ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ? – Kannada News

ಡೆಲ್ಸಿ ರೊಡ್ರಿಗಸ್, ನರೇಂದ್ರ ಮೋದಿ

ನವದೆಹಲಿ, ಜೂನ್ 4: ಭಾರತಕ್ಕೆ ಐದು ದಿನಗಳ ಪ್ರವಾಸಕ್ಕೆ ಬಂದಿರುವ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodriguez) ಅವರು ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇಂಧನ, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಇರಾದೆಯೊಂದಿಗೆ ಮಾತುಕತೆಗಳು ನಡೆದಿವೆ. ಡೆಲ್ಸಿ ಅವರು ನಿನ್ನೆ ಭಾರತಕ್ಕೆ ಆಗಮಿಸಿದ್ದು, ಜೂನ್ 7 ರವರೆಗೆ ಇಲ್ಲಿರಲಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲ (Crude Oil) ನಿಕ್ಷೇಪವನ್ನು ಹೊಂದಿರುವ ದೇಶಗಳಲ್ಲಿ ವೆನೆಜುವೆಲಾ ಪ್ರಮುಖವಾದದ್ದು. ಭಾರತವು ತನ್ನ ಇಂಧನ ಅಗತ್ಯದ ಸುಮಾರು 80% ಕ್ಕಿಂತ ಹೆಚ್ಚು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ವೆನೆಜುವೆಲಾದಿಂದ ರಿಯಾಯಿತಿ ದರದಲ್ಲಿ ಅಥವಾ ಸುಲಭ ನಿಯಮಗಳ ಅಡಿಯಲ್ಲಿ ತೈಲವನ್ನು ಆಮದು ಮಾಡಿಕೊಳ್ಳಲು ಈ ಒಪ್ಪಂದವು ದಾರಿ ಮಾಡಿಕೊಡಲಿದೆ.

ಇದನ್ನೂ ಓದಿ: ವಿದೇಶಿ ಹೂಡಿಕೆದಾರರನ್ನು ಮರಳಿ ಆಕರ್ಷಿಸಲು ಸರ್ಕಾರದ ಯತ್ನ; ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ

ಭಾರತ ದೇಶಕ್ಕೆ ಆಗುವ ಪ್ರಯೋಜನಗಳು

  1. ಇಂಧನ ಭದ್ರತೆ (Energy Security): ಜಾಗತಿಕವಾಗಿ ಮಧ್ಯಪ್ರಾಚ್ಯ (Middle East) ರಾಷ್ಟ್ರಗಳಲ್ಲಿ ಆಗಾಗ ಉಂಟಾಗುವ ರಾಜಕೀಯ ಅಸ್ಥಿರತೆಯಿಂದಾಗಿ ತೈಲ ಪೂರೈಕೆಗೆ ಧಕ್ಕೆಯಾಗುವ ಆತಂಕವಿರುತ್ತದೆ. ವೆನೆಜುವೆಲಾದೊಂದಿಗೆ ಉತ್ತಮ ಒಪ್ಪಂದ ಮಾಡಿಕೊಳ್ಳುವುದರಿಂದ ಭಾರತಕ್ಕೆ ತೈಲ ಪೂರೈಕೆಯ ಪರ್ಯಾಯ ಮಾರ್ಗ ಸಿಗಲಿದ್ದು, ದೇಶದ ಇಂಧನ ಭದ್ರತೆ ಗಟ್ಟಿಯಾಗುತ್ತದೆ.
  2. ವಿದೇಶಿ ವಿನಿಮಯ ಉಳಿತಾಯ: ವೆನೆಜುವೆಲಾದಿಂದ ಕಡಿಮೆ ದರದಲ್ಲಿ ತೈಲ ಸಿಕ್ಕರೆ ಭಾರತ ಸರ್ಕಾರಕ್ಕೆ ಭಾರಿ ಪ್ರಮಾಣದ ವಿದೇಶಿ ಹಣ (ಡಾಲರ್) ಉಳಿತಾಯವಾಗುತ್ತದೆ. ಈ ಹಣವನ್ನು ದೇಶದ ಮೂಲಸೌಕರ್ಯ (ರಸ್ತೆ, ರೈಲ್ವೆ ಇತ್ಯಾದಿ) ಅಭಿವೃದ್ಧಿಗೆ ಬಳಸಬಹುದು.
  3. ಭಾರತೀಯ ಕಂಪನಿಗಳಿಗೆ ಲಾಭ: ಭಾರತದ ಪ್ರಮುಖ ತೈಲ ರಿಫೈನರಿ ಕಂಪನಿಗಳಾದ ರಿಲಯನ್ಸ್ (RIL) ಮತ್ತು ನಯಾರಾ ಎನರ್ಜಿ (Nayara Energy) ವೆನೆಜುವೆಲಾದ ‘ಹೆವಿ ಕ್ರೂಡ್’ (ಭಾರೀ ಕಚ್ಚಾ ತೈಲ) ಅನ್ನು ಸಂಸ್ಕರಿಸುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿವೆ. ಈ ಒಪ್ಪಂದದಿಂದ ಭಾರತೀಯ ಸಂಸ್ಕರಣಾ ವಲಯಕ್ಕೆ ದೊಡ್ಡ ಮಟ್ಟದ ಉದ್ಯೋಗ ಮತ್ತು ಲಾಭ ಸಿಗಲಿದೆ.

