ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ – Kannada News | Brand Bengaluru vs. Bad Bengaluru: CV Raman Nagar Bus Stop Drowning in Waste and Neglect*

ಕಸದಿಂದ ಕಾಣುತ್ತಿಲ್ಲ ಬಸ್​​ ನಿಲ್ದಾಣ Image Credit source: Tv9 kannada

ಬೆಂಗಳೂರು, ಫೆ.3: ಬೆಂಗಳೂರು, ಭಾರತದ ‘ಸಿಲಿಕಾನ್ ವ್ಯಾಲಿ’ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿದೆ. 14,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 44ಕ್ಕೂ ಹೆಚ್ಚು ಯುನಿಕಾರ್ನ್ ಕಂಪನಿಗಳೊಂದಿಗೆ, ಇದು ಐಟಿ, ಎಐ (AI), ಡೀಪ್‌ಟೆಕ್ ಮತ್ತು ನಾವೀನ್ಯತೆಯ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲ ಕೀರ್ತಿಗೂ ವಿರುದ್ಧವಾಗಿದೆ. ಒಂದು ಕಡೆ ರಾಜ್ಯ ಸರ್ಕಾರದ ಬೆಂಗಳೂರನ್ನು ಬ್ರಾಂಡ್​​ ಸಿಟಿ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ ಬೆಂಗಳೂರಿನ ಕಸ ರಾಶಿಯನ್ನು ನೋಡಿದ್ರೆ, ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು ಎಂದು ಜನ ಹೇಳುತ್ತಿದ್ದಾರೆ. ಇದೇನು ಬಸ್ ನಿಲ್ದಾಣವೋ ಅಥವಾ ಜಿಬಿಎ ಡಂಪಿಂಗ್ ಸ್ಥಳವೋ ಎಂಬುದು ಗೊತ್ತಾಗುತ್ತಿಲ್ಲ. ಸಿ ವಿ ರಾಮನ್ ನಗರದ NGEF ವೃತ್ತದ ಬಳಿ ಇರುವ ಬಸ್​​ ನಿಲ್ದಾಣ ಅವಸ್ಥೆ ಇದು.

ಸಿ ವಿ ರಾಮನ್ ನಗರದ NGEF ವೃತ್ತದ ಬಳಿಯ ಬಸ್ ಸ್ಟಾಪ್ ಸುಮಾರು ದಿನಗಳಿಂದ ಇದೆ ಅವಸ್ಥೆಯಲ್ಲಿದೆ, ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಿಲ್ಲ, ಗಮನಿಸಿದ್ರು ಇದನ್ನು ಸರಿ ಮಾಡುವ ಯೋಚನೆ ಮಾಡಿಲ್ಲ. ನಾವು ಬೆಂಗಳೂರನ್ನು ಬದಲಾವಣೆ ಮಾಡುತ್ತೇವೆ. “ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ” ಎಂದು ಕೊಚ್ಚಿಕೊಳ್ಳುತ್ತಿರುವ ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಈ ಕಡೆ ತಲೆ ಕೂಡ ಹಾಕಿಲ್ಲ. ಬಸ್ ಸ್ಟಾಪ್ ಮುಂದೆ ರಾಶಿ ರಾಶಿ ಕಸದ ಮಧ್ಯೆ ಬಸ್​​ಗಾಗಿ ಪ್ರಯಾಣಿಕರ ಪರದಾಡುತ್ತಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿರುವ ಈ ಬಸ್ ನಿಲ್ದಾಣದಲ್ಲಿ ದಿನವಿಡೀ ಕಸದ ರಾಶಿ ಬಿದ್ದಿರುತ್ತದೆ. ಅಲ್ಲಿನ ದುರ್ವಾಸನೆಯಿಂದಾಗಿ ಪ್ರಯಾಣಿಕರು ನಿಲ್ದಾಣದ ಒಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ಸ್ಥಳೀಯ ಕಟ್ಟಡ ಮಾಲೀಕರು ರಾತ್ರೋರಾತ್ರಿ ಬಂದು ಕಟ್ಟಡದ ತ್ಯಾಜ್ಯವನ್ನು (Construction Debris) ರಸ್ತೆಯ ಮೇಲೆ ಮತ್ತು ಬಸ್ ನಿಲ್ದಾಣದ ಮುಂದೆ ಸುರಿಯುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.ಲ್ದಾಣದ ಮುಂದೆ ಕಸ ಮತ್ತು ತ್ಯಾಜ್ಯ ಇರುವುದರಿಂದ ಚಾಲಕರು ಬಸ್ ಅನ್ನು ನಿಲ್ಲಿಸದೆ ಹಾಗೆಯೇ ಹೋಗುತ್ತಿದ್ದಾರೆ. ಇದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯ ಮಧ್ಯೆ ನಿಂತು ಜೀವದ ಹಂಗು ತೊರೆದು ಪರದಾಡಬೇಕಿದೆ. ಹಲವು ತಿಂಗಳಿಂದ ಈ ಅವಸ್ಥೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಬಿಬಿಎಂಪಿ ಸಿಬ್ಬಂದಿ ಕಣ್ಣೆತ್ತಿ ಕೂಡ ನೋಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು

“ಇಲ್ಲಿ ಬಸ್ ನಿಲ್ಲಲ್ಲ, ನಿಂತರೂ ಕಸದ ವಾಸನೆಗೆ ನಾವು ನಿಲ್ಲೋಕೆ ಆಗಲ್ಲ. ರಾತ್ರಿ ಹೊತ್ತು ದೊಡ್ಡ ದೊಡ್ಡ ಲಾರಿಗಳಲ್ಲಿ ತಂದು ಕಸ ಹಾಕ್ತಾರೆ, ಕೇಳೋರೇ ಇಲ್ಲದಂತಾಗಿದೆ.” ಎಂದು ರಘು ಎಂಬುವವರು ಹೇಳಿದ್ದಾರೆ. ಬೈಕ್‌ನಲ್ಲಿ ಹೋಗುವಾಗ ಈ ರಸ್ತೆಯಲ್ಲಿ ಬಿದ್ದಿರೋ ಕಟ್ಟಡ ತ್ಯಾಜ್ಯದಿಂದಾಗಿ ಎಷ್ಟೋ ಜನ ಬಿದ್ದಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಕಸ ವಿಲೇವಾರಿ ಮಾಡಬೇಕು.” ಎಂದು ವಾಹನ ಸವಾರ ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Tue, 3 February 26

