು ಈ ವಿಶೇಷ ದಿನದ ಅಂಗವಾಗಿ ಬರೋಬ್ಬರಿ 3,000 ಕೆಜಿ ತೂಕದ ಬೃಹತ್ ‘ತರ್ಲಿ ಪೋಹಾ’ (Tarri Poha) ಸಿದ್ಧಪಡಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಮತ್ತಷ್ಟು ಓದಿ: Avalakki: ಅಕ್ಕಿ ಆರೋಗ್ಯಕ್ಕೆ ಒಳ್ಳೆಯದೇ? ಅವಲಕ್ಕಿ ಉತ್ತಮ ಆರೋಗ್ಯಕ್ಕೆ ನಿಜಕ್ಕೂ ಲಕ್ಕಿನಾ? ಡಯೆಟಿಷಿಯನ್ ಹೇಳೋದೇನು?

ಏನಿದರ ವಿಶೇಷತೆ?: ಪೋಹಾ (ಅವಲಕ್ಕಿ ಉಪ್ಪಿಟ್ಟು) ಕೇವಲ ಒಂದು ಉಪಹಾರವಲ್ಲ, ಇದು ಭಾರತದಾದ್ಯಂತ ಅತ್ಯಂತ ಜನಪ್ರಿಯ, ಆರೋಗ್ಯಕರ, ಸುಲಭವಾಗಿ ಜೀರ್ಣವಾಗುವ ಮತ್ತು ಬಡವರಿಂದ ಶ್ರೀಮಂತರವರೆಗೆ ಎಲ್ಲರಿಗೂ ಕೈಗೆಟುಕುವ ಅತ್ಯುತ್ತಮ ದೇಶಿ ಆಹಾರವಾಗಿದೆ. ಇದರ ಮಹತ್ವವನ್ನು ಸಾರಲು ಈ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಇದನ್ನು ವಿಭಿನ್ನವಾಗಿ ಕರೆಯಲಾಗುತ್ತದೆ ಮತ್ತು ಸಿದ್ಧಪಡಿಸಲಾಗುತ್ತದೆ. ಮಧ್ಯಪ್ರದೇಶದ ‘ಇಂದೋರಿ ಪೋಹಾ’ (ಜೀರಾಲು ಪುಡಿ ಮತ್ತು ಸೇವ್‌ ಹಾಕಿ ಮಾಡುವುದು) ಮತ್ತು ಮಹಾರಾಷ್ಟ್ರದ ‘ನಾಗ್ಪುರಿ ತರಿ ಪೋಹಾ’ ಜಾಗತಿಕವಾಗಿ ಪ್ರಸಿದ್ಧವಾಗಿವೆ. ಕರ್ನಾಟಕದಲ್ಲೂ ಅವಲಕ್ಕಿ ಉಪ್ಪಿಟ್ಟು, ಗೊಜ್ಜವಲಕ್ಕಿ ಮತ್ತು ಮೊಸರವಲಕ್ಕಿ ಅತ್ಯಂತ ಪ್ರೀತಿಯ ಆಹಾರಗಳಾಗಿವೆ.

ಸಂಪೂರ್ಣ ಪ್ರೊಟೀನ್ ಮತ್ತು ಪೋಷಕಾಂಶಗಳಿಂದ ಕೂಡಿದ ಈ 3,000 ಕೆಜಿ ಬೃಹತ್ ಪೋಹಾವನ್ನು ನಂತರ ನಾಗ್ಪುರದ ಸಾವಿರಾರು ನಾಗರಿಕರು, ಅನಾಥಾಶ್ರಮಗಳು ಮತ್ತು ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸಿ, ವಿಶ್ವ ಪೋಹಾ ದಿನಕ್ಕೆ ಅತ್ಯಂತ ಸೌಹಾರ್ದಯುತ ಹಾಗೂ ಸ್ವಾದಿಷ್ಟ ಮುನ್ನುಡಿ ಬರೆಯಲಾಯಿತು.

