ಬೆಂಗಳೂರು, ಏ.9: ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗಿದ್ದರೂ, ಇಂದು ಸಂಜೆ ವೇಳೆಗೆ ಹವಾಮಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ರಾಜಧಾನಿಯಲ್ಲಿ ಇಂದು ಗರಿಷ್ಠ ಉಷ್ಣಾಂಶ 35°C ರಿಂದ 37°C ರವರೆಗೆ ದಾಖಲಾಗುವ ಸಾಧ್ಯತೆಯಿದೆ. ಮಧ್ಯಾಹ್ನ ಬಿಸಿಲು ಹೆಚ್ಚಾಗಿದ್ದರೂ, ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ 60% ಮುನ್ಸೂಚನೆ ಇದೆ.
ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಸೆಖೆ ಹೆಚ್ಚಿರಲಿದೆ. ಗಾಳಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಅಸಹನೀಯ ವಾತಾವರಣವಿರಬಹುದು. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 40°C ದಾಟುವ ಸಾಧ್ಯತೆಯಿದೆ.
ಮೈಸೂರು, ಹಾಸನ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿಯಲ್ಲಿ ತಾಪಮಾನ ಅತಿ ಹೆಚ್ಚಿರಲಿದೆ (41°C – 42°C). ಮಧ್ಯಾಹ್ನ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜನರು ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಬೇಕು. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಒಣ ಹವೆ ಮುಂದುವರಿಯಲಿದ್ದು, ತಾಪಮಾನದಲ್ಲಿ ಏರಿಕೆಯಾಗಲಿದೆ.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗುಜಿಲ್ಲೆಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸೆಖೆ ಹೆಚ್ಚಿದ್ದರೂ, ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ. ತುಮಕೂರು ಮತ್ತು ಕೋಲಾರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆ್ಯಂಕರ್ ಅನುಶ್ರೀ ಅವರು (Anushree) ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಈ ಕಾರಣದಿಂದಲೇ ಅನುಶ್ರೀ ಅವರ ಯೂಟ್ಯೂಬ್ ಲೋಗೋದಲ್ಲಿ ಪುನೀತ್ ಫೋಟೋ ಸೇರಿಸಿಕೊಂಡಿದ್ದಾರೆ. ಪುನೀತ್ ನಿಧನದ ಬಳಿಕ ಅನುಶ್ರೀ ಸಾಕಷ್ಟು ಬಾರಿ ಬಿಕ್ಕಿ ಬಿಕ್ಕಿ ಅತ್ತಿದ್ದಿದೆ. ತಮ್ಮ ಮದುವೆಯಲ್ಲಿ ಪುನೀತ್ ಫೋಟೋ ಇಟ್ಟು ಅವರು ಪೂಜಿಸಿದ್ದರು. ಇದು ಪುನೀತ್ ಮೇಲೆ ಅವರಿಗೆ ಇರೋ ಪ್ರೀತಿಗೆ ಸಾಕ್ಷಿ. ಆದರೆ, ಕೆಲವರು ಇದನ್ನು ಟ್ರೋಲ್ ಮಾಡಿದ್ದು ಇದೆ. ಇದಕ್ಕೆ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ.
ಪುನೀತ್ ಅವರನ್ನು ಅನುಶ್ರೀ ಆರಾಧಿಸುತ್ತಾರೆ. ಅವರು ಅನೇಕ ಸಂದರ್ಶನಗಳಲ್ಲಿ ಪುನೀತ್ ಬಗ್ಗೆ ಹಾಡಿ ಹೊಗಳಿದ್ದಾರೆ. ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಅನೇಕರು ಅನುಶ್ರೀ ಅವರನ್ನು ಟೀಕೆ ಮಾಡಿದ್ದರು. ಅವರದ್ದು ಮೊಸಳೆ ಕಣ್ಣೀರು, ಪುನೀತ್ ಹೆಸರಲ್ಲಿ ಅವರು ದುಡ್ಡು ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಅನುಶ್ರೀ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಆರ್ಜೆ ಮಯೂರ್ ಅವರ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅನುಶ್ರೀ ಮಾತನಾಡಿದ್ದಾರೆ. ‘ಇವಳು ಎಷ್ಟು ಡವ್ ಮಾಡ್ತಾಳೆ ಗುರು ಎಂದು ಹೇಳುತ್ತಾರೆ. ಈ ಬಗ್ಗೆ ಏನು ಹೇಳ್ತೀರಾ’ ಎಂದು ಅನುಶ್ರೀಗೆ ಕೇಳಲಾಯಿತು. ಮುಚ್ಚುಮರೆ ಇಲ್ಲದೆ ಇದಕ್ಕೆ ಅವರು ಉತ್ತರಿಸಿದರು.
