ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ – Kannada News

ಪ್ರಾತಿನಿಧಿಕ ಚಿತ್ರImage Credit source: Getty Images

ಬೆಂಗಳೂರು, ಜೂನ್​​ 07: ಮದುವೆ ಆಗೋದಾಗಿ ನಂಬಿಸಿ ಯುವಕನೋರ್ವನಿಗೆ ಯುವತಿ (girl) ಬರೋಬ್ಬರಿ 35 ಲಕ್ಷ ರೂ ವಂಚಿಸಿರುವಂತಹ (Fraud) ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಎಂಬಾತನಿಗೆ ಲಕ್ಷ್ಮೀ ವಂಚಿಸಿದ್ದಾಳೆ. ಸದ್ಯ ಯುವಕ ನೀಡಿದ ದೂರಿನನ್ವಯ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ವಧುವಿನ ಹುಡುಕಾಟದಲ್ಲಿದ್ದ ಯುವಕನಿಗೆ ಮಹಾ ಮೋಸ
  • ಯುವತಿಯಿಂದ ಬರೋಬ್ಬರಿ 35 ಲಕ್ಷ ರೂ ವಂಚನೆ
  • ಬೆಂಗಳೂರಿನ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಅನಿಲ್​​ ಮ್ಯಾಟ್ರಿಮೋನಿ ವೆಬ್​ಸೈಟ್​​ ಮೂಲಕ ಹುಡುಗಿ ಹುಡುಕುತ್ತಿದ್ದರು. ಈ ವೇಳೆ ಭಾಸ್ಕರ್ ರಾವ್ ಎಂಬಾತ ಅನಿಲ್​ಗೆ ಕರೆ ಮಾಡಿದ್ದರು. ನಿಮ್ಮ ಪ್ರೊಫೈಲ್​ ಇಷ್ಟ ಆಗಿದೆ, ಲಕ್ಷ್ಮೀಗೆ ನಂಬರ್ ನೀಡಿದ್ದೀನಿ‌ ಎಂದಿದ್ದ. ಬಳಿಕ ಖದ್ದು ಲಕ್ಷ್ಮೀ ಅನಿಲ್​ಗೆ ಕರೆ ಮಾಡಿದ್ದಾಳೆ. ಇಬ್ಬರು ಕೆಲ ದಿನ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು: ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಂಚನೆ

ಇನ್ನು ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿದ ಲಕ್ಷ್ಮೀ, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷ ಒಡ್ಡಿದ್ದಾಳೆ. ‘ನೀನು ಈಗಲೇ ಹಣ ಹೂಡಿಕೆ ಮಾಡು, ಮದುವೆಯ ನಂತರ ಅದೇ ಲಾಭದ ಹಣದಲ್ಲಿ ಚೆನ್ನಾಗಿ ಸೆಟಲ್ ಆಗೋಣ’ ಎಂದು ನಂಬಿಸಿದ್ದಾಳೆ. ಇದಕ್ಕೆ ಅನಿಲ್ ‘ಈಗ ಬೇಡ, ಮದುವೆಯಾದ ಬಳಿಕ ನೋಡೋಣ’ ಎಂದು ನಿರಾಕರಿಸಿದರೂ ಬಿಡದ ಲಕ್ಷ್ಮೀ, ಹಠಕ್ಕೆ ಬಿದ್ದು ಹಣ ಹೂಡುವಂತೆ ಸತತವಾಗಿ ಪ್ರೇರೇಪಿಸಿದ್ದಾಳೆ.

ಇದನ್ನೂ ಓದಿ: ನಿಮಗೆ 8 ಲಕ್ಷ ರೂ. ಲಾಟರಿ ಹೊಡೆದಿದೆ ಅಂದ್ರೆ ನಂಬಬೇಡಿ!: ಬೆಂಗಳೂರಿನ ಇಬ್ಬರಿಗೆ ಬಿತ್ತು 13.71 ಲಕ್ಷ ರೂ. ನಾಮ; ಹೊಸ ಆನ್‌ಲೈನ್ ಸ್ಕ್ಯಾಮ್

ಕೊನೆಗೆ ಆಕೆಯ ಮಾತು ನಂಬಿದ ಅನಿಲ್, ಹಂತ ಹಂತವಾಗಿ ಬರೋಬ್ಬರಿ 35 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಬಳಿಕ ಲಾಭದ ಹಣವನ್ನು ಹಿಂಪಡೆಯಲು ಹೋದಾಗ ಕ್ರಿಪ್ಟೋ ಖಾತೆಯೇ ಡಿಲೀಟ್ ಆಗಿರುವುದು ಕಂಡುಬಂದಿದೆ. ಆತಂಕಗೊಂಡ ಅನಿಲ್ ಲಕ್ಷ್ಮೀ ಮೊಬೈಲ್‌ಗೆ ಕರೆ ಮಾಡಿದಾಗ ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಕೊನೆಗೆ ತಾನು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗುತ್ತಿದ್ದಂತೆ ಅನಿಲ್ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಟಿಎಂಸಿ ಶಾಸಕ ಮದನ್ ಮಿತ್ರ ಮೇಲೆ ಮೊಟ್ಟೆ ಎಸೆತ – Kannada News

ಕೋಲ್ಕತ್ತಾ, ಜೂನ್ 07: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ಶಾಸಕ ಮದನ್ ಮಿತ್ರ ಅವರ ವಾಹನದ ಮೇಲೆ ಶನಿವಾರ ರಾತ್ರಿ ಕಮರ್ಹತಿಯ ಅರಿಯದಹ ಪ್ರದೇಶದಲ್ಲಿ ಪ್ರತಿಭಟನಾಕಾರರು ಮೊಟ್ಟೆ ಎಸೆದ ಘಟನೆ ನಡೆದಿದೆ. ಸ್ಥಳೀಯ ಆಟೋ ಮತ್ತು ಇ-ರಿಕ್ಷಾ ಚಾಲಕರು ವಾರ್ಡ್ ಸಂಖ್ಯೆ 14 ರ ಕೌನ್ಸಿಲರ್ ಕಚೇರಿ ಮುಂದೆ ಜಮಾಯಿಸಿ, ಕಳೆದ ಕೆಲವು ವರ್ಷಗಳಿಂದ ಬಲವಂತವಾಗಿ ವಸೂಲಿ ಮಾಡಲಾಗಿರುವ ಕಟ್ ಮನಿ (ಅಕ್ರಮ ಕಮಿಷನ್) ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ವಾಹನವನ್ನು ಗುರಿಯಾಗಿಸಿ ಮೊಟ್ಟೆ ಎಸೆಯಲಾಗಿದ್ದು, ಚಾಲಕನ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.

