IND vs AFG: ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ – Kannada News

ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿದೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಈ ಜೋಡಿಯು ಮೊದಲ ವಿಕೆಟ್​ಗೆ 41 ರನ್​ಗಳ ಜೊತೆಯಾಟವಾಡಿದ್ದರು. ಈ ಹಂತದಲ್ಲಿ 24 ರನ್​ಗಳಿಸಿದ್ದ ಜೈಸ್ವಾಲ್ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

ಆ ಬಳಿಕ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ 104 ಎಸೆತಗಳಲ್ಲಿ 81 ರನ್ ಬಾರಿಸಿದ ಸಾಯಿ ಸುದರ್ಶನ್ ಬಿರುಸಿನ ಬ್ಯಾಟಿಂಗ್​ಗೆ ಮುಂದಾಗಿ ಕ್ಯಾಚ್ ನೀಡಿದರು.

ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಕೆಎಲ್ ರಾಹುಲ್ 165 ಎಸೆತಗಳಲ್ಲಿ 11 ಫೋರ್​ಗಳೊಂದಿಗೆ ಶತಕ ಸಿಡಿಸಿದರು. ಅದರೆ ಶತಕದ ಬೆನ್ನಲ್ಲೇ ರಾಹಲ್ (100) ಕೂಡ ಕ್ಯಾಚ್ ನೀಡಿ ನಿರ್ಗಮಿಸಿದರು.

ರಾಹುಲ್ ನಿ್ರ್ಗಮನದ ಬಳಿಕ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಶುಭ್​​ಮನ್ ಗಿಲ್ ಹಾಗೂ ರಿಷಭ್ ಪಂತ್ ಹೆಗಲೇರಿಸಿಕೊಂಡರು. ಅದರಂತೆ ಗಿಲ್ 138 ಎಸೆತಗಳಲ್ಲಿ ಸೆಂಚುರಿ ಪೂರೈಸಿದರೆ, ರಿಷಭ್ ಪಂತ್ 70 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಆ ಬಳಿಕ ಬಂದ ವಾಅಷಿಂಗ್ಟನ್ ಸುಂದರ್ ಅಜೇಯ 51 ರನ್ ಬಾರಿಸಿದರು.  ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 8 ವಿಕೆಟ್ ಕಳೆದುಕೊಂಡು 564 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ

ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ಸೇದಿಕುಲ್ಲಾ ಅಟಲ್, ರಹಮಾನುಲ್ಲಾ ಗುರ್ಬಾಝ್, ಅಬ್ದುಲ್ ಮಲಿಕ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಫ್ಸರ್ ಝಜೈ(ವಿಕೆಟ್ ಕೀಪರ್), ಅಝ್ಮತುಲ್ಲಾ ಒಮಝಾಹಿ, ಶರಫುದ್ದೀನ್ ಅಶ್ರಫ್, ನಂಗಿಯಾಲೈ ಖರೋಟಿ, ಝಿಯಾವುರ್ ರಹಮಾನ್ ಶರೀಫಿ, ಮೊಹಮ್ಮದ್ ಶರೀಫಿ.

Source link

ಬಿಬಿಎಂಪಿ ಕಸ ಗುತ್ತಿಗೆ ವಿವಾದ: ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ – Kannada News

ಬೆಂಗಳೂರು, ಜೂನ್ 7: ಮುಂದಿನ 30 ವರ್ಷಗಳಿಗೆ ಬೆಂಗಳೂರಿನ ಕಸ ನಿರ್ವಹಿಸುವ ಗುತ್ತಿಗೆಗೆ (Garbage Management) ಅನುಮೋದನೆ ನೀಡಿದ್ದ ಸರ್ಕಾರ ಇದೀಗ ಮನಸು ಬದಲಾಯಿಸಿದೆ. 39,437 ಕೋಟಿ ರೂಗಳ ಬೃಹತ್ ಟೆಂಡರ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿದೆ. ಈ ಟೆಂಡರ್‌ನಲ್ಲಿನ ವೆಚ್ಚವು ಅತಿಯಾಗಿದೆಯೆಂದು ಮತ್ತು 30 ವರ್ಷಗಳ ಸುದೀರ್ಘ ಅವಧಿಗೆ ಒಂದೇ ಕಂಪನಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲವೆಂದು ರಾಜ್ಯ ಹಣಕಾಸು ಇಲಾಖೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ನಿಯಮಗಳನ್ನು ಪರಿಶೀಲಿಸಲು ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ.

ಈ ನಾಲ್ಕು ಸದಸ್ಯರ ಸಮಿತಿಯಲ್ಲಿ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ಗ್ರೇಟರ್ ಬೆಂಗಳೂರು ಅಥಾರಿಟಿಯ (GBA) ಮುಖ್ಯ ಇಂಜಿನಿಯರ್ ಮತ್ತು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ (ಸದಸ್ಯ ಕಾರ್ಯದರ್ಶಿ) ಇದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೂರ್ವ ನಗರ ನಿಗಮದಿಂದ ಬೃಹತ್ ಸ್ವಚ್ಛತಾ ಸಪ್ತಾಹ; 100 ಟನ್ ಕಸ ವಿಲೇವಾರಿ!

ಹಣಕಾಸು ಇಲಾಖೆ ಎತ್ತಿರುವ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಏಳು ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಹಣಕಾಸು ಇಲಾಖೆ ವ್ಯಕ್ತಪಡಿಸಿದ ಪ್ರಮುಖ ಆಕ್ಷೇಪಣೆಗಳು

  • ಸರ್ಕಾರವು ಈ ಯೋಜನೆಗಾಗಿ 33,047 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಿತ್ತು, ಆದರೆ ಬಿಡ್‌ದಾರರು 39,437 ಕೋಟಿ ರೂ. ಕೋಟ್ ಮಾಡಿದ್ದಾರೆ. ಅಂದರೆ ಅಂದಾಜಿನ ಮೊತ್ತಕ್ಕಿಂತ ಸುಮಾರು 6,390 ಕೋಟಿ ರೂ. ಹೆಚ್ಚು. ಇದು ಹಣಕಾಸು ಇಲಾಖೆ ತಕರಾರು ಎತ್ತಿರುವ ಒಂದು ಸಂಗತಿ.
  • ಒಪ್ಪಂದದಲ್ಲಿ ವಾರ್ಷಿಕ 5% ದರ ಏರಿಕೆಯ ಷರತ್ತು ಇದೆ. 30 ವರ್ಷಗಳ ಅವಧಿಯಲ್ಲಿ ಇದು ಮೂಲ ದರಕ್ಕಿಂತ ಸುಮಾರು 4.5 ಪಟ್ಟು ಅಧಿಕವಾಗಲಿದೆ ಎಂದೂ ಇಲಾಖೆ ಎಚ್ಚರಿಸಿದೆ.
  • ಇಡೀ ನಗರದ ಕಸ ನಿರ್ವಹಣೆಯನ್ನು 30 ವರ್ಷಗಳ ಕಾಲ ಒಬ್ಬರೇ ಖಾಸಗಿ ಕಂಪನಿಗೆ ನೀಡುವುದರಿಂದ “ವೆಂಡರ್ ಲಾಕ್-ಇನ್” (Vendor Lock-in) ಪರಿಸ್ಥಿತಿ ಉಂಟಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.
  • ಟೆಂಡರ್ ಪ್ರಕಾರ, 30 ವರ್ಷ ಕಾಲ ವಾರ್ಷಿಕವಾಗಿ ಶೇ. 5ರಷ್ಟು ಏರಿಕೆ ಮಾಡಬೇಕು. ಇದಾದರೆ 30 ವರ್ಷದ ಬಳಿಕ ಕಸ ನಿರ್ವಹಣೆಯ ಗುತ್ತಿಗೆಯ ವೆಚ್ಚ ಈಗಿರುವುದಕ್ಕಿಂತ ನಾಲ್ಕೂವರೆ ಪಟ್ಟು ಹೆಚ್ಚುತ್ತದೆ ಎಂಬುದು ಹಣಕಾಸು ಇಲಾಖೆಯ ತಗಾದೆ.
  • ಸರ್ಕಾರವೇ ಭೂಮಿ ಒದಗಿಸುತ್ತಿರುವಾಗ, ಇಷ್ಟು ದೀರ್ಘಾವಧಿಯ (30 ವರ್ಷ) ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯಪಟ್ಟಿರುವ ಇಲಾಖೆ, ಇದನ್ನು 10 ವರ್ಷಗಳಿಗೆ ಸೀಮಿತಗೊಳಿಸುವಂತೆ ಮತ್ತು ವಾರ್ಷಿಕ ಏರಿಕೆ ದರವನ್ನು 2.5%ಕ್ಕೆ ಮಿತಿಗೊಳಿಸುವಂತೆ ಶಿಫಾರಸು ಮಾಡಿತ್ತು.