‘ನೀವು ತುಂಬಾನೇ ಸ್ವೀಟ್. ನಿಮ್ಮಂತವರ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ’ ಎಂದು ಪುನೀತ್ ಅವರು ಅನುಶ್ರೀಗೆ ಹೇಳಿದ್ದರಂತೆ. ಇದರ ಸ್ಕ್ರೀನ್ ಶಾಟ್ ಅನ್ನು ಅನುಶ್ರೀ ತೋರಿಸಿದ್ದಾರೆ. ಆ ಬಳಿಕ ಮಾತನಾಡಿದ ಅವರು. ‘ನಾನು ಎಂತಹ ಫ್ಯಾನ್ ಅಂತ ಅವರಿಗೆ ಗೊತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು. ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್’ ಎಂದರು ಅನುಶ್ರೀ.
IPL 2026: ಐಪಿಎಲ್ 2026ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿರುವ ಆಲ್-ರೌಂಡರ್ ಕೃನಾಲ್ ಪಾಂಡ್ಯ (Krunal Pandya) ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಒಬ್ಬ ಸ್ಪಿನ್ನರ್ ಆಗಿದ್ದರೂ 120-125 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಕುತೂಹಲ ಹಾಗೂ ಅನುಮಾನಗಳನ್ನು ಮೂಡಿಸಿದೆ.
ಚರ್ಚೆಗೆ ಕಾರಣವೇನು?
ಏಪ್ರಿಲ್ 5, 2026 ರಂದು ನಡೆದ ಸಿಎಸ್ಕೆ (CSK) ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬರೋಬ್ಬರಿ 126.1 ಕಿ.ಮೀ. ವೇಗದಲ್ಲಿ ಎಸೆತವೊಂದನ್ನು ಎಸೆದರು. ಇದು ಸಾಮಾನ್ಯ ಮಧ್ಯಮ ವೇಗದ ಬೌಲರ್ಗಳ ವೇಗಕ್ಕೆ ಸಮನಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಇದು ‘ಚಕ್ಕಿಂಗ್’ (Chucking) ಇರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.
ಹಿಂದೆ ಮಾರ್ಲನ್ ಸ್ಯಾಮ್ಯುಯೆಲ್ಸ್ ಕೂಡ ಇದೇ ರೀತಿಯ ವೇಗದ ಎಸೆತಗಳನ್ನು ಎಸೆದಾಗ ಅವರ ಬೌಲಿಂಗ್ ಆಕ್ಷನ್ ಬಗ್ಗೆ ದೂರುಗಳು ಕೇಳಿಬಂದಿದ್ದವು.
ನಿಯಮ ಏನು ಹೇಳುತ್ತದೆ?
ಐಸಿಸಿ ಮತ್ತು ಐಪಿಎಲ್ ನಿಯಮಗಳ ಪ್ರಕಾರ, ಒಬ್ಬ ಬೌಲರ್ ಚೆಂಡನ್ನು ಎಸೆಯುವಾಗ ಅವರ ಮೊಣಕೈ (Elbow) 15 ಡಿಗ್ರಿಗಿಂತ ಹೆಚ್ಚು ನೇರವಾಗಬಾರದು.
ವೇಗ ಮತ್ತು ಆಕ್ಷನ್: ಬೌಲರ್ ಎಷ್ಟೇ ವೇಗವಾಗಿ ಬೌಲಿಂಗ್ ಮಾಡಿದರೂ, ಅವರ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗಿದ್ದರೆ ಅದು ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತದೆ.
ಅನುಮಾನ: ಕೃನಾಲ್ ಪಾಂಡ್ಯ 125 ಕ್ಕಿಂತ ವೇಗದಲ್ಲಿ ಚೆಂಡೆಸೆದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗೆ ಸ್ಪಿನ್ನರ್ಗೆ ಇಷ್ಟೊಂದು ವೇಗದಲ್ಲಿ ಚೆಂಡೆಸಲು ಸಾಧ್ಯವಾಗುವುದಿಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ಯಾಮ್ಯುಯೆಲ್ಸ್ಗೆ ನಿಷೇಧ:
ಈ ಹಿಂದೆ ಐಪಿಎಲ್ನಲ್ಲಿ ಇದೇ ಮಾದರಿಯಲ್ಲಿ ಚೆಂಡೆಸೆದಿದ್ದ ವೆಸ್ಟ್ ಇಂಡೀಸ್ನ ಆಲ್-ರೌಂಡರ್ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಮೇಲೆ ನಿಷೇಧ ಹೇರಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
2012ರ ಐಪಿಎಲ್ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದ ಪರ ಆಡಿದ್ದ ಸ್ಯಾಮ್ಯುಯೆಲ್ಸ್, ಏಪ್ರಿಲ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಸಂಶಯಾಸ್ಪದ ಬೌಲಿಂಗ್ ಆಕ್ಷನ್ ಬಗ್ಗೆ ವರದಿ ಮಾಡಲ್ಪಟ್ಟಿದ್ದರು.