Source link

BSNL Recruitment 2026: BSNLನಲ್ಲಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗೆ ನೇಮಕಾತಿ; ಸಂಬಳ ಮತ್ತು ಸೌಲಭ್ಯಗಳ ವಿವರ ಇಲ್ಲಿದೆ – Kannada News | BSNL SET Recruitment 2026: 120 Senior Executive Trainee Posts – Apply Now!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ ನಿಗಮ ನಿಯಮಿತ (BSNL) 2026ನೇ ಸಾಲಿನ ಪ್ರಮುಖ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಒಟ್ಟು 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ (SET) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಂಜಿನಿಯರಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಅರ್ಹತೆ ಹೊಂದಿರುವ ಯುವಕರಿಗೆ ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿಜೀವನ ನಿರ್ಮಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಪ್ರಕ್ರಿಯೆ ಫೆಬ್ರವರಿ 5, 2026 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 7 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಈ ನೇಮಕಾತಿಯಲ್ಲಿ ಎರಡು ಪ್ರಮುಖ ಸ್ಟ್ರೀಮ್‌ಗಳಿವೆ:

  • ಟೆಲಿಕಾಂ ಸ್ಟ್ರೀಮ್ – 95 ಹುದ್ದೆಗಳು
  • ಹಣಕಾಸು (Finance) ಸ್ಟ್ರೀಮ್ – 25 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಟೆಲಿಕಾಂ ಸ್ಟ್ರೀಮ್: ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಿಕಲ್ ಅಥವಾ ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ BE/B.Tech ಪದವಿ ಅಗತ್ಯ.
  • ಫೈನಾನ್ಸ್ ಸ್ಟ್ರೀಮ್: CA (ಚಾರ್ಟರ್ಡ್ ಅಕೌಂಟೆಂಟ್) ಅಥವಾ CMA (Cost & Management Accountant) ಅರ್ಹತೆ ಅಗತ್ಯ.

ವಯೋಮಿತಿ:

  • ಕನಿಷ್ಠ ವಯಸ್ಸು – 21 ವರ್ಷ
  • ಗರಿಷ್ಠ ವಯಸ್ಸು – 30 ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ ಹೆಚ್ಚುವರಿ ಸಡಿಲಿಕೆ ನೀಡಲಾಗುತ್ತದೆ.

ಸಂಬಳ ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳು IDA ವೇತನ ಶ್ರೇಣಿ E-3 ಅಡಿಯಲ್ಲಿ 24,900 – 50,500 ರೂ. ಸಂಬಳ ಪಡೆಯುತ್ತಾರೆ.
ಪ್ರೊಬೇಷನ್ ಪೂರ್ಣಗೊಂಡ ನಂತರ ಪದೋನ್ನತಿ ಹಾಗೂ ಸರ್ಕಾರಿ ಭತ್ಯೆಗಳು, ಸೌಲಭ್ಯಗಳು ದೊರೆಯುತ್ತವೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಆಯ್ಕೆ ಪ್ರಕ್ರಿಯೆ:

ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಯಲಿದೆ. ಪರೀಕ್ಷೆಯನ್ನು ಮಾರ್ಚ್ 29 ರಂದು ನಡೆಸುವ ನಿರೀಕ್ಷೆಯಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ – 2,500 ರೂ.
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ – 1,250 ರೂ.
  • ಅರ್ಜಿ ಸಲ್ಲಿಸಿದ ನಂತರ, ಮಾರ್ಚ್ 8 ರಿಂದ 15 ರವರೆಗೆ ತಿದ್ದುಪಡಿ ವಿಂಡೋ ಲಭ್ಯವಿರುತ್ತದೆ.

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಎಂಜಿನಿಯರಿಂಗ್ ಮತ್ತು ಫೈನಾನ್ಸ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ BSNL SET ನೇಮಕಾತಿ ಒಂದು ದೊಡ್ಡ ಅವಕಾಶವಾಗಿದೆ. ಉತ್ತಮ ಸಂಬಳ, ಸ್ಥಿರ ಉದ್ಯೋಗ ಮತ್ತು ಬೆಳವಣಿಗೆ ಅವಕಾಶಗಳಿರುವ ಈ ಹುದ್ದೆಗೆ ಅರ್ಹರು ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ಗೂ ಮುನ್ನ ಸಂಜು ಸ್ಯಾಮ್ಸನ್​ಗೆ ಕೊನೆಯ ಅವಕಾಶ – Kannada News | Sanju Samson’s T20 World Cup Hope: South Africa Practice Match Crucial for Playing XI Spot

ವಾಸ್ತವವಾಗಿ ನಾಳೆ ಅಂದರೆ ಫೆಬ್ರವರಿ 4 ರ ಬುಧವಾರದಂದು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಅಭ್ಯಾಸ ಪಂದ್ಯವಾಗಿದ್ದರೂ, ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ವರದಿಗಳ ಪ್ರಕಾರ, 35,000 ಟಿಕೆಟ್‌ಗಳು ಮಾರಾಟವಾಗಿವೆ, ಅಂದರೆ ಹೌಸ್ ಫುಲ್ ಆಗುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ನೀಡಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಬಹುದು.