ಇದನ್ನೂ ಓದಿ: Bengaluru Air Quality: ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ: ಸಿಲ್ಕ್ ಬೋರ್ಡ್‌ನಲ್ಲಿ ಮಾತ್ರ ಕೊಂಚ ಏರಿಕೆ

ಈ ಟೆಂಡರ್ ಅನ್ನು ದೆಹಲಿ ಮೂಲದ ‘ಡೆಲ್ಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್’ಗೆ ನೀಡಲಾಗಿದೆ. ಇದು ಹೈದರಾಬಾದ್ ಮೂಲದ ರಾಮ್ಕಿ ಗ್ರೂಪ್‌ನ ಸಹವರ್ತಿ ಸಂಸ್ಥೆಯಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ವಕ್ಷೇತ್ರ ಕನಕಪುರಕ್ಕೆ ಡಿಕೆ ಶಿವಕುಮಾರ್ ಭೇಟಿ: ನಿಮ್ಮೊಂದಿಗೆ ಸದಾ ಇರ್ತೆನೆ ಎಂಬ ಸಂದೇಶ ರವಾನಿಸಿದ ಸಿಎಂ – Kannada News

ರಾಮನಗರ, ಜೂನ್​​ 07: ಸಿಎಂ ಆಗಿ ಅಧಿಕಾರದ ಗದ್ದುಗೆ ಏರಿರುವ ಡಿಕೆ ಶಿವಕುಮಾರ್ (DK Shivakumar), ತಮ್ಮ ಸೀಮೆಯ ಜನರಿಗೆ ಇಂದು ಕೃತಜ್ನತೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕೇರಿದ ಬಳಿಕ ಮೊದಲ ಬಾರಿಗೆ, ಸ್ವಕ್ಷೇತ್ರ ಕನಕಪುರಕ್ಕೆ (Kanakapura) ಭೇಟಿ ಕೊಟ್ಟಿದ್ದಾರೆ. ಜನರ ನಡುವೆ ನಿಂತು, ನಾನು ನಿಮ್ಮ ಮನೆ ಮಗ, ನಿಮ್ಮೊಂದಿಗೆ ಸದಾ ಇರುತ್ತೇನೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣ

ಇನ್ನು ಕನಕಪುರಕ್ಕೆ ತೆರಳುವ ಮುನ್ನ ಸಿಎಂ ಡಿಕೆ ಶಿವಕುಮಾರ್, ಮಾದರಿ ಹೆಜ್ಜೆಯೊಂದನ್ನ ಇಟ್ಟರು. ಝೀರೋ ಟ್ರಾಫಿಕ್ ತಪ್ಪಿಸುವುದಕ್ಕಾಗಿ ವಿಧಾನಸೌಧದದಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋದಲ್ಲಿಯೇ ತೆರಳಿದರು. ಮೆಟ್ರೋದಲ್ಲಿ ಪ್ರಯಾಣ ವೇಳೆ, ಜನರೊಂದಿಗೆ ಆತ್ಮೀಯವಾಗಿ ಬೆರೆತು, ಮಾತುಕತೆ ಮಾಡಿದರು. ಸಿಲ್ಕ್ ಇನ್‌ಸ್ಟಿಟ್ಯೂಟ್​ನಿಂದ ಕನಕಪುರಕ್ಕೆ ಕಾರಿನಲ್ಲಿ ಸಿಎಂ ಡಿಕೆ ಶಿವಕುಮಾರ್​ ಪ್ರಯಾಣ ಬೆಳಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಗೆ ಆಗಮಿಸಿದ ಸಿಎಂರನ್ನ ಶಾಸಕ ಇಕ್ಬಾಲ್​​ ಸ್ವಾಗತಿಸಿದರು. ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದ ಸರ್ಕಲ್​ವರೆಗೆ ಮೆರವಣಿಗೆ ಮಾಡಿದರು.

ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ: ಡಿಕೆ ಶಿವಕುಮಾರ್

ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ನೀವು ಗೆಲ್ಲಿಸಿದ್ದಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ನಿಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಎಂದರು. ನನ್ನ ಮೇಲೆ ವಿಶ್ವಾಸ ಇಟ್ಟು ಇಕ್ಬಾಲ್ ಹುಸೇನ್​​ರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರಕ್ಕೆ ನಾನೇ ಶಾಸಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: CM DKS in Metro: ಮೆಟ್ರೋ ಪ್ರಯಾಣಿಕರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಫೋಟೋ !

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋದಕ್ಕೆ ಕೆಲವರು ವಿರೋಧಿಸಿದರು. ಜಿಲ್ಲೆಯ ಹೆಸರು ಬದಲಾವಣೆಯಿಂದ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಹಾರೋಹಳ್ಳಿ ಅಭಿವೃದ್ಧಿಗೆ ಪ್ರತ್ಯೇಕ ಮೀಟಿಂಗ್ ಮಾಡುತ್ತೇನೆ. ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ. ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದವರಿಗೂ ಅನುಕೂಲವಾಗುತ್ತದೆ. ಇಲ್ಲಿನ ಜನರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಉತ್ತಮ ವಿದ್ಯಾಭ್ಯಾಸ ಇಲ್ಲೇ ದೊರಕುವಂತೆ ಮಾಡುತ್ತೇವೆ ಎಂದರು.

ದೇವರು ಅವಕಾಶ ಮಾತ್ರ ಕೊಡುತ್ತಾನೆ: ಸಿಎಂ

ಇನ್ನು ಬಿಜೆಪಿ ದೂರ ಇಡಬೇಕು ಎಂದು ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆ. ಜೆಡಿಎಸ್ ಪಕ್ಷದವರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ತೆಗೆದಿದೆ. ದೇವರು ವರ, ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ಮುಂದಿನ ಬಾರಿ 136 ಸೀಟ್​​ಗಿಂತಲೂ ಹೆಚ್ಚು ಬೆಂಬಲ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿನ್ನಸ್ವಾಮಿ ಸ್ಟೇಡಿಯಂ ಸಿಸಿಟಿವಿ ವಿವಾದಕ್ಕೆ ಭಾರಿ ಟ್ವಿಸ್ಟ್: ಬಾಕಿ ಹಣ ನೀಡದೆ ಅಮಾಯಕರ ಮೇಲೆ ಸುಳ್ಳು ಕೇಸ್ ಹಾಕಿದ ಆರೋಪ – Kannada News

ಚಿನ್ನಸ್ವಾಮಿ ಸ್ಟೇಡಿಯಂ ಸಿಸಿಟಿವಿ ವಿವಾದಕ್ಕೆ ಭಾರಿ ಟ್ವಿಸ್ಟ್

ಬೆಂಗಳೂರು, ಜೂನ್ 07: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ವೇಳೆ ಸಿಸಿಟಿವಿ ವೈರ್ ಕಟ್ (CCTV wire cut) ಮಾಡಲಾಗಿತ್ತು ಎಂಬ ಆರೋಪದ ಬೆನ್ನಲ್ಲೇ ಈಗ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಪಂದ್ಯದ ವೇಳೆ ಯಾವುದೇ ದುಷ್ಕೃತ್ಯ ಅಥವಾ ಭದ್ರತಾ ಲೋಪ ಆಗಿರಲಿಲ್ಲ, ಬದಲಿಗೆ ಬಾಕಿ ಹಣ ನೀಡದೇ ವಂಚಿಸಲು ಸಿಸಿಟಿವಿ ತಂತ್ರಜ್ಞಾನ ಸಂಸ್ಥೆಗಳು ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ಚಿನ್ನಸ್ವಾಮಿ ಸ್ಟೇಡಿಯಂ ಸಿಸಿಟಿವಿ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
  • ಬಾಕಿ ನಲವತ್ತು ಲಕ್ಷ ರೂಪಾಯಿ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ.
  • ತಪ್ಪು ಮುಚ್ಚಿಕೊಳ್ಳಲು ಅಮಾಯಕ ಯುವಕರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ.