ಇದನ್ನೂ ಓದಿ: ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು

ಸಾಮಾನ್ಯ ಭಾರತೀಯರಿಗೆ ಸಿಗುವ ಪ್ರಯೋಜನಗಳು

  • ಪೆಟ್ರೋಲ್ ಮತ್ತು ಡೀಸೆಲ್ ದರ ನಿಯಂತ್ರಣ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದಾಗ ಭಾರತದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತದೆ. ವೆನೆಜುವೆಲಾದಿಂದ ಅಗ್ಗದ ದರದಲ್ಲಿ ತೈಲ ಆಮದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಸ್ಥಿರವಾಗಿರಲು ಅಥವಾ ಕಡಿಮೆಯಾಗಲು ನೆರವಾಗುತ್ತದೆ.
  • ಹಣದುಬ್ಬರ (Inflation) ಇಳಿಕೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾದರೆ ಸರಕು ಸಾಗಣೆ ವೆಚ್ಚ (Transportation cost) ಗಣನೀಯವಾಗಿ ಇಳಿಯುತ್ತದೆ. ಇದು ನೇರವಾಗಿ ತರಕಾರಿ, ಹಾಲು, ದಿನಸಿ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ಸಾಮಾನ್ಯ ಮಧ್ಯಮ ವರ್ಗದ ಜನರ ಮಾಸಿಕ ಬಜೆಟ್ ಮೇಲಿನ ಹೊರೆ ಕಡಿಮೆಯಾಗುತ್ತದೆ.
  • ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ: ಇಂಧನ ಬೆಲೆಗಳು ನಿಯಂತ್ರಣದಲ್ಲಿದ್ದರೆ ಉದ್ಯಮಗಳು ಉತ್ತಮವಾಗಿ ರನ್ ಆಗುತ್ತವೆ. ಇದು ದೇಶದ ಆರ್ಥಿಕತೆಗೆ ಚೇತರಿಕೆ ನೀಡುವುದಲ್ಲದೆ, ಪರೋಕ್ಷವಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹ ತಂಡ ರಚನೆಗೆ ಆದೇಶ – Kannada News

ಬೆಂಗಳೂರು, (ಜೂನ್ 04): ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆರೋಪಗಳು ಕೇಳಿಬರುತ್ತಿವೆ. ಪುಡಿ ರೌಡಿಗಳ ಅಟ್ಟಹಾಸ, ಡ್ರಗ್ಸ್, ಗಾಂಜಾ, ಜೂಜಾಟ, ಅಕ್ರಮ ಮರಳು ದಂಧೆ, ಮಟ್ಕಾ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಿತ್ತಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕೊಲೆ, ಸುಲಿಗೆ, ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದೀಗ ಇವುಗಳಿಗೆ ಕಡಿವಾಣ ಹಾಕಲು ನೂತನ ಸಿಎಂ ಡಿಕೆ ಶಿವಕುಮಾರ್  (DK Shivakumar) ಸಮರ ಸಾರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂದು (ಜೂನ್ 04) ವಿಧಾನಸೌಧದಲ್ಲಿ ನಡೆದ ಮೊದಲ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹಕ್ಕೆ ವಿಶೇಷ ತಂಡಗಳ ರಚನೆಗೆ ಆದೇಶಿಸಿದ್ದಾರೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಮತ್ತು ಅವರನ್ನು ಮಟ್ಟಹಾಕಲು ವಿಶೇಷ ಸ್ಕ್ವಾಡ್‌ಗಳನ್ನು ಸ್ಥಾಪಿಸಬೇಕೆಂದು ಹೇಳಿದ್ದೇನೆ. ಈ ತಂಡಗಳು 10 ರಿಂದ 15 ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಒಳಗೊಂಡಿರುತ್ತವೆ. ಹಳೆಯ ರೌಡಿಗಳು ಮತ್ತು ಹೊಸದಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯುವಕರ ಮೇಲೆ ನಿಗಾ ಇಡುವುದು, ಅವರನ್ನು ಪತ್ತೆಹಚ್ಚಿ ದಾರಿಗೆ ತರುವುದು ಮತ್ತು ಯಾವುದೇ ಕ್ರಿಮಿನಲ್ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವುದು ಈ ತಂಡಗಳ ಪ್ರಮುಖ ಜವಾಬ್ದಾರಿಯಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು?

Source link

Donation Rules: ವಸ್ತ್ರದಾನ ಮಾಡುವ ಮುನ್ನ ಈ ನಿಯಮಗಳು ತಿಳಿದಿರಲಿ; ಇಲ್ಲದಿದ್ದರೆ ಪುಣ್ಯದ ಬದಲು ದೋಷ ಗ್ಯಾರಂಟಿ! – Kannada News

ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ಸನಾತನ ಸಂಪ್ರದಾಯದಲ್ಲಿ ಮಾನವನ ಪ್ರತಿಯೊಂದು ದೈನಂದಿನ ಕಾರ್ಯಕ್ಕೂ ಕೆಲವು ನಿರ್ದಿಷ್ಟ ನಿಯಮಗಳು ಮತ್ತು ಆಚರಣೆಗಳನ್ನು ಸೂಚಿಸಲಾಗಿದೆ. ಅವುಗಳಲ್ಲಿ ‘ದಾನ’ ಪ್ರಕ್ರಿಯೆಯೂ ಒಂದು. ದಾನ ಮಾಡುವುದನ್ನು ಅತ್ಯಂತ ದೊಡ್ಡ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದ್ದರೂ, ಅದನ್ನು ಶಾಸ್ತ್ರೋಕ್ತವಾಗಿ ಮತ್ತು ಸರಿಯಾದ ರೀತಿಯಲ್ಲಿ ಮಾಡದಿದ್ದರೆ ಅಪೇಕ್ಷಿತ ಫಲಿತಾಂಶಗಳು ಸಿಗುವುದಿಲ್ಲ ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತವೆ. ಅದಕ್ಕಾಗಿಯೇ ಬಟ್ಟೆ ಅಥವಾ ಇತರ ವಸ್ತುಗಳನ್ನು ದಾನ ಮಾಡುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ವಿದ್ವಾಂಸರು ಸೂಚಿಸುತ್ತಾರೆ.