ಸ್ಪಿನ್ನರ್ ಆಗಿದ್ದ ಸ್ಯಾಮ್ಯುಯೆಲ್ಸ್ ಸುಮಾರು 122 ಕಿ.ಮೀ. ವೇಗದಲ್ಲಿ ಎಸೆದಿದ್ದ “ಫಾಸ್ಟರ್ ಒನ್” ಎಸೆತಗಳು ಅಂಪೈರ್ಗಳಾದ ಅಲೀಂ ದಾರ್ ಮತ್ತು ಬ್ರೂಸ್ ಆಕ್ಸನ್ಫೋರ್ಡ್ ಅವರ ಸಂಶಯಕ್ಕೆ ಕಾರಣವಾಗಿದ್ದವು.
ಈ ಫಾಸ್ಟರ್ ಎಸೆತಗಳ ಬಗ್ಗೆ ಸಂಶಯ ಮೂಡಿದ್ದ ಕಾರಣ, ಈ ಪಂದ್ಯದ ಬಳಿಕ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರನ್ನು ಆ ಸೀಸನ್ನ ಉಳಿದ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಯಿತು.
ಕೃನಾಲ್ಗೆ ಬ್ಯಾನ್ ಭೀತಿ:
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಕೃನಾಲ್ ಪಾಂಡ್ಯ ಅವರ ಎಸೆತಗಳ ವೇಗ ಕೂಡ ಚರ್ಚೆಗೀಡಾಗಿದೆ. ಅಲ್ಲದೆ ಈ ‘ವೇಗದ ಸ್ಪಿನ್ ಬೌನ್ಸರ್’ ಆಕಸ್ಮಿಕವೇನಲ್ಲ. ಈ ಹಿಂದೆ ಕೂಡ ಕೃನಾಲ್ ಇಂತಹದ್ದೇ ಎಸೆತಗಳ ಮೂಲಕ ಬ್ಯಾಟರ್ಗಳನ್ನು ತಬ್ಬಿಬ್ಬು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿವೆ…
ಬೌಲಿಂಗ್ ವೇಗ: ಕೃನಾಲ್ ಅವರು ಸ್ಪಿನ್ನರ್ ಆಗಿದ್ದರೂ 125-130 kmph ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದಾರೆ. ಒಬ್ಬ ಸ್ಪಿನ್ನರ್ ತನ್ನ ಶೈಲಿಯನ್ನು ಬದಲಿಸದೆ ಹಠಾತ್ತನೆ ವೇಗಿಗಳ ವೇಗದಲ್ಲಿ ಬೌನ್ಸರ್ ಎಸೆಯುವುದು ಬ್ಯಾಟರ್ಗಳಿಗೆ ಅಪಾಯಕಾರಿ ಎನಿಸಬಹುದು ಎಂಬುದು ಕೆಲವರ ವಾದ.
ಬೌಲಿಂಗ್ ಶೈಲಿಯ ಗೊಂದಲ: ಕೃನಾಲ್ ಅವರು ಬೌನ್ಸರ್ ಎಸೆಯುವಾಗ ಸ್ಲಿಂಗ್ (Slingy) ಅಥವಾ ಪಕ್ಕದಿಂದ ಕೈ ಬೀಸಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ನಿಯಮಬದ್ಧವೇ ಅಥವಾ ಇಲ್ಲವೇ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.
ಮಿತಿ ಮೀರಿದ ಪ್ರಯೋಗ: ಕೆಲವರು ಕೃನಾಲ್ ಅವರು ತುಂಬಾ ಹೆಚ್ಚು ಪ್ರಯೋಗಗಳನ್ನು ಮಾಡುತ್ತಿದ್ದಾರೆ, ಇದು ಕೇವಲ ಗೊಂದಲ ಮೂಡಿಸಲು ಮಾಡುತ್ತಿರುವ ‘ತಂತ್ರ’ವೇ ಹೊರತು ನೈಜ ಸ್ಪಿನ್ ಬೌಲಿಂಗ್ ಅಲ್ಲ ಎಂದು ಟೀಕಿಸುತ್ತಿದ್ದಾರೆ.
ಅಸುರಕ್ಷಿತ ಎಂಬ ಆರೋಪ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಅವರಿಗೆ ಸತತವಾಗಿ ಬೌನ್ಸರ್ ಎಸೆದ ಹಿನ್ನೆಲೆಯಲ್ಲಿ, ಸಿಎಸ್ಕೆ ಮ್ಯಾನೇಜ್ಮೆಂಟ್ ಈ ಬಗ್ಗೆ ಬಿಸಿಸಿಐಗೆ ದೂರು ನೀಡಲು ಮುಂದಾಗಿದೆ ಎಂಬ ವರದಿಗಳಿವೆ.
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೃನಾಲ್ ಪಾಂಡ್ಯ ಬೌಲಿಂಗ್ ಆ್ಯಕ್ಷನ್ ಬಗ್ಗೆ ದೂರು ನೀಡಿದರೆ, ಅವರು ಪರೀಕ್ಷೆಗೆ ಒಳಪಡಲಿದ್ದಾರೆ. ಅಲ್ಲಿಯವರೆಗೆ ಬೌಲಿಂಗ್ ಮಾಡಲು ಅವಕಾಶ ನೀಡುವ ಸಾಧ್ಯತೆಯಿಲ್ಲ. ಇನ್ನು ಪರೀಕ್ಷೆಗೆ ಒಳಗಾದರೆ ವೇಗದ ಸ್ಪಿನ್ ಬೌನ್ಸರ್ಗೆ ಕಡಿವಾಣ ಹಾಕಬಹುದು.