Source link

ಈ ಕೆಲವು ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು, ಕೈಯಲ್ಲಿ ಒಗೆದರೆ ಉತ್ತಮ – Kannada News | These are some clothes that should never be washed in the washing machine

ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಹೆಚ್ಚಿನವರಿಗೆ ಮನೆಕೆಲಸಗಳನ್ನು ಮಾಡುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಈ ಬಟ್ಟೆ ಒಗೆಯುವುದೆಂದರೆ ಹಲವರಿಗೆ ತಲೆಬಿಸಿ. ಇದಕ್ಕಾಗಿ ಹೆಚ್ಚಿನವರು ಎಲ್ಲಾ ಬಟ್ಟೆಗಳನ್ನು ಸಹ ಒಮ್ಮೆಲೇ ವಾಷಿಂಗ್‌ ಮಷಿನ್‌ನಲ್ಲಿ (washing machine) ತೊಳೆದುಬಿಡುತ್ತಾರೆ. ಇದರಿಂದ ಕೆಲಸ ಸುಲಭವಾಗುತ್ತದೆ, ಸಮಯ ಉಳಿತಾಯವಾಗುತ್ತದೆ ನಿಜ. ಆದ್ರೆ ಎಲ್ಲಾ ರೀತಿಯ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವುದು ಸೂಕ್ತವಲ್ಲ. ಹೌದು ಕೆಲವೊಂದು ಬಟ್ಟೆಗಳನ್ನು ಮಷಿನ್‌ನಲ್ಲಿ ವಾಶ್‌ ಮಾಡಿದಾಗ ಅವುಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಬಟ್ಟೆಗಳನ್ನು ಕೈಯಲ್ಲಿ ಒಗೆದರೆ ಉತ್ತಮ. ಹಾಗಿದ್ರೆ ಯಾವ ಬಟ್ಟೆಗಳನ್ನು ಕೈಯಲ್ಲಿ ಒಗೆದರೆ ಸೂಕ್ತ, ಯಾವ ಬಟ್ಟೆಗಳನ್ನು ವಾಷಿಂಗ್‌ ಮಷೀನ್‌ನಲ್ಲಿ ವಾಶ್‌ ಮಾಡಬಹುದು ಎಂಬುದನ್ನು ತಿಳಿಯಿರಿ.

ಯಾವ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು?

ಕೆಲವೊಂದು ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು. ಅವುಗಳನ್ನು ಕೈಯಿಂದ ಒಗೆಯುವುದೇ ಉತ್ತಮ.

  • ಬಿಳಿ ಬಟ್ಟೆಗಳನ್ನು ಕೈಯಿಂದ ಒಗೆಯುವುದು ಉತ್ತಮ. ಯಂತ್ರದಲ್ಲಿ ಒಗೆದರೆ ಬೇರೆ ಬಟ್ಟೆಯ ಬಣ್ಣ ಬಿಳಿ ಬಟ್ಟೆಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
  • ಹೆಚ್ಚು ಕೊಳೆಯಾದ ಬಟ್ಟೆಗಳನ್ನು ಕೈಯಿಂದ ತೊಳೆದರೆಯೇ ಉತ್ತಮ.
  • ಮೃದುವಾದ ಹತ್ತಿ ಟಾಪ್‌ಗಳು ಮತ್ತು ಲಿನಿನ್ ಶರ್ಟ್‌ಗಳನ್ನು ಯಾವಾಗಲೂ ಕೈಯಿಂದ ಒಗೆಯಬೇಕು.
  • ಡಿಸೈನರ್‌ ಕುರ್ತಾ ಇನ್ನಿತರ ಬಟ್ಟೆ, ಎಂಬ್ರಾಯ್ಡರಿ ವರ್ಕ್‌ ಇರುವಂತಹ ಬಟ್ಟೆಗಳನ್ನು ಯಂತ್ರದಲ್ಲಿ ತೊಳೆಯುವುದು ಸೂಕ್ತವಲ್ಲ.
  • ಕಪ್ಪು ಬಣ್ಣದ ಬಟ್ಟೆಗಳನ್ನು ಸಹ ಕೈಯಿಂದ ಒಗೆಯಬೇಕು. ಇದು ಬಟ್ಟೆಗಳ ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಬೇಗನೆ ಮಸುಕಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
  • ಅಲ್ಲದೆ ಉಣ್ಣೆ, ರೇಷ್ಮೆ, ಶಿಫೋನ್ ಬಟ್ಟೆ, ಲೆದರ್‌ ಜಾಕೆಟ್‌ಗಳನ್ನು ಸಹ ಯಂತ್ರದಲ್ಲಿ ತೊಳೆಯಬಾರದು. ಏಕೆಂದರೆ ಈ ಉಡುಪುಗಳು ಬಹು ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಬಿಳಿ ಬಟ್ಟೆಯ ಮೇಲಿನ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯ

ಯಾವ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಹುದು?

  • ದಪ್ಪ ಜೀನ್ಸ್ ಮತ್ತು ಪ್ಯಾಂಟ್‌ಗಳನ್ನು ಯಂತ್ರದಲ್ಲಿ ಒಟ್ಟಿಗೆ ತೊಳೆಯಬಹುದು.
  • ಟವೆಲ್‌ಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವುದು ಸೂಕ್ತ.
  • ಬಣ್ಣ ಬಿಡದ ಬಟ್ಟೆಗಳನ್ನು ಯಂತ್ರದಲ್ಲಿ ವಾಷ್‌ ಮಾಡಬಹುದು. ಬಟ್ಟೆಗಳು ತುಂಬಾ ಮೃದುವಾಗಿದ್ದರೆ, ಅವುಗಳನ್ನು ಲೈಟ್ ಮೋಡ್‌ನಲ್ಲಿ ತೊಳೆಯಿರಿ.
  • ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಸಹ ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಹುದು.