ಹಳೆಯ ಬಟ್ಟೆಗಳನ್ನು ದಾನ ಮಾಡುವಾಗ ಈ ಮುನ್ನೆಚ್ಚರಿಕೆ ವಹಿಸಿ:

ಹಬ್ಬ ಹರಿದಿನಗಳು, ವಿಶೇಷ ಸಂದರ್ಭಗಳಲ್ಲಿ ಅಥವಾ ಚಳಿಗಾಲದಂತಹ ಸಮಯಗಳಲ್ಲಿ, ಅನೇಕ ಜನರು ತಮ್ಮ ಬಳಿ ಇರುವ, ತಮಗೆ ಬೇಡದ ಹಳೆಯ ಬಟ್ಟೆಗಳನ್ನು ಬಡವರಿಗೆ ಮತ್ತು ರಸ್ತೆ ಬದಿಯ ನಿರಾಶ್ರಿತರಿಗೆ ದಾನ ಮಾಡುತ್ತಾರೆ. ಇದು ಖಂಡಿತವಾಗಿಯೂ ಅತ್ಯಂತ ಶ್ರೇಷ್ಠ ಹಾಗೂ ಮಾನವೀಯತೆಯ ಕಾರ್ಯವಾಗಿದೆ. ಆದರೆ, ಹಳೆಯ ಬಟ್ಟೆಗಳನ್ನು ಇತರರಿಗೆ ನೀಡುವಾಗ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಉಪ್ಪು ನೀರಿನಲ್ಲಿ ತೊಳೆದ ನಂತರವೇ ದಾನ ಮಾಡಿ:

ನಿಮ್ಮ ಹಳೆಯ ಬಟ್ಟೆಗಳನ್ನು ನೇರವಾಗಿ ದಾನ ಮಾಡುವ ಬದಲು, ಮೊದಲು ಅವುಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅದರಲ್ಲೂ ಬಟ್ಟೆಗಳನ್ನು ಸ್ವಲ್ಪ ಸಮಯದವರೆಗೆ ಉಪ್ಪುಸಹಿತ ನೀರಿನಲ್ಲಿ ನೆನೆಸಿ, ನಂತರ ಚೆನ್ನಾಗಿ ಒಣಗಿಸಿ ದಾನ ಮಾಡುವುದು ಅತ್ಯುತ್ತಮ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ನಾವು ದೀರ್ಘಕಾಲ ಬಳಸುವ ವಸ್ತುಗಳ ಮೇಲೆ ನಮ್ಮ ಭಾವನೆಗಳು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರಭಾವ ಇರುತ್ತದೆ. ಉಪ್ಪು ನೀರು ಆ ಬಟ್ಟೆಗಳಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ಸಂಪೂರ್ಣವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಉತ್ತಮ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಮಾತ್ರ ನೀಡಿ:

ದಾನ ಮಾಡುವುದೆಂದರೆ ಇತರರಿಗೆ ಉಪಯುಕ್ತವಾಗುವ ಮತ್ತು ಅವರ ಮನಸ್ಸಿಗೆ ಸಂತೋಷ ನೀಡುವ ವಸ್ತುವನ್ನು ಒದಗಿಸುವುದು ಎಂದರ್ಥ. ಆದ್ದರಿಂದ ಹರಿದ, ಕಲೆಯಾದ ಅಥವಾ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿರುವ ಬಟ್ಟೆಗಳನ್ನು ಎಂದಿಗೂ ದಾನ ಮಾಡಬಾರದು. ದಾನ ನೀಡುವ ಮುನ್ನ ಬಟ್ಟೆಗಳು ಸ್ವಚ್ಛವಾಗಿವೆ ಮತ್ತು ಇತರರು ಧರಿಸಲು ಯೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಟ್ಟೆಯಲ್ಲಿ ಸಣ್ಣಪುಟ್ಟ ಹರಿತಗಳಿದ್ದರೆ, ಅವುಗಳನ್ನು ಸೂಜಿಯಿಂದ ಹೊಲಿದು ನೀಡುವುದು ದಾನದ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ದಾನವನ್ನು ಪ್ರದರ್ಶನವನ್ನಾಗಿ (ಪಬ್ಲಿಸಿಟಿ) ಪರಿವರ್ತಿಸಬೇಡಿ:

ಇತ್ತೀಚಿನ ದಿನಗಳಲ್ಲಿ ದಾನ ಮಾಡುವುದನ್ನು ಒಂದು ಪ್ರದರ್ಶನದ ವಸ್ತುವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಆದರೆ ದಾನದ ಬಗ್ಗೆ ಜಾಹೀರಾತು ನೀಡುವುದು, ವೀಡಿಯೊಗಳು ಅಥವಾ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಳ್ಳುವುದು ಒಳ್ಳೆಯದಲ್ಲ ಎಂದು ಧಾರ್ಮಿಕ ಗ್ರಂಥಗಳು ಸ್ಪಷ್ಟವಾಗಿ ಸೂಚಿಸುತ್ತವೆ. ನಿಜವಾದ ದಾನವನ್ನು ನಿಸ್ವಾರ್ಥವಾಗಿ ಮತ್ತು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಬೇಕು. ಅದಕ್ಕಾಗಿಯೇ ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ತಿಳಿಯದಂತೆ ಮಾಡುವ ‘ಗುಪ್ತ ದಾನ’ ಅಥವಾ ರಹಸ್ಯ ದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗುತ್ತದೆ.

ವಸ್ತ್ರ ದಾನ ಮಾಡಲು ಶುಭ ಸಮಯ ಯಾವುದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ದಾನ ಧರ್ಮಗಳನ್ನು ಮಾಡಲು ಬೆಳಗಿನ ಸಮಯವನ್ನು ಅತ್ಯಂತ ಶುಭ ಮತ್ತು ಸಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ ಮತ್ತು ಶನಿವಾರದ ದಿನಗಳಂದು ಬಡವರಿಗೆ ಹಾಗೂ ನಿರ್ಗತಿಕರಿಗೆ ಮಾಡುವ ವಸ್ತ್ರದಾನಕ್ಕೆ ಜಾತಕದಲ್ಲಿನ ದೋಷಗಳನ್ನು ನಿವಾರಿಸುವ ವಿಶೇಷ ಮಹತ್ವ ಮತ್ತು ಶಕ್ತಿ ಇದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಲ್ಲೆಗಳ ಪ್ರತಿ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ವರದಿ ಕೊಡಿ: ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ – Kannada News