ಕೊಡಬೇಕಿದ್ದ ಹಣ ಕೊಡದೇ ವಂಚನೆ

ಆರ್‌ಸಿಬಿ ಮತ್ತು ಕೆಎಸ್‌ಸಿಎ ಮುಖಾಂತರ ಸ್ಟೇಡಿಯಂನ ಭದ್ರತಾ ನಿಯಮಾವಳಿ (SOP) ಸಂಬಂಧಿಸಿದಂತೆ ಒಟ್ಟು 7 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿತ್ತು. ಇದರಲ್ಲಿ ಹರಿಯಾಣ ಮೂಲದ ಸ್ಟಾಕು (Staqu) ಸಂಸ್ಥೆಗೆ 4.5 ಕೋಟಿಗೆ ಟೆಂಡರ್ ನೀಡಲಾಗಿತ್ತು. ಆ ಬಳಿಕ ಎರಡನೇ ವೆಂಡರ್ ಆಗಿ ಗುಜರಾತ್ ಮೂಲದ ಟೆಕ್‌ಸ್ಟಿಚ್ (Techstitch) ಸಂಸ್ಥೆ ಹಾಗೂ ಅಂತಿಮವಾಗಿ ಪುಣೆ ಮೂಲದ ಐವಿಎಸ್ ಟೆಕ್ ಸೆಕ್ಯೂರ್ ಪ್ರೈವೇಟ್ ಲಿಮಿಟೆಡ್ (IVS Tech Secure Pvt Ltd) ಕಂಪನಿಗೆ ಸಿಸಿಟಿವಿ ಅಳವಡಿಕೆಯ ಹೊಣೆ ಸಿಕ್ಕಿತ್ತು. ಐವಿಎಸ್ ಸಂಸ್ಥೆಯು ಬೆಂಗಳೂರಿನ ಸಿಬ್ಬಂದಿ ಮೂಲಕ 1.2 ಕೋಟಿ ರೂಪಾಯಿಯ ಕೊಟೇಷನ್ ನೀಡಿ ಕೆಲಸ ಮುಗಿಸಿತ್ತು. ಆದರೆ ಮೂರು ಪಂದ್ಯಗಳು ಮುಗಿದ ಬಳಿಕ 1 ಕೋಟಿ ರೂಪಾಯಿ ನೀಡಿ, ಇನ್ನುಳಿದ 40 ಲಕ್ಷ ರೂಪಾಯಿ ಬಾಕಿ ಹಣ ನೀಡದೇ ಕಂಪನಿಗಳು ಸತಾಯಿಸಿದ್ದವು.

ತಪ್ಪು ಮುಚ್ಚಿಹಾಕಲು ಸುಳ್ಳು ಕೇಸ್?

ಕೊನೆಯ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಪವರ್ ಸಮಸ್ಯೆಯಿಂದಾಗಿ ಸಿಸಿಟಿವಿ ಆಫ್ ಆಗಿತ್ತು. ಈ ವೇಳೆ ಐವಿಎಸ್ ಸಂಸ್ಥೆಯು ಬಾಕಿ ಹಣ ನೀಡುವಂತೆ ಕೇಳಿತ್ತಾದರೂ, ಪಂದ್ಯಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಬ್ದುಲ್ ಕಲಾಂ ಮತ್ತು ಮಂಜುನಾಥ್ ಎಂಬ ಇಬ್ಬರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿತ್ತು. ಆದರೆ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗದೆ ಅವರು ಟೆಕ್ನಿಕಲ್ ಟೀಮ್ ಕರೆಯಲು ವಾಪಸ್ ಬಂದಿದ್ದರು. ಇದೇ ಸಿಸಿಟಿವಿ ದೃಶ್ಯಾವಳಿಗಳನ್ನು ಇಟ್ಟುಕೊಂಡು ಸ್ಟಾಕು ಕಂಪನಿಯ ಆದಿತ್ಯ ಭಟ್ ಎಂಬುವವರು ವೈರ್ ಕಟ್ ಮಾಡಿದ್ದಾರೆ ಎಂದು ಅಮಾಯಕರ ಮೇಲೆ ಸುಳ್ಳು ದೂರು ನೀಡಿದ್ದರು.

ಕೋರ್ಟ್ ನಿಯಮಾವಳಿಗೆ ಕಣ್ಣುಕಟ್ಟಿದ ತಂತ್ರಜ್ಞಾನ

ಕಾಲ್ತುಳಿತ ದುರಂತದ ಬಳಿಕ ಎಸ್‌ಒಪಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರ್ಟ್ ಸೂಚಿಸಿತ್ತು. ಎಐ (AI) ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಹೇಳಿ, ಕೇವಲ ಹೆಡ್ ಕೌಂಟ್ ಮಾತ್ರ ಸಾಧ್ಯವಿರುವ ಸಾಮಾನ್ಯ ಕ್ಯಾಮೆರಾಗಳನ್ನು ಅಳವಡಿಸಿ ವಂಚಿಸಲಾಗಿದೆ ಎಂದು ಐವಿಎಸ್ ಪ್ರಾಜೆಕ್ಟ್ ಮ್ಯಾನೇಜರ್ ವರುಣ್ ಹಾಗೂ ಸಿಬ್ಬಂದಿ ಅಚ್ಚುತ್ ಆರೋಪಿಸಿದ್ದಾರೆ. 1.5 ಕೋಟಿ ಬಜೆಟ್‌ನಲ್ಲಿ ಎಐ ಕ್ಯಾಮೆರಾ ಅಳವಡಿಸಲು ಸಾಧ್ಯವೇ ಇಲ್ಲದಿದ್ದರೂ ತಪ್ಪು ಮುಚ್ಚಿಹಾಕಲು ಈ ಹೂಡಿಕೆ ನಾಟಕವಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವೈರ್ ಕಟ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಚ್ಚರಿಯ ಕಾರಣ ಬಹಿರಂಗ

ಲಂಚದ ಆರೋಪ

ಕ್ರೀಡಾಂಗಣದಲ್ಲಿ ಕೆಲಸ ಮಾಡಲು ಕೆಎಸ್‌ಸಿಎ ಐಟಿ ಹೆಡ್ ಎನ್ನಲಾದ ರವಿ ಎಂಬಾತ ಆನ್‌ಲೈನ್ ಮೂಲಕ 40 ಸಾವಿರ ಹಾಗೂ ನಗದು ರೂಪದಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಲಂಚವಾಗಿ ಪಡೆದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈಗ ಬಾಕಿ ಹಣ ಕೇಳಿದರೆ ಕೆಎಸ್‌ಸಿಎ ಹಾಗೂ ಟೆಕ್‌ಸ್ಟಿಚ್ ಕಂಪನಿಗಳು ಒಬ್ಬರ ಮೇಲೊಬ್ಬರು ಕೈ ತೋರಿಸುತ್ತಾ ಜಾರಿಕೊಳ್ಳುತ್ತಿವೆ.

ಪೊಲೀಸ್ ತನಿಖೆಯಲ್ಲೂ ಇದು ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆ ಎಂಬುದು ಪತ್ತೆಯಾಗಿದ್ದು, ಇಬ್ಬರು ಯುವಕರಿಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಆದರೆ ಸುಳ್ಳು ಆರೋಪದಿಂದಾಗಿ ಯುವಕರು ಮುಜುಗರಕ್ಕೊಳಗಾಗಿದ್ದಾರೆ. ಈ ಭದ್ರತಾ ಗೊಂದಲ ಹಾಗೂ 10 ಸಾವಿರ ಐಪಿಎಲ್ ಟಿಕೆಟ್‌ಗಳ ಬೇಡಿಕೆಯೇ ಐಪಿಎಲ್‌ನ ಅಂತಿಮ ಪಂದ್ಯಗಳನ್ನು ಗುಜರಾತ್‌ಗೆ ಸ್ಥಳಾಂತರಿಸಲು ಪ್ರಮುಖ ಕಾರಣವಾಗಿತ್ತು ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

200 ಕೋಟಿ ರೂಪಾಯಿ ಕ್ಲಬ್ ಸೇರಿದ ರಾಮ್ ಚರಣ್ ಸಿನಿಮಾ ‘ಪೆದ್ದಿ’; ಆದರೂ ಇದೆ ಸವಾಲು – Kannada News

ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಅಭಿನಯದ, ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ತೀವ್ರ ವಿವಾದಗಳು ಮತ್ತು ಮಿಶ್ರ ವಿಮರ್ಶೆಗಳ ನಡುವೆಯೂ ಚಿತ್ರವು ಶನಿವಾರ (ಜೂನ್ 6) ಉತ್ತಮವಾಗಿ ಕಲೆಕ್ಷನ್ ಮಾಡುವ ಮೂಲಕ ಕೇವಲ ಎರಡೇ ದಿನಗಳಲ್ಲಿ ಜಾಗತಿಕವಾಗಿ ಬರೋಬ್ಬರಿ 200 ಕೋಟಿ ರೂಪಾಯಿ ಒಟ್ಟು ಗಳಿಕೆ (Worldwide Gross) ದಾಟಿದೆ ಎಂದು ವರದಿ ಆಗಿದೆ. ಭಾನುವಾರವೂ ಚಿತ್ರಕ್ಕೆ ಭಾರಿ ಬೇಡಿಕೆ ಕಂಡುಬಂದಿದ್ದು, ಮೊದಲ ವೀಕೆಂಡ್ ಮುಕ್ತಾಯದ ವೇಳೆಗೆ ‘ಪೆದ್ದಿ’ (Peddi) ಸಿನಿಮಾ ಒಟ್ಟು 240ರಿಂದ 250 ಕೋಟಿ ರೂಪಾಯಿ ಗಳಿಸುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿವೆ.