ಒಗ್ಗರಣೆ ಅವಲಕ್ಕಿ ಮಾಡುವ ವಿಧಾನ
ಮೊದಲು ದಪ್ಪ ಅವಲಕ್ಕಿಯನ್ನು ಒಂದು ಜರಡಿಯಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ತೊಳೆದುಕೊಳ್ಳಿ (ಅವಲಕ್ಕಿ ತುಂಬಾ ಮೆತ್ತಗಾಗಬಾರದು, ಕೇವಲ ತೇವವಾಗಬೇಕು). ನಂತರ ಅದಕ್ಕೆ ನೀರನ್ನು ಸಂಪೂರ್ಣವಾಗಿ ಸೋಸಿ, 5 ರಿಂದ 10 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ. ಅವಲಕ್ಕಿ ಚೆನ್ನಾಗಿ ಉದುರು ಉದುರಾಗಿ ಅರಳುತ್ತದೆ.
-ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ
-ಈಗ ಕಡಲೆಕಾಯಿ ಬೀಜಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ
-ನಂತರ ಕಡಲೆಬೇಳೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ ಸ್ವಲ್ಪ ಕೈಯಾಡಿಸಿ
-ಈಗ ಹೆಚ್ಚಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ, ಈರುಳ್ಳಿ ಮೃದುವಾಗುವವರೆಗೆ (ಹೊಂಬಣ್ಣ ಬರುವವರೆಗೆ) ಚೆನ್ನಾಗಿ ಹುರಿಯಿರಿ.
-ನಂತರ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ.
-ಈಗ ಒಗ್ಗರಣೆಗೆ ನೆನೆಸಿಟ್ಟ ಅವಲಕ್ಕಿಯನ್ನು ಸೇರಿಸಿ
-ಅದರ ಜೊತೆಗೆ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಿಟಿಕೆ ಸಕ್ಕರೆಯನ್ನು ಹಾಕಿ.
-ಉರಿ ಸಣ್ಣಗೆ ಮಾಡಿ, ಒಗ್ಗರಣೆ ಮತ್ತು ಅವಲಕ್ಕಿ ಚೆನ್ನಾಗಿ ಹೊಂದಿಕೊಳ್ಳುವಂತೆ ಹಗುರವಾಗಿ ಕೈಯಾಡಿಸಿ
-ಬಾಣಲೆಯ ಮೇಲೆ ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ 2 ನಿಮಿಷಗಳ ಕಾಲ ಚೆನ್ನಾಗಿ ಆರಲು ಬಿಡಿ.
ಕೊನೆಯಲ್ಲಿ ಒಲೆಯನ್ನು ಆಫ್ ಮಾಡಿ, ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿ ತೆಂಗಿನಕಾಯಿ ತುರಿ ಮತ್ತು ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:23 am, Sun, 7 June 26

Source link

Optical Illusion: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿರಾಫೆಯನ್ನು ಕಂಡುಹಿಡಿಯಿರಿ – Kannada News

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: shutterstock.com

ಬುದ್ಧಿವಂತಿಕೆಗೆ ಸವಾಲೊಡ್ಡುವ, ಮೆದುಳಿಗೆ ವ್ಯಾಯಾಮ ನೀಡುವ ಮನೋರಂಜನಾತ್ಮಕ ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಆಟಗಳನ್ನು ನೀವು ಆಡಿರುತ್ತೀರಿ. ಆದರೆ ಕೆಲವರು ಹೆಚ್ಚು ಸಮಯ ತೆಗೆದುಕೊಂಡು ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳುತ್ತಾರೆ. ಇದೀಗ ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಹರಿದಾಡುತ್ತಿದ್ದು, ಇಲ್ಲಿ ಅಡಗಿ ಕುಳಿತಿರುವ ಜಿರಾಫೆಯನ್ನು ಕಂಡುಹಿಡಿಯಬೇಕು. ಆದರೆ ಈ ಒಗಟು ಬಿಡಿಸಲು ನಿರ್ದಿಷ್ಟ ಸಮಯಾವಕಾಶ ನೀಡಲಾಗಿದೆ. ಈ ಒಗಟಿನ ಆಟ ಆಡಲು ನೀವು ರೆಡಿ ಇದ್ದೀರಾ.

ಈ ಚಿತ್ರ ನೋಡಿದಾಗ ನಿಮಗೇನು ಅನಿಸಿತು?

ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಒಗಟಿನ ಚಿತ್ರ ನಿಮ್ಮ ಕಣ್ಣ ಮುಂದಿದೆ. ಸುಂದರವಾದ ಸೂರ್ಯಸ್ತದ ನೋಟ ಇಲ್ಲಿದೆ. ಇಲ್ಲಿ ಮೂರು ನಾಲ್ಕು ಮರಗಳಿದ್ದು ಈ ಚಿತ್ರವು ನಿಮ್ಮನ್ನು ಆಕರ್ಷಿಸುತ್ತದೆ. ಆದರೆ ಇಲ್ಲಿ ನಿಮಗೊಂದು ಟಾಸ್ಕ್ ನೀಡಲಾಗಿದೆ. ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ನೀವು ಕೇವಲ 5 ಸೆಕೆಂಡುಗಳಲ್ಲಿ ಗುರುತಿಸಬೇಕು.

ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ

ಜಿರಾಫೆ ನಿಮ್ಮ ಕಣ್ಣಿಗೆ ಕಂಡಿತೇ?

ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕೊಟ್ಟಿರುವ ಸಮಯದೊಳಗೆ ಗುರುತಿಸಿದ್ದೀರಾ, ನಿಮ್ಮ ಕಣ್ಣಿಗೆ ಈ ಪ್ರಾಣಿ ಕಾಣಿಸಿಕೊಂಡಿದ್ದರೆ ನಿಮ್ಮ ಕಣ್ಣುಗಳು ಚುರುಕಾಗಿ ಕೆಲಸ ಮಾಡುತ್ತಿವೆ ಎಂದರ್ಥ. ಆದರೆ ಈ ಮರದ ಕೊಂಬೆಯ ಮೇಲೆ ಜಿರಾಫೆಯ ಆಕಾರವನ್ನು ನೋಡಬಹುದು. ಈ ಸುಳಿವು ನೀಡಿದ ಮೇಲೂ ಈ ಪ್ರಾಣಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದಾದರೆ ಕೆಳಗಿನ ಚಿತ್ರದಲ್ಲಿ ಜಿರಾಫೆಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Graha Dosha: ಗ್ರಹ ದೋಷ ಎಂದರೇನು? ಭಯಪಡುವ ಅಗತ್ಯವಿಲ್ಲ, ಇಲ್ಲಿವೆ ಸರಳ ಪರಿಹಾರಗಳು! – Kannada News

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ಜೀವನದಲ್ಲಿ ನಾವು ಎದುರಿಸುವ ಕೆಲವು ಅನಿರೀಕ್ಷಿತ ಸವಾಲುಗಳು, ಅಡೆತಡೆಗಳು ಮತ್ತು ಮಾನಸಿಕ ಒತ್ತಡಗಳು ಗ್ರಹಗಳ ಪ್ರತಿಕೂಲ ಸ್ಥಾನಕ್ಕೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಜಾತಕದಲ್ಲಿ ಯಾವುದಾದರೂ ಒಂದು ಗ್ರಹವು ದುರ್ಬಲವಾಗಿರುವುದರಿಂದ ಅಥವಾ ನಕಾರಾತ್ಮಕ ಸ್ಥಾನದಲ್ಲಿರುವುದರಿಂದ ಉಂಟಾಗುವ ಇಂತಹ ಪರಿಸ್ಥಿತಿಯನ್ನೇ ‘ಗ್ರಹ ದೋಷ’ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಗ್ರಹ ದೋಷವಿದೆ ಎಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಸರಿಯಾದ ಪರಿಹಾರಗಳು, ಮಂತ್ರ ಪಠಣ, ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ಸಕಾರಾತ್ಮಕ ಜೀವನಶೈಲಿಯಿಂದ ಅವುಗಳ ದುಷ್ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಜಾತಕದಲ್ಲಿ ಗ್ರಹದೋಷವಿದೆಯೇ ಎಂದು ಗುರುತಿಸುವುದು ಹೇಗೆ?