ಈ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಕೈವಾಡವಿದೆ ಎಂದು ಮದನ್ ಮಿತ್ರ ಆರೋಪಿಸಿದ್ದಾರೆ. ಆದರೆ, ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ನಂತರ ಸ್ಥಳೀಯರಲ್ಲಿ ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ – Kannada News

ಮಲೇಷ್ಯಾದಲ್ಲಿ ನಡೆಯುತ್ತಿರುವ 2026ರ ACC ಮಹಿಳಾ ಟಿ20 ಪ್ರೀಮಿಯರ್ ಕಪ್ ಟೂರ್ನಿಯಲ್ಲಿ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತಹ ಫಲಿತಾಂಶ ಮೂಡಿಬಂದಿದೆ. ಈ ಫಲಿತಾಂಶ ಮೂಡಿಬಂದಿದ್ದು ಕೇವಲ 5 ಎಸೆತಗಳಲ್ಲಿ ಎಂಬುದೇ ಅಚ್ಚರಿ.ಈ ಟೂರ್ನಿಯ ಗ್ರೂಪ್ ‘ಬಿ’ ಪಂದ್ಯದಲ್ಲಿ ಸೌದಿ ಅರೇಬಿಯಾ ಮಹಿಳಾ ತಂಡ ಹಾಗೂ ಯುಎಇ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ಮಹಿಳಾ ತಂಡ, ಯುಎಇ ಬೌಲರ್‌ಗಳ ಮಾರಕ ದಾಳಿಗೆ ಧೂಳೀಪಟವಾಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಸೌದಿ ತಂಡ 15.3 ಓವರ್‌ಗಳಲ್ಲಿ ಕೇವಲ 27 ರನ್‌ಗಳಿಸಿ ಆಲೌಟ್ ಆಯಿತು.

ಯುಎಇ ಪರ ಹೀನಾ ಹೋಟ್‌ಚಂದಾನಿ (3-4), ಸುರಕ್ಷಾ ಕೊಟ್ಟೆ (3-5) ಮತ್ತು ನಾಯಕಿ ಇಶಾ ಓಜಾ (3-9) ತಲಾ ಮೂರು ವಿಕೆಟ್ ಪಡೆದು ಸೌದಿ ಅರೇಬಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಕೇವಲ 5 ಎಸೆತಗಳಲ್ಲಿ ಮುಗಿದ ಪಂದ್ಯ!

28 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡಕ್ಕೆ ಸೌದಿ ಅರೇಬಿಯಾದ ಬೌಲರ್ ಮಾಹ್ ನೂರ್ ಅಮೀರ್ ಎಸೆದ ಮೊದಲ ಓವರ್ ವರದಾನವಾಗಿ ಪರಿಣಮಿಸಿತು. ದಿಕ್ಕು ದೆಸೆಯಿಲ್ಲದ ದಾಳಿ ನಡೆಸಿದ ಮಾಹ್ ನೂರ್, ಸಾಲು ಸಾಲು ವೈಡ್ (10 ವೈಡ್‌ಗಳು) ಹಾಗೂ ನೋ-ಬಾಲ್ ಸೇರಿದಂತೆ ಒಟ್ಟು 11 ಎಕ್ಸ್ಟ್ರಾ ರನ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಇದರ ಜೊತೆಗೆ ಯುಎಇ ನಾಯಕಿ ಇಶಾ ಓಜಾ ಕೇವಲ 5 ಎಸೆತಗಳಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 15 ರನ್ ಚಚ್ಚಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ತೀರ್ಥಾ ಸತೀಶ್ ತಾವು ಎದುರಿಸಿದ ಏಕೈಕ ಎಸೆತದಲ್ಲಿ ಬೌಂಡರಿ ಬಾರಿಸಿದರು. ಪರಿಣಾಮವಾಗಿ, ಮೊದಲ ಓವರ್‌ನ 5ನೇ ಎಸೆತದಲ್ಲಿ (0.5 ಓವರ್) ಯುಎಇ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿ 10 ವಿಕೆಟ್​್ಗಳ ಭರ್ಜರಿ ಜಯ ಸಾಧಿಸಿತು.

ವಿಶ್ವ ದಾಖಲೆ:

  •  115 ಎಸೆತಗಳು ಬಾಕಿ: ಯುಎಇ ತಂಡ ಇನ್ನೂ 115 ಎಸೆತಗಳು (19.1 ಓವರ್) ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
  •  ಜಂಟಿ ಎರಡನೇ ಸ್ಥಾನ: ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗವಾಗಿ ಗುರಿ ತಲುಪಿದ ಜಂಟಿ ಎರಡನೇ ಪಂದ್ಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಕೇವಲ 20 ನಿಮಿಷಗಳಿಗಿಂತ ಕಡಿಮೆ ಅವಧಿಯ ರನ್ ಚೇಸ್‌ನಲ್ಲಿ ಮುಕ್ತಾಯಗೊಂಡ ಈ ಪಂದ್ಯ, ಕ್ರಿಕೆಟ್ ಇತಿಹಾಸದ ಅತ್ಯಂತ ವಿಚಿತ್ರ ಹಾಗೂ ಅಪರೂಪದ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದೆ.