ಬೆಂಗಳೂರು, ಜೂನ್ 4: ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಗಳ ಪ್ರತಿಯೊಂದು ಸಮಸ್ಯೆಗಳನ್ನು ಪಟ್ಟಿ ಮಾಡಿ ಸಲ್ಲಿಸಿ. ಜಿಲ್ಲಾ ಉಸ್ತುವಾರಿ ಸಚಿವರು ಆ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗುವುದು. ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳ ಪಟ್ಟಿಯನ್ನು ಒದಗಿಸಬೇಕು. ಇದಲ್ಲದೆ, 25 ದಿನಗಳೊಳಗೆ, ಬಾಕಿ ಕೆಲಸಗಳ ಜೊತೆಗೆ, ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಹೊಸದಾಗಿ ಏನು ಮಾಡಬಹುದು, ಆರ್ಥಿಕ ವ್ಯವಸ್ಥೆಯ ಮಿತಿಯೊಳಗೆ ಯಾವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಪಟ್ಟಿಯನ್ನೂ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ನನಗೆ ಇತಿಹಾಸ ಬರೆಯಲು ಅಥವಾ ಓದಲು ಇಷ್ಟವಿಲ್ಲ. ಇತಿಹಾಸ ನಿರ್ಮಾಣ ಮಾಡಬೇಕು. ಏನಾದರೂ ಸಾಕ್ಷಿ ಗುಡ್ಡಗಳನ್ನು ಬಿಟ್ಟು ಹೋಗಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಕಾರಾತ್ಮಕ ಮನೋಭಾವ ಮತ್ತು ವ್ಯವಸ್ಥೆಯೊಳಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಕೆಲಸ ಮಾಡುವಂತೆ ಅವರು ಕರೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಕೊಹ್ಲಿ ಬದಲು ಯಾರಿಗೆ ಅವಕಾಶ? ಹೇಗಿರಲಿದೆ ಪ್ಲೇಯಿಂಗ್ 11? – Kannada News

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಸರಣಿ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಗಾಯದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿಯ ಈ ಅಲಭ್ಯತೆ ಏಕದಿನ ವಿಶ್ವಕಪ್ ತಯಾರಿಯ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕೊಹ್ಲಿ ಅವರ ಗಾಯವು ಗಂಭೀರವಾಗಿರುವ ಕಾರಣ ಅವರು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ದೃಢಪಡಿಸಿದೆ.

ಮಂಡಿರಜ್ಜು ಗಾಯಕ್ಕೆ ತುತ್ತಾದ ಕೊಹ್ಲಿ

2026 ರ ಐಪಿಎಲ್‌ನಲ್ಲಿ ಆರ್​ಸಿಬಿ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. 75 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಇದೇ ಪಂದ್ಯದಲ್ಲಿ ಕೊಹ್ಲಿ ಗಾಯಕ್ಕೆ ತುತ್ತಾಗಬೇಕಾಯಿತು. ಬ್ಯಾಟಿಂಗ್‌ ಮಾಡುವ ವೇಳೆ ಕೊಹ್ಲಿ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಪಂದ್ಯವನ್ನು ಹಲವಾರು ಬಾರಿ ನಿಲ್ಲಿಸಬೇಕಾಯಿತು. ಈ ನೋವಿನ ನಡುವೆಯೂ ಕ್ರೀಸ್​ನಲ್ಲಿ ನೆಲೆ ನಿಂತಿದ್ದ ಕೊಹ್ಲಿ ಕೊನೆಯವರೆಗೂ ಉಳಿದು ತಂಡಕ್ಕೆ ಅಮೋಘ ಜಯ ತಂದುಕೊಟ್ಟಿದ್ದರು.

ಕೊಹ್ಲಿ ಬದಲು ಯಾರಿಗೆ ಸ್ಥಾನ?

ಕೊಹ್ಲಿಯ ಅಲಭ್ಯತೆಯಿಂದಾಗಿ ಜೂನ್ 13 ರಿಂದ ಪ್ರಾರಂಭವಾಗುವ ಏಕದಿನ ಸರಣಿಯಲ್ಲಿ ಅವರ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದು ಪ್ರಶ್ನೆಯಾಗಿದೆ. ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವುದರಿಂದ, ಇಶಾನ್ ಕಿಶನ್ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆಗಳಿವೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರಿಗೆ ಆಡುವ ಅವಕಾಶ ಸಿಗುವುದು ಭಾಗಶಃ ಖಚಿತವಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಯಾರ್ಯಾರು?

ಎಂದಿನಂತೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರೆ, ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅವರ ಅಲಭ್ಯತೆಯ ನಡುವೆ ಕಿಶನ್ ಆಡಬಹುದು. ಇದಾದ ಬಳಿಕ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ 4 ನೇ ಕ್ರಮಾಂಕದಲ್ಲಿ ಆಡಬಹುದು. ಹಾಗೆಯೇ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ 5 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆರನೇ ಸ್ಥಾನದಲ್ಲಿ ಆಡಿದರೆ, ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 7 ನೇ ಕ್ರಮಾಂಕದಲ್ಲಿ ಆಡಬಹುದು. ಸ್ಪಿನ್ ಬೌಲರ್ ಆಗಿ ಕುಲ್ದೀಪ್ ಯಾದವ್ ಆಡುವುದು ಖಚಿತವಾಗಿದ್ದು, ವೇಗದ ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ಕಣಕ್ಕಿಳಿಯಬಹುದು.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರಾಖಂಡದಲ್ಲಿ ಟ್ರೆಕಿಂಗ್ ಹೋಗಿದ್ದ ಎಂಬಿಎ ವಿದ್ಯಾರ್ಥಿನಿ ನಾಪತ್ತೆ; ಆಗಿದ್ದೇನು? – Kannada News

ಡೆಹ್ರಾಡೂನ್, ಜೂನ್ 4: ಉತ್ತರಾಖಂಡದ ಗಡ್ವಾಲ್ ಹಿಮಾಲಯದಲ್ಲಿ ಟ್ರೆಕ್ಕಿಂಗ್‌ಗೆ (Trekking) ಹೋಗಿದ್ದ ಎಂಬಿಎ ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮಗಳು ಆರಂಭವಾಗಿವೆ. ಉತ್ತರಾಖಂಡದ ದುರ್ಗಮ ಬೆಟ್ಟ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವಾಗ ಎಂಬಿಎ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಮತ್ತು ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಸುರಕ್ಷತಾ ಲೋಪದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಟ್ರೆಕ್ಕಿಂಗ್ ಆಯೋಜಿಸಿದ್ದ ಅಧಿಕೃತ ಏಜೆನ್ಸಿಯನ್ನು ಈಗ ತೀವ್ರ ತನಿಖೆಗೆ ಒಳಪಡಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಏನಿದು ಘಟನೆ?:

ದೆಹಲಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಬಬಿತಾ ಎಂಬ ವಿದ್ಯಾರ್ಥಿನಿ ತನ್ನ ಸ್ನೇಹಿತರ ತಂಡ ಮತ್ತು ಟ್ರೆಕ್ಕಿಂಗ್ ಏಜೆನ್ಸಿಯೊಂದಿಗೆ ಉತ್ತರಾಖಂಡದ ಎತ್ತರದ ಪರ್ವತ ಪ್ರದೇಶಕ್ಕೆ ಪ್ರವಾಸ ತೆರಳಿದ್ದರು. ಆದರೆ, ಟ್ರೆಕ್ಕಿಂಗ್ ಮಾರ್ಗದ ಮಧ್ಯದಲ್ಲಿ ಕ್ಯಾಂಪ್​ನಲ್ಲಿ ಅವರು ನಾಪತ್ತೆಯಾಗಿದ್ದಾರೆ. ಆ ವಿದ್ಯಾರ್ಥಿನಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಡ್ರೋನ್ ಹಾಗೂ ಹೆಲಿಕಾಪ್ಟರ್ ಮೂಲಕ ತೀವ್ರ ಶೋಧ ನಡೆಸುತ್ತಿದ್ದರೂ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್​​, ಯಾಕೆ ಗೊತ್ತಾ?

ಈ ಟ್ರೆಕ್ಕಿಂಗ್ ತಂಡದ ಜೊತೆಯಲ್ಲಿದ್ದ ಸ್ಥಳೀಯ ಗೈಡ್ (ಮಾರ್ಗದರ್ಶಿ) ಮತ್ತು ಏಜೆನ್ಸಿಯ ಒಬ್ಬ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ಕಾಣೆಯಾದ ತಕ್ಷಣವೇ ಆಡಳಿತ ಮಂಡಳಿಗೆ ಮಾಹಿತಿ ನೀಡದೆ ವಿಳಂಬ ಮಾಡಿದ್ದು ಯಾಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರವಾಸವನ್ನು ಆಯೋಜಿಸಿದ್ದ ಟ್ರೆಕ್ಕಿಂಗ್ ಏಜೆನ್ಸಿಯು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ನಿಷೇಧಿತ ಅಥವಾ ಅಪಾಯಕಾರಿ ಮಾರ್ಗದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ, ಏಜೆನ್ಸಿಯ ಲೈಸೆನ್ಸ್ ರದ್ದುಗೊಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಟ್ರೆಕ್ಕಿಂಗ್​​ ಪ್ರಿಯರೇ ಗಮನಿಸಿ: ವನ್ಯಜೀವಿ ಓಡಾಟವಿರುವ ಚಾರಣಪಥಗಳಲ್ಲಿ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್​​

ಈ ಘಟನೆಯ ಬೆನ್ನಲ್ಲೇ ಉತ್ತರಾಖಂಡ ಸರ್ಕಾರವು ಹಿಮಾಲಯನ್ ವಲಯದಲ್ಲಿ ಟ್ರೆಕ್ಕಿಂಗ್ ಮಾಡುವ ಸಂಸ್ಥೆಗಳಿಗೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ. ಇನ್ನು ಮುಂದೆ ಪ್ರತಿಯೊಬ್ಬ ಟ್ರೆಕ್ಕರ್ ಬಳಿ ಜಿಪಿಎಸ್ (GPS) ಟ್ರ್ಯಾಕಿಂಗ್ ಸಾಧನ ಇರಬೇಕು ಮತ್ತು ನೋಂದಾಯಿತ ಗೈಡ್‌ಗಳಿಲ್ಲದೆ ಯಾರೂ ಇಂತಹ ಸಾಹಸಕ್ಕೆ ಕೈಹಾಕಬಾರದು ಎಂದು ಕಡ್ಡಾಯಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:52 pm, Thu, 4 June 26

Source link

ಮಹಿಳೆಯರೇ… ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ವರ್ಷಕ್ಕೊಮ್ಮೆ ತಪ್ಪದೆ ಈ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ – Kannada News

ಮಹಿಳೆಯರು ಜೀವನದ ವಿವಿಧ ಹಂತಗಳಲ್ಲಿ ಹಲವು ಬದಲಾವಣೆಗಳನ್ನು ಅನುಭವಿಸುತ್ತಾರೆ. ಹಾರ್ಮೋನ್ ಬದಲಾವಣೆ, ಗರ್ಭಧಾರಣೆ, ಪಿರಿಯಡ್ಸ್‌ (Periods), ಪೌಷ್ಟಿಕಾಂಶಗಳ ಕೊರತೆ ಹಾಗೂ ವಯಸ್ಸು ಹೆಚ್ಚಾಗುವುದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಈ ರೀತಿ ಬರುವ ಹಲವಾರು ಆರೋಗ್ಯ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ನಿಯಮಿತ ರಕ್ತ ಪರೀಕ್ಷೆಗಳು ದೇಹದ ಒಳಗಿನ ಆರೋಗ್ಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತವೆ. ಇದರಿಂದ ಅನೀಮಿಯಾ, ಡಯಾಬಿಟಿಸ್‌, ಥೈರಾಯ್ಡ್ ಸಮಸ್ಯೆಗಳು ಮತ್ತು ವಿಟಮಿನ್ ಕೊರತೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು.