ನಮ್ಮ ಜೀವನದಲ್ಲಿ ಗ್ರಹ ದೋಷವಿದ್ದಾಗ ಕೆಲವು ಸಾಮಾನ್ಯ ಚಿಹ್ನೆಗಳು ಎದ್ದು ಕಾಣಿಸುತ್ತವೆ. ವೃತ್ತಿ ಅಥವಾ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುವುದು, ಉತ್ತಮವಾಗಿ ನಡೆಯುತ್ತಿರುವ ಯೋಜನೆಗಳು ಹಠಾತ್ತನೆ ನಿಂತುಹೋಗುವುದು ಇದರ ಮುಖ್ಯ ಲಕ್ಷಣಗಳಾಗಿವೆ. ಇದರೊಂದಿಗೆ, ಪ್ರೇಮ ಜೀವನದಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಅನಗತ್ಯ ತಪ್ಪು ತಿಳುವಳಿಕೆ, ಘರ್ಷಣೆಗಳು ಮತ್ತು ಕುಟುಂಬದಲ್ಲಿ ಶಾಂತಿಯ ಕೊರತೆ ಎದುರಾದರೆ ಅದನ್ನು ಗ್ರಹ ದೋಷಗಳ ಪ್ರಭಾವ ಎನ್ನಬಹುದು. ಇನ್ನು ಕೆಲವರಿಗೆ ಆದಾಯವನ್ನು ಮೀರಿದ ವೆಚ್ಚಗಳು, ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಫಲಿತಾಂಶ ಸಿಗದಿರುವುದು, ತೀವ್ರ ಮಾನಸಿಕ ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳೂ ಕಾಡಬಹುದು.

ಕಠಿಣ ಪರಿಶ್ರಮಕ್ಕೆ ಸಿಗದ ಮನ್ನಣೆ ಮತ್ತು ಗ್ರಹಗಳ ಪ್ರಭಾವ:

ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ನಿರಂತರವಾಗಿ ಕಠಿಣ ಪರಿಶ್ರಮ ಪಟ್ಟರೂ ಅವರಿಗೆ ಅರ್ಹವಾದ ಮನ್ನಣೆ ಅಥವಾ ಯಶಸ್ಸು ಸಿಗುವುದಿಲ್ಲ. ಕೊನೆಯ ಕ್ಷಣದಲ್ಲಿ ಉತ್ತಮ ಅವಕಾಶಗಳು ಕೈತಪ್ಪಿ ಹೋಗುವುದು ಮತ್ತು ನಿರಂತರವಾಗಿ ಭವಿಷ್ಯದ ಬಗ್ಗೆ ಚಿಂತೆ ಕಾಡುವುದು ಇವರನ್ನು ಸದಾ ಬೇಸರದಲ್ಲಿಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಸಂದರ್ಭಗಳನ್ನು ಗ್ರಹಗಳ ಪ್ರತಿಕೂಲ ಪ್ರಭಾವವೆಂದು ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿಯು ಮನುಷ್ಯನ ಆತ್ಮವಿಶ್ವಾಸವನ್ನು ಕುಗ್ಗಿಸಿದರೂ, ಇದು ಶಾಶ್ವತವಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಸಾಮಾನ್ಯ ಗ್ರಹ ದೋಷಗಳು ಮತ್ತು ಅವುಗಳ ವಿಭಿನ್ನ ಲಕ್ಷಣಗಳು:

ಎಲ್ಲಾ ಗ್ರಹ ದೋಷಗಳು ಒಂದೇ ರೀತಿಯ ಫಲಿತಾಂಶವನ್ನು ನೀಡುವುದಿಲ್ಲ; ಜಾತಕದಲ್ಲಿ ಯಾವ ಗ್ರಹವು ದುರ್ಬಲವಾಗಿದೆ ಎಂಬುದರ ಆಧಾರದ ಮೇಲೆ ಸಮಸ್ಯೆಗಳು ಬದಲಾಗುತ್ತವೆ. ಉದಾಹರಣೆಗೆ, ಜಾತಕದಲ್ಲಿ ಚಂದ್ರ ದೋಷವಿದ್ದರೆ ಮಾನಸಿಕ ಶಾಂತಿಯ ಕೊರತೆ, ಆತಂಕ ಮತ್ತು ಭಾವನಾತ್ಮಕ ಅಸ್ಥಿರತೆ ಉಂಟಾಗುತ್ತದೆ. ಸೂರ್ಯ ದೋಷವಿದ್ದರೆ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳು ದುರ್ಬಲಗೊಳ್ಳುತ್ತವೆ. ಬುಧ ದೋಷವು ಆಲೋಚನಾ ಶಕ್ತಿ, ಸಂವಹನ ಕೌಶಲ್ಯ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ಗುರು ದೋಷದಿಂದಾಗಿ ಶುಭ ಕಾರ್ಯಗಳು ವಿಳಂಬವಾಗುತ್ತವೆ ಮತ್ತು ಶನಿ, ರಾಹು ಹಾಗೂ ಕೇತುವಿನ ಪ್ರಭಾವದಿಂದ ಜೀವನದಲ್ಲಿ ಕಠಿಣ ಪರೀಕ್ಷೆಗಳು, ವಿಳಂಬಗಳು ಮತ್ತು ಅನಿರೀಕ್ಷಿತ ಬದಲಾವಣೆಗಳು ಎದುರಾಗುತ್ತವೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಗ್ರಹ ದೋಷಗಳಿಗೆ ಸರಿಯಾದ ಪರಿಹಾರಗಳನ್ನು ಕಂಡುಹಿಡಿಯುವುದು ಹೇಗೆ?

ಪ್ರತಿಯೊಬ್ಬ ವ್ಯಕ್ತಿಯ ಜಾತಕವು ವಿಶಿಷ್ಟವಾಗಿರುತ್ತದೆ, ಆದ್ದರಿಂದ ಒಬ್ಬರಿಗೆ ಸರಿಹೊಂದುವ ಪರಿಹಾರವು ಇನ್ನೊಬ್ಬರಿಗೆ ಕಡ್ಡಾಯವಾಗಿ ಅನ್ವಯಿಸುವುದಿಲ್ಲ. ಇದೇ ಕಾರಣಕ್ಕೆ, ನಿಮ್ಮ ಜಾತಕವನ್ನು ಪರೀಕ್ಷಿಸಿದ ಅನುಭವಿ ಜ್ಯೋತಿಷಿಯ ಸಲಹೆಯನ್ನು ಪಡೆಯುವುದು ಸೂಕ್ತವಾಗಿದೆ. ದೋಷದ ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿ, ಅವರು ಮಂತ್ರ ಪಠಣ, ದಾನ ಧರ್ಮಗಳು, ಉಪವಾಸ, ದೇವತಾ ಪೂಜೆ, ಗ್ರಹ ಶಾಂತಿ ಹೋಮಗಳು ಅಥವಾ ಕೆಲವು ಸರಳ ಜೀವನಶೈಲಿಯ ಬದಲಾವಣೆಗಳನ್ನು ಸೂಚಿಸಬಹುದು. ಇವುಗಳನ್ನು ಪೂರ್ಣ ನಂಬಿಕೆ ಮತ್ತು ಶಿಸ್ತಿನಿಂದ ಅನುಸರಿಸುವುದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.

ಗ್ರಹದೋಷಕ್ಕೆ ಭಯ ಬೇಡ:

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರವಿದ್ದೇ ಇರುತ್ತದೆ. ಗ್ರಹ ದೋಷದ ಅಸ್ತಿತ್ವದ ಬಗ್ಗೆ ನಿರಾಶೆಗೊಳ್ಳುವ ಬದಲು, ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ತಜ್ಞರು ಸೂಚಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಜಾತಕದಲ್ಲಿನ ದೋಷಗಳನ್ನು ಎಂದಿಗೂ ಇತರರೊಂದಿಗೆ ಹೋಲಿಸಿಕೊಳ್ಳಬೇಡಿ, ಏಕೆಂದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಕಂಡುಬರುವ ಪರಿಣಾಮಗಳು ಇನ್ನೊಬ್ಬರಿಗೆ ಒಂದೇ ಆಗಿರುವುದಿಲ್ಲ. ಇತರರಿಗೆ ಸೂಚಿಸಿದ ಪರಿಹಾರಗಳು ನಿಮಗೂ ಕೆಲಸ ಮಾಡುತ್ತವೆ ಎಂದು ಭಾವಿಸುವುದು ತಪ್ಪು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಿಗ್ ಬಾಸ್ ಕನ್ನಡ 13’ ಆಡಿಷನ್: ಈ ಸಲ ಸಾಮಾನ್ಯ ಜನರಿಗೂ ಸಿಗಲಿದೆ ಅವಕಾಶ – Kannada News