‘ಪೆದ್ದಿ’ ಸಿನಿಮಾಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ವಿಶೇಷವಾಗಿ ಆಂಧ್ರ ಭಾಗದಲ್ಲಿ ಚಿತ್ರದ ಕಲೆಕ್ಷನ್ ಧೂಳೆಬ್ಬಿಸುತ್ತಿದ್ದರೆ, ಇತ್ತ ನಿಜಾಮ್ (ಹೈದರಾಬಾದ್) ಪ್ರಾಂತ್ಯದಲ್ಲೂ ಚಿತ್ರ ಸ್ಥಿರವಾದ ಗಳಿಕೆ ಕಾಣುತ್ತಿದೆ. ಈ ವೀಕೆಂಡ್ ಟ್ರೆಂಡ್​ನಿಂದಾಗಿ ಸದ್ಯ ಚಿತ್ರತಂಡ ನಿಟ್ಟುಸಿರು ಬಿಡುವಂತೆ ಆಗಿದೆ. ಆದರೂ ಚಿತ್ರತಂಡದ ಮುಂದೆ ಸವಾಲು ಇದೆ.

ಹೌದು, ಈ ಸಿನಿಮಾ ಸುಮಾರು 350 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಹಾಗಾಗಿ, ಬಾಕ್ಸ್ ಆಫೀಸ್‌ನಲ್ಲಿ ಅಧಿಕೃತವಾಗಿ ‘ಹಿಟ್’ ಎನಿಸಿಕೊಳ್ಳಬೇಕಾದರೆ ಈ ಸಿನಿಮಾ ಜಾಗತಿಕವಾಗಿ ಕನಿಷ್ಠ 480ರಿಂದ 500 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ತೆಲುಗು ರಾಜ್ಯಗಳ ಪ್ರದರ್ಶನ ಹೀಗೆಯೇ ಮುಂದುವರಿದರೆ ಈ ಟಾರ್ಗೆಟ್ ತಲುಪುವುದು ಕಷ್ಟವೇನಲ್ಲ.

ಆದರೆ, ಈ ಚಿತ್ರಕ್ಕೆ ಎದುರಾಗಿರುವ ಅತಿ ದೊಡ್ಡ ಮೈನಸ್ ಪಾಯಿಂಟ್ ಎಂದರೆ ಹೊರರಾಜ್ಯಗಳ ಕಲೆಕ್ಷನ್. ತೆಲುಗಿನಲ್ಲಿ ಅಬ್ಬರಿಸುತ್ತಿರುವ ‘ಪೆದ್ದಿ’ ಚಿತ್ರವು ಹಿಂದಿ, ತಮಿಳು ಮತ್ತು ಮಲಯಾಳಂ ಮಾರುಕಟ್ಟೆಗಳಲ್ಲಿ ನಿರೀಕ್ಷಿತ ಮಟ್ಟದ ವೇಗವನ್ನು ಪಡೆದುಕೊಂಡಿಲ್ಲ. ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಬೇಕಾದರೆ ಈ ರಾಜ್ಯಗಳಲ್ಲೂ ಸಿನಿಮಾ ಚೇತರಿಸಿಕೊಳ್ಳಬೇಕಿದೆ. ಜೊತೆಗೆ, ಭಾನುವಾರ ಮತ್ತು ಸೋಮವಾರದ ಅಗ್ನಿಪರೀಕ್ಷೆ ಪಾಸ್ ಆಗಬೇಕಿದೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

ಇದೇ ವೇಳೆ ಸಿನಿಮಾದ ಟಿಕೆಟ್ ದರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ಬೆಲೆ ಗಗನಕ್ಕೇರಿರುವುದರಿಂದ, ಕುಟುಂಬ ಸಮೇತ ಸಿನಿಮಾ ನೋಡಲು ಬರುವವರಿಗೆ ಇದು ಅತಿಯಾದ ಹೊರೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ‘ದುಬಾರಿ ಟಿಕೆಟ್ ದರದಿಂದ ಆರಂಭಿಕ ದಿನಗಳ ಕಲೆಕ್ಷನ್‌ಗೆ ಸಹಾಯ ಆಗಬಹುದು. ಆದರೆ ನಂತರದ ದಿನಗಳಲ್ಲಿ ಜನ ಸಾಮಾನ್ಯರು ಥಿಯೇಟರ್‌ಗೆ ಬರಬೇಕಾದರೆ ಟಿಕೆಟ್ ದರವನ್ನು ಕಡಿಮೆ ಮಾಡುವುದು ಅನಿವಾರ್ಯ’ ಎಂಬ ಅಭಿಪ್ರಾಯ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

South Korea Work Visa: ಭಾರತೀಯ ವೃತ್ತಿಪರರಿಗೆ ಬಂಪರ್ ಕೊಡುಗೆ; ಪ್ರಾಧ್ಯಾಪಕರಿಗೂ ಸಿಗಲಿದೆ ದಕ್ಷಿಣ ಕೊರಿಯಾ ಪ್ರೀಮಿಯಂ ವೀಸಾ! – Kannada News

ಭಾರತೀಯರಿಗೆ ಬಂಪರ್ ಕೊಡುಗೆImage Credit source: Pinterest

ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಭಾರತೀಯ ವೃತ್ತಿಪರರಿಗೆ ಮತ್ತೊಂದು ಸುವರ್ಣಾವಕಾಶ ಒದಗಿಬಂದಿದೆ. ದಕ್ಷಿಣ ಕೊರಿಯಾ ಸರ್ಕಾರವು ಜೂನ್ 1 ರಿಂದ ಜಾರಿಗೆ ಬರುವಂತೆ ತನ್ನ ಅತ್ಯುನ್ನತ ‘ಟಾಪ್-ಟೈರ್ ವೀಸಾ’ (Top-Tier Visa / ಗ್ಲೋಬಲ್ ಪ್ರತಿಭಾ ವೀಸಾ) ನಿಯಮಗಳನ್ನು ವಿಸ್ತರಿಸಿದೆ. ಇದರೊಂದಿಗೆ, ದೇಶದಲ್ಲಿ ಎದುರಾಗಿರುವ ನುರಿತ ಕಾರ್ಮಿಕರ ಕೊರತೆಯನ್ನು ನೀಗಿಸಲು ವಿದೇಶಿ ಉದ್ಯೋಗಿಗಳ ನೇಮಕಾತಿ ಮಿತಿಯನ್ನು ಸಹ ಹೆಚ್ಚಿಸಿದೆ. ತೀವ್ರವಾಗಿ ಕುಸಿಯುತ್ತಿರುವ ಜನನ ಪ್ರಮಾಣ ಮತ್ತು ವೃದ್ಧರಾಗುತ್ತಿರುವ ಜನಸಂಖ್ಯೆಯಿಂದಾಗಿ ಉಂಟಾಗಿರುವ ಉದ್ಯೋಗಿ ಬಿಕ್ಕಟ್ಟನ್ನು ಎದುರಿಸಲು ಮತ್ತು ಜಾಗತಿಕ ಪ್ರತಿಭೆಗಳನ್ನು ತನ್ನ ದೇಶದತ್ತ ಆಕರ್ಷಿಸಲು ದಕ್ಷಿಣ ಕೊರಿಯಾ ಸರ್ಕಾರ ಈ ಪ್ರಮುಖ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

STEM ಸಂಶೋಧಕರು ಮತ್ತು ಪ್ರಾಧ್ಯಾಪಕರಿಗೂ ಸಿಗಲಿದೆ ಪ್ರೀಮಿಯಂ ವೀಸಾ:

ದಕ್ಷಿಣ ಕೊರಿಯಾ ಸರ್ಕಾರದ ಈ ಹೊಸ ನೀತಿ ಬದಲಾವಣೆಯು ಭಾರತೀಯ ಶಿಕ್ಷಣ ತಜ್ಞರಿಗೆ ವರದಾನವಾಗಲಿದೆ. ಇದುವರೆಗೆ ಕೇವಲ ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್, ಜೈವಿಕ ತಂತ್ರಜ್ಞಾನ ಮತ್ತು ಬ್ಯಾಟರಿ ತಂತ್ರಜ್ಞಾನದಂತಹ ಮುಂಚೂಣಿ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಪೊರೇಟ್ ವೃತ್ತಿಪರರಿಗೆ ಮಾತ್ರ ಸೀಮಿತವಾಗಿದ್ದ ಈ ‘ಟಾಪ್-ಟೈರ್ ವೀಸಾ’ವನ್ನು ಈಗ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳ ಪ್ರಾಧ್ಯಾಪಕರು ಹಾಗೂ ಪೂರ್ಣಾವಧಿ ಸಂಶೋಧಕರಿಗೂ ವಿಸ್ತರಿಸಲಾಗಿದೆ. ಈ ವೀಸಾ ಪಡೆಯುವ ಅಭ್ಯರ್ಥಿಗಳಿಗೆ ದಕ್ಷಿಣ ಕೊರಿಯಾದಲ್ಲಿ ದೀರ್ಘಕಾಲ ನೆಲೆಸಲು ಮತ್ತು ಅತ್ಯಂತ ವೇಗವಾಗಿ ಖಾಯಂ ನಿವಾಸಿ ಪರವಾನಗಿ (Permanent Residency) ಪಡೆಯಬಹುದಾಗಿದೆ.