ಮಹಿಳೆಯರು ವರ್ಷಕ್ಕೊಮ್ಮೆ ಮಾಡಿಸಬೇಕಾದ ರಕ್ತ ಪರೀಕ್ಷೆಗಳು:

ಜೈಪುರದ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಪ್ರತಿಮಾ ಪೊದ್ದಾರ್ ಅವರು ಹೇಳುವ ಪ್ರಕಾರ, ಮಹಿಳೆಯರು ವರ್ಷಕ್ಕೊಮ್ಮೆ ಕೆಲವು ಮುಖ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಸಿಬಿಸಿ (Complete Blood Count): ಈ ಪರೀಕ್ಷೆಯಿಂದ ಅನೀಮಿಯಾ ಹಾಗೂ ರಕ್ತ ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚಬಹುದು.
ಬ್ಲಡ್ ಶುಗರ್ ಟೆಸ್ಟ್: ಡಯಾಬಿಟಿಸ್‌ ಇರುವುದನ್ನು ಗುರುತಿಸಲು ಸಹಾಯಕವಾಗುತ್ತದೆ.
ಲಿಪಿಡ್ ಪ್ರೊಫೈಲ್: ಹೃದಯ ಸಂಬಂಧಿತ ರೋಗಗಳ ಅಪಾಯವನ್ನು ತಿಳಿಯಲು ಅನುಕೂಲ ಮಾಡಿಕೊಡುತ್ತದೆ.
ಥೈರಾಯ್ಡ್ ಪ್ರೊಫೈಲ್ (TSH, T3, T4): ದೇಹದ ಶಕ್ತಿ, ಕೂದಲು ಉದುರುವುದು, ತೂಕ ಹೆಚ್ಚಳ ಅಥವಾ ಕಡಿಮೆ ಆಗುವುದು ಸೇರಿದಂತೆ ಹಲವು ಸಮಸ್ಯೆಗಳ ಮೂಲ ಕಾರಣ ತಿಳಿಯಲು ಸಹಾಯ ಮಾಡುತ್ತವೆ.
ವಿಟಮಿನ್ D ಪರೀಕ್ಷೆ ಮತ್ತು ವಿಟಮಿನ್ B12 ಪರೀಕ್ಷೆ: ಇದರ ಮಟ್ಟ ಕಡಿಮೆ ಇದ್ದಲ್ಲಿ ಅದನ್ನು ತಿಳಿದುಕೊಂಡು ಅದನ್ನು ಸರಿಪಡಿಸಬಹುದು.

ಇದನ್ನೂ ಓದಿ: ನಿಮ್ಮ ಓರಲ್ ಹೆಲ್ತ್ ಚೆನ್ನಾಗಿಲ್ಲ ಅಂದ್ರೆ ಬಂಜೆತನದ ಅಪಾಯ ಹೆಚ್ಚಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ?

ಯಾವ ಲಕ್ಷಣಗಳು ಕಂಡರೆ ತಕ್ಷಣ ಪರೀಕ್ಷೆ ಮಾಡಿಸಬೇಕು?

  • ನಿರಂತರ ದಣಿವು
  • ತಲೆ ಸುತ್ತುವುದು
  • ದೇಹದಲ್ಲಿ ದುರ್ಬಲತೆ
  • ಕೂದಲು ಉದುರುವುದು
  • ತೂಕ ಏಕಾಏಕಿ ಹೆಚ್ಚಳ ಅಥವಾ ಇಳಿಕೆ
  • ಪಿರಿಯಡ್ಸ್‌ನಲ್ಲಿ ಅಸಾಮಾನ್ಯ ಬದಲಾವಣೆ
  • ಹೆಚ್ಚು ದಾಹ ಅಥವಾ ಪದೇಪದೇ ಮೂತ್ರ ವಿಸರ್ಜನೆ
  • ದೇಹದಲ್ಲಿ ಶಕ್ತಿಯ ಕೊರತೆ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಮಹಿಳೆಯರು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಗತ್ಯ. ಸಮತೋಲನಯುತ ಆಹಾರ ಸೇವನೆ, ಹಣ್ಣು-ತರಕಾರಿ, ಪ್ರೋಟೀನ್ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸಬೇಕು. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಒತ್ತಡ ನಿಯಂತ್ರಣ, ಸಾಕಷ್ಟು ನೀರು ಕುಡಿಯುವುದು, ನಿಯಮಿತ ಆರೋಗ್ಯ ತಪಾಸಣೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Balmer Lawrie Recruitment 2026: ಸಾರ್ವಜನಿಕ ವಲಯದಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ;43 ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News

ಸಾರ್ವಜನಿಕ ವಲಯದಲ್ಲಿ ಕೆಲಸImage Credit source: Pinterest

ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಭರ್ಜರಿ ಅವಕಾಶವೊಂದು ಬಂದಿದೆ. ಭಾರತ ಸರ್ಕಾರದ ಆಡಳಿತಕ್ಕೊಳಪಟ್ಟ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ಬಾಲ್ಮರ್ ಲಾರಿ ಅಂಡ್ ಕಂಪನಿ ಲಿಮಿಟೆಡ್ (Balmer Lawrie & Co. Ltd.) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 43 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉತ್ತಮ ಸಂಬಳ ಮತ್ತು ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ.

ಯಾವೆಲ್ಲ ಹುದ್ದೆಗಳು ಲಭ್ಯವಿವೆ?

ಈ ನೇಮಕಾತಿ ಪ್ರಕ್ರಿಯೆಯಡಿ ವಿವಿಧ ಶೈಕ್ಷಣಿಕ ಹಿನ್ನೆಲೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಜೂನಿಯರ್ ಆಫೀಸರ್‌ನಿಂದ ಹಿಡಿದು ಮ್ಯಾನೇಜರ್ ಮಟ್ಟದವರೆಗೆ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಲಭ್ಯವಿರುವ ಪ್ರಮುಖ ಹುದ್ದೆಗಳು ಹೀಗಿವೆ:

  • ಜೂನಿಯರ್ ಆಫೀಸರ್ (Junior Officer)
  • ಅಸಿಸ್ಟೆಂಟ್ ಮ್ಯಾನೇಜರ್ (Assistant Manager)
  • ಡೆಪ್ಯುಟಿ ಮ್ಯಾನೇಜರ್ (Deputy Manager)
  • ಮ್ಯಾನೇಜರ್ (Manager) ಹಾಗೂ ಇತರೆ ಹುದ್ದೆಗಳು.

ಪ್ರಮುಖ ದಿನಾಂಕಗಳು (Important Dates):

ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ.