ಡ್ರೈ ಕ್ಲೀನ್ ಮಾಡಬಹುದಾದ ಬಟ್ಟೆಗಳು:

ಸೀರೆಗಳು ಅದರಲ್ಲೂ ರೇಷ್ಮೆ ಸೀರೆ,  ಸೂಟ್‌ಗಳು, ಕೋಟ್‌ಗಳು, ಚಳಿಗಾಲದ ಜಾಕೆಟ್‌ಗಳನ್ನು ಡ್ರೈ ಕ್ಲೀನ್ ಮಾಡಿದರೆ ಉತ್ತಮ. ಹೀಗೆ ಮಾಡುವುದರಿಂದ ಅವುಗಳ ಹೊಳಪು ಉಳಿಯುತ್ತದೆ ಮತ್ತು ಬಟ್ಟೆಯೂ ಸಹ ಹಾನಿಗೊಳಗಾಗುವುದಿಲ್ಲ. ಡ್ರೈ ಕ್ಲೀನಿಂಗ್ ಬಟ್ಟೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ: ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್​ – Kannada News | Relationship Between Kamalakar Bhat Guruji and Suchitra Exposed by Daughter’s Message to Her Father

ಸುಚಿತ್ರಾ ಜೊತೆಗೆ ಕಮಲಾಕರ್​​ ಭಟ್​​ ಗುರೂಜಿImage Credit source: Tv9 Kannada

ಕಾರವಾರ, ಫೆಬ್ರವರಿ 03: ಸುಚಿತ್ರಾ ಎಂಬ ವಿವಾಹಿತ ಮಹಿಳೆಯ ಜೊತೆಗೆ ಕಮಲಾಕರ ಭಟ್ ಗುರೂಜಿಯ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಅಷ್ಟಕ್ಕೂ ಇಬ್ಬರ ನಡುವಿನ ಸಂಬಂಧ ಬಯಲು ಮಾಡಿದ್ದು, ಒಂದೇ ಒಂದು ಮೆಸೇಜ್​​ ಎನ್ನಲಾಗಿದೆ. 20 ವರ್ಷಗಳ ಹಿಂದೆ ಮಹೆಶ್​​ ಜೊತೆ ಪ್ರೀತಿಸಿ ವಿವಾಹವಾಗಿದ್ದ ಸುಚಿತ್ರಾ ಕಳೆದ 6 ತಿಂಗಳ ಹಿಂದೆ ಗಂಡನಿಗೆ ಗೊತ್ತಿಲ್ಲದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನೂ ಕರೆದೊಯ್ದು ಶಿವಮೊಗ್ಗದ ಕಮಲಾಕರ ಭಟ್ ಗೂರೂಜಿ ಜೊತೆ ವಾಸವಿದ್ದಳು. ಈ ಬಗ್ಗೆ ಓರ್ವ ಮಗಳು ತಂದೆಗೆ ವಿಷಯ ತಿಳಿಸಿದ್ದರಿಂದಲೇ ಗುರೂಜಿ ಮತ್ತು ಸುಚಿತ್ರಾ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದೆ ಎನ್ನಲಾಗಿದೆ.

ತಂದೆಗೆ ಮಗಳು ಮಾಡಿದ್ದ ಮೇಸೇಜ್​ ಏನು?

ನಾನು ಮತ್ತೆ ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ತಾಯಿ ಹಾಗೂ ಗುರೂಜಿ ಬೇರೆ ರೂಂನಲ್ಲಿ ಮಲಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸುಚಿತ್ರಾ ಮಗಳು ತಂದೆ ಮಹೇಶ್​​ಗೆ ತಿಳಿಸಿದ್ದಳು. ಅಲ್ಲದೆ ತಾಯಿ ತನಗೆ ಹಿಂಸೆ ನೀಡುತ್ತಿದ್ದು, ಪ್ಲೀಸ್​​ ಅಪ್ಪ ನನ್ನನ್ನು ಕರೆದುಕೊಂಡು ಹೋಗು ಎಂದು ಮೆಸೇಜ್​​ ಮಾಡಿದ್ದಳು. ಇಲ್ಲದಿದ್ದರೆ ತಾನು ಸಾಯುವುದಾಗಿ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಶಿವಮೊಗ್ಗದಿಂದ ಸಿದ್ದಾಪುರಕ್ಕೆ ಬರುವಂತೆ ತಂದೆ ಮಹೇಶ್​ ತಿಳಿಸಿದ್ದರು. ಅದರಂತೆ ಮಗಳು ತಂದೆಯ ಬಳಿ ಬಂದಿದ್ದು, ಆಕೆಯನ್ನು ಸಿದ್ದಾಪುರ ಠಾಣೆಗೆ ಕರೆದುಕೊಂಡು ಹೋಗಿದ್ದ ಮಹೇಶ್​​ ಪತ್ನಿಯ ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಂದೆಯೂ ಮಗಳನ್ನು ಹಾಜರಿಪಡಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹಲ್ಲೆ, ಓರ್ವ ಸಾವು

ಈ ನಡುವೆ ರಾತ್ರಿ 9.45ರ ಸುಮಾರಿಗೆ ಸುಚಿತ್ರಾ ಮತ್ತು ಆಕೆಯ ತಂದೆ ಸೇರಿ ಇತರ ನಾಲ್ವರು ಚಾಕು ಹಿಡಿದು ಏಕಾಏಕಿ ಮನೆಗೆ ನುಗ್ಗಿದ್ದು, ಅವರನ್ನು ತಡೆದ ಮಹೇಶ್​​, ಅವರ ತಮ್ಮ ವಸಂತ್​​ ನಾಯ್ಕ ಮತ್ತು ನೆರೆ ಮನೆಯ ಕುಮಾರ್​​ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಚಿತ್ರಾ ಜೊತೆಗಿನ ಗುರೂಜಿ ಫೋಟೋ ಲಭ್ಯ