ಭಾರತೀಯ ವೃತ್ತಿಪರರಿಗೆ ಇದು ಏಕೆ ಸುವರ್ಣಾವಕಾಶ?

ಜಾಗತಿಕ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಭಾರತೀಯ ಸಂಶೋಧಕರು ಹಾಗೂ ಪಿಎಚ್‌ಡಿ (PhD) ಪದವೀಧರರು ಈಗಾಗಲೇ ಬಲವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಪ್ರಸ್ತುತ ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ ದೇಶಗಳು ಜಾಗತಿಕ ಪ್ರತಿಭೆಗಳಿಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಬೆನ್ನಲ್ಲೇ, ದಕ್ಷಿಣ ಕೊರಿಯಾ ತನಗೂ ಅತ್ಯುತ್ತಮ ಪರ್ಯಾಯ ತಾಣವಾಗಿ ಹೊರಹೊಮ್ಮುತ್ತಿದೆ. ಭಾರತದ ಉನ್ನತ ವಿಶ್ವವಿದ್ಯಾಲಯಗಳ ಅಧ್ಯಾಪಕರು ಮತ್ತು STEM ಸಂಶೋಧಕರು ಅಗತ್ಯ ಅರ್ಹತೆಗಳನ್ನು ಹೊಂದಿದ್ದರೆ, ಅವರು ಈಗ ದಕ್ಷಿಣ ಕೊರಿಯಾದ ಈ ಪ್ರೀಮಿಯಂ ವಲಸೆ ಮಾರ್ಗದ ಮೂಲಕ ಸುಲಭವಾಗಿ ಅಲ್ಲಿಗೆ ತೆರಳಬಹುದಾಗಿದೆ.

ಇದನ್ನೂ ಓದಿ: ಅಂದು ನಾನು ಇಲ್ಲದೇ ಹೋಗಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ, ನೆತನ್ಯಾಹು ಕೆಣಕಿದ ಟ್ರಂಪ್

ನುರಿತ ವಿದೇಶಿ ಕಾರ್ಮಿಕರ ನೇಮಕಾತಿ ಮಿತಿ ಭಾರಿ ಹೆಚ್ಚಳ:

ಕೇವಲ ಉನ್ನತ ಮಟ್ಟದ ವಿಜ್ಞಾನಿಗಳಷ್ಟೇ ಅಲ್ಲದೆ, ತಳಮಟ್ಟದಲ್ಲಿ ನುರಿತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕ್ಷೇತ್ರಗಳಿಗೂ ದಕ್ಷಿಣ ಕೊರಿಯಾ ಸರ್ಕಾರ ಬಿಡುವು ನೀಡಿದೆ. ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯದ ಕಂಪನಿಗಳು ಇನ್ನು ಮುಂದೆ ತಮ್ಮ ಒಟ್ಟು ಕೊರಿಯನ್ ಉದ್ಯೋಗಿಗಳ ಸಂಖ್ಯೆಯ ಶೇಕಡಾ 50 ರಷ್ಟು ವಿದೇಶಿ ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು (ಹಳೆಯ ನಿಯಮದ ಪ್ರಕಾರ ಈ ಮಿತಿ ಕೇವಲ ಶೇಕಡಾ 30 ರಷ್ಟಿತ್ತು). ಇದು ಗ್ರಾಮೀಣ ಭಾಗದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೊಡ್ಡ ಮಟ್ಟದ ನೆರವು ನೀಡಲಿದೆ. ಅಲ್ಲದೆ, ನಾಲ್ಕಕ್ಕಿಂತ ಕಡಿಮೆ ಕೊರಿಯನ್ ಉದ್ಯೋಗಿಗಳನ್ನು ಹೊಂದಿರುವ ಅತ್ಯಂತ ಸಣ್ಣ ಸಂಸ್ಥೆಗಳೂ ಸಹ ಯಾವುದೇ ಅನುಪಾತದ ಮಿತಿಯಿಲ್ಲದೆ ಇಬ್ಬರು ವಿದೇಶಿ ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಮಿಕರು ಮುಖ್ಯವಾಗಿ ‘E-7-4’ ವೀಸಾ ಮೂಲಕ ದೇಶವನ್ನು ಪ್ರವೇಶಿಸಲಿದ್ದಾರೆ.

ವಲಸೆ ನಿಯಮಗಳ ಬದಲಾವಣೆಯ ಹಿಂದಿನ ಅಸಲಿ ಕಾರಣವೇನು?

ದಕ್ಷಿಣ ಕೊರಿಯಾ ಪ್ರಸ್ತುತ ಅತ್ಯಂತ ಕಠಿಣವಾದ ಜನಸಂಖ್ಯಾ ಸವಾಲನ್ನು ಎದುರಿಸುತ್ತಿದೆ. ದೇಶದಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದರಿಂದ ಮತ್ತು ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಒಟ್ಟಾರೆ ಉದ್ಯೋಗಿ ಶಕ್ತಿ (Workforce) ಕುಗ್ಗುತ್ತಿದೆ. ಇದು ದೇಶದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ದೊಡ್ಡ ಮಾರಕವಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೇ ಕೊರಿಯನ್ ಸರ್ಕಾರವು ಎರಡು ರೀತಿಯ ತಂತ್ರಗಳನ್ನು ಬಳಸುತ್ತಿದೆ: ಒಂದು, ದೇಶದ ನಾವೀನ್ಯತೆಯನ್ನು ಮುನ್ನಡೆಸಲು ಜಾಗತಿಕ ಮಟ್ಟದ ಉನ್ನತ ವಿಜ್ಞಾನಿಗಳನ್ನು ತರುವುದು; ಮತ್ತೊಂದು, ತೀವ್ರ ಕಾರ್ಮಿಕ ಕೊರತೆ ಎದುರಿಸುತ್ತಿರುವ ಸಾಂಪ್ರದಾಯಿಕ ಉದ್ಯಮಗಳನ್ನು ಉಳಿಸಲು ನುರಿತ ಕಾರ್ಮಿಕರನ್ನು ಆಕರ್ಷಿಸುವುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:08 pm, Sun, 7 June 26

Source link

ದೆಹಲಿಯಿಂದ ಬಂಗಾಳಕ್ಕೆ ಬುಲೆಟ್ ರೈಲು ಯೋಜನೆ ಘೋಷಿಸಿದ ಕೇಂದ್ರ – Kannada News

ಕೋಲ್ಕತ್ತಾ, ಜೂನ್ 07: ಭಾರತೀಯ ರೈಲ್ವೆ ವಲಯದಲ್ಲಿ ಹೊಸ ಕ್ರಾಂತಿ ಹಾಗೂ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪಶ್ಚಿಮ ಬಂಗಾಳಕ್ಕೆ ಅತ್ಯಂತ ಐತಿಹಾಸಿಕ ಮತ್ತು ಭರವಸೆಯ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಮುಂಬೈ-ಅಹಮದಾಬಾದ್ ಕಾರಿಡಾರ್ ಯಶಸ್ಸಿನ ನಂತರ, ದೇಶದ ಎರಡನೇ ಅತ್ಯಾಧುನಿಕ ಬುಲೆಟ್ ರೈಲು(Bullet Train) ಯೋಜನೆಯು ದೆಹಲಿ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿ ನಡುವೆ ಚಲಿಸಲಿದೆ ಎಂದು ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಈ ಮಹತ್ವಾಕಾಂಕ್ಷೆಯ ಯೋಜನೆಯು ಉತ್ತರ ಭಾರತವನ್ನು ಈಶಾನ್ಯ ಭಾರತದೊಂದಿಗೆ ಅತ್ಯಂತ ವೇಗವಾಗಿ ಜೋಡಿಸಲಿದ್ದು, ಬಂಗಾಳದ ರೈಲ್ವೆ ಯೋಜನೆಗಳಿಗಾಗಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೂಡಿಕೆ ಮಾಡಲಾಗುತ್ತಿದೆ. ಈ ರೈಲು ಲಕ್ನೋ, ವಾರಾಣಸಿ ಮತ್ತು ಪಾಟ್ನಾ ಮೂಲಕ ಪಶ್ಚಿಮ ಬಂಗಾಳವನ್ನು ಸಂಪರ್ಕಿಸುತ್ತದೆ.