2026ನೇ ಸಾಲಿನ ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋ ಸ್ವಲ್ಪ ಮುಂಚಿತವಾಗಿಯೇ ಆರಂಭ ಆಗಲಿದೆ. ಈ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ಈಗಾಗಲೇ ಮಾಹಿತಿ ಹಂಚಿಕೊಂಡಿದೆ. ವಿಶೇಷ ಏನೆಂದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೆ ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ. ಅದಕ್ಕಾಗಿ ಆಡಿಷನ್ ನಡೆಸಲಾಗುವುದು. ಈ ಸುದ್ದಿ ಕೇಳಿದ ಬಳಿಕ ಜನಸಾಮಾನ್ಯರಲ್ಲಿ ಆಸೆ ಚಿಗುರಿದೆ. ಯಾವ ರೀತಿ ಆಡಿಷನ್​ನಲ್ಲಿ ಭಾಗವಹಿಸಬೇಕು ಎಂಬುದನ್ನು ಕೂಡ ‘ಕಲರ್ಸ್ ಕನ್ನಡ’ ವಾಹಿನಿ ತಿಳಿಸಿದೆ.

ಪ್ರತಿ ವರ್ಷ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇರುತ್ತದೆ. ಈ ಬಾರಿ ಕೂಡ ಹೊಸತನವನ್ನು ಪರಿಚಯಿಸಲಾಗಿದೆ. ಆಡಿಷನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಒಮ್ಮೆಯಾದರೂ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬೇಕು ಎಂಬುದು ಜನರ ಆಸೆ ಆಗಿರುತ್ತದೆ. ಆದರೆ ಅವಕಾಶ ಸಿಗುವುದು ಸುಲಭವಲ್ಲ. ಈ ಬಾರಿ ಆಡಿಷನ್ ಕರೆದಿರುವುದರಿಂದ ಜನರ ಆಸೆಯ ಬಳ್ಳಿಗೆ ನೀರು ಎರೆದಂತೆ ಆಗಿದೆ.

‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?’ ಎಂದು ‘ಕಲರ್ಸ್ ಕನ್ನಡ’ ವಾಹಿನಿ ಕೇಳುತ್ತಿದೆ. ‘ನಮಸ್ತೆ ಕರ್ನಾಟಕ.. ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ನೀಡುತ್ತಿದ್ದಾರೆ ಬಿಗ್ ಬಾಸ್. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ’ ಎಂದು ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆಡಿಷನ್ ಪ್ರೋಮೋ:

ಜನರಲ್ಲಿ ಪ್ರತಿಭೆ ಇದ್ದರೆ ಮೂರು ನಿಮಿಷದ ವಿಡಿಯೋವನ್ನು ‘Colorskannada.jiostar.com’ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕು. ಆಯ್ಕೆ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಸಿಗಲಿದೆ. ಈ ಬಾರಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಆ ಕಾರಣದಿಂದ ಈ ಸಲದ ಬಿಗ್ ಬಾಸ್ ಶೋ ವಿಶೇಷ ಎನಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಹೊಸ ಸೀಸನ್: ಸರ್ಪ್ರೈಸ್ ನೀಡಿದ ‘ಕಲರ್ಸ್ ಕನ್ನಡ’

ಈವರೆಗೂ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ 12 ಸೀಸನ್​ಗಳು ಯಶಸ್ವಿಯಾಗಿ ನಡೆದಿವೆ. ಈಗ ಬರಲಿರುವುದು 13ನೇ ಸೀಸನ್. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ. ಹೊಸ ಹುರುಪಿನೊಂದಿಗೆ ಹೊಸ ಸೀಸನ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:32 am, Sun, 7 June 26

Source link

ಕೈ ತಪ್ಪಿದ ನಾಯಕತ್ವ… ಸೂರ್ಯಕುಮಾರ್ ಯಾದವ್ ಹೇಳಿದ್ದೇನು? – Kannada News

ಭಾರತ ಟಿ20 ತಂಡದ ನಾಯಕ ಬದಲಾಗಿದ್ದಾರೆ. ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್​ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡಗಳ ನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸೂರ್ಯಕುಮಾರ್ ಯಾದವ್ ಯುಗಾಂತ್ಯವಾಗಿದೆ ಎನ್ನಬಹುದು.