ಕಮಲಾಕರ ಭಟ್ ಗೂರುಜಿ ಜೊತೆಗಿನ ಸುಚಿತ್ರಾ ಫೋಟೋ Tv9ಗೆ ಲಭ್ಯವಾಗಿದೆ. ನನ್ನ ಕುಟುಂಬ ಎಂದು ಗುರೂಜಿ ಹಾಕಿರುವ ಈ ಫೋಟೋ ಇಬ್ಬರೂ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ಸಾಕ್ಷಿ ಎಂಬಂತಿದೆ. ಸುಚಿತ್ರಾಳ ಹೆಗಲ ಮೇಲೆ ಕೈ ಹಾಕಿ ಗುರೂಜಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಮಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:29 pm, Tue, 3 February 26

Source link

ಆಸ್ಕರ್​ ಮೇಲೆ ಕಣ್ಣಿಟ್ಟರೇ ಅಂಬಾನಿ? ಆ ನಿರ್ಮಾಣ ಸಂಸ್ಥೆ ಸ್ವಾಧೀನಕ್ಕೆ ಪಡೆದಿದ್ದೇಕೆ? – Kannada News | Reliance Jio Studios Acquires Oscar winning production house Sikhya Entertainment

ಮುಖೇಶ್ ಅಂಬಾನಿ (Mukesh Ambani) ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರು. ಅವರ ಒಡೆತನದ ರಿಲಯನ್ಸ್ ಮತ್ತು ಜಿಯೋ ದೇಶ ಮತ್ತು ವಿದೇಶಗಳಲ್ಲಿ ಹಲವಾರು ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಕೊಂಡಿದೆ. ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್​​ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್​​ವರ್ಕ್ ಮನರಂಜನೆಗೆ ಸಂಬಂಧಿಸಿದ ಇನ್ನೂ ಹಲವು ಉದ್ಯಮಗಳಿವೆ. ಇವುಗಳ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಖರೀದಿಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ.

ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

ಗುಣೀತ್ ಮೋಂಗಾ ಕಪೂರ್ ಮತ್ತು ಅಚಿನ್ ಜೈನ್ ಪ್ರಾರಂಭಿಸಿದ ಸಿಖ್ಯಾ ಎಂಟರ್‌ಟೈನ್‌ಮೆಂಟ್, ಕಳೆದ ದಶಕದಲ್ಲಿ, ವಿಶ್ವ ವೇದಿಕೆಯಲ್ಲಿ ಭಾರತೀಯ ಕಥೆಗಳನ್ನು ಹೇಗೆ ಹೇಳಬಹುದು ಮತ್ತು ಅದರ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸಿಖ್ಯಾ ನಿರ್ಮಾಣ ಸಂಸ್ಥೆಯು ಆಸ್ಕರ್ ಪ್ರಶಸ್ತಿ ಗೆದ್ದಿರುವ ಜೊತೆಗೆ ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯಾಗಿದೆ.

ಇದನ್ನೂ ಓದಿ:ಈಗ ಹೇಗಾಗಿದ್ದಾರೆ ನೋಡಿ ‘ಮಿಲನ’ ಸಿನಿಮಾ ನಟಿ ಪಾರ್ವತಿ; ಹೊಸ ಫೋಟೋಸ್ ವೈರಲ್

ಸಿಖ್ಯ ಎಂಟರ್ಟೈನ್​​ಮೆಂಟ್​ ಸಂಸ್ಥೆಯು ಎರಡು ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆ ಆಗಿದೆ. 2018 ರಲ್ಲಿ ಸಿಖ್ಯ ನಿರ್ಮಿಸಿದ್ದ ‘ಪೀರಿಯಡ್: ಎಂಡ್ ಆಫ್ ಸೆಂಟೆನ್ಸ್’ ಹೆಸರಿನ ಡಾಕ್ಯುಮೆಂಟರಿ ಶಾರ್ಟ್​​ಗೆ ಆಸ್ಕರ್ ಬಂದಿತ್ತು. ಬಳಿಕ 2022 ರಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಬಂದಿತ್ತು. ಈ ಎರಡೂ ಡಾಕ್ಯುಮೆಂಟರಿಗಳನ್ನು ಸಿಖ್ಯ ಎಂಟರ್ಟೈನ್​​​ಮೆಂಟ್ ನಿರ್ಮಾಣ ಮಾಡಿದೆ.

ಡಾಕ್ಯುಮೆಂಟರಿ ಮಾತ್ರವೇ ಅಲ್ಲದೆ ಸಿಖ್ಯ ಹಲವು ಅತ್ಯುತ್ತಮ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದೆ. ಅದರಲ್ಲೂ ದೊಡ್ಡ ಸ್ಟಾರ್ ನಟರಲ್ಲದೆ, ಹೊಸಬರನ್ನು ಹಾಕಿಕೊಂಡು ಕತೆಗೆ ಮಾತ್ರವೇ ಪ್ರಾಧಾನ್ಯತೆ ನೀಡುತ್ತಾ ಸಿನಿಮಾ ನಿರ್ಮಾಣ ಮಾಡುವುದು ಸಿಖ್ಯ ಶೈಲಿ. ‘ದಿ ಲಂಚ್​​ಬಾಕ್ಸ್’, ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಮಸಾನ್’, ‘ಸೂರರೈ ಪೋಟ್ರು’, ‘ಕಠಲ್’ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ – Kannada News | PDO Nataraj to file defamation case against Yash mother Pushpa Arun Kumar

ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಮಾಡಿಕೊಂಡಿದ್ದಾರೆ. ಪಿಡಿಒ ನಟರಾಜ್ ವಿರುದ್ಧ ಅವರು ಆರೋಪ ಮಾಡಿದ್ದರು. ಅದಕ್ಕೆ ಸ್ವತಃ ನಟರಾಜ್ ಅವರು ಪ್ರತಿಕ್ರಿಯೆ ಈಗ ನೀಡಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಟರಾಜ್ (PDO Nataraj) ಅವರು ತಳ್ಳಿಹಾಕಿದ್ದಾರೆ. ‘ಸತ್ಯಮಂಗಲ ಗ್ರಾಮ ಪಂಚಾಯಿತಿಯಲ್ಲಿ 2018ರಿಂದ 2022ರ ತನಕ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಇ-ಸ್ವತ್ತು ನಾನೇ ಮಾಡಿಕೊಟ್ಟಿದ್ದು. ಹಾಗಿದ್ದರೂ ನನ್ನ ಮೇಲೆ ಅವರು ಆರೋಪ ಮಾಡುತ್ತಿದ್ದಾರೆ. ಯಾಕೆ ಎಂಬುದು ಗೊತ್ತಿಲ್ಲ. ನಾವು ನಮ್ಮ ವೃತ್ತಿ ಮಾಡಿದ್ದೇವೆ. ಸುಳ್ಳರು, ಕಳ್ಳರು ಅಂತ ಹೇಳಿದರೆ ನೋವಾಗುತ್ತದೆ. ನಾನು ಕೂಡ ವಕೀಲನಾಗಿ ಕೆಲವು ವರ್ಷ ಕೆಲಸ ಮಾಡಿದ್ದೇನೆ. ಪುಷ್ಪಾ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಆಲೋಚನೆ ಮಾಡಿದ್ದೇನೆ’ ಎಂದು ನಟರಾಜ್ ಅವರು ಹೇಳಿದ್​ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು – Kannada News | How CME Group’s hike in margin requirements led to crash in gold and silver prices

ಕಳೆದ ಒಂದು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver prices) ಸಿಕ್ಕಾಪಟ್ಟೆ ಏರಿದಷ್ಟು ವೇಗದಲ್ಲಿ ಕೆಲ ದಿನಗಳಿಂದ ಕುಸಿತ ಕಾಣುತ್ತಿವೆ. ಈ ಅಮೂಲ್ಯ ಲೋಹಗಳ ಬೆಲೆಯನ್ನು ಕಟ್ಟಿಹಾಕುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿರುವ ಹೊತ್ತಲ್ಲೇ ಭರ್ಜರಿ ಕುಸಿತ ಆಗಿದೆ. ಹೂಡಿಕೆದಾರರು ಲಾಭಕ್ಕೆ ಮಾರಿಕೊಳ್ಳುತ್ತಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ. ಆದರೆ, ಕಾಮೆಕ್ಸ್ ಮಾರುಕಟ್ಟೆಯಲ್ಲಿ ಪ್ಯಾನಿಕ್ ಸೆಲ್ಲಾಫ್ (Panic Sell-off) ಆಗಿರುವುದು ಕಂಡು ಬಂದಿದೆ. ಪ್ಯಾನಿಕ್ ಸೆಲ್ಲಾಫ್ ಎಂದರೆ ಹೂಡಿಕೆದಾರರು ಯಾವುದೋ ಆತಂಕದಿಂದ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿರುವುದಾಗಿದೆ.

ಗೋಲ್ಡ್, ಸಿಲ್ವರ್ ಫ್ಯೂಚರ್ಸ್​ನಲ್ಲಿ ಶುರುವಾದ ನಡುಕ

ಕಮಾಡಿಟಿ ಎಕ್ಸ್​ಚೇಂಜ್​ ಅಥವಾ ಕಾಮೆಕ್ಸ್​ನಲ್ಲಿ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಸಖತ್ ಕುಸಿತ ಕಂಡಿವೆ. ಸೋಮವಾರ ಒಂದೇ ದಿನ ಈ ಡಿರೈವೇಟಿವ್ಸ್ ಟ್ರೇಡಿಂಗ್​ನಲ್ಲಿ ಬೆಲೆ ಶೇ. 2ರಿಂದ 5ರಷ್ಟು ಇಳಿಕೆ ಆಗಿದೆ.

ಇಲ್ಲಿಂದ ಶುರುವಾದ ನಡುಕವು ಇಟಿಎಫ್ ಹೂಡಿಕೆದಾರರಿಗೆ ಭಯಭೀತಗೊಳಿಸಿದೆ. ಸಿಲ್ವರ್ ಇಟಿಎಫ್ ಮತ್ತು ಗೋಲ್ಡ್ ಇಟಿಎಫ್​ಗಳಿಂದ ಲೆಕ್ಕವಿಲ್ಲದಷ್ಟು ಹೂಡಿಕೆಗಳು ಹೊರ ಹೋಗಿವೆ. ಹೀಗಾಗಿ, ಈ ಎರಡು ಲೋಹಗಳ ಬೆಲೆ ಗಣನೀಯವಾಗಿ ಇಳಿಕೆ ಆಗಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಲು ಕಾರಣವಾಗಿದ್ದೇ ಈ ಇಟಿಎಫ್​ಗಳು. ಈಗ ಇದೇ ಇಟಿಎಫ್​ಗಳು ಇವೆರೆಡು ಲೋಹಗಳ ಬೆಲೆ ಕುಸಿತಕ್ಕೆ ಎಡೆ ಮಾಡಿಕೊಟ್ಟಿವೆ.

ಗೋಲ್ಡ್ ಫ್ಯೂಚರ್ಸ್, ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಏನು ಕಾರಣ?

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್​ನ ಛೇರ್ಮನ್ ಸ್ಥಾನ ಬದಲಾವಣೆ ಆಗಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಟ್ರಂಪ್ ಮಾತು ಕೇಳುವ ಕೆವಿನ್ ವಾರ್ಷ್ ಎಂಬುವವರು ಹೊಸ ಛೇರ್ಮನ್ ಆಗಲಿದ್ದಾರೆ ಎನ್ನುವ ಸುದ್ದಿ ಬಂದ ಬೆನ್ನಲ್ಲೇ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಬೆಲೆ ವ್ಯತ್ಯಯಕ್ಕೆ ಕಾರಣವಾಯಿತು.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ಸಿಎಂಇ ಗ್ರೂಪ್ ಮಾರ್ಜಿನ್ ದರ ಏರಿಕೆಯಾಗಿದ್ದೇ ಪ್ಯಾನಿಕ್ ಸೆಲ್ಲಾಫ್​ಗೆ ಕಾರಣ?