ಕೇವಲ 6 ಗಂಟೆಗಳಲ್ಲಿ 1,500 ಕಿಲೋಮೀಟರ್ ಪ್ರಯಾಣ
ಪ್ರಸ್ತುತ ದೆಹಲಿಯಿಂದ ಸಿಲಿಗುರಿಗೆ ರಾಜಧಾನಿ ಅಥವಾ ಡುರೊಂಟೊ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಪ್ರಯಾಣಿಸಲು ಸುಮಾರು 18 ರಿಂದ 20 ಗಂಟೆಗಳ ಸುದೀರ್ಘ ಸಮಯ ಬೇಕಾಗುತ್ತದೆ. ಆದರೆ, ಗಂಟೆಗೆ 250 ರಿಂದ300ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ನೂತನ ಬುಲೆಟ್ ರೈಲು ಕಾರಿಡಾರ್ ಪೂರ್ಣಗೊಂಡ ನಂತರ ಈ ಇಡೀ ಪ್ರಯಾಣದ ಸಮಯ ಕೇವಲ ೬ ಗಂಟೆಗಳಿಗೆ ಕುಸಿಯಲಿದೆ!

ಪ್ರಮುಖ ನಗರಗಳ ಮಹಾ ಸಮ್ಮಿಲನ: ಈ ಬುಲೆಟ್ ರೈಲು ನವದೆಹಲಿಯಿಂದ ಪ್ರಾರಂಭವಾಗಿ ನೋಯ್ಡಾದ ಜೇವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಥುರಾ, ಆಗ್ರಾ, ಇಟಾವಾ, ಲಕ್ನೋ, ಪ್ರಯಾಗ್‌ರಾಜ್, ವಾರಾಣಸಿ, ಘಾಜಿಪುರ, ಪಾಟ್ನಾ ಮೂಲಕ ಸಾಗಿ ಸಿಲಿಗುರಿಯ ನ್ಯೂ ಜಲ್ಪೈಗುರಿಯನ್ನು ತಲುಪಲಿದೆ.

ಈ ಕಾರಿಡಾರ್ ಮೂಲಕ ದೆಹಲಿಯಿಂದ ಸಾಂಸ್ಕೃತಿಕ ನಗರಿ ವಾರಣಾಸಿಗೆ ಕೇವಲ3.5 ಗಂಟೆಗಳಲ್ಲಿ ಮತ್ತು ವಾರಣಾಸಿಯಿಂದ ಸಿಲಿಗುರಿಗೆ 3ಗಂಟೆಗಿಂತ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ. ಭವಿಷ್ಯದಲ್ಲಿ ಈ ಮಾರ್ಗವನ್ನು ಅಸ್ಸಾಂನ ಗುವಾಹಟಿಗೂ ವಿಸ್ತರಿಸುವ ಅದ್ಭುತ ಯೋಜನೆ ಇದೆ.

ಸಿಲಿಗುರಿಯು ಭಾರತದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ತಂತ್ರಜ್ಞಾನ ವಲಯವಾದ ‘ಚಿಕನ್ ನೆಕ್’ ಕಾರಿಡಾರ್ ಅನ್ನು ಒಳಗೊಂಡಿದೆ, ಇದು ಈಶಾನ್ಯ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಹೆಬ್ಬಾಗಿಲಾಗಿದೆ.

ಮತ್ತಷ್ಟು ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಬಹುಮುಖಿ ಲಾಭಗಳು: ಈ ಹೈ-ಸ್ಪೀಡ್ ರೈಲು ಜಾಲವು ಉತ್ತರ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮ, ಮುಕ್ತ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸಲಿದೆ. ಜೊತೆಗೆ, ಗಡಿ ಭಾಗಗಳಲ್ಲಿ ಭಾರತೀಯ ಸೇನೆಯ ಮಿಲಿಟರಿ ಚಲನವಲನಗಳನ್ನು ಅತ್ಯಂತ ವೇಗವಾಗಿ ಮತ್ತು ಸುಲಭಗೊಳಿಸಲು ಇದು ದೇಶಕ್ಕೆ ರಕ್ಷಣಾತ್ಮಕವಾಗಿ ದೊಡ್ಡ ಶಕ್ತಿಯನ್ನು ನೀಡಲಿದೆ.

ಬಂಗಾಳದ ಅಭಿವೃದ್ಧಿಗೆ ಭರಪೂರ ನಿಧಿ ಹಂಚಿಕೆ
ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಸಾರಿಗೆ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಂಪೂರ್ಣ ಬದ್ಧವಾಗಿದೆ. ಈ ಹಿಂದೆ ಬಂಗಾಳಕ್ಕೆ ರೈಲ್ವೆಯಿಂದ ಕೇವಲ 4,000 ಕೋಟಿ ಸಿಗುತ್ತಿತ್ತು, ಆದರೆ ಪ್ರಸ್ತುತ ಎನ್‌ಡಿಎ (NDA) ಸರ್ಕಾರದ ಅಡಿಯಲ್ಲಿ 2026-27ರ ಸಾಲಿಗೆ ದಾಖಲೆಯ 14,205 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಕೋಲ್ಕತ್ತಾ ಮೆಟ್ರೋಗೆ 60 ಅತ್ಯಾಧುನಿಕ ‘ನೆಕ್ಸ್ಟ್ ಜನರೇಷನ್’ ರೈಲುಗಳನ್ನು ಪರಿಚಯಿಸಲಾಗುತ್ತಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 100 ಕ್ಕೂ ಹೆಚ್ಚು ರೈಲ್ವೆ ಯೋಜನೆಗಳಿಗೆ ಹೊಸ ಉತ್ತೇಜನ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ಎಲ್ಲಾ ರೈಲು ಯೋಜನೆಗಳಿಗೆ ಆರಂಭಿಕ ಅನುಮೋದನೆ ಸೇರಿದಂತೆ ರಾಜ್ಯ ಸರ್ಕಾರದ ಕಡೆಯಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.

ಉತ್ತರ ಭಾರತದ ಜನನಿಬಿಡ ರಾಜ್ಯಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಚಿಕನ್ ನೆಕ್ ಪ್ರದೇಶದ ಕಠಿಣ ಭೂಪ್ರದೇಶ, ಭಾರೀ ಮಳೆಯಂತಹ ಪರಿಸ್ಥಿತಿಗಳಲ್ಲಿ ಹಳಿಗಳನ್ನು ಹಾಕುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೆ, ಭಾರತೀಯ ರೈಲ್ವೆಯ ತಾಂತ್ರಿಕ ತಜ್ಞರು ಮತ್ತು ಎಂಜಿನಿಯರ್‌ಗಳು ಆಧುನಿಕ ತಂತ್ರಜ್ಞಾನದ ಮೂಲಕ ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭದ್ರವಾದ ವಿನ್ಯಾಸಗಳನ್ನು ಸಿದ್ಧಪಡಿಸುತ್ತಿದ್ದಾರೆ.