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಮೇ 27, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 13, 2026

ಅರ್ಹತಾ ಮಾನದಂಡಗಳು:

ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಪ್ರತಿ ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅನುಭವ ಮತ್ತು ವಯೋಮಿತಿ ವಿಭಿನ್ನವಾಗಿರುತ್ತದೆ. ಆಯಾ ಹುದ್ದೆಗಳಿಗೆ ತಕ್ಕಂತೆ ನಿಗದಿಪಡಿಸಲಾದ ಅರ್ಹತೆಗಳನ್ನು ತಿಳಿಯಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಕೋರಲಾಗಿದೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಹುದ್ದೆಯ ಶ್ರೇಣಿಗೆ ಅನುಗುಣವಾಗಿ ಬದಲಾಗಬಹುದು. ಸಾಮಾನ್ಯವಾಗಿ ಸ್ವೀಕರಿಸಲಾದ ಆನ್‌ಲೈನ್ ಅರ್ಜಿಗಳ ಪರಿಶೀಲನೆ (Shortlisting), ವೈಯಕ್ತಿಕ ಸಂದರ್ಶನ (Interview) ಹಾಗೂ ಅಗತ್ಯವಿದ್ದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಇತರೆ ಮೌಲ್ಯಮಾಪನ ಪ್ರಕ್ರಿಯೆಗಳ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರಿನಲ್ಲಿ ಉದ್ಯೋಗಾವಕಾಶವಿದೆಯೇ?

ಬಾಲ್ಮರ್ ಲಾರಿ ಸಂಸ್ಥೆಯು ಲಾಜಿಸ್ಟಿಕ್ಸ್, ಕೈಗಾರಿಕಾ ಪ್ಯಾಕೇಜಿಂಗ್, ಟ್ರಾವೆಲ್ ಸೇವೆಗಳು, ರಿಫೈನರಿ ಸೇರಿದಂತೆ ಹಲವು ಪ್ರಮುಖ ವಲಯಗಳಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಬೆಂಗಳೂರಿನಲ್ಲಿಯೂ ತನ್ನ ಪ್ರಮುಖ ಶಾಖೆ ಮತ್ತು ಸೇವೆಗಳನ್ನು ಹೊಂದಿರುವುದರಿಂದ, ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ನಿಯೋಜನೆಗೊಳ್ಳುವ (Job Location) ಸಾಧ್ಯತೆ ಇರುತ್ತದೆ. ಆದಾಗ್ಯೂ, ಈ 43 ಹುದ್ದೆಗಳ ನಿಖರವಾದ ಉದ್ಯೋಗದ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಅಧಿಸೂಚನೆಯಲ್ಲಿನ ‘Place of Posting’ ವಿವರಗಳನ್ನು ಗಮನಿಸಬೇಕಾಗಿ ವಿನಂತಿ.

ಇದನ್ನೂ ಓದಿ: Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಾಲ್ಮರ್ ಲಾರಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ:

  • ಮೊದಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹೋಮ್ ಪೇಜ್‌ನಲ್ಲಿರುವ ‘Careers’ (ನೇಮಕಾತಿ) ವಿಭಾಗವನ್ನು ಕ್ಲಿಕ್ ಮಾಡಿ.
  • ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯೋಗ ಪ್ರಕಟಣೆಯನ್ನು ಆಯ್ಕೆ ಮಾಡಿಕೊಂಡು, ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ.

ಬಾಲ್ಮರ್ ಲಾರಿ (Balmer Lawrie) ಸಂಸ್ಥೆಯ ಬಗ್ಗೆ:

1867ರಲ್ಲಿ ಸ್ಥಾಪನೆಯಾದ ಬಾಲ್ಮರ್ ಲಾರಿ ಕಂಪನಿಯು 150ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಭಾರತ ಸರ್ಕಾರದ ಆಡಳಿತದಲ್ಲಿರುವ ಅತ್ಯಂತ ನಂಬಿಕಸ್ಥ ಮಿನಿರತ್ನ (Miniratna I) ಸಾರ್ವಜನಿಕ ವಲಯದ ಉದ್ದಿಮೆಯಾಗಿದ್ದು, ಇಲ್ಲಿ ವೃತ್ತಿಜೀವನವನ್ನು ಆರಂಭಿಸುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು? – Kannada News

ಬೆಂಗಳೂರು, (ಜೂನ್ 04): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಡಿ.ಕೆ. ಶಿವಕುಮಾರ್ (DK Shivakumar) ಅವರ ಪ್ರತಿಯೊಂದು ನಡೆ ಹಾಗೂ ನಿರ್ಧಾರಗಳು ಭಾರೀ ಕುತೂಹಲ ಮೂಡಿಸುತ್ತಿವೆ. ರಾಜಕೀಯ ತಂತ್ರಗಾರಿಕೆಯಲ್ಲಿ ಸೈ ಎನಿಸಿಕೊಂಡಿರುವ ಡಿಕೆಶಿ, ಇದೀಗ ಒಂದೊಳ್ಳೆ ಆಡಳಿತ ನೀಡಲು ತಮ್ಮದೇ ನೀಲನಕ್ಷೆ ಹಾಕಿಕೊಂಡಿದ್ದು, ಅದಕ್ಕೆ ತಕ್ಕಂತೆ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅವರು ಇಂದು (ಜೂನ್ 04) ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆ ನಡೆಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಾನೂನು ಸುವವ್ಯಸ್ಥೆ ಹಾಗೂ ಭ್ರಷ್ಟಾಚಾರ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಪಾರದರ್ಶಕವಾಗಿ ಕೆಲಸ ಮಾಡುವಂತೆ ಸೂಚನೆ

ಅಧಿಕಾರಿಗಳಿಂದ ಉತ್ತಮ ಕೆಲಸದ ನಿರೀಕ್ಷೆ ಹೊಂದಿದ್ದೇನೆ. ಅದಕ್ಕೆ ತಕ್ಕಂತೆ ಯಾವುದೇ ಒತ್ತಡಕ್ಕೆ ಮಣಿಯದೆ ಜನರ ಕೆಲಸ ಮಾಡಬೇಕು. ನಮ್ಮ ಸರ್ಕಾರದಲ್ಲಿ ಜಾತಿ, ಧರ್ಮ ಸೇರಿ ಯಾವುದೇ ಪ್ರಭಾವ ನಡೆಯಲ್ಲ. ಎಲ್ಲಾ ಇಲಾಖೆಗಳ ಬಾಕಿ ಕೆಲಸದ ಪಟ್ಟಿಯನ್ನು 25 ದಿನದೊಳಗೆ ಪಟ್ಟಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಪಾರದರ್ಶಕವಾಗಿ ಕೆಲಸ ಮಾಡುವಂತೆ ತಿಳಿಸಿದ್ದಾರೆ.