ವಿಶ್ವದ ಕೆಲ ಪ್ರಮುಖ ಡಿರೈವೇಟಿವ್ ಮಾರುಕಟ್ಟೆಗಳನ್ನು ನಿರ್ವಹಿಸುವ ಸಿಎಂಇ ಗ್ರೂಪ್ ಮೂರು ದಿನದಲ್ಲಿ ಎರಡು ಬಾರಿ ಮೈಂಟೆನೆನ್ಸ್ ಮಾರ್ಜಿನ್ ಅನ್ನು ಹೆಚ್ಚಿಸಿತು. ಟ್ರೇಡರ್​​ಗಳು ಎಫ್ ಅಂಡ್ ಓ ಟ್ರೇಡಿಂಗ್ ಮಾಡಲು ಪಾವತಿಸಬೇಕಾದ ಠೇವಣಿ ಹಣ ಹೆಚ್ಚಳಗೊಂಡಿತು. ಇದರಿಂದ ಟ್ರೇಡರ್​ಗಳು ಫ್ಯೂಚರ್ಸ್​ನಿಂದ ನಿರ್ಗಮಿಸತೊಡಗಿದರು. ಇದು ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಕಾರಣವಾಯಿತು. ತತ್​ಪರಿಣಾಮವಾಗಿ ಇಟಿಎಫ್​ಗಳಲ್ಲೂ ಪ್ಯಾನಿಕ್ ಸೆಲ್ಲಾಫ್ ನಡೆಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ – Kannada News | Karnataka senior politician Kagodu Thimmappa Collapses from Health issue At Marikamba Devi Jatra at Sagara

ಶಿವಮೊಗ್ಗ, (ಫೆಬ್ರವರಿ 03): ಇಂದಿನಿಂದ ಆರಂಭವಾದ ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ (Kagodu Thimmappa) ಅವರು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಾರಿಕಾಂಬ ದೇವಿಯ ದರ್ಶನಕ್ಕೆ ತೆರಳಿದ್ದ ವೇಳೆ ವೇಳೆ ತೀವ್ರ ಉಸಿರಾಟ ಹಾಗೂ ಮಧುಮೇಹ ಸಮಸ್ಯೆಯಿಂದಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರಿಗೆ ಉಪ ವಿಭಾಗೀಯ ಆಸ್ಪತ್ರೆಯ ವೈದ್ಯ ವಿಕ್ರಂ ಚಿಕಿತ್ಸೆ ನೀಡಿದ್ದಾರೆ. ದೇವಸ್ಥಾನದಲ್ಲಿ ತೀವ್ರ ಜನಸಂದಣಿ ಇದ್ದಿದ್ದರಿಂದ ಉಸಿರಾಟ ಸಮಸ್ಯೆಯಾಗಿದ್ದು, ಚಿಕಿತ್ಸೆಯಿಂದಾಗಿ ಆರೋಗ್ಯ ಸುಧಾರಣೆಯಾಗಿದೆ. ಸದ್ಯ ಅರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ನಿಮ್ಮ ಲಗ್ನಕ್ಕೆ ಅನುಗುಣವಾಗಿ ಅದೃಷ್ಟ ದೇವತೆ ತಿಳಿಯಿರಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Astrology Insights: Identifying Your Adrushta Devate for Each Ascendant

ಜ್ಯೋತಿಷ್ಯ ಶಾಸ್ತ್ರದಲ್ಲಿ, ಲಗ್ನ, ರಾಶಿ ಮತ್ತು ನಕ್ಷತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿ ಲಗ್ನವು ಅತ್ಯಂತ ಮೂಲಭೂತವಾಗಿದ್ದು, ವ್ಯಕ್ತಿಯ ಜನನದ ಸಮಯದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಪ್ರತಿ ಲಗ್ನಕ್ಕೂ ಒಂದು ನಿರ್ದಿಷ್ಟ ಅದೃಷ್ಟ ದೇವತೆ ಇರುತ್ತದೆ. ಈ ಅದೃಷ್ಟ ದೇವತೆಯನ್ನು ಲಗ್ನದಿಂದ ಪಂಚಮ ಸ್ಥಾನದ ಅಧಿಪತಿಯ ಮೂಲಕ ಗುರುತಿಸಲಾಗುತ್ತದೆ. ಪಂಚಮಾಧಿಪತಿಯು ನಿಮ್ಮ ಜೀವನಪೂರ್ತಿ ನಿಮ್ಮ ಅದೃಷ್ಟ ದೇವತೆಯಾಗಿರುತ್ತಾನೆ. ಈ ದೇವತೆಯನ್ನು ನಿಯಮಿತವಾಗಿ ಆರಾಧಿಸುವುದರಿಂದ ಶುಭ ಫಲಗಳು ಲಭಿಸುತ್ತವೆ ಮತ್ತು ಅದೃಷ್ಟ ಕೂಡಿಬರುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವಿವಿಧ ಲಗ್ನಗಳಿಗೆ ಅದೃಷ್ಟ ದೇವತೆಗಳು:

ಮೇಷ ಲಗ್ನ:

ಮೇಷ ಲಗ್ನದಲ್ಲಿ ಜನಿಸಿದವರಿಗೆ ಪಂಚಮ ಸ್ಥಾನವು ಸಿಂಹ ರಾಶಿಯಾಗಿರುತ್ತದೆ. ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ. ಆದ್ದರಿಂದ, ಮೇಷ ಲಗ್ನದವರು ಪ್ರತಿದಿನ ಸೂರ್ಯ ದೇವನನ್ನು ಆರಾಧಿಸುವುದರಿಂದ ಅದೃಷ್ಟ ಲಭಿಸುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ.