ಈ ಬಗ್ಗೆ ಮುಂಬೈ ಟಿ20 ಲೀಗ್​ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್,  “ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮುಂಬೈ ಕ್ರಿಕೆಟ್‌ಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಸತತವಾಗಿ ಮುಂಬೈನ ಮೂವರು ಆಟಗಾರರು ರಾಷ್ಟ್ರೀಯ ತಂಡದ ನಾಯಕರಾಗುತ್ತಿರುವುದು ಸಣ್ಣ ವಿಷಯವಲ್ಲ” ಎಂದು ಅವರು ಹೇಳಿದ್ದಾರೆ.

ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಹೊಸ ತಂಡವನ್ನು ಪ್ರಕಟಿಸಿದ ತಕ್ಷಣ, ಸೂರ್ಯಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಧಿಕೃತ ತಂಡದ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಿಗಾಗಿ ಇಡೀ ತಂಡಕ್ಕೆ ಮತ್ತು ಹೊಸ ನಾಯಕನಿಗೆ ಒಳಿತಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದಾರೆ.

ನಾಯಕತ್ವ ಬದಲಾವಣೆಗೆ ಕಾರಣಗಳೇನು?

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದ ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಆದರೆ, ಇತ್ತೀಚಿನ ಐಪಿಎಲ್ 2026ರಲ್ಲಿ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಮತ್ತು ವೈಯಕ್ತಿಕ ರನ್ ಗಳಿಕೆಯ ಕುಸಿತ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

ಹೀಗಾಗಿ ನಾಯಕತ್ವದಿಂದ ಕೆಳಗಿಳಿಸಿ ಮುಂಬರುವ ಟಿ20 ಸರಣಿಗಳಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಏಷ್ಯನ್ ಗೇಮ್ಸ್​ ಮತ್ತು ಮುಂದಿನ ಟಿ20 ವಿಶ್ವಕಪ್​ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ  ಬದಲಾವಣೆಯನ್ನು ಮಾಡಿದೆ.

ಅಂದರೆ 35 ವರ್ಷದ ಸೂರ್ಯಕುಮಾರ್ ಯಾದವ್ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಈಗಲೇ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಅದರಂತೆ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಹೊಸ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿ ಬಳಿಕ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಬೇಕಿದ್ದು,  ಇದು ಅಯ್ಯರ್ ಕ್ಯಾಪ್ಟನ್ಸಿಗೆ ಎದುರಾಗಲಿರುವ ಮೊದಲ ಸವಾಲಾಗಿರಲಿದೆ.

Source link

ಬೆಂಗಳೂರು ಪೂರ್ವ ನಗರ ನಿಗಮದಿಂದ ಬೃಹತ್ ಸ್ವಚ್ಛತಾ ಸಪ್ತಾಹ; 100 ಟನ್ ಕಸ ವಿಲೇವಾರಿ! – Kannada News

ಬೆಂಗಳೂರು ಪೂರ್ವ ನಗರ ನಿಗಮದಿಂದ ನೂರು ಟನ್ ಕಸ ತೆರವುಗೊಳಿಸಲಾಗಿದೆ.