ಏಕೆಂದರೆ ಈ ಹಿಂದೆ ಐಪಿಎಲ್ನಲ್ಲಿ 120 ಕ್ಕಿಂತ ವೇಗದಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ಮೂಡಿದ್ದ ಕಾರಣ ಅವರಿಗೆ ಐಪಿಎಲ್ನಲ್ಲಿ ಬೌಲಿಂಗ್ ಬ್ಯಾನ್ ಮಾಡಲಾಗಿತ್ತು.
ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೃನಾಲ್ ಪಾಂಡ್ಯ 125 ಕಿ.ಮೀ ವೇಗದಲ್ಲಿ ಬೌನ್ಸರ್ ಎಸೆಯುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಚರ್ಚೆಗಳ ನಡುವೆ ಸಿಎಸ್ಕೆ ತಂಡ ಬಿಸಿಸಿಐಗೆ ದೂರು ನೀಡಲಿದೆಯಾ ಎಂಬುದೇ ಈಗ ಕುತೂಹಲ.
‘ಪುಷ್ಪ 2’ ಅಂತಹ ಬ್ಲಾಕ್ಬಸ್ಟರ್ ಚಿತ್ರದ ನಂತರ ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಿಸಿದ್ದಾರೆ. ಬನ್ನಿ ತಮ್ಮ ಮುಂದಿನ ಚಿತ್ರವನ್ನು ಅಟ್ಲೀ ಅವರೊಂದಿಗೆ ಮಾಡುತ್ತಿದ್ದಾರೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮಿಳಿನಲ್ಲಿ ದೊಡ್ಡ ಬಜೆಟ್ ಚಿತ್ರಗಳಿಗೆ ಹೆಸರು ವಾಸಿಯಾಗಿರುವ ಸನ್ ಪಿಕ್ಚರ್ಸ್ ಸುಮಾರು 800 ಕೋಟಿ ರೂ. ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣವು ಇಲ್ಲಿಯವರೆಗೆ ವರ್ಕಿಂಗ್ ಟೈಟಲ್ನೊಂದಿಗೆ ಮುಗಿದಿದೆ. ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು (ಏಪ್ರಿಲ್ 08) ಈ ಪ್ರಾಜೆಕ್ಟ್ನ ಶೀರ್ಷಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ‘ರಾಕಾ’ ಎಂದು ಇಡಲಾಗಿದೆ.
ಅಲ್ಲು ಅರ್ಜುನ್-ಅಟ್ಲೀ ಸಿನಿಮಾಗೆ ಬುಧವಾರ ಶೀರ್ಷಿಕೆ ಬಿಡುಗಡೆಯಾಗಿದೆ. ಜೊತೆಗೆ, ಬಿಡುಗಡೆಯಾದ ಪೋಸ್ಟರ್ ಕೂಡ ಅಭಿಮಾನಿಗಳನ್ನು ಅಪಾರವಾಗಿ ಮೆಚ್ಚಿಸಿದೆ. ಈ ಸಂದರ್ಭದಲ್ಲಿ, ಅಲ್ಲು ಅರ್ಜುನ್ ಅವರ ರಾಕಾ ಚಿತ್ರದ ಶೀರ್ಷಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ನೆಟಿಜನ್ಗಳು ರಾಕಾದ ನಿಜವಾದ ಅರ್ಥವನ್ನು ಹುಡುಕುತ್ತಿದ್ದಾರೆ.
ಪ್ರತಿ ತಿಂಗಳು ಬರುವ ಹುಣ್ಣಿಮೆಯನ್ನು ರಾಕಾ ಎಂದು ಕರೆಯಲಾಗುತ್ತದೆ. ಕತ್ತಲೆ ಮತ್ತು ದುಷ್ಟತನದ ವಿರುದ್ಧದ ಯುದ್ಧದಲ್ಲಿ ನಾಯಕನ ವಿಜಯದ ಸಂಕೇತವಾಗಿ ಬನ್ನಿ ಅವರ ಚಿತ್ರಕ್ಕೆ ರಾಕಾ ಎಂದು ಹೆಸರಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯ ಮತ್ತು ಮೃಗವನ್ನು ಸಂಯೋಜಿಸುವ ರಾಕಾ ಪೋಸ್ಟರ್ ಅನ್ನು ನೋಡಿ, ಇತರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ, ‘ನೀವು ಶೀರ್ಷಿಕೆಯನ್ನು ದೈತ್ಯ ಎಂದು ಅರ್ಥೈಸಲು ಆರಿಸಿದ್ದೀರಾ?’ ಎಂದು ಕೆಲವರು ಕೇಳಿದ್ದಾರೆ. ಹುಣ್ಣಿಮೆಯ ದಿನದಂದು ಜನರು ತೋಳಗಳಾಗಿ ಬದಲಾಗುತ್ತಾರೆ ಎಂಬ ಪುರಾಣಗಳಿವೆ ಮತ್ತು ಈ ಚಿತ್ರವೂ ಹಾಗೆಯೇ ಇದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.