ವೃಷಭ ಲಗ್ನ:

ವೃಷಭ ಲಗ್ನಕ್ಕೆ ಪಂಚಮ ಸ್ಥಾನವು ಕನ್ಯಾ ರಾಶಿಯಾಗಿರುತ್ತದೆ. ಕನ್ಯಾ ರಾಶಿಯ ಅಧಿಪತಿ ಬುಧ. ವೃಷಭ ಲಗ್ನದವರು ವಿಷ್ಣುವನ್ನು ಆರಾಧಿಸುವುದರಿಂದ ಸಾಕಷ್ಟು ಶುಭವಾಗುತ್ತದೆ.

ಮಿಥುನ ಲಗ್ನ:

ಮಿಥುನ ಲಗ್ನಕ್ಕೆ ಪಂಚಮ ಸ್ಥಾನವು ತುಲಾ ರಾಶಿಯಾಗಿರುತ್ತದೆ. ತುಲಾ ರಾಶಿಯ ಅಧಿಪತಿ ಶುಕ್ರ. ಈ ಲಗ್ನದವರು ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ.

ಕರ್ಕ ಲಗ್ನ:

ಕರ್ಕ ಲಗ್ನದವರಿಗೆ ವೃಶ್ಚಿಕ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದ ಅದೃಷ್ಟ ದೇವತೆ ಸುಬ್ರಹ್ಮಣ್ಯ ಸ್ವಾಮಿ. ಸುಬ್ರಹ್ಮಣ್ಯನನ್ನು ಆರಾಧಿಸುವುದರಿಂದ ಅದೃಷ್ಟ ವೃದ್ಧಿಯಾಗುತ್ತದೆ.

ಸಿಂಹ ಲಗ್ನ:

ಸಿಂಹ ಲಗ್ನದವರಿಗೆ ಧನುಸ್ಸು ರಾಶಿಯು ಪಂಚಮ ಸ್ಥಾನವಾಗಿರುತ್ತದೆ. ಧನುಸ್ಸಿನ ಅಧಿಪತಿ ಗುರು. ಸಿಂಹ ಲಗ್ನದವರು ಶಿವನನ್ನು ಆರಾಧಿಸುವುದರಿಂದ ಸಾಕಷ್ಟು ಶುಭವಾಗುತ್ತದೆ.

ಕನ್ಯಾ ಲಗ್ನ:

ಕನ್ಯಾ ಲಗ್ನದವರಿಗೆ ಮಕರ ರಾಶಿಯು ಪಂಚಮ ಸ್ಥಾನವಾಗಿರುತ್ತದೆ. ಮಕರದ ಅಧಿಪತಿ ಶನಿ. ಕನ್ಯಾ ಲಗ್ನದವರು ಶಿವನನ್ನು ಆರಾಧಿಸುವುದರಿಂದ ಶುಭ ಫಲಗಳನ್ನು ಪಡೆಯುತ್ತಾರೆ.

ತುಲಾ ಲಗ್ನ:

ತುಲಾ ಲಗ್ನದವರು ರುದ್ರನನ್ನು ಆರಾಧಿಸುವುದು ಅತ್ಯಂತ ಶುಭಕರ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಶ್ಚಿಕ ಲಗ್ನ:

ವೃಶ್ಚಿಕ ಲಗ್ನದವರು ಶಿವನನ್ನು ಆರಾಧಿಸುವುದರಿಂದ ಶುಭವಾಗುತ್ತದೆ.

ಧನು ಲಗ್ನ:

ಧನು ಲಗ್ನದವರು ನರಸಿಂಹನನ್ನು ಆರಾಧಿಸುವುದರಿಂದ ಸಾಕಷ್ಟು ಶುಭ ಫಲಗಳು ಪ್ರಾಪ್ತವಾಗುತ್ತವೆ.

ಮಕರ ಲಗ್ನ:

ಮಕರ ಲಗ್ನದವರಿಗೆ ವೃಷಭ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದವರು ದೇವಿಯನ್ನು ಆರಾಧಿಸುವುದು ಬಹಳ ಒಳ್ಳೆಯದು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಕುಂಭ ಲಗ್ನ:

ಕುಂಭ ಲಗ್ನದವರಿಗೆ ಮಿಥುನ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದವರು ವಿಷ್ಣುವನ್ನು ಆರಾಧಿಸುವುದರಿಂದ ಶುಭವಾಗುತ್ತದೆ.

ಮೀನ ಲಗ್ನ:

ಮೀನ ಲಗ್ನದವರಿಗೆ ಕರ್ಕಾಟಕ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದವರು ದುರ್ಗಾ ದೇವಿಯನ್ನು ಆರಾಧಿಸುವುದರಿಂದ ಸಾಕಷ್ಟು ಶುಭ.

ಹೀಗೆ, ನಿಮ್ಮ ಲಗ್ನಕ್ಕೆ ಅನುಗುಣವಾದ ಅದೃಷ್ಟ ದೇವತೆಯನ್ನು ತಿಳಿದು, ಅವರನ್ನು ಶ್ರದ್ಧೆಯಿಂದ ಪೂಜಿಸುವುದರಿಂದ ಆ ದೇವರ ಕೃಪೆಯು ದೊರೆತು ಜೀವನದಲ್ಲಿ ಅದೃಷ್ಟ ಮತ್ತು ಸನ್ಮಂಗಳಗಳು ಕೂಡಿಬರುತ್ತವೆ. ಇದು ನಂಬಿಕೆ ಮತ್ತು ಶಾಸ್ತ್ರದ ಆಧಾರವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version