ಬೆಂಗಳೂರು, ಜೂನ್ 07: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರು (Bengaluru) ಪೂರ್ವ ನಗರ ನಿಗಮವು (ಬಿಇಸಿಸಿ) ಕೆ.ಆರ್. ಪುರಂ ಮತ್ತು ದೊಡ್ಡನೆಕ್ಕುಂದಿ ವಾರ್ಡ್‌ಗಳಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 100 ಟನ್‌ಗೂ ಹೆಚ್ಚು ಕಟ್ಟಡದ ಅವಶೇಷಗಳು ಮತ್ತು ಕಸವನ್ನು ತೆರವುಗೊಳಿಸಲಾಗಿದ್ದು, 18 ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ಬಿಇಸಿಸಿ ಕಮಿಷನರ್ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಪೂರ್ವ ನಗರ ನಿಗಮದಿಂದ ನೂರು ಟನ್ ಕಸ ತೆರವುಗೊಳಿಸಲಾಗಿದೆ.
  • ವೆಂಗಯ್ಯನ ಕೆರೆ ಆವರಣದಲ್ಲಿ ಒಟ್ಟು ಅರವತ್ತು ಸಸಿಗಳನ್ನು ನೆಡಲಾಗಿದೆ.
  • ಪ್ಲಾಸ್ಟಿಕ್ ಬಳಸಿದವರಿಂದ ಮೂವತ್ತು ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಬೃಹತ್ ಯಂತ್ರೋಪಕರಣಗಳ ಬಳಕೆ

ಈ ಬೃಹತ್ ಸ್ವಚ್ಛತಾ ಕಾರ್ಯಕ್ಕಾಗಿ ನಿಗಮವು 1,600 ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು, ಮಾರ್ಷಲ್‌ಗಳು ಮತ್ತು ಸ್ವಯಂಸೇವಕರನ್ನು ನಿಯೋಜಿಸಿತ್ತು. ಕಸ ವಿಲೇವಾರಿ ಮಾಡಲು 14 ಟ್ರ್ಯಾಕ್ಟರ್‌ಗಳು, 6 ಟಿಪ್ಪರ್ ಲಾರಿಗಳು, 6 ಕಾಂಪಾಕ್ಟರ್ ವಾಹನಗಳು, 20 ಆಟೋ ಟಿಪ್ಪರ್‌ಗಳು ಮತ್ತು 3 ಹಿಟಾಚಿ ಯಂತ್ರಗಳನ್ನು ಬಳಸಿಕೊಳ್ಳಲಾಯಿತು. ಗಂಗಾಶೆಟ್ಟಿ ಕೆರೆ ಆವರಣ, ಸರ್ಕಾರಿ ಶಾಲೆ-ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು. ಇದರೊಂದಿಗೆ ಮುಖ್ಯ ರಸ್ತೆಗಳು, ವಾರ್ಡ್ ರಸ್ತೆಗಳು, ರಸ್ತೆ ವಿಭಜಕಗಳು, ಬಸ್ ತಂಗುದಾಣಗಳು, ಉದ್ಯಾನವನಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸಲೀಸಾಗಿ ಅಚ್ಚುಕಟ್ಟಾಗಿಸಲಾಯಿತು.

ಗಿಡ ನೆಡುವಿಕೆ ಮತ್ತು ಗೋಡೆ ಬರಹ

ಪರಿಸರ ದಿನದ ನೆನಪಿಗಾಗಿ ವೆಂಗಯ್ಯನ ಕೆರೆ ಆವರಣದಲ್ಲಿ 60 ಸಸಿಗಳನ್ನು ನೆಡಲಾಯಿತು. ನಗರದ ಇತರ ಭಾಗಗಳಲ್ಲೂ ಹೆಚ್ಚು ಸಸಿಗಳನ್ನು ನೆಡಲು ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದ್ದಾರೆ. ನಗರದ ಸೌಂದರ್ಯವನ್ನು ಹೆಚ್ಚಿಸುವ ಭಾಗವಾಗಿ ಹಲವಾರು ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಗೋಡೆಗಳ ಮೇಲೆ ಆಕರ್ಷಕ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳನ್ನು ಬಿಡಿಸಲಾಗಿದೆ.

ಪ್ಲಾಸ್ಟಿಕ್ ಬಳಸಿದವರಿಗೆ ದಂಡದ ಬರೆ

ಸ್ವಚ್ಛತೆಯ ಜೊತೆಗೆ ನಿಗಮದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದ ಆರೋಪದ ಮೇಲೆ ಒಟ್ಟು 26 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಂದ ಒಟ್ಟು 30,000 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version