Source link

ರೈಲಿನ ಬೋರ್ಡ್​ ಬರೆಸಲು ಕೂಡ ಪಾಕಿಸ್ತಾನದ ಬಳಿ ಹಣವಿಲ್ಲ, ಸೀಮೆ ಸುಣ್ಣದಲ್ಲಿ ಮಾರ್ಗದ ಹೆಸರು ಬರೆದ ರೈಲ್ವೆ ಇಲಾಖೆ – Kannada News

ಕರಾಚಿ, ಜೂನ್ 07: ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ಕೆಲವೊಮ್ಮೆ ಹಳೆಯ ಕಾಲದ ಸರಳ ಆಚರಣೆಗಳು ಮತ್ತು ಮಿತವ್ಯಯದ ಕ್ರಮಗಳು ಜನರ ಗಮನವನ್ನು ಸೆಳೆಯುತ್ತವೆ. ಲಾಹೋರ್‌ನಿಂದ ಕರಾಚಿಯವರೆಗೆ ಸರಿಸುಮಾರು 1,000 ಕಿಲೋಮೀಟರ್‌ಗಳ ಸುದೀರ್ಘ ಮಾರ್ಗದಲ್ಲಿ 16 ಗಂಟೆಗಳ ಕಾಲ ಯಶಸ್ವಿಯಾಗಿ ಸಂಚರಿಸುವ ಪಾಕಿಸ್ತಾನ ರೈಲ್ವೆ(Railway)ಯ ಎಕ್ಸ್‌ಪ್ರೆಸ್ ರೈಲೊಂದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಎಬಿಪಿ ಲೈವ್ ವರದಿ ಮಾಡಿದೆ.

ವಿದ್ಯುತ್ ಅಥವಾ ಡಿಜಿಟಲ್ ಬೋರ್ಡ್‌ಗಳ ದುಬಾರಿ ವೆಚ್ಚಕ್ಕೆ ಪರ್ಯಾಯವಾಗಿ, ರೈಲ್ವೆ ಸಿಬ್ಬಂದಿಯು ರೂಟ್ ಬೋರ್ಡ್ ಮೇಲೆ ಉರ್ದು ಭಾಷೆಯಲ್ಲಿ ಸೀಮೆಸುಣ್ಣವನ್ನು (Chalk) ಬಳಸಿ ಅತ್ಯಂತ ಸರಳವಾಗಿ “ಮುಲ್ತಾನ್ ಜಕಾರಿಯಾ ಕರಾಚಿ” ಎಂದು ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರತೀಯ ನೆಟ್ಟಿಗರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಸ್ಯದ ಚಟಾಕಿಗಳನ್ನು ಹಾರಿಸಿದ್ದಾರೆ. ಇದು ಪಾಕಿಸ್ತಾನದ ರಹಸ್ಯ ತಂತ್ರಜ್ಞಾನ ಇರಬಹುದು, ಮಳೆ ಬಂದ ತಕ್ಷಣ ಬೋರ್ಡ್ ಮೇಲಿರುವ ಮಾರ್ಗವು ಸ್ವಯಂಚಾಲಿತವಾಗಿ ಅಳಿಸಿಹೋಗುತ್ತದೆ, ಆಗ ರೈಲು ತನಗೆ ಇಷ್ಟಬಂದ ಹೊಸ ನಿಲ್ದಾಣಕ್ಕೆ ಹೋಗಬಹುದು ಎಂದು ಅತ್ಯಂತ ವ್ಯಂಗ್ಯಭರಿತ ಹಾಗೂ ಮೋಜಿನ ಕಾಮೆಂಟ್‌ಗಳ ಮೂಲಕ ಇಡೀ ವಾತಾವರಣವನ್ನು ಹಗುರಗೊಳಿಸಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು

ಎಸಿ ಸ್ಟ್ಯಾಂಡರ್ಡ್ ಬೋಗಿಗಳನ್ನು ಹೊಂದಿರುವ ಈ ರೈಲು, ಸೀಮೆಸುಣ್ಣದ ಬರವಣಿಗೆಯನ್ನು ಹೊಂದಿದ್ದರೂ ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ತಲುಪಿಸುತ್ತಿದೆ. ತಂತ್ರಜ್ಞಾನದ ವೈಭವಗಳ ನಡುವೆಯೂ ಇಂತಹ ತಳಮಟ್ಟದ ಸಾಂಪ್ರದಾಯಿಕ ವಿಧಾನಗಳು ಹಾಗೂ ಅದರ ಸುತ್ತ ಮೂಡಿಬಂದಿರುವ ಸಾರ್ವಜನಿಕರ ಹಾಸ್ಯಪ್ರಜ್ಞೆಯು ಇಂಟರ್ನೆಟ್ ಲೋಕದಲ್ಲಿ ಭಾರಿ ಮನರಂಜನೆಯನ್ನು ನೀಡುತ್ತಿದ್ದು, ನೆರೆರಾಷ್ಟ್ರಗಳ ನಡುವೆ ಒಂದು ಲಘು ಹಾಸ್ಯದ ಸೇತುವೆಯನ್ನು ನಿರ್ಮಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲ ಭಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​: ಮೆಟ್ರೋದಲ್ಲಿ ಸಂಚರಿಸಲು ಸಿಎಂ ನಿರ್ಧಾರ – Kannada News

ಬೆಂಗಳೂರು, ಜೂನ್​​ 07: ಸಿಎಂ ಡಿ.ಕೆ. ಶಿವಕುಮಾರ್​ ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದಲಿದ್ದಾರೆ. ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಸಿಎಂ ಪ್ರಯಾಣಿಸಲಿದ್ದಾರೆ. ಜೀರೋ ಟ್ರಾಫಿಕ್​ನಿಂದ ವಾಹನ ಸವಾರರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಕನಕಪುರ ರಸ್ತೆ ತಲುಪಿದ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ತಮ್ಮ ಪ್ರವಾಸ ಮುಂದುವರೆಸಲಿದ್ದಾರೆ. ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆ ಕ್ಷೇತ್ರಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟ ಸಲೀಂ ಕುಮಾರ್ ನಿಧನ: ಕಂಬನಿ ಮಿಡಿದ ಮಮ್ಮುಟ್ಟಿ – Kannada News

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಲೀಂ ಕುಮಾರ್ (Salim Kumar) ಶನಿವಾರ (ಜೂನ್ 6) ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಹಾಗೂ ಲಿವರ್ (Liver) ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 10.43ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸಲೀಂ ಕುಮಾರ್ ಅವರು ಪತ್ನಿ ಸುನಿತಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಚಂದು ಇತ್ತೀಚೆಗೆ ಸೂಪರ್ ಹಿಟ್ ಆದ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ನಟಿಸಿದ್ದರು ಎಂಬುದು ಉಲ್ಲೇಖನೀಯ. ಸಲೀಂ ಕುಮಾರ್ ನಿಧನಕ್ಕೆ ಮಾಲಿವುಡ್ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