ಇವುಗಳ ಜೊತೆಗೆ, ರಾಕಾ ಎಂದರೆ ಕ್ರೌರ್ಯ, ಅಪಾಯ ಮತ್ತು ಹಿಂಸೆ ಎಂದೂ ಕೆಲವರು ಹೇಳುತ್ತಾರೆ. ಆದಾಗ್ಯೂ, ಈ ಆಸಕ್ತಿದಾಯಕ ಶೀರ್ಷಿಕೆಯ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ತಯಾರಕರು ಈ ‘ರಾಕಾ’ದ ನಿಜವಾದ ಅರ್ಥವನ್ನು ಇನ್ನಷ್ಟೇ ರಿವೀಲ್ ಮಾಡಬೇಕಿದೆ.
ಯಾರೇ ದೈವಾಧೀನರಾದಾಗ, ಸ್ವರ್ಗಸ್ಥರಾದಾಗ ಅಥವಾ ವೈಕುಂಠ ಪ್ರಯಾಣ ಬೆಳೆಸಿದಾಗ, ಅವರ ನೆನಪಿನಲ್ಲಿ ತಿಥಿ ಊಟ ಅಥವಾ ತಿಥಿ ಆಹಾರವನ್ನು ಸೇವಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿದೆ. ಆದರೆ, ಈ ತಿಥಿ ಊಟವನ್ನು ಸೇವಿಸಬಹುದೇ ಅಥವಾ ಇದು ಏನಾದರೂ ತೊಂದರೆಯನ್ನು ತರುತ್ತದೆಯೇ ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆಗಳು ಮತ್ತು ಸಂಶಯಗಳಿವೆ. ಕೆಲವರು ತಿಥಿ ಊಟಕ್ಕೆ ಹೋಗಲು ನಿರಾಕರಿಸುತ್ತಾರೆ, ಇದರಿಂದ ಅದೃಷ್ಟ ಕೆಡುತ್ತದೆ ಅಥವಾ ಅಶುಭವಾಗುತ್ತದೆ ಎಂದು ಭಾವಿಸುತ್ತಾರೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ವಾಸ್ತವವಾಗಿ, ಯಾವುದೇ ವ್ಯಕ್ತಿ ದೇಹ ತ್ಯಾಗ ಮಾಡಿದಾಗ, ಅವರ ಆತ್ಮವು ಈ ಲೋಕದಿಂದ ನಿರ್ಗಮಿಸುತ್ತದೆ. ಆ ನಂತರ ಮೂರು ದಿನಗಳ ಅಥವಾ ಹನ್ನೊಂದನೇ ದಿನದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಹನ್ನೊಂದನೇ ದಿನದಂದು ಎಲ್ಲ ಬಂಧುಬಾಂಧವರನ್ನು, ಸ್ನೇಹಿತರನ್ನು ಕರೆದು, ದಿವಂಗತರ ಭಾವಚಿತ್ರಕ್ಕೆ ಪೂಜೆ ಮಾಡಿ, ಅವರ ನೆನಪಿನಲ್ಲಿ ಆಹಾರ ಸೇವನೆ ಮಾಡುವ ಪದ್ಧತಿಯನ್ನೇ ನಾವು ತಿಥಿ ಊಟ ಎಂದು ಕರೆಯುತ್ತೇವೆ. ಕುಟುಂಬದವರಿಗೆ ಮೂರು ಅಥವಾ ಹನ್ನೊಂದು ದಿನಗಳ ಸೂತಕವಿರುತ್ತದೆ ನಿಜ. ಆದರೆ, ಈ ಕಾರ್ಯಕ್ರಮಕ್ಕೆ ಬಂದು ಆಹಾರ ಸೇವನೆ ಮಾಡುವ ಬಂಧುಗಳು, ಸ್ನೇಹಿತರಿಗೆ ಇದರಿಂದ ಯಾವುದೇ ರೀತಿಯ ಕಂಟಕ ಅಥವಾ ಆಧ್ಯಾತ್ಮಿಕ ತೊಂದರೆಗಳು ಎದುರಾಗುತ್ತವೆ ಎಂಬುದು ಸಂಪೂರ್ಣ ತಪ್ಪು ಕಲ್ಪನೆ.