ಜನ ಮೆಚ್ಚುವಂತಹ ಆಡಳಿತ ನೀಡುವುದು, ಸಾರ್ವಜನಿಕರ ಸಂಕಷ್ಟಗಳನ್ನು ಬಗೆಹರಿಸುವುದು, ಮತ್ತು ಅಭಿವೃದ್ಧಿಯನ್ನು ಸುಗಮಗೊಳಿಸುವುದು ತಮ್ಮ ಸರ್ಕಾರದ ಮುಖ್ಯ ಉದ್ದೇಶ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಪಾತ್ರವನ್ನು ಅವರು ಮನವರಿಕೆ ಮಾಡಿಕೊಟ್ಟರು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಹೀಗಾಗಿ ಅಧಿಕಾರಿಗಳು ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳು ಸಮರ್ಥವಾಗಿ ಜನರಿಗೆ ತಲುಪಿಸಬೇಕು. ಅಭಿವೃದ್ಧಿ ಹಾದಿಗೆ ಮೆಟ್ಟಿಲಾಗಿ ಮೆಚ್ಚುವಂತೆ ಕೆಲಸ ಮಾಡಬೇಕೆಂದು ನಯವಾಗಿಯೇ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ನಿನ್ನೆ ಅಷ್ಟೇ ಜಾರಿಗೊಳಿಸಿದ ಆರು ಕಲ್ಯಾಣ ಯೋಜನೆಗಳನ್ನು ತಕ್ಷಣ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು, ರೌಡಿಸಂ, ಡ್ರಗ್ಸ್ ಮತ್ತು ಜೂಜಾಟ ತಡೆಗಟ್ಟಲು ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಬೇಕೆಂಬುದು ನಮ್ಮ ಗುರಿ

ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಬೇಕೆಂಬುದು ನಮ್ಮ ಗುರಿಯಾಗಿದ್ದು, ನಾವೆಲ್ಲಾ ಸೇರಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಮಂತ್ರಿಗಳು, ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲಾ ಇಲಾಖೆಗಳು 15 ದಿನದಲ್ಲಿ ಆ್ಯಕ್ಷನ್ ಪ್ಲ್ಯಾನ್ ಮಾಡಬೇಕು.ಎಲ್ಲ ಕೆಲಸಗಳನ್ನು ಪಾಸಿಟಿವ್ ಆಗಿ ಕಾರ್ಯನಿರ್ವಹಿಸಬೇಕು. ನನಗೆ ಹಿಸ್ಟರಿ ಬರೆಯೋಕೆ, ಓದೋಕೆ ಇಷ್ಟ ಇಲ್ಲ. ಇತಿಹಾಸ ನಿರ್ಮಾಣ ಮಾಡಬೇಕು, ಸಾಕ್ಷಿ ಗುಡ್ಡೆ ಇರಬೇಕು ಎಂದಿದ್ದಾರೆ.

Source link

Women’s T20 World Cup 2026: ಚಾಂಪಿಯನ್‌ ತಂಡಕ್ಕೆ ಸಿಗಲಿದೆ ದಾಖಲೆಯ ಬಹುಮಾನ..! – Kannada News

10 ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್​ಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಈ ಪಂದ್ಯಾವಳಿ ನಡೆಯಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಬಾರಿ, ಪಂದ್ಯಾವಳಿಯ ಒಟ್ಟು ಬಹುಮಾನದ ಹಣವನ್ನು 83ಕೋಟಿ ರೂ.ಗೆ ಏರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

  • ಹಿಂದಿನ ಆವೃತ್ತಿಗೆ ಹೋಲಿಸಿದರೆ ಒಟ್ಟು ಬಹುಮಾನದ ಹಣವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ.
  • ಯುಎಇಯಲ್ಲಿ ನಡೆದ ಕಳೆದ ಮಹಿಳಾ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 74 ಕೋಟಿ ರೂ.ಗಳಾಗಿತ್ತು.
  • ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ.
  • ಕಳೆದ ಆವೃತ್ತಿಯ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.
  • ಭಾಗವಹಿಸುವ 12 ತಂಡಗಳು ಕನಿಷ್ಠ 2.06 ಕೋಟಿ ರೂಪಾಯಿಗಳ ಖಚಿತ ಬಹುಮಾನ ಹಣವನ್ನು ಪಡೆಯುತ್ತವೆ.
  • ಭಾರತ ತಂಡ ಜೂನ್ 14 ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
  • 2026 ರ ಪುರುಷರ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ 25 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು.

ಯಾರಿಗೆ ಎಷ್ಟು ಬಹುಮಾನ ಸಿಗಲಿದೆ?

  • ವಿಜೇತ ತಂಡಕ್ಕೆ: 21.8 ಕೋಟಿ ರೂ.
  • ರನ್ನರ್ ಅಪ್ ತಂಡಕ್ಕೆ: 10 ಕೋಟಿ ರೂ.
  • ಸೆಮಿಫೈನಲಿಸ್ಟ್‌ ತಂಡಗಳಿಗೆ: 6.29 ಕೋಟಿ ರೂ.
  • ಗುಂಪು ಪಂದ್ಯಗಳನ್ನು ಗೆದ್ದ ತಂಡಗಳಿಗೆ: 29 ಲಕ್ಷ ರೂ.

ಭಾರತದ ವೇಳಾಪಟ್ಟಿ

  • ಜೂನ್ 14 ರಂದು ಪಾಕಿಸ್ತಾನ ವಿರುದ್ಧ
  • ಜೂನ್ 17 ರಂದು ನೆದರ್ಲ್ಯಾಂಡ್ಸ್ ವಿರುದ್ಧ
  • ಜೂನ್ 21 vs ದಕ್ಷಿಣ ಆಫ್ರಿಕಾ ವಿರುದ್ಧ
  • ಜೂನ್ 25 ರಂದು ಬಾಂಗ್ಲಾದೇಶ ವಿರುದ್ಧ
  • ಜೂನ್ 28 ರಂದು ಆಸ್ಟ್ರೇಲಿಯಾ ವಿರುದ್ಧ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version