‘ಬೇರೆಯವರನ್ನು ನಗಿಸುತ್ತಾ, ಯೋಚಿಸುವಂತೆ ಮಾಡುತ್ತಾ, ಕೆಲವೊಮ್ಮೆ ತಾವೂ ಅತ್ತು ಬೇರೆಯವರನ್ನೂ ಅಳಿಸುತ್ತಿದ್ದ ಸಲೀಂ. ಈಗ ನೀನು ಕೇವಲ ನನ್ನನ್ನು ಕಣ್ಣೀರಿಡುವಂತೆ ಮಾಡಿ ಹೊರಟುಹೋಗಿದ್ದೀಯ. ನಿನ್ನ ಈ ಅಗಲಿಕೆ ಎಂದಿಗೂ ಮುಗಿಯದ ಮೌನ ಮತ್ತು ಅಪಾರ ದುಃಖವನ್ನು ತಂದಿದೆ ಸಹೋದರ’ ಎಂದು ಮಮ್ಮುಟ್ಟಿ ಕಣ್ಣೀರು ಹಾಕಿದ್ದಾರೆ.

90ರ ದಶಕದ ಕೊನೆಯಲ್ಲಿ ಮಿಮಿಕ್ರಿ ಮತ್ತು ಹಾಸ್ಯ ಕಲಾವಿದರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಲೀಂ ಕುಮಾರ್, ಕೇವಲ ಕಾಮಿಡಿ ಪಾತ್ರಗಳಿಗೆ ಸೀಮಿತವಾಗದೆ ಅದ್ಭುತ ಪೋಷಕ ನಟನಾಗಿ ಗುರುತಿಸಿಕೊಂಡರು. 2005ರಲ್ಲಿ ‘ಅಚ್ಚನುರಂಗತ ವೀಡು’ ಚಿತ್ರದ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಇನ್ನು 2010ರಲ್ಲಿ ತೆರೆಕಂಡ ‘ಆದಾಮಿಂತೆ ಮಕನ್ ಅಬು’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು.

ಇದನ್ನೂ ಓದಿ: ಖ್ಯಾತ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ

ಕೇರಳದ ಸಿಎಂ ವಿ.ಡಿ. ಸತೀಶನ್ ಸೇರಿದಂತೆ ಹಲವು ಗಣ್ಯರು ಸಲೀಂ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ‘ಅವರು ಕೇವಲ ಒಬ್ಬ ಚಿತ್ರನಟನಷ್ಟೇ ಅಲ್ಲ, ನಮಗೆ ಕುಟುಂಬದ ಸದಸ್ಯರಂತಿದ್ದರು’ ಎಂದು ಸತೀಶನ್ ಸ್ಮರಿಸಿದ್ದಾರೆ. ಸಲೀಂ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಲಯಾಳಂ ಚಿತ್ರರಂಗದ ನಟ ದಿಲೀಪ್ ಸೇರಿದಂತೆ ಹಲವು ತಾರೆಯರು ಆಸ್ಪತ್ರೆಗೆ ಧಾವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಎಲ್ ರಾಹುಲ್ ನಟನೆಗೆ ‘ಆಸ್ಕರ್’ ಪ್ರಶಸ್ತಿ ನೀಡಬೇಕು: ಗ್ರೇಮ್ ಸ್ವಾನ್ – Kannada News

ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಮೊದಲಿಗೆ ಡಿಆರ್‌ಎಸ್​ನಿಂದ ಪಾರಾಗಿ ಸುದ್ದಿಯಾಗಿದ್ದ ರಾಹುಲ್, ಆ ಬಳಿಕ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಡಿಆರ್​ಎಸ್​​ ಹಾಗೂ ಸೆಂಚುರಿಗಳಿಂದ ಸುದ್ದಿಯಾಗಲು ಮುಖ್ಯ ಕಾರಣ 11ನೇ ಓವರ್​ನಲ್ಲೇ ಸಿಕ್ಕ ಜೀವದಾನ!

11ನೇ ಓವರ್‌ನಲ್ಲಿ ಅಫ್ಘಾನಿಸ್ತಾನ್ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಪ್ರಯತ್ನಿಸಿದ್ದರು. ಆದರೆ ಚೆಂಡು ಅವರ ಬ್ಯಾಟ್‌ನ ತುದಿಗೆ ಸವರಿ ನೇರವಾಗಿ ವಿಕೆಟ್ ಕೀಪರ್ ಅಫ್ಸರ್ ಜಜಾಯ್ ಕೈ ಸೇರಿತು.

ಅಫ್ಘಾನಿಸ್ತಾನದ ಆಟಗಾರರು ಔಟ್ ಎಂದು ಜೋರಾಗಿ ಅಪೀಲ್ ಮಾಡಿದರೂ, ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಈ ವೇಳೆ ಕೆಎಲ್ ರಾಹುಲ್ ಯಾವುದೇ ಆತಂಕವಿಲ್ಲದೆ, ತಮಗೇನೂ ತಿಳಿಯದಂತೆ ಅತ್ಯಂತ ಶಾಂತವಾಗಿ ತಲೆಯಾಡಿಸಿದರು.

ಅಷ್ಟೇ ಅಲ್ಲದೆ ಅಫ್ಘಾನ್ ಆಟಗಾರರು ಡಿಆರ್​ಎಸ್​ ತೆಗೆದುಕೊಳ್ಳಲು ಕೆಎಲ್ ರಾಹುಲ್ ಅವರ ಹಾವಭಾವನ್ನು ಗಮನಿಸಿದ್ದಾರೆ. ಈ ವೇಳೆ ಅವರು ಬ್ಯಾಟ್​ನ ಹ್ಯಾಂಡಲ್​ನಿಂದ ಸೌಂಡ್ ಬಂದಂತೆ ಪರೀಕ್ಷಿಸುತ್ತಿದ್ದ ನಿಂತಿದ್ದರು.

ಇದಾಗ್ಯೂ  ಸ್ಲಿಪ್‌ನಲ್ಲಿದ್ದ ರಹಮಾನುಲ್ಲಾ ಗುರ್ಬಾಝ್ ರಿವ್ಯೂ ತೆಗೆದುಕೊಳ್ಳುವಂತೆ ನಾಯಕ ಹಶ್ಮತುಲ್ಲಾ ಶಾಹಿದಿಗೆ ಒತ್ತಾಯಿಸಿದರು. ಆದರೆ ರಾಹುಲ್ ಅವರ ಮುಖದ ಹಾವಭಾವ ನೋಡಿ ಗೊಂದಲಕ್ಕೊಳಗಾದ ಕೀಪರ್ ಮತ್ತು ನಾಯಕ ರಿವ್ಯೂ ಬೇಡ ಎಂದು ನಿರ್ಧರಿಸಿದರು.

ಮುಂದಿನ ಕೆಲವು ನಿಮಿಷಗಳಲ್ಲಿ ಟಿವಿ ರಿಪ್ಲೇನಲ್ಲೇ ಬ್ಯಾಟ್‌ಗೆ ಚೆಂಡು ಸ್ಪಷ್ಟವಾಗಿ ತಗುಲಿರುವುದು ದೊಡ್ಡ ಸ್ಪೈಕ್ ಮೂಲಕ ಸಾಬೀತಾಯಿತು. ಇದನ್ನು ನೋಡಿ ಅಫ್ಘಾನ್ ಆಟಗಾರರು ತಲೆಮೇಲೆ ಕೈ ಹೊತ್ತು ಕುಳಿತುಕೊಂಡರು. ಅಂದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಅಫ್ಘಾನ್ ಆಟಗಾರರು ವಿಫಲರಾದರು.

ರಾಹುಲ್ ನಟನೆಗೆ ಆಸ್ಕರ್ ಪ್ರಶಸ್ತಿ ನೀಡಬೇಕು!

ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸುತ್ತಿದ್ದ ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್ ಈ ಬಗ್ಗೆ ಲೈವ್ ಕಾಮೆಂಟರಿಯಲ್ಲಿ ಮಾತನಾಡುತ್ತಾ, “ಕೆ.ಎಲ್. ರಾಹುಲ್ ಇಲ್ಲಿ ಅದ್ಭುತ ಆಟ ಆಡಿದ್ದಾರೆ. ನಾಯಕ ಮತ್ತು ಕೀಪರ್ ರಾಹುಲ್ ಮುಖ ನೋಡಿದಾಗ ಅವರು ಏನೂ ಆಗಿಲ್ಲ ಎಂಬಂತೆ ತಲೆಯಾಡಿಸಿದರು. ಎದುರಾಳಿಗಳು ಅದನ್ನು ನಂಬಿಯೇ ಬಿಟ್ಟರು. ರಾಹುಲ್ ಅವರ ಈ ನಟನೆಗೆ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ ಮಾಡಬೇಕು” ಎಂದು ಲೇವಡಿ ಮಾಡಿದ್ದಾರೆ.

ಅಂದರೆ ಗ್ರೇಮ್ ಸ್ವಾನ್ ಪ್ರಕಾರ, ಕೆಎಲ್ ರಾಹುಲ್ ತಮ್ಮ ನಟನೆಯ ಮೂಲಕ ಅಫ್ಘಾನಿಸ್ತಾನ್ ಆಟಗಾರರು ಡಿಆರ್​ಎಸ್​ ತೆಗೆದುಕೊಳ್ಳುದಂತೆ ಮಾಡಿದ್ದಾರೆ. ಸಿನಿಮಾಗಳಲ್ಲಿ ಅತ್ಯುತ್ತಮವಾಗಿ ನಟಿಸುವ ನಟ-ನಟಿಯರಿಗೆ ವಿಶ್ವದ ಅತ್ಯುನ್ನತ ‘ಆಸ್ಕರ್ ಪ್ರಶಸ್ತಿ’ ನೀಡಲಾಗುತ್ತದೆ. ಇಲ್ಲಿ ಕೆ.ಎಲ್. ರಾಹುಲ್ ಮೈದಾನದಲ್ಲಿ ಒಬ್ಬ ವೃತ್ತಿಪರ ನಟನಿಗಿಂತಲೂ ಅದ್ಭುತವಾಗಿ ನಟಿಸಿ ಎದುರಾಳಿ ತಂಡವನ್ನು ದಾರಿ ತಪ್ಪಿಸಿದ್ದಾರೆ ಎಂದು ಗ್ರೇಮ್ ಸ್ವಾನ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಒಂದೇ ತಂಡವಾದ ಎರಡು ಟೀಮ್​​ಗಳು..!

ಸೆಂಚುರಿ ಸಿಡಿಸಿದ ಕನ್ನಡಿಗ:

ಕೇವಲ 16 ರನ್ ಗಳಿಸಿದ್ದಾಗ ಸಿಕ್ಕ ಈ ಜೀವದಾನವನ್ನು ಪೂರ್ಣವಾಗಿ ಬಳಸಿಕೊಂಡ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 165 ಎಸೆತಗಳಲ್ಲಿ ಭರ್ಜರಿ ಶತಕ (100 ರನ್) ಬಾರಿಸಿದರು. ಇವರೊಂದಿಗೆ ನಾಯಕ ಶುಭ್‌ಮನ್ ಗಿಲ್ (103*) ಕೂಡ ಶತಕ ಸಿಡಿಸಿದರು. ಪರಿಣಾಮ, ಭಾರತ ತಂಡವು  ಮೊದಲ ದಿನದ ಆಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368  ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ.

Source link

Vasthu Tips: ಮನೆಯಲ್ಲಿ ದೀಪ ಹಚ್ಚುವಾಗ ಈ 5 ತಪ್ಪು ಮಾಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News

ಭಾರತೀಯ ಸಂಸ್ಕೃತಿಯಲ್ಲಿ, ಪ್ರತಿದಿನ ಮನೆಯಲ್ಲಿ ದೀಪ ಹಚ್ಚುವುದನ್ನು ಅತ್ಯಂತ ಪವಿತ್ರ ಆಚರಣೆ ಎಂದು ಪರಿಗಣಿಸಲಾಗುತ್ತದೆ. ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುವುದಲ್ಲದೆ, ಮನಸ್ಸಿಗೆ ಶಾಂತಿ ಮತ್ತು ಕುಟುಂಬಕ್ಕೆ ಅದೃಷ್ಟ ಬರುತ್ತದೆ ಎಂಬುದು ಶತಮಾನಗಳ ನಂಬಿಕೆ. ಆದಾಗ್ಯೂ, ವಾಸ್ತು ಶಾಸ್ತ್ರಗಳ ಪ್ರಕಾರ, ದೀಪ ಪೂಜೆಯಲ್ಲಿ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಅದರ ಆಧ್ಯಾತ್ಮಿಕ ಪ್ರಯೋಜನಗಳನ್ನು ಕಡಿಮೆ ಮಾಡಬಹುದು. ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂಪತ್ತನ್ನು ವೃದ್ಧಿಸಿಕೊಳ್ಳಲು ದೀಪ ಹಚ್ಚುವಾಗ ಪಾಲಿಸಬೇಕಾದ ಆ ಪ್ರಮುಖ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ದೀಪ ಬೆಳಗಿಸುವ ದಿಕ್ಕು ಅತ್ಯಂತ ಪ್ರಮುಖವಾದುದು:

ವಾಸ್ತು ಶಾಸ್ತ್ರದಲ್ಲಿ ದೀಪವನ್ನು ಇರಿಸುವ ಮತ್ತು ಅದು ಉರಿಯುವ ದಿಕ್ಕಿಗೆ ವಿಶೇಷ ಪ್ರಾಮುಖ್ಯತೆ ಇದೆ. ಸಾಮಾನ್ಯವಾಗಿ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ದೀಪವನ್ನು ಬೆಳಗಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿಕ್ಕುಗಳು ಜ್ಞಾನ, ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿ ಹೊಂದಿವೆ ಎಂದು ನಂಬಲಾಗಿದೆ. ಆದರೆ, ಸಾಮಾನ್ಯ ಪೂಜೆಗಳ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬಾರದು ಎಂದು ಆಧ್ಯಾತ್ಮಿಕ ಗ್ರಂಥಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ಹಳೆಯ ಬತ್ತಿ ಮತ್ತೆ ಬಳಸುವ ತಪ್ಪು ಮಾಡಬೇಡಿ:

ದೀಪ ಪೂಜೆಯಲ್ಲಿ ಬಳಸುವ ಹತ್ತಿಯ ಬತ್ತಿಯು ಯಾವಾಗಲೂ ಸ್ವಚ್ಛ ಮತ್ತು ಹೊಸದಾಗಿರಬೇಕು. ಕೆಲವರು ನಿನ್ನೆಯ ಸುಟ್ಟ ಬತ್ತಿಗೆ ಮತ್ತಷ್ಟು ಎಣ್ಣೆ ಹಾಕಿ ಅದನ್ನೇ ಮತ್ತೆ ಬೆಳಗಿಸುತ್ತಾರೆ, ಆದರೆ ಇದು ಶಾಸ್ತ್ರೋಕ್ತವಲ್ಲ ಮತ್ತು ವೈಜ್ಞಾನಿಕವಾಗಿಯೂ ಸೂಕ್ತವಲ್ಲ. ಪ್ರತಿದಿನ ಹೊಸ ಬತ್ತಿಯಿಂದ ದೀಪ ಹಚ್ಚುವುದರಿಂದ ಪೂಜಾ ಕೋಣೆಯ ಪರಿಶುದ್ಧತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇದು ದೇವತಾ ಅನುಗ್ರಹವನ್ನು ತರಲು ಸಹಕಾರಿಯಾಗುತ್ತದೆ.

ತುಪ್ಪ ಮತ್ತು ಎಣ್ಣೆ ಒಟ್ಟಿಗೆ ಬೆರೆಸಬೇಡಿ:

ಪೂಜಾ ಕೋಣೆಯಲ್ಲಿ ಶುದ್ಧ ಹಸುವಿನ ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಎಂದು ಪರಿಗಣಿಸಲಾಗಿದೆ. ಆದರೆ ಅನೇಕರು ಒಂದೇ ದೀಪದಲ್ಲಿ ತುಪ್ಪ, ಸಾಸಿವೆ ಎಣ್ಣೆ ಅಥವಾ ಇನ್ಯಾವುದೇ ಎಣ್ಣೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ದೀಪ ಹಚ್ಚುವ ತಪ್ಪು ಮಾಡುತ್ತಾರೆ. ಸಂಪ್ರದಾಯಗಳ ಪ್ರಕಾರ, ನೀವು ಯಾವ ದ್ರವ್ಯವನ್ನು ಬಳಸುತ್ತೀರೋ (ತುಪ್ಪ ಅಥವಾ ಎಣ್ಣೆ), ಅದನ್ನು ಪ್ರತ್ಯೇಕವಾಗಿಯೇ ಬಳಸಿ ದೀಪ ಹಚ್ಚಬೇಕು ಮತ್ತು ಅದನ್ನು ಸಂಪೂರ್ಣವಾಗಿ ಬಳಸುವುದು ಉತ್ತಮ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಮುರಿದ ದೀಪಗಳನ್ನು ಬಳಸುವುದನ್ನು ನಿಲ್ಲಿಸಿ:

ಕೆಲವೊಮ್ಮೆ ಭಾವನಾತ್ಮಕ ಕಾರಣಗಳಿಂದ ಅಥವಾ ನಿರ್ಲಕ್ಷ್ಯದಿಂದ ಮನೆಯಲ್ಲಿ ಹಳೆಯ, ಬಿರುಕು ಬಿಟ್ಟ ಹಿತ್ತಾಳೆ ಅಥವಾ ಜೇಡಿಮಣ್ಣಿನ ದೀಪಗಳನ್ನು ಬಳಸುವುದನ್ನು ನೋಡಿರುತ್ತೀರಿ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಪೂಜೆಗೆ ಭಿನ್ನವಾದ ಅಥವಾ ಹಾನಿಗೊಳಗಾದ ವಸ್ತುಗಳನ್ನು ಬಳಸುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಬಿರುಕು ಬಿಟ್ಟ ದೀಪಗಳನ್ನು ತಕ್ಷಣವೇ ಬದಲಾಯಿಸಿ, ಹೊಸ ಮತ್ತು ದೋಷರಹಿತ ದೀಪಗಳನ್ನು ಬಳಸುವುದು ಅತ್ಯಗತ್ಯ.

ದೀಪವನ್ನು ಎಂದಿಗೂ ನೇರವಾಗಿ ನೆಲದ ಮೇಲೆ ಇಡಬೇಡಿ:

ಶಾಸ್ತ್ರಗಳ ಪ್ರಕಾರ ದೀಪವನ್ನು ಎಂದಿಗೂ ಬರಿ ನೆಲದ ಮೇಲೆ ನೇರವಾಗಿ ಇಡಬಾರದು. ದೀಪದ ಕೆಳಗೆ ಒಂದು ಸಣ್ಣ ತಟ್ಟೆ, ಮರದ ಪೀಠ (ಮಣೆ) ಅಥವಾ ಕನಿಷ್ಠ ಪಕ್ಷ ಒಂದು ವೀಳ್ಯದ ಎಲೆಯನ್ನಾದರೂ ಆಸನವಾಗಿ ಇಡುವುದು ಅತ್ಯಂತ ಶುಭ ತರುತ್ತದೆ. ಇದರೊಂದಿಗೆ, ದೀಪವನ್ನು ಎಂದಿಗೂ ಬಾಯಿಯಿಂದ ಊದಿ ನಂದಿಸಬಾರದು ಎಂದು ಹಿರಿಯರು ಹೇಳುತ್ತಾರೆ. ದೀಪವನ್ನು ಶಾಂತಗೊಳಿಸಬೇಕಾದಾಗ, ಹೂವಿನಿಂದ ಅಥವಾ ಎಣ್ಣೆಯಲ್ಲಿ ಬತ್ತಿಯನ್ನು ನಿಧಾನವಾಗಿ ಹಿಮ್ಮುಖವಾಗಿ ಎಳೆಯುವ ಮೂಲಕ ನಂದಿಸುವುದು ಶಾಸ್ತ್ರಬದ್ಧ ವಿಧಾನವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಅಥವಾ ಯಾವುದೇ ಟಿಎಂಸಿ ನಾಯಕರು ನನಗೆ ರಾಜೀನಾಮೆ ನೀಡುವಂತೆ ಕೇಳಿಲ್ಲ: ಯೂಸುಫ್ ಪಠಾಣ್

ಕೋಲ್ಕತ್ತಾ, ಜೂನ್ 07: ಮಮತಾ ಬ್ಯಾನರ್ಜಿ(Mamata Banerjee)ಯಾಗಲಿ ಅಥವಾ ಯಾವುದೇ ಟಿಎಂಸಿ ನಾಯಕರು ನನ್ನ ಬಳಿ ರಾಜೀನಾಮೆ ನೀಡುವಂತೆ ಕೇಳಿಲ್ಲ ಎಂದು ಬಹರಾಮ್‌ಪುರ ಲೋಕಸಭಾ ಕ್ಷೇತ್ರದ ಸಂಸದ ಯೂಸುಫ್ ಪಠಾಣ್ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮಗೆ ರಾಜೀನಾಮೆ ನೀಡುವಂತೆ ಕೇಳಿದ್ದಾರೆ ಎಂಬುದೆಲ್ಲ ಕೇವಲ ಅನಧಿಕೃತ ವದಂತಿಗಳಾಗಿದ್ದು, ಪಕ್ಷದಲ್ಲಿ ಎಲ್ಲವೂ ಅತ್ಯಂತ ಸೌಹಾರ್ದಯುತವಾಗಿದೆ ಎಂದು ಅವರು ದೃಢಪಡಿಸಿದ್ದಾರೆ.

ಈ ಸ್ಪಷ್ಟನೆಯು ಟಿಎಂಸಿ ಪಕ್ಷದ ಆಂತರಿಕ ಒಗ್ಗಟ್ಟು ಮತ್ತು ನಾಯಕರ ನಡುವಿನ ದೃಢವಾದ ಪರಸ್ಪರ ನಂಬಿಕೆಯನ್ನು ಜಗತ್ತಿಗೆ ಸಾಬೀತುಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅಧಿಕೃತ ವೀಡಿಯೊ ಸಂದೇಶದಲ್ಲಿ ಮಾಜಿ ಸ್ಟಾರ್ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾಣ್ ಅವರು ಮಾಧ್ಯಮಗಳ ತಪ್ಪು ಮಾಹಿತಿಯನ್ನು ಅತ್ಯಂತ ಪ್ರಬುದ್ಧವಾಗಿ ನಿರಾಕರಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಬಹರಂಪುರ ಸ್ಥಾನದಿಂದ ಸ್ಪರ್ಧಿಸಲು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು. ನಮ್ಮ ಕೊನೆಯ ಅಧಿಕೃತ ಸಭೆಯಲ್ಲಿಯೂ ಅವರು ಈ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಪಕ್ಷದ ಯಾವುದೇ ಹಿರಿಯ ನಾಯಕರೂ ಇಂತಹ ಪ್ರಸ್ತಾಪವನ್ನು ನನ್ನ ಮುಂದೆ ಇಟ್ಟಿಲ್ಲ ಎಂದು ಪಠಾಣ್ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಲೋಕಸಭೆಯತ್ತ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹೆಜ್ಜೆ, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ

ಪಕ್ಷದ ನಾಯಕರ ನಡುವೆ ಉತ್ತಮ ಸಂವಹನವಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಕೋರಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರ ಪರವಾಗಿ ತಾವು ಯೂಸುಫ್ ಪಠಾಣ್ ಅವರನ್ನು ಸಂಪರ್ಕಿಸಿ ಸಂದೇಶ ತಲುಪಿಸಿದ್ದೆ ಎಂಬ ಸುದ್ದಿಯನ್ನು ಭಾರತದ ಹೆಮ್ಮೆಯ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಲಿಖಿತ ಹೇಳಿಕೆಯ ಮೂಲಕ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ವಿಡಿಯೋ

ಭವಿಷ್ಯದ ಸುಭದ್ರ ಮುನ್ನಡೆಗೆ ಹಾದಿ ಸುಗಮ
ಯೂಸುಫ್ ಪಠಾಣ್ ಮತ್ತು ಸೌರವ್ ಗಂಗೂಲಿ ಅವರ ಈ ತ್ವರಿತ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆಗಳು ರಾಜಕೀಯ ವಲಯದಲ್ಲಿದ್ದ ಅನಗತ್ಯ ಗೊಂದಲಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸಿವೆ. ಬಹರಂಪುರ ಕ್ಷೇತ್ರದ ಚುನಾಯಿತ ಪ್ರತಿನಿಧಿಯಾಗಿ ಯೂಸುಫ್ ಪಠಾಣ್ ಅವರು ಯಾವುದೇ ಅಡೆತಡೆಯಿಲ್ಲದೆ ಜನರ ಸೇವೆಯಲ್ಲಿ ಮುಂದುವರಿಯಲಿದ್ದು, ಮಮತಾ ಬ್ಯಾನರ್ಜಿ ಅವರ ಮಾರ್ಗದರ್ಶನದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಿ ಹಾಗೂ ಸೌಹಾರ್ದಯುತವಾಗಿ ಮುನ್ನಡೆಯಲಿದೆ ಎಂಬ ಆಶಾವಾದ ಮೂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ: ಸಿಲ್ಕ್ ಬೋರ್ಡ್‌ನಲ್ಲಿ ಮಾತ್ರ ಕೊಂಚ ಏರಿಕೆ – Kannada News

ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ: ಸಿಲ್ಕ್ ಬೋರ್ಡ್‌ನಲ್ಲಿ ಮಾತ್ರ ಕೊಂಚ ಏರಿಕೆ

ಬೆಂಗಳೂರು, ಜೂನ್ 07: ರಾಜ್ಯದಲ್ಲಿ ಮುಂಗಾರು ಮಳೆಯ ಆರಂಭದ ಬೆನ್ನಲ್ಲೇ ವಾಯು ಮಾಲಿನ್ಯದ (AQI) ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದ್ದು, ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯ ಕಾರಣದಿಂದಾಗಿ ಗಾಳಿಯ ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ. ಒಟ್ಟಾರೆ ಬೆಂಗಳೂರಿನ ಸರಾಸರಿ AQI ಪ್ರಸ್ತುತ 11 ರಿಂದ 17 ರ ಆಸುಪಾಸಿನಲ್ಲಿದ್ದು, ಇದು ಅತ್ಯಂತ ಉತ್ತಮ (Good) ವಿಭಾಗಕ್ಕೆ ಸೇರುತ್ತದೆ.

ಮುಖ್ಯಾಂಶಗಳು

  • ಜೂನ್ 7 ರಂದು ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದೆ.
  • ಕರಾವಳಿಯ ಮಂಗಳೂರು ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಮುನ್ನೂರಕ್ಕಿಂತ ಕೆಳಗಿದೆ.
  • ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ವಾಯು ಮಾಲಿನ್ಯದ ಪ್ರಮಾಣ ಕೊಂಚ ಹೆಚ್ಚಾಗಿದೆ.

ನಗರದ ಪ್ರಮುಖ ಪ್ರದೇಶಗಳ ಇಂದಿನ AQI ವಿವರ

  • ಜಯನಗರ (5ನೇ ಬ್ಲಾಕ್): 33 AQI (ಉತ್ತಮ)
  • ಪೀಣ್ಯ (ಶಿವಪುರ): 28 AQI (ಉತ್ತಮ)
  • ಸಿಲ್ಕ್ ಬೋರ್ಡ್: ಇಲ್ಲಿ ವಾಹನ ಸಂಚಾರದ ಒತ್ತಡದಿಂದಾಗಿ AQI ಮಟ್ಟ 72 ರಷ್ಟಿದ್ದು, ಇದು ಸಾಧಾರಣ (Moderate) ವಿಭಾಗದಲ್ಲಿದೆ. ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಯಿರುವವರು ಈ ಭಾಗದಲ್ಲಿ ಕೊಂಚ ಜಾಗ್ರತೆ ವಹಿಸುವುದು ಒಳಿತು. ಉಳಿದಂತೆ ಇಡೀ ರಾಜಧಾನಿಯಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ವಾತಾವರಣ ಪೂರಕವಾಗಿದೆ.

ಕರ್ನಾಟಕದ ಇತರ ನಗರಗಳ ಇಂದಿನ ಸ್ಥಿಗತಿ

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಮುಂಗಾರು ಮಾರುತಗಳ ಪ್ರಭಾವದಿಂದಾಗಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಆದರೆ ಕೈಗಾರಿಕಾ ಪ್ರದೇಶ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ಕೆಲವು ನಗರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

  • ಚಿಕ್ಕಮಗಳೂರು ಮತ್ತು ಮಡಿಕೇರಿ: ಗಿರಿಧಾಮಗಳಾದ ಚಿಕ್ಕಮಗಳೂರಿನಲ್ಲಿ AQI ಮಟ್ಟ 30 ಹಾಗೂ ಮಡಿಕೇರಿಯಲ್ಲಿ 37 ದಾಖಲಾಗಿದ್ದು, ಅತ್ಯಂತ ಶುದ್ಧ ಹಾಗೂ ಆರೋಗ್ಯಕರ ಗಾಳಿ ಇಲ್ಲಿದೆ.
  • ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕ 37 ರಷ್ಟಿದ್ದು, ಹಸಿರು ವಲಯದಲ್ಲಿದೆ.
  • ರಾಮನಗರ: ಇಲ್ಲಿನ ವಾಯು ಗುಣಮಟ್ಟವೂ ಸುಧಾರಿಸಿದ್ದು 37 AQI ದಾಖಲಾಗಿದೆ.
  • ಬೆಳಗಾವಿ: ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಇಲ್ಲಿ ಇಂದಿನ AQI 127 ರಷ್ಟಿದ್ದು, ಇದನ್ನು ಕಳಪೆ ಎಂದು ವರ್ಗೀಕರಿಸಲಾಗಿದೆ. ಇಲ್ಲಿನ ನಿವಾಸಿಗಳು ಮಾಸ್ಕ್ ಧರಿಸುವುದು ಸೂಕ್ತ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಗಾರು ಮಳೆಯ ಆರಂಭದಿಂದಾಗಿ ಇಂದು ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ತಗ್ಗಿ ವಾತಾವರಣ ಸ್ವಚ್ಛವಾಗಿದೆ. ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದ್ದು, ಗಾಳಿಯ ಗುಣಮಟ್ಟ ಇನ್ನಷ್ಟು ಸುಧಾರಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version