ತಿಥಿ ಊಟ ಸೇವಿಸುವುದರಿಂದ ಅದೃಷ್ಟ ಹಾಳಾಗುವುದಿಲ್ಲ, ಅಥವಾ ಯಾವುದೇ ತೊಂದರೆಗಳು ಬರುವುದಿಲ್ಲ. ಇದಕ್ಕೆ ಯಾವುದೇ ಸಂಬಂಧವೂ ಇಲ್ಲ. ಬದುಕಿದ್ದಾಗ ಆ ವ್ಯಕ್ತಿ ನಮ್ಮೊಂದಿಗಿದ್ದ ಬಾಂಧವ್ಯದಂತೆಯೇ, ಮರಣಾನಂತರ ಅವರ ಆತ್ಮಕ್ಕೆ ಸಲ್ಲಿಸುವ ಗೌರವವೇ ತಿಥಿ ಊಟ. ಅವರ ನೆನಪಿನಲ್ಲಿ ನೀಡುವ ಅನ್ನ ಅಥವಾ ಆಹಾರವು ಆ ಆತ್ಮಕ್ಕೆ ತೃಪ್ತಿ ನೀಡಿ, ನಿಮಗಿನ್ನೂ ಧನಾತ್ಮಕ ಆಶೀರ್ವಾದಗಳನ್ನು ನೀಡುತ್ತದೆ. ಅದು ಚಿಕ್ಕ ಮಕ್ಕಳಾಗಿರಲಿ, ಹಿರಿಯರಾಗಿರಲಿ, ಅಥವಾ ಅನಾರೋಗ್ಯದಿಂದ ಅಥವಾ ಆಕಸ್ಮಿಕವಾಗಿ ಹೋಗಿರಲಿ. ಅವರ ಆತ್ಮವು ನಿಮ್ಮನ್ನು ಹರಸುತ್ತದೆ.
ತಿಥಿ ಊಟಕ್ಕೆ ಹೋಗಿ ಬಂದರೆ ಅಪಘಾತವಾಯಿತು, ಆರೋಗ್ಯ ಕೆಟ್ಟಿತು ಅಥವಾ ಇನ್ಯಾವುದೋ ತೊಂದರೆಯಾಯಿತು ಎಂಬ ಮಾತುಗಳು ಕೇವಲ ಕಾಕತಾಳೀಯ ಘಟನೆಗಳು. ಅವುಗಳಿಗೆ ತಿಥಿ ಊಟಕ್ಕೂ ಯಾವುದೇ ಸಂಬಂಧವಿಲ್ಲ. ಗರುಡ ಪುರಾಣದ ಪ್ರಕಾರವೂ, ಈ ಸಂದರ್ಭದಲ್ಲಿ ನೀಡುವ ಒಂದು ತೊಟ್ಟು ನೀರು, ತೀರ್ಥ ಅಥವಾ ಪ್ರಸಾದದಿಂದ ಯಾವುದೇ ರೀತಿಯ ದುಷ್ಪರಿಣಾಮಗಳಾಗುವುದಿಲ್ಲ.
ಹಿರಿಯರು ಮತ್ತು ಬುದ್ಧಿಜೀವಿಗಳ ಮಾತುಗಳನ್ನು ಗಮನಿಸಿದರೆ, ತಿಥಿ ಊಟಕ್ಕೆ ಹೋಗಿ ಬರುವುದರಿಂದ ನಮ್ಮಲ್ಲಿರುವ ಎಷ್ಟೋ ದೋಷಗಳು ಹೊರಟುಹೋಗುತ್ತವೆ ಎಂದು ಹೇಳುವುದನ್ನು ಕೇಳುತ್ತೇವೆ. ಹನ್ನೊಂದನೇ ದಿನದ ತಿಥಿ ಇರಬಹುದು ಅಥವಾ ವಾರ್ಷಿಕ ತಿಥಿ ಕಾರ್ಯಕ್ರಮಗಳಿರಬಹುದು, ಇವುಗಳಿಗೆ ಹೋಗಿ ಆಹಾರ ಸೇವಿಸುವುದು ಯಾವುದೇ ಕಾರಣಕ್ಕೂ ಹಾನಿಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜಾರ್ಖಂಡ್, ಏಪ್ರಿಲ್ 09: ಕಲ್ಲಿದ್ದಲು ಟ್ರಕ್ ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಜಾರ್ಖಂಡ್ನ ದನ್ಬಾನ್ನಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಒಂದು ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ವಿರುದ್ಧ ದಿಕ್ಕಿಗೆ ಬಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಟ್ರಕ್ ಕೂಡ ಮಗುಚಿ ಬಿದ್ದಿದ್ದು, ಕಲ್ಲಿದ್ದಲು ರಸ್ತೆ ತುಂಬಾ ಹರಡಿತ್ತು.