ದೆಹಲಿ ಮತ್ತು ವಾರಾಣಸಿಯಲ್ಲಿ ಭೂಸ್ವಾಧೀನ ಕಾರ್ಯವು ಶೀಘ್ರದಲ್ಲೇ ಅತ್ಯಂತ ವೇಗವಾಗಿ ಪ್ರಾರಂಭವಾಗಲಿದ್ದು, 2028 ರಲ್ಲಿ ಈ ಯೋಜನೆಯ ಭೂಮಿ ಪೂಜೆ ನೆರವೇರಲಿದೆ. ಈ ಬುಲೆಟ್ ರೈಲು ಭಾರತದ ಇತಿಹಾಸದಲ್ಲಿ ಪ್ರಗತಿ ಮತ್ತು ಆಧುನಿಕತೆಯ ಹೊಸ ಶಕೆಯನ್ನು ಬರೆಯುವುದು ನಿಶ್ಚಿತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಬಾಸ್ ಶೋಗೆ ಆಡಿಷನ್ ಕೊಡೋದು ಹೇಗೆ? ಈ ವಿಡಿಯೋದಲ್ಲಿದೆ ಪೂರ್ತಿ ವಿವರ.. – Kannada News

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಶೋನಲ್ಲಿ ಜನ ಸಾಮಾನ್ಯರು ಕೂಡ ಭಾಗವಹಿಸಬಹುದು. ಅದಕ್ಕಾಗಿ ಆಡಿಷನ್ ಕರೆಯಲಾಗಿದೆ. ಯಾವ ರೀತಿ ಆಡಿಷನ್ ನೀಡಬೇಕು ಎಂಬುದನ್ನು ಈ ವಿಡಿಯೋ ಮೂಲಕ ವಿವರಿಸಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿಯು ಈ ವಿಡಿಯೋ ಹಂಚಿಕೊಂಡಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ, ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಇದ್ದರೆ ಮೂರು ನಿಮಿಷದ ವಿಡಿಯೋವನ್ನು ‘colorskannada.jiostar.com’ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕು. ಯಾವ ರೀತಿ ಅಪ್​ಲೋಡ್ ಮಾಡಬೇಕು ಎಂಬುದನ್ನು ಈ ವಿಡಿಯೋದಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ. ಈ ಆಡಿಷನ್ ಮೂಲಕ ಆಯ್ಕೆ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಸಿಗಲಿದೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಕಿಚ್ಚ ಸುದೀಪ್ ಅವರೇ ಈ ಸಲ ಕೂಡ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರೀ ಸಿಕ್ಸ್ ಸಿಕ್ಸ್ ಸಿಕ್ಸ್​… ಐಪಿಎಲ್ ಬಗ್ಗೆ ಲಿವಿಂಗ್‌ಸ್ಟೋನ್ ಅಸಮಾಧಾನ! – Kannada News

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸನ್​​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್​​ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಇದೀಗ ಐಪಿಎಲ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ‘ಸ್ಟಿಕ್ ಟು ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅವರು, ಐಪಿಎಲ್ ಸಂಪೂರ್ಣವಾಗಿ ಬ್ಯಾಟರ್‌ಗಳ ಆಟವಾಗಿ ಬದಲಾಗಿದ್ದು, ಬೌಲರ್‌ಗಳಿಗೆ ಯಾವುದೇ ಗೌರವ ಇಲ್ಲದಂತಾಗಿದೆ ಎಂದು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ.

ಬರೀ ಸಿಕ್ಸ್ ಸಿಕ್ಸ್​:

ಪಂದ್ಯಾವಳಿಯಲ್ಲಿ ಕೇವಲ ರನ್‌ಗಳ ಮಳೆ ಹರಿಸುವುದನ್ನೇ ಗುರಿಯಾಗಿಸಿಕೊಂಡಿರುವುದರ ಬಗ್ಗೆ ಲಿವಿಂಗ್‌ಸ್ಟೋನ್ ಬೇಸರ ವ್ಯಕ್ತಪಡಿಸಿದ್ದಾರೆ. “ಬ್ಯಾಟರ್‌ಗಳು ಕೇವಲ 6, 6, 6 ಎಂದು ಸಿಕ್ಸರ್‌ಗಳನ್ನು ಹೊಡೆಯುತ್ತಿರುವುದನ್ನು ನೋಡುವುದು ಈಗ ನಿಜಕ್ಕೂ ಬೋರಿಂಗ್ ಅನಿಸುತ್ತಿದೆ. ಇದರಲ್ಲಿ ಕ್ರಿಕೆಟ್‌ನ ನೈಜ ಮಜಾ ಸಿಗುತ್ತಿಲ್ಲ”.

“ಪಿಚ್‌ಗಳು ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಪೂರಕವಾಗಿ , ಅಂದರೆ ಫ್ಲಾಟ್ ಆಗಿ ಇರುವುದರಿಂದ ಬ್ಯಾಟರ್‌ಗಳಿಗೆ ರನ್ ಗಳಿಸುವುದು ತುಂಬಾ ಸುಲಭವಾಗಿದೆ. ಬೌಲರ್‌ಗಳು ಎಷ್ಟೇ ಉತ್ತಮವಾಗಿ ಬೌಲಿಂಗ್ ಮಾಡಿದರೂ ರನ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಂದ್ಯದಲ್ಲಿ ಕೌಶಲ್ಯಕ್ಕಿಂತ ಹೆಚ್ಚಾಗಿ ಕೇವಲ ಬಲಪ್ರಯೋಗಕ್ಕೆ ಮಾತ್ರ ಪ್ರಾಮುಖ್ಯತೆ ಸಿಗುತ್ತಿದೆ” ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಅಭಿಪ್ರಾಯಪಟ್ಟಿದ್ದಾರೆ.

‘ಇಂಪ್ಯಾಕ್ಟ್ ಪ್ಲೇಯರ್’ ಅಸಮತೋಲನ:

ಐಪಿಎಲ್‌ನಲ್ಲಿ ಜಾರಿಯಲ್ಲಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಬ್ಯಾಟರ್‌ಗಳಿಗೆ ಮತ್ತಷ್ಟು ಲಗಾಮಿಲ್ಲದ ಸ್ವಾತಂತ್ರ್ಯ ನೀಡಿದೆ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಆರೋಪಿಸಿದ್ದಾರೆ. ಈ ನಿಯಮದಿಂದಾಗಿ ತಂಡದ ಬ್ಯಾಟಿಂಗ್ ಲೈನಪ್ ದೊಡ್ಡದಾಗುತ್ತದೆ. ಹೀಗಾಗಿ ವಿಕೆಟ್ ಉರುಳುವ ಭಯವಿಲ್ಲದೆ ಬ್ಯಾಟರ್‌ಗಳು ಮೊದಲ ಎಸೆತದಿಂದಲೇ ಮನಬಂದಂತೆ ಬ್ಯಾಟ್ ಬೀಸುತ್ತಿದ್ದಾರೆ. ಇದು ಕ್ರಿಕೆಟ್‌ನ ಮೂಲ ಆಟದ ಸಮತೋಲನವನ್ನು ಕೆಡಿಸಿದೆ ಎಂದು ಲಿವಿಂಗ್‌ಸ್ಟೋನ್ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ಪಿಚ್‌ನ ಮರುಬಳಕೆ:

ಸನ್‌ರೈಸರ್ಸ್ ಹೈದರಾಬಾದ್ ತಂಡವು ಒಂದೇ ಪಿಚ್‌ನಲ್ಲಿ ಸತತವಾಗಿ 5 ರಿಂದ 6 ಪಂದ್ಯಗಳನ್ನು ಆಡಬೇಕಾಗಿ ಬಂದಿದ್ದನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಪಿಚ್‌ಗಳನ್ನು ಪದೇ ಪದೇ ಮರುಬಳಕೆ ಮಾಡುವುದರಿಂದ ಅವು ಸಂಪೂರ್ಣವಾಗಿ ಜೀವಹೀನವಾಗಿ, ಕೇವಲ ಬ್ಯಾಟಿಂಗ್ ಸ್ನೇಹಿಯಾಗಿ ಬದಲಾಗುತ್ತಿವೆ. ಅಂದರೆ ಇಲ್ಲಿ ಗುಣಮಟ್ಟಕ್ಕೆ ಯಾವುದೇ ಬೆಲೆ ಇಲ್ಲ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಲೀಗ್‌ನ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.