ಬಾಗಲಕೋಟೆ, ಏಪ್ರಿಲ್ 9: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುತ್ತಿದೆ. ಹೆಚ್. ವೈ. ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ತೀವ್ರ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರು ದಿನಗಳ ಕಾಲ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಮಾಡಿದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮತದಾರರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, 322 ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ, ಏಪ್ರಿಲ್ 09: ನ್ಯಾಯಾಲಯದಲ್ಲಿ ಆರೋಪಿಯೊಬ್ಬ ಪೊಲೀಸ್(Police) ಅಧಿಕಾರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆ ಯತ್ನದ ಪ್ರಕರಣದ ವಿಚಾರಣಾಧೀನ ಆರೋಪಿ ಹ್ಯಾರಿಸನ್ ಆಂಥೋನಿ ಜೋಸೆಫ್,ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಕೈಕೋಳ ಸಮೇತ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
42 ವರ್ಷದ ಹ್ಯಾರಿಸನ್ ಆಂಥೋನಿ ಜೋಸೆಫ್ ವಿರುದ್ಧ MCOCA ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಮಾರ್ಚ್ 2024ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದಾನೆ. ಆರ್ಥರ್ ರಸ್ತೆ ಜೈಲಿನಿಂದ ವಿಚಾರಣೆಗೆ ಕರೆತಂದಿದ್ದಾಗ, ಪೊಲೀಸ್ ಕಾನ್ಸ್ಟೇಬಲ್ ಪ್ರಶಾಂತ್ ಕಾಂಬ್ಳೆ ಅವರ ಮೇಲೆ ದಾಳಿ ನಡೆಸಿ ನ್ಯಾಯಾಲಯದ ಆವರಣದಿಂದಲೇ ತಪ್ಪಿಸಿಕೊಂಡಿದ್ದಾನೆ.ಕೊಲಾಬಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದ್ದು, ರೈಲ್ವೆ ನಿಲ್ದಾಣಗಳು ಸೇರಿದಂತೆ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಪೊಲೀಸರ ವಿಶೇಷ ತಂಡಗಳು ಹದ್ದಿನ ಕಣ್ಣಿಟ್ಟಿವೆ.
ಕೇರಳದ ಜೋಸೆಫ್ ಪರಾರಿಯಾಗಿರುವುದರಿಂದ, ಅಧಿಕಾರಿಗಳು ರೈಲ್ವೆ ಟರ್ಮಿನಲ್ಗಳು ಮತ್ತು ಇತರ ಸಾರಿಗೆ ಕೇಂದ್ರಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅನೇಕ ತಂಡಗಳನ್ನು ನಿಯೋಜಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
2024 ರಲ್ಲಿ ನಡೆದ ಸಣ್ಣ ವಿವಾದಕ್ಕೆ ಸಂಬಂಧಿಸಿದಂತೆ ಜೋಸೆಫ್ ಮತ್ತು ಅವರ ಸಹಚರರು ಬ್ಯಾಗ್ ಮಾರಾಟಗಾರ ರಾಜು ಶೇಖ್ ಅವರ ಮೇಲೆ ಏರ್ ಗನ್ನಿಂದ ಹಲ್ಲೆ ನಡೆಸಿದ್ದ ಎನ್ನುವ ಆರೋಪವಿದೆ. ನ್ಯಾಯಾಲಯದ ಕಟಕಟೆಗೆ ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಮಾರ್ಚ್ 2024 ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದ ಮತ್ತು ಆತನನ್ನು ಜನವರಿ 2025 ರಲ್ಲಿ ಬಂಧಿಸಲಾಗಿತ್ತು.
‘ಕರ್ಣ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ಟಿಆರ್ಪಿಯಲ್ಲೂ ನಂಬರ್ 1 ಸ್ಥಾನದಲ್ಲಿ ಇದೆ. ಹೀಗಿರುವಾಗಲೇ ‘ಕರ್ಣ’ ಧಾರಾವಾಹಿಯಲ್ಲಿ ಒಂದು ಕಟು ಸತ್ಯವೂ ರಿವೀಲ್ ಆಗಿದೆ ಎನ್ನಬಹುದು. ಕರ್ಣನು ರಮೇಶ್ ಮಗ ಎಂಬ ಕಟು ಸತ್ಯವನ್ನು ರಮೇಶ್ ತಂಗಿ ತಾರಾ ರಿವೀಲ್ ಮಾಡಿದ್ದಾಳೆ. ಇದು ಶಾಕಿಂಗ್ ಎನಿಸಿದೆ. ಇದು ಧಾರಾವಾಹಿಯಲ್ಲಿ ದೊಡ್ಡ ತಿರುವಿಗೆ ಕಾರಣ ಆಗಬಹುದು ಎಂದು ಊಹಿಸಲಾಗಿದೆ. ಮುಂದಿನ ಕಥೆ ಮತ್ತಷ್ಟು ರೋಚಕವಾಗಿದೆ.
‘ಕರ್ಣ’ ಧಾರಾವಾಹಿಯಲ್ಲಿ ಹಲವು ತಿರುವುಗಳು ಎದುರಾಗಿವೆ. ಇದರಲ್ಲಿ ಈಗ ದೊಡ್ಡ ತಿರುವು ಬರುವ ಸೂಚನೆ ಸಿಕ್ಕಿದೆ. ಅದೇನೆಂದರೆ, ಕರ್ಣ ಧಾರಾವಾಹಿಯಲ್ಲಿ ಕರ್ಣನು ಹಾದಿಯಲ್ಲಿ ಸಿಕ್ಕ ಮಗ ಎಂದು ಹೇಳಲಾಗಿತ್ತು. ಆತ ಬೀದಿಯಲ್ಲಿ ಸಿಕ್ಕವನು ಎಂಬ ಕಾರಣಕ್ಕೆ ರಮೇಶ್ ಆತನನ್ನು ಕೀಳಾಗಿ ನೋಡುತ್ತಾ ಬಂದಿದ್ದಾನೆ. ಆದರೆ, ಅಸಲಿ ಕಥೆ ಬೇರೆಯೇ ಇದೆ.
ಆದರೆ, ಈಗ ಎಲ್ಲವೂ ಬದಲಾಗಿದೆ. ರಮೇಶ್ ಸಹೋದರಿ ಒಂದು ಶಾಕಿಂಗ್ ವಿಷಯ ರಿವೀಲ್ ಮಾಡಿದ್ಧಾಳೆ. ಕರ್ಣನು ರಮೇಶ್ ಮಗ ಎಂಬುದನ್ನು ಹೇಳಿದ್ದಾಳೆ. ಕರ್ಣನಿಗೆ ಸಾಕಷ್ಟು ತೊಂದರೆ ಕೊಡುವ ಕೆಲಸ ರಮೇಶ್ನಿಂದ ಆಗಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಕರ್ಣ ತೊಂದರೆ ಕೊಡುವ ನಿರ್ಧಾರಕ್ಕೆ ಬಂದಿದ್ದಾನೆ. ‘ನಾನು ಆಟ ಆಡಿಸ್ತೀನಿ, ನೀನು ಆಟ ಆಡಬೇಕು’ ಎಂದು ಅವಾಜ್ ಹಾಕಿದ್ದಾನೆ ಕರ್ಣ.
ಹೀಗಿರುವಾಗಲೇ ರಮೇಶ್ನ ಸ್ಥಿತಿ ನೋಡಿ ಆತನ ಸಹೋದರಿ ತಾರಾ ಒಳಗೊಳಖಗೆ ಖುಷಿ ಆಗಿದ್ದಾಳೆ. ‘ನಿನಗೆ ಈ ಪರಿಸ್ಥಿತಿ ಬರೋಕೆ ನಿನ್ನ ಸ್ವಂತ ಮಗನೇ ಕಾರಣ ಅಣ್ಣ’ ಎಂದು ಹೇಳಿಕೊಂಡಿರುವುದು ಚರ್ಚೆಗೆ ಕಾರಣ ಆಗಿದೆ.
‘ಕರ್ಣ’ ಧಾರಾವಾಹಿಯಲ್ಲಿ ರಮೇಶ್ಗೆ ಮತ್ತೊಂದು ಪತ್ನಿ/ ಪ್ರೀತಿ ಇತ್ತು ಎಂಬ ಅನುಮಾನ ಆರಂಭದಲ್ಲೇ ಬಂದಿತ್ತು. ಆದರೆ, ನಂತರ ಅದು ಅಲ್ಲಿಗೇ ನಿಂತಿತ್ತು. ಈಗ ಈ ಅನುಮಾನ ಮತ್ತಷ್ಟು ಜೋರಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ (GT) ವಿರುದ್ಧದ ಈ ಪಂದ್ಯದಲ್ಲಿ ಒಂದು ರನ್ನ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ವಿಶೇಷ ದಾಖಲೆಯೊಂದನ್ನು ಬರೆದಿದೆ.
ಈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಶುಭ್ಮನ್ ಗಿಲ್ (70), ಜೋಸ್ ಬಟ್ಲರ್ (52) ಹಾಗೂ ವಾಷಿಂಗ್ಟನ್ ಸುಂದರ್ (55) ಅವರ ಅರ್ಧಶತಕಗಳ ನೆರವಿನೊಂದಿಗೆ 20 ಓವರ್ಗಳಲ್ಲಿ 210 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 13 ರನ್ಗಳು ಬೇಕಿದ್ದವು. ಆದರೆ ಅಂತಿಮ ಓವರ್ನಲ್ಲಿ ಕಲೆಹಾಕಿದ್ದು ಕೇವಲ 11 ರನ್ಗಳು ಮಾತ್ರ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದು ರನ್ನಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 1 ರನ್ನಿಂದ ಸೋತ ತಂಡವೆಂಬ ಹಣೆಪಟ್ಟಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದೆ. ಅಂದರೆ ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಪಡೆಯು ಮೂರು ಬಾರಿ ಒಂದು ರನ್ ಅಂತರದಿಂದ ಸೋತ ನಿದರ್ಶನಗಳಿವೆ.
2015 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ರನ್ಗಳ ಅಂತರದಿಂದ ಮೊದಲ ಬಾರಿಗೆ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, 2016 ರಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ಒಂದು ರನ್ನಿಂದನೇ ಸೋಲೊಪ್ಪಿಕೊಂಡಿದ್ದರು. ಇನ್ನು 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ರನ್ನ ಅಂತರದಿಂದ ಸೋಲನುಭವಿಸಿದ್ದರು.
ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 1 ರನ್ ಅಂತರದಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಒಂದು ರನ್ ಅಂತರದಿಂದ ಸೋತ ತಂಡವೆಂಬ ದಾಖಲೆಯನ್ನು ನಿರ್ಮಿಸಿದೆ.