ವಾಂಖೆಡೆ ಪಂದ್ಯದ ಉದಾಹರಣೆ:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೊಂದನ್ನು ಉದಾಹರಿಸಿದ ಅವರು, ಎದುರಾಳಿ ತಂಡ ನೀಡಿದ್ದ 230ಕ್ಕೂ ಅಧಿಕ ರನ್‌ಗಳ ಬೃಹತ್ ಗುರಿಯನ್ನು ತಮ್ಮ ತಂಡ ಕೇವಲ 18 ಓವರ್‌ಗಳಲ್ಲೇ ಬೆನ್ನಟ್ಟಿದ್ದನ್ನು ನೆನಪಿಸಿಕೊಂಡರು. ಟಿ20 ಕ್ರಿಕೆಟ್‌ನಲ್ಲಿ 230 ರನ್‌ಗಳು ಕೂಡ ಸುರಕ್ಷಿತವಲ್ಲ ಎಂದರೆ ಬೌಲರ್‌ಗಳ ಪರಿಸ್ಥಿತಿ ಏನಾಗಬೇಡ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಈ ಕಟು ವಿಮರ್ಶೆಯು ಜಾಗತಿಕ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಕೇವಲ ಬ್ಯಾಟರ್‌ಗಳ ರನ್ ಗಳಿಸುವ ಯಂತ್ರವಾಗಿ ಬದಲಾಗಬಾರದು ಮತ್ತು ಬೌಲರ್‌ಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಹೀಗಾಗಿ ಮುಂದಿನ ಸೀಸನ್​​ನಲ್ಲಾದರೂ ಬಿಸಿಸಿಐ ಸಮತೋಲಿತ ಪಿಚ್ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

Source link

ಧಾರಾಕಾರ ಮಳೆಗೆ ಕುಸಿದ ಮನೆ‌ ಮೇಲ್ಚಾವಣಿ: ತಂದೆ, ಮಗನ ಜೀವ ಉಳಿಸಿದ ಸಾಕು ಬೆಕ್ಕು – Kannada News

ಕುಸಿದ ಮನೆ‌ ಮೇಲ್ಚಾವಣಿ, ಬೆಕ್ಕುImage Credit source: tv9 kannada

ಬಾಗಲಕೋಟೆ, ಜೂನ್​​ 07: ಮುಂಗಾರು ಮಳೆ (Rain) ಸಮರ್ಪಕವಾಗಿ ಆಗಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿರುವ ಬೆನ್ನಲ್ಲೇ, ಬಾಗಲಕೋಟೆಯಲ್ಲಿ ಸುರಿದ ಧಾರಾಕಾರ ಮಳೆ ಒಂದು ಕಡೆ ಆತಂಕ ಉಂಟುಮಾಡಿದ್ದರೆ, ಮತ್ತೊಂದೆಡೆ ಪವಾಡಸದೃಶ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ನಿನ್ನೆ ವಲ್ಲಭಬಾಯಿ ನಗರದಲ್ಲಿ ಆರ್ಭಟಿಸಿದ ಮಳೆಗೆ ಮನೆಯೊಂದರ ಇಡೀ ಮೇಲ್ಛಾವಣಿಯೇ ಕುಸಿದಿದೆ. ಆದರೆ ಸಾಕು ಬೆಕ್ಕಿನಿಂದಾಗಿ (Cat) ತಂದೆ ಮತ್ತು ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಮೂಲಕ ಭಾರೀ ಅನಾಹುತವೊಂದು ತಪ್ಪಿದೆ.

ಮುಖ್ಯಾಂಶಗಳು

  • ಧಾರಾಕಾರ ಮಳೆಗೆ ಕುಸಿದುಬಿದ್ದ ಮನೆ ಮೇಲ್ಛಾವಣಿ
  • ಬಾಗಲಕೋಟೆಯಲ್ಲಿ ತಪ್ಪಿದ ಭಾರೀ ದುರಂತ
  • ತಂದೆ, ಮಗನ ಜೀವ ಉಳಿಸಿದ ಸಾಕು ಬೆಕ್ಕು

ನಡೆದಿದ್ದೇನು?

ತಂದೆ ಶಬ್ಬೀರ್ ಬಾಗವಾನ್ ಮತ್ತು ಮಗ ಆರ್ಬಾಜ್ ಬಾಗವಾನ್​​ ಬಾಗಲಕೋಟೆಯ ವಲ್ಲಭಬಾಯಿ ನಗರದ ನಿವಾಸಿಗಳಾಗಿದ್ದು, ಹಣ್ಣಿನ ವ್ಯಾಪಾರ ಮಾಡುತ್ತಾರೆ. ನಿನ್ನೆ ತಂದೆ ಮತ್ತು ಮಗ ಮನೆಯಲ್ಲಿದ್ದಾಗ ಮಳೆಯ ತೀವ್ರತೆಗೆ ಮೇಲ್ಛಾವಣಿಯಿಂದ ಸಣ್ಣದಾಗಿ ಮಣ್ಣಿನ ತುಕಡಿಗಳು ಉದುರಲು ಆರಂಭಿಸಿದೆ. ಹೀಗಾಗಿ ಸಾಕು ಬೆಕ್ಕು ಹೊರಗೆ ಓಡಿದಿದೆ. ಇನ್ನು ಇದೇ ವೇಳೆ ಬೆಕ್ಕಿಗೆ ಹಸಿವು ಕೂಡ ಆಗಿತ್ತಂತೆ. ಹೀಗಾಗಿ ಅದಕ್ಕೆ ಏನಾದರೂ ತಿನ್ನಿಸಬೇಕು ಎನ್ನುವ ಕಾಳಜಿಯಿಂದ ಶಬ್ಬೀರ್​​ ಬೆಕ್ಕನ್ನು ಹಿಡಿಯಲು ಅದರ ಹಿಂದೆಯೇ ಹೊರಗೆ ಧಾವಿಸಿದ್ದಾರೆ. ತಂದೆಯನ್ನು ಕಂಡು ಆರ್ಬಾಜ್ ಕೂಡ ಅವರ ಬೆನ್ನ ಹಿಂದೆ ಮನೆಯಿಂದ ಆಚೆ ಬಂದಿದ್ದಾರೆ. ಇವರಿಬ್ಬರು ಮನೆಯ ಹೊಸ್ತಿಲು ದಾಟಿ ಹೊರಗೆ ಬರುತ್ತಿದ್ದಂತೆಯೇ ಇಡೀ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.

ಬೆಕ್ಕಿನಿಂದಲೇ ನಮ್ಮ ಪ್ರಾಣ ಉಳಿಯಿತು ಎಂದ ಆರ್ಬಾಜ್ 

‘ಮನೆಯ ಮೇಲ್ಛಾವಣಿಯ ಮಣ್ಣು ಬೀಳುತ್ತಿದ್ದಂತೆ ಬೆಕ್ಕು ಹೊರಗೆ ಓಡಿತು, ಅದಕ್ಕೆ ಹಸಿವಾಗಿದ್ದರಿಂದ ಏನಾದರೂ ತಿನ್ನಿಸಲು ತಂದೆ ಅದನ್ನು ಹಿಡಿಯಲು ಹೋದರು, ನಾನು ಅವರ ಹಿಂದೆ ಹೋದೆ. ನಾವು ಹೊರಬಂದ ತಕ್ಷಣ ಇಡೀ ಮೇಲ್ಛಾವಣಿ ಕುಸಿಯಿತು. ಬೆಕ್ಕಿನಿಂದಲೇ ನಮ್ಮ ಪ್ರಾಣ ಉಳಿಯಿತು, ಇಲ್ಲದಿದ್ದರೆ ನಾವು ಜೀವ ಸಹಿತ ಉಳಿಯುತ್ತಿರಲಿಲ್ಲ’ ಎಂದು ಆರ್ಬಾಜ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರ ನೆಮ್ಮದಿ ಕಸಿದ ಮಳೆರಾಯ: ಮನೆಗಳಿಗೆ ನುಗ್ಗಿದ ನೀರು, ಕುಸಿದ ಸೇತುವೆ

ಇನ್ನು ಅದೃಷ್ಟವಶಾತ್ ಮನೆಯಲ್ಲಿ ನಡೆಯಬೇಕಿದ್ದ ಮದುವೆಯ ಕಾರ್ಯಕ್ರಮವೊಂದರ ನಿಮಿತ್ತ ಕುಟುಂಬದ ಉಳಿದ ಸದಸ್ಯರೆಲ್ಲರೂ ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಕೇವಲ ತಂದೆ-ಮಗ ಮಾತ್ರ ಮನೆಯಲ್ಲಿದ್ದು, ಸಾಕುಪ್ರಾಣಿಯ ಕಾರಣದಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಲಕ್ಷಾಂತರ ರೂ ಮೌಲ್ಯದ ಮಾವಿನ ಹಣ್ಣು ಮಣ್ಣು ಪಾಲು

ಒಂದೆಡೆ ಪ್ರಾಣ ಉಳಿದರೆ, ಬಡ ವ್ಯಾಪಾರಿಯ ಬದುಕಿಗೆ ಮಳೆರಾಯ ದೊಡ್ಡ ಹೊಡೆತವನ್ನೇ ನೀಡಿದ್ದಾನೆ. ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ಪಾತ್ರೆ-ಪಗಡೆಗಳು, ದವಸ ಧಾನ್ಯಗಳು ಹಾಗೂ ವ್ಯಾಪಾರಕ್ಕಾಗಿ ತಂದಿಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಮಾವಿನ ಹಣ್ಣು ಸಂಪೂರ್ಣವಾಗಿ ಮಣ್ಣು ಪಾಲಾಗಿದೆ. ಸದ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿ ಶಬ್ಬೀರ್ ಬಾಗವಾನ್